Tuesday, December 30, 2014

ಬಿ.ಎಸ್.ಓಕುಣ್ಣಾಯ ಸಹಸ್ರಚಂದ್ರ ದರ್ಶನ : 'ಸಾರ್ಥಕ' ಅಭಿನಂದನ ಕೃತಿ ಅನಾವರಣ

               "ಕಳೆದ ಕಾಲದ ಕಥನವನ್ನು ಅಭಿನಂದನ ಕೃತಿಗಳ ಮೂಲಕ ನೆನಪು ಮಾಡಿಕೊಳ್ಳಲು ಸಾಧ್ಯ. ಸಾಗಿ ಬಂದ ಜೀವನವನ್ನು ಮೆಲುಕು ಹಾಕುವುದರಿಂದ ವರ್ತಮಾನ ಮತ್ತು ಭವಿಷ್ಯ ಜೀವನವನ್ನು ರೂಪುಗೊಳಿಸಲು ಸಹಕಾರಿ," ಎಂದು ನಿವೃತ್ತ ಅಧ್ಯಾಪಕ ಸುರತ್ಕಲ್ಲಿನ ಪ. ಶ್ರೀರಾಮ ರಾವ್ ಹೇಳಿದರು.
            ಯಕ್ಷಗಾನ ಅರ್ಥಧಾರಿ, ನಿವೃತ್ತ ಅಧ್ಯಾಪಕ ಪಾಣಾಜೆಯ ಬಿ.ಎಸ್.ಓಕುಣ್ಣಾಯರ ಸಹಸ್ರಚಂದ್ರ ದರ್ಶನ ಸಮಾರಂಭದಲ್ಲಿ ಅಂಕಣಗಾರ ನಾ. ಕಾರಂತ ಪೆರಾಜೆ ಸಂಪಾದಕತ್ವದ 'ಸಾರ್ಥಕ' ಅಭಿನಂದನ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
           ಮಂಗಳೂರಿನ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪುತ್ತೂರಿನ ಖ್ಯಾತ ನ್ಯಾಯವಾದಿ ಸುಬ್ರಹ್ಮಣ್ಯಂ ಕೊಳತ್ತಾಯ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಮರ್ಶಕ, ಅರ್ಥಧಾರಿ ಡಾ.ಪ್ರಭಾಕರ ಜೋಶಿ ಸುಭಾಶಂಸನೆ ಮಾಡಿದರು. ಪುತ್ತೂರು ಶಿವಳ್ಳಿ ಸಂಪದದ ಅಧ್ಯಕ್ಷ ಭಾಸ್ಕರ ಬಾರ್ಯ ಅಭಿನಂದನಾ ನುಡಿಗಳನ್ನಾಡಿದರು.
             ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಗಾದಿಯನ್ನೇರಿದ್ದ ಅನುಜ್ಞಾ, ಸಿ.ಎ.ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿದ ಸ್ವಪ್ನಾ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಮುರಳೀ ಕಲ್ಲೂರಾಯ, ಸಾರ್ಥಕದ ಸಂಪಾದಕ ನಾ. ಕಾರಂತ ಪೆರಾಜೆ ಮತ್ತು ಅಭಿನಂದನ ಕೃತಿಯ ಲೇಖಕರನ್ನು ಬಿ.ಎಸ್.ಓಕುಣ್ಣಾಯ-ಸರೋಜ ದಂಪತಿಗಳು ಗೌರವಿಸಿದರು. ಪಾಣಾಜೆಯ ಬೊಳ್ಳಿಂಬಳ ಓಕುಣ್ಣಾಯ ಪ್ರತಿಷ್ಠಾನವು ಪುಸ್ತಕವನ್ನು ಪ್ರಕಾಶಿಸಿದೆ.
             ಈ ಸಂದರ್ಭದಲ್ಲಿ ಪುಂಡೂರು ದಿ.ದಾಮೋದರ ಪುಣಿಂಚಿತ್ತಾಯ ನೆನಪಿನ ಸಂಮಾನವನ್ನು ಬಿ.ಎಸ್.ಓಕುಣ್ಣಾಯ ದಂಪತಿಗಳಿಗೆ ಪ್ರದಾನಿಸಲಾಯಿತು. ರಾಜಗೋಪಾಲ ಪುಣಿಂಚಿತ್ತಾಯರು ಪ್ರಾರ್ಥನೆ ಮಾಡಿದರು. ಚಂದ್ರಶೇಖರ ಓಕುಣ್ಣಾಯ ಸ್ವಾಗತಿಸಿದರು. ಎಂ.ಶರತ್ ಕುಮಾರ್ ಶಿಬರೂರಾಯ ನಿರ್ವಹಿಸಿದರು. ನಾರಾಯಣ ಕಾರಂತ ವಂದಿಸಿದರು.  

Monday, December 29, 2014

ಪಾತಾಳರಿಗೆ 'ವಿದ್ಯಾಮಾನ್ಯ ಪ್ರಶಸ್ತಿ'

             ತೆಂಕುತಿಟ್ಟಿನ ಮೇರು ಕಲಾವಿದ ಶ್ರೀ ಪಾತಾಳ ವೆಂಕಟರಮಣ ಭಟ್ಟ್ ಇವರಿಗೆ ತ್ರತೀಯ ವರ್ಷದ ಶ್ರೀ ವಿದ್ಯಾಮಾನ್ಯ ಪ್ರಶಸ್ತಿಯನ್ನು ಪರ್ಯಾಯ ಶ್ರೀ ಕಾಣಿಯೂರು ಮಠಾಧೀಶ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಶ್ರೀ ಪಲಿಮಾರು ಮಠಾಧೀಶ ಶ್ರೀ ಶ್ರೀ ವಿದ್ಯಾಧೀಶ ಶ್ರೀಪಾದರು ಪ್ರದಾನ ಮಾಡಿದರು.
            
ಉಡುಪಿ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ| ಕೃಷ್ಣಪ್ರಸಾದ್ , ಶ್ರೀ ರಾಮದಾಸ್ ಭಟ್ಟ್, ಶ್ರೀ ಹರಿ ಅಸ್ರಣ್ಣ , ಶ್ರೀ ಉಮೇಶ್ ಶೆಟ್ಟಿ ಉಬ್ಬರಡ್ಕ, ಯಕ್ಷರಂಗಸ್ಥಳ ಸಂಸ್ಥೆಯ ಗೌರವ ಉಪಾಧ್ಯಕ್ಷ ಶ್ರೀ ಸತೀಶ್ ರಾವ್, ಅಧ್ಯಕ್ಷ ಶ್ರೀ ಪಟ್ಟಾಭಿರಾಮ ಆಚಾರ್ಯ ಉಪಸ್ಥಿತರಿದ್ದರು.

ಬಿ.ಎಸ್.ಓಕುಣ್ಣಾಯರ ಸಹಸ್ರಚಂದ್ರ ದರ್ಶನ ನೆನಪಿನ ಅಭಿನಂದನ ಕೃತಿ 'ಸಾರ್ಥಕ'

ನಿವೃತ್ತ ಅಧ್ಯಾಪಕ, ಯಕ್ಷಗಾನ ಅರ್ಥಧಾರಿ ಬೊಳ್ಳಿಂಬಳ ಸುಬ್ರಾಯ ಓಕುಣ್ಣಾಯ ಇವರ ಸಹಸ್ರಚಂದ್ರ ದರ್ಶನ ಸಮಾರಂಭ ನಿನ್ನೆ - 28-12-2014 - ಮಂಗಳೂರಿನ ಕಾವೂರು ಶ್ರೀ ಮಹಾಲಿಂಗೇಶ‍್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಓಕುಣ್ಣಾಯರ ಜೀವನ ಗಾಥಾ 'ಸಾರ್ಥಕ' ಅಭಿನಂದನ ಕೃತಿ ಅನಾವರಣಗೊಂಡಿತು. ಪುಸ್ತಕದ ಮುಖಪುಟವನ್ನು ವಿನ್ಯಾಸಿಸಿದ್ದಾರೆ - ಆರ್ವಿ ಇಂಟರ್ ಗ್ರಾಫಿಕ್ಸ್ ಇದರ ಜ್ಞಾನೇಶ್. ಚಿತ್ರವನ್ನು ಕ್ಲಿಕ್ಕಿಸಿದವರು - ಮುರಳೀ ಕಲ್ಲೂರಾಯ, ಬೆಟ್ಟಂಪಾಡಿ. ಒಟ್ಟು ನೂರು ಪುಟಗಳು. ಸಂಪಾದಕ : ನಾ. ಕಾ. ಪೆ.

Saturday, December 27, 2014

ಬಿ.ಎಸ್.ಓಕುಣ್ಣಾಯರಿಗೆ ಸಹಸ್ರಚಂದ್ರ ದರ್ಶನ

ವಿಶ್ರಾಂತ ಮುಖ್ಯೋಪಾಧ್ಯಾಯ, ಯಕ್ಷಗಾನ ಅರ್ಥಧಾರಿ, ಸಂಘಟಕ, ವಿಮರ್ಶಕ ಬೊಳ್ಳಿಂಬಳ ಸುಬ್ರಾಯ ಓಕುಣ್ಣಾಯ (ಬಿ.ಎಸ್.ಓಕುಣ್ಣಾಯ ಪಾಣಾಜೆ) ಇವರು ದಶಂಬರ 28ರಂದು ಮಂಗಳೂರಿನಲ್ಲಿ ಸಹಸ್ರಚಂದ್ರ ದರ್ಶನದ ಹರುಷವನ್ನು ಬಂಧುಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ 'ಸಾರ್ಥಕ' ಎನ್ನುವ ಅಭಿನಂದನಾ ಕೃತಿಯು ಬಿಡುಗಡೆಗೊಳ್ಳಲಿರುವುದು.

bollimbala prashasthi - ಕುಬಣೂರು ಶ‍್ರೀಧರ್ ರಾವ್ ಅವರಿಗೆ ಬೊಳ್ಳಿಂಬಳ ಪ್ರಶಸ್ತಿ ಪ್ರದಾನ

- ಪಾಣಾಜೆ (ದ.ಕ.) ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನವು ಕೊಡಮಾಡುವ ಏಳನೇ ವರುಷದ 'ಬೊಳ್ಳಿಂಬಳ ಪ್ರಶಸ್ತಿ'ಯನ್ನು (Bollimbala Award) ಖ್ಯಾತ ಯಕ್ಷಗಾನದ ಭಾಗವತ ಕುಬಣೂರು ಶ್ರೀಧರ ರಾವ್ (Kubanoor Shridhara Rao) ಅವರಿಗೆ ಪ್ರದಾನಿಸಲಾಯಿತು.
- ದಶಂಬರ 25ರಂದು ಪುತ್ತೂರಿನಲ್ಲಿ ಜರುಗಿದ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ (Sri Anjaneya Yakshagana Kala Sangha, Puttur) 46ನೇ ಸಂಭ್ರಮ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು.
- ವಿಮರ್ಶಕ ಡಾ. ಪ್ರಭಾಕರ ಜೋಶಿ ನುಡಿ ಗೌರವ ಸಮರ್ಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್.ಓಕುಣ್ಣಾಯ ಪ್ರತಿಷ್ಠಾನದ ವಿವರ ನೀಡಿದರು.
- ವೇದಿಕೆಯಲ್ಲಿದ್ದಾರೆ - ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಭಾಸ್ಕರ ಬಾರ್ಯ, ಶ್ರೀಪತಿ ಭಟ್, ಪ್ರದೀಪ್ ಕುಮಾರ್ ಕಲ್ಕೂರ್, ಎಸ್.ಎನ್.ಪಂಜಾಜೆ....

'ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನ'ದ ಆಮಂತ್ರಣ (Invitation - All India yakshagana bayalata sahithya sammelana)





yaksha chinthane - ಯಕ್ಷ ಚಿಂತನೆ

ಪುತ್ತೂರು (ದ.ಕ.ಜಿಲ್ಲೆ) ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 46ನೇ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ದಶಮಾನೋತ್ಸವ ಸಮಾರಂಭ ದಶಂಬರ 25ರಂದು ಶ್ರೀ ನಟರಾಜ ವೇದಿಕೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಜರುಗಿದ 'ಯಕ್ಷ ಚಿಂತನೆ' ಮೆದುಳಿಗೆ ಮೇವನ್ನು ನೀಡಿತು. 'ರಸ ಮತ್ತು ನವರಸ ಪ್ರತಿಪಾದನೆ' ಕುರಿತು ವಿದುಷಿ ಮನೋರಮಾ ಬಿ.ಎನ್. ಪುತ್ತೂರು ಮತ್ತು 'ತೆಂಕುತಿಟ್ಟಿನಲ್ಲಿ ಆಂಗಿಕ-ಸಾತ್ವಿಕ ಅಭಿನಯ' ಕುರಿತು ವಿದುಷಿ ಸುಮಂಗಲಾ ರತ್ನಾಕರ್, ಮಂಗಳೂರು ಇವರು ವಿಚಾರ ಪ್ರಸ್ತುತಿ ಪಡಿಸಿದರು. ಸುಮಂಗಲ ಅವರು ಯಕ್ಷಗಾನದ ಕೆಲವು ನಡೆಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ಮಿತ್ರ ಕೃಷ್ಣಪ್ರಕಾಶ್ ಉಳಿತ್ತಾಯರು ಹಿಮ್ಮೆಳ ಸಾಥ್ ನೀಡಿದರು.
- ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸ್ತ್ರೀಪಾತ್ರಧಾರಿ ಪಾತಾಳ ವೆಂಕಟ್ರಮಣ ಭಟ್ ವಹಿಸಿ, ಸಮಕಾಲೀನ ಯಕ್ಷಗಾನದ ನೃತ್ಯಗಾರಿಕೆಯತ್ತ ನೋಡ ಹರಿಸಿದರು. ತನಗೆ ಎಂಭತ್ತೆರಡು ವರುಷ ಎನ್ನುವುದನ್ನು ಮರೆತು ಬಬ್ರುವಾಹನ ಕಾಳಗ ಪ್ರಸಂಗದ 'ಅಹುದೇ ಎನ್ನಯ ರಮಣ' ಎನ್ನುವ ಪದ್ಯಕ್ಕೆ ಕುಣಿದುಬಿಟ್ಟರು

All India yakshagana-bayalata sahithya sammela_2015

ಹಿರಿಯ ಅರ್ಥಧಾರಿ, ನಿವೃತ್ತ ಅಧ್ಯಾಪಕ ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನ-2015 ಇದರ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಸಮ್ಮೇಳನವರು ಪುತ್ತೂರಿನ - ದ.ಕ. ಜಿಲ್ಲೆ - ಶ್ರೀ ನಟರಾಜ ವೇದಿಕೆಯಲ್ಲಿ ಜನವರಿ 2-4, 2015ರಂದು ಜರುಗಲಿದೆ. ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ (ರಿ) ಇವರು ಸಮ್ಮೇಳನವನ್ನು ಸಂಘಟಿಸಿದ್ದಾರೆ. ಸಂಪರ್ಕ ಸಂಖ್ಯೆ : 9448447512, Email : kskp2010@yahoo.com

Tuesday, December 23, 2014

ಕುಬಣೂರು ಭಾಗವತರಿಗೆ 'ಬೊಳ್ಳಿಂಬಳ ಪ್ರಶಸ್ತಿ'

           ಓರ್ವ ಯಕ್ಷಗಾನ ಭಾಗವತ ಪತ್ರಿಕೆಯ ಸಂಪಾದಕನಾಗುವುದು ಸಾಧ್ಯವೇ? ಕೀರ್ತಿಶೇಷ ಕಡತೋಕ ಮಂಜುನಾಥ ಭಾಗವತರು ಪತ್ರಿಕೆಯೊಂದನ್ನು ನಡೆಸಿದ್ದರು. ಕಟೀಲು ಮೇಳದ ಭಾಗವತ ಕುಬಣೂರು ಶ್ರೀಧರ ರಾವ್ (63) 'ಯಕ್ಷಪ್ರಭಾ' ಪತ್ರಿಕೆಯೊಂದನ್ನು ಪ್ರಕಾಶಿಸುತ್ತಿದ್ದಾರೆ. ಅದಕ್ಕೀಗ ವಿಂಶತಿಯ ಸಡಗರ. ಮೇಳದ ವೃತ್ತಿಯಲ್ಲಿದ್ದುಕೊಂಡೇ ಪತ್ರಿಕೆಯನ್ನೂ ನಡೆಸುತ್ತಿದ್ದಾರೆ.
           ಕುಬಣೂರು ಓದಿದ್ದು, ಮೆಕಾನಿಕಲ್ ಇಂಜಿನಿಯರಿಂಗಿನಲ್ಲಿ ಡಿಪ್ಲೋಮ. ಯಕ್ಷಗಾನದಲ್ಲಿ ವೃತ್ತಿ ಬದುಕನ್ನು ರೂಪಿಸಿಕೊಂಡರು. ಬದುಕಿಗೆ ಇಂಜಿನಿಯರಿಂಗ್ ಕಲಿಕೆ ಉಪಯೋಗಕ್ಕೆ ಬಾರದಿದ್ದರೂ, ಇಂಜಿನಿಯರಿಂಗ್ ಜಾಣ್ಮೆಯಿದೆಯಲ್ಲಾ, ಅದು ಯಕ್ಷಗಾನ ರಂಗದಲ್ಲಿ ಬಳಕೆಗೆ ಬಂತು. ಹಾಗಾಗಿಯೇ ನೋಡಿ, ಕುಬಣೂರು ಆಡಿಸುವ ಆಟಗಳಲ್ಲೆಲ್ಲಾ ಚೌಕಟ್ಟಿನೊಳಗೆ ತುಸು ವಿಭಿನ್ನತೆ. ಪ್ರತ್ಯೇಕತೆ.
          ದಕ್ಷಾಧ್ವರ, ಹಿರಣ್ಯಕಶ್ಯಪು... ಮೊದಲಾದ ಸಂವಾದ ಪ್ರಧಾನ ಪ್ರಸಂಗಗಳ ಪದ್ಯಗಳು ಅರ್ಥಧಾರಿ, ವೇಷಧಾರಿಗೆ ಸ್ಫೂರ್ತಿ ನೀಡುವಂತಾದ್ದು. ಪದ್ಯಗಳಿಗೆ ಬಳಸುವ ಸಂಗೀತಾದಿ ರಾಗಗಳ ಮಿಳಿತದ ಸೊಗಸು ಅನುಭವಿಸಲು ಗೊತ್ತಿರಬೇಕಷ್ಟೇ.
            ಶ್ರೀಧರ ರಾಯರು ಐ.ರಘುಮಾಸ್ತರರಿಂದ ಕರ್ನಾಾಟಕ ಸಂಗೀತ ಅಭ್ಯಾಸ ಮಾಡಿದ್ದರು. ಅಡ್ಕಸ್ಥಳ ರಾಮಚಂದ್ರ ಭಟ್ಟರಿಂದ ಮದ್ದಳೆವಾದನ, ಉಪ್ಪಳ ಕೃಷ್ಣ ಮಾಸ್ತರ್ ಹಾಗೂ ಬೇಕೂರು ಕೇಶವರಿಂದ ನಾಟ್ಯಾಭ್ಯಾಸ, ಟಿ.ಗೋಪಾಲಕೃಷ್ಣ ಮಯ್ಯ ಹಾಗೂ ಮಾಂಬಾಡಿ ನಾರಾಯಣ ಭಟ್ಟರಿಂದ ಯಕ್ಷಗಾನ ಭಾಗವತಿಕೆ ಕಲಿಕೆ. ಭಾಗವತನಾದವನಿಗೆ ಯಕ್ಷಗಾನದ ಸರ್ವಾಾಂಗದ ಪರಿಚಯವಿದ್ದು ಬಿಟ್ಟರೆ ಈಜಲು ಅಂಜಬೇಕಾಗಿಲ್ಲ. ಯಾರದ್ದೇ ಹಂಗಿಗೆ ಒಳಗಾಗಬೇಕಾದ್ದಿಲ್ಲ.
ಕದ್ರಿಮೇಳ, ನಂದಾವರ, ಅರುವ, ಬಪ್ಪನಾಡು, ಕದ್ರಿ, ಕಾಂತಾವರ ಹೀಗೆ ವಿವಿಧ ಮೇಳಗಳಲ್ಲಿ ವ್ಯವಸಾಯ. ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಶ್ರೀ ಕಟೀಲು ಮೇಳವೊಂದರಲ್ಲೇ ವೃತ್ತಿ. ಬದುಕಿನ ಏಳುಬೀಳುಗಳನ್ನು ಎದುರಿಸುತ್ತಾ ಒಟ್ಟು ಮೂವತ್ತಮೂರು ವರುಷಗಳ ಅನುಭವ.
              ದಾಶರಥಿ ದರ್ಶನ, ಸಾರ್ವಭೌಮ ಸಂಕರ್ಷಣ, ಮನುವಂಶವಾಹಿನಿ, ಮಹಾಸತಿ ಮಂದಾಕಿನಿ, ಕಾಂತಾವರ ಕ್ಷೇತ್ರ ಮಹಾತ್ಮೆ, ಪಟ್ಟಣ ಮಣೆ.. ಪ್ರಸಂಗಗಳ ರಚಯಿತರು. ಕೀರ್ತಿಶೇಷ ಕಲ್ಲಾಡಿ ವಿಠಲ ಶೆಟ್ಟರ ಜೀವನ ಗಾಥಾ 'ಯಕ್ಷವಿಜಯ ವಿಠಲ' ಕೃತಿಯ ಸಂಪಾದಕರು. ಯಕ್ಷಗಾನವನ್ನು ಅಕಾಡೆಮಿಕ್ ಮಟ್ಟದಲ್ಲಿ ವಿಚಾರ ಮಾಡುವ ಬೆರಳೆಣಿಕೆಯ ಕಲಾವಿದರಲ್ಲಿ ಕುಬಣೂರು ಮುಖ್ಯರಾಗುತ್ತಾರೆ.
               ಚೆಂಡೆವಾನದಲ್ಲಿ ಜುಗಲ್ಬಂದಿ, ದೇವೇಂದ್ರನ ಒಡ್ಡೋಲಗದಲ್ಲಿ ನೃತ್ಯರೂಪಕ.. ಮೊದಲಾದ ಪರಿಷ್ಕಾರಗಳು ಒಂದು ಕಾಲಘಟ್ಟದಲ್ಲಿ ಜನಸ್ವೀಕೃತಿ ಪಡೆದುದನ್ನು ಜ್ಞಾಪಿಸಿಕೊಳ್ಳುತ್ತಾರೆ. ಬಯಲಾಟ, ತಾಳಮದ್ದಳೆ ಸ್ಪರ್ಧೆಗಳಲ್ಲಿ ತೀರ್ಪುುಗಾರರಾಗಿ, ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ.
                ಹಲವಾರು ಸಂಮಾನ, ಪ್ರಶಸ್ತಿಯಿಂದ ಪುರಸ್ಕೃತರು. ಈಗ ಪಾಣಾಜೆ ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ ನೀಡುವ 'ಬೊಳ್ಳಿಂಬಳ ಪ್ರಶಸ್ತಿ'ಯು ಕುಬಣೂರು ಶ್ರೀಧರ ರಾಯರನ್ನು ಅರಸಿ ಬಂದಿದೆ. 2014 ದಶಂಬರ 25ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ ಜರಗುವ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 'ಆಂಜನೇಯ 46' ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
               ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವಾರ್ಶಿಕ 'ಯಕ್ಷಾಂಜನೇಯ ಪ್ರಶಸ್ತಿ'ಯು ಹಿರಿಯ ಅರ್ಥಧಾರಿ, ನಿವೃತ್ತ ಅಧ್ಯಾಪಕ, ವಿದ್ವಾಂಸ ಬರೆ ಕೇಶವ ಭಟ್ಟರಿಗೆ ಪ್ರಾಪ್ತವಾಗಿದೆ. ಈ ಸಂದರ್ಭದಲ್ಲಿ ಶ್ರೀ ಆಂಜನೇಯ ಯಕ್ಷಗಾನ ಮಹಿಳಾ ಸಂಘದ ದಶಮಾನವೂ ಸಂಪನ್ನವಾಗಲಿದೆ.
(ಚಿತ್ರ : ಡಾ.ಮನೋಹರ ಉಪಾಧ್ಯ)

