Monday, December 21, 2009

ಅಭಿನಂದನೆಗಳು.

ಯಕ್ಷಮಾತು - ಬ್ಲಾಗ್ ಕುರಿತು
ಅಶೋಕ್ ಕುಮಾರ್ ಉದಯವಾಣಿಯ ತಮ್ಮ ಅಂಕಣದಲ್ಲಿ ಪರಿಚಯಿಸಿದ್ದಾರೆ.
ಅಭಿನಂದನೆಗಳು.

Sunday, December 20, 2009

ಹಿರಿಯ ಬಣ್ಣದ ವೇಷಧಾರಿ ಕೆ.ವಿ.ನಾರಾಯಣ ರೈ



(ಯಕ್ಷಗಾನ ಕ್ಷೇತ್ರದಲ್ಲಿ ಸೇವೆಗೈದು ನಮ್ಮಿಂದ ದೂರವಾದ ಕಲಾವಿದರನ್ನು ನೆನಪಿಸುವುದು 'ಮರೆಯಾದವರು-ಮರೆಯಲಾಗದವರು' ಮಾಲಿಕೆಯ ಉದ್ದೇಶ. ಮಾಲಿಕೆ 1 ಆರಂಭ)
'ಕೀರಿಕ್ಕಾಡು' ಅಂದರೆ ಸಾಕು - ದೇಲಂಪಾಡಿ ಬನಾರಿಯ ಯಕ್ಷಗಾನ ಸಂಘ, ವಿದ್ಯಾಭ್ಯಾಸದ ಕ್ರಮಗಳು, ಪುರಾಣ ಕಲಿಕೆ, ಬದುಕನ್ನು ರೂಪಿಸುವ ಶಿಕ್ಷಣ, ಸಂಸ್ಕಾರ ಪಾಠ, ರೂಪುಗೊಳ್ಳುವ ಕಲಾವಿದರು - ಈ ಇತಿಹಾಸಗಳು ಮಿಂಚಿ ಮರೆಯಾಗುತ್ತವೆ.
ಕೆ.ವಿ.ನಾರಾಯಣ ರೈ ಇಲ್ಲ್ಲಿ ಪಕ್ವಗೊಂಡ ಬಣ್ಣದ ವೇಷಧಾರಿ. ಕೀರ್ತಿಶೇಷ ಕೀರಿಕ್ಕಾಡು ವಿಷ್ಣು ಮಾಸ್ತರರ ಪ್ರಿಯ ಶಿಷ್ಯ.
ಆಗೆಲ್ಲಾ ಯಕ್ಷಗಾನವು ಬದುಕಿಗಂಟುವ ಹವ್ಯಾಸ. ನಾಲ್ಕರಲ್ಲೇ ವಿದ್ಯಾಭ್ಯಾಸ ಸ್ಥಗಿತವಾದಾಗ, ಅವರು ನಿಂತುದು ಕೀರಿಕ್ಕಾಡು ಮಾಸ್ತರರ ಗುರುಕುಲದಲ್ಲಿ. ದಿ.ಕಡಾರು ನಾರಾಯಣ ಭಟ್ಟರಿಂದ ನೃತ್ಯಾಭ್ಯಾಸ. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯ ಮೂಲಕ ರಂಗಪ್ರವೇಶ.

ನಾರಾಯಣ ಎಂಬ ಹೆಸರಿನ ನಾಲ್ಕೈದು ಮಂದಿ ಶಿಷ್ಯರು ಗುರುಕುಲದಲ್ಲಿದ್ದರು. ಇವರನ್ನು ಕರೆಯಲು ಪ್ರತ್ಯೇಕ ಹೆಸರು ಬೇಕಲ್ವಾ. ಗುರುವಿನಿಂದಲೇ 'ಕೇವಿ' ಅಂತ ನಾಮಕರಣ! 'ಕೆ' ಅಂದರೆ ತಂದೆ ಕೊರಗಪ್ಪ ರೈ. 'ವಿ' ಅಂದರೆ ವೆಂಕಮ್ಮ. ಮುಂದೆ ಕೇವಿ ಅಂತಲೇ ಪರಿಚಿತರು.

'ಶ್ವೇತಕುಮಾರ ಚರಿತ್ರೆ' ಪ್ರಸಂಗದ 'ಕರಾಳನೇತ್ರೆ' ಪಾತ್ರವು ಕೇವಿಯವರ ಮೊದಲ ವೇಷ. ಕೊನೆಯ ವೇಷವೂ ಅದೇ! 'ಮರಣಿಸುವ ಐದಾರು ತಿಂಗಳು ಮೊದಲು ಅವರಿಗೆ ಕರಾಳನೇತ್ರೆ ಪಾತ್ರ ಮಾಡುವ ಉಮೇದು ಇತ್ತು. ವೇಷವನ್ನೂ ಮಾಡಿದ್ದರು' ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲ ಡಾ.ವಿಶ್ವವಿನೋದ ಬನಾರಿ.

ಕೇವಿಯವರ ಪ್ರಸಿದ್ಧ ವೇಷ 'ಮಹಿಷಾಸುರ'. ಲಘುಹಾಸ್ಯ ಮಿಶ್ರಿತ ನಿರ್ವಹಣೆ. ಅವರದ್ದೇ ಆದ ಕ್ರಮ. ಸಭಾಮಧ್ಯದಲ್ಲಿ ಈ ಪಾತ್ರ ಪ್ರವೇಶವಾಗುವಾಗ ಎಷ್ಟೋ ಕಡೆ 'ತೀರಾ ಹುಡುಗ'ರಾಗುತ್ತಿದ್ದರು!

ವೀರಭದ್ರ, ರಾವಣ, ಕುಂಭಕರ್ಣ, ಯಮ, ದುರ್ಜಯ, ಶೂರ್ಪನಖಿ, ಲಂಕಿಣಿ, ಪೂತನಿ.. ರೈಗಳ 'ರೈಸು'ತ್ತಿದ್ದ ವೇಷಗಳು. ಇಂತಿಂತಿಹ ಪಾತ್ರಗಳಿಗೆ ಹೀಗೇ ಮಾತನಾಡಬೇಕು ಎಂಬುದು ಗುರೂಪದೇಶ. ಕೊನೆ ತನಕ ಕಾಪಾಡಿಕೊಂಡಿದ್ದಾರೆ.
ಶರೀರ ಸ್ವಲ್ಪ ಕುಳ್ಳಗಾದರೂ, ರಾಕ್ಷಸ ವೇಷಕ್ಕೆ ಒಗ್ಗುವ ಸ್ವಭಾವ. ಆಸಕ್ತಿಯೂ ಅದೇ. ಮೊದಮೊದಲು ಪೀಠಿಕೆ ವೇಷಗಳನ್ನು ಮಾಡಿದ್ದರು. ಎಷ್ಟೋ ಕಡೆ ಸಂಘಟಕರನ್ನು ತರಾಟೆಗೆ ತೆಕ್ಕೊಂಡು ಪಾತ್ರಗಳನ್ನು ಪಡೆದುದೂ ಇದೆ. ಇದು 'ಅಹಂಕಾರ'ವಲ್ಲ, ಪಾತ್ರದ ಮೇಲಿನ 'ಪ್ರೀತಿ'. ಎಂಭತ್ತರ ವಯಸ್ಸಿನಲ್ಲೂ - 'ಆ ಪಾತ್ರವನ್ನು ನಾನೇ ಮಾಡಬೇಕು. ಉಳಿದವರಿಗೆ ಕಷ್ಟವಾದೀತು' ಎನ್ನುವ ಕಳಕಳಿ!

ಒಂದು ಘಟನೆ ನೆನಪಾಗುತ್ತದೆ. ಪ್ರಸಂಗ ನೆನಪಿಲ್ಲ. ರಾಕ್ಷಸ ವೇಷ ರಂಗಪ್ರವೇಶಿಸಲು ಇನ್ನೇನು ಹತ್ತಿಪ್ಪತ್ತು ನಿಮಿಷ ಇದೆ ಅನ್ನುವಾಗ, 'ಪತನಸುಖಿ'ಯೊಬ್ಬರು 'ಅಜ್ಜೆರೆ, ಪಂಚಕಜ್ಜಾಯ ದೆತೊನ್ಲೆ' (ಪಂಚಕಜ್ಜಾಯ ತೆಕ್ಕೊಳ್ಳಿ) ಎಂದು 'ರಾಳದ ಹುಡಿ'ಯನ್ನು ಕೈಗಿತ್ತರು. ಕೇವಿ ನಂಬಿ, ಅದನ್ನು ಬಾಯಿಗೆ ಹಾಕಿಕೊಂಡರು. ಬಾಯೊಳಗೆ ರಾಳ ಅದರ ಕೆಲಸ ಮಾಡಿತು! ಬಾಯೆಲ್ಲಾ ಅಂಟಂಟಾಗಿ, ಕೊನೆಗೆ ವೇಷವನ್ನೇ ಕಳಚಿದರು. ಗಳಗಳತೆ ಅತ್ತುಬಿಟ್ಟರು. ರಂಗಪ್ರವೇಶ ಮಾಡದ ಆ ದಿವಸದ ಕೊರಗು ಕೆಲವು ವರುಷ ಅವರನ್ನು ಕಾಡಿತ್ತು.

