Monday, July 7, 2025

ತಾಳಮದ್ದಳೆ ಸಪ್ತಾಹ ಸಮಾರೋಪ - ಕುರಿಯ ಪ್ರಶಸ್ತಿ ಪ್ರದಾನ : 'ಪ್ರಶಸ್ತಿ ಪಡೆವ ಕಲಾವಿದನ ಬದುಕು ಅದರ್ಶವಾಗಿರಬೇಕು' - ಪೂಜ್ಯ ಎಡನೀರು ಶ್ರೀಗಳು

 


  “ಓರ್ವ ಕಲಾವಿದ ಸಮಾಜಮುಖಿಯಾಗಿ, ಕಲಾತ್ಮಕವಾಗಿ ಹೇಗೆ ಬದುಕಬೇಕೆನ್ನುವುದನ್ನು ಹಾಸ್ಯಗಾರ್ ದಿ.ಪೆರುವಡಿ ನಾರಾಯಣ ಭಟ್ಟರು ಬದುಕಿ ತೋರಿಸಿದರು. ಒಂದು ಪ್ರಶಸ್ತಿಯನ್ನು ಸ್ಥಾಪಿಸುವುದು, ಅದಕ್ಕೆ ಕಲಾವಿದನನ್ನು ಆಯ್ಕೆ ಮಾಡುವಲ್ಲಿ ಬದ್ಧತೆ ಮುಖ್ಯ. ಹಾಗೆ ಆಯ್ಕೆ ಮಾಡಿದ ಕಲಾವಿದದ ಬದುಕು ಕೂಡಾ ಆದರ್ಶವಾಗಿರಬೇಕು. ಈ ಎಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ತುಂಬಾ ಎಚ್ಚರದಿಂದ ಪ್ರಶಸ್ತಿಗಳಿಗೆ ಕಲಾವಿದರನ್ನು ಆಯ್ಕೆ ಮಾಡುತ್ತಾರೆ. ಇದೊಂದು ಮಾದರಿ ಉಪಕ್ರಮ. ಎಂದು ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

ಅವರು ಪುತ್ತೂರಿನ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಜರುಗಿದ 'ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ಪ್ರದಾನ ಹಾಗೂ ತಾಳಮದ್ದಳೆ ಸಪ್ತಾಹ ಸಮಾರೋಪದಲ್ಲಿ ಆಶೀರ್ವಚನ ನೀಡುತ್ತಾ, ಇಡಗುಂಜಿ ಮೇಳವು ಪರಂಪರೆಯನ್ನು ಮುರಿಯದ ಸಂಘಟನೆ. ದಿ.ಶಂಭು ಹೆಗಡೆಯವರ ಕನಸನ್ನು ಅವರ ಚಿರಂಜೀವಿಗಳು ನನಸು ಮಾಡುತ್ತಿದ್ದಾರೆ. ಆ ಸಂಘಟನೆಗೆ ನೀಡಿದ ಪ್ರಶಸ್ತಿಗೇ ಗೌರವ ಬಂದಿದೆಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ  ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಮಾತನಾಡುತ್ತಾ, ನಾಟ್ಯಾಚಾರ್ಯ ಕುರಿಯ ವಿಠಲ ಶಾಸ್ತ್ರಿಗಳು ಯಕ್ಷಗಾನದ ಕ್ರಾಂತಿ ಪುರುಷ. ಅವರು ರಂಗದಲ್ಲಿ ತಂದ ಅನೇಕ ಪ್ರಯೋಗಗಳು ಈಗಲೂ ಪ್ರಸ್ತುತ. ತನ್ನ ಮನೆಯನ್ನೇ ಗುರುಕುಲವನ್ನಾಗಿ ಮಾಡಿ ಶಿಷ್ಯರನ್ನು ಬೆಳೆಸಿದ ಮಹಾ ಗುರುಎಂದರು.

ಈ ಸಂದರ್ಭದಲ್ಲಿ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ಈ ಸಂಸ್ಥೆಯನ್ನು ಪ್ರತಿನಿಧಿಸಿದ ಶಿವಾನಂದ ಹೆಗಡೆ ಕೆರೆಮನೆ ಹಾಗೂ ಹಿರಿಯ ಸ್ತ್ರೀವೇಷಧಾರಿ ಕೊಕ್ಕಡ ಈಶ್ವರ ಭಟ್ಟರಿಗೆ 'ಕುರಿಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಕಲಾಪೋಷಕ, ಉದ್ಯಮಿ ಶ್ರೀ ಆರ್.ಕೆ.ಭಟ್ಟರಿಗೆ 'ಕುರಿಯ ಸ್ಮೃತಿ ಗೌರವ'ವನ್ನು ಪ್ರದಾನಿಸಲಾಯಿತು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ಅಭಿನಂದನಾ ನುಡಿಗಳ ಮೂಲಕ ಸಾಧಕರ ಸಾಧನೆಗೆ ಕನ್ನಡಿ ಹಿಡಿದರು.

ಕೀರ್ತಿಶೇಷ ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರ ಕಲಾಯಾನವನ್ನು ಹಿರಿಯ ಅರ್ಥದಾರಿ ವೆಂಕಟರಾಮ ಭಟ್ಟ ಸುಳ್ಯ ಸ್ಮರಿಸಿದರು. ಪುತ್ತೂರಿನ ದ್ವಾರಕಾ ಕಾರ್ಪೋರೇಶನ್ ಪ್ರೈ ಲಿ., ಇದರ ವ್ಯವಸ್ಥಾಪನಾ ನಿರ್ದೇಶಕ ಗೋಪಾಲಕೃಷ್ಣ ಭಟ್ ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ ಪ್ರಭು ಉಪಸ್ಥಿತರಿದ್ದರು.

ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರ ನೆನಪಿನಲ್ಲಿ ಅವರ ಕುಟುಂಬಸ್ಥರು ತಾಳಮದ್ದಳೆ ಸಪ್ತಾಹಕ್ಕೆ ದೊಡ್ಡ ಮೊತ್ತದ ನಿಧಿಯನ್ನು ಕುರಿಯ ಪ್ರತಿಷ್ಠಾನದ ಉಜಿರೆ ಅಶೋಕ ಭಟ್ಟರಿಗೆ ಹಸ್ತಾಂತರಿಸಿದರು. ಭಾಗವತ ರಮೇಶ ಭಟ್ ಪುತ್ತೂರು ಸ್ವಾಗತಿಸಿದರು. ಸ್ವಸ್ತಿಕ್ ಪದ್ಯಾಣ ವಂದಿಸಿದರು. ಕಲಾವಿದ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಶ್ರಯದಲ್ಲಿ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು 'ತಾಳಮದ್ದಳೆ ಸಪ್ತಾಹ'ವನ್ನು ಆಯೋಜಿಸಿತ್ತು.   

ಪೆರುವಡಿ ಅಶೋಕ ಸುಬ್ರಹ್ಮಣ್ಯ, ಕುಮಾರ ಸ್ವಾಮಿ ಕನ್ಯಾನ, ಪದ್ಯಾಣ ಶಂಕರನಾರಾಯಣ ಭಟ್, ಕಾಡೂರು ಸೀತಾರಾಮ ಶಾಸ್ತ್ರಿ, ರಾಮ ಜೋಯಿಸ್ ಬೆಳ್ಳಾರೆ ಸಹಕರಿಸಿದರು. ಸಮಾರಂಭದ ಬಳಿಕ  ಸಪ್ತಾಹದ ಕೊನೆಯ ತಾಳಮದ್ದಳೆ 'ಗುರುದಕ್ಷಿಣೆ' ಸಂಪನ್ನಗೊಂಡಿತು. ಏಳು ದಿವಸವೂ ರುಚಿ ಶುದ್ಧಿಯ ಪ್ರೇಕ್ಷಕರು ತಾಳಮದ್ದಳೆಗೆ ಉಪಸ್ಥಿತರಿದ್ದರು.


Friday, July 4, 2025

ಸ್ತ್ರೀಪಾತ್ರಗಳನ್ನು ಮಾತಿಗೆ ಎಳೆದ 'ಈಶಾನ'

 

(2017ರಲ್ಲಿ ಹಿರಿಯ ಕಲಾವಿದ ಶ್ರೀ ಕೊಕ್ಕಡ ಈಶ್ವರ ಭಟ್ಟರಿಗೆ ಅಭಿನಂದನಾ ಸಮಾರಂಭ ಜರುಗಿತ್ತು. ಆ ಸಂದರ್ಭದಲ್ಲಿ 'ಈಶಾನ' ಎನ್ನುವ ಅಭಿನಂದನಾ ಗ್ರಂಥವನ್ನು ಅವರಿಗೆ ಸಮರ್ಪಿಸಲಾಗಿತ್ತು. ಪ್ರಜಾವಾಣಿಯ 'ದಧಿಗಿಣತೋ' ಅಂಕಣದಲ್ಲಿ - 17-2-2017 - ಪುಸ್ತಕದ ಕುರಿತ ಬರಹ ಬರೆದಿದ್ದೆ. 2025 ಜುಲೈ 6ರಂದು ಈಶ್ವರ ಭಟ್ಟರಿಗೆ 'ಕುರಿಯ ಪ್ರಶಸ್ತಿ' ಪ್ರದಾನದ ಶುಭ ಸಂದರ್ಭದ ಮುಂಚಿತವಾಗಿ ಈ ಲೇಖನದ ಮರುಓದು)

"ಇತ್ತೀಚೆಗೆ ಯಕ್ಷಗಾನದ ಸ್ತ್ರೀವೇಷಗಳು ರಂಗದಲ್ಲಿ ಡ್ಯಾನ್ಸ್ ಐಟಂ ಆಗಿ ಕಾಣುತ್ತಿವೆ." ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಅಭಿಮತ. ಸಂದರ್ಭ : ಹಿರಿಯ ಸ್ತ್ರೀಪಾತ್ರಧಾರಿ ಕೊಕ್ಕಡ ಈಶ್ವರ ಭಟ್ಟರ ಎಪ್ಪತ್ತೈದರ (2017) ಸಂಭ್ರಮ. 'ಯಕ್ಷಗಾನದ ಬಹುತೇಕ ಸ್ತ್ರೀವೇಷಗಳು ಸೀರೆ ಉಡುವುದನ್ನೇ ಮರೆತಿವೆʼ ಎಂದು ಹಿಂದೊಮ್ಮೆ ವಾಟ್ಸಪ್ಪಿನಲ್ಲಿ ಕಮೆಂಟ್ ಹಾಕಿದ್ದೆ. ಅದಕ್ಕೊಬ್ಬರು 'ಡೋಂಟ್ ವರಿ' ಎಂದು ಮರು ಉತ್ತರ ನೀಡಿದ್ದರು. ಅದನ್ನು ಡ್ಯಾನ್ಸ್ ಐಟಂ ಆಗಿಯೇ ಸ್ವೀಕರಿಸಬೇಕೋ, ಭರತನಾಟ್ಯದ ಡ್ರೆಸ್ಸನ್ನು ಹೋಲುವಂತಹ ಉಡುಗೆಗಳನ್ನು ಎಲ್ಲಾ ಪಾತ್ರಗಳಲ್ಲೂ ಒಪ್ಪಬೇಕೋ ಅಥವಾ ಇದ್ಯಾವುದರ ಚಿಂತೆ ಇಲ್ಲದೆ 'ಡೋಂಟ್ ವರಿ'ಯಾಗಿರಬೇಕೋ? ಉತ್ತರ ಸಿಕ್ಕದ ಪ್ರಶ್ನೆಗಳು.