Tuesday, December 9, 2014

ಭಾಸ್ಕರ ಜೋಶಿ ಶಿರಳಗಿಯವರಿಗೆ 'ಪಾತಾಳ ಪ್ರಶಸ್ತಿ' ಪ್ರದಾನ


                  "ಕಲಾವಿದ ಮತ್ತು ಯಜಮಾನ ಇವರೊಳಗೆ ಬಹುತೇಕ ಮೇಳಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹೊಂದಾಣಿಕೆಯ ಕೊರತೆ ಕಂಡು ಬರುತ್ತದೆ. ಇದು ಪ್ರದರ್ಶನದ ಒಟ್ಟಂದಕ್ಕೆ ತೊಂದರೆಯಾಗುತ್ತದೆ.  ಕಲಾವಿದರಲ್ಲಿ ಮೇಳದ ಯಜಮಾನನಾಗಿ ಕಷ್ಟ ಸುಖವನ್ನು ಅನುಭವಿಸಿದವರು ಕಡಿಮೆ. ಯಕ್ಷಗಾನದ ನಿಜವಾದ ಸಮಸ್ಯೆ, ಕಷ್ಟ ಅರಿವಾಗಲು ಕಲಾವಿದ ಒಮ್ಮೆಯಾದರೂ ಯಜಮಾನನಾಗಬೇಕು," ಎಂದು ಎಡನೀರು ಮಠದ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
             ಅವರು ಎಡನೀರು ಶ್ರೀಮಠದಲ್ಲಿ ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನವು ಆಯೋಜಿಸಿದ ಈ ಸಾಲಿನ 'ಪಾತಾಳ ಪ್ರಶಸ್ತಿ'ಯನ್ನು ಹಿರಿಯ ಸ್ತ್ರೀ ಪಾತ್ರಧಾರಿ ಭಾಸ್ಕರ ಜೋಶಿ ಶಿರಳಗಿಯವರಿಗೆ ಪ್ರದಾನ ಮಾಡಿ ಆಶೀರ್ವಚನ ನೀಡುತ್ತಾ, "ಶಿರಳಗಿಯವರು ಕಲಾವಿದನಾಗಿ, ಮೇಳದ ಯಜಮಾನನಾಗಿ ಸುಖ-ಕಷ್ಟಗಳನ್ನು ಸ್ವೀಕರಿಸಿದ ಕಲಾವಿದ. ಹಾಗಾಗಿ ಅವರಲ್ಲಿ ಸೌಜನ್ಯ, ಪ್ರಾಮಾಣಿಕತೆ ಮೇಳೈಸಿದೆ" ಎಂದರು.
             ಮಂಜೇಶ್ವರದ ಹಿರಿಯ ವೈದ್ಯ, ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿ, "ಕಳಪೆ ಪಾತ್ರವೊಂದನ್ನು ನೋಡಿ ಆ ಪ್ರಸಂಗವೇ ಪ್ರಯೋಜನವಿಲ್ಲ, ಆ ದೃಶ್ಯವೇ ಪ್ರಸಂಗದಲ್ಲಿ ಬೇಡ ಎನ್ನುವ ನಿರ್ಧಾರವನ್ನು ಕಲಾವಿದರು, ಸಂಘಟಕರು ಆತುರವಾಗಿ ತೆಗೆದುಕೊಳ್ಳುವುದುಂಟು. ಇದು ಪ್ರಸಂಗ, ಕವಿಗೆ ಅವಮಾನ ಮಾಡಿದಂತೆ. ಅದರ ಬದಲು ಯಾರು ಕಳಪೆ ಪಾತ್ರ ಮಾಡಿದ್ದಾನೋ, ಅವನ ಬದಲಿಗೆ ಅನುಭವಿ ಕಲಾವಿದರಿಂದ ಪಾತ್ರ ಮಾಡಿಸಿದರೆ ಪಾತ್ರದ ಘನತೆ ಉಳಿಯುತ್ತದೆ," ಎಂದರು.
            ಪೂಜ್ಯ ಶ್ರೀಗಳು ಶಿರಳಗಿ ಭಾಸ್ಕರ ಜೋಶಿಯವರಿಗೆ ಹಾರ, ಶಾಲು, ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ನಿಧಿಯೊಂದಿಗೆ 'ಪಾತಾಳ ಪ್ರಶಸ್ತಿ'ಯನ್ನು ಪ್ರದಾನಿಸಿದರು. ಕರ್ನಾಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಪ್ರೊ: ಎಂ.ಎಲ್.ಸಾಮಗರು ಶಿರಳಗಿಯವರ ಒಡನಾಟವನ್ನು ಜ್ಞಾಪಿಸಿಕೊಳ್ಳುತ್ತಾ ಅಭಿನಂದಿಸಿದರು. ಪ್ರತಿಷ್ಠಾನದ ಜತೆ ಕಾರ್ಯದರ್ಶಿ ನಾ. ಕಾರಂತ ಪೆರಾಜೆ ಪ್ರಶಸ್ತಿ ಪತ್ರವನ್ನು ವಾಚಿಸಿದರು.
              ಈ ಸಂದರ್ಭದಲ್ಲಿ ನಾ. ಕಾರಂತ ಪೆರಾಜೆಯವರು ಸಂಪಾದಿಸಿದ ಪಾತಾಳ ಪ್ರಶಸ್ತಿಯ ದಶಮಾನದ ನೆನಪು ಪುಸ್ತಿಕೆ 'ಉಪಾಯನ'ವನ್ನು ಪೂಜ್ಯ ಶ್ರೀಗಳು ಅನಾವರಣಗೊಳಿಸಿದರು.  ಹಿರಿಯ ಸ್ತ್ರೀವೇಷಧಾರಿ ಪಾತಾಳ ವೆಂಕಟ್ರಮಣ ಭಟ್, ಶ್ರೀರಾಮ ಪಾತಾಳ ಪೂಜ್ಯ ಶ್ರೀಗಳಿಗೆ ಫಲತಾಂಬೂಲ ನೀಡಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ಪ್ರತಿಷ್ಠಾನದ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಳಿಯ ಶಂಕರ ಭಟ್ ಪ್ರಸ್ತಾವನೆ ಗೈದರು. ಭಾಗವತ ರಮೇಶ ಭಟ್ ಪುತ್ತೂರು ಪ್ರಾರ್ಥನೆಗೈದರು. ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಬಿ.ಎನ್.ಮಹಾಲಿಂಗ ಭಟ್ ಬಿಲ್ಲಂಪದವು ನಿರ್ವಹಿಸಿ, ವಂದಿಸಿದರು.
                ಬಳಿಕ ಎಡನೀರು ಮೇಳದವರಿಂದ 'ಭೀಷ್ಮಾಭಿದಾನ ಮತ್ತು ಮೈಂದ-ದ್ವಿವಿದ' ಪ್ರಸಂಗಗಳ ಬಯಲಾಟ ಜರುಗಿತು.


