Thursday, October 1, 2020

ನೆಚ್ಚಿನ ಗುರು - ತೆಂಕಬೈಲು ಶಾಸ್ತ್ರಿಗಳು




ನೆಚ್ಚಿನ ಗುರು

 ಚಿತ್ರ, ಲೇಖನ :  ಉದಯ ಕಂಬಾರು, ನೀರ್ಚಾಲು

               

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು   ಒಂದು ಕಾಲಘಟ್ಟದಲ್ಲಿ ವೃತ್ತಿಯಾಗಿಯೂ, ಹವ್ಯಾಸಿಯಾಗಿಯೂ ಮಿಂಚಿದ ಭಾಗವತರು. ಈಗಲೂ ಕೂಡಾ. ನನಗೆ ತೆಂಕಬೈಲು ಅಂದಾಗ ಹಿಮ್ಮೇಳ, ಮುಮ್ಮೇಳ ಎಲ್ಲದರಲ್ಲಿಯೂ ಒಂದು ರೀತಿಯ ಭಯ, ಭಕ್ತಿ. ಕಾರಣ, ಅವರಲ್ಲಿರುವ ಪ್ರಸಂಗ ನಡೆ, ಶಿಸ್ತುಬದ್ಧತೆ, ಶ್ರುತಿ-ತಾಳ-ಲಯಗಳಲ್ಲಿ ಖಚಿತತೆ.

                ಅವರ ಅನುಭವ ಅಪಾರ. ಮಾಂಬಾಡಿ ಗುರು ಪರಂಪರೆ. ಓರ್ವ ಕಲಾವಿದ ಹಿಮ್ಮೇಳ, ಮುಮ್ಮೇಳಗಳಲ್ಲಿ ಅನುಭವವನ್ನು ಪಡೆದರೆ  ಅಂತಹ ಕಲಾವಿದ ಪರಿಪೂರ್ಣ. ಜತೆಗೆ ನಾಟ್ಯ, ಸಂಗೀತ, ವಾದ್ಯ - ಇವು ಮೂರೂ ಅತ್ಯಗತ್ಯ. ಇವೆಲ್ಲವನ್ನೂ ಅರಗಿಸಿಕೊಂಡವರು ಶಾಸ್ತ್ರಿಗಳು. ಒಳ್ಳೆಯ ಗುರುಗಳಿಗೆ ನಾನು ಪ್ರೀತಿಯ ಶಿಷ್ಯ ಎನ್ನಲು ಅಭಿಮಾನವಾಗುತ್ತದೆ.

                1984-85ನೇ ಇಸವಿ. ಮಾನ್ಯದಲ್ಲಿ ನಡೆಯುತ್ತಿದ್ದ ಅವರ ತರಗತಿಗೆ ವಿದ್ಯಾರ್ಥಿಯಾದೆ. ಸ್ವ-ಇಚ್ಛೆ ಮತ್ತು ತಂದೆಯವರ ಪ್ರೋತ್ಸಾಹ. ತರಗತಿಯಲ್ಲಿ ನಲವತ್ತು ವಿದ್ಯಾರ್ಥಿಗಳಿದ್ದರು. ನಾನಿಂದು ಚೆಂಡೆ, ಮದ್ದಳೆಯನ್ನು ನುಡಿಸುತ್ತಿದ್ದರೆ ಅದಕ್ಕೆ ಗುರುಗಳು ಕಾರಣ. 

                ತರಗತಿ ಆರಂಭವಾಗುವಾಗ ನಾನು ಭಾಗವತಿಕೆ ಕಲಿಯುವ ಪಂಕ್ತಿಯಲ್ಲಿ ಕುಳಿತುಕೊಳ್ಳುತ್ತಿದ್ದೆ. ನನ್ನೊಂದಿಗೆ ಗೆಳೆಯ ಚೇನಕ್ಕೋಡು ರವಿಶಂಕರ ಇರುತ್ತಿದ್ದರು. ನನಗೆ ಹಾಗೂ ಅವರಿಗೆ ಕೊನೆಗೆ ತರಬೇತಿ. ಕೆಲವೊಮ್ಮೆ ಅಹೋರಾತ್ರಿ ನಡೆಯುತ್ತಿತ್ತು. ನಮ್ಮ ಮೇಲೆ ಗುರುಗಳಿಗೆ ವಿಶ್ವಾಸವಿತ್ತು.

                ಕೆಲವೊಮ್ಮೆ ನಮ್ಮ ತರಗತಿಯ ಬಳಿಕ ನಮ್ಮ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು ತರಬೇತಿಯ ಸಮಯದಲ್ಲಿ ಅವರ ಊಟದ ವ್ಯವಸ್ಥೆಯನ್ನು ನಾನು, ಕೆಲವೊಮ್ಮೆ ಮಾವ ಪಟ್ಟಾಜೆ ವೆಂಕಟ್ರಮಣ ಭಟ್ಟರು (ದಿ.) ನಿರ್ವಹಿಸುತ್ತಿದ್ದೆವು.