ಡಾ.ಜೋಷಿಯವರ ಸಕಾಲಿಕ ಮಾತಿನಲ್ಲಿ ವರ್ತಮಾನದ ರಂಗದ ಮರುಕವಿದೆ. ಮೌನಕ್ಕೂ ಮಾತಿದೆ, ಭಾವಕ್ಕೂ ಭಾಷೆಯಿದೆ, ಪಾತ್ರಗಳಿಗೂ ಒಂದು ಮನಸ್ಸಿದೆ ಎನ್ನುವುದನ್ನು ಹಿರಿಯ ಸ್ತ್ರೀಪಾತ್ರಧಾರಿಗಳು ರಂಗದಲ್ಲಿ ಸ್ಥಾಪಿಸಿದ್ದಾರೆ. ಪಾತಾಳ ವೆಂಕಟ್ರಮಣ ಭಟ್, ಡಾ.ಕೋಳ್ಯೂರು ರಾಮಚಂದ್ರ ರಾವ್, ಕೊಕ್ಕಡ ಈಶ್ವರ ಭಟ್ ಮೊದಲಾದ ಕಲಾವಿದರ ಪಾತ್ರಾಭಿವ್ಯಕ್ತಿಯಲ್ಲಿ ಪುರಾಣ ಪಾತ್ರಗಳು ಮರುಜ್ಜೀವವಾಗುತ್ತಿದ್ದುವು. ಹೀಗಂದಾಗ 'ಆ ಕಾಲವೇ ಬೇರೆ' ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದರು. ಎಲ್ಲವನ್ನೂ ಕಾಲದೊಂದಿಗೆ ಸಮೀಕರಿಸುವುದು ದೌರ್ಬಲ್ಯವಾಗಿ ಬಿಟ್ಟಿದೆ. ಒಂದು ಪಾತ್ರದ ಯಶಸ್ವೀ ಅಭಿವ್ಯಕ್ತಿಯ ಹಿಂದೆ ಕಲಾವಿದನ ರಂಗತಪಸ್ಸಿದೆ ಎನ್ನುವುದನ್ನು ಮರೆಯಲಾಗದು. ಅಂತಹ ತಪಸ್ಸು ಇದ್ದರೆ ಮಾತ್ರ ಪಾತ್ರ ಒಲಿಯುತ್ತದೆ. ಇಲ್ಲದಿದ್ದರೆ ಬರೇ ವೇಷವಷ್ಟೇ.

ಕೊಕ್ಕಡ ಈಶ್ವರ ಭಟ್ಟರ ಅಭಿನಂದನಾ ಸಮಾರಂಭದ ನೆನಪಿಗಾಗಿ 'ಈಶಾನ' ಎನ್ನುವ ಅಭಿನಂದನಾ ಗ್ರಂಥವನ್ನು ಪ್ರಕಾಶಿಸಲಾಗಿತ್ತು. ಈಶಾನದ ಸಂಪಾದಕರು - ಶ್ರೀ ಗಣರಾಜ ಕುಂಬ್ಳೆ. ತುಂಬಾ ಅರ್ಥವತ್ತಾದ ಹೂರಣವನ್ನು ಪೋಣಿಸಿದ್ದಾರೆ. ಈಶಾನವನ್ನು ಸುಮಾರು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಒಂದು, ಈಶ್ವರ ಭಟ್ಟರಿಗೆ ಅಭಿನಂದನೆಯ ನುಡಿಗಳುಳ್ಳ ಲೇಖನ; ಎರಡು - ಪುರಾಣ ಸ್ತ್ರೀ ಪಾತ್ರಗಳ ಒಳತೋಟಿ ಮತ್ತು ಮೂರನೇಯದು ರಂಗ ವಿಮರ್ಶೆ. ಇದರಲ್ಲಿ ಎರಡನೇ ವಿಭಾಗವು ನನ್ನ ಮೇಲಿನ ವಿಚಾರಕ್ಕೆ ಪೂರಕ. ಕೆಲವು ಪ್ರಸಂಗಗಳ ಸ್ತ್ರೀಪಾತ್ರದ ಮಹತ್ತುಗಳನ್ನು ಲೇಖನಗಳು ಬಿಂಬಿಸಿವೆ.

ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಬರೆದ 'ದಾಕ್ಷಾಯಣಿ', ಶ್ರೀಧರ ಡಿ.ಎಸ್. ಅವರ 'ಅಂಬೆ', ಸುಳ್ಯದ ವೆಂಕಟರಾಮರು 'ಸಾಧ್ವಿ ಮಂಡೋದರಿ', ನಾರಾಯಣ ಎಂ.ಹೆಗಡೆಯವರು 'ಚಿತ್ರಾಂಗದೆ', ಅಡ್ಕ ಗೋಪಾಲಕೃಷ್ಣ ಭಟ್ಟರು 'ದುರಂತ ಶೂರ್ಪನಖಿ', ನಾರಾಯಣ ಪುತ್ತೂರು ಇವರ 'ಸುಭದ್ರೆ', ರವಿ ಅಲೆವೂರಾಯರು 'ಶ್ರೀದೇವಿ', ಎಂ.ಕೆ.ರಮೇಶ್ ಆಚಾರ್ಯರು 'ದಯಮಂತಿ, ಚಂದ್ರಮತಿ', ಅಂಬಾಪ್ರಸಾದ ಪಾತಾಳರು ಬೇರೆ ಬೇರೆ ಪ್ರಸಂಗಗಳಲ್ಲಿ ಬರುವ 'ಸುಭದ್ರೆ' ಮತ್ತು ಸೇರಾಜೆಯ ಜಿ.ಕೆ.ಭಟ್ಟರು 'ಸೀತೆ' - ಪಾತ್ರಗಳ ಕುರಿತು ಒಳನೋಟ ಬೀರಿದ್ದಾರೆ. ಎಲ್ಲವನ್ನೂ ಓದಿದಾಗ 'ಒಂದೊಂದು ಪಾತ್ರಗಳ ಒಳಹೊಕ್ಕು ಹೊರ ಬರಲು ಬಹುಶಃ ಒಬ್ಬ ಪಾತ್ರಧಾರಿಗೆ ಅರ್ಧಾಯಷ್ಯ ಬೇಕೇನೋ? ಎಂದೆನಿಸಿತು. ಡಾ.ಚಂದ್ರಶೇಖರ ದಾಮ್ಲೆಯವರು ಕೃಷ್ಣ ಸಂಧಾನದ 'ದ್ರೌಪದಿ' ಪಾತ್ರವನ್ನು ಬಹಳ ಅರ್ಥವತ್ತಾಗಿ ವಿಮರ್ಶಿಸಿದ್ದಾರೆ. ಪಾತ್ರಗಳ ಸಾಧ್ಯತೆಯೊಂದಿಗೆ ಕಲಾವಿದನು ಪಾತ್ರದೊಂದಿಗೆ ಮಿಳಿತವಾಗಲು ಉಂಟಾಗುವಂತಹ ತೊಂದರೆ ಮತ್ತು ಸವಾಲುಗಳನ್ನು ವಿಷದವಾಗಿ ವಿವರಿಸಿದ್ದಾರೆ.

ದಾಕ್ಷಾಯ(ಯಿ)ಣಿ ಪಾತ್ರವನ್ನೇ ತೆಕ್ಕೊಳ್ಳಿ. ಪ್ರವೇಶದಿಂದ ಯೋಗಾಗ್ನಿಯಲ್ಲಿ ಉರಿದುಹೋಗುವ ತನಕ ಏನಿಲ್ಲವೆಂದರೂ ಒಂದೂವರೆ ಗಂಟೆಗೂ ಮಿಕ್ಕಿ ವಿವಿಧ ಭಾವಗಳನ್ನು ಪ್ರಕಟಿಸುವುದು ಇದೆಯಲ್ಲಾ, ನಿಜಕ್ಕೂ ಇದೊಂದು ಸವಾಲು. ಪೆರಡಂಜಿಯವರು ತನ್ನ ಬರೆಹದಲ್ಲಿ ಒಂದೊಂದು ಪದ್ಯಕ್ಕೂ ಕಲಾವಿದನ ಜವಾಬ್ದಾರಿಯನ್ನು ವಿವರಿಸಿದ್ದಾರೆ. ಪಾತ್ರಗಳು ಹೇಗಿರಬೇಕು ಎನ್ನುವುದನ್ನು ಪ್ರಸ್ತುತಪಡಿಸಿದ್ದಾರೆ. ಈಶಾನದಲ್ಲಿರುವ ಎಲ್ಲಾ ಪಾತ್ರಗಳನ್ನು ಅರ್ಥಧಾರಿಯಾಗಿ, ವೇಷಧಾರಿಯಾಗಿ ಅನುಭವಿಸಿದ ಹಿನ್ನೆಲೆಯಲ್ಲಿ ಲೇಖನಗಳು ಮೂಡಿ ಬಂದಿರುವುದು ಕೃತಿಯ ಚೆಲುವನ್ನು ಹೆಚ್ಚಿಸಿದೆ.

ಡಾ.ರಾಘವ ನಂಬಿಯಾರರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ ಈ ಮಾತುಗಳು ವೇಷಧಾರಿಗೆ ದಿಕ್ಸೂಚಿಯಾಗಲಾರದೇ? "ಕಲಾವಿದ ಸತತ ಚಿಂತನ ಹಾಗೂ ವಿದ್ವಾಂಸರ ಜತೆ ಸಂವಾದ ನಡೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಮುಖಸ್ತುತಿ ಮಾಡುವ ಅಭಿಮಾನಿಗಳಿಗಿಂತ ತನ್ನಲ್ಲಿ ತಪ್ಪು ಕಾಣುವ ಮತ್ತು ಹೇಳುವ ಮಂದಿಯ ಜತೆ ಮಾತಾಡುವುದರಿಂದ ಪ್ರಯೋಜನ ಹೆಚ್ಚು. ಜತೆಗೆ ಸಾಹಿತ್ಯದ ಓದು ಪಾತ್ರಧಾರಿಯ ಅರಿವಿನ ಕ್ಷಿತಿಜವನ್ನು ವಿಸ್ತರಿಸಿ ಕೊಡದಿರದು. ಎಲ್ಲಕ್ಕಿಂತ ಹಿರಿಯ ಕಲಾಕಾರರ ಹೆಚ್ಚುಗಾರಿಕೆ, ಲೋಪದೋಷ ಎರಡರ ಬಗೆಗೂ ದೃಷ್ಟಿ ಸೂಕ್ಷ್ಮತೆ ಇದರಬೇಕು."

ಅರ್ಥಗಾರಿಕೆ : ಆಕರ ನಿರ್ವಹಣೆ-ಕೆಲವು ವಿಚಾರಗಳ ವಿಮರ್ಶೆ, ಡಾ.ಪ್ರಭಾಕರ ಜೋಷಿಯವರ ಲೇಖನವು 'ಕೃಷ್ಣ ಸಂಧಾನ' ಪ್ರಸಂಗದಲ್ಲಿ ಅರ್ಥ ಹೇಳುವ ಕಲಾವಿದನಿಗಿರಬೇಕಾದ ಎಚ್ಚರ ಮತ್ತು ಜಾಣ್ಮೆಯಂತಹ ಸೂಕ್ಷ್ಮ ವಿಚಾರಗಳನ್ನು ಹೇಳಿದ್ದಾರೆ. ಅಂತೆಯೇ ರಾಧಾಕೃಷ್ಣ ಕಲ್ಚಾರರ 'ಅರ್ಥಗಾರಿಕೆ ಆಕರ, ಆಧಾರ', ಸರ್ಪಂಗಳ ಈಶ್ವರ ಭಟ್ಟರು ಬರೆದ 'ಕೃಷ್ಣ ಸಂಧಾನ - ಪೂರ್ವಭಾಗ', ಡಾ.ಕೆ.ಎಂ.ರಾಘವ ನಂಬಿಯಾರರ 'ಸ್ತ್ರೀ ವೇಷದ ಗುಣವೃದ್ಧಿ,' ತಾರಾನಾಥ ಬಲ್ಯಾಯರ 'ದಕ್ಷಿಣಾದಿ ಯಕ್ಷಗಾನದ ಸ್ತ್ರೀ ವೇಷ, ಆಹಾರ್ಯ' ಮತ್ತು ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರ 'ವಾಲ್ಮೀಕಿ ಚಿತ್ರಿಸಿದ ಸೀತೆ'.. ಮೊದಲಾದ ಬರಹಗಳು ಸಕಾಲಿಕವಾದ ಚಿಂತನೆಯನ್ನು ಚಿತ್ರಿಸಿವೆ. ಭಾಸ್ಕರ ರೈ ಕುಕ್ಕುವಳ್ಳಿ, ಮೂರ್ತಿ ದೇರಾಜೆ, ಜಿ.ಎಲ್.ಹೆಗ್ಡೆ, ಆರತಿ ಪಟ್ರಮೆ, ಡಾ.ಅಮೃತ ಸೋಮೇಶ್ವರ, ಸಿಬಂತಿ ಪದ್ಮನಾಭ, ಶಾಂತಾರಾಮ ಪ್ರಭು, ಸಿತ್ಲ ರಂಗನಾಥ ರಾವ್.. ಇವರ ಯಕ್ಷಗಾನದ ಬಗೆ-ನೋಟ ಲೇಖನಗಳು.

