Saturday, August 26, 2017

ವೃತ್ತಿಯನ್ನು ಮೀರಿದ ಮೇಳದ ಹಿತಾಸಕ್ತಿ

ಪ್ರಜಾವಾಣಿಯ 'ಧಧಿಗಿಣತೋ' ಅಂಕಣ / 2-6-2017
(ಚಿತ್ರ : ನಟೇಶ್ ವಿಟ್ಲ)

                ಕಟೀಲು ಮೇಳದ ಭಾಗವತ. ಕುಬಣೂರು ಶ್ರೀಧರ ರಾವ್, 'ಯಕ್ಷಪ್ರಭಾ' ಮಾಸಪತ್ರಿಕೆಯ ಸಂಪಾದಕ. ತಾಂತ್ರಿಕ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮ ಓದು. ತೊಡಗಿಸಿಕೊಂಡದ್ದು ಪೂರ್ಣಪ್ರಮಾಣದ ಯಕ್ಷಗಾನ ವೃತ್ತಿ. ಯಕ್ಷಗಾನದ ಅಕಾಡೆಮಿಕ್ ವಿಚಾರಗಳ ಸುತ್ತ ಯೋಚನೆ, ಯೋಜನೆ. ರಂಗಾವಿಷ್ಕಾರಗಳಲ್ಲಿ ಆಸಕ್ತ. ಹೊಸ ಪ್ರಸಂಗಗಳ ರಚನೆ-ಪ್ರದರ್ಶನ, ವಿಶೇಷ ವಿನ್ಯಾಸದ ರಂಗಜೋಡಣೆ, ಸಿದ್ಧ ವ್ಯವಸ್ಥೆಗಿಂತ ಆಚೆ ನೋಡುವ ಮನಃಸ್ಥಿತಿ ಮತ್ತು ಕಲಾವಿದರ ಸಾಮಥ್ರ್ಯಕ್ಕೆ ಹೊಂದಿಕೊಂಡ  ರಂಗ ನಿರ್ದೇಶನಗಳು ಕುಬಣೂರರ ವಿಶೇಷತೆ.
               ಕುಬಣೂರು ಶ್ರೀಧರ ರಾಯರಿಗೆ ಕಳೆದ ವರುಷ ಕಟೀಲಿನಲ್ಲಿ ಅದ್ದೂರಿಯ ಅಭಿನಂದನೆ ನಡೆದಿತ್ತು ಈ ಸಂದರ್ಭದಲ್ಲಿ 'ಯಕ್ಷಭೃಂಗ' ಅಭಿನಂದನ ಕೃತಿಯು ಪ್ರಕಟವಾಗಿತ್ತು. ಕುಬಣೂರು ಅಭಿನಂದನಾ ಸಮಿತಿಯ ಪ್ರಕಾಶನ. ಕೃತಿಯು ಶ್ರೀಧರ ರಾಯರ ಬದುಕಿನ ಪ್ರತಿಫಲನ. ಜೀವನದ ಏಳುಬೀಳುಗಳ ಜತೆ ಸ್ಥಿರತೆ, ಯಕ್ಷಗಾನದ ಏರು-ತಗ್ಗುಗಳಲ್ಲಿ ಮೂಡಿಸಿದ ಎಚ್ಚರಗಳು, ಕಾಲಕಾಲದ ಯಕ್ಷಪಲ್ಲಟಗಳನ್ನು ಸರಳವಾಗಿ ಮತ್ತು ನಿಖರವಾಗಿ ಹೇಳಿದ್ದಾರೆ.  ಯಕ್ಷಗಾನದ ವಿವಿಧ ಆಯಾಮಗಳನ್ನು ವಿವಿಧ ಕೋನಗಳಲ್ಲಿ ವಿದ್ವಾಂಸರು ಕಂಡ ಬರಹಗಳಿವೆ.
                 ಯಕ್ಷಗಾನ ಮೇಳಗಳಿಗೆ ವಿಧಿಸುತ್ತಿದ್ದ ತೆರಿಗೆ ರದ್ದಾದ ವಿದ್ಯಮಾನವನ್ನು ಕೃತಿಯಲ್ಲಿ ಹೇಳುತ್ತಾರೆ. "ಕನ್ನಾಡು, ಕೇರಳ ಯಾವುದೇ ಪ್ರದೇಶದಲ್ಲಿ ಮೇಳದ ಟೆಂಟ್ ಊರಬೇಕಾದರೆ ಅಲ್ಲಿನ ಪಂಚಾಯತಿನ  ಒಪ್ಪಿಗೆ  ಬೇಕಿತ್ತು. ನಿಗದಿಪಡಿಸಿದ ಸಾಂಸ್ಕೃತಿಕ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಆಟ ಆಡಿಸುವ ದಿವಸ ಪಂಚಾಯತ್ ಕಚೇರಿಗೆ ಹೋಗಿ, ಮೇಳದ ಟಿಕೇಟ್ ಪುಸ್ತಕಗಳಿಗೆ - ಎಲ್ಲಾ ದರದ ಟಿಕೇಟುಗಳಿಗೆ - ಪಂಚಾಯತಿನ ಸೀಲು ಹಾಕಿಸಬೇಕಾಗಿತ್ತು. ಆ ರಾತ್ರಿ ಮಾರಾಟವಾದ ಟಿಕೇಟಿನ ಲೆಕ್ಕವನ್ನು ಮರುದಿವಸ ಪಂಚಾಯತಿಗೆ ಒಪ್ಪಿಸಬೇಕಿತ್ತು. ಎಷ್ಟು ಟಿಕೇಟು ಮಾರಾಟವಾಗಿತ್ತೋ ಅದಕ್ಕೆ ನಿಗದಿಯಾದ ತೆರಿಗೆಯನ್ನು ಕಟ್ಟುವುದು ಕಡ್ಡಾಯವಾಗಿತ್ತು."
                ಆ ಕಾಲಘಟ್ಟದಲ್ಲಿ ಅರ್ಥಧಾರಿ, ಸಂಘಟಕ ಹಾಗೂ ವಕೀಲರಾದ ಕುಬಣೂರು ಬಾಲಕೃಷ್ಣ ರಾಯರು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಮೇಳವು ಅನುಭವಿಸುವ ತೆರಿಗೆಯ ಭಾರದ ಬವಣೆಯನ್ನು ನಿವೇದಿಸಿದ್ದರು. ಮೇಳಕ್ಕಾಗುವ ನಷ್ಟವನ್ನು ಮನವರಿಕೆ ಮಾಡಿಕೊಟ್ಟಿದ್ದರು. ಉಭಯ ರಾಜ್ಯದ ವರಿಷ್ಠರಲ್ಲೂ ವ್ಯವಹಾರ ಮಾಡಿದ್ದರು. ಫಲವಾಗಿ ಸಾಂಸ್ಕೃತಿಕ ತೆರಿಗೆ ರದ್ದಾಯಿತು. ಯಕ್ಷಗಾನ ಪ್ರದರ್ಶನಗಳಿಗೆ ಮುಕ್ತವಾದ ಅವಕಾಶ ಪ್ರಾಪ್ತವಾಯಿತು. ವರ್ತಮಾನದಲ್ಲಿ ನಿಂತು ಈ ಘಟನೆಯನ್ನು ಅವಲೋಕಿಸಿದಾಗ ಮೇಳದ ಪ್ರದರ್ಶನಕ್ಕಿದ್ದ ಕಷ್ಟ ದಿನಗಳ ಅರಿವಾಗುತ್ತದೆ.
                ಕದ್ರಿ ಮೇಳ, ನಂದಾವರ, ಅರುವ, ಬಪ್ಪನಾಡು, ಕಾಂತಾವರ ಮೇಳಗಳಲ್ಲಿ 1981 ರಿಂದ 1989ರ ತನಕ ತಿರುಗಾಟ. 1990ರಿಂದ ಶ್ರೀ ಕಟೀಲು ಮೇಳದಲ್ಲಿ ವ್ಯವಸಾಯ. ಸ್ವ-ರಚನೆಯ ಪ್ರಸಂಗಗಳು ಮೇಳದಲ್ಲಿ ಪ್ರದರ್ಶಿತವಾದುವು. ಯಶ ಕಂಡುವು. ನೂತನ ವಿನ್ಯಾಸದ ದೃಶ್ಯಗಳು ಪ್ರೇಕ್ಷಕ ಸ್ವೀಕೃತಿ ಪಡೆಯಿತು. ಮೇಳದ ತಿರುಗಾಟವಾಗುತ್ತಿದ್ದಂತೆ ಆದಂತಹ ಕೆಲವೊಂದು ರೂಢನೆಗಳನ್ನು' ಯಕ್ಷಭೃಂಗ'ದಲ್ಲಿ ದಾಖಲಿಸುತ್ತಾರೆ. ಟೆಂಟ್ ಮೇಳಗಳಲ್ಲಿ ಅನುಭವ ಹೊಂದಿದ ಶ್ರೀಧರ ರಾಯರಿಗೆ ಬಯಲಾಟ ಮೇಳವಾದ ಕಟೀಲು ಮೇಳಕ್ಕೆ ಬಂದಾಗ ಎದುರಾದ ಕೆಲವು ಸಹಜ ತೊಡಕುಗಳು ಮತ್ತು ಅದನ್ನು ನಿವಾರಿಸಿದ ಬಗೆಯನ್ನು ರೋಚಕವಾಗಿ ಹೇಳುತ್ತಾರೆ. ತೊಂದರೆ ಅನುಭವಿಸಿದರೂ ಮತ್ತೆ ಅವುಗಳು ಶಾಶ್ವತ ಪರಿಹಾರವಾದ ಒಂದೆರಡು ಘಟನೆಗಳು -
                ತೊಂಭತ್ತನೇ ಇಸವಿ. ವಿಪರೀತ ಚಳಿ. ಟೆಂಟಿನ ಮೇಳಗಳಲ್ಲಿ ಮಂಜು ಹನಿಯಿಂದ ಪಾರಾಗಲು ಅಲ್ಪಸ್ವಲ್ಪ ಟರ್ಪಾಲು ವ್ಯವಸ್ಥೆಗಳಿರುತ್ತಿದ್ದುವು. ಬಯಲಾಟಗಳಲ್ಲಿ ಆಗಸವೇ ಬಟ್ಟೆ. ರಂಗಸ್ಥಳದಲ್ಲಿ ವೇಷ ಕುಣಿಯುವ ಸ್ಥಳದಷ್ಟು  ಮೇಲೆ ಹಾಸು ಬಟ್ಟೆಯಿರುತ್ತಿತ್ತು. ಹಿಮ್ಮೇಳದವರು ಒದ್ದೆಯಾಗಿಯೇ ದುಡಿಯಬೇಕಾಗಿತ್ತು. ಆಗ ರಂಗಸ್ಥಳದ ನಿರ್ವಹಣೆ ಮೇಳದ್ದಾಗಿರಲಿಲ್ಲ. ಅದನ್ನು ಗುತ್ತಿಗೆದಾರರು ಮಾಡುತ್ತಿದ್ದರು. ಪ್ಲಾಸ್ಟಿಕ್ ಶೀಟ್ ಹಾಸದದ್ದರೆ ಭಾಗವತರ ಮೇಜನ್ನು ಎಳೆದು ಎದುರು - ಅಂದರೆ ವೇಷ ಕುಣಿಯುವಲ್ಲಿ - ಕುಳಿತುಕೊಳ್ಳುತ್ತೇವೆ ಎಂದು ರಂಗಸ್ಥಳ ನಿರ್ವಾಹಕರಲ್ಲಿ ಹೇಳಿದ್ದರು. ತಲೆಗೆ ಕಟ್ಟಲು ದೇವಸ್ಥಾನದಿಂದ ನೀಡುತಿದ್ದ ಸೀರೆ ಬಹಳಷ್ಟು ಭಾರವಾಗಿದ್ದು ಅದನ್ನು ಮುಂಡಾಸು ಕಟ್ಟಲು ಆಗುತ್ತಿರಲಿಲ್ಲ. ಅಂತೂ ಒಂದು ವಾರದಲ್ಲಿ ಮೇಲೆ ಪ್ಲಾಸ್ಟಿಕ್ ಹಾಸು ಬಂತು, ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಕುಬಣೂರು.
              ಇನ್ನೊಂದು ಸಂದರ್ಭ - ಬಂಟ್ವಾಳ ಸಮೀಪದ ಒಂದು ಆಟದಲ್ಲಿ ಸಂಘಟಕರು ರಂಗಸ್ಥಳದ ಹಿಂದೆ ಪರದೆ ಕಟ್ಟಿದ್ದರು. (ಕಟೀಲು ಮೇಳದಲ್ಲಿ ಆಗ ಪರದೆ ಇದ್ದಿರಲಿಲ್ಲ) ಹೀಗೆ ಮಾಡಿದ್ದದರಿಂದ ಕೆಲವರಿಗೆ ರಂಗದ ಹಿಂದೆ ಕುಳಿತು ಆಟ ನೋಡಲು ಕಷ್ಟವಾಯಿತು! ಆಗ ಆಟ ಆಡಿಸುವ ಆಢ್ಯರು ರಂಗಸ್ಥಳದ ಹಿಂದೆ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಈ ಪರದೆಯು ಹಿಂದಿನಿಂದ ಬೀಸುತ್ತಿದ್ದ ಚಳಿಗಾಳಿಯನ್ನು ತಡೆಯುತ್ತಿತ್ತು. ಬೆಳಿಗ್ಗೆ ರಂಗಸ್ಥಳ ನಿರ್ವಾಹಕರು ಸೇವಾಕರ್ತರಲ್ಲಿ 'ಈ ಪರದೆ ಮೇಳಕ್ಕೆ ಕೊಡಬಹುದೇ' ಎಂದು ಕೇಳಿಸಿದೆ. ಸಂತೋಷದಿಂದ ಒಪ್ಪಿದರು. ಅಂದಿನಿಂದ ನಾನಿದ್ದ ಒಂದನೇ ಮೇಳದಲ್ಲಿ ರಂಗದ ಹಿಂದೆ ಪರದೆ ಕಟ್ಟುವ ಪದ್ಧತಿ ನಿತ್ಯವಾಯಿತು. ಇದನ್ನು ನೋಡಿದ ಯಜಮಾನರು ಖುಷಿಪಟ್ಟರು. ಮುಂದಿನ ವರುಷದಿಂದ ಕಟೀಲು ಮೇಳಗಳ  ಎಲ್ಲಾ ರಂಗಸ್ಥಳಗಳಿಗೂ ಪರದೆ ಬಂತು.
               ಮೂಡುಬಿದಿರೆಯಲ್ಲಿ 'ದೇವಿ ಮಹಾತ್ಮೆ' ಆಟ. ಆ ವರುಷ ವಿಶೇಷವಾಗಿ 'ಶ್ರೀದೇವಿ ಉದ್ಭವ' ಆಗುವ ದೃಶ್ಯವನ್ನು ಸಂಯೋಜಿಸಿದ್ದರು. ಎತ್ತರದ ರಂಗವೇದಿಕೆ. ಅದರ ಬುಡದಿಂದ ದೇವಿ ನಿಧಾನವಾಗಿ ಎದ್ದೇಳುತ್ತಾ ಬರುವ ವಿನ್ಯಾಸ. ಕೈಯಲ್ಲಿ ಜಾಕ್ ತಿರುಗಿಸುತ್ತಿದ್ದಂತೆ ಇಡೀ ಪ್ಲಾಟ್ಫಾರಂ ಮೇಲೆದ್ದು ಬಂದು ಶ್ರೀದೇವಿಯ ಪಾತ್ರವು ಕಾಣಿಸಿಕೊಳ್ಳುವ ನೂತನ ಕಲ್ಪನೆ. ಅಲ್ಲಿಯ ತನಕ ಸೆಟ್ಟಿಂಗ್ ಮಾಡಲು ಎದುರಿಗೆ ಪರದೆ ಹಾಕುತ್ತಿದ್ದರು. ಆಟ ಮುಗಿದ ಬಳಿಕ ಈ ಪರದೆಯನ್ನು ನೀಡುವಂತೆ ಶ್ರೀಧರ ರಾಯರು ಆಟ ಆಡಿಸುವವರಲ್ಲಿ ವಿನಂತಿಸಿದರು. ಮುಂದಿನ ವರುಷಕ್ಕೆ ಈ ಕೋರಿಕೆ ಈಡೇರಿತು.
               ಮಂಗಳೂರಿನ ಬೋಂದೆಲಿನಲ್ಲಿ ಮೇಳದ ಯಜಮಾನರಾದ ವಿಠಲ ಶೆಟ್ಟರಿಗ ಸಂಮಾನ. ರಾಮದಾಸ ಸಾಮಗರಿಂದ ಅಭಿನಂದನಾ ಭಾಷಣ. ರಂಗಸ್ಥಳಕ್ಕೆ ಮ್ಯಾಟ್ ಹಾಸಿದ್ದರು. ಆಟವೂ ಕೂಡಾ ಮ್ಯಾಟ್ ಹಾಸಿದ ರಂಗದಲ್ಲೇ ನಡೆಯಿತು. ಬೆಳಿಗ್ಗೆ 'ಈ ಮ್ಯಾಟನ್ನು ಮೇಳಕ್ಕೆ ನೀಡುವಿರಾ' ಎಂದು ವಿನಂತಿಸಿದರು. ಅಂದಿನಿಂದ ಮೇಳದ ರಂಗಸ್ಥಳಕ್ಕೆ ಮ್ಯಾಟ್ ಹಾಸುವ ವ್ಯವಸ್ಥೆ ರೂಢಿಯಾಯಿತು. ನಮ್ಮ ಮೇಳದಲ್ಲಿ ಧೂಳು ಹಾರದಂತೆ ನೆಲಕ್ಕೆ ಚದುರಿಸುವ ಮರದ ಹುಡಿ ಮತ್ತು ಪ್ರಸಂಗದ ಕೆಲವೊಂದು ದುಃಖದ ದೃಶ್ಯಕ್ಕೆ ಪಾತ್ರಧಾರಿ ಕುಳಿತುಕೊಳ್ಳಲು ಚಾಪೆ ಹಾಸುವ ಕ್ರಮ ನಿಂತಿತು. ಮುಂದಿನ ವರುಷದಿಂದ ಎಲ್ಲಾ ಮೇಳಗಳಿಗೂ ಮ್ಯಾಟ್ ವ್ಯವಸ್ಥೆಯಾಯಿತು ಎನ್ನುತ್ತಾರೆ. ನಂತರದ ವರುಷಗಳಲ್ಲಿ ರಂಗಸ್ಥಳಕ್ಕೆ ಪ್ಲಾಟ್ಫಾರಂ ವ್ಯವಸ್ಥೆಯೂ ಆಯಿತು.
                 ಹೀಗೆ ಕೆಲವೊಂದು ವ್ಯವಸ್ಥೆಗಳು ಮೇಳದಲ್ಲಿ ರೂಢನೆಯಾದುದು ಕುಬಣೂರರಲ್ಲಿದ್ದ ಮೇಳದ ಹಿತಾಸಕ್ತಿಗೆ ಸಾಕ್ಷಿ. ಜತೆಗೆ ಮೇಳ ನಿಷ್ಠತೆಯ ಬದ್ಧತೆ. ಮೇಳದ ಬದುಕಿನಿಂದ ಬದುಕಿನ ಸುಖವನ್ನು ಅನುಭವಿಸುವ ಶ್ರೀಧರ ರಾಯರು ಮನಬಿಚ್ಚಿ ಮಾತನಾಡುತ್ತಾರೆ, ಕಟೀಲು ಮೇಳದ ಆಟಗಳು ವೈಭವೋಪೇತವಾಗಿ ಹಿಂದಿನ ಟೆಂಟಿನ ಮೇಳಕ್ಕೆ ಸಂವಾದಿಯಾಗಿ ಪ್ರದರ್ಶಿಸುತ್ತಿದೆ. ಒಂದು ಕಾಲಘಟ್ಟದಲ್ಲಿ 'ಅಲ್ಪ ಸಂಬಳ' ಎಂದು ಕಡೆಗಣಿಸಿದ್ದ ಮೇಳವಿಂದು ಪ್ರಸಿದ್ಧ ಮೇಳವಾಗಿ ಹೊರಹೊಮ್ಮಿದೆ. ಮೇಳಕ್ಕೆ ಸೇರಲು ಕಲಾವಿದರು ಕಾತರಿಸುತ್ತಿದ್ದಾರೆ. ಕಟೀಲು ಮೇಳದೊಂದಿಗೆ ಸಾಗಿದ ನನ್ನ ಜೀವನದಲ್ಲಿ ಮೇಳದ ಮಾರ್ಪಾಟಾದ ಸ್ಥಿತಿಯೊಂದಿಗೆ, ನನ್ನ ಜೀವನವೂ ಸುಭದ್ರವಾದುದನ್ನು ಅನುಭವಿಸಿದ್ದೇನೆ.
                   ಕಾಲದ ಒಂದೊಂದು ಘಟನೆಗೆ ಸಾಕ್ಷಿಯಾಗಿ 'ಯಕ್ಷಭೃಂಗ' ಕೃತಿ ನಮ್ಮೆದುರಿಗಿದೆ. ಕುಬಣೂರರು  ದಾಶರಥಿ ದರ್ಶನ, ಸಾರ್ವಭೌಮ ಸಂಕರ್ಷಣ, ಮನುವಂಶವಾಹಿನಿ, ಮಹಾಸತಿ ಮಂದಾಕಿನಿ, ಕಾಂತಾವರ ಕ್ಷೇತ್ರ ಮಹಾತ್ಮೆ, ಪಟ್ಟದ ಮಣೆ.. ಪ್ರಸಂಗಗಳ ರಚಯಿತರು. ಕೀರ್ತಿಶೇಷ ಕಲ್ಲಾಡಿ ವಿಠಲ ಶೆಟ್ಟರ ಜೀವನ ಗಾಥಾ 'ಯಕ್ಷವಿಜಯ ವಿಠಲ' ಕೃತಿಯ ಸಂಪಾದಕರು. ಕುಬಣೂರು ಶ್ರೀಧರ ರಾಯರು ಸಾತ್ವಿಕ ಹಾಗೂ ಅತಿರೇಕಗಳಿಲ್ಲದ ಭಾಗವತ.

Thursday, August 24, 2017

ಭಾವಕೋಶದೆಡೆಗೆ ಜಾರಲು ಪಾತ್ರಗಳು ಅಂಜುತ್ತಿವೆ!


ಪ್ರಜಾವಾಣಿಯ ದಧಿಗಿಣತೋ ಅಂಕಣ / 5-5-2017

               ಹಿರಿಯ ಸ್ತ್ರೀಪಾತ್ರಧಾರಿ ಡಾ. ಕೋಳ್ಯೂರು ರಾಮಚಂದ್ರ ರಾಯರ 'ದ್ರೌಪದಿ', ಅರುವ ಕೊರಗಪ್ಪ ಶೆಟ್ಟರ 'ದುಶ್ಶಾಸನ', ಕೆ.ಗೋವಿಂದ ಭಟ್ಟರ 'ಕೌರವ', ರಾಮದಾಸ ಸಾಮಗರ 'ಶಕುನಿ' - 'ಅಕ್ಷಯಾಂಬರ ವಿಲಾಸ' ಪ್ರಸಂಗದ ಒಂದು ಪ್ರದರ್ಶನದಲ್ಲಿ ಬಣ್ಣ ಹಚ್ಚಿದ ಖ್ಯಾತರಿವರು. ಏನಿಲ್ಲವೆಂದರೂ ಎರಡು ದಶಕ ಮೀರಿತು. ಅಂದಿನ ರಂಗಾಭಿವ್ಯಕ್ತಿಯ ಚಿತ್ರವಿನ್ನೂ ಹಸಿಯಾಗಿದೆ. ದ್ರೌಪದಿಯ ಆರ್ತನಾದ, ದುಶ್ಶಾಸನನ ಅಟ್ಟಹಾಸ, ಕೌರವನ ಬೊಬ್ಬಾಟ, ಶಕುನಿಯ ಕುತಂತ್ರ... ಪಾತ್ರ ಸ್ವಭಾವಗಳು ಕಲಾವಿದರ ಮೈಮೇಲೆ ಆವೇಶವಾಗಿದ್ದುವು. ಮೂರುವರೆ ಗಂಟೆಗಳಷ್ಟು ಜರುಗಿದ ಆಟದಲ್ಲಿ ಪಾತ್ರಧಾರಿಗಳೇ ಮರೆತುಹೋಗಿದ್ದರು.
                'ದ್ರೌಪದಿ'ಯಾಗಿದ್ದ ಕೋಳ್ಯೂರರು ಪಾತ್ರವನ್ನು ಮುಗಿಸಿ ನೇಪಥ್ಯಕ್ಕೆ ಬಂದಿದ್ದರಷ್ಟೇ. ಅತ್ತು ಅತ್ತು ಕಣ್ಣುಗಳೆಲ್ಲಾ ಕೆಂಪಗಾಗಿದ್ದುವು. ಕಪೋಲಗಳು ಕಣ್ಣೀರಿನಿಂದ ತೋಯ್ದಿದ್ದವು. ಕಾಲು ಗಂಟೆ ಬಿಟ್ಟು ಬನ್ನಿ ಎಂದರು. ಒಂದೆರಡು ಗಂಟೆ ಕಳೆದು ಕೋಳ್ಯೂರರನ್ನು ಮಾತನಾಡಿಸಲು ಹೋದಾಗ ವಿಶ್ರಾಂತಿಯಲ್ಲಿದ್ದರು. ಪಾತ್ರಧಾರಿ ತನ್ನ ಪಾತ್ರ ಮುಗಿಸಿ ಚೌಕಿಗೆ ಸರಿಯುತ್ತಿರುವಾಗ ಆತ ತನ್ನೊಳಗಿನ ಪಾತ್ರವನ್ನು ಪೂರ್ತಿಯಾಗಿ ಕಳಚಿರುವುದಿಲ್ಲ. ಕಳಚಿ ಮೊದಲಿನಂತಾಗಲು ಸ್ವಲ್ಪ ವೇಳೆ ಬೇಕಾಗುತ್ತದೆ. ಅದಕ್ಕಾಗಿ ಸ್ವಲ್ಪ ಬಿಟ್ಟು ಬನ್ನಿ ಅಂದೆ ಎಂದು ನಕ್ಕಿದ್ದರು.
                ಹಿಂದೊಮ್ಮೆ ಕೋಳ್ಯೂರರ 'ಚಂದ್ರಮತಿ'ಯನ್ನು ನೋಡಿದ್ದೆ. ಮಗ 'ಲೋಹಿತಾಶ್ವ'ನ ಶವವನ್ನು ಎತ್ತಿಕೊಂಡು ಸ್ಮಶಾನಕ್ಕೆ ತೆರಳುವ ಸಂದರ್ಭ. ರಂಗದಿಂದ ಆತನನ್ನು ಎತ್ತಿಕೊಂಡು ಪರದೆಯ ಹಿಂದೆ ಬಂದಿದ್ದರಷ್ಟೇ. ಆಗ ಸಂಘಟಕರಿಂದ ಧನ್ಯವಾದ ಸಮರ್ಪಣೆ. ಛೇ... ಪ್ರಸಂಗವನ್ನು ಹಾಳುಮಾಡಿಬಿಟ್ಟರು ಎಂದು ಗೊಣಗುತ್ತಿದ್ದ ಕೋಳ್ಯೂರರ ಕೈಯಲ್ಲಿ ಲೋಹಿತಾಶ್ವ ಎತ್ತಿಕೊಂಡ ಸ್ಥಿತಿಯಲ್ಲಿದ್ದದ್ದ. ಅವನನ್ನು ಕೆಳಗಿಳಿಸಲಿಲ್ಲ. ಒಂದೈದು ನಿಮಿಷದ ಬಳಿಕ ಪ್ರಸಂಗ ಮುಂದುವರಿಯಿತು. "ನೋಡಿ.. ಕರುಣಾಜನಕವಾದ ಸನ್ನಿವೇಶ. ತಾಯಿಯು ತನ್ನ ಮಗನ ಶವವನ್ನು ಹೊತ್ತುಕೊಂಡು ಹೋಗಿ ಸ್ಮಶಾನದಲ್ಲಿ ಆತನನ್ನು ಕಾಷ್ಠಕ್ಕಿಡುವ ಕ್ಷಣ. ಹಿಮ್ಮೇಳ, ಪಾತ್ರಧಾರಿ, ಪ್ರೇಕ್ಷಕರು..ಎಲ್ಲರೂ ಕಥಾಜಾಡಿನಲ್ಲಿರುತ್ತಾರೆ. ಈ ಗುಂಗಿಗೆ ಬ್ರೇಕ್ ಹಾಕಿದಾಗ ಮತ್ತೆ ಪಾತ್ರದೊಳಗೆ ಪ್ರವೇಶ ಮಾಡಲು ಅಂದು ಕಷ್ಟಸಾಧ್ಯವಾಗುತ್ತದೆ," ಎಂದಿದ್ದರು.
               ಕೋಡಪದವಿನಲ್ಲೊಮ್ಮೆ ಹರಿದಾಸ್ ಮಲ್ಪೆ ರಾಮದಾಸ ಸಾಮಗರ 'ಹರಿಶ್ಚಂದ್ರ'. ಹೆಂಡತಿ, ಮಕ್ಕಳನ್ನು ಮಾರುವ ಸನ್ನಿವೇಶ. ಸಾಮಗರಂದು ನಿಜ ಹರಿಶ್ಚಂದ್ರನಾಗಿದ್ದರು! ಗೋಳೋ ಎಂದು ಅಳುತ್ತಾ, ತನ್ನ ತಲೆಗೆ-ಎದೆಗೆ ಬಡಿದುಕೊಳ್ಳುತ್ತಿದ್ದ ದೃಶ್ಯದಲ್ಲಿ ಪ್ರೇಕ್ಷಕರೂ ಅತ್ತಿದ್ದರು! ಪಾತ್ರವೊಂದು ಗರಿಷ್ಠತಮ ಎಷ್ಟು ಪರಿಣಾಮ ಕೊಡಬಹುದೋ ಅಷ್ಟನ್ನು ಸಾಹಿತ್ಯಿಕವಾಗಿ, ಅಭಿನಯಪೂರ್ವಕವಾಗಿ ತೋರಿದ್ದರು. ಅದು ಅಭಿನಯವಾಗದೆ ಸಹಜವಾಗಿ ಚಿತ್ರಿತವಾಗಿತ್ತು. ಅಂದು ದಿನೇಶ ಅಮ್ಮಣ್ಣಾಯರ ಭಾಗವತಿಕೆ. ಇಡೀ ರಂಗ, ಟೆಂಟ್ ಮತ್ತು ಚೌಕಿಯ ಕಲಾವಿದರು ಕೂಡಾ ಈ ಸನ್ನಿವೇಶಕ್ಕೆ ಸಾಕ್ಷಿಯಾಗಿ ಗಪ್ಚಿಪ್ ಆಗಿದ್ದರು. ಸೂಜಿ ಬಿದ್ದರೂ ಸದ್ದು ಕೇಳುವಷ್ಟು ಮೌನ.
                ಇಂತಹ ರಂಗದ 'ಅನುಭವಿಸುವಿಕೆ' ವಿಚಾರವೇ ವರ್ತಮಾನದಲ್ಲಿ ಮಾಸಿದಂತೆ ಕಾಣುತ್ತದೆ!  ಆಡಂಬರದ ಗೌಜಿ-ಗಮ್ಮತ್ತುಗಳು ಪಾತ್ರವನ್ನು ನುಂಗುತ್ತವೆ. ಪಾತ್ರಧಾರಿಗಳು ಒಪ್ಪಿಕೊಳ್ಳುತ್ತಾರೆ, ಬಿಡಿ. ಈ ಸೂಕ್ಷ್ಮ ವಿಚಾರಗಳು ಮೇಲ್ನೋಟಕ್ಕೆ ಅಗೋಚರ. ಆದರೆ ಪ್ರದರ್ಶನದ ಪರಿಣಾಮದಲ್ಲಿ ಎದ್ದು ಕಾಣುತ್ತದೆ. 'ಚಂದ್ರಮತಿ, ದ್ರೌಪದಿ, ಕಯಾದು, ಸುಭದ್ರೆ' ಪಾತ್ರಗಳು ರಂಗದಲ್ಲಿ ಅಳುತ್ತಿರುವಾಗ ಪ್ರೇಕ್ಷಕರಾದ ನಾವು ನಗುತ್ತಿರುತ್ತೇವೆ! ಅಲ್ಲ, ನಿರ್ಲಿಪ್ತರಾಗಿರುತ್ತೇವೆ. ಅದರರ್ಥ ನಮಲ್ಲಿ ರಸ-ಭಾವಗಳ ಶುಷ್ಕತೆಯ ಕೊರತೆ ಎನ್ನುವುದನ್ನು ಒಪ್ಪಿಕೊಳ್ಳಲಾರೆವು.
               ಎಂ.ಕೆ.ರಮೇಶ ಆಚಾರ್ಯರ 'ಕಯಾದು' ಪಾತ್ರವನ್ನು ನೋಡಿ ದುಃಖ ಸಹಿಸಲಾಗದೆ ಟೆಂಟಿನೊಳಗಿಂದ ಹೊರ ನಡೆದ ಅಮ್ಮಂದಿರು ಎಷ್ಟು ಮಂದಿ ಬೇಕು? ಪೂಕಳ ಲಕ್ಷ್ಮೀನಾರಾಯಣ ಭಟ್ಟರ 'ಸಾಂದೀಪನಿ'ಯ ಬದುಕಿನ ಸಂಕಷ್ಟವನ್ನು ನೋಡಿ ಮರುಗಿದ ಮಂದಿಯನ್ನು ನೋಡಿದ್ದೇನೆ. ಪೆರುವೋಡಿ ನಾರಾಯಣ ಭಟ್ಟರ 'ಪಾಪಣ್ಣ' ಪಾತ್ರವನ್ನು ನೋಡಿ ಮನಃಕರಗಿದವರು ಅಗಣಿತ. ಜಾಗೃತ ಪ್ರೇಕ್ಷಕರೊಳಗೆ ಪಾತ್ರಗಳು ಉಂಟುಮಾಡುವ ಪರಿವರ್ತನೆಗಳು ರಂಗದ ಜೀವಂತಿಕೆಗೆ ಮತ್ತು ಪಾತ್ರಧಾರಿಗಳ ಜಾಗೃತ ಚಿತ್ತಾಭಿವ್ಯಕ್ತಿಗೆ ಉದಾಹರಣೆ.
               ಇಂತಹ ರಂಗಸುಖ ಮತ್ತು ರಂಗಪರಿಣಾಮಗಳು ಈಚೆಗಂತೂ ವಿರಳವಾಗುತ್ತಿವೆ. ಬಹುತೇಕ ಪ್ರದರ್ಶನಗಳಲ್ಲಿ ಸಂಘಟಕರ ವಿಶೇಷಾತಿಥ್ಯಗಳು ರಂಗಪರಿಣಾಮಗಳ ಮೇಲೆ ಬಾಧಕವಾಗುವುದನ್ನು ಸ್ವತಃ ಅನುಭವಿಸಿದ್ದೇನೆ. ಪ್ರತಿಷ್ಠಿತರ ಮನೆಯಂಗಳದಲ್ಲಿ 'ದಕ್ಷಾಧ್ವರ' ಪ್ರಸಂಗ. ಕಿಕ್ಕಿರಿದ ಪ್ರೇಕ್ಷಕರು. ಉತ್ತಮ ಅನುಭವಿ ಕಲಾವಿದರು. ಪ್ರೇಕ್ಷಕರು ಮತ್ತು ರಂಗದ ಮೂಡ್ ಒಂದೇ ಸರಳರೇಖೆಯಲ್ಲಿದ್ದುವು. ಅಷ್ಟು ಹೊತ್ತಿಗೆ ಚರುಮುರಿ ಮತ್ತು ಐಸ್ಕ್ರೀಮ್ಗಳು ಪ್ರೇಕ್ಷಕರು ಕುಳಿತಲ್ಲಿಗೆ ವಿತರಣೆಯಾದುವು. ಪರಿಸ್ಥಿತಿ ಹೇಗಿರಬಹುದೆಂದು ಊಹಿಸಿ. ಆಗ ರಂಗದಲ್ಲಿ ಸಂಭಾಷಿಸುತ್ತಿದ್ದ 'ಈಶ್ವರ-ದಾಕ್ಷಾಯಿಣಿ' ಪಾತ್ರಗಳೂ 'ಚರುಮುರಿ'ಯಾದುವು! ಮತ್ತೊಂದೆಡೆ 'ಅಭಿಮನ್ಯು-ಸುಭದ್ರೆ' ಪಾತ್ರಗಳು ಸಂಭಾಷಿಸುತ್ತಿರುವಾಗ ಪ್ರೇಕ್ಷಕ ಸಂದೋಹಕ್ಕೆ ಚಹ ವಿತರಣೆಯಾಯಿತು. ಇಂತಹ ಸಂದರ್ಭಗಳಲ್ಲಿ ಪ್ರೇಕ್ಷಕರ ಮನಸ್ಸು ರಂಗದಿಂದ ವಿಮುಖವಾಗುತ್ತವೆ. ಗುಲ್ಲು ಎದ್ದಂತೆ ಭಾಸವಾಗುತ್ತದೆ. ಮತ್ತೆ ಪ್ರೇಕ್ಷಕರು ಮೊದಲಿನಂತಾಗಬೇಕಾದರೆ ಒಂದರ್ಧ ಗಂಟೆಯಾದರೂ ಬೇಕು. ಅಷ್ಟು ಹೊಂದಿಗೆ ರಂಗವು ಚಹ-ತಿಂಡಿಗಳಿಗೆ ಬಲಿಯಾಗಿರುತ್ತದೆ!
              ಪ್ರದರ್ಶನ ಒಳ್ಳೆಯದಾಗಬೇಕು ಎಂದು ಮಾಡುವ ವ್ಯವಸ್ಥೆಗಳು ಪ್ರದರ್ಶನದ ಯಶಸ್ಸಿಗೆ ಮಾರಕವಾಗುತ್ತಿವೆ. ಇದನ್ನು ಅನಿವಾರ್ಯ ಎನ್ನಲಾಗದು. ರಂಗದಿಂದ ಸ್ವಲ್ಪ ದೂರದಲ್ಲಿ, ರಂಗದ ಕ್ರಿಯೆಗಳಿಗೆ ತೊಂದರೆಯಾಗದಂತೆ ಆತಿಥ್ಯದ ವ್ಯವಸ್ಥೆಯನ್ನು ಮಾಡಬಹುದು. ಮಧ್ಯ ಮಧ್ಯೆ ನಡೆಯುವ ಸಭಾಕಾರ್ಯಕ್ರಮಗಳು, ಉದ್ಘೋಷಣೆಗಳು, ಪ್ರದರ್ಶನ ನಿಲುಗಡೆಗಳಿಂದ ಕಲಾವಿದರಿಗೆ ಪಾತ್ರಗಳನ್ನು ಅನುಭವಿಸಲು ತೊಡಕಾಗುತ್ತದೆ. ಅಪರೂಪಕ್ಕೆ ಆಟ ಆಡಿಸುವ ಸಂಘಟಕರು ಯಕ್ಷಗಾನದ ನಿಜಸುಖದಿಂದ ವಂಚಿತರಾಗುತ್ತಾರೆ.
               ಶಬರಿಮಲೆ ವ್ರತಧಾರಿಗಳು 'ಶಬರಿಮಲೆ ಕ್ಷೇತ್ರ ಮಹಾತ್ಮೆ' ಪ್ರಸಂಗವನ್ನು ಆಡಿಸುವುದು ರೂಢಿ. ಅಧಿಕ ಮಂದಿ ಪ್ರೇಕ್ಷಕರು ನೆರೆದಿರುತ್ತಾರೆ. ಇಂತಹ ಹೊತ್ತಲ್ಲಿ ಸಭಾಸದರಿಗೆ ಸೂಚನೆಗಳನ್ನು ನೀಡುವುದು ವ್ಯವಸ್ಥೆಯ ಒಂದಂಗ.  ಆಗ ರಂಗದಲ್ಲಿ ಪಾತ್ರಗಳು ಸಂಭಾಷಿಸುತ್ತಿದ್ದರೂ, ನಿರ್ವಾಹಕರು ಸೂಚನೆಗಳನ್ನು ಘೋಷಿಸುವುದಕ್ಕೆ ರಂಗಕ್ಕೇರುವ ನೂರಾರು ದೃಷ್ಟಾಂತಗಳಿವೆ. ಇಂತಹ ಬೆಳವಣಿಗೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಇದರಿಂದ ಯಕ್ಷಗಾನ ಕ್ಷೇತ್ರಕ್ಕೆ ಏನೂ ತೊಂದರೆಯಿಲ್ಲ. ಆದರೆ ರಂಗ ಪರಿಣಾಮಗಳು ದೊರಕದೆ ನೀರಸ ಅನುಭವವಾಗುತ್ತದೆ.
                 ಹಿಂದಿನ ಹಿರಿಯ ಕಲಾವಿದರ ಪಾತ್ರಗಳು ನೀಡುತ್ತಿದ್ದ ಭಾವ ಪರಿಣಾಮಗಳ ಛಾಯೆಯನ್ನು ಈಗಿನ ಯುವ ರಂಗನಿಷ್ಠ, ಮೇಳನಿಷ್ಠ ಕೆಲವರಲ್ಲಿ ಕಾಣಬಹುದು. ಅವಿನ್ನೂ ಪಕ್ವತೆಯ ಅಂಚಿನಲ್ಲಿದೆಯಷ್ಟೇ. ಹಿರಿಯ ಕಲಾವಿದರ ಪಾತ್ರಗಳ ಮಾದರಿಗಳ ದಾಖಲಾತಿಗಳು ಇವರಿಗೆ ಅನುಕೂಲವಾಗಬಹುದು. ತೊಟ್ಟ ವೇಷವೊಂದು  ರಂಗದಲ್ಲಿ ಪಾತ್ರವಾಗಬೇಕಾದ ಅರ್ಹತೆಯನ್ನು ಕಲಾವಿದ ಸ್ವಯಂ ಆಗಿ ರೂಢಿಸಿಕೊಳ್ಳಬೇಕಷ್ಟೇ. ಇದಕ್ಕಾಗಿ ಹಿರಿಯ ಕಲಾವಿದರ ಸಂಪರ್ಕ,  ಓದುವಿಕೆ ಮತ್ತು ಜ್ಞಾನ ಹಸಿವಿನ ತೇವವು ಆರದಂತೆ ಸದಾ ಜಾಗೃತವಾಗಿರುವುದು ಮುಖ್ಯ. ಸಂಘಟಕರೂ ಕೂಡಾ ತಮ್ಮ ವ್ಯವಸ್ಥೆಯನ್ನು ಪ್ರದರ್ಶನಕ್ಕೆ ಬಾಧಕವಾಗದಂತೆ ಬದಲಾಯಿಸುವುದೂ ಅನಿವಾರ್ಯವಾಗುತ್ತದೆ.
            ಬಹುಶಃ ಹೀಗೆನ್ನುವುದು ವರ್ತಮಾನದ ಯಕ್ಷ ಮನಃಸ್ಥಿತಿಗೆ ವಿರುದ್ಧವಾಗಬಹುದೇನೋ? ಸಂಘಟಕ, ಕಲಾವಿದ, ಮೇಳ - ಈ ಮೂವರು ಪರಸ್ಪರ ಪೂರಕವಾದ ಮನಃಸ್ಥಿತಿಯನ್ನು ಹೊಂದಿದರೆ ಮಾತ್ರ ಪ್ರದರ್ಶನದ ಯಶಸ್ಸು. ಇಲ್ಲದಿದ್ದರೆ ಪಾತ್ರಗಳು ಭಾವಕೋಶದೆಡೆಗೆ ಜಾರಲು ನಿತ್ಯ ಅಂಜುವ ಸ್ಥಿತಿ ಏರ್ಪಡಬಹುದು!
(ಸಾಂದರ್ಭಿಕ ಚಿತ್ರಗಳು  -  ಶ್ಯಾಮಕುಮಾರ್ ತಲೆಂಗಳ, ಮುರಳಿ ರಾಯರಮನೆ)