ಸಾಮಾನ್ಯವಾಗಿ ರಾಕ್ಷಸ ಪಾತ್ರಧಾರಿಗಳು ತಾಳಮದ್ದಳೆಗಳಲ್ಲಿ 'ಅರ್ಥಧಾರಿ'ಯಾಗುವುದು ವಿರಳ. ಕೇವಿ ತಾರಾಮೌಲ್ಯ ಪಡೆದ ಅರ್ಥಧಾರಿಯಾಗದಿದ್ದರೂ, ಬನಾರಿ ಪರಿಸರದಲ್ಲಿ ಒಳ್ಳೆ ಹೆಸರಿದೆ. ದಿ.ಕೇದಗಡಿ ಗುಡ್ಡಪ್ಪ ಗೌಡರ ಕರ್ಣ ಮತ್ತು ಕೇವಿಯವರ ಶಲ್ಯ - ಈ ಪಾತ್ರಗಳು ಯಾವಾಗಲೂ ಜಟಾಪಟಿ. ಅಂದರೆ ನಿಗದಿತ ಅರ್ಥಗಳಲ್ಲಿ 'ಹೀಗೆಯೇ ಆಗಬೇಕು' ಎನ್ನುವ ಛಾತಿ ಡಾ.ವಿಶ್ವವಿನೋದರು ಜ್ಞಾಪಿಸುತ್ತಾರೆ.

ಬೆಳಗ್ಗಿನ ಕಾಲಕ್ಕೆ ವೇಷದ ಪ್ರವೇಶವಿದ್ದರೆ, ಸುಮಾರು ಹತ್ತು ಗಂಟೆಗೆ ಬಣ್ಣದ ವೇಷಧಾರಿಗಳು ಮುಖವರ್ಣಿಕೆಗೆ ಸಿದ್ಧರಾಗುತ್ತಾರೆ. ಈ ಪರಂಪರೆ ಕೇವಿಯಲ್ಲಿತ್ತು. ಎಷ್ಟೋ ಸಲ ಸೂರ್ಯಸ್ತಕ್ಕೆ ಮುನ್ನವೇ ಆಟದ ಜಾಗ ತಲಪುತ್ತಿದ್ದರು.

ವಯೋಸಹಜವಾದ ಆಶಕ್ತತೆ ಕಳೆದೊಂದು ದಶಕದಿಂದ ಬಾಧಿಸಿತ್ತು. ಉತ್ಸಾಹ ಹುಚ್ಚೆದು ಕುಣಿದಾಗ ಆಗಾಗ್ಗೆ 'ರಾಕ್ಷಸ'ರಾಗುತ್ತಿದ್ದರು. ಬಹುತೇಕ ಸಂದರ್ಭದಲ್ಲಿ ಪಾತ್ರದ ಹಿಡಿತ ಅವರಿಗೆ ಕೈಕೊಡುತ್ತಿತ್ತು! ದೃಷ್ಟಿ ಮಂಜಾದಾಗಲೂ ಅಭ್ಯಾಸಬಲದಲ್ಲಿ ಸ್ವ-ಮೇಕಪ್ ಮಾಡಿಕೊಳ್ಳುತ್ತಿದ್ದರು. 'ಕಲಾವಿದ ಮೇಕಪ್ ಮಾಡಲು ಇನ್ನೊಬ್ಬರಿಗೆ ಮುಖ ಒಡ್ಡಿಸಿಕೊಡಬಾರದು' - ಕಿರಿಯರಿಗೆ ಅವರ ಉಪದೇಶ.

ಕದ್ರಿ ಮೇಳದಿಂದ ವ್ಯವಸಾಯ ಶುರು. ಕೂಡ್ಲು, ಮೂಲ್ಕಿ, ಸುಬ್ರಹ್ಮಣ್ಯ, ಸೌಕೂರು, ರೆಂಜಾಳ, ಕುಕ್ಕಂದೂರು, ವೇಣೂರು, ಮುಚ್ಚೂರು, ದೇಲಂಪುರಿ, ಇರುವೈಲು, ಚೌಡೇಶ್ವರಿ, ಭಗಂಡೇಶ್ವರ ಮತ್ತು ಶ್ರೀ ಕಟೀಲು ಮೇಳಗಳಲ್ಲಿ ಐದು ದಶಕಕ್ಕೂ ಮಿಕ್ಕಿದ ಯಕ್ಷಗಾನ ಅನುಭವ.

ಮೇಳ ತಿರುಗಾಟದ ಬಳಿಕ ಆಸಕ್ತರಿಗೆ ತರಬೇತಿ ನೀಡುತ್ತಿದ್ದರು. ಕಲಿಸಿದ ಗುರುಗಳನ್ನು ಮರೆವ ಈ ಕಾಲಘಟ್ಟದಲ್ಲಿ, 'ನಾನು ಕೇವಿಯವರ ಶಿಷ್ಯ' ಎನ್ನುವ ಶಿಷ್ಯಬಳಗವಿದೆ.

ಸಾಂಸಾರಿಕೆ ಹೊಣೆಗಾರಿಕೆ. ತೀವ್ರ ಆರ್ಥಿಕ ಮುಗ್ಗಟ್ಟು. ಸಣ್ಣ ತೋಟ. ಹೇಳುವಂತಹ ಉತ್ಪತ್ತಿ ಇಲ್ಲ. ಕೊನೆಕೊನೆಗೆ ಬದುಕೇ 'ಕರಾಳ'! ಮರಣಿಸುವ ತಿಂಗಳ ಮೊದಲು ತೋಟದಲ್ಲೇ ಹೆಚ್ಚು ಹೊತ್ತು ಕಳೆಯುತ್ತಿದ್ದರಂತೆ.

ರೈಗಳ ಹುಟೂರು ದೇಲಂಪಾಡಿ. ತಂದೆ ಕಲ್ಲಡ್ಕ ಕೊರಗಪ್ಪ ರೈ. ತಾಯಿ ವೆಂಕಮ್ಮ. ಅಜ್ಜ ನಿಡ್ಪಳ್ಳಿಗುತ್ತು ದೇರಣ್ಣ ರೈ. ಪ್ರಸಿದ್ಧ ಕಲಾವಿದರು. ಹಾಗಾಗಿ ಕೇವಿಗೆ ಯಕ್ಷಗಾನವು ತಲೆಮಾರಿನ ಕೊಡುಗೆ.

ನಾರಾಯಣ ರೈಗಳು ವಿಧಿವಶರಾಗುವಾಗ (ಜನವರಿ 8, 2009) ಅವರಿಗೆ ಎಂಭತ್ತೇಳು ವರುಷ. 'ಸರಕಾರದ ಮಾಸಾಶನ ಒಂದು ತಿಂಗಳಾದರೂ ಕೈಯಲ್ಲಿ ಹಿಡಿಯಬೇಕು, ಸರಕಾರದ ಪ್ರಶಸ್ತಿ ಪಡೆಯಬೇಕು' ಅವರ ಆಶೆಯಾಗಿತ್ತು.

Friday, December 18, 2009

ಅಗರಿ ಪ್ರಶಸ್ತಿ ಪುರಸ್ಕೃತ 'ಕೋಳ್ಯೂರ್'

ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ ಸ್ಮರಣಾರ್ಥ - ಪ್ರತೀವರ್ಷ ನೀಡುವ ಅಗರಿ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ನಾರಾಯಣ ಭಟ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಮೊತ್ತ ಹತ್ತು ಸಾವಿರ ರೂಪಾಯಿ.

ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ವೇದಿಕೆ ಮತ್ತು ಸುರತ್ಕಲ್ಲಿನ ಯಕ್ಷಗಾನ-ಲಲಿತಕಲಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ದಶಂಬರ 28ರಂದು ಗೋವಿಂದದಾಸ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಪರಿಚಯ: ಕೋಳ್ಯೂರು ರಾಮಚಂದ್ರ ರಾವ್ ಇವರ ಮೂಲಕ ಯಕ್ಷಲೋಕಕ್ಕೆ ಕಾಲಿರಿಸಿದ್ದ ನಾರಾಯಣ ಭಟ್, ದಿ.ಕುರಿಯ ವಿಠಲ ಶಾಸ್ತ್ರಿ ಮತ್ತು ಅಗರಿ ಶ್ರೀನಿವಾಸ ಭಾಗವತರ ಮಾರ್ಗದರ್ಶನದಲ್ಲಿ ಪ್ರಬುದ್ಧ ಕಲಾವಿದರಾಗಿ ರೂಪುಗೊಂಡರು. ಐದು ದಶಕಗಳ ಕಾಲ ಧರ್ಮಸ್ಥಳ ಮೇಳ, ಕೂಡ್ಲು ಮೇಳ, ಕುಂಡಾವು, ಸುಂಕದಟ್ಟೆ, ವೇಣೂರು, ಕಟೀಲು ಮೇಳಗಳಲ್ಲಿ ತಿರುಗಾಟ.

ಭೀಮ, ವಾಲಿ, ಜಾಬಾಲಿ, ಶಿಶುಪಾಲ ಪಾತ್ರಗಳಲ್ಲಿ ಹೆಚ್ಚು ಗುರುತಿಸಿಕೊಂಡವರು. ಬಣ್ಣದ ವೇಶದಿಂದ ರಾಜವೇಷದ ತನಕ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲವರು. 79ರ ಹರೆಯದ ನಾರಾಯಣ ಭಟ್ ಪ್ರಸ್ತುತ ಸುರತ್ಕಲ್ಲಿನ ಚಿರಂತನ ವೃದ್ಧಾಶ್ರಮದಲ್ಲಿ ನೆಲೆಸಿದ್ದಾರೆ.

(ಕೃಪೆ : ಪ್ರಜಾವಣಿ/18 ದಶಂಬರ 2009)

Wednesday, December 16, 2009

'ಆಪ್ತ' ಕಲಾವಿದ ಕುಂಬಳೆ ಶ್ರೀಧರ ರಾವ್

ಸಾಧನೆಯ ಗೆರೆಯನ್ನು ದಾಟಿರುವ ಕಲಾವಿದರನ್ನು ಜ್ಞಾಪಿಸಿಕೊಂಡರೆ ಸಾಕು, ಅವರ ಪಾತ್ರಗಳು ಕಣ್ಣೆದುರು ಧುತ್ತೆಂದು ನಿಂತುಬಿಡುತ್ತದೆ! ಪಾತ್ರಗಳ ಹೆಸರನ್ನು ನೆನಪಿಸಿಕೊಂಡರೆ, ನಿರ್ವಹಿಸುತ್ತಿದ್ದ ಕಲಾವಿದರು ಮಿಂಚಿ ಮರೆಯಾಗುತ್ತಾರೆ!

