Monday, June 29, 2015

ಅಡೂರು ಶ್ರೀಧರ ರಾವ್ -ಕನಸುಗಳೊಂದಿಗೆ ಗುದ್ದಾಡಿದ ಅಭಿಜ್ಞ

 ಅಡೂರು ಶ್ರೀಧರ ರಾವ್
 ತಮ್ಮ ಮನೆಯ ಜಗಲಿಯಲ್ಲೊಂದು ನಾಡಹಬ್ಬದ ಪುಟ್ಟ ಸಮಾರಂಭ : ಡಾ.ಅಮೃತ ಸೋಮೇಶ್ವರ, ಡಾ.ಮೋಹನ ಕುಂಟಾರು ವೇದಿಕೆಯಲ್ಲಿದ್ದಾರೆ. ಶ್ರೀಧರ ರಾಯರಿಂದ ಅನುಭವ ಕಥನ (ಸುಮಾರು 15 ವರುಷಗಳ ಹಿಂದಿನ ಚಿತ್ರ)
          ಸುಮಾರು ಅರುವತ್ತಕ್ಕಿಂತಲೂ ಮಿಕ್ಕಿದ ಯಕ್ಷಗಾನದ ಮುಖವರ್ಣಿಕೆಗಳ ಪ್ರದರ್ಶನ      

           ಅಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮೇಳವು ಶತಮಾನದಷ್ಟು ಪ್ರಾಚೀನ. ಅಡೂರಿನ ಕುರ್ನೂರು ಮನೆಯಲ್ಲಿ ಯಕ್ಷಗಾನದ ಸಾಮಗ್ರಿಗಳು ಹಿಂದೆ ತಯಾರಾಗುತ್ತಿದ್ದುವು. ತನ್ನ ಮೇಳಕ್ಕಲ್ಲದೆ ಕೊರಕ್ಕೋಡು, ಕಾವು ಇಚ್ಲಂಗೋಡು ಮೇಳಗಳಿಗೂ ಸಾಮಗ್ರಿಗಳು ಕುರ್ನೂರು ಮನೆಯಲ್ಲೇ  ಸಿದ್ಧವಾಗುತ್ತಿದ್ದುವು. ಅಂದಿನ ಕೆಲವು ಮರದ ಸಾಮಗ್ರಿಗಳಿಗೆ ಮರುಜೀವ ಕೊಟ್ಟವರು ಈ ಮನೆತನದವರಾದ ಅಡೂರು ಶ್ರೀಧರ ರಾವ್.
               ಸಿಕ್ಕಿದ ಅಳಿದುಳಿದ ಕಿರೀಟಗಳು ಬಳಸುವಂತಿರಲಿಲ್ಲ. ಆ ಮಾದರಿಯ ಕಿರೀಟಗಳನ್ನು ಮರದಿಂದ ತಯಾರಿಸಿದರು. ಬಳಸಿ ನೋಡಿದರು. ಆಯ, ಆಕಾರಗಳು ಹಿಂದಿನ ಶೈಲಿಗೆ ಒಗ್ಗಿತು, ಬಗ್ಗಿತು. ಹೀಗೆ ಶುರುವಾದ ಕಾರ್ಯಾಗಾರವು ವಿವಿಧ ವೇಷಗಳ ಮುಖವರ್ಣಿಕೆಗಳನ್ನು ಸ್ವತಃ ತಯಾರಿಸುವಲ್ಲಿಯ ತನಕ ತಲುಪಿತು. ಆ ಕಾಲಘಟ್ಟದಲ್ಲಿ ಇವರಿಗೆ ಸಾಥ್ ಆದವರು ಹಾಸ್ಯಗಾರ್ ಪ್ಯಾರ್ ನಾವೂರು ಮತ್ತು ತನ್ನ ಸಹಾಯಕ ಮಾಂಗು. ಸಾವಿರಾರು ಮುಖವರ್ಣಿಕೆಗಳು ಮನೆಯ ಜಗಲಿಯಲ್ಲಿ ಸಿದ್ಧವಾಗಿ ಕಡಲಾಚೆಗೂ ಹಾರಿವೆ.