                ನಾನು ಚೆಂಡೆ, ಮದ್ದಳೆಯಲ್ಲಿ ಬಹುಶಃ ಅವರ ಪ್ರಥಮ ವಿದ್ಯಾರ್ಥಿ.  ಗುರುಗಳ ಪೂರ್ಣ ಅನುಗ್ರಹದಿಂದ ತೃಪ್ತನಾಗಿದ್ದೇನೆ. ಸುಬ್ರಾಯ ಸಂಪಾಜೆ, ಮೋಹನ ಭಟ್, ರವಿಶಂಕರ ಇವರೆಲ್ಲಾ ಶಾಸ್ತ್ರಿಗಳ ನೆಚ್ಚಿನ ಶಿಷ್ಯರು.

                ಪದ್ಯಾಣ ಪ್ರಶಸ್ತಿಗೆ (2018) ತೆಂಕಬೈಲು ಗುರುಗಳನ್ನು ಆರಿಸಿದ್ದು ಸಂತೋಷ ತಂದಿದೆ. ಮಾಂಬಾಡಿ - ಪದ್ಯಾಣ - ತೆಂಕಬೈಲು ಮೂರು ಮನೆತನಗಳು ಯಕ್ಷಗಾದ ಹೊಕ್ಕುಳ ಬಳ್ಳಿ.

(ತೆಂಕಬೈಲು ಅವರಿಗೆ ಪದ್ಯಾಣ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಬಿಡುಗಡೆಗೊಂಡ ಪುಸ್ತಿಕೆಯಿಂದ. – ಸಂಪಾದಕ : ನಾ. ಕಾರಂತ ಪೆರಾಜೆ.... ಪ್ರಕಾಶಕರು : ಪದ್ಯಾಣ ಪ್ರಶಸ್ತಿ ಸಮಿತಿ..... ಇದರ ಕಾರ್ಯದರ್ಶಿ ಸ್ವಸ್ತಿಕ್ ಪದ್ಯಾಣ)

 

 

ಪದ್ಯಾಣ - ಪದಯಾನ - ಎಸಳು 47


ಯೋಗ - ಯೋಗ್ಯತೆ - ಆಪ್ತತೆ

ಲೇ : ಡಾ. ಎಂ. ಪ್ರಭಾಕರ ಜೋಶಿ

 

          ಪದ್ಯಾಣ - ಕಲೆಯ ನೆಲೆಯಲ್ಲೂ, ವೈಯಕ್ತಿಕವಾಗಿಯೂ ನಮಗೆ, ಅಂದರೆ ನಿಕಟವರ್ತಿಗಳಿಗೆಲ್ಲ ಆಪ್ತತೆ, ಸಾಧನೆ, ಪ್ರೀತಿ. ಒಡನಾಟಗಳನ್ನೆಲ್ಲ ಒಳಗೊಳ್ಳುವ ಶಬ್ದ. ನಾದ, ಗಾನ, ಮಿತ್ರಕೂಟಗಳೆಲ್ಲದರ ಸಮುಚ್ಚಯ. ಇಡಿಯ ಪದ್ಯಾಣ ಮನೆತನಕ್ಕೆ ನಾನೊಬ್ಬ ಆಪ್ತನೆನ್ನಲು ಹೆಮ್ಮೆ. ಹಳ್ಳಿಯ ಬದುಕಿನ ಸ್ವಭಾವ ವೈಶಿಷ್ಟ್ಯಗಳನ್ನು ಇಂದಿಗೂ ಉಳಿಸಿಕೊಂಡವರು ಎಲ್ಲಾ ಪದ್ಯಾಣ ಬಂಧುಗಳು. ಯಕ್ಷಗಾನದ ಉನ್ನತ ಸಂಕೇತಗಳಲ್ಲಿ, ಐಕಾನ್ಗಳಲ್ಲಿ ಪದ್ಯಾಣ ಒಂದು.

          ಯಕ್ಷಗಾನ ಹಿಮ್ಮೇಳದ ವಿಭಾಗಕ್ಕೆ ಇವರದು ದೊಡ್ಡ ಕೊಡುಗೆ. ವೃತ್ತಿನಿರತರಾಗಿಲ್ಲದ ಪದ್ಯಾಣ ಬಂಧುಗಳೂ ಯಕ್ಷಗಾನದಲ್ಲಿ ಸಮರ್ಥರೇ. ಆರ್ವಾಚೀನ ಯುಗದ ಅಗ್ರಗಣ್ಯ ಭಾಗವತರಲ್ಲಿ ಒಬ್ಬರಾಗಿ, ಇದೀಗ ಹಿರಿಯ ಕಲಾವಿದರೆನಿಸುವ ಗಣಪತಿ ಭಟ್ಟರದು - ದೀರ್ಘ ಯಶಸ್ವಿ ಯಾನ. ರಂಗದ ಮೇಲೆ, ರಂಗದ ಹೊರಗೆ ಮತ್ತು ಮನೆಯ ಮಟ್ಟದಲ್ಲಿ ನಾನು ಓರ್ವ ನಿಡುಗಾಲದ ಸಹವರ್ತಿ ಮಿತ್ರ.

