Saturday, December 26, 2015

ಅಮೆರಿಕಾದಲ್ಲಿ ತಾಳಮದ್ದಳೆಯ ಹಸಿವು


             ಯಕ್ಷಗಾನದ ವಿದ್ವಾಂಸ, ವಿಮರ್ಶಕ, ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಅಮೇರಿಕಾ ದೇಶಕ್ಕೆ ಹೋಗಿದ್ದಾರೆ, ಮರಳಿದ್ದಾರೆ! ಇದರಲ್ಲೇನು ವಿಶೇಷ?
            ಎರಡು ತಿಂಗಳ ಖಾಸಗಿ ಪ್ರವಾಸ. ಸಮಯ, ಸಂದರ್ಭ ಸಿಕ್ಕರೆ ಸಾಹಿತ್ಯ ಉಪನ್ಯಾಸಗಳ ಒಲವಿತ್ತು. ಅಮೇರಿಕಾ ತಲಪುವಾಗ ಹತ್ತು ತಾಳಮದ್ದಳೆಗಳ ಆಯೋಜನೆಯು ಜೋಶಿಯವರಿಗೆ ಆಶ್ಚರ್ಯ ಮೂಡಿಸಿತ್ತು. ಕರಾವಳಿ ಮೂಲದ ಟೆಕ್ಸಾಸ್ನಲ್ಲಿರುವ ಪಣಂಬೂರು ವಾಸುದೇವ ಐತಾಳರ ಕ್ಷಿಪ್ರ ಆಯೋಜನೆಯ ಕಾರ್ಯಕ್ರಮ ಸರಣಿ. ಲೇಖಕ ಶ್ರೀವತ್ಸ ಜೋಷಿ, ಬಳಗದ ಹೆಗಲೆಣೆ. ಮಿಂಚಂಚೆ ಸಂಪರ್ಕದ ವ್ಯವಸ್ಥಿತ ಯಕ್ಷ ಪ್ಯಾಕೇಜ್ಗಳು!
              ತಾಳಮದ್ದಳೆ ಅಂದಾಗ ಇಲ್ಲಿನ ವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳಬೇಡಿ. ಕಡಲಾಚೆಯ ಸಂಪನ್ಮೂಲಗಳು ಮತ್ತು ತಂತ್ರಜ್ಞಾನಗಳ ಪೂರ್ಣ ಬಳಕೆ. ಯೂಟ್ಯೂಬಿನಲ್ಲಿ ಲಭ್ಯವಾಗುವ ಗುಣಮಟ್ಟದ ಕೂಟಾಟದ ಕ್ಲಿಪ್ಪಿಂಗ್ಸ್ಗಳನ್ನು  ಕಂಪ್ಯೂಗೆ ಇಳಿಸಿಕೊಂಡು ಪ್ರಸಂಗ ಪದ್ಯಗಳ ಆಯ್ಕೆ. ಬೇಕಾದ ಪದ್ಯಗಳನ್ನು ಪ್ರತ್ಯೇಕವಾಗಿ ಮುದ್ರಿಸಿಕೊಂಡು ಜೋಡಣೆ. ಇದನ್ನು ನಿರ್ವಹಿಸಲೆಂದೇ ಒಬ್ಬ ನಿರ್ವಾಹಕ. ಅರ್ಥ ಮುಗಿದಾಗ ಗುಂಡಿ ಒತ್ತಿದರಾಯಿತು, 'ಇ-ಭಾಗವತಿಕೆ'ಯ ನಿರಾಕಾರ ಸೊಗಸಿನ ಸಾಕಾರ. ಎರಡು ಎರಡೂವರೆ ಗಂಟೆಗಳಿಗೆ ಹೊಂದುವಂತೆ 'ಭೀಷ್ಮ ಪರ್ವ' ಮತ್ತು 'ವಾಲಿವಧೆ' ಪ್ರಸಂಗಗಳು. 
             ಡಾ.ಜೋಶಿಯವರಿಗೆ ಭೀಷ್ಮ, ವಾಲಿ ಪಾತ್ರಗಳು. ಮಿಕ್ಕಂತೆ ಅರ್ಥಗಾರಿಕೆಯ ಸ್ಪರ್ಶವುಳ್ಳ  ಸ್ಥಳೀಯರು! ಒಂದೆಡೆ ವಾಲಿವಧೆ ಪ್ರಸಂಗದಲ್ಲಿ 'ತಾರೆ'ಯ ಅರ್ಥವನ್ನು ಮಹಿಳೆಯೋರ್ವರು ನಿರ್ವಹಿಸಿದ್ದರು. ಬಾಲ್ಯದಲ್ಲಿ ಯಕ್ಷಗಾನದೊಂದಿಗೆ ಬೆಳೆದು ಉದ್ಯೋಗ ನಿಮಿತ್ತ ವಿದೇಶದಲ್ಲಿರುವ ಬಂಧುಗಳು ಪ್ರೇಕ್ಷಕರು. ಸರಣಿ ನಿಗದಿ ಆಗುತ್ತಿರುವಾಗಲೇ ಟೊರೆಂಟೋದಲ್ಲಿರುವ ಯಕ್ಷಗಾನದ ಮೇಳವು ಜತೆ ಸೇರಿತು. "ಬಹುಶಃ ಇದು ವಿಶ್ವದಲ್ಲಿಯೇ ಪ್ರಥಮವೇನೋ. ನನಗೂ ಅಲ್ಲೊಂದು ಮೇಳವಿದೆ ಅಂತ ಗೊತ್ತಿರಲಿಲ್ಲ. ವಿದೇಶದಲ್ಲಿ ಮೇಳ ಕಟ್ಟಿದ ನವೀನ ಹೆಗಡೆ, ರಘು ಕಟ್ಟಿನಕೆರೆ ಇವರ ಕೆಲಸ ಶ್ಲಾಘನೀಯ" ಎನ್ನುತ್ತಾರೆ ಡಾ.ಜೋಶಿ.
              ವಾಶಿಂಗ್ಟನ್ನ ಆಲ್ಬನಿನ ಭಕ್ತಾಂಜನೇಯ ದೇವಸ್ಥಾನದಲ್ಲಿ ಪೂರ್ಣ ಪ್ರಮಾಣದ - ಹಿಮ್ಮೇಳ ಸಹಿತ -  ತಾಳಮದ್ದಳೆ. ಪ್ರಸಂಗ 'ಭರತಾಗಮನ.' ಜೋಶಿಯವರ ರಾಮ. ದೇವಳದ ಮುಖ್ಯ ಅರ್ಚಕ, ವಿದ್ವಾನ್ ಬಾಲಕೃಷ್ಣ ಭಟ್ಟರ 'ಭರತ'ನ ಪಾತ್ರ. ಯಾರಿಗೆಲ್ಲಾ ಸರಣಿಗೆ ಬರಲಾಗಲಿಲ್ಲವೋ ಅವರೆಲ್ಲಾ ಜೋಶಿಯವರನ್ನು ಖಾಸಗಿಯಾಗಿ ಮನೆಗೆ ಆಹ್ವಾನಿಸುತ್ತಿದ್ದರು. ನನ್ನ ಶಾಲಾ ಸಹಪಾಠಿಗಳ ಕುಟುಂಬ, ಅವರ ಸಂಬಂಧಿಕರು, ಮಗಳಂದಿರ ಆಪ್ತ ವರ್ತುುಲ... ಹೀಗೆ ಪ್ರತಿ ದಿನ ಒಂದಲ್ಲ ಒಂದು ಮನೆಯಲ್ಲಿ ತುಂಬು ಆತಿಥ್ಯ. ಆವರಿಸಿಕೊಳ್ಳುವ ಆಪ್ತತೆ. ಬಹುತೇಕ ಮನೆಗಳಲ್ಲಿ ಕನ್ನಡದ ಸಂಸ್ಕೃತಿ ಜೀವಂತವಾಗಿದೆ, ಎನ್ನುತ್ತಾ ವಿದೇಶ ನೆಲದ ಅನುಭವವನ್ನು ಜೋಶಿ ಕಟ್ಟಿಕೊಡುತ್ತಾರೆ, ನಾವು ಇಲ್ಲಿ ಕುಳಿತು ವಿದೇಶವನ್ನು ಹಳಿಯುತ್ತೇವೆ. ನಾವು ಏನನ್ನು, ಎಷ್ಟನ್ನು ತಿಳಿದುಕೊಂಡಿದ್ದೇವೋ ಅದಕ್ಕಿಂತ ಭಿನ್ನವಾದ ಬದುಕು ಅಲ್ಲಿದೆ.
                ನಮ್ಮೂರಿನಲ್ಲಿ ಯಾವುದೇ ಕಾರ್ಯಕ್ರಮವಿರಲಿ, ಧ್ವನಿವರ್ಧಕ ವ್ಯವಸ್ಥೆ ಭೀಕರ! ಹೈ ವಾಲ್ಯೂಮ್ನಿಂದ ಬಹುತೇಕರ ಕಿವಿ ಸ್ತಬ್ಧವಾಗಿದೆ! ಈ ಹಿನ್ನೆಲೆಯಲ್ಲಿ ಅಲ್ಲಿನ ಧ್ವನಿವರ್ಧಕದ ವ್ಯವಸ್ಥೆ ಶ್ಲಾಘನೀಯ. ಹೆಚ್ಚಿನವರು ಇಲೆಕ್ಟ್ರಾನಿಕ್ ಇಂಜಿನಿಯರ್ಗಳು. ಅವರಿಗೆ ಧ್ವನಿವರ್ಧಕದ ಬಳಕೆಯ ಜ್ಞಾನವಿದೆ. ಅದರ ಅಳವಡಿಕೆ, ನಿರ್ವಹಣೆಯ ವಿಧಾನ, ವಿಕಾರವಾಗಿ ಬೊಬ್ಬಿಡದ 'ಕೆಣಿ'ಗಳನ್ನು ನಾವು ಅಲ್ಲಿಂದ ಕಲಿಯಬೇಕಾದುದು ಬೇಕಾದಷ್ಟಿದೆ. ಪ್ರೇಕ್ಷಕರ ಶ್ರವಣ ಶಕ್ತಿಯನ್ನು ಕಾರ್ಯಕ್ರಮಗಳು ಕಸಿದುಕೊಳ್ಳುವುದಿಲ್ಲ!
                ತಾಳಮದ್ದಳೆಯನ್ನು ಹೇಗೆ ಅನುಭವಿಸುತ್ತಾರೆ? ಜೋಶಿ ಹೇಳುತ್ತಾರೆ,  ಏನಿಲ್ಲವೆಂದರೂ ಐವತ್ತರಿಂದ ನೂರು ಮಂದಿಯ ಉಪಸ್ಥಿತಿ ಖಾಯಂ. ಅವರಿಗೆ ತಾಳಮದ್ದಳೆಯನ್ನು ಕೇಳಲು ಹಸಿವಿದೆ. ಶೈಕ್ಷಣಿಕವಾಗಿ ಗಟ್ಟಿಯಾದ ವಿಮರ್ಶಕರು. ಕೊನೆಗೆ ಪ್ರಶ್ನೋತ್ತರ. ತಾಳಮದ್ದಳೆಯನ್ನು ಕೇವಲ ಕೌತುಕವಾಗಿ ನೋಡುವುದಲ್ಲ. ಅದನ್ನು ಅನುಭವಿಸುತ್ತಾರೆ. ಅಲ್ಲಿ ರಸಿಕತೆ ಪ್ರೌಢವಾಗಿದೆ. ಮಾತುಮಾತಿಗೆ ನಗುವುದು, ಚಪ್ಪಾಳೆಗಳು ಇಲ್ಲವೇ ಇಲ್ಲ! ಒಂದು ಕಲೆಯಾಗಿ ಸ್ವೀಕರಿಸಿದ್ದಾರೆ.
ಆಗಸ್ಟ್ 29 ರಿಂದ ಸೆಪ್ಟೆಂಬರ್19ರ ತನಕ ಸೈಂಟ್ ಲೂವಿಸ್, ಚಿಕಾಗೋ, ಮೇರಿಲ್ಯಾಂಡ್, ಸನ್ಜೋಸ್, ಬರ್ಕ್ಲೀ, ಹೂಸ್ಟನ್, ಮೈಮಿ.. ಗಳಲ್ಲಿ ತಾಳಮದ್ದಳೆ. ಕಾರ್ಯಕ್ರಮದ ಆರಂಭಕ್ಕೆ ಔಚಿತ್ಯದ ಕುರಿತು ಸಂಘಟಕರಿಂದ ಮಾತು. ನಂತರ ಕೂಟ. ಕೊನೆಗೆ 'ನೀವು ಊರಿಗೆ ಮರಳಿದಾಗ ಯಕ್ಷಗಾನಕ್ಕೆ ನೀಡಬಹುದಾದ ಪ್ರೋತ್ಸಾಹ'ದ ಟಿಪ್ಗಳ ಪ್ರಸ್ತುತಿ. ವ್ಯವಸ್ಥಿತವಾದ ಆಯೋಜನೆ.
                ಕೂಟಗಳಲ್ಲದೆ ಮಂಕುತಿಮ್ಮನ ಕಗ್ಗ, ಗಣೇಶ ಮತ್ತು ಗುರು.. ಈ ವಿಚಾರಗಳ ಉಪನ್ಯಾಸ. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಕಾರ್ಯಕ್ರಮವನ್ನು ಸಂಸ್ಕೃತ ವಿದ್ವಾಂಸ ಪ್ರೊ.ರಾಬರ್ಫ಼್ ಗೋಲ್ಡ್ಮನ್ ಸಂಘಟಿಸಿದ್ದರು. 1970ರ ಸುಮಾರಿಗೆ ಇದೇ ವಿವಿಯ ವಿದ್ಯಾರ್ಥಿನಿ ಮಾರ್ತಾ ಆಸ್ಟನ್ ಸಿಕೋರಾ ಕನ್ನಾಡಿಗೆ ಬಂದಿದ್ದರು. ಯಕ್ಷಗಾನದ ವಿಶೇಷ ಅಧ್ಯಯನ ಮಾಡಿದ್ದು ಗಮನೀಯ. ಸರಣಿಯ ಕೆಲವು ಕಾರ್ಯಕ್ರಮಗಳಲ್ಲಿ ಮಾರ್ತಾ ಉಪಸ್ಥಿತರಿದ್ದುದು ಗಮನಾರ್ಹ.
ಒಟ್ಟೂ ಸರಣಿ ಕೂಟದ ಪುಳಕವನ್ನು ಹೊತ್ತು ತಂದ ಜೋಶಿ ಹೇಳುವುದು ಹೀಗೆ : "ಹತ್ತೋ ಇಪ್ಪತ್ತು ವರುಷದ ಹಿಂದೆ ಹೋಗಬೇಕಿತ್ತು. ಯಕ್ಷಗಾನ, ಕರಾವಳಿ ಮತ್ತು ಅಲ್ಲಿನ ಮನಸ್ಸುಗಳನ್ನು ಒಂದುಗೂಡಿಸುವ ಚಿಕ್ಕ ಹೆಜ್ಜೆಯೂರಬಹುದಿತ್ತು ಅನ್ನಿಸುತ್ತದೆ. ಏನು ಮಾಡಲಿ, ಕಾಲ ಮಿಂಚಿಹೋಯಿತು. ಒಂದೆಡೆ ಸಮೃದ್ಧ ಕಲಾ ಮಜಲು, ಇನ್ನೊಂದೆಡೆ ಅದು ಬೇಕೆಂಬ ಹಪಾಹಪಿ - ಈ ಎರಡೂ ದಡಗಳನ್ನು ಸೇರಿಸಬಹುದಿತ್ತು!"
                ಮಂಗಳೂರು, ಮೂಡುಬಿದಿರೆ, ಕಾರ್ಕಳ.. ಮೊದಲಾದ ಪ್ರದೇಶಗಳಲ್ಲಿದ್ದ ಈಗ ಅಲ್ಲಿನವರಾದ ಆಪ್ತರ, ಬಂಧುಗಳ ಭೇಟಿ. ಚಿಕಾಗೋದಲ್ಲಿ ಹಿರಿಮಗಳು ಶ್ವೇತಾ ಸೂರ್ಯನಾರಾಯಣ,  ವರ್ಜೀನಿಯಾದಲ್ಲಿ ಕಿರಿ ಮಗಳು ಸ್ವಾತಿ ಕಾರ್ತಿಕ್ ಕುಟುಂಬ ವಾಸ್ತವ್ಯವಿದೆ. ಅವರೊಂದಿಗೆ ಕಳೆಯಲು ಜೋಶಿ ಮೊದಲ ಬಾರಿಗೆ ಅಮೇರಿಕಾಕ್ಕೆ ಹೋಗಿದ್ದರು. ಆದರೆ ಯಕ್ಷಗಾನವು ಅಲ್ಲೂ ಅವರನ್ನು ಕಾಲಯಾಪನೆಗೆ ಬಿಟ್ಟಿಲ್ಲ!  "ನನ್ನ ನಿರೀಕ್ಷೆಗೂ ಮೀರಿದ ಗೌರವ, ಊಹಿಸದ ರೀತಿಯ ಸ್ಪಂದನ. ಇದೆಲ್ಲ ಬೆಳೆದು ನಿಂತ ಯಕ್ಷಗಾನ ಕಲೆಗೆ ಸಂದ ಮಾನ. ನಾನು ಅದರ ಪ್ರತಿನಿಧಿಯಷ್ಟೇ. ಕಲೆಯನ್ನು ಪ್ರೀತಿಸುವ ಅಪ್ಪಟ ಸಹೃದಯರ ಋಣವನ್ನು ಹೇಗೆ ತೀರಿಸಲಿ," ಎನ್ನುವಾಗ ಭಾವುಕರಾಗುತ್ತಾರೆ.
              ಪ್ರವಾಸ ಮುಗಿಸಿ ಮರಳಿದಾಗ ಕಂಪ್ಯೂನಲ್ಲಿ ರಾಶಿ ರಾಶಿ ಮಿಂಚಂಚೆಗಳು. ಕಾರ್ಯಕ್ರಮದ ಹಿಮ್ಮಾಹಿತಿಗಳು. "ನನಗೊಂದು ಹೊಸ ಅನುಭವ. ವಿದೇಶಿ ಬಂಧುಗಳ ಕೃತಜ್ಞತೆಯ ಭಾರವನ್ನು ಹೊತ್ತು ದೇಶಕ್ಕೆ ಮರಳಿದ್ದೇನೆ. ಇನ್ನೊಂದೆರಡು ತಿಂಗಳು ಇರುತ್ತಿದ್ದರೆ ಕೂಟಗಳ, ಸಂಪರ್ಕಗಳ ಸಂಖ್ಯೆ ಹಿರಿದಾಗುತ್ತಿತ್ತು," ಎನ್ನುತ್ತಾ ಮಾತುಕತೆಗೆ ಮುಕ್ತಾಯ ಹಾಡುತ್ತಾರೆ, "ಆಟವೇ ಮಾತ್ರ ಒಂದು ಫಾರ್ಮ್ ಅಲ್ಲ, ತಾಳಮದ್ದಳೆಯೂ ಒಂದು ಫಾರ್ಮ್ ಎಂದು ತಿಳಿಸಲು ಈ ಟೂರ್ನಿಂದ ಸಾಧ್ಯವಾಯಿತು."

(ಪ್ರಜಾವಾಣಿ-ದಧಿಗಿಣತೋ ಅಂಕಣ/೨೬-೧೨-೨೦೧೫)


Monday, December 21, 2015

ಸೊಂಟತ್ರಾಣದ ವೇಗವು ಪಾತ್ರದ ವೇಗವಲ್ಲ!

             ಕಾಲಮಿತಿಯ ಪ್ರದರ್ಶನಗಳಿಗೆ ಮನಸ್ಸು ಒಗ್ಗಿಹೋಗಿದೆ. ಮೂನಾಲ್ಕು ಗಂಟೆಗಳ ಪ್ರಸಂಗಗಳು ಒಂದೂವರೆ ಗಂಟೆಗೆ ಇಳಿದಿವೆ. ಪಾತ್ರ, ಪ್ರಸಂಗಗಳು ವೇಗವನ್ನು ಹೆಚ್ಚಿಸಿಕೊಂಡಿವೆ. ನೋಡುಗನೂ ವೇಗಕ್ಕೆ ಟ್ಯೂನ್ ಆಗುತ್ತಾ ಇದ್ದಾನೆ! ಕಣ್ಣುರೆಪ್ಪೆ ಮುಚ್ಚಿ ಮುಗಿಯುವುದರೊಳಗೆ ಸನ್ನಿವೇಶಗಳು ಹಾರಿ ಬಿಡುತ್ತವೆ. ಪಾತ್ರದ ರಸಗಳು, ಅದಕ್ಕೆ ತಕ್ಕುದಾದ ಭಾವಗಳು ನೋಡುಗನ ಮನದೊಳಗೆ ಇಳಿಯುವ ಮೊದಲೇ ಪ್ರಸಂಗ ಮುಗಿದುಹೋಗುತ್ತವೆ! ಆಟ ಮುಗಿಸಿ ಮರಳಿದಾಗ ನನ್ನೊಳಗೆ ಆಟದ ಗುಂಗು ರಿಂಗಣ ಹಾಕದೆ ಅಳಿದುಬಿಟ್ಟಿದೆ. ಈ ಸಮಸ್ಯೆಗೆ ಕಲಾವಿದ ಹೇಳಬಹುದು, 'ಆಟ ನೋಡಲು ಗೊತ್ತಿಲ್ಲ.!' ವಿಮರ್ಶಕ ಹೇಳಬಹುದು, 'ನಿಮಗೆ ರಸಪ್ರಜ್ಞೆಯಿಲ್ಲ.!' ಮೇಳದ ಯಜಮಾನ ಹೇಳಬಹುದು, 'ಕಾಲಮಿತಿ ಅಲ್ವೋ, ಅನಿವಾರ್ಯ.!' ಹೀಗೆ ಸಮರ್ಥನೆಗಳ ಮಹಾಪೂರಗಳು ನನ್ನೊಳಗೆ ಇಳಿಯದ ರಸಗುಂಗಿಗೆ ಉತ್ತರವಾಗಲಾರದು.
              ಸಂದುಹೋದ ಹಿಮ್ಮೇಳ ಕಲಾವಿದರ ವಾದನಗಳ ರೋಚಕತೆಗಳನ್ನು  ಕರ್ಣಾಕರ್ಣಿಕೆಯಾಗಿ ಕೇಳಿ ಆನಂದ ಪಟ್ಟಿದ್ದೇವೆ. ಬೆರಗಾಗಿದ್ದೇವೆ. ಈ ರೋಚಕಗಳೆಲ್ಲಾ ಭೂತಕಾಲದ ಸಜೀವ ಕಥನಗಳು. ಕಾಲದ ಅಲಿಖಿತ ದಾಖಲೆಗಳು. ಅದರಲ್ಲಿ ವರ್ತಮಾನದ ನೆರಳಿದೆ. ಉದಾಃ 'ಪಾಂಡವಾಶ್ವಮೇಧ' ಪ್ರಸಂಗ ಎಂದಿಟ್ಟುಕೊಳ್ಳೋಣ. ದೂರದ ಶ್ರೋತೃ ಚೆಂಡೆ ವಾದನದ ನಾದವನ್ನಾಲಿಸಿ 'ಇದು ಇಂತಹ ವೇಷದ ಪ್ರವೇಶ' ಎಂದು ತಿಳಿಯುತ್ತಿದ್ದ. ಚೆಂಡೆಯ ನಾದ ಮತ್ತು ಕಾಲದ ಲೆಕ್ಕಾಚಾರದಿಂದ ದೂರದ ಶ್ರೋತೃ ಪಾತ್ರವನ್ನು ಗ್ರಹಿಸುತ್ತಾನೆ ಎಂದಾದರೆ ಅದು ಚೆಂಡೆ ವಾದಕರ ಬೌದ್ಧಿಕ ಗಟ್ಟಿತನ ಮತ್ತು ಜಾಣ್ಮೆ ಆದರೂ ಅಲ್ಲಿ ಎದ್ದು ಕಾಣುವುದು - 'ಕಾಲ ಪ್ರಮಾಣದ ನುಡಿತಗಳು'.
                ಕಾಲಪ್ರಮಾಣವನ್ನು ಕಾಲಮಿತಿಯು ನುಂಗಿದೆ. ಕಥಾರಂಭದಲ್ಲೇ ನಾಲ್ಕನೇ ಕಾಲದ ಓಟ. ದೇವೇಂದ್ರ, ಇಂದ್ರಜಿತು, ಹಿರಣ್ಯಾಕ್ಷ, ರಕ್ತಬೀಜ.. ಪಾತ್ರಗಳ ರಂಗನಡೆಗಳ ಒಂದೇ ರೀತಿ ಕಾಣುತ್ತವೆ.  ಹಿಮ್ಮೇಳ ಭಾಷಾವಿದ ಪದ್ಯಾಣ ಶಂಕರನಾರಾಯಣ ಭಟ್ ಒಮ್ಮೆ ವಿಷಾದದಿಂದ ಹೇಳಿದ್ದರು -  "ಕಾಲಪ್ರಮಾಣಕ್ಕೆ ಅನುಗುಣವಾಗಿಯೇ ಪಾತ್ರಗಳು ರಂಗಪ್ರವೇಶ ಮಾಡಬೇಕು. ಒಂದೊಂದು ಪಾತ್ರಕ್ಕೆ ಒಂದೊಂದು ವೇಗ. ಕಾಲಪ್ರಮಾಣಗಳ ನಿರ್ವಹಣೆಯು ಪ್ರೇಕ್ಷಕರ ಮೇಲೆ ಗಣನೀಯ ಪರಿಣಾಮ ಕೊಡುತ್ತದೆ. ಇಂದು ಒಬ್ಬೊಬ್ಬ ಕಲಾವಿದನ ಪಾತ್ರದಲ್ಲಿ ಒಂದೊಂದು ವೇಗ. ಅವರ ಕುಣಿತಕ್ಕೆ ಸರಿಯಾಗಿ ಚೆಂಡೆ ಬಾರಿಸದಿದ್ದರೆ ಚೆಂಡೆ ಬಾರಿಸಲು ಬರುವುದಿಲ್ಲ ಎನ್ನುವ ಅಪವಾದ ಎದುರಿಸಬೇಕಾಗುತ್ತದೆ..!"
               ಹಾಗಿದ್ದರೆ ಪಾತ್ರಗಳ ವೇಗದ ಪ್ರಮಾಣ ಹೇಗೆ ಮತ್ತು ಎಷ್ಟು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಚಿಕ್ಕಯತ್ನವೊಂದು ಪುತ್ತೂರಿನಲ್ಲಿ ನಡೆಯಿತು. ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 'ಆಂಜನೇಯ 47' ಕಾರ್ಯಕ್ರಮದಲ್ಲಿ ಭಾಗವತ ಪ್ರಸಾದ್ ಬಲಿಪ ನಿರದೇಶನದಲ್ಲಿ ಪ್ರಾತ್ಯಕ್ಷಿಕೆ ಜರುಗಿತ್ತು. ಶ್ರೀಗಳಾದ ಕುಮಾರ ಸುಬ್ರಹ್ಮಣ್ಯ ವಳಕುಂಜ, ಪುಂಡಿಕಾಯಿ ರಾಜೇಂದ್ರ ಹಿಮ್ಮೇಳದಲ್ಲಿ ಸಹಕರಿಸಿದ್ದರು. ಯಕ್ಷಗುರು ದಿವಾಣ ಶಿವಶಂಕರ ಭಟ್ಟರು ವೇಷ ತೊಡದೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಸುಮಾರು ಒಂದೂವರೆ ಗಂಟೆಗಳ ಲಂಬಿಸಿದ ಪ್ರಾತ್ಯಕ್ಷಿಕೆಯಲ್ಲಿ ವಿವಿಧ ತಾಳ, ಮಟ್ಟು ಮತ್ತು ಪಾತ್ರಗಳ ವೇಗಗಳನ್ನು ಪ್ರಸ್ತುತಪಡಿಸಲಾಗಿತ್ತು.
               ಅಭಿಮನ್ಯು ಕಾಳಗ ಪ್ರಸಂಗ. ಧರ್ಮರಾಯ ಚಿಂತೆಯಲ್ಲಿರುವಾಗ ಅಭಿಮನ್ಯುವಿನ ಪ್ರವೇಶ. ಮೂರನಾಲ್ಕು ಏರು ಪದ್ಯಗಳು. ಪುಂಡುವೇಷವಾದ್ದರಿಂದ ಸಹಜವಾಗಿ ಹಿಮ್ಮೇಳ, ಮುಮ್ಮೇಳಗಳು ಈ ಹಂತದಿಂದ ವೇಗ ಪಡೆದುಕೊಳ್ಳುತ್ತದೆ. ಪ್ರಸಾದ ಬಲಿಪ ಹೇಳುತ್ತಾರೆ, "ಇಡೀ ಪ್ರಸಂಗದಲ್ಲಿ ಅಭಿಮನ್ಯುವಿಗೆ ಬಹುತೇಕ ವೀರ ರಸದ ಪದ್ಯಗಳಿವೆ. ಪದ್ಯಗಳ ಮೂಲಕ ಪಾತ್ರದ ವೇಗಗಳ ವ್ಯತ್ಯಾಸಗಳನ್ನು ಹಿಂದಿನವರು ಮಾಡಿದ್ದರು. ಕಲಾವಿದ ಪದ್ಯಗಳ ವೇಗಕ್ಕೆ ಸರಿಯಾಗಿ ಹೆಜ್ಜೆ ಹಾಕಿದರೆ ರಂಗ ಸೊಬಗು ಜಾಸ್ತಿ.  ನಿತ್ರಾಣನಾಗಲಾರ! ಮುಖ್ಯವಾಗಿ ಗಮನಿಸಬೇಕಾದುದು - ಕಲಾವಿದನ ಸೊಂಟತ್ರಾಣದ ವೇಗವು ಪಾತ್ರದ ವೇಗವಲ್ಲ, ಪ್ರಸಂಗದ ವೇಗವೂ ಅಲ್ಲ."
                ದೇವೇಂದ್ರನ ಪ್ರವೇಶಕ್ಕೂ, ಇಂದ್ರಜಿತುವಿನ ಪ್ರವೇಶಕ್ಕೂ ವ್ಯತ್ಯಾಸವಿದೆ. ರಂಗಕ್ರಿಯೆಗಳಲ್ಲೂ ಬದಲಾವಣೆಯಿದೆ. ಅಭಿಮನ್ಯು, ಬಬ್ರುವಾಹನ.. ಪಾತ್ರಗಳ ನಡೆಗಳು ವಿಭಿನ್ನ. ಕಲಾವಿದನಿಗೆ ತಾಳಗತಿಯ ಜ್ಞಾನವಿದ್ದರೆ ಕಾಲಪ್ರಮಾಣದ ಕುಣಿತಗಳಿಂದ ರಂಗಕ್ಕೆ ನ್ಯಾಯ ಸಲ್ಲಿಸಬಹುದು. ಸಮಯ ಇಲ್ಲವೆಂದು ಗತಿಯನ್ನು ಬೇಕಾದಂತೆ ಬದಲಿಸಿದರೆ ಅಧೋಗತಿ! ಡಾ.ಜೋಷಿಯವರು ಮಾತಿಗೆ ಸಿಕ್ಕಾಗ ಹೇಳಿದ ಮಾತು ನೆನಪಾಯಿತು, "ಎಷ್ಟು ದೊಡ್ಡ ಪ್ರಸಂಗವಾದರೂ ಕಿರಿದು ಗೊಳಿಸಬಹುದು. ಕಿರಿದುಗೊಳಿಸುವುದೆಂದರೆ ಸನ್ನಿವೇಶವನ್ನೇ ಕಟ್ ಮಾಡುವುದಲ್ಲ. ಪಾತ್ರಕ್ಕೆ ಗರಿಷ್ಠ ಅವಕಾಶವನ್ನು ನೀಡುತ್ತಾ ಪದ್ಯಗಳನ್ನು ಸೀಮಿತಗೊಳಿಸಿದರೆ ಆಯಿತು. ಹೇಳುವಂತಹ ಪದ್ಯ, ಅದರ ನಡೆ, ಕುಣಿತದ ಪ್ರಮಾಣಗಳಲ್ಲಿ ವೈವಿಧ್ಯತೆಯನ್ನು ತರಬಹುದು."
              ರಂಗದಿಂದ ಮರೆತುಹೋಗುತ್ತಿರುವ ಚೌತಾಳ, ಘಂಟಾರವ ಮಟ್ಟು, ಆದಿ ತಾಳದ ಪದ್ಯಗಳು ಕಾಲಪ್ರಮಾಣದಲ್ಲಿ ಪ್ರಸ್ತುತಪಡಿಸಿದಾದ ಸಿಗುವ ರಸಸುಖ ಶಬ್ದಕ್ಕೆ ನಿಲುಕದ್ದು. ಪ್ರಸಾದ್ ಬಲಿಪರು ಮೂರು ನಮೂನೆಯ ತಿತ್ತಿತೈಗಳನ್ನು ಹಾಡಿನ ಮೂಲಕ ತೋರಿಸಿದರು. ತಿತ್ತಿತೈ ತಾಳದ ಒಂದನೇ ಅಕ್ಷರ,  ಎರಡನೇ ಮತ್ತು ಮೂರನೇ ಅಕ್ಷರದಿಂದ ಪದ್ಯಗಳನ್ನು ಎತ್ತುಗಡೆ ಮಾಡುವ ಅಪರೂಪದ ಕ್ರಮ ಗಮನಸೆಳೆಯಿತು. ಬಣ್ಣದ ವೇಷವೊಂದು ರಂಗ ಪ್ರವೇಶ ಮಾಡುವಾಗ ತೆರೆಯ ಹಿಂದೆ ಕುಣಿಯವ ಕುಣಿತದ ವೈವಿಧ್ಯಗಳನ್ನು ತೆರೆಯಿಲ್ಲದೆ ಪ್ರಸ್ತುತಪಡಿಸಲಾಗಿತ್ತು.
              ಪ್ರಾತ್ಯಕ್ಷಿಕೆ ಮುಗಿದು ವಾರ ಕಳೆದರೂ ಪ್ರಸಾದ ಬಲಿಪರ ಹಾಡುಗಳು ನನ್ನೊಳಗೆ ಯಾಕೆ ರಿಂಗಣ ಇನ್ನೂ ಹಾಕುತ್ತಿವೆ? ಹೀಗೆಂದರೆ ಅಹಂಕಾರವಾದೀತೇನೋ? ರಂಗದಲ್ಲಿ ಪಾತ್ರಗಳ ಕಾಲಪ್ರಮಾಣದ ನಡೆಗಳೇ ರಸಾವಿಷ್ಕಾರದ ಮೂಲಬೀಜ ಎಂದರೆ ತಪ್ಪಾದೀತೇ? ರಸಗಳಿಗನುಗುಣವಾದ ನಡೆಗಳನ್ನು ಪದ್ಯಗಳೇ ಅಜ್ಞಾತವಾಗಿ ಸೂಚಿಸುವಾಗ ಅದನ್ನು ನೋಡುವ ಸೂಕ್ಷ್ಮ ಮನಸ್ಸನ್ನು ಸಜ್ಜುಗೊಳಿಸಬೇಕಾದ ಹಾದಿಯಲ್ಲಿದ್ದೇವೆ. ರಸಗಳನ್ನು ಕಟ್ಟಿಕೊಡದ ಪಾತ್ರವು ರಂಗದಲ್ಲಿ ವಿಜೃಂಭಿಸಬಹುದು. ಚಪ್ಪಾಳೆಗಳ ಮಾಲೆಗಳನ್ನು ಪಡೆಯಬಹುದು. ಅಭಿಮಾನಿಗಳ ಸಂತೋಷವನ್ನು ಇಮ್ಮಡಿಗೊಳಿಸಬಹುದು. ಆದರೆ ಯಕ್ಷಗಾನದ ಒಲವು ಗಳಿಸಲಾರದು.