               ಅವರ ಶ್ರಮಕ್ಕೆ ತಕ್ಕ ಫಲ ಸಿಗದೇ ಇದ್ದರೂ ಸರ್ವಜನ ಸ್ವೀಕೃತಿ ಪಡೆದಿದೆ. ಸ್ಮರಣಿಕೆ ರೂಪದಲ್ಲಿ ಮುಖವರ್ಣಿಗಳು ಸಿದ್ಧವಾಗಿ ಸಮಾರಂಭಗಳಲ್ಲಿ ಗಮನ ಸೆಳೆಯಿತು. ಪ್ರಶಂಸೆ ಪ್ರಾಪ್ತವಾಯಿತು. ಹೊಗಳಿಕೆಗಳ ಮಹಾಪೂರ. ಸಮಚಿತ್ತದ ಶ್ರೀಧರ ರಾವ್ ಒಮ್ಮೆ ಹೇಳಿದ್ದರು, "ಎಲ್ಲವೂ ಸರಿ, ಹೊಗಳಿಕೆ ಬೇಕು. ಅದು ಶೂಲ ಅಂತ ಗೊತ್ತಾದರೆ ಸಮಸ್ಯೆಯಿಲ್ಲ. ಮಾತಿನ ಪ್ರೋತ್ಸಾಹದೊಂದಿಗೆ ಆರ್ಥಿಕ ಬೆಂಬಲವೂ ಸಿಕ್ಕರೆ ಈ ಕಾರ್ಯಾಗಾರವನ್ನು ಎಷ್ಟು ಎತ್ತರಕ್ಕೆ ಒಯ್ಯುತ್ತೇನೆ, ನೋಡ್ತಾ ಇರಿ." ಇದು ಅವರ ಕನಸು ಕೂಡಾ ಆಗಿತ್ತು.
               ಕೃಷಿ, ಮನೆವಾರ್ತೆಗಳನ್ನು ಬದಿಗೊತ್ತಿ ಮುಖವರ್ಣಿಕೆಗಳ ತಯಾರಿ, ಮಾರುಕಟ್ಟೆ ಮತ್ತು ಅದಕ್ಕೆ ಬೇಕಾದ ಅರ್ಥಿಕ ವ್ಯವಸ್ಥೆಯನ್ನು ಮಾಡಲು ಕನ್ನಾಡಿನಾದ್ಯಂತ ಓಡಿದರು. ಪ್ರತಿಷ್ಠಿತರನ್ನು ಭೇಟಿಯಾದರು. ಇಲಾಖೆಗಳ ಮೆಟ್ಟಿಲು ಏರಿದರು. ಆಶಯವನ್ನು ಅರ್ಥಮಾಡಿಕೊಂಡವರಿಂದ ಹಿಡಿಯಷ್ಟು ಆರ್ಥಿಕ ಬೆಂಬಲ ಸಿಕ್ಕಿತು. ಆಗ ರಾಮನಗರ ಜಾನಪದ ಲೋಕದ ಮುಖ್ಯಸ್ಥರಾಗಿದ್ದ ಡಾ.ನಾಗೇಗೌಡರು ಸ್ವಲ್ಪ ಮಟ್ಟಿಗೆ ಹೆಗಲೆಣೆಯಾದರು. ತನ್ನ ಘಟಕವನ್ನು ಅಭಿವೃದ್ಧಿ ಪಡಿಸುವ ಆಶಯದಿಂದ ಸವೆಸಿದ ಚಪ್ಪಲಿಗಳು ಅಗಣಿತ!
              ಮುಖವರ್ಣಿಕೆಗಳನ್ನು ಆರಂಭದಲ್ಲಿ ಉಚಿತವಾಗಿ ನೀಡಿದ್ದೇ ಹೆಚ್ಚು. ಒಂದಷ್ಟು ಜನರಿಗೆ ತಿಳಿಯಲಿ ಎಂಬ ಉದ್ದೇಶ. ಗೇಲಿ ಮಾಡುವವರ ಉಡಾಫೆಯನ್ನು ಲೆಕ್ಕಿಸದೆ ನಿರಂತರ ಕಾಲಿಗೆ ಚಕ್ರ ಕಟ್ಟಿ ಓಡಾಡಿದರು. ಈ ಮಧ್ಯೆ ಪ್ಯಾರ್ ನಾವೂರು ದಿವಂಗತರಾದರು. ರಾಯರ ಬೀಸು ಉತ್ಸಾಹ ನಿಧಾನವಾಯಿತು. ಯಕ್ಷಗಾನ ಕಲಾ ಕೇಂದ್ರದ ಮೂಲಕ ತನ್ನ ಮನೆಯನ್ನು ಕೇಂದ್ರವಾಗಿಸಿದರು. ವಿವಿಧ ಗ್ರಂಥಗಳನ್ನು ಕಲೆಹಾಕಿದರು. ಮನೆಯಂಗಳದಲ್ಲಿ ಯಕ್ಷಗಾನದ ಕಾರ್ಯಾಗಾರ ನಡೆಸಿದರು. ಮಾಹಿತಿಗಳನ್ನು ಕಲೆ ಹಾಕಿದರು. 'ಯಕ್ಷಗಾನ ವರ್ಣ ವೈಭವ' ಕೃತಿಯನ್ನು ಹೊರ ತಂದರು.