          ಅವರನ್ನು ಮೊದಲ ಬಾರಿಗೆ ಕಂಡುದು 1972ರ ಸುಮಾರಿಗೆ - ಸುಳ್ಯದ ಕಲ್ಮಡ್ಕ, ಕೊಲ್ಲಮೊಗ್ರು, ಚೊಕ್ಕಾಡಿಗಳಲ್ಲಿ ನಡೆದ ಕೂಟಗಳಲ್ಲಿ. ಆಗಷ್ಟೇ ಭಾಗವತಿಕೆಯ ಆರಂಭಿಕ ಅಭ್ಯಾಸದ ಬಳಿಕ ಸಾರ್ವಜನಿಕ ಪ್ರದರ್ಶನಗಳಲ್ಲಿ ಅವರು ಕಾಣಿಸಿಕೊಳ್ಳಲಾರಂಭಿಸಿದ ಕಾಲ. ತುಂಬ ಮಧುರವಾದ ಎಳೆಯ ಕಂಠ, ಸ್ವಚ್ಛ ಉಚ್ಛಾರ ಮತ್ತು ಜೀವಂತಿಕೆಗಳಿಂದ ಆಗಲೇ ಗಮನ ಸೆಳೆದಿದ್ದರು.

          ಹೊಸಬನ ಹೆದರಿಕೆ, ಉತ್ಸಾಹ ಎರಡರಿಂದಲೂ ಕೂಡಿದ ಹುಡುಗನ ಭಾಗವತಿಕೆ ಕೇಳುವುದು, ನೋಡುವುದು ಒಂದು ಅನುಭವವಾಗಿತ್ತು. ಕೊಲ್ಲಮೊಗರಿನಲ್ಲಿ ಅವರು ಹಾಡಿದ ಕೃಷ್ಣಸಂಧಾನ ಪ್ರಸಂಗದ ಏನಯ್ಯ ಇಂಥಾದ್ದೇನಯ್ಯ.. ಎಂಬ, ಕೃಷ್ಣನು ದುರ್ಯೋಧನನನ್ನು ಪಚಾರಿಸುವ ಪದ್ಯಗಳ ಅಂದ ಇಂದಿಗೂ ನೆನಪಿನಲ್ಲಿದೆ. ಅದು ಓರ್ವ ಪ್ರತಿಭಾವಂತ ಹೊಸ ಭಾಗವತನ ಆಗಮನವನ್ನು ಸಾರುವಂತಿದ್ದ ಸಂದರ್ಭ.

          ಸುಮಾರು ಅದೇ ಹೊತ್ತಿಗೆ - ಯಕ್ಷಗಾನದಲ್ಲಿ ಪ್ರತಿಭಾವಂತ ತರುಣರ ಒಂದು ಭಾಗವತ ಸಮೂಹವೇ ಕಾಣಿಸಿಕೊಂಡದ್ದು ವಿಶಿಷ್ಟ ವಿದ್ಯಮಾನ. ದಿ. ಕಾಳಿಂಗನಾವಡ, ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸುಬ್ರಹ್ಮಣ್ಯ ಧಾರೇಶ್ವರ, ಪೋಳ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಪುರುಷೋತ್ತಮ ಪೂಂಜ.. ಇವರೆಲ್ಲ ಅದೇ ಸುಮಾರಿಗೆ ಪ್ರವೇಶಿಸಿ ಮುಂದೆ ಬೇರೆ ಬೇರೆ ರೀತಿಗಳಲ್ಲಿ ಯಶಸ್ವಿಗಳಾದರು.

          ಮನೆತನದ ತುಂಬೆಲ್ಲ ಆಟ, ಕೂಟದ ಹಿಮ್ಮೇಳಗಳದ್ದೇ ನಾದ. ಪದ್ಯಾಣ - ಯಕ್ಷಗಾನದಲ್ಲೇ ಮುಳುಗಿದ್ದ, ಆದರೆ ಯಶಸ್ವಿ ಕೃಷಿಕರೂ ಆದ ಒಂದು ಮನೆತನ. ಅಜ್ಜ ಪುಟ್ಟು ನಾರಾಯಣ ಭಟ್ಟರು ಮತ್ತು ಗುರು ಮಾಂಬಾಡಿ (ಅವರೂ ಪದ್ಯಾಣದವರೇ) - ಅಗರಿ ಭಾಗವತದ್ವಯರು - ಮತ್ತು ಶೇಣಿ - ಹೀಗೆ ಗಣಪತಿ ಭಟ್ಟರ ಮೇಲೆ ನಾಲ್ಕು ಅಂಶಗಳ ಗಾಢ ಪ್ರಭಾವ.

          ಮುಂದೆ ಇವರ ಭಾಗವತಿಕೆಯನ್ನು ಮೂರು ಹಂತಗಳಲ್ಲಿ ಗುರುತಿಸಬಹುದು. 1985 ವರೆಗಿನ ಉದಯೋನ್ಮುಖ ಕಾಲ, ಮುಂದೆ ಎರಡು ದಶಕಗಳ ಪ್ರೌಢತೆಯ ಕಾಲ, ಆ ಬಳಿಕ ಪ್ರೌಢ ಹಿರಿಯ ಭಾಗವತರ ಅವಧಿ. 1985-2005ರ ಅವಧಿಯಲ್ಲಿ ಪದ್ಯಾಣರು ಆಟ ಕೂಟಗಳಿಗೆ ಹೊಸಬರ ಪೈಕಿ ಮೊದಲ ಆಯ್ಕೆಯ ಭಾಗವತರಾಗಿದ್ದರು.