Wednesday, August 23, 2017

ರಂಗ ನೇಪಥ್ಯ ಸಹಾಯಕರು ಕಲಾವಿದರಲ್ಲವೇ?

ಪ್ರಜಾವಾಣಿಯ ’ದಧಿಗಿಣತೋ' ಅಂಕಣ / 12-5-2017

             ಅದೊಂದು ಯಕ್ಷಗಾನದ ಪ್ರಶಸ್ತಿ ಆಯ್ಕೆ ಸಮಿತಿಯ ಸಭೆ. ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡುವುದು ಅಂದಿನ ವಿಷಯಸೂಚಿ. ಹತ್ತಾರು ಹೆಸರುಗಳು ಉಲ್ಲೇಖಿಸಲ್ಪಟ್ಟವು. ಅದರಲ್ಲಿ ಚೌಕಿ ಸಹಾಯಕರ ಹೆಸರುಗಳು ಹಾದು ಹೋದುವು. "ಅವರು ಕಲಾವಿದರಲ್ಲ, ನೇಪಥ್ಯ ಸಹಾಯಕರು. ಅವರ ಹೆಸರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಸಾಧ್ಯವಿಲ್ಲ," ಎಂಬ ನಿಲುವು ವ್ಯಕ್ತವಾಯಿತು. ಅಲ್ಲಿದ್ದ ಹಿರಿಯರೊಬ್ಬರು, "ಇಡೀ ಪ್ರದರ್ಶನದ ಒಟ್ಟಂದಕ್ಕೆ ಚೌಕಿ ಸಹಾಯಕರ ಶ್ರಮ ಗುರುತರ. ಅವರನ್ನು ಕಲಾವಿದರ ಸಾಲಿಗೆ ಯಾಕೆ ಸೇರಿಸಬಾರದು", ಗಟ್ಟಿ ದನಿಯಲ್ಲಿ ಅಭಿಪ್ರಾಯವನ್ನು ಮುಂದಿಟ್ಟರು. ಕೊನೆಗೂ ಹಿಮ್ಮೇಳ-ಮುಮ್ಮೇಳ ಕಲಾವಿದರ ಆಯ್ಕೆ ನಡೆದು ಸಭೆ ಮುಗಿದಿತ್ತು.
              ನೇಪಥ್ಯ ಸಹಾಯಕರು ಕಲಾವಿದರಲ್ಲವೇ? ಬಹುಕಾಲ ನನ್ನನ್ನು ಕಾಡುವ ವಿಚಾರ. ದೊಂದಿ ಹಿಡಿಯುವ, ರಂಗದ ಹಿಂದೆ ದುಡಿಯುವ, ಚೌಕಿಯಲ್ಲಿ ಡ್ರೆಸ್ ಕಟ್ಟುವ, ಟೆಂಟ್-ರಂಗಸ್ಥಳ ಊರುವ ಎಲ್ಲರೂ ಕಲೆಯ ಸರ್ವಾಂಗ ಸುಂದರತೆಗೆ ದುಡಿಯುವವರು. ಒಂದರ್ಥದಲ್ಲಿ ಕಲಾಕರ್ಮಿಗಳು. ಹಲವು ವರುಷಗಳ ಕಾಲ ಮೇಳಗಳಲ್ಲಿ ದುಡಿದು ಬದುಕನ್ನು ರೂಪಿಸುತ್ತಾ ಬಂದವರು. ಅವರಿಗದು 'ಹೊಟ್ಟೆಪಾಡು' ಎಂದಾದರೆ ಹಿಮ್ಮೇಳ-ಮುಮ್ಮೇಳ ಕಲಾವಿದರಿಗೂ ಯಕ್ಷಗಾನವು 'ಹೊಟ್ಟೆಪಾಡು' ಅಲ್ವಾ. ನಿಜಾರ್ಥದ 'ಸೇವೆ' ಮಾಡಲು ಸಿದ್ಧರಿರುತ್ತಾರಾ?
            ಒಂದು ಕಾಲಘಟ್ಟದ ಯಕ್ಷಗಾನವನ್ನು ನೆನಪು ಮಾಡಿಕೊಳ್ಳೋಣ. ಟೆಂಟ್ ಮೇಳಗಳ ದಿನಮಾನಗಳವು. ಟಿಕೆಟ್ ಪಡೆದು ಆಟಕ್ಕೆ ಕಾಯುವ ಪ್ರೇಕ್ಷಕರಿದ್ದ ಕಾಲ. ಹೆಚ್ಚೇಕೆ, ದಶಕಗಳ ಹಿಂದೆ ಎನ್ನೋಣ. ಮೇಳದ ಲಾರಿಯು ಬಂದಾಗ ಊರಿಡೀ ಯಕ್ಷಗಾನೀಯವಾದ ವಾತಾವರಣ ಪಸರಿಸಲು ಶುರುವಾಗುತ್ತದೆ. ಟೆಂಟ್, ರಂಗಸ್ಥಳ, ವೇಷಭೂಷಣ.. ಮೊದಲಾದ ಪರಿಕರಗಳು ಅನ್ಲೋಡ್ ಆಗುತ್ತವೆ. ಸ್ವಲ್ಪ ಸಮಯದ ನಂತರ ಸೇನಾಶಿಸ್ತಿನಂತೆ ವಿವಿಧ ಜವಾಬ್ದಾರಿಗಳನ್ನು ಹೊತ್ತವರು ಕಾರ್ಯಪ್ರವತ್ತರಾಗುತ್ತಾರೆ.
              ಒಂದೆಡೆ ಟೆಂಟ್ ಎಬ್ಬಿಸುವ, ಚೌಕಿ ನಿರ್ಮಾಣ ಮಾಡುವ, ಹಿಂದಿನ ದಿವಸ ಬಳಸಿದ ವೇಷಭೂಷಣಗಳನ್ನು ಬಿಸಿಲಿನಲ್ಲಿ ಒಣಗಿಸುವ ಪ್ರಕ್ರಿಯೆಗಳು ದಿನವಿಡೀ ನಡೆಯುತ್ತಿರುತ್ತದೆ. ಸೂರ್ಯಾಸ್ತದ ಹೊತ್ತಿಗೆ  ಯಕ್ಷಲೋಕ ನಿರ್ಮಾಣವಾಗಿರುತ್ತದೆ. ಏಳರ ಹೊತ್ತಿಗೆ ಹಿಮ್ಮೇಳ-ಮುಮ್ಮೇಳದ ಕಲಾವಿದರು ಚೌಕಿ ಪ್ರವೇಶಿಸುವಾಗ ಒಪ್ಪ-ಓರಣವಾಗಿ ವ್ಯವಸ್ಥೆ ಆಗಿರುತ್ತದೆ. ಈ ಒಪ್ಪ-ಓರಣವೂ ಒಂದು ಕಲೆ. ಚೌಕಿ ಸಹಾಯಕರು ತಂತಮ್ಮ ಕರ್ತವ್ಯಕ್ಕಾಗಿ ಹಾಜರಿರುತ್ತಾರೆ. ದೊಡ್ಡ ಮೇಳಗಳಲ್ಲಿ ಒಂದೊಂದು ವಿಭಾಗಕ್ಕೆ ಒಬ್ಬರೊ ಇಬ್ಬರೋ ನಿಯುಕ್ತಿಯಾಗಿರುತ್ತಾರೆ. ಸಣ್ಣ ಮೇಳಗಳಲ್ಲಿ ಅಂತಹ ಶಕ್ತಿಯಿರುವುದಿಲ್ಲ. ಹಗಲು ಟೆಂಟ್ ಹಾಕುವ, ಡ್ರೆಸ್ ಒಣಗಿಸುವ ಮಂದಿಯೇ ರಾತ್ರಿ ವೇಷಗಳಿಗೆ ಡ್ರೆಸ್ ಕಟ್ಟುವ ಕಾಯಕವನ್ನೂ ಮಾಡುತ್ತಾರೆ.
               ನಾವು ಯಾರನ್ನು 'ಡ್ರೆಸ್ ಕಟ್ಟುವವರು' ಎಂದು ಕರೆಯುತ್ತೇವೋ ಅವರೂ ಕಲಾವಿದರೇ. ಯಾವ ಯಾವ ವೇಷಕ್ಕೆ ಯಾವ ತರಹದ ವೇಷಭೂಷಣಗಳ ’ಕಾಂಬಿನೇಶನ್ ’ ಎನ್ನುವುದು ಪಾತ್ರಧಾರಿಗೆ ಮರೆತರೂ ಅವರಿಗೆ ಮರೆಯದು. ಎಷ್ಟೋ ವರುಷಗಳ ಕಾಲ ದುಡಿದು ವೃತ್ತಿಯಲ್ಲಿ ಸುಭಗತನ ಮೈಗೂಡಿಸಿಕೊಂಡಿರುತ್ತಾರೆ. ವೇಷಧಾರಿಗಳ ಬಣ್ಣಗಾರಿಕೆ, ಮನಃಸ್ಥಿತಿ, ಸ್ವಭಾವ ಎಲ್ಲವನ್ನೂ ಹತ್ತಿರದಿಂದ ಅನುಭವಿಸಿರುತ್ತಾರೆ. ಹೀಗಾಗಿ ಪುರಾಣ ಪಾತ್ರಗಳ ಬಣ್ಣಗಾರಿಕೆಯಿಂದ ತೊಡಗಿ ವೇಷ ತೊಡುವ ತನಕದ ಎಲ್ಲಾ ಕೆಲಸಗಳು ಅವರಿಗೆ ಕರತಲಾಮಲಕವಾಗಿರುತ್ತವೆ. ಇಷ್ಟೆಲ್ಲಾ ಅನುಭವ ಹೊಂದಿದ ಇವರನ್ನು ಕಲಾವಿದರೆನ್ನಲು ಯಾಕೆ ಹಿಂಜರಿಕೆ? ಪ್ರಶಸ್ತಿಗೆ ಆಯ್ಕೆ ಮಾಡುವಾಗ ಮನಸ್ಸು ಯಾಕೆ ಕಲ್ಲಾಗುತ್ತದೆ?
               ನೇಪಥ್ಯ ರಂಗಕರ್ಮಿ ಕೂಡ್ಲಿನ ಶಂಭು ಬಲ್ಯಾಯರು (ದಿ.) ಒಮ್ಮೆ ಮಾರ್ಮಿಕವಾಗಿ ಹೇಳಿದ್ದರು, "ಕಲಾವಿದರ ವೈಯಕ್ತಿಕ ದೌರ್ಬಲ್ಯಗಳಿಗೆ ಮೊದಲು ಬಲಿಯಾಗುವವರು ನಾವು. ನಿಂದೆ, ಅವಮಾನಗಳನ್ನು ನಿತ್ಯ ಸಹಿಸಬೇಕು. ಕಲಾವಿದರಲ್ಲಿ ಸ್ವಲ್ಪವೂ ಹೊಂದಾಣಿಕೆಯಿರುವುದಿಲ್ಲ. ವೇಷಕ್ಕೆ ಕಟ್ಟುವ ಆಭರಣದ ಒಂದು ಹಗ್ಗ ಅಕಸ್ಮಾತ್ ಕಡಿದರೂ ನಮ್ಮ ಜೀವವನ್ನೇ ಕಡಿಯುತ್ತಾರೆ! ನಾವೂ ಮನುಷ್ಯರಲ್ವೋ. ಸಂದರ್ಭ ಬಂದಾಗ ವೇಷವನ್ನೂ ಮಾಡಿದ್ದೇನೆ. ಎಲ್ಲಾ ನಮೂನೆಯ ವೇಷಗಳಿಗೂ ವೇಷಭೂಷಣಗಳನ್ನು ಕಟ್ಟಿದ, ಪುರಾಣ ಪಾತ್ರಗಳ ಅನುಭವವಿರುವ ನಾವು ಯಾಕೆ ಕಲಾವಿದರಲ್ಲ." ಬಲ್ಯಾಯರು ಈಗಿಲ್ಲ. ಅವರ ಅನಿಸಿಕೆಗಳು ವರ್ತಮಾನದ ಚೌಕಿಗೆ ಯಾ ಬಣ್ಣದ ಮನೆಗೆ ಕನ್ನಡಿ.
             ದೊಡ್ಡ ವ್ಯವಸ್ಥೆಯ ಮೇಳಗಳಿಗೆ ಹೋದೆಡೆ ಗೌರವದ ಸ್ಥಾನ, ಮಾನ ಪ್ರಾಪ್ತಿ. ಮೇಳದ ಬಸ್ ಬಂದಾಗ ಸೇವಾಕರ್ತರು ಬಸ್ಸಿಗೆ ದೀರ್ಘದಂಡ ಪ್ರಣಾಮ ಮಾಡುವವರನ್ನು ನೋಡಿದ್ದೇನೆ. ಇದು ಸೇವಾಕರ್ತರಿಗೆ ಆಟದ ಮೇಲಿರುವ ಪ್ರೀತಿ. ಕಲಾವಿದರೆಂದರೆ ಗೌರವ. ದೇವರ ಭಯ. ಅಲ್ಲೆಲ್ಲಾ ಕಲಾವಿದರಿಗೆ ಮೃಷ್ಠಾನ್ನ ಭೋಜನ, ವಸತಿ ಎಲ್ಲವೂ ಇರುತ್ತದೆ. ಆದರೆ ಸಣ್ಣ ಮೇಳಗಳು ಇವೆಯಲ್ಲಾ. ಈ ಮೇಳಗಳಿಗೆ ಸಾಮಾಜಿಕವಾಗಿ  ಗೌರವದ ಸ್ಥಾನಮಾನಗಳಿವೆ. ಆದರೆ ಸೇವಾಕರ್ತರಿಗೆ ಮೇಳದಷ್ಟೇ, ಕಲಾವಿದರಿಗೂ ವ್ಯವಸ್ಥೆ ಮಾಡಬೇಕೆನ್ನುವ ಪರಿಜ್ಞಾನ ಯಾಕೋ ಕಡಿಮೆ.
           ಉಪಾಹಾರ, ಭೋಜನ, ನಿದ್ರಿಸಲು, ನಿತ್ಯ ವಿಧಿಗಳಿಗೆ ಸೂಕ್ತ ವ್ಯವಸ್ಥೆಗಳಿರುವುದಿಲ್ಲ. ಬಿಸಿಲಿನ ಝಳಕ್ಕೆ ಕನಿಷ್ಠ ಫ್ಯಾನ್ ಒದಗಿಸುವ ಧಾರಾಳತನವೂ ಕಡಿಮೆ. ಈಗ ಕಾಲಮಿತಿಯಾದ್ದರಿಂದ ಹಿಮ್ಮೇಳ-ಮುಮ್ಮೇಳದ ಬಹುತೇಕ ಕಲಾವಿದರು ಚೌಕಿಯಲ್ಲಿರುವುದು ಕಡಿಮೆ. ಆದರೆ ಚೌಕಿ ಸಹಾಯಕರು ಚೌಕಿಯಲ್ಲೇ ಇರಬೇಕಲ್ವಾ. ಅವರೂ ಮನುಷ್ಯರು ತಾನೆ? ಕನಿಷ್ಠ ಸೌಕರ್ಯ, ಸೌಲಭ್ಯಗಳನ್ನು ಸೇವಾಕರ್ತರು ಒದಗಿಸಬೇಕು. ಈಚೆಗೆ ಒಂದು ಆಟದ ಸಪ್ತಾಹ ಪ್ರದರ್ಶನದ ಸಂದರ್ಭದಲ್ಲಿ ಸಮರ್ಪಕವಾಗಿ ನೀರಿನ ವ್ಯವಸ್ಥೆಯಿರಲಿಲ್ಲ. ಸೇವಾಕರ್ತರಲ್ಲಿ/ಆಟದ ಜವಾಬ್ದಾರಿ ಹೊತ್ತವರ ಗಮನಕ್ಕೆ ತಂದಾಗ ಅವರೆನ್ನುವ ಮಾತನ್ನು ಗಮನಿಸಿ : ಮಳೆ ಇಲ್ಲ ಮಾರಾಯ್ರೆ. ಊರಿಗೆ ನೀರಿಲ್ಲ. ಇನ್ನು ನಿಮಗೆ ಎಲ್ಲಿಂದ ತರಲಿ? ಎನ್ನುವ ಉಡಾಫೆ ಉತ್ತರ! ಬೆರಳೆಣಿಕೆಯ ಮೇಳಗಳಲ್ಲಿ ಕಲಾವಿದರ ವಿಶ್ರಾಂತಿಗೆ ಮೇಳದ ಯಜಮಾನರೇ ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಇದು ಎಲ್ಲಾ ಮೇಳಗಳಿಗೂ ಹಬ್ಬಬೇಕು.
           ನೇಪಥ್ಯ ಕಲಾವಿದರು ಒಂದು ದಿವಸ ರಜೆ ಹಾಕಿದರೆ ಚೌಕಿ ಗೊಂದಲವಾಗುತ್ತದೆ. ಅವರಿಲ್ಲದೆ ವೇಷ ರಂಗಕ್ಕೆ ಖಂಡಿತಾ ಹೋಗದು. ನಿತ್ಯ ದೊಂದಿ ಹಿಡಿಯುವ ನಿಷ್ಣಾತರು ರಜೆಯಲ್ಲಿದ್ದಾಗ ಅವರ ಜಾಗಕ್ಕೆ ಇನ್ನೊಬ್ಬ ಅನನುಭವಿ ಹೋದರೂ ಸರಿಹೋಗದು. ರಂಗದ ಹಿಂದೆ ನಿಂತು ರಂಗದ ಎಲ್ಲಾ ಕಲಾಪಗಳಿಗೆ ಎಚ್ಚರ ಸ್ಥಿತಿಯಲ್ಲಿದ್ದು ವ್ಯವಸ್ಥೆ ಮಾಡಿಕೊಡುವ ಸಹಾಯಕರು ಇದ್ದಾರಲ್ಲಾ, ಬಹುಶಃ ಅವರಿಗೆ ತಿಳಿದಷ್ಟು ರಂಗಕ್ರಿಯೆಗಳು ಕಲಾವಿದರಿಗೆ ಗೊತ್ತಿರಲಾರದೇನೋ. ಎಲ್ಲಾ ವೇಷಧಾರಿಗಳ (ಎಲ್ಲರೂ ಅಲ್ಲ) ಕಿರುಕುಳವನ್ನು ಮೌನವಾಗಿ ಸಹಿಸುತ್ತಾ, ಏನೂ ಆಗಿಲ್ಲ ಎನ್ನುತ್ತಾ ತನ್ನ ಪಾಡಿಗಿರುವ ಮನಃಸ್ಥಿತಿ ಇದೆಯಲ್ಲಾ, ಒಂದರ್ಥದಲ್ಲಿ ಇದು 'ಧ್ಯಾನ'. ಇದು ತಪಸ್ಸು. ಇವರ ಬಗ್ಗೆ ಕೀಳರಿಮೆ ಯಾಕೆ? ಇವರೂ ಕಲಾವಿದರೇ.
ಕೆಲವು ವೃತ್ತಿಪರ, ಹವ್ಯಾಸಿ ಮೇಳಗಳಲ್ಲಿ ಇವರನ್ನೂ ಕಲಾವಿದರನ್ನಾಗಿ ಅದರಿಸಿ, ಗೌರವ ಸಂಮಾನಗಳನ್ನು ಸಮರ್ಪಿಸುವ ಮನಃಸ್ಥಿತಿಗಳು ರೂಪುಗೊಳ್ಳುತ್ತಿವೆ. 'ಡ್ರೆಸ್ ಕಟ್ಟುವವ, ಚೌಕಿಯವ' ಎನ್ನುವುದು ವೃತ್ತಿಸೂಚಕ ಪದಗಳು. ಇದರ ಹೊರತಾಗಿ ಇತರರಂತೆ ಅವರೂ ಕಲಾವಿದರು ಎಂದು ಗ್ರಹಿಸಿದರೆ ಸಾಕು, ಇದೇ ನಾವು ಅವರಿಗೆ ಸಲ್ಲಿಸುವ ಗೌರವ.

ಸಾಂದರ್ಭಿಕ ಚಿತ್ರ -  ಚಿತ್ರ : ಉದಯ ಕಂಬಾರು ನೀರ್ಚಾಲು

Tuesday, August 22, 2017

ಒಡನಾಡಿಗಳ ಜತೆ ಒಡನಾಟದ ಮೆಲುಕು


ಪ್ರಜಾವಾಣಿಯ ’ದಧಿಗಿಣತೋ” ಅಂಕಣ / 26-5-2017
(ಚಿತ್ರಗಳು: ಯಜ್ಞ ಮಂಗಳೂರು)