             ತನ್ನ ಕಾರ್ಯಾಗಾರವು ವೃತ್ತಿ ರಂಗದ ಛಾಯೆಯಾಗಿರ ಬಾರದು - ಅವರ ನಿಲುವು. ಯಾವ್ಯಾವ ವೇಷಕ್ಕೆ ಯಾವ ರೀತಿಯ ಬಣ್ಣ, ವೇಷಭೂಷಣ ಇರಬೇಕೆನ್ನು  ಖಚಿತತೆ ಅವರಲ್ಲಿತ್ತು. ಅದಕ್ಕಾಗಿ ಬಹುತೇಕ ಎಲ್ಲಾ ಮೇಳಗಳನ್ನು, ಕಲಾವಿದರನ್ನು ಸಂದರ್ಶನ ಮಾಡಿದ್ದಾರೆ. ಯಜಮಾನರೊಂದಿಗೆ ಮಾತುಕತೆ ನಡೆಸಿದ್ದಾರೆ. ಹಳೆಯ ವಿಚಾರಗಳನ್ನು ಕಲೆ ಹಾಕಿದ್ದಾರೆ. ಎಲ್ಲರಿಗೂ ಪಾರಂಪರಿಕ ಬಣ್ಣಗಳು, ರೀತಿಗಳು ಗೊತ್ತು. ಮಾತನಾಡುವಾಗ ಸ್ವಾರಸ್ಯವಾಗಿ ಹೇಳುತ್ತಾರೆ. ಆದರೆ ಅದನ್ನು ಅಳವಡಿಸಿಲು ಯಾಕೆ ಹಿಂಜರಿಕೆ ಅಂತ ಗೊತ್ತಾಗುತ್ತಿಲ್ಲ, ಎಂದೊಮ್ಮೆ ಹೇಳಿದ್ದರು.
               "ಏನಾದರೇನು? ಕಲಾವಿದರಿಗೆ ಇದ್ಯಾವುದೂ ಬೇಡ. ಮೇಳದ ಯಜಮಾನರನ್ನು ಭೇಟಿಯಾದರೂ ಪ್ರಯೋಜನವಾಗಿಲ್ಲ. ರಾಜಕೀಯದ ಕಮಟು ವಾಸನೆಯಿಂದಾಗಿ ಇಲಾಖೆಗಳತ್ತ ನೋಡುವ ಹಾಗಿಲ್ಲ. ಮತ್ತೆ ಯಾರಿಗಿದು?." ಇಂತಹ ನಿರಾಶೆಯ ಮಾತುಗಳನ್ನು ಆಗಾಗ್ಗೆ ಹೇಳುತ್ತಿದ್ದರು. ಯಕ್ಷಗಾನದ ಅಧ್ಯಯನ ಕೇಂದ್ರದ ಕುರಿತ ದೊಡ್ಡ ಕನಸು ಶ್ರೀಧರ ರಾಯರಲ್ಲಿತ್ತು. ಅದನ್ನು ಮಾಡುತ್ತೇನೆಂಬ ಛಲವೂ ಇತ್ತು. ಆರೋಗ್ಯ ಕೈಕೊಡುತ್ತಾ ಬಂದಾಗ ಆಸಕ್ತಿಗಳು ಮುದುಡಿದುವು.