Saturday, December 6, 2014

'ಪಾತಾಳ ಪ್ರಶಸ್ತಿ' ಪುರಸ್ಕೃತ - ಭಾಸ್ಕರ ಜೋಶಿ ಶಿರಳಗಿ


           ಅಕ್ಟೋಬರಿನಲ್ಲಿ ಉಡುಪಿ ರಾಜಾಂಗಣದಲ್ಲಿ ಚಿಟ್ಟಾಣಿ ಪಾತ್ರ ವೈಭವದ ಕ್ಷಣ. ಅಂದು 'ಚಕ್ರಚಂಡಿಕೆ' ಪ್ರಸಂಗ. ಐವತ್ತೆಂಟರ ಶಿರಳಗಿ ಭಾಸ್ಕರ ಜೋಶಿ (Bhaskara Joshi Shiralagi) ಅಕ್ಟೋಬರಿನಲ್ಲಿ ಉಡುಪಿ ರಾಜಾಂಗಣದಲ್ಲಿ ಚಿಟ್ಟಾಣಿ ಪಾತ್ರ ವೈಭವದ ಕ್ಷಣ. ಅಂದು 'ಚಕ್ರಚಂಡಿಕೆ' ಪ್ರಸಂಗ. ಐವತ್ತೆಂಟರ ಶಿರಳಗಿ ಭಾಸ್ಕರ ಜೋಶಿ ಹದಿನೆಂಟರ ಹೆಣ್ಣಾಗಿ ಕುಣಿದರು. ಚಿಟ್ಟಾಣಿಯವರೊಂದಿಗೆ ಸರಸವಾಡಿದರು. ಪ್ರಸಂಗದ ಒಂದು ಸನ್ನಿವೇಶದ ವಿನ್ಯಾಸದ ಗಟ್ಟಿತನಕ್ಕೆ ಬೆರಗಾದೆ. ಬಣ್ಣದ ಮನೆಯಲ್ಲಿ ವೇಷ ಕಳಚಿದ ಜೋಶಿ, 'ನಾಳೆ ಬೇಗ ಮನೆ ಸೇರಬೇಕ್ರಿ, ಅಡಿಕೆ ಕೊಯ್ಲು ಆಗ್ತಿದೆ. ಜನ ಸಿಕ್ತಿಲ್ಲ. ಒಟ್ಟಾರೆ ತಲೆಬಿಸಿ,' ಎಂದರು. ಆಗಷ್ಟೇ ರಂಗದಲ್ಲಿ ಅಪ್ಪಟ ಕಲಾವಿದರಾಗಿ ಕುಣಿದ ಜೋಶಿ, ಅಷ್ಟೇ ಕ್ಷಿಪ್ರವಾಗಿ 'ಕೃಷಿಕ'ರಾಗಿ ಬದಲಾಗಿದ್ದರು.
              ಜೋಶಿ ಒಂದು ಕಾಲಘಟ್ಟದಲ್ಲಿ ರಂಗದಲ್ಲಿ ಮೆರೆದ ಯಶಸ್ವಿ ನಾರಿ. ಆಕರ್ಷಕ ಸ್ವರ, ಹೆಣ್ಣಿಗೊಪ್ಪುವ ಮೈಕಟ್ಟು, ಉತ್ತಮ ಭಾಷೆ. ಚೆಲ್ಲುಚೆಲ್ಲು ಪಾತ್ರಗಳಿಂದ ಗರತಿಯ ತನಕ ಮಿತಿಮೀರದ ಅಭಿವ್ಯಕ್ತಿ. ಹಳೆ ಪ್ರಸಂಗಗಳಲ್ಲಿ ಮಿಂಚಿದಂತೆ ಹೊಸ ಪ್ರಸಂಗಗಳೂ ಹೊಸ ಪಂಚ್. ಬಡಗಿನ ಬಹುತೇಕ ಕಲಾವಿದರೊಂದಿಗೆ ರಂಗದಲ್ಲೂ, ಹೊರಗೂ ಒಡನಾಟ.
                  ಇವರದು ಕನಸು ಕಾಣುವ ಬದುಕಲ್ಲ. ವರ್ತಮಾನ ಹೇಗುಂಟೋ ಹಾಗೆ ಬದುಕನ್ನು ಕಟ್ಟಿಕೊಳ್ಳುತ್ತಾ ಬಂದವರು. ತಂದೆ ನಾರಾಯಣ ಸುಬ್ರಾಯ ಜೋಶಿಯವರ ಪೌರೋಹಿತ್ಯ ವೃತ್ತಿ ಬದುಕಿಗಾಧಾರ. ಎಸ್.ಎಸ್.ಎಲ್.ಸಿ.ತನಕ ಓದು. ಯಕ್ಷಗಾನ ನಾಟಕದ ಮೂಲಕ ರಂಗಪ್ರವೇಶ. 'ಪನ್ನದಾಸಿ' - ಪ್ರಥಮ ನಾಟಕ. ಇವರ ಸ್ತ್ರೀಪಾತ್ರಗಳ ಮೋಡಿಯು 'ಕೊಳಗಿ ಮೇಳ'ಕ್ಕೆ ಕಲಾವಿದನನ್ನಾಗಿ ರೂಪಿಸಿತು. ಹೊಸ್ತೋಟ ಮಂಜುನಾಥ ಭಾಗವತರು, ಹೆರಂಜಾಲು ವೆಂಕಟ್ರಮಣ ಇವರಿಂದ ನಾಟ್ಯಾಭ್ಯಾಸ.
                   ಮುಂದೆ ಇಡಗುಂಜಿ ಮೇಳದ ತಿರುಗಾಟವು ಹೊಸ ರಂಗ ತಂತ್ರಗಳ ಕಲಿಕೆಗೆ ತಾಣವಾಯಿತು. ಮುಂದೆ ಡಾ.ಶಿವರಾಮ ಕಾರಂತರ 'ಯಕ್ಷರಂಗ'ದ ಗರಡಿಯಲ್ಲಿ ವ್ಯವಸಾಯ. ಅವರ ಯಕ್ಷಗಾನ ಬ್ಯಾಲೆಯು ನೃತ್ಯ, ಸಂಗೀತ ಪ್ರಧಾನ. ಭಾವಾಭಿವ್ಯಕ್ತಿಗೆ ಪ್ರಾಶಸ್ತ್ಯ.  ತಂಡದಲ್ಲಿ ಸ್ತ್ರೀಪಾತ್ರವನ್ನು ಮಾಡುವ ಸ್ತ್ರೀಯರಿದ್ದರೂ ಭಾಸ್ಕರ ಜೋಶಿಯವರ ಪಾತ್ರಗಳ ಲಾಲಿತ್ಯಗಳಿಂದಾಗಿ ಸ್ತ್ರೀಪಾತ್ರಗಳ ಪಟ್ಟ ಖಾಯಂ. ದೇಶ, ವಿದೇಶಗಳಿಗೆ ಯಕ್ಷಯಾತ್ರೆ.
                  ಕಾರಂತರೊಂದಿಗಿನ ಆರು ವರುಷದ ತಿರುಗಾಟದ ಒಂದೊಂದು ಕ್ಷಣವೂ ಕಾಡುವ ನೆನಪು. ಚಿಕ್ಕ ಚಿಕ್ಕ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ. ಬಹುಶಃ ರಂಗದಲ್ಲಿ ನನಗೇನಾದರೂ ಹೆಸರು ಬಂದಿದ್ದರೆ ಅವರ ಒಡನಾಟದ ಜ್ಞಾನ ಸಂಪಾದನೆಯಿಂದ ಸಾಧ್ಯವಾಯಿತು ಎನ್ನಬಹುದು, ಎನ್ನುತ್ತಾರೆ ಭಾಸ್ಕರ ಜೋಶಿ.
                 ಸಾಲಿಗ್ರಾಮ ಮೇಳ, ಅಮೃತೇಶ್ವರಿ, ಪೆರ್ಊರು ಮೇಳಗಳಲ್ಲಿ ಯಶಸ್ವೀ ತಿರುಗಾಟ. ಇವರ ವೇಷ ವಿನ್ಯಾಸ ಕ್ಲೀನ್. ಶೃಂಗಾರ, ಕರುಣ, ವೀರ, ರೌದ್ರ ರಸಾಭಿವ್ಯಕ್ತಿಯಲ್ಲಿ ಪ್ರತ್ಯೇಕ ಛಾಪು. ಚುರುಕಿನ ನಡೆ. ಕ್ಷಿಪ್ರವಾಗಿ ಉದುರುವ ಮಾತು.  ಪ್ರಭಾವತಿ, ಮೋಹಿನಿ, ಸೈರಂಧ್ರಿ, ದಾಕ್ಷಾಯಿಣಿ.. ಪಾತ್ರಗಳು ಹೆಸರಿನೊಂದಿಗೆ ಹೊಸೆದುಬಿಟ್ಟಿದೆ.
                 ಕೆರೆಮೆನೆ ಮಹಾಬಲ ಹೆಗಡೆಯವರ ಜಮದಗ್ನಿ-ರೇಣುಕೆ' ಈಶ್ವರ-ದಾಕ್ಷಾಯಿಣಿ ಜತೆಗಾರಿಕೆ, ಬ್ರಹ್ಮಕಪಾಲ ಪ್ರಸಂಗದಲ್ಲಿ ಗೋಡೆಯವರ ಬ್ರಹ್ಮನೊಂದಿಗೆ ಶಾರದೆ, ಬಳ್ಕೂರ ಕೃಷ್ಣಯಾಜಿಯವರ ಸುಧನ್ವನೊಂದಿಗೆ ಪ್ರಭಾವತಿ, ಮಹಾಬಲ ಹೆಗಡೆಯವರ ದುಷ್ಟಬುದ್ಧಿ-ವಿಷಯೆ ಜತೆಗಾರಿಕೆಗಳು ಕಾಲದ ಕಥನಗಳು. "ಚೆಲುವೆ ಚಿತ್ರಾವತಿ ಪ್ರಸಂಗದ ಮೊದಲ ಪ್ರದರ್ಶನದಲ್ಲಿ ’ಚಿತ್ರಾವತಿ’ ಮಾಡಿದವರು ಭಾಸ್ಕರ ಜೋಶಿ. ಅವರ ಹೆಸರನ್ನು ನೆನಪಿಸಿರೆ ಸಾಕು, ಫಕ್ಕನೆ ನೆನಪಾಗುವುದು”ದಾಕ್ಷಾಯಿಣಿ’ ಪಾತ್ರ," ಇವರನ್ನು ಹತ್ತಿರದಿಂದ ಬಲ್ಲ ರಾಜಶೇಖರ ಮರಕ್ಕಿಣಿ ನೆನಪಿಸಿಕೊಳ್ಳುತ್ತಾರೆ.
                 "ಬಾಲ್ಯದಲ್ಲಿ ಒಂದು ಕನಸಿತ್ತು. ಮುಖ್ಯ ಸ್ತ್ರೀಪಾತ್ರಧಾರಿಯಾಗಬೇಕು, ಕರಪತ್ರದಲ್ಲಿ ಮುಖ್ಯ ಸ್ತ್ರೀ ಪಾತ್ರಧಾರಿ ಜಾಗದಲ್ಲಿ ನನ್ನ ಹೆಸರಿರಬೇಕು, ದಿವಸಕ್ಕೆ ಕನಿಷ್ಠ ನೂರು ರೂಪಾಯಿ ಸಂಭಾವನೆ ಸಿಗಬೇಕು. ಇವೆಲ್ಲವೂ ಈಡೇರಿದೆ. ಕನಸು ನನಸಾಗಿದೆ. ಇಳಿ ವಯಸ್ಸಿನಲ್ಲೂ ಮೇಳಗಳಿಗೆ ಬೇಡಿಕೆ ಬರುತ್ತಿದೆ. ತೋಟ, ಆಟ ಎನ್ನುತ್ತಾ ಸಮನ್ವಯ ಮಾಡಿಕೊಳ್ಳುತ್ತಿದ್ದೇನೆ," ಎನ್ನುತ್ತಾರೆ.
                  ಮೇಳಗಳ ತಿರುಗಾಟ ಮಾಡುತ್ತಿದ್ದಂತೆ ಸ್ವತಃ ಮೇಳ ಮಾಡಬೇಕೆನ್ನುವ ಕೆಟ್ಟ ತುಡಿತವೊಂದು ಅಪ್ಪಿಕೊಂಡಿತು! 'ಭುವನಗಿರಿ ಮೇಳ'ದ ಸಂಪನ್ನತೆ. ಮೂರು ವರುಷದಲ್ಲಿ ಆರು ಲಕ್ಷ ರೂಪಾಯಿ ನಷ್ಟ. ಸಾಲಗಾರನ ಪಟ್ಟ. ಸಾಲ ತೀರಿಸಲು ಪುನಃ ಮೇಳಗಳಲ್ಲಿ ಬಣ್ಣ ಹಚ್ಚುತ್ತಿದ್ದಂತೆ ಅಪಘಾತಕ್ಕೆ ಒಳಗಾದರು. ಪರಿಹಾರಕ್ಕಾಗಿ ಕೋರ್ಟು-ಕಚೇರಿ ಅಲೆದಾಟ. 'ನೀನು ಕಲಾವಿದ ಎನ್ನುವುದಕ್ಕೆ ಏನು ಪುರಾವೆ?' ಎಂದಾಗ ನಿರುತ್ತರ. ಸರಿಯಾದ ದಾಖಲೆಯಿಲ್ಲದೆ ವ್ಯಾಜ್ಯ ಕಾಗದದಲ್ಲೇ ಉಳಿಯಿತು. ರಂಗದಲ್ಲಿ ಎತ್ತರಕ್ಕೇರಿದ ಜೋಶಿಯವರ ಕಲಾ ಬದುಕಿನಲ್ಲಿನ ಕೆಲವು ಇಳಿಘಟನೆಗಳಿವು.
                 ಸಿದ್ಧಾಪುರ ತಾಲೂಕಿನ ಶಿರಳಗಿಯಲ್ಲಿ ಕೃಷಿ ಪ್ರಧಾನ ವೃತ್ತಿ. ನಿರಂತರ ದುಡಿಮೆ. ಆಲಸ್ಯ ಕಾಣದ ಕೃಷಿಕ. ಆರ್ಥಿಕವಾಗಿ ಹೇಳುವಂತಹ ಸದೃಢರಲ್ಲ. ಮಾನಸಿಕವಾಗಿ ಸಂತೃಪ್ತ. ಸಹಾಯ ಮನೋಭಾವ. ಶುದ್ಧ ಹಸ್ತರು. ನೇರ ವ್ಯವಹಾರ.  ಮೇಳಗಳ ಯಜಮಾನರಿಗೆ ಎಂದೂ ಇವರು ತಲೆನೋವಾಗಿಲ್ಲ. ಕಲಾವಿದನಲ್ಲಿ ಇರಲೇಬೇಕಾದ ಗುಣಗಳು ಜೋಶಿಯವರಲ್ಲಿ ಮಿಳಿತವಾಗಿದೆ. ಮಡದಿ ಮಾಲಿನಿ. ಸ್ಪೂರ್ತಿ, ರಘುರಾಮ ಇಬ್ಬರು ಮಕ್ಕಳು.
                ಮೂವತ್ತೈದು ವರುಷಗಳ ರಂಗಸಾಧನೆಗಾಗಿ ಈಗ 'ಪಾತಾಳ ಪ್ರಶಸ್ತಿ'ಯ ಬಾಗಿನ. ದಶಂಬರ 7ರಂದು ಎಡನೀರಿನಲ್ಲಿ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ. ಪಾತಾಳ ಯಕ್ಷ ಪ್ರತಿಷ್ಠಾನವು ನೀಡುವ ಈ ಪ್ರಶಸ್ತಿಗೆ ಈಗ ದಶಮಾನದ ಖುಷಿ. ಈ ನೆನಪಿಗಾಗಿ 'ಉಪಾಯನ' (Editor : Na. Karantha Peraje) ಎನ್ನುವ ಪುಸ್ತಿಕೆಯ ಅನಾವರಣ ನಡೆಯಲಿದೆ.
                