ಈಶ್ವರ ಭಟ್ಟರು ಸ್ತ್ರೀಪಾತ್ರಧಾರಿಯಾಗಿ ರಂಗದಲ್ಲಿ ದೊಡ್ಡ ಹೆಜ್ಜೆಯನ್ನು ಮೂಡಿಸಿದವರು. ಹಾಗಾಗಿ ಸಂಪಾದಕರು ಪುಸ್ತಕದಲ್ಲಿ ಪುರಾಣ ಸ್ತ್ರೀಪಾತ್ರಗಳ ಮಾತುಗಳಿಗೆ ಮತ್ತು ಆ ರಂಗಕ್ಕೆ ಅಪೇಕ್ಷಣೀಯವಾದ ವಿಚಾರಗಳಿಗೆ ಹೆಚ್ಚು ಸ್ಥಳ ಮೀಸಲಿರಿಸಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ರಂಗದಲ್ಲಿ ಬರುವ ಒಂದೊಂದು ಪಾತ್ರಗಳಿಗೆ ಮಾತು ಕೊಟ್ಟಿರುವುದು 'ಈಶಾನ'ದ ಹೆಚ್ಚುಗಾರಿಕೆ. ಸಂಪಾದಕ ಗಣರಾಜ ಕುಂಬ್ಳೆಯವರ ಯೋಚನೆಯು ಯೋಜನಾಬದ್ಧವಾಗಿ ಪೋಣಿತವಾಗಿದೆ.

ಈಶ್ವರ ಭಟ್ಟರ ಚಿರಂಜೀವಿ ಉಮೇಶ್, ತನ್ನ ತೀರ್ಥರೂಪರ ಕಲಾ ಸೇವೆಗೆ ಗೌರವ ತಂದಿದ್ದಾರೆ. ಅವರ ಕಲಾಯಾನವನ್ನು ದಾಖಲಿಸಿದ್ದಾರೆ. ಶ್ರದ್ಧೆಯಿಂದ 'ಈಶಾನ'ದ ಬೆಳಕಿಗೆ ಕಾರಣರಾಗಿದ್ದಾರೆ. ಮಗನಾಗಿ ಇಳಿ ವಯಸ್ಸಿನ ತಂದೆಗೆ ಖುಷಿ ನೀಡಿದ್ದಾರೆ. ಈಶ್ವರ ಭಟ್ಟರ ಮನಸ್ಸು ಯೌವನವಾಗಿದೆ! ಇವರ ಅಭಿನಂದನಾ ಗ್ರಂಥ 'ಈಶಾನ'ಕ್ಕೆ ಯಕ್ಷಗಾನದ ಸ್ತ್ರೀಭೂಮಿಕೆಯನ್ನು ಪ್ರತಿನಿಧಿಸುವ ಗ್ರಂಥ ಎನ್ನುವ ಹೆಗ್ಗಳಿಕೆಯು ಅತಿಶಯವಾಗಲಾರದು.

ಪಾತ್ರಗಳಿಗೆ ಮಾನ ತಂದ ಸ್ತ್ರೀಪಾತ್ರಧಾರಿ : ಕೊಕ್ಕಡ ಈಶ್ವರ ಭಟ್





 ದಿನಾಂಕ 6-7-2025ರಂದು ಪುತ್ತೂರಿನಲ್ಲಿ ಶ್ರೀ ಕೊಕ್ಕಡ ಈಶ್ವರ ಭಟ್ಟರಿಗೆ ಪ್ರತಿಷ್ಠಿತ ʼಕುರಿಯ ಪ್ರಶಸ್ತಿʼ ಪ್ರದಾನ 

 (ಶ್ರೀ ಕೊಕ್ಕಡ ಈಶ್ವರ ಭಟ್ಟರಿಗೆ ಪುತ್ತೂರಿನಲ್ಲಿ 11-2-2017ರಂದು ಅಭಿನಂದನಾ ಸಮಾರಂಭ ಜರುಗಿತ್ತು. ಈ ಸಂದರ್ಭದಲ್ಲಿ ಪ್ರಜಾವಣಿಯ 'ದಧಿಗಿಣತೋ' ಅಂಕಣದಲ್ಲಿ ಬರೆದ ಲೇಖನದ ಮರುಓದು ಈಗ) 

ಪಾತ್ರಗಳಿಗೆ ಮಾನ ತಂದ ಸ್ತ್ರೀಪಾತ್ರಧಾರಿ : ಕೊಕ್ಕಡ ಈಶ್ವರ ಭಟ್

ಲೇ: ನಾ. ಕಾರಂತ ಪೆರಾಜೆ

     ಮುಖದಲ್ಲಿ ನೆರಿಗೆ ಕಟ್ಟಿದರೆ ಮತ್ತೆ ಸ್ತ್ರೀಪಾತ್ರ ಮಾಡಬಾರದು. ತನಗೆ ವಯಸ್ಸಾಯಿತು ಎನ್ನುವ ಮಾನಸಿಕ ಸ್ಥಿತಿಯು ಆತನನ್ನು ರಂಗದಲ್ಲಿ ಯಶಸ್ವಿಗೊಳಿಸದು. ಆತ ಎಷ್ಟೇ ಪ್ರಸಿದ್ಧನಾದರೂ ಆತನ ಅಭಿವ್ಯಕ್ತಿಯು ಪ್ರೇಕ್ಷಕರಿಗೆ ಇಷ್ಟವಾಗದು. ಅಭಿಮಾನದಿಂದ ಒಪ್ಪಿಕೊಳ್ಳುತ್ತಾರಷ್ಟೇ,” ಮಾತಿನ ಮಧ್ಯೆ ಹಿರಿಯ ಸ್ತ್ರೀಪಾತ್ರಧಾರಿ ಕೊಕ್ಕಡ ಈಶ್ವರ ಭಟ್ಟರು ತನ್ನನ್ನೇ ಟಾ‍ರ್ಗೆಟ್‌  ಮಾಡುತ್ತಾ ಮಾತು ಮುಂದುವರಿಸುತ್ತಿದ್ದರು. 'ತನಗೆ ವಯಸ್ಸಾಯಿತು' ಎನ್ನುವಂತಹ ಸ್ವ-ಪ್ರಜ್ಞೆಯು ರಂಗಾನುಭವದಿಂದ ಪಕ್ವವಾದಾಗ ಮಾತ್ರ ಕಲಾವಿದನ ಅನುಭವಕ್ಕದು ನಿಲುಕುವುದು. ಆದರೆ ಈಶ್ವರ ಭಟ್ಟರು ಎಪ್ಪತ್ತೈದರ ಅಂಚು ದಾಟಿದರೂ ಅವರ ವೇಷವನ್ನು ಈಗಲೂ ರಂಗವು ಒಪ್ಪುತ್ತದೆ.

     ಉಪ್ಪಿನಂಗಡಿ ಸನಿಹದ ತಾಳ್ತಜೆಯಲ್ಲಿ ಜರುಗಿದ ಹೇಮಂತ ಹಬ್ಬದಲ್ಲಿ ಜರುಗಿದ 'ರತಿ ಕಲ್ಯಾಣ' ಪ್ರಸಂಗದಲ್ಲಿ ಭಟ್ಟರು 'ದ್ರೌಪದಿ'ಯಾಗಿ ಇಳಿ ವಯಸ್ಸಲ್ಲೂ ನಯ ನಾಜೂಕಿನ ಸ್ತ್ರೀಪಾತ್ರಧಾರಿಯಾಗಿ ಮೆರೆದಿದ್ದರು. ಅವರ ಜತೆಗೆ ಪಾತ್ರ ಮಾಡುವ ಅವಕಾಶ ಪ್ರಾಪ್ತವಾದರೂ ಭಟ್ಟರ ಮೇರು ವ್ಯಕ್ತಿತ್ವದ ಮುಂದೆ ಕುಬ್ಜನಾಗಿದ್ದೆ. ಜತೆಗೆ ಭಟ್ಟರೊಂದಿಗೆ ವೇಷ ಮಾಡಿದ ಹೆಮ್ಮೆಯೂ! ಈ ಹೆಮ್ಮೆಯು ಕೋಡು ಮೂಡಿಸಲಿಲ್ಲ. ಬದಲಿಗೆ ನನಗೆ ಬಾಗಲು ಕಲಿಸಿತು. ಕಳೆದ ವರುಷವೂ ದಮಯಂತಿ ಪುನರ್‌ ಸ್ವಯಂವರ ಪ್ರಸಂಗದಲ್ಲಿ 'ಚೇದಿ ರಾಣಿ'ಯಾಗಿ ಹಳೆಯ ನೆನಪನ್ನು ರಂಗದಲ್ಲಿ ದಾಖಲಿಸಿದ್ದರು. ಅಂದು ಎಂ.ಕೆ.ರಮೇಶ ಆಚಾರ್ಯರು 'ದಯಮಂತಿ'ಯಾಗಿ ಕೊಕ್ಕಡದವರಿಗೆ ಸಾಥ್ ಆಗಿದ್ದರು.

“ರಂಗದಲ್ಲಿ ಕಸುಬು ಮಾಡುವ ಕಲಾವಿದನಿಗೆ ತನ್ನ ಪಾತ್ರ ನಿರ್ವಹಣೆಯಲ್ಲಿ 'ತೃಪ್ತಿ' ಬೇಕು. ಸ್ತ್ರೀಪಾತ್ರಗಳಿಗೆ ರಂಗದಲ್ಲಿ ಅವಕಾಶ ಹೆಚ್ಚಿದ್ದಾಗ ಕಸುಬಿನಲ್ಲಿ ತೃಪ್ತಿ ಸಹಜವಾಗಿ ಬರುತ್ತದೆ. ಬೆಳಗ್ಗಿನವರೆಗೆ ಆಗಾಗ್ಗೆ ಬಂದು ಮರೆಯಾಗುವ ಸ್ತ್ರೀಪಾತ್ರಗಳು ರಂಗದಲ್ಲಿ ಮೆರೆಯುವುದಿಲ್ಲ. ಆತನಿಂದ ಉತ್ತಮ ಅಭಿವ್ಯಕ್ತಿಯನ್ನು ನಿರೀಕ್ಷಿಸುವಂತಿಲ್ಲ. ಕಲಾವಿದನನ್ನು ಪ್ರೇಕ್ಷಕ ಬಹುಬೇಗ ಮರೆಯುತ್ತಾನೆ,” ಎನ್ನುತ್ತಾ ಕಳೆದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾರೆ.

     ಈಶ್ವರ ಭಟ್ಟರು ಅರ್ಧ ಶತಮಾನಕ್ಕೂ ಮಿಕ್ಕಿ ರಂಗದಲ್ಲಿ ತರುಣಿಯಾಗಿದ್ದಾರೆ. 'ಮೋಹಿನಿ'ಯಿಂದ 'ಚಂದ್ರಮತಿ' ತನಕ. ಒಂದು ಕಾಲಘಟ್ಟದ ಪ್ರದರ್ಶನಗಳನ್ನು ನೆನಪಿಸಿಕೊಂಡಾಗ ನಿವೃತ್ತಿಯಾಗುವಲ್ಲಿಯ ತನಕವೂ ಇವರ ಪಾತ್ರಾಭಿವ್ಯಕ್ತಿಯಲ್ಲಿ 'ಪಾತ್ರದ ಹಿರಿತನ'ದ ಗಟ್ಟಿತನವಿದ್ದುದನ್ನು ಗಮನಿಸಬಹುದು. ಗಟ್ಟಿ ಸಂಪನ್ಮೂಲವನ್ನು ಹೊಂದಿದ ಅನುಭವಿಗಳ ಮಧ್ಯದಲ್ಲಿ ಬೆಳೆದ ಪರಿಣಾಮ; ಈಗಲೂ ಕೊಕ್ಕಡದವರನ್ನು ನೆನಪಿಸಿಕೊಡರೆ ಸಾಕು, 'ದಾಕ್ಷಾಯಿಣಿ, ಮಾಯಾ ಶೂರ್ಪನಖಿ' ಪಾತ್ರಗಳು ಮಿಂಚುತ್ತವೆ.