          ಇವರ ರಾಗ ಮಂಡನಾ ವಿಧಾನಗಳು ಮುಖ್ಯವಾಗಿ - ಮಾಂಬಾಡಿ ಪದ್ಧತಿಯವು. ಉಚ್ಛಾರ ಚೊಕ್ಕ, ಕಲಾವಿದರ ಜತೆ ಭಾಗವಹಿಸುವ, ಪ್ರದರ್ಶನ ಸ್ಪಂದನ ಒಳ್ಳೆಯ ಗುಣಮಟ್ಟದ್ದು. ಅಗರಿ ಶೈಲಿಯ ಕುರಿತು ಅಪಾರ ಪ್ರೀತಿ. ಅದನ್ನು ಅಣಕವೆನಿಸದ ಅನುಕರಣೆಯಿಂದ ಹಾಡಬಲ್ಲರು. ಅಂತಹ ಒಂದು ಧ್ವನಿಸುರುಳಿ ಬಿಡುಗಡೆಯಾಗಿದೆ. ಪದ್ಯ - ಅರ್ಥ ಮುಂದುವರಿಕೆಯ ರೀತಿ, ಎತ್ತುಗಡೆ ಶೀಘ್ರಜೋಡಣೆ, ಹೊಂದಾಣಿಕೆ, ಹದ ತುಂಬ ಅನುಕೂಲಕರ.

          ಸಂದರ್ಭ ಮತ್ತು ಅರ್ಥಧಾರಿಯ ಧೋರಣೆಯ ಭಾವಾಭಿವ್ಯಕ್ತಿ ವಿಧಾನದ ವ್ಯತ್ಯಾಸ ತಿಳಿದು ಹಾಡುವ ಪದ್ಯಾಣ - ವಿಶಿಷ್ಟ ರೀತಿಯಲ್ಲಿ ಎತ್ತುಗಡೆ ಮಾಡಿದಾಗ, ಪದ್ಯ ಹಾರಿಸುವಾಗ - ಕೂಡಲೇ ಹೊಂದಿಕೊಳ್ಳಬಲ್ಲರು. ಅಂತಹ ಅನೇಕ ಅನುಭವಗಳು ನನಗೂ, ನನ್ನಂತೆ ಇತರ ಸಹ ಕಲಾವಿದರಿಗೂ ಆಗಿವೆ. ಹಿಮ್ಮೇಳದ ಚೆಂಡೆ ಮದ್ದಳೆಗಾರರ ಜತೆ ಆತ್ಮೀಯವಾಗಿ, ಜೀವಂತಿಕೆಯಿಂದ ಒಡನಾಡುತ್ತ ಪ್ರೇರೇಪಿಸುವ, ಅವರಿಂದಲೂ ಒಳ್ಳೆಯ ವಾದನ ಹೊರಹೊಮ್ಮುವಂತೆ ಆಸಕ್ತಿವಹಿಸುವ ಟೀಂಮ್ಯಾನ್ - ಪದ್ಯಾಣ.

          ಹಲವು ಸಾಂಪ್ರದಾಯಿಕ ಪ್ರಸಂಗಗಳ ನಡೆ, ಮಾಹಿತಿಗಳ ಹಿಡಿತ ಅವರಿಗೆ ಚೆನ್ನಾಗಿದೆ. ಈಚೆಗಿನ ವರೆಗೂ ಸ್ವರ ಆಕರ್ಷಣೆ, ಮಾಧುರ್ಯಗಳಲ್ಲಿ - ಪದ್ಯಾಣ ಉತ್ಕೃಷ್ಟ ಮಟ್ಟದಲ್ಲಿದ್ದವರು. ಈಗ ಅನುಭವ, ಪಕ್ವತೆಗಳಿಂದ ತುಂಬಿಸಬಲ್ಲವರು. ದಿ.ಶೇಣಿ ಅವರಿದ್ದ ಕಾಲದಲ್ಲಿ - ಉಳಿದ ಹಿರಿಕಿರಿಯ ಕಲಾವಿದರೂ ಇದ್ದ - ತಾಳಮದ್ದಳೆಗಳಲ್ಲಿ ಇವರು ಅಂದಿನ ಪ್ರಮುಖ ಭಾಗವತರಾಗಿದ್ದವರು. ಅಂದಿನ ದಿನಗಳ ಆ ಒಡನಾಟ, ರಂಗದ ಮೇಲೆ ಮತ್ತು ಹೊರಗೆ ನಡೆದ ವಿನೋದ, ಸ್ವಾರಸ್ಯ, ಗೆಳೆತನದ ಒಡನಾಟಗಳು, ಅಂತೆಯೆ ಸುರತ್ಕಲ್ ಶ್ರೀ ಮಹಮ್ಮಾಯಿ ಮೇಳದ ದಿನಗಳ ಕಲಾವೈಭವಗಳು ಅವಿಸ್ಮರಣೀಯ. ಅಂದಿನ ಸುರತ್ಕಲ್ ಮೇಳ ವೈವಿಧ್ಯಮಯ ಪ್ರತಿಭೆಗಳ ಕಲಾ ಸಂಮೇಳನವಾಗಿತ್ತು. ತಿರುಗಾಟ ಅತ್ಯಂತ ಹಾರ್ದಿಕವಾಗಿತ್ತು.