(ಚಿತ್ರ : ಮುರಳಿ ರಾಯರಮನೆ)
ಪ್ರಜಾವಾಣಿ/ದಧಿಗಿಣತೋ/19-12-2015


Wednesday, December 16, 2015

ಕಾಲಕ್ಕೆ ಸವಾಲೊಡ್ಡಿದ ಮೇಳದ ಬದುಕು


            ಯಕ್ಷಗಾನದ ಮೇಳವೊಂದರ ಯಜಮಾನನಿಗೆ ಸಾಮಾಜಿಕವಾಗಿ ದೊಡ್ಡ ಸ್ಥಾನಮಾನ. ಶತಮಾನದೀಚೆಗೆ ಸಾಗಿಬಂದ ಹಲವು ಮೇಳಗಳು ಹೊಸ ಇತಿಹಾಸಗಳನ್ನು ಸೃಷ್ಟಿಸಿವೆ. ಪ್ರಬುದ್ಧ ಕಲಾವಿದರನ್ನು ರೂಪುಗೊಳಿಸಿವೆ.  ಕಲೆಯನ್ನು ಸಮೃದ್ಧಗೊಳಿಸಿವೆ. ಆದರೆ ಯಜಮಾನನ ಮುಖದಲ್ಲಿ ನಗು ಬಿಡಿ, ಕಿರುನಗುವನ್ನು ಮೂಡಿಸಿದ ಮೇಳಗಳು ತೀರಾ ವಿರಳ. ಕೀರ್ತಿಶೇಷ ಡಾ.ಶೇಣಿಯವರು ಒಂದೆಡೆ ಉಲ್ಲೇಖಿಸಿದ್ದರು, "ಮೇಳಗಳ ಯಜಮಾನನಾದರೆ ಬದುಕಿನ ಸುಖ ನೆಮ್ಮದಿಯು ಬಲಿಯಾದಂತೆ!" ಅವರ ಸ್ವಾನುಭವ ಕೂಡಾ.
           ಅರುವತ್ತೈದರ ಕೆ.ಎಚ್.ದಾಸಪ್ಪ ರೈಗಳ ಕಲಾ ಯಾನ ಮತ್ತು ಮೇಳದ ಅನುಭವಗಳಿಗೆ ಕಿವಿಯಾಗುವ ಸಂದರ್ಭ ಒದಗಿತ್ತು. ಅವರು ಮಾತು ನಿಲ್ಲಿಸಿದಾಗ ನನಗನ್ನಿಸಿತು - ಅಬ್ಬಾ.. ಗೆಲುವಿನ ರೇಖೆ ಯಾವಾಗಲೂ ಚಿಕ್ಕದು! ಕಲಾವಿದನಾಗಿ ರೈಗಳದು ದೊಡ್ಡ ಹೆಸರು. ಕೀರ್ತಿಕಾಮಿನಿ ಅಪ್ಪಿದ, ಒಪ್ಪಿದ ಕಾಲಘಟ್ಟವು ಅವರ ಪಾತ್ರ ವೈಭವಗಳ ದಿನಮಾನಗಳು. ತುಳು, ಕನ್ನಡ ಎರಡರಲ್ಲೂ ಸಮಾನವಾದ ಛಾಪು ಒತ್ತಿದ ದಾಸಪ್ಪ ರೈಗಳ ಮೇಳದ ಬದುಕು ಮೇಲ್ನೋಟಕ್ಕೆ ಸುಂದರ ಹೂ. ಆ ಹೂವಿನಲ್ಲಿ ಮಾಧುರ್ಯವಿತ್ತು. ಸೆಳೆತವಿತ್ತು. ಉತ್ತಮ ನೋಟವಿತ್ತು. ಆದರೆ ತಾಳಿಕೆ ಕಡಿಮೆ.
           1965ನೇ ಇಸವಿ. ಮಂಗಳೂರಿನ ನೆಹರೂ ಮೈದಾನಿನಲ್ಲಿ ಕರ್ನಾಟಕ ಯಕ್ಷಗಾನ ನಾಟಕ ಸಭಾದ ಸೀನ್ಸೀನರಿ ಯಕ್ಷಗಾನ. ಟೆಂಟ್ ಬದಲಿಗೆ ಮುಳಿಹುಲ್ಲಿನ ಸೂರು. ದಿನಂಪ್ರತಿ ಆಟ. ಕಲಾವಿದ ಕೆ.ಎನ್.ಬಾಬು ರೈಗಳ ಮೂಲಕ ಬಣ್ಣದ ನಂಟು. 'ಕಾಂತಾಬಾರೆ ಬೂದಾಬಾರೆ' ಪ್ರಸಂಗದ ಮೂಲಕ ರಂಗಪ್ರವೇಶ. ಹಿರಿಯ ಕಲಾವಿದರ ಕೋಪ-ತಾಪ, ಪ್ರಸನ್ನತೆ-ಪ್ರಶಾಂತತೆ, ಸಿಡುಕು-ಮಂದಹಾಸಗಳ  ಜತೆ ಬದುಕು. ಸುಮಾರು ಎಂಟು ವರುಷ ತಿರುಗಾಟ. ಆಗ ಮೂರು ದಿವಸಕ್ಕೆ ಮೂರು ರೂಪಾಯಿ ಸಂಬಳ!
           ನಾಲ್ಕು ವರುಷ ಕೌಟುಂಬಿಕ ಏಳುಬೀಳುಗಳಿಂದಾಗಿ ಮೇಳದ ಜೀವನಕ್ಕೆ ವಿದಾಯ. ಬದುಕಿಗಾಗಿ ಹೋಟೆಲ್ ಆರಂಭ. ಜತೆಗೆ ರಾಜಕೀಯ ಸ್ಪರ್ಶ. ಸಾರ್ವಜನಿಕ ಒಡನಾಟ. ನಿತ್ಯ ಓಡಾಟ-ತಿರುಗಾಟ. ಹೋಟೆಲ್ ವ್ಯಾಪಾರ ಕೈಕೊಟ್ಟಿತು. 1977ರ ಬಳಿಕ ಪುನಃ ಮೇಳದ ಸಹವಾಸ. ವೇಷಗಾರಿಕೆಯೊಂದಿಗೆ ಹೆಚ್ಚುವರಿಯಾಗಿ ವ್ಯವಸ್ಥಾಪಕ ಜವಾಬ್ದಾರಿ. ವೈಯಕ್ತಿಕ ಪ್ರತಿಷ್ಠೆ, ಭಿನ್ನಾಭಿಪ್ರಾಯ, ಮತ್ಸರ ಮೊದಲಾದ ಸಾಮಾಜಿಕ ಸಮಸ್ಯೆಗಳಿಂದ ರೋಸಿ ಮೇಳ ಬಿಟ್ಟರು. ಮುಂದೆ ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳದಿಂದ ತಿರುಗಾಟ. ಮೇಳದ ಜವಾಬ್ದಾರಿಯ ಭಾರ. ದಿನಗಳು ಸರಿಯುತ್ತಿದ್ದಂತೆ ಸ್ವಂತ ಮೇಳ ಮಾಡುವ ಯೋಚನೆಗೆ ಶ್ರೀಕಾರ.
              ಸ್ವಂತದ್ದಾದ ಕುಂಬಳೆ ಮೇಳದ ಕನಸು. ಕೈಯಲ್ಲಿದ್ದ ಮೂಲ ಬಂಡವಾಳ ನಾಲ್ಕಂಕೆಯನ್ನು ಮೀರದ ಮೊತ್ತ. ಅಭಿಮಾನಿಗಳ ಸಹಕಾರ. ಬ್ಯಾಂಕಿನ ಸಾಲ. ಮೇಳದ ವೈಭವ ಸಂಪನ್ನತೆಯು ನಾಲ್ದೆಸೆ ಪ್ರಚಾರವಾಯಿತು. ಇನ್ನೇನು ಕ್ಲಿಕ್ ಆಯಿತು ಎನ್ನುವಾಗ ಚೋರಶಿಖಾಮಣಿ 'ರಿಪ್ಪನ್ ಚಂದ್ರನ್ ಕಾಟ' ಶುರುವಾಗಬೇಕೇ? ಎಲ್ಲೆಲ್ಲೂ ಗೊಂದಲ. ಟೆಂಟ್ ಊರಲಾಗದ ಸ್ಥಿತಿ. ಹೇಗೋ ಮೇಳದ ನಿಭಾವಣೆ. ಮೊದಲ ವರುಷದ ತಿರುಗಾಟ ಮುಗಿಯಿತು.
            ಎರಡನೇ ವರುಷದಿಂದ ಮೇಳವು ದಾಸಪ್ಪ ರೈಗಳಿಗೆ ಅನುಕೂಲವಾಗಿ ವರ್ತಿಸಲಿಲ್ಲ. ಅಪಘಾತಗಳ ಮಾಲೆ. ಆರ್ಥಿಕ ಕಷ್ಟ-ನಷ್ಟ. ಮೇಳ ನಿರ್ವಹಣೆಗಾಗಿ ಕೂಡಿಟ್ಟ ಹಣ ಕರಗಿತು. "ನನ್ನ ಹೆಂಡತಿಯ ಕುತ್ತಿಗೆಯಲ್ಲಿ ನಾಲ್ಕೂವರೆ ಪವಿನ ಚಿನ್ನದ ಕರಿಮಣಿ ಸರ ಇತ್ತು. ಗಂಡ ಇರುವಲ್ಲಿಯವರೆಗೆ ಅದನ್ನು ತೆಗೆಯುವುದಿಲ್ಲ ಎಂದು ಹಠ ಹಡಿದಿದ್ದಳು. ಅವಳನ್ನು ಸಮಾಧಾನ ಪಡಿಸಿ ತೆಗೆದುಕೊಂಡು ಬಂದು ಹಣದ ವ್ಯವಸ್ಥೆ ಮಾಡಿಕೊಂಡೆ. ಅವಳಿಗೆ ಮುನ್ನೂರು ರೂಪಾಯಿಗಳ ಸರ ತೆಗೆದುಕೊಟ್ಟೆ," ಎನ್ನುವಾಗ ದಾಸಪ್ಪಣ್ಣದ ಕಣ್ಣಲ್ಲಿ ಕಣ್ಣೀರು ಜಿನುಗಿತು.
             ಏನು ಮಾಡಿದರೂ ಕಷ್ಟ ಪರಂಪರೆಗೆ ನಿಲುಗಡೆಯಿರಲಿಲ್ಲ. ಮನೆಯಲ್ಲಿ ಊಟಕ್ಕೆ ತತ್ವಾರವಾಯಿತು. "ಆಟದ ಯಜಮಾನನ ಮನೆಯಾಗಿದ್ದ ನನ್ನ ಮನೆಯಲ್ಲಿ ಎಲ್ಲರಿಗೂ ಊಟ ಕೊಡುತ್ತಿದ್ದೆ. ಆದರೆ ಆ ದಿವಸಗಳಲ್ಲಿ ನನಗೇ ಊಟಕ್ಕೆ ಗತಿಯಿಲ್ಲದಾಯ್ತು. ಹಾಲು ತರಲು ತೊಂದರೆಯಾಗಿ ಹಾಲಿನ ಹುಡಿ ಬಳಸುತ್ತಿದ್ದೆ..." ಸಂದು ಹೋದ ದಿವಸಗಳನ್ನು ನೆನಪಿಸಿಕೊಳ್ಳುತ್ತಾರೆ. ಅರುವತ್ತೈದು ಮಂದಿ ಸದಸ್ಯರಿದ್ದ  ಮೇಳದಲ್ಲಿ ಸಂಖ್ಯೆ ಏಳಕ್ಕೆ ಇಳಿದಾಗ ಮೇಳ ನಿಲ್ಲಿಸುವ ಯೋಚನೆಗೆ ಕಾಲವೂ ಸ್ಪಂದಿಸಿತು. ಹೆಸರಿನೊಂದಿಗೆ 'ಮೇಳದ ಯಜಮಾನ' ಎನ್ನುವ ಹೆಸರು ಹೊಸೆಯಿತಷ್ಟೇ ವಿನಾ ಬದಕು ಹಸನಾಗಲಿಲ್ಲ.
             ಹದಿನೆಂಟು ವರುಷ ಕರ್ನಾಟಕ ಮೇಳ, ಎಂಟು ವರುಷ ಕದ್ರಿ ಮೇಳ, ಆರು ವರುಷ ಸ್ವಂತದ್ದಾದ ಕುಂಬಳೆ ಮೇಳ, ಹತ್ತು ವರುಷ ಮಂಗಳಾದೇವಿ ಮೇಳ.. ಹೀಗೆ ಸುಮಾರು ನಲವತ್ತೆರಡು ವರುಷಗಳ ಸೇವೆ. ಪ್ರಕೃತ ನಿವೃತ್ತ. ಕೋಟಿ ಚೆನ್ನಯ್ಯ ಪ್ರಸಂಗದ 'ಕೋಟಿ', ಕಾಂತಾಬಾರೆ, ದೇವುಪೂಂಜ, ಕೋಡ್ದಬ್ಬು, ಕೋಡ್ಯರಾಳ್ವ... ಹೀಗೆ ತುಳು ಪ್ರಸಂಗಗಳ ಪ್ರಮುಖ ಪಾತ್ರಗಳು ರೈಗಳಲ್ಲಿ ಮರುಹುಟ್ಟು ಪಡೆದಿವೆ. 2014ರಲ್ಲಿ ತನ್ನ ವೃತ್ತಿ ಬದುಕಿನ ಚಿನ್ನದ ಹಬ್ಬವನ್ನು ಪುತ್ತೂರಿನಲ್ಲಿ ಅದ್ದೂರಿಯಾಗಿ ಅಚರಿಸಿದ್ದಾರೆ. ಆ ಸಂದರ್ಭದಲ್ಲಿ ಜೀವನಗಾಥೆ 'ಸ್ವರ್ಣ ಯಕ್ಷದಾ' (ಸಂ.ರಾಜೇಶ್ ಬೆಜ್ಜಂಗಳ) ಕೃತಿಯು ಅನಾವರಣಗೊಂಡಿತ್ತು.
           ದಾಸಪ್ಪಣ್ಣದ ಕಲಾ ಜೀವನಕ್ಕೆ ಕಿವಿಯಾಗುತ್ತಿದ್ದಂತೆ ನಳ, ಹರಿಶ್ಚಂದ್ರಾದಿಗಳ ಕತೆ ನೆನಪಾಯಿತು. ಸತ್ಯಕ್ಕಾಗಿ ಈ ಮಹಾತ್ಮರು ಎಷ್ಟೊಂದು ಕಷ್ಟ ಪಟ್ಟರು ಅಲ್ವಾ. ಆದರೆ ಬದುಕು ಮತ್ತು ಕಲೆಯ ಉತ್ಕರ್ಷಕ್ಕಾಗಿ ಪಣತೊಟ್ಟ ದಾಸಪ್ಪಣ್ಣನ ಪಾಲಿಗೆ ಕಾಲ ಎಷ್ಟು ಕಟುವಾಗಿತ್ತು! ಕಷ್ಟದ ಬದುಕನ್ನು ಎದೆಯುಬ್ಬಿಸಿ ಸೈರಿಸಿ ಕಾಲವೇ ನಿಬ್ಬೆರಗಾಗುವಂತೆ ಮಾಡಿದ ದಾಸಪ್ಪ ರೈಗಳು ಹಲವು ಪುರಸ್ಕಾರ, ಸಂಮಾನ, ಪ್ರಶಸ್ತಿಗಳಿಂದ ಪುರಸ್ಕೃತರು.
            ಈಗ 'ಬೊಳ್ಳಿಂಬಳ ಪ್ರಶಸ್ತಿ'ಯ ಸರದಿ. ಪ್ರಶಸ್ತಿಯನ್ನು 'ಪಾಣಾಜೆ ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ'ವು ಆಯೋಜಿಸಿದೆ. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್.ಓಕುಣ್ಣಾಯರ ಹಿರಿತನದಲ್ಲಿ ನೀಡುವ ಈ ಪ್ರಶಸ್ತಿಯು ದಶಂಬರ 13ರಂದು ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ ನಡೆದ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 'ಶ್ರೀ ಆಂಜನೇಯ 47' ಸಮಾರಂಭದಲ್ಲಿ ರೈಗಳಿಗೆ ಪ್ರದಾನ ಮಾಡಲಾಯಿತು.  
(ಚಿತ್ರ : ಫೇಸ್ ಬುಕ್)