     ಓದಿದ್ದು ಆರನೇ ತರಗತಿ. ಕುಡಾಣ ಗೋಪಾಲಕೃಷ್ಣ ಭಟ್ಟರಿಂದ ನಾಟ್ಯಾಭ್ಯಾಸ. ಒಂದಷ್ಟು ಕಾಲ ಭರತನಾಟ್ಯದ ಕಲಿಕೆ. ಮಧ್ಯೆ ಬಡಗುತಿಟ್ಟಿನ ಹೆಜ್ಜೆಗಳ ಅಭ್ಯಾಸ. ಮುಂದೆ ಕೆರೆಮನೆ ಮೇಳದಲ್ಲಿ ಒಂದು ವರುಷದ ತಿರುಗಾಟ. ಬಡಗು ಹಜ್ಜೆಗಳಿಗೆ ದಯಾನಂದ ನಾಗೂರು ಮತ್ತು ಮೊಳಹಳ್ಳಿ ಕೃಷ್ಣ ಇವರಿಗೆ ಗುರು. ಭಟ್ಟರ ತಂದೆ ಮಹಾಲಿಂಗ ಭಟ್. ತಾಯಿ ಪರಮೇಶ್ವರಿ. ಅಳಿಕೆ ಸನಿಹದ ಮುಳಿಯದಲ್ಲಿ ಹುಟ್ಟು. ಕಡೆಂಗೋಡ್ಲಿನಲ್ಲಿ ಬದುಕು. ಆರನೇ ತರಗತಿ ತನಕ ಶಾಲಾಭ್ಯಾಸ. ಪುತ್ತೂರಿನ ಪೆರುವಡಿಯವರ ನೂಜಿ ಮನೆಯಲ್ಲಿ ಮಿಕ್ಕ ಯಕ್ಷಗಾನದ ವಿವಿಧಾಂಗಗಳ ಆರ್ಜನೆ.

     ಪೆರುವಡಿ ಕೃಷ್ಣ ಭಟ್ಟರ ಸಾರಥ್ಯದ ಮೂಲ್ಕಿ ಮೇಳದಲ್ಲಿ 'ಬಾಲಕೃಷ್ಣ' ಪಾತ್ರದ ಮೂಲಕ ಬಣ್ಣದ ಮೊದಲ ಹೆಜ್ಜೆ. ಮೂಲ್ಕಿಯೂ ಸೇರಿದಂತೆ ಕೂಡ್ಲು, ಸುರತ್ಕಲ್, ಕದ್ರಿ, ಕುಂಬಳೆ, ಸಾಲಿಗ್ರಾಮ, ಶಿರಸಿ, ಇಡಗುಂಜಿ, ಎಡನೀರು ಮೇಳಗಳಲ್ಲಿ ವ್ಯವಸಾಯ. ಚಂದ್ರಮತಿ, ಶಾರದೆ, ಚಿತ್ರಾಂಗದೆ, ದ್ರೌಪದಿ, ಸುಭದ್ರೆ, ಪ್ರಭಾವತಿ, ಮಾಯಾ ಶೂರ್ಪನಖಿ, ಮಾಯಾಹಿಡಿಂಬಿ, ಮೋಹಿನಿ.. ಹೀಗೆ ಅನೇಕಾನೇಕ ಪಾತ್ರಗಳು ಭಟ್ಟರ ನೆಚ್ಚಿನವುಗಳು. ಖ್ಯಾತಿ ತಂದವುಗಳು. ಕೂಡ್ಲು ಮೇಳದಲ್ಲಿ ಪ್ರದರ್ಶನವಾಗುತ್ತಿದ್ದ 'ಶ್ರೀದೇವಿ ಲಲಿತೋಪಾಖ್ಯಾನ' ಪ್ರಸಂಗದ 'ಶ್ರೀಲಲಿತೆ' ಪಾತ್ರವು ಈಶ್ವರ ಭಟ್ಟರಿಗೆ ತಾರಾಮೌಲ್ಯ ತಂದಿತ್ತು.

     ವೈಯಾರದ ನಾಟ್ಯ, ನಯನಾಜೂಕಿನ ಅಭಿವ್ಯಕ್ತಿ. ಮನಮೋಹಕ ಚಿತ್ರ. ಪಾತ್ರಕ್ಕನುಚಿತವಾದ ಸಂಭಾಷಣೆ ಇವರದು. 'ಮೂಲ್ಕಿ ಮೇಳದಲ್ಲಿ ನನ್ನ ಬಾಹುಕ, ಪಾಪಣ್ಣ ಪಾತ್ರಗಳಿಗೆ ಈಶ್ವರ ಭಟ್ಟರು  ದಮಯಂತಿಯಾಗಿ, ಗುಣಸುಂದರಿಯಾಗಿ ಜತೆಯಾಗಿದ್ದಾರೆ. ಮೇಳಕ್ಕೂ ಹೆಸರು ತಂದಿದ್ದಾರೆ. ಅವರದು ಮೋಹಕ ಪಾತ್ರ. ಲಾಲಿತ್ಯದ ನಡೆ. ಎಷ್ಟೊ ಕಡೆ ಹೆಣ್ಣುಮಕ್ಕಳು ಇವರ ವಯ್ಯಾರದ ಮುಂದೆ ನಾಚಿದ್ದೂ ಇದೆ, ಎಂದು ತನ್ನ ಮೇಳದ ತಿರುಗಾಟದ ಕ್ಷಣಗಳನ್ನು ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ನೆನಪಿಸಿಕೊಂಡಿದ್ದರು.

     'ಕಲಾವಿದನಿಗೆ ದುಡ್ಡು ಮುಖ್ಯ ಹೌದು. ಜತೆಗೆ ಅಭಿಮಾನವೂ ಕೂಡಾ. ರಂಗದಲ್ಲಿ ಸರಿಯಾದ ಅಭಿವ್ಯಕ್ತಿಗೆ ಅವಕಾಶವಿಲ್ಲದೇ ಹೋದಾಗ ಅಭಿಮಾನಿಗಳಿಗೆ ಮುಖ ತೋರಿಸಲು ನಾಚಿಕೆಯಾಗುತ್ತದೆ. ಜತೆಗೆ ರಂಗದಲ್ಲಿ ಸಹಪಾತ್ರಧಾರಿಗಳ ಹೊಂದಾಣಿಕೆಯೂ ಕೈಕೊಟ್ಟಾಗ ಆಗುವ ಫಜೀತಿ ಯಾರಲ್ಲಿ ಹೇಳುವುದು ಹೇಳಿ,ʼ ರಂಗಸುಖದ ಕುರಿತಾದ ಅವರ ವಿಷಾದ ಬಹುತೇಕ ಸ್ತ್ರೀಪಾತ್ರಧಾರಿಗಳು ಅನುಭವಿಸುವಂತಾದ್ದು. 

     ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಮಾನ, ಕೆರೆಮನೆ ಶಂಭು ಹೆಗಡೆ ಜಯಂತಿ ಸಂಮಾನ, ಮಂಗಳೂರು ಹವ್ಯಕ ಸಭಾ, ಶ್ರೀ ಎಡನೀರು ಮಠ, ಕಲಾರಂಗ ಉಡುಪಿ, ಪಾತಾಳ ಪ್ರಶಸ್ತಿ.. ಹೀಗೆ ಹಲವು ಪ್ರತಿಷ್ಠಿತ ಪುರಸ್ಕಾರಗಳು ಈಶ್ವರ ಭಟ್ಟರ ಕಲಾ ಸೇವೆಗೆ ಸಂದ ಮಾನಗಳು. ಕೊಕ್ಕಡ-ಪಟ್ರಮೆ ಸಮೀಪದ ಹೆನ್ನಳದಲ್ಲಿ ವಾಸ. ಪತ್ನಿ ಶಕುಂತಳೆ. ಮೂವರು ಮಕ್ಕಳು. ಕಡೆಂಗೋಡ್ಲು ನನಗೆ ಬಾಲ್ಯವನ್ನು ಕೊಟ್ಟದ್ದರಿಂದ ಈ ಊರು ನನ್ನ ಹೆಸರಿನೊಂದಿಗೆ ಹೊಸೆಯಬೇಕಿತ್ತು. ಈಗ ಕೊಕ್ಕಡ ಸಮೀಪವಿರುವುದರಿಂದಲೋ ಏನೋ ನಾನೀಗ ಕೊಕ್ಕಡ ಈಶ್ವರ ಭಟ್.

     ವರ್ತಮಾನದ ರಂಗದ ಪೌರಾಣಿಕ ಸ್ತ್ರೀಪಾತ್ರಗಳು ತನ್ನ ಪೌರಾಣಿಕ ನೆಲೆಯನ್ನು ಮರೆತಿವೆ. ಪಾತ್ರಗಳಿಗೂ ಮತಿಯಿದೆ, ಮಾತಿದೆ, ಗೌರವದ ಸ್ಥಾನವಿದೆ. ಅಲ್ಲಿ ಬರುವ ಪಾತ್ರಗಳು ಬದುಕಿನಲ್ಲಿ ಕಾಣ ಸಿಗುವ ಹೆಣ್ಣುಮಕ್ಕಳಂತೆ ಅಲ್ಲ. ಪೌರಾಣಿಕ ಪಾತ್ರಗಳಲ್ಲಿ ಉದಾತ್ತತೆಯನ್ನು ತನ್ನ ಅಭಿವ್ಯಕ್ತಿಯ ಮೂಲಕ ಕಲಾವಿದ ತುಂಬಬೇಕು. ಹಿರಿಯ ಕಲಾವಿದರನೇಕರಲ್ಲಿ ಇಂತಹ ಪ್ರಜ್ಞೆ ಸದಾ ಎಚ್ಚರದಲ್ಲಿರುತ್ತಿತ್ತು. ರಂಗದ ಗೌರವವನ್ನು ಕಾಪಾಡುತ್ತಾ, ಅಭಿವ್ಯಕ್ತಿ-ಮಾತಿನಲ್ಲಿ ಹಿಡಿತ ಸಾಧಿಸುತ್ತಾ ಪಾತ್ರವನ್ನು ಜನಮನದತ್ತ ಒಯ್ಯುವುದು ಸುಲಭದ ಮಾತಲ್ಲ” - ಕೊಕ್ಕಡ ಈಶ್ವರ ಭಟ್ಟರ ಹಿರಿನುಡಿ.

     ಹಿರಿಯರು ಹೀಗೆಂದಾಗ ಬಹಳಷ್ಟು ಮಂದಿ ವರ್ತಮಾನದ ರಂಗದಲ್ಲಿ ತೊಡಗಿಸಿಕೊಂಡಿರುವ - ಹವ್ಯಾಸಿ, ವೃತ್ತಿ - ಕಲಾವಿದರು ಅಲ್ಲಗೆಳೆಯುವುದನ್ನು ಗಮನಿಸಿದ್ದೇನೆ. ಒಂದೊಂದು ಪದ್ಯಕ್ಕೆ ಕಾಲು, ಅರ್ಧ ಗಂಟೆ ಕುಣಿಯುವುದೇ ಸ್ತ್ರೀಪಾತ್ರದ ಅರ್ಹತೆ ಎಂದು ಸ್ಥಾಪಿಸುವ ಕಾಲಮಾನದಲ್ಲಿ ಈಶ್ವರ ಭಟ್ಟರಂತಹ ಹಿರಿಯರ ಮಾತು ಅಪಥ್ಯದಂತೆ ಕಾಣಬಹುದು. ಆದರೆ ಇಂದು ರಂಗದಲ್ಲಿ ನಾವು ಏನಾದರೂ ಹೆಜ್ಜೆ ಊರಿದ್ದೇವೆ, ಊರುತ್ತಿದ್ದೇವೆ ಎಂದಾದರೆ ಅದು ಈಶ್ವರ ಭಟ್ಟರಂತಹ ಹಿರಿಯರು ರಂಗದಲ್ಲಿ ಮೂಡಿಸಿದ ನಡೆಯಿಂದ ಎನ್ನುವುದನ್ನು ವರ್ತಮಾನದ ವೃತ್ತಿ-ಹವ್ಯಾಸಿ ಕಲಾವಿದರು ಮರೆಯಕೂಡದು.