             ಯಕ್ಷಗಾನದ ಪಾತ್ರಗಳನ್ನು ಅಭಿನಯದಿಂದ ಬೆರಗುಗೊಳಿಸಿದ ಸೂರಿಕುಮೇರು ಗೋವಿಂದ ಭಟ್ಟರು ರಂಗದಿಂದ ನಿವೃತ್ತಿ! ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಐವತ್ತು ವರುಷ ವ್ಯವಸಾಯವನ್ನು ಮಾಡಿ, ಅದೇ ಮೇಳದಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿದಾಗ ಒಡನಾಡಿ ಕಲಾವಿದರು, ಅಭಿಮಾನಿಗಳ ನಗೆ ಮಾಸಿತು. "ನೀವು ವೇಷ ಮಾಡಬೇಕೆಂದಿಲ್ಲ. ಚೌಕಿಯಲ್ಲಿರುವುದು ಕಲಾವಿದರಿಗೂ, ಮೇಳಕ್ಕೂ ಶೋಭೆ," ಎನ್ನುವ ಅಭಿಪ್ರಾಯದಲ್ಲಿ ಭಿನ್ನತೆಯಿರಲಿಲ್ಲ. ಈ ಮಾತನ್ನು ಮೇಳದ ಯಜಮಾನರಾದ ಡಾ.ವೀರೇಂದ್ರ ಹೆಗ್ಗಡೆಯವರು ಪುಷ್ಟಿಗೊಳಿಸಿದರು.
            2017 ಮೇ 21, 22ರಂದು ಉಜಿರೆಯಲ್ಲಿ ಜರುಗಿದ 'ಗೋವಿಂದ ಕಲಾಭಾವಾರ್ಪಣಂ' ಕಲಾಪಗಳಲ್ಲಿ ಗೋವಿಂದ ಭಟ್ಟರು (Soorikumeru Govinda Bhat) ರಂಗದಲ್ಲಿ, ಚೌಕಿಯಲ್ಲಿ ಮತ್ತು ರಂಗದ ಹೊರಗೆ ಅವರ ಉನ್ನತ-ವಿಭಿನ್ನವಾದ ವ್ಯಕ್ತಿತ್ವಗಳಿಗೆ ಅಭಿನಂದನೆ ಸಲ್ಲಲ್ಪಡುವಾಗ, ಮೇಳ ನಿವೃತ್ತಿಯ ಸೊಲ್ಲುಗಳು ವಿಷಾದದ ರೂಪದಲ್ಲಿ ಮಿಂಚುತ್ತಿದ್ದುವು. ಒಬ್ಬ ಕಲಾವಿದ ನಿವೃತ್ತಿಯನ್ನು ಬಯಸಿದಾಗ ರಂಗವೂ ಸೇರಿದಂತೆ ಯಕ್ಷ ಮನಸ್ಸುಗಳೆಲ್ಲಾ ಕೋರಿಕೆಯನ್ನು ತಿರಸ್ಕರಿಸುವ ಮನಃಸ್ಥಿತಿ ಪದ್ಮಗೌರವಕ್ಕಿಂತ ಹಿರಿದಲ್ವಾ. 
             ಭಟ್ಟರು ಬದುಕಿನಲ್ಲಿ ಮತ್ತು ವೃತ್ತಿಯಲ್ಲಿ ಹೊಸತನ್ನು ಸ್ಥಾಪಿಸುತ್ತಾ ಬಂದವರು. ಉಜಿರೆಯ ಕಾರ್ಯಕ್ರಮವೂ ಅಷ್ಟೇ. ತನ್ನನ್ನು ಹೊಗಳಬೇಕು, ಸಂಮಾನಿಸಬೇಕೆನ್ನುವ ಆಶಯವಿದ್ದಿರಲಿಲ್ಲ. ಯಕ್ಷ ಬದುಕಿಗೆ ಆಸರೆಯಾದ ವ್ಯಕ್ತಿಗಳನ್ನು ಗೌರವಿಸುವ ಪರಿಪಾಠಕ್ಕೆ ಶ್ರೀಕಾರ ಬರೆದಿದ್ದಾರೆ. ಕಾರ್ಯಕ್ರಮವನ್ನು ಸಂಘಟಿಸಿದ ಕಲಾವಿದ ಉಜಿರೆ ಅಶೋಕ ಭಟ್ ಹೇಳುತ್ತಾರೆ, "ಭಟ್ಟರ ಈ ನಡೆ ಯಕ್ಷಗಾನ ಕ್ಷೇತ್ರದಲ್ಲೇ ಅಪೂರ್ವ.  ಕುಟುಂಬದವರನ್ನೆಲ್ಲಾ ಸೇರಿಸಿ ತನ್ನ ಕಲಾಯಾನಕ್ಕೆ ಪೂರ್ಣ ಪ್ರೋತ್ಸಾಹ ನೀಡಿದವರನ್ನು ನೆನೆಯುವ, ಕಲಾಭಾವಾರ್ಪಣ ಸಮರ್ಪಿಸುವ ನಿರ್ಧಾರವನ್ನು ನೋಡಿ ಆಶ್ಚರ್ಯ ಪಟ್ಟಿದ್ದೇನೆ. ಓರ್ವ ಕಲಾವಿದ ಹೀಗೂ ಇರಲು ಸಾಧ್ಯವಾ ಎಂದು ಚಕಿತನಾಗಿದ್ದೇನೆ."
                ಐವತ್ತು ವರುಷಗಳ ಮೇಳ ವ್ಯವಸಾಯದಲ್ಲಿ ಮನದ ಮಾತುಗಳಿಗೆ ಅವಕಾಶ ಕಡಿಮೆ. ಮೇಳದ ತನ್ನೊಲವಿನ ಕಲಾವಿದರು, ಶಿಷ್ಯರೊಂದಿಗೆ ಭಾವ ಸಂವಾದವನ್ನು ಮಾಡುವ ಉತ್ಕಟ ಬಯಕೆ. ಸಿಹಿ-ಕಹಿಗಳನ್ನು ಹಂಚಿಕೊಳ್ಳಲು ಕಾತರ. ಶಿಷ್ಯರಿಗೆ ಗುರುವಿನ ಮುಂದೆ ಮಾತನಾಡಲು ಮುಜುಗರ. "ಇಪ್ಪತ್ತೈದು ವರುಷದಿಂದ ಗೋವಿಂದ ಭಟ್ಟರ 'ವಿಶ್ವಾಮಿತ್ರ' ಪಾತ್ರವನ್ನು ನೋಡುತ್ತಾ ಬೆಳೆದಿದ್ದೇನೆ. ಆ ಪಾತ್ರ ಪಾಲಿಗೆ ಬಂದಾಗ ಅವರನ್ನು ನೆನಪು ಮಾಡಿಕೊಳ್ಳುತ್ತಾ ಪಾತ್ರ ನಿರ್ವಹಿಸುತ್ತೇನೆ. ಆದರೆ ಅವರಂತೆ ಅಭಿವ್ಯಕ್ತಿಸಲು ಸಾಧ್ಯವಾಗಿಲ್ಲ. ಆ ಮಟ್ಟಕ್ಕೆ ಏರಲು ನಮ್ಮ ಜೀವಮಾನ ಸಾಲದು. ಪುರಾಣಗಳಲ್ಲಿ ಸಾಧನೆಗೆ ಪ್ರತೀಕವಾಗಿ ವಿಶ್ವಾಮಿತ್ರ ಕಾಣಸಿಗುತ್ತಾನೆ. ನಮ್ಮ ಮುಂದಿರುವ ಗೋವಿಂದ ಭಟ್ಟರು ಸಾಧನೆಯಲ್ಲಿ ವಿಶ್ವಾಮಿತ್ರನಂತೆ," ಎಂದವರು ಕಟೀಲು ಮೇಳದ ಕಲಾವಿದ ದಿವಾಣ ಶಿವಶಂಕರ ಭಟ್.
                ಪ್ರಶ್ನೆಗಳು ಅಭಿನಂದನೆಗಳ ರೂಪದಲ್ಲಿ ಪ್ರಕಟವಾಗುತ್ತಿದ್ದುವು. ಎಲ್ಲರ ಮಾತುಗಳನ್ನು ಆಲಿಸಿದ ಗೋವಿಂದ ಭಟ್ಟರು ಒಂದಷ್ಟು ಚಿಂತನೆಗಳನ್ನು ಹರಿಯಬಿಟ್ಟರು. ಅದು ಕಲಾವಿದರಿಗೆ ಸೀಮಿತವಲ್ಲ. ಅದರಲ್ಲಿ ಅಭಿಮಾನಿಗಳಿಗೆ ಸೂಚನೆಗಳಿದ್ದುವು. ಯಜಮಾನರಲ್ಲಿ ವಿನೀತತೆಯಿದ್ದುವು. ಕಲಾವಿದನ ಬದುಕಿನತ್ತ ನೋಟವಿತ್ತು. ಒಬ್ಬ ಕಲಾವಿದ ಒಂದೇ ಮೇಳದಲ್ಲಿ ತಿರುಗಾಟ ಮಾಡುವುದರಿಂದ ಏನು ಪ್ರಯೋಜನ? ಆ ಮೇಳವನ್ನು ಬಿಟ್ಟರೆ ಆಗುವ ಲಾಭವೇನು? ಈ ಎರಡು ಪ್ರಶ್ನೆಗಳು ಸಾಕಷ್ಟು ವಿಚಾರಗಳನ್ನು ಪೋಸ್ಟ್ ಮಾರ್ಟಂ ಮಾಡುವಲ್ಲಿ ಸಫಲವಾದುವು.
             ಮೇಳದ ತಿರುಗಾಟದಲ್ಲಿ ಆರ್ಥಿಕ ಅನುಕೂಲಗಳನ್ನು ಕಲಾವಿದ ಅಪೇಕ್ಷಿಸುತ್ತಾನೆ, ತಪ್ಪಲ್ಲ. ತಾನಿದ್ದ ಮೇಳವು ನೀಡುವ ಸಂಭಾವನೆಗಿಂತ ಹೆಚ್ಚು ಸಂಭಾವನೆ ನೀಡುವ ಮೇಳಗಳತ್ತ ಆಸಕ್ತನಾಗುವುದು ಸಹಜ. ಮೇಳದಲ್ಲಿ ಸೀಮಿತವಾದ ವೇಷಗಳನ್ನು ಮಾಡಬೇಕಾಗುತ್ತದೆ. ಒಂದೇ ಪ್ರಸಂಗಗಳನ್ನು ನಿರಂತರ ಆಡುವಾಗ ಪಾತ್ರವು ಕೂಡಾ ಬದಲಾಗುವುದಿಲ್ಲ. ಬೇರೆ ಮೇಳದಲ್ಲಿ ಉತ್ತಮ ಪಾತ್ರಗಳು ಸಿಗಬಹುದೆನ್ನುವ ನಿರೀಕ್ಷೆ. ತನ್ನ ಪ್ರತಿಭೆಯನ್ನು, ಸಾಮಥ್ರ್ಯವನ್ನು ಪ್ರಕಟಿಸಲು ಇತರ ಮೇಳಗಳಲ್ಲಿ ಸಾಧ್ಯ. ತಾನಿದ್ದ ಮೇಳಕ್ಕಿಂತ ಅನ್ಯ ಮೇಳಗಳಲ್ಲಿ ಸೌಕರ್ಯ ಹೆಚ್ಚು ಕೊಡುತ್ತಾರೆ ಎನ್ನುವ ನಂಬುಗೆ. ಮೇಳದ ತಿರುಗಾಟದಲ್ಲಿ ಕಲಾವಿದ ಕನಿಷ್ಟ ವಾರಕ್ಕೊಮ್ಮೆಯಾದರೂ ಮನೆಮಂದಿಯನ್ನು ಭೇಟಿ ಮಾಡಬೇಕೆನ್ನುವ ಆತುರದಲ್ಲಿರುತ್ತಾನೆ. ಇದು ಅಸಾಧ್ಯವಾದಾಗ ಮೇಳ ಬದಲಿಸುವ ಅಥವಾ ಹತ್ತಿರವೇ ತಿರುಗಾಟ ಮಾಡುತ್ತಿರುವ ಮೇಳಗಳನ್ನು ಆಯ್ಕೆ ಮಾಡುತ್ತಾನೆ. 
               ಮೇಳಗಳು ಈಗ ಕಾಲಮಿತಿ ಪ್ರದರ್ಶನಕ್ಕೆ ಒಗ್ಗಿಕೊಂಡಿವೆ. ವರ್ತಮಾನ ಕಾಲಕ್ಕೆ ಅನಿವಾರ್ಯ ಕೂಡಾ. ಕಲಾವಿದ ಮತ್ತು ಕಲಾವಿದ ಕುಟುಂಬಗಳಿಗೆ ಕಾಲಮಿತಿ ವ್ಯವಸ್ಥೆಗಳು ಪೂರಕವಾಗಿವೆಯೇ? ಸಂಜೆ ಏಳರಿಂದ ರಾತ್ರಿ ಹನ್ನೆರಡರ ತನಕ ಪ್ರದರ್ಶನ. ನಂತರ ಆತ ವಿಶ್ರಾಂತಿಯನ್ನು ಪಡೆಯಬೇಕು. ಬೆಳಿಗ್ಗೆ ಇನ್ನೊಂದು ಕ್ಯಾಂಪಿಗೆ ಪಯಣ. ಆಟ ಮುಗಿಸಿ ಮನೆಗೆ ಹೋಗಬೇಕಾದರೆ ಸ್ವಂತ ವಾಹನ ಹೊಂದಿರಬೇಕು. ಅದಕ್ಕೊಂದಿಷ್ಟು ಖರ್ಚು ಬೇರೆ. ಎಲ್ಲಾ ಕಲಾವಿದರೂ ವಾಹನ ಹೊಂದಿರುವುದಿಲ್ಲ. ವಾಹನ ಇರುವವರು ಆಟ ಮುಗಿಸಿ ಮನೆ ತಲಪುವಾಗ ಬೆಳಗ್ಗಿನ ಜಾವ ಆಗಿರುತ್ತದೆ. ಮನೆಗೆ ಹೋಗಿ ಮನೆವಾರ್ತೆಯನ್ನು ನಿಭಾಯಿಸಿ ವಿಶ್ರಾಂತಿಗೆ ಜಾರಲು ಮನಸ್ಸು ಅಣಿಯಾಗುತ್ತಿದ್ದಂತೆ ಅಂದಿನ ಆಟಕ್ಕೆ ಹೊರಡುವ ಒತ್ತಡ. ರಾತ್ರಿಯೂ ನಿದ್ದೆಯಿಲ್ಲ, ಹಗಲೂ ಇಲ್ಲ! ರಾತ್ರಿಯಿಡೀ ಪ್ರದರ್ಶನ ಇದ್ದಾಗ ಕಲಾವಿದ ಚೌಕಿಯಲ್ಲಿ ಅಷ್ಟಿಷ್ಟು ನಿದ್ದೆ ಮಾಡುತ್ತಿದ್ದ. ಈಗ ನಿದ್ದೆ ಮಾಡುವ  ಹೊತ್ತಲ್ಲಿ ಮಾರ್ಗದಲ್ಲಿ ಪಯಣಿಸುತ್ತಾ ಇರುತ್ತಾನೆ!
               ಟೆಂಟ್ ಪ್ರದರ್ಶನಗಳ ಕಾಲಘಟ್ಟದಲ್ಲಿ ಕಲಾವಿದನಿಗೆ 'ಅಭಿಮಾನಿಗಳು' ಕಡಿಮೆ. ಈಗ  ಬಾಲಕಲಾವಿದನಿಂದ ತೊಡಗಿ ಭಾಗವತರ ತನಕ ಅಭಿಮಾನಿಗಳಿದ್ದಾರೆ. ಅಭಿಮಾನ ತಪ್ಪಲ್ಲ. ಈ ಅಭಿಮಾನವು ಕಲಾವಿದನ ಬದುಕಿಗೆ ಪೂರಕವಾಗಿರುತ್ತಿದೆಯೇ ಎನ್ನುವ ಸೂಕ್ಷ್ಮವನ್ನು ಅಭಿಮಾನಿಗಳು ಗ್ರಹಿಸಬೇಕು. ಅಭಿಮಾನಿ ಇನ್ನೊಂದು ಆಟಕ್ಕೆ ಕರೆದಾಗ ಕಲಾವಿದನಿಗೆ ಬರಲಾಗುವುದಿಲ್ಲ ಎನ್ನಲು ಕಷ್ಟವಾಗುತ್ತದೆ. ಒಪ್ಪಿದರೆ ತಾನಿದ್ದ ಮೇಳದಲ್ಲಿ ವೇಷ ಮಾಡಿ, ನಂತರ ಅಭಿಮಾನಿಯ ಆಹ್ವಾನದಂತೆ ಹೋಗಬೇಕಾಗುತ್ತದೆ. ಎರಡೂ ಕಡೆಯೂ ಸಮರ್ಥ ಅಭಿವ್ಯಕ್ತಿಯನ್ನು ಪ್ರಕಟಿಸಲು ಕಷ್ಟವಾಗುತ್ತದೆ. ಪಾತ್ರ ನಿರ್ವಹಣೆಯಲ್ಲಿ ತಪ್ಪಿ ಬೀಳುತ್ತಾನೆ. ಹಾಗಾಗಿ ಕಲಾಭಿಮಾನಿಗಳಲ್ಲಿ ಒಂದು ವಿಜ್ಞಾಪನೆ - ಒಂದು ಮೇಳಕ್ಕೆ ಸೇರಿದ ಕಲಾವಿದನನ್ನು ಮೇಳ ಮುಗಿಯುವ ತನಕ ಇತರ ಕಾರ್ಯಕ್ರಮಕ್ಕೆ ಒತ್ತಾಯಿಸಬೇಡಿ. ಇದರಿಂದ ಮೇಳಕ್ಕೂ ಕಷ್ಟವಾಗದು, ಮೇಳದ ಯಜಮಾನರಿಗೂ ತ್ರಾಸವಾಗದು. ಮೇಳ ಮುಗಿದ ನಂತರ ನಿಮ್ಮಿಷ್ಟ. ಇಂತಹ ಸೂಕ್ಷ್ಮತೆಯತ್ತ ಗೋವಿಂದ ಭಟ್ಟರು ಗಮನ ಸೆಳೆದರು.
                "ಕಲಾ ಬದುಕಿನಲ್ಲಿ ಮುಖ್ಯವಾಗಿ ಬಣ್ಣದ ಮನೆಯಲ್ಲಿ ಮನಃಸ್ಥಿತಿಗಳ ಹೊಂದಾಣಿಕೆ ಮುಖ್ಯವಾಗುತ್ತದೆ. ಒಬ್ಬೊಬ್ಬರದು ಒಂದೊಂದು ಸ್ವಭಾವ. ಒಬ್ಬ ವ್ಯಕ್ತಿಯ ಸ್ವ-ಭಾವವನ್ನು ಬದಲಿಸಲು ಸಾಧ್ಯವೇ? ಒಂದೇ ರೀತಿಯಾಗಿ ಮನುಷ್ಯ ಇರುವುದು ಸಾಧ್ಯವೇ? ಸಾಧ್ಯವೂ ಇಲ್ಲ. ಹಾಗಾಗಿ ಕಲಾವಿದನ ಅಂತರಂಗ ಹೇಗಿದೆ ಎನ್ನುವುದನ್ನು ಅರಿತು ವ್ಯವಹರಿಸಿದರೆ ಚೌಕಿಯಲ್ಲಿ ಸಮಸ್ಯೆ ಬರಲಾರದು." ಐವತ್ತು ವರುಷಗಳ ಮೇಳದ ಬದುಕು ಕಲಿಸಿದ, ತೋರಿಸಿದ ಜೀವನದ ಪಾಠವು ಗೋವಿಂದ ಭಟ್ಟರ ಮಾತಿನಲ್ಲಿ ವ್ಯಕ್ತವಾಗಿದ್ದುವು. ಮುಕ್ತ ಸಂವಾದಗಳು ಕಲಾವಿದನ ಅಂತರಂಗ, ಕಲಾಯಾನ ಮತ್ತು ಯಶೋಯಾನಗಳ ಅನಾವರಣಕ್ಕೆ ಅನುವು ಮಾಡಿಕೊಟ್ಟಿತ್ತು.
                ಭಾವಕ್ಕೆ ಜೀವವಿದೆ ಎನ್ನುವುದನ್ನು ಗೋವಿಂದ ಭಟ್ಟರು ಬದುಕಿನಲ್ಲಿ ಅನುಷ್ಠಾನಿಸಿ ತೋರಿ 'ಭಾವಜೀವಿ'ಯಾದರು. ಮೇಳದ ಯಜಮಾನರಿಂದ ತೊಡಗಿ, ಅಭಿಮಾನಿಗಳ ತನಕ ಅವರೊಳಗಿನ ಭಾವಕ್ಕೆ ಜೀವವನ್ನು ಕೊಟ್ಟರು.  ಆದ್ರ್ರವಾಗದ ಮತ್ತು ನಿತ್ಯ ಮೌನದಲ್ಲೇ ಸುತ್ತುತ್ತಿರುವ ಭಾವಕ್ಕೆ ಸಾಕಾರತೆಯನ್ನು 'ಭಾವಾರ್ಪಣಂ' ಮೂಲಕ ತೋರಿದ ಗೋವಿಂದ ಭಟ್ಟರ ಮನಃಸ್ಥಿತಿ ಎಲ್ಲರಿಗೂ ಬರುವಂತಹುದಲ್ಲ. ಅದು ಯಕ್ಷಗಾನ ಕಟ್ಟಿಕೊಟ್ಟ ಕಲಾಸಂಸ್ಕಾರ, ಭಾವಸಂಸ್ಕಾರ.

Saturday, August 19, 2017

ಮೇಳ ನಿಷ್ಠತೆಯ ಅರುವತ್ತಾರು ಹೆಜ್ಜೆ


ಪ್ರಜಾವಾಣಿಯ 'ದಧಿಗಿಣತೋ' ಅಂಕಣ / 19-5-2017

                 ಗೋವಿಂದ ಭಟ್. ವಯಸ್ಸು ಎಪ್ಪತ್ತೇಳು. ಓದಿದ್ದು ಏಳನೇ ತರಗತಿ. ಧರ್ಮಸ್ಥಳ, ಮೂಲ್ಕಿ, ಕೂಡ್ಲು, ಸುರತ್ಕಲ್ ಇರಾ ಮೇಳಗಳಲ್ಲಿ ಒಟ್ಟು ಅರುವತ್ತಾರು ತಿರುಗಾಟ. ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಐವತ್ತು ವರುಷಗಳ ವ್ಯವಸಾಯ. ಯಕ್ಷಗಾನದ 'ದಶಾವತಾರಿ' ಸೂರಿಕುಮೇರು ಗೋವಿಂದ ಭಟ್ಟರ ಬಗೆಗೆ ಒಂದು ಪ್ಯಾರವು ವ್ಯಕ್ತಿಯಾಗಿ ಪರಿಚಯಿಸಲು ಸಾಕು. ಕಲಾವಿದನಾಗಿಯೂ ಇಷ್ಟು ವಿವರ ಸಾಕು. ಆದರೆ ಭಟ್ಟರು 'ಕಲಾವಿದ' ಎನ್ನುವ ಒಂದು ಪದದೊಳಗೆ ತನ್ನ ವೃತ್ತಿ ಬದುಕನ್ನು ಕುಬ್ಜಗೊಳಿಸಿಲ್ಲ. ಅದರಾಚೆಗಿನ ಬದುಕಿಗೆ ಕಲಾಸ್ಪರ್ಶವನ್ನು ಕೊಟ್ಟವರು.
               ಬದುಕು ಕಲೆಯಾಗಬೇಕು. ಆಗ ಕಲಾ ಬದುಕಿಗೆ ಹೊಳಪು. ಈ ಹೊಳಪಿನ ಪ್ರಖರದೊಳಗೆ ಈಜುತ್ತಾ ದಡ ಸೇರುವುದು ಸಣ್ಣ ಕೆಲಸವಲ್ಲ. ಗೋವಿಂದ ಭಟ್ಟರಿಗೆ ಆರು ದಶಕ ಬೇಕಾಯಿತು. ಈಜಿದರು, ಮತ್ತೂ ಈಜಿದರು. ಕಲಾ ಬದುಕಿನಲ್ಲಿ ದಡ ಸೇರುವುದು ಎನ್ನುವುದು ದೂರದ ಮಾತು. ಈಜುತ್ತಾ ಇರಬೇಕು. ಸುಸ್ತಾಗಬೇಕು. ಸುಸ್ತು ವೈರಾಗ್ಯದತ್ತ ಹೊರಳಬೇಕು. ಆಗಲೇ ಆನಂದ. ಸಾರ್ಥಕ್ಯದ ಭಾವ.
              ಸಂತೃಪ್ತ ಭಾವ - ಕಲಾವಿದ, ಪ್ರೇಕ್ಷಕ ಇಬ್ಬರಲ್ಲೂ ಏಕಕಾಲಕ್ಕೆ ಮೂಡುವ ಒಂದು ಸ್ಥಿತಿ. ಗೋವಿಂದ ಭಟ್ಟರ ಪಾತ್ರಗಳು ಅಂತಹ ಭಾವಗಳನ್ನು ಹುಟ್ಟುಹಾಕಿವೆ. ಅದನ್ನು ಪಾತ್ರ ಎನ್ನುವುದಕ್ಕಿಂತ ಶಿಲ್ಪ ಎಂದರೆ ಚೆಂದ. ಶಿಲ್ಪ ಮಾತನಾಡುವುದಿಲ್ಲ. ಅದು ಮೌನದಲ್ಲಿ ಹಲವು ಭಾವಗಳನ್ನು ಸೃಷ್ಟಿಸುತ್ತದೆ. ಭಟ್ಟರ ಪಾತ್ರಶಿಲ್ಪವೂ ಹಾಗೆ. ಮಾತನಾಡಬೇಕಾಗಿಲ್ಲ, ಭಾವ ಸ್ಫುರಿಸುತ್ತವೆ. ಶಿಲ್ಪವೇ ನಮ್ಮೊಳಗೆ ಇಳಿದು ಮಾತನಾಡಲು ಶುರು ಮಾಡುತ್ತವೆ.
                ಇವರಿಗೆ 'ಪೂರ್ಣಾವತಾರಿ' ಎನ್ನುವ ಪದ ಒಪ್ಪುತ್ತದೆ. ರಂಗದಲ್ಲಿ ದುಡಿಯುವ ಓರ್ವ 'ತಾನು ಕಲಾವಿದನಲ್ಲ' ಎಂದೆನ್ನಬೇಕಾದರೆ ಅದು ತಪಸ್ಸು! ಕಾಲದ ರೂಪಕ. ಕಾಲಸ್ಥಿತಿಯೊಂದಿಗೆ ಮನಃಸ್ಥಿತಿಯ ಮಿಳಿತ. ತನ್ನ ವೃತ್ತಿಯೊಳಗೆ 'ವೇಷ ಮಾಡುವುದು' ಎನ್ನುವ ಪ್ರಕ್ರಿಯೆ ಮಾತ್ರವಲ್ಲ, ಅದರಾಚೆಗೆ ಸಮಗ್ರ ರಂಗವನ್ನು ನೋಡುವ ನೋಟವಿದೆಯಲ್ಲಾ, ಅದು ರಂಗ ನೀಡಿದ ಬೌದ್ಧಿಕತೆ. ಇಂತಹ ಪಕ್ವತೆಯ ರೂಢನೆಗೆ ಅರುವತ್ತಾರು ವರುಷ ಬೇಕಾಯಿತು.  'ಕಲಾವಿದನಾಗಬೇಕಾದರೆ ತಾನು ಯಕ್ಷಗಾನವೇ ಆಗಬೇಕು. ಆಗ ಪಾತ್ರಗಳು ಮನದೊಳಗೆ ಇಳಿಯುತ್ತವಷ್ಟೇ,' ಇದು ಗೋವಿಂದ ಭಟ್ಟರ ಸ್ವ-ರೂಢಿತ ವ್ಯಕ್ತಿತ್ವ. ಇಂತಹ ವ್ಯಕ್ತಿತ್ವ ರೂಢನೆಗೊಂಡಾಗ ಉಂಟಾಗುವುದೇ ನಿರ್ಲಿಪ್ತತೆ. ನಿಜ ಬದುಕು ನಿರ್ಲಿಪ್ತವಾಗದೆ ಕಲೆಯನ್ನು ಅನುಭವಿಸಲು ಸಾಧ್ಯವಿಲ್ಲ.
               ಒಂದೆಡೆ ಹೇಳುತ್ತಾರೆ - ಕಲಾವಿದರು ವೇಷ ಮಾಡುವುದು ಹೊಟ್ಟೆಪಾಡಿನ ವಿಚಾರ. ಅದು ವೃತ್ತಿ. ಆರಾಧನೆಯೂ ಅಲ್ಲ, ಸೇವೆಯೂ ಅಲ್ಲ. ನಾವೇ ಹೊಸೆದುಕೊಂಡ ವಿಶೇಷಣ. ನನ್ನ ಅಭಿಪ್ರಾಯದಂತೆ 'ಕಲಾವಿದ' ಎನ್ನುವ ಶಬ್ದಕ್ಕೆ ಅರ್ಹರು ಯಾರು? ರಂಗದ ಸರ್ವಾಂಗೀಣ ಅನುಭವ ಯಾರಲ್ಲಿ ಇದೆಯೋ ಆತ ಕಲಾವಿದ. ರಂಗದ ಒಂದೊಂದು ವಿಭಾಗದಲ್ಲಿ ಪರಿಣತನಾದವನಿಗೆ 'ರಂಗಕರ್ಮಿ’ ಎನ್ನುವ ಹೆಸರು ಒಪ್ಪುತ್ತದೆ. ಅದು ಹಿಮ್ಮೇಳ, ಮುಮ್ಮೇಳಕ್ಕೆರಡಕ್ಕೂ ಅನ್ವಯ.
ಬಹಳ ಕಾಲದಿಂದ ಭಟ್ಟರನ್ನು ನೋಡುತ್ತಿದ್ದೇನೆ. ವೇಷಗಳನ್ನು ಅನುಭವಿಸಿದ್ದೇನೆ. ಅರ್ಥಗಾರಿಕೆಯನ್ನು ಮೆಚ್ಚಿದ್ದೇನೆ. ಅವರೊಬ್ಬ ಯಕ್ಷಗಾನ ಕಂಡ 'ಅಪೂರ್ವ, ಅನನ್ಯ.' ಪಾತ್ರವು ತನ್ನ ಸೊಗಸಿಗಾಗಿ ಅವರೊಳಗೆ ಆವಾಹನೆಗೊಳ್ಳುತ್ತದೆ! ತನ್ನ ಸೌಂದರ್ಯವೃದ್ಧಿಗಾಗಿ ಅಪೇಕ್ಷಿಸುತ್ತದೆ. ನಿಜಗುಣವನ್ನು ಅಭಿವ್ಯಕ್ತಿಸಲು ಪ್ರೋತ್ಸಾಹಿಸುತ್ತಿದೆ.
                 ಈಚೆಗೆ ಚೌಕಿಗೆ ಪ್ರವೇಶವಾದರೆ ಸಾಕು, ರಂಗ ಮತ್ತು ಪಾತ್ರಗಳ ಬಗ್ಗೆ ಹಗುರವಾಗಿ ಮಾತನಾಡುವ ಸಾಕಷ್ಟು ಮಂದಿಯ ಪರಿಚಯವಿದೆ. ಗೋವಿಂದ ಭಟ್ಟರ ವ್ಯಕ್ತಿತ್ವದಲ್ಲೇ ರಂಗದ ಕುರಿತು ವಿಷಾದವಿಲ್ಲದ ನಿಲುವನ್ನು ನೋಡಿ ಆಶ್ಚರ್ಯಪಟ್ಟಿದ್ದೇನೆ. ಬದುಕನ್ನು ಮತ್ತು ರಂಗವನ್ನು ಅಧ್ಯಯನ ಮಾಡುತ್ತಾ ಬೆಳೆದ ಭಟ್ಟರ ಅಧ್ಯಯನಶೀಲ ಚಿಕಿತ್ಸಕ ದೃಷ್ಟಿ ಅಜ್ಞಾತ. ಅದು ಎಂದಿಗೂ ಎಂದೆಂದಿಗೂ ಮೌನ. ಮಾತಾದರೆ ಬೊಗಸೆಯಷ್ಟು ಮೊಗೆಯಬಹುದಷ್ಟೇ.
                ಒಂದು ಪಾತ್ರವೆಂದರೆ ಪದ್ಯಕ್ಕೆ ಕುಣಿದರಾಯಿತು, ಕುಣಿದ ಬಳಿಕ ಮಾತನಾಡಿದರಾಯಿತು ಎನ್ನುವ ವರ್ತಮಾನದ ಮನಃಸ್ಥಿತಿ ಇದೆಯಲ್ಲಾ, ಅದು ಗೋವಿಂದ ಭಟ್ಟರಿಗಿಂತ ಮಾರು ದೂರವಿದೆ. ಪದ್ಯದ ಒಂದೊಂದು ಪದಗಳ ಅಭಿನಯ ಪಾತ್ರಗಳಾಗುತ್ತದೆ. ರಂಗದಲ್ಲಿ ನಿಲ್ಲುವ ನಿಲುವು ಕೂಡಾ ಪಾತ್ರ. ಮಾತು ಕೂಡಾ ಒಂದು ಪಾತ್ರ. ಹೀಗೆ ಹಲವು ಪಾತ್ರಗಳ ಸಂಗಮವೇ ಗೋವಿಂದ ಭಟ್ಟರ ಪಾತ್ರಾಭಿವ್ಯಕ್ತಿ. ಹಾಗಾಗಿ ಅವರು ಪೂರ್ಣಾವತಾರಿ.
               ರಂಗಾಭಿವ್ಯಕ್ತಿ ಹೇಗಿರಬೇಕು ಎಂಬ ಕುಟುಕು ಪ್ರಶ್ನೆಯನ್ನು ಕೇಳಿದ್ದೆ, "ಅಭಿವ್ಯಕ್ತಿಗೆ ಪುರಾಣಗಳ ಓದು ಮುಖ್ಯ. ಪಾತ್ರಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಇದಕ್ಕೆ ನಮ್ಮ ಕಲ್ಪನೆಯನ್ನು ನಿರ್ಧಾರಗೊಳಿಸಿ ಮಿಳಿತಗೊಳಿಸಬೇಕು. ಬಳಿಕ ರಂಗದಲ್ಲಿ ಅಭಿವ್ಯಕ್ತಿಸಬೇಕು. ಪಾತ್ರದ ಸ್ವಭಾವ ತಿಳಿಯದೆ, ಅರ್ಥವಾಗದೆ ಅಭಿವ್ಯಕ್ತಿ ಅಸಾಧ್ಯ.  ಪುರಾಣ ಅಧ್ಯಯನ, ಅನುಭವಿಗಳ ಜತೆ ಮಾತುಕತೆ, ಹಿಂದಿನ ಕಲಾವಿದರ ಬೌದ್ಧಿಕತೆ ಇದನ್ನೆಲ್ಲಾ ಅಭ್ಯಸಿಸಬೇಕು. ನಾನು ಹಿಂದೆ ಹೇಳಿದ್ದನ್ನೇ ಪುನಃ ಅವರ್ತನೆ ಮಾಡ್ತೇನೆ - 'ಜನಜೀವನದಂತೆ ರಂಗ ಇರುತ್ತದೆ, ಇರಬೇಕು.' ಅದನ್ನು ಪುರಾಣಗಳ ಪಾತ್ರಗಳಲ್ಲಿ ಧ್ವನಿಸುತ್ತೇವೆ ಅಷ್ಟೇ. ಉದಾಃ ರಾಮ ಹೇಗಿರಬೇಕು? ನಾವು 'ನಮ್ಮ ತಂದೆ ತಾಯಿಗಳ ಜತೆ ಹೇಗಿರುತ್ತೇವೆ' ಎನ್ನುವ ಭಾವ ಇದೆಯಲ್ಲಾ, ಇದು ಅಭಿನಯಕ್ಕೆ ಮೂಲ.
              ತೆಂಕುತಿಟ್ಟು ರಂಗದಲ್ಲಿ 'ಪುರಾಣ ಪಾತ್ರ ಹೇಗಿರಬೇಕು' ಎನ್ನುವುದಕ್ಕೆ ಗೋವಿಂದ ಭಟ್ಟರ ವೇಷಗಳನ್ನು ತೋರಿಸುವಷ್ಟು ರಂಗದೊಳಗೆ ಆಳವಾಗಿ ಇಳಿದು ಬೇರು ಬಿಟ್ಟಿದ್ದಾರೆ. ಆ ಬೇರಿನ ತಾಯಿ ಬೇರು ಗಟ್ಟಿಯಾಗಿದೆ. ಗಟ್ಟಿಗರೊಂದಿಗೆ ಬೆಳೆದ ಬೌದ್ಧಿಕತೆಯು ಹುಟ್ಟು ಹಾಕಿದ ಸ್ಥಿತಿಯಿದು. ಹೊಗಳಿಕೆಯನ್ನು ನವಿರಾಗಿ ಬದಿಗೆ ಸರಿಸುವ, ಅಪ್ಪಟ ವಿಮರ್ಶೆಗೆ ಕಿವಿ ತೆರದುಕೊಳ್ಳುತ್ತಾ, ತೆಗಳಿಕೆಯನ್ನು ತನಗೆ ಸಂಬಂಧಪಟ್ಟದ್ದಲ್ಲ ಎಂದು ಪ್ರತ್ಯಪ್ರತ್ಯೇಕವಾಗಿ ವಿಭಾಗಿಸಿ ನೋಡಲು ಗೋವಿಂದ ಭಟ್ಟರಿಗೆ ಅರುವತ್ತಾರು ವರುಷ ಬೇಕಾಯಿತು.
               ಯಕ್ಷಗಾನ ಕ್ಷೇತ್ರದಲ್ಲಿ ಅರುವತ್ತು ತಿರುಗಾಟ ಎನ್ನುವುದು ಹಿರಿದಾದ ವಿಚಾರ. ಬಣ್ಣದ ಬದುಕಿನ ಐದು ವರುಷ, ಹತ್ತು ವರುಷ, ವಿಂಶತಿ, ರಜತ, ಸುವರ್ಣ.. ಹೀಗೆ ಹಲವು ರಂಗ ಸಂಭ್ರಮಗಳನ್ನು ಆಚರಿಸಿದ ಕಲಾವಿದರೆಲ್ಲರಿಗೂ ಗೋವಿಂದ ಭಟ್ಟರು ಆದರ್ಶ. ಈಗ ಗೋವಿಂದ ಭಟ್ಟರು ಹೊಸ ಆದರ್ಶವೊಂದರ ಸ್ಥಾಪನೆಗೆ ಹೆಜ್ಜೆ ಊರಿದ್ದಾರೆ. 'ತನಗೆ ಸಂಮಾನ ಸಾಕು' ಎನ್ನುವ ಸಂದೇಶದೊಂದಿಗೆ ಹೊಸದಾದ ಹಾದಿ ತೆರೆದಿದ್ದಾರೆ. ತನ್ನ ಏಳ್ಗೆಗೆ ಸಮ್ಮನಸ್ಸಿನ ಶಿಲ್ಪಿಗಳಾಗಿರುವವರನ್ನು ಸ್ವತಃ ಗೌರವಿಸುವ ಪರಿಪಾಠಕ್ಕೆ ಶ್ರೀಕಾರ. ಮನದ ಭಾವವನ್ನು ಮಾತಿಗೆ ಸೀಮಿತಗೊಳಿಸದೆ ಅದಕ್ಕೆ ಸಾಕಾರತೆಯನ್ನು ತರುವ ನಿರ್ಧಾರ. ಇದಕ್ಕಾಗಿ ಉಜಿರೆಯ ಜನಾರ್ದನ ದೇವಸ್ಥಾನದಲ್ಲಿ ವೇದಿಕೆ ಸಜ್ಜಾಗಿದೆ. ಮೇ 21, 22ರಂದು ದಿನಪೂರ್ತಿ 'ಗೋವಿಂದ ಕಲಾಭಾವಾರ್ಪಣಂ' ಕಲಾಪ.
             ಡಾ.ವೀರೇಂದ್ರ ಹೆಗ್ಗಡೆ ದಂಪತಿಗೆ 'ಕಲಾಭಾವಾರ್ಪಣಂ ಗೌರವ', ಹರ್ಶೇಂದ್ರ ಕುಮಾರ್ ದಂಪತಿಗೆ 'ಕಲಾಜೀವನ ಗೌರವ', ಟಿ.ಶ್ಯಾಮ ಭಟ್ ದಂಪತಿಗೆ 'ಕಲಾಧರ್ಮ ಗೌರವ', ಕುರಿಯ ವೆಂಕಟ್ರಮಣ ಶಾಸ್ತ್ರಿಗಳಿಗೆ 'ಗುರು ಕುರಿಯ ಸ್ಮೃತಿ ಗೌರವ', ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರಿಗೆ 'ಆದ್ಯ ಪೋಷಕ ಸ್ಮೃತಿ ಗೌರವ,' ಪ್ರದಾನ. ಇವರೆಲ್ಲಾ ಗೋವಿಂದ ಭಟ್ಟರ ಕಲಾಯಾನಕ್ಕೆ ತುಂಬು ಬೆಂಬಲ, ಪ್ರೋತ್ಸಾಹವನ್ನು ನೀಡಿದ ಕಾರಣವೇ ಯಕ್ಷರಂಗದಲ್ಲಿ 'ಪೂರ್ಣಾವತಾರಿ'ಯಾಗಲು ಸಾಧ್ಯವಾಯಿತು.
               ಗೋವಿಂದ ಭಟ್ಟರಿಗೆ ಎಪ್ಪತ್ತೇಳು. ಕಾಲದ ಓಟಕ್ಕೆ ಗೋವಿಂದಣ್ಣ ತಲೆ ಬಾಗಿದ್ದಾರೆ. ಕಲೆಯ ನಿಷ್ಠತೆಯನ್ನು, ಮೇಳ ನಿಷ್ಠತೆಯನ್ನು ಮೆರೆದಿದ್ದಾರೆ.  'ನನಗೆ ರಂಗವೇ ಉಸಿರು' ಎಂದಿದ್ದ ಅವರ ಮಾತು ನಿತ್ಯ ಕಾಡುತ್ತದೆ.
ಚಿತ್ರ : ರಾಮ್ ನರೇಶ್ ಮಂಚಿ