ಒಂದು ಕಾಲಘಟ್ಟದ 'ಅಮ್ಮುಬಲ್ಲಾಳ್ತಿ, ದಾಕ್ಷಾಯಿಣಿ, ಲಕ್ಷ್ಮೀ, ಸುಭದ್ರೆ' ಪಾತ್ರಗಳನ್ನು ಜ್ಞಾಪಿಸಿಕೊಂಡರೆ ಕುಂಬ್ಳೆ ಶ್ರೀಧರ ರಾವ್ ಕಣ್ಣೆದುರು ಬರುತ್ತಾರೆ. ಕೊರಗ ಶೆಟ್ರ ಇರಾ ಮೇಳದಿಂದ ಶ್ರೀಧರ ರಾಯರ ವೃತ್ತಿ. ಮುಂದೆ ಕೂಡ್ಲು, ಪುನಃ ವಿಠಲ ಶೆಟ್ರ ಇರಾ (ಕುಂಡಾವು), ಮೂಲ್ಕಿ, ಕರ್ನಾಟಕ ಮೇಳಗಳ ತಿರುಗಾಟ. ಅಸ್ಥಿರ ನೆಲೆ ಸ್ಥಿರವಾದದು ಶ್ರೀ ಧರ್ಮಸ್ಥಳ ಮೇಳದಲ್ಲಿ - ನಿರಂತರ ನಾಲ್ಕು ದಶಕಗಳ ವ್ಯವಸಾಯ.

ಆರಂಭದಲ್ಲಿ ಶೇಣಿಯಂತಹ ಹಿರಿಯರ ಜತೆಗಾರಿಕೆ. ಪಾತ್ರ ನಿರ್ವಹಿಸುತ್ತಾ ಕಲಿಕೆ. ಆಗಲೇ ಶೇಣಿಯವರ ರಾವಣ, ವಾಲಿ ಪಾತ್ರಗಳಿಗೆ 'ಮಂಡೋದರಿ, ತಾರೆ'ಯ ಸಾಥಿ. ಅವರ ನಿತ್ಯನೂತನ ಹೊಳಹುಗಳಿಗೆ ನಿತ್ಯ ಸ್ಪಂದಿಸುತ್ತಾ ಬೆಳೆದ ಕುಂಬ್ಳೆಯವರ ಪಾತ್ರಗಳನ್ನು ನೋಡಿದಾಗ 'ಮೂರನೇ ತರಗತಿ' ಕಲಿತವರೆಂದು ಹೇಳಲು ಮುಜುಗರವಾಗುತ್ತದೆ.

ಶ್ರೀ ಎಡನೀರು ಮಠದಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲೂ ಹಿರಿಯರೊಂದಿಗೆ ಆರ್ಥಧಾರಿಯಾಗಿರುವುದು ಅವರ 'ಅಕ್ಷರಕೊರತೆ'ನ್ನು ನೀಗಿಸಿತು. ಹಾಗಾಗಿಯೇ ಇರಬಹುದೇನೋ - ಅವರ ಕೆಲವೊಂದು ಪಾತ್ರಗಳಲ್ಲಿ ಕಾಣುತ್ತದೆ - 'ಎದುರೇಟು, ಸಿಲುಕಿಸುವ ಕೊಕ್ಕೆ, ಪ್ರತ್ಯುತ್ಪನ್ನಮತಿ!

ಇರಾ ಮೇಳದಲ್ಲಿದ್ದಾಗ 'ಕನಕಮಾಲಿನಿ ಪರಿಣಯ' ಪ್ರಸಂಗದಲ್ಲಿ ಅರುವ ಕೊರಗಪ್ಪ ಶೆಟ್ರ 'ಪುಷ್ಪಧ್ವಜ'ನೊಂದಿಗೆ ಇವರ 'ಕನಕಮಾಲಿನಿ' ಪಾತ್ರವು ಮೆರೆದ ದಿನಗಳು ಆಗಿನ 'ದೊಡ್ಡ ಸುದ್ದಿ'.

ಶ್ರೀಧರರು ಧರ್ಮಸ್ಥಳ ಮೇಳಕ್ಕೆ ಸೇರುವ ಹೊತ್ತಿಗೆ ಪಾತಾಳ ವೆಂಕಟ್ರಮಣ ಭಟ್ಟರು 'ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ' ಪ್ರಸಂಗದಲ್ಲಿ 'ಅಮ್ಮುಬಲ್ಲಾಳ್ತಿ' ಪಾತ್ರವನ್ನು ಕಡೆದಿದ್ದರು. ಅದೇ ನಡೆಯಲ್ಲಿ ಸಾಗಿದ ಶ್ರೀಧರ್, ಅದನ್ನು ಎಟುಕದಷ್ಟು ಎತ್ತರದಲ್ಲಿ ನಿಲ್ಲಿಸಿದ್ದಾರೆ.

ಕಡತೋಕರ ಸಾರಥ್ಯದಲ್ಲಿ 'ಸುದರ್ಶನ ವಿಜಯ' ಪ್ರಸಂಗ ಮನೆಮಾತು. ಕುಂಬಳೆ ಸುಂದರ ರಾಯರ 'ವಿಷ್ಣು', ಶ್ರೀಧರರ 'ಲಕ್ಷ್ಮೀ', ಕರ್ಗಲ್ಲು ವಿಶ್ವೇಶ್ವರ ಭಟ್ಟರ 'ಸುದರ್ಶನ' - ಈ ತ್ರಿವೇಣಿ ಸಂಗಮದ ಮಾತಿನ ಲೋಕದಲ್ಲಿ 'ಸರಸ್ವತಿ' ಪ್ರತ್ಯಕ್ಷ! ಇಹ ಮರೆಯುವಷ್ಟು ಪ್ರೇಕ್ಷಕರ ತಲ್ಲೀನತೆ.

ಪುತ್ತೂರು ನಾರಾಯಣ ಹೆಗಡೆಯವರ 'ಹಿರಣ್ಯಕಶಿಪು' ಪಾತ್ರಕ್ಕೆ ಶ್ರೀಧರರ 'ಕಯಾದು' ಪಾತ್ರ. ಹೆಗಡೆಯವರ 'ಋತುಪರ್ಣ', ವಿಟ್ಲ ಜೋಯಿಸರ 'ಬಾಹುಕ', ಇವರ 'ದಮಯಂತಿ' ಪಾತ್ರಗಳು; ಮುಂದೆ ಗೋವಿಂದ ಭಟ್ಟರ 'ಋತುಪರ್ಣ', ನಯನಕುಮಾರ್ರ 'ಬಾಹುಕ' ಪಾತ್ರಗಳಿಗೆ ಗಟ್ಟಿಜತೆ. ಸುಂದರ ರಾಯರ 'ಈಶ್ವರ' ಮತ್ತು ಇವರ 'ದಾಕ್ಷಾಯಿಣಿ'; ಪುತ್ತೂರು ಶ್ರೀಧರ ಭಂಡಾರಿಗಳ 'ಬಬ್ರುವಾಹನ', ಆಭಿಮನ್ಯು'ಗೆ ಇವರ 'ಚಿತ್ರಾಂಗದೆ, ಸುಭದ್ರೆ' - ದೀರ್ಘಕಾಲದ ಜತೆಗಾರಿಕೆ - ಇವೆಲ್ಲಾ 'ಮರೆಯಲಾಗದ' ಯಕ್ಷರಾತ್ರಿಗಳು.

ಗಜಗೌರಿ ವ್ರತದ 'ಕುಂತಿ', ಕೃಷ್ಣಲೀಲೆಯ 'ಯಶೋದೆ, ಚಂದ್ರಮತಿ, ವಿಶ್ವಾಮಿತ್ರ, ಜಮದಗ್ನಿ - ಅನುಕರಣೆಯಿಲ್ಲದ ಪಾತ್ರಶಿಲ್ಪಗಳು. ತನ್ನೆಲ್ಲಾ ಪಾತ್ರ ನಿರ್ವಹಣೆಯ ಹಿಂದಿನ 'ಮೋಡೆಲ್' ಯಾರು ಅಂತ ಅವರನ್ನು ಕೆಣಕಿದಾಗ ಕೋಳ್ಯೂರು ರಾಮಚಂದ್ರ ರಾಯರನ್ನು ತೋರಿಸುತ್ತಾರೆ.

ಶ್ರೀಧರ ರಾಯರು ಗರತಿ ಪಾತ್ರಗಳಲ್ಲಿ ಇಷ್ಟವಾಗುತ್ತಾರೆ. ಭಕ್ತಿ ಮತ್ತು ಕರುಣ ರಸಗಳಿಗೆ ಹೊಂದುವ ಶಾರೀರ. ಹಿತ-ಮಿತ ನಾಟ್ಯ. ಪ್ರಿಯವಾಗುವ ರಂಗನಡೆ. ಶುಚಿ-ರುಚಿಯ ಮಾತುಗಾರಿಕೆ. ಲಹರಿ ಬಂದಾಗ 'ಸ್ವಲ್ಪ ಹೆಚ್ಚೇ' ಅನ್ನುವಷ್ಟು ಮಾತು. ಇಂತಹ ಸಂದರ್ಭದಲ್ಲಿ ಕೆಲವು ಸಲ ಪ್ರೇಕ್ಷಕರೊಂದಿಗೆ ಮಾತನಾಡುವಂತೆ ಭಾಸವಾಗುತ್ತದೆ.