     2017 ಫೆಬ್ರವರಿ 11ರಂದು ಪುತ್ತೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಈಶ್ವರ ಭಟ್ಟರಿಗೆ ಅಭಿನಂದನಾ ಗ್ರಂಥವನ್ನು ಗೌರವಪೂರ್ಣವಾಗಿ ಸಮರ್ಪಣೆಯಾಗಿದೆ.

          ದಿನಾಂಕ 6-7-2025ರಂದು ಪುತ್ತೂರಿನಲ್ಲಿ ನಡೆಯುವ ತಾಳಮದ್ದಳೆ ಸಪ್ತಾಹದ ಸಮಾರೋಪದಂದು ಕೊಕ್ಕಡ ಈಶ್ವರ ಭಟ್ಟರಿಗೆ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು ನೀಡುವ ʼಕುರಿಯ ಪ್ರಶಸ್ತಿʼ ಪ್ರದಾನ.

_

Wednesday, July 2, 2025

ಯಕ್ಷಗಾನ ತಾಳಮದ್ದಳೆ ಸಪ್ತಾಹ ಶುಭಾರಂಭ : 'ಕಲಾವಿದರಿಗೆ ಯಕ್ಷಗಾನ ಅರ್ಥಗಾರಿಕೆಯು ತಪಸ್ಸು' - ಕೆ. ಗೋವಿಂದ ಭಟ್

 

  “ಕಲಾವಿದರಿಗೆ ಯಕ್ಷಗಾನ ಅರ್ಥಗಾರಿಕೆ ಎನ್ನುವುದು ತಪಸ್ಸಾಗಬೇಕು. ಪುರಾಣ ಲೋಕದ ಅನಾವರಣವು ಅರ್ಥದಾರಿಯಿಂದಾಗಬೇಕು. ಆತ ಅದಕ್ಕೆ ಶಕ್ತನಾಗಿರಬೇಕು. ಸುಂದರ ಪದಪ್ರಯೋಗಳ ಮೂಲಕ ನೀಡುವ ಪುರಾಣದ ಸಂದೇಶಗಳು ಜೀವನದ ಉತ್ಕರ್ಷಕ್ಕೆ ದಾರಿ. ಯಕ್ಷಗಾನದಲ್ಲಿ ವಾಚಿಕವು ಪ್ರಧಾನವೆಂದು ನನ್ನ ಅನುಭವದಿಂದ ತಿಳಿದುಕೊಂಡಿದ್ದೇನೆ. ಇಲ್ಲವಾದರೆ ಆಂಗಿಕ, ಆಹಾರ್ಯ, ಸಾತ್ವಿಕಗಳು ಚೇಷ್ಟೆಯಾಗಿ ಕಾಣುತ್ತದೆ. ಅದು ತುಂಬಿ ಬರಬೇಕಾದರೆ ವಾಚಿಕ ಅತ್ಯಾವಶ್ಯಕವಾಗಿ ಬೇಕು” ಎಂದು ಯಕ್ಷಗಾನ ದಶಾವತಾರಿ ಕೆ. ಗೋವಿಂದ ಭಟ್ ಹೇಳಿದರು.

ಅವರು ಪುತ್ತೂರಿನ 'ಶ್ರೀ ಸುಕೃತಿಂದ್ರ ಕಲಾ ಮಂದಿರದಲ್ಲಿ' ಜರುಗಿದ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು (Thalamaddale sapthaha) ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿ (30-6-2025) ಮಾತನಾಡುತ್ತಿದ್ದರು. ರಾಜಾ ಹಾಸ್ಯ ಬಿರುದಾಂಕಿತ ಕೀರ್ತಿಶೇಷ ಪೆರುವಡಿ ನಾರಾಯಣ ಭಟ್ಟರ ನೆನಪಿನಲ್ಲಿ ನಡೆಯುವ ಸಪ್ತಾಹವನ್ನು ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಹಾಗೂ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು ಜಂಟಿಯಾಗಿ ಆಯೋಜಿಸಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರಿನ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ ಇದರ ಮ್ಹಾಲಕ ಶ್ರೀ ಬಲರಾಮ ಆಚಾರ್ಯರು ವಹಿಸಿ ಮಾತನಾಡುತ್ತಾ, “ಯಕ್ಷಗಾನವೆಂಬುದು ವಿಶಿಷ್ಟ ಕಲಾ ಪ್ರಾಕಾರ. ಅಲ್ಲಿ ಉತ್ಪತ್ತಿಯಾಗುವ ರಸ ಏನಿದೆಯೋ ಅದು ಜ್ಞಾನಸದೃಶ” ಎಂದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ ಪ್ರಭು ಹಾಗೂ ಪುತ್ತೂರು ಶ್ರೀ ರಾಘವೇಂದ್ರ ಮಠದ ಕಾರ್ಯದರ್ಶಿ ಶ್ರೀ ಯು. ಪೂವಪ್ಪ ಸಂದರ್ಭೋಚಿತವಾಗಿ ಮಾತನಾಡಿದರು.

ಕುರಿಯ ಪ್ರತಿಷ್ಠಾನದ ಸಂಚಾಲಕ ಶ್ರೀ ಉಜಿರೆ ಅಶೋಕ ಭಟ್ ಸ್ವಾಗತಿಸಿ, ನಿರ್ವಹಿಸಿದರು. ಶ್ರೀಗಳಾದ ವೆಂಕಟರಾಮ ಭಟ್ ಸುಳ್ಯ, ಸ್ವಸ್ತಿಕ ಪದ್ಯಾಣ, ಅಶೋಕ ಸುಬ್ರಹ್ಮಣ್ಯ ಪೆರುವಡಿ, ರಮೇಶ ಭಟ್ ಪುತ್ತೂರು ಸಹಕರಿಸಿದರು. ಬಳಿಕ ಸಪ್ತಾಹದ ಮೊದಲ ತಾಳಮದ್ದಳೆ 'ತರಣಿಸೇನ ಕಾಳಗ' ಸಂಪನ್ನಗೊಂಡಿತು.

Monday, June 2, 2025

'ತಾರಾಮೌಲ್ಯ'ಕ್ಕೆ ಮರು ಜೀವ ಬಂತು!




 ಯಕ್ಷಗುರು ಶ್ರೀ ಪಾಲೆಚ್ಚಾರು ಗೋವಿಂದ ನಾಯಕರ ಕಲಾಯಾನ ʼಗೋವಿಂದ ಗಾಥೆʼ... ಲೇಖಕ ಶ್ರೀ ಕೃಷ್ಣ ಪ್ರಕಾಶ್‌ ಉಳಿತ್ತಾಯ... 2025 ಜೂನ್‌ 1 ರಂದು ಪುತ್ತೂರು ಬೊಳ್ವಾರಿನ ಶ್ರೀ ದುರ್ಗಾಪರಮೇ‍ಶ್ವರೀ (ಉಳ್ಳಾಲ್ತಿ) ಮಲರಾಯ ಸಪರಿವಾರ ಕ್ಷೇತ್ರದ ವಠಾರದಲ್ಲಿ ಕೃತಿ ಅನಾವರಣ... ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಂದ ಕೃತಿ ಬಿಡುಗಡೆ....  ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್‌ ಅವರಿಂದ ಸಮಾರಂಭದ ಉದ್ಘಾಟನೆ... ಶ್ರೀ ಕ್ಷೇತ್ರದ ಪವಿತ್ರಪಾಣಿ ಶ್ರೀ ಬಾಲಸುಬ್ರಹ್ಮಣ್ಯ ಭಟ್‌ ಅಧ್ಯಕ್ಷತೆ...  ಶ್ರೀ ಅಗರಿ ರಾಘವೇಂದ್ರ ರಾವ್‌, ಶ್ರೀ ಲಕ್ಷ್ಮೀ ಮಚ್ಚಿನ, ಶ್ರೀ ಮಹಾಲಿಂಗೇಶ್ವರ ಭಟ್‌, ಶ್ರೀ ವೆಂಕಟ್ರಮಣ ಉಳಿತ್ತಾಯ ಉಪಸ್ಥಿತಿ. ಗುರು ಶ್ರೀ ಪಾಲೆಚ್ಚಾರು ಗೋವಿಂದ ನಾಯಕರಿಗೆ ʼಈಶಾವಾಸ್ಯ ಪ್ರಶಸ್ತಿʼ ಪ್ರದಾನ. ಪೆರ್ಮಂಕಿ-ಉಳಾಯಿಬೆಟ್ಟು ʼಈಶಾವಾಸ್ಯʼ ಮತ್ತು ಶ್ರೀ ದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನ (ರಿ) ಬೊಳ್ವಾರು ಇವರ ಜಂಟಿ ಆಯೋಜನೆ....

          ಅನಾವರಣಗೊಂಡ ʼಗೋವಿಂದ ಗಾಥೆʼ (ಪ್ರಕಟಣೆ : ಈಶಾವಾಸ್ಯ ಪ್ರಕಾಶನ) ಪುಸ್ತಕಕ್ಕೆ ಮುನ್ನುಡಿ ಬರೆಯುವ ಅವಕಾಶವನ್ನು ಕೃಷ್ಣ ಪ್ರಕಾಶರು ನೀಡಿದ್ದರು. ಆ ಮುನ್ನುಡಿ ಇಲ್ಲಿದೆ... ತಮ್ಮ ಓದಿಗಾಗಿ...

-------------------------------------------------------------- 

'ಅಭಿನಂದನ ಗ್ರಂಥ' -  ಇಲ್ಲಿವೆ, ಕಣ್ಮನ ದಣಿಯುವಷ್ಟು ಉತ್ಪ್ರೇಕ್ಷೆಗಳ ಗೊಂಚಲು. ಹೂರಣಗಳಿಗೆ ಅನಿವಾರ್ಯತೆಯ ಹಂಗು. ಕಲಾವಿದನ ಕಲಾಯಾನದ ಸಾರ್ಥಕ್ಯದ ತುತ್ತ ತುದಿ. ನೆಮ್ಮದಿಯತ್ತ ಜಾರುವ ಹೃದಯ. ಭಾವ ತೇವದ ಜಿನುಗುವಿಕೆಗೆ ಮರುಜೀವ.

ಹತ್ತಾರು ಲೇಖನಗಳು ಹೊಸೆದುಕೊಂಡರೆ ತೃಪ್ತ ಭಾವ. ಅಷ್ಟಿಷ್ಟು ಪರಿಚಿತ ಸ್ನೇಹಿತರಲ್ಲಿ ಲೇಖನಕ್ಕಾಗಿ ಒತ್ತಾಯ, ಮರುಒತ್ತಾಯ, ಪೀಡನೆ. ಕೆಲವೊಮ್ಮೆ 'ನಿಮ್ಮ ಹಳೆಯ ಲೇಖನವೂ ಆದೀತು' ಎನ್ನುವ ಗಂಟಲ ಮೇಲಿನ ವಿನಯವಂತಿಕೆ.

ಒಂದು ನೋಟದಿಂದ ಸರಿ. ಇಲ್ಲಿ ಗ್ರಂಥ ಪ್ರಕಟಣೆ ಮತ್ತು ಗೌರವಾರ್ಪಣೆ ಮುಖ್ಯ! ಆದರೆ ಇದೇ ಗ್ರಂಥವನ್ನು ಅಕಾಡೆಮಿಕ್ ಕಣ್ಣಿನಿಂದ ನೋಡಿದರೆ ತೀರಾ ಢಾಳು ಢಾಳು. ಯಾಕೆ ಹೇಳಿ? ಅಲ್ಲಿನ ಬಹುತೇಕ ಬರಹಗಳಲ್ಲಿ ಅವರ 'ಬಯೋಡಾಟಾ' ವಿಚಾರಗಳದ್ದೇ ಮೇಲ್ಮೆ.

ಒಂದು ಬರೆಹದಲ್ಲಿ ಇರಲಿ. ಜತೆಗೆ ಕಲಾವಿದನ ಕಲಾಯಾನ ಸಿಹಿ-ಕಹಿ ಅನುಭವಗಳು, ಆ ರಂಗದಲ್ಲಿ ಅವರ ಸಾಹಸ - ಸಾಧನೆ, ಅನುಭವಿಸಿದ ಪಾಡು.. ಇವೆಲ್ಲಾ 'ಆಕರ' ದೃಷ್ಟಿಯಿಂದ ದಾಖಲಾಗಬೇಕು. ಹಾಗಾಗುತ್ತಿಲ್ಲ. ಇಂತಹ 'ಸ್ಥಿರ ವಿನ್ಯಾಸ'ಗಳಿಗೆ ರೋಸಿದವರೆಷ್ಟೋ. ಅವರು 'ಅಭಿನಂದನ ಗ್ರಂಥ'ವನ್ನು ಓದುವುದು ಬಿಡಿ, ಪುಟ ತಿರುವಿಯೂ ನೋಡುತ್ತಿಲ್ಲ. ಪುಸ್ತಕ ಸಂಗ್ರಹಕ್ಕೆ ಹೊಸ ನೆಂಟನ ಸೇರ್ಪಡೆ!

ಜತೆಗೆ ಸಂಪಾದಕನ 'ವಾಟ್ಸಾಪ್, ಫೇಸ್ಬುಕ್ಕಿನಲ್ಲಿ ಬರೆಯಿರಿ' ಎಂಬ ವಿನೀತತೆಯಿಲ್ಲದ ವಿನಂತಿಗಳು, ಸಂದೇಶಗಳು.  ಸಾವಿರಾರು ರೂಪಾಯಿ ಖರ್ಚು ಮಾಡಿ ಗ್ರಂಥ ಅಚ್ಚು ಹಾಕಿಸಿ, ವಿತರಣೆಯೂ ಮಾಡದೆ, ಲೇಖಕರಿಗೂ ಕಳುಹಿಸದೆ, ಆಸಕ್ತರಿಗೆ ನೀಡಿದೆ.. ಎಲ್ಲೋ ಒಂದೆಡೆ ಪೇರಿಸಿಟ್ಟರೆ ಏನು ಪ್ರಯೋಜನ?

ಪುಟ ತಿನ್ನುವ ಗ್ರಂಥಗಳ ಬದಲು ಒಬ್ಬೊಬ್ಬ ಕಲಾವಿದರ ಕಲಾಯಾನದ ಚಿಕ್ಕ ಪುಸ್ತಕಗಳು ಪ್ರಕಟಗೊಳ್ಳಬೇಕು. ಒಂದೆರಡು ಗಂಟೆಯಲ್ಲಿ ಓದಿ ಮುಗಿಸುವ ಒಳಸುರಿಗಳಿರಬೇಕು. ಈ ವಿಚಾರಗಳೆಲ್ಲಾ ಮನದಲ್ಲೇ ಗುಂಯ್ಗುಡುತ್ತಿದ್ದುವು. 

ಈ ಹಿನ್ನೆಲೆಯಲ್ಲಿ ಮಿತ್ರ ಕೃಷ್ಣಪ್ರಕಾಶ ಉಳಿತ್ತಾಯರು ಬರೆದ ಪಾಲೆಚ್ಚಾರು ಗೋವಿಂದ ನಾಯಕರ  ಕಲಾಯಾನದ ಹೆಜ್ಜೆಗಳು ಆಪ್ತವಾದುವು. ಒಬ್ಬ ಕಲಾವಿದನ ಬದುಕಿನಲ್ಲಿ ಹಾದು ಹೋಗುವ ಚಿಕ್ಕ ಚಿಕ್ಕ ಘಟನೆಗಳೇ ಕಲಾಯಾನದ ಗರ್ಭ. ಅದು ಕಾಲದ ಕಥನ. ಗೋವಿಂದ ನಾಯಕ್ ಪಾಲೆಚ್ಚಾರರ ಬದುಕಿನ ಗರ್ಭಕ್ಕೆ ಉಳಿತ್ತಾಯರು ಕನ್ನಡಿ ಹಿಡಿದಿದ್ದಾರೆ. ಅವರ ಶಿಷ್ಯರಾಗಿ ಹತ್ತಿರದಿಂದ ನೋಡಿ, ತಿಳಿದ ವಿಚಾರಗಳ ಪ್ರಸ್ತುತಿಗಳು ಪುಸ್ತಕದ ಜೀವಂತಿಕೆ.

ಸುಮಾರು ಮೂರುವರೆ ದಶಕಗಳಿಂದ ಗೋವಿಂದ ನಾಯಕರ ಒಡನಾಟವಿದೆ. ನನ್ನ ಯಕ್ಷಕಲಿಕೆಯ ಆರಂಭದ ದಿನಮಾನಗಳಲ್ಲಿ ನಾಯಕರ ನಿರ್ದೇಶನ, ಪಾತ್ರಗಳ ಕುರಿತಾದ ತಿಳುವಳಿಕೆಗಳ ಫಲಾನುಭವಿ. ನಾಯಕರು ಅಕ್ಷರಾರ್ಥದಲ್ಲಿ 'ರಂಗ ನಿರ್ದೇಶಕ'. ತನ್ನ ಕಸುಬಿನಲ್ಲಿ ರಾಜಿಯಿಲ್ಲದ ನಿರ್ವಹಣೆ. ಮೇಳಗಳ ತಿರುಗಾಟ, ಹಿರಿಯರ ಒಡನಾಟಗಳು ಅವರ ಬೌದ್ಧಿಕ ಶಕ್ತಿಗೊಂದು 'ನಂದದ ಬೆಳಕು'.

 ಗೋವಿಂದ ನಾಯಕರು ಹೊಸಬರಿಗೆ 'ಒರಟಾಗಿ' ಕಂಡರೆ ಅದು ನಾಯಕರ ದೋಷವಲ್ಲ! ಕಾರಣ, ಯಕ್ಷಗಾನದ ರಂಗದಲ್ಲಿ ಅವರ ನಿಯತ್ತು, ರೂಢಿಗತವಾದ ಶಿಸ್ತು ಮತ್ತು ಅನುಭವಗಳಲ್ಲಿ ಪರಿಪಕ್ವ. ಅವರೊಂದಿಗೆ ಒಡನಾಟ ತೀವ್ರವಾದಂತೆ ನಿರ್ಮಲ ಮನಸ್ಸು ಮತ್ತು ಮಗು ಮನಸ್ಸಿನ ಪರಿಚಯವಾಗುತ್ತದೆ

 ನಾಯಕರ ಶಿಷ್ಯ ಗಡಣ ಸಣ್ಣದಲ್ಲ. ಕಲಿಕಾ ರೀತಿ ಭಿನ್ನ. ವಿದ್ಯಾರ್ಥಿಯ ಸುಪ್ತವಾದ ಆಸಕ್ತಿಯನ್ನು ಹೆಕ್ಕಿ ತೆಗೆಯುವಲ್ಲಿ ನಿಷ್ಣಾತ. ಮಕ್ಕಳ ಆಸಕ್ತಿಯ ಹರಹು ಎಷ್ಟಿದೆ ಎಂದು ಒಂದೆರಡು ವಾರದಲ್ಲಿ ತಿಳಿದುಬಿಡುತ್ತದೆ. ಅದಕ್ಕೆ ಹೊಂದಿಕೊಂಡು ಕಲಿಕಾ ವಿಧಾನಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಮಾಡಿಕೊಂಡು ಕಲಿಸಬೇಕಾಗುತ್ತದೆ. ಗುರುಕುಲದಲ್ಲಿ ಶಿಷ್ಯರ ಮುಂದೆ ನಾನೂ ಮಗುವಾಗಬೇಡ್ವಾ. ಗೋವಿಂದ ನಾಯಕರೊಮ್ಮೆ ಆಡಿದ ಮಾತು ಮರೆಯುವಂತಹುದಲ್ಲ.

 ಪುತ್ತೂರು ಬೊಳ್ವಾರಿನ ಶ್ರೀ ದುರ್ಗಾ ಪರಮೇಶ್ವರೀ (ಉಳ್ಳಾಲ್ತಿ) ಮಲರಾಯ ಸಪರಿವಾರ ದೇವಾಲಯದಲ್ಲಿ ತರಗತಿಗಳು ನಡೆಯುತ್ತವೆ. ತಿಂಗಳ ತಾಳಮದ್ದಳೆಗಳಲ್ಲಿ ಕಲಿಯುವ ಶಿಷ್ಯರಿಗೂ 'ಪ್ರಾಕ್ಟಿಕಲ್' ಅವಕಾಶ. ಎಳವೆಯಿಂದಲೇ 'ಸಭಾಕಂಪನ'ವನ್ನು ಚಿವುಟಿ ತೆಗೆಯುವ ವಿಧಾನ. ಶಿಷ್ಯಂದಿರ ಹೆತ್ತವರು ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಮಕ್ಕಳ ಗುರುವನ್ನೂ ಪ್ರೀತಿಸುತ್ತಾರೆ, ಗೌರವಿಸುತ್ತಾರೆ.  ಕಲಿಕೆಗೆ ಮಾತ್ರ ಗುರುವಲ್ಲ, ನಿಜ ಜೀವನದಲ್ಲೂ 'ಗುರು'ವಾಗಿ ಸ್ವೀಕರಿಸಿದ್ದಾರೆ.

ನಾನು ಕೃಷ್ಣಪ್ರಕಾಶ್ ಉಳಿತ್ತಾಯರ ಬೌದ್ಧಿಕ ಪ್ರೌಢಿಮೆಯನ್ನು ದೂರದಿಂದಲೇ ನೋಡುತ್ತಾ, ಅಭಿಮಾನ ಪಡುತ್ತಾ ಬಂದವನು. ಹಲವಾರು ಪಕ್ವ ಬರಹಗಳಿಂದ ಪಕ್ವರಾದವರು. ನಿರಂತರ ಓದುವಿಕೆ ಬದುಕಿನ ಭಾಗ. ತಾನು ಪ್ರೀತಿಸುವ ರಂಗದ 'ಅಕಾಡೆಮಿಕ್' ವಿಚಾರಗಳನ್ನು ಬರಹಗಳ ಮೂಲಕ ಹಂಚುವುದು ಸಣ್ಣ ಕೆಲಸವಲ್ಲ. ಹಿಮ್ಮೇಳ ಕಲಾವಿದನಾಗಿದ್ದುಕೊಂಡು, ರಂಗದ ಚಲನೆಗಳಿಗೆ ಕಣ್ಣಾಗುತ್ತಾರೆ.  ತಾಳಮದ್ದಳೆಯಲ್ಲಿ ಮಾತಿಗೆ ಕಿವಿಯಾಗುತ್ತಾರೆ. ಈ ಎಲ್ಲಾ 'ಹಿರಿದಾದ' ಬೌದ್ಧಿಕ ಪಕ್ವತೆಯು ಅವರನ್ನು ಗಟ್ಟಿಗೊಳಿಸಿದೆ. ಬದುಕಿನಲ್ಲಿ ಜತೆಜತೆಗೆ ಹೆಜ್ಜೆಯೂರಿದ ಸ್ನೇಹಿತನೋರ್ವ 'ಬೆಳೆದ ಪರಿ' ಅಭಿಮಾನಪಡಬೇಕಾದ ಸಂಗತಿ. ಅಭಿಮಾನ ಪಟ್ಟಿದ್ದೇನೆ.