Wednesday, November 19, 2014

ಮರ್ಕಂಜ-ರೆಂಜಾಳದಲ್ಲಿ : ಕೀರಿಕ್ಕಾಡು-ದಾಸರಬೈಲು ನೆನಪು


            ಕಾಲ ಓಡುತ್ತಿದ್ದಂತೆ ಕಾಲಘಟ್ಟಗಳು ಇತಿಹಾಸದೊಳಗೆ ಅವಿತುಕೊಳ್ಳುತ್ತವೆ. ಅದರ ಸೃಷ್ಟಿಗೆ ಕಾರಣನಾದ ವ್ಯಕ್ತಿ ಎಂದೂ ಅಜ್ಞಾತನಾಗಿರುತ್ತಾನೆ. ಕಾಲಾಂತರದಲ್ಲಿ  ಮತ್ತೆ ಇತಿಹಾಸವನ್ನು ಕೆದಕಿದಾಗ ವ್ಯಕ್ತಿಯೂ, ಕಾಲಘಟ್ಟವೂ ಮಹತ್ತನ್ನು ಪಡೆಯುತ್ತದೆ.
           ಮಾಸ್ತರ್ ಕೀರಿಕ್ಕಾಡು ವಿಷ್ಣು ಭಟ್ಟರು ಬಾಳಿದ ಕಾಲಘಟ್ಟದಲ್ಲಿ ಸೌಕರ್ಯಗಳಿರಲಿಲ್ಲ. ಬೆರಳ ತುದಿಯಲ್ಲಿ ಪ್ರಪಂಚವನ್ನು ಕಾಣುವ ವ್ಯವಸ್ಥೆಯಿರಲಿಲ್ಲ. ಆದರೆ ತನ್ನ ಬೌದ್ಧಿಕ ಗಟ್ಟಿತನದಿಂದ ಹೊಸ ಪ್ರಪಂಚವೊಂದನ್ನು ಹಳ್ಳಿಯಲ್ಲಿ ಸೃಷ್ಟಿಸುವ ಸಾಮಥ್ರ್ಯ ಅವರಿಗಿತ್ತು. ಹಾಗಾಗಿಯೇ ಬದುಕು, ಬಾಳಿದ ದಿನಮಾನಗಳು, ರಚಿತವಾದ ಸಾಹಿತ್ಯಗಳು ನಿತ್ಯ ನೂತನ.  
            ಕಾಸರಗೋಡು-ಕರ್ನಾಾಟಕದ ಸಂಧಿಗ್ರಾಮ ದೇಲಂಪಾಡಿ. ಇಲ್ಲಿನ ಬನಾರಿ ಅಂದು ತೀರಾ ಹಳ್ಳಿ. ಈಗಲೂ ಕೂಡಾ. ಬದುಕನ್ನು ಕಟ್ಟಿಕೊಳ್ಳಲು ಆಗಮಿಸಿದ ವಿಷ್ಣು ಭಟ್ಟರು ತನ್ನ ಬದುಕಿನೊಂದಿಗೆ ಹಳ್ಳಿಯನ್ನು ಕಟ್ಟಿದರು. ಅಕ್ಷರ ವಂಚಿತ ಮನಸ್ಸುಗಳಲ್ಲಿ ಅಕ್ಷರಗಳನ್ನು ಕೆತ್ತಿದರು. ಅಕ್ಷರಕ್ಕೆ ಗೌರವ ತಂದರು.  ಸಂಸ್ಕಾರವನ್ನು ಅನುಷ್ಠಾನಿಸುತ್ತಾ ಕಲಿಸಿದರು.
            ಮನೆಯಲ್ಲೇ ಯಕ್ಷಗಾನದ ಕಲಿಕೆ. ಜತೆಗೆ ಆಟ, ಊಟ. ಬಿಡುವಿನಲ್ಲಿ ದುಡಿಮೆ. ಪೌರಾಣಿಕ ವಿಚಾರಗಳ ಪ್ರಸ್ತುತಿಯಲ್ಲಿ ಪಾತ್ರಗಳ ಗುಣ-ಸ್ವಭಾವಗಳ ದರ್ಶನ. ರಾತ್ರಿ, ಹಗಲೆನ್ನದೆ ಶಿಷ್ಯರನ್ನು ರೂಪಿಸುವ ಕಾಯಕ. ವಿಕಾರಗಳಿಗೆ ಆಕಾರ ಕೊಡುವ ಬದಲು, ಆಕಾರದ ಮೂಲಕ ವಿಕಾರಗಳನ್ನು ದೂರವಿಡುವ ಕಠಿಣ ಅಲಿಖಿತ ಪಠ್ಯ. ತಪ್ಪಿದಾಗ ಸಾತ್ವಿಕ ಶಿಕ್ಷೆ. ಸಾಲದಾದಾಗ ತನಗೆ ತಾನೇ 'ಉಪವಾಸ'ದ ಮೂಲಕ ಶಿಕ್ಷೆಯನ್ನು ಆವಾಹಿಸಿಕೊಳ್ಳುತ್ತಿದ್ದರು. ಪರಿಣಾಮ, ಮಣ್ಣಿನ ಮುದ್ದೆಗಳಲ್ಲಿ ಸಂಚಲನ. ರೂಪು ಕಂಡುಕೊಳ್ಳಲು ಸ್ವ-ಯತ್ನ. 
             ಯಕ್ಷಗಾನದ ಒಂದೊಂದು ಪಾತ್ರಗಳನ್ನು ಶಿಷ್ಯರೊಳಗೆ ಕಂಡರು. ಅವುಗಳು ನಲಿಯುವುದನ್ನು,  ಮಾತನಾಡುವುದನ್ನು ನೋಡಿದರು. ಉರುಹೊಡೆದ ವಾಕ್ಯಗಳಲ್ಲಿ ಜೀವಂತಿಕೆ ಗುರುತಿಸಿದರು. ಪಾತ್ರಗಳು ಸ್ವರ ಎಬ್ಬಿಸಿದರೆ ಸಾಲದು, ಅವು ಕುಣಿದು ಮಾತನಾಡಬೇಕು. ಇದಕ್ಕಾಗಿ ನಾಟ್ಯ ತರಗತಿಗಳ ಆಯೋಜನೆ. ಯಕ್ಷಗಾನ ನಾಟಕ ತಂಡದ ಮೂಲಕ ಪ್ರದರ್ಶನ. ಐದರ ದಶಕದ ಸುಮಾರಿಗೆ ಸುಪುಷ್ಟವಾದ ಯಕ್ಷಗಾನ ತಂಡವು ಹೊರ ಊರುಗಳಲ್ಲಿಯೂ ಪ್ರದರ್ಶನ ನೀಡಿತು.
               ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘವು ಕೀರಿಕ್ಕಾಡು ಮಾಸ್ತರರ ಮೆದುಳಮರಿ. ಇದು ಮನಸ್ಸುಗಳನ್ನು ಪುನರ್ ಸೃಷ್ಟಿಸಿದ ತಾಣ. ತನ್ನೆಲ್ಲಾ ಸಾಹಿತ್ಯ ರಚನೆಗಳಿಗೆ ಸ್ಫೂರ್ತಿಯನ್ನು ಪಡೆದುಕೊಂಡ ನೆಲ. ಎಪ್ಪತ್ತಕ್ಕೂ ಮಿಕ್ಕಿ ಪ್ರಸಂಗಗಳು ರಚನೆಯಾಗುವುದರ ಹಿಂದೆ ಸಂಘದ ಚೆಂಡೆ-ಮದ್ದಳೆಗಳ ಸದ್ದಿದೆ. ಹಳ್ಳಿಗೆ ಮರುಜೀವ ಕೊಟ್ಟ ಸಂತೃಪ್ತಿಯಿದೆ. ಯಕ್ಷಗಾನ ಅರ್ಥಧಾರಿಯಾಗಿ ನಾಡಿನಲ್ಲೆಲ್ಲಾ ಓಡಾಡಿದ ಗಟ್ಟಿ ಅನುಭವವಿದೆ. ಹಲವು ವಿದ್ವಾಂಸರೊಂದಿಗಿನ ಒಡನಾಟದ ನಂಟಿದೆ.
               ಒಬ್ಬ ಕಲಾವಿದನಾಗಿ ತನ್ನ ಬದುಕನ್ನು ಕಲಾತ್ಮಕವನ್ನಾಗಿ ಮಾಡಿಕೊಂಡರು.  ಅದರ ನೆರಳಿನಡಿ ಹಳ್ಳಿಯ ಜೀವನಕ್ಕೂ ಕಲಾಸ್ಪರ್ಶ ಮಾಡಿದರು. ಸರಳವಾಗಿದ್ದು, ಸಹಜ ಜೀವನವನ್ನು ಒಪ್ಪಿಕೊಂಡರು, ಅಪ್ಪಿಕೊಂಡರು. ತನ್ನ ಬೌದ್ಧಿಕ ಪ್ರಖರತೆ, ವ್ಯಕ್ತಿತ್ವಗಳಿಂದಾಗಿ ಬನಾರಿಯು ನೂರಾರು ವಿದ್ವಾಂಸರನ್ನು ಸೆಳೆಯಿತು.  ಸಾಹಿತ್ಯ ಸುಧೆಯನ್ನು, ಕಲಾಮೃತವನ್ನು ಸವಿಯಲು ಕಾಯುವ ಮನಸ್ಸುಗಳಿಗಂದು ಹಬ್ಬ.
               ಪ್ರಸ್ತುತ ಕೀರಿಕ್ಕಾಡು ಜನ್ಮಶತಮಾನೋತ್ಸವ ವರ್ಷ. ವನಮಾಲ ಕೇಶವ ಭಟ್, ಡಾ.ರಮಾನಂದ ಬನಾರಿ, ಡಾ.ವಿಶ್ವವಿನೋದ ಬನಾರಿ.. ಕೀರಿಕ್ಕಾಡು ವಿಷ್ಣು ಭಟ್ಟರ ಚಿರಂಜೀವಿಗಳು. ತೀರ್ಥರೂಪರ ಯಕ್ಷ ಕಾಣ್ಕೆಗೆ ನಿರಂತರ ಬೆಳಕನ್ನೊಡ್ಡುವವರು. ಆ ಬೆಳಕು ಬನಾರಿಗೆ ಸೀಮಿತವಾಗಬಾರದು, ನಾಲ್ದೆಸೆ ಹಬ್ಬಬೇಕೆನ್ನುವ ದೂರನಿರೀಕ್ಷೆ. ಕೀರಿಕ್ಕಾಡು ಜನ್ಮಶತಮಾನೋತ್ಸವ ಸಂಭ್ರಮವು ಕನ್ನಾಡಿದ ವಿವಿದೆಡೆ ಆಚರಿಸಲ್ಪಟ್ಟಿದೆ.
ದಾಸರಬೈಲು ಚನಿಯ ನಾಯ್ಕ್ : 
ಯಕ್ಷಗಾನ ಕ್ಷೇತ್ರದಲ್ಲಿ 'ದಾಸರಬೈಲು' ಎಂದೇ ಖ್ಯಾತಿ. ಸುಳ್ಯ ತಾಲೂಕಿನ ಮರ್ಕಂಜದವರು. ಜಾತಿಯ ಬಲವಿಲ್ಲ. ಆರ್ಥಿಕವಾಗಿ ಸದೃಢರಲ್ಲ. ಸ್ವಾಭಿಮಾನದ ಬದುಕು.  ಜೀವನದ ಬಹುಪಾಲು ಕಾಲ್ನಡಿಗೆಯ ಪಯಣ. ಶಾರೀರ ಬಲದಿಂದಲೇ ಯಕ್ಷರಾತ್ರಿಗಳನ್ನು ಸಾಕ್ಷಾತ್ಕರಿಸಿದ ಭಾಗವತ ಚನಿಯರು ಎಲ್ಲಾ ಜಾತಿ, ವರ್ಗ, ಅಂತಸ್ತುಗಳನ್ನು ಮೀರಿ ನಿಂತು ಮನೆ-ಮನಗಳನ್ನು ಗೆದ್ದವರು.
              ಭಾಗವತ ಅಜ್ಜನಗದ್ದೆ ಗಣಪಯ್ಯ ಭಾಗವತರ ಕರಕಮಲಸಂಜಾತ. ಕಡತೋಕ ಮಂಜುನಾಥ ಭಾಗವತರ ಒಡನಾಡಿ. ಶ್ರೀ ಧರ್ಮಸ್ಥಳ ಮೇಳದಲ್ಲಿ ಅಲ್ಪ ತಿರುಗಾಟ. ಬಳಿಕ ಹಲವು ಮೇಳಗಳಲ್ಲಿ ವ್ಯವಸಾಯ. ಭಾಗವತ ಎಂದಾಕ್ಷಣ ಚನಿಯರೇ ನೆನಪಾಗುವಷ್ಟು ಊರಿದ ಭಾಗವತಿಕೆಯ ಛಾಪು. ಜಾಗಟೆ ಹಿಡಿದು ರಂಗದಲ್ಲಿ ಕುಳಿತಾಕ್ಷಣ ಪ್ರಕಟವಾಗುವ ಅವ್ಯಕ್ತ ರಂಗಶಿಸ್ತು.  ಪಾತ್ರವೇ ಪದ್ಯವಾಗುವ  ಅದ್ಭುತ ಕಂಠ. ಸ್ಪಷ್ಟ-ನಿಖರ ಶಬ್ದಗಳು. ಪದ್ಯಗಳ ಮಟ್ಟುಗಳ ಖಚಿತ ಜ್ಞಾನ.  ಹಾಡಿದಷ್ಟೂ ದಿವಸ ಪೌರಾಣಿಕ ಪ್ರಸಂಗಗಳ ಪದ್ಯಗಳು ಎಲ್ಲೂ ಮರುಗಿಲ್ಲ! ಪ್ರಜ್ಞೆ ತಪ್ಪಿಲ್ಲ!
                ಸರಳ ಬದುಕು. ಸುಂದರ ವ್ಯಕ್ತಿತ್ವ. ಮಿತ ಭಾಷಿ. ಇತರರು ಗೇಲಿ ಮಾಡಿದರೂ ಹಚ್ಚಿಕೊಳ್ಳದ ಸೌಜನ್ಯ. ಸಂಸಾರವನ್ನು ಮರೆಯದ ಗೃಹಸ್ಥ. ಹಲವು ಮನಸ್ಸುಗಳ ಒಡನಾಟ. ಬಡತನವೇ ಕಾರಣವಾಗಿ ಆಕಾರ-ವಿಕಾರಗಳನ್ನು ಸಮಚಿತ್ತದಿಂದ ಸ್ವೀಕರಿಸಿದ ಯಕ್ಷ ಶ್ರೀಮಂತ. ಆಟ-ಕೂಟಗಳಲ್ಲಿ ಲಭ್ಯವಾದ ಸಂಭಾವನೆಯನ್ನು ಮನೆಗೆ ಹೋದ ಬಳಿಕವೇ ಎಣಿಸುವ ಬದ್ಧತೆ. ಸಂಭಾವನೆಗಾಗಿ ಎಂದೂ ಕಾಲ್ಕೆರೆಯದ ಸ್ವ-ನಿಯಂತ್ರಣ.  ಒಬ್ಬ ಕಲಾವಿದನಿಗೆ ಇಷ್ಟು ಗುಣಗಳು ಸಾಕಲ್ವಾ.                                                                                                      
                ಹಳ್ಳಿಯ ಸೊಬಗನ್ನು ನಾಡಿಗೆ ತೋರಿಸಿದ ಕಲಾ ಪ್ರಖರತೆಗಳಿಗೆ ನವೆಂಬರ್ 1, 2014, ಶನಿವಾರ, ಅಪರಾಹ್ನ ಮರ್ಕಂಜ-ರೆಂಜಾಳ ದೇವಸ್ಥಾನದಲ್ಲಿ ನಮನ. ಹಿರಿಯ ಚೇತನಗಳ ಸ್ಮರಣೆ.