Friday, December 4, 2015

'ಪಾತಾಳ ಪ್ರಶಸ್ತಿ' ಪುರಸ್ಕೃತ ಹಳುವಳ್ಳಿ ಗಣೇಶ ಭಟ್


           2003. ಮೂಡುಬಿದಿರೆಯ ಸಾರ್ವಜನಿಕ ಬಯಲಾಟ ಸಮಿತಿಯ ಐವತ್ತನೇ ವರುಷದ ಶ್ರೀ ಕಟೀಲು ಮೇಳದ ಆಟ. ಸುವರ್ಣ ಸಂಭ್ರಮದ ನೆನಪಿಗಾಗಿ 'ಚಿನ್ನದ ಕಿರೀಟ' ಸಮರ್ಪಣೆ. ಮೇಳದಲ್ಲಿ ಹಳುವಳ್ಳಿ ಗಣೇಶ ಭಟ್ಟರು ಶ್ರೀದೇವಿ ಪಾತ್ರಧಾರಿ. ಮೊದಲ ಬಾರಿಗೆ ಚಿನ್ನದ ಕಿರೀಟವನ್ನು ತೊಟ್ಟು ಪಾತ್ರವನ್ನು ಮಾಡಿದ ಹಿರಿಮೆ ಇವರದು. ಆ ದಿವಸವನ್ನು ಜ್ಞಾಪಿಸಿಕೊಂಡಾಗ ಭಟ್ಟರು ಭಾವುಕರಾಗುತ್ತಾರೆ. ಪುಳಕಗೊಳ್ಳುತ್ತಾರೆ. ಬದುಕಿನ ಮಹೋನ್ನತ ಕ್ಷಣವೆಂದು ಖುಷಿ ಪಡುತ್ತಾರೆ.
            ಹಳುವಳ್ಳಿಯವರ ಶ್ರೀದೇವಿ ಪಾತ್ರವು ಬಿಗುವನ್ನು ಬಿಟ್ಟುಕೊಡದ, ಗಾಂಭೀರ್ಯವನ್ನು ಕಾಪಾಡಿಕೊಂಡ ಅಭಿವ್ಯಕ್ತಿ. ಅಗ್ಗದ ಪ್ರಚಾರಕ್ಕಾಗಿ ಪಾತ್ರವನ್ನು ಹಗುರ ಮಾಡುವ ಜಾಯಮಾನದವರಲ್ಲ. ಪ್ರಸಂಗದಲ್ಲಿ ದೇವಿ ಉದ್ಭವದ ಸಂದರ್ಭದಲ್ಲಿ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸುವ ಹಲವಾರು ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಕಲಾಭಿಮಾನಿಗಳ ಭಾವನೆಗೆ ಎಂದೂ ಧಕ್ಕೆ ತಂದವರಲ್ಲ. ಇಪ್ಪತ್ತು ವರುಷದ ಕಟೀಲು ಮೇಳದ ವ್ಯವಸಾಯದಲ್ಲಿ ಶ್ರೀ ದೇವಿ ಮಹಾತ್ಮೆ ಮತ್ತು ಶ್ರೀದೇವಿ ಲಲಿತೋಪಾಖ್ಯಾನ ಪ್ರಸಂಗವಿದ್ದಾಗ ನಾನು ಎಂದೂ ರಜೆ ಮಾಡಿದ್ದಿಲ್ಲ, ಅವರ ವೃತ್ತಿಬದ್ಧತೆಗೆ ಮಾದರಿಯಿದು.
           ಶ್ರೀ ಧರ್ಮಸ್ಥಳ ಮೇಳದಿಂದ ಬಣ್ಣದ ಬದುಕು ಅರಂಭ. ಒಂದು ವರುಷದ ತಿರುಗಾಟದ ಬಳಿಕ ಎರಡು ದಶಕ ಸುಂಕದಕಟ್ಟೆ ಮೇಳದ ಅನುಭವ. ನಂತರದ ಎರಡು ದಶಕ ಶ್ರೀಕಟೀಲು ಮೇಳದ ವ್ಯವಸಾಯ. ಸುಂಕದಕಟ್ಟೆ ಮೇಳದಲ್ಲಿ ವಿವಿಧ ಪಾತ್ರಗಳ ನಿರ್ವಹಣೆ. ಸ್ತ್ರೀ ಪಾತ್ರದಿಂದ ಬಣ್ಣದ ವೇಷದ ವರೆಗಿನ ಅವಕಾಶ. ಮೇಳದಲ್ಲಿದ್ದ ಭಾಗವತ ಪುತ್ತಿಗೆ ತಿಮ್ಮಪ್ಪ ರೈಗಳು ಇವರಿಗೆ ವಿವಿಧ ಬಗೆಯ ಪಾತ್ರಗಳನ್ನು ನೀಡಿ ಬೆಳೆಸಿದ್ದಾರೆ. ಹಾಗಾಗಿ ಎಲ್ಲಾ ಬಗೆಯ ವೇಷಗಳು ಹಳುವಳ್ಳಿಯವರಲ್ಲಿ ಗೆದ್ದಿವೆ. ಇಂದು ಶ್ರೀ ದೇವಿ ಪಾತ್ರ ಮಾಡಿದರೆ, ನಾಳೆ ಶುಂಭನಿಗೂ ಸಿದ್ಧ, ನಾಡಿದ್ದು ಹೆಣ್ಣು ಬಣ್ಣಕ್ಕೂ ಸೈ!
            ಗಣೇಶ ಭಟ್ಟರು ಓದಿದ್ದು ಎಸ್.ಎಸ್.ಎಲ್.ಸಿ. ವರೆಗೆ. ಬಾಲ್ಯದಲ್ಲೇ ಯಕ್ಷಗಾನದ ತುಡಿತ. ತನ್ನೂರು ಕಳಸಕ್ಕೆ ಬಂದಿದ್ದ ಧರ್ಮಸ್ಥಳ ಮೇಳದತ್ತ ಸೆಳೆತ. ಪಾತಾಳ ವೆಂಕಟ್ರಮಣ ಭಟ್, ಕೆ.ಗೋವಿಂದ ಭಟ್, ಕುಂಬಳ ಸುಂದರ ರಾಯರ ವೇಷಗಳತ್ತ ಆಸಕ್ತ. ಮೇಳದ ಕಲಾವಿದನಾಗಬೇಕೇಂಬ ಹಪಾಹಪಿ. ತೆಂಕುತಿಟ್ಟಿನ ನಾಟ್ಯವನ್ನು ಗೋವಿಂದ ಭಟ್ ಮತ್ತು ಪಡ್ರೆ ಚಂದು ಅವರಲ್ಲಿ ಕಲಿತರೆ, ಬಡಗಿನ ನಾಟ್ಯಕ್ಕೆ ವಿಶ್ವನಾಥ ಜೋಯಿಸ್ ಗುರು. ಎರಡೂ ತಿಟ್ಟುಗಳ ಅನುಭವ. ಒಂದು ತಿಟ್ಟಿನ ಗತಿಯನ್ನು ಇನ್ನೊಂದು ತಿಟ್ಟಿಗೆ ಮಿಳಿತ ಗೊಳಿಸದ ಎಚ್ಚರ.
               ಸ್ತ್ರೀವೇಷ, ಪುಂಡು ವೇಷ, ರಾಜ ವೇಷ, ಬಣ್ಣದ ವೇಷ, ಪೋಷಕ ಪಾತ್ರಗಳು... ಹೀಗೆ ಯಕ್ಷಗಾನದ ಎಲ್ಲಾ ವಿಧದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶ್ರೀರಾಮ, ಕೃಷ್ಣ, ವಿಷ್ಣು, ಸಂಜಯ, ಶುಂಭ, ದಶರಥ, ದಾಕ್ಷಾಯಿಣಿ, ಕಯಾದು, ಅಂಬೆ, ಕಿನ್ನಿದಾರು, ಚಂದ್ರಮತಿ... ಹೀಗೆ ಭಿನ್ನ ಸ್ವಭಾವದ ಪಾತ್ರಗಳು. ಶ್ರೀ ದೇವಿ ಮಹಾತ್ಮೆಯು 'ಶ್ರೀದೇವಿ' ಪಾತ್ರವು ಅವರಿಗೆ ತಾರಾಮೌಲ್ಯ ತಂದಿತ್ತ ಪಾತ್ರ.
             ಮೇಳದ ಕಲಾವಿದನಾಗಬೇಕೆಂಬು ಆಸೆಯಿತ್ತು. ಅದು ಈಡೇರಿದೆ. ಈಗ ವಯಸ್ಸಾಯಿತು. ಇನ್ನು ಸ್ತ್ರೀಪಾತ್ರ ಮಾಡಬಾರದು. ನಾನೇ ಹಿಂದೆ ಸರಿದೆ. ಪ್ರೇಕ್ಷಕರು ಮೊದಲು ನನ್ನ ಶ್ರೀದೇವಿ ಪಾತ್ರವನ್ನು ಮೆಚ್ಚಿಕೊಂಡಿದ್ದರು, ಒಪ್ಪಿಕೊಂಡಿದ್ದರು. ಅವರ ಅಭಿಮಾನವು ಶಾಶ್ವತವಾಗಿರಬೇಕು, ಎನ್ನುತ್ತಾರೆ.
               "ಕಳಸದ ಹಳುವಳ್ಳಿಯ ತಂಬಿಕುಡಿಗೆಯ ಇವರ ಮನೆ ಕಲಾವಿದರಿಗೆ ಆಶ್ರಯ. ಆ ಭಾಗಕ್ಕೆ ಯಾವುದೇ ಮೇಳ ಬರಲಿ, ವಾಸ್ತವ್ಯಕ್ಕೆ ಇವರದು ತೆರೆದ ಮನೆ-ಮನ. ಆಟ, ಕೂಟಗಳಿಗೆ ಮೊದಲಾದ್ಯತೆ. ಈ ಮನೆಯಲ್ಲಿ ಊಟ ಮಾಡದೇ ಇದ್ದ ಕಲಾವಿದರು ಕಡಿಮೆ. ಇವರ ಚಾವಡಿ ತುಂಬಾ ಕಂಬಳಿ, ಹಾಸಿಗೆ. ಹೊತ್ತು ಹೊತ್ತಿಗೆ ಮೃಷ್ಟಾನ್ನ ಭೋಜನ, ಕಳೆದ ಕಾಲದ ದಿನಮಾನವನ್ನು ನೆನಪಿಸಿಕೊಳ್ಳುತ್ತಾರೆ" ಪಾತಾಳ ವೆಂಕಟ್ರಮಣ ಭಟ್ಟರು.
                 ಐವತ್ತೊಂಭರ ಹರೆಯದ ಗಣೇಶ ಭಟ್ಟರು ಯಕ್ಷಗಾನದೊಂದಿಗೆ ಕೃಷಿಯೂ ಪ್ರಿಯ ವೃತ್ತಿ. ತನ್ನ ಅನುಪಸ್ಥಿತಿಯಲ್ಲಿ ಮಡದಿ ಸೀತಾಲಕ್ಷ್ಮೀ ಹೆಗಲೆಣೆ. ಶಶಿಧರ್, ಶಾಂಭವಿ - ಇಬ್ಬರು ಮಕ್ಕಳು. ಮೇಳದ ತಿರುಗಾಟ, ಪಾತ್ರಕ್ಕೆ ಸಿಕ್ಕ ಜನ ಸ್ವೀಕೃತಿ, ತಾರಾಮೌಲ್ಯಗಳಿಂದ ಸಂತೃಪ್ತ.  ಅನ್ನ, ಆಶ್ರಯ ನೀಡಿದ ಮೇಳಕ್ಕೆ ನಿಷ್ಠನಾದ ಹಳುವಳ್ಳಿಯವರು ನೂರಾರು ಸಂಮಾನ, ಪುರಸ್ಕಾರಗಳನ್ನು ಪಡೆದಿದ್ದಾರೆ. ಈಗ 'ಪಾತಾಳ ಪ್ರಶಸ್ತಿ' ಅರಸಿ ಬಂದಿದೆ.
             ದಶಂಬರ್ 5ರಂದು ಸಂಜೆ 7 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಧರ್ಮದಶರ್ಿ ಹರಿಕೃಷ್ಣ ಪುನರೂರು ಅಧ್ಯಕ್ಷರಾಗಿರುವ 'ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ-ಎಡನೀರು' ಪ್ರಶಸ್ತಿಯನ್ನು ಆಯೋಜಿಸಿದೆ.


Monday, November 23, 2015

ಬದುಕಿನಲ್ಲಿ ಶುದ್ಧತೆಯನ್ನು ಕಾಪಾಡಿದ ಹಾಸ್ಯಗಾರ - ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ


             ಸುಮಾರು 1998ನೇ ಇಸವಿ ಇರಬೇಕು. ಭಾಸ್ಕರ ರೈ ಕುಕ್ಕುವಳ್ಳಿಯವರ ಸಂಯೋಜನೆಯ 'ಪಾಪಣ್ಣ ವಿಜಯ' ಪ್ರಸಂಗದ ಪ್ರದರ್ಶನ. ಬಾಳಪ್ಪ ಶಟ್ಟರ 'ಪಾಪಣ್ಣ' ಪಾತ್ರ.  ಪೂರ್ವಾರ್ಧದ ಗುಣಸುಂದರಿ ಕೀರ್ತಿಶೇಷ ಕಾವೂರು ಕೇಶವನವರು. ಉತ್ತರಾರ್ಧದ ಪಾತ್ರವನ್ನು ನಾನು ನಿರ್ವಹಿಸಬೇಕಾದ ಸಂದರ್ಭ ಒದಗಿತ್ತು. ಆಗ ಚೌಕಿಯಲ್ಲಿ ಹೇಳಿದ ಮಾತು ನೆನಪಿದೆ :
             "ಪಾತ್ರದ ಸ್ವಭಾವವನ್ನು ಸಮಾಜದಿಂದಲೇ ಕಲಿತುಕೊಳ್ಳಬೇಕು. ನಮ್ಮ ಮಧ್ಯೆ ಇರುವ ಪಾಪಣ್ಣ-ಗುಣಸುಂದರಿ ಪಾತ್ರಗಳಂತಹ ಸ್ವಭಾವದವರನ್ನು ನೋಡಬೇಕು. ಅದರಂತೆ ಚಿತ್ರಿಸಬೇಕು. ನೋಡಿದ ಚಿತ್ರ ಏನಿದೆಯೋ ರಂಗದಲ್ಲಿ ಅದೇ ನಾವಾಗಬೇಕು. ಸಮಾಜವನ್ನು ನೋಡದೆ ಅಭಿವ್ಯಕ್ತಿ ಹೇಗೆ ಸಾಧ್ಯ. ಎಲ್ಲಾ ರಸಗಳು ನಮ್ಮ ನಡುವೆಯೇ ಇದೆ. ಅದರ ಜ್ಞಾನವಿದ್ದರೆ ಅಭಿವ್ಯಕ್ತಿ ಸುಲಭ."
             'ಪಾಪಣ್ಣ' ಪಾತ್ರವನ್ನು ಜ್ಞಾಪಿಸಿಕೊಂಡರೆ ಸಾಕು. ಪೆರುವಡಿ ನಾರಾಯಣ ಭಟ್ ಮತ್ತು ಬಾಳಪ್ಪರು ನೆನಪಾಗುತ್ತಾರೆ. ರಂಗದಲ್ಲಿರುವುದು ಪಾತ್ರವೆಂಬುದನ್ನು ಪ್ರೇಕ್ಷಕರು ಮರೆಯುವಂತಹ ತಾಜಾ ಅಭಿವ್ಯಕ್ತಿ. ವರ್ತಮಾನದ ರಂಗವನ್ನೊಮ್ಮೆ ನೋಡಿ. ಹಾಸ್ಯಗಾರರು ನಿರ್ವಹಿಸುವ ಹಾಸ್ಯದ ಹೊರತಾದ ಪಾತ್ರಗಳೆಲ್ಲವೂ ಹಾರಿಬಿದ್ದು ನಗುತ್ತಿವೆ! ಆದರೆ ಈ ಇಬ್ಬರು ಮಹನೀಯರ 'ನಾರದ, ಬ್ರಹ್ಮ, ಮುನಿಗಳು, ವಿಪ್ರರು...'ಪಾತ್ರಗಳೆಲ್ಲವೂ ನಿಜದ ಹತ್ತಿರಕ್ಕೆ ಬರುವಂತಹುಗಳು.
            ಬಾಳಪ್ಪ ಶೆಟ್ಟರು ಗತಿಸಿ (ಜೂನ್ 2005) ದಶಕವಾಯಿತು. ಎಂಭತ್ತು ವರುಷಗಳ ತುಂಬು ಬದುಕು. ಸುಮಾರು ನಾಲ್ಕು ದಶಕಗಳ ಕಾಲ ಬಣ್ಣದ ಬದುಕು. ಹಾಗೆಂತ ಅವರಿಗೆ ಬದುಕು ಬಣ್ಣವಲ್ಲ, ಬದ್ಧತೆಯ ಮೂಟೆ. ಸ್ಪಷ್ಟ ನಿಲುವಿನ ಜೀವನ. ಹಗುರ ಮಾತನ್ನಾಡದೆ, ತಾನೂ ಹಗುರವಾಗದ ಅವರ ನೆನಪು ಅದು ಮಾಸದ ನೆನಪು. ಮಾನದ ನೆನಪು.
           1930ರ ಆಜೂಬಾಜು. ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ದಿ.ಕವಿಭೂಷಣ ಕೆ.ಪಿ.ವೆಂಕಪ್ಪ ಶೆಟ್ಟರ ಯಕ್ಷಾಳ್ತನ. ಬಾಲಸುಬ್ರಹ್ಮಣ್ಯ ಯಕ್ಷಗಾನ ಸಂಘದ ಮೂಲಕ ಶಿಷ್ಯರ ರೂಪೀಕರಣ. ಕವಿಭೂಷಣರ ಇನ್ನೋರ್ವ ಶಿಷ್ಯ ದಿ.ಕೋರ್ಮಂಡ ಮಂಜಪ್ಪ ರೈ ಅವರೊಂದಿಗೆ ಬಾಳಪ್ಪ ಶೆಟ್ಟರ ಸ್ನೇಹ. ಯಕ್ಷಗಾನ ಅರ್ಥಗಾರಿಕೆಗೆ ಶ್ರೀಕಾರ. ಅನುಭವ ಪಕ್ವತೆಗೆ ಗಟ್ಟಿಗರ ಒಡನಾಟ. ಕುಂಬಳೆಯ ಕಾವು ಕಣ್ಣರಿಂದ ನಾಟ್ಯಾಭ್ಯಾಸ.
             ಬೆಟ್ಟಂಪಾಡಿಯಲ್ಲಿ ಮಧೂರು ನಾರಾಯಣ ಹಾಸ್ಯಗಾರರ ಕೂಡ್ಲು ಮೇಳವು ಟೆಂಟ್ ಊರಿತ್ತು.  ಬಾಳಪ್ಪ ಶೆಟ್ಟರು ಆಟ ನೋಡಲು ಹೋಗಿದ್ದರು. ಹಾಸ್ಯಗಾರರ ಒತ್ತಾಯಕ್ಕೆ ಹಾಸ್ಯ ಪಾತ್ರವೊಂದನ್ನು ಮಾಡಿದರು. ಪ್ರತಿಭೆಯನ್ನು ಗುರುತಿಸಿದ ಹಾಸ್ಯಗಾರರು ಮೇಳಕ್ಕೆ ಸೇರಿಸಿಕೊಂಡರು. ಹಾಸ್ಯ, ಹಾಸ್ಯೇತರ ಪಾತ್ರಗಳ ನಿರ್ವಹಣೆ. ಮುಂದೆ ಮೂಲ್ಕಿ ಮೇಳಕ್ಕೆ ಜಿಗಿತ. ಕಾಲಮಿತಿಯ ವೈರಾಗ್ಯ(!)ದ ಬಳಿಕ ಪುನಃ ಕೂಡ್ಲು ಮೇಳದಿಂದ ವ್ಯವಸಾಯ. ಅಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರ ಒಡನಾಟ. ಮುಂದೆ ಸುರತ್ಕಲ್, ಇರಾ, ಕರ್ನಾಟಕ ಕಲಾವಿಹಾರ.. ಮೇಳಗಳ ತಿರುಗಾಟದ ಫಲವಾಗಿ ಹೆಸರಿನೊಂದಿಗೆ 'ಹಾಸ್ಯಗಾರ' ಹೊಸೆಯಿತು.
            ಬಡಗುತಿಟ್ಟಿನ ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲೂ ಬಾಳಪ್ಪರ ತಿರುಗಾಟ ಮುಂದುವರಿಯಿತು.  ಮಲ್ಪೆ ಶಂಕರನಾರಾಯಣ ಸಾಮಗರ ಸಾಂಗತ್ಯ. ಕರ್ನೂರು ಕೊರಗಪ್ಪ ರೈಯವರ ಕದ್ರಿ ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಮುಂದುವರಿದರು. ಕೀರ್ತಿಗಳು ಹುಡುಕಿ ಬಂದುವು. ಭೀಷ್ಮವಿಜಯ, ದಕ್ಷಾಧ್ವರ ಪ್ರಸಂಗದ 'ವೃದ್ಧವಿಪ್ರ', ಕೃಷ್ಣಲೀಲೆಯ 'ಅಗಸ, ಮಂತ್ರವಾದಿ', ನಳಚರಿತ್ರೆಯ 'ಬಾಹುಕ', ಊರ್ವಶಿ ಶಾಪದ 'ಚಿತ್ರಸೇನ'; ನಾರದ, ಗೂಢಚಾರ, ಋಷಿಗಳು.. ಹೀಗೆ ವಿವಿಧ ಭಾವಗಳ ಪಾತ್ರಗಳೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಹಾಸ್ಯದ ಹೊನಲಿನಲ್ಲಿ ಎಂದೂ ಕೂಡಾ ರಂಗದಲ್ಲಿ ಹಾಸ್ಯೇತರ ಪಾತ್ರಗಳನ್ನು ಹೊಸಕಿ ಹಾಕಿಲ್ಲ! ಇವರದು 'ನಕ್ಕು' ನಗಿಸುವ ಹಾಸ್ಯವಲ್ಲ. 'ತಾನು ನಗದೆ' ಇತರರನ್ನು ನಗಿಸುವ ಹಾಸ್ಯ.
             ಶೆಟ್ಟರಿಗೆ ಆರಂಭದಲ್ಲೊಮ್ಮೆ ಕಲಾಬದುಕಿನಲ್ಲಿ ತೃಪ್ತಿಯಿದ್ದರೂ ನೆಮ್ಮದಿಯಿರಲಿಲ್ಲ. 'ಕಿಸೆ ಭಾರ'ವಾದುದೇ ಹೆಚ್ಚು. ಕೈಯಲ್ಲಿ ಕಾಸಿಲ್ಲದೆ ಚೀಲದೊಳಗಿದ್ದ ಟಾರ್ಚ್ ನ್ನು  ಮಾರಾಟ ಮಾಡಿ ಊರು ಸೇರಿದ ಘಟನೆಯನ್ನು ರೋಚಕವಾಗಿ ಹೇಳಿ ನಗುತ್ತಿದ್ದರು. ನಗಿಸುತ್ತಿದ್ದರು. ಆ ನಗುವಿನ ಹಿಂದಿನ ನೋವು ಎಂದೂ ನಕ್ಕದ್ದಿಲ್ಲ! ಕಲಾವಿದರಿಗೆ 'ಸಹಜ'ವಾಗಿ ಅಂಟುವ ವಿಕಾರಗಳು ಬಾಳಪ್ಪರ ಹತ್ತಿರ ಸೋಂಕಿಲ್ಲ.  ಉತ್ತಮರ ಸಹವಾಸದ ಫಲ. ಬದುಕಿನ ಇಳಿ ಹೊತ್ತಲ್ಲಿ ಅಪಘಾತದಿಂದಾಗಿ ಹಾಸ್ಯ ತಟಸ್ಥವಾಯಿತು. ನಗು ಅಳುವುದಕ್ಕೆ ತೊಡಗಿತು! ಅವರೊಂದಿಗಿದ್ದ ಪಾತ್ರಗಳು ಮೌನವಾದುವು.
            ಪುತ್ತೂರಿನಲ್ಲಿ ಬೆಟ್ಟಂಪಾಡಿ ಬಾಳಪ್ಪ ಶೆಟ್ಟರಿಗೆ ಅವರ ಅಭಿಮಾನಿಗಳು 1983ರಲ್ಲಿ 'ಯಕ್ಷಿಕಾ' ಎನ್ನುವ ಅಭಿನಂದನಾ ಗ್ರಂಥವನ್ನು (ಸಂಪಾದಕರು - ಭಾಸ್ಕರ ರೈ ಕುಕ್ಕುವಳ್ಳಿ) ಸಮರ್ಪಿಸಿದ್ದರು.  ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು. ಪತ್ನಿ ಸರ್ವಾಣಿ. ಒಂದು ಹೆಣ್ಣು, ಮೂವರು ಗಂಡು ಮಕ್ಕಳನ್ನು ಪಡೆದಿರುವ ಸಂಸಾರಿ. ಬಾಳ ದೀವಿಗೆ 2005ರಲ್ಲಿ ನಂದಿದಾಗ, ಅವರ ಹಿರಿಯ ಮಗ ಸುಂದರ ಶೆಟ್ಟರು 'ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನ'ವನ್ನು ಹುಟ್ಟು ಹಾಕಿದರು.
             ಮಂಗಳೂರಿನ 'ಯಕ್ಷಾಂಗಣ'ವು ನವೆಂಬರ್ 15 - 21ರ ತನಕ ತೃತೀಯ ವರುಷದ 'ಯಕ್ಷಗಾನ ತಾಳಮದ್ದಳೆ ಸಪ್ತಾಹ' ಏರ್ಪಡಿಸಿತ್ತು.  ಇದರ ಸಮಾರೋಪದಂದು (೨೧ರಂದು) ಬಾಳಪ್ಪ ಶೆಟ್ಟರ ನೆನಪಿನ ಪ್ರಶಸ್ತಿ ಪ್ರದಾನವೂ ಜರುಗಲಿದೆ. ಎಪ್ಪತ್ತೈದರ ಹರೆಯದ ವೇಷಧಾರಿ, ಅರ್ಥಧಾರಿ, ನಿವೃತ್ತ ಶಿಕ್ಷಕ ನುಳಿಯಾಲು ಸಂಜೀವ ರೈಯವರಿಗೆ ಪ್ರಶಸ್ತಿ ಪ್ರದಾನ.
            ಶುದ್ಧ ಹಸ್ತದ, ಜೀವನದ ಹಿರಿಯರ ಹೆಸರಿನ ಈ ಪ್ರಶಸ್ತಿಯ ಹಿಂದಿನ ಆಶಯ ಮತ್ತು ಮನಸ್ಸು ರಾಜ್ಯ ಪ್ರಶಸ್ತಿಗಿಂತಲೂ ಹಿರಿದು.


Saturday, November 21, 2015

'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಗೆ ಕುಂಞಿಹಿತ್ಲು ಸೂರ್ಯನಾರಾಯಣ ಭಟ್


            ಹಿರಿಯ ಯಕ್ಷಗಾನ ಕಲಾವಿದ, ಕವಿ, ಸಾಹಿತಿ ಕುಂಞಿಹಿತ್ಲು ಸೂರ್ಯನಾರಾಯಣ ಭಟ್ಟರು ಈ ಸಾಲಿನ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. ನವೆಂಬರ್ 22, ರವಿವಾರ, ಸಂಜೆ 5 ಗಂಟೆಗೆ ಪುತ್ತೂರು ಟೌನ್ ಬ್ಯಾಂಕ್ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ. ಪುತ್ತೂರಿನ 'ಬೋಳಂತಕೋಡಿ ಅಭಿಮಾನಿ ಬಳಗ'ವು ಆಯೋಜಿಸುವ ಸಮಾರಂಭದಲ್ಲಿ ಕನರ್ಾಟಕ ಸಂಘದ ಮಾಜಿ ಅಧ್ಯಕ್ಷ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ ಸಂಸ್ಮರಣೆ ನಡೆಯಲಿದೆ.
              ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಹೆಚ್. ಮಾಧವ ಭಟ್ ವಹಿಸಲಿದ್ದಾರೆ. ಮಾಜಿ ಶಾಸಕ ಉರಿಮಜಲು ರಾಮ ಭಟ್ಟರು 'ಪುಸ್ತಕ ಹಬ್ಬ'ವನ್ನು ಉದ್ಘಾಟಿಸಲಿದ್ದಾರೆ. ನಿವೃತ್ತ ಕನ್ನಡ ಉಪನ್ಯಾಸಕ ಪ್ರೊ: ಹರಿನಾರಾಯಣ ಮಾಡಾವು ಬೋಳಂತಕೋಡಿಯವರ ಒಡನಾಟವನ್ನು ಜ್ಞಾಪಿಸಿಕೊಳ್ಳಲಿದ್ದಾರೆ. ಮನಃಶಾಸ್ತ್ರಜ್ಞ ಗಂಗಾಧರ ಬೆಳ್ಳಾರೆ ಅಭಿನಂದನಾ ಭಾಷಣ ಮಾಡಲಿದ್ದಾರೆ.  
               ಈ ಸಂದರ್ಭದಲ್ಲಿ ಕವಿ ರಾಧೇಶ್ ತೋಳ್ಪಾಡಿ ರಚಿತ ಶಿಶುಗೀತೆ 'ತುಂಟಗಾಳಿ ಕೈಯಲಿ' ಕೃತಿಯು ಅನಾವರಣಗೊಳ್ಳಲಿದೆ. ರಂಗಕರ್ಮಿ ಐ.ಕೆ.ಬೊಳುವಾರು ಪುಸ್ತಕ ಪರಿಚಯ ಮಾಡಲಿದ್ದಾರೆ. ರಾಜೇಶ್ ಪವರ್ ಪ್ರೆಸ್ಸಿನ ಎಂ.ಎಸ್.ರಘುನಾಥ ರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮರಂಭದ ಬಳಿಕ 'ಕವಿಕಾವ್ಯ ವಾಚನ ಗಾಯನ' ನಡೆಯಲಿದೆ. ಪದ್ಮಾ ಕೆ.ಆರ್.ಆಚಾರ್ ರಚಿಸಿರುವ ರಚನೆಗಳನ್ನು ಡಾ.ಶೋಭಿತಾ ಸತೀಶ್ ಹಾಡಲಿದ್ದಾರೆ.
            ಪ್ರಶಸ್ತಿ ಪುರಸ್ಕೃತರ ಪರಿಚಯ : ಸೂರ್ಯನಾರಾಯಣ ಭಟ್ಟರು ಮೂಲತಃ ಸುಳ್ಯ ತಾಲೂಕಿನ ಕಲ್ಮಡ್ಕದವರು. ಬೆಳ್ಳಾರೆಯಲ್ಲಿ 1976ರಿಂದ 'ಶ್ರೀ ವಾಣಿಗಣೇಶ ಪ್ರಸಾದಿತ ಕಲಾ ವೃಂದ'ದ ಮೂಲಕ ಇಪ್ಪತ್ತೈದು ವರುಷಗಳ ಕಾಲ ಯಕ್ಷಗಾನ ಕೈಂಕರ್ಯವನ್ನು ಮಾಡುತ್ತಾ ಬಂದವರು. ಯಕ್ಷಗಾನ ತಾಳಮದ್ದಳೆ, ತರಬೇತಿ, ಪ್ರಕಾಶನ, ಪುರಸ್ಕಾರ.. ಮೊದಲಾದ ಯೋಜನೆಗಳನ್ನು ಕಲಾ ವೃಂದದ ಮೂಲಕ ಮಾಡಿದವರು. ಬಹುತೇಕ ಎಲ್ಲಾ ಯಕ್ಷಗಾನ ಪ್ರಸಂಗಗಳಲ್ಲಿ ಅರ್ಥ ಹೇಳಿದ ಅನುಭವ.
             'ಜಲಜಸಖ' ಎನ್ನುವ ಕಾವ್ಯನಾಮದಿಂದ ನೂರಾರು ಸಾಹಿತ್ಯಗಳನ್ನು ರಚಿಸಿದ್ದಾರೆ. ಒಂದು ಸಾವಿರ ಚೌಪದಿಗಳನ್ನು ಕನ್ನಡದಲ್ಲಿ ಬರೆದ ಸಾಹಿತಿ. 'ಚುಟುಕು ಪಂಚಶತಿ', 'ಚಾವಟಿ' ಎನ್ನುವ ಕವನಸಂಕಲನಗಳು ಅಚ್ಚಾಗಿವೆ. ತುಳು ಚುಟುಕುಗಳು, ಭಕ್ತಿಗೀತೆಗಳು, ಕಾದಂಬರಿ, ಮಕ್ಕಳ ಸಾಹಿತ್ಯ, ಯಕ್ಷಗಾನ ಪ್ರಸಂಗ, ನಾಟಕಗಳು, ಕೀರ್ತನ ಮಾಲಾ... ಹೀಗೆ ವಿವಿಧ ವೈವಿಧ್ಯಗಳ ಸಾಹಿತ್ಯ ರಚಯಿತರು.
           ಬಹುಭಾಷಾ ಕವಿಗೋಷ್ಠಿಯೂ ಸೇರಿದಂತೆ ವಿವಿಧ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಕುಟುಂಬ ಯೋಜನೆ ಕುರಿತು ಇವರ ರಚಿಸಿದ 'ಜನಕಲ್ಯಾಣ' ಎನ್ನುವ ಯಕ್ಷಗಾನ ಪ್ರಸಂಗದ ಕೂಟಗಳು ಜನಪ್ರಿಯವಾಗಿದೆ. ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸಂಮಾನಿಸಿವೆ. ಪ್ರಕೃತ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ವಾಸವಾಗಿದ್ದಾರೆ.
          ಪುತ್ತೂರು ಟೌನ್ ಹಾಲ್ ಸಭಾಂಗಣದಲ್ಲಿ ನವೆಂಬರ್ 22 ರಿಂದ 29ರ ತನಕ 'ಪುಸ್ತಕ ಹಬ್ಬ' ಜರುಗಲಿದೆ.