ಭಾಗವತ ಪಾಲೆಚ್ಚಾರು ಗೋವಿಂದ ನಾಯಕರ ಬದುಕಿನ ಕಲಾಯಾನವು ಅಕ್ಷರಗಳಾಗಿ ನಿಮ್ಮ ಮುಂದಿದೆ. ಕೃಷ್ಣಪ್ರಕಾಶ್ ಉಳಿತ್ತಾಯರ ಶ್ರಮ ಸಾರ್ಥಕ.

ತಾರಾಮೌಲ್ಯ ಎನ್ನುವುದು ಸ್ಥಾಪಿತ ಮಂದಿಯ ಸೊತ್ತಲ್ಲ. ಈ ಪುಸ್ತಕದ ಮೂಲಕ  'ತಾರಾಮೌಲ್ಯ'ಕ್ಕೆ ಮರು ಜೀವ ಬಂತು!

 

Saturday, May 31, 2025

2025 ಜೂನ್ 1 ರಂದು ಯಕ್ಷಗುರು ಪಾಲೆಚ್ಚಾರು ಗೋವಿಂದ ನಾಯಕರಿಗೆ 'ಈಶಾವಾಸ್ಯ ಪ್ರಶಸ್ತಿ' ಹಾಗೂ 'ಗೋವಿಂದ ಗಾಥೆ' ಕೃತಿ ಅನಾವರಣ

 


   

ಯಕ್ಷಗುರು, ಭಾಗವತ ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ 'ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ' ಪ್ರದಾನ. ದಿನಾಂಕ 1-6-2025, ರವಿವಾರದಂದು ಪುತ್ತೂರು ಬೊಳ್ವಾರಿನ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ಮಲರಾಯ ಸಪರಿವಾರ ಕ್ಷೇತ್ರದ ವಠಾರದಲ್ಲಿ ಸಂಜೆ ಗಂಟೆ 5-30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

     ಈ ಸಂದರ್ಭದಲ್ಲಿ ಶ್ರೀ ಕೃಷ್ಣಪ್ರಕಾಶ್ ಉಳಿತ್ತಾಯರು ಬರೆದ  ಪಾಲೆಚ್ಚಾರು ಗೋವಿಂದ ನಾಯಕ್ ಅವರ ಕಲಾಯಾನ ಕೃತಿ 'ಗೋವಿಂದ ಗಾಥೆ' ಅನಾವರಣಗೊಳ್ಳಲಿದೆ. 'ಈಶಾವಾಸ್ಯ ಪೆರ್ಮಂಕಿ' ಮತ್ತು ಶ್ರೀ ದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನ (ರಿ) ಬೊಳ್ವಾರು - ಇವರ ಜಂಟಿ ಆಯೋಜನೆಯಲ್ಲಿ ಕಾರ್ಯಕ್ರಮ ಸಂಪನ್ನವಾಗಲಿದೆ.

     ಶ್ರೀ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭವನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಶ್ರೀ ಕ್ಷೇತ್ರದ ಪವಿತ್ರಪಾಣಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ ವಹಿಸಲಿದ್ದಾರೆ. 'ಗೋವಿಂದ ಗಾಥೆ' ಪುಸ್ತಕದ ಕುರಿತು ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ಶ್ರೀ ನಾ. ಕಾರಂತ ಪೆರಾಜೆ ಮಾತನಾಡಲಿದ್ದಾರೆ.

     ಮುಖ್ಯ ಅತಿಥಿಗಳಾಗಿ ಮಂಗಳೂರಿನ ಅಗರಿ ಎಂಟರ್ಪ್ರೈಸಸ್ ಇದರ  ಶ್ರೀ ಅಗರಿ ರಾಘವೇಂದ್ರ ರಾವ್, ಸಾಹಿತಿ ಶ್ರೀ ಲಕ್ಷ್ಮೀ ಮಚ್ಚಿನ, ವಿಶ್ರಾಂತ ಪ್ರಾಂಶುಪಾಲ ಶ್ರೀ ಮಹಾಲಿಂಗೇಶ್ವರ ಭಟ್ ಹಾಗೂ ಹಿರಿಯ ಮದ್ಲೆಗಾರ್ ಶ್ರೀ ವೆಂಕಟ್ರಮಣ ಉಳಿತ್ತಾಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರಂಭದ ಪೂರ್ವದಲ್ಲಿ 'ಜಾಂಬವತಿ ಕಲ್ಯಾಣ' ಪ್ರಸಂಗದ ತಾಳಮದ್ದಳೆ ಜರುಗಲಿದೆ.


Tuesday, February 4, 2025

ಹಿರಿಯ ಅರ್ಥಧಾರಿ ಕೆ.ವಿ.ಗಣಪಯ್ಯ


 (ಹದಿನಾರು ವರುಷದ ಹಿಂದೆ ಕೆ.ವಿ.ಗಣಪಯ್ಯರಿಗೆ ʼಬೊಳ್ಳಿಂಬಳ ಪ್ರಶಸ್ತಿʼ ಪ್ರಾಪ್ತವಾದಾಗ ಅವರನ್ನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಹೊಸೆದ ಲೇಖನವಿದು. ಇಂದು ಗಣಪಯ್ಯನವರು ದೈವಾಧೀನರಾದರು. ಅವರ ನೆನಪಿನಲ್ಲಿ ಈ ಲೇಖನದ ಮರುಓದು.)

ಕಲ್ಮಡ್ಕದಲ್ಲೊಂದು 'ದೊಡ್ಡ ಸೆಟ್ಟಿನ' ತಾಳಮದ್ದಳೆ. ಪ್ರಸಂಗ 'ಮಾಗಧ ವಧೆ'. ಕೀರ್ತಿಶೇಷ ಶೇಣಿಯವರ 'ಮಾಗಧ'. ವಿದ್ವಾನ್ ಪೆರ್ಲ ಪಂಡಿತರ 'ಕೃಷ್ಣ'. ಗಣಪಯ್ಯರ 'ಭೀಮ'. ಶೇಣಿಯವರ ʼಮಾಗಧʼ ಎಂದರೆ ಕೇಳಬೇಕೇ? ವಾದ-ಪ್ರತಿವಾದ, ಹೂಂಕಾರ-ಝೇಂಕಾರ! ಕೊನೆಗೆ ಮಾಗಧ-ಭೀಮರ ಮುಖಾಮುಖಿ. ಗಣಪಯ್ಯರು 'ದುಷ್ಟ..ನಿಲ್ಲಿಸು' ಎಂದಷ್ಟೇ ಹೇಳಿದ್ದು, ಆ ಸ್ವರ ಸ್ಥಾಯಿಯ ಗುಡುಗಿಗೆ ಇಡೀ ಸಭೆಯೇ ಸ್ತಬ್ಧ! ಗಪ್-ಚಿಪ್! ವಾದ ಬಿಸಿಬಿಸಿಯಾಗಿ ಮುಂದುವರಿದು, ಮಾಗಧನಿಗೆ ನಿಂದೆಯ ಸುರಿಮಳೆ. 

ತಾಳಮದ್ದಳೆ ಮುಗಿದು ಗಣಪಯ್ಯನವರಲ್ಲಿ ಅವರಾಪ್ತರು ಹೇಳಿದರಂತೆ - 'ಶೇಣಿಯವರ ಎದುರು ಹಾಗೆ ಮಾತನಾಡೋದಾ'? ಅದಕ್ಕೆ ಗಣಪಯ್ಯರ ಉತ್ತರ - ತಾಳಮದ್ದಳೆಯಲ್ಲಿ 'ಮಾಗಧ' ಕಾಣದಿದ್ದರೆ 'ಭೀಮ'ನನ್ನು ಕಾಣಿಸುವುದು ಹೇಗೆ? ನಾನು ಮಾಗಧನಲ್ಲಿ 'ಶೇಣಿ'ಯನ್ನು ಕಂಡರೆ, ತಾಳಮದ್ದಳೆ ಪೂರ್ತಿ ಶೇಣಿಯೆ ಕಾಡುತ್ತಾರೆ! ಆಗ ನನ್ನೊಳಗಿನ 'ಭೀಮ' ಮೂಡಿ ಬರುವುದು ಹೇಗೆ? 

ಬಹುಶಃ ಈ ಘಟನೆ ಗಣಪಯ್ಯನವರ ಅರ್ಥಗಾರಿಕೆಯನ್ನು ಅರಿಯಲು ಸಾಕು. ವ್ಯಕ್ತಿಗಿಂತ ಪಾತ್ರ ಮುಖ್ಯ ಎಂದು ನಂಬಿದವರು. ಆಗಾಗಿಯೇ ಇರಬೇಕು, ಅವರಲ್ಲಿ 'ವ್ಯಕ್ತಿ ಆರಾಧನೆ' ಇರಲಿಲ್ಲ! 

ಗಣಪಯ್ಯನವರದು ದಶಮುಖ ವ್ಯಕ್ತಿತ್ವ. ಯಕ್ಷಗಾನ, ಶಿಕ್ಷಣ, ಸಮಾಜ ಸೇವೆ, ಧಾರ್ಮಿಕ, ಯುವ ಸಂಘಟನೆ, ಗ್ರಾಮೀಣಾಭಿವೃದ್ಧಿ, ಸಾಹಿತ್ಯ, ನಾಟಕ, ಪುರಾಣ ಪ್ರವಚನ, ಕಲಾವಿದರಿಗೆ ಪ್ರೋತ್ಸಾಹ, ಉಪನ್ಯಾಸ. 

ಗಣಪಯ್ಯನವರು ಅಧ್ಯಾಪಕರಾಗಿದ್ದು ಈಗ ನಿವೃತ್ತರು. ಬಂಗಾಡಿ-ಮಿತ್ತಬಾಗಿಲು ಶಾಲೆಯ ಮಾಸ್ತರಿಕೆಯೊಂದಿಗೆ ಸೇವಾರಂಭ. ಕಾಣಿಯೂರು ಶಾಲೆಯಲ್ಲಿ ನಿವೃತ್ತ. ಕೊಳಂಬೆ ಪುಟ್ಟಣ್ಣ ಗೌಡರು ಗುರುಸಮಾನ. ಶಾಲಾ ಕಲಿಕೆಯಲ್ಲಿದ್ದಾಗಲೇ ಗಣಪಯ್ಯರಿಗೆ ಯಕ್ಷಗಾನ ಅಂಟಿತ್ತು. ಮುಂದದು ಬದುಕಿನೊಂದಿಗೆ ನಂಟಾಯಿತು. ಆ ನಂಟು 'ಹವ್ಯಾಸ'ವಾಗಿಯೇ ಉಳಿಯಿತು! 

ಗಣಪಯ್ಯರಿಗೆ ಯಕ್ಷಗಾನ ಅರ್ಥಗಾರಿಕೆಯಲ್ಲಿ ಸಿದ್ಧಿಯಿದೆ. ಪ್ರಸಿದ್ಧಿಯಿದೆ. ಆದರೆ 'ಸುಪ್ರಸಿದ್ಧ' ಎಂಬ ಮನೆಗೆ ಪ್ರವೇಶ ಮಾಡುತ್ತಿರುವಾಗಲೇ, ಯಾಕೋ ಆ ಮನೆಯ ಬಾಗಿಲು ಸುಲಲಿತವಾಗಿ ಅವರಿಗೆ ತೆರೆಯಲಿಲ್ಲ! ಬಾಗಿಲು ತೆರೆದುಕೊಳ್ಳದಿದ್ದರೆ, ಪ್ರವೇಶ ಮಾಡುವುದಾದರೂ ಹೇಗೆ? 'ಈ ಮನೆಯ ಸಹವಾಸವೇ ಬೇಡ' ಎನ್ನುತ್ತಾ ದೂರವುಳಿದರು! 