ಮುಖದಲ್ಲಿ ನೆರಿಗೆ ಬಂದ ನಂತರವೂ 'ಸ್ತ್ರೀಪಾತ್ರ'ದಲ್ಲಿ ಕಾಣಿಸಿಕೊಳ್ಳುವುದು ಅಷ್ಟೊಂದು ಚಂದವಲ್ಲ. 'ಅದು ಸ್ತ್ರೀ ಅಲ್ಲವಲ್ಲ. ಸ್ತ್ರೀ ಪಾತ್ರ ತಾನೆ. ಅದಕ್ಕೆ ವಯಸ್ಸನ್ನು ಥಳಕು ಹಾಕಬಾರದು' ಎಂಬುದೊಂದು ವಾದವಿದೆ. ಇರಲಿ. ಶ್ರೀಧರ ರಾಯರು ಸ್ತ್ರೀಪಾತ್ರ ನಿರ್ವಹಣೆಯಲ್ಲಿ ಉತ್ತುಂಗದಲ್ಲಿದ್ದಾಗಲೇ, ಪುರುಷ ಪಾತ್ರಕ್ಕೆ 'ಟರ್ನ್’ ತೆಕ್ಕೊಂಡು ಯಶಸ್ಸಾದವರು. 'ನನ್ನ ವಯಸ್ಸು ಪಾತ್ರದ ಮೇಲೆ ಪರಿಣಾಮ ಬೀರಿತು ಅನ್ನುವಾಗಲೇ ಈ ನಿರ್ಧಾರಕ್ಕೆ ಬಂದೆ' ಅನ್ನುತ್ತಾರೆ.

ಸ್ತ್ರೀಪಾತ್ರದ ಲಾಲಿತ್ಯ, ಮಾಧುರ್ಯಗಳು ಒಮ್ಮೆ ಒಗ್ಗಿ ಹೋದರೆ, ಅದರಿಂದ ಹೊರಬರಲು ಒಂದಷ್ಟು ಕಾಲ ಬೇಕು. ಪುರುಷ ಪಾತ್ರ ಮಾಡಿದಾಗ 'ಈತ ಸ್ತ್ರೀವೇಷಧಾರಿ' ಎಂದು ಫಕ್ಕನೆ ಗುರುತಿಸುವಷ್ಟು ಲಾಲಿತ್ಯ ಅಂಟಿಕೊಂಡಿರುತ್ತದೆ. ನಡೆಯಲ್ಲಿ, ನುಡಿಯಲ್ಲಿ ಕೂಡಾ.

ಶ್ರೀಧರರ ಪುರುಷ ಪಾತ್ರಗಳಲ್ಲಿ 'ಎತ್ತಿ ಹೇಳು'ವ ಇಂತಹ ದೋಷಗಳು ಕಾಣಿಸುವುದಿಲ್ಲ. ಪಕಡಿ ವೇಷದಿಂದ ಕಿರೀಟದ ತನಕ ನಿರಾಳ, ನಿರುಮ್ಮಳ. ಒಂದು ದೃಷ್ಟಿಯಿಂದ 'ಒಂದು ಮೇಳಕ್ಕೆ ಅತೀ ಅವಶ್ಯ' ಕಲಾವಿದ. ಕಾರಣ, ಎಲ್ಲಾ ಪಾತ್ರಗಳನ್ನು ನಿರ್ವಹಿಸುವ ಕಲಾವಂತಿಕೆ.

ಉದಾ:. ಕೃಷ್ಣಾರ್ಜುನ ಕಾಳಗ ಪ್ರಸಂಗವನ್ನು ತೆಕ್ಕೊಂಡರೆ, ಅದರಲ್ಲಿ 'ಕೃಷ್ಣ' ಪಾತ್ರಕ್ಕೂ ಸೈ, 'ಅರ್ಜುನ’ನಿಗೂ ಓಕೆ. ಜತೆಗೆ ಬಲರಾಮ, ಸುಭದ್ರೆ. 'ನನ್ನ ಪಾತ್ರವಷ್ಟಕ್ಕ್ರೇ ತಯಾರಾಗುತ್ತಿರಲಿಲ್ಲ. ಇದಿರು ಪಾತ್ರಗಳ ಸಂಭಾಷಣೆ, ನಡೆಗಳು, ವಾದ-ವಿವಾದ, ಮಟ್ಟು-ಪೆಟ್ಟುಗಳೆಲ್ಲವನ್ನೂ ಮಾನಸಿಕವಾಗಿ ಅಭ್ಯಾಸ ಮಾಡುವುದು ನನ್ನ ಅಭ್ಯಾಸ. ಅದೀಗ ಪ್ರಯೋಜನಕ್ಕೆ ಬಂತು' ಎನ್ನುತ್ತಾರೆ.
ಅಂತೆಯೇ ದೇವಿ ಮಹಾತ್ಮೆ ಪ್ರಸಂಗದಲ್ಲಿ - ವಿಷ್ಣು, ಬ್ರಹ್ಮ, ವಿದ್ಯುನ್ಮಾಲಿ, ದೇವಿ; ಅಗತ್ಯಬಿದ್ದರೆ 'ರಕ್ತಬೀಜ'! ಬೆಳಗ್ಗಿನ ಜಾವದ ಬೀಸುನಡೆಯ ಪಾತ್ರಗಳು ಸಹ. ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯಲ್ಲಿ 'ಈಶ್ವರ' ಪಾತ್ರದ ಇವರ ಜಾಗದಲ್ಲಿ ಬೇರೊಬ್ಬ ಕಲಾವಿದರನ್ನು ಕಲ್ಪಿಸಲಾರದಷ್ಟು ಪೋಷಣೆ.


ಕುಂಬಳೆ ಕಮಲಾಕ್ಷ ನಾಯಕ್ ಮತ್ತು ಚಂದು ಅವರಲ್ಲಿ ನಾಟ್ಯಾಭ್ಯಾಸ, ಉಡುಪಿ ಕಲಾ ಕೇಂದ್ರದಲ್ಲಿ ಒಂದು ಮಳೆಗಾಲ ಬಡಗು ನೃತ್ಯಭ್ಯಾಸ. ಮತ್ತೆಲ್ಲಾ ಕಲಿಕೆಗಳು ರಂಗದಲ್ಲಿ. ಯಾರದ್ದೇ ಪಡಿಯಚ್ಚಾಗಾದ ಅಭಿವ್ಯಕ್ತಿ. 'ದೈನಂದಿನ ಸವಾಲುಗಳು ನನ್ನ ಬದುಕನ್ನು ರೂಪಿಸಿವೆ'-ಶ್ರೀಧರರ ಮಾತಿನ ಹಿಂದೆ ನೋವಿದೆ-ನಲಿವಿದೆ.

'ಧರ್ಮಸ್ಥಳ ಮೇಳ ಮತ್ತು ಪೂಜ್ಯ ಖಾವಂದರ ಪ್ರೋತ್ಸಾಹಗಳೇ ನನ್ನ ಯಶಸ್ಸಿನ ಗುಟ್ಟು' ಎನ್ನಲು ಮರೆಯಲಿಲ್ಲ. ಸಾರ್ವಜನಿಕ ಜೀವನದಲ್ಲಿ ಎಲ್ಲರಂತಲ್ಲ! ವಿನಯ - ಬದುಕು ಕಲಿಸಿದ ಪಾಠ. ರಂಗದಲ್ಲಾಗಲೀ, ನಿತ್ಯ ಜೀವನದಲ್ಲಾಗಲೀ 'ತನ್ನ ಮಿತಿಯರಿತು' ವ್ಯವಹಾರ. ಇದು ಎಲ್ಲರಲ್ಲೂ ಸುಲಭವಾಗಿ ಕಾಣದು. ಇನ್ನೊಬ್ಬರ ಸಮಸ್ಯೆಯನ್ನೋ, ಜವಾಬ್ದಾರಿಯನ್ನು ತನ್ನದೆಂದು 'ಹೊತ್ತುಕೊಳ್ಳುವ' ಪರೋಪಕಾರಿ! ಇದರಿಂದ ಒಂದಷ್ಟು ಕಷ್ಟ-ನಷ್ಟಗಳು. ಅವೆಲ್ಲವನ್ನೂ 'ಸಮತೂಕ'ದಿಂದ ನೋಡುವ ಜಾಯಮಾನ.

ಕೆಲವೊಂದು ಸಲ ನಮ್ಮ ಆಪ್ತರಾಗಿದ್ದರೂ, ಬಣ್ಣದ ಮನೆಗೆ (ಚೌಕಿ) ಹೋದಾಗ ಅಪರಿಚಿತರಂತೆ ವರ್ತಿಸುವ ಕಲಾವಿದರನ್ನು ಹತ್ತಿರದಿಂದ ಬಲ್ಲೆ. ಈ ಸಾಲಿಗೆ ಶ್ರೀಧರ ರಾಯರು ಸೇರುವುದಿಲ್ಲ. ವಿನಯವು ಅವರಿಗೆ 'ಮುಖವಾಡ'ವಲ್ಲ. ಸಜ್ಜನಿಕೆಯು 'ಸ್ಟಂಟ್' ಅಲ್ಲ. ಒಂದು ರೀತಿಯ ಅಪರೂಪದ ವ್ಯಕ್ತಿತ್ವ.

ತಂದೆ ಮಹಾಲಿಂಗ. ತಾಯಿ ಕಾವೇರಿ. ಪತ್ನಿ ಸುಲೋಚನಾ. ಅಧ್ಯಾಪಿಕೆ. ಮೂವರು ಮಕ್ಕಳು. ಉಪ್ಪಿನಂಗಡಿ ಸನಿಹದ ಕೃಷ್ಣನಗರದಲ್ಲಿ ವಾಸ. ಶ್ರೀಕ್ಷೇತ್ರ ಧರ್ಮಸ್ಥಳ, ಶ್ರೀ ಎಡನೀರು ಮಠ, ಮಂಗಳೂರಿನ ಕೃಷ್ಣಸಭಾ, ಪುತ್ತೂರಿನಲ್ಲಿ ಯಕ್ಷ ಸುಹೃತ್ ಸಂಮಾನ ..ಗಳಲ್ಲಿ ಸಂಮಾನಿತರು.