          ವ್ಯಕ್ತಿಯಾಗಿ - ತುಂಬ ಆತ್ಮೀಯತೆಯ ಮತ್ತು ಹಲವು ವಿಚಾರಗಳಲ್ಲಿ ಮುಗ್ಧ ಸ್ವಭಾವದವರು ಪದ್ಯಾಣ ಗಣಪತಿ ಭಟ್ಟರು. ಯೋಗ್ಯತೆ, ವಿದ್ವತ್ತು, ಪ್ರತಿಭೆಗಳಿಗೆ ತುಂಬ ಗೌರವ ಕೊಡುವವರು. ಎಲ್ಲಾ ಪದ್ಯಾಣ ಬಂಧುಗಳಂತೆ ಒಳ್ಳೆಯ ಅತಿಥೇಯ. ಮಿತ್ರರನ್ನು ಸತ್ಕರಿಸಿದಷ್ಟು, ಆದರಾತಿಥ್ಯ ನೀಡಿದಷ್ಟು ಖುಷಿ, ಇಷ್ಟು ಸಾಲದೆಂಬಂತಹ ಅತೃಪ್ತಿ. ಅವರ ಬಂಧುಗಳು, ಪತ್ನಿ, ಪುತ್ರರು ತುಂಬ ಸಹಕಾರಿಗಳು. ಕುಟುಂಬ ಜೀವನದ, ಹೊಂದಾಣಿಕೆಯ ದಾಂಪತ್ಯದ ಒಂದು ಒಳ್ಳೆಯ ದೃಷ್ಟಾಂತವಾದ ಭಾಗ್ಯಶಾಲಿ - ಗಣಪತಿ ಭಟ್ಟರು. ಯೋಗ್ಯತೆ-ಯೋಗ ಎರಡೂ ಉಳ್ಳ ಭಾಗ್ಯಶಾಲಿ ಕಲಾವಿದ.

          ತೀರಾ ಹೊಂದಾಣಿಕೆಯ, ಯಾರನ್ನೂ ನೋಯಿಸಲು ಇಷ್ಟಪಡದ ಸ್ವಭಾವ. ಇವರ ಗುಣವೂ ಹೌದು, ದೋಷವೂ ಹೌದು. ಹಾಗಾಗಿ ರಂಗದ ಅನಪೇಕ್ಷಿತಗಳನ್ನು ಇವರು ಸಹಿಸುವುದು ಕಾಣುತ್ತದೆ. ಕಟ್ಟುನಿಟ್ಟಿನ ನಿಯಂತ್ರಣ, ಖಡಾಖಂಡಿತ ಆಕ್ಷೇಪವು ನನ್ನಿಂದ ಆಗದ ವಿಚಾರ ಎಂದು ಅವರೇ ಹೇಳುತ್ತಾರೆ. ಬೇಸರದ, ಒಪ್ಪಿಗೆಯಾಗದ ಸಂಗತಿ, ಘಟನೆ ನಡೆದರೆ ತನ್ನೊಳಗೇ ನೊಂದುಕೊಳ್ಳುವ ಸ್ವಭಾವದವರು.

          ಈಚೆಗಿನ ವರುಷಗಳಲ್ಲಿ ಭಾಗವತಿಕೆಯ ರಂಗವಿಧಾನಗಳಲ್ಲಿ ಸರ್ವತ್ರ ಹರಡಿರುವ ಜನಪ್ರಿಯತೆಯ ಹೆಸರಿನ ವಿಕ್ಷೇಪಗಳು, ಟ್ರೆಂಡ್ ಫ್ಯಾಶನ್ಗಳು, ವಿಚಿತ್ರ ರೂಢಿಗಳಾದ ಅಸಮರ್ಪಕ ಚಾಲೂ ಕುಣಿತ, ಆಕಾರವಿಲ್ಲದ ಪುನರಾವರ್ತನಾ ವಿಧಾನ, ವ್ಯಕ್ತಿಯನ್ನು ಮೆರೆಸುವ ಕ್ರಮಗಳು - ಮೊದಲಾದ ಅ-ಕಲಾತ್ಮಕವಾದ ಅಂಶಗಳಿಗೆ ಇವರೂ ಅನಿವಾರ್ಯವಾಗಿ ಬಲಿಯಾಗಿದ್ದಾರೆ. ಅದಕ್ಕೆಲ್ಲ ಬೆಂಬಲ ನೀಡಿ ಪ್ರೋತ್ಸಾಹಿಸುವುದು ಭಾಗವತಿಕೆ ಎಂದಾಗಿರುವ ಈ ದಿನಗಳಲ್ಲಿ - ಹಳೆಯ ಶೈಲಿಯೊಂದರ ಪ್ರತಿನಿಧಿಯಾದ, ಅದನ್ನು ಸೊಗಸಾಗಿ ತೋರಿಸಬಲ್ಲ ಪದ್ಯಾಣರು, ಅದರಿಂದ - ಅನಪೇಕ್ಷಿತ ವಿಧಾನಗಳಿಂದಾಗಿ ತೊಂದರೆ, ಇರಿಸುಮುರುಸು ಅನುಭವಿಸಿದ್ದಾರೆ. ವಿಕಾರವೇ ವಿಕಾಸವೆನಿಸುವ ಸಾಂಸ್ಕೃತಿಕ ಸನ್ನಿವೇಶದಲ್ಲಿ ಈ ಅಸಹಾಯಕತೆ ಹಲವರ ಸಮಸ್ಯೆ.