Friday, August 18, 2017

ಆರದ ನೆನಪಿನ ಒರತೆ

ಪ್ರಜಾವಾಣಿಯ ದಧಿಗಿಣತೋ ಅಂಕಣ  / 7-4-2017
               ಕೊಲ್ಲೂರು ಸನಿಹದ ವಂಡ್ಸೆಯ ನಾರಾಯಣ ಗಾಣಿಗರು ರಂಗದಿಂದ ನಿವೃತ್ತಿಯಾಗಿ ಮೂರು ದಶಕ ಮೀರಿತು. ಈಗವರ ವಯಸ್ಸು ಎಂಭತ್ತು. ಸುಮಾರು ನಾಲ್ಕು ದಶಕದ ಬಣ್ಣದ ನಂಟು. ಬಾಲ್ಯದಿಂದಲೇ ಯಕ್ಷಗಾನವು ಹೊಟ್ಟೆಪಾಡಿನ ವಿಚಾರ. ಆದರೆ ಅದಕ್ಕೊಂದಿಷ್ಟು ಬದ್ಧತೆಯ ಥಳಕು.
          ಕಳೆದ ದಶಂಬರದಲ್ಲಿ ’ಪಾತಾಳ ಪ್ರಶಸ್ತಿ’ ಪ್ರಕ್ರಿಯೆಗಾಗಿ ಅವರ ಮನೆ ಸೇರಿದಾಗ ಕಳೆದ ಕಾಲದ ಕಥನವನ್ನು ಮಾತಿಗಿಳಿಸುವ ಉತ್ಸಾಹದಲ್ಲಿದ್ದರು. ಕೇಳುವ ಕುತೂಹಲ ನನಗಿತ್ತು. ಸೋಸಿ ಅದನ್ನಿಲ್ಲಿ ಪೋಣಿಸಿದ್ದೇನೆ. ”ಸಿನೆಮಾವು ಕಲೆ, ಯಕ್ಷಗಾನವೂ ಕಲೆ. ಸರಕಾರದವರು ಸಿನಿಮಾದವರಿಗೆ ಎಷ್ಟೊಂದು ಮಾನ್ಯತೆ ಕೊಡುತ್ತಾರೆ. ಪ್ರಶಸ್ತಿಗಳನ್ನು ನೀಡುತ್ತಾರೆ. ಯಕ್ಷಗಾನ ಕಲಾವಿದರೆಂದರೆ ಯಾಕೆ ಅಸಡ್ಡೆ. ಇದು ಪ್ರಾಚೀನ ಕಲೆಯಲ್ವಾ. ಸರಕಾರಕ್ಕೆ ಈ ವಿಚಾರವನ್ನು ತಿಳಿಸುವವರು ಯಾರು? ತಿಳಿಸಬೇಕಾದವರಿಗೆ ಪುರುಸೊತ್ತಿಲ್ಲ, ಅಗತ್ಯವೂ ಇಲ್ಲ,’ ಎಂದು ವಿಷಾದದಿಂದ ಮಾತಿಗಿಳಿದರು:-
            ಮಾರಣಕಟ್ಟೆ ಮೇಳದಿಂದ ನನ್ನ ರಂಗ ವ್ಯವಸಾಯ ಆರಂಭ. ಕೋಡಂಗಿ, ಬಾಲಗೋಪಾಲ, ಸ್ತ್ರೀವೇಷ.. ಹೀಗೆ ಹಂತಹಂತವಾಗಿ ಬೆಳೆದೆ. ಆಗ ಬಹುಶಃ ಹತ್ತೋ ಹನ್ನೊಂದು ವರುಷ. 'ಸಣ್ಣ ಹುಡುಗ, ಇವನಿಗೇನು ಖರ್ಚು ಇದೆ' ಎಂದು ಯಜಮಾನರಿಗೆ ತೋಚಿರಬೇಕು! ಊಟಕ್ಕೆ ತೊಂದರೆಯಿರಲಿಲ್ಲ. ಹನ್ನೆರಡು ವರುಷ ಒಂದೇ ಮೇಳದಲ್ಲಿ ದುಡಿದೆ. ನಂತರ ದಿ.ಕೆರೆಮನೆ ಶಿವರಾಮ ಹೆಗಡೆಯವರ ಯಜಮಾನಿಕೆಯ ಇಡಗುಂಜಿ ಮೇಳಕ್ಕೆ ಹೋದೆ. ಆಗಲೇ ಸ್ತ್ರೀಪಾತ್ರಧಾರಿಯಾಗಿ ತಯಾರಾಗಿದ್ದೆ.
               ತೆಂಕುತಿಟ್ಟಿನಲ್ಲಿ ತಿರುಗಾಟ ಮಾಡಬೇಕು ಎನ್ನುವ ಉಮೇದು ಇತ್ತು. ಕುಂಡಾವು, ಕೂಡ್ಲು, ಸುರತ್ಕಲ್, ಧರ್ಮಸ್ಥಳ ಮೇಳಗಳಲ್ಲಿ ಅವಕಾಶ ಸಿಕ್ಕಿತು. ವೇಷಧಾರಿ ಶ್ರುತಿಯಲ್ಲಿ ಮಾತನಾಡಿದರೆ ಅಗರಿ ಶ್ರೀನಿವಾಸ ಭಾಗವತರಿಗೆ ಇಷ್ಟವಾಗುತ್ತಿತ್ತು. 'ಶ್ರುತಿಯಲ್ಲಿ ಮಾತನಾಡಿದರೆ ರಂಗಸ್ಥಳ ತುಂಬಿ ಬರುತ್ತದೆ. ಪ್ರೇಕ್ಷಕರನ್ನು ವಶೀಕರಿಸುತ್ತದೆ' ಎನ್ನುತ್ತಿದ್ದರು. ನನಗೆ ಹಿಮ್ಮೇಳದ ಜ್ಞಾನವಿದ್ದುದರಿಂದ ಶ್ರುತಿಯಲ್ಲಿ ಮಾತನಾಡಲು ಕಷ್ಟವಾಗಲಿಲ್ಲ. 'ಚಂದ್ರಮತಿ, ದಮಯಂತಿ' ಪಾತ್ರಗಳನ್ನು ಮಾಡಿ ಎಷ್ಟೋ ಬಾರಿ ರಂಗದಲ್ಲಿ ಅತ್ತಿದ್ದೇನೆ. ಪ್ರೇಕ್ಷಕರೂ ಅತ್ತುದನ್ನು ಗಮನಿಸಿದ್ದೇನೆ. ಪಾತ್ರ ತನ್ಮಯತೆಗೆ ಪೂರಕವಾದ ಹಿಮ್ಮೇಳಗಳು ತೆಂಕಿನಲ್ಲಿ ನನಗೆ ಪೂರಕವಾಗಿ ಒದಗಿದ್ದುದರಿಂದ ಪರಿಣಾಮಕಾರಿಯಾಗಿ ಪಾತ್ರಗಳನ್ನು ನಿರ್ವಹಿಸುವುದಕ್ಕೆ ಸಾಧ್ಯವಾಯಿತು.
ಹಾಸ್ಯಗಾರ ಪೆರುವೋಡಿ ನಾರಾಯಣ ಭಟ್ಟರು ಮತ್ತು ನಾನು ಹಲವು ಬಾರಿ ರಂಗದಲ್ಲಿ ಜತೆಯಾಗಿದ್ದೇವೆ. ನಿಜವಾದ ರಂಗಸುಖವನ್ನು ತೆಂಕಿನಲ್ಲಿ ಅನುಭವಿಸಿದ್ದೇನೆ. ಬಡಗು ತಿಟ್ಟಿನಿಂದ ತೆಂಕಿಗೆ ಬರುವಾಗ ನಾಟ್ಯ ವಿಭಾಗದಲ್ಲಿ ಸಮಸ್ಯೆಯಾಗಿತ್ತು. ತಾಳದ ಮುಕ್ತಾಯದಲ್ಲಿ ಮಾತ್ರ ವ್ಯತ್ಯಾಸವಷ್ಟೇ. ಕಡತೋಕ ಮಂಜುನಾಥ ಭಾಗವತರು, ಕುದ್ರೆಕೋಡ್ಲು ರಾಮ ಭಟ್ಟರು ನಾಟ್ಯವನ್ನು ತಿದ್ದಿದರು.
                 ಶೇಣಿ ಗೋಪಾಲಕೃಷ್ಣ ಭಟ್ಟರ ಜತೆ ವೇಷ ಮಾಡಿದ್ದೇನೆ. 'ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ' ಪ್ರಸಂಗದಲ್ಲಿ ಅವರ 'ದಾರಿಕಾಸುರ', ನನ್ನದು 'ರಂಭಾಮಣಿ'ಯ ಪಾತ್ರ. ಚಕ್ರಾಪಹಾರ ಆದಾಗ ದಾರಿಕಾಸುರ ಬಂದು ಪ್ರಶ್ನಿಸುತ್ತಾನೆ. ಅದಕ್ಕೆ ರಂಭಾಮಣಿ ಉತ್ತರ ಹೇಳುವ ಸಂದರ್ಭದ ಪದ್ಯಕ್ಕೆ ಅಂದು ಸ್ವಲ್ಪ ಹೆಚ್ಚೇ ಕುಣಿದಿದ್ದೆ. ಆಗ ಶೇಣಿಯವರು 'ಏ ತಡಿಯೇ, ನಾನು ಕೇಳಿದ್ದು ಚಕ್ರ, ನೀನು ಕುಣಿಯುತ್ತಿಯಲ್ಲಾ.. ಎಂದು ನೇರವಾಗಿ ಛೇಡಿಸಿದ್ದರು. ನನಗದು ಪಾಠವಾಗಿತ್ತು.
ಗುರು ವೀರಭದ್ರ ನಾಯಕರಲ್ಲಿ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದೇನೆ. ಕಲಾವಿದನಿಗೆ ಗುರುಪಾಠ ಮುಖ್ಯ. ಗುರುಪಾಠದ ಮೂಲಕ ಬೆಳೆದರೆ ಯಾವ ರಂಗದಲ್ಲೂ ಧೈರ್ಯದಿಂದ ಪಾತ್ರ ನಿರ್ವಹಿಸಬಹುದು. ಅಭ್ಯಾಸ ಮಾಡದೆ ರಂಗವನ್ನೇರಬಾರದು. ಇದು ಕಲೆಗೆ ಮಾಡುವ ದ್ರೋಹ.
               'ಕಲೆ ಹಾಳಾಗಿದೆ' ಎಂದು ಹಲವರು ಮಾತನಾಡುವುದನ್ನು ಕೇಳುವಾಗ ಮರುಕವಾಗುತ್ತದೆ. ಕಲೆಗೆ ಸಾವಿಲ್ಲ. ಅದು ಅವಿನಾಶಿ. ನಾವು ಕಲೆಯನ್ನು ಬೇಕಾದಂತೆ ಹಿಂಜಿದ್ದೇವೆ. ನಮಗೆ ಬೇಕಾದಂತೆ ಬದಲಾಯಿಸಿದ್ದೇವೆ. ಅದರ ಒಂದೊಂದು ಅಂಗವನ್ನು ಊನ ಮಾಡಿದ್ದೇವೆ.
             ನಾನು ನಿವೃತ್ತನಾಗುವ ಹೊತ್ತಿಗೆ 'ಕಾಲಮಿತಿ' ಎನ್ನುವುದು ಇರಲಿಲ್ಲ. ಈಗಿನ ವಾತಾವರಣಕ್ಕೆ ಅನಿವಾರ್ಯವೆಂದು ಬಿಂಬಿಸುತ್ತಾರೆ. ಆದರೆ ಅರ್ಧ ರಾತ್ರಿಯ ಬಳಿಕ ಪ್ರೇಕ್ಷಕ ಎಲ್ಲಿಗೆ ಹೋಗಬೇಕು? ಪೇಟೆಯಲ್ಲಾದರೆ ವ್ಯವಸ್ಥೆಗಳಿರುತ್ತವೆ. ಹಳ್ಳಿಗಳಲ್ಲಿ? ರಾತ್ರಿಯಿಡೀ ಆಟ ನೋಡಿ ಅಭ್ಯಾಸವಾದ ಪ್ರೇಕ್ಷಕನಿಗೆ ಕಾಲಮಿತಿ ಪ್ರದರ್ಶನಗಳನ್ನು ತಾಳಿಕೊಳ್ಳಲು ಕಷ್ಟವಾಗುತ್ತದೆ.
              ಈಗ ಕಲಾವಿದರಿಗೆ ಆರ್ಥಿಕ  ಸವಲತ್ತುಗಳು ಬಂದಿವೆ. ಸ್ವಂತದ್ದಾದ ವಾಹನಗಳನ್ನು ಹೊಂದಿದ್ದಾರೆ. ಆದರೆ ಒಂದು ಹೊತ್ತು ಊಟಕ್ಕೆ ಪರದಾಡುವ ಕಲಾವಿದರು ಎಷ್ಟು ಮಂದಿ ಬೇಕು? ಬೇಸಿಗೆಯಲ್ಲಿ ಆಟದಿಂದ ಜೀವನ ಮಾಡಿದರೆ, ಮಳೆಗಾಲದಲ್ಲಿ ಇತರ ಕೂಲಿ ಕೆಲಸಕ್ಕೆ ಹೋಗುವ ಕಲಾವಿದರ ಸಂಖ್ಯೆ ಅಗಣಿತ. ಇವರಿಗೆ ಹೊಟ್ಟೆಪಾಡು ಮುಖ್ಯ. ಇವರಿಂದ ನೀವು ರಂಗಕ್ಕೆ ಕೊಡುಗೆಯನ್ನು ನಿರೀಕ್ಷಿಸುವಂತಿಲ್ಲ. ಕಳೆದ ವರುಷ ಏನು ರಂಗದಲ್ಲಿ ಅರ್ಥ ಹೇಳಿದ್ರೋ, ಈ ವರುಷವೂ ಅದರದ್ದೇ ಮರುಕಳಿಕೆ. ಎಷ್ಟೋ ಮಂದಿ ಪ್ರೇಕ್ಷಕರಿಗೆ ಇಂತಹ ಕಲಾವಿದ ಏನು ಅರ್ಥ ಹೇಳ್ತಾನೆ ಎನ್ನುವುದೂ ಕಂಠಸ್ತವಾಗಿರುತ್ತದೆ!
                 ಪಾತ್ರಾಭಿವ್ಯಕ್ತಿಯಲ್ಲಿ ಭಾವನೆಗಳು ದೂರವಾಗಿವೆ. ಪಾತ್ರಗಳು ಭಾವನಾತ್ಮಕವಾಗಿ ಕಾಣಿಸಿಕೊಂಡರೆ ಪ್ರೇಕ್ಷಕನೊಳಗೂ ಅದು ರಸಸೃಷ್ಟಿಯನ್ನು ಮಾಡುತ್ತದೆ. ಪ್ರೇಕ್ಷಕನನ್ನು ಹಿಡಿದಿಡುವುದು ಕಲಾವಿದನ ಕರ್ತವ್ಯ. ದಿವಂಗತ ಮಹಾಬಲ ಹೆಗಡೆಯವರು 'ಅಶ್ವತ್ಥಾಮ' ಪಾತ್ರ ವಹಿಸಿ ಪ್ರೇಕ್ಷಕರ ಮಧ್ಯೆ ಓಡಿ ಹೋಗುವ ಸಂದರ್ಭದಲ್ಲಿ ಪ್ರೇಕ್ಷಕರೇ ಹಿಡಿದು ಕೊಟ್ಟ ದೃಷ್ಟಾಂತ ಬಹಳಷ್ಟಿದೆ! ಹರಿಶ್ಚಂದ್ರ ಚರಿತೆ ಪ್ರಸಂಗದಲ್ಲಿ ’ಚಂದ್ರಮತಿ’ ಅಳುತ್ತಿರುವಾಗ, ಈ ದುಃಖ ನೋಡಲು ನಾವು ಆಟಕ್ಕೆ ಬರಬೇಕಾ, ನಮಗೆ ಸಹಿಸುವುದಕ್ಕೆ ಆಗುವುದಿಲ್ಲ, ನಾವು ಹೋಗುವ' ಎಂದು ದುಃಖ ತಡೆಯದೆ ಅರ್ಧದಿಂದ ಎದ್ದು ಹೋದವರೂ ಇದ್ದಾರೆ. ಇಂತಹ ರಸಸೃಷ್ಟಿಯ ಕಾಲಘಟ್ಟದಲ್ಲಿ ನಿವೃತ್ತಿ ಹೊಂದಿದೆ.
               ಡಾ.ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿದ್ದೇನೆ ಎನ್ನಲು ಹೆಮ್ಮೆ. ತುಂಬಾ ನಿಯತ್ತಿನ, ಶಿಸ್ತಿನ ಮನುಷ್ಯ. ಅವರ ತರಬೇತಿಗೆ ಹೋಗುವುದೆಂದರೆ ಹೆದರಿಕೆ. ಸ್ವಲ್ಪ ತಪ್ಪಿದರೂ ಗದರುತ್ತಿದ್ದರು. ಸ್ವತಃ ಕುಣಿತು ಕಲಿಸುತ್ತಿದ್ದರು. ಅವರ ಊಹನೆಯ ಮಟ್ಟಕ್ಕೆ ಕಲಾವಿದ ಬೆಳೆಯುವಲ್ಲಿಯ ತನಕ ಕಲಿಸಿ ಕೊಡುತ್ತಾರೆ. ಅವರ ಬ್ಯಾಲೆ ತಂಡದಲ್ಲಿ ಐದು ವರುಷ ದುಡಿದಿದ್ದೇನೆ. ವಿದೇಶಕ್ಕೂ ಹಾರಿದ್ದೇನೆ. ಖುಷಿ ಪಟ್ಟಿದ್ದೇನೆ. ಕಲಾವಿದನ ಬೆಳವಣಿಗೆಗೆ ಶ್ರದ್ಧೆ, ಭಕ್ತಿ ಮತ್ತು ಹೆದರಿಕೆ ಮುಖ್ಯ ಎನ್ನುವುದನ್ನು ಮನಗಂಡಿದ್ದೇನೆ.
                  ಮೊದಲು ಸ್ತ್ರೀಪಾತ್ರಗಳಿಗೆ ಶಿರೋಭೂಷಣ ಇರಲಿಲ್ಲ. ಸಮಾಜದ ಮಧ್ಯೆ ಇರುವ ಸಾಮಾನ್ಯ ಸ್ತ್ರೀಯರಂತೆ ಪುರಾಣದ ಪಾತ್ರಗಳು ರಂಗಕ್ಕೆ ಬರುತ್ತಿದ್ದುವು. ಈ ರೀತಿಯ ವೇಷಗಳು ರಂಗಕ್ಕೆ ಆಗಮಿಸಿದರೆ ಕಾರಂತರಿಗೆ ಸಹ್ಯವಾಗುತ್ತಿರಲಿಲ್ಲ. ತಿರುಗಿ ಕುಳಿತುಕೊಳ್ಳುತ್ತಿದ್ದರು. ಅವರ ಬ್ಯಾಲೆ ತಂಡದಲ್ಲಿ ಸ್ತ್ರೀಪಾತ್ರಕ್ಕೆ ಶಿರೋಭೂಷಣ ಧರಿಸುವಂತೆ 'ಆರ್ಡರ್' ಮಾಡಿದ್ದರು.
                ಮಂದಾರ್ತಿ ಮೇಳದ ತಿರುಗಾಟದಲ್ಲಿದ್ದಾಗ ದೃಷ್ಟಿ ದೋಷ ಬಂದು ಮೇಳಕ್ಕೆ ವಿದಾಯ ಹೇಳಿದೆ. ಸ್ವಲ್ಪ ಕಾಲ ಹವ್ಯಾಸಿ ಆಟಗಳಲ್ಲಿ ಭಾಗವಹಿಸುತ್ತಿದ್ದೆ. ಈಗಂತೂ ಪೂರ್ತಿಯಾಗಿ ನಿವೃತ್ತ. ವರುಷ ಎಂಭತ್ತಾಯಿತು. ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಈಗಿನ ಯಕ್ಷಗಾನದ ವೈಭವವನ್ನು ಕೇಳಲು ಖುಷಿಯಾಗುತ್ತದೆ. ಇದರಿಂದ ನಿಜವಾಗಿಯೂ ಯಕ್ಷಗಾನವು ವೈಭವಗೊಂಡಿದೆಯೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

Friday, August 11, 2017

ರಂಗ ಪ್ರಿನ್ಸಿಪಲ್ ತುಂಬಿದ ಪ್ರಿನ್ಸಿಪಾಲ್

ಪ್ರಜಾವಾಣಿಯ ದಧಿಗಿಣತೋ ಅಂಕಣ / 28-4-2017
  
            ಕುರಿಯ ಗಣಪತಿ ಶಾಸ್ತ್ರಿಗಳು ರಂಗದಲ್ಲಿ ಪ್ರಿನ್ಸಿಪಾಲ್!
           ಹತ್ತಿರದಿಂದ ಬಲ್ಲ ಪದ್ಯಾಣ ಶಂಕರನಾರಾಯಣ ಭಟ್ಟರು ಐದು ಪದಗಳಲ್ಲಿ ಭಾಗವತ ಕುರಿಯರ ವ್ಯಕ್ತಿತ್ವವನ್ನು ಪೋಣಿಸುತ್ತಾರೆ. ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಯು ಪ್ರಿನ್ಸಿಪಾಲರಿಗೆ ಅಂಜುವಷ್ಟು ಬೇರಾರಿಗೂ ಅಂಜಲಾರ. ಅದು ಹುದ್ದೆಯ ಘನತೆ ಮತ್ತು ಆ ಹುದ್ದೆಗಿರಬೇಕಾದ ಪೂರ್ತಿ ಅರ್ಹತೆ ಆತನಲ್ಲಿದ್ದಾಗ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆ ವ್ಯಕ್ತಿತ್ವವೇ ವಿದ್ಯಾರ್ಥಿಗಳನ್ನು ಬಾಗಿಸುತ್ತದೆ.
           ಯಕ್ಷಗಾನದ ವಿಚಾರಕ್ಕೆ ಬಂದಾಗ ಕುರಿಯರು ನಿಜಾರ್ಥದಲ್ಲಿ ಪ್ರಿನ್ಸಿಪಾಲ್. ಅದು ಅವರ ರಂಗಾನುಭವ. ಸ್ಥಾಪಿಸಿದ ವೈಯಕ್ತಿಕ ಛಾಪು. ಭಾಗವತಿಕೆಯ ಪಡಿಮಂಚದಲ್ಲಿದ್ದರೆ ಕಲಾವಿದನ ಮತಿ ಸೂಕ್ಷ್ಮತೆಯತ್ತ ಜಾರುತ್ತದೆ. ಬುದ್ಧಿ ಜಾಗೃತವಾಗಿರುತ್ತದೆ. ತನಗೆ ಖುಷಿ ಬಂದಂತೆ ರಂಗವನ್ನಾಳುವುದಕ್ಕೆ ಅಸಾಧ್ಯವಾದಾಗ ಸ್ವ-ನಿಯಂತ್ರಣ ಕಲಾವಿದನಿಗೆ ಬಂದುಬಿಡುತ್ತದೆ.
           "ಕಲಾವಿದ ನನಗೆ ಭಯ ಪಡುವುದು ಬೇಡ. ರಂಗಕ್ಕೆ ಗೌರವ ಕೊಡಬೇಕು. ರಂಗಕ್ಕೆ ಭಯ ಪಡಬೇಕು. ರಂಗ ಅಂದರೆ ದೇವರ ಸ್ಥಾನ. ದೇವರ ಮುಂದೆ ನಾವು ಬಾಗಲೇ ಬೇಕಲ್ವಾ," ಭಯದ ವಿಚಾರ ಬಂದಾಗ ಶಾಸ್ತ್ರಿಗಳ ನಿಲುವು ಹೀಗೆ. ಭಾಗವತಿಕೆಗೆ ಮಾನ, ಪ್ರಾಣವನ್ನು ತುಂಬಿ ಎತ್ತರಕ್ಕೆ ಬೆಳೆದವರಿಂದ ಮಾತ್ರ ಇಂತಹ ನಿಲುಮೆ ಕಾಣಲು ಸಾಧ್ಯ.
              ತಾಳಮದ್ದಳೆಯಲ್ಲೂ ಕೂಡಾ ಕುರಿಯರ ನಿಯಂತ್ರಣ. ಒಮ್ಮೆ ವಿದ್ವಾಂಸರೇ ಅರ್ಥಧಾರಿಗಳಾಗಿರುವ ಕೂಟ. ಸಂಸ್ಕೃತ ಸೂಕ್ತಿಯೊಂದು ಅರ್ಥದ ಮಧ್ಯೆ ಹಾದು ಹೋದಾಗ ಕುರಿಯರು ತಕ್ಷಣ, 'ಏನದರ ಅರ್ಥ' ಎಂದು ಕೇಳಬೇಕೇ? ಒಂದು ಕ್ಷಣ ಆ ಆರ್ಥಧಾರಿ ಮೌನವಾದರು. ಸಭಾಸದರಲ್ಲೂ ಆಶ್ಚರ್ಯ. ಶ್ಲೋಕದ ಸೂಕ್ಷ್ಮಾರ್ಥವನ್ನು ಅರ್ಥಧಾರಿ ಹೇಳಿದ ಬಳಿಕ ಅರ್ಥ ಮುಂದುವರಿಯಿತು. ಪ್ರೇಕ್ಷಕರ ಸಾಲಿನಲ್ಲಿ ಪಂಡಿತರೂ ಇರುತ್ತಾರೆ. ಪಾಮರರೂ ಇರುತ್ತಾರೆ. ಎಲ್ಲರಿಗೂ ಅರ್ಥವಾಗುವುದು ಬೇಡ್ವೇ, ಎಂದಿದ್ದರು.
              ಈಚೆಗೆ 'ತ್ರಿಜನ್ಮ ಮೋಕ್ಷ' ಪ್ರಸಂಗದ ಕಾಲಮಿತಿ ಪ್ರದರ್ಶನ. ರಾತ್ರಿ ಎಂಟು ಗಂಟೆಗೆ ಆಟ ಶುರು. ಕುರಿಯರು 'ಹಿರಣ್ಯಕಶಿಪು' ಭಾಗಕ್ಕೆ ಭಾಗವತಿಕೆ. ಏಳುವರೆಗೆ ಚೌಕಿಯಲ್ಲಿ ಹಾಜರ್. ಅಂದು ನನಗೂ ಪಾತ್ರವಿತ್ತು. ಪದ್ಯ, ಅದಕ್ಕೆ ಹೇಳಬೇಕಾದ ಅರ್ಥ, ಭಾವಗಳು ಮೊದಲಾದ ವಿಚಾರಗಳನ್ನು ಹೇಳಿದ್ದರು. ಪ್ರಹ್ಲಾದ ಪಾತ್ರಧಾರಿ ಮೊಬೈಲ್ನ್ನು ಉಜ್ಜುವುದರಲ್ಲಿ ತಲ್ಲೀನನಾಗಿದ್ದ! ರಂಗದಲ್ಲಿ ಪಾತ್ರವು ಪರಿಣಾಮವಾಗಬೇಕಾದರೆ ಪ್ರಹ್ಲಾದ-ಕಯಾದು ಪಾತ್ರಗಳೆರಡರ ದಾರಿ ಸಮಾನವಾಗಿರಬೇಕು. "ಸರಿ, ನೀವು ಏನೋ ಕೇಳಿದ್ರಿ. ಇನ್ನೂ ಎಳೆಯವನಾದ ಆತನಿಗೆ ಮೊಬೈಲೇ ಸರ್ವಸ್ವ. ಏನು ಮಾಡುವುದಕ್ಕಾಗುತ್ತದೆ ಹೇಳಿ. ಪಾತ್ರಧಾರಿಯ ಬಳಿಗೆ ಭಾಗವತ ಹೋಗಿ ಸಮಾಲೋಚಿಸುವ ಕ್ರಮವಿಲ್ಲ. ಭಾಗವತ ಇದ್ದಲ್ಲಿಗೆ ಕಲಾವಿದ ಬಂದು ಪಾತ್ರದ ನಡೆಯ ಕುರಿತು ಮಾತನಾಡಬೇಕು. ಆಗ ಪ್ರದರ್ಶನ ಒಟ್ಟಂದವಾಗುತ್ತದೆ. ಇದು ಯಕ್ಷಶಿಸ್ತು. ಈ ಶಿಸ್ತನ್ನು ಕಿರಿಯರು, ಹಿರಿಯರು ಪಾಲಿಸಬೇಕು. ಅದು ಮೇಳದ ಕ್ರಮ," ಎಂದರು.
              ಕುರಿಯ ಶಾಸ್ತ್ರಿಗಳು ಹೇಳುತ್ತಿದ್ದಾಗ ವರ್ತಮಾನದ ಚೌಕಿಯ ವಿದ್ಯಮಾನಗಳು ರಾಚಿದುವು. ರಂಗದ ಬದ್ಧತೆಯಿದ್ದ ಭಾಗವತರು ಮೊದಲೇ ಚೌಕಿಯಲ್ಲಿ ಉಪಸ್ಥಿತರಿರುತ್ತಾರೆ. ಈಗಿನ 'ತಾರಾಮೌಲ್ಯ'(!) ಅಂಟಿಕೊಂಡ ಬಹುತೇಕರು ಅವರ ಭಾಗವತಿಕೆ ಇರುವ ಸಮಯ ಸನ್ನಿಹಿತವಾಗುವಾಗ ಮಾತ್ರ ಚೌಕಿಯಲ್ಲಿ ಪ್ರತ್ಯಕ್ಷ. ನಿತ್ಯವೂ ಒಂದೇ ಪ್ರಸಂಗವಾದರೆ ಓಕೆ. ಬೇರೆ ಪ್ರಸಂಗಗಳಾದರೆ ಪಾತ್ರಧಾರಿಗೆ ಹೇಳುವವರು ಯಾರು? ಅತ ಕೇಳುವುದು ಯಾರಲ್ಲಿ? ರಂಗಕ್ಕೆ ಭಾಗವತನೇ ನಿರ್ದೇಶಕ. ಆತನ ಸೂತ್ರಧಾರಿಕೆಯಲ್ಲಿ ಪ್ರಸಂಗ ಓಡುತ್ತದೆ. ಎಷ್ಟೋ ಸಂದರ್ಭಗಳಲ್ಲಿ ನೋಡಿದ್ದೇನೆ - ಪಾತ್ರವು ರಂಗ ಪ್ರವೇಶಿಸಲು ಇನ್ನೇನು ಐದಾರು ನಿಮಿಷ ಇರುವಾಗಲಷ್ಟೇ ಸಹ ಪಾತ್ರಧಾರಿಗಳಲ್ಲಿ ಮಾತನಾಡುವ, ಸಮಾಲೋಚಿಸುವ, ಚಡಪಡಿಸುವ ಕ್ಷಿಪ್ರ ವಿದ್ಯಮಾನಗಳು ಚೌಕಿಯಲ್ಲಿ ನಡೆಯುತ್ತಲೇ ಇರುತ್ತದೆ. ಕೊನೆಗೆ ರಂಗದಲ್ಲಿ ಪಾತ್ರವು ಏನೇನೋ ಆಗಿ ನಿರ್ಗಮಿಸುತ್ತವೆ.
                ಪ್ರಸಂಗದ ಪದ್ಯಗಳ ಭಾವ ಏನಿದೆಯೋ ಅದನ್ನು ಪಾತ್ರಧಾರಿಯಲ್ಲಿ ಕುರಿಯರು ನಿರೀಕ್ಷಿಸುತ್ತಾರೆ. ಪದ್ಯದ ಅರ್ಥ, ಭಾವಗಳು ರಂಗದಲ್ಲಿ ಅನಾವರಣಗೊಳ್ಳಬೇಕು. ಕಲಾವಿದನನ್ನು ಅಷ್ಟು ಗಾಢವಾಗಿ ಚೌಕಿಯಲ್ಲಿ ಸಿದ್ಧಗೊಳಿಸುತ್ತಾರೆ. ಒಂದೆರಡು ಬಾರಿ ತಪ್ಪಿದರೆ ಕ್ಷಮ್ಯ. ತಪ್ಪುವ ಚಾಳಿ ಉದಾಸೀನತೆಯಿಂದ ಮುಂದುವರಿದರೆ ಕುರಿಯರು ಕೆರಳುತ್ತಾರೆ. 'ವಿಷಯ ಹೇಳು ಮಾರಾಯ' ಎಂದು ಆತನನ್ನು ಹಳಿಗೆ ತರುತ್ತಾರೆ. ಹಿರಿಯ ಕಲಾವಿದರು ಅಬದ್ಧ ಮಾತನಾಡಿದರೆ ಕುರಿಯರಿಗೆ ಅಸಹನೆಯಾಗುತ್ತದೆ. ಅಂತಹ ಕಲಾವಿದನನ್ನು ಪದ್ಯ ಕೊಡದೆ ನೇಪಥ್ಯಕ್ಕೆ ಕಳುಹಿಸಿದ ಒಂದೆರಡು ಕ್ಷಣಗಳು ನೆನಪಾಗುತ್ತವೆ. ಪ್ರಸಂಗ, ಪಾತ್ರದ ಕುರಿತಾದ ಅವರ ಜ್ಞಾನ ಮತ್ತು ರಂಗದ ನಿಷ್ಠೆಗಳೇ ಕುರಿಯರ ಈ ವರ್ತನೆಗೆ ಕಾರಣ. ಪಾತ್ರದ ಅಭಿವ್ಯಕ್ತಿಯು ತೃಪ್ತಿಕರವಾಗಿ ಬಂದರೆ 'ಶಹಬ್ಬಾಸ್' ಎಂದು ರಂಗದಲ್ಲೇ ಪ್ರೋತ್ಸಾಹಿಸುತ್ತಾರೆ.
               ಸುಮಾರು ಹತ್ತು ವರುಷಗಳ ಕಾಲ ಶ್ರೀ ಕಟೀಲು ಮೇಳದಲ್ಲಿ ಕುರಿಯರು ಮತ್ತು ಪದ್ಯಾಣ ಶಂಕರನಾರಾಯಣ ಭಟ್ಟರು ಜತೆಗಿದ್ದರು. ಯಕ್ಷಗಾನಕ್ಕೆ ಎಷ್ಟು ಬೇಕೋ ಅಷ್ಟು ರಾಗಗಳು ಕುರಿಯರಿಗೆ ತಿಳಿದಿದ್ದುವು. ಯಕ್ಷಗಾನದ ಹೊರತಾಗಿ ಬೇರೇನನ್ನೋ ಮಾಡುವುದನ್ನು ವಿರೋಧಿಸುತ್ತಿದ್ದರು. ’ಭಾಗವತಿಕೆ ಅಂದರೆ ಸಂಗೀತ ಕಛೇರಿ ಅಲ್ಲ" ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಅವರದು ಭಾವಪೂರ್ಣವಾದ ಭಾಗವತಿಕೆ. ನಾವಿಬ್ಬರೂ ಹಗಲು ರಂಗದ ಬಗ್ಗೆ ಮಾತನಾಡುತ್ತಿರಲಿಲ್ಲ. ರಂಗದಲ್ಲೇ ಸಂದರ್ಭ ಬಂದಾಗಲೆಲ್ಲಾ ಬೇಕಾದ ಬದಲಾವಣೆಗಳನ್ನು ಮಾಡುತ್ತಿದ್ದೆವು. ಅಂತಹುಗಳು ಫಕ್ಕನೆ ಪ್ರೇಕ್ಷಕರಿಗೆ ಗೋತ್ತಾಗದು. ಮೌಖಿಕವಾದ ಮಾತುಕತೆಗಳು ವೇಷಧಾರಿಗೂ ತಿಳಿಯದು. ಹೀಗೆ ಎಷ್ಟೋ ಆವಿಷ್ಕಾರಗಳಾದುದುಂಟು. ಅವೆಲ್ಲಾ ಅನುಭವ ವೇದ್ಯ ಎಂದು ಮೇಳದ ಆ ದಿನಗಳ ಖುಷಿಯನ್ನು ಪದ್ಯಾಣರು ಹಂಚಿಕೊಳ್ಳುತ್ತಾರೆ.
               ಮೇಳದಲ್ಲಿದ್ದಾಗ ಕುರಿಯರು ಭಾಗವತರು ಮಾತ್ರವಲ್ಲ, ಕಲಾವಿದರ ಪಾಲಿನ ಆಪದ್ಭಾಂಧವ. ಕಲಾವಿದರ ಕಷ್ಟವನ್ನು ತನ್ನ ಕಷ್ಟವೆಂದು ಮೈಮೇಲೆ ಎಳೆದುಕೊಳ್ಳುವ ಗುಣ. ತನ್ನ ಮೇಳದ ಕಲಾವಿದನೊಬ್ಬನಿಗೆ ಅಸೌಖ್ಯವೆಂದು ತಿಳಿದರೆ ಸಾಕು, ಅವನಿಗೆ ಚಿಕಿತ್ಸೆ ಕೊಡಿಸಿ, ಮನೆಯ ತನಕ ತಲುಪಿಸಿದ ನಂತರವೇ ತನ್ನ ಮನೆಗೆ ಹೋಗುತ್ತಿದ್ದರು. ಅವನ ಯೋಗ-ಕ್ಷೇಮವನ್ನು ಹೊಣೆಯ ರೀತಿಯಂತೆ ವಿಚಾರಿಸುತ್ತಿದ್ದರು.  ಸಹಕಾರವನ್ನು ಮಾಡಿದ್ದುಂಟು. ಶಾಸ್ತ್ರಿಗಳ ಈ ರೀತಿಯ ಕೊಡುಗೆಗಳು ಯಕ್ಷಲೋದಲ್ಲಿ ಎಲ್ಲೂ ದಾಖಲಾಗಿಲ್ಲ. ಅದು ದಾಖಲಾಗುವುದು ಕುರಿಯರಿಗೂ ಇಷ್ಟವಾಗದ ಸಂಗತಿ. ಹೀಗೆ ಉಪಕಾರವನ್ನು ಪಡೆದ ಕಲಾವಿದರ ಸಂಖ್ಯೆ ದೊಡ್ಡದು. "ಹೌದು ಕಾರಂತಣ್ಣ, ಮೇಳ ಎನ್ನುವುದು ಮನೆಯಿದ್ದಂತೆ. ಕಲಾವಿದ ಮನೆಯ ಸದಸ್ಯ. ಒಬ್ಬ ಸದಸ್ಯನಿಗೆ ತೊಂದರೆಯಾದರೆ ಸ್ಪಂದಿಸುವುದು ಮಾನವೀಯತೆ ಅಲ್ವಾ. ಮಾನವೀಯತೆ ಇಲ್ಲದ ಬದುಕು ಬೇಕಾ? ನನಗೆ ದೇವರು ಕೊಡ್ತಾನೆ." ಎಂದಿದ್ದರು.
               ಮೇಳದಲ್ಲಿದ್ದಾಗ ಅತಿಥಿಗಳು ಬಂದರೆ ಕುರಿಯರು ಕರೆದು ಕರೆದು ಮಾತನಾಡಿಸಿದ್ದಾರೆ. ಚೌಕಿಯ ಸಂಪನ್ಮೂಲದಂತೆ ಚಹ, ತಿಂಡಿಗಳ ಆತಿಥ್ಯ ನೀಡಿದ್ದಾರೆ. ರಂಗದಲ್ಲೂ ಹಾಡಿದ್ದಾರೆ. ಪಾತ್ರದೊಂದಿಗೆ ಮಾತನಾಡಿದ್ದಾರೆ. ಹೀಗೆ ಯಕ್ಷಲೋಕದಲ್ಲಿ ಮಾತೇ ಮಾಣಿಕ್ಯವಾದ ಕುರಿಯರನ್ನು ನೋಡುತ್ತಿದ್ದೇನೆ - ಮಾತಿಗೆ ಮತಿಯೇ ಕಡಿವಾಣ ಹಾಕಿದೆ! ಮಾತನಾಡಿಸಿದರೆ ಮಾತ್ರ ಮನತುಂಬಿ ಮಾತನಾಡುತ್ತಾರೆ. "ಯಾರಿಗೆ ಬೇಕು ಮಾತು? ಎಲ್ಲರೂ ಮಾತನಾಡುವವರೇ?" ಎರಡು ವಾಕ್ಯದ ಯಕ್ಷ ಪ್ರಿನ್ಸಿಪಾಲರ ಮಾತಿನಲ್ಲಿ ವರ್ತಮಾನ ರಂಗದ ಕತೆಯಿದೆ-ವ್ಯಥೆಯಿದೆ. ತಲೆಮಾರು ಬದಲಾದಾಗ ರೂಪುಗೊಳ್ಳುವ ಯಕ್ಷ-ಮನಃಸ್ಥಿತಿಗೆ ಕುರಿಯರು ಬುದ್ಧಿಪೂರ್ವಕವಾಗಿ ಸ್ಪಂದಿಸುತ್ತಿಲ್ಲ. ಈಗಲೂ ಹಳೆಯ ಕುರಿಯರೇ ಕಣ್ತುಂಬಿಕೊಳ್ಳುತ್ತಾರೆ. ಯಾಕೆಂದರೆ ಅವರು ಯಕ್ಷ ಪ್ರಿನ್ಸಿಪಾಲ್. ಆ ಜವಾಬ್ದಾರಿ ಜಾಗದ ಬದ್ಧತೆಯು ಕಾಲಕಾಲಕ್ಕೆ ಬದಲಾಗುವುಂತಹುದಲ್ಲ ಎನ್ನುವ ಪ್ರಜ್ಞೆ ಜಾಗೃತವಾಗಿದೆ. ರಂಗದಿಂದ ತಾನು ದೂರ ಸರಿದಷ್ಟೂ ರಂಗವೇ ಹತ್ತಿರಕ್ಕೆ ಎಳೆದುಕೊಳ್ಳುತ್ತಿರುವುದು ಕುರಿಯರ ಈ ಜಾಗೃತಚಿತ್ತ ಗುಣದಿಂದ ಎಂದು ನಂಬಿದ್ದೇನೆ.    
(ಚಿತ್ರ : ಉದಯ ಕಂಬಾರ್ ನೀರ್ಚಾಲು)