'ನನ್ನ ಯಕ್ಷಗಾನದ ಆರಂಭದಲ್ಲಿ ಶೇಣಿಯಂತಹ ಹಿರಿಯರ ಮಾರ್ಗದರ್ಶನವು ನನಗೆ ಯಕ್ಷಾಕ್ಷರ ಕಲಿಸಿದೆ. ಇವರ ಸಾಂಗತ್ಯ ಮಾತುಗಾರಿಕೆಗೆ ತುಂಬಾ ಪ್ರಯೋಜನವಾಗಿದೆ. ಅರುವತ್ತು ದಾಟಿದ ಈ ಸಂದರ್ಭದಲ್ಲಿ (ಮಾರ್ಚ್ ೨೦೦೯) ಶೇಣಿಯವರ ಹೆಸರಿನ ಸಂಮಾನ ಪ್ರಾಪ್ತವಾಗಿರುವುದು ಧನ್ಯತೆಯನ್ನು ತಂದಿದೆ' ಕೃತಜ್ಞತೆಯಿಂದ ಭಾವುಕರಾಗುತ್ತಾರೆ.

Monday, December 14, 2009

ಹಿರಿಯ ಕಲಾವಿದ ಕುಡಾನ ಗೋಪಾಲಕೃಷ್ಣ ಭಟ್

ಯಕ್ಷಗಾನ ಕ್ಷೇತ್ರದಲ್ಲೂರಿದ 'ಕುಡಾನ'ರ ಹಿರಿದಾದ ಹೆಜ್ಜೆ ಗುರುತು ಮಾಸದಷ್ಟು ಗಟ್ಟಿ. ಅದು ಸದ್ದು ಮಾಡಿಲ್ಲ, ಸುದ್ದಿ ಮಾಡಿಲ್ಲ. ಕೆಲವೊಂದು ಪಾತ್ರಗಳು ಸ್ಪುರಣೆಗೆ ಬಂದಾಗ, 'ಕುಡಾನ'ರನ್ನು ಬಿಟ್ಟು ಮಾತನಾಡುವುದು ಕಷ್ಟ.
ಕುಡಾನ ಗೋಪಾಲಕೃಷ್ಣ ಭಟ್ಟರು 'ಗೋಪಿಯಣ್ಣ, ಗೋಪಿ ಭಟ್ಟರು' ಎಂದೇ ಪರಿಚಿತರು. ಕಾಸರಗೋಡು ಜಿಲ್ಲೆಯ ಮುಳಿಗದ್ದೆ ಬೆರಿಪದವು ಸನಿಹದ ಕುಡಾನದವರು..

ಒಂದಷ್ಟು ಓದಲು ಬಂದರೆ ಸಾಕು - ಯಕ್ಷಗಾನದ ಹೆಜ್ಜೆಗೆ, ಸದ್ದಿಗೆ ಕಿವಿಯರಳುತ್ತಿದ್ದ ಕಾಲದಲ್ಲೇ ಭಟ್ಟರನ್ನು ಯಕ್ಷಗಾನ ಅಪ್ಪಿಕೊಂಡಿತು. ನಲವತ್ತು ವರ್ಷಗಳಷ್ಟು ಕಾಲ ಅಪ್ಪುಗೆಯ ಬಿಗಿ ಸಡಿಲವಾಗಲೇ ಇಲ್ಲ!

ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರಿಂದ ಪ್ರಾಥಮಿಕ ಹೆಜ್ಜೆಗಾರಿಕೆ. ಕೋಳ್ಯೂರು ರಾಮಚಂದ್ರ ರಾಯರಿಂದ ಹೆಚ್ಚಿನ ಕಲಿಕೆ. ಕುರಿಯ ವಿಠಲ ಶಾಸ್ತ್ರಿಗಳ ಧರ್ಮಸ್ಥಳ ಮೇಳದಿಂದ ಬಣ್ಣದ ನಂಟು. ಅವರಿಂದಲೇ ರಂಗಮಾಹಿತಿ-ಕಲಿಕೆ. ಕೇರಳದ ಪಾಲ್ಘಾಟ್ನಲ್ಲಿ ಭರತನಾಟ್ಯ ಅಭ್ಯಾಸ.

ಏಳು ವರುಷಗಳ ಧರ್ಮಸ್ಥಳ ಮೇಳದ ತಿರುಗಾಟದ ಬಳಿಕ, ಮೂಲ್ಕಿ ಮೇಳದಲ್ಲಿ ಹದಿಮೂರು ವರುಷ ನೆಲೆ. ಪಕ್ವಗೊಂಡ ಪಾಕ ಪರಿಪಕ್ವತೆಗೆ ನಾಂದಿ. ಪ್ರತಿಭಾ ಅನಾವರಣದ ತಾಣ.

ಸ್ತ್ರೀಪಾತ್ರಧಾರಿಯಾಗಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಭಟ್ಟರ ಪಾಲಿಗೆ 'ಜವಾಬ್ದಾರಿಯುತ' ಪಾತ್ರಗಳು ಬೆನ್ನಟ್ಟಿ ಬಂದುವು. 'ಜವಾಬ್ದಾರಿ ಹೆಚ್ಚದೆ ಪ್ರಗತಿ ಕಾಣುವುದೆಂತು?'. ಅಭಿಮನ್ಯು, ಲಕ್ಷ್ಮಣ, ಪರಶುರಾಮ, ಚಂಡಮುಂಡ..ಪಾತ್ರಗಳು ತಮ್ಮ ಮೂಲ್ಕಿ ಮೇಳದಲ್ಲಿ 'ನಿಜಾರ್ಥ'ದಲ್ಲಿ ಮಿಂಚಿದ್ದ ಕಾಲವನ್ನು ಪೆರುವಡಿ ನಾರಾಯಣ ಭಟ್ಟರು ಜ್ಞಾಪಿಸಿಕೊಳ್ಳುತ್ತಾ, 'ರಂಗದಲ್ಲಿ ಅವರು ಪಾತ್ರವೇ ಆಗುತ್ತಿದ್ದರು' ಎನ್ನುತ್ತಾರೆ. ಕಡತೋಕ ಭಾಗವತರ ಎಲ್ಲಾ ಪ್ರಯೋಗಗಳಿಗೆ ಒಳಗಾಗಿ, ಮೆಚ್ಚುಗೆ ಗಳಿಸಿದರು.

ಪುಂಡುವೇಷ ಮತ್ತು ಸ್ತ್ರೀಪಾತ್ರಗಳಲ್ಲಿ 'ಗೋಪಿಯಣ್ಣ' ಮಿಂಚಿದ ದಿನಗಳು ಇವೆಯಲ್ಲಾ, ಅವೀಗಲೂ 'ಮಾತಿನ ವಸ್ತು.' ಮುಖ್ಯವಾಗಿ ಕೆಲವೇ ಕೆಲವು ಶೃಂಗಾರ ಪಾತ್ರಗಳು ರೈಸುತ್ತಿತ್ತು ಎಂದು ಅವರನ್ನು ಹತ್ತಿರದಿಂದ ಬಂದ ಪೆರುವಡಿ ಹೇಳುತ್ತಾರೆ - 'ಹಗಲು ಹೊತ್ತಲ್ಲಿ ಕಂಡರೆ ಇವರು ವೇಷಧಾರಿಯೇ ಅಂತ ಸಂಶಯ ಪಡಬೇಕು. ಅಷ್ಟು ಮುಗ್ಧ. ತೋರಿಸಿಕೊಳ್ಳುವ ಅಹಮಕೆ ಇಲ್ಲ. ವೇಷ ರಂಗಕ್ಕೆ ಬಂದರೆ ಅಷ್ಟು ಚಂದ. ಮುದ್ದುಮುದ್ದು.'

ಪೀಠಿಕೆಯ ಮುನ್ನ ವಿಶೇಷ ಆಕರ್ಷಣೆಯಾಗಿ ಇವರ ಮತ್ತು ಕೊಕ್ಕಡ ಈಶ್ವರ ಭಟ್ಟರ 'ಭರತನಾಟ್ಯ' ಪ್ರದರ್ಶನವಿರುತ್ತಿತ್ತು. 'ಆ ಕಾಲಕ್ಕೆ ಅದು ಜನಾಕರ್ಷಣೆ ಪಡೆದಿತ್ತು' ಪೆರುವಡಿಯವರು ನೆನಪಿಸುತ್ತಾರೆ. ಭರತನಾಟ್ಯದ ನಡೆಗಳು ತಪ್ಪಿಯೂ ಯಕ್ಷಗಾನ ನಡೆಯೊಂದಿಗೆ ಮಿಳಿತವಾಗುತ್ತಿರಲಿಲ್ಲ.

ಆಯದ ಕುಣಿತ. ರಂಗದ ಕಾಲೋಚಿತ ನಡೆ. ಅಚ್ಚುಕಟ್ಟಿನ ವೇಷ. ನಾಟ್ಯ, ಆಂಗಿಕಾಭಿನಯ, ಹದವರಿತ ಮಾತುಗಾರಿಕೆ. ರಂಗದಲ್ಲೋ, ವೇಷದಲ್ಲೋ 'ಯಕ್ಷಗಾನದ ಪದ್ದತಿ' ಅಂತ ಏನಿದೆಯೋ ಅದನ್ನು ಮುರಿಯದ ಕಲಾವಿದ. ತನ್ನ ವಿಚಾರಕ್ಷಮತೆ, ಕಲಾಪ್ರತಿಭೆ, ಶರೀರ-ಶಾರೀರಗಳ ಅರಿವಿದ್ದು; ಪ್ರ್ರತಿಷ್ಠೆ-ಪ್ರಚಾರಗಳಿಗೆ ಅಂಟಿಕೊಳ್ಳದವರು. ಹಾಗಾಗಿಯೇ ಇರಬೇಕು, 'ಮಿರಿಮಿರಿ ಮಿಂಚುವ ತಾರಾಮೌಲ್ಯ' ಅವರ ಬಳಿಗೆ ಬಂದಿಲ್ಲ!