Saturday, October 25, 2014

ದಶಕದ ಮಿರುಗಿನಲ್ಲಿ ಎಡನೀರು ಮೇಳ


               ಕಾಸರಗೋಡು ಜಿಲ್ಲೆಯ ಎಡನೀರು ಶ್ರೀಮಠವು ಕಲಾರಾಧನೆಯ ಕ್ಷೇತ್ರ. ಇಲ್ಲಿ ಸದಾ ಸಂಗೀತ, ನೃತ್ಯ, ಯಕ್ಷಗಾನ ಸುಧೆಯ ಅಮೃತಪಾನ. ದಕ್ಷಿಣಾಮೂರ್ತಿ  ಶ್ರೀ ಗೋಪಾಲಕೃಷ್ಣ ದೇವರ ಸಾನ್ನಿಧ್ಯ. ಈತ ಕಲಾಪ್ರಿಯ. ಇಲ್ಲಿನ ಗುರುಗಳಾದ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರಿಗೆ ಯಕ್ಷಗಾನ ಆರಾಧನೆ. ಇದೇ ಉಸಿರು. ಇದು ಸದಾ ಹಸಿರು.
               ಯಕ್ಷಗಾನದ ಉದ್ಧಾಮರ ವಾಗ್ಝರಿಯಲ್ಲಿ ಮಿಂದ ತಾಣವಿದು ನಡೆಯುತ್ತಿದ್ದ ತಾಳಮದ್ದಳೆಗಳೆಲ್ಲಾ  ವಿದ್ವತ್ಗೋಷ್ಠಿಯ ತರಹ. ಪೌರಾಣಿಕ ವಿಚಾರಗಳ ಸೂಕ್ಷ್ಮಾತಿಸೂಕ್ಷ್ಮಗಳ ಮಥನ. ಇದರಿಂದ ತೆಗೆದ ನವನೀತವನ್ನುಣಿಸಿದ ಕಲಾವಿದರ ಗಾಥೆಗಳನ್ನು ಸ್ವಾಮೀಜಿಯವರು ಹೇಳತೊಡಗಿಸಿದರೆ ಒಂದು ಕಾಲಘಟ್ಟದ ಯಕ್ಷ ಸಮೃದ್ಧತೆ ಅನಾವರಣಗೊಳ್ಳುತ್ತದೆ. ಶ್ರೀಮಠದಲ್ಲಿ ತಾಳಮದ್ದಳೆಗಳು ನಿರಂತರ.
                 ಯಕ್ಷಗಾನವನ್ನು ಉತ್ಸವದ ರೀತಿಯಲ್ಲಿ ನಡೆಸಿ, ಅದನ್ನು ಪವಿತ್ರ ಮನೋಭಾವದಿಂದ ನಡೆಸುವ ಉದ್ದೇಶದಿಂದ 'ತಾಳಮದ್ದಳೆ ಸಪ್ತಾಹ'ಗಳ ಪ್ರಸ್ತುತಿ. ಶ್ರೀಮಠವೂ ಸೇರಿದಂತೆ ಕುಮಟಾ, ಅಂಕೋಲ, ಯಲ್ಲಾಪುರ, ಶಿರಸಿ, ಬೆಂಗಳೂರು, ಪುತ್ತೂರು.. ಹಲವೆಡೆ ಸಪ್ತಾಹಗಳ ವೈಭವ. ಪರಿಣಾಮ, ಸಾಮಾಜಿಕವಾಗಿ ಉನ್ನತ ಸ್ತರದಲ್ಲಿರುವ ಅನೇಕರು ಯಕ್ಷಗಾನಕ್ಕೆ ಹತ್ತಿರವಾಗಿದ್ದಾರೆ.
                    ಹತ್ತು ವರುಷಗಳ ಹಿಂದೆ ಮೇಳಕ್ಕೆ ಶ್ರೀಕಾರ. 'ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ, ಎಡನೀರು' ರೂಪೀಕರಣ. ಎಲ್ಲಾ ಕ್ಷೇತ್ರಗಳಲ್ಲೂ ಯಕ್ಷಗಾನ ಮೇಳಗಳಿವೆ. ಶ್ರೀಮಠಕ್ಕೂ ಮೇಳ ಬೇಕು. ಇದರಿಂದಾಗಿ ಸಮಾಜಕ್ಕೆ ಉತ್ತಮ ಮಾನವೀಯ, ಪೌರಾಣಿಕ ಸಂದೇಶ ನೀಡಬಹುದು, ಎನ್ನುವುದು ಆಶಯ.  ಮೊದಲ ನಾಲ್ಕು ವರುಷ ಟೆಂಟ್ ಮೇಳದ ಜಯಭೇರಿ. ಪ್ರಸಿದ್ಧ ಕಲಾವಿದರ ಗಡಣ. ಶಿಸ್ತುಬದ್ಧ ಪ್ರದರ್ಶನ. ನಾಲ್ದೆಸೆಯಲ್ಲೂ ಯಶಕಂಡಿತು. ಆರ್ಥಿಕವಾಗಿ ಕೈತುಂಬದಿದ್ದರೂ ಭಾವನಾತ್ಮಕವಾಗಿ ಹಲವು ಮನಸ್ಸುಗಳು ತುಂಬಿ ಬಂದಿದ್ದುವು.
                  ಐದನೇ ವರುಷದಿಂದ ಬಯಲಾಟ ಮೇಳವಾಗಿ ಪರಿವರ್ತನೆ. ಕಾಲಮಿತಿ ಪ್ರಯೋಗಕ್ಕೆ ನಿರ್ಧಾರ.  ಸಂಘಟಕರು ಅಪೇಕ್ಷೆ ಪಟ್ಟರೆ ಪೂರ್ಣರಾತ್ರಿ ಪ್ರದರ್ಶನ. ಒಂದೊಂದು ಪ್ರದರ್ಶನದ ಹಿಂದೆ ಪೂಜ್ಯ ಶ್ರೀಗಳ ಸೂಕ್ಷ್ಮನೋಟವಿದೆ. ಪ್ರಸಂಗ ನಿಗದಿ, ಪಾತ್ರ ಹಂಚುವಿಕೆ, ಪ್ರಸಂಗದ ಎಡಿಟಿಂಗ್, ಕಾಲಮಿತಿಗೆ ಹೊಂದುವ ಕಂಪೋಸಿಂಗ್.. ಎಲ್ಲವೂ ಶ್ರೀಗಳ ಯೋಜನೆ, ಯೋಚನೆ.
               ಬಹುತೇಕ ಪ್ರದರ್ಶನಗಳು ಸೇವಾ ರೂಪದ್ದಾದ ಕಾರಣ ಶ್ರೀಮಠದಲ್ಲೇ ನಡೆಯುತ್ತವೆ. ಇಲ್ಲಿ ಜರಗುವ ಕಾರ್ಯಕ್ರಮದಲ್ಲಿ ಸ್ವತಃ ಸ್ವಾಮೀಜಿಯವರು ಭಾಗವತಿಕೆ ಮಾಡುತ್ತಾರೆ. ಇವರ ಹಾಡಿನಲ್ಲಿ ಭಾವತೀವ್ರತೆ, ಭಕ್ತಿಯ ಅಭಿವ್ಯಕ್ತಿಯ ಭಾವಗಳು ಸದಾ ಜಾಗೃತ. ರಂಗದಲ್ಲಿ ಕಲಾವಿದರು ಪಾತ್ರಧಾರಿಗಳು ಸ್ಪಷ್ಟವಾಗಿ ಮಾತನಾಡಬೇಕೆನ್ನುವ ಹಪಾಹಪಿ. ಕಲಾವಿದರು ಅಧ್ಯಯನಶೀಲರಾಗಬೇಕು, ಆಗ ಮಾತ್ರ ಪಾತ್ರಗಳು ಪರಿಪುಷ್ಟವಾಗಿ ರೂಪುಗೊಳ್ಳುತ್ತವೆ ಎನ್ನುವತ್ತ ಕಾಳಜಿ.
                  ಮೇಳವೆಂದಾಗ ಸಹಜವಾಗಿ ಬರುವ, ಬರಬಹುದಾದ ಗೊಣಗಾಟಗಳನ್ನು ಸ್ವಾಮೀಜಿ ಮೌನವಾಗಿ ಅನುಭವಿಸಿದ್ದಾರೆ! ಸಮಸ್ಯೆಗಳನ್ನು ಹತ್ತಿಯಂತೆ ಹಗುರಗೊಳಿಸಿದ್ದಾರೆ. ರಾಚಿ ಬರುವ ಒತ್ತಡಗಳನ್ನು ನಿಯಂತ್ರಿಸಿಕೊಂಡಿದ್ದಾರೆ. ಮೇಳದ ನಿರ್ವಾಹಕರಾದ ಶ್ರೀಮಠದ ಜಯರಾಮ ಮಂಜತ್ತಾಯರು ಹೇಳುತ್ತಾರೆ, "ಹತ್ತು ವಿವಿಧ ಮನಸ್ಸುಗಳಿರುವಾಗ ಅಭಿಪ್ರಾಯದಲ್ಲಿ ವ್ಯತ್ಯಾಸಗಳು ಸಹಜ. ಅದೆಂದೂ ಮೇಳದ ನಿರ್ವಹಣೆ, ಆಟದ ಒಟ್ಟಂದಕ್ಕೆ ತೊಂದರೆ ಮಾಡಿಲ್ಲ. ಎಲ್ಲಾ ಕಲಾವಿದರ ಸಹಕಾರ, ಶ್ರಮ ಗುರುತರ."
                  ಮೇಳದ ಕಲಾವಿದರನ್ನು ಹೊಂದಿಕೊಂಡು ಪ್ರಸಂಗ ನಿರ್ಧಾಾರ. ಸಂಘಟಕರು ಅಪೇಕ್ಷೆ ಪಟ್ಟದ್ದನ್ನೆಲ್ಲಾ ಆಡುವಂತಿಲ್ಲ. ಮೂರು ಗಂಟೆ ಕಾಲಮಿತಿಗೆ ಹೊಂದುವ ಪ್ರಸಂಗಗಳ ಆಯ್ಕೆ. ಹಾಗಾಗಿ ಎಡನೀರು ಮೇಳದ ಆಟಗಳೆಲ್ಲಾ ಕಾಲದ ಮಿತಿಯೊಳಗೆ ಜನಮುಟ್ಟುವ ಪ್ರದರ್ಶನ ನೀಡುತ್ತದೆ. ಭಸ್ಮಾಸುರ ಮೋಹಿನಿ, ವಿಶ್ವಾಮಿತ್ರ ಮೇನಕೆ, ಅಭಿಮನ್ಯು ಕಾಳಗ, ಬಬ್ರುವಾಹನ, ಪಂಚವಟಿ, ದ್ರುಪದ ಗರ್ವಭಂಗ.. ಮೊದಲಾದ ಪ್ರಸಂಗಗಳ ನಿಜಸವಿಯನ್ನು ನೋಡಿಯೇ ಅನುಭವಿಸಬೇಕು. ಅನುಭವಿಗಳ ಗಟ್ಟಿ ಹಿಮ್ಮೇಳ ಪ್ರದರ್ಶನ ಯಶದ ಗುಟ್ಟು.
                  "ಕಳೆದ ವರುಷ ನೂರ ಅರುವತ್ತ ಮೂರು ಪ್ರದರ್ಶನಗಳಾಗಿವೆ. ಎಲ್ಲವೂ ಸೇವಾ ರೂಪದವುಗಳು. ಶ್ರೀಮಠದ ಅಭಿಮಾನಿ ಶಿಷ್ಯವೃಂದ ಮತ್ತು ಭಕ್ತರ ಪ್ರಾಯೋಜಕತ್ವ. ಬಹುತೇಕ ಪ್ರದರ್ಶನವನ್ನು ಶ್ರೀಮಠದಲ್ಲೇ ನಡೆಸುವ ಇಂಗಿತ ಇವರದ್ದು," ಎನ್ನುತ್ತಾರೆ ಜಯರಾಮ ಮಂಜತ್ತಾಯ. ಭಾಗವತರಾದ ದಿನೇಶ ಅಮ್ಮಣ್ಣಾಯ ಮತ್ತು ಹಾಸ್ಯಗಾರ ಬಾಲಕೃಷ್ಣ ಮಣಿಯಾಣಿ ಇವರಿಬ್ಬರು ಇದೇ ಮೇಳದಲ್ಲಿ ಹತ್ತೂ ವರುಷ ವ್ಯವಸಾಯ ಮಾಡಿರುವುದು ಗಮನಾರ್ಹ.
                   ಅಬ್ಬರದ ಪ್ರದರ್ಶನವನ್ನು ಅಪೇಕ್ಷಿಸುವ ಪ್ರೇಕ್ಷಕರು ಎಡನೀರು ಮೇಳದಿಂದ ಸಾತ್ವಿಕ, ಸಂದೇಶ, ಸಂವಾದವಿರುವ ಪ್ರಸಂಗಗಳನ್ನು ಅಪೇಕ್ಷಿಸುವುದು ನೋಡಿದ್ದೇನೆ. ಹೆಚ್ಚಿನ ಪ್ರದರ್ಶನಗಳಲ್ಲಿ ಪ್ರೇಕ್ಷಕರು ಕೂಡಾ ಪ್ರಸಂಗದ ಒಂದು ಪಾತ್ರವೆಂಬಂತೆ ಸ್ಪಂದಿಸುವುದು ಆಶ್ಚರ್ಯ. ದುಃಖದ ಸನ್ನಿವೇಶದಲ್ಲಿ ಪ್ರೇಕ್ಷಕರು ಅತ್ತ ಘಟನೆ ಎಷ್ಟು ಬೇಕು? ಹಾಗಾದರೆ ಮನಮುಟ್ಟುವ ಅಭಿವ್ಯಕ್ತಿಯು 'ಬದಲಾದ ಕಾಲಘಟ್ಟದಲ್ಲೂ' ಮನಸ್ಸನ್ನು ಮುಟ್ಟುತ್ತದೆ, ತಟ್ಟುತ್ತದೆ ಎನ್ನುವುದಕ್ಕೆ ಪುರಾವೆ ಬೇಕಾಗಿಲ್ಲ.
                 ಸಂವಾದಗಳು ದಾರಿತಪ್ಪಿದಾಗ, ಅರ್ಥಗಾರಿಕೆಯಲ್ಲಿ ತಪ್ಪು ನುಸುಳಿದಾಗ, ಅಬದ್ಧ ಪದಪುಂಜಗಳು ನುಸುಳಿದಾಗ ಸ್ವಾಮೀಜಿ ಎಚ್ಚರಿಸುತ್ತಾರೆ, ತಿಳಿಹೇಳುತ್ತಾರೆ.  ಹಾಗಾಗಿ ಎಡನೀರು ಮೇಳದ ಆಟಗಳ ಪಾತ್ರಧಾರಿಗಳಲ್ಲಿ ಬುದ್ಧಿಪೂರ್ವಕವಾದ ಅಬದ್ಧತೆ ತೀರಾ ತೀರಾ ಕಡಿಮೆ. ಕಲೆಯನ್ನು ಸ್ವಾಮೀಜಿ ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರೀತಿ ಕಲಾವಿದರಲ್ಲೂ ಇದೆ. ಈ ಪ್ರೀತಿಯಲ್ಲಿ ಮಗುವಿನ ಮುಗ್ಧತೆಯಿದೆ.
                  ಎಡನೀರು ಮೇಳವು ಹತ್ತು ತಿರುಗಾಟವನ್ನು ಪೂರ್ತಿಗೊಳಿಸಿದೆ. ಸಾಗಿಬಂದ ದಾರಿಯನ್ನು ಮೆಲುಕು ಹಾಕಲು, ಹತ್ತರ ಖುಷಿಯನ್ನು ಹಂಚಿಕೊಳ್ಳಲು ಎಡನೀರು ಶ್ರೀಮಠದ ಶ್ರೀಕೃಷ್ಣ ಸಭಾಮಂದಿರವು ಸಜ್ಜಾಗಿದೆ. ೨೦೧೪ ಅಕ್ಟೋಬರ್ 25, ಶನಿವಾರದಂದು ದಿನಪೂರ್ತಿ ಕಲಾಪ. ವಿಚಾರಗೋಷ್ಠಿ, ತಾಳಮದ್ದಳೆ, ಬಯಲಾಟಗಳ ಸಂಪನ್ನತೆ. ಬರುತ್ತೀರಲ್ಲಾ.