Thursday, August 10, 2017

ಯಕ್ಷಾನಂದಕ್ಕೆ ಮೂರ್ತರೂಪ ನೀಡಿದ ಷಷ್ಟ್ಯಬ್ದ


ಪ್ರಜಾವಾಣಿಯ 'ದಧಿಗಿಣತೋ' ಅಂಕಣ  / 22-4-2017
  
               ಕಲೆ, ಕಲಾವಿದ, ಕಲಾಭಿವ್ಯಕ್ತಿ... ವಿಚಾರಗಳ ಸಿಹಿ-ಕಹಿಗಳನ್ನು ವೇದಿಕೆಗಳಲ್ಲಿ, ಪರಸ್ಪರ ಮಾತುಕತೆಗಳಲ್ಲಿ  ವಿಮರ್ಶಿಸುತ್ತೇವೆ. ಸರಿ-ತಪ್ಪುಗಳನ್ನೇ ಹೆಚ್ಚು ದಾಖಲಿಸುತ್ತೇವೆ. ಇದರಲ್ಲಿ ಕಲ್ಪಿತಕ್ಕೆ ಸಿಂಹಪಾಲು ಇಂತಹ ಸಂದರ್ಭಗಳಲ್ಲಿ ಸಂದಹೋದ ಹಿರಿಯರ ಅಭಿವ್ಯಕ್ತಿಗಳು ಧುತ್ತೆಂದು ನೆನಪಾಗುತ್ತದೆ. ಆ ಹಿರಿಯರ ಅಭಿವ್ಯಕ್ತಿ ನೋಡದವರೂ ಮಾತಿಗೆ ತೊಡಗುತ್ತಾರೆ. ಇಷ್ಟೆಲ್ಲಾ ಆಗುತ್ತಿರುವಾಗ ವರ್ತಮಾನದ ರಂಗವು ಅದರ ಪಾಡಿಗೆ ಇದ್ದುಬಿಡುತ್ತದೆ. ಅಭಿವ್ಯಕ್ತಿಗಳು ಕೂಡಾ ಯಾಂತ್ರಿಕವಾಗಿ ನಡೆಯುತ್ತಲೇ ಇರುತ್ತದೆ. ಅಭಿಮಾನಿಗಳ ಮತಿಯ ನೇರಕ್ಕೆ ಹೊಗಳಿಕೆ, ತೆಗಳಿಕೆಗಳಿಗೆ ಗರಿ ಮೂಡುತ್ತಾ ಇರುತ್ತದೆ.
               ಮತ್ತೊಂದೆಡೆ ಹವ್ಯಾಸಿ ರಂಗವು ಯಾರದ್ದೇ ಹಂಗಿಲ್ಲದೆ, ಹಂಗಿಗೂ ಬೀಳದೆ ಸದ್ದಿಲ್ಲದೆ ಬೆಳೆಯುತ್ತಿದೆ. ಮೇಳಗಳ ಹೊರತಾದ ಹವ್ಯಾಸಿ ಪ್ರದರ್ಶನಗಳ ಸಂಖ್ಯೆ ಅಗಣಿತ. ಹವ್ಯಾಸಿಗಳು ಅಂದಾಗ ಮೂಗು ಮುರಿಯಬೇಕಾದ್ದಿಲ್ಲ. ಹಗುರವಾಗಿ ಕಾಣಬೇಕಾದ್ದಿಲ್ಲ. ಅವರಲ್ಲಿ ಅಪ್ಪಟ ಯಕ್ಷಗಾನದ ಕಾಳಜಿಯಿದೆ ಎನ್ನುವುದನ್ನು ವೃತ್ತಿ ರಂಗಭೂಮಿ ಮರೆಯಕೂಡದು. ಸ್ವಲ್ಪವಾದರೂ ಸಾಮಾಜಿಕ ಸಂಪರ್ಕ, ಸಂಬಂಧಗಳ ಗಾಢತೆ, ಭಾವದ ತೇವಗಳು ಹಸಿಯಾಗಿ ಹವ್ಯಾಸಿ ರಂಗದಲ್ಲಿ ಕಾಣಬಹುದು. ಇವರಲ್ಲೆಂದೂ ಗೇಲಿ-ತಮಾಶೆ, ಪರದೂಷಣೆಗಳು ರಂಗಾನುಭವಕ್ಕೆ ಬಂಡವಾಳವಲ್ಲ.
               ೨೦೧೭ ಎಪ್ರಿಲ್  ೬ - ಕಾಸರಗೋಡು ಜಿಲ್ಲೆಯ ಶ್ರೀ ಮುಳಿಯಾರು ಕ್ಷೇತ್ರದಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ ಈ ವಿಚಾರಗಳು ನನ್ನ ಮನದೊಳಗೆ ರಿಂಗಣ ಹಾಕುತ್ತಿದ್ದುವು. ಅಂದು ನಿವೃತ್ತ ಅಧ್ಯಾಪಕ, ಯಕ್ಷಗಾನ ಕಲಾವಿದ ಅಡ್ಕ ಸುಬ್ರಹ್ಮಣ್ಯ ಭಟ್ಟರಿಗೆ ಅರುವತ್ತರ ಹರುಷ. ಹಿರಿಯ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ಟರ ಗರಡಿಯಲ್ಲಿ ರೂಪುಗೊಂಡ ಶಿಲ್ಪವೊಂದು ತನ್ನ ಅರುವತ್ತರ ಆಚರಣೆಗೆ ಆಯ್ದುಕೊಂಡುದು ಯಕ್ಷಗಾನ ಮತ್ತು ಕುಟುಂಬ ಸಮ್ಮಿಲನ. ಕುಟುಂಬ ಬಂಧುಗಳನ್ನು ಒಂದೆಡೆ ಸೇರಿಸಬೇಕೆನ್ನುವ ಆಶಯ.
              ಹಿರಿದಾದ ಅಡ್ಕ ಕುಟುಂಬದ ಬಹುತೇಕ ಸು-ಮನಸ್ಸುಗಳು ಮುಳಿಯಾರು ಕ್ಷೇತ್ರದಲ್ಲಿ ನೆರೆದಿದ್ದರು. ಅಡ್ಕ ಕುಟುಂಬವೆಂದರೆ ಅದು ಯಕ್ಷಗಾನ ಕುಟುಂಬ. ಅಲ್ಲಿನ ಹಿರಿ-ಕಿರಿಯ ಎಲ್ಲರಲ್ಲೂ ಯಕ್ಷವಾಹಿನಿ ಹರಿಯುತ್ತಿದೆ.  ಯಕ್ಷಗಾನದ ಸುದ್ದಿಗಳನ್ನು ಪುರುಷರು ಮಾತ್ರವಲ್ಲ, ಮಹಿಳೆಯರೂ ವಿಮರ್ಶಿಸುವಷ್ಟು ಸದೃಢರು. ಯಕ್ಷಗಾನೀಯ ವಾತಾವರಣದಲ್ಲಿ ಬದುಕನ್ನು ಅರಳಿಸಿಕೊಂಡ ಎಲ್ಲರೂ ಕಲೆಯ ಸ್ಪರ್ಶಕ್ಕೆ ಬಂದವರು. ಸಂಗೀತ, ಭರತನಾಟ್ಯ, ನಾಟಕ, ಯಕ್ಷಗಾನ ಹೀಗೆ ಒಂದಲ್ಲ ಒಂದು ಪ್ರಕಾರದಲ್ಲಿ ತೊಡಗಿಸಿಕೊಂಡವರು.
              ಅಡ್ಕ ಮನೆ ಮತ್ತು ಕುಟುಂಬದಲ್ಲಿ ಪೂಜೆ, ಶುಭ ಸಮಾರಂಭಗಳಿದ್ದರೆ ತಾಳಮದ್ದಳೆ ಖಚಿತ. ಒಂದಿಬ್ಬರು ಆಹ್ವಾನಿತ ಹಿರಿಯ ಕಲಾವಿದರೊಂದಿಗೆ ಕುಟುಂಬಸ್ತರೇ ಅರ್ಥಧಾರಿಗಳು. ಚೆಂಡೆ, ಮದ್ದಳೆ, ಭಾಗವತಿಕೆಯ ಸು-ನಾದಗಳು ಹೊರಹೊಮ್ಮಿದರೆ ಮಾತ್ರ ಬದುಕಿಗಲ್ಲಿ ಸುಭಗತನ. ಇಂತಹ ಬದುಕಿನಲ್ಲಿ ಅರಳಿದ ಸುಬ್ರಹ್ಮಣ್ಯ ಭಟ್ಟರು ತನ್ನ ಷಷ್ಟ್ಯಬ್ದವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕುಟುಂಬಸ್ತರನ್ನೂ ಸಮ್ಮಿಲನಗೊಳಿಸಿದರು. ಹೊಟ್ಟೆಗೆ ಮಾತ್ರವಲ್ಲ ಮನಸ್ಸು ತಂಪಾಗುವಷ್ಟು ಹೂರಣ ತುಂಬಿದರು. ಅಚಾನಕ್ಕಾಗಿ ಅಂದು ಕಾಸರಗೋಡು ಜಿಲ್ಲೆಯಲ್ಲಿ ಹರತಾಳವಿದ್ದರೂ ಕುಟುಂಬಿಕರು ಬೆಳ್ಳಂಬೆಳಿಗ್ಗೆಯೇ ಹಾಜರಿದ್ದರು.
              ಕೂಡುಕುಟುಂಬದ ಒಂದು ಕಾಲಘಟ್ಟವನ್ನು ಜ್ಞಾಪಿಸಿಕೊಳ್ಳಿ. ಅಲ್ಲಿ ಸಮಸ್ಯೆಗಳು, ಕಷ್ಟಗಳು ವೈಭವ ಪಡೆಯುತ್ತಿದ್ದಿರಲಿಲ್ಲ. ಹಿರಿಯರ ಮಾರ್ಗದರ್ಶನದಲ್ಲಿ ಸಂಸ್ಕಾರಯುತವಾದ ಬದುಕಿಗೆ ಅವಕಾಶವಿತ್ತು. ಮನೆ, ತೋಟ, ದೇವರು, ಕಲೆ.. ಹೀಗೆ ಒಬ್ಬೊಬ್ಬರಲ್ಲಿ ಜವಾಬ್ದಾರಿ ಹಂಚಿಹೋಗುತ್ತಿದ್ದುವು. ಕಾಲ ಕಾಲಕ್ಕೆ ಬೇಕಾದ ಆಗುಹೋಗುಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದುವು. ಕಾಲಸರಿಯುತ್ತಾ ಕೂಡುಕುಟುಂಬಗಳು ಹಂಚಿಹೋದುವು. ತಂತ್ರಜ್ಞಾನಗಳು ಬದುಕಿಗೆ ಅಂಟಿದುವು. ಭಾವಗಳ ತೇವಗಳು ಶುಷ್ಕತೆಯತ್ತ ಜಾರಿದುವು. ಪುರುಸೊತ್ತು ಎನ್ನುವುದು ಮರೀಚಿಕೆಯಾಯಿತು. ಎಲ್ಲರೂ ಒಟ್ಟು ಸೇರುವ ಮಾತು ಬಾಯಲ್ಲೇ ಉಳಿಯಿತು. ಇಷ್ಟೆಲ್ಲಾ ಆಧುನಿಕ ವಿಚಾರಗಳು ಬದುಕಿನಲ್ಲಿ ಮಿಳಿತಗೊಂಡಿದ್ದರೂ ಅಡ್ಕ ಕುಟುಂಬದ ಸದಸ್ಯರಿಗಂದು ಧಾರಾಳ ಪುರುಸೊತ್ತು ಇತ್ತು! ಯಾರಲ್ಲೂ ಗೊಣಗಾಟವಿಲ್ಲ, ಒತ್ತಡವಿಲ್ಲ. ಬದುಕಿನಲ್ಲಿ ಕಲೆಯೊಂದು ಇಳಿದ ಪರಿಣಾಮವಿದು. ಕಲೆಯ ಬಲೆಯಲ್ಲಿ ಬದುಕನ್ನು ರೂಪಿಸಿದ್ದರಿಂದ ಅವ್ಯಕ್ತ ಸಂಸ್ಕಾರ ವಾಹಿನಿಯೊಂದು ಅವ್ಯಕ್ತವಾಗಿ ಹರಿದಿತ್ತು. ಬದಲಾದ ಕಾಲಘಟ್ಟದಲ್ಲಿ ಇಂತಹ ಪ್ರಕ್ರಿಯೆಗಳು ನಿರಂತರ ಆಗಬೇಕಾಗಿದೆ.
                ಇರಲಿ, ವಿಚಾರ ಎಲ್ಲೋ ಹೋಯಿತಲ್ಲಾ. ಅಂದು ಪೂರ್ವಾಹ್ನ ಕುಟುಂಬದ ಸದಸ್ಯರಿಂದ ಸಂಗೀತ ಕಾರ್ಯಕ್ರಮ. ಪೂರ್ಣಿಮಾ ಗಣಪತಿ ಭಟ್, ಶಮಾ ಜಿ ಭಟ್, ಅನುಪಮಾ ಅಬ್ರಾಜೆ, ವಿಧಾತ್ರಿ ಅಬ್ರಾಜೆ, ಗೀತಾ ಶ್ಯಾಮಮೂರ್ತಿ ಪೆರಡಂಜಿ (ಗಾಯನ); ಪ್ರಭಾಕರ ಕುಂಜಾರು (ವಯಲಿನ್), ಶ್ರೀಧರ ಭಟ್ ಬಡಕ್ಕೆಕರೆ (ಮೃದಂಗ) ಮತ್ತು ಅನಿರುದ್ಧ ವಾಸಿಷ್ಠ ಶರ್ಮರಿಂದ ಕೀಬೋರ್ಡ್  ವಾದನ. ಹಿರಿಯರಾದ ಪೆರಡಂಜಿ ಗೋಪಾಲಕೃಷ್ಣ ಭಟ್ ಮತ್ತು ಗೋವಿಂದ ಬಳ್ಳಮೂಲೆ ಇವರಿಂದ ಬದುಕಿನ ವಾಸ್ತವದ ಪ್ರಹಸನ.
             ಬಳಿಕ ಯಕ್ಷ-ಗಾನ ವೈಭವ. ತಲ್ಪಣಾಜೆ ಶಿವಶಂಕರ ಭಟ್, ತಲ್ಪಣಾಜೆ ವೆಂಕಟ್ರಮಣ ಭಟ್, ಚಿನ್ಮಯ ಕಲ್ಲಡ್ಕ (ಭಾಗವತರು), ಈಶ್ವರ ಭಟ್ ಬಳ್ಳಮೂಲೆ, ಉದಯ ಕಂಬಾರು, ಈಶ್ವರ ಮಲ್ಲ (ಚೆಂಡೆ-ಮದ್ದಳೆ). ಸುಮಾರು ಒಂದೂವರೆ ಗಂಟೆಗಳ ಕಾಲ ಜರುಗಿದ ಯಕ್ಷಗಾನ ಹಾಡುಗಾರಿಕೆಯ ಪ್ರಸ್ತುತಿಯಲ್ಲಿ ಯಕ್ಷಗಾನದ ಹೊರತಾದ ಸಂಚಾರವಿದ್ದಿರಲಿಲ್ಲ. ನಿಜಾರ್ಥದಲ್ಲಿ ಗಾನವು ವೈಭವ ಪಡೆದಿತ್ತು. ಭಾಗವತರಿಗೆ ಶಿಳ್ಳೆ-ಚಪ್ಪಾಳೆಗಳ ಮೋಹವಿರಲಿಲ್ಲ. ಸಾಹಿತ್ಯವನ್ನು ಅಪಭ್ರಂಶಗೊಳಿಸುವ ಹಠವಿದ್ದಿರಲಿಲ್ಲ. ಕವಿಯ ಆಶಯ ಮತ್ತು ಮಟ್ಟುವಿನಂತೆ ಪದ್ಯಗಳು ಸರ್ವಾಂಗ ಸುಂದರವಾಗಿ ಮೂಡಿ ಬಂದಿದ್ದುವು. ಅಂದಿನ ಗಾನ ವೈಭವದಲ್ಲಿ ನಾನಂತೂ 'ಯಕ್ಷಗಾನ'ದ ಸೊಬಗನ್ನು ಕಂಡಿದ್ದೇನೆ.
               ಅಪರಾಹ್ನ ನೂತನ ಪ್ರಸಂಗ 'ಮುಳಿಯಾರು ಕ್ಷೇತ್ರ ಮಹಾತ್ಮೆ'ಯ ಪ್ರದರ್ಶನ. ಕಲಾವಿದ ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಪ್ರಸಂಗದ ರಚಯಿತರು. ಪ್ರಸಂಗದಲ್ಲಿ ಎರಡು ವಿಭಾಗಗಳು. ಮೊದಲನೆಯದು ಸ್ಕಂದ ಪರಿಣಯ. ನಂತರದ್ದು ಶ್ರೀ ಮುಳಿಯಾರು ಕ್ಷೇತ್ರ ಮಹಾತ್ಮೆ. ಕುಟುಂಬದವರೇ ಕಲಾವಿದರು. ಮುಖ್ಯ ಪಾತ್ರಗಳಿಗೆ ಹಿರಿಯ ಅನುಭವಿಗಳಿದ್ದರು. ಸುಮಾರು ಆರುಗಂಟೆಗಳ ಕಾಲ ಪ್ರದರ್ಶನ ಲಂಬಿತವಾಗಿತ್ತು. ಮೊದಲ ಪ್ರಯೋಗವಾದ್ದರಿಂದ ಚಿಕ್ಕಪುಟ್ಟ ಗೊಂದಲಗಳು ಸಹಜ. ಕ್ಷೇತ್ರ ಮಹಾತ್ಮೆ ಎಂದಾಗ ಅದಕ್ಕೆ ಪೌರಾಣಿಕವಾದ ಹಿನ್ನೆಲೆಯನ್ನು ಟಚ್ ಕೊಡಬೇಕಾದುದು ಅನಿವಾರ್ಯ. ಇನ್ನೂ ಒಂದೆರಡು ಪ್ರಯೋಗವಾದ ಬಳಿಕವಷ್ಟೇ ಪ್ರಸಂಗ ಹದವಾಗುತ್ತದೆ, ಎನ್ನುತ್ತಾರೆ ಪ್ರಸಂಗಕರ್ತ ಪೆರಡಂಜಿ ಗೋಪಾಲಕೃಷ್ಣ ಭಟ್.
              ಪ್ರೇಕ್ಷಕರಾಗಿ, ಕಲಾವಿದರಾಗಿ, ವಿಮರ್ಶಕರಾಗಿ, ಸಂಘಟಕರಾಗಿ.. ಹೀಗೆ ಹಲವು ಸ್ತರಗಳಲ್ಲಿ ಅಂದು ಅಡ್ಕ ಕುಟುಂಬವು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ಕೋಟೂರಿನ 'ಯಕ್ಷತೂಣೀರ ಸಂಪ್ರತಿಷ್ಠಾನ'ವು ಎಲ್ಲಾ ಕಲಾಪಗಳನ್ನು ಸಂಘಟಿಸಿತ್ತು. ಕಾರ್ಯಕ್ರಮ ಮುಗಿದಾಗ ಅಡ್ಕ ಸುಬ್ರಹ್ಮಣ್ಯ ಭಟ್ಟರ ಕಣ್ಣಂಚಲ್ಲಿ ಆನಂದದ ಭಾಷ್ಪ. ಅವರನ್ನು ಮಾತನಾಡಿಸಿ ಮನೆಕಡೆಗೆ ಮುಖ ಹಾಕಿದಾಗ ಸಂಭ್ರಮವು ನನ್ನ ಮನದೊಳಗೆ ಇಳಿದಿತ್ತು. ಷಷ್ಟ್ಯಬ್ದವನ್ನು ಹೀಗೂ ಆಚರಿಸಲು ಸಾಧ್ಯ ಅಲ್ವಾ ಎನ್ನುವುದನ್ನು ತೋರಿಸಿದ್ದಾರೆ. ಅರುವತ್ತರ ನೆನಪಿಗಾಗಿ ಕುಟುಂಬಸ್ತರಿಗೆ, ಸ್ನೇಹಿತರಿಗೆ, ಆಪ್ತರಿಗೆ ಉಡುಗೊರೆಗಳನ್ನು ಕೊಡುತ್ತಾ ಖುಷಿಯನ್ನು ಅನುಭವಿಸುತ್ತಿದ್ದ ಸುಬ್ರಹ್ಮಣ್ಯ ಭಟ್ಟರ ಮನಃಸ್ಥಿತಿಯೇ ಖುಷಿ ರೂಪದಲ್ಲಿ ಸಾಕಾರವಾಗಿತ್ತು.
          ಆನಂದಕ್ಕಾಗಿ ಎಲ್ಲೆಲ್ಲಾ ಪ್ರವಾಸ ಮಾಡುತ್ತೇವೆ. ದೇವಾಲಯವನ್ನು ಸಂದರ್ಶಿಸುತ್ತೇವೆ. ಬೆಟ್ಟಗಳನ್ನು ಏರುತ್ತೇವೆ. ಹೋಮ-ಹವನ-ಪೂಜೆಗಳನ್ನು ಮಾಡುತ್ತೇವೆ. ಕೊನೆಗೆ ಆನಂದ ಎನ್ನುವುದು ಅನುಭವಕ್ಕೆ ಬಾರದೆ ಕೊರಗುತ್ತೇವೆ. 'ನನ್ನ ಆನಂದ ನನ್ನೊಳಗಿದೆ. ಅದಕ್ಕೆ ಮೂರ್ತ ರೂಪ ಕೊಟ್ಟರೆ ಆಯಿತು' ಎನ್ನುವುದು ಅಡ್ಕ ಸುಬ್ರಹ್ಮಣ್ಯರಿಗೆ  ಗೊತ್ತಿತ್ತು. ಹಾಗಾಗಿ ಅವರು ಕುಟುಂಬದವರೊಂದಿಗೆ ಆನಂದವನ್ನು ಕಂಡರು, ಅನುಭವಿಸಿದದರು. ತಾನು ನಂಬಿದ ಕಲೆಗೆ ಮಾನ ಕೊಟ್ಟರು. ಪ್ರತಿಯಾಗಿ ಮಾನವನ್ನು ಪಡೆದರು.