Saturday, October 31, 2015

ನಿಜಾರ್ಥದ 'ಒಂದನೇ ವೇಷಧಾರಿ'


             ವಿದ್ವಾಂಸ ಅರ್ಥಧಾರಿಗಳಿದ್ದ ತಾಳಮದ್ದಳೆ. ಸ್ವಗತದಲ್ಲೊಬ್ಬರು ಒಂದೆರಡು ಬಾರಿ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿದ್ದರು. ತಕ್ಷಣ ಭಾಗವತರು 'ಏನಿದರ ಅರ್ಥ' ಎಂದರು. ಅರ್ಥಧಾರಿ ಶ್ಲೋಕದ ಆರ್ಥವನ್ನು ವಿವರಿಸಿ ಅರ್ಥಗಾರಿಕೆ ಮುಂದುವರಿಸಿದರು. ನಂತರ ಭಾಗವತರನ್ನು ಮಾತನಾಡಿಸಿದಾಗ "ಆ ಶ್ಲೋಕದ ಅರ್ಥ ಗೊತ್ತಾಗಬೇಡ್ವಾ. ಪ್ರೇಕ್ಷಕರು ವಿದ್ವಾಂಸರಲ್ಲವಲ್ಲಾ" ಎಂದರು. ನಂತರ ಜರುಗಿದ ಪ್ರದರ್ಶನದಲ್ಲೂ ರಂಗವನ್ನು ನಿಯಂತ್ರಿಸುವ, ತಪ್ಪಾದಾಗ ಸ್ಥಳದಲ್ಲೇ ಸರಿಪಡಿಸುವ ಅವರು 'ಒಂದನೇ ವೇಷಧಾರಿ'ಯಾಗಿ ಕಂಡರು.
              ಇವರು ಬೇರಾರು ಅಲ್ಲ, ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳು. ಇವರೊಬ್ಬ ರಂಗ ನಿರ್ದೇಶಕ. 'ಯಕ್ಷಗಾನಕ್ಕೆ ನಿರ್ದೇಶಕ ಬೇಕೇ ಬೇಡ್ವೇ' ಎಂಬ ಜಿಜ್ಞಾಸೆಗೆ ಕುರಿಯ ಭಾಗವತರು ಪ್ರತ್ಯಕ್ಷ ಉತ್ತರದಂತೆ ಕಂಡರು. ಹಾಗಾಗಿಯೇ ಇರಬೇಕು - ಅವರಿಗೆ ಇಳಿವಯಸ್ಸಲ್ಲೂ ಕೂಟಾಟಗಳಿಗೆ ಬಹು ಬೇಡಿಕೆ. ಸಂಮಾನಗಳ ಮಾಲೆ. ಸರ್ವಾದರಣೀಯ ಪುರಸ್ಕಾರ. ಬೌದ್ಧಿಕ ಮತ್ತು ತಾಂತ್ರಿಕ ಸ್ಪರ್ಶ ಬಯಸುವ 'ದುಶ್ಶಾಸನ ವಧೆ, ಮೈರಾವಣ ಕಾಳಗ, ಇಂದ್ರಕೀಲಕ'ದಂತಹ ಪ್ರಸಂಗಗಳು ಕುರಿಯರನ್ನು ಕಾಯುತ್ತವೆ!
              ಕುರಿಯ ಶಾಸ್ತ್ರಿಗಳು ಮೊದಲು ಹವ್ಯಾಸಿಯಾಗಿ ಬಣ್ಣದ ವೇಷಧಾರಿ. ಕಲಾವಿದರಿಗೆ, ಯಕ್ಷಗಾನಕ್ಕೆ ಗೌರವ ತಂದ ಪ್ರಸಿದ್ಧ ಕುರಿಯ ಮನೆತನ. ಕಲಾವಿದರನ್ನು ಬೆಳೆಸಿದ ಗುರುಕುಲ. ಸಮಗ್ರ ಯಕ್ಷಗಾನದ ನೋಟ, ಮುನ್ನೋಟ. ಇವರ ದೊಡ್ಡಪ್ಪ ಪ್ರಾತಃಸ್ಮರಣೀಯ ಕುರಿಯ ವಿಠಲ ಶಾಸ್ತ್ರಿಗಳು. ಮೇಳಗಳ ಯಾಜಮಾನ್ಯದ ಸರ್ವಾನುಭವ. ಈ ಸಂಸ್ಕಾರದ ಪಾಕದಲ್ಲಿ ಗಣಪತಿ ಶಾಸ್ತ್ರಿಗಳು ಕಲಾ ಬದುಕನ್ನು ಕಟ್ಟಿಕೊಂಡರು. ಭಾಗವತನಾಗಿ ರೂಪುಗೊಂಡರು. ಕಟೀಲು ಮೇಳದಲ್ಲಿ ಗುರಿಕಾರ್ ನೆಡ್ಲೆ ನರಸಿಂಹ ಭಟ್ಟರಿಂದ ಪಕ್ವಗೊಂಡರು. ನಿಜಾರ್ಥದ ಒಂದನೇ ವೇಷಧಾರಿಯಾಗಿ ಬೆಳೆದರು.
             ಕುರಿಯರಿಗೆ ತನ್ನ ಭಾಗವತಿಕೆ ಒಳ್ಳೆಯದಾಗಬೇಕು, ನಾಲ್ಕು ಜನ ಹಾಡಿ ಹೊಗಳಬೇಕು ಎನ್ನುವ ಬಯಕೆ ಇಲ್ಲವೇ ಎಳ್ಳಷ್ಟಿಲ್ಲ. 'ಆಟ ಒಳ್ಳೆಯದಾಗಬೇಕು' ಎಂಬ ಕಾಳಜಿ. ದೈಹಿಕವಾದ ಯಾವುದೇ ಸಮಸ್ಯೆಗಳು ರಂಗದ ಮುಂದೆ ಗೌಣ. "ನನಗೆ ಪ್ರಸಿದ್ಧ ವೇಷಧಾರಿಗಳೇ ಆಗಬೇಕೆಂದಿಲ್ಲ. ಸಾಮಾನ್ಯರನ್ನು ನೀಡಿ. ಆಟ ಮೇಲೆ ಹಾಕ್ತೇನೋ ಇಲ್ವೋ ನೋಡಿ," ಹಿಂದೊಮ್ಮೆ ಹೇಳಿದ್ದರು. ಪಾತ್ರಕ್ಕೆ ಅನುಗುಣವಾಗಿ ಕಲಾವಿದರನ್ನು ಸಿದ್ಧಗೊಳಿಸುವ ಜಾಣ್ಮೆ ಕುರಿಯರಿಗೆ ಹಿರಿಯರ ಬಳುವಳಿ. ಅವರು ಆಡಿಸುವ ಆಟದಲ್ಲೆಲ್ಲಾ ಯಕ್ಷಗಾನದ ಸಮಗ್ರತೆಯ ದರ್ಶನವನ್ನು ಕಂಡಿದ್ದೇನೆ.
           ಕುರಿಯರನ್ನು ಚೌಕಿ(ಬಣ್ಣದ ಮನ)ಯಲ್ಲಿ ಗಮನಿಸಿ. ಪ್ರದರ್ಶನ ಆರಂಭವಾಗುವ ಒಂದು ತಾಸಾದರೂ ಮುಂಚೆ ಆಗಮಿಸುತ್ತಾರೆ. ಒಂದೆಡೆ ಕುಳಿತಿರುತ್ತಾರೆ. ಅವರ ನಿರ್ದೇಶನದ ಪ್ರಸಂಗವಾದರೆ ಕಲಾವಿದರಿಗೆ ಮಾರ್ಗದರ್ಶನ ನೀಡುವ ಹಲವಾರು ಸಂದರ್ಭಗಳಿಗೆ ಸಾಕ್ಷಿಯಾಗಿದ್ದೇನೆ. ಎಷ್ಟು ಪದ್ಯ, ಅದಕ್ಕೆ ಹೇಗೆ ಅರ್ಥ, ರಂಗ ಕ್ರಿಯೆ, ಆಗಮನ-ನಿರ್ಗಮನ..ವನ್ನು ಸ್ಪಷ್ಟವಾಗಿ ಹೇಳುತ್ತಾರೆ. ಹೇಳಿದಂತೆ ರಂಗದಲ್ಲಿ ನಿರ್ವಹಿಸುತ್ತಾರೆ.
           ರಂಗಸ್ಥಳದ ಪಡಿಮಂಚದಲ್ಲಿ ಕುಳಿತರೆ ಸಾಕು. ಇಡೀ ರಂಗವೆ ಶರಣಾಗುವ ಅವ್ಯಕ್ತ ವ್ಯಕ್ತಿತ್ವ. ಪಾತ್ರಗಳು ತನ್ನ ನಿಲುಕಿನಾಚೆ ದಾಟಿದರೆ ಸ್ಥಳದಲ್ಲೇ ಹೊಗಳಿಕೆ. ತಪ್ಪಿದರೆ ಒಂದೆರಡು ಬಾರಿ ಜೀವದಾನ. ಕೈಯಲ್ಲಿದ ಜಾಗಟೆ ದೊಡ್ಡದನಿಯಲ್ಲಿ ಕೂಗಿತೋ ಪಾತ್ರಧಾರಿ ನಿರ್ಗಮಿಸಬೇಕು. ಇಲ್ಲದಿದ್ದರೆ ನಿರ್ಗಮನ ಮಾಡಿಸಿಬಿಡುತ್ತಾರೆ! ಇದು ಭಾಗವತರ ತಾಕತ್ತು. ಕಲಾವಿದರು ಒಪ್ಪಿದ್ದಾರೆ. ರಂಗ ಒಪ್ಪಿದೆ. ಕುಣಿಯುವ ಪಾತ್ರಗಳಿಗೆ ರಂಗದಲ್ಲೇ ಆಶುರಚನೆಯನ್ನು ಮಾಡಿ ಹಾಡಿದ್ದಿದೆ. ಇದರಿಂದ ಕಲೆಗೂ, ಕಲಾವಿದನಿಗೂ ರಂಗಸುಖದ ಅನುಭವ. ಪಾತ್ರವೊಂದರಿಂದ ಸನ್ನಿವೇಶ 'ಬೋರ್' ಆಗುತ್ತದೆ ಎಂದು ಕಂಡರೆ ನಿರ್ದಾಕ್ಷಿಣ್ಯವಾಗಿ ನೇಪಥ್ಯಕ್ಕೆ ತಳ್ಳುತ್ತಾರೆ!
            ಈ ರೀತಿಯ ರಂಗಶಿಕ್ಷಣದಿಂದ ಹಲವಾರು ಕಲಾವಿದರು ಸಿದ್ಧರಾಗಿದ್ದಾರೆ. ಕುರಿಯ ಭಾಗವತರನ್ನು ದಿನವೂ ಜ್ಞಾಪಿಸಿಕೊಳ್ಳುತ್ತಾರೆ. ವೇಷವನ್ನು ಮೆರೆಸುವ ಭಾಗವತಿಕೆ, ರಂಗದ ಕಲಾವಿದರ ಕಷ್ಟ-ಸುಖ, ತಾನೇ ಒಂದು ಪಾತ್ರವಾಗುವ ಲೀನತೆ, ಪ್ರಸಂಗದ ಸಮಗ್ರ ಮಾಹಿತಿ, ಒಂದು ಪ್ರಸಂಗ ಕೃತಿಯನ್ನು ತನ್ನದನ್ನಾಗಿ ಮಾಡಿಕೊಳ್ಳುವ ಪರಿ, ಒಟ್ಟೂ ರಂಗಕ್ಕೆ ಚಿಮ್ಮು ಉತ್ಸಾಹ ತರುವ ಕುರಿಯ ಭಾಗವತರಿಗೆ ಅವರೇ ಸಾಟಿ.
              ಇವರೊಂದಿಗೆ ಮದ್ಲೆಗಾರ ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ಹತ್ತು ವರುಷದ ತಿರುಗಾಟ. ಅವರೆನ್ನುತ್ತಾರೆ, "ರಂಗವು ಹೇಗೆ ಇರಬೇಕು ಎಂದು ಗ್ರಹಿಸಿದ್ದರೋ ಅದರಂತೆ ರೂಪುಗೊಳಿಸುವ ಅಪೂರ್ವ ಪ್ರತಿಭಾವಂತ. ಆಟದ ರೈಸುವಿಕೆಗೆ ರಾಜಿಯಿಲ್ಲದ ನಿರ್ವಹಣೆ. ಕಲಾವಿದರ ನಿಷ್ಠುರಗಳನ್ನು ಎದುರಿಸಿದ್ದಾರೆ. ಕುರಿಯರಂತೆ ಕಲಾವಿದರನ್ನು ವೇಷಕ್ಕೆ ತಯಾರು ಮಾಡುವ ಜ್ಞಾನ ಅಗರಿ ಶ್ರೀನಿವಾಸ ಭಾಗವತರಲ್ಲಿತ್ತು. ಸಂಘಟಕರು ಯಾವುದೇ ಪ್ರಸಂಗ ಹೇಳಲಿ ಅದನ್ನು ಒಪ್ಪಿಕೊಳ್ಳುವ, ಆಟವನ್ನು ಯಶಗೊಳಿಸುವ ಅವ್ಯಕ್ತ ಶಕ್ತಿಯನ್ನು ಕುರಿಯರಲ್ಲಿ ಕಂಡಿದ್ದೇನೆ."
             ಕಲಾವಿದರ ಕಷ್ಟಗಳಿಗೆ ಮಿಡಿಯುವ ಮನಸ್ಸು. ಅನಾರೋಗ್ಯದಲ್ಲಿದ್ದವರಿಗೆ ನೆರವಾಗುವ ಗುಣ. ಮೇಳದಲ್ಲಿದ್ದಷ್ಟು ಸಮಯ ಯಜಮಾನರಿಗೆ ತೊಂದರೆಯಾಗಲಿಲ್ಲ.  ಕಲಾವಿದರ ಯೋಗ-ಕ್ಷೇಮದ ಹೊಣೆಯನ್ನು ಕರ್ತವ್ಯ ದೃಷ್ಟಿಯಿಂದ ಮಾಡುತ್ತಿದ್ದರು. ಹೊಸಬರಿಗೆ ರಂಗದಲ್ಲಿ ಒರಟನಂತೆ ಫಕ್ಕನೆ ಕಂಡರೂ ನಿಜಕ್ಕೂ ಅವರದು ಮಗುವಿನ ಮನಸ್ಸು. ಮರುಗುವ ಮನಸ್ಸು. ಅವರಿಗೆ ಸಿಗುವ ಸಂಭಾವನೆಗಿಂತಲೂ ಹೆಚ್ಚು ಕಲಾವಿದರ ಆರೋಗ್ಯಕ್ಕಾಗಿ ವ್ಯಯಿಸುತ್ತಿದ್ದರು, ಜ್ಞಾಪಿಸುತ್ತಾರೆ ಪದ್ಯಾಣ. ಇಷ್ಟೆಲ್ಲಾ ಪರರಿಗಾಗಿ ಮಿಡಿಯುವ ಕುರಿಯರು ಎಂದೂ ವೈಯಕ್ತಿಕ ಕಷ್ಟ, ಸಮಸ್ಯೆಯನ್ನು ಯಾರಲ್ಲೂ ಹೇಳಿಕೊಂಡಿಲ್ಲ ಎನ್ನುವುದು ಗಮನೀಯ.
            'ಯಕ್ಷಮಿತ್ರ ನಮ್ಮ ವೇದಿಕೆ' ವಾಟ್ಸ್ಪ್ ತಂಡವು ನವೆಂಬರ್ 2ರಂದು ಕುರಿಯ ಭಾಗವತರಿಗೆ ಸಂಮಾನ ಏರ್ಪಡಿಸಿದೆ. ಕಟೀಲಿನಲ್ಲಿ ಸಂಜೆ 7 ಗಂಟೆಗೆ ಸಂಮಾನ ಸಮಾರಂಭ ಜರುಗಲಿದೆ. ಬಳಿಕ ನಿಶಿಪೂರ್ತಿ ಯಕ್ಷಗಾನ. ತಂಡದ ಎರಡನೇ ಕಾರ್ಯಕ್ರಮವಿದು. ಡಾ.ಪದ್ಮನಾಭ ಕಾಮತರ ಸರ್ವಸಾರಥ್ಯ. ನಾಲ್ಕುನೂರಕ್ಕೂ ಮಿಕ್ಕಿ ಸದಸ್ಯರನ್ನೊಳಗೊಂಡ ತಂಡದ ಕಾರ್ಯ ಮಾದರಿ.

(ಚಿತ್ರಗಳು - ಉದಯ ಕಂಬಾರ್, ವರ್ಣ ಸ್ಟುಡಿಯೋ, ಬದಿಯಡ್ಕ)


Tuesday, October 27, 2015

ಮತ್ತೆ ಬದುಕಿದ ದೇಶಮಂಗಲ..! .

                  ಕಾಸರಗೋಡು ಬೆದ್ರಡ್ಕ ಪೂಮಾಣಿ-ಕಿನ್ನಿಮಾಣಿ ಸನ್ನಿಧಿಯಲ್ಲಾಗುವ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದ ಸಮಯ. ಆಗ ದೇಶಮಂಗಲ ಕೃಷ್ಣ ಕಾರಂತರನ್ನು ನೋಡಿದ, ಮಾತನಾಡಿದ ನೆನಪು. ವಿವಿಧ ಸಂದರ್ಭಗಳಲ್ಲಿ ಕಾರಂತರ ಬೌದ್ಧಿಕ ಗಟ್ಟಿತನವನ್ನು ಗಣ್ಯರು ನೆನಪಿಸುವುದನ್ನು ಕೇಳಿದ್ದೇನೆ. ಅವರು ದೂರವಾಗಿ ದಶಕ ಕಳೆದರೂ ಯಕ್ಷಗಾನದ ಸುದ್ದಿ ಮಾತನಾಡುವಾಗಲೆಲ್ಲಾ ದೇಶಮಂಗಲದವರನ್ನು ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ.
               ಸುಮಾರು ತೊಂಭತ್ತು ಸಂವತ್ಸರ ಬದುಕಿದ ಕೃಷ್ಣ ಕಾರಂತರು ಕುಟುಂಬಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಲಿಲ್ಲ. ಸಾಮಾಜಿಕವಾಗಿ ಬದ್ಧತೆಯ ಬದುಕನ್ನು ರೂಢಿಸಿಕೊಂಡವರು. ಯಕ್ಷಗಾನದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡವರು. ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಮಾಡಿದವರು. ಅವರ ಪ್ರವೃತ್ತಿಗೆ ದಶಬಾಹುಗಳು. ತಾನುಣ್ಣದಿದ್ದರೂ ಉಣ್ಣದವರಿಗೆ ನೆರಳಾದವರು. ಹಾಗೆಂತ ಕಾರಂತರೇನೂ ಆರ್ಥಿಕ ಶ್ರೀಮಂತರಲ್ಲ. ಹೃದಯ ಶ್ರೀಮಂತಿಕೆ ಇದ್ದುದರಿಂದಲೇ ಈಗಲೂ ಪ್ರಸ್ತುತರು.
               ವ್ಯಕ್ತಿ ಮರಣಿಸಿದಾಗ ಊರಿನ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದರ ಮೇಲೆ ಆತನ ಸಿದ್ಧಿ-ಪ್ರಸಿದ್ಧಿ. ಊರು ಮಾತ್ರವಲ್ಲ ಹೊರ ಊರಿನ ಗಣ್ಯರು ಕೂಡಾ ನೆನಪಿಸುವ ವ್ಯಕ್ತಿತ್ವ ಕಾರಂತರಲ್ಲಿತ್ತು. ನ್ಯಾಯಾಲಯದ ಮೆಟ್ಟಲೇರುವ ಬಹುವಿಧದ ವಿವಾದಗಳಿಗೆ ಕಾರಂತರು ಸ್ಪಂದಿಸುತ್ತಿದ್ದ ರೀತಿ ಅನನ್ಯ.  ವಿವಾದಗಳು ರಾಜಿಯಲ್ಲಿ ಮುಗಿಯುವುದಿದ್ದರೆ ಕಾರಂತರ ಮಧ್ಯಸ್ತಿಕೆ. ಅವರು ನೀಡುವ ನಿಷ್ಪಕ್ಷಪಾತ ತೀರ್ಮಾನವನ್ನು ಜನ ಸ್ವೀಕರಿಸುತ್ತಿದ್ದರು. ನ್ಯಾಯದ, ನ್ಯಾಯಾಲಯದ ಎಲ್ಲಾ ಪ್ರಕ್ರಿಯೆಗಳು ಅವರಿಗೆ ಸಲೀಸು.
                ಕಾರಂತರ ಭಾವ ಸಿರಿಬಾಗಿಲು ವೆಂಕಪ್ಪಯ್ಯ. ಇಬ್ಬರೂ ಯಕ್ಷ ಜಿಜ್ಞಾಸುಗಳು. ಪಾರ್ತಿಸುಬ್ಬ ರಚಿತ ರಾಮಾಯಣದ ಓಲೆಗರಿಗಳನ್ನು ಸಂಗ್ರಹಿಸಲು ನೆರವಾದ ಹಿರಿಚೇತನಗಳು. ಪುತ್ರಕಾಮೇಷ್ಟಿಯಿಂದ ಸುಗ್ರೀವ ಸಖ್ಯದ ತನಕದ ಕಥಾಭಾಗವನ್ನು ಇವರಿಬ್ಬರು ಸಂಗ್ರಹಿಸಿ ಸಹಕರಿದ್ದಾರೆಂದು ಕುಕ್ಕಿಲ ಕೃಷ್ಣ ಭಟ್ಟರು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ನಿಜಕ್ಕೂ ಇದು ಮಹಾತ್ಕಾರ್ಯ. ರಾಮಾಯಣ ಕೃತಿಯು ಅಚ್ಚಾಗಿದೆ. ಕಲಾವಿದರಲ್ಲಿ ಇರಲೇಬೇಕಾದ ಪುಸ್ತಕ.
               ಕೃಷ್ಣ ಕಾರಂತರಿಗೂ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರಿಗೂ ನಂಟು. ಸಾಮಗರೊಂದಿಗೆ ಒಡನಾಟ. ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದಲ್ಲಿ ನಡೆಯುತ್ತಿದ್ದ ಉದ್ಧಾಮರ ಕೂಟಗಳಲ್ಲಿ ಕಾರಂತರೂ ಭಾಗಿ. ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯುದ್ದಕ್ಕೂ ಕಾರ್ಯಕ್ರಮವನ್ನು ನೀಡಿದ ಹಿರಿಮೆ. ಶೇಣಿ-ಸಾಮಗ ಯುಗದಲ್ಲಿ ಅವರಿಗೆ ಸಮದಂಡಿಯಾಗಿ ಕಲಾವಿದರಾಗಿ, ವಿಮರ್ಶಕರಾಗಿ ಕಾಣಿಸಿಕೊಂಡಿದ್ದರು. "ತಾಳಮದ್ದಳೆಯಲ್ಲಿ ಇವರೆದುರು ಅರ್ಥಗಾರಿಕೆ ಹೇಳಲು ಬಹುತೇಕರು ಹಿಂಜರಿಯುತಿದ್ದರು. ಎದುರು ಅರ್ಥಧಾರಿಯನ್ನು ಅಟ್ಯಾಕ್ ಮಾಡುವ ಗುಣವು ಅವರ ಅಪಾರ ಜ್ಞಾನದ ಪ್ರತೀಕ," ಎನ್ನುತ್ತಾರೆ ಹಿರಿಯ ಅರ್ಥಧಾರಿ ಮಧೂರು ವೆಂಕಟಕೃಷ್ಣ.
              ಎಡನೀರು ಮಠದ ಹಿಂದಿನ ಯತಿಗಳಾದ ಪೂಜ್ಯ ಶ್ರೀ ಶ್ರೀ ಈಶ್ವರಾನಂದ ಭಾರತೀ ಸ್ವಾಮಿಗಳ ಆಪ್ತರಾಗಿದ್ದರು. ಶ್ರೀಮಠದ ವ್ಯವಹಾರಗಳನ್ನು ಸುಸೂತ್ರವಾಗಿ ಸೇವಾ ಭಾವದಿಂದ ಮಾಡುತ್ತಿದ್ದರು ಎಂದು ಹತ್ತಿರದಿಂದ ಬಲ್ಲವರು ನೆನಪಿಸುತ್ತಾರೆ. ಅಂತೆಯೇ ಅರಮನೆಗಳ ಕೆಲವು ವ್ಯವಹಾರಗಳ ಹೊಣೆಯೂ ಕಾರಂತರಿಗೆ ಇತ್ತಂತೆ. ಇದು ಅವರ ವ್ಯವಹಾರ ಕುಶಲತೆಗಳಿಗೆ ದೃಷ್ಟಾಂತ. ಊರಿನ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ದುಡಿದದ್ದಲ್ಲದೆ ಮಾರ್ಗದರ್ಶಕರಾಗಿದ್ದರು.
             "1962ರಲ್ಲಿ ಮಧೂರು ಕ್ಷೇತ್ರದಲ್ಲಿ ಜರುಗಿದ ಮೂಡಪ್ಪ ಸೇವೆ, 1961ರಲ್ಲಿ ಜರುಗಿದ ಕೋಟಿ ನಾಮಾರ್ಚನೆಗಳ ಸಂದರ್ಭದಲ್ಲಿ ಕಾರಂತರು ಕಾರ್ಯಕರ್ತರಾಗಿ ದುಡಿದಿದ್ದರು. ಇಂಡಿಯನ್ ನೇಶನಲ್ ಕಾಂಗ್ರೆಸಿನ ಸಕ್ರಿಯ ಕಾರ್ಯಕರ್ತರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದರು. ಇವರ ಸಾಮಥ್ರ್ಯವನ್ನು ಅರ್ಥಮಾಡಿಕೊಂಡಿದ್ದ ಆಗಿನ ಮದರಾಸು ಸರಕಾರವು ಮಾಯಿಪ್ಪಾಡಿ ಶಿಕ್ಷಕರ ತರಬೇತಿ ಶಾಲೆಯ ಕಟ್ಟಡ ನಿರ್ಮಾಣದ ಕಾರ್ಯವನ್ನು ಇವರಿಗೆ ವಹಿಸಿತ್ತು. ಕ್ಲುಪ್ತ ಸಮಯದಲ್ಲಿ ಕಾಮಗಾರಿಯನ್ನು ಮುಗಿಸಿದ್ದರು. ಇವರ ಸೇವೆಗೆ ಆಗಿನ ಶಿಕ್ಷಣ ಸಚಿವರಾದ ಭಕ್ತವತ್ಸಲಂ ಕಾರಂತರನ್ನು  ಅಭಿನಂದಿಸಿದ್ದರು," ಎಂದು ಮಧೂರು ಎಂ.ನರಸಿಂಹ ಮಯ್ಯರು ರಜತ ಕೂಟ ಎನ್ನುವ ಕೃತಿಯಲ್ಲಿ ಉಲ್ಲೇಖಿಸಿದ್ದು ಗಮನೀಯ.
             18-11-1915 ದೇಶಮಂಗಲ ಕೃಷ್ಣ ಕಾರಂತರ ಜನನ. ತಂದೆ ಸುಬ್ರಾಯ ಕಾರಂತ. ತಾಯಿ ಮೀನಾಕ್ಷಿ ಅಮ್ಮ. ಮಗ ಜಯರಾಮ. ಮಗಳು ಮೀನಾಕ್ಷಿ. ಕಾರಂತರ ಅಳಿಯ ಭಾಗವತ ರಾಮಕೃಷ್ಣ ಮಯ್ಯ. ಇವರ ಕನಸಿನ 'ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ'ವು ಕಾರಂತರ ಜನ್ಮಶತಮಾನೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ 'ಯಕ್ಷಪೂರ್ಣಿಮ' ಶೀರ್ಶಿಕೆಯಲ್ಲಿ ಆಚರಿಸಿದೆ.  ಹನ್ನೆರಡು ತಾಳಮದ್ದಳೆಗಳನ್ನು ಕೇರಳ, ಕರ್ನಾಟಕಗಳಲ್ಲಿ ಏರ್ಪಡಿಸಿದೆ. ಈ ಮೂಲಕ ಕಾರಂತರು ಮತ್ತೆ ಬದುಕಿದ್ದಾರೆ.
           "ಯಕ್ಷಗಾನ ಕಲಾವಿದ ಎಂದಾಗ ಸಮಾಜವು ಹಗುರವಾಗಿ ಕಾಣುತ್ತಿದ್ದ ಕಾಲಘಟ್ಟದಲ್ಲಿ ನನ್ನ ಮಾವ ಬೆನ್ನುತಟ್ಟಿ ಪ್ರೋತ್ಸಾಹಿಸಿದವರು. ಈ ಋಣ ಹೇಗೆ ತೀರಿಸಲಿ? ಹಿರಿಯರನ್ನು ಮಾನಿಸಬೇಕೆನ್ನುವುದು ಯಕ್ಷಗಾನ ಕಲಿಸಿದ ಪಾಠ. ಹೋದೆಡೆಯಲ್ಲೆಲ್ಲಾ ಕಲಾಭಿಮಾನಿಗಳು ಪ್ರಾಂಜಲವಾಗಿ ಪ್ರೋತ್ಸಾಹಿಸಿದ್ದಾರೆ," ಎನ್ನುತ್ತಾರೆ ರಾಮಕೃಷ್ಣ ಮಯ್ಯರು. ಯಕ್ಷಪೂರ್ಣಿಮಾದ ಸಮಾರೋಪವು ಅಕ್ಟೋಬರ್ 24 (ಇಂದು) ಬೆಳಿಗ್ಗೆ ಗಂಟೆ 10 ರಿಂದ ರಾತ್ರಿ 10ರ ತನಕ ಮಧೂರು ಪರಕ್ಕಿಲದಲ್ಲಿ ಸಂಪನ್ನವಾಗಿದೆ.  ಸಂಸ್ಮರಣೆ, ಗೋಷ್ಠಿ, ತಾಳಮದ್ದಳೆ, ಸಾಧಕ ಸಂಮಾನ, 'ಪುಳ್ಕೂರು ಬಾಚ' ಪ್ರಸಂಗ ಬಿಡುಗಡೆ, ದೊಂದಿಯಾಟ.. ಹೀಗೆ ತುಂಬು ಕಾರ್ಯಹೂರಣಗಳಿದ್ದುವು.
             ಹನ್ನೆರಡು ಕಾರ್ಯಕ್ರಮಗಳನ್ನು ಸಿರಿಬಾಗಿಲು ರಾಮಕೃಷ್ಣ ಮಯ್ಯರು ಏರ್ಪಡಿಸಿದ್ದರಲ್ಲಾ. ಆಯೋಜಕರಿಗೆ ಹೊರೆಯಾಗದೆ ನೀಡಿದಷ್ಟು ಮೊತ್ತವನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಆದರೆ ಶೇ.70ರಷ್ಟು ಆರ್ಥಿಕತೆಯನ್ನು ತನ್ನ ಯಕ್ಷಗಾನದ ಗಳಿಕೆಯಿಂದಲೇ ಹೊಂದಾಣಿಸಿದ್ದಾರೆ ಎನ್ನುವುದು ಅಜ್ಞಾತ ಸತ್ಯ. ಯಕ್ಷಗಾನವು 'ಪಕ್ಕಾ ಕಮರ್ಶಿಯಲ್'ನತ್ತ ಹೊರಳುತ್ತಿರುವ ದಿನಮಾನದಲ್ಲಿ ಮಯ್ಯರ ಸಾಹಸ ಮತ್ತು ನಿರ್ಧಾಾರದ ಮನಃಸ್ಥಿತಿಗಳು ಗ್ರೇಟ್. ವೃತ್ತಿ/ಹವ್ಯಾಸಿ ಕಲಾವಿದ ಬಂಧುಗಳು ಒಮ್ಮೆ ಕತ್ತು ತಿರುಗಿಸಿ ಇತ್ತ ನೋಡುವಿರಾ? ಅದರಲ್ಲೇನೋ ಸಂದೇಶವಿದೆಯಲ್ವಾ.

