Thursday, April 14, 2011

ಶ್ರೀಧರ ಭಂಡಾರಿಗಳಿಗೆ ಪ್ರಶಸ್ತಿಯ ಬಾಗಿನ

ತೆಂಕುತಿಟ್ಟು ಯಕ್ಷಗಾನದ ಸಿಡಿಲ ಮರಿ ಶ್ರೀ ಪುತ್ತೂರು ಶ್ರೀಧರ ಭಂಡಾರಿಯವರಿಗೆ 2010ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಶಸ್ತಿ ಪ್ರಾಪ್ತವಾಗಿದೆ.

ಹಿರಿಯ ಕಲಾವಿದ ಪುತ್ತೂರು ಶೀನಪ್ಪ ಭಂಡಾರಿ ಮತ್ತು ಸುಂದರಿ ದಂಪತಿಗಳ ಪುತ್ರ. 1945ರಲ್ಲಿ ಜನನ. ಐದನೇ ತರಗತಿಯವರೆಗೆ ಓದು. ತನ್ನ ಒಂಭತ್ತನೇ ವಯಸ್ಸಿನಲ್ಲಿ ರಂಗಪ್ರವೇಶ. ಹೊಸಹಿತ್ಲು ಮಹಾಲಿಂಗ ಭಟ್ ಮತ್ತು ದಿ.ಕುರಿಯ ವಿಠಲ ಶಾಸ್ತ್ರಿ ಅವರಲ್ಲಿ ಯಕ್ಷ ಕಲಿಕೆ. ಕುದ್ಕಾಡಿ ವಿಶ್ವನಾಥ ರೈಯವರಲ್ಲಿ ಭರತನಾಟ್ಯ ಅಭ್ಯಾಸ.

ಶ್ರೀ ಆದಿಸುಬ್ರಹ್ಮಣ್ಯ ಕೃಪಾಪೋಶಿತ ಯಕ್ಷಗಾನ ಮಂಡಳಿ, ಶ್ರೀ ಧರ್ಮಸ್ಥಳ ಮೇಳ, ಪುತ್ತೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಶ್ರೀ ಕಾಂತಾವರ ಮೇಳ.. ಹೀಗೆ ವಿವಿಧ ಮೇಳಗಳಲ್ಲಿ 46 ವರುಷಗಳ ತಿರುಗಾಟ. ಪುತ್ತೂರು ಮತ್ತು ಕಾಂತಾವರ ಮೇಳವನ್ನು ಹನ್ನೊಂದು ವರುಷ 'ಯಜಮಾನ'ನಾಗಿ ನಿರ್ವಹಿಸಿದ್ದರು. ಪ್ರಸ್ತುತ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾವಿದ.

ಅಭಿಮನ್ಯು, ಬಬ್ರುವಾಹನ, ಲಕ್ಷ್ಮಣ, ಪರಶುರಾಮ, ಕೃಷ್ಣ, ಜಯಂತ, ಚಂಡಮುಂಡ, ರಕ್ತಬೀಜ, ಹಿರಣ್ಯಾಕ್ಷ, ಇಂದ್ರಜಿತು.. ಹೀಗೆ ಬೀಸು ಹೆಜ್ಜೆಯ ಪಾತ್ರಗಳಲ್ಲಿ ಅಚ್ಚರಿಯ ಮತ್ತು ಯಾರೂ ಅನುಕರಿಸದ ಅಭಿವ್ಯಕ್ತಿ.

ಎಪ್ರಿಲ್ 9, 2011ರಂದು ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ 'ಯಕ್ಷಭಂಡಾರಿ' ಎಂಬ ಕೃತಿ (ತಂದೆ ಶೀನಪ್ಪ ಭಂಡಾರಿ ಮತ್ತು ಶ್ರೀಧರ ಭಂಡಾರಿ ಇವರ ಜಂಟಿ ಜೀವನ ಗಾಥಾ) ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ಪ್ರಶಸ್ತಿ ಅರಸಿ ಬಂದಿರುವುದು ಶ್ರೀಧರ ಭಂಡಾರಿಯವರ ಮೇರು ಪ್ರತಿಭೆಗೆ ಸಾಕ್ಷಿ.

ಪ್ರಶಸ್ತಿ ಪುರಸ್ಕೃತ ಶ್ರೀಧರಣ್ಣನವರಿಗೆ ಅಭಿವಂದನೆಗಳು.