Tuesday, August 8, 2017

ಅದು ನುಡಿತವಲ್ಲ, ಒಂದು ಪಾತ್ರ

ಪ್ರಜಾವಾಣಿಯ 'ದಧಿಗಿಣತೋ' / 31-3-2017

                ಶ್ರೀ ಕಟೀಲು ಮೇಳದ ಆಟ. ದೇವೀ ಮಹಾತ್ಮೆ ಪ್ರಸಂಗ. ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆ. ಪದ್ಯಾಣ ಶಂಕರನಾರಾಯಣ ಭಟ್ಟರ (ಶಂಕರಪ್ಪಚ್ಚಿ, ಶಂಕರಣ್ಣ ಎನ್ನುವುದು ಆಪ್ತನಾಮ) ಚೆಂಡೆವಾದನ. ಮೊನ್ನೆಯಷ್ಟೇ ದೈವಾಧೀನರಾದ ಗೇರುಕಟ್ಟೆ ಗಂಗಯ್ಯ ಶೆಟ್ಟರ ಮಹಿಷಾಸುರನ ಪಾತ್ರ. ಮಹಿಷ ರಂಗಕ್ಕೆ ಪ್ರವೇಶವಾಗಿ ಶ್ರೀದೇವಿಯಲ್ಲಿ ಹತನಾಗುವ ವರೆಗಿನ ಒಂದೊಂದು ಕ್ಷಣಗಳ ರಂಗಕ್ರಿಯೆಗಳಿವೆಯಲ್ಲಾ, ನಿಜಕ್ಕೂ ಅದೊಂದು ರೂಪಕ. ಭಾವಾಭಿನಯಕ್ಕೆ ಶಂಕರ ಭಟ್ಟರ ಚೆಂಡೆಯ ನುಡಿತಗಳ ಭಾಷಾಲೇಪ. ಭಾವದ ಭಾಷೆ ಸುಲಭವಾಗಿ ಪ್ರೇಕ್ಷಕರಿಗೆ ಅರ್ಥವಾಗಬಹುದಾದ ನಾದಾಲೋಕ. ಇವರ ಚೆಂಡೆಯ ನುಡಿತವೇ ಇಡೀ ಪ್ರಸಂಗವನ್ನು ಚೊಕ್ಕವಾಗಿ ಮುನ್ನಡೆಸಿತ್ತು.
                ಗಂಗಯ್ಯ ಶೆಟ್ಟರ ಮಹಿಷಾಸುರನ ಒಂದೊಂದು ಹೆಜ್ಜೆಗೂ ಶಂಕರ ಭಟ್ಟರ ವೈವಿಧ್ಯದ ಮೆಲು ನುಡಿತಗಳು ಒಂದು ಹಿತಾನುಭೂತಿ. ರಂಗ ಪ್ರವೇಶಿಸಿದ ಬಳಿಕ ತಾಯಿಯನ್ನು ಕಾಣುವಾಗ ಮಾತೃವಾತ್ಸಲ್ಯ, ಪ್ರೀತಿಗಳ ಅಭಿವ್ಯಕ್ತಿ ಮರೆಯುವಂತಹುದಲ್ಲ. ತಾಯಿಯ ಜತೆಗಿರುವ ಮಹಿಷ, ಬ್ರಹ್ಮನಿಂದ ವರ ಪಡೆದ ಮಹಿಷ, ದೇವಲೋಕ ಮುತ್ತಿಗೆ ಹಾಕುವ ಮಹಿಷ, ಸ್ವರ್ಗವನ್ನು ಸ್ವಾಧೀನ ಪಡೆದಾದ ಬಳಿಕದ ಮಹಿಷ, ಶ್ರೀದೇವಿ ಯುದ್ಧಕ್ಕೆ ಬಂದಿದ್ದಾಳೆ ಎಂದು ತಿಳಿದ ಮಹಿಷ 'ಪರಿಪರಿಯ ಉತ್ಪಾತಗಳ ಕಾಣುತ..' ಪದ್ಯಕ್ಕೆ ಅಬ್ಬರಿಸುವ ಮತ್ತು ಶ್ರೀದೇವಿಯೊಂದಿಗೆ ಕಾಳಗ ಕೊಡುವ ಮಹಿಷ.. ಹೀಗೆ ಒಂದೊಂದು ಘಟ್ಟದಲ್ಲೂ ಮಹಿಷನ ಅಸುರತ್ವದ ಭಾವಗಳನ್ನು ಗಂಗಯ್ಯ ಶೆಟ್ಟರು ಪ್ರಸ್ತುತಿಪಡಿಸುತ್ತಿದ್ದ ದಿನಮಾನಗಳು ನೆನಪು.
           ಗಂಗಯ್ಯ ಶೆಟ್ಟರ ಭಾವಸ್ಫುರಣಗಳ ಹಿಂದೆ ಕುರಿಯ ಶಾಸ್ತ್ರಿಗಳ ಮತ್ತು ಶಂಕರ ಭಟ್ಟರ ನೇಪಥ್ಯದ ನಾದಪೀಯೂಷಗಳು ಪೂರಕ. ಈ ಮೂವರು ರಂಗದಲ್ಲಿರುವಷ್ಟು ದಿನ ಮಹಿಷ ವಧೆ ಆಖ್ಯಾನಕ್ಕೆ ಮುಗಿಬೀಳುವ ಯಕ್ಷಪ್ರಿಯರನ್ನು ನೋಡಿದ್ದೇನೆ, ಬೆರಗಾಗಿದ್ದೇನೆ. ಇದು  ಯಕ್ಷಗಾನದ ಪರಿಭಾಷೆಯಲ್ಲಿ ನಿಜಾರ್ಥದ 'ಕೊಡುಗೆ, ಸಾಧನೆ'. ಗಂಗಯ್ಯ ಶೆಟ್ಟರು ನಿರ್ವಹಿಸುತ್ತಿದ ಎಲ್ಲಾ ಪಾತ್ರಗಳಲ್ಲೂ 'ಪಾತ್ರ ಮನಸ್ಸು' ಜೀವಂತ. ರಂಗದಲ್ಲವರು ಗಂಗಯ್ಯ ಶೆಟ್ಟರಲ್ಲ. ಅವರೊಂದು ಪಾತ್ರ. ಹಾಗಾಗಿಯೇ ಅವರ ಅಭಿವ್ಯಕ್ತಿಗೆ ಪಾತ್ರಗಳೇ ಖುಷಿಪಟ್ಟಿವೆ.
               ಕಟೀಲು ಮೇಳದ ಈ ಮೂವರ ಜತೆಗಾರಿಕೆಯನ್ನು ಹಲವು ಬಾರಿ ವೀಕ್ಷಿಸಿ ಒಂದೂವರೆ ದಶಕ ದಾಟಿಬಹುದು. ಅಲ್ಲಿಂದ ಶಂಕರ ಭಟ್ಟರು ನನ್ನನ್ನು ಮೋಡಿ ಮಾಡಿದ್ದಾರೆ. ಆಟದ ನೋಟೀಸಿನಲ್ಲಿ ಅವರ ಹೆಸರನ್ನು ನೋಡಿದರೆ ಸಾಕು, ಹಲವು ಬಾರಿ ಆಟಕ್ಕೆ ಹೋಗಿದ್ದುಂಟು. ಹಾಗೆಂದು ಅವರಲ್ಲಿ ಮಾತನಾಡಿದ್ದಿಲ್ಲ. ನನ್ನಲ್ಲೂ ಅವರು ಮಾತನಾಡಿದ್ದಿಲ್ಲ. ಹಿಮ್ಮೇಳದ ಕಲಿಕೆ ಗೊತ್ತಿಲ್ಲದಿದ್ದರೂ ಚೆಂಡೆಯ-ಮದ್ದಳೆಯ ಅವರ ಒಂದೊಂದು ನುಡಿತಗಳು ಅದೇನೋ ಸಂವೇದನೆಯನ್ನು ಉಂಟುಮಾಡಿತ್ತು. ಅದು ಕಿವಿಗೆ ಅಪ್ಪಳಿಸುವುದಲ್ಲ, ಕೇಳಿಸುತ್ತಿದ್ದುವು. ಕರ್ಕಶ ಮಾಡುತ್ತಿರಲಿಲ್ಲ, ಕಿವಿಯ ಹತ್ತಿರ ಉಲಿಯುತ್ತಿದ್ದವು.
           ನಾನು ಯಕ್ಷಗಾನಕ್ಕೆ ಶ್ರೀಕಾರ ಬರೆದ ಸಮಯ. ಸುರತ್ಕಲ್ಲಿನ ಮಾರಿಗುಡಿಯಲ್ಲಿ ಬಯಲಾಟ. ಅಂದು ಶಂಕರಣ್ಣನ ಚೆಂಡೆ. ಪ್ರಸಂಗ ಹಿರಣ್ಯಾಕ್ಷ ವಧೆ. ನನ್ನದು ಭೂದೇವಿ. ಹೆಚ್ಚು ವೇಷ ಮಾಡಿದ್ದೇನೆ ಎಂಬ ಕಾರಣಕ್ಕೆ ಸಣ್ಣ ಹಮ್ಮು-ಬಿಮ್ಮು ನನ್ನನ್ನು ಆವರಿಸಿತ್ತು! 'ಪಾತ್ರದ ನಡೆ ಗೊತ್ತುಂಟಾ' ಶಂಕರಪ್ಪಚ್ಚಿಯ ಪ್ರಶ್ನೆ. ಅವರು ಅಷ್ಟು ಕೇಳಿದ್ದೇ ತಡ, ನಾನು ಕಂಗಾಲು. ನನ್ನ ಸ್ಥಿತಿಯನ್ನು ನೋಡಿ, ಕಥೆಯ ನಡೆಯನ್ನು, ಪದ್ಯವನ್ನು ವಿವರಿಸಿ ಹೇಳಿದ್ದರು. ಪಾತ್ರವೂ ತೃಪ್ತಿಕರವಾಗಿ ಮೂಡಿಬಂತು. 'ವೇಷ ಯಶಸ್ಸಾಗಬೇಕಾದರೆ ಬೇರೆ ಆಟಗಳನ್ನು ನೋಡಬೇಕು' ಎಂಬ ಹಿತವಚನವನ್ನೂ ಹೇಳಿದ್ದರು.
                ಬಹುತೇಕ ವೃತ್ತಿ ಕಲಾವಿದರಿಗೆ ಹವ್ಯಾಸಿ ಕಲಾವಿದರನ್ನು ಕಂಡಾಗ ಅದೇನೋ ಮಾನಸಿಕ ಅಂತರ. ಬಹುಶಃ ಅವರ ಕಸುಬಿನ ಸುಭಗತೆಯೂ ಕಾರಣವಿರಬಹುದು. ಆದರೆ ಶಂಕರಣ್ಣನಲ್ಲಿ ಅಂತಹ ಭಾವ ಕಂಡಿಲ್ಲ. ಹಲವಾರು ಕೂಟ, ಆಟಗಳಲ್ಲಿ ಅವರು ಸಿಕ್ಕರೂ, 'ಹಾಗಲ್ಲ ಹೀಗೆ' ಎಂದು ಹೇಳುವುದನ್ನು ಕಂಡಾಗ 'ಯಕ್ಷ ಅಧ್ಯಾಪಕರು' ಸಿಕ್ಕಂತೆ ಖುಷಿಯಾಗುತ್ತಿತ್ತು.
                ಪುತ್ತೂರಿನಲ್ಲಿ ಹಿಂದೊಮ್ಮೆ ಶಂಕರ ಭಟ್ಟರಿದ್ದ ಮೇಳದ ಆಟವನ್ನು ವೀಕ್ಷಿಸುತ್ತಿದ್ದ ಮಹಿಳೆಯೋರ್ವರು ಉದ್ಗರಿಸಿದ್ದು ಏನು ಗೊತ್ತೇ - 'ಶಂಕರ ಭಟ್ಟರ ಚೆಂಡೆ ಮಾತನಾಡುತ್ತಿತ್ತು'. ಹಿಮ್ಮೇಳದ ಗಂಧಗಾಳಿಯಿಲ್ಲದ, ಯಕ್ಷಗಾನದ ಸೂಕ್ಷ್ಮ ವಿಚಾರಗಳ ಬಗ್ಗೆ ಅಷ್ಟೊಂದು ಅರಿವಿಲ್ಲದ ಓರ್ವ ಪ್ರೇಕ್ಷಕ ಮಹಿಳೆ ಹೀಗೆ ಉದ್ಗರಿಸಬೇಕಿದ್ದರೆ, ಅವರ ಚೆಂಡೆಯ ದನಿ ಎಷ್ಟೊಂದು ಮೋಡಿ ಮಾಡಿದ್ದಿರಬಹುದು.
               ನಮ್ಮಲ್ಲಿ ಯಕ್ಷಗಾನ ನೋಡುವ ಅದೆಷ್ಟೋ ಪ್ರೇಕ್ಷಕರಲ್ಲಿ ಯಕ್ಷಗಾನವನ್ನು ಅನುಭವಿಸುವ, ವಿಮರ್ಶಿಸುವ ಪರಿಪಾಠವಿದೆ. ಇಂತಹವರ ವಿಮರ್ಶೆ ವಸ್ತುನಿಷ್ಠವಾಗಿರುತ್ತವೆ. ವ್ಯಕ್ತಿಪರವಾಗಿರುವುದಿಲ್ಲ. ಇದರಲ್ಲಿ ಶೈಕ್ಷಣಿಕ ಶಿಸ್ತು ಇಲ್ಲದೇ ಇರಬಹುದು. ಆದರೆ ಅನುಭವಿಸಿದ 'ಅನುಭವ' ಇದೆಯಲ್ಲಾ, ಅದು ವಿಮರ್ಶಾ ರೂಪದಲ್ಲಿ ಹೊರ ಬಂದಾಗ, 'ಹೆಚ್ಚು ಗೊತ್ತಿದೆ ಎಂದು ತಿಳಿದಿರುವ' ನಮಗದು ಢಾಳಾಗಿ ಕಂಡರೂ, ಅದರ ಹಿಂದೆ ಸತ್ಯವಿದೆ ಎಂಬುದನ್ನು ಮರೆಯಲಾಗದು.
            ಶಂಕರಣ್ಣನ ಚೆಂಡೆಯಲ್ಲಿ ಆ ಮಹಿಳೆ ಗುರುತಿಸಿದ 'ಚೆಂಡೆ ಮಾತನಾಡುತ್ತದೆ' ಎಂಬ ಮಾತಿದೆಯಲ್ಲಾ ಅದನ್ನು ಈ ಹಿನ್ನೆಲೆಯಿಂದ ಅರ್ಥ ಮಾಡಿಕೊಳ್ಳಬೇಕು. ಪಾತ್ರಧಾರಿ ಮಾತ್ರ ಪಾತ್ರದೊಳಗೆ ಪರಾಕಾಯ ಪ್ರವೇಶ ಮಾಡುವುದಲ್ಲ, ಚೆಂಡೆವಾದಕನೂ ಪ್ರವೇಶ ಮಾಡುತ್ತಾನೆ ಎಂಬುದಕ್ಕೆ ದುಶ್ಶಾಸನ ವಧೆ..ಯಂತಹ ಪ್ರಸಂಗಗಲ್ಲಿ ಇವರ ತಾದಾತ್ಮ್ಯ ಸಾಕ್ಷಿಯಾಗಿ ಸಿಗುತ್ತದೆ. ಚೆಂಡೆ-ಮದ್ದಳೆಯ ವಾದನಕ್ಕೆ ಮಾಧುರ್ಯ ತುಂಬಿದ ಕಲಾವಿದ. ಪದ್ಯವನ್ನು ಅನುಸರಿಸಿಕೊಂಡೇ ಹೋಗುವ ನುಡಿತ. ಹಳೆಯ ಮತ್ತು ಹೊಸ ಕ್ರಮಗಳ ಸಮನ್ವಯತೆ.
             ಶಂಕರಪ್ಪಚ್ಚಿ ರಂಗದಲ್ಲಿ ಇರುವಷ್ಟು ಹೊತ್ತು ಪೂರ್ತಿ ಸಕ್ರಿಯ. ಉದಾಸೀನ ಎಂಬುದು ಅವರಿಂದ ದೂರ. ಪಾತ್ರಧಾರಿಗಳಿಗೆ ಸ್ಫೂರ್ತಿಯನ್ನು ನೀಡಿ, ಅವರಿಂದ 'ಕಸುಬನ್ನು' ಹೊರತೆಗೆದು ರಂಗದಲ್ಲಿ ಅನಾವರಣಗೊಳಿಸುವ ಪರಿ ಅಪರೂಪ. ಆಯಾಯ ಪಾತ್ರಗಳಿಗೆ ಹೊಂದುವ ಲಯ, ನಡೆ. ಪಾತ್ರಧಾರಿ ಎಷ್ಟೇ ವೇಗದಲ್ಲಿರಲಿ, ಪಾತ್ರದ-ಪ್ರಸಂಗದ ವೇಗಕ್ಕನುಸಾರವಾದ ಹಿಡಿತ. ಹಾಗಾಗಿ ಶಂಕರಪ್ಪಚ್ಚಿ ರಂಗದಲ್ಲಿದ್ದರೆ ಮದ್ದಳೆಗಾರ ಮತ್ತು ಭಾಗವತ ಹೆದರುವ ಅಗತ್ಯವೇ ಇಲ್ಲ.
            ಪದ್ಯಾಣ ಜಯರಾಮ ಭಟ್ಟರು ಶಂಕರ ಭಟ್ಟರನ್ನು ಹತ್ತಿರದಿಂದ ಬಲ್ಲವರು, ಸರಿಯಾಗಿ ಕುಣಿಯುವವರಿದ್ದರೆ, ಹಾಡುವವರಿದ್ದರೆ ಶಂಕರಪ್ಪಚ್ಚಿಯ 'ದೇಕಿ'ಯೇ (ಉತ್ಸಾಹ, ರಂಗವನ್ನು ಎತ್ತಿಕೊಡುವ ಅವ್ಯಕ್ತ ಶಕ್ತಿ) ಬೇರೆ! ಚೌಕಿಯಲ್ಲಿ ಶ್ರುತಿ ಮಾಡುವಾಗ ಯಾರಾದರೂ ಮಾತನಾಡಿಯೋ, ಮೈಕಿನ ಸೌಂಡನ್ನು ಹೆಚ್ಚು ಮಾಡಿಯೋ ಹರಟೆ ಮಾಡಿದರಂತೂ ಕೆರಳಿಬಿಡುತ್ತಾರೆ. ಅಷ್ಟೊಂದು ಏಕಾಗ್ರತೆ. ತನ್ನ ವೃತ್ತಿಗೆ ನ್ಯಾಯ ಸಲ್ಲಿಸುವ ರೀತಿ ಅನನ್ಯ ಎಂದು ನೆನಪಿಸಿಕೊಳ್ಳುತ್ತಾರೆ.
ಭಾಗವತಿಕೆಯ ಆಸ್ವಾದನೆ ಅವರ ಧನಾಂಶ. ರಾಗಗಳನ್ನು ಅನುಭವಿಸುವ ಅಪರೂಪದ ವ್ಯಕ್ತಿತ್ವ. ದುಃಖ, ಕರುಣ ಸಂದರ್ಭಗಳು ಬಂದಾಗ ಬಹುತೇಕ ಚೆಂಡೆವಾದಕರು ಚೆಂಡೆಯನ್ನು ಕೆಳಗಿಟ್ಟು ನೇಪಥ್ಯಕ್ಕೆ ಸರಿಯುತ್ತಾರೆ. ಮತ್ತೆ ಭಾಗವತರು ಕರೆದಾಗಲಷ್ಟೇ ಬಂದಾರು. ಶಂಕರ ಭಟ್ಟರು ಹಾಗಲ್ಲ, ಅಲ್ಲಿನ ದೃಶ್ಯವನ್ನು, ಆ ಸಂದರ್ಭದ ಪದ್ಯವನ್ನು ಮನದಲ್ಲೇ ಗುಣುಗುಣಿಸುತ್ತಾ ಅನುಭವಿಸುತ್ತಾರೆ.
              ಯಾಕೋ ಏನೋ ಅವರೊಂದಿಗಿನ ಮಾತುಕತೆ ಮನಸ್ಸಿಗೆ ಹತ್ತಿರವಾದ ಕಾಲದಿಂದಲೇ ನನಗವರು 'ಅಪ್ಪಚ್ಚಿ.' ಎಲ್ಲರೂ ಹೇಳುವುದನ್ನು ಕೇಳಿಯೋ ಏನೋ ಅವರನ್ನು ಹಾಗೆಯೇ ಕರೆಯಲು ಆರಂಭಿಸಿರಬಹುದು. ಆದರೆ ಅವರೊಂದಿಗೆ ಮಾತನಾಡುವಾಗಲೆಲ್ಲಾ 'ಅಪ್ಪಚ್ಚಿ'(ಚಿಕ್ಕಪ್ಪ)ಯೊಂದಿಗೆ ಮಾತನಾಡಿದ ಅನುಭವ ನನಗಂತೂ ಆಗಿದೆ ಸತ್ಯ.
'ತಾನಾಯಿತು, ತನ್ನ ಕಸುಬಾಯಿತು' ಎಂದು ಇದ್ದು ಬಿಡುವ ಸ್ವಭಾವ. ಅವರಾಗಿ ಏನೂ ಹೇಳರು. ಆದರೆ ನಾವಾಗಿ ಪ್ರಶ್ನಿಸಿದರೆ, ಕೆಣಕಿದರೆ  ಓತಪ್ರೋತವಾಗಿ ಉತ್ತರಗಳ ಸರಮಾಲೆ. ಮಾತಿನಲ್ಲಿ ಹಿತ, ಮಿತ. ಹಾಸ್ಯಮಿಶ್ರಿತ ಮಾತುಗಳ ಒಡನಾಟ. ಅವರದ್ದೇ ಆದ ಭಾಷೆ, ಭಾವ ಪ್ರಪಂಚ. ಅದರೊಳಗೆ ಆಪ್ತತೆಯಿದೆ. ಮೋಡಿ ಮಾಡುವ ಕಾಂತ ಶಕ್ತಿಯಿದೆ.
(ಚಿತ್ರ : ರಾಮ್ ನರೇಶ್ ಮಂಚಿ)


Monday, August 7, 2017

ರಂಗಕಸುಬಿಗೆ ದ್ರೋಹ ಬಗೆಯದ - ದಾಸರಬೈಲು

ಪ್ರಜಾವಾಣಿ 'ದಧಿಗಿಣತೋ' ಅಂಕಣ /17-3-2017

             ಭಾಗವತ ದಾಸರಬೈಲು ಚನಿಯ ನಾಯ್ಕರು (Dasarabil chaniya Naik) 7-8-1999 ದೂರವಾದರು. ಬಹುಶಃ ಆಗವರ ವಯಸ್ಸು 55-60ರ ಆಜೂಬಾಜು. ಚುಂಬಕ ಶಕ್ತಿಯ ಶಾರೀರದಿಂದ ಯಕ್ಷಲೋಕದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ್ದರು. ಯಾವ ಶಾರೀರವು ಅವರಿಗೆ ಖ್ಯಾತಿಯನ್ನು ತಂದು ಕೊಟ್ಟಿತೋ, ಅದೇ ಶಾರೀರ ಅವರ ಬದುಕನ್ನೂ ಕಸಿದುಬಿಟ್ಟಿತ್ತು! ಗತಿಸಿ ಹದಿನೆಂಟು ವರುಷವಾಯಿತು. ಅವರ ಒಡನಾಟದಲ್ಲಿದ್ದ ಅನೇಕರಿಗೆ, ಅವರ ಭಾಗವತಿಕೆಗೆ ವೇಷಮಾಡಿದ್ದ, ಅರ್ಥಹೇಳಿದ್ದ ಕಲಾವಿದರಿಗೆ ನಾಯ್ಕರ ನೆನಪು ಸದಾ ಹಸಿರು. ಸುಳ್ಯ, ಪುತ್ತೂರು, ಕಾಸರಗೋಡು.. ಪ್ರದೇಶದಲ್ಲಿ ನಿಜಾರ್ಥದ 'ಯಕ್ಷಕೋಗಿಲೆ'ಯಾಗಿ ಹಾಡಿದರು, ವೇಷವನ್ನು ಕುಣಿಸಿದರು. ತನ್ನ ಸಾತ್ವಿಕ ವ್ಯಕ್ತಿತ್ವದಿಂದ ನೂರಾರು ಅಲ್ಲ, ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದರು. ಚನಿಯ ನಾಯ್ಕರಿಗೆ ಬರಲಾಗುವುದಿಲ್ಲ ಎಂದಾದರೆ ಆಟ ಯಾ ಕೂಟವನ್ನು ಮುಂದೂಡುವ ಸಂಘಗಳು, ಅಭಿಮಾನಿಗಳಿದ್ದರು. (ಆಗಿನ 'ಅಭಿಮಾನಿ' ಅಂದರೆ ಕಲಾವಿದರಷ್ಟೇ ರಂಗವನ್ನೂ ಅಭಿಮಾನದಿಂದ ಕಾಣುವ ಪ್ರೇಕ್ಷಕ ವರ್ಗ)
              ಚನಿಯರ ಭಾಗವತಿಕೆಯಲ್ಲಿ ಮೂವರು ಗಣ್ಯರ ಪ್ರಭಾವ ನಿಚ್ಚಳವಾಗಿತ್ತು. ಒಬ್ಬರು ಹಿರಿಯರಾದ ಅಜ್ಜನಗದ್ದೆ ಗಣಪಯ್ಯ ಭಾಗವತರು. ಭಜನಾ ಹಾಡುಗಾರರಾಗಿದ್ದ ಚನಿಯರು ಅಜ್ಜನಗದ್ದೆಯವರಲ್ಲಿ ಯಕ್ಷಗಾನದ ಅಭ್ಯಾಸ ಮಾಡುತ್ತಿದ್ದಂತೆ ಅವರೊಳಗಿನ ಭಾವಕೋಶವು ಯಕ್ಷಗಾನ ಹಾಡುಗಳಿಗೆ ತಲೆದೂಗಿತು. ಮತ್ತೆ ಹಾಡುವಾಗಲೆಲ್ಲಾ ಭಾವವು ಸದಾ ಎಚ್ಚರ. ಅಜ್ಜನಗದ್ದೆಯವರ ಪದ್ಯವನ್ನು ಕೇಳಿದವರು ಚನಿಯರ ಭಾಗವತಿಕೆಯಲ್ಲಿ ಅವರನ್ನು ಗುರುತಿಸುತ್ತಿದ್ದರು. ಇನ್ನೊಬ್ಬರು ಅಗರಿ ಶ್ರೀನಿವಾಸ ಭಾಗವತರ ಪ್ರಭಾವ. ಇವರಿಬ್ಬರೂ ಭಜನೆಯ ಹಿನ್ನೆಲೆಯಿಂದ ಬಂದವರು.
               ಕಲಾವಿದ, ಉಪನ್ಯಾಸಕ ವೆಂಕಟರಾಮ ಸುಳ್ಯ ಇವರು ಅಗರಿ, ದಾಸರಬೈಲು ಅವರ ಶೈಲಿಗಳನ್ನು ಮುಂದಿಟ್ಟು ಅದರಲ್ಲಿ ಚನಿಯರ ಶೈಲಿಯನ್ನು ಕಂಡುದು ಹೀಗೆ : ತಾಳಸಂಬಂಧಿಯಾದ ಪದ್ಯದ ಲಾಲಿತ್ಯದಲ್ಲಿ ಅಗರಿ ಭಾಗವತರಿಗೂ ಚನಿಯ ಭಾಗವತರಿಗೂ ಸಾಕಷ್ಟು ಸಾಮ್ಯವಿದೆ. ತಾಳದ ಕೊನೆಯ ಘಾತದಿಂದ ಪದ್ಯವನ್ನಾರಂಭಿಸುವ ರೀತಿ ಮತ್ತು ಲಯದ ಖಚಿತತೆಯಲ್ಲಿ ಅವರಲ್ಲಿ ಅಗರಿಯವರನ್ನು ಕಾಣಬಹುದಿತ್ತು. ಅವರ ತಾಳದ ಗತಿ ತಾಳದೊಂದಿಗೆ ಪದದ ಶಬ್ದಗಳು ಬೆರೆಯುವ ರೀತಿಯಿಂದಾಗಿ ರಂಗಸ್ಥಳದ ವೇಷಗಳು ಮಾತ್ರವಲ್ಲ, ಪ್ರೇಕ್ಷಕರೂ ಕುಣಿಯುವಂತಾಗುತ್ತಿತ್ತು. ಮತ್ತೊಬ್ಬರು ಕಡತೋಕ ಮಂಜುನಾಥ ಭಾಗವತರು. ಶ್ರೀ ಧರ್ಮಸ್ಥಳ ಮೇಳದಲ್ಲಿ ಅಲ್ಪ ಕಾಲ ಇವರೊಂದಿಗೆ ತಿರುಗಾಟ. ವೇಷಧಾರಿಯನ್ನು ರಂಗಸ್ಥಳದಲ್ಲಿ ದುಡಿಸಿಕೊಳ್ಳಲು ಕಡತೋಕರು ನಿಪುಣರು. ಚನಿಯರು ವೇಷಧಾರಿಯ ಸಾಮಥ್ರ್ಯವನ್ನು ಅನುಸರಿಸಿ ಪದ್ಯವನ್ನು ಕೊಡುವಲ್ಲಿ ಜಾಣರು. ನಾಯ್ಕರ ಶೃಂಗಾರ, ಕರುಣ, ವೀರ ರಸಗಳ ಸನ್ನಿವೇಶಗಳು ಅನನ್ಯ.
            ಯಕ್ಷಗಾನ ಪ್ರಸಂಗಗಳ ನಿರಂತರ ಓದು ನಾಯ್ಕರ ರಂಗ ಗಟ್ಟಿತನಕ್ಕೆ ಕಾರಣ. ಕವಿಯ ಆಶಯ, ಪಾತ್ರಗಳ ಸ್ವಭಾವ, ಪೂರಕವಾದ ದೃಶ್ಯಗಳನ್ನು ಮನನಿಸಿ ಭಾಗವತಿಕೆ ಮಾಡುತ್ತಿದ್ದರು. ಚಾಲ್ತಿಯಲ್ಲಿರುವ ಬಹುತೇಕ ಪ್ರಸಂಗಗಳು ಕಂಠಸ್ತವಾದರೂ ಪುಸ್ತಕ ಎದುರಿಲ್ಲದೆ ಹಾಡುತ್ತಿರಲಿಲ್ಲ. ಬಿಡುವಿನ ಅವಧಿಯಲ್ಲಿ ಪುರಾಣ ಪುಸ್ತಕಗಳ ಓದುವಿಕೆ ಅವರನ್ನು ಬೌದ್ಧಿಕವಾಗಿ ಪಕ್ವವಾಗಿಸಿತ್ತು. ಅವರಲ್ಲಿ ಕಥಾ ಹಂದರವನ್ನು ಕೇಳಿದ ಕಲಾವಿದನಿಗೆ ಪದ್ಯ, ಅದರ ಅರ್ಥ, ರಂಗಚಲನೆ ಇವೆಲ್ಲವನ್ನೂ ತಾಳ್ಮೆಯಿಂದ ಅರ್ಥವಾಗುವಂತೆ ಹೇಳುತ್ತಿದ್ದ ದೊಡ್ಡ ಗುಣವಿತ್ತು.
             ಚನಿಯರ ತಾಳವು ಲಯಬದ್ಧ. ಅವರು ತಾಳ ಹಾಕುವಾಗ ಎಂದೂ ಪೆಟ್ಟುಗಳನ್ನು ನುಂಗಿದವರಲ್ಲ. ಕಲಿಕಾ ಹಂತದ ಮದ್ದಳೆಗಾರನೂ ಸಲೀಸಾಗಿ ಮದ್ದಳೆ ನುಡಿಸಬಹುದಾಗಿತ್ತು. ಪಾತ್ರಧಾರಿಯೊಳಗಿದ್ದ ಅಂತಃಸತ್ವವನ್ನು ಹೊರಗೆಳೆವ ವಿಶೇಷ ಶಕ್ತಿ ಹಾಡಿಗಿತ್ತು. ಪ್ರೇಕ್ಷಕನಿಗೆ ಹಿತಾನುಭವ ನೀಡುತ್ತಿತ್ತು. ಹಿಂದೆ ಮುಂದೆ ಓಡುವ ಚೆಂಡೆ, ಮದ್ದಳೆಗಾರರನ್ನು ಎಳೆದು ಹಳಿಯಲ್ಲಿ ಓಡುವಂತೆ ಮಾಡುವ ತಾಕತ್ತಿತ್ತು. ಹಾಗಾಗಿ ಮದ್ದಳೆ, ಚೆಂಡೆ ವಾದಕರು ವೃತ್ತಿಪರರಿರಲಿ, ಹವ್ಯಾಸಿಗಳಿರಲಿ, ಕೆಲವೊಮ್ಮೆ ಅನುಭವ ಪರಾಕಾಷ್ಠೆಗೇರಿ ವಿಷಮ ಬಾರಿಸುವವರು ಸಿಕ್ಕರೂ ಚನಿಯರು ಅಧೀರರಾಗುತ್ತಿರಲಿಲ್ಲ.
            ಭಾಗವತ ಪದ್ಯಾಣ ಗಣಪತಿ ಭಟ್ಟರಿಗೆ ಚನಿಯ ನಾಯ್ಕರು ರಂಗದಲ್ಲಿ ಗುರು. ಒಂದು ವರುಷ ಚೌಡೇಶ್ವರಿ ಮೇಳದಲ್ಲಿ ಅವರೊಂದಿಗೆ ತಿರುಗಾಟ ಮಾಡಿದ್ದೆ. ಮೇಳದಲ್ಲಿ ಪ್ರಸಂಗದ ನಡೆಯ ಪ್ರತ್ಯಕ್ಷ ಪಾಠ ಮಾಡಿದ್ದರು. ಅಠಾಣ, ಸಿಂಹೇಂದ್ರ ಮಧ್ಯಮ, ಮಧ್ಯಮಾವತಿ, ಕಾಂಬೋಜಿ, ನಾಟಿ, ಭೈರವಿ, ಆರಭಿ, ಮೋಹನ, ಸಾವೇರಿ, ಷಣ್ಮುಖಪ್ರಿಯ, ಪಂತುರಾವಳಿ, ಬಿಲಹರಿ, ಸುರುಟಿ, ಕಾನಡ ಮೊದಲಾದ ರಾಗಗಳಲ್ಲಿ ಹಾಡುವಾಗ ಚನಿಯರು ನೆನಪಾಗುತ್ತಾರೆ. ಅವರ ಐದಾರು ರಾಗಗಳನ್ನು ನಾನು ಅನುಕರಿಸುತ್ತೇನೆ. ರಾಗಗಳಲ್ಲಿ ವಂಚನೆ (ಸರ್ಕಸ್) ಇರಲಿಲ್ಲ. ಅವರ ಪದ್ಯದಲ್ಲಿ ರಾಗ, ತಾಳ, ಲಯ, ಗತಿ ಅದ್ಭುತವಾಗಿ ಇದ್ದುವು, ಎನ್ನುತ್ತಾರೆ.
              ನನ್ನ ಕಲಾ ಬದುಕಿನಲ್ಲಿ ತಾಳಮದ್ದಳೆ ನಡೆಯುತ್ತಿದ್ದಂತೆ ಅಸಹನೆಯಿಂದ ಜಾಗಟೆಯನ್ನು ಕೆಳಗಿಟ್ಟು ನಡೆದ ಭಾಗವತರನ್ನು ನೋಡಿದ್ದೇನೆ. ಮದ್ದಳೆ, ಚೆಂಡೆ ನುಡಿಸುತ್ತಿದ್ದಂತೆ ಪರಿಕರಗಳನ್ನು ಬಿಟ್ಟು ಓಡಿದ ಕಲಾವಿದರನ್ನು ನೋಡಿದ್ದೇನೆ. ಇಂತಹ 'ಕಲಾದ್ರೋಹ'ವನ್ನು ಚನಿಯ ನಾಯ್ಕರು ಎಂದೂ ಮಾಡಿದ್ದಿಲ್ಲ. ಅದು ಅವರ ಸಂಸ್ಕಾರ. ಕಲೆಯ ಮೇಲೆಯ ಶ್ರದ್ಧೆ. ಕಪ್ಪಂಚಿನ ಕನ್ನಡಕ, ಎತ್ತರಕ್ಕೆ ಬಾಚಿದ ತಲೆಕೂದಲು, ಕುಂಕುಮದ ದೊಡ್ಡ ತಿಲಕ, ಶ್ವೇತ ಉಡುಪು, ಹಸಿರು ಯಾ ಕೆಂಪು ಶಾಲು, ಕೈಯಲ್ಲಿ ಜಾಗಟೆ-ಪುಸ್ತಕ ಹಿಡಿದು, ಸ್ವಸ್ತಿಕಕ್ಕೆ ನಮಸ್ಕರಿಸಿ, ರಂಗದಲ್ಲಿ ಚೆಂಡೆ-ಮದ್ದಳೆಗೆ-ಕಲಾವಿದರಿಗೆ ನಮಿಸಿದ ಬಳಿಕವೇ ರಂಗವೇರುತ್ತಿದ್ದರು. ಯಕ್ಷಗಾನವನ್ನು ಆರಾಧ್ಯ ಕಲೆ ಎಂದು ಸ್ಪಷ್ಟವಾಗಿ ನಂಬಿದ ಚನಿಯರು ಅದರಂತೆ ನಡೆದುಕೊಳ್ಳುತ್ತಿದ್ದರು.
             ಕೆಲವರು ತಮಾಶೆಗಾಗಿ ಹೇಳುತ್ತಿದ್ದರು, 'ಒಂಜಿ ಪದ್ಯ ಪನ್ಲೆ ಬಾಗವತೆರೆ'. (ಒಂದು ಪದ ಹೇಳಿ ಭಾಗವತರೆ). ಅದಕ್ಕವರ ಉತ್ತರ ನೋಡಿ, ಕಂಡವರ ಮುಂದೆಲ್ಲ ಪದ ಹೇಳುವುದಕ್ಕೆ ಕಲೆಯೆಂಬುದು ಬಿಕರಿಗಿಟ್ಟ ವಸ್ತುವಲ್ಲ ಎಂದು ಖಾರವಾಗಿ ಉತ್ತರಿಸುತ್ತಿದ್ದರು. ಅಪಮಾನವನ್ನು ಸಹಿಸದ ಸ್ವಾಭಿಮಾನ. ಅವರ ಮೇಳ ಜೀವನ ಎಲ್ಲರಂತಲ್ಲ. ಟೆಂಟ್ ಊರುವ ಕೆಲಸವನ್ನೂ ಮಾಡಿದ್ದರು. ಹಿರಿಯ ಕಲಾವಿದರ 'ಸೇವೆ' ಮಾಡುತ್ತಾ ಕಲಿತರು, ಬಲಿತರು. ತನ್ನ ಬಡತನ, ಸಾಮಾಜಿಕ ಸ್ಥಾನಮಾನ ಮತ್ತು ಇತರರಿಗೂ ತನಗೂ ಇರುವ ಅಂತರವನ್ನು ಚನಿಯರು ಪಾಲಿಸುತ್ತಿದ್ದುದರಿಂಲೋ ಏನೋ ಯಕ್ಷಗಾನದ ಮುಖ್ಯವಾಹಿನಿಯಿಂದ ಅವರು ದೂರವೇ ಇರಬೇಕಾಯಿತು.  ಅವರನ್ನು ಹತ್ತಿರದಿಂದ ಬಲ್ಲ ಸಾಹಿತಿ ಕೃ.ಶಾ.ಮರ್ಕಂಜ ಒಂದೆಡೆ ಉಲ್ಲೇಖಿಸುತ್ತಾರೆ, "ಹೆಸರಾಂತ ಅರ್ಥಧಾರಿಗಳ ಮಡಿವಂತಿಕೆ, ನಾಯ್ಕರ ಜಾತಿ, ಬಾಹ್ಯ ಸೌಂದರ್ಯ, ತೀವ್ರ ಬಡತನ ಇತ್ಯಾದಿಗಳು ಕಾರಣವಾಗಿಯೇ ಏನೋ ಚನಿಯರಲ್ಲಿ ಒಂದು ರೀತಿಯ ಹಿಂಜರಿಕೆಯಿತ್ತು. ಇದಕ್ಕೆ ರಂಗದಲ್ಲಿ ಆದ ಅವಮಾನವೇ ಕಾರಣ. ಮತ್ತೆಂದೂ ದೊಡ್ಡ ಸೆಟ್ಟು ಎಂದು ಕರೆಯಲ್ಪಡುತ್ತಿದ್ದ ಕೂಟಗಳಿಂದ ದೂರವಿರುತ್ತಿದ್ದರು."
           ನಾಯ್ಕರು ಶ್ರೀಮಂತರಲ್ಲ. ಬಡತನವಿದೆಯೆಂದು ಕಲೆಯನ್ನು ಹಿಗ್ಗಾಮುಗ್ಗಾ ಜಗ್ಗಲಿಲ್ಲ. ಕಲೆಯನ್ನು ಆರಾಧಿಸುತ್ತಾ ಬೆಳೆದರು. ಸಂಮಾನಗಳ ಕುರಿತು ಅವರಿಗೆ ಅಷ್ಟೊಂದು ಒಲವು ಕಡಿಮೆಯಿತ್ತು. ಕೀರ್ತಿಶೇಷರಾದ ಪ್ಯಾರ್ ನಾವೂರರಲ್ಲಿ ಚನಿಯರು ಹೇಳಿದ ಮಾತು ನೆನಪಾಗುತ್ತದೆ, "ನಾನು ಕಲಿತ ವಿದ್ಯೆಗೆ, ನನ್ನಲ್ಲಿರುವ ಪ್ರತಿಭೆಗೆ ಗೌರವ ಸಂದಿದೆಯೇ ಹೊರತು ಈ ವಿದ್ಯೆಯನ್ನು ಕರಗತ ಮಾಡಿಕೊಳ್ಳಲು ಶ್ರಮವಹಿಸಿ, ಕಷ್ಟ ನಿಷ್ಠುರಗಳನ್ನು ಸಹಿಸಿದ ನನ್ನ ವೈಯಕ್ತಿಕ ಭವಿಷ್ಯಕ್ಕೆ ಇದರಿಂದೇನು ಪ್ರಯೋಜನ?" ಎಂದಿದ್ದರು. 1998-99ರ ಕಾಲಘಟ್ಟದ ಸಂಮಾನಗಳ ಸ್ಥಿತಿ ಹೇಗಿತ್ತು ಎನ್ನುವುದು ಅವರ ಮಾತಿನಲ್ಲಿ ಧ್ವನಿತವಾಗಿತ್ತು.
            ವರ್ತಮಾನದ ಭಾಗವತಿಕೆಯನ್ನು ವಿಮರ್ಶಿಸುವುದು ಅಪರಾಧವಾಗಿಬಿಡುತ್ತದೆ! ರಂಗದಲ್ಲಿ ಏನು ಆಗುತ್ತದೋ ಅದನ್ನು ಒಪ್ಪಿಕೊಳ್ಳಬೇಕಾದ ಒತ್ತಡವಿದೆ. ಸಾಹಿತ್ಯ, ತಾಳ, ರಾಗ, ಲಯ ಮತ್ತು ಯಕ್ಷಗಾನ ಮಟ್ಟುಗಳನ್ನು ಏದುಸಿರುಗೊಳಿಸಿ, ರಂಗವು ವಿಜೃಂಭಿಸುವ (!) ಕಾಲಘಟ್ಟದಲ್ಲಿ ಚನಿಯರು ನೆನಪಾದರು. ಅವರ ಒಂದೊಂದು ಪದ್ಯಗಳನ್ನು ಮನನಿಸಿದಾಗ ಪ್ರಸ್ತುತ 'ಮಟ್ಟು' ಎನ್ನುವುದು ಅರ್ಥವನ್ನೇ ಕಳೆದುಕೊಂಡಿದೆಯೋ ಎನ್ನುವ ಭಯ ಕಾಡಿತು!