          ನಾಲ್ಕು ದಶಕಕ್ಕೂ ಮಿಕ್ಕಿ ಹಾಡುತ್ತಾ, ಮೂರು ತಲೆಮಾರಿನ ಕಲಾವಿದರನ್ನು ಕುಣಿಸಿರುವ ಲಕ್ಷಾಂತರ ಜನರ ಮನ ಮುಟ್ಟಿ ರಂಜಿಸಿರುವ ನಮ್ಮ ಭಾಗವತ ಗಣಪತಿ ಭಟ್ಟರಿಗೆ - ಈಗ ಹಿರಿತನ ಮಾನ-ಸಂಮಾನಗಳ ಕಾಲ.

          ಇನ್ನೂ ಹಲವು ವರುಷ ಪದ್ಯಾಣ ಪದ ನಾವು ಕೇಳುತ್ತಿರಬೇಕು. ಯಾನ ನಡೆಯುತ್ತಿರಬೇಕು. ತೆಂಕುತಿಟ್ಟಿನ ಶೈಲಿಯ ಉಜ್ಜೀವನಕ್ಕೆ, ಸ್ಥಾಪನೆಗೆ ಅವರ ಅನುಭವ ನೆರವಾಗಬೇಕು.

ಚಿತ್ರ :

 

Tuesday, September 29, 2020

ತೆಂಕಬೈಲು - ಅಭಿಮತ

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಜತೆ ಮಾತಾಡುತ್ತಿದ್ದಂತೆ (2018) ಕಳೆದ ಕಾಲದ ಕಥನಗಳ ಅನುಭವಗಳು ಮಿಂಚಿ ಮರೆಯಾಗುತ್ತಿದ್ದುವು. ಅವುಗಳಲ್ಲಿ ವಿಷಾದಗಳಿದ್ದುವು, ರಂಗದ ದನಿಗಳಿದ್ದುವು, ಕಷ್ಟ-ಸುಖಗಳ ಮಾತುಕತೆಗಳಿದ್ದುವು, ರಂಗ ಪಲ್ಲಟಗಳಿದ್ದುವು. ಅಂತಹುಗಳ ಕೆಲವು ಮಾದರಿಗಳು ಇಲ್ಲಿವೆ :

*             ಕಾಲಮಿತಿಯಿಂದ ಕಲಾವಿದರಿಗೆ ಪ್ರಯೋಜನ. ರಾತ್ರಿ ಒಂದೋ, ಎರಡೋ ಗಂಟೆಯಲ್ಲದೆ ಪ್ರದರ್ಶನ ಮುಗಿಯುವುದಿಲ್ಲ. ಪ್ರಸಂಗ ಚಿಕ್ಕದಾಯಿತು. ರಂಗದ ಸ್ಪೀಡ್ ಹೆಚ್ಚಾಯಿತು. ಪೂರ್ತಿಯಾಗಿ ಕಥೆ ಗೊತ್ತಾಗಬೇಕಾದರೆ ಇಡೀರಾತ್ರಿ ಆಟವಾಗಬೇಕು. 

*             ಕೂಡುಕುಟುಂಬ ವ್ಯವಸ್ಥೆಗಳು ಶಿಥಿಲವಾದ ಬಳಿಕ ಆಟಗಳಿಗೆ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಯಿತು. ಉತ್ಸಾಹವಿದ್ದರೂ ಮನೆಯ ರಕ್ಷಣೆ, ಕೆಲಸಕಾರ್ಯಗಳ ಒತ್ತಡದಿಂದ ಆಟದ ಗುಂಗನ್ನು ತನ್ನೊಳಗೆ ಅದುಮಿಟ್ಟುಕೊಳ್ಳುವ ಅನೇಕರಿದ್ದಾರೆ. ಮತ್ತೊಂದು ಕಾಲದ ಪಲ್ಲಟ. ಆಟ ನೋಡುತ್ತಿದ್ದ ಜವ್ವನಿಗರೆಲ್ಲಾ ವಿವಿಧ ಉದ್ಯೋಗಕ್ಕಾಗಿ ಪೇಟೆ ಸೇರಿದರು. ಹಳ್ಳಿ ಖಾಲಿಯಾಯಿತು!