ಕುಡಾನ ಓರ್ವ ನಿರುಪದ್ರವಿ ಕಲಾವಿದ. ತಾನಾಯಿತು, ತನ್ನಪಾಡಾಯಿತು. ಪರದೂಷಣೆಯಿಂದ ದೂರ. ಯಾವುದೆ ಪಾತ್ರಗಳಿಗೆ 'ಸೀಮಿತ'ಗೊಳ್ಳದೆ ಕಲಾಪ್ರದರ್ಶನದ ಒಟ್ಟಂದವನ್ನು ಲಕ್ಷ್ಯವಾಗಿರಿಸಿದ ಅಜಾತಶತ್ರು. ಚಿಕ್ಕ ಪಾತ್ರವಹಿಸಿದರೂ, ಅದನ್ನು 'ಎದ್ದು ಕಾಣಿಸುವ' ಪ್ರೌಢಿಮೆ.

ಧರ್ಮಸ್ಥಳ, ಮೂಲ್ಕಿ ತಿರುಗಾಟದ ನಂತರ ಇರಾ(ಕುಂಡಾವು), ಕೂಡ್ಲು, ಸುಂಕದಕಟ್ಟೆ, ಕಟೀಲು..ಹೀಗೆ ವಿವಿಧ ಮೇಳಗಳಲ್ಲಿ ವ್ಯವಸಾಯ. ವಯೋಧರ್ಮ, ದೇಹಧರ್ಮವು ಕಲೆಯ ಕಸುಬಿಗೆ ತೊಡಕಾದಾಗ ವೃತ್ತಿ ಸಂತೋಷದಿಂದ ಗೆಜ್ಜೆ-ಕುಣಿತವನ್ನು ನಿಲ್ಲಿಸಿ ಹದಿನಾಲ್ಕು ವರುಷವಾಯಿತು.

ತಂದೆ ನಾರಾಯಣ ಭಟ್, ತಾಯಿ ಗಂಗಮ್ಮ. ಮಡದಿ ಸಾವಿತ್ರಿ. ನಾಲ್ವರು ಮಕ್ಕಳು. ಮುಳಿಗದ್ದೆ, ಪೈವಳಿಕೆ, ಚಿಪ್ಪಾರು ಶಾಲೆಗಳಲ್ಲಿ ಯಕ್ಷಗಾನ ತರಗತಿಯನ್ನು ನಡೆಸಿದ್ದಾರೆ. ಹಲವಾರು ಶಿಷ್ಯರನ್ನು ರೂಪಿಸಿದ್ದಾರೆ. ವಿವಿಧ ಸಂಘಸಂಸ್ಥೆಗಳು ಇವರನ್ನು 'ಹುಡುಕಿ' ಗೌರವಿಸಿದ್ದಾರೆ. 'ಪಾತಾಳ ಪ್ರಶಸ್ತಿ' ಪುರಸ್ಕೃತರು. 'ತನಗೆ ಇಂತಹ ಪ್ರಶಸ್ತಿ ಬರಬೇಕಿತ್ತು' ಅಂತ ಒಂದು ದಿನವೂ ಕೊರಗದ ಹಿರಿಯ ಕಲಾವಿದ - ಕುಡಾನ.

Sunday, December 13, 2009

ಅಭಯಾರಣ್ಯದ 'ದೊಂದಿಯಾಟ ಚಿತ್ರೀಕರಣ'


ಅಶೋಕವರ್ಧನರ ಅಭಯಾರಣ್ಯ ಸೇರಿದಾಗ ಕತ್ತಲಾಗುತ್ತಿತ್ತು. ಯಕ್ಷಗಾನದ ಪಾರಂಪರಿಕ ಸೊಗಸಿಗೆ ಕವಿದಿದ್ದ ಕತ್ತಲನ್ನು ಸರಿಸುವ ಪ್ರಯತ್ನ! ಕತ್ತಲು-ಬೆಳಕಿನಾಟದ 'ದೊಂದಿ'ಯಾಟ -ಅಂದಿನ ರಂಗವೈಭವವನ್ನು ಮರಳಿ ತರುವ ಸಿದ್ಧತೆ!

ಯಕ್ಷಗಾನದಲ್ಲಿ 'ಬೆಳಕು' ಇದೆ! ಕತ್ತಲು ಇಲ್ವಾ? ಈ ಕತ್ತಲೆಗೆ ಕಾರಣ ಯಾರು? ಕಲಾವಿದರಾ, ಪ್ರೇಕ್ಷಕರಾ, ಸಂಘಟಕರಾ, ಮೇಳದ ಯಜಮಾನರಾ? ಮಾತಿಗೆ ಮಾತು ಬೆಳೆಯುವ ಪ್ರಶ್ನೆಯಷ್ಟೇ. 'ಕಂಠತ್ರಾಣ'ಕ್ಕೆ ಅವಕಾಶ.

ಕತ್ತಲು ಸರಿಸುವ ಅನೇಕ ಗೋಷ್ಠಿಗಳೋ, ಪ್ರಾತ್ಯಕ್ಷಿಕೆಯೋ ನಡೆದಿದೆ, ನಡೆಯುತ್ತಿದೆ. ಅದರಿಂದ ಇನ್ನಷ್ಟು ಕತ್ತಲೆಯೇ ಹೊರತು ಬೆಳಕನ್ನು ಕಾಣುವ, ಅಲ್ಲ-ಬೆಳಕಿನ ಕಿರಣವನ್ನಾದರೂ ನೋಡುವ ಸಂದರ್ಭ ಎಷ್ಟು ಸಲ ಬಂದಿದೆ? 'ಬೆಳಕು ನೋಡಿದ್ದೇವೆ' ಎಂದೆನುತ್ತಾ ಬೀಗುತ್ತೇವೆ, 'ಗಂಡು ಕಲೆ' ಅಂತ ಲೇಖನಾರಂಭ ಮಾಡುತ್ತೇವೆ.

ಕಾಲ ಸರಿಯುತ್ತಿದೆ. ಯಕ್ಷಗಾನದ 'ರಂಗ'ವೂ ಮಾಸುತ್ತಿದೆ. ಕ್ಷಣಿಕ ಢಾಂಢೂಂಗಳ ಸುಳಿಯಲ್ಲಿ ಸುತ್ತುತ್ತಾ ಬಿಡುಗಡೆಗಾಗಿ ಅಂಗಲಾಚುತ್ತಿದೆ! ಬಡಗಿನಲ್ಲಾದರೋ ಅಧ್ಯಯನ ಕೇಂದ್ರಗಳು ಮರೆತುಹೋದ, ಬುದ್ಧಿಪೂರ್ವಕವಾಗಿ ಮರೆತವುಗಳನ್ನು ಪುನಃ ರಂಗಕ್ಕೆ ಎಳೆದು ತರುತ್ತಿದೆ.

ತೆಂಕಿನಲ್ಲಿ? ಪತ್ರಿಕಾ ಸ್ನೇಹಿತ ಪೃಥ್ವಿರಾಜ್ ಹೇಳುತ್ತಾರೆ - 'ಹೌದು ಮಾರಾಯ್ರೆ. ನಮ್ಮ ತೆಂಕಿನಲ್ಲಿ ಬಡಗಿನಲ್ಲಿದ್ದಂತೆ ಅಧ್ಯಯನ ಕೇಂದ್ರಗಳಿರುತ್ತಿದ್ದರೆ ಹೀಗಾ?'. ಇಂತಹ ಅಧ್ಯಯನ ಕೇಂದ್ರಗಳ ಸ್ಥಾನಗಳನ್ನು ಹವ್ಯಾಸಿಗಳು ತುಂಬುತ್ತಿದ್ದಾರೆ. (ಹವ್ಯಾಸಿಗಳೆಂದರೆ ಯಕ್ಷಗಾನ ಹವ್ಯಾಸ- ತುಡಿತವಿದ್ದು ಈ ಕ್ಷೇತ್ರಕ್ಕೆ ಒಂದಷ್ಟು ಕೊಡುಗೆ ಕೊಡಬೇಕೆನ್ನುವವರು - ವೃತ್ತಿಪರರಂತೆ ವೇಷ ಹಾಕುವವರಲ್ಲ!)

ಮಂಗಳೂರಿಗೆ ಹೋದಾಗಲೆಲ್ಲಾ ಅತ್ರಿ ಬುಕ್ ಸೆಂಟರಿನಲ್ಲಿ ಒಂದರ್ಥ ಗಂಟೆಯಾದರೂ ಕಳೆಯದಿದ್ದರೆ ಪ್ರವಾಸ ಅಪೂರ್ಣ. ಹೀಗೆ ಹೋದಾಗಲೆಲ್ಲಾ ಒಣ ಹರಟೆಯಾಗುತ್ತಿರಲಿಲ್ಲ. ಬುದ್ಧಿಗೆ ಒಂದಷ್ಟು ಮೇವು ಹಾಕುತ್ತಿದ್ದರೆ ಅಶೋಕವರ್ಧನರು. ಆ ಮೇವು ಒಂದು ತಿಂಗಳಿಗೆ ಧಾರಾಳ. ಇರಲಿ.