Monday, October 19, 2015

ರಂಗ ಮರೀಚಿಕೆಗಳ ಮಧ್ಯೆ ಸಜೀವ ಗುರುಕುಲ

            ಅದೊಂದು ಯಕ್ಷಗಾನ ಕಲಿಕಾ ಶಾಲೆ. ದಿನಪೂರ್ತಿ ಗುರುಗಳ ಉಪಸ್ಥಿತಿ. ಶಿಷ್ಯರು ತಮ್ಮ ಬಿಡುವಿನ ವೇಳೆಯಲ್ಲಿ ಕಲಿಯುವ ವ್ಯವಸ್ಥೆ. ಸಮಯ ಹೊಂದಾಣಿಸಿಕೊಂಡರಾಯಿತು. ಗುರುವಿನ ಜತೆ ಇದ್ದು ಬೌದ್ಧಿಕವಾಗಿ ಅಪ್ಡೇಟ್ ಆಗಲು ಅವಕಾಶ.
ಇದು ಗುರು ಮೋಹನ ಬೈಪಾಡಿತ್ತಾಯರ ಕಲಿಕಾ ಶಾಲೆಯ ಸೂಕ್ಷ್ಮ ಚಿತ್ರ. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಗೆ ತಾಗಿಕೊಂಡಿರುವ  ಕಟ್ಟಡವೊಂದರಲ್ಲಿ ಇವರ ಗುರುಕುಲ. ಇಪ್ಪತ್ತಕ್ಕೂ ಮಿಕ್ಕಿ ಅಭ್ಯಾಸಿಗಳು ಒಂದು ವರುಷದಿಂದ ವಿದ್ಯಾರ್ಜನೆ ಮಾಡುತ್ತಿದ್ದಾರೆ.
           ಯಕ್ಷಗಾನ ಕೇಂದ್ರಗಳ ಏರು ಪರ್ವಕಾಲದತ್ತ ತಿರುಗಿ ನೋಡೋಣ.  ಯಕ್ಷಜ್ಞಾನ ಕಲಿಯುವ ದಾಹವಿದ್ದ ನೂರಾರು ಮನಸ್ಸುಗಳು. ಐದಾರು ತಿಂಗಳ ದಿನಪೂರ್ತಿ ಕಲಿಕೆ. ಗುರುಕುಲದಿಂದ ಹೊರ ಬಂದಾಗ ಹತ್ತಾರು ಕನಸುಗಳು. ಕೆಲವರಿಗೆ ವೃತ್ತಿ ಕಲಾವಿದನಾಗುವ ಆಸೆ.  ಮತ್ತೆ ಕೆಲವರಿಗೆ ಸ್ವವೃತ್ತಿಯೊಂದಿಗೆ ಹವ್ಯಾಸಿಯಾಗಿದ್ದುಕೊಳ್ಳುವ ನಿರೀಕ್ಷೆ.
               ಈಚೆಗೆ ಕೇಂದ್ರಗಳು ಅಭ್ಯಾಸಿಗಳ ಅಲಭ್ಯತೆಯಿಂದ ಉಸಿರೆಳೆದುಕೊಳ್ಳುತ್ತಿದೆ. ಸಾಮಾಜಿಕ ಬದುಕಿನ  ಪಲ್ಲಟಗಳ ಜತೆಗೆ ಯಕ್ಷಗಾನವನ್ನು ಪೂರ್ಣಕಾಲಿಕ ವೃತ್ತಿಯನ್ನಾಗಿ ಸ್ವೀಕರಿಸುವ ಅನಿವಾರ್ಯ ಇಲ್ಲದಿರುವುದೂ ಕಾರಣ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಒತ್ತಡ.  ಅಂಕ ಪಡೆಯುವ ಹುಮ್ಮಸ್ಸಿನಲ್ಲಿ ಸಾಂಸ್ಕೃತಿಕ ಭಾವಕ್ಕೆ ಮಸುಕು. ಕೂಡುಕುಟುಂಬ ಛಿದ್ರತೆ - ಹೀಗೆ ಹಲವು ಕಾರಣಗಳನ್ನು ಹುಡುಕಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಯಕ್ಷಗಾನವನ್ನು ಪ್ರೀತಿಸುವ ಮನಸ್ಸಿನ ಶುಷ್ಕತೆ.
               ಬೈಪಾಡಿತ್ತಾಯರ ಗುರುಕುಲ ಈ ಹಿನ್ನೆಲೆಯಲ್ಲಿ ಮುಖ್ಯವಾಗುತ್ತದೆ. 'ವಾರಕ್ಕೊಂದು ಕ್ಲಾಸ್' ಎನ್ನುವ ಪ್ಯಾಕೇಜ್ ಕಲಿಕೆಗಿಂತ ಭಿನ್ನ. ಇದು ಆರ್ಥಿಕವಾಗಿ ಗುರುವಿಗೆ ಸಬಲವಾಗದು. ಆದರೆ ವಿದ್ಯಾರ್ಥಿಗಳಿಗೆ ಗಟ್ಟಿ ಗುರುಬಲ. ವಾರದ ತರಗತಿಗಳು ಬೇರೆ ಬೇರೆ ಕಡೆ ನಡೆದರೆ  ವಿದ್ಯಾರ್ಥಿಗಳ ಸಂಖ್ಯೆ ಅಧಿಕಗೊಳ್ಳಬಹುದು. ಒಂದು ಕಾಲಘಟ್ಟದಲ್ಲಿ ಪುತ್ತೂರು, ಸುಳ್ಯ, ವಿಟ್ಲ, ಸವಣೂರು, ಮುಂಬಯಿ.. ಹೀಗೆ ತರಗತಿಗಳನ್ನು ಮಾಡಿದ ಅನುಭವಿ
               ಇಂದು ಕಲಿಕಾ ಶಾಲೆಗಳು ವಿಸ್ತೃತವಾಗಿವೆ. ಅನುಭವಿ ಕಲಾವಿದರು ಗುರುಗಳಾಗಿ ರೂಪುಗೊಂಡಿದ್ದಾರೆ. ಹವ್ಯಾಸಿ ಕಲಾವಿದರು ಬೆಳೆದಿದ್ದಾರೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿ ತಂಡ ವೃತ್ತಿಪರರಂತೆ ಪ್ರದರ್ಶನ ನೀಡುತ್ತಿವೆ. ಖುಷಿ ಪಡುವ ಸಂಗತಿ. ಮೋಹನ ಬೈಪಾಡಿತ್ತಾಯರ ಗರಡಿಯಲ್ಲಿ ಪಳಗಿದ ಅನೇಕ ಶಿಷ್ಯರು ರಂಗದಲ್ಲಿ ಗುರುತರ ಹೆಜ್ಜೆಯೂರಿದ್ದಾರೆ. ಕಡಬ ನಾರಾಯಣ ಆಚಾರ್ಯ (ದಿ|), ರಮೇಶ ಭಟ್ ಪುತ್ತೂರು, ಜಗನ್ನಿವಾಸ ರಾವ್ ಪಿ.ಜಿ., ವಿಟ್ಲ ಪ್ರಕಾಶ್, ಶ್ರೀಶ ನೆಡ್ಲೆ, ಮಹೇಶ ಕನ್ಯಾಡಿ... ಹೀಗೆ ಸು-ಮನಸ್ಸಿನ ಹಲವು ಶಿಷ್ಯರು ತಮ್ಮ ಗುರುವಿನ ಜ್ಞಾನವನ್ನು ರಂಗದಲ್ಲಿ ಮರುಸೃಷ್ಟಿ ಮಾಡುತ್ತಾರೆ. 'ತಾನು ಬೈಪಾಡಿತ್ತಾಯರ ಶಿಷ್ಯ'ನೆಂದು ಸಂಭ್ರಮಿಸುತ್ತಾರೆ.
               ಸಾಂಸ್ಕೃತಿಕ ವಿಚಾರಗಳನ್ನು ನೋಡುವ ದೃಷ್ಟಿ ಬದಲಾಗುತ್ತಿದೆ. ತಂತ್ರಜ್ಞಾನಗಳ ಬೀಸುನಡೆಗೆ ಯುವಕರು ಹೆಜ್ಜೆ ಹಾಕುತ್ತಿದ್ದಾರೆ. ಬದುಕಿಗೆ ಮಾರಕವೋ, ಪೂರಕವೋ ಎಂದು ಗೊತ್ತಿಲ್ಲದೆ ಮುನ್ನುಗ್ಗುವ ಮನಃಸ್ಥಿತಿಯನ್ನು ನೋಡಿದರೆ ಕಣ್ಣೆದುರೇ ಬೆಳೆಯುತ್ತಿರುವ ಯುವಮನಸ್ಸುಗಳು ಸಾಂಸ್ಕೃತಿಕ ಲೋಕದಿಂದ ಕಳಚಿಕೊಳ್ಳುತ್ತಿದ್ದಾರೇನೋ ಅನ್ನಿಸುತ್ತದೆ. ಈ ವಿಷಾದಗಳ ಮಧ್ಯೆ ಭರತನಾಟ್ಯ, ಸಂಗೀತ, ಯಕ್ಷಗಾನದಂತಹ ಶ್ರೀಮಂತ ಕಲೆಗಳನ್ನು ಅಪ್ಪಿಕೊಂಡ, ಒಪ್ಪಿಕೊಂಡ ಕಲಾಮನಸ್ಸಿನವರಿದ್ದಾರೆ.
              "ಯಕ್ಷಗಾನದ ಒಲವು ಎಲ್ಲೆಡೆ ಇದೆ. ಶಾಲಾ ವ್ಯವಸ್ಥೆಗಳು ಮತ್ತು ಮನೆಯ ವಾತಾವರಣಗಳು ಮಕ್ಕಳನ್ನು ಯಕ್ಷಗಾನ ಪ್ರವೇಶಕ್ಕೆ ಬಿಡುತ್ತಿಲ್ಲ. ಯಕ್ಷ ಕಲಿಕೆ ಕೆಲವೆಡೆ ಐಕಾನ್ ಆಗುತ್ತಿದೆ. ಪೂರ್ಣವಾಗಿ ಕಲಿಯುವ ಹುಮ್ಮಸ್ಸಿರುವುದಿಲ್ಲ. ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಕೆಂಬ ತುಡಿತ. ಮಕ್ಕಳಿಂದ ಹೆಚ್ಚು ಹೆತ್ತವರಲ್ಲಿ ಇಂತಹ ನಡೆಗಳಿವೆ. ಪೂರ್ಣವಾಗಿ ಯಕ್ಷಗಾನದ ಒಂದೊಂದು ವಿಭಾಗದ ಅಭ್ಯಾಸಕ್ಕೆ ಕನಿಷ್ಠವೆಂದರೂ ನೂರೈವತ್ತು ತರಗತಿಗಳು ಬೇಕು" ಎನ್ನುತ್ತಾರೆ ಬೈಪಾಡಿತ್ತಾಯರು.
               ಮುಂಬಯಿಯಲ್ಲಿ ಸ್ವಲ್ಪ ಕಾಲ ಬದುಕಿಗಾಗಿ ವಾಸವಾಗಿದ್ದರು. ಹಲವೆಡೆ ತರಗತಿಗಳನ್ನು ಮಾಡಿದ್ದರು. ಶಿಷ್ಯರ ಸಂಖ್ಯೆ ಅಧಿಕವಾಗಿತ್ತು. ಕರಾವಳಿ ಮೂಲದ ಸಾವಿರಾರು ಮಂದಿ ಮುಂಬಯಿಯಲ್ಲಿ ಇರುವುದರಿಂದ ಯಕ್ಷಗಾನಕ್ಕೆ ತುಂಬು ಬೆಂಬಲ. ಮುಂಬಯಿ ಬದುಕು ಬೈಪಾಡಿತ್ತಾಯರ ಬದುಕಿಗೆ ಟರ್ನ್. "ಮೋಹನ ಬೈಪಾಡಿತ್ತಾಯ ಯಾರೆಂದು ಕರಾವಳಿಯಲ್ಲಿ ಗೊತ್ತಿಲ್ಲ! ಆದರೆ ದೂರದ ಮುಂಬಯಿಯ ಯಕ್ಷಪ್ರಿಯರಿಗೆಲ್ಲ ಗೊತ್ತು," ಎನ್ನುತ್ತಾರೆ. ಅವರ ವಿನೋದದ ಮಾತಿನ ಸುತ್ತ ಕಾಣದ ಬಿಸಿಯುಸಿರಿನ ತಲ್ಲಣಗಳಿವೆ.
            ತನ್ನ ಸೋದರ ಹರಿನಾರಾಯಣ ಬೈಪಾಡಿತ್ತಾಯರು ಮೋಹನರಿಗೆ ಗುರು. ಅತ್ತಿಗೆ ಲೀಲಾವತಿ ಬೈಪಾಡಿತ್ತಾಯರ ಮಾರ್ಗದರ್ಶನ. ಕಲಿಕಾ ನಂತರ ಹತ್ತು ವರುಷ ಹವ್ಯಾಸಿಯಾಗಿ ಸಂಚಾರ. ಬಳಿಕ ಆದಿಸುಬ್ರಹ್ಮಣ್ಯ, ನಂದಾವರ, ಕಾಂತಾವರ, ಕರ್ನಾಟಕ, ಬೆಳ್ಮಣ್ಣು ಮೇಳಗಳಲ್ಲಿ ಎರಡು ದಶಕಗಳ ತಿರುಗಾಟ. ಬೆಳ್ಮಣ್ಣು ಮೇಳದ ವಾಹನ ಅಪಘಾತವು ಮೋಹನರ ಮೇಳ ಜೀವನಕ್ಕೆ ಕೊನೆಬಿಂದು. ಮೂರು ವರುಷ ಓಡಾಡದ ಸ್ಥಿತಿ. ಜತೆಗೆ ಆರ್ಥಿಕ ಸಂಕಟಗಳ ಮಾಲೆ. ಆರೋಗ್ಯ ಸುಧಾರಣೆ. 1995ರಿಂದ ಯಕ್ಷಗಾನ ಗುರುವಾಗಿ ಬದುಕಿಗೆ ದಾರಿ ಮಾಡಿಕೊಂಡರು. "ಬಹುಶಃ ನಾನು ಮೇಳದ ತಿರುಗಾಟದಲ್ಲಿರುತ್ತಿದ್ದರೆ ಎಂದೋ ಕಳೆದುಹೋಗುತ್ತಿದ್ದೆ. ಈಗ ನನಗೆ ನೂರಾರು ಶಿಷ್ಯರಿದ್ದಾರೆ. ಇದು ನನ್ನ ದೊಡ್ಡ ಆಸ್ತಿ," ಎನ್ನುವಾಗ ಮೋಹನರ ಮುಖ ಅರಳುತ್ತದೆ.
           ಮಡದಿ ಲಲಿತಾ. ರಾಮಕೃಷ್ಣ, ನವೀನ ಮಗಂದಿರು. ಮಗಳು ಮಮತಾ. ಉಜಿರೆ ಸನಿಹ ಮಗನ ಮನೆಯಲ್ಲಿ ವಾಸ್ತವ್ಯ. ಅಕ್ಟೋಬರ್ 18ರಂದು ಅಪರಾಹ್ನ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಮೊಹನ ಬೈಪಾಡಿತ್ತಾಯರಿಗೆ ಶಿಷ್ಯಾಭಿವಂದನ ಸಮಾರಂಭ. ಅರುವತ್ತಮೂರರ ಕಾಣ್ಕೆ. ಕಣ್ಣಿಗೆ ಕಾಣದ ತನ್ನ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ಕಂಡು ಆನಂದಿಸುವ ಕ್ಷಣ.