Tuesday, July 15, 2014

ಅಪೂರ್ವ ಅನುಭವ.

           2009-2010 ಇರಬೇಕು, ಎಡನೀರು ಶ್ರೀಮಠದಲ್ಲಿ ಪಾತಾಳ ಯಕ್ಷ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭದ ಕ್ಷಣ. ಪ್ರಸಂಗ : ದಮಯಂತಿ ಪುನರ್ ಸ್ವಯಂವರ. ಪರಮಪೂಜ್ಯ ಎಡನೀರು ಶ್ರೀಗಳ ಭಾಗವತಿಕೆ. ಕೀರ್ತಿಶೇಷ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆ. ಪದ್ಯಾಣ ಶಂಕರನಾರಾಯಣ ಭಟ್ಟರ ಚೆಂಡೆ.
        ಪೆರುವಡಿ ನಾರಾಯಣ ಹಾಸ್ಯಗಾರರ 'ಬಾಹುಕ.'   ಹಿರಿಯ ಕಲಾವಿದ ಶ್ರೀ ಪಾತಾಳ ವೆಂಕಟ್ರಮಣ ಭಟ್ ’ದಮಯಂತಿ’ಪಾತ್ರದಲ್ಲಿ 
        ಅವರ ಜತೆಪಾತ್ರ 'ಚೇದಿರಾಣಿ'ಯಾಗಿ ಭಾಗವಹಿಸುವ ಅವಕಾಶ ನನಗೆ ಪ್ರಾಪ್ತವಾಗಿತ್ತು.
          ಅದೊಂದು ಅಪೂರ್ವ ಅನುಭವ.

Tuesday, July 8, 2014

ಒಮ್ಮೊಮ್ಮೆ ಹೀಗಾಗುತ್ತೆ...!


        ಶ್ರೀ ದೇವಿ ಮಹಾತ್ಮೆ ಪ್ರಸಂಗದಲ್ಲಿ 'ಮಹಿಷ ವಧೆ' ಕಥಾನಕ. ಪುತ್ತೂರು ಸನಿಹದ ಪದಾಳದಲ್ಲಿ ಜರುಗಿದ ಆಟ.

Monday, March 17, 2014

ಯಕ್ಷಗಾನ ಸಹವಾಸ - ಸ್ವಾನುಭವ



ಸ್ವಾನುಭವ : 1
- ಹವ್ಯಾಸಿ, ವೃತ್ತಿ ರಂಗಭೂಮಿಯ ಪ್ರದರ್ಶನಗಳಲ್ಲಿ ಬಹುತೇಕ ವೀರರಸ ಪ್ರಧಾನವಾಗುಳ್ಳ ಕಥಾನಕಗಳನ್ನೇ ಆರಿಸುತ್ತಾರೆ. 'ಆಟ ರೈಸಲು' ಓಕೆ.
- ಈಚೆಗೆ ಒಂದು ಆಟದಲ್ಲಿ ಪಾತ್ರಧಾರಿಯಾಗಿ ಭಾಗವಹಿಸಿದ್ದೆ. ಪ್ರಸಂಗ : ತ್ರಿಜನ್ಮ ಮೋಕ್ಷ. ಹಿರಣ್ಯಕಶ್ಯಪು-ಕಯಾದು-ಪ್ರಹ್ಲಾದ : ಸನ್ನಿವೇಶಗಳು ಸಹಜವಾಗಿ ದುಃಖ-ಕರುಣ ರಸವೇ ಪ್ರಧಾನವಾಗುಳ್ಳದ್ದು. ಸನ್ನಿವೇಶವು 'ಅವಸರವನ್ನು' ಸಹಿಸುವುದಿಲ್ಲ. ಆದರೆ ಅಂದಿನ ಯುವ ಭಾಗವತರು - ತಾರಾಮೌಲ್ಯ ಇದೆ ಎಂದು ಗ್ರಹಿಸಿದ - ಕಯಾದು ಪದ್ಯಗಳಿಗೆಲ್ಲಾ ಕತ್ತರಿ ಹಾಕಿ, ಎರಡ ಪದ್ಯದಲ್ಲೇ ಮುಗಿಸಿಬಿಟ್ಟರು.
- ಯಾಕೆ ಹೀಗೆ ಎಂದು ಪ್ರಶ್ನಿಸಿದೆ. 'ಸೌಮ್ಯ ಪದ್ಯ ಅಲ್ವೋ, ಪ್ರೇಕ್ಷಕರಿಗೆ ಬೋರ್ ಆಗುತ್ತದೆ. ಆಟ ಮೇಲೆ ಬೀಳುವುದಿಲ್ಲ' (ಯಕ್ಷಗಾನದ ಪರಿಭಾಷೆ) ಎಂಬ ಉತ್ತರ. ಆಶ್ಚರ್ಯವಾಯಿತು. ಪ್ರೇಕ್ಷಕರು ಪ್ರದರ್ಶನವನ್ನು ಆಸ್ವಾದಿಸಿದ್ದರು. ಯಾರು ಆಕಳಿಸಿದ್ದನ್ನು ನಾನು ನೋಡಿಲ್ಲ. ಆದರೂ ಅಂದಿನ ಭಾಗವತರಿಗೆ 'ಬೋರ್' ಆಯಿತು!
- ಮತ್ತೆ ತಿಳಿಯಿತು. ಇವರು 'ವೀರರಸ ಪದ್ಯಗಳ ಪ್ರಿಯ'ರೆಂದು! ಸೌಮ್ಯ ಪದ್ಯಗಳು ಬಂದಾಗ 'ಪ್ರಸಿದ್ಧರ ಬಣ್ಣ' ಬಯಲಾಗುತ್ತದೆ. ಹಾಗಾಗಿ ಇಂತಹ ಬುದ್ಧಿವಂತಿಕೆಯನ್ನು ಮಾಡುವುದು ಮಾಮೂಲಿ.
- ನೋಡಿ, ಒಬ್ಬನ ದೌರ್ಬಲ್ಯಕ್ಕೆ ಇಡೀ ರಂಗ, ರಂಗವ