ದೊಂದಿಯಾಟಕ್ಕೆ ಬರೋಣ. ಸೀಮಿತ ಪ್ರೇಕ್ಷಕರು. ಎರಡು ಪ್ರಸಂಗಗಳು. ತೆಂಕಿನದು 'ಕುಂಭಕರ್ಣ ಕಾಳಗ' ಬಡಗಿನದು 'ಹಿಡಿಂಬಾ ವಿವಾಹ'. ತೆಂಕಿನ ಕಲಾವಿದರನ್ನು ಪ್ರಥ್ವಿರಾಜ್ ಗೊತ್ತುಮಾಡಿ, 'ಹಿಡಿದು' ತಂದಿದ್ದರೆ, ಬಡಗನ್ನು ಯಕ್ಷಗಾನ ಅಧ್ಯಯನ ಕೇಂದ್ರವು ಸಂಘಟಿಸಿತ್ತು.

ಬಣ್ಣದ ವಾಸನೆಯಿದ್ದವರಿಗೆ ಪ್ರಸಂಗ ಮಾಮೂಲಿ. ವೀಡಿಯೋ ಚಿತ್ರೀಕರಣವಿದ್ದುದರಿಂದ ತೆಂಕಿನಾಟದಲ್ಲಿ 'ಶಿಸ್ತು' ಎದ್ದುಕಾಣುತ್ತಿತ್ತು! ಬಡಗನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ರಖರ ಬೆಳಕಿನಲ್ಲಿ, ಮೈಕ್ ಮುಂದೆ ಅಭಿನಯ ಮಾಡಿ ರೂಢಿಯಾದರೆ, ಇಂತಹ ದಾಖಲಾತಿಗಳಲ್ಲಿ ಮನಸ್ಸು ಹಿಮ್ಮುಖವಾಗುವುದು ಸಹಜ. ಆದರಿಲ್ಲಿ 'ಕ್ಯಾಮೆರಾ ಮುಂದಿರುವ' ಅರಿವು ಎಲ್ಲರಿಗಿತ್ತು.

ಹಿಂದಿನ ದೊಂದಿಯಾಟವನ್ನು ಮರಳಿ ತರುವುದು ಒಟ್ಟೂ ಉದ್ದೇಶ. ದೊಂದಿಯ ಪರಿಣಾಮ ಕೊಟ್ಟರಾಯಿತಷ್ಟೇ. ಅದಕ್ಕಾಗಿ ಅಶೋಕವರ್ಧನ, ಅಭಯಸಿಂಹ ಮತ್ತು ಡಾ. ಮನೋಹರ ಉಪಾಧ್ಯರ 'ಗ್ಯಾಸ್ ದೊಂದಿ' ಐಡಿಯಾ ನನಗಂತೂ ಖುಷಿ ಕೊಟ್ಟಿತು. ನಿಜಕ್ಕೂ 'ಬೆನ್ನು ತಟ್ಟಬೇಕಾದ' ವಿಚಾರ. ಒಂದೇ ರೀತಿಯ ಬೆಳಕಿನ ಹರಹನ್ನು ಗ್ಯಾಸ್ ದೊಂದಿಯಲ್ಲಿ ಪಡೆಯಲು ಸಾಧ್ಯ. ಎಣ್ಣೆ ಎರೆಯುವ ದೊಂದಿಯಾದರೆ ದೊಂದಿಯಲ್ಲಿದ್ದ ಎಣ್ಣೆಯ ಅಂಶವನ್ನಷ್ಟೇ ಹೊಂದಿಕೊಂಡು ಬೆಳಕು. ಅದರಿಂದ ಹೊರ ಬರುವ ಹೊಗೆ, ಕಿಡಿ.. ಇನ್ನಿಲ್ಲದ ರಾದ್ದಾಂತ!

ನಾನಿಲ್ಲಿ ವಿಮರ್ಶೆಗೆ ತೊಡಗಿಲ್ಲ. ಇಂತಹ ಪ್ರಯೋಗಗಳು ಕಾಲದ ಆವಶ್ಯಕತೆ. ಹದಿನೈದು ವರುಷದ ಹಿಂದೊಮ್ಮೆ ಅಡೂರಿನಲ್ಲಿ ಪ್ರದರ್ಶನವೊಂದರ ಚಿತ್ರೀಕರಣ ನಡೆದಿತ್ತು. ನಾನೂ ಕಲಾವಿದನಾಗಿ ಭಾಗವಹಿಸಿದ್ದೆ. ಆಗ ಆಟದಲ್ಲಿ ವೀಡಿಯೋ ಶೂಟಿಂಗ್ ಅಂದರೆ ಕಲಾವಿದರೂ ಡಿಮ್ಯಾಂಡ್ ಮಾಡುತ್ತಿದ್ದರು. 'ದಾಖಲಾತಿಗಾಗಿ' ಅಂದರೂ 'ನನಗಿಷ್ಟು ಸಿಗಲೇ ಬೇಕು' ಎಂಬ ಹಠ. ಶೂಟಿಂಗ್ ಏನೋ ನಡೆಯಿತು. ಕಲಾವಿದರ ಅಸಹಕಾರ ಪೃವೃತ್ತಿಯನ್ನು ಹತ್ತಿರದಿಂದ ಕಂಡ ಭಾಗ್ಯಶಾಲಿ ನಾನು!
ಆದರೆ ಈಗ ಹಾಗಿಲ್ಲ. ಗೋವಿಂದ ಭಟ್ಟರಂತಹ ಹಿರಿಯ ಕಲಾವಿದರಿಗೆ ಗೊತ್ತು - 'ಇದನ್ನು ಉಳಿಸಬೇಕಾದ - ನಿಜ ಸ್ವರೂಪವನ್ನು ದಾಖಲಿಸಬೇಕಾದ ಅನಿವಾರ್ಯತೆ' ಇದೆ ಅಂತ. ಕೆಲವು ಮಂದಿ (ಎಲ್ಲರೂ ಅಲ್ಲ) ವೃತ್ತಿ ಕಲಾವಿದರೂ ಬದಲಾದ ಕಾಲಘಟ್ಟದಲ್ಲಿ ಯಕ್ಷಗಾನದ ಉಳಿವಿಗೆ ಮನಸ್ಸನ್ನು ಸಜ್ಜುಗೊಳಿಸಿರುವುದು ಸಂತೋಷದ ಸಂಗತಿ.

ಇಂತಹ ದಾಖಲಾತಿಗಳು ಭವಿಷ್ಯದ ಆಕರಗಳು. ರಂಗದ ಮಾಸಿದ ಬೆಳಕನ್ನು ಒರೆಸುವ ಕಾಲವಿದು. ಕೀರ್ತಿಶೇಷ ಶಂಭು ಹೆಗಡೆಯವರು ವೇದಿಕೆಯೊಂದರಲ್ಲಿ ಆಡಿದ ಮಾತು ನೆನಪಾಗುತ್ತದೆ - 'ಯಕ್ಷಗಾನಕ್ಕೆ ಈಗ ಬೇಕಾಗಿರುವುದು ಹಿತೋಪದೇಶವಲ್ಲ, ಗೋಷ್ಠಿ-ಕಾರ್ಯಾಗಾರವಲ್ಲ. ಬೇಕಾಗಿರುವುದು ಸಮಾನ ಮನಸ್ಸುಗಳ ಸಮ್ಮಿಲನ'.

ಅಭಯಾರಣ್ಯದ ದೊಂದಿಯಾಟ ಚಿತ್ರೀಕರಣದ (ನವೆಂಬರ ೨೮, ೨೦೦೯) ಹಿಂದೆ ಇಂತಹ ಸಮಾನಮನಸ್ಸುಗಳು ಒಟ್ಟಾಗಿವೆ. ಅಭಿನಂದನೆಗಳು.

ಮನದ ಮಾತು-ಯಕ್ಷಮಾತು!




ಯಕ್ಷಗಾನದ ಕುರಿತು ಮನಃಪೂರ್ತಿ ಬರೆಯದೆ ಮೂರು ವರುಷವಾಯಿತು. 2006ರ ಮಧ್ಯಭಾಗದಲ್ಲಿ ವೃತ್ತಿ ಸಂಬಂಧಿ ಕಾರಣಗಳಿಗಾಗಿ ಒಂದು ವರುಷ 'ಯಕ್ಷಗಾನದ ಗುಂಗಿನಿಂದ' ಹೊರಗೆ ಬರಬೇಕು ಎಂಬ ನಿರ್ಧಾರ ಮಾಡಿದ್ದೆ.
ಹದಿನೆಂಟು ವರುಷಗಳ ಬಣ್ಣದ ನಂಟು ಬದುಕಿನಲ್ಲಿ ಅಂಟಾಗಿತ್ತು! ಅದರಿಂದ ಕಳಚಿಕೊಳ್ಳುವುದೇ ಕಷ್ಟ. ಹಾಗಾಗಿ ಒಂದು ವರುಷದ 'ಅಜ್ಞಾತ' ಹೇಗೆ ಕಳೆಯಲಿ? ಯಕ್ಷಗಾನವನ್ನು ನೋಡುವ, ಮಾತನಾಡುವ, ಬರೆಯುವ ವಿಚಾರವನ್ನೇ ಬಿಟ್ಟುಬಿಟ್ಟೆ. ಹತ್ತಿರದಲ್ಲಿ ಚೆಂಡೆ ಸದ್ದು ಕೇಳುತ್ತಿದ್ದರೂ ಕೇಳದವನಂತಿದ್ದೆ. ಇದರಿಂದಾಗಿ ನಾನು 'ಸ್ನೇಹಿತರೆಂದು ನಂಬಿದ'ವರು ದೂರವಾದರು! ಒಂದಷ್ಟು ಯಕ್ಷಗಾನೀಯ ಸಂಪರ್ಕ ದೂರವಾಯಿತು.