'ಸುಪ್ರಸಿದ್ಧ'ರಾಗದಿದ್ದರೆ ಏನಾಯಿತು? 'ಪ್ರಸಿದ್ಧಿ' ಇದೆಯಲ್ಲಾ. ಅದು ಅರಸಿಕೊಂಡು ಬಂತು. ನಾಡಿನುದ್ದಗಲಕ್ಕೂ ಅವಕಾಶದ ಬಾಗಿಲು ತೆರೆಯಿತು. ತನ್ನ ಅದ್ಭುತ ಪಾಂಡಿತ್ಯದಿಂದ ಪ್ರಾಕಾಂಡರೂ ತಲೆದೂಗುವಂತೆ ಮಾಡಿದರು. 'ಇಂದು ಗಣಪಯ್ಯರ ಅರ್ಥ' ಎನ್ನುವಾಗಲೆ ಸಹ ಅರ್ಥಧಾರಿಗಳು ಕರವಸ್ತ್ರದಿಂದ ಮುಖ ಒರೆಸಿಕೊಳ್ಳವಷ್ಟು ಸ್ವ-ವರ್ಚಸ್ಸನ್ನು ರೂಪಿಸಿಕೊಂಡರು. . ಜತೆಜತೆಗೆ ಸುಪ್ರಸಿದ್ಧರ ಕೂಟಗಳಲ್ಲಿ ಗಣಪಯ್ಯರೆಡೆಗೆ ಸಭಾಸದರ ವಿಶೇಷ ನೋಟ ಹರಿದುದಂತೂ ನಿಜ! 

'ಮತ್ಸರ ಬಿಟ್ರೆ ಸಿದ್ಧಿ ಬೆಳಕಿಗೆ ಬರುತ್ತದೆ', 'ಅರ್ಥಧಾರಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಬೇಕು. ಆಗ ಸ್ವಯಂಸ್ಪೂರ್ತಿಯಿಂದ ವಿಚಾರ ಹೊರಹೊಮ್ಮುತ್ತದೆ' - ಮಾತಿನ ಮಧ್ಯೆ ಗಣಪಯ್ಯನವರು ಹೇಳಿದ ಮಾತು. ಅವರ ಅರ್ಥಗಾರಿಕೆಯಲ್ಲಿ ಈ ಹೊಳಹನ್ನು ಕಾಣಬಹುದು. 

ಬಹುತೇಕ ಎಲ್ಲಾ ವಿಧದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೃಷ್ಣ ಸಂಧಾನ ಪ್ರಸಂಗದ 'ಕೌರವ'ನ ಅರ್ಥಗಾರಿಕೆಯ ಮೊನಚು, 'ಕೃಷ್ಣ'ನ ಜಾಣ್ಮೆ; ಅಂತೆಯೇ 'ದಶರಥ', 'ಮಾಗಧ', 'ವಾಲಿ'ಪಾತ್ರಗಳಲ್ಲಿ ಗಣಪಯ್ಯರ ಛಾಪು ಪ್ರತ್ಯೇಕ. ಯಾರದ್ದೇ ನಕಲಲ್ಲ. ಸ್ವ-ನಿರ್ಮಿತ ಶಿಲ್ಪಗಳು. ಪುರಾಣದ ಚೌಕಟ್ಟಿನಲ್ಲಿ ಪ್ರಸಂಗದ ಆಶಯವನ್ನು ಬಿಂಬಿಸುವ ರೀತಿ ಅನನ್ಯ. ಒಂದು ಪಾತ್ರದಲ್ಲಿ ಎಷ್ಟು ಪ್ರಶ್ನೆಗಳು ಮೂಡುತ್ತದೋ, ಅಷ್ಟು ಪ್ರಶ್ನೆಗಳನ್ನು ಕೇಳುವುದರಲ್ಲಿ ರಾಜಿಯಿಲ್ಲ. 

ಮೊದಮೊದಲು ಇವರು ಯಾವುದೇ ಪಾತ್ರವನ್ನು ನಿರ್ವಹಿಸಿದರೂ, 'ಸ್ವಗತ' ದೀರ್ಘವಾಗಿ ಲಂಬಿಸುತ್ತಿತ್ತಂತೆ. 'ಓ..ಅವರದಾ.ಒಂದು ಗಂಟೆ ಸ್ವಗತ ಗ್ಯಾರಂಟಿ' ಜತೆ ಅರ್ಥಧಾರಿಗಳು ವಿನೋದಕ್ಕೆ ಹೇಳುತ್ತಿದ್ದರಂತೆ. ದೀರ್ಘವಾದ ಸ್ವಗತ ಹೇಗೆ ಕಡಿಮೆಯಾಯಿತು? ಅವರ ಮಾತಲ್ಲೇ ಕೇಳೋಣ – ಒಮ್ಮೆ ಭೀಷ್ಮಾರ್ಜುನ ಪ್ರಸಂಗ. ಸ್ಥಳ ನೆನಪಿಲ್ಲ. ಸಂಘಟಕರು 'ಇಂದಿನ ಕೂಟಕ್ಕೆ ಟೇಪ್ ಉಂಟು' ಎಂದರಂತೆ. ಆಗ ಟೇಪ್ ಅಂದರೆ ಅದು 'ಬಹುದೊಡ್ಡ' ಕೂಟ ಅಂತ ಲೆಕ್ಕ. ನನ್ನ ಪಾತ್ರ ಭೀಷ್ಮ. ತಾಳಮದ್ದಳೆ ಮುಂದುವರಿಯಿತು. ನನ್ನ ಸ್ವಗತ ಮುಗಿಯುತ್ತಿದ್ದಂತೆ ಸಂಘಟಕರು ಕಿವಿಯಲ್ಲಿ ಹೇಳಿದರು - ಒಂದು ಗಂಟೆಯ ಕ್ಯಾಸೆಟ್ ಮುಗಿಯಿತು! ಈಗ ಎರಡನೇ ಕ್ಯಾಸೆಟ್ ಹಾಕಬೇಕಷ್ಟೇ! ತಾಳಮದ್ದಳೆ ಮುಗಿದು,  ನನ್ನ ಅರ್ಥವನ್ನು ಟೇಪ್ನಲ್ಲಿ ಕೇಳಿದೆ. ನನಗೆ ಅಷ್ಟು ದೀರ್ಘವಾದ ಅರ್ಥಗಾರಿಕೆ ಎಷ್ಟು ಕಿರಿಕಿರಿಯಾಯಿತೆಂದರೆ, 'ಇನ್ನು ಮುಂದೆ ದೀರ್ಘವಾದ ಸ್ವಗತ ಹೇಳುವುದಿಲ್ಲ' ಎಂದು ಶಪಥ ಮಾಡಿದೆ. ಹೀಗೆ ಅರ್ಥಗಾರಿಕೆಯಲ್ಲಿ ಸ್ವ-ನಿಯಂತ್ರಣ. 

ಯಾವುದೇ ಶ್ರುತಿಗೆ ಹೊಂದಾಣಿಕೆಯಾಗಬಲ್ಲ ಅದ್ಭುತ ಸ್ವರಸಂಪತ್ತು. ಎದುರಾಳಿಯ ಪ್ರಶ್ನೆಗೆ 'ರಪ್' ಅಂತ ಬರುವ ಪ್ರತ್ಯುತ್ತರ. ಎದುರಾಳಿಯ ಅರ್ಥಗಾರಿಕೆಯ ನಡೆ ಹೇಗುಂಟೋ, ಅದೇ ದಾರಿಯಲ್ಲಿ ಸಾಗುವ ಪರಿ. ಹರಿಹಾಯುವ ಸ್ವಭಾವದ ಅರ್ಥಗಾರಿಕೆಯಲ್ಲ. ಆದರೆ ಎಲ್ಲಾದರೂ ತನ್ನ ಮೇಲೆ 'ಅ್ಯಟಾಕ್ ಮಾಡ್ತಾನೆ' ಎಂದು ಗೊತ್ತಾದರೆ ಸಾಕು. ಮತ್ತಿನ 'ಗಣಪಯ್ಯ'ರನ್ನು ನೋಡಬೇಕು. ಆಗ ಇದಿರಾಳಿಗೆ ನೀಡುವ ಚಿಕಿತ್ಸೆಗೆ ಮತ್ತೆಂದೂ ಆ ಕಲಾವಿದ ಗಣಪಯ್ಯರ ಹೆಸರು ಹೇಳಿದಾಗಲೇ ಬೆವರಬೇಕು' ಸ್ನೇಹಿತ ಗಂಗಾಧರ ಬೆಳ್ಳಾರೆ ನೆನಪಿಸಿಕೊಂಡಿದ್ದರು.   

ಇವರ ಅರ್ಥಗಾರಿಕೆಯಲ್ಲಿ ಪ್ರತ್ಯೇಕವಾದ 'ಶಾಸ್ತ್ರೀಯ ಮಟ್ಟು' ಗಮನಿಸಬಹುದು. ಕಾವ್ಯದ ಹೊಸ ಹೊಳಹುಗಳನ್ನು ತೆರೆದುಕೊಳ್ಳುವ ಪರಿ ಅನ್ಯಾದೃಶ. ಇವರದು ಸ್ವರ ಪ್ರಧಾನವಾದ ಅರ್ಥ. ಉದಾ: ಕೃಷ್ಣನ ಮೃದುತ್ವ, ಕೌರವ ದೌಷ್ಟ್ರ್ಯ..ಇತ್ಯಾದಿ. 

ಇವರು ಎಂದಿಗೂ ಸಂಘಟಕರಿಗೆ ಹೊರೆಯಲ್ಲ. 'ಇಂತಹುದೇ ಅರ್ಥ ಬೇಕು' ಎಂದು ಪಟ್ಟು ಹಿಡಿವವರಲ್ಲ. ತನಗೆ ಪ್ರತ್ಯೇಕವಾದ ವ್ಯವಸ್ಥೆ ಬೇಕು ಎಂದು ಸಂಘಟಕರ 'ತಲೆ ತಿಂದದ್ದಿಲ್ಲ'! ಒಪ್ಪಿದ ತಾಳಮದ್ದಳೆಗೆ ನಿಖರವಾಗಿ ಭಾಗವಹಿಸುತ್ತಿದ್ದರು. ಇದ್ದ ವ್ಯವಸ್ಥೆಯಲ್ಲಿ, ಪಾಲಿಗೆ ಬಂದ ಪಾತ್ರವನ್ನು 'ಅದ್ಭುತ'ವಾಗಿ ಬಿಂಬಿಸುವ ಗಣಪಯ್ಯರ ಅರ್ಥಕ್ಕೆ ಸಾಟಿಯಿಲ್ಲ. ಅವರೇ ಸಾಟಿ. 

'ರಾಗ ಬರುವಾಗ ತಂತಿ ಕಡಿಯಿತು. ಬೇಡಿಕೆ ಬರುವಾಗ ಮನೆಯ ತಾಪತ್ರಯ' - ತಾಳಮದ್ದಳೆಯ ಕ್ಷೇತ್ರದಿಂದ ತಾನು ದೂರವಾದ ಕಾರಣವನ್ನು ಹೇಳುತ್ತಾರೆ. ಈಗಂತೂ ಪೂರ್ತಿ ವಿಶ್ರಾಂತ. 'ಹಳೆಯ ನೆನಪುಗಳು ಸಿಹಿ' ಎನ್ನುತ್ತಾ ಬುತ್ತಿ ಬಿಚ್ಚಿದರೆ ಸಾಕು - ಅದರಲ್ಲಿ ಸಿಗುವ ಅನುಭವ ಇದೆಯಲ್ಲಾ, ಅದು ದಾಖಲಾಗಬೇಕಾದ ಅಂಶಗಳು. ಹಿರಿಯ, ವಿದ್ವಾಂಸ ಕೆ.ವಿಗಣಪಯ್ಯರ ಯಕ್ಷಗಾನ ಕ್ಷೇತ್ರದ ಅವರ ಸಾಧನೆಗೆ 'ಬೊಳ್ಳಿಂಬಳ ಪ್ರಶಸ್ತಿ' ಅರಸಿ ಬಂದಿದೆ.

          ಗಣಪಯ್ಯನವರು ಇಂದು (4-2-2025) ದೈವಾಧೀನರಾದರು. ಅವರಿಗಿದು ಅಕ್ಷರ ನಮನ.