ಸ್ವಾನುಭವ - 2
- ಅದೊಂದು ಆಟ. ಪ್ರಸಂಗ: ದೇವಿಮಹಾತ್ಮೆ. ಯಾವ್ಯಾವ ಕಲಾವಿದರು ಎಂದು ನಿಶ್ಚಯವಾಗಿತ್ತು. ಕಾರ್ಯಕ್ರಮದ ದಿವಸ ಹತ್ತಿರವಾಗುತ್ತಿದ್ದಂತೆ ಪ್ರಸಿದ್ಧರೆಂದು ಹಣೆಪಟ್ಟಿ ಅಂಟಿಸಿಕೊಂಡ ಕಲಾವಿದರೊಬ್ಬರು ಸಮಾರಂಭಕ್ಕೆ 5000 ರೂಪಾಯಿ ದೇಣಿಗೆ ನೀಡಿ, 'ಮಹಿಷಾಸುರ' ಪಾತ್ರ ತನಗೆ ನೀಡಬೇಕೆಂದು ಮನವಿ ಸಲ್ಲಿಸಿದರು. ಇವರ ಐದು ಸಾವಿರದಿಂದ ಸಂಘಟಕರು ನಿಶ್ಚಿಂತೆಯಿಂದ ಉಸಿರು ಬಿಟ್ಟರಾದರೂ, ಅವರ ಬೇಡಿಕೆ ಇರಿಸು ಮುರಿಸು ಉಂಟು ಮಾಡಿತ್ತು. ಸರಿ, ದಾಕ್ಷಿಣ್ಯಕ್ಕೆ ಒಪ್ಪಿಕೊಂಡರು.
ಆಟದ ದಿವಸ. ಮಹಿಷಾಸುರ ಚೌಕಿಯಲ್ಲಿ ಸಿದ್ಧವಾಗಿತ್ತು. ರಂಗದಿಂದ ಸ್ವಲ್ಪ ದೂರದಿಂದ ಮಹಿಷನ ಪ್ರವೇಶ ಹೊರಡುವುದೆಂದು ನಿಶ್ಚಯವಾಗಿತ್ತು. ಚೌಕಿಯಲ್ಲಿ ಆಗಲೇ ಅರ್ಧ ಅಮಲೇರಿದ್ದರು. ಮಹಿಷಾಸುರನ ಆವಾಹನೆಯಾಗಿತ್ತು! ಅವರಿಗೆ ಬೇಕಾದಷ್ಟು ಮದಿರೆಯನ್ನು ಸಪ್ಲೈ ಮಾಡುವ ಅಭಿಮಾನಿ ವರ್ಗವೂ ಇತ್ತು. ಹಾಗಾಗಿ ಮಹಿಷ ರಂಗಸ್ಥಳದ ಹತ್ತಿರಕ್ಕೆ ಅಬ್ಬರದ ಪ್ರವೇಶ ಮಾಡುತ್ತಾ ಬರುವಾಗಲೇ ಬಸವಳಿದಿದ್ದರು. ಹೇಗೋ ರಂಗಸ್ಥಳ ಪ್ರವೇಶ ಮಾಡಿದರೆನ್ನಿ. ಆಮೇಲೆ ಬಂದವರು ಚೌಕಿಯಲ್ಲಿ ವಿಶ್ರಮಿಸಿದರಿಗೆ ಎಚ್ಚರವಾದುದು ಬೆಳಿಗ್ಗೆ ಮಂಗಲವಾದ ಬಳಿಕವೇ!
- ಇವರ ಅವಸ್ಥೆ ನೋಡಿ ಚೌಕಿಯಲ್ಲಿದ್ದ ಸಹ ಕಲಾವಿದರು ಮತ್ತೆ ಮಹಿಷರಾದರು! ಆಟ ಮಾತ್ರ ಮೂವತ್ತು ನಿಮಿಷ ಸ್ಥಬ್ದವಾಗಿತ್ತು. ಇನ್ನೊಬ್ಬ ಮಹಿಷ ಸಿದ್ಧನಾಗಬೇಕಲ್ಲಾ...!
- ಇಲ್ಲಿ ಘಟನೆ ಮುಖ್ಯವಲ್ಲ. ಅಭಿಮಾನದ ಹುಚ್ಚು ಅಮಲಿನಲ್ಲಿ ಕಲಾವಿದರಿಗೆ 'ಗಮ್ಮತ್ತು ಮಾಡುವ, ಮಾಡಿಸುವ' ಅಭಿಮಾನಿಗಳಿಗೆ 'ಆಟ ಕುಲಗೆಟ್ಟರೂ ತೊಂದರೆಯಿಲ್ಲ, ಕಲಾವಿದರಿಗೆ ಖುಷಿಯಾಗಬೇಕು' ಎನ್ನುವ ಜಾಯಮಾನ ಇದೆಯಲ್ಲಾ, ಇದೂ ಕಲೆಗೆ ಮಾರಕ...!ಏನಂತೀರಿ?
- ಕಲಾವಿದರನ್ನು ತೃಪ್ತಿ ಪಡಿಸುವುದರಲ್ಲೇ ತನ್ನ ಸಾರ್ಥಕ್ಯ ಎಂದಿದ್ದರೆ ಬೆಳಿಗ್ಗೆನ್ನು ಒಪ್ಪಿದ ಪ್ರೇಕ್ಷಕರು, ಸಂಘಟಕರು = ಹೀಗೆ ಎಲ್ಲರೂ ಬಲಿಪಶುಗಳಾಗುತ್ತಾರೆ.

ಸ್ವಾನುಭವ 3 
- ಯಕ್ಷಗಾನದ ಚೌಕಿಯನ್ನು ಆಟಕ್ಕೆ ಬಂದ ಬಹುತೇಕ ಕಲಾಭಿಮಾನಿಗಳು ಒಮ್ಮೆ ಇಣುಕಿ, ತಮಗೆ ಇಷ್ಟಪಟ್ಟ ಕಲಾವಿದರನ್ನು ಮಾತನಾಡಿಸಿ ಹೋಗುವುದು. ಇದು ಯಕ್ಷಗಾನದ ಕುರಿತಾದ ಅಭಿಮಾನ. ಜತೆಗೆ ಕಲಾವಿದನ ಅಭಿಮಾನವೂ ಕೂಡಾ. ಹಾಗಾಗಿ ಚೌಕಿಯಲ್ಲಿ ಕನಿಷ್ಠ ಶಿಸ್ತನ್ನು ಕಾಪಾಡಿಕೊಳ್ಳುವ (ಹವ್ಯಾಸಿ ರಂಗದಲ್ಲಿ) ಹೊಣೆ ಎಲ್ಲಾ ಕಲಾವಿದರದ್ದು. ಮದ್ಯಪಾನ ಮಾಡಿ ಚೌಕಿಯಲ್ಲೇ ರಾದ್ಧಾಂತ ಎಬ್ಬಿಸುತ್ತಾ ಇದ್ದರೆ, ಹಗುರ ಮಾತುಗಳಿಂದ ತಾನು ಶ್ರೇಷ್ಠ ಎಂದು ಪ್ರತಿಷ್ಠಾಪಿಸಲು ಹೊರಟರೆ ಕಲಾಭಿಮಾನಿಗಳು ಕಲಾವಿದರಿಂದ, ಯಕ್ಷಗಾನದಿಂ ದೂರವಾಗುತ್ತಾರೆ. ಹೀಗಾಗದಂತೆ ಎಚ್ಚರ ಅಗತ್ಯ.
- ಮದ್ಯಪಾನ ಮಾಡುವುದು ಅವನವನ ವೈಯಕ್ತಿಕ ವಿಚಾರ. ಅದನ್ನು ಪ್ರಶ್ನಿಸುವಮತಿಲ್ಲ. ಆದರೆ ಸಾಮಾಜಿಕ ಕಾಳಜಿ ಮತ್ತು ಬದ್ಧತೆ ಇದೆಯಲ್ಲಾ.... ಹಿನ್ನೆಲೆಯಲ್ಲಿ ಚೌಕಿಯ ಪಾವಿತ್ರ್ಯತೆ ಯನ್ನು ಕಾಪಾಡಲೇಬೇಕು.
- ಪಾವಿತ್ರ್ಯತೆ ಎಲ್ಲಿಂದ ಬರಬೇಕು? ಕಲಾವಿದನಲ್ಲಿ ಶಿಸ್ತು, ನಂಬುಗೆ ಮತ್ತು ಪಾವಿತ್ರ್ಯದ ಭಾವಗಳಿಂದರೆ ತನ್ನಿಂತಾತೆ ಪಾವಿತ್ರ್ಯ ಅನಾವರಣಗೊಳ್ಳುತ್ತದೆ.

ಸ್ವಾನುಭವ - 4
 - ಯಕ್ಷಗಾನದ ಬಣ್ಣದ ಮನೆ(ಚೌಕಿ)ಗೆ ಪಾವಿತ್ರ್ಯದ ನಂಬುಗೆ. ನಮ್ಮೆಲ್ಲಾ ಹಿರಿಯ ಕಲಾವಿದರು ಯಕ್ಷಗಾನವನ್ನು 'ದೇವತಾರಾಧನೆ' ಎಂಬ ನಂಬುಗೆಯಿಂದ ಕಲಾ ವ್ಯವಸಾಯ ಮಾಡಿದವರು. ಚೌಕಿಯನ್ನು, ರಂಗವನ್ನು ಪೂಜ್ಯ ಭಾವನೆಯಿಂದ ಕಂಡವರು. ಈಗಲೂ ಹಲವು ಕಲಾವಿದರಲ್ಲಿ ಅಂತಹ ಭಾವನೆಗಳು ತುಂಬಿವೆ.
- ಇಂತಹ ಭಾವನೆಗಳಿಗೆ ಯಕ್ಷಗಾನದ ಹವ್ಯಾಸಿ ರಂಗಭೂಮಿಯೂ ಹೊರತಲ್ಲ. ಹವ್ಯಾಸಿ ಕ್ಷೇತ್ರದಲ್ಲಿ ಅನುಭವಿಗಳನ್ನು ಕಲೆ ಹಾಕಿ ಅದಕ್ಕೊಂದು ಸಂಘಟಿತ ರೂಪ ಕೊಟ್ಟು ಮೇಳವಾಗಿ ತಿರುಗಾಟ ಮಾಡುವುದನ್ನು ಕಾಣಬುಹುದು. ಇಲ್ಲೂ ಕೂಡಾ ದೇವತಾರಾಧನೆಯ ಭಾವ, ಭಾವನೆ.
- ಆದರೆ ಇದೆಲ್ಲವನ್ನೂ ಕಡೆಗಣಿಸಿ ಚೌಕಿಯಲ್ಲಿ ಧೂಮಪಾನ ಮಾಡುತ್ತಾ, ಸ್ವೇಚ್ಛೆಯಿಂದ ಇರುವ; ಮದ್ಯಪಾನ ಮಾಡಿ, ಅಮಲೇರಿ ಚೌಕಿಯಲ್ಲಿ ಹೇಸಿಗೆ ಹುಟ್ಟಿಸುವ, ಲಘುವಾಗಿ ಮಾತನಾಡುವ, ವ್ಯಕ್ತಿಗಳು (ಕಲಾವಿದರು ಅನ್ನಿಸಕೊಂಡ) ಇದ್ದಾರೆ. ಇವರಿಂದಾಗಿ ಇಡೀ ತಂಡಕ್ಕೆ ಕೆಟ್ಟ ಹೆಸರು. ಇಂತಹವರನ್ನು ಕಲಾವಿದರೇ ದೂರವಿಟ್ಟರೆ ತಂಡಕ್ಕೂ, ಪ್ರದರ್ಶನಕ್ಕೂ ಕ್ಷೇಮ.