                  ಶ್ರೀಧರ ರಾಯರು ಇಂಜಿನಿಯರಿಂಗ್ ಪದವೀಧರ. ಮುಂಬಯಿಯಲ್ಲಿ ಕೈತುಂಬಾ ಕಾಂಚಾಣ ಬರುವ ಕೆಲಸಕ್ಕೆ ವಿದಾಯ ಹೇಳಿ ಮನೆಯ ಜವಾಬ್ದಾರಿ ಹೆಗಲಿಗೇರಿಸಿಕೊಂಡರು. ಮುಂಬಯಿಯಲ್ಲಿದ್ದಾಗ ನಾಟಕ ರಂಗದಲ್ಲಿ ದುಡಿತ. ಯಕ್ಷಗಾನೀಯ ವಾತಾವರಣ ಮನೆಯಲ್ಲಿ ಮತ್ತು ಊರಲ್ಲಿ ಸಮೃದ್ಧವಾಗಿದ್ದಾಗ ಸಹಜವಾಗಿಯೇ ಯಕ್ಷಗಾನದತ್ತ ಒಲವು ವಾಲಿತು. ನಾಟಕ ರಂಗದ ಜಾಣ್ಮೆಗಳನ್ನು ಯಕ್ಷಗಾನದ ರಂಗಕ್ಕೆ ಅಳವಡಿಸುವ ಪ್ರಯೋಗ. ತಾಳಮದ್ದಳೆಯಲ್ಲಿ ಭಾಗಿ. ಪೆರಾಜೆ ಮೇಳದಲ್ಲಿ ತಿರುಗಾಟ. ಆಟ-ಕೂಟಗಳ ಸಂಘಟನೆ. ಒಂದೆರಡು ಪ್ರದರ್ಶನಗಳ ವೀಡಿಯೋ ದಾಖಲೆ ಮಾಡಿದ್ದರು ಕೂಡಾ. ಸುಮಾರು 1994-96ರ ಕಾಲಘಟ್ಟದಲ್ಲದು ದೊಡ್ಡ ಸುದ್ದಿ.
                 ಅಡೂರಿನ ಇವರ ಮನೆಯಲ್ಲಿ ಉಂಡ ಕಲಾವಿದರು ಅಸಂಖ್ಯ. ಕೀರ್ತಿಶೇಷ ದಾಸರಬೈಲು ಚನಿಯ ನಾಯ್ಕರು ಅಡೂರಿಗೆ ಬಂದರೆ ಇವರಲ್ಲೇ ವಾರಗಟ್ಟಲೆ ಇರುತ್ತಿದ್ದರು. ಶ್ರೀಧರ ರಾಯರ ಯೋಚನೆಗಳಿಗೆ ಅಂತಿಮ ಸ್ಪರ್ಶವನ್ನು ನಾಯ್ಕರೇ ಮಾಡುತ್ತಿದ್ದರು. ಇವರಿಬ್ಬರ ಜ್ಞಾನಗಳು ಮಿಳಿತವಾಗಿ ಅದು ರಂಗದಲ್ಲಿ ಸಾಕ್ಷಾತ್ಕಾರವಾಗುತ್ತಿದ್ದುವು. ಥೇಟ್ ಕೋಣನಂತೆಯೇ ಕಾಣುವ ಮಹಿಷನ ಮುಖವಾಡ ತಯಾರಿಸಿದ್ದರು. ಅದನ್ನು ಸ್ವತಃ ಧರಿಸಿ ಪಾತ್ರ ಮಾಡುತ್ತಿದ್ದರು. ನರಕಾಸುರ, ಮಾಗಧ, ವಾಲಿ, ಹರಿಶ್ಚಂದ್ರ, ಬಲಿ... ಹೀಗೆ ಎಲ್ಲಾ ಸ್ವರೂಪದ ಪಾತ್ರಗಳಲ್ಲೂ ಖ್ಯಾತಿ. 
                  ವೈಯಕ್ತಿಕ ಬದುಕಿನ ಸಿಂಹಪಾಲನ್ನು ಯಕ್ಷಗಾನ ಸಂಬಂಧಿ ಕೆಲಸಗಳಿಗಾಗಿಯೇ ವಿನಿಯೋಗಿಸಿದ  ಅಡೂರು ಶ್ರೀಧರ ರಾಯರಿಗೆ ಅದೊಂದು ಹೊಟ್ಟೆಪಾಡಿನ ವಿಷಯವಾಗಿರಲಿಲ್ಲ. ತನ್ನೆಲ್ಲಾ ಆಸಕ್ತಿಗಳಿಗೆ ಸದಾ ಸ್ಪಂದಿಸುತ್ತಿದ್ದ, ಅವರ ಯೋಜನೆಗಳೊಳಗೆ ಪೂರ್ಣ ಲೀನವಾಗಿಯೂ, ಲೀನವಾಗದಂತೆಯೂ ಇದ್ದ ಮಡದಿ ಶಾಂಭವಿ ಅವರ ತ್ಯಾಗ ಗುರುತರ.