Thursday, October 15, 2015

ತ್ಯಾಗಕ್ಕೆ ತೋರಣ ಕಟ್ಟಿದ ’ಸಹಧರ್ಮಿಣಿ ಸಂಮಾನ

            "ಮೇಳಕ್ಕೆ ಹೊರಡುವ ದಿನ ಹತ್ತಿರ ಬಂದಾಗ ಮಡದಿ ಸಾವಿತ್ರಿ ಮ್ಲಾನವಾಗುತ್ತಿದ್ದಳು. ಅಂದು ದೇವರಿಗೆ ತುಪ್ಪದ ದೀಪ ಹಚ್ಚಿ, ಹಣೆಗೆ ಬೊಟ್ಟಿಟ್ಟು, ನಮಸ್ಕಾರ ಮಾಡಿ, ಇಷ್ಟದೈವಕ್ಕೆ ಕಾಣಿಕೆ ಹಾಕಿ ನನ್ನನ್ನು ಕಳುಹಿಸಿಕೊಡುತ್ತಿದ್ದ ದಿನಗಳನ್ನು ಮರೆಯುವಂತಿಲ್ಲ.  ತಂದೆಯವರ ತಿಥಿ ಜನವರಿ-ಫೆಬ್ರವರಿ ತಿಂಗಳಲ್ಲಿ ಆಗುತ್ತಿತ್ತು. ಆಗ ಒಂದು ದಿವಸಕ್ಕೆ ಹೇಗೋ ಹೊಂದಿಸಿಕೊಂಡು ಮನೆಗೆ ಬರುತ್ತಿದ್ದೆ. ಬಳಿಕ ಪತ್ತನಾಜೆ - ಮೇ - ಕಳೆದೇ ನಮ್ಮಿಬ್ಬರ ಭೇಟಿ. ಅಷ್ಟು ಸಮಯ ವಿರಹ!.." ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ಮೇಳಜೀವನದ ಕ್ಷಣಗಳನ್ನು ಹಂಚಿಕೊಂಡರು.
              ಕಲಾವಿದನು ಮನೆ, ಮಡದಿ, ಮಕ್ಕಳ ಮೋಹ ತೊರೆದು ಬಣ್ಣದ ನಂಟನ್ನು ಅಂಟಿಸಿಕೊಳ್ಳಬೇಕು. ಆಟದಿಂದ ಆಟಕ್ಕೆ ಕಾಲ್ನಡಿಗೆಯ ಪಯಣ. ಒಂದು ಹೊತ್ತು ಊಟ ಸಿಕ್ಕರೆ ಅದುವೇ ಮೃಷ್ಟಾನ್ನ. ಕೈಗೇನಾದರೂ ನಾಲ್ಕುಕಾಸು ಬಿದ್ದರಂತೂ ಈಗಿನ ಕೋಟಿ ರೂಪಾಯಿ ಸಿಕ್ಕಷ್ಟು ಖುಷಿ. ಸಾಮಾಜಿಕ ಸ್ಥಿತಿಯೂ ಹಾಗಿತ್ತೆನ್ನಿ. ಬಣ್ಣ ಹಚ್ಚಿದರೆ ಮಾತ್ರ ಮನೆಯ ಬದುಕಿನ ರಥದ ಗಾಲಿ ತಿರುಗಬಹುದಷ್ಟೇ. ಹಿರಿಯರನ್ನು ಮಾತನಾಡಿಸಿ ನೋಡಿ. ಸಂಕಷ್ಟಗಳ ಸರಮಾಲೆಗಳ ದಿನಮಾನಗಳಿಗೆ ದನಿಯಾಗುತ್ತಾರೆ.
                ಸರಿ, ಯಜಮಾನನಿಗೆ ಮೇಳದ ತಿರುಗಾಟ. ಮನೆಯ ನಿರ್ವಹಣೆಯ ಹೊಣೆ ಪತ್ನಿಯ ಹೆಗಲಿಗೆ. ಮಕ್ಕಳ ವಿದ್ಯಾಭ್ಯಾಸದಿಂದ ತೊಡಗಿ ಹಿರಿಯರ ಯೋಗಕ್ಷೇಮದ ತನಕ. ಬೇಕಾದೆಡೆಯಲ್ಲೆಲ್ಲಾ ಸ್ವಯಂ ನಿರ್ಧಾರ. ಕೃಷಿ, ಹೈನುಗಾರಿಕೆ ಇದ್ದರಂತೂ ಕೆಲಸಗಳ ಹೊರೆ. ಎಲ್ಲವನ್ನೂ ಗೊಣಗಾಟವಿಲ್ಲದೆ ನಿರ್ವಹಿಸಿದ ಅಮ್ಮಂದಿರ ಬೆವರ ಶ್ರಮವನ್ನು ಎಷ್ಟು ಮಂದಿ ಗಮನಿಸಿದ್ದಾರೆ?
                 ಪತ್ನಿಯ ನೆನಹು ಒಂದೆಡೆ, ಮಕ್ಕಳ ನೆನಪು ಇನ್ನೊಂದೆಡೆ, ಹಿರಿಯರ ಆರೋಗ್ಯದ ಚಿಂತೆ, ಕೃಷಿ ಕಾರ್ಯಗಳ ಯೋಚನೆ - ಎಲ್ಲವನ್ನೂ ಮನಸ್ಸಿಗೆ ಹಚ್ಚಿಕೊಂಡೇ ಬಣ್ಣದ ಲೋಕಕ್ಕೆ ಬಿನ್ನಾಣದ ಸ್ಪರ್ಶವನ್ನು ನೀಡಬೇಕು. ಚಿಂತೆಯನ್ನು ಹಂಚಿಕೊಳ್ಳೋಣ ಅಂದರೆ ಇತರರದ್ದೂ ಇದೇ ಹಾಡು-ಪಾಡು. ಚಿಂತೆಯ ಮೂಟೆಯೊಳಗೆ ಬದುಕಿನ ರಿಂಗಣ. ಪಾತ್ರಾಭಿವ್ಯಕ್ತಿಗೆ ಹೊಗಳಿಕೆ, ಪ್ರಶಂಸೆ ಬಂದಾಗಲೆಲ್ಲಾ ನೆನಪಾಗುವ ಮನೆಮಂದಿ. ಖುಷಿಯನ್ನು ಅನುಭವಿಸಲು ಆಗದ ಕಲಾಬದುಕು.
           ಮನೆಯ ಹೊಣೆಯನ್ನು ಜಾಣ್ಮೆಯಿಂದ ಹತ್ತಿಯಂತೆ ಹಗುರ ಮಾಡಿಕೊಂಡು ಮಾನಿನಿಯರಿದ್ದಾರೆ. ಆದರೆ ಪತಿಯ ವಿಯೋಗದ ಕ್ಷಣ ಇದೆಯಲ್ಲಾ. ಅದಕ್ಕೆ ಶಬ್ದಗಳಿಲ್ಲ, ದನಿಯಿಲ್ಲ.! ಮಕ್ಕಳಿಗೆ ಅಪ್ಪನ ನೆನಪು ಬಂದಾಗ ನೋವನ್ನು ಮರೆತು ಎಳೆಯ ಮನಸ್ಸುಗಳಿಗೆ ಸಾಂತ್ವನ ಹೇಳಬೇಕು. ಸಂದುಹೋದ ಬದುಕಿನಲ್ಲಿ ಜೀವನದಲ್ಲೂ ಇಂತಹ ದಿನಮಾನಗಳು ಹಾದುಹೋಗಿದೆ.
             ಈಗ ಕಾಲಘಟ್ಟ ಬದಲಾಗಿದೆ. ಆಧುನಿಕ ತಂತ್ರಜ್ಞಾನಗಳು ಧಾಂಗುಡಿಯಿಡುತ್ತಿವೆ. ಬೇಕಾದಾಗ ಮನೆಯವರೊಂದಿಗೆ ಸಂಪರ್ಕ ಸಾಧಿಸಬಹುದಾದ ಸಾಧನ ಅಂಗೈಯಲ್ಲಿದೆ.  ಒಬ್ಬೊಬ್ಬ ಸದಸ್ಯರೂ ವಾಹನ ಹೊಂದಬಹುದಾದ ಆರ್ಥಿಕ ಮೇಲ್ಮೈ ಹೊಂದಿದ್ದಾರೆ. ದುಡಿತಕ್ಕೆ ತಕ್ಕ ಅಲ್ಲದಿದ್ದರೂ ತೃಪ್ತಿಕರವಾದ ಸಂಭಾವನೆ. ಊಟ-ಉಪಾಹಾರದಲ್ಲಿ ಸಂತೃಪ್ತಿ. ಪ್ರತಿ ದಿನ ಮನೆಗೆ ಬಂದು, ಮನೆವಾರ್ತೆಯನ್ನೆಲ್ಲಾ ನಿಭಾಯಿಸಿ ಪುನಃ ಆಟಕ್ಕೆ ಹೋಗುವ ಸುಧಾರಣೆ ಬಂದಿದೆ.. ಇದು ಅಪೇಕ್ಷಣೀಯ ಮತ್ತು ಅಭಿಮಾನ.
              ಅಕ್ಟೋಬರ್ 2, ೧೯೧೫ರಂದು ಪಾವಂಜೆಯಲ್ಲಿ ಹತ್ತು ಮಂದಿ ಯಕ್ಷಗಾನ ಕಲಾವಿದರ ಸಹಧರ್ಮಿಣಿಯರಿಗೆ  ಸಂಮಾನ ಜರುಗಿತು. ಶ್ರೀಮತಿಯರಾದ ಜಯಲಕ್ಷ್ಮೀ ನಾರಾಯಣ ಬಲಿಪ ಭಾಗವತ, ವನಜಾಕ್ಷಿ ಶಂಕರನಾರಾಯಣ ಭಟ್ ಪದ್ಯಾಣ, ಶೀಲಾಶಂಕರಿ ಗಣಪತಿ ಭಟ್ ಪದ್ಯಾಣ, ಶೋಭಾ ಪುರುಷೋತ್ತಮ ಪೂಂಜ ಬೊಟ್ಟಿಕೆರೆ, ಶ್ಯಾಮಲಾ ಗಣಪತಿ ಶಾಸ್ತ್ರಿ ಕುರಿಯ, ವಾಣಿ ರಘುರಾಮ ಹೊಳ್ಳ ಪುತ್ತಿಗೆ, ಶಾರದಾ ಶ್ರೀಧರ ರಾವ್ ಕುಬಣೂರು, ಸುಧಾ ದಿನೇಶ ಅಮ್ಮಣ್ಣಾಯ, ಸಾವಿತ್ರಿ ಗೋವಿಂದ ಭಟ್, ಯಶೋದಾ ಮೋನಪ್ಪ ಗೌಡ - ಸಂಮಾನ ಸ್ವೀಕರಿಸಿದ ಅಮ್ಮಂದಿರು.
           'ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ರಿಲೀಜಿಯಸ್ ಟ್ರಸ್ಟ್' - ಈ ಮಾತೃಸಂಸ್ಥೆಯಡಿ ರೂಪುಗೊಂಡ 'ಚಂದ್ರಮ್ಮ ವಾಸುಭಟ್ಟ ಸ್ಮಾರಕ ಮಹಿಳಾ ಮಂಡಳಿ'ಯ ಚೊಚ್ಚಲ ಕಾರ್ಯಕ್ರಮವಿದು. ಪತಿಯ ತಾರಾಮೌಲ್ಯಕ್ಕೆ ಪರೋಕ್ಷವಾಗಿ ಹೆಗಲು ಕೊಟ್ಟ ಮನಸ್ಸುಗಳಿಗೆ ಸಂದ ನಿಜ ಗೌರವ. ಅವ್ಯಕ್ತ ತ್ಯಾಗ, ಸಹಿಷ್ಣು ಗುಣಗಳಿಗೆ ಪ್ರಾಪ್ತವಾದ ಮಾನ. ಸಂಮಾನದ ಕ್ಷಣ ಹೃದಯಸ್ಪರ್ಶಿಯಾಗಿತ್ತು. ಕಲಾವಿದರ ಸತಿಯರಿಗೆ ಸಾರ್ಥಕ್ಯದ ಕ್ಷಣವನ್ನು ತರುವಂತೆ ಸಂಘಟಕರು ಗೌರವಿಸಿದ್ದಾರೆ. ಈ ಪರಂಪರೆ ಮುಂದುವರಿಯಬೇಕು, ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ ಕಲಾವಿದೆ ವಿದುಷಿ ಸುಮಂಗಲ ರತ್ನಾಕರ್.
            ಸಾಧಕ ಕಲಾವಿದರಿಗೆ ಸಪತ್ನಿ ಸಹಿತ ಗೌರವ ಸಲ್ಲುವುದು ಅಲ್ಲೋ ಇಲ್ಲೋ ಅಪರೂಪಕ್ಕೊಮ್ಮೆ ಮಾತ್ರ. ಬದುಕಿನಲ್ಲಿ 'ಸತಿಯರ್ಧ-ಪತಿಯರ್ಧ' ಇದ್ದಂತೆ ಗೌರವದಲ್ಲೂ ಸಮಪಾಲು ಬೇಕು. ಗಂಡನ ಕ್ಷೇಮದ ಹಾರೈಕೆಯೊಂದಿಗೆ ಕುಟುಂಬವನ್ನು ಆಧರಿಸುವ ನಿಜವಾದ ಸಾಧಕಿಗೆ ಗೌರವ ಸಲ್ಲಬೇಕು. ಪತಿಯ ಗುಣಕಥನದೊಂದಿಗೆ ಪತ್ನಿಯ ಸಾಧನೆಯ ಮಿಂಚಿಂಗ್ ಪ್ರಸ್ತುತಿಗೊಂಡಾಗ ಕುಟುಂಬವೊಂದು ಕಲೆಯ ಪೋಷಣೆಗೆ ಸಮರ್ಪಿಸಿಕೊಂಡ ವೃತ್ತಾಂತ ಅನಾವರಣಗೊಳ್ಳುತ್ತದೆ.
           ಸಂಮಾನ ಸಮಾರಂಭಗಳು ಕಲಾವಿದರ ಬದುಕಿಗೊಂದು ತೋರಣ. ಅದು ಹತ್ತರೊಟ್ಟಿಗೆ ಹನ್ನೊಂದಾದರೆ ಸಂಮಾನದ ಗೌರವ ಗೌಣವಾಗುತ್ತದೆ. ನಿಧಿಯೊಂದಿಗೆ ಪ್ರಶಸ್ತಿ, ಸಂಮಾನ ಪ್ರದಾನಿಸುವ ಸಂಘಟನೆಗಳಿವೆ. ಇದು ಖುಷಿ ಕೊಡುವ ವಿಚಾರ. ಈ ಮಧ್ಯೆ ಕಾಟಾಚಾರದ ಎಷ್ಟೋ ಕಾರ್ಯಕ್ರಮಗಳನ್ನು ಎಣಿಸುವಾಗ ನೋವಾಗುತ್ತದೆ.
ಪಾವಂಜೆಯಲ್ಲಿ ಜರುಗಿದ ವಿನೂತನ ಸಂಮಾನ ಯೋಚನೆಯು ಹೊಸ ಹಾದಿ ತೋರಿದೆ. ಇದು ಅನುಸರಣೀಯ, ಅನುಕರಣೀಯ.
 
(ಚಿತ್ರ : ಕೃಷ್ಣಕುಮಾರ್ ಜೋಡುಕಲ್ಲು)


Monday, October 5, 2015

ಚಿತ್ರ ಸಾರಿದ ಯಕ್ಷಪಯಣ


            ಹಳೆಯ ಕಡತಗಳನ್ನು ಜಾಲಾಡುತ್ತಿದ್ದಾಗ ಅವಿತುಕೊಂಡಿದ್ದ ಚಿತ್ರವೊಂದು ಗೋಚರವಾಯಿತು. ಅದು ವಿಂಶತಿಯ ಖುಷಿಯಲ್ಲಿ ನಗುತ್ತಿತ್ತು! 'ನೀನು ಮರೆತರೂ ನಾನು ಮರೆತಿಲ್ಲ' ಎಂದು ಅಣಕಿಸಿತು. ಆಗಿನ ರೀಲ್ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಚಿತ್ರ. ಗುಣಮಟ್ಟ ಅಷ್ಟಕ್ಕಷ್ಟೇ. ಚಿತ್ರವನ್ನು ನೋಡುತ್ತಾ ಇದ್ದಂತೆ ನೆನಪುಗಳು ರಾಚಿದುವು. ಶುರುವಾಯಿತು, ಯಕ್ಷ ಪಯಣದ ಸೈಡ್ರೀಲ್. 
            1995 ಮಾರ್ಚ್ ತಿಂಗಳ ಎರಡನೇ ವಾರ. ದೆಹಲಿಯಲ್ಲಿ ಅಂತಾರಾಷ್ಟ್ರೀಯ ಕೃಷಿ ಮೇಳ. ಅದರಲ್ಲಿ ಪುತ್ತೂರಿನ 'ಕರ್ನಾಟಕ ಯಕ್ಷ ಭಾರತಿ' ತಂಡದ ಯಕ್ಷಗಾನ ಪ್ರದರ್ಶನ. ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿಯವರ ನೇತೃತ್ವ. ದ.ಕ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯೋಜನೆ. ತೋನ್ಸೆ ಪುಷ್ಕಳ ಕುಮಾರ್, ರಮೇಶ ಶೆಟ್ಟಿ ಬಾಯಾರ್, ಕೃಷ್ಣಪ್ಪ ಕಿನ್ಯ, ಜಲಂಧರ ರೈ, ಕೆ.ಯು.ಬಸ್ತಿ, ಭಾಸ್ಕರ ರೈ, ನಾ. ಕಾರಂತ, ಹರಿಶ್ಚಂದ್ರ ನಾಯ್ಗ - ಕಲಾವಿದರು. ನರಕಾಸುರ ಮೋಕ್ಷ, ಸುಧನ್ವ ಮೋಕ್ಷ, ಘೋರ ಮಾರಕ ಪ್ರಸಂಗಗಳ ಪ್ರಸ್ತುತಿ.
             ಪ್ರಯಾಣವು ಪ್ರಯಾಸದ ಕಾಲಘಟ್ಟ. ಇಲಾಖೆ ಕೊಡುವ ವೀಳ್ಯ ಅಲ್ಲಿಂದಲ್ಲಿಗೆ ಚುಕ್ತಾ. ಬಸ್ ಪ್ರಯಾಣ ದುಬಾರಿ. ವಿಮಾನ ಊಹಿಸುವಂತಿಲ್ಲ ಬಿಡಿ. ಕೊನೆಯ ಆಯ್ಕೆ ರೈಲು. ಆಗ ದೆಹಲಿ ಪ್ರಯಾಣವೆಂದರೆ ಈಗ ವಿದೇಶಕ್ಕೆ ಹಾರಿದಂತೆ! ರೈಲಿನಲ್ಲಿ ಹೋಗಲು, ಬರಲು ಆರು ದಿನ. ದೆಹಲಿಯಲ್ಲಿ ಪ್ರದರ್ಶನ ಮೂರು ದಿವಸ. ಹೀಗೆ ಸುಮಾರು ಹತ್ತು ದಿವಸದ ಯಕ್ಷಟೂರ್.
            ಯಕ್ಷಗಾನದ ಡ್ರೆಸ್ನೊಂದಿಗೆ ತಂಡ ರೈಲೇರಿದಾಗ ಪುಳಕದ ಅನುಭವ! ಕಲಾವಿದರೊಂದಿಗೆ ಇಲಾಖೆಯ ವರಿಷ್ಠರು ಸೇರಿ ಹತ್ತು ಮಂದಿ. ಮೂರು ದಿವಸದ ರೈಲು ವಾಸ. ಪ್ರಯಾಣವಿಡೀ ಯಕ್ಷಗಾನದ್ದೇ ಗುಂಗು ಗೆಜಲುವಿಕೆ. ಮಾತುಕತೆಗಳಿಗೆ ಅಕ್ಕಪಕ್ಕದವರು ಕಿವಿಯಾದರೂ ಭಾಷೆಯ ತೊಡಕಿತ್ತು. ಜಲಂಧರ ರೈ, ಕೆ.ಯು.ಬಸ್ತಿ, ಕೃಷ್ಣಪ್ಪ ಇವರ ಲೈವ್ ಅನುಭವಗಳು! ಬೋಗಿಯಲ್ಲೇ ತಾಳಮದ್ದಳೆಯ ಅಣಕು. ವೇಷಭೂಷಣದೊಂದಿಗೆ ಆಯುಧಗಳೂ ಇದ್ದುವಲ್ಲ. ಕತ್ತಿ, ಗದೆ ಹಿಡಿದು ಪ್ರಾತ್ಯಕ್ಷಿಕೆ!
            ರೈಲ್ವೇ ನಿಲ್ದಾಣದಲ್ಲಿ ವೇಷಭೂಷಣವನ್ನು ಇಳಿಸುವುದು, ಏರಿಸುವುದು; ಅಲ್ಲಿಂದ ಟ್ಯಾಕ್ಸಿ ಮೂಲಕ ಸಭಾಭವನ ತಲುಪಿಸುವ ಸ್ಥಿತಿ ಇದೆಯಲ್ಲಾ... ಶತ್ರುವಿಗೂ ಬೇಡ. ರೈಲ್ವೇ ನಿಲ್ದಾಣದ ಶ್ರಮಜೀವಿಗಳ ಉಡಾಫೆಗಳನ್ನು ಹೆಜ್ಜೆ ಹೆಜ್ಜೆಗೂ ಅನುಭವಿಸಿದ ನೆನಪಿನ್ನೂ ಹಸಿಯಾಗಿದೆ. ಕತ್ತಿ, ಬಿಲ್ಲು-ಬಾಣ, ಗದೆಗಳು ಆರಕ್ಷಕರ ಕಂಗೆಣ್ಣಿಗೆ ಗುರಿಯಾಗಿತ್ತು. ಒಂದೆರಡು ಬಾರಿ ಪರೀಕ್ಷೆಗೂ ಒಳಪಟ್ಟಿತ್ತು. ಸಾರಥಿ ಕುಕ್ಕುವಳ್ಳಿಯವರ ಜಾಣ್ಮೆಗಳಿಗೆ ಸವಾಲು!   
              ಹಿಂದಿ ಭಾಷೆಯ ಇರುನೆಲೆ ದೆಹಲಿ. ಸಾಕಷ್ಟು ಕನ್ನಡಗರೂ ಇದ್ದರೆನ್ನಿ. ಅವರಿಗೆಲ್ಲಾ ಯಕ್ಷಗಾನ ಗೊತ್ತಷ್ಟೇ. ಒಂದು ಗಂಟೆಯಲ್ಲಿ ಪ್ರಸಂಗವನ್ನು ಮುಗಿಸುವ ವೇಳಾಪಟ್ಟಿ. ವೇಷ, ಹಿಮ್ಮೇಳದ ನಾದಕ್ಕೆ ದೆಹಲಿಗರ ಖುಷಿಯ ಪ್ರೋತ್ಸಾಹ. ಅರ್ಥಗಾರಿಕೆಯನ್ನು ಸೀಮಿತ ಗೊಳಿಸಿ ಪದ್ಯಕ್ಕೆ ಹೆಚ್ಚು ಸಮಯ ನಿಗದಿ. ಕರ್ನಾಟಕ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪೂರ್ತಿ ಕನ್ನಡಿಗರಿದ್ದರು. ಕೃಷಿ ಮೇಳದ ಕಾರ್ಯಕ್ರಮಕ್ಕೆ ಆಗಮಿಸಿದ ಪತ್ರಕರ್ತ ಮಿತ್ರ ರವಿಪ್ರಸಾದ್ ಕಮಿಲ ಚಿತ್ರಗಳನ್ನು ಕ್ಲಿಕ್ಕಿಸಿದ್ದರು. ಅವರು ಆಗ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದರು.
            ಹೇಳುವಂತಹ ಯಾವುದೇ ಆಧುನಿಕ ಸೌಲಭ್ಯ, ಸವಲತ್ತುಗಳಿಲ್ಲದ ಆ ದಿವಸಗಳ ದೆಹಲಿ ಪ್ರದರ್ಶನ ಮಾಸದ ನೆನಪಾಗಿ ಉಳಿದಿದೆ. ದೆಹಲಿಯ ಹಿಂದಿ ಭಾಷಿಗರು ಯಕ್ಷಗಾನದ ವೇಷಭೂಷಣಕ್ಕೆ ಮನಸೋತಿದ್ದರು. ಪ್ರದರ್ಶನದ ನಂತರ ಬಣ್ಣದ ಮನೆಗೆ ಬಂದು ಕಿರೀಟ, ಚೆಂಡೆ, ಮದ್ದಳೆಗಳ ವಿವರಗಳನ್ನು ಪಡೆಯುತ್ತಿದ್ದರು. ಅಲ್ಲಿನ ಪತ್ರಿಕೆಗಳು ವರದಿಯೊಂದಿಗೆ ನುಡಿಚಿತ್ರಗಳನ್ನು ಪ್ರಕಟಿಸಿದ್ದುವು. ಪ್ರದರ್ಶನದ ಪ್ರಸ್ತುತಿಗಿಂತಲೂ ಕರಾವಳಿಯನ್ನು ಪ್ರತಿನಿಧಿಸಿದ ಯಕ್ಷಗಾನ ತಂಡ ಎನ್ನುವ ಆನಂದ ನಮ್ಮೆಲ್ಲರಲ್ಲಿತ್ತು. 
          ಒಂದು ವಿಚಾರ ಮರೆತೆ. ರೈಲು ಪ್ರಯಾಣದಲ್ಲಿ ಕಲಾವಿದರಲ್ಲಿ ಓರ್ವರಾದ ಜಲಂಧರ ರೈಯವರ ಶ್ರೀಮತಿ ಮತ್ತು ಪುಟ್ಟ ಮಗು ಜತೆಗಿದ್ದರು. ಬಟ್ಟೆಯನ್ನೇ ತೊಟ್ಟಿಲಿನಂತೆ ಮಾಡಿ ಮಗುವನ್ನು ತೂಗುವ, ಆರೈಕೆ ಮಾಡುವ ಸರದಿ ತಂಡದ್ದು! ಅಂದಿನ ಎಂಟು ಮಂದಿ ತಂಡದಲ್ಲಿದ್ದ ಇಬ್ಬರು ಈಗ ಕೀರ್ತಿಶೇಷ. ಅವರಿಬ್ಬರ ಕುರಿತು ಎರಡು ಮಾತು.
           ಎಸ್. ಜಲಂಧರ ರೈ : ಚಿಮ್ಮು ಉತ್ಸಾಹಿ. ಕಿರೀಟ ವೇಷಗಳಿಗೆ ಒಪ್ಪುವ ಆಭಿವ್ಯಕ್ತಿ. ತುಂಬು ಶಾರೀರ. ಕಾರ್ತವೀರ್ಯ, ಅರ್ಜುುನ, ಅತಿಕಾಯ, ಇಂದ್ರಜಿತು..ಮೊದಲಾದ ಪಾತ್ರಗಳಲ್ಲಿ ಗಮನೀಯ ರಂಗನಿರ್ವಹಣೆ. ನಿರ್ವಹಿಸಿದ ಪಾತ್ರಗಳಲ್ಲಿ ವೃತ್ತಿಪರತೆಯ ಸ್ಪರ್ಶ. ಮುಖ್ಯವಾಗಿ ಸ್ನೇಹಕ್ಕೆ ಒಡ್ಡಿಕೊಳ್ಳುವ ಆಪ್ತತೆ. ಕೋಟೆಕಾರಿನ ಆನಂದಾಶ್ರಮದಲ್ಲಿ ಅಧ್ಯಾಪಕರಾಗಿದ್ದರು. ಉತ್ತಮ ಶಿಕ್ಷಕನೆಂಬ ನೆಗಳ್ತೆ. ವಿವಿಧ ಸಂಸ್ಥೆಗಳಲ್ಲಿ ಸೇವಾ ಕೈಂಕರ್ಯ. 9 ಮೇ 2000ರಂದು ವಿಧಿವಶ.
            ಕುಂಞಪ್ಪ ಬಸ್ತಿ : ಕೋಟೆಕಾರು-ಉಚ್ಚಿಲ ಕಲಾಗಂಗೋತ್ರಿ ಸಂಸ್ಥೆಯ ಸಕ್ರಿಯ ಸದಸ್ಯರಾಗಿದ್ದರು. ಯಾವುದೇ ಪೂರ್ವ ತಯಾರಿ ಇಲ್ಲದೆ ರಂಗ ಪ್ರವೇಶಿಸಬಾರದು, ಎನ್ನುವ ಖಚಿತ ನಿಲುವಿನವರು. ಹಾಗಾಗಿ ಅವರು ನಿರ್ವಹಿಸುತ್ತಿದ್ದ ಪಾತ್ರಗಳೆಲ್ಲಾ ನಿರುಮ್ಮಳ. ಹೆಣ್ಣು ಬಣ್ಣಗಳ ಪಾತ್ರಗಳಲ್ಲಿ ಮಿಂಚಿದ್ದು ಹೆಚ್ಚು. ದಕ್ಷ, ಪರೀಕ್ಷಿತ, ಕರ್ಣ, ಅರ್ಜುನ ಮೊದಲಾದ ಕಿರೀಟಿ ವೇಷಗಳಲ್ಲಿ ಸ್ವಂತಿಕೆಯ ನಿಲುವು. 4 ಸೆಪ್ಟೆಂಬರ್ 1998ರಲ್ಲಿ ವಿಧಿವಶ.
            ಚಿತ್ರ ತಂದಿತ್ತ ನೆನಪುಗಳು ಕಾಲದ ದಾಖಲೆ.