Friday, August 4, 2017

ನಿಷ್ಕಪಟ ಕಲಾನಿಷ್ಠೆಯ ಬರೆಪ್ಪಾಡಿ

ಪ್ರಜಾವಾಣಿಯ 'ದಧಿಗಿಣತೋ' / 28-7-2017
  
               1991ನೇ ಇಸವಿ. ಪುತ್ತೂರಿಗೆ ನಾನು ಹೊಸಬ. ಹೊಟ್ಟೆಪಾಡಿಗಾಗಿ ವೃತ್ತಿಗೆ ಹೆಜ್ಜೆಯಿಟ್ಟ ಸಂದರ್ಭ. ಯಕ್ಷಗಾನ ಹವ್ಯಾಸಕ್ಕೆ ಶ್ರೀಕಾರ ಬರೆದ ಸಮಯ. ಒಂದೆರಡು ತಿಂಗಳು ಕಳೆದಿರಬಹುದಷ್ಟೇ. ಬರೆಪ್ಪಾಡಿ ಅನಂತಕೃಷ್ಣ ಭಟ್ಟರಿಗೆ (ಅನಂತಣ್ಣ) ಹೇಗೋ ತಿಳಿಯಿತು. ತಾಳಮದ್ದಳೆಗೆ (ಕೂಟ) ಆಹ್ವಾನಿಸಲು ಆಗಮಿಸಿದ್ದರು. ಸುಮಾರು ಒಂದೂವರೆ ಗಂಟೆಯ ಉಭಯ ಕುಶಲೋಪರಿ. ಅಷ್ಟು ಹೊತ್ತಿಗೆ ಅನಂತಣ್ಣ ಮನದೊಳಗೆ ಇಳಿದಿದ್ದರು. ನಂತರ ಬಹುಕಾಲ ಆಟ, ಕೂಟಗಳಲ್ಲಿ ಒಡನಾಟವಿತ್ತು.
                 2017 ಜುಲೈ 27  ಅನಂತಣ್ಣ ದೂರವಾದರು. ಒಡನಾಟದ ನೆನಪುಗಳು ಮತ್ತೆ ಮತ್ತೆ ರಾಚುವುದಕ್ಕೆ ತೊಡಗಿದುವು. ಪುತ್ತೂರು ಬೊಳ್ವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಕಾರ್ಯದರ್ಶಿಯಾಗಿ ಕಾಲು ಶತಮಾನ ಯಕ್ಷಧ್ವನಿಯನ್ನು ಪಸರಿಸಿದ ಅನಂತಣ್ಣ ಹವ್ಯಾಸಿಗಳ ಪಾಲಿಗೆ ಕೈತಾಂಗು. ಪುತ್ತೂರಿಗೆ ಹೊಸಬರು ಬಂದರೆ ಅವರ ಚಿತ್ತಕ್ಕೆ ಹೇಗೋ ತಿಳಿದುಬಿಡುತ್ತದೆ! ಅವರನ್ನು ಹುಡುಕಿ ಸಂಘದ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಅರ್ಥ ಹೇಳಿಸಿ ಖುಷಿ ಪಡುತ್ತಿದ್ದರು.
                 ಯಕ್ಷಗಾನ ಸಂಘವು ಸರ್ವಸ್ವ. ಯಕ್ಷಗಾನವನ್ನು ಎಷ್ಟು ಪ್ರೀತಿಸುತ್ತಿದ್ದರೋ ಅಷ್ಟೇ ಸಂಘಕ್ಕೂ ಮಣೆ. ಪಾಕ್ಷಿಕವಾಗಿ ನಿರಂತರ ಕೂಟವನ್ನು ನಡೆಸುವ ಬದ್ಧತೆ. ಸಂಘವನ್ನು ಮನಸಾ ಸ್ವೀಕರಿಸಿದ ಸದಸ್ಯರೇ ಸಂಘದ ಆಸ್ತಿ. ಅದೆಷ್ಟೋ ಮಂದಿ ಹವ್ಯಾಸಿಗಳು ಇಲ್ಲಿ ಅರ್ಥಗಾರಿಕೆಯನ್ನು ಆರಂಭಿಸಿದ ದಿನಮಾನಗಳನ್ನು ಅನಂತಣ್ಣ ಜ್ಞಾಪಿಸಿಕೊಳ್ಳುತ್ತಿದ್ದರು. ಓಂ ಶಕ್ತಿ ಆಂಜನೇಯ ಸನ್ನಿಧಿಯಲ್ಲಿ ಜರಗುತ್ತಿದ್ದ ಕೂಟಗಳು ಬೊಳ್ವಾರಿಗೆ ಶೋಭೆ ತಂದಿತ್ತಿತ್ತು. ದೂರದೂರಿನಿಂದ ಕೂಟದಲ್ಲಿ ಭಾಗವಹಿಸಲೆಂದೇ ಬರುತ್ತಿದ್ದರು. 'ನಮ್ಮ ಸಂಘ' ಎನ್ನುವ ಅಭಿಮಾನವೇ ಸಂಘದ ಅಡಿಗಟ್ಟು.
              ಅನಂತಣ್ಣ ಹೇಳುವಂತಹ ಆರ್ಥಿಕ ಸ್ಥಿತಿವಂತರಲ್ಲ. ಉತ್ತಮ ಹೃದಯ ವೈಶಾಲ್ಯವುಳ್ಳವರು. ಆ ಕಾಲಘಟ್ಟದಲ್ಲಿ ಸಂಘದ ಆರ್ಥಿಕ ಸ್ಥಿತಿಗಳು ಅಷ್ಟೊಂದು ಉತ್ತಮವಾಗಿರಲಿಲ್ಲ. ತಾಳಮದ್ದಳೆಗೆ ಆಗಮಿಸಿದ ಕಲಾವಿದರಿಗೆ, ಕೆಲವೊಮ್ಮೆ ಅರ್ಥ ಹೇಳದವರಿಗೂ ಕಾಫಿ, ತಿಂಡಿಗಳ ಆತಿಥ್ಯವನ್ನು ನೀಡದೆ ಕಳುಹಿಸುತ್ತಿರಲಿಲ್ಲ. ಯಾರಾದರೂ ಚಹ ಸೇವನೆ ಮಾಡದೇ ತೆರಳಿದರೆ ಅವರಿಗೆ ದುಃಖವಾಗುತ್ತಿತ್ತು. 'ಮೊದಲು ಆತಿಥ್ಯ, ನಂತರ ಕೂಟ' ಎಂದು ಒಮ್ಮೆ ಹೇಳಿದ್ದರು. ತಾಳಮದ್ದಳೆಯಲ್ಲಿ ನಿರಂತರತೆಯನ್ನು ಕಾಪಾಡಿಕೊಂಡಿದ್ದರು.
               ಅನಂತಣ್ಣ ಸ್ವತಃ ಅರ್ಥಧಾರಿ. ವೇಷಧಾರಿ ಕೂಡಾ. ಬೊಳ್ವಾರಿನ ಕೂಟದಲ್ಲಿ ಅತಿಥಿಗಳಿಗೆ ಮೊದಲಾದ್ಯತೆ. ಮಿಕ್ಕುಳಿದ ಅರ್ಥಗಳಿದ್ದರೆ ತಾನು ಇಟ್ಟುಕೊಳ್ಳುತ್ತಿದ್ದರು. ತಾಳಮದ್ದಳೆಯ ಅಲಿಖಿತ ಸಂವಿಧಾನಕ್ಕೆ ಆಗುವ ತೊಡಕನ್ನು ಸಹಿಸಿ ಅತಿಥಿಗಳಿಗೆ ನೋವಾಗದಂತೆ ಅರ್ಥ ಹಂಚುತ್ತಿದ್ದರು. ಒಮ್ಮೆ ಹೀಗಾಯಿತು - ಸಂಘದ ತಾಳಮದ್ದಳೆ. ಪ್ರಸಂಗ ಸುಧನ್ವ ಮೋಕ್ಷ. ಅಂದು ಪ್ರಭಾವತಿಯ ಅರ್ಥವನ್ನು ಹೇಳುವ ಕಲಾವಿದರು ಸಮಯಕ್ಕೆ ಬಾರದೆ ರಕ್ತದೊತ್ತಡವನ್ನು ಹೆಚ್ಚಿಸಿದ್ದರು. ಕಥೆ ಮುಂದುವರಿಯಿತು. ಇನ್ನೇನು ಸುಧನ್ವ ಮತ್ತು ಅರ್ಜುನನ ಯುದ್ಧದ ಸನ್ನಿವೇಶ  ಸನ್ನಿಹಿತವಾಗುತ್ತಿದ್ದಂತೆ ಗುಟ್ಟಲ್ಲಿ ಹೇಳಿದರು, ಪ್ರಭಾವತಿ ಅರ್ಥವನ್ನು ಹೇಳುವವರು ಬಂದಿದ್ದಾರೆ. ಸ್ವಲ್ಪ ಸುಧಾರಿಸಿ. ಕಥಾನಕ ಮುಂದುವರಿದಾಗಿತ್ತು. ಅವರ ಕೋರಿಕೆಯಂತೆ ಪ್ರಸಂಗಕ್ಕೆ 'ರಿವರ್ಸ್ ಗೇರ್' ಎಳೆಯಲೇ ಬೇಕಾಗಿತ್ತು. ಕಲಾವಿದರಿಗೆ ನೋವಾಗಬಾರದೆನ್ನುವ ಕಳಕಳಿ ನಿಜಕ್ಕೂ ಅಪ್ಪಟ. ಅನಂತಣ್ಣನ ಈ ಮನಃಸ್ಥಿತಿಯನ್ನು ಎಲ್ಲರೂ ಗೌರವಿಸಿದ್ದರು ಕೂಡಾ.
              ಪುತ್ತೂರು ಸನಿಹದ ತನ್ನ ಬರೆಪ್ಪಾಡಿ ಮನೆಯಲ್ಲಿ ಬಹುಕಾಲ ಶ್ರೀ ರಾಘವೇಂದ್ರ ಆರಾಧನೆಯ ದಿವಸ ತಾಳಮದ್ದಳೆ ಕೂಟ ಖಾಯಂ. ರಾತ್ರಿ ಪೂಜೆಯ ಬಳಿಕ ತಾಳಮದ್ದಳೆ. ಆಮಂತ್ರಿತರಲ್ಲದೆ ಸುದ್ದಿ ಕೇಳಿ ಕಲಾವಿದರು ಭಾಗವಹಿಸುತ್ತಿದ್ದರು. ಅಂದಿನ ಸುಗ್ರಾಹಸ ಭೋಜನವೇ ಒಂದು ಸುದ್ದಿ. ರಾತ್ರಿಯಿಡೀ ಉಪಾಹಾರದ ದಾಸೋಹ. ಬೆಳಿಗ್ಗೆ ಕೂಟ ಮುಗಿದು ಬೆಳಗ್ಗಿನ ಉಪಾಹಾರ ಮುಗಿಸಿದ ಬಳಿಕವೇ ಕಲಾವಿದರಿಗೆ ವಿದಾಯ. ಅವರವರ ಆಸಕ್ತಿಗೆ ಸರಿಯಾದ ಆತಿಥ್ಯ. ಕೆಲವರಿಗೆ ವೀಳ್ಯ ಇಷ್ಟವಾದರೆ, ಇನ್ನೂ ಕೆಲವರಿಗೆ ಬೀಡಿ, ಸಿಗರೇಟ್! ಆ ಕಾಲಘಟ್ಟದಲ್ಲಿ ಇದೆಲ್ಲ ಮಾನ್ಯವಾಗಿತ್ತು. ಒಟ್ಟಾರೆಯಾಗಿ ಕಲಾವಿದರು ಖುಷಿಯಾಗಿರಬೇಕು ಎನ್ನುವ ಧೋರಣೆ.
              ತಾಳಮದ್ದಳೆಯ ಹಿರಿಯ ಅರ್ಥಧಾರಿಗಳ ಹತ್ತಿರದ ಒಡನಾಟವಿತ್ತು. ತಾಳಮದ್ದಳೆ ಆಲಿಸಲೆಂದೇ ದೂರದೂರಕ್ಕೆ ಪ್ರಯಾಣಿಸುತ್ತಿದ್ದರು. ಹೀಗೆ ಹೋದಾಗಲೆಲ್ಲಾ ಅನಂತಣ್ಣನಿಗೆ ಒಂದು ಅರ್ಥ ಖಾಯಂ. ಡಾ.ಶೇಣಿ, ರಾಮದಾಸ ಸಾಮಗರು, ಕಾಂತ ರೈಗಳು... ಮೊದಲಾದ ಹಿರಿಯರೊಂದಿಗೆ ಅರ್ಥ ಹೇಳಿದ ಖುಷಿಯನ್ನು ಆಗಾಗ್ಗೆ ಹಂಚಿಕೊಳ್ಳುವುದಿತ್ತು. ತಾಳಮದ್ದಳೆಗಳ ಸ್ವಾರಸ್ಯಗಳು ಬರೆಪ್ಪಾಡಿಯವರ ನಿಷಂಗದಲ್ಲಿ  ಸಾಕಷ್ಟಿತ್ತು. ಲಹರಿ ಬಂದಾಗ ಆಪ್ತರಲ್ಲಿ ಹಂಚಿಕೊಳ್ಳುತ್ತಿದ್ದರು.
              "ಯಕ್ಷಗಾನದ ಒಲವು ಇದೆಯೆಂದು ಗೊತ್ತಾದರೆ ಸಾಕು, ಅಂತಹವರನ್ನು ಎಳೆದು ತಂದು ಅರ್ಥ ಹೇಳಿಸುವ ದೊಡ್ಡ ಗುಣ. ಸಂಘದ ಕೂಟ ಅಲ್ಲದೆ ಬೇರೆ ಸಮಾರಂಭಗಳ ಕೂಟಗಳಿಗೆ ಕರೆ ಬಂದಾಗ ಸಂತೋಷದಿಂದ ಸಂಘಟಿಸುತ್ತಿದ್ದರು. ಅಲ್ಲಿ ಸಿಕ್ಕಿದ ವೀಳ್ಯವನ್ನು ಎಲ್ಲರಿಗೂ ಸಮಾನವಾಗಿ ಹಂಚುತ್ತಿದ್ದರು. ಹಿಮ್ಮೇಳ ಪರಿಕರಗಳನ್ನು ಸ್ವತಃ ಹೊತ್ತೊಯ್ಯುತ್ತಿದ್ದರು. ಇಂತಹ ವಿಚಾರಗಳು ಅವರಿಗೆ ಅವಮಾನವಲ್ಲ, ಎಂದು ಅವರ ಒಡನಾಟವನ್ನು ನೆನಪು ಮಾಡಿಕೊಳ್ಳುತ್ತಾರೆ," ಕಲಾವಿದ ಪಿ.ಜಿ.ಜಗನ್ನಿವಾಸ ರಾವ್.
               ಅನಂತಣ್ಣನಿಗೆ ಪೌರೋಹಿತ್ಯ ವಿಭಾಗದಲ್ಲಿ ಪರಿಣತಿಯಿತ್ತು. ಅದನ್ನೆಲ್ಲೂ ತೋರಿಸಿಕೊಂಡಿಲ್ಲ. ಆಯಾಯಾ ಕ್ಷೇತ್ರಕ್ಕೆ ಸರಿಯಾದ ಉಡುಪು, ಭಾಷೆ, ಒಡನಾಟ. ಯಕ್ಷಗಾನದ ಸಂಪರ್ಕಕ್ಕೆ ಬಂದಾಗ ತಾನೋರ್ವ ವೈದಿಕ ಎನ್ನುವುದನ್ನು ಪೂರ್ತಿಯಾಗಿ ಮರೆಯುತ್ತಿದ್ದರು. ಎಂದೂ ಫೋಸ್ ಕೊಡುತ್ತಿರಲಿಲ್ಲ. ಹಾಗೆಂತ ಪೌರೋಹಿತ್ಯ ಕ್ಷೇತ್ರಕ್ಕೆ ಬಂದಾಗ ಅಲ್ಲಿ ಯಕ್ಷಗಾನದ ಯಾವುದೇ ಸುಳಿವು ಇಲ್ಲದಂತೆ ಸ್ವಯಂ ನಿಯಂತ್ರಣವಿತ್ತು. ಉತ್ತಮ ಭಜನಾ ಹಾಡುಗಾರರು ಕೂಡಾ.
ಬಹುತೇಕ ಪ್ರಸಂಗಗಳ ಪದ್ಯಗಳು ಕಂಠಸ್ಥ. ಎಲ್ಲಾ ನಮೂನೆಯ ಅರ್ಥಗಳನ್ನು ಹೇಳಿದ ಅನುಭವಿ.
                ಒಮ್ಮೆ ಕೀರ್ತಿಶೇಷ ಬೊಳ್ವಾರು ಮಾಧವ ನಾಯಕರು ಅನಂತಣ್ಣನ ಹನುಮಂತನ ಅರ್ಥವನ್ನು ಕೇಳಿ ಖುಷಿಯಿಂದ ಹೇಳಿದ್ದರು, "ಆಂಜನೇಯ ಸಂಘದ ತಾಳಮದ್ದಳೆಗಳಲ್ಲಿ ಹನುಮಂತ ಪಾತ್ರ ಬರುವ ಪ್ರಸಂಗವಿದ್ದರೆ ಅದರಲ್ಲಿ ಹನುಮಂತನ ಪಾತ್ರದ ಅರ್ಥವನ್ನು ನೀವೇ ನಿರ್ವಹಿಸಬೇಕು." ಅಂದಿನಿಂದ ಮಾಧವ ನಾಯಕರ ಮಾತನ್ನು ಸುಳ್ಳಾಗಿಸಲಿಲ್ಲ. ಒಂದೆರಡು ಬಾರಿ ಅವಕಾಶಗಳು ತಪ್ಪಿದಾಗ ಅಸಹನೆಗೊಂಡಿದ್ದರು.
                ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಡಿಯಲ್ಲಿ ’ಮಹಿಳಾ ಯಕ್ಷಗಾನ ಸಂಘದ’ ಸ್ಥಾಪನೆಯ ಕನಸು ನನಸಾದಾಗ ಖುಷಿ ಪಟ್ಟಿದ್ದರು. ಹೊಸಬರಿಗೆ ಅರ್ಥಗಳನ್ನು ಸ್ವತಃ ಬರೆಯುತ್ತಿದ್ದರು. ಮರಣಿಸುವ ಹಿಂದಿನ ರಾತ್ರಿ ಹವ್ಯಾಸಿಗಳಿಗಾಗಿ ವೀರಮಣಿ ಕಾಳಗ ಪ್ರಸಂಗಕ್ಕೆ ಅರ್ಥ ಬರೆಯುವ ಕಾಯಕದಲ್ಲಿದ್ದರು. "ಪ್ರಸಂಗ, ಕವಿ ಮತ್ತು ಪಾತ್ರಗಳ ಆಶಯವನ್ನು ಕಲಾವಿದರು ಅರ್ಥ ಮಾಡಿಕೊಳ್ಳಬೇಕು. ಭಾವನಾತ್ಮಕವಾಗಿ ಅರ್ಥ ಹೇಳಿದಾಗ ಪರಿಣಾಮ ಜಾಸ್ತಿ. ಅರ್ಥಗಾರಿಕೆ ಭಾಷಣದಂತಿರಬಾರದು", ಎನ್ನುತ್ತಿದ್ದರು.
                ಪೂಜ್ಯ ಪೇಜಾವರ ಶ್ರೀಗಳ ಬಾಲ್ಯದ ಒಡನಾಡಿ ಅನಂತಣ್ಣ. ಮೊನ್ನೆ ಅವರ ಚಾತುರ್ಮಾಸ್ಯದ ಸಂದರ್ಭದಲ್ಲಿ ಜರುಗಿದ ವಾಲಿ ಮೋಕ್ಷ ಪ್ರಸಂಗದ 'ವಾಲಿ'ಯ ಅರ್ಥವನ್ನು ಭಾವನಾತ್ಮಕವಾಗಿ ನಿರ್ವಹಿಸಿದ್ದರು. ಬಪ್ಪಳಿಗೆಯ ’ಅಗ್ರಹಾರ’ ಗೃಹದಲ್ಲಿ ಜರುಗಿದ”ಪುತ್ತೂರು ಗೋಪಣ್ಣ’ ಅವರ ಸಂಸ್ಮರಣೆಯ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಮೊನ್ನೆಯಷ್ಟೇ ದೂರವಾದ ಚಿದಾನಂದ ಕಾಮತ್ ಕಾಸರಗೋಡು ಅವರ ಮರಣದ ಸುದ್ದಿಗೆ ಮರುಗಿದ್ದರು.
                "ಅನಂತಣ್ಣನದು ಯಕ್ಷನಿಸ್ಪೃಹ ವ್ಯಕ್ತಿತ್ವ. ಕಪಟದಿಂದ ದೂರ. ಹವ್ಯಾಸಿಗಳಲ್ಲಿ ಹೆಚ್ಚೆಚ್ಚು ಕಲಾವಿದರು ರೂಪುಗೊಳ್ಳಬೇಕೆಂಬ ಆಶೆಯನ್ನು ಹೊಂದಿದ್ದರು. ಫಲಾಪೇಕ್ಷೆಯಿಲ್ಲದೆ ಯಕ್ಷಗಾನಕ್ಕಾಗಿ ಸಮರ್ಪಿಸಿಕೊಂಡಿರುವುದು ಅಜ್ಞಾತ ಸತ್ಯ," ಎಂದು ಆಂಜನೇಯ ಯಕ್ಷಗಾನ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯರು ಅನಂತಕೃಷ್ಣ ಭಟ್ಟರ ಗುಣವನ್ನು ನೆನಪಿಸಿಕೊಳ್ಳುತ್ತಾರೆ.
             ಪುತ್ತೂರಿನ ಯಕ್ಷಗಾನ ಪರಿಸರವನ್ನು ತನ್ನ ಉಸಿರಿನಂತೆ ಕಾಪಾಡಿ ಬೆಳೆಸಿದ್ದರು. ಕೀರ್ತಿಶೇಷ ಬರೆಪ್ಪಾಡಿ ನಾರಾಯಣ ಭಟ್ ಮತ್ತು ಬರೆಪ್ಪಾಡಿ ಪುರಂದರ ಭಟ್ ಅನಂತಣ್ಣನ ಸಹೋದರರು. ಮಡದಿ ಸುಗುಣಾ.
ಎಂಭತ್ತನಾಲ್ಕರ ಬರೆಪ್ಪಾಡಿ ಅನಂತಕೃಷ್ಣ ಭಟ್ಟರು ದೂರವಾಗಿದ್ದಾರೆ. ಅವರು ಅನುಷ್ಠಾನಿಸಿ ಬಿಟ್ಟುಹೋದ ಗುಣಗಳು ಮೌನವಾಗಿದೆ. ಯಕ್ಷಗಾನದ ಕುರಿತು ಎಂದೂ ಗೊಣಗದ ಅನಂತಣ್ಣ ಅದನ್ನೊಂದು ಆರಾಧನಾ ತಾಣವನ್ನಾಗಿ ಸ್ವೀಕರಿಸಿದ್ದರು. ಬರೆಪ್ಪಾಡಿಯವರಿಗಿದು ಅಕ್ಷರ ನಮನ.



ಅಬ್ಬರದ ಅಲೆಯೊಳಗೆ ಕಲೆಯ ಒದ್ದಾಟ, ಅಭಿವ್ಯಕ್ತಿಗಳ ಗುದ್ದಾಟ!