           ಅಡೂರು ಶ್ರೀಧರ ರಾಯರು (Adoor Shridhara Rao) 2015 ಜೂನ್ 22ರಂದು ವಿಧಿವಶರಾದರು. ಕನಸಿನ ಎಲ್ಲಾ ಮೆಟ್ಟಿಲುಗಳನ್ನು ಏರಲಾಗದಿದ್ದರೂ ಏರಿದಷ್ಟು ಮೆಟ್ಟಿಲು ಸದೃಢವಾಗಿರುವುದು ಅವರಿಗೆ ಸಮಾಧಾನದ ವಿಷಯವಾಗಿತ್ತು. ರಾಶಿ ರಾಶಿ ಸಂಮಾನ, ಪುರಸ್ಕಾರ ಮತ್ತು ಅಕಾಡೆಮಿ ಪ್ರಶಸ್ತಿಗಳಿಂದ ಪುರಸ್ಕೃತರು. ಅಗಲಿದ ಆತ್ಮಕ್ಕೆ ಅಕ್ಷರ ನಮನ.

ಪ್ರಜಾವಾಣಿ/ಕರಾವಳಿ/27-6-2015

Monday, June 22, 2015

ಇಂದು ಅಡೂರು ಶ್ರೀಧರ ರಾವ್ ವಿಧಿವಶ


ಯಕ್ಷಗಾನದ ಹಿರಿಯ ಕಲಾವಿದ ಅಡೂರು ಶ್ರೀಧರ ರಾವ್ - Adoor Shridhara Rao - ಇಂದು (22-6-2015) ವಿಧಿವಶರಾದರು. ವೇಷಧಾರಿ, ಅರ್ಥಧಾರಿ. ಸಂಘಟಕ. ಅಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ಮೂಲಕ ನೂರಾರು ಯಕ್ಷಗಾನೀಯ ಚಟುವಟಿಕೆಯನ್ನು ನಡೆಸಿದವರು. ತೆಂಕುತಿಟ್ಟು ಯಕ್ಷಗಾನದ ಪಾರಂಪರಿಕ ಮುಖವರ್ಣಿಕೆಯ ತಯಾರಿಯಲ್ಲಿ 'ಇದಮಿತ್ಥಂ' ಎನ್ನುವ ನಿಲುವು. ಸಾವಿರಾರು ಮುಖವರ್ಣಿಕೆಗಳು ರೂಪುಗೊಂಡಿದ್ದವು. ಇದಕ್ಕಾಗಿ ಸತತ ಅಧ್ಯಯನ. ಬದುಕಿನ ಒಂದು ಕಾಲಘಟ್ಟದ ತನಕ ಇವರೊಂದಿಗೆ ಕೀರ್ತಿಶೇಷ ಪ್ಯಾರ್ ನೂವೂರು ಸಾಥ್ ನೀಡಿದ್ದರು.ಮನೆಯಂಗಳದಲ್ಲಿ ಯಕ್ಷಗಾನದ ಸಮ್ಮೇಳನ ನಡೆಸಿದ ಕೀರ್ತಿ ಇವರದು. ಒಂದೆರಡು ಪ್ರಸಂಗಗಳನ್ನು ದಾಖಲಾತಿ ಮಾಡಿದ್ದರು. ಅಡೂರು ಮೇಳದ ಕೆಲವು ಪರಿಕರಗಳ ಯಥಾವತ್ ಮುಖವರ್ಣಿಕೆಗಳನ್ನು ತಯಾರಿಸಿದವರು. ತನ್ನ ಮನೆಯಲ್ಲಿ ಕಲಾವಿದರಿಗೆ ಊಟ, ವಸತಿ ನೀಡಿ ಗೌರವಿಸಿದ ಹಿರಿಯ. ಅಡೂರು ಶ್ರೀಧರ ರಾವ್ ಕೆಲವು ಸಮಯದಿಂದ ಅಸ್ವಸ್ಥರಾಗಿದ್ದರು. ಅಗಲಿದ ಚೇತನಕ್ಕೆ ಅಕ್ಷರ ನಮನ.