Wednesday, September 30, 2015

ಕಲಾವಿದ ಕುಟುಂಬದ ಕಾಣ್ಕೆ : ಪೂರ್ವರಂಗಕ್ಕೆ ಹೊಳಪು


            ಯಕ್ಷಗಾನದ ಪೂರ್ವರಂಗವು ಕಾಲಮಿತಿಯ ಜಂಝಾವಾತಕ್ಕೆ ತೂರಿಹೋಗುವ ಆಪಾಯಕ್ಕೆ ಸಾಕ್ಷಿಯಾಬೇಕಾದುದು ಕಾಲ ತಂದಿಟ್ಟ ಕಾಣ್ಕೆ!  'ಬೇಕೋ-ಬೇಡ್ವೋ' ನಿಲುವುಗಳು ಮಾತಿನಲ್ಲಿ ಹಾರಿಹೋಗುತ್ತಿವೆ. ಪೂರ್ವರಂಗವನ್ನು ಕುಣಿವ ಕಲಾವಿದರ ಅಭಾವವೂ ಇಲ್ಲದಿಲ್ಲ. ಕುಣಿಸುವ ಹಿಮ್ಮೇಳದ ಶಕ್ತತೆಯೂ ವಿರಳ. ಈ ತಲ್ಲಣಗಳ ಮಧ್ಯೆ ಕೆಲವು ಮೇಳಗಳಲ್ಲಿ ಪೂರ್ವರಂಗ ಜೀವಂತವಾಗಿರುವುದು ಸಮಾಧಾನ. ಈಚೆಗಂತೂ ಪೂರ್ವರಂಗವನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡು ಪ್ರದರ್ಶನಗಳು ನಡೆದಿರುವುದು ಉಳಿವಿನತ್ತ ಮಹತ್ತರ ಹೆಜ್ಜೆ.
            ಹಿರಿಯ ಕಲಾವಿದರ ಮಾತಿನ ಮಧ್ಯೆ ಪೂರ್ವರಂಗದ ವಿಚಾರಗಳು ಹಾದುಹೋಗುತ್ತವೆ. "ಡೌರು, ಬಾಲಗೋಪಾಲ, ನಿತ್ಯ ವೇಷ..ಗಳನ್ನು ಕುಣಿದು ಹದವಾದ ಬಳಿಕವೇ ಪ್ರಸಂಗಗಳಲ್ಲಿ ಪಾತ್ರ ಮಾಡಲು ಅರ್ಹತೆ ಬಂತು," ಯಕ್ಷಗುರು ದಿವಾಣ ಶಿವಶಂಕರ ಭಟ್ಟರ ಅನುಭವ ಪೂರ್ವರಂಗದ ಗಟ್ಟಿತನವನ್ನು ತೋರಿಸುತ್ತದೆ.  ಬಹುತೇಕ ಹಿರಿಯರು ಈ ಹಂತವನ್ನು ಯಶಸ್ವಿಯಾಗಿ ದಾಟಿ ಕಲಾವಿದರಾದವರೇ. ಹಿಮ್ಮೇಳದ ಎಲ್ಲಾ ಕಲಾವಿದರಿಗೂ ಪೂರ್ವರಂಗದ ಜ್ಞಾನವು ಮುಂದಿನ ಕಲಾ ಹೆಜ್ಜೆಗೆ ಸುಭಗತನ ತರುತ್ತದೆ.
            ನಾಟ್ಯದ ಹದಗಾರಿಕೆಗೆ, ಲಯದ ಅರಿವಿಗೆ, ಬಿಡ್ತಿಗೆ-ಮುಕ್ತಾಯದ ಜ್ಞಾನಕ್ಕೆ, ಪದ್ಯಗಳ ಭಾವಕ್ಕೆ ಅಭಿನಯ ಮಾಡಲು ಪೂರ್ವರಂಗ ಒಂದು ಕಲಿಕಾ ಶಾಲೆ. ಇದಕ್ಕೆ ನಿರ್ದಿಷ್ಟ ಪಠ್ಯಕ್ರಮಗಳಿವೆ. ರಾತ್ರಿ ಎಂಟು ಎಂಟೂವರೆ ಗಂಟೆಯಿಂದ ಹತ್ತೂವರೆ ತನಕ ಲಂಬಿಸುವ ಪೂರ್ವರಂಗದ ವೈವಿಧ್ಯಗಳ ಆವರಣದೊಳಗೆ ರೂಪುಗೊಂಡ ಕಲಾವಿದ ಎಂದೆಂದೂ ಪರಿಪಕ್ವ. ಪಾತ್ರಕ್ಕೆ ಬೇಕಾದ ಅರ್ಥಗಳನ್ನು ಬಳಿಕ ಹೊಸೆದುಕೊಂಡರಾಯಿತು.
            ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು (ಲೀಲಕ್ಕ) ಮತ್ತು ಹರಿನಾರಾಯಣ ಬೈಪಾಡಿತ್ತಾಯ   - ಯಕ್ಷಸಾಧಕರು. ಇವರಿಗೆ ಯಕ್ಷಗಾನವೇ ಉಸಿರು. ತಮ್ಮ ಸುದೀರ್ಘ ಅನುಭವಗಳಲ್ಲಿ ಪರಿಪಕ್ವಗೊಂಡ 'ಪೂರ್ವರಂಗ'ದ ಹಾಡುಗಳ ದಾಖಲಾತಿಯು (ಅಡಕ ತಟ್ಟೆ - ಸಿ.ಡಿ.) ಕಲಿಕಾ ಆಸಕ್ತರಿಗೆ ಕೈಪಿಡಿ. ಪಾರ್ತಿಸುಬ್ಬನ ಯಕ್ಷಗಾನದ ಪೂರ್ವರಂಗದ ಹಾಡುಗಳನ್ನು ಬಳಸಿಕೊಂಡಿದ್ದಾರೆ. ಸಿಡಿ ಜತೆಗೆ ಹಾಡುಗಳ ಲಿಖಿತ ಪುಸ್ತಿಕೆಯನ್ನೂ ಅಭ್ಯಾಸಿಗಳಿಗೆ ಅನುಕೂಲವಾಗಲೆಂದು ಮುದ್ರಿಸಿದ್ದಾರೆ.
           ಚೌಕಿ ಪೂಜೆಯಲ್ಲಿ ಹಾಡುವ 'ಗಜಮುಖದವಗೆ ಗಣಪಗೆ, ಮುದದಿಂದ ನಿನ್ನಾ', ರಂಗಸ್ಥಳದಲ್ಲಿ 'ಮುಖತೋ ಪೂರ್ಣಚಂದ್ರಸ್ಯ, ಸರ್ವೇಶಾಂ ಪರಿಪೂಜಿತಾಂ, ರಾಮಭದ್ರಾ ಗೋವಿಂದಾ, ಆದೌ ದೇವಕೀ ಗರ್ಭ ಜನನಂ, ವಿಘ್ನಧ್ವಾಂತ ನಿವಾರಣೈಕತರಣೀ; ಷಣ್ಮುಖ ಸುಬ್ರಾಯ ಕುಣಿತ, ಮುಖ್ಯ ಸ್ತ್ರೀವೇಷದ 'ಚಿಕ್ಕ ಪ್ರಾಯದ ಬಾಲೆ ಚದುರೆ, ಕಾಮಿನಿ ಕರೆದು ತಾರೆ..', ಪ್ರಸಂಗ ಪೀಠಿಕೆ, ಪೀಠಿಕಾ ಸ್ತ್ರೀವೇಷ, ಒಡ್ಡೋಲಗ, ತೆರೆಕುಣಿತ, ಸಭಾಕುಣಿತ... ಹೀಗೆ ಪೂರ್ವರಂಗದ ಬಹುತೇಕ ಎಲ್ಲಾ ಹಾಡುಗಳು. ಲೀಲಾವತಿ ಬೈಪಾಡಿತ್ತಾಯರ ಹಾಡುಗಾರಿಕೆ. ಕು.ಸ್ವಾತಿ ಬೈಪಾಡಿತ್ತಾಯರ ಸಾಥ್. ಮದ್ದಳೆ-ಚೆಂಡೆಯಲ್ಲಿ ಹರಿನಾರಾಯಣ ಬೈಪಾಡಿತ್ತಾಯ, ಅವಿನಾಶ್ ಬೈಪಾಡಿತ್ತಾಯ. ಸಂಯೋಜನೆ ಗುರುಪ್ರಸಾದ್ ಬೈಪಾಡಿತ್ತಾಯ. ಪೂರ್ವರಂಗದ ಈ ದಾಖಲಾತಿಯು ಇಡೀ ಕುಟುಂಬದ ಕೊಡುಗೆ.
           "ಕೀರ್ತಿಶೇಷರಾದ ಗುರಿಕಾರ್ ನೆಡ್ಲೆ ನರಸಿಂಹ ಭಟ್, ಕುದ್ರೆಕೂಡ್ಲು ರಾಮಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ದಿವಾಣ ಭೀಮ ಭಟ್ಟರ ಒಡನಾಟದ ಸಂದರ್ಭಗಳಲ್ಲಿ ಹಾಗೂ ಶ್ರೀ ಧರ್ಮಸ್ಥಳದ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ದಶಕಕ್ಕೂ ಹೆಚ್ಚು ಕಾಲ ಗುರುಗಳಾಗಿ ಸೇವೆ ಸಲ್ಲಿಸಿದ ಅನುಭವದ ಆಧಾರದಲ್ಲಿ ಈ ದಾಖಲಾತಿ ಮಾಡಲಾಗಿದೆ. ರಾಗ ಮತ್ತು ಹಾಡುಗಳಲ್ಲಿ ಕಾಲಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆಗಳಾಗಿದ್ದರೂ, ಪೂರ್ವರಂಗದ ಮೂಲ ಚೌಕಟ್ಟಿನಡಿ ರೂಢಿಯಲ್ಲಿರುವ, ಹೆಚ್ಚಿನ ಹಿರಿಯ ಕಲಾವಿದರು ಒಪ್ಪಿಕೊಂಡಂತೆ ಪೂರ್ವರಂಗವನ್ನು ಪ್ರಸ್ತುತಪಡಿಸಿದ್ದೇವೆ" ಎನ್ನುತ್ತಾರೆ ಹರಿನಾರಾಯಣ ಬೈಪಾಡಿತ್ತಾಯರು. ಅಡಕ ತಟ್ಟೆಯ ರಕ್ಷಾಕವಚದಲ್ಲೂ ಆಶಯವನ್ನು ಮುದ್ರಿಸಿದ್ದಾರೆ.
           ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಈ ಯತ್ನವನ್ನು ಶ್ಲಾಘಿಸಿದ್ದಾರೆ, "ಪ್ರಕೃತ ಲಭ್ಯವಿರುವ ಪೂರ್ವರಂಗದ ಕ್ರಿಯಾರೂಪವನ್ನು ಪ್ರದರ್ಶಿಸಲು ಬೇಕಾದ ರಂಗ ಸಾಹಿತ್ಯವೆನಿಸಿದ, ವಾದನ ಕ್ರಿಯೆಗೆ ಸಂಬಂಧಿಸಿದ ತಾಳಗಳ ಸ್ವರೂಪ, ಬಿಡ್ತಿಗೆ, ಮುಕ್ತಾಯ, ತುಂಡು ಮುಕ್ತಾಯ, ಕಟ್ಟು ಮುಕ್ತಾಯ, ಮೂರು ಮುಕ್ತಾಯ, ಒಂಭತ್ತು ಮುಕ್ತಾಯ, ದೊಡ್ಡ ಬಿಡ್ತಿಗೆ, ಏಳು ತಾಳಗಳ ಬಿಡ್ತಿಗೆ, ಏರು ಬಿಡ್ತಿಗೆ, ಧಿತ್ತ, ದಿಗಿಣ ತೈತ ತಕತ, ತದ್ದೀಂಕಿಟ, ಕೌತುಕ.... ಮೊದಲಾದವುಗಳನ್ನು ಬಳಸುವ ಸಾಧನದ ಖಚಿತ ಮಾಹಿತಿಯನ್ನು ದೇಸೀಯ ಪದ್ಧತಿಯಲ್ಲಿ ಒದಗಿಸಿದ್ದಾರೆ."
           ವಿದ್ಯಾರ್ಥಿಗಳಿಗೆ ನಾಲ್ಕು ತಾಳ ಬಂದರೆ ಸಾಕು, ಪ್ರಸಂಗಕ್ಕೆ ಪದ್ಯ ಹೇಳಲು ಆತುರ. ಪೂರ್ವರಂಗದ ಎಲ್ಲಾ ಮಟ್ಟುಗಳನ್ನು ಕಲಿತ ಬಳಿಕವೇ ಪ್ರಸಂಗಕ್ಕೆ ಪದ್ಯ ಹೇಳಿದರೆ ರಾಗ, ಲಯ, ಮಟ್ಟುಗಳು ಗಟ್ಟಿಯಾಗುತ್ತವೆ - ಹಿಂದೊಮ್ಮೆ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಹೇಳಿದ ನೆನಪು. ಈ ಹಿನ್ನೆಲೆಯಲ್ಲಿ ಲೀಲಕ್ಕ ಅವರ ಶ್ರಮ ಸಾರ್ಥಕ. ಇದನ್ನು ಕರಗತ ಮಾಡಿಕೊಳ್ಳುವ ಹೊಣೆ  ಅಭ್ಯಾಸಿಗಳದು.
            ಯಕ್ಷಗಾನವೇ ಬದುಕಾಗಿರುವ ಬೈಪಾಡಿತ್ತಾಯ ಕುಟುಂಬದ ಈ ಸಾಹಸ, ಸಾಧನೆ ಶ್ಲಾಘನೀಯ. ಯಕ್ಷಗಾನದ ಕಾಳಜಿ ಮತ್ತು ತಮ್ಮ ಜ್ಞಾನದ ದಾಖಲಾತಿಯ ಉದ್ದೇಶವರಿಸಿದ 'ಪೂರ್ವರಂಗ'ದ ಈ ದಾಖಲಾತಿ ನಮ್ಮ ಸಂಗ್ರಹದಲ್ಲಿರಬೇಕು. ಎರಡು ಸಿಡಿಗಳಲ್ಲಿ (ಆಡಿಯೋ) ಪೂರ್ವರಂಗ ವಿಸ್ತೃತವಾಗಿದೆ. ಬೆಲೆ ಒಂದು ನೂರ ನಲವತ್ತೊಂಭತ್ತು ರೂಪಾಯಿಗಳು. ಆಸಕ್ತರು ಸಂಪರ್ಕಿಸಬಹುದು. (9945967337)
             ಸುಳ್ಯದ ತೆಂಕುತಿಟ್ಟು ಯಕ್ಷಗಾನದ ಹಿತರಕ್ಷಣಾ ವೇದಿಕೆಯು ಹಿಂದೆ ಬಲಿಪ ನಾರಾಯಣ ಭಾಗವತರ ಕಂಠಶ್ರೀಯಲ್ಲಿ ಪೂರ್ವರಂಗದ ಆಡಿಯೋ ಧ್ವನಿಸುರುಳಿಯನ್ನು ರೂಪಿಸಿರುವುದು ಉಲ್ಲೇಖನೀಯ.


Monday, September 21, 2015

ಅಭಿವ್ಯಕ್ತಿಯ ಅಭಿಮಾನದಿಂದ ರಂಗಸುಖ

              "ಅಭಿಮಾನಿಗಳು ಚೌಕಿಯಲ್ಲಿ ಹೆಚ್ಚು ಹೊತ್ತು ಕಾಲ ಕಳೆಯಕೂಡದು. ಪ್ರದರ್ಶನ ನೋಡುತ್ತಾ ಅಭಿವ್ಯಕ್ತಿಗೆ ಅಭಿಮಾನ, ಮೆಚ್ಚುಗೆ ಸೂಚಿಸಿದರೆ ಕಲಾವಿದನಿಗೆ ಹೆಮ್ಮೆ. ವೇಷ ತಯಾರಿಯ ಪ್ರಕ್ರಿಯೆಯನ್ನು ಪೂರ್ತಿ ನೋಡಿಬಿಟ್ಟರೆ ರಂಗದಲ್ಲಿ ಪಾತ್ರವಾಗಿ ಕಲಾವಿದನನ್ನು ಸ್ವೀಕರಿಸಲು ಕಷ್ಟವಾಗುತ್ತದೆ," ಹಿರಿಯ ಕಲಾವಿದರೊಬ್ಬರು ಯಕ್ಷಗಾನದ ಬಣ್ಣದ ಮನೆ(ಚೌಕಿ)ಯಲ್ಲಿ ಆಡಿದ ಮನದ ಮಾತು ಮನನೀಯ. ಎಷ್ಟು ಮಂದಿಗೆ ಹಿತವಾಯಿತೋ ಗೊತ್ತಿಲ್ಲ. ನನಗಂತೂ ಚಿಂತನೆಗೆ ಅವಕಾಶ ಮಾಡಿಕೊಟ್ಟಿತ್ತು. ಇಂತಹುದೇ ಪ್ರಶ್ನೆಯೊಂದು ವಾಟ್ಸಪ್ ಸಾಮಾಜಿಕ ತಾಣದಲ್ಲೂ ಹರಿದು ಬಂದ ನೆನಪು.
             ಯಕ್ಷಗಾನಕ್ಕೆ ಅಭಿಮಾನಿಗಳು ಆಸ್ತಿ. ಈಚೆಗಿನ ವರ್ಷದಲ್ಲಂತೂ ಯುವ ಮನಸ್ಸುಗಳು ಅಭಿಮಾನವಿರಿಸಿಕೊಂಡು ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆ. ಪ್ರದರ್ಶನಗಳಿಗೆ ತುಂಬಿ ತುಳುಕುವ ಸಭಾಭವನವನ್ನು ನೋಡಿದಾಗ ಕಣ್ಣು ತುಂಬಿಬರುತ್ತದೆ. ಕಲಾವಿದರಿಗೂ ಸ್ಫೂರ್ತಿ.  ಫೇಸ್ಬುಕ್, ವಾಟ್ಸಪ್ಗಳಲ್ಲಿ ಕಲೆಯ ಕುರಿತು ಮಾತುಕತೆಗಳು ನಿರಂತರ. ಹಾಡು, ಚಿತ್ರ, ಪ್ರದರ್ಶನಗಳ ಅಪ್ಡೇಟ್ ಆಗುತ್ತಿರುತ್ತದೆ. ಸಮಸಾಮಯಿಕ ವಿಚಾರಗಳು ನಾಡಿನೆಲ್ಲೆಡೆ ಪ್ರಸಾರವಾಗುತ್ತದೆ. ವಾಹಿನಿಗಳಲ್ಲಿ ನೇರ ಪ್ರಸಾರ. ಇವೆಲ್ಲವೂ ಕಲೆಯೊಂದರ ಬೆಳವಣಿಗೆಯಲ್ಲಿ ಮೈಲುಗಲ್ಲು.
               ಚೌಕಿಯ ವಿಚಾರಕ್ಕೆ ಬರೋಣ. ಹೌದು. ಹಿರಿಯ ಕಲಾವಿದರ ಅನಿಸಿಕೆಗೆ ಕಲಾವಿದನಾಗಿ ನನ್ನದೂ ಸಹಮತ. ಚೌಕಿ ಅಂದರೆ ಕಲಾವಿದರಿಗೆ ಮನೆ ಇದ್ದಂತೆ. ವೇಷಗಳು ಸಿದ್ಧವಾಗುವ ತಾಣ. ಪ್ರದರ್ಶನಕ್ಕೆ ಬೇಕಾದ ವಿಚಾರಗಳು ಅಲ್ಲಿ ಚರ್ಚಿಸಲ್ಪಡುತ್ತವೆ. ಹೆಚ್ಚು ಏಕಾಂತ ಬೇಡುವ ಜಾಗ. ಹೊಸ ಪ್ರಸಂಗವಾದರಂತೂ ಕಲಾವಿದರಿಗೆ ಪೇಚಾಟ. ತಂತಮ್ಮ ಪಾತ್ರಗಳ ಕುರಿತು ಚಿಂತಿಸುವ, ಚಿತ್ರಿಸುವ ಹೊತ್ತಲ್ಲಿ ಇತರ ವಿಚಾರಗಳಿಂದ ದೂರವಿದ್ದಷ್ಟೂ ಪ್ರದರ್ಶನದ ತಯಾರಿ ಸುಪುಷ್ಟಿಯಾಗುತ್ತದೆ.
              ಹೀಗಿರುತ್ತಾ ಅಭಿಮಾನಿ ಕಲಾವಿದರ ಜತೆಗೆ ಚೌಕಿಯಲ್ಲೇ ಹೆಚ್ಚು ಹೊತ್ತು ಕಳೆಯುವುದು ಉಳಿದ ಕಲಾವಿದರ ಏಕಾಂತಕ್ಕೆ ತೊಂದರೆಯಾಗುತ್ತದೆ. ಅನಿವಾರ್ಯವಾದರೆ, ಹೆಚ್ಚು ವಿಚಾರಗಳ ಸಮಾಲೋಚನೆ ಇದ್ದರೆ ಚೌಕಿಯ ಹೊರಗೆ ಬಂದು ಮಾತನಾಡಬಹುದು. ಅದರರ್ಥ ಚೌಕಿಯಲ್ಲಿರಲೇಬರಲೇ ಬಾರದು ಎಂದಲ್ಲ. ಕಲಾವಿದರನ್ನು ಮಾತನಾಡಿಸಿ, ಕುಶಲೋಪರಿ ವಿಚಾರಿಸಿ ನಾಲ್ಕೈದು ನಿಮಿಷದಲ್ಲಿ ವಿರಮಿಸಿ ಪ್ರೇಕ್ಷಕರಾಗಿ ಕುಳಿತುಕೊಂಡರೆ ಎಷ್ಟೊಂದು ಚಂದ. ಕಲಾವಿದರನ್ನು ಖಾಸಗಿಯಾಗಿ ಕೇಳಿ. ಅವರು ಚೌಕಿಯಲ್ಲಿ ಹೆಚ್ಚು ಮಾತುಕತೆಯನ್ನು ಇಷ್ಟಪಡುವುದಿಲ್ಲ.
              ಕಲಾವಿದರಿಗೂ ಮುಜುಗರ. ತನ್ನ ಅಭಿಮಾನಿಗಳು ಬಂದಾಗ ಕಲಾವಿದ ವೇಷದ ಸಿದ್ಧತೆಯಲ್ಲಿದ್ದಾರೆ ಎಂದಿಟ್ಟುಕೊಳ್ಳಿ. ಬರಿಮೈಯಲ್ಲಿ ಹೇಗೆ ಮಾತನಾಡಿಸಲಿ? ಮಾತನಾಡದಿದ್ದರೆ ಆಭಿಮಾನಕ್ಕೆ ಮಸುಕು. ಮಿತವಾಗಿ ಮಾತನಾಡಿದರೆ ಅಭಿಮಾನಿಗಳು ಬೇಸರ ಪಟ್ಟಾರು ಎನ್ನುವ ಗುಮಾನಿ. ಮನಃಸ್ಥಿತಿಯು ಈ ಗೊಂದಲದಲ್ಲೇ ಸುತ್ತುತ್ತಿರುತ್ತದೆ. ಮುಖವರ್ಣಿಕೆ ಮಾಡುತ್ತಿರುವಾಗ ಹತ್ತಿರ  ಕುಳಿತು ಕಳೆದು ಹೋದ ಪ್ರದರ್ಶನಗಳ ಪ್ರಶಂಸೆ, ಗೇಲಿ, ಹಗುರ ಮಾತುಗಳು ತೇಲುವುದನ್ನು ನೋಡಿದ್ದೇನೆ. ಇದರಿಂದ ಕಲಾವಿದನಿಗೆ ಅಂದಿನ ತನ್ನ ಪಾತ್ರಕ್ಕೆ ಮಾನಸಿಕವಾಗಿ ತಯಾರಿಯಾಗಲು ಕಷ್ಟವಾಗುತ್ತದೆ. ನಷ್ಟ ಯಾರಿಗೆ ಹೇಳಿ? ಅವರ ಪಾತ್ರವನ್ನು ನೋಡಲು ಬಂದ ಅಭಿಮಾನಿಗಳಾದ ನಮಗೆ ತಾನೆ?
            ಬಣ್ಣದ ವೇಷವೊಂದು ರಂಗಕ್ಕೆ ತನ್ನ ಪ್ರವೇಶಕ್ಕಿಂತ ಐದಾರು ಗಂಟೆಗಳ ಮೊದಲೇ ತಯಾರಿ ಬಯಸುತ್ತದೆ. ಚಿಟ್ಟಿ ಇಡುವ ಕೆಲಸ ಸೂಕ್ಷ್ಮತೆ ಮತ್ತು ಎಚ್ಚರವನ್ನು ಬೇಡುವ ಜ್ಞಾನ. ಏಕಾಗ್ರತೆಯೇ ಬಣ್ಣಗಾರಿಕೆಯ ಸುಭಗತನಕ್ಕೆ ಮಾನದಂಡ. ಸ್ವಲ್ಪ ಹೆಚ್ಚು ಕಮ್ಮಿ ಆದರಂತೂ ವೇಷ ಅಂದಗೆಡುತ್ತದೆ. ವೇಷ ತಯಾರಿಯ ಪ್ರತಿಹಂತಕ್ಕೂ ನಾವು ಪ್ರತ್ಯಕ್ಷದರ್ಶಿಗಳಾದರೆ ಆ ವೇಷ ರಂಗಕ್ಕೆ ಬಂದಾಗ ರಮ್ಯಾದ್ಭುತ ಲೋಕವನ್ನು ಅನುಭವಿಸಲು ಕಷ್ಟವಾಗುತ್ತದೆ.
            ಕಲಾವಿದರು ಬೇರೆ ಬೇರೆ ಪ್ರದರ್ಶನಗಳಲ್ಲಿ ಭಾಗವಹಿಸಿ ಬಂದಿರುವಾಗ ನಿದ್ರಾವಿಹೀನತೆಯಿಂದ ಸುಸ್ತಾಗಿರುವುದು ಸಹಜ. ಚೌಕಿಗೆ ಬೇಗನೆ ಬಂದು ವಿಶ್ರಾಂತಿಯಲ್ಲಿರುತ್ತಾರೆ. ಅಂತಹ ಕಲಾವಿದರನ್ನು ಎಬ್ಬಿಸಿ ನಮ್ಮ ಅಭಿಮಾನವನ್ನು ಮಾತಿನ ಮೂಲಕ ಹರಿಸುವುದನ್ನು ಕಣ್ಣಾರೆ ನೋಡಿದ್ದೇನೆ. ಅನುಭವಿಸಿದ್ದೇನೆ. ಇದರಿಂದಾಗಿ ಕಲಾವಿದರಿಗೆ ಪಾತ್ರವನ್ನು ನಿರೀಕ್ಷಿತ ರೀತಿಯಲ್ಲಿ ಅಭಿವ್ಯಕ್ತಿಸಲು ತ್ರಾಸವಾಗುತ್ತದೆ. ಅಂತಹ ಹೊತ್ತಲ್ಲಿ ಅಭಿಮಾನಿಗಳಾದ ನಾವೇ, ’ಛೇ... ಇವತ್ತು ಅವರ ಪಾತ್ರ ಸೊರಗಿದೆ. ಮೊನ್ನೆ ಚೆನ್ನಾಗಿತ್ತು'  ಎಂದು ಗೊಣಗುತ್ತೇವೆ. 
            ಈಗಿನ ಬಹುತೇಕ ಪ್ರದರ್ಶನಗಳಲ್ಲಿ ಪ್ರತಿಭಾವಂತ ಛಾಯಾಗ್ರಾಹಕರ ಕೈಚಳಕ ನಿಜಕ್ಕೂ ಅದ್ಭುತ. ಇವರು ಚೌಕಿ ಮತ್ತು ರಂಗಕ್ಕೆ ಏಕಕಾಲದಲ್ಲಿ ಕಣ್ಗಾವಲಿನಲ್ಲಿರುತ್ತಾರೆ. ಕಲಾವಿದರನ್ನು 'ಮಾತನಾಡಿಸದೆ' ತಮ್ಮಷ್ಟಕ್ಕೆ ಬೇಕಾದ ಕೋನದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸುವ ಯಕ್ಷಪ್ರಿಯರ ಕೈಚಳಕಕ್ಕೆ ಬೆರಗಾಗಿದ್ದೇನೆ. ಚಿತ್ರಗಳೇ ಒಂದು ಪ್ರದರ್ಶನ. ಅದಕ್ಕೆ ಭಾವ, ಭಾವನೆಯನ್ನು ಆವಾಹಿಸುವ ಮನಸ್ಸನ್ನು ಸಜ್ಜುಗೊಳಿಸುವ ಛಾಯಾಗ್ರಾಹಕ ಬಂಧುಗಳ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ಯಕ್ಷಗಾನವೊಂದು ಕಲೆ. ಅದರೊಳಗಿನ ಜೀವಸತ್ವದ ಅಭಿವ್ಯಕ್ತಿ ಕಲಾವಿದನಿಂದ. ಹಾಗಾಗಿ ಕಲೆ ಮತ್ತು ಕಲಾವಿದ ಒಂದೇ ಸರಳರೇಖೆಯಲ್ಲಿದ್ದಾಗ ಪ್ರದರ್ಶನದ ನಿಜಸುಖ ಅನುಭವಿಸಲು ಸಾಧ್ಯವಾಗುತ್ತದೆ. ಪಾತ್ರಗಳು ನಮ್ಮೊಳಗೆ ರಿಂಗಣಿಸಲು ಸಹಾಯವಾಗುತ್ತದೆ.
           ಅಭಿಮಾನದ ಪರಾಕಾಷ್ಠೆಯಲ್ಲಿ ಕಲೆ ಮತ್ತು ಕಲಾವಿದ ಪ್ರತ್ಯೇಕಗೊಳ್ಳುತ್ತಿದ್ದಾನೆ ಎಂದು ಅನಿಸುತ್ತದೆ.  ಹೀಗಾಗದಂತೆ ಅಭಿಮಾನಿಗಳಾದ ನಾವು ಎಚ್ಚರವಾಗುವುದೇ ಕಲೆಗೆ ಮತ್ತು ಕಲಾವಿದನಿಗೆ ಕೊಡುವ ಮಾನ-ಸಂಮಾನ. ನಮ್ಮೊಳಗೆ ವೈಯಕ್ತಿಕ ಅಭಿಮಾನಕ್ಕಿಂತಲೂ ಕಲಾಭಿಮಾನಕ್ಕೆ ಸ್ಥಾನ ಮೀಸಲಿರಿಸೋಣ.