ಇದರಿಂದಾಗಿ ಯಾವುದೇ ಮರುಕವಾಗಲಿಲ್ಲ. ಸಂಕಟವಾಗಲಿಲ್ಲ. ಸಂತೋಷವೇ ಆಯಿತು. ಹವ್ಯಾಸಿ ಪ್ರದರ್ಶನದಲ್ಲಿ ಗುಣಮಟ್ಟವನ್ನು ಕೊಡಲಾಗದ ಅಸಹಾಯಕತೆ, ವಿಮರ್ಶೆಗೆ ಒಡ್ಡಿಕೊಳ್ಳದ ಪಾತ್ರಧಾರಿಗಳು, ಕೇವಲ ಹೊಗಳಿಕೆಯನ್ನೇ ಬಯಸುವ ಮಂದಿಗಳು, ವಿಮರ್ಶೆ ಬರೆದಾಗ ಕೆಂಗಣ್ಣಿಗೆ ಒಳಗಾದ ಪರಿಸ್ಥಿತಿ, ಹಾಗಲ್ಲ ಹೀಗೆ ಅಂದಾಗ 'ಕರೆದದ್ದೇ ತಪ್ಪು' ಎಂದು ವರ್ತಿಸುವ ಸಂಘಟಕರು.. ಇದನ್ನೆಲ್ಲಾ ನೋಡಿ, ಅನುಭವಿಸಿ ರೋಸಿಹೋಗಿತ್ತು. 'ಹೊರಗೆ ಬರಲು' ಮನಸ್ಸು ಚಡಪಡಿಸುತ್ತಿತ್ತು. ಇದಕ್ಕೆ ಪೂರಕವಾಗಿ ಕಚೇರಿಯ ಹೊಸ ಜವಾಬ್ದಾರಿ ಬಂದಾಗ ಮನಸಾ ಸ್ವೀಕರಿಸಿದೆ. ನನ್ನ ಬದುಕಿಗೆ ಅನಿವಾರ್ಯವೂ ಕೂಡಾ.

ಬರೇ ಟೈಂ ಪಾಸಿಗಾಗಿ ಯಕ್ಷಗಾನ ಬೇಕಾಗಿಲ್ಲ. ಆ ಕ್ಷೇತ್ರದಲ್ಲಿದ್ದು 'ಗುಣಮಟ್ಟ'ವನ್ನಾದರೂ ಕೊಡೋಣ ಎಂದರೆ ಅದಕ್ಕೂ ಬಾಲಗ್ರಹ! ಒಂದಷ್ಟು ಸಮಾನಾಸಕ್ತ 'ಎನ್ನುವ' ಸ್ನೇಹಿತರು ಈ ಬಗ್ಗೆ ಮೊದಲ ಮೆಟ್ಟಿಲು ಏರಿದರೂ, ಅ ಮೆಟ್ಟಲೂ ಜಾರಬೇಕೇ?

ಹವ್ಯಾಸಿಗಿರಬೇಕಾದ ಗುಣಗಳು! 'ಅರ್ಥವಿಲ್ಲದ ಹೊಗಳಿಕೆ'ಯಿಂದ ಸಮಾಧಾನ ಪಡಬೇಕು. ತಪ್ಪನ್ನೂ 'ಸರಿ' ಎಂದು ಒಪ್ಪಿಕೊಳ್ಳಬೇಕು. ರಂಗದಲ್ಲಿ ಹೊಂದಾಣಿಕೆಯಾಗದೆ ಚಡಪಡಿಸುತ್ತಾ ಇದ್ದಾಗ, ಚೌಕಿಗೆ ಬಂದು ಜತೆ ಕಲಾವಿದನ ಬೆನ್ನು ತಟ್ಟಬೇಕು, ಹಲ್ಕಿರಿಯುವ ಸ್ವಭಾವವನ್ನು ರೂಢಿಸಿಕೊಳ್ಳಬೇಕು, 'ನೀವೇ ಇಂದ್ರ, ಚಂದ್ರ' ಎನ್ನುವ ಚಾಳಿಯನ್ನು ಅಂಟಿಸಿಕೊಳ್ಳಬೇಕು. ರಂಗದಲ್ಲಿ ಕೆಲವೊಮ್ಮೆ ವೃತ್ತಿ ಕಲಾವಿದರೂ ಪಾತ್ರಧಾರಿಯಾಗಿ ಸಿಕ್ಕಾಗ ಅವರ ವಿಕಾರವನ್ನು ಸ್ವೀಕಾರ ಮಾಡಬೇಕು. ರಂಗದ ಹೊರಗೆ ಅವರೊಂದಿಗೆ ಚಹಾ ವಿನಿಮಯ ಮಾಡಿಕೊಳ್ಳಬೇಕು - ಪರದೂಷಣೆಯನ್ನು ಅಭ್ಯಾಸ ಮಾಡಬೇಕು. ಇವೆಲ್ಲವನ್ನೂ ಒಂದು ಹಂತದ ತನಕ ಸಹಿಸಿಕೊಳ್ಳಬಹುದು. ಆದರೆ ಬದುಕು ಪೂರ್ತಿ ಸಾಧ್ಯನಾ? ನನ್ನ ಈ ಗೊಂದಲಗಳು ಆಪ್ತ ವಲಯದಲ್ಲಿ 'ಕಿರಿಕಿರಿ'ಯಾಗಿ ಪರಿಣಮಿಸಿದುವು. ದಶಕಕ್ಕೂ ಮಿಕ್ಕಿ 'ದೇಹವೊಂದು-ಜೀವ ಎರಡು' ಎಂತಿದ್ದ, ಸ್ನೇಹಿತರೆಂದು ನಂಬಿದವರು ಕೈಬಿಟ್ಟರೋ ಅಥವಾ ನಾನು ದೂರವುಳಿದೆನೋ!

ಯಾವುದೇ ಕ್ಷೇತ್ರದಲ್ಲಾದರೂ ಅಷ್ಟೇ. ಆಯಾಯ ರಂಗದಲ್ಲಿ ಸಕ್ರಿಯವಾಗಿದ್ದಷ್ಟೂ ಹೊತ್ತು ಸ್ನೇಹಿತರು, ಹೊಗಳುಭಟರು, ಚಹಾವನ್ನು ಅರ್ಧರ್ಧ ಮಾಡಿ ಕುಡಿವ ಪ್ರಾಣ ಪ್ರಿಯರು ಸೃಷ್ಟಿಯಾಗುತ್ತಾರೆ! ನನಗೂ ಇದು ಸ್ವಾನುಭವ.

ಯಕ್ಷಗಾನಕ್ಕೆ ನನ್ನ ಕೊಡುಗೆ ಏನಿಲ್ಲ? ಪೂರ್ತಿ ನಾಟ್ಯ ಕರಗತವೂ ಆತಿಲ್ಲ. ಮಾತೂ ಅಷ್ಟೇ. ಆದರೆ 'ಹಾಗಲ್ಲ-ಹೀಗೆ' ಅನ್ನುವಷ್ಟು ಅನುಭವಿಗಳ ಒಡನಾಟದಿಂದ ಅರ್ಥಮಾಡಿಕೊಂಡಿದ್ದೆ. ಬಣ್ಣದ ಬದುಕಿನಲ್ಲಿ ಇದು ಮಾರಕವೇ ಆಯಿತು!
ಪುಸ್ತಕ ಪ್ರಿಯ ಪ್ರಕಾಶ್ ನನಗೆ ಆಗಾಗ ಹೇಳುವುದಿದೆ - 'ನೀವು ಯಕ್ಷಗಾನದಲ್ಲಿ ಕಳೆದು ಹೋದಿರಲ್ಲಾ'? 'ಆ ಕುರಿತು ನನಗೆ ಪರಿತಾಪವಿಲ್ಲ, ನಿಮಗ್ಯಾಕೆ' ಎಂದು ಅವರಿಗೆ ವಿನೋದದಿಂದ ಹೇಳಿದ್ದಿದೆ.

ಕಲಾವಿದ ಎಸ್ಸಾರ್ ಆಗಾಗ ಹೇಳುತ್ತಾ ಇರುತ್ತಾರೆ 'ಈ ಹಿಂದೆ ಬರೆದ ಬರೆಹಗಳನ್ನು ಯಾಕೆ ಬ್ಲಾಗಿಗೆ ಹಾಕಬಾರದು?. ಪುತ್ತೂರಿನ ಕೆ.ಕೆ.ವೆಂಕಟಕೃಷ್ಣರದೂ ಇದೇ ದನಿ. ಈ ವಿಚಾರ ಮಾತಿನ ಮಧ್ಯೆ ಡಾ.ಪ್ರಭಾಕರ ಜೋಷಿಯವರಲ್ಲಿ ಪ್ರಸ್ತಾಪಿಸಿದಾಗ 'ಶಹಬ್ಬಾಸ್' ಅಂದರು.

- ಹೀಗೆ ರೂಪಿತವಾಗಿದೆ 'ಯಕ್ಷಮಾತು'. ಇದರಿಂದಾಗಿ ಬಣ್ಣದ ನಂಟು ಖಂಡಿತಾ ಅಂಟಾಗದು! ಅಂತರವನ್ನು ಕಾಪಾಡಿಕೊಂಡಿದ್ದೇನೆ.

ಎಷ್ಟೋ ಸಲ ಬರೆಯಬೇಕು ಅಂತ ಅಪರೂಪಕ್ಕೆ ಮೂಡ್ ಬಂದಾಗ ಬರೆದುದಿದೆ. 'ಅದನ್ನು ಎಲ್ಲಿ ಪಬ್ಲಿಷ್' ಮಾಡೋಣ? ಪತ್ರಿಕೆಯೇ ಇಲ್ಲವಲ್ಲಾ! ಇಂತಹ ಸಂದರ್ಭದಲ್ಲಿ ಯಕ್ಷಮಾತಿನ ಬಳಕೆ. ಒದುತ್ತೀರಲ್ಲಾ.