Friday, June 12, 2015

ಬಡತನವನ್ನು ಹಳಿಯದ ಕಲಾವಿದ - ಕುಂಞಿಹಿತ್ಲು ಸೂರ್ಯಣ್ಣ

             ಬೆಳ್ಳಾರೆ (ದ.ಕ.) ಪೇಟೆಯ ಮಧ್ಯೆ ಸುಳ್ಯಕ್ಕೆ ತಿರುಗುವ ರಸ್ತೆಯ ಅಂಚಿನಲ್ಲೊಂದು ಮನೆಯಿತ್ತು. ಅದಕ್ಕೆ ತಾಗಿಕೊಂಡು ಚಿತ್ರಕ್ಕೆ ಕಟ್ಟು ಹಾಕುವ ಅಂಗಡಿ. ಇಪ್ಪತ್ತೈದು ವರುಷ ಈ ಮನೆಯಲ್ಲಿ ಚೆಂಡೆಮದ್ದಳೆಗಳ ಸದ್ದು. ಅಂಗಡಿಯಲ್ಲಿ ದಣಿವು ತರಿಸದ ಯಕ್ಷಗಾನದ ಮಾತುಕತೆ. ಇಷ್ಟು ಚಿತ್ರಣ ಕೊಟ್ಟರೆ ಸಾಕು. ಒಂದು ಕಾಲಘಟ್ಟದ ಸುಳ್ಯ-ಪುತ್ತೂರು ಸರಹದ್ದಿನ ಯಕ್ಷಗಾನದ ಇತಿಹಾಸವೊಂದು ಮಿಂಚುತ್ತದೆ. ಮಿಂಚಿ ತಕ್ಷಣ ಮರೆಯಾಗುತ್ತದೆ. ಯಾಕೆ ಹೇಳಿ?  ಇತಿಹಾಸವನ್ನು ಓದಲು ನಮಗೆಲ್ಲಿ ಪುರುಸೊತ್ತು! ಕಾಲದ ಕಥನಕ್ಕೆ ಕಿವಿಯಾಗಬೇಕಾದ ಮನಸ್ಸುಗಳ ಆದ್ರ್ರತೆಯ ತೇವ ಆರಿದೆ!
           ಈ ಮನೆಯ ಯಜಮಾನ ಕುಂಞಿಹಿತ್ಲು ಸೂರ್ಯನಾರಾಯಣ ಭಟ್. ಸೂರ್ಯಣ್ಣ ಎಂದೇ ಆಪ್ತನಾಮ. ಇವರಲ್ಲಿ ಉಂಡ ಕಲಾವಿದರೆಷ್ಟೋ? ತಾಳಮದ್ದಳೆ(ಕೂಟ)ಯಲ್ಲಿ ಅರ್ಥ ಹೇಳಿದ, ಹಾಡಿದ, ಚೆಂಡೆ-ಮದ್ದಳೆಗಳನ್ನು ನುಡಿಸಿದ ಕಲಾವಿದರ ಸಂಖ್ಯೆ ಅಗಣಿತ. ಕಾಂಚಾಣ ಸದ್ದು ಮಾಡುವ ಬದುಕು ಇವರದ್ದಾಗಿರಲಿಲ್ಲ.  ಸಿಕ್ಕ ಸಂಪಾದನೆಯಲ್ಲಿ ಶ್ರೀಮಂತಿಕೆಯ ಭಾವ.  ತಾನು ಉಣ್ಣದಿದ್ದರೂ ತೊಂದರೆಯಿಲ್ಲ, ಕಲಾವಿದರಿಗೆ ಊಟ-ಉಪಾಹಾರವನ್ನು ನೀಡುವಂತಹ ವಿಶಾಲ ಹೃದಯಿ.
              ಸೂರ್ಯಣ್ಣನ ಮನೆ ಚಿಕ್ಕದು. ಮನ ದೊಡ್ಡದು. ಚಿಕ್ಕ ವರಾಂಡ, ಅಡುಗೆ ಮನೆ. ತಿಂಗಳಿಗೊಮ್ಮೆ ನಡೆಯುವ ಕೂಟದಲ್ಲಿ ಮನೆಮಂದಿ ಎಲ್ಲಾ ಜಾಗರಣೆ. ವರಾಂಡ ತಾಳಮದ್ದಳೆಯ ವೇದಿಕೆಯಾಗಿ ರೂಪಾಂತರವಾಗುತ್ತಿತ್ತು.  ವಿದ್ಯುತ್ ಕೈಕೊಟ್ಟಾಗ ಲಾಟೀನು, ಕ್ಯಾಂಡಲ್ ಬೆಳಕು. ಅತಿಥಿಗಳನ್ನು ಆದರಿಸುವ, ಏರು ರಾತ್ರಿಯಲ್ಲೂ ಚಹ-ತಿಂಡಿಗಳನ್ನು ಮಾಡಿ ತಿನ್ನಿಸುವ ಅಮ್ಮನ ಪ್ರೀತಿ ಸೂರ್ಯಣ್ಣನಲ್ಲಿ ಕಂಡಿದ್ದೆ.