 (ಸಾಂದರ್ಭಿಕ ಚಿತ್ರ)  (ಚಿತ್ರ : ಶ್ಯಾಮ್ ಪ್ರಸಾದ್ ಕುಂಚಿನಡ್ಕ) 
(19-9-2015- ಪ್ರಜಾವಾಣಿ-ದಧಿಗಿಣತೋ ಅಂಕಣ)


Wednesday, September 16, 2015

ಚಿಕ್ಕ ಮೇಳದ ದೊಡ್ಡ ಹೆಜ್ಜೆ

              "ಯಕ್ಷಗಾನ ಹೈಟೆಕ್ ಆಗತ್ತಿದೆ. ಕಲಾವಿದರು ಇನ್ಸ್ಟಂಟ್ ಆಗುತ್ತಿದ್ದಾರೆ.." - ಸಮಾರಂಭವೊಂದರಲ್ಲಿ ಮಾತಿನ ಮಧ್ಯೆ ಮಿಂಚಿದ ಗಣ್ಯರೊಬ್ಬರ ಮಾತು. ಹೌದು, ಯಕ್ಷಗಾನವನ್ನು ನೋಡುವ, ಅನುಭವಿಸುವ, ಅರ್ಥ ಮಾಡುವ್ ಮನಃಸ್ಥಿತಿ ಬದಲಾಗಿದೆ. ಸಮಗ್ರತೆಯ ನೋಟಕ್ಕೆ ಮಸುಕು ಬಂದಿದೆ. ಬಿಡಿಬಿಡಿಯಾದ ಮಾದರಿಗಳು ಚಿಗುರಿವೆ.
             ಹೈಟೆಕ್ಕಿನ ಪಾಶಕ್ಕೆ ಸಿಗದ ಕಲಾವಿದರು ಎಷ್ಟಿಲ್ಲ? ಅವರದನ್ನು ಅಪೇಕ್ಷೆ ಪಡುವುದಿಲ್ಲ ಬಿಡಿ. ಆದರೆ ಬದುಕಿನ ಪ್ರಶ್ನೆ ಬಂದಾಗ ಮೇಳದ ತಿರುಗಾಟದಿಂದ ಆರು ತಿಂಗಳು ಹೊಟ್ಟೆ ತಂಪಾಗುತ್ತದೆ. ಮಿಕ್ಕುಳಿದ ಮಾಸಗಳಲ್ಲಿ ಯಕ್ಷಗಾನವಲ್ಲದೆ ಅನ್ಯ ಉದ್ಯೋಗ ಹೊಂದದು. ಈ ಆಶಯದಿಂದ 'ಶ್ರೀ ದುರ್ಗಾಪರಮೇಶ್ವರೀ (ಶ್ರೀ ಉಳ್ಳಾಲ್ತಿ) ಕೃಪಾಶ್ರಿತ ಯಕ್ಷಗಾನ ಮಂಡಳಿ, ಅಂಗ್ರಿ-ಕನ್ಯಾನ' ರೂಪುಗೊಂಡಿದೆ. ಉಳಿದ ಮೇಳಗಳು ಪತ್ತನಾಜೆಗೆ ಗೆಜ್ಜೆ ಬಿಚ್ಚಿ, ದೀಪಾವಳಿಗೆ ಗೆಜ್ಜೆ ಕಟ್ಟುವಲ್ಲಿಯ ತನಕ ಇದು ಸಕ್ರಿಯವಾಗಿದೆ. ಇದೀಗ ಎರಡನೇ ವರುಷದ ತಿರುಗಾಟ.  
             ಆರು ಮಂದಿ ಕಲಾವಿದರ 'ಚಿಕ್ಕ ಮೇಳ'. ಹಿಂದಿನ ಕಲಾವಿದರನ್ನು ಮಾತನಾಡಿಸಿದಾಗ ತಾವೂ ಚಿಕ್ಕಮೇಳಗಳಲ್ಲಿ ಬಣ್ಣ ಹಚ್ಚಿದ ದಿವಸಗಳನ್ನು ನೆನಪಿಸಿಕೊಳ್ಳುತ್ತಾರೆ. ಒಂದು ಕಾಲಘಟ್ಟದಲ್ಲಿ ಕಲಾವಿದರಿಗೆ ಚಿಕ್ಕ ಮೇಳವೇ ಆಸರೆ. ಭಾಗವತ, ಚೆಂಡೆ-ಮದ್ದಳೆ ವಾದಕರು, ರಾಧಾ-ಕೃಷ್ಣ ವೇಷಗಳು ಮತ್ತು ಓರ್ವ ನಿರ್ವಹಣೆ. ಮನೆಮನೆಗೆ ಭೇಟಿ ನೀಡಿ, ಪೌರಾಣಿಕ ಕಥಾನಕದ ಒಂದು ಸನ್ನಿವೇಶದ ಸಂಭಾಷಣೆಯನ್ನು ಪ್ರಸ್ತುತಪಡಿಸುತ್ತಾರೆ. ಮನೆಯವರು ನೀಡುವ ಸಂಭಾವನೆಯ ಮೊತ್ತಗಳು ತಂಡದ ಉಸಿರು. ಅಲ್ಲಿಲ್ಲಿ ಕೆಲವು ತಂಡಗಳು ಸದ್ದು ಮಾಡುತ್ತಿವೆ.
              ಕನ್ಯಾನ-ಅಂಗ್ರಿಯ 'ಚಿಕ್ಕಮೇಳ'ವು ಪುತ್ತೂರು ಪರಿಸರದಲ್ಲಿ ಕಳೆದ ವರುಷ ಯಶಸ್ವಿ ತಿರುಗಾಟ ಮಾಡಿದೆ. ನಗರವನ್ನೂ ಸೇರಿಸಿಕೊಂಡು ಸುತ್ತಲಿನ ಹಳ್ಳಿಗಳಲ್ಲಿ ಚೆಂಡೆಮದ್ದಳೆಯ ಸದ್ದನ್ನು ಅನುರಣಿಸಿದೆ. ಜನರು ಹಾರ್ದಿಕವಾಗಿ ತಂಡವನ್ನು ಸ್ವೀಕರಿಸಿದ್ದಾರೆ. ಅನ್ಯಧರ್ಮೀಯರೂ ಸ್ಪಂದಿಸಿದ್ದಾರೆ. ತಂಡದ ಸದಸ್ಯರ ಸೌಜನ್ಯ ನಡವಳಿಕೆಯು ವಿಶ್ವಾಸವೃದ್ಧಿಗೆ ಕಾರಣವಾಗಿದೆ. ನಾಲ್ಕು ತಿಂಗಳುಗಳಲ್ಲಿ ಸಾವಿರ, ಸಾವಿರದೈನೂರು ಮನೆಗಳಿಗೆ ಮೇಳ ಕಾಲಿಟ್ಟಿದೆ.
                "ಚಿಕ್ಕಮೇಳದ ವೇಷವು ಅಂಗಳದಲ್ಲಿ ಕುಣಿಯದು. ಮನೆಯ ಒಳಗಡೆ ಚಾವಡಿಯಲ್ಲಿ ಅವಕಾಶ ಮಾಡಿಕೊಡಬೇಕೆಂದು ವಿನಂತಿಸುತ್ತಾರೆ. ಇದನ್ನು ಒಪ್ಪದ ಮಂದಿ ಇದ್ದಾರೆ. ಜಗಲಿಗೆ ಪ್ರವೇಶ ಕೊಡದ ಸಹೃದಯಿಗಳಿದ್ದಾರೆ! ತಂಡ ಅಂಗಳಕ್ಕೆ ಬಂದಾಗ ಹಗುರವಾಗಿ ವ್ಯವಹರಿಸಿದವರೂ ಇದ್ದಾರೆ. ಯಕ್ಷಗಾನದ ಮುಂದೆ ಮಾನ-ಅಪಮಾನ ನಮಗೆ ಸಮಾನ." ಎನ್ನುತ್ತಾರೆ ತಂಡದ ಮುಖ್ಯಸ್ಥ ಜಗದೀಶ ಕನ್ಯಾನ. ಇವರು ಶ್ರೀ ಕಟೀಲು ಮೇಳದ ಕಲಾವಿದ.
                ದಿವಸಕ್ಕೆ ಇಪ್ಪತ್ತರಿಂದ ಇಪ್ಪತ್ತೈದು ಮನೆಗಳ ಆಯ್ಕೆ. ಮೊದಲೇ ಗೊತ್ತುಮಾಡಿ ಕರಪತ್ರವನ್ನು ಹಂಚುತ್ತಾರೆ. ಸಂಜೆ ಆರಕ್ಕೆ ದಿಗ್ವಿಜಯ ಹೊರಟರೆ ಹತ್ತೂವರೆಗೆ ಅಂದಂದಿನ ತಿರುಗಾಟ ಕೊನೆ. ಇಪ್ಪತ್ತು ರೂಪಾಯಿಯಿಂದ ಒಂದು ಸಾವಿರ ರೂಪಾಯಿ ತನಕ ಸಂಭಾವನೆಯನ್ನು ನೀಡಿದ ಕಲಾ ಪೋಷಕರ ಪ್ರೋತ್ಸಾಹವನ್ನು  ನೆನೆಯುತ್ತಾರೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ತಂಡಕ್ಕೆ ವಸತಿ, ಅಶನದ ಕಲಾಶ್ರಯ ನೀಡಿದೆ. ಒಂದೆರಡು ಯುವಕ ಮಂಡಲವು ತಂಡಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡಿ ತನ್ನ ವ್ಯಾಪ್ತಿಯ ಎಲ್ಲಾ ಮನೆಗಳ ಸಂದರ್ಶನಕ್ಕೆ ಅನುವು ಮಾಡಿಕೊಟ್ಟಿತ್ತು.
                ಚಿಕ್ಕ ಮೇಳವು ಕೇವಲ ಕುಣಿತಕ್ಕೆ ಸೀಮಿತವಾಗಿಲ್ಲ. ಮಾನವೀಯ ಸ್ಪಂದನವನ್ನು ಹೂರಣಕ್ಕೆ ಸೇರಿಸಿಕೊಂಡಿದೆ. ತಂಡವು ಹೋದಾಗ ಆ ಮನೆಯಲ್ಲಿ ಯಾರಿಗಾದರೂ ಅಸೌಖ್ಯವಿದೆ ಎಂದಿಟ್ಟುಕೊಳ್ಳೋಣ. ಮನೆಯ ಯಜಮಾನ ನೀಡಿದ ಸಂಭಾವನೆಗೆ ಒಂದಿಷ್ಟು ತಮ್ಮ ದೇಣಿಗೆಯನ್ನೂ ಸೇರಿಸುತ್ತಾರೆ. ವೇಷ ಕುಣಿದ ಬಳಿಕ ಪ್ರಸಾದರೊಂದಿಗೆ ಈ ಮೊತ್ತವನ್ನು ಸಹಕಾರದ ನೆಲೆಯಲ್ಲಿ ಮರಳಿಸುತ್ತಾರೆ. ಮೊತ್ತ ಕಿಂಚಿತ್ ಆಗಿರಬಹುದು, ಆದರೆ ಇಂತಹ ಮಾನವೀಯ ಮುಖ ಯಾವ ಹೈಟೆಕ್ ವ್ಯವಸ್ಥೆಯಲ್ಲಿದೆ? ತಂಡದ ಸದಸ್ಯರು ಶ್ರೀಮಂತರಲ್ಲ, ಅವರಲ್ಲಿ ಹೃದಯ ಶ್ರೀಮಂತಿಕೆ ಇದೆ. ಕಷ್ಟ-ಸುಖಗಳ, ನೋವು-ನಲಿವುಗಳ ಅನುಭವವಿದೆ. ಸಮಾಜದಲ್ಲಿ ಕಲಾವಿದರ ಕುರಿತು ಗೌರವ ಭಾವನೆ ಮೂಡಲು ಈ ಕಾರ್ಯಹೂರಣವೊಂದೇ ಸಾಕು.
             ಈ ವರುಷ ಪುತ್ತೂರಿನಿಂದ ಮೇಳ ಹೊರಟಿದೆ. ತಂಡವು ಅನುಭವಿ ಗುರುಗಳಿಂದ  ನಾಟ್ಯ ತರಬೇತಿ ಆರಂಭಿಸಿದೆ. ಬಣ್ಣದ ತರಗತಿಗಳನ್ನು ಏರ್ಪಡಿಸುವ ಯೋಜನೆ ಹೊಂದಿದೆ.  ಚಿಕ್ಕಮೇಳದ ತಿರುಗಾಟದ ನೆನಪಿಗಾಗಿ ಕನ್ಯಾನದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಿಂಚಿತ್ ದೇಣಿಗೆ ನೀಡಲು ನಿರ್ಧರಿಸಿದ್ದೇವೆ. ಈ ವರುಷ ಎರಡು ತಂಡವಾಗಿದೆ. ಒಂದು ಪುತ್ತೂರು ಸುತ್ತಮುತ್ತ ತಿರುಗಾಟ ಮಾಡಿದರೆ ಮತ್ತೊಂದು ಕಬಕವನ್ನು ಕೇಂದ್ರವಾಗಿಟ್ಟುಕೊಂಡಿದೆ, ಎನ್ನುತ್ತಾರೆ ಜಗದೀಶ್.
           ಚಿಕ್ಕ ಮೇಳದ ತಂಡಕ್ಕೆ ಹೊಟ್ಟೆಪಾಡಿನ ಉದ್ದೇಶವಾದರೂ ಅದರಲ್ಲಿ ಸಾಮಾಜಿಕ ಕಳಕಳಿ, ಶಿಸ್ತು, ಪ್ರಾಮಾಣಿಕತೆ ಮತ್ತು ಬದ್ಧತೆಯಿದೆ. ಈ ನಾಲ್ಕು ಅಂಶಗಳು ಜೀವಂತವಾಗಿರುವ ತನಕ ತಂಡ ಸದೃಢ. ಜತೆಗೆ ಯಕ್ಷಗಾನದ ಕುರಿತು ಅಪ್ಪಟ ಪ್ರೀತಿಯೂ ಸೇರಿದೆ.
              ರಿಮೋಟ್ಗಳು ಸಾಂಸ್ಕೃತಿಕ ಆಯ್ಕೆಯನ್ನು ಮಾಡುತ್ತಿರುವ ಪ್ರಸ್ತುತ ದಿನಮಾನದಲ್ಲಿ ಯಕ್ಷಗಾನದ ಮಾದರಿಯನ್ನು ಮನೆಮನೆಗೆ ಒಯ್ಯುವ ಚಿಕ್ಕಮೇಳದ ಸಾಧನೆಯೊಂದು ದೊಡ್ಡ ಹೆಜ್ಜೆ.

Friday, September 4, 2015

ಶ್ರದ್ಧೆ-ವಾಸ್ತವಗಳ ಮಿಳಿತದ ಕಾಲಮಿತಿ

                ಕಾಲಮಿತಿ ಯಕ್ಷಗಾನದ ಮಾತುಕತೆಗಳು ಮರುಜೀವ ಪಡೆಯುತ್ತಿದೆ. ಶ್ರದ್ಧೆಯ ನೆರಳಿನಲ್ಲಿ ಕಟು ವಿಚಾರಗಳು ತೀಕ್ಷ್ಮವಾಗಿರುತ್ತದೆ. ಕಲೆಯೊಂದರ ಔನ್ನತ್ಯಕ್ಕಿದು ಒಳಸುರಿ. ವಾಸ್ತವಕ್ಕೆ ಬಂದಾಗ ರಾಜಿಯ ಛಾಯೆ. ಸಾಂಸ್ಕೃತಿಕ ಪಲ್ಲಟಗಳ ಮಧ್ಯೆ ಪರಂಪರೆಯ ಸೌಂದರ್ಯವನ್ನು ಉಳಿಸಿಕೊಳ್ಳುವ ಎಚ್ಚರ. ಹಾಗಾಗಿ ಶ್ರದ್ಧೆ ಮತ್ತು ವಾಸ್ತವಗಳನ್ನು ಮಿಳಿತಗೊಳಿಸಲೇ ಬೇಕಾಗಿದೆ.
              ಆಟವೇ ಇರಲಿ, ಕೂಟವೇ ಇರಲಿ, ರಾತ್ರಿಯಿಡೀ ನಡೆಯುವ ಕಲಾಪ. ಪ್ರದರ್ಶನದ ಹಿಂದು ಮುಂದಿನ  ವಿಮರ್ಶೆಗಳಲ್ಲಿ ಸಾಂಸ್ಕೃತಿಕ ಗಟ್ಟಿತನಗಳಿದ್ದ ಕಾಲಕ್ಕೆ ಹಿರಿಯರು ಸಾಕ್ಷಿಗಳಾಗುತ್ತಾರೆ. ಅಲ್ಲೋ ಇಲ್ಲೋ ರಾತ್ರಿಯಿಡೀ ಬಿಟ್ಟರೆ ತಾಳಮದ್ದಳೆಗಳು ಕಾಲಮಿತಿಗೊಂಡಿವೆ. ಆಟಗಳೂ ಅದೇ ಜಾಡಿನಲ್ಲಿ ಜಾರಿವೆ, ಜಾರುತ್ತಿವೆ.
             ರಾತ್ರಿಯ ಪ್ರದರ್ಶನಗಳಲ್ಲಿ ಯಕ್ಷಗಾನೀಯವಾದ ರಸ ಸಂದರ್ಭಗಳು ವೈಭವ ಪಡೆಯುತ್ತವೆ. ಪಾತ್ರಕ್ಕಿರುವ ಎಲ್ಲಾ ಸಾಧ್ಯತೆಗಳನ್ನು ಸೂರೆಗೊಳ್ಳಲು ಯಥೇಷ್ಟ ಅವಕಾಶ. ಈ ಉಪಾಧಿಯಲ್ಲಿಯೇ ಕಲಾವಿದ ಸಶಕ್ತನಾಗಿ ಬೆಳೆಯುತ್ತಾನೆ. ಬಾಲಗೋಪಾಲ ವೇಷದಿಂದ ತೊಡಗಿ ಮುಖ್ಯ ಪಾತ್ರಗಳ ತನಕ ರಂಗವೇ ಗುರುಕುಲ. ಕಲಾವಿದರ ಒಡನಾಟವೇ ಪಠ್ಯ. ಅನಿವಾರ್ಯವಾದ ಅಲಿಖಿತ ಪದ್ಧತಿಗಳು ಕಲಾವಿದರ ಬೆಳವಣಿಗೆಯ ಸಿದ್ಧಾಹಾರ.
             ಬೆರಳೆಣಿಕೆಯ ಮೇಳಗಳಲ್ಲಿ ಇಂತಹ ಶೈಕ್ಷಣಿಕ ರೂಢನೆಯಿದೆ. ಮಿಕ್ಕಂತೆ ಕಲಿಕೆ ಎನ್ನುವುದು ಹೆಜ್ಜೆ, ದಿಂಞಣಗಳಿಗೆ ಸೀಮಿತವಾಗಿದೆ. ವೇಗದ ಬದುಕಿನಲ್ಲಿ ಐದಾರು ತಿಂಗಳಲ್ಲೇ ದಿಢೀರ್ ಕಲಾವಿದರಾಗಬಹುದು! ಕಂಠ, ಸೊಂಟ ತ್ರಾಣಗಳಿದ್ದರೆ ಸಾಕು. ಪ್ರೇಕ್ಷಕರೂ ಇಂತಹ ಕಲಾವಿದರ ಸ್ವಾಗತಕ್ಕೆ ಸಜ್ಜಾಗುತ್ತಾರೆ! ಆಗ ರಂಗಕಲಿಕೆಯ ಆಯುಸ್ಸು ಇಳಿಜಾರಿನತ್ತ ನೋಡಲುಪಕ್ರಮಿಸುತ್ತದೆ. ಎಂಟೋ ಒಂಭತ್ತೋ ಘಂಟೆಗೆ ಶುರುವಾಗುವ ಪೂರ್ವರಂಗಕ್ಕೆ ಆಕಳಿಕೆಯ ಮಾಲೆ. ಇಡೀರಾತ್ರಿ ಕುಳಿತು ಆಟ ನೋಡುವ ಮನಃಸ್ಥಿತಿಯೂ ಮಂಕಾಗುತ್ತಿದೆ.
               ಯಕ್ಷಗಾನದ ಸೌಂದರ್ಯ ವೈಭವ - ಪೂರ್ವರಂಗವೂ ಸೇರಿ - ದರ್ಶನಕ್ಕೆ ರಂಗ ಮತ್ತು ಕಲಾವಿದರ ಶ್ರಮ ಗುರುತರ. ಕಲೆಯ ಪ್ರಾಕಾರವೊಂದು ಅನುಷ್ಠಾನಗೊಂಡಾಗಲೇ ಬೆಳೆಯುತ್ತದೆ, ಉಳಿಯುತ್ತದೆ. ಅದನ್ನು ಬೆಂಬಲಿಸುವ, ಅದರಲ್ಲಿ  ಸೌಂದರ್ಯವನ್ನು ಕಾಣುವ ಅರಿವು ಮತ್ತು ಮನಃಸ್ಥಿತಿಯನ್ನು ಪ್ರೇಕ್ಷಕರಾದ ನಾವು ರೂಢಿಸಿಕೊಳ್ಳಬೇಕು. ಅಭಿಮಾನದ ಹೊನಲು ರಂಗದ ಉಳಿವಿಗೆ ಪೂರಕವಾಗಬೇಕು. ವಿಪರೀತ ಅಭಿಮಾನವು ಕಲಾವಿದನ ಬೌದ್ಧಿಕ ಸ್ರೋತಕ್ಕೆ ತಡೆಯಾಗುತ್ತದೆ.
               ಕೆಲವು ಬಯಲಾಟವನ್ನು ನೋಡುತ್ತಿದ್ದೇನೆ. ಸಂಘಟಕರ ಶ್ರಮದಿಂದಾಗಿ ಪ್ರೇಕ್ಷಕ ಗಡಣ ತುಂಬಿರುತ್ತದೆ. ಆದರಾತಿಥ್ಯಗಳಲ್ಲಿ ಕಾಂಚಾಣ ಸದ್ದು ಮಾಡುತ್ತಿರುತ್ತದೆ. ಪ್ರದರ್ಶನವೂ ರೈಸುತ್ತದೆ. ಅದ್ದೂರಿತನ ನಗುತ್ತದೆ. ಈ ಭಾಗ್ಯ ಎಷ್ಟು ಪ್ರದರ್ಶನಗಳಿಗಿವೆ? ಎಷ್ಟು ಮೇಳಗಳಿಗಿವೆ? ಆರಂಭಕ್ಕೆ ಸಾವಿರಾರು ಮಂದಿ ಸೇರಿದ್ದರೂ ಮಧ್ಯರಾತ್ರಿ ಕಳೆಯುವಾಗ ಕರಗುತ್ತದೆ. ಮುಂಜಾವಿಗಾಗುವಾಗ ಹತ್ತೋ ಇಪ್ಪತ್ತು ಮಂದಿ. ಉದಾ: ಮಧು ಕೈಟಭರ ಸನ್ನಿವೇಶದಲ್ಲಿ ಕಿಕ್ಕಿರಿದ ಜನಸಂದಣಿ. ಮಹಿಷಾಸುರ ಪ್ರವೇಶಕ್ಕೆ ಅಬ್ಬರದ ಆಟೋಪ. ಯಾವಾಗ ಮಹಿಷ ವಧೆ ಆಯಿತೋ ಆಗ ನೋಡಬೇಕು, ಅಲ್ಲಿದ್ದ ದ್ವಿಚಕ್ರಗಳ ಸದ್ದು ಮಾಡುವ ಪರಿ! ನಂತರದ ಕಥಾಭಾಗಕ್ಕೆ ಕಲ್ಪನೆಯ ಸ್ಪರ್ಶ.  ವಾಟ್ಸಪ್ಪಿನಲ್ಲಿ ಚಾಟ್.
               ಕಾಲಮಿತಿಯು ಪಟ್ಟಣಿಗರಿಗೆ ಖುಷಿ. ರಾತ್ರಿ ಹತ್ತರೊಳಗೆ ಮುಗಿಯುವ ಆಟವನ್ನು ಯಕ್ಷಪ್ರಿಯರು ತಪ್ಪಿಸಿ ಕೊಳ್ಳುವುದಿಲ್ಲ. ಇಲ್ಲಿರುವ ತೊಡಕು ಒಂದೇ. ನಾಲ್ಕು ಗಂಟೆಯಲ್ಲಿ ಮೂರು ಪ್ರಸಂಗಗಳನ್ನು ಮುಗಿಸುವ ಧಾವಂತ! ರಂಗದ ವೇಗವನ್ನು ಗ್ರಹಿಸುವ ತಾಕತ್ತು ಪ್ರೇಕ್ಷಕನ ಚಿತ್ತಕ್ಕಿರುವುದಿಲ್ಲ. ಔಚಿತ್ಯದ ಮಾತಿಗೂ ತಿಣುಕಾಡುವ ಪಾತ್ರಗಳು! ಒಂದೇ ಪ್ರಸಂಗವನ್ನು ಕಾಲಮಿತಿಯಲ್ಲಿ ಸರ್ವಾಂಗಸುಂದರವಾಗಿ ಮೂಡಿಸಲು ಸಾಧ್ಯವಾದರೆ ಇಡೀರಾತ್ರಿಯ ಪರಿಣಾಮ ಕಾಲಮಿತಿಯಲ್ಲಿ ತರಬಹುದು. ಹಾಗೆ ಆದೀತೆಂದು ನನಗಂತೂ ವಿಶ್ವಾಸವಿಲ್ಲ.
              ಹಳ್ಳಿ, ಪೇಟೆಗಳ ಕಲಾಭಿಮಾನಿಗಳಿಗೆ ಅವರದ್ದೇ ಸಮಸ್ಯಾ ವರ್ತುಲಗಳಿವೆ. ಯಾರಿಗೂ ಪುರುಸೊತ್ತಿಲ್ಲ. ಎಲ್ಲರೂ ಬ್ಯುಸಿ. ಬೆರಳ ತುದಿಯಲ್ಲಿ ಸಾಂಸ್ಕೃತಿಕ ಆಯ್ಕೆಗಳ ನಿಯಂತ್ರಣವೇ ಸಿಂಹಪಾಲು. ಅಲ್ಲಿ ಯಕ್ಷಗಾನಕ್ಕೆ ಕೊನೆಯ ಸಾಲು.  ರಾತ್ರಿಯಿಡೀ ಪ್ರೇಕ್ಷಕರು ಉಪಸ್ಥಿತರಿರುವ ವಾತಾವರಣದಲ್ಲಿ ಇಡೀ ರಾತ್ರಿಯ ಪ್ರದರ್ಶನ ಹೊಂದುತ್ತದೆ. ನಗರದಲ್ಲಿ ಕಾಲಮಿತಿಯೇ ಸೂಕ್ತ. ಇಷ್ಟೆಲ್ಲಾ ಹೇಳುವಾಗ ತಂಡದ ನಿರ್ವಹಣೆಯ ವ್ಯವಸ್ಥೆಯ ಸುಖ-ದುಃಖಗಳ ಚಿಂತನೆಯು ಇನ್ನೊಂದು ಮುಖದಿಂದ ಆಗಬೇಕಾಗಿದೆ.
             ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳವು ಕಾಲಮಿತಿಗೆ ಬದಲಾಗಿದೆ. ಪ್ರಸಿದ್ಧರನ್ನೊಳಗೊಂಡ ಮೇಳದ ಯಶೋಯಾನ ಈಗ ಇತಿಹಾಸ. ಯಾವುದೇ ಒಂದು ಪ್ರಾಕಾರ ಬದಲಾವಣೆಯಾಗುವಾಗ ಪರ-ವಿರೋಧ ಅಭಿಪ್ರಾಯಗಳು ಸಹಜ. ಕಿರಿದು ಸಮಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ಮೇಳವು ಸಶಕ್ತವಾಗಲಿ. ಶತಮಾನಗಳ ಇತಿಹಾಸದ ಮೇಳದ ವೈಭವ ಕಾಲಮಿತಿಯಲ್ಲೂ ಮುಂದುವರಿಯಲಿ.
               ತಂತ್ರಜ್ಞಾನಗಳು ಕ್ಷಣಕ್ಷಣಕ್ಕೆ ಬದಲಾಗುತ್ತಲೇ ಇರುತ್ತದೆ. ಅದರ ವೇಗವನ್ನು ಹಿಂದಿಕ್ಕಲು ಬದುಕಿನ ವೇಗ ಸಾಕಾಗುತ್ತಿಲ್ಲ. ಯಕ್ಷಗಾನದ ಮೇಲಿನ ಪ್ರೀತಿ ಬೇರೆ. ಆಸಕ್ತಿ ಬೇರೆ. ಅದನ್ನು ಸ್ವೀಕರಿಸುವ ಮನಃಸ್ಥಿತಿ ಬೇರೆ. ಈ ಮೂರರ ತ್ರಿವೇಣಿ ಸಂಗಮವು ಒಂದೇ ಹಳಿಯಲ್ಲಿ ಹರಿಯಬೇಕು. ವ್ಯಕ್ತಿ ಅಭಿಮಾನಕ್ಕಿಂತ ದುಪ್ಪಟ್ಟು ಕಲೆಯ ಅಭಿಮಾನವನ್ನು ರೂಢಿಸಿಕೊಳ್ಳುವುದೇ ಯಕ್ಷಗಾನಕ್ಕೆ ನಾವೆಲ್ಲರೂ ಕೊಡುವ ಕಾಣ್ಕೆ.
(ಸಾಂದರ್ಭಿಕ ಚಿತ್ರ - ಚಿತ್ರ ಕೃಪೆ : ಡಾ.ಮನೋಹರ ಉಪಾಧ್ಯ)