*             ಹವ್ಯಾಸಿ ರಂಗ ಚೆನ್ನಾಗಿತ್ತು. ಅದು ಕಲಾವಿದರನ್ನು ಸೃಷ್ಟಿಸುವ ತಾಣ. ಪ್ರಾಕ್ಟೀಸ್ ಮಾಡಿ ಪ್ರದರ್ಶನ ಮಾಡುತ್ತಿದ್ದರು. ಈಗ ಸಂಘಗಳೇ ಇಲ್ಲ! ಕನಿಷ್ಠ ಶಿಸ್ತು ಮಾಯವಾಗಿದೆ. ಸಮಾಲೋಚನೆಗಳಿಲ್ಲ. ಕಥಾನಕ ಶುರುವಾದ ಬಳಿಕ ಬಂದು ಅವಸರದಲ್ಲಿ ವೇಷ ಮಾಡಿ ಹೋಗುತ್ತಾರೆ. ಪ್ರದರ್ಶನ ಯಶಸ್ವಿಯಾಗುತ್ತಿಲ್ಲ.

*             ಯಕ್ಷಗಾನಕ್ಕೆ ಪೌರಾಣಿಕ ಪ್ರಸಂಗಗಳು ಸೂಕ್ತ. ಕೋಟಿ ಚೆನ್ನಯ್ಯ, ಕಾಂತಾಬಾರೆ ಬೂದಾಬಾರೆ, ತುಳುನಾಡ ಸಿರಿ.. ಮೊದಲಾದ ಪ್ರಸಂಗಗಳಿಗೆ ಪಾಡ್ದನಗಳ ಹಿನ್ನೆಲೆಯಿದೆ. ಯಾವುದೇ ಹಿನ್ನೆಲೆಯಿಲ್ಲದ ಕಲ್ಪಿತ ಪ್ರಸಂಗಗಳು ರಂಗದಲ್ಲಿ ಯಶವಾಗುವುದಿಲ್ಲ. ಆದರೂ ಅದು ಅಲ್ಪಾಯುಷಿ.

*             ರಂಗಕ್ಕೆ ಅದರದ್ದೇ ಆದ ಭಾಷೆಯಿದೆ. ಅದು ಕಲಾವಿದರಿಗೆ, ನೇಪಥ್ಯ ಕಲಾವಿದರಿಗೆ ತಿಳಿದಿರಬೇಕು, ತಿಳಿದಿತ್ತು. ಭಾಗವತ ಜಾಗಟೆಗೆ ಸಣ್ಣಕೆ ಎರಡು ಬಾರಿ ಸದ್ದು ಮಾಡಿದರೆ ಅರ್ಥ ಮುಂದುವರಿಸಬೇಕೆಂಬ ಸೂಚನೆ. ರಥಕ್ಕೆ ಬಾರಿಸಿದರೆ ಪರದೆಯವರು ಬರಬೇಕು, ಮದ್ದಳೆಯಲ್ಲಿ ಧೋಂ ನುಡಿತ ಕೊಟ್ಟರೆ ಅದು ಚೆಂಡೆಯವರಿಗೆ ಸೂಚನೆ. ಇದೆಲ್ಲಾ ಪಾಲಿಸಿದಾಗಲೇ ಮೇಳವಾಗುತ್ತದೆ.

*             ಹಿಂದೆ ತಾಳಮದ್ದಳೆಗಳಲ್ಲಿ ಪದ್ಯಗಳನ್ನು ಟಿಕ್ ಮಾಡುವ ಸಂಪ್ರದಾಯವಿಲ್ಲ. ಅರ್ಥದಾರಿಗೆ ಜನಮನ್ನಣೆ ಬಂದಾಗ ಅವರ ಮಾತಿಗೆ ಬೆಲೆ ಬಂತು. ಭಾಗವತನ ಸ್ಥಾನಕ್ಕೆ ಇಳಿಲೆಕ್ಕವಾಯಿತು.

*             ಪ್ರಸಂಗ ಹೊಂದಿಕೊಂಡು ವೇಷಧಾರಿ ಎರಡೆರಡು ವೇಷಗಳನ್ನು ಮಾಡಲೇಬೇಕು. ಉದಾ: ದೇವಿ ಮಹಾತ್ಮೆ ಪ್ರಸಂಗವಾದರೆ ಮಧು-ಕೈಟಭ ಪಾತ್ರ ನಿರ್ವಹಿಸಿದವರು, ರಕ್ತಬೀಜ ಮತ್ತು ಧೂಮ್ರಾಕ್ಷ ಪಾತ್ರವನ್ನು ನಿರ್ವಹಿಸಬೇಕು. ತ್ರಿಜನ್ಮ ಮೋಕ್ಷ ಪ್ರಸಂಗವಾದರೆ ಹಿರಣ್ಯಾಕ್ಷ ಮಾಡಿದ ಕಲಾವಿದ ಶಿಶುಪಾಲ ಪಾತ್ರ ಮಾಡಬೇಕಿತ್ತು. ಈಗ ಎರಡು ವೇಷ ಬರೆದರೆ ಕಲಾವಿದನ ಮುಖ ಬಿಗುವಾಗುತ್ತದೆ.

*             ಭಾಗವತನನ್ನು ಹೊಂದಿಕೊಂಡೇ ರಂಗದ ಎಲ್ಲಾ ಪ್ರಕ್ರಿಯೆಗಳು ನಡೆಯಬೇಕು. ಆಟ ಸಮಯಕ್ಕೆ ಮುಗಿಯದಿದ್ದರೆ ಭಾಗವತನ ಮೇಲೆ ದೂರು. ಬೇಗ ಮುಗಿದರೂ ಭಾಗವತನೇ ಹೊಣೆ.

*             ಗಾನವೈಭವಗಳು ಮಿತಿಯಲ್ಲಿದ್ದರೆ ಚೆನ್ನ. ಒಂದೊಂದು ರಸವನ್ನು ಹಿಡಿದು ಹೇಳುವ ಪದ್ಯಗಳು ರಸಾಭಿವ್ಯಕ್ತಿಗೆ ಪೂರಕ. ಅತಿರೇಕವಾದರೆ ಹೋಯಿತು. ಹಾಡುವಾಗ ರಸಕ್ಕೊಂದು ಆಯುಷ್ಯವಿರುತ್ತದೆ! ಅದರೊಳಗೆ ಪದ್ಯ ಮುಗಿಯಬೇಕು. ಆಗ ಕೇಳಲು ಇಂಪು. ಇನ್ನೂ ಬೇಕು ಅನ್ನುವಾಗ ಮುಗಿಯಬೇಕು!

*             ಅಭಿಮಾನಿಗಳು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಹಿಂದೆ ಆಟ ಮುಗಿದ ಮೇಲೆ ಅಭಿಮಾನಿಗಳ ವಿಮರ್ಶೆ, ಹೊಗಳಿಕೆ. ಮಧ್ಯೆ ಮಧ್ಯೆ ಶಿಳ್ಳೆ, ಚಪ್ಪಾಳೆಗಳಿಲ್ಲ. ತನಗೆ ರಸಭಂಗವಾಗುತ್ತದೆ ಎನ್ನುವುದು ಪ್ರೇಕ್ಷಕನಿಗೆ ಗೊತ್ತಿತ್ತು.

*             ಒಂದೊಂದು ಮೇಳದಲ್ಲಿ ಮೂರ್ನಾಲ್ಕು ಭಾಗವತರು. ಅವರವರ ಪಾಳಿಯ ಬಳಿಕ  ಹೊರಟು ಹೋಗುತ್ತಾರೆ. ಕೊನೆಯಲ್ಲಿ ಕುಳಿತುಕೊಳ್ಳವ ಭಾಗವತನಿಗೆ ರಂಗದಲ್ಲಿ ಅಸೌಖ್ಯ ಬಾಧಿಸಿತು ಎಂದಾರೆ ಸಹ ಭಾಗವತರಿಲ್ಲದೆ ಆಟ ನಿಲ್ಲುವ ಪರಿಸ್ಥಿತಿ!

*             ಕಾಲಪ್ರಮಾಣದ ಭಾಗವತಿಕೆ ಕಡಿಮೆಯಾಗಿದೆ. ಮೊದಲು ಕುಳಿತ ಭಾಗವತ ಆರಭಿ, ಮೋಹನ, ಹಂಸಧ್ವನಿ ರಾಗಗಳನ್ನು ಹಾಕಿ ಪದ್ಯ ಹೇಳಿ ಹೋಗಿರುತ್ತಾನೆ. ನಂತರ ಬಂದ ಭಾಗವತ ಯಾವ ರಾಗದಲ್ಲಿ ಹಾಡಬೇಕು? ರಾಗಗಳ ಬಳಕೆಗೂ ಕಾಲಪ್ರಮಾಣವಿದೆ. ನಮ್ಮ ಇಚ್ಛೆಯಂತೆ ರಾಗವನ್ನು ಬಳಸಲು ರಂಗ ಬಿಡುವುದಿಲ್ಲ.

*             ಮೊದಲೆಲ್ಲಾ ಸಂಭಾವನೆ ಕಡಿಮೆಯಿತ್ತು. ಆದರೆ ತೃಪ್ತಿಯಿರುತ್ತಿತ್ತು. ಈಗ ಸಂಭಾವನೆ ಮಿತಿಮೀರಿದೆ. ತೃಪ್ತಿ, ರಂಗಸುಖವಿಲ್ಲ. ತೃಪ್ತಿ ಯಾರಿಗೂ ಬೇಕಾಗಿಲ್ಲ!            

*             ಯಕ್ಷಗಾನವನ್ನು ಬಿಟ್ಟು ನಾನಿಲ್ಲ. ನನ್ನ ಬದುಕಿಗೆ ಯಕ್ಷಗಾನ ನೆರವಾಗಿದೆ. ಬದುಕನ್ನು ಆಧರಿಸಿದೆ. ತೃಪ್ತಿಯಾಗಿದ್ದೇನೆ. ರಂಗವಿಂದು ಹಲವು ಪಲ್ಲಟಗಳಿಗೆ ಒಳಗಾಗಿರುವಾಗ ಕಾಲಕ್ಕೆ ನನಗೆ ಪ್ರಾಯ ಆದುದು ನನ್ನ ಪುಣ್ಯ!