               ವರುಷಕ್ಕೊಮ್ಮೆ ವಾರ್ಶಿಕೋತ್ಸವ. ಹಿರಿಯರಿಗೆ ಗೌರವ. ಅನುಭವಿ ಕಲಾವಿದರಿಗೆ ಆಹ್ವಾನ. ಆರ್ಥಪೂರ್ಣ ಕಾರ್ಯಕ್ರಮ. ಸುದ್ದಿ ಕೇಳಿ ಬರುವ ಕಲಾವಿದರ ಸಂಖ್ಯೆ ದೊಡ್ಡದಿತ್ತು. ಕಲಾವಿದರ ಅರ್ಹತೆಗೆ ತಕ್ಕಂತೆ ಪಾತ್ರ ಹಂಚುವ ಜಾಣ್ಮೆ. ಯಾರಿಗೂ ನೋವಾಗದಂತೆ ಎಲ್ಲರೊಂದಿಗೆ ಬೆರೆಯುವ ಸುಭಗತನ. ಬಡತನವನ್ನು ಎಂದೂ ಹಳಿಯದ ಧನಿಕ.
             1976ರಲ್ಲಿ ತಾನು ಸ್ಥಾಪಿಸಿದ 'ಶ್ರೀ ವಾಣಿಗಣೇಶ ಪ್ರಸಾದಿತ ಯಕ್ಷಗಾನ ಕಲಾವೃಂದ'ವನ್ನು ಈ ಎಲ್ಲಾ ಚಟುವಟಿಕೆಗಳ ಮೂಲಕ ಇಪ್ಪತ್ತೈದು ವರುಷ ಮುನ್ನಡೆಸಿದ್ದರು. ಭಾಗವಹಿಸಿದ ಎಲ್ಲರೂ ಸಂಘದ ಸದಸ್ಯರು. ಒಮ್ಮೆ ಕೂಟಕ್ಕೆ ಒಬ್ಬ ಕಲಾವಿದ ಬಂದರೆ ಸಾಕು, ಮತ್ತೆ ಎಂದೂ ಸಂಘದ ನಂಟಿನಿಂದ ತಪ್ಪಿಸಿಕೊಳ್ಳಲಾರದಷ್ಟು ಅಂಟಿನ ಆಪ್ತತೆ.
              ಕೂಟದಲ್ಲಿ ಸೂರ್ಯಣ್ಣ ಪಾತ್ರವಾದಾಗ ಬದುಕಿನ ಪಾತ್ರತೆಯನ್ನು ಮರೆಯುವಷ್ಟು ತಲ್ಲೀನ. ಸ್ತ್ರೀ ಪಾತ್ರದಿಂದ ರಾಕ್ಷಸ ಅಭಿವ್ಯಕ್ತಿ ತನಕ ಎಲ್ಲವನ್ನೂ ನಿಭಾಯಿಸಬಲ್ಲ ಅನುಭವಿ. ಸುತ್ತೆಲ್ಲಾ ನಡೆಯುವ ಕೂಟಗಳಲ್ಲಿ ಅರ್ಥಧಾರಿಯಾಗಿ ಖಾಯಂ ಆಹ್ವಾನ ಪಡೆಯುವಷ್ಟು ಬೌದ್ಧಿಕತೆ. ಪಾತ್ರದ ಸುತ್ತ ಕಟ್ಟಿಕೊಂಡಿರುವ ವಿಚಾರಗಳಿಗೆ ನ್ಯಾಯ ಸಲ್ಲಿಕೆ. ಸ್ತ್ರೀ ಪಾತ್ರಗಳಿಗೆ ಒಪ್ಪುವ ಕಂಠ.
                ಸಾಹಿತ್ಯದಲ್ಲೂ ಸೂರ್ಯನಾರಾಯಣ ಭಟ್ಟರು ಗಟ್ಟಿ. 'ಜಲಜ ಸಖ' ಎನ್ನುವುದು ಕಾವ್ಯನಾಮ. ಒಂದು ಸಾವಿರ ಚೌಪದಿಗಳು, ತುಳುವಿನಲ್ಲಿ ಚೌಪದಿಗಳು, ಕಾದಂಬರಿ, ಮಕ್ಕಳ ಸಾಹಿತ್ಯ, ಯಕ್ಷಗಾನ ಪ್ರಸಂಗ, ನಾಟಕ.. ಕ್ಷೇತ್ರಗಳ ಸಾಹಿತ್ಯ ರಚನೆಯಲ್ಲಿ ಸೋಲದ ಗಟ್ಟಿತನ.  ಕೃತಿಗಳು ಕೆಲವೊಂದು ಅಚ್ಚಾಗಿವೆ. ಹಲವು ಸಂಘಸಂಸ್ಥೆಗಳಿಂದ ಸಂಮಾನಿತರು.
               ಇಪ್ಪತ್ತೈದು ವರುಷ ಬದುಕಿನೊಂದಿಗೆ ಯಕ್ಷಗಾನವನ್ನು ಮಿಳಿತಗೊಳಿಸಿದ ಸೂರ್ಯಣ್ಣನ ಬದುಕೇ ಒಂದು ಪಾತ್ರ. ರಂಗದಲ್ಲಿ ಕೆಲವೊಮ್ಮೆ ಪಾತ್ರ ಗೆಲ್ಲುತ್ತದೆ, ಸೋಲುತ್ತದೆ. ಸೋತಾಗ ಮತ್ತೆದ್ದು ಬರುವ ಛಾತಿ ಅದರದು. ಸೂರ್ಯಣ್ಣನ ಬದುಕಿನ ಪಾತ್ರ ಯಾಕೋ ಅವರಿಗೆ ಗೆಲುವಿನ ಹಾದಿ ತೋರಿಸಿಲ್ಲ. ಬದುಕಿಗಾಗಿ, ಬದುಕಲು ಬೇಕಾಗಿ ಬೆಳ್ಳಾರೆಗೆ ವಿದಾಯ ಹೇಳಬೇಕಾದ ಸಂದರ್ಭ ಬಂದಾಗ ಚೆಂಡೆಮದ್ದಳೆಗಳಂತೂ ತಮ್ಮ ದನಿಯನ್ನು ಇಳಿಸಿದ್ದುವು. ಕಾಲು ಶತಮಾನಗಳ ಕಾಲ ಪೌರಾಣಿಕ ಪಾತ್ರಗಳು ಮನೆಯೊಳಗೆ ದಿಂಞಣ ಹಾಕಿದ್ದುವಲ್ಲಾ, ಅವುಗಳ ಕಣ್ಣೀರನ್ನು ಎಷ್ಟು ಜನ ಕಂಡರೋ ಗೊತ್ತಿಲ್ಲ.
               ಪ್ರಕೃತ ಸೂರ್ಯಣ್ಣ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ನೆಲೆ. ಮಡದಿ ಸರಸ್ವತಿ ಇಬ್ಬರು ಪುತ್ರರು. ಈಗಲೂ ಈ ಕುಟುಂಬದಲ್ಲಿ ಅದೇ ಯಕ್ಷಗಾನದ ಗುಂಗು. ಅದೇ ಮಾತುಕತೆ. ಅದೇ ಆಪ್ತತೆ. ಹಳೆಯ ನೆನಪಿನಲ್ಲಿ ಹೊಸತನ್ನು ಹುಡುಕುವ ಹಸಿವು. ಎಪ್ಪತ್ತೇಳರ ದೇಹ ಮಾಗಿದರೂ ಮನಸ್ಸಿನ್ನೂ ಹಸಿಯಾಗಿದೆ. ಪಾತ್ರಗಳು ಮನದಲ್ಲಿ ರಿಂಗಣಿಸುತ್ತಿವೆ. ಲೇಖನಿಯ ಮಸಿ ಆರಿಲ್ಲ. ಯಾವುದೇ ಪುರಸ್ಕಾರ, ಸಹಕಾರಗಳತ್ತ ಯೋಚನೆ ಮಾಡದ ನಿರ್ಲಿಪ್ತ. ಬದುಕನ್ನು ಬಂದ ಹಾಗೆ ಸ್ವೀಕರಿಸುವ ಚಿತ್ತಸ್ಥಿತಿ ಇದೆಯಲ್ಲಾ, ಅದನ್ನು ಎಲ್ಲರಿಂದಲೂ ಅನುಭವಿಸಲು ಸಾಧ್ಯವಿಲ್ಲ ಬಿಡಿ.
                  ಸೂರ್ಯಣ್ಣನ ಯಕ್ಷಗಾನದ ಸೇವೆ, ಸಾಹಿತ್ಯ ಆರಾಧನೆಗೆ ಈಗ ಬಾರ್ಯ ವಿಷ್ಣುಮೂತರ್ತಿ ಪ್ರತಿಷ್ಠಾನದ ಗೌರವ. ಜೂನ್ 13ರಂದು ಉಪ್ಪಿನಂಗಡಿ ಸನಿಹದ ರಾಮನಗರದಲ್ಲಿ ಪುರಸ್ಕಾರ.