ಪ್ರಜಾವಾಣಿಯ 'ದಧಿಗಿಣತೋ' / 10-3-2017

              ಮೇಳವೊಂದರ 'ದೇವಿ ಮಹಾತ್ಮೆ' ಆಟ. ಅದ್ದೂರಿಯ ಬೆಳಕು, ಧ್ವನಿ ವ್ಯವಸ್ಥೆ. ತುಂಬು ಸಹೃದಯಿ ಪ್ರೇಕ್ಷಕರು. ದೇವಿ ಮಹಾತ್ಮೆ ಪ್ರದರ್ಶನ ಅಂದರೆ ಸಾಮಾನ್ಯವಾಗಿ ಭಕ್ತಿಯ ಮನೋಭಾವದ ಪ್ರೇಕ್ಷಕರು. ಆರಂಭದಲ್ಲಿ ತ್ರಿಮೂರ್ತಿಗಳಿಗೆ ಆದಿಮಾಯೆ ಅನುಗ್ರಹಿಸುವ ಸನ್ನಿವೇಶ. ರಂಗವನ್ನು ಹೊಗೆಯಿಂದ ತುಂಬಿಸಲಾಗಿತ್ತು! ಜತೆಗೆ ಕಣ್ಣು ಕೋರೈಸುವ ಬಣ್ಣ ಬಣ್ಣದ ಆಧುನಿಕ ತಂತ್ರಜ್ಞಾನದ ಬೆಳಕು. ಕೃತಕ ಹೊಗೆಯ ಧಗೆಯೊಳಗೆ ಪಾತ್ರಗಳು ಮಿಂದೇಳುತ್ತಿದ್ದುವು. ಕಾಣದ ಲೋಕಕ್ಕೆ ಸನ್ನಿವೇಶ ಒಯ್ದಿತ್ತು! ಹತ್ತು ನಿಮಿಷ ರಂಗದ ಯಾವ ವ್ಯವಹಾರಗಳೂ ಕಾಣದಷ್ಟು ಕೃತಕ ಧೂಮ.
              ಕೃತಕವಾಗಿ ಧೂಮ ಸೃಷ್ಟಿಸುವ ತಾಂತ್ರಿಕತೆಗಳು ಸ್ಕೂಲ್ಡೇಗಳಂತಹ ಸಾಂಸ್ಕೃತಿಕ ರಂಗದಲ್ಲಿ ಮಾಮೂಲಿ. ಅದೀಗ ಆಟದ ರಂಗಕ್ಕೂ ನುಸುಳಿದೆ. ಉಸಿರಿಗೆ ಮಾರಕವಾದ ರಾಸಾಯನಿಕ(ಕೆಮಿಕಲ್)ಗಳಿಂದ ಸಿದ್ಧವಾದ ಧೂಮವನ್ನು ಸೇವಿಸಲೇಬೇಕಾದ ಪ್ರಾರಬ್ಧ. ಇದರಿಂದಾಗಿ ಕೆಮ್ಮು ಬಂದು ಭಾಗವತಿಕೆ ಮಾಡಲಾಗದ ಸ್ಥಿತಿಯು ಭಾಗವತರೊಬ್ಬರಿಗೆ ಬಂದುದು ನೆನಪಿದೆ. ಇನ್ನು ವೇಷಧಾರಿಗಳ ಪಾಡು? ಪ್ರೇಕ್ಷರಿಗಾದರೆ ಒಂದು ದಿವಸವಲ್ವಾ ಅಂತ ಸುಮ್ಮನಿರಬಹುದು. ವೇಷಧಾರಿಗಳಿಗೆ ನಿರಂತರ ಪಾಡು. 'ಇಂತಹ ವ್ಯವಸ್ಥೆಗಳನ್ನು ಕೈಬಿಡಲಾಗಿದೆ' ಎಂದು ಹೇಳುತ್ತಾ ಬಂದರೂ ಅದ್ದೂರಿತನದ ಪ್ರತಿಷ್ಠೆ ಮೇಳೈಸುತ್ತಲೇ ಇರುತ್ತದೆ. ಅಲ್ಲೋ ಇಲ್ಲೋ ಆದರೆ ಓಕೆ - ಸಹಿಸಬಹುದು.  
             ಧೂಮ ಬಾಧೆ ಒಂದು ಬಾರಿಯಲ್ಲ; ಮಹಿಷಾಸುರನ ಪ್ರವೇಶ, ಚಂಡಮುಂಡರ ಪ್ರವೇಶ, ದೇವಿ ಪ್ರತ್ಯಕ್ಷ.. ಮೊದಲಾದ ದೃಶ್ಯಗಳಲ್ಲಿ ಮರುಕಳಿಸುತ್ತಿತ್ತು. ನಾನು ಇಂತಹ ಧೂಮವನ್ನು ಸೇವಿಸಿ ಧ್ವನಿಕೆಟ್ಟು, ರಂಗದಿಂದ ಸ್ವಲ್ಪ ಹೊತ್ತು ನಿರ್ಗಮಿಸಿದ ಒಂದೆರಡು ಪ್ರದರ್ಶನಗಳು ನೆನಪಾಗುತ್ತವೆ. ಕಣ್ಣು, ಮನಸ್ಸು ಒಪ್ಪದ ರಂಗ ವಿಕಾರಗಳನ್ನು ಸರಿಸುವುದು - ರಂಗಕ್ಕೂ ಕ್ಷೇಮ, ಕಲಾವಿದರಿಗೂ ಆರೋಗ್ಯ. 'ಇಂತಹ ಗಿಮಿಕ್ಸ್ ಮಾಡಿದರೆ ಆಟಕ್ಕೆ ಜನ ಬರ್ತಾರೆ, ಯಕ್ಷಗಾನಕ್ಕೆ ಪ್ರಚಾರ ಸಿಗುತ್ತದೆ,' ಎಂದು ಹಿಂದೊಮ್ಮೆ ಕಲಾವಿದರೊಬ್ಬರು ಹೇಳಿದ್ದರು. ಗಿಮಿಕ್ಸ್ಗಳಿಂದ ಯಕ್ಷಗಾನ ಪ್ರಸಿದ್ಧವಾಗುತ್ತದೆ ಎಂದಾದರೆ ಅಂತಹ ಬೆಳವಣಿಗೆಗಳು ಯಕ್ಷಗಾನಕ್ಕಂತೂ ಖಂಡಿತಾ ಬೇಡ. ಗಿಮಿಕ್ಸ್ನಿಂದ ಬೆಳೆದ ಯಕ್ಷಗಾನದಲ್ಲಿ ಯಕ್ಷಗಾನ ಇದ್ದೀತೇ? ವಾಸ್ತವ ಬೇರೆ, ಅಭಿಮಾನ ಬೇರೆ.
            ಕೆಲವಡೆ 'ಮಹಿಷಾಸುರ' ಪಾತ್ರವನ್ನು ಕಿಲೋಮೀಟರ್ ದೂರದಿಂದಲೇ ಮೆರವಣಿಗೆಯಲ್ಲಿ ಕರೆ ತರಲಾಗುತ್ತದೆ. ಸೂಟೆ, ದೊಂದಿಯ ಮಧ್ಯೆ ಮಹಿಷಾಸುರ ಗಂಡುಗತ್ತಿನಿಂದ ಹೆಜ್ಜೆ ಹಾಕಬೇಕಾಗುತ್ತದೆ! ತಾಯಿ ಮಾಲಿನಿಯ ದನಿ ಕೇಳಿ ಸಭಾಮಧ್ಯದಿಂದ ಮಹಿಷನ ಪ್ರವೇಶವಾಗುತ್ತದೆ. ಆದರೆ ದೂರದ ನಡಿಗೆಯಿಂದ ಬಂದು  ರಂಗಪ್ರವೇಶಿಸುವಾಗ ಎಷ್ಟು ಹೊತ್ತು ವಿಳಂಬವಾದೀತು? ಅಷ್ಟು ಹೊತ್ತು - ಅಂದರೆ ಕನಿಷ್ಠ ಅರ್ಧ ಗಂಟೆಗೂ ಮಿಕ್ಕಿ - ರಂಗ ಖಾಲಿ. ಹಿಮ್ಮೇಳ ಕಲಾವಿದರು ವಾದನವನ್ನು ನಿಲ್ಲಿಸುವಂತಿಲ್ಲ. ಮಹಿಷನ ಪಾತ್ರವನ್ನು ಧರಿಸಿದ ಕಲಾವಿದನಿಗೂ ಮಾನಸಿಕ ಹಿಂಸೆ. ಸಂಘಟಕರ ಕಿರುಕುಳವೆಂಬ ಪ್ರಾರ್ಥನೆಗೆ ಮೌನಸಮ್ಮತಿಯ ಹಿಂದಿರುವ ಮಾನವೀಯ ಮುಖ ನಮಗೇನಾದರೂ ಕಾಣಿಸುತ್ತಿದ್ದೆಯೇ? ಕಾಣಿಸುತ್ತಿದ್ದರೆ ಬಹುಶಃ ಮಹಿಷಾಸುರನನ್ನು ಸಭಾ ವಲಯದಿಂದ ದೂರ ಕರೆದೊಯ್ದು ಸೂಟೆ ಸೇವೆಯೊಂದಿಗೆ ಕರೆತರುತ್ತಿರಲಿಲ್ಲ.
              ಈಚೆಗೆ ನವಮಾಧ್ಯಮ(ಸಾಮಾಜಿಕ ಜಾಲತಾಣ)ಗಳಲ್ಲಿ ಒಂದು ವೀಡಿಯೋ ಹರಿದಾಡುತ್ತಿತ್ತು. ಸೂಟೆಗಳ ಭರಾಟೆಯ ಮಧ್ಯೆ ಉರಿಯುತ್ತಿದ್ದ ಬೆಂಕಿಯ ದೊಡ್ಡ ಅಗ್ಗಿಷ್ಟಿಕೆಯನ್ನು ಮಹಿಷಾಸುರ ಪಾತ್ರಧಾರಿ ಲಂಘಿಸುವ ದೃಶ್ಯ. ಮಹಿಷಾಸುರನ್ನು ನಾವು 'ಯಕ್ಷಗಾನ ಪಾತ್ರ' ಎಂದು ಸ್ವೀಕರಿಸಲು ಯಾಕೆ ಮಾನಸಿಕ ಅಡ್ಡಿ? ಆತ ಬೆಂಕಿಗೆ ಹಾರುವವನಲ್ಲ, ಮೆರವಣಿಗೆಯಲ್ಲಿ ಬರಬೇಕಾದವನಲ್ಲ. ಅಭಿಮಾನಿಗಳ ಅಭಿಮಾನದ ಮುಂದೆ ಕಲಾವಿದರೂ ಅಭಿಮಾನಕ್ಕೆ ಶರಣಾಗುವಂತಹ ಒತ್ತಡವನ್ನು ಯಾಕೆ ಸೃಷ್ಟಿಸುತ್ತೇವೆ ಎಂದು ಅರ್ಥವಾಗುವುದಿಲ್ಲ. ಸಂಘಟಕರು ಈ ದಿಸೆಯಲ್ಲಿ ಯೋಚಿಸಬೇಕು.
ಕಲಾವಿದರು ಹಿಂದಿನ ರಾತ್ರಿ ನಿದ್ದೆಗೆಟ್ಟಿರುತ್ತಾರೆ. ಮರುದಿವಸ ಹಗಲು ವೈಯಕ್ತಿಕ, ಕೌಟುಂಬಿಕ ವಿಚಾರಗಳಿಂದಾಗಿ ನಿದ್ದೆ ಮಾಡಿಲ್ಲ ಎಂದಿಟ್ಟುಕೊಳ್ಳಿ. ಕಲಾವಿದನ ಈ ಸಮಸ್ಯೆ ಪ್ರೇಕ್ಷಕರಿಗೆ, ಸಂಘಟಕರಿಗೆ ಅರಿವಾಗುವುದಿಲ್ಲ.
              ಈ ರೀತಿ ಬೆಂಕಿ ಹಾರಲು ಪ್ರಚೋದಿಸಿದಾಗ ಎಲ್ಲಾದರೂ ಬೆಂಕಿಯ ಕಿಡಿಯು ಧರಿಸಿದ ವೇಷಭೂಷಣಗಳ ಮೇಲೆ ಹಾರಿ ಆಗುವ ಅಪಾಯವನ್ನು ಊಹಿಸಲೂ ಭಯವಾಗುತ್ತದೆ. ಈಗೆಲ್ಲಾ ನೈಲಾನ್ ಬಟ್ಟೆಗಳ ವಸ್ತ್ರಗಳು. ಕಲಾವಿದರಿಗೆ ಏನಾದರೂ ತೊಂದರೆ ಆಯಿತೆನ್ನಿ. ಯಾರು ಅನುಭವಿಸಬೇಕು? ಅಭಿಮಾನವು ಕಲಾವಿದ ರಂಗದಲ್ಲಿ ಇರುವಷ್ಟು ಹೊತ್ತು ಮಾತ್ರ ಇರುತ್ತದೆ ಅಲ್ವಾ. ಹಾಗಾಗಿ ಕಲಾವಿದರನ್ನು ರಂಗದ ವ್ಯವಹಾರಕ್ಕಷ್ಟೇ ಅವರನ್ನು ಬಿಟ್ಟುಬಿಡಿ. ನಮ್ಮ ಆಸಕ್ತಿ, ಕುತೂಹಲ, ಕೌತುಕಗಳನ್ನು ಅವರ ಮೇಲೆ ಹೇರುವುದು ಬೇಡ. ಮಹಿಷಾಸುರನಿಗೆ ಮೆರವಣಿಗೆಯಲ್ಲಿ ಕರೆತಂದ ಆಯಾಸವಿರುವಾಗ ಆ ಕಲಾವಿದ ರಂಗದಲ್ಲಿ ಗಾಢವಾಗಿ ಅಭಿವ್ಯಕ್ತಿ ಮಾಡಲು ಸಾಧ್ಯವೇ? ಅಭಿವ್ಯಕ್ತಿ ಕ್ಷೀಣವಾದಾಗ 'ಈ ಮಹಿಷ ಪ್ರಯೋಜನವಿಲ್ಲ' ಎಂದು ನಾವೇ ಹಣೆಪಟ್ಟಿ ಕಟ್ಟಿಬಿಡುವುದಿಲ್ವಾ. ಮಹಿಷನಿಗೆ ವರ ಕೊಡುವವರು ನಾವೇ, ಶಾಪಕ್ಕೆ ಒಳಪಡಿಸುವರೂ ನಾವೇ! ಅಬ್ಬರದ ಸುಡುಮದ್ದುಗಳ ಸದ್ದಿಗೆ ಕಲಾವಿದರ ಕಿವಿ ಹೊಂದಾಣಿಕೆಯಾಗಿದೆ. ಬ್ಯಾಂಡ್, ವಾಲಗದ ನಾದವು ಯಕ್ಷಗಾನದ ಹೆಜ್ಜೆಗಾರಿಕೆಯ ಒಂದಂಶವನ್ನು ಕಸಿದುಕೊಂಡಿದೆ. ಸೊಂಟತ್ರಾಣವು ರಂಗಕ್ಕೆ ಸೀಮಿತವಾಗಿರಲಿ.
              ಈ ಅದ್ದೂರಿತನವನ್ನು ಸಹಿಸಿದ ಒಂದೇ ವಾರದಲ್ಲಿ ಮಂಗಳೂರು ಮರಕಡದಲ್ಲಿ 'ಶಬರಿಮಲೆ ಕ್ಷೇತ್ರ ಮಹಾತ್ಮೆ' ಪ್ರಸಂಗವೊಂದರಲ್ಲಿ ಭಾಗವಹಿಸಿದ್ದೆ. ರಂಗಕ್ಕೆ ತಾಗಿಕೊಂಡು ಕಾಡಿನ ದೃಶ್ಯವೊಂದನ್ನು ಪೋಣಿಸಲಾಗಿತ್ತು. ಪೂರಕವಾದ ಚಿಕ್ಕ ಚಿಕ್ಕ ಬಣ್ಣದ ಬೆಳಕುಗಳು. ಅಯ್ಯಪ್ಪನ ತಪಸ್ಸಿನ ದೃಶ್ಯಕ್ಕೆ ಈ ಹೆಚ್ಚುವರಿ ವ್ಯವಸ್ಥೆ ತುಂಬಾ ಹೊಂದಾಣಿಕೆಯಾಗಿತ್ತು. ತಾಯಿ ಬಂದು 'ನನ್ನ ಮಾಂಗಲ್ಯ ಉಳಿಸು' ಎಂದು ಬೇಡಿಕೊಂಡಾಗ ರಂಗದ ಬೆಳಕು ಮತ್ತು ಕಾನನದ ಮಧ್ಯೆ ಎದ್ದು ಬರುವ ಅಯ್ಯಪ್ಪನ ಸನ್ನಿವೇಶವು ಪರಿಣಾಮಕಾರಿಯಾಗಿ ಮೂಡಿಬಂತು. ಇಂತಹು ಪ್ರೇಕ್ಷಕರನ್ನು ಪುರಾಣ ಲೋಕಕ್ಕೆ ಒಯ್ಯುತ್ತದೆ. ಕಥೆಗೆ ಪೂರಕವಾದ ದೃಶ್ಯ ಜೋಡಣೆಯು ರಂಗಕ್ಕೆ ಪೂರಕ. ಅಂದು 'ಅಯ್ಯಪ್ಪ'ನ ಪಾತ್ರ ವಹಿಸಿದವರು ಎಡನೀರು ಮೇಳದ ಕಲಾವಿದ ಲಕ್ಷ್ಮಣ ಕುಮಾರ್ ಮರಕಡ. ನವೀನ್ ಶೆಟ್ಟಿ ಮುಂಡಾಜೆ 'ಮಣಿಕಂಠ'ನಾಗಿದ್ದರು.
              ಕೀರ್ತಿಶೇಷ ಅಡೂರು ಶ್ರೀಧರ ರಾಯರು ಕೆಲವು ಆಟಗಳಲ್ಲಿ ಯಜ್ಞ ಕುಂಡ, ಸುಧನ್ವನನ್ನು ಕಾದೆಣ್ಣೆಯ ಕೊಪ್ಪರಿಗೆಗೆ ಹಾಕುವ ದೃಶ್ಯಗಳನ್ನು ಕೃತಕವಾಗಿ ರಂಗದಲ್ಲಿ ನಿರ್ಮಿಸಿದ್ದರು. ಆ ಕಾಲಘಟ್ಟದಲ್ಲಿ ಅದು ಜನಮನ್ನಣೆ ಪಡೆದಿತ್ತು. ರಂಗಕ್ಕೆ ಪೂರಕವಾದ ರಂಗ ಜೋಡಣೆಗಳು ಪ್ರದರ್ಶನವನ್ನು ಎತ್ತರಕ್ಕೆ ಏರಿಸುತ್ತವೆ. ಕಲಾವಿದನಿಗೂ ತೃಪ್ತಿಯ ಭಾವ ಮೂಡುತ್ತದೆ. ಪ್ರೇಕ್ಷಕರೂ ರಂಗಸುಖವನ್ನು ಅನುಭವಿಸುತ್ತಾರೆ. 
            ನಮ್ಮಲ್ಲಿ ವೆಚ್ಚ ಮಾಡಲು ಹಣವಿದೆ, ಸಮಾಜದಲ್ಲಿ ಎದೆಯುಬ್ಬಿಸಿ ನಡೆಯುತ್ತೇವೆ. ಯಾರನ್ನೂ 'ಡೋಂಟ್ ಕೇರ್' ಮಾಡದ ಅಂತಸ್ತು ಇದೆ - ಇವೆಲ್ಲಾ ಅವನವನ ವೈಯಕ್ತಿಕ ಜೀವನದ ಸಂಪತ್ತುಗಳು. ಆರ್ಥಿಕ ಶ್ರೀಮಂತಿಕೆಯ ಛಾಯೆ ಯಕ್ಷಗಾನ ರಂಗಕ್ಕೆ ಬಾಧಿಸದಿರಲಿ. ಅದ್ದೂರಿತನಕ್ಕೂ ಮಿತಿಯಿರಲಿ. ಅದ್ದೂರಿಯ ಪ್ರಕಾಶದೊಳಗೆ ಯಕ್ಷಗಾನವನ್ನು ವಿಲವಿಲನೆ ಒದ್ದಾಡಿಸುವ ಹಠ ಬೇಡ.
           ಕಲಾವಿದನಿಗೂ ವೈಯಕ್ತಿಕ ಬದುಕು ಇದೆ, ಆತನಿಗೊಂದು ಮನಸ್ಸಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ರಂಗಾಭಿವ್ಯಕ್ತಿಯಲ್ಲಿ ಮಿತಿಯಿದೆ ಎಂದು ಅಭಿಮಾನಿ ದೇವರುಗಳು ತಿಳಿದರೆ ಸಾಕು, ಅದುವೇ ಕಲೆಗೆ ಸಲ್ಲಿಸುವ ಮಾನ. ನಮ್ಮೆಲ್ಲರ ಅಭಿಮಾನವು ಸಮಗ್ರ ಯಕ್ಷಗಾನದತ್ತ ವಾಲಲಿ. 
 

Wednesday, August 2, 2017

ಎಪ್ಪತ್ತರ ಪೆರಡಂಜಿಗೆ ಇಪ್ಪತ್ತರ ಹುರುಪು


ಪ್ರಜಾವಾಣಿಯ 'ದಧಿಗಿಣತೋ' / 3-3-2017

                 ಕಾಸರಗೋಡು ಜಿಲ್ಲೆಯ ಮುಳಿಯಾರು-ಕೋಟೂರಿನ 'ಕಾರ್ತಿಕೇಯ ಕಲಾ ನಿಲಯ'ವು ಯಕ್ಷಗಾನವನ್ನು ದೇವರ ನಾಡಿನಲ್ಲಿ ಸುತ್ತಿಸಿದ ಸಾಹಸಿ ಸಂಘ. ಹಿರಿಯ ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್ ಮತ್ತು ತಂಡದ ಸಾರಥ್ಯದಲ್ಲಿ ಕೇರಳ, ಕನ್ನಾಡಿನಲ್ಲಿ ನೂರಾರು ಪ್ರದರ್ಶನಗಳನ್ನು ಸಂಪನ್ನಗೊಳಿಸಿದ ದಿನಮಾನಗಳು ಈಗ ಇತಿಹಾಸ. ಒಂದು ಕಾಲಘಟ್ಟದಲ್ಲಿ ಕಲಾ ನಿಲಯವು ನಾಟಕ, ಯಕ್ಷಗಾನಗಳಲ್ಲಿ ಮೇಲ್ಮೆಯಲ್ಲಿತ್ತು. ಮಲೆಯಾಳಿ ನೆಲದಲ್ಲಿ ಕನ್ನಡ ಸೊಗಸನ್ನು ಜನರ ಮುಂದೆ ತೆರೆದಿಟ್ಟಿತ್ತು. ಹಲವಾರು ಕಲಾವಿದರನ್ನು ರೂಪುಗೊಳಿಸಿದ ಹಿರಿಮೆಯಿದೆ. ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಕಲಾ ನಿಲಯದ ತಂಡದಲ್ಲಿ ಸ್ತ್ರೀಪಾತ್ರಧಾರಿ. ಭಾವನಾತ್ಮಕ ಅಭಿವ್ಯಕ್ತಿಯ ಮೂಲಕ ಪಾತ್ರಗಳಿಗೆ 'ನಿಜನ್ಯಾಯ'ವನ್ನು ಸಲ್ಲಿಸಿದ ಕಲಾವಿದ.
                ಈಗ ಕಾರ್ತಿಕೇಯ ಕಲಾ ನಿಲಯವು ಮಲೆಯಾಳ ನಾಟಕಗಳಿಗೆ ಸೀಮಿತ. ಆ ತಂಡದಲ್ಲಿ ಸಕ್ರಿಯರಾಗಿದ್ದ ಅಡ್ಕ ಕುಟುಂಬದ ಕಲಾವಿದರು ಮತ್ತು ಕಲಾ ಆಸಕ್ತಿಯುಳ್ಳ ಸುಮನಸ್ಸಿನವರು 'ಯಕ್ಷತೂಣೀರ ಸಂಪ್ರತಿಷ್ಠಾನ' ಎನ್ನುವ ಸಂಸ್ಥೆಯನ್ನು ರೂಪಿಸಿ ಎರಡು ವರುಷವಾಯಿತು. ಹದಿನಾಲ್ಕು ಸದಸ್ಯರನ್ನೊಳಗೊಂಡ ಪ್ರತಿಷ್ಠಾನವು ಯಕ್ಷಗಾನ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದೆ. ಬಹುತೇಕ ಎಲ್ಲರೂ ಒಂದಲ್ಲ ಒಂದು ವಿಭಾಗದಲ್ಲಿ ಕಲಾವಿದರು. ನಡೆಯುವ ಬಹುತೇಕ ಕಾರ್ಯಕ್ರಮಗಳಲ್ಲಿ ಕಲಾವಿದರಾಗಿ, ಸ್ವಯಂಸೇವಕರಾಗಿ, ಪರಿಚಾರಿಕೆಯರಾಗಿ ಕಾಣಿಸಿಕೊಳ್ಳುತ್ತಾರೆ. ಕಾರ್ಯಕ್ರಮದ ಒಟ್ಟಂದದತ್ತ ಗಮನ. ಎಲ್ಲರ ನೇಪಥ್ಯ  ಶ್ರಮ ಗುರುತರ. 
                 ಯಕ್ಷತೂಣೀರ ಸಂಪ್ರತಿಷ್ಠಾನದಲ್ಲಿ ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಓರ್ವ ಹಿರಿಯ ನಿರ್ದೇಶಕರು. ಎಪ್ಪತ್ತರ ಹರೆಯದ ಜವ್ವನ. ಇವರ ತಂದೆ ಕೃಷ್ಣ ಭಟ್. ಮಾವ ಅಡ್ಕ ಗೋಪಾಲಕೃಷ್ಣ ಭಟ್. ಇವರಿಬ್ಬರ ನೆರಳಿನಲ್ಲಿ ಸ್ವಂತಿಕೆಯ ಯಕ್ಷ ಬದುಕನ್ನು ರೂಪಿಸಿದ ಕಲಾಗಾರ. ಆಗೆಲ್ಲಾ ಹವ್ಯಾಸಿ ಸಂಘದ ಆಟವೆಂದರೆ ಪ್ರತಿಷ್ಠೆ. ಜನ ಸ್ವೀಕೃತಿ ಅಪಾರ. ಊರಿನವರ ಸ್ಪಂದನ ಅನನ್ಯ. ಆಟ ಇದೆಯೆಂದರೆ ಸಾಕು, ಊರಿನ ಸಾಂಸ್ಕೃತಿಕ ಮನಸ್ಸುಗಳು ಗರಿಕೆದರುತ್ತಿದ್ದುವು.  ಅಂತಹ ಸಂದರ್ಭದಲ್ಲಿ ಪಾತ್ರಾಭಿವ್ಯಕ್ತಿಯ ಮೂಲಕ ಪೆರಡಂಜಿಯವರು ಗಮನ ಸೆಳೆದಿದ್ದರು. ಮಾವ ಅಡ್ಕರ ನಿರ್ದೇಶನದಲ್ಲಿ ನಿರ್ವಹಿಸಿದ ಪಾತ್ರಗಳೆಲ್ಲಾ ಗಟ್ಟಿ ಶಿಲ್ಪವಾಗಿ ರೂಪುಗೊಂಡಿದ್ದುವು. ಮಾವ-ಅಳಿಯನ 'ಈಶ್ವರ-ದಾಕ್ಷಾಯಿಣಿ, ಹರಿಶ್ಚಂದ್ರ-ಚಂದ್ರಮತಿ, ಈಶ್ವರ-ಮೋಹಿನಿ, ಭೀಮ-ದ್ರೌಪದಿ..'ಜತೆಗಾರಿಕೆಗಳು ಆ ಕಾಲಘಟ್ಟದಲ್ಲಿ ಪ್ರೇಕ್ಷಕರ ಒಲವು ಗಳಿಸಿದ್ದುವು. 
                  ಕಾರ್ತಿಕೇಯ ಕಲಾ ಸಂಘವು ಯಕ್ಷಗಾನಕ್ಕೆ ಎಷ್ಟು ಮಹತ್ವ ಕೊಡುತ್ತಿತ್ತೋ ನಾಟಕಕ್ಕೂ ಅಷ್ಟೇ ಮಹತ್ವ ನೀಡುತ್ತಿತ್ತು. ಅಡ್ಕದವರ ಹಲವಾರು ನಾಟಕ ರಚನೆಗಳು ರಂಗಸಕ್ತರ, ರಂಗಕರ್ಮಿಗಳ ಮೆಚ್ಚುಗೆ ಗಳಿಸಿದೆ. ನಾನು ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಮಾವ ಬರೆದ 'ಸತ್ಯವಾನ್ ಸಾವಿತ್ರಿ' ನಾಟಕದಲ್ಲಿ 'ಸಾವಿತ್ರಿ'ಯ ಪಾತ್ರವನ್ನಿತ್ತುದಲ್ಲದೆ, ನನ್ನ ಮುಖಕ್ಕೆ ಬಣ್ಣ ಹಚ್ಚಿ ಬಣ್ಣದ ಬದುಕಿನ ಹಾದಿ ತೋರಿದ್ದಾರೆ. ಮತ್ತೆ ಅವರ ಎಲ್ಲಾ ನಾಟಕಗಳಲ್ಲೂ ನಾನೇ ಮುಖ್ಯ ಸ್ತ್ರೀಪಾತ್ರಧಾರಿ, ಎಂದು ಕಳೆದ ಕಾಲದ ರಂಗಕಥನವನ್ನು ನೆನಪಿಸಿಕೊಳ್ಳುತ್ತಾರೆ ಪೆರಡಂಜಿಯವರು.
                   ವೇಗದ ಯಕ್ಷಗಾನ ಹೆಜ್ಜೆಗಳಿಗೆ ಒಂದಷ್ಟು ಕಾಲ ವಿಶ್ರಾಂತಿ! ಬಳಿಕ ಅದೇ ಹುರುಪಿನಿಂದ ಮೇಲೆದ್ದು ಬಂದ ಪೆರಡಂಜಿ ಭಟ್ಟರು ಈಗ ಪ್ರಸಂಗಕರ್ತ. ರಂಗದ ಸ್ಪಷ್ಟ ಕಾಳಜಿ, ವಿಮರ್ಶೆ, ನೋಟ, ಹಂಬಲ, ಪರಿಣಾಮ.. ಇವೆಲ್ಲದರ ಪಾಕದ ಪರಿಣಾಮವಾಗಿ 'ರಾಜಾ ದಿಲೀಪ, ಲಂಕಾ ಪತನ' ಪ್ರಸಂಗಗಳ ರಚನೆ ಮಾಡಿದರು. ಪ್ರಸಂಗವನ್ನು ಓದಿದಾಗ  ಪೆರಡಂಜಿಯವರ ರಂಗದ ಸೂಕ್ಷ್ಮ ನಡೆಯ ಅರಿವು, ರಂಗಭಾಷೆಯ ಜ್ಞಾನ, ಪ್ರದರ್ಶನ ಪರಿಣಾಮದತ್ತ ದೂರದೃಷ್ಟಿಯನ್ನು ಕಾಣಬಹುದು. ಪ್ರಸಂಗಗಳ ಈ ಗುಣಗಳಿಗೆ ಸುಭಗತೆಯ ಹೊಳಪಿದೆ. ಆಕಳಿಕೆ ಬರಿಸದ ಕಥಾ ಹಂದರವು ಪ್ರಸಂಗಗಳನ್ನು ಯಶದತ್ತ ಒಯ್ದಿದೆ.
               'ಯಕ್ಷಗಾನವು ಪಂಡಿತರಿಗೆ ಮಾತ್ರವಲ್ಲ, ಪಾಮರರಿಗೂ ಅರ್ಥವಾಗಬೇಕು', ಕೀರ್ತಿಶೇಷ ಡಾ.ಶೇಣಿಯವರ ಮಾತುಗಳು ಪೆರಡಂಜಿಯವರ ಪ್ರಸಂಗ ಓದುತ್ತಿದ್ದಾಗ ನೆನಪಾಯಿತು. ಇದಕ್ಕೆ ಪೂರಕವಾಗಿ 'ತಾನು ಕಾವ್ಯ ಪರಿಣತನಲ್ಲ' ಎಂದು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ.  'ಸುಲಲಿತವಾಗಿ ಹಾಡುವುದಕ್ಕೆ ಅನುಕೂಲ' ಎಂದು ಹಾಡಿದ ಭಾಗವತರು ಬೆನ್ನು ತಟ್ಟಿದ್ದಾರೆ. ತನ್ನ ಕೃತಿಯ ಪದ್ಯಗಳ ಅಕ್ಷರ ಅಕ್ಷರದ ಒಳಹೊಕ್ಕು ಓದಿದ್ದಾರೆ. ಪದದ ಒಳಾರ್ಥವನ್ನು ಬೇಧಿಸಿದ್ದಾರೆ. ಅರ್ಥಧಾರಿ-ವೇಷಧಾರಿಗೆ ಅರ್ಥವಾಗುವಂತೆ ಪೋಣಿಸಿದ್ದಾರೆ. ಒಮ್ಮೆ ಪ್ರಸಂಗ ಓದಿದರೆ ಕಥಾನಕ ವಶವಾಗಿ ಬಿಡುತ್ತದೆ. ಶ್ರೀ ಎಡನೀರು ಮೇಳವು ಈ ಎರಡು ಪ್ರಸಂಗಗಳನ್ನು ಪ್ರದರ್ಶಿಸಿದೆ. ಕಲಾವಿದರು ಮೆಚ್ಚಿಕೊಂಡಿದ್ದಾರೆ.
               ಪೆರಡಂಜಿಯವರು ಸಕ್ರಿಯರಾಗಿರುವ ಕೋಟೂರಿನ ಯಕ್ಷತೂಣೀರ ಸಂಪ್ರತಿಷ್ಠಾನವು ಎರಡು ವರುಷಗಳಲ್ಲಿ ನಾಲ್ಕು ಕೃತಿಗಳನ್ನು ಪ್ರಕಾಶಿಸಿದೆ. ಮುಖ್ಯವಾಗಿ ಅರ್ಥಧಾರಿ, ವೇಷಧಾರಿ ಅಡ್ಕ ಗೋಪಾಲಕೃಷ್ಣ ಭಟ್ಟರ ಯಕ್ಷಗಾನ ಯಶೋಯಾನ - 'ಅಡ್ಕ-ವಚೋಹಾಸ' ಎನ್ನುವ ಅಭಿನಂದನಾ ಕೃತಿ. ಅಡ್ಕರ ಸಹಸ್ರಚಂದ್ರ ದರ್ಶನದ ಉಪಾಯನವಾಗಿ ಈ ಗ್ರಂಥ ಮೂಡಿ ಬಂದಿದೆ. ಇದರಿಂದಾಗಿ ಎಂಭತ್ತು ವರುಷ ಮೀರಿದ ಅಡ್ಕರಿಗೆ ಮರು ಯೌವನ ಬಂದಿದೆ! ಇವರು ರಚಿಸಿದ 'ಮಾಂಗಲ್ಯ ಭಾಗ್ಯ' ಎನ್ನುವ ನಾಟಕ ಮತ್ತು ನಂಜುಡ ಕವಿ ವಿರಚಿತ  'ವೀರೋಚನ ವಧೆ-ವಾಮನ ಚರಿತ್ರೆ' ಪ್ರಸಂಗವನ್ನು ಸಂಪ್ರತಿಷ್ಠಾನ ಪ್ರಕಾಶಿಸಿದೆ. ಈ ಪ್ರಸಂಗವು ಅಡ್ಕ ಗೋಪಾಲಕೃಷ್ಣ ಭಟ್ಟರಿಗೆ ಬಹುಕಾಲದ ಹಿಂದೆ ಅಯಾಚಿತವಾಗಿ ಕೈಸೇರಿತ್ತು. ಕೀರ್ತಿಶೇಷ ವೆಂಕಟರಾಜ ಪುಣಿಂಚಿತ್ತಾಯರು ಕೃತಿಯನ್ನು ಪರಿಷ್ಕರಿಸಿದ್ದರು. ಇದರ ನಡೆ, ಪದ್ಯದ ಬಂಧ ಮತ್ತು ಸಾಹಿತ್ಯಾಂಶಗಳಿಗೆ ಅಡ್ಕರು ಪ್ರಭಾವಿತರಾಗಿ ಅಚ್ಚು ಹಾಕಿಸುವ ನಿರ್ಧಾರ ಮಾಡಿದ್ದರು. ಇನ್ನೊಂದು ಕೃತಿ ಪೆರಡಂಜಿ ವಿರಚಿತ 'ರಾಜಾ ದಿಲೀಪ' ಮತ್ತು 'ಲಂಕಾ ಪತನ' ಯಕ್ಷಗಾನ ಕೃತಿ.
              ಯಕ್ಷತೂಣೀರ ಪದಾಧಿಕಾರಿಗಳಲ್ಲಿ ಬಹುಶಃ ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಹಿರಿಯರು. ಅವರ ನಿರ್ದೇಶನ ಮತ್ತು ಮಾರ್ಗದರ್ಶನವು ಕಿರಿಯರಿಗೆ ಪ್ರೋತ್ಸಾಹದಾಯಕವಾಗಿದೆ. ಸಂಪ್ರತಿಷ್ಠಾನವು ಎರಡು ವಾರ್ಶಿಕೋತ್ಸವಗಳನ್ನು ಅರ್ಥಪೂರ್ಣವಾಗಿ ಆಚರಿಸಿದೆ. ಎರಡು ವರುಷದಲ್ಲಿ ಹನ್ನೊಂದು ಮಂದಿ ಕಲಾವಿದರನ್ನು ಸಂಮಾನಿಸಿದೆ. ಪೆರಡಂಜಿಯವರ ಹಿರಿತನದಲ್ಲಿ 'ಸಕಾಲಿಕ' ಸಾಮಯಿಕ ಸಂಚಿಕೆ ಅಚ್ಚಾಗಿದೆ. ಸಂಪ್ರತಿಷ್ಠಾನವು ನಾಟ್ಯ ತರಬೇತಿ, ರಂಗ ಮಾಹಿತಿ ಶಿಬಿರ, ನವರಸ ಅಭಿನಯ ಶಿಬಿರ, ಸಾಹಿತ್ಯ ಚಟುವಟಿಕೆಗಳು, ಚಿಣ್ಣರ ಬಳಗ ಮೊದಲಾದ ಫಲಿತಾಂಶ ನಿರೀಕ್ಷಿತ ಕಲಾಪಗಳನ್ನು ಯಶಸ್ವಿಯಾಗಿ ನಡೆಸಿದೆ. ಮನೆಮನೆ ತಾಳಮದ್ದಳೆಗಳಿಗೆ ಶ್ರೀಕಾರ ಬರೆದ ತಂಡವು ಈಗಾಗಲೇ ಹಲವೆಡೆ ಕೂಟಗಳನ್ನು ಜರುಗಿಸಿದೆ. ಸಂಪ್ರತಿಷ್ಠಾನದ ಅಧ್ಯಕ್ಷರು ಈಶ್ವರ ಭಟ್ ಬಳ್ಳಮೂಲೆ ಮತ್ತು  ಮುರಳಿ ಕೃಷ್ಣ ಸ್ಕಂದ ಇವರು ಕಾರ್ಯದರ್ಶಿ.
             ಒಬ್ಬ ವ್ಯಕ್ತಿಯೊಳಗಿನ ಸಾಹಿತ್ಯ ಪುಷ್ಟಿ, ಯಕ್ಷಗಾನದ ಕಂಪು, ರಚನಾ ಸಾಮಥ್ರ್ಯವು ಪ್ರಕಟವಾಗಲು ಕಾಲದ ಪಕ್ವತೆ ಬೇಕಾಗುತ್ತದೆ. ಯಕ್ಷತೂಣೀರ ಸಂಪ್ರತಿಷ್ಠಾನವು ಪೆರಡಂಜಿಯವರ ಕಲಾ ಬೌದ್ಧಿಕತೆಗೆ ನೀರೆರೆದಿದೆ. ಸ್ವಲ್ಪ ಕಾಲ ಎಲ್ಲಾ ಚಟುವಟಿಕೆಯಿಂದ ದೂರವಿದ್ದೆ. ಕಿರಿಯರ ಒತ್ತಾಯ, ಹಿರಿಯರ ಹಾರೈಕೆಯಿಂದ ಎಪ್ಪತ್ತರ ವಯಸ್ಸಲ್ಲೂ ಹುರುಪು ಬಂದಿದೆ, ಎಂದು ಖುಷಿಯಿಂದ ನಗೆಯಾಡುತ್ತಾರೆ. ಎಪ್ಪತ್ತರ ಹರೆಯದ ಭಟ್ಟರೊಳಗಿನ ಕಲಾವಿದ, ಸಾಹಿತಿ, ರಸಜ್ಞನಿಗೆ ಈಗ ಇಪ್ಪತ್ತರ ಯೌವನ ಬಂದಿದೆ.