Tuesday, February 4, 2025

ಹಿರಿಯ ಅರ್ಥಧಾರಿ ಕೆ.ವಿ.ಗಣಪಯ್ಯ


 (ಹದಿನಾರು ವರುಷದ ಹಿಂದೆ ಕೆ.ವಿ.ಗಣಪಯ್ಯರಿಗೆ ʼಬೊಳ್ಳಿಂಬಳ ಪ್ರಶಸ್ತಿʼ ಪ್ರಾಪ್ತವಾದಾಗ ಅವರನ್ನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಹೊಸೆದ ಲೇಖನವಿದು. ಇಂದು ಗಣಪಯ್ಯನವರು ದೈವಾಧೀನರಾದರು. ಅವರ ನೆನಪಿನಲ್ಲಿ ಈ ಲೇಖನದ ಮರುಓದು.)

ಕಲ್ಮಡ್ಕದಲ್ಲೊಂದು 'ದೊಡ್ಡ ಸೆಟ್ಟಿನ' ತಾಳಮದ್ದಳೆ. ಪ್ರಸಂಗ 'ಮಾಗಧ ವಧೆ'. ಕೀರ್ತಿಶೇಷ ಶೇಣಿಯವರ 'ಮಾಗಧ'. ವಿದ್ವಾನ್ ಪೆರ್ಲ ಪಂಡಿತರ 'ಕೃಷ್ಣ'. ಗಣಪಯ್ಯರ 'ಭೀಮ'. ಶೇಣಿಯವರ ʼಮಾಗಧʼ ಎಂದರೆ ಕೇಳಬೇಕೇ? ವಾದ-ಪ್ರತಿವಾದ, ಹೂಂಕಾರ-ಝೇಂಕಾರ! ಕೊನೆಗೆ ಮಾಗಧ-ಭೀಮರ ಮುಖಾಮುಖಿ. ಗಣಪಯ್ಯರು 'ದುಷ್ಟ..ನಿಲ್ಲಿಸು' ಎಂದಷ್ಟೇ ಹೇಳಿದ್ದು, ಆ ಸ್ವರ ಸ್ಥಾಯಿಯ ಗುಡುಗಿಗೆ ಇಡೀ ಸಭೆಯೇ ಸ್ತಬ್ಧ! ಗಪ್-ಚಿಪ್! ವಾದ ಬಿಸಿಬಿಸಿಯಾಗಿ ಮುಂದುವರಿದು, ಮಾಗಧನಿಗೆ ನಿಂದೆಯ ಸುರಿಮಳೆ. 

ತಾಳಮದ್ದಳೆ ಮುಗಿದು ಗಣಪಯ್ಯನವರಲ್ಲಿ ಅವರಾಪ್ತರು ಹೇಳಿದರಂತೆ - 'ಶೇಣಿಯವರ ಎದುರು ಹಾಗೆ ಮಾತನಾಡೋದಾ'? ಅದಕ್ಕೆ ಗಣಪಯ್ಯರ ಉತ್ತರ - ತಾಳಮದ್ದಳೆಯಲ್ಲಿ 'ಮಾಗಧ' ಕಾಣದಿದ್ದರೆ 'ಭೀಮ'ನನ್ನು ಕಾಣಿಸುವುದು ಹೇಗೆ? ನಾನು ಮಾಗಧನಲ್ಲಿ 'ಶೇಣಿ'ಯನ್ನು ಕಂಡರೆ, ತಾಳಮದ್ದಳೆ ಪೂರ್ತಿ ಶೇಣಿಯೆ ಕಾಡುತ್ತಾರೆ! ಆಗ ನನ್ನೊಳಗಿನ 'ಭೀಮ' ಮೂಡಿ ಬರುವುದು ಹೇಗೆ? 

ಬಹುಶಃ ಈ ಘಟನೆ ಗಣಪಯ್ಯನವರ ಅರ್ಥಗಾರಿಕೆಯನ್ನು ಅರಿಯಲು ಸಾಕು. ವ್ಯಕ್ತಿಗಿಂತ ಪಾತ್ರ ಮುಖ್ಯ ಎಂದು ನಂಬಿದವರು. ಆಗಾಗಿಯೇ ಇರಬೇಕು, ಅವರಲ್ಲಿ 'ವ್ಯಕ್ತಿ ಆರಾಧನೆ' ಇರಲಿಲ್ಲ! 

ಗಣಪಯ್ಯನವರದು ದಶಮುಖ ವ್ಯಕ್ತಿತ್ವ. ಯಕ್ಷಗಾನ, ಶಿಕ್ಷಣ, ಸಮಾಜ ಸೇವೆ, ಧಾರ್ಮಿಕ, ಯುವ ಸಂಘಟನೆ, ಗ್ರಾಮೀಣಾಭಿವೃದ್ಧಿ, ಸಾಹಿತ್ಯ, ನಾಟಕ, ಪುರಾಣ ಪ್ರವಚನ, ಕಲಾವಿದರಿಗೆ ಪ್ರೋತ್ಸಾಹ, ಉಪನ್ಯಾಸ. 

ಗಣಪಯ್ಯನವರು ಅಧ್ಯಾಪಕರಾಗಿದ್ದು ಈಗ ನಿವೃತ್ತರು. ಬಂಗಾಡಿ-ಮಿತ್ತಬಾಗಿಲು ಶಾಲೆಯ ಮಾಸ್ತರಿಕೆಯೊಂದಿಗೆ ಸೇವಾರಂಭ. ಕಾಣಿಯೂರು ಶಾಲೆಯಲ್ಲಿ ನಿವೃತ್ತ. ಕೊಳಂಬೆ ಪುಟ್ಟಣ್ಣ ಗೌಡರು ಗುರುಸಮಾನ. ಶಾಲಾ ಕಲಿಕೆಯಲ್ಲಿದ್ದಾಗಲೇ ಗಣಪಯ್ಯರಿಗೆ ಯಕ್ಷಗಾನ ಅಂಟಿತ್ತು. ಮುಂದದು ಬದುಕಿನೊಂದಿಗೆ ನಂಟಾಯಿತು. ಆ ನಂಟು 'ಹವ್ಯಾಸ'ವಾಗಿಯೇ ಉಳಿಯಿತು! 

ಗಣಪಯ್ಯರಿಗೆ ಯಕ್ಷಗಾನ ಅರ್ಥಗಾರಿಕೆಯಲ್ಲಿ ಸಿದ್ಧಿಯಿದೆ. ಪ್ರಸಿದ್ಧಿಯಿದೆ. ಆದರೆ 'ಸುಪ್ರಸಿದ್ಧ' ಎಂಬ ಮನೆಗೆ ಪ್ರವೇಶ ಮಾಡುತ್ತಿರುವಾಗಲೇ, ಯಾಕೋ ಆ ಮನೆಯ ಬಾಗಿಲು ಸುಲಲಿತವಾಗಿ ಅವರಿಗೆ ತೆರೆಯಲಿಲ್ಲ! ಬಾಗಿಲು ತೆರೆದುಕೊಳ್ಳದಿದ್ದರೆ, ಪ್ರವೇಶ ಮಾಡುವುದಾದರೂ ಹೇಗೆ? 'ಈ ಮನೆಯ ಸಹವಾಸವೇ ಬೇಡ' ಎನ್ನುತ್ತಾ ದೂರವುಳಿದರು! 

'ಸುಪ್ರಸಿದ್ಧ'ರಾಗದಿದ್ದರೆ ಏನಾಯಿತು? 'ಪ್ರಸಿದ್ಧಿ' ಇದೆಯಲ್ಲಾ. ಅದು ಅರಸಿಕೊಂಡು ಬಂತು. ನಾಡಿನುದ್ದಗಲಕ್ಕೂ ಅವಕಾಶದ ಬಾಗಿಲು ತೆರೆಯಿತು. ತನ್ನ ಅದ್ಭುತ ಪಾಂಡಿತ್ಯದಿಂದ ಪ್ರಾಕಾಂಡರೂ ತಲೆದೂಗುವಂತೆ ಮಾಡಿದರು. 'ಇಂದು ಗಣಪಯ್ಯರ ಅರ್ಥ' ಎನ್ನುವಾಗಲೆ ಸಹ ಅರ್ಥಧಾರಿಗಳು ಕರವಸ್ತ್ರದಿಂದ ಮುಖ ಒರೆಸಿಕೊಳ್ಳವಷ್ಟು ಸ್ವ-ವರ್ಚಸ್ಸನ್ನು ರೂಪಿಸಿಕೊಂಡರು. . ಜತೆಜತೆಗೆ ಸುಪ್ರಸಿದ್ಧರ ಕೂಟಗಳಲ್ಲಿ ಗಣಪಯ್ಯರೆಡೆಗೆ ಸಭಾಸದರ ವಿಶೇಷ ನೋಟ ಹರಿದುದಂತೂ ನಿಜ! 

'ಮತ್ಸರ ಬಿಟ್ರೆ ಸಿದ್ಧಿ ಬೆಳಕಿಗೆ ಬರುತ್ತದೆ', 'ಅರ್ಥಧಾರಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಬೇಕು. ಆಗ ಸ್ವಯಂಸ್ಪೂರ್ತಿಯಿಂದ ವಿಚಾರ ಹೊರಹೊಮ್ಮುತ್ತದೆ' - ಮಾತಿನ ಮಧ್ಯೆ ಗಣಪಯ್ಯನವರು ಹೇಳಿದ ಮಾತು. ಅವರ ಅರ್ಥಗಾರಿಕೆಯಲ್ಲಿ ಈ ಹೊಳಹನ್ನು ಕಾಣಬಹುದು. 

ಬಹುತೇಕ ಎಲ್ಲಾ ವಿಧದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೃಷ್ಣ ಸಂಧಾನ ಪ್ರಸಂಗದ 'ಕೌರವ'ನ ಅರ್ಥಗಾರಿಕೆಯ ಮೊನಚು, 'ಕೃಷ್ಣ'ನ ಜಾಣ್ಮೆ; ಅಂತೆಯೇ 'ದಶರಥ', 'ಮಾಗಧ', 'ವಾಲಿ'ಪಾತ್ರಗಳಲ್ಲಿ ಗಣಪಯ್ಯರ ಛಾಪು ಪ್ರತ್ಯೇಕ. ಯಾರದ್ದೇ ನಕಲಲ್ಲ. ಸ್ವ-ನಿರ್ಮಿತ ಶಿಲ್ಪಗಳು. ಪುರಾಣದ ಚೌಕಟ್ಟಿನಲ್ಲಿ ಪ್ರಸಂಗದ ಆಶಯವನ್ನು ಬಿಂಬಿಸುವ ರೀತಿ ಅನನ್ಯ. ಒಂದು ಪಾತ್ರದಲ್ಲಿ ಎಷ್ಟು ಪ್ರಶ್ನೆಗಳು ಮೂಡುತ್ತದೋ, ಅಷ್ಟು ಪ್ರಶ್ನೆಗಳನ್ನು ಕೇಳುವುದರಲ್ಲಿ ರಾಜಿಯಿಲ್ಲ. 

ಮೊದಮೊದಲು ಇವರು ಯಾವುದೇ ಪಾತ್ರವನ್ನು ನಿರ್ವಹಿಸಿದರೂ, 'ಸ್ವಗತ' ದೀರ್ಘವಾಗಿ ಲಂಬಿಸುತ್ತಿತ್ತಂತೆ. 'ಓ..ಅವರದಾ.ಒಂದು ಗಂಟೆ ಸ್ವಗತ ಗ್ಯಾರಂಟಿ' ಜತೆ ಅರ್ಥಧಾರಿಗಳು ವಿನೋದಕ್ಕೆ ಹೇಳುತ್ತಿದ್ದರಂತೆ. ದೀರ್ಘವಾದ ಸ್ವಗತ ಹೇಗೆ ಕಡಿಮೆಯಾಯಿತು? ಅವರ ಮಾತಲ್ಲೇ ಕೇಳೋಣ – ಒಮ್ಮೆ ಭೀಷ್ಮಾರ್ಜುನ ಪ್ರಸಂಗ. ಸ್ಥಳ ನೆನಪಿಲ್ಲ. ಸಂಘಟಕರು 'ಇಂದಿನ ಕೂಟಕ್ಕೆ ಟೇಪ್ ಉಂಟು' ