Monday, November 21, 2016

ಜಾರಿದ ರಂಗಸೌಂದರ್ಯದ ಮರುಪೋಣಿಕೆ


              ಯಕ್ಷಗಾನ ಆಟ, ಕೂಟಕ್ಕೆ ಪ್ರಸಂಗವು ಸಿಲೆಬಸ್. ಅರ್ಥಗಾರಿಕೆಯಲ್ಲಿ ಮಾತಿನ ಓಘಗಳು ಎಲ್ಲೇ ಹರಿದಾಡಲಿ, ಪಠ್ಯದ ಚೌಕಟ್ಟಿನೊಳಗೇ ಮುಗಿಯಬೇಕು, ಮುಗಿಯತಕ್ಕದ್ದು. ಇದೊಂದು ಅಲಿಖಿತ ಶಾಸನ, ಶಿಸ್ತು. ಎಲ್ಲಾ ಕಲಾವಿದರೂ ಶಿಸ್ತಿನೊಳಗೆ ಬಂಧಿ. ಹಾಗಾಗಿ ಸೋಲಬೇಕಾದ ಪಾತ್ರ ಸೋಲಬೇಕು, ಗೆಲ್ಲಬೇಕಾದ ಪಾತ್ರ ಗೆಲ್ಲಲೇಬೇಕು. ವೈಯಕ್ತಿಕ ಪ್ರತಿಷ್ಠೆಗಳನ್ನು ರಂಗ ಸ್ವೀಕರಿಸುವುದಿಲ್ಲ.
           ಪ್ರದರ್ಶನಕ್ಕೂ ಪ್ರಸಂಗವೇ ಪಠ್ಯ. ಇಲ್ಲಿನ ಸನ್ನಿವೇಶಗಳಿಗೆ ಪಾರಂಪರಿಕ ನಡೆಯಿದೆ. ಆ ಹಾದಿಯಲ್ಲೇ ಪಾತ್ರಗಳು ಸಾಗಬೇಕು, ಮಾತನಾಡಬೇಕು. ಹಾದಿ ಕವಲೊಡೆದರೆ ರಂಗ, ಪಾತ್ರ ಎಡವುತ್ತದೆ. ಇಂತಹ ಹಾದಿಗಳ ಬಹುತೇಕ ಸಂದರ್ಭಗಳು ಸ್ಥಾಪಿತ. ಭಾಗವತರಿಗೆ ಈ ಜ್ಞಾನವು ಕಲಿಕಾ ಹಂತದಲ್ಲೇ ವಶವಾಗಿರುತ್ತವೆ, ವಶವಾಗಬೇಕು. ಇಂತಹ ಹಾದಿಗಳ - ಅಂದರೆ ಬೇಟೆ, ಯುದ್ಧಕ್ರಮ.. ಇತ್ಯಾದಿ - ಸ್ಪಷ್ಟ ಅರಿವು ವೇಷಧಾರಿಗೂ ಬೇಕು.
            ನಿಶಿಪೂರ್ತಿ ಪ್ರದರ್ಶನಗಳಲ್ಲಿ ಪಾತ್ರಗಳ ಪೂರ್ಣ ಚಲನಾ ಸೌಂದರ್ಯಗಳು ಅನಾವರಣಗೊಳ್ಳುತ್ತವೆ. ಕಾಲಮಿತಿಗೆ ಪ್ರದರ್ಶನಗಳು ಜಾರಿದಾಗ ಚಲನೆಗಳೂ ಜಾರಿದುವು. ಬೇಟೆ, ಜಲಕೇಳಿ, ರಾಕ್ಷಸಪಾತ್ರಗಳ ನಿತ್ಯಾಹ್ನಿಕಗಳೆಲ್ಲಾ ಹೃಸ್ವವಾದುವು. ನಿಜಸೌಂದರ್ಯಗಳು ಮಸುಕಾಯಿತು. ಭಾಗವತರ ಪದ್ಯಕ್ಕೆ ಕುಣಿತ, ಅದಕ್ಕೆ ತಕ್ಕ ಅರ್ಥಗಾರಿಕೆ ಎನ್ನುವಷ್ಟರ ಮಟ್ಟಿಗೆ ವರ್ತಮಾನದ ರಂಗ ಸೌಂದರ್ಯವಿದೆ! ಈ ಹಿನ್ನೆಲೆಯಲ್ಲಿ ಶ್ರೀ ಧರ್ಮಸ್ಥಳ ಮೇಳದ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಓರ್ವ ಕಲಾವಿದನಾಗಿ ರಂಗವನ್ನು ನೋಡಿದ್ದಾರೆ, ನೋಡುತ್ತಿದ್ದಾರೆ. ರಂಗದಿಂದ ಜಾರಿದ, ಜಾರುವ ಪದ್ಧತಿಗಳನ್ನು ಹಳಿಗೆ ಜೋಡಿಸುವ ಯೋಜನೆ ರೂಪಿಸಿದ್ದಾರೆ.
               ರಾಮಕೃಷ್ಣ ಮಯ್ಯರ ನೂತನ ಪರಿಕಲ್ಪನೆ 'ರಂಗ-ಪ್ರಸಂಗ'. ಕಾಸರಗೋಡು ಜಿಲ್ಲೆಯ ನೀರ್ಚಾಲು ಮತ್ತು ದ.ಕ.ಜಿಲ್ಲೆಯ ಪಾವಂಜೆಯಲ್ಲಿ ಎರಡು ಪ್ರಯೋಗಗಳು ನಡೆದುವು. ಏನಿದು ರಂಗ-ಪ್ರಸಂಗ? ರಂಗದಿಂದ ಮರೆಯಾದ ರಂಗಕ್ರಮಗಳ ಮರು ರಂಗಪೋಣಿಕೆ. ಹವ್ಯಾಸಿ, ವೃತ್ತಿ ಕಲಾವಿದರು ಶಿಬಿರಾರ್ಥಿಗಳು. ಪರಿಕಲ್ಪನೆಯನ್ನು ಅರ್ಥಮಾಡಿಕೊಂಡ ಅನುಭವಿ ಕಲಾವಿದರಿಂದ ಪ್ರದರ್ಶನ. ನೀರ್ಚಾಲಿನಲ್ಲಿ ಐವತ್ತಕ್ಕೂ ಮಿಕ್ಕಿ ಹವ್ಯಾಸಿ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಆದರೆ ಇಂತಹ ಹೊಸ ಯೋಚನೆಗೆ ಶಿಬಿರಾರ್ಥಿಗಳಾಗಿ ವೃತ್ತಿ ಕಲಾವಿದರು ಭಾಗವಹಿಸುವುದು ಯಾಕೋ ನನಗಂತೂ ಸಂಶಯವಿದೆ!
              ಕಳೆದ ಮೂರ್ನಾಲ್ಕು ವರುಷಗಳಿಂದ ಹಲವು ಪ್ರದರ್ಶನಗಳಲ್ಲಿ ಭಾಗವತಿಕೆ ಮಾಡಿದ್ದೇನೆ. ಅನ್ಯಾನ್ಯ ಕಾರಣಗಳಿಂದಾಗಿ ರಂಗಕ್ರಮಗಳಿಗೆ ಉದ್ದೇಶಪೂರ್ವಕವಾಗಿಯೇ ಸಂಘಟಕರು, ಕಲಾವಿದರು ಕತ್ತರಿ ಹಾಕುವುದನ್ನು ನೋಡಿ ಸಂಕಟಪಟ್ಟಿದ್ದೇನೆ. ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಸಿದ್ಧ, ಪ್ರಮಾಣ ನಾಟ್ಯಗಳನ್ನು ನಾವೇನೂ ಹೊಸದಾಗಿ ಸೃಷ್ಟಿ ಮಾಡಿದ್ದಲ್ಲ. ಮಾಡಿದರೆ ಅದು ಯಕ್ಷಗಾನವಾಗಲಾರದು. ಇಂತಹ ನಾಟ್ಯಗಳು, ರಂಗನಡೆಗಳನ್ನು ಮರೆತ ಪ್ರದರ್ಶನದಲ್ಲಿ ನನಗ್ಯಾಕೋ ಯಕ್ಷಗಾನ ಕಾಣುವುದಿಲ್ಲ. ಹಾಗಾಗಿ ಯಥಾಸಾಧ್ಯ ರಂಗಪ್ರಸಂಗವನ್ನು ಆಯೋಜಿಸಿದೆ. ಈ ದಿಸೆಯಲ್ಲಿ ಯೋಚಿಸುವ ಹಲವಾರು ಮಂದಿ ಕಲಾವಿದರು ಜತೆಯಾಗಿದ್ದಾರೆ, ಎನ್ನುತ್ತಾರೆ ರಾಮಕೃಷ್ಣ ಮಯ್ಯರು.
           ನೀರ್ಚಾಲು ಶಿಬಿರದಲ್ಲಿ ಪಾಂಡವರ ಒಡ್ಡೋಲಗ, ಕಿರಾತಾರ್ಜುನ ಆಖ್ಯಾನದ ಯುದ್ಧ ಕ್ರಮಗಳು, ಕೃಷ್ಣನ ಒಡ್ಡೋಲಗ, ಗೋಪಿಕೆಯರ ವಿಹಾರ, ಅಭಿಮನ್ಯು ಮತ್ತು ಬಬ್ರುವಾಹನ ಪಾತ್ರಗಳ ಭಿನ್ನತೆ, ಹೆಣ್ಣು ಬಣ್ಣದ ಪ್ರವೇಶ ಮತ್ತು ಶೃಂಗಾರ, ಕಾರ್ತವೀರ್ಯಾರ್ಜುನ ಪ್ರಸಂಗದ ನಡೆಗಳು, ಪ್ರಮೀಳೆಯ ಕ್ರಮ... ಹೀಗೆ ರಂಗದಿಂದ ಕಡೆಗಣಿಸಲ್ಪಟ್ಟ ವಿಚಾರಗಳ ಮರುಪೋಣಿಕೆ. ಪ್ರತೀ ಸಲವೂ ನೋಡುವಾಗ ಒಂದಲ್ಲ ಒಂದು ವ್ಯತ್ಯಾಸಗಳು ಕಾಣುವುದು ಸಹಜ. ಆದರೆ ಈಗ ಯಕ್ಷಗಾನದ ಸೀನಿಯರ್ ಆಗಿ ನಮ್ಮ ಮುಂದೆ ಸಂಪನ್ಮೂಲ ವ್ಯಕ್ತಿಯಾಗಿರುವ ಬಲಿಪ ನಾರಾಯಣ ಭಾಗವತರು ಒಪ್ಪಿದಂತೆ ರಂಗಕ್ರಮವನ್ನು ಅಳವಡಿಸಿಕೊಳ್ಳುತ್ತಿದ್ದೇವೆ, ಮಯ್ಯರ ಅಭಿಮತ.
                ಪಾವಂಜೆಯಲ್ಲಿ ಜರುಗಿದ ಎರಡನೇ ರಂಗಪ್ರಸಂಗದಲ್ಲಿ ತಾಮ್ರಧ್ವಜ ಕಾಳಗ, ಕೃಷ್ಣನ ಒಡ್ಡೋಲಗ-ಪಾರಿಜಾತ, ರಾಮನ ಒಡ್ಡೋಲಗ, ಶೂರ್ಪನಖಿ-ಮಾಯಾ ಶೂರ್ಪನಖಿ, ಬಣ್ಣದ ತೆರೆ, ಸಂಕುಲ ಯುದ್ಧದ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿತ್ತು. ತಾಮ್ರಧ್ವಜ ಕಾಳಗದ ರಂಗನಡೆಗಳು ತೀರಾ ಸೂಕ್ಷ್ಮ, ಜಟಿಲ. ಸಂಕುಲ ಯುದ್ಧಗಳು ಹೆಚ್ಚು ಜಾಣ್ಮೆಯನ್ನು ಬೇಡುವಂತಾದ್ದು. ಕೃಷ್ಣನ ಒಡ್ಡೋಲಗದ ಕ್ರಮಗಳಲ್ಲೂ ಎಚ್ಚರ ಬೇಕು. ಇವೆಲ್ಲಾ ರಂಗದಲ್ಲಿ ಪ್ರಯೋಗವಾಗುತ್ತಾ ಇದ್ದ ಕಾಲಘಟ್ಟದಲ್ಲಿ ಇವಕ್ಕೆ ಪ್ರತ್ಯೇಕವಾದ ಶಿಬಿರಗಳು ಬೇಕಾಗಿರಲಿಲ್ಲ. ಹೊಸ ತಲೆಮಾರಿನ ಕಲಾವಿದರಿಗೆ ಇವೆಲ್ಲವುಗಳ ಪರಿಚಯ ಇದ್ದೀತೆಂದು ಹೇಳಲು ಧೈರ್ಯಸಾಲದು.
              ಕಟೀಲು, ಉಡುಪಿ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಪೆರ್ಲ.. ಮೊದಲಾದೆಡೆ ಶಿಬಿರದ ಆಯೋಜನೆಯ ಯೋಜನೆ ನಡೆಯುತ್ತಿದೆ. ರಂಗ-ಪ್ರಸಂಗದ ದಾಖಲೀಕರಣವಾಗುತ್ತಿದೆ. ಕಲಿಕಾ ದಾಹಿಗಳಿಗೆ ಇದೊಂದು ಕೈತಾಂಗು ಇದ್ದಂತೆ. ಕಲಿಸುವ ಗುರುವಿನಲ್ಲಿ ಸಮಗ್ರ ಬೌದ್ಧಿಕತೆ ಇದ್ದರೆ ತೊಂದರೆಯಿಲ್ಲ. ಹಾಗೋ ಹೀಗೋ ಎನ್ನುವ ಗೊಂದಲವಿದ್ದರೆ ರಂಗದಲ್ಲಿ ಕಲಾವಿದ ಸೋಲುತ್ತಾನೆ. ಆತ ಸೋತರೆ ಗುರುವಿಗೆ ತೊಂದರೆಯಿಲ್ಲ ಬಿಡಿ! ಆದರೆ ಕಲಾವಿದನ ಬೆಳವಣಿಗೆಗೆ ತೊಡಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ದಾಖಲಾತಿಗಳು ಸಹಾಯಕ್ಕೆ ಬರುತ್ತವೆ. ಖರ್ಚು-ವೆಚ್ಚಗಳನ್ನು ಸರಿದೂಗಿಸಲು ಕನಿಷ್ಠ ಶುಲ್ಕದೊಂದಿಗೆ ಈ ದಾಖಲೀಕರಣ ಆಸಕ್ತರ ಕೈಸೇರಬೇಕೆನುವುದೂ ಮಯ್ಯರ ಆಶಯ.
              ನಿಮ್ಮ ಪರಿಕಲ್ಪನೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿದರು? ಎನ್ನುವ ನನ್ನ ಕೀಟಲೆ ಪ್ರಶ್ನೆಗೆ ಮಯ್ಯರು ನವಿರಾಗಿ ಪ್ರತಿಕ್ರಿಯೆ ನೀಡಿದರು - ರಂಗ-ಪ್ರಸಂಗಕ್ಕೆ ಚಪ್ಪಾಳೆ, ಶಿಳ್ಳೆಗಳ ಭಯ, ಬಾಧೆಯಿಲ್ಲ!  ಯಕ್ಷಗಾನವನ್ನು ಪ್ರೀತಿಸುವ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹಿರಿಯರಾದ ಬಲಿಪ ನಾರಾಯಣ ಭಾಗವತರು, ಡಾ.ಎಂ.ಪ್ರಭಾಕರ ಜೋಶಿ, ಸೂರಿಕುಮೇರು ಗೋವಿಂದ ಭಟ್.. ಮೊದಲಾದ ಗಣ್ಯರು ಬೆನ್ನು ತಟ್ಟಿದ್ದಾರೆ. ಒಂದಷ್ಟು ಸ್ನೇಹಿತ ಗಡಣವಿದೆ. ಇದರಿಂದ ಸ್ಪೂರ್ತಿಗೊಂಡಿದ್ದೇನೆ. ಒಂದೊಂದು ಕಾರ್ಯಕ್ರಮಕ್ಕೆ ಏನಿಲ್ಲವೆಂದರೂ ಒಂದೂವರೆಲಕ್ಷ ರೂಪಾಯಿಯ ವೆಚ್ಚವಿದೆ. ಈಗ ಹೇಗೋ ಸರಿದೂಗಿಸುತ್ತಿದ್ದೇನೆ. ಯಕ್ಷಗಾನವನ್ನು ಪ್ರೀತಿಸುವ ಕಲಾಭಿಮಾನಿಗಳಿಂದ ನೆರವನ್ನು ನಿರೀಕ್ಷಿಸುತ್ತೇನೆ.
             ಓರ್ವ ವೃತ್ತಿ ಕಲಾವಿದನಾದ ರಾಮಕೃಷ್ಣ ಮಯ್ಯರು ಯಕ್ಷಗಾನಕ್ಕೆ ಏಕಾಂಗಿಯಾಗಿ ಕಾಯಕಲ್ಪ ಕೊಡುವ ಯೋಚನೆ ಮಾಡಿದ್ದು ಸಾಹಸ. 'ರಂಗ ಹಾಳಾಯಿತು, ಪ್ರಯೋಜನವಿಲ್ಲ, ಹೀಗಾದ್ರೆ ಮುಂದೆ ಹೇಗೆ' ಎಂದು ಗೊಣಗುವ ನಾವೆಲ್ಲ ಮಯ್ಯರೊಂದಿಗೆ ಕೈಜೋಡಿಸೋಣ. ಯಾಕೆಂದರೆ ಅವರು ಗೊಣಗಾಟ ಮಾಡುವ ಬದಲು ಕಾರ್ಯಕ್ಕಿಳಿದಿದ್ದಾರೆ. ಅವರ ಯೋಜನೆಯ ಯಶವಿರುವುದು ಅವರು ವೆಚ್ಚ ಮಾಡುವ ಹಣದಲ್ಲಲ್ಲ. ಕಲೆಯನ್ನು ಪ್ರೀತಿಸುವ ನಾವು ಅವರೊಂದಿಗೆ ಹೇಗೆ ಸ್ಪಂದಿಸುತ್ತೇವೆ ಎನ್ನುವ ಹಿನ್ನೆಲೆಯಲ್ಲಿ ಯಶದ ಮಾನವಿದೆ.
             ತನ್ನ ತಂದೆಯವರ ನೆನಪಿನ 'ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು' ಈ ವೇದಿಕೆಯಡಿ ಅವರ ಯೋಜಿತ ಕಾರ್ಯಕ್ರಮಗಳು ಸಂಪನ್ನವಾಗುತ್ತಿವೆ.

ಚಿತ್ರಗಳು : ಉದಯ ಕಂಬಾರು, ನೀರ್ಚಾಲು
prajavani/ದಧಿಗಿಣತೋ/18-11-206



ಸಂಯಮ ತೊರೆಯದ ಮಿತಭಾಷಿಯ ನೆನಪು


             ವಿಷಮ ಸಮರಂಗ ಪ್ರಸಂಗದಲ್ಲಿ ಸಿದ್ಧಕಟ್ಟೆಯವರದು 'ಶ್ರೀಕೃಷ್ಣ'ನ ಪಾತ್ರ. ಪರಂಧಾಮದ ಸನ್ನಿವೇಶ. ತಾಯಿ ಯಶೋದೆಯೊಂದಿಗಿನ ಸಂಭಾಷಣೆ. ಟೆಂಟಿನೊಳಗೆ ಗಾಢ ಮೌನ. ಎಲ್ಲರ ಚಿತ್ತವೂ ರಂಗದತ್ತ. ಭಾವಪೂರ್ಣವಾದ ಸನ್ನಿವೇಶದಲ್ಲಿ ಶ್ರೀಕೃಷ್ಣನ ಕಣ್ಣಲ್ಲಿ ಕಣ್ಣೀರು ಜಿನುಗಿತು. ಪ್ರಸಂಗದ ಕೊನೆಗೆ ತನ್ನ ಅವತಾರದ ಸಮಾಪ್ತಿಯ ಹೊತ್ತು. ಬದುಕಿನ ಬವಣೆ, ಹಿತರೇ ಶತ್ರುಗಳಾದ ಪರಿ, ಬೌದ್ಧಿಕ ಅಪಕ್ವತೆಯ ತನ್ನ ಸಾಮಾಜಿಕರ ಚಿತ್ರಣ ನೀಡುತ್ತಾ ಪಾತ್ರವನ್ನು ಕಟ್ಟುತ್ತಾ ಹೋದಂತೆ ಪ್ರೇಕ್ಷಕರ ಕಣ್ಣೂ ತೇವವಾಗಿತ್ತು. ಹಿಮ್ಮೇಳ ಕಲಾವಿದರೂ ಕಣ್ಣೊರೆಸಿಕೊಂಡಿದ್ದರು.  ಒಂದು ಪಾತ್ರ ಬೀರಿದ ಪರಿಣಾಮಕ್ಕೆ ಬೆರಾಗಾಗಿದ್ದೆ.
             ತಾನು ಅಭಿನಯಿಸುತ್ತಿರುವುದು ಪಾತ್ರವನ್ನು ಎನ್ನುವ ಪ್ರಜ್ಞೆ ಮರೆತುಹೋಗಿ ಪಾತ್ರವೇ ಆಗುವ ಪರಿ ಇದೆಯಲ್ಲಾ, ಇದು ವ್ಯಕ್ತಿಯೊಬ್ಬನ ಒಳಗಿದ್ದ ಸುಪುಷ್ಟ ಕಲಾವಿದನ ಕಲಾವಿದತ್ವ. ಮಾನಿಷಾದ ಪ್ರಸಂಗದ ವಾಲ್ಮೀಕಿಯೂ ಸಿದ್ಧಕಟ್ಟೆಯವರೊಳಗೆ ಸುಪ್ತವಾಗಿ ಅವಿತಿದ್ದಿರಬೇಕು. ಇಲ್ಲದಿದ್ದರೆ ವಾಲ್ಮೀಕಿಯನ್ನು ರಂಗದಲ್ಲಿ ಹಾಗೆ ಕಡೆಯಲು ಸಾಧ್ಯವೇ ಇಲ್ಲ! ಅದೂ ಪ್ರಸಂಗ ಕವಿಯು ಆಶ್ಚರ್ಯಪಡುವಂತೆ! ಪಾತ್ರ, ಭಾವ, ಅದಕ್ಕನುಗುಣವಾದ ಸಾಹಿತ್ಯಗಳು ಪರಿಣಾಮಕಾರಿಯಾಗಿ ಪ್ರಸ್ತುತಗೊಂಡರೆ ಪ್ರೇಕ್ಷಕರಿಗೆ ತುಂಬು ಪರಿಣಾಮ ಬೀರುತ್ತದೆ. ಸಿದ್ಧಕಟ್ಟೆಯವರ ಬಹುತೇಕ ಪಾತ್ರಗಳಲ್ಲಿ ಪಾತ್ರ-ಭಾವ-ಸಾಹಿತ್ಯಗಳು ಮಿಳಿತಕೊಂಡಿದ್ದುವು.
            ತಾಳಮದ್ದಳೆಯಲ್ಲೂ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯುವ 'ವಾಲಿ ಶಕ್ತಿ' ಇವರಲ್ಲಿತ್ತು. ಸುಸ್ಪಷ್ಟವಾದ ಭಾಷೆಯ ಸೊಗಸಿನಲ್ಲಿ ಮಾಧುರ್ಯವನ್ನು ಕಂಡಿದ್ದೇನೆ, ಅನುಭವಿಸಿದ್ದೇನೆ. ಆಗಾಗ್ಗೆ ಇಣುಕುವ ಗಾದೆ, ಸುಭಾಷಿತಗಳ ಸ್ಪರ್ಶ. ಸಮಕಾಲೀನ ವಿಚಾರಗಳ ಲೇಪ. ಮಧ್ಯೆ ಮಧ್ಯೆ ಸಂಸ್ಕೃತ ಸೂಕ್ತಿಗಳು. ಸಂಭಾಷಣೆಗೆಳೆವ-ಇಳಿವ ಸುಭಗತೆ. ಮಾತಿನ ಮೋಡಿಗೆ ಪದಗಳನ್ನು ಕಟ್ಟುವ, ಕಟ್ಟಿದ ಪದಗಳನ್ನು ಪುನಃ ಹೊರಕ್ಕೆ ಬಿಡುವ, ಹೊರಕ್ಕೆ ಬಿಟ್ಟ ಪದಗಳು ಪ್ರೇಕ್ಷಕರ ಸುತ್ತ ಸುತ್ತುತ್ತಾ ಅವರೊಳಗೆ ಇಳಿವ ಕ್ಷಣಗಳಿಗೆ ಹಲವು ಬಾರಿ ಸಾಕ್ಷಿಯಾಗಿದ್ದೇನೆ. ಜುಲೈ 1ರಂದು ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರ (71) ಮರಣ ವಾರ್ತೆಯನ್ನು ಕೇಳಿದಾಗ ರಂಗದ ಅವರ ಒಂದೊಂದು ಮಾತುಗಳು ಮಿಂಚಿದುವು.
             ತೆಂಕು, ಬಡಗು ತಿಟ್ಟಿನ ರಂಗದಲ್ಲಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರ ಪಾದಗತಿ, ಜತೆಗೆ ಪದ-ಗತಿಗಳು ಅವರಿಗೆ ಅಭಿಮಾನಿಗಳನ್ನು ರೂಪಿಸಿದ್ದುವು. ಹಾಗೆಂತ ಅಭಿಮಾನಿಗಳನ್ನು ರೂಪಿಸಲೆಂದೇ 'ಗಿಮಿಕ್' ಮಾಡಿದವರಲ್ಲ. ಸ್ವ-ಪ್ರತಿಭೆಯ ಹೊಳಪಿನ ಕಿರಣಗಳು ಅಭಿಮಾನಿಗಳನ್ನು ಹುಡುಕಿ ತಂದಿದ್ದುವು. ಪಾತ್ರ ಸ್ವಭಾವ ಮತ್ತು ಪ್ರಸಂಗವು ಆ ಪಾತ್ರಕ್ಕೆ ಹಾಕಿಕೊಟ್ಟ ಚೌಕಟ್ಟಿನ ನಿಖರ ವರ್ತುಲದ ಪರಿಚಯ ಶೆಟ್ಟರಿಗಿತ್ತು. ಪಾತ್ರ ಪ್ರಸ್ತುತಿಯಲ್ಲಿ ಮಿತಿಯ ಅರಿವು ಇದ್ದುದರಿಂದ ಅವರ ಅರ್ಥವನ್ನು ಕೇಳುತ್ತಾ ಇದ್ದ ನಮಗೆ ಬೇರೆ ಪಾತ್ರ, ಪ್ರಸಂಗಗಳ ಮಾತಿನ ಎಳೆಗಳು ತಾಕುವುದಿಲ್ಲ. ಚಿಕ್ಕಚಿಕ್ಕ ಚೊಕ್ಕ ಮಾತುಗಳು, ಚುಟುಕು ಪದಗಳು. ಶುದ್ಧ ಭಾಷಾ ಪ್ರಯೋಗ.
              ಸಿದ್ಧಕಟ್ಟೆಯವರು ಓದಿದ್ದು ಪಿ.ಯು.ಸಿ. ಬೇರೆ ಉದ್ಯೋಗವನ್ನರಲಿಲ್ಲ. ಕಾವೂರು ಕೇಶವರಲ್ಲಿ ನಾಟ್ಯಾಭ್ಯಾಸ. ಕಟೀಲು ಮೇಳದಿಂದ ತಿರುಗಾಟಕ್ಕೆ ಶ್ರೀಕಾರ. ಕದ್ರಿ, ಕರ್ನಾಟಕ, ಮಂಗಳಾದೇವಿ, ಹಿರಿಯಡ್ಕ, ಸಾಲಿಗ್ರಾಮ.. ಹೀಗೆ ವಿವಿಧ ಮೇಳಗಳಲ್ಲಿ ನಾಲ್ಕು ದಶಕಗಳ ವ್ಯವಸಾಯ. ಮೊದಲಿನಿಂದಲೂ ನಾಟ್ಯದತ್ತ ಒಲವು ಕಡಿಮೆ. ಹಾಗೆಂತ ರಂಗದಲ್ಲಿ ನಾಟ್ಯ ಬೇಕೇ ಬೇಕು ಎಂದು ಸಮರ್ಥಿಸುವವನು. ನನಗೆ ನಾಟ್ಯಲಕ್ಷ್ಮೀ ಒಲಿಯಲಿಲ್ಲ. ಒಲಿಯದ ಕಲೆಯನ್ನು ಒಲಿಸುವ ಹಠ ಯಾಕಲ್ವಾ, ಎಂದು ವಿನೋದವಾಗಿ ಹೇಳಿದ್ದರು. ನಾಟ್ಯಲಕ್ಷ್ಮಿಯು ತೋರಿದ ಕೊರತೆಯನ್ನು ಸರಸ್ವತಿಯು ನೀಗಿದ್ದಾಳೆ, ಅನುಮೋದಿಸಿದ್ದಾಳೆ. ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳದಲ್ಲಿ ಅವರ ಸಹಾಯಕನಾಗಿಯೂ, ವೇಷಧಾರಿಯಾಗಿಯೂ ನಿರ್ವಹಿಸಿದ ಆ ಕಾಲಘಟ್ಟವು ಸಿದ್ಧಕಟ್ಟೆಯವರಿಗೆ ಮೇಳದ ಸಿಹಿ-ಕಹಿಗಳ ಪರಿಚಯವನ್ನು ಮಾಡಿತ್ತು.
             ಸುಧನ್ವ, ರಾಮ, ಕೃಷ್ಣ, ವಾಲ್ಮೀಕಿ, ಪರಶುರಾಮದಂತಹ ಪೌರಾಣಿಕ ಪಾತ್ರಗಳಲ್ಲಿ ಸ್ವಂತಿಕೆಯ ಹೆಜ್ಜೆ ಊರಿದ್ದಾರೆ. ಬೊಳ್ಳಿದಂಡಿಗೆ ಪ್ರಸಂಗದಲ್ಲಿ 'ಶೆಟ್ಟಿ' ಪಾತ್ರದ ಜಿಪುಣತೆ, ಗರುಡ ಕೇಂಜವೆ ಪ್ರಸಂಗದ 'ಮಂತ್ರಿ'ಯ ದುಷ್ಟತನ, ಕೋಟಿ ಚೆನ್ನಯದ 'ಬುದ್ಧಿವಂತ', ಕದ್ರಿ ಕ್ಷೇತ್ರ ಮಹಾತ್ಮೆ ಪ್ರಸಂಗದ 'ಗೋರಕ್ಷನಾಥ'.. ಪಾತ್ರಗಳ ವಿನ್ಯಾಸಗಳಲ್ಲಿ ಸಿದ್ಧಕಟ್ಟೆಯವರ ಕೊಡಗೆ ಅನನ್ಯ. ಬಡಗು ತಿಟ್ಟಿನ ರಂಗದಲ್ಲಿ ಅಗ್ನಿನಕ್ಷತ್ರ, ಈಶ್ವರಿ ಪರಮೇಶ್ವರಿ, ರಂಗನಾಯಕಿ, ಧರ್ಮಸಂಕ್ರಾಂತಿ, ಸೂರ್ಯವಂಶಿ.. ಪ್ರಸಂಗಗಳಲ್ಲಿ ವಿಶ್ವನಾಥ ಶೆಟ್ಟರ ವಿವಿಧ ಭಾವಗಳ ಪಾತ್ರಗಳು ಅವರಿಗೆ ತಾರಾಮೌಲ್ಯ ತಂದು ಕೊಟ್ಟಿದ್ದುವು. ತುಳು ಭಾಷೆಯ ಸೌಂದರ್ಯವನ್ನು ಪ್ರೇಕ್ಷಕನಾಗಿ ಅನುಭವಿಸಿದ್ದೇನೆ.
            ಚಾಣಕ್ಯ ತಂತ್ರ. ವಿಷಮ ಸಮರಂಗ, ಕನ್ಯಾಂತರಂಗ, ಚಾಣಕ್ಷ ಚಾಣಕ್ಯ, ವರ್ಣವೈಷಮ್ಯ, ಶಶಿವಂಶ ವಲ್ಲರೀ, ಜ್ವಾಲಾಜಾಹ್ನವಿ, ಶ್ರೀರಾಮ ಸೇತು.. ಸಿದ್ಧಕಟ್ಟೆಯವರು ರಚಿಸಿದ ಹಿಟ್ ಪ್ರಸಂಗಗಳು.  ಬೊಳ್ಳಿದಂಡಿಗೆ, ಗೆಂಡಸಂಪಿಗೆ, ರತ್ನರಾಧಿಕೆ, ಗರುಡರೇಖೆಯಂತಹ ಐವತ್ತಕ್ಕೂ ಮಿಕ್ಕಿದ ಪ್ರಸಂಗಗಳ ರಚಯಿತರು. ಆಳವಾದ ರಂಗಾನುಭವ ಮತ್ತು ನಿರ್ದೇಶನದ ಪರಿಪಕ್ವ ಪಾಕವಾಗಿದ್ದ ಶೆಟ್ಟರ ಪ್ರಸಂಗಗಳೆಲ್ಲವೂ ಈ ಕಾರಣಗಳಿಂದ ಗೆದ್ದಿವೆ. ಕಲಾವಿದನೊಬ್ಬ ಪ್ರಸಂಗಕರ್ತನಾದರೆ ಆತನಿಗೆ ರಂಗದ ಭಾಷೆ, ರಂಗದ ನಡೆ, ಸನ್ನಿವೇಶ ವಿನ್ಯಾಸಗಳನ್ನು ಅನುಭವಿಸಿದ ಅನುಭವ ಇರುತ್ತದೆ. ಈ ಹಿನ್ನೆಲೆಯಲ್ಲಿಯೂ ಅವರ ಪ್ರಸಂಗಗಳು ಗೆದ್ದಿವೆ.
            ವಿಶ್ವನಾಥ ಶೆಟ್ಟರೊಂದಿಗಿನ ಒಡನಾಟ ಮತ್ತು ಅವರ ಅರ್ಥಗಾರಿಕೆಯ ಸೊಗಸುಗಾರಿಕೆ, ಮಾತಿನ ಅಂದವನ್ನು ಅರ್ಥಧಾರಿ ವಾಸುದೇವ ರಂಗಾಭಟ್ ಕಂಡದ್ದು ಹೀಗೆ - ಸರಳ, ಸ್ಪಷ್ಟ ವಾಕ್ಸರಣಿ. ಪ್ರಸಂಗದ ಪ್ರಬಂಧ ಧ್ವನಿಗೆ ಪೂರಕ ಅರ್ಥವಿವರಣೆಯತ್ತ ಕಾಳಜಿ. ತೆಳು ಹಾಸ್ಯಭರಿತ ವೈನೋದಿಕವಾದ ಸಭಿಕರಿಗೆ ಆಪ್ತವಾಗುವ ಶೈಲಿ. ಉದಾಹರಣೆಗಳ, ಉಪಕಥೆಗಳ ಮೂಲಕ ವಿಷಯ ಸ್ಪಷ್ಟೀಕರಣ ಮಾಡುವ ವ್ಯಕ್ತಿ. ವಿಶಿಷ್ಟ ಅರ್ಥ ವಿಧಾನ. ಎಂತಹ ವಾದ-ತರ್ಕಗಳ ಸಂದರ್ಭದಲ್ಲೂ, ಎಂದಿಗೂ ಸಂಯಮ ತೊರೆಯದ ಸ್ಮಿತಭಾಷಿ. ಸೋಲನ್ನು ನಯವಾಗಿ ರಂಗದಲ್ಲೇ ಅಂಗೀಕರಿಸಬಲ್ಲ ಉದಾರಿಯಾದ ಅಪರೂಪದ ಅರ್ಥಧಾರಿ.
             ಮಂಗಳೂರಿನ 'ಯಕ್ಷಾಂಗಣ'ವು ತನ್ನ ತಾಳಮದ್ದಳೆ ಸಪ್ತಾಹದ ಸಮಾರೋಪದಂದು ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರನ್ನು ಸ್ಮರಿಸಲಿದೆ. 'ಯಕ್ಷಾಂಗಣ' ಪ್ರಶಸ್ತಿಯನ್ನು ಹಿರಿಯ ಅರ್ಥಧಾರಿ ಕುಂಬಳೆ ಸುಂದರ ರಾಯರಿಗೆ ಪ್ರದಾನಿಸಿದೆ.. ನವೆಂಬರ್ 12ರಂದು ಸಂಜೆ ಮಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಎಸ್.ಡಿ.ಎಂ.ಕಾನೂನು ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ನಡೆದಿದೆ.  ಸೆಪ್ಟೆಂಬರ್ 6ರಿಂದ ನಡೆಯುವ ಸಪ್ತಾಹದಲ್ಲಿ ಪ್ರತಿ ದಿನ ಯಕ್ಷಗಾನದ ಹಿರಿಯರೊಬ್ಬರನ್ನು ನೆನಪಿಸುವ ಪರಿಪಾಠವನ್ನು ಯಕ್ಷಾಂಗಣ ಹಾಕಿಕೊಂಡಿದೆ. ನಾಲ್ಕನೇ ವರುಷದ ಸಪ್ತಾಹ ಮುಗಿಯುವ ಹೊತ್ತಿಗೆ ಯಕ್ಷಾಂಗಣದ ಮುಖ್ಯಸ್ಥ ಭಾಸ್ಕರ ರೈ ಕುಕ್ಕುವಳ್ಳಿಯವರ ಬತ್ತಳಿಕೆಯಲ್ಲಿ ಐದನೇ ವರುಷ ಕಾರ್ಯಕ್ರಮಗಳು ಮೊಳಕೆಯೊಡೆದಿವೆ.

(ಚಿತ್ರ : ರಾಮ್ ನರೇಶ್ ಮಂಚಿ)









ಯಕ್ಷೊತ್ಸವ ಊರಿದ ಸಾಂಸ್ಕೃತಿಕ ಯವನಿಕೆ


              ಸಂಪಾಜೆಯಲ್ಲಿ ಇಪ್ಪತ್ತಮೂರು ಗಂಟೆಗಳ ಯಕ್ಷಗಾನ ಪ್ರದರ್ಶನ! ನಾಲ್ಕು ಆಖ್ಯಾನಗಳು. ಮೂರು ತೆಂಕು ಮತ್ತು ಒಂದು ಬಡಗು ತಿಟ್ಟಿನ ಪ್ರದರ್ಶನ. ವೃತ್ತಿ ಕಲಾವಿದರ ಸಮ್ಮಿಲನ. ಸುಪ್ತ ಪ್ರತಿಭೆಗಳ ಪೂರ್ತಿ ಅನಾವರಣ.  ಯಾವುದೇ ಪ್ರಸಂಗಕ್ಕೆ 'ಸಮಯವಿಲ್ಲ' ಎಂಬ ಗೊಣಗಾಟವಿಲ್ಲ. ಅಕ್ಟೋಬರ್ 29ರಂದು ಮಧ್ಯಾಹ್ನ ಎರಡು ಗಂಟೆಗೆ ಆರಂಭವಾದ 'ಸಂಪಾಜೆ ಯಕ್ಷೊತ್ಸವ'ವು ಮುಗಿಯುವಾಗ ಮರುದಿವಸ ಮಧ್ಯಾಹ್ನ ಒಂದು ಗಂಟೆ!
              2015ರಲ್ಲಿ ಸಂಪಾಜೆ ಯಕ್ಷೊತ್ಸವವು ರಜತ ಸಂಭ್ರಮವನ್ನು ಆಚರಿಸಿತ್ತು. ಈ ವರುಷ ಇಪ್ಪತ್ತಾರರ ಪ್ರದರ್ಶನ. ಡಾ.ಕೀಲಾರು ಗೋಪಾಲಕೃಷ್ಣಯ್ಯವರ ಸಾರಥ್ಯದಲ್ಲಿ ಯಕ್ಷೊತ್ಸವವು 1990ರಲ್ಲಿ ಆರಂಭವಾಗಿತ್ತು. 2004ರಲ್ಲಿ ಇವರು ದೈವಾಧೀನರಾದ ಬಳಿಕ 'ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ'ದ ಮೂಲಕ ಆಯೋಜನೆ. ಉತ್ಸವದ ವ್ಯವಸ್ಥೆ, ವಿನ್ಯಾಸ, ಪ್ರದರ್ಶನ, ಸಂಮಾನ, ಪ್ರಶಸ್ತಿ..ಗಳು ಹಿಂದಿನಂತೆ ಮುಂದುವರಿದಿದೆ.
               ಡಾ.ಕೀಲಾರು ಗೋಪಾಲಕೃಷ್ಣಯ್ಯನವರು ಕಲಾಪೋಷಕ, ಕಲಾ ಪ್ರೇಮಿ. ಕಣ್ಣೀರಿಗೆ ಮರುಗುವ ಗುಣ. ಜಾತ್ಯತೀತ ಮನೋಭಾವದ ದಾನಿ. ಬಾಲ್ಯದಿಂದಲೇ ಯಕ್ಷಗಾನದತ್ತ ಒಲವು, ಸಾಹಿತ್ಯದಲ್ಲಿ ಪ್ರೀತಿ. ಪ್ರತಿಷ್ಠಿತ ಕೀಲಾರು ಮನೆತನ ಅನ್ನ ದಾಸೋಹಕ್ಕೆ ಖ್ಯಾತಿ. ಸ್ವಯಂ ವ್ಯಕ್ತಿತ್ವದಿಂದ ಊರಿಗೆ ಕಣ್ಣಾಗಿ ರೂಪುಗೊಂಡರು. ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿದರು. ವಿವಿಧ ದತ್ತಿ ನಿಧಿಗಳನ್ನು ಸ್ಥಾಪಿಸಿದರು. ಬಡವರಿಗೆ ಆಸರೆಯಾದರು. ವಿದ್ಯಾರ್ಥಿಗಳಿಗೆ ನೆರವಾದರು. ಕೀಲಾರು ಅವರು ಬದುಕಿನಲ್ಲಿ ರೂಢಿಸಿಕೊಂಡಿರುವ ಸಮಾಜಮುಖಿ ಬದ್ಧತೆಗಳನ್ನು ಈಗ ಪ್ರತಿಷ್ಠಾನವು ಅನುಷ್ಠಾನಿಸುತ್ತಿದೆ.
              ಸಂಪಾಜೆ ಯಕ್ಷೊತ್ಸವದಲ್ಲಿ ಆತಿಥ್ಯಕ್ಕೆ ಮಣೆ. ಪ್ರದರ್ಶನ ಮುಗಿಯುವ ತನಕ ಪಾಕ ಶಾಲೆಯು ತೆರೆದಿರುತ್ತದೆ. ಎಷ್ಟು ಹೊತ್ತಿಗೆ ಹೋದರೂ ಉಪಾಹಾರ, ಭೋಜನವನ್ನು ಬಡಿಸಲು ಕಾದಿರುತ್ತಾರೆ. ಹಾಗಾಗಿ ಪ್ರದರ್ಶನ ಪೂರ್ತಿ ಬಹುತೇಕ ಪ್ರೇಕ್ಷಕರು ಭಾಗವಹಿಸುವುದನ್ನು ನೋಡಬಹುದು. ಎಲ್ಲಾ ವರ್ಗದ ಜನರು ಭಾಗವಹಿಸುತ್ತಾರೆ. ಒಂದೊಂದು ವಿಭಾಗದಲ್ಲೂ ಲೋಪ ಬರಬಾರದೆನ್ನುವ ನಿಗಾ. ಎಲ್ಲೆಲ್ಲೂ ಅಚ್ಚುಕಟ್ಟು. ಗೊಂದಲವಾಗದಂತೆ ಎಚ್ಚರ.
             'ಸಹಸ್ರ ಕವಚ, ಮಾರುತಿ ಪ್ರತಾಪ, ಉತ್ತಮ ಸೌದಾಮಿನಿ, ವಿಶ್ವವಿಮೋಹನ' - ಸರ್ವಾಂಗ ಸುಂದರವಾಗಿ ಮೂಡಿಬಂದ ಆಖ್ಯಾನಗಳು. ಇದರಲ್ಲಿ 'ಮಾರುತಿ ಪ್ರತಾಪ'ವನ್ನು ಬಡಗು ತಿಟ್ಟಿನ ಖ್ಯಾತರು ಪ್ರದರ್ಶಿಸಿದ್ದರು. ಜನ್ಸಾಲೆ ರಾಘವೇಂದ್ರ ಆಚಾರ್ಯರ ಭಾಗವತಿಕೆಯಲ್ಲಿ ಪ್ರಸ್ತುತಿಯಾದ ಈ ಪ್ರಸಂಗವು ಲಂಬಿತವಾದಂತೆ ಕಂಡು ಬಂದರೂ ಪ್ರಸಂಗದ ಒಟ್ಟು ಸೌಂದರ್ಯವನ್ನು ಕಲಾವಿದರು ಕಟ್ಟಿಕೊಟ್ಟರು. ಮೂವರು ಭಾಗವತರ ತ್ರಿಂದ್ವ ಭಾಗವತಿಕೆಯಲ್ಲಿ ಸಹಸ್ರಕವಚ ಪ್ರಸಂಗ ಮೆರುಗಿತು.
             ಉತ್ತಮ ಸೌದಾಮಿನಿ - ಒಂದು ಕಾಲಘಟ್ಟದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಯಶಕಂಡ ಪ್ರಸಂಗ ಯಕ್ಷೊತ್ಸವದಲ್ಲಿ ಕಲಾವಿದರಿಗೆಲ್ಲಾ ಪ್ರಸಂಗವು ಹೊಸತು. ಎಲ್ಲೂ ಗೊಂದಲವಾಗದೆ ಸಹಜವಾಗಿ ಓಟ ಕಂಡಿತ್ತು. ಹೆಚ್ಚು ನಾಟಕೀಯ ತಿರುವುಗಳುಳ್ಳ ಇದನ್ನು ನೊಡುವ ಪ್ರೇಕ್ಷಕರು ಕೂಡಾ ರಂಗದಲ್ಲೇ ತಮ್ಮ ಗಮನವನ್ನು ಇರಿಸಿದಾಗ ಮಾತ್ರ ಪ್ರಸಂಗದ ಆಶಯ ಮನದೊಳಗೆ ಇಳಿಯುತ್ತದೆ. ಕೆಲವೊಂದು ಸನ್ನಿವೇಶಗಳಲ್ಲಿ ಬಹಳ ಸೂಕ್ಷ್ಮತೆಯ ಬಂಧವಿತ್ತು. ಮೇಲ್ನೋಟಕ್ಕೆ ನೋಡುವಾಗ ಸನ್ನಿವೇಶದಿಂದ ಸನ್ನಿವೇಶಕ್ಕೆ ಸಂಬಂಧವೇ ಇಲ್ಲದಂತೆ ಭಾಸವಾಗುತ್ತದೆ. ಕೊನೆಗೆ ಎಲ್ಲವೂ ಸುಸೂತ್ರವಾಗಿ ಪರಸ್ಪರ ಸಂಬಂಧ ಹೊಸೆಯುತ್ತದೆ.
              ವರ್ತಮಾನ ಯಕ್ಷಗಾನವು ಬಯಸುವ 'ರೈಸುವಿಕೆ'ಯು ಉತ್ತಮ ಸೌಧಾಮಿನಿಯಲ್ಲಿಲ್ಲ. ಹಾಗಾಗಿ ಕೆಲವರು 'ಬೋರ್' ಅಂದದುಂಟು. ಹಲವು ಕಾಲದಿಂದ ನಾನು 'ಬೋರ್' ಪದದ ಅರ್ಥ ಹುಡುಕುತ್ತಿದ್ದೇನೆ! ನನಗಿನ್ನೂ ಸಿಕ್ಕಿಲ್ಲ. ಆಟ ನೋಡುವ ಪ್ರೇಕ್ಷಕನ ಚಿತ್ತವು ರಂಗದೊಳಗೆ ಸುತ್ತುತ್ತಿದ್ದರೆ ಬೋರ್ ಎಂಬ ಅಂಟದು.  ಕೆಲವೊಮ್ಮೆ ರಂಗದ ಸಂಭಾಷಣೆಗಳು ದೀರ್ಘವಾದಾಗ ಚಿತ್ತವು ರಂಗದಿಂದ ಹೊರಗೆ ಸುತ್ತುವುದುಂಟು. ಆ ರೀತಿಯ ಸುತ್ತಾಟ ಒಂದು ಕ್ಷಣ ಮಾತ್ರ! ಮತ್ತದು ರಂಗದೊಳಗೆ ಜಿಗಿಯಬೇಕು. ಹೀಗೆ ಜಿಗಿಯದಿದ್ದರೆ ಪ್ರಸಂಗವನ್ನು ಅನುಭವಿಸುವುದಕ್ಕೆ, ಹಿಮ್ಮೇಳವನ್ನು ಆಸ್ವಾದಿಸುವುದಕ್ಕೆ ಕಷ್ಟವಾಗುತ್ತದೆ. ಎಲ್ಲಾ ಕಲಾವಿದರು ಉತ್ತಮ ಸೌದಾಮಿನಿಗೆ ನ್ಯಾಯ ಒದಗಿಸಿದ್ದಾರೆ. ಪರಿಣಾಮ ನೀಡಿದ್ದಾರೆ. ಚಿಕ್ಕ ಚಿಕ್ಕ ಹಾಸ್ಯ, ಮಾತಿನ ವರಸೆಯ ಪಂಚ್ಗಳು ಮುದ ನೀಡಿತ್ತು.
              ಕೊನೆಯ ಪ್ರಸಂಗ - ವಿಶ್ವವಿಮೋಹನ ಅಥವಾ ಭದ್ರಾಯು ಚರಿತ್ರೆ. ಬಹುತೇಕ ಏರು ಪದ್ಯಗಳ ಆಖ್ಯಾನವಿದು. ಪ್ರಸಂಗ ಆರಂಭವಾಗುವಾಗ ಬೆಳಗ್ಗಿನ ಜಾವ ಏಳು ಗಂಟೆ! ಸ್ವಯಂವರ, ಶೃಂಗಾರ, ವೀರರಸಗಳಿಂದ ಆವೃತ್ತವಾದ ಪ್ರಸಂಗ. ಸಂಪಾಜೆಯ ಯಕ್ಷೊತ್ಸವ ಅಂದಾಗ ಎಲ್ಲಾ ಕಲಾವಿದರಿಗೂ ತನ್ನಲ್ಲಿರುವ  ಪ್ರತಿಭೆಯ ಅನಾವರಣ ಆಗಬೇಕೆಂಬ ಹಪಹಪಿಕೆ ಇರುತ್ತದೆ. ಆಗ ಪ್ರಸಂಗ ಸಹಜವಾಗಿ ಲಂಬಿತವಾಗುತ್ತದೆ. ಲಂಬನವಾಯಿತೆಂದು ಯಾರೂ ಗೊಣಗದೆ ಪ್ರಸಂಗವನ್ನು ಸ್ವೀಕರಿಸುವ ಮನಃಸ್ಥಿತಿಯಿದೆಯಲ್ಲಾ, ಇದು ಸಂಪಾಜೆ ಯಕ್ಷೊತ್ಸವದ ಹೈಲೈಟ್.
              ಇಂದು ಸಮಗ್ರ ಯಕ್ಷಗಾನವನ್ನು ನೋಡುವ ರಸಿಕರು ಎಲ್ಲವೆಂದಲ್ಲ, ತೀರಾ ಕಡಿಮೆ. ಒಂದೊಂದು ಅಂಗವನ್ನು ಪ್ರೀತಿಸುವ, ಅದಕ್ಕಾಗಿ ಕಾಯುವ ಮನಸ್ಸುಗಳು ಧಾರಾಳ. ಕೆಲವರಿಗೆ ಭಾಗವತಿಕೆ, ಇನ್ನೂ ಕೆಲವರಿಗೆ ಚೆಂಡೆ-ಮದ್ದಳೆಗಳು, ಹಾಸ್ಯ, ಸ್ತ್ರೀವೇಶ, ಪುಂಡುವೇಶ... ಹೀಗೆ. ಇಪ್ಪತ್ತಮೂರು ಗಂಟೆಗಳಲ್ಲಿ ಇಂತಹ ನಿರೀಕ್ಷೆ, ಕಾತರಗಳಿಗೆ ಸಾಕ್ಷಿಯಾಗಿತ್ತು ಯಕ್ಷೊತ್ಸವ. ಕಾಲ ಬದಲಾಗಿದೆ, ಪುರುಸೊತ್ತಿಲ್ಲ, ಬ್ಯುಸಿ.. ಮೊದಲಾದ ಒಣ ಮಾತುಗಳನ್ನು ಬದುಕಿನಲ್ಲಿ ಕೇಳುತ್ತೇವೆ. ಯಕ್ಷೊತ್ಸವದಲ್ಲಿ ಇಪ್ಪತ್ತಮೂರು ಗಂಟೆ ಕುಳಿತ ಪ್ರೇಕ್ಷಕರನ್ನು ಕಂಡಾಗ ಈ ಮಾತು ಢಾಳು ಎಂದು ಗೋಚರವಾಯಿತು! ಮನಸ್ಸಿದ್ದರೆ ಮಾರ್ಗವಿದೆ.
                ಕೀಲಾರು ಮನೆತನದವರು ಇಪ್ಪತ್ತಾರು ವರುಷಗಳಿಂದ ಸಂಪಾಜೆಯಂತಹ ಹಳ್ಳಿಗೆ ಸಾಂಸ್ಕೃತಿಕ  ಮೌಲ್ಯವನ್ನು ನೀಡಿದ್ದಾರೆ. ಸಾಂಸ್ಕೃತಿಕ ಯವನಿಕೆಯನ್ನು ಊರಿದ್ದಾರೆ. ಸಂಪಾಜೆ ಊರಿನ ಹೆಸರನ್ನು ಕೇಳದವರು ಸಂಪಾಜೆಗೆ ಬರುವಂತೆ ಮಾಡಿದ ಸಾಧನೆ ಚಿಕ್ಕ ವಿಚಾರವಲ್ಲ. ಕೀಲಾರು ಅವರ 'ಜಾತ್ಯತೀತ ಮನೋಭಾವ ಮತ್ತು ಸರ್ವಧರ್ಮ ಪ್ರೀತಿ'ಯು ಯಕ್ಷೊತ್ಸವದಲ್ಲಿ ಸಾಕಾರಗೊಳ್ಳುತ್ತಿದೆ. ಸಂಪಾಜೆಯ ಆಟಕ್ಕೆ ಹೋಗುವಾಗಲೂ ಯಕ್ಷಗಾನದ ಗುಂಗು, ಆಟ ನೋಡಿ ಮರಳುವಾಗಲೂ ಯಕ್ಷಗಾನದ್ದೇ ಗುಂಗು! ಈ ಗುಂಗಿನ ತೇವ ತಿಂಗಳಾದರೂ ಆರದು!

ಚಿತ್ರ : ಶ್ಯಾಮ ಕುಮಾರ್ ತಲೆಂಗಳ
ಪ್ರಜಾವಾಣಿ/ದಧಿಗಿಣತೋ/4-11-2016

      

ಐದೇ ವರುಷದಲ್ಲಿ ಐನೂರು!




              ಮಂದಾರ್ತಿ ಮೇಳದ ಪ್ರಧಾನ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್.  ಇವರ ಕಲ್ಪನೆಯ 'ನಡುಮನೆ ಗಾಯನ'ಕ್ಕೆ ಐನೂರರ ಖುಷಿ. ಯಕ್ಷಗಾನದ ಗಾಯನ ಸೊಗಸನ್ನು ಕಲಾ ಮನಸ್ಸುಗಳಿಗೆ ತಲುಪಿಸುವ ಉದ್ದೇಶ. ಬೇಸಿಗೆಯಲ್ಲಿ ಮೇಳದ ವ್ಯವಸಾಯ. ಮಳೆಗಾಲದಲ್ಲಿ ನಡುಮನೆ ಗಾಯನ. ಹೀಗೆ ವರುಷಪೂರ್ತಿ ಯಕ್ಷಗಾನವೇ ಬದುಕು. ಐನೂರು ಕಾರ್ಯಕ್ರಮದ ಹಿಂದೆ ಐದು ವರುಷದ ಶ್ರಮವಿದೆ.
               ಆ ದಿನ. ಉಡುಪಿ-ಪುತ್ತೂರು ಶ್ರೀ ಭಗವತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 'ನಡುಮನೆ ಗಾಯನ'ಕ್ಕೆ ಬೀಜಾಂಕುರ.  ಉಡುಪಿ ಕೆಳಾರ್ಕಳಬೆಟ್ಟು 'ನಗರ ಯಕ್ಷಬಳಗ'ದ ರೂಪೀಕರಣ. ಗಾಯನಕ್ಕೆ ಭಾಗವತ ಮತ್ತು ಓರ್ವ ಮದ್ದಳೆಗಾರ. ದಿವಸಕ್ಕೆ ಆರೇಳು ಮನೆಗಳ ಆಯ್ಕೆ. ಒಂದೊಂದು ಮನೆಯಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷ ಗಾಯನ. ಪುರಾಣ ಪ್ರಸಂಗಗಳ ಪದ್ಯಗಳ ಆಯ್ಕೆ. ಯಾವುದೇ ಸಂಭಾವನೆಯ ನಿರೀಕ್ಷೆಯಿರಲಿಲ್ಲ. ಪಾಲಿಗೆ ಬಂದಷ್ಟು ಸ್ವೀಕಾರ.
               ಒಂದು ವಾರ ಆಗಿರಬಹುದಷ್ಟೇ. ಕೊಡಂಕೂರಿನ ಕಲಾಪ್ರಿಯರೊಬ್ಬರಿಂದ ಆಹ್ವಾನ. ಕಾಲು ಗಂಟೆ ಸಾಲದು. ಎರಡು ಗಂಟೆಯಾದರೂ ಗಾಯನ ಬೇಕು. ಜತೆಗೆ ಚೆಂಡೆಯ ವಾದನವೂ ಬೇಕು. ಮಾಡಲು ಸಾಧ್ಯವೇ? ಎಂದು ವಿನಂತಿಸಿದರು. ಧ್ವನಿವರ್ಧಕ, ಪ್ರಚಾರದ ವ್ಯವಸ್ಥೆಯನ್ನೂ ಮಾಡಿದರು. ಕಾರ್ಯಕ್ರಮ ಉತ್ತಮವಾಗಿ ಮೂಡಿಬಂತು. ಅಂದಿನಿಂದ ದಿವಸಕ್ಕೆ ಒಂದೇ ಕಾರ್ಯಕ್ರಮ! ಅದೂ ಶಾಲೆ, ದೇವಾಲಯ, ಮನೆಗಳಲ್ಲಿ.
              ಮೂರು ವರುಷದಲ್ಲಿ ಮುನ್ನೂರೈವತ್ತು 'ನಡುಮನೆ ಗಾಯನ'! ಪ್ರಥಮ ವರುಷವೇ ನೂರರ ಸಂಭ್ರಮದ ಆಚರಣೆ. ಮುನ್ನೂರೈವತ್ತು ಕಾರ್ಯಕ್ರಮವೆಂದರೆ ಅದರ ಹಿಂದಿನ ಶ್ರಮ ಕಾಣದು. ಮನೆಗಳ ಆಯ್ಕೆ, ಪ್ರಚಾರ, ಆತಿಥ್ಯ.. ಇವೆಲ್ಲವೂ ಜೋಡಿಸಿಕೊಂಡು, ಕಲಾವಿದರನ್ನೂ ಸೇರಿಸಿಕೊಂಡು ಮಾಡಬೇಕಷ್ಟೇ. ಇದರಿಂದ ಯಕ್ಷಗಾನದ ಪದ್ಯಗಳ ಸೊಗಸನ್ನು ಜನರಿಗೆ ತಲುಪಿಸಲು ಸಹಕಾರಿಯಾಯಿತು, ಎನ್ನುತ್ತಾರೆ ಯಕ್ಷಗಾಯನದ ರೂವಾರಿ ನಗರ ಸುಬ್ರಹ್ಮಣ್ಯ ಆಚಾರ್.
              ಎರಡು ವರುಷದ ಹಿಂದೆ ಮಂದಾರ್ತಿಯ ಯಕ್ಷಗಾಯನ ಕಾರ್ಯಕ್ರಮಕ್ಕೆ ತೆಂಕಿನ ಪ್ರಸಿದ್ಧ ಭಾಗವತ ಪಟ್ಲ ಸತೀಶ ಶೆಟ್ಟಿಯವರು ಆಮಂತ್ರಿತರಾಗಿದ್ದರು. 'ಯಕ್ಷಗಾಯನದೊಂದಿಗೆ ಯಕ್ಷನೃತ್ಯವನ್ನೂ ಅಳವಡಿಸಿದರೆ ಪರಿಣಾಮಕಾರಿಯಲ್ವಾ,' ಸಲಹೆ ನೀಡಿದರು. ಯಕ್ಷನೃತ್ಯದ ಪರಿಕಲ್ಪನೆ ಮತ್ತು ವಿನ್ಯಾಸ ಇಲ್ಲಿಗೆ ಹೊಸತು. ಸ್ತ್ರೀಪಾತ್ರಧಾರಿ ಸಂತೋಷ ಕುಲಶೇಖರರಿಂದ ಜರುಗಿದ ಆದರೆ ಜರುಗಿದ ನೃತ್ಯ ಕಲಾಪ ಕ್ಲಿಕ್ ಆಯಿತು. ಕಲಾ ಪ್ರೇಕ್ಷಕರ ಸ್ವೀಕೃತಿಯೂ ದೊರೆಯಿತು. ಅಂದಿನಿಂದ ಗಾಯನದೊಂದಿಗೆ ನೃತ್ಯವೂ ಹೊಸೆಯಿತು. ಎರಡು ವರುಷದಲ್ಲಿ ನೂರೈವತ್ತು ಕಾರ್ಯಕ್ರಮಗಳಾಗಿವೆ.
                 ಒಟ್ಟು ಎರಡೂವರೆ ಗಂಟೆ. ಅದರಲ್ಲಿ ಒಂದೂಕಾಲು ಗಂಟೆ ಯಕ್ಷಗಾಯನ.  ಉಳಿದರ್ಧ ನೃತ್ಯ. ಪೌರಾಣಿಕ ಪ್ರಸಂಗಗಳ ಕಥಾಭಾಗಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ವಿನ್ಯಾಸಕ್ಕೆ ಭಂಗ ಬಾರದಂತೆ ಪುಟ್ಟ ಸಂಭಾಷಣೆಗಳು.  ಹೋದೆಡೆ ಎಲ್ಲಾ ಬಂಧುಗಳು ಸ್ವಾಗತ ಕೋರಿದ್ದಾರೆ. ಪ್ರೀತಿಯಿಂದ ನಡೆಸಿಕೊಂಡಿದ್ದಾರೆ. ಯಕ್ಷಗಾನವನ್ನು ಗೌರವಿಸಿದ್ದಾರೆ, ಎನ್ನುತ್ತಾರೆ ಆಚಾರ್.
            ಒಂದು ಕಾರ್ಯಕ್ರಮಕ್ಕೆ ಹದಿಮೂರುವರೆ ಸಾವಿರ ರೂಪಾಯಿ ವೀಳ್ಯ. ವೈಯಕ್ತಿಕವಾಗಿ ಭರಿಸುವವರೂ ಇದ್ದಾರೆ. ಸಾರ್ವಜನಿಕವಾಗಿ ಅಷ್ಟಿಷ್ಟು ಸಂಗ್ರಹಮಾಡಿ ಆಯೋಜಿಸುವವರೂ ಇದ್ದಾರೆ. ಧ್ವನಿವರ್ಧಕ, ವೇದಿಕೆ, ಜನರೇಟರ್.. ಎಲ್ಲಾ ವ್ಯವಸ್ಥೆಗಳನ್ನು ತಂಡ ಹೊಂದಿದೆ. ನಮ್ಮಲ್ಲಿಗೆ ಬನ್ನಿ ಎಂದು ಆಹ್ವಾನಿಸುವವರ ಸಂಖ್ಯೆ ಬೆಳೆದಿದೆ. ಇದು ಯಕ್ಷಗಾನದ ಹಿರಿಮೆಯಲ್ವಾ ಎಂದು ಸಂತೋಷಿಸುವ ಸುಬ್ರಹ್ಮಣ್ಯ ಆಚಾರ್, ಗೇಲಿ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ನನಗೆ ಬೇರೆ ಆರ್ಥಿಕ ಮೂಲವಿಲ್ಲ. ಯಕ್ಷಗಾನವೇ ಬದುಕು. ಬದುಕೇ ಯಕ್ಷಗಾನ. ನನಗಿದು ಅನ್ನದ ದಾರಿ. ಯಕ್ಷಗಾನವನ್ನು ಮನೆಗೆ, ಹಳ್ಳಿಗೆ ಕೊಂಡೊಯ್ದ ತೃಪ್ತಿ, ಸಮಾಧಾನವಿದೆ, ಎನ್ನುತ್ತಾರೆ.
            ಮೇಳದ ತಿರುಗಾಟದ ಅವಧಿಯಲ್ಲೂ ನಡುಮನೆ ಗಾಯನವಿದೆ. ಅಂತಹ ಹೊತ್ತಲ್ಲಿ ಅದರ ಜವಾಬ್ದಾರಿಯನ್ನು ಆಯೋಜಕರೇ ವಹಿಸಿಕೊಳ್ಳುತ್ತಾರೆ. ಸಂಘ ಸಂಸ್ಥೆಗಳು ಗಾಯನ ಕಲಾಪಕ್ಕೆ ತುಂಬು ಬೆಂಬಲ ನೀಡಿವೆ. ಹಿರಿಯ ಕಲಾವಿದರು ಬೆನ್ನು ತಟ್ಟಿದ್ದಾರೆ. ಮಣಿಪಾಲದ ಉಪನ್ಯಾಸಕ, ಲೇಖಕ ಪ್ರೊ.ಎಸ್.ವಿ.ಉದಯಕುಮಾರ್ ಶೆಟ್ಟಿಯವರು ತುಂಬು ಪ್ರೋತ್ಸಾಹ ನೀಡಿದ್ದಾರೆ, ಎನ್ನುತ್ತಾರೆ. ಐನೂರು ಕಾರ್ಯಕ್ರಮದಲ್ಲೂ ನಗರ ಸುಬ್ರಹ್ಮಣ್ಯ ಆಚಾರ್ ಅವರೇ ಭಾಗವತರು. ಮಹೇಶ್ ಮಂದಾರ್ತಿ ಮದ್ದಳೆಗಾರರು. ರಾಮಕೃಷ್ಣ ಮಂದಾರ್ತಿ ಚೆಂಡೆ ವಾದಕರು. ಅಗತ್ಯ, ಒತ್ತಡ, ಅಪೇಕ್ಷೆಯಿದ್ದಾಗ ಅತಿಥಿ ಕಲಾವಿದರನ್ನು ಹೊಂದಿಸಿಕೊಳ್ಳುತ್ತಾರೆ.
          ಮಳೆಗಾಲದಲ್ಲಿ ಚಿಕ್ಕ ಮೇಳಗಳು ಹಿಮ್ಮೇಳ, ವೇಷಗಳೊಂದಿಗೆ ತಿರುಗಾಟ ಮಾಡುತ್ತಿವೆ. ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನಗಳು ಜನಮಾನಸದಲ್ಲಿ ದಾಖಲಾಗಿವೆ. ಗಾನವೈಭವಗಳು ಯಥೇಷ್ಟವಾಗಿದೆ. ಪ್ರದರ್ಶನಗಳಿಗೆ ಅದ್ದೂರಿತನ ಹೊಸೆದಿದೆ. ಊಟೋಪಚಾರ, ಆತಿಥ್ಯಕ್ಕೆ ಮೊದಲ ಮಣೆ. ಪ್ರಕೃತ ಯಕ್ಷಗಾನದ ಸುದ್ದಿಗಳು ಮಾತಿಗೆ ವಸ್ತುವಾಗಿದೆ.
           ಇಂತಹ ಹೊತ್ತಲ್ಲಿ ನಗರ ಸುಬ್ರಹ್ಮಣ್ಯ ಆಚಾರ್ ತಂಡವು ಯಾವುದೇ ಗಿಮಿಕ್ ಇಲ್ಲದೆ, ಗಾಯನಸುಧೆಯನ್ನು ಉಣಿಸುತ್ತಿರುವುದು ಶ್ಲಾಘ್ಯ.  ಅವರಿಗೆ ಇದು ಹೊಟ್ಟೆಪಾಡಾದರೂ, ಈ ಹಾದಿಯಲ್ಲಿ ಗೌರವವಿದೆ. ಮಾನ-ಸಂಮಾನಗಳು ಪ್ರಾಪ್ತವಾಗಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಯಕ್ಷಗಾನವನ್ನು ಗೌರವದ ಕಣ್ಣಿನಿಂದ ನೋಡುತ್ತಾ, ಮನದಲ್ಲಿ ಮಾನಿಸುತ್ತಾ, ಸಮಾಜದಿಂದಲೂ ಗೌರವವನ್ನು ಅಪೇಕ್ಷಿಸುತ್ತಾ, ಅದರಂತೆ ನಡೆಯುವ ಮತ್ತು ಈ ವಿನ್ಯಾಸವನ್ನು ಜನರ ಮಧ್ಯೆ ಒಯ್ಯುವ ಸಾಧನೆ ಸಣ್ಣದಲ್ಲ.
              ಅಕ್ಟೋಬರ್ 28ರಂದು ಅಪರಾಹ್ನ 3 ರಿಂದ ನಡುಮನೆ ಯಕ್ಷಗಾನ ಗಾಯನ ಮತ್ತು ಯಕ್ಷ ನಾಟ್ಯದ ಐನೂರರ ಸಂಭ್ರಮ. ಪುತ್ತೂರು ಉಡುಪಿ ಶ್ರೀ ಭಗವತಿ ಕ್ಷೇತ್ರದಲ್ಲಿ ಸಮಾರಂಭ. ಈ ಸಮಾರಂಭದಲ್ಲಿ ಸ್ತ್ರೀಪಾತ್ರಧಾರಿ ಸಂತೋಷ ಕುಲಶೇಖರರಿಗೆ 'ಯಕ್ಷಮೇನಕೆ' ಪ್ರಶಸ್ತಿ ಪ್ರದಾನ. ಸುಬ್ರಹ್ಮಣ್ಯ ಭಾಗವತರ ಆಶಯಗಳಿಗೆ ಪೂರ್ಣಪ್ರಮಾಣದಲ್ಲಿ ಸ್ಪಂದಿಸಿದ ಕಲಾವಿದ. ಪ್ರಕೃತ ಮಂದಾರ್ತಿ ಮೇಳದ ಪ್ರಧಾನ ಸ್ತ್ರೀಪಾತ್ರಧಾರಿ. ಸಮಾರಂಭದ ಬಳಿಕ ನಡುಮನೆ ಯಕ್ಷಗಾನ, ಯಕ್ಷ ನಾಟ್ಯ.
             ಹಸಿವಿದ್ದಲ್ಲಿ ಪ್ರೀತಿಯಿದೆ, ವಿಶ್ವಾಸವಿದೆ. ಹಸಿದ ಮನಸ್ಸಿಗೆ ಬೇಕು, ಮುದ ನೀಡುವ ನಾದ-ಗಾಯನ. ಇದರಲ್ಲಿ ಕಲಾವಿದನೂ ಮೀಯುತ್ತಾನೆ, ಪ್ರೇಕ್ಷಕರನ್ನೂ ಮೀಯಿಸುತ್ತಾನೆ. ಮೀಯಲು ತಿಳಿಯದಿದ್ದರೆ ಮೀಯಿಸುವುದೇನನ್ನು? ಸಾಗಿ ಬಂದ ಹಾದಿಗೆ, ಬೆರಳು ತೋರಿದ ಪರಂಪರೆಗೆ ಯಾಕೆ ಕೃತಘ್ನರಾಗುತ್ತೇವೆ ಎಂದು ಅರ್ಥವಾಗುತ್ತಿಲ್ಲ. ವರ್ತಮಾನದ ರಂಗಭೂಮಿಯ ಭಾವ ನನ್ನೊಳಗೆ ಗೂಡು ಕಟ್ಟಿದ್ದು ಹೀಗೆ.
              ಸಾಗಿ ಬಂದ ಹಾದಿಯನ್ನು ಮರೆಯದ, ಪರಂಪರೆಗೆ ಮುಖತಿರುಗಿಸದೆ, ಎರಡನ್ನೂ ಗೌರವ ಭಾವದಿಂದ ಕಾಣುವ ನಗರ ಸುಬ್ರಹ್ಮಣ್ಯ ಆಚಾರ್ ಅವರ ನಡುಮನೆ ಯಕ್ಷಗಾಯನ, ಯಕ್ಷನಾಟ್ಯ ವಿನ್ಯಾಸಗಳು ಕಲಾಮನಸ್ಸುಗಳನ್ನು ಕಟ್ಟಿವೆ, ಕಟ್ಟುತ್ತಿವೆ.

ಗೋವಿನ ಮಹತಿಗೆ ಯಕ್ಷಗಾನ ಮಾಧ್ಯಮ

             ಯಕ್ಷಗಾನ ತಾಳಮದ್ದಳೆ, ಆಟಗಳು ಹಳ್ಳಿಯಿಂದ ನಗರ ತನಕ ವಿಶಾಲ ವ್ಯಾಪ್ತಿಯನ್ನು ಪಡೆದಿದೆ. ಪುರಾಣ ಸಂದೇಶ, ಬದುಕಿನ ಮಾದರಿಗಳು, ಸಂಸ್ಕೃತಿ-ಸಂಸ್ಕಾರಗಳು.. ಜನಮಾನಸಕ್ಕೆ ತಲಪಿಸುವ ಸಾಧನ. ಆಧುನಿಕ ತಂತ್ರಜ್ಞಾನಗಳು ಧಾಂಗುಡಿಯಿಡುವ ಪೂರ್ವದಲ್ಲಿ ದಕ್ಷಿಣೋತ್ತರ ಜಿಲ್ಲೆಯುದ್ದಕ್ಕೂ, ಇತ್ತ ಮಲೆಯಾಳದ  ಮಣ್ಣಿಗೂ ಯಕ್ಷಗಾನವೊಂದೇ ಅರಿವನ್ನು ಬಿತ್ತುವ ಉಪಾಧಿಯಾಗಿತ್ತು.
            "ನನ್ನ ಅಮ್ಮ ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಪುರಾಣ ಕಾವ್ಯಗಳನ್ನು, ಅದರ ಅರ್ಥಗಳನ್ನು ಪಾರಾಯಣ ಮಾಡುತ್ತಿದ್ದಾಗ ನಾವೆಲ್ಲಾ ಕಿವಿಯಾಗುತ್ತಿದ್ದೆವು. ಮನೆಗಳಲ್ಲಿ ಪುರಾಣ ಕಥೆಗಳನ್ನು ಹೇಳುವ ಪರಿಪಾಠವಿತ್ತು. ಆ ವಾತಾವರಣದಲ್ಲಿ ಬೆಳೆದ ನಮಗೆ ಪುರಾಣ ಓದದೆಯೇ ರಾಮಾಯಣ, ಮಹಾಭಾರತ ಕಥೆಗಳು ಮತಿಯೊಳಗೆ ಇಳಿದಿದ್ದುವು," ಎಂದು ಕೀರ್ತಿಶೇಷ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರು ಹೇಳಿದ ಮಾತು ನೆನಪಾಗುತ್ತದೆ.
            ಇಂತಹ ಸಂದೇಶವನ್ನು ಬಿತ್ತುವ ಯಕ್ಷಗಾನವು ಕ್ರಮೇಣ ಸಾಮಾಜಿಕ ಪ್ರಸಂಗದತ್ತ ಹೊರಳಿದುವು. ತುಳು ಪ್ರಸಂಗಳು ರಚನೆಯಾದುವು. ಈ ಮಧ್ಯೆ ಒಂದು ಪಿಡುಗನ್ನೋ, ಒಂದು ಚಳುವಳಿಯನ್ನೋ ಕೇಂದ್ರೀಕರಿಸಿ ಪ್ರಸಂಗಗಳು ರಚನೆಯಾದುವು. ತಾಳಮದ್ದಳೆ, ಆಟಗಳ ಮೂಲಕ ಪ್ರಸ್ತುತಿಕೊಂಡುವು. ಒಂದು ಉಪನ್ಯಾಸ, ಭಾಷಣಗಳು ಮಾಡುವ ಪರಿಣಾಮಕ್ಕಿಂತಲೂ ದುಪ್ಪಟ್ಟು ಗಾಢ ಪರಿಣಾಮ ಬೀರಿದುವು. ಅವೆಲ್ಲಾ ಕಾಲದ ಒಂದು ಮಿತಿಯೊಳಗೆ ಹೆಚ್ಚು ಪರಿಣಾಮ, ಪ್ರಭಾವ ಬೀರುವಂತಹುದು, ದೀರ್ಘಕಾಲಿಕವಲ್ಲ.
           ಇಂದು ದೇಶಾದ್ಯಂತ ಗೋವಿನ ಸಂರಕ್ಷಣೆಯ ಚಳುವಳಿ ನಡೆಯುತ್ತಿದೆ. ಮಾಧ್ಯಮಗಳಲ್ಲಿ ಗೋಸಂತತಿ ಉಳಿಸುವ, ಬೆಳೆಸುವ ವಿಚಾರಗಳು ಪ್ರಕಟವಾಗುತ್ತಿವೆ. ಸರಕಾರಿ ಮಟ್ಟದಲ್ಲೂ ಗೋವಿನ ಅಭಿವೃದ್ಧಿಗೆ ಬೇಕಾದ ಯೋಜನೆಗಳು ರೂಪುಗೊಳ್ಳುತ್ತಿವೆ. ಹೈನುಗಾರಿಕೆಗೂ, ಕೃಷಿಗೂ ಬಿಡಿಸಲಾಗದ ಬಂಧ-ಅನುಬಂಧ. ಹೀಗೆ ಬದುಕಿನಲ್ಲಿ ಗೋವಿನ ಮಹತ್ವವನ್ನು ಸಾರುವ ವರ್ತಮಾನದ ಒಂದು ವಿಚಾರದ, ಸಮಸ್ಯೆಯ ಸುತ್ತ ಯಕ್ಷಗಾನ ಪ್ರಸಂಗವೊಂದು ಸಿದ್ಧವಾಗಿದೆ. ಒಂದೆರಡು ತಾಳಮದ್ದಳೆ ಜರುಗಿದೆ.
           ಪ್ರಸಂಗದ ಹೆಸರು - 'ಅಭೀಷ್ಟದಾಯಿನಿ ಗೋಮಾತೆ'. ಹವ್ಯಾಸಿ ಭಾಗವತ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್ ಪ್ರಸಂಗದ ರಚಯಿತರು. ಕಲಾವಿದ ಉಂಡೆಮನೆ ಕೃಷ್ಣ ಭಟ್ಟರಿಂದ ಪರಿಷ್ಕಾರ. ಸುಮಾರು ಮೂರು ಗಂಟೆಗೆ ಹೊಂದುವ ಕಾಲ್ಪನಿಕ ಪ್ರಸಂಗ. ಗೋ ಸಂತತಿಯನ್ನು ಉಳಿಸಬೇಕು, ಬೆಳೆಸಬೇಕು ಎನ್ನುವ ಸ್ಪಷ್ಟ ಸಂದೇಶ ಬೀರುವ ಪ್ರಸಂಗವು ವರ್ತಮಾನಕ್ಕೆ ಕನ್ನಡಿ. ಯಕ್ಷಗಾನದ ವರ್ತುಲದೊಳಗೆ ಕಥಾನಕ ಸುತ್ತುತ್ತದೆ. ಎಲ್ಲೂ ಕಥೆಯಿಂದ, ಚೌಕಟ್ಟಿನಿಂದ ಹೊರಹೋಗದಂತಹ ಬಿಗಿ.
           ಕಥಾ ಹಂದರ : ಕರುನಾಡಿನ ಸುಧರ್ಮ ಮಹಾರಾಜನ ಮಗ ಸತ್ಯಸೇನ. ಈತ ಬೇಟೆಗೆ ತೆರಳಿದಾಗ ಕಳಿಂಗದ ವೀರವರ್ಮನ ಮಗಳು ಚಂದ್ರಾನನೆಯ ಪರಿಚಯ. ಪರಸ್ಪರ ಪ್ರೇಮಾಂಕುರ. ಬಳಿಕ ವಿವಾಹ. ಗಂಡನ ಮನೆಯಲ್ಲಿ ಒಂದೆರಡು ತಿಂಗಳು ಕಳೆದ ಚಂದ್ರಾನನೆಗೆ ಗೋವಿನ ಮಾಂಸ ತಿನ್ನುವ ಚಪಲ. ಇದು ತಂದೆಯ ಬಳುವಳಿ. ಹೆಂಡತಿಯನ್ನು ಒಲಿಸಿಕೊಳ್ಳಲು ಗಂಡ ಸತ್ಯಸೇನ ಗೋವಧೆಗೆ ಮುಂದಾಗುತ್ತಾನೆ. ತಂದೆಯಿಂದ ಮಗನಿಗೆ ಬುದ್ಧಿವಾದ. ಯಾವುದಕ್ಕೂ ಓಗೊಡದ ಮಗನಿಂದ ದೂರವಿರಲು ಸುಧರ್ಮ ನಿರ್ಧಾರ. ದೇಶಾಂತರ ಪರ್ಯಟನೆ. ಸುಜ್ಞಾನಂದ ಯೋಗಿಯ ಮೊರೆ. ಇವರಿಬ್ಬರ ಪ್ರಾರ್ಥನೆಯಂತೆ ನಂದಿನಿ ಪ್ರತ್ಯಕ್ಷ, ಅಭಯ. ಗೋವಧೆಯ ಪರಿಣಾಮಗಳ ನಿರೂಪಣೆ.  ಯೋಗಿಯಿಂದ ಗೋಸಂರಕ್ಷಣೆಯ ಮಹತ್ವವನ್ನು ಅರಿತ ಸುಧರ್ಮನಿಂದ ಪಶ್ಚಾತ್ತಾಮ. ಕಾಲಾಂತರದಲ್ಲಿ ಮಗ ಸತ್ಯಸೇನನಲ್ಲಿ ಪರಿವರ್ತನೆ ಉಂಟಾಗುತ್ತದೆ. ತಂದೆಯನ್ನು ಹುಡುಕುತ್ತಾ ಯೋಗಿಯು ಆಶ್ರಮಕ್ಕೆ ಬರುತ್ತಾನೆ. ತನ್ನ ಸ್ವಶುರನನ್ನು ಯುದ್ಧದಲ್ಲಿ ಮಣಿಸಿ ಕಥಾನಕ ಸುಖಾಂತ್ಯವಾಗುತ್ತದೆ.
            ಮೇಲ್ನೋಟಕ್ಕೆ ಚಿಕ್ಕ ಕಥಾಭಾಗ. ಆದರೆ ತಾಳಮದ್ದಳೆಯಲ್ಲಿ ಹೆಚ್ಚು ಪರಿಣಾಮ. ಕಲಾವಿದರೆಲ್ಲರೂ ಪ್ರಸಂಗದ ಆಶಯವನ್ನು ಅರ್ಥ ಮಾಡಿಕೊಂಡಿದ್ದಾರೆ. ವರ್ತಮಾನಕ್ಕೆ ಟ್ಯೂನ್ ಆದ ಕಲಾವಿದರಿಂದ ಮಾತ್ರ ಪ್ರಸ್ತುತಿ ಸಾಧ್ಯ. ಪುರಾಣ ಪ್ರಸಂಗಗಳಂತೆ ವಾದ-ಸಂವಾದಗಳು ನಡೆದರೆ ಪ್ರಸಂಗದ ಆಶಯಕ್ಕೆ ಭಂಗವಾಗುತ್ತದೆ. ಇಲ್ಲಿರುವುದು ತಾಳಮದ್ದಳೆಯ ಮೂಲಕ ಗೋವಿನ ಸಂರಕ್ಷಣೆಯ ಅಗತ್ಯವನ್ನು ಸಾರುವುದಾಗಿದೆ, ಎನ್ನುತ್ತಾರೆ ಭಾಗವತ ಬಟ್ಯಮೂಲೆ.
           ಉಂಡೆಮನೆ ಕೃಷ್ಣ ಭಟ್, ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, (ಭಾಗವತರು), ಪಕಳಕುಂಜ ಶ್ಯಾಮ ಭಟ್, ಗುಂಡ್ಯಡ್ಕ ಈಶ್ವರ ಭಟ್, ನಾರಾಯಣ ಕಾರಂತ, ಸೂರ್ಯ ಭಟ್ ಕಶೆಕೋಡಿ, ಗಣರಾಜ ಬಡೆಕ್ಕಿಲ, ಪ್ರಭಾಕರ ಭಟ್, ಮಧುರಾ ಜಿ. ಭಟ್ (ಅರ್ಥಧಾರಿಗಳು) ಮೊದಲಾದ ಕಲಾವಿದರು. ಐದಾರು ಪ್ರಯೋಗಗಳು ಪ್ರಾಯೋಗಿಕವಾಗಿ ಜರುಗಿದಾಗ ಮಾತ್ರ ಪ್ರಸಂಗವು ಪ್ರಭಾವಶಾಲಿಯಾಗುತ್ತದೆ. ಜಾಳುಗಳು ಉದುರಿಹೋಗುತ್ತವೆ. ಸತ್ವ ಮಾತ್ರ ಉಳಿದು ಆಶಯ ಅನಾವರಣಗೊಳ್ಳುತ್ತದೆ. ಎಲ್ಲಾ ಕಲಾವಿದರು ಸಿದ್ಧ ಜಾಡಿಗಿಂತ ಭಿನ್ನವಾಗಿ ಯೋಚಿಸುತ್ತಿರುವುದು ಶ್ಲಾಘನೀಯ.
            ಪ್ರಸಂಗ ಪದ್ಯಗಳು ಇನ್ನಷ್ಟು ಪರಿಷ್ಕಾರಗೊಳ್ಳಬೇಕಿದೆ ಎನ್ನುವ ನಿಲುವು ಭಾಗವತರದು. ನಿಧಾನಕ್ಕೆ ಸರಿಹೋಗಬಹುದು.  ಮುಂದೆ ಪುಣ್ಯಕೋಟಿ ಯಕ್ಷ ಬಳಗ, ಕಶೆಕೋಡಿ ತಂಡದ ಮೂಲಕ ಪ್ರದರ್ಶನಗೊಳ್ಳುತ್ತದೆ. ಒಂದು ಆಶಯವನ್ನು ಹೊಂದಿದ ಕಾರಣ ಕೆಲವು ಸಮಯದ ವರೆಗೆ ಈ ಪ್ರಸಂಗದ ಆಟ, ಕೂಟಗಳನ್ನು ಈ ತಂಡವೇ ಪ್ರದರ್ಶಿಸುವಂತೆ ಪ್ರಸಂಗಕರ್ತರು ನಿರ್ಧರಿಸಿದ್ದಾರೆ. ಗೋವನ್ನು ಸಾಕುವವರಿಗೆ  ಗೋವಿನ ಮಹತ್ವವ್ನು ತಇಳಿಸಲು ಇದೊಂದು ಪ್ರಯತ್ನ, ಎನ್ನುತ್ತಾರೆ ತಂಡದ ನಿರ್ವಾಹಕ ಗಣರಾಜ ಕೆದಿಲ.
            ಸಾಮಾಜಿಕ ಪ್ರಸಂಗಗಳು ತಾಳಮದ್ದಳೆ, ಆಟಗಳಾಗುತ್ತಿರುವುದು ಹೊಸತಲ್ಲ. ಡಾ.ಅಮೃತ ಸೋಮೇಶ್ವರ ವಿರಚಿತ 'ಘೋರ ಮಾರಕ' (ಕಥಾ ಸಂಗ್ರಹ : ಭಾಸ್ಕರ ರೈ ಕುಕ್ಕುವಳ್ಳಿ) ಪ್ರಸಂಗವು ಕನ್ನಾಡು ಮಾತ್ರವಲ್ಲ ರಾಷ್ಟ್ರದ ರಾಜಧಾನಿಯಲ್ಲೂ ಪ್ರದರ್ಶನ ಕಂಡಿದೆ. ಇಲಾಖೆಗಳ ವರಿಷ್ಠರು ಮೆಚ್ಚಿಕೊಂಡಿದ್ದಾರೆ. ಪ್ರಸಂಗಕರ್ತರನ್ನು, ಕಲಾವಿದರನ್ನು ಬೆನ್ನುತಟ್ಟಿದ್ದಾರೆ. ಏಡ್ಸ್ ರೋಗದ ಸುತ್ತ ಹೆಣೆದ 'ಘೋರ ಮಾರಕ' ಕಥಾನಕವು ಯಕ್ಷಗಾನ ಚೌಕಟ್ಟಿನೊಳಗಿದ್ದು ಆಶಯವನ್ನು ಬಿಂಬಿಸುವಲ್ಲಿ ಸಫಲವಾಗಿದೆ.
        ಹೊಸ್ತೋಟ ಮಂಜುನಾಥ ಭಾಗವತರ 'ನಿಸರ್ಗ ಸಂಧಾನ' ಪ್ರಸಂಗವು ಸಾಕಷ್ಟು ಪ್ರದರ್ಶನ ನೀಡಿದೆ. ಸಾಕ್ಷರತಾ ಆಂದೋಳನ ಸಂದರ್ಭದಲ್ಲಿ ಸುಳ್ಯದ ಡಾ.ಚಂದ್ರಶೇಖರ ದಾಮ್ಲೆ ನೇತೃತ್ವದಲ್ಲಿ 'ಅಕ್ಷರ ವಿಜಯ' ಪ್ರದರ್ಶನಗಳು ಗ್ರಾಮ ಗ್ರಾಮಗಳಲ್ಲಿ ಜರುಗಿವೆ. ಸುಳ್ಯ ಕುಕ್ಕುಜಡ್ಕದ ಎಂ.ಟಿ.ಶಾಂತಿಮೂಲೆಯವರ 'ಕೃಷಿ ವಿಜಯ', ಒಕ್ಕಲು ಮಸೂದೆಯ ಕುರಿತು ಉಪ್ಪಳ ಕೃಷ್ಣ ಮಾಸ್ತರ್ ರಚಿಸಿದ 'ಚಿಕ್ಕ ಬೊಕ್ಕ ಕಾಳಗ'.. ಇಂತಹ ಹತ್ತಾರು ಪ್ರಸಂಗಗಳು ಆಯಾಯ ಕಾಲಘಟ್ಟದಲ್ಲಿ ರಚನೆಯಾಗಿದೆ. ರಂಗ ಪ್ರದರ್ಶನ ಕಂಡಿದೆ. ಈಗ ಈ ಸಾಲಿಗೆ 'ಅಭೀಷ್ಟದಾಯಿನಿ ಗೋಮಾತೆ'.

ದಧಿಗಿಣತೋ / 30-9-2016



ಕೀರ್ತಿಯ ಮೋಹ ಮರೆತ ಮದ್ದಳೆಗಾರ





                     ತಂದೆಯವರು ಅಂಚೆ ಮಾಸ್ತರರಾಗಿದ್ದರು. ಕೃಷಿಯೊಂದಿಗೆ ಯಕ್ಷಗಾನದ ಮದ್ದಳೆಗಾರರಾಗಿ ಭಾಗವಹಿಸುತ್ತಿದ್ದರು. ಸಂದರ್ಭ ಬಂದಾಗ ಭಾಗವತಿಕೆಯನ್ನೂ ಮಾಡಿದ್ದಾರೆ. ಆಗೆಲ್ಲಾ ಸಂಭಾವನೆ ಸಿಕ್ಕರೆ ಪುಣ್ಯ. ಸಮ ಭಾವನೆ ಮಾತ್ರ! ಅವರೊಂದಿಗೆ ಹಲವು ಬಾರಿ ಜತೆಯಾಗಿದ್ದೇನೆ. ಅವರಿಗೆ ಬೀಡಿ ಸೇದುವ ಅಭ್ಯಾಸವಿತ್ತು. ಒಮ್ಮೆ ಹೀಗಾಯಿತು. ಸತತ ಏಳೆಂಟು ದಿವಸ ಅಹೋರಾತ್ರಿ ತಾಳಮದ್ದಳೆಯಲ್ಲಿ ಭಾಗವಹಿಸಿದ್ದರು. ನಿದ್ದೆಯ ಅಮಲು ಬೇರೆ. ಎಂದಿನಂತೆ ಕಚೇರಿಗೆ ಹೋದರು. ಕಡತಗಳನ್ನು ಪರಿಶೀಲಿಸಿದರು. ಯಾವುದೋ ಪತ್ರದ ಬರವಣಿಗೆಗೆ ಕುಳಿತರು. ಅಷ್ಟು ಹೊತ್ತಿಗೆ ತನಿಖಾಧಿಕಾರಿ ಬಂದು ಬಿಡಬೇಕೆ? ವೃತ್ತಿ ನಿಷ್ಠೆಗೆ ಹೆಸರಾದ ಇವರನ್ನು ನೋಡಿ ಅಧಿಕಾರಿಗೆ ಆಶ್ಚರ್ಯ! ಜತೆಗೆ ನಗು ಕೂಡಾ. ಕಾರಣವಿಷ್ಟೇ. ನಿದ್ದೆಯ ಮತ್ತಿನಲ್ಲಿ ಬಾಯಲ್ಲಿ ಪೆನ್ನು ಇಟ್ಟುಕೊಂಡಿದ್ದರು. ಬೀಡಿಯಲ್ಲಿ ಬರೆಯುತ್ತಿದ್ದರು!
ಪುತ್ತೂರು ತಾಲುಕು ಕೋನಡ್ಕ ಗೋಪಾಲಕೃಷ್ಣ ಕಲ್ಲೂರಾಯರ ಬದುಕಿನ ಒಂದು ಎಳೆಯನ್ನು ಅವರ ಚಿರಂಜೀವಿ ಮುರಳಿ ವರ್ಣಿಸಿದ್ದು ಹೀಗೆ. ಕಲ್ಲೂರಾಯರು ಯಕ್ಷಗಾನದ ಅನುಭವಿ ಮದ್ದಳೆಗಾರ. ಹಿರಿ-ಕಿರಿಯ ಕಲಾವಿದರೊಂದಿಗೆ ಆಪ್ತ ಒಡನಾಟವಿತ್ತು. ಸುತ್ತೆಲ್ಲಾ ನಡೆಯುತ್ತಿದ್ದ ಕೂಟಾಟಗಳಿಗೆ ಖಾಯಂ ಕಲಾವಿದ. ಯಕ್ಷಗಾನವನ್ನು ಹಣ ಸಂಪಾದನೆಯ ಮಾರ್ಗವಾಗಿ ಬಳಸಿಕೊಂಡವರಲ್ಲ. ಅದರಲ್ಲಿ ಪೂಜ್ಯತೆಯನ್ನು ಕಂಡವರು.
                ಕಲ್ಲೂರಾಯರಿಗೆ ಎಳವೆಯಲ್ಲೇ ಪಿತೃವಿಯೋಗ. ಕೌಟುಂಬಿಕ ಜವಾಬ್ದಾರಿ. ತಮ್ಮ ತಂಗಿಯರ ಮದುವೆ. ಅವಿಭಕ್ತ ಕುಟುಂಬ. ತುಂಬು ಸಂಸಾರ. ಸಾಂಸಾರಿಕ ತಾಪತ್ರಯಗಳು. ಭೂಮಸೂದೆಯಿಂದ ಬಹ್ವಂಶ ಭೂಮಿ ಅನ್ಯರ ಪಾಲು. ಇಂತಹ ಸಂದರ್ಭದಲ್ಲಿ ಅಧೀರತೆ ಶಮನಕ್ಕಾಗಿ ಮತ್ತು ನೆಮ್ಮದಿಗಾಗಿ ಕಲ್ಲೂರಾಯರು ಯಕ್ಷಗಾನದಲ್ಲಿ ತೊಡಗಿಸಿಕೊಂಡರು. ಮುಂದೆ ಅದು ಬಿಟ್ಟಿರಲಾಗದ ನಂಟಾಯಿತು. ಅಂಚೆ ಕಚೇರಿಯಲ್ಲಿ ಮೂವತ್ತಮೂರು ವರುಷದ ಸೇವೆ ಸಲ್ಲಿಸಿದ್ದರು. ಇಪ್ಪತ್ತೈದು ರೂಪಾಯಿ ಸಂಬಳದಿಂದ ವೃತ್ತಿ ಆರಂಭ. ನಿವೃತ್ತಿ ಹೊಂದುವಾಗ ಅವರಿಗೆ ಸಿಗುತ್ತಿದ್ದ ವೇತನ ಕೇವಲ ಎರಡೂವರೆ ಸಾವಿರ. ಕೈಗೆ ಬಂದದ್ದು ಗ್ರಾಚ್ಯುಟಿ ಆರು ಸಾವಿರ ರೂಪಾಯಿ! ನಿವೃತ್ತಿಯಂದು ಇವರ ಪ್ರಾಮಾಣಿಕ ಸೇವೆಯನ್ನು ಗುರುತಿಸುವ, ಮಾನಿಸುವ ಮನಸ್ಸುಗಳು ಇಲಾಖೆಯಲ್ಲಿದ್ದಿರಲಿಲ್ಲ!
               ಹಿರಿಯರಾದ ಕುಂಞಿಕಣ್ಣ ಮಣಿಯಾಣಿ ಮತ್ತು ಜನಾರ್ದನ ಕುರೂಪ್ - ಇವರಿಗೆ ಗುರು. ಇರಾ ಗೋಪಾಲಕೃಷ್ಣ ಭಾಗವತರು, ದಾಸರಬೈಲು ಚನಿಯ ನಾಯ್ಕ್, ಬೆಳಿಂಜ ವೆಂಕಪ್ಪ ಭಾಗವತರೊಂದಿಗೆ ಸಾಂಗತ್ಯ. ರಂಗಕ್ರಮಗಳು, ಯಾವ ವೇಷಕ್ಕೆ ಯಾವ ವೇಗದ ನುಡಿತ ಎನ್ನುವುದರ ಖಚಿತವಿತ್ತು. ಕಲಾವಿದರಿಗೆ ಬೇಕಾದಂತೆ ರಂಗವನ್ನು ಹಿಡಿದೆಳೆವ ಮನಃಸ್ಥಿತಿಗೆ ವಿರೋಧವಾಗಿದ್ದರು. ಅಟ ರೈಸಬೇಕೆಂದು ರಂಗವನ್ನು ಹಿಗ್ಗಾಮುಗ್ಗಾ ಜಗ್ಗಿದವರಲ್ಲ. ಆ ವಿಚಾರದಲ್ಲಿ ರಾಜಿಯಿಲ್ಲ.
ಹವ್ಯಾಸಿ ಕಲಾವಿದರೆಂದರೆ ಕೆಲವೆಡೆ ಹಗುರವಾಗಿ ಈಗಲೂ ಕಾಣುವುದುಂಟು. ಸಹ ಕಲಾವಿದರಿಗೆ ಅವಮಾನವಾದರೆ ಅದು ತನಗಾದ ಅವಮಾನ ಎಂದು ಗ್ರಹಿಸುವವರು. ಯಾರದ್ದೇ ಮುಲಾಜಿಗೆ ಒಳಗಾದವರಲ್ಲ. ನೇರ ಮಾತು. ಮಾತಿನಂತೆ ನಡೆ. ಮತಿಯರಿತ ನಿಲುವು. ತಾನು ಸಂಘಟಿಸುವ ಕೂಟಾಟಗಳು ತನ್ನ ಯೋಚನೆಯಂತೆ ಪ್ರದರ್ಶಿತವಾಗಬೇಕೆನ್ನುವ ನಿರೀಕ್ಷೆಯಿದ್ದುವು. ಮುಗಿದ ತಕ್ಷಣ ಪ್ರತಿಕ್ರಿಯೆ, ವಿಮರ್ಶೆ. ಪಾತ್ರಗಳು ಹಳಿ ತಪ್ಪಿದರೆ ನಿಷ್ಠುರವಾಗಿ ಖಂಡಿಸುತ್ತಿದ್ದರು. ಇವರ ಈ ಗುಣವನ್ನು ಅರಿತ ಕಲಾವಿದರು ಎಚ್ಚರದಿಂದ ಇರುತ್ತಿದ್ದುದನ್ನು ಕಂಡಿದ್ದೇನೆ.
            ಪಾರ್ತಿಸುಬ್ಬನ ಯಕ್ಷಗಾನ ಪ್ರಸಂಗಗಳು, ಜೈಮಿನಿ ಭಾರತ, ದೇವಿಮಹಾತ್ಮೆ ಪ್ರಸಂಗಗಳ ಕಂಠಪಾಠ. ಯಾವ ಪದ್ಯಗಳನ್ನು ಯಾವ ಮಟ್ಟಿನಲ್ಲಿ ಹಾಡಬೇಕೆಂದು ಖಚಿತ ಜ್ಞಾನವಿತ್ತು. ಭಾಗವತರು ಯಾರೇ ಇರಲಿ, ಆ ಮಟ್ಟಿನಲ್ಲಿ ಹಾಡದಿದ್ದರೆ ಅಸಹನೆಗೆ ಒಳಗಾಗುತ್ತಿದ್ದರು. ಯಕ್ಷಗಾನದಲ್ಲಿ ರಾಗಕ್ಕಿಂತ ಮಟ್ಟು ಮುಖ್ಯ. ಹಿರಿಯರಿಂದ ಹರಿದು ಬಂದ ಮಟ್ಟು ಯಕ್ಷಗಾನದ ಜೀವಾಳ. ಅದುವೇ ಪರಂಪರೆ. ಅದನ್ನು ಬದಲಾಯಿಸಲು ನಾವಾರು? ಎಂದಿದ್ದರು.
              ಹವ್ಯಾಸಿ ಸಂಘಗಳಲ್ಲಿ ಕಲಾವಿದರಾಗಿ, ಸಂಘಟಕರಾಗಿ ದೀರ್ಘಕಾಲದ ನಿಜಾರ್ಥದ ಸೇವೆ. ಸ್ಥಳೀಯ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನದ ಸಂಘದ ಅಧ್ಯಕ್ಷರಾಗಿದ್ದಾಗ ತಾಳಮದ್ದಳೆ ಕೂಟವೊಂದಕ್ಕೆ ಭಾಗವತರಾಗಿ ದಾಮೋದರ ಮಂಡೆಚ್ಚರು ಆಗಮಿಸಿದ್ದರು. ಕೂಟ ಮುಗಿಸಿ ಮುಂಬಯಿಗೆ ತೆರಳಿದ ಮಂಡೆಚ್ಚರು ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಕುಸಿದು ದೈವಾಧೀನರಾದರು. ಬೆಟ್ಟಂಪಾಡಿಯದ್ದು 'ಅವರ ಕೊನೇ ಕೂಟ' ಎಂದು ನೆನಪು ಮಾಡಿಕೊಂಡು ಮರುಗುತ್ತಿದ್ದರು.
 ಕಲ್ಲೂರಾಯರು ಸ್ವಾಭಿಮಾನಿ. ಫಕ್ಕನೆ ನೋಡುವಾಗ, ಮಾತನ್ನು ಕೇಳುವಾಗ ಛೇಡನೆಯೆಂದು ತೋರಿದರೂ ಮಗುವಿನ ಮನಸ್ಸು. ಅವರು ಸಕ್ರಿಯರಾಗಿರುವ ಸಮಯದಲ್ಲಿ ಸುಳ್ಯ, ಪುತ್ತೂರು ಪ್ರದೇಶಗಳಲ್ಲಿ ಅನುಭವಿ ಮದ್ದಳೆಗಾರರ ಕೊರತೆಯನ್ನು ತುಂಬಿದ್ದರು. ಕೂಟ, ಆಟಗಳಿಗೆ ನಿತ್ಯ ಕರೆ ಬರುತ್ತಿತ್ತು. ಪ್ರೀತಿಯಿಂದ ಭಾಗವಹಿಸುತ್ತಿದ್ದರು. ಎಷ್ಟೋ ಕಡೆ ಬಾಡಿಗೆಗೆ ಜೀಪು ಮಾಡಿಕೊಂಡು ತಾಳಮದ್ದಳೆಗಳಿಗೆ ಹೋಗುತ್ತಿದ್ದರು. ಸಂಘಟಕರಿಗೆ ತಾನೇ ಕೈಯಿಂದ ಅಷ್ಟಿಷ್ಟು ಮೊತ್ತ ನೀಡಿದ್ದಿದೆ. ಅವರ ಜೀವಿತದಲ್ಲಿ ಸಂಭಾವನೆಗಾಗಿ ಜಗಳ ಮಾಡಿದವರಲ್ಲ, ಎಂದು ಕಲ್ಲೂರಾಯರ ಬಂಧು, ಕಲಾವಿದ ವೆಂಕಟೇಶ್ವರ ಉಳಿತ್ತಾಯರು ನೆನಪಿಸಿಕೊಳ್ಳುತ್ತಾರೆ.
               ಬದುಕಿನ ಖುಷಿ, ನೆಮ್ಮದಿಯನ್ನು ಯಕ್ಷಗಾನದಲ್ಲಿ ಕಂಡರು. ಅದು ಸಿಕ್ಕಾಗ ಕೀರ್ತಿ ಮರೆತು ಹೋಯಿತು. ಹಣದ ಮೋಹ ಮರೆಯಾಯಿತು. ನಿಷ್ಕಲ್ಮಶ ಭಾವದಿಂದ ಯಕ್ಷಗಾನದ ಆರಾಧನೆ ಕಲ್ಲೂರಾಯರಿಗೆ ಇಷ್ಟವಾಗಿತ್ತು. ಅನಾರೋಗ್ಯದಿಂದ ಒಂದು ಹೆಜ್ಜೆ ಎತ್ತಿಡಲೂ ಆಗದ ಸ್ಥಿತಿಯಲ್ಲಿದ್ದರೂ ಯಕ್ಷಗಾನ ಬಯಲಾಟವಿದೆ ಎಂದರೆ ಸಾಕು, ನಾಲ್ಕು ಹೆಜ್ಜೆ ಇಡುವಷ್ಟು ಸಶಕ್ತರಾಗುತ್ತಿದ್ದರು, ಮುರಳಿ ಜ್ಞಾಪಿಸುತ್ತಾರೆ. ಎಪ್ಪತ್ತೈದು ಸಂವತ್ಸರಗಳನ್ನು (1941-2016) ಬಾಳಿದ ಕಲ್ಲೂರಾಯರು 2016 ಜೂನ್ 12ರಂದು ದೂರವಾದರು.  ಮಡದಿ ಕಾವೇರಿ ಅಮ್ಮ. ಅರುಣಕುಮಾರಿ, ರಾಜಾರಾಮ, ಮುರಳಿ, ಹರೀಶ, ಅನುರಾಧ ಮಕ್ಕಳು.
               ಬದುಕಿನ ಒಂದು ಕಾಲಘಟ್ಟದ ಕಲ್ಲೂರಾಯರ ಯಕ್ಷಗಾನದ ಓಡಾಟಗಳು ಆ ಸಮಯದ ಸಾಂಸ್ಕೃತಿಕ ಬದುಕಿಗೆ ಕನ್ನಡಿ.






ದಿಗಿಲು-ಬೆರಗಿನ ಮಿಳಿತದ ರಂಗಸುಖ


             ಯಕ್ಷಗಾನದಲ್ಲೀಗ ಗಾನವೈಭವದ ಸುಗ್ಗಿಯ ಕಾಲ. ಮತ್ತೊಂದೆಡೆ ಯಕ್ಷ(?)ನೃತ್ಯಗಳಿಗೆ ವೈಭವದ ಥಳಕು. ಒಂದು ಕಾಲಘಟ್ಟದಲ್ಲಿ ಮೆಚ್ಚಿಕೊಂಡಿದ್ದ, ಆ ಗುಂಗನ್ನೇ ಅಂಟಿಸಿಕೊಂಡಿದ್ದ ಇಂತಹ ವೈಭವಗಳಿಂದ ಸದ್ಯಕ್ಕಂತೂ ದೂರವಿದ್ದೇನೆ! ದೂರವಿರುವುದರಿಂದ ಯಕ್ಷಗಾನಕ್ಕೆ ಲಾಭವೂ ಬಾರದು, ನಷ್ಟವೂ ಒದಗದು. ಆದರೆ ನಾನಂತೂ ಸುಖಿ-ಖುಷಿಯಾಗಿದ್ದೇನೆ!
ಭಾಗವತಿಕೆ, ಚೆಂಡೆ-ಮದ್ದಳೆಗಳಲ್ಲಿ ರಾಗ-ನಾದಗಳ ವೈಭವ 'ಯಕ್ಷಗಾನ'ವಾಗಿ ಮೂಡಬೇಕು. ಈಗೀಗ 'ಯಕ್ಷಗಾನ'ವೊಂದು ನಿಮಿತ್ತ. ಭಾಗವತಿಕೆಯ ಅತಿ-ಲಂಬನೆಗೆ (ಇದೊಂದು ಅರ್ಹತೆ) ಮಣೆ. ಆಲಾಪನೆಗಳು ದೀರ್ಘವಾದಷ್ಟೂ ಭಾಗವತ ಮತ್ತು ಭಾಗವತಿಕೆಗೆ ಬಿರುದುಗಳ ಹೊಸೆತ. ಮದ್ದಳೆ, ಚೆಂಡೆಗಳಿಗೂ ಲಂಬನಾ ಯೋಗ. ಇವೆಲ್ಲವನ್ನೂ ತುಂಬು ಬೆಂಬಲಿಸುತ್ತಿರುವ ಅಭಿಮಾನಿ ಪ್ರೇಕ್ಷಕರು. ಪದ್ಯಾರಂಭಕ್ಕೆ ಮುನ್ನವೇ ಶಿಳ್ಳೆ, ಚಪ್ಪಾಳೆಗಳ ಮಹಾಪೂರ. ಭಾಗವತ ಮತ್ತು ಹಿಮ್ಮೇಳ ವಾದನವು ಮನದಲ್ಲಿ ಇಳಿದು ಸುಖದ ಅನುಭವವಾದಾಗ ಸಂತೋಷದ ಪ್ರಕಟೀಕರಣ ಸಹಜ. ಆದರೆ ರಂಗದಲ್ಲಿ ಪ್ರಕ್ರಿಯೆಗೆ ಉದ್ಯುಕ್ತವಾಗುವಾಗ, ನಡೆಯುತ್ತಿರುವಾಗ ಮಹಾಪೂರ ಅಪ್ಪಳಿಸಿದರೆ ಅನುಭವಿಸುವುದೇನನ್ನು?
             ಈಚೆಗೆ ಪುತ್ತೂರು ಕೆಮ್ಮಾಯಿಯಲ್ಲಿ ಎಡನೀರು ಮಠಾಧೀಶ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ಜರುಗಿದ ಯಕ್ಷ-ಗಾನ(ಯಕ್ಷಗಾನ ಅಲ್ಲ)ದಲ್ಲಿ ಉಪಸ್ಥಿತನಿದ್ದೆ. ಹಿರಿಯ ಭಾಗವತರಾದ ದಿನೇಶ ಅಮ್ಮಣ್ಣಾಯ ಮತ್ತು ಸುಬ್ರಹ್ಮಣ್ಯ ಧಾರೇಶ್ವರರು ತೆಂಕು-ಬಡಗು ತಿಟ್ಟುಗಳನ್ನು ಪ್ರತಿನಿಧಿಸಿದ್ದರು. ಎರಡೂವರೆ ಗಂಟೆಗಳಷ್ಟು ಹೊತ್ತು ರಂಗಸುಖವನ್ನು ತಾವೂ ಅನುಭವಿಸುತ್ತಾ, ಪ್ರೇಕ್ಷಕರಿಗೂ ಉಣಬಡಿಸಿದ್ದಾರೆ. ಒಂದೆರಡು ಬಾರಿ ಭಾಗವತಿಕೆಯ ನಾದದ ಗುಂಗಿನೊಳಗೆ ಬಂಧಿಯಾದ ಪ್ರೇಕ್ಷಕ ಕರತಾಡನವನ್ನೂ ಮರೆತಿದ್ದ!
             ದಿನೇಶ ಅಮ್ಮಣ್ಣಾಯರ ಶ್ರೀರಾಮನ ಒಡ್ಡೋಲಗದ ಪದ್ಯವೊಂದು ನಿಧಾನ ಗತಿಯಲ್ಲಿ ಪ್ರಸ್ತುತಿಗೊಂಡಿತು.  ಬಹುಶಃ ವರ್ತಮಾನದ ರಂಗದಲ್ಲಿ ಇಷ್ಟು ನಿಧಾನಗತಿಯ ಪದ್ಯವನ್ನು ಕಲಾವಿದರು ಸ್ವೀಕರಿಸುವುದು ಕಷ್ಟ. ಈ ಗತಿಯಲ್ಲಿ ಲಯದ ಜಾಡಿನ ಹಾಡುಗಾರಿಕೆ,  ಅದಕ್ಕೆ ಪೂರಕವಾದ ಮದ್ದಳೆ-ಚೆಂಡೆಗಳ ನಾದಗಳಲ್ಲಿ ಯಕ್ಷಗಾನವಿತ್ತು. ಮೂರ್ನಾಲ್ಕು ದಶಕದ ರಂಗದ ಸೊಬಗನ್ನು ನಾವೆಲ್ಲಾ ಆಗಾಗ್ಗೆ ಮೆಲುಕು ಹಾಕುತ್ತೇವಲ್ಲಾ, ಅದು ಆ ಹಿರಿಯರ ಇಂತಹ ರಂಗಗತಿ, ಲಯದ ಸ್ಥಾಪನೆಯೇ ಕಾರಣ.
             ಉದಾ: ಕೃಷ್ಣ ಸಂಧಾನ ಪ್ರಸಂಗದ 'ನೋಡಿದನು ಕಣ್ದಣಿಯ ಚಿನ್ಮಯನ ಮೂರುತಿಯ', ಭೀಷ್ಮ ವಿಜಯ ಪ್ರಸಂಗದ 'ಪರಮ ಋಷಿ ಮಂಡಲದ ಮಧ್ಯದಿ..', ಸುಧನ್ವ ಮೋಕ್ಷ ಪ್ರಸಂಗದ 'ಸತಿ ಶಿರೋಮಣಿ ಪ್ರಭಾವತಿ..  ಪದ್ಯಗಳು ಅನನ್ಯವಾಗಿ, ಪದ್ಯದ ಲಯದಲ್ಲಿ ಸಂಚರಿಸಿ ಮುದ ನೀಡಿತ್ತು. ಕೆಲವೊಮ್ಮೆ ದೀರ್ಘಲಂಬನೆಯ ಹೊರತಾಗಿಯೂ....!
ಸುಬ್ರಹ್ಮಣ್ಯ ಧಾರೇಶ್ವರರು ವೀರಮಣಿ ಕಾಳಗದ ಪರಮ ಪುರುಷ ವಿಶ್ವಮೂರ್ತಿಯ ಚರಿತೆಗಳನು ಬಲ್ಲೆ..... ಪದ್ಯವನ್ನು ಅವರ ಗುರು ನಾರಣಪ್ಪ ಉಪ್ಪೂರರು ಹಾಡುವ ಬಗೆಯನ್ನು ಮತ್ತು ನಂತರ ಬದಲಾದ ಶೈಲಿಯನ್ನು ನಿರೂಪಣೆಯೊಂದಿಗೆ ತೋರಿಸಿದರು. ಬಬ್ರುವಾಹನ ಕಾಳಗ ಪ್ರಸಂಗದ 'ಅಹುದೇ ಎನ್ನಯ ರಮಣ', ಚೂಡಾಮಣಿಯ 'ನೋಡಿದೆಯಾ ಸರಮೆ'...... ಮೊದಲಾದ ಹಾಡುಗಳಲ್ಲಿ ಲಯದ ಗಟ್ಟಿತನವಿತ್ತು. ನಾದ, ಲಯ, ಗತಿ... ಈ ಪದಗಳಿಗೆ ಶೈಕ್ಷಣಿಕ ಪಠ್ಯಗಳಲ್ಲಿ ಹಲವು ವ್ಯಾಖ್ಯೆಗಳಿವೆ. ಆದರೆ ಪ್ರೇಕ್ಷಕನಿಗೆ ಮತ್ತು ಹಾಡುಗಾರನಿಗೆ 'ರಂಗಸುಖ'ವನ್ನು ನೀಡುವ ಆ ಕ್ಷಣವನ್ನು ವಿಮರ್ಶೆಯ ಮೂಸೆಯಲ್ಲಿ, ವ್ಯಾಖ್ಯಾನದ ವ್ಯಾಪ್ತಿಯಲ್ಲಿ ಹಿಡಿದಿಡಲು ಕಷ್ಟ.
              ಬಡಗಿನ ಶ್ರೇಷ್ಟ ಮದ್ದಳೆಗಾರ ಶಂಕರ ಭಾಗವತ ಯಲ್ಲಾಪುರ ಇವರು ಧಾರೇಶ್ವರರಿಗೆ ಸಾಥ್ ಆಗಿದ್ದರು. 'ಸಾಥ್' ಎನ್ನುವ ಪದ ಪ್ರಯೋಗವು ನನ್ನ ಅಪಕ್ವ ಬುದ್ಧಿಮತ್ತೆಯಾಗಬಹುದೇನೋ? ಧಾರೇಶ್ವರರ ಹಾಡಿನ ಗತಿಯನ್ನು ಅನುಸರಿಸುವ ಮದ್ದಳೆಯ ನುಡಿತಗಳು. ಎಲ್ಲೂ ಭಾಗವತಿಕೆಯನ್ನು 'ಓವರ್ಟೇಕ್' ಮಾಡಿಲ್ಲ. ಬಹುತೇಕ ಸಂದರ್ಭಗಳಲ್ಲಿ ಮದ್ದಳೆಯೇ ಹಾಡುತ್ತಿತ್ತೇನೋ ಎನ್ನುವ ಅನುಭವವನ್ನು ಕಟ್ಟಿ ಕೊಟ್ಟಿತ್ತು! ಶಂಕರ ಭಾಗವತರ ಅನುಭವದ ದಟ್ಟ ಗಾಢತನವದು. ಮದ್ದಳೆಯ ನಾದಸುಖವನ್ನು, ರಾಗಸುಖದೊಂದಿಗೆ ಮಿಳಿತಗೊಳಿಸಿದ ಧಾರೇಶ್ವರ-ಶಂಕರ ಭಾಗವತರ ಜತೆಗಾರಿಕೆ ಅನನ್ಯ.
ಅಮ್ಮಣ್ಣಾಯರೊಂದಿಗೆ ಕೃಷ್ಣಪ್ರಕಾಶ ಉಳಿತ್ತಾಯರ ಮದ್ದಳೆವಾದನ. ಶ್ರೀರಾಮನ ಒಡ್ಡೋಲಗ, ಸತಿಶಿರೋಮಣಿ ಪ್ರಭಾವತಿ.. ಪದ್ಯಗಳಲ್ಲಿ ಉಳಿತ್ತಾಯರ ನುಡಿತಗಳು ಅಮ್ಮಣ್ಣಾಯರ ಲಯಸುಖವನ್ನು ಹೆಚ್ಚಿಸಿತ್ತು.  ಈ ಸಂದಭದಲ್ಲಿ ಉಳಿತ್ತಾಯರ ನುಡಿತಗಳು ಶಂಕರ ಭಾಗವತರಿಗೆ ಸ್ಪೂರ್ತಿ ತಂದು, ತೆಂಕು-ಬಡಗು ಮದ್ದಳೆಗಳ ನಿಜಾರ್ಥದ 'ನಾದ-ವೈಭವ'ಗಳಾಗಿ ಮೂಡಿ ಬಂದುವು. 'ಹಳೆಬೇರು-ಹೊಸ ಚಿಗುರು'  ಪದಗಳು ಕ್ಲೀಷೆಯಾಗುವ ದಿನಮಾನದಲ್ಲಿ ಅದರ ನಿಜ ಅರ್ಥವನ್ನು ಶಂಕರ ಭಾಗವತರು ತೋರಿದರು. ಉಳಿತ್ತಾಯರು ಧನ್ಯತೆಯಿಂದ ಸ್ವೀಕರಿಸಿದರು. ಬಡಗಿನ ಚೆಂಡೆಯಲ್ಲಿದ್ದ ಕಾರ್ತಿಕ್ ಧಾರೇಶ್ವರರ ಮುಜುಗರವನ್ನು ಶಂಕರ ಭಾಗವತರು ತಿಳಿಯಾಗಿಸಿದ ಸಂದರ್ಭಗಳು ಹಿರಿಯ ಮದ್ದಳೆಗಾರನ ಸೌಜನ್ಯವನ್ನು ಎತ್ತಿ ತೋರಿತು.
                ಈಚೆಗಂತೂ ಎಲ್ಲಾ ರಸಗಳ ಪದ್ಯಗಳಿಗೂ ಚೆಂಡೆಯ ನುಡಿತವು ಅನಿವಾರ್ಯವೆಂಬ ಹಠಕ್ಕೆ ರಂಗವು ಒಗ್ಗಿಸಿಕೊಂಡಿದೆ! ಶೃಂಗಾರ ರಸಗಳ ಭಾವ-ಲಾಸ್ಯಗಳನ್ನು ಚೆಂಡೆಯ ಸದ್ದು ನುಂಗಿ ನೊಣೆದಿವೆ. ಅಮ್ಮಣ್ಣಾಯರು ಶೃಂಗಾರ ರಸದ ಪದ್ಯಗಳನ್ನು ಹಾಡುವಾಗ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರು ಚೆಂಡೆಕೋಲುಗಳನ್ನು ಕೆಳಗಿಟ್ಟು ಪದ್ಯವನ್ನು ಆಲಿಸುತ್ತಾ ಕುಳಿತರು! ರಂಗಸುಖದ ಕಲ್ಪನೆಯಿದ್ದುದರಿಂದ ಇದು ಸಾಧ್ಯವಾಯಿತು. ದೇಲಂತಮಜಲು ಚೆಂಡೆ ನುಡಿಸುತ್ತಿದ್ದಾಗ ಶಂಕರ ಭಾಗವತರು ಉರುಳಿಕೆಯ ಗತಿಯನ್ನು ಬೆರಗಿನಿಂದ ವೀಕ್ಷಿಸುತ್ತಿದ್ದರು.
             ಸುಬ್ರಹ್ಮಣ್ಯ ಭಟ್ಟರನ್ನು ಹಲವು ಕಾಲದಿಂದ ನೋಡುತ್ತಿದ್ದೇನೆ, ಯಾವ ರಸದ ಪದ್ಯಗಳಿಗೆ ಎಷ್ಟು ಬಾರಿಸಬೇಕೆನ್ನುವ ಎಚ್ಚರ ಮತ್ತು ಚೆಂಡೆಯ 'ವಾಲ್ಯೂಮ್ ಕಂಟ್ರೋಲ್' ಇರುವುದು ಮೈಕ್ಸೆಟ್ಟಿನಲ್ಲಲ್ಲ, ಅದಿರುವುದು 'ತನ್ನ ಸ್ವ-ಪ್ರಜ್ಞೆ'ಯಲ್ಲಿ ಎಂಬ ಸ್ಪಷ್ಟ ಅರಿವನ್ನು ಹೊಂದಿದವರು. ದಾಮೋದರ ಮಂಡೆಚ್ಚರ ಉತ್ತರಾಧಿಕಾರಿಯಾಗಿ ಬೆಳೆದು ಬಂದ ಅಮ್ಮಣ್ಣಾಯರು, ನಾರಣಪ್ಪ ಉಪ್ಪೂರರ ಜತೆ ಪಳಗಿದ ಸುಬ್ರಹ್ಮಣ್ಯ ಧಾರೇಶ್ವರ, ಶಂಕರ ಭಾಗವತರು - ಇವರೆಲ್ಲಾ ರಂಗದ ಬೆರಗುಗಳನ್ನು ಅನುಭವಿಸಿಯೇ ಬೆಳೆದಿದ್ದಾರೆ. ರಂಗವು ಕಟ್ಟಿಕೊಡುವ ದಿಗಿಲು, ಬೆರಗುಗಳು ಕಲಾವಿದನ ಬೆಳವಣಿಗೆಯ ಕ್ಯಾಪ್ಸೂಲ್.
    ಯಕ್ಷ-ಗಾನಕ್ಕೆ 'ನಿರೂಪಕ' ಇಲ್ಲದಿರುವುದು ಎಲ್ಲಕ್ಕಿಂತ ಖುಷಿ ನೀಡಿತ್ತು. ಸಂದರ್ಭಾನುಸಾರ ಭಾಗವತರೇ ನಿರೂಪಣೆ ಮಾಡುತ್ತಿದ್ದರು. ವರ್ತಮಾನದ ಕಲಾಪಗಳಲ್ಲಿ 'ನಿರೂಪಕ'ನ ಸ್ಥಾನವು ಒಂದು 'ಪೋಸ್ಟ್'! ಆತ ರಂಗ ಮತ್ತು ಪ್ರೇಕ್ಷಕರ ಮಧ್ಯೆ ಕೊಂಡಿಯಾಗಿದ್ದರೆ ಸಾಕು. ಬೆರಳೆಣಿಕೆಯ ನಿರೂಪಕರು ಇದನ್ನು ಅರ್ಥಮಾಡಿಕೊಂಡಿದ್ದಾರೆ.
ಹಲವು ಖುಷಿಗಳಿಗೆ ರೆಕ್ಕೆಬಲಿಯಲು ಕಾರಣರಾದ ಅಮ್ಮಣ್ಣಾಯ-ಧಾರೇಶ್ವರರ ಹಾಡುಗಾರಿಕೆಯ ಕಲಾಪವು ರಂಗಸುಖವನ್ನು ನೀಡಿದ 'ಯಕ್ಷ-ಗಾನ'.

(ಚಿತ್ರ : ಮುರಳಿ ರಾಯರಮನೆ)
ಪ್ರಜಾವಾಣಿ/ದಧಿಗಿಣತೋ/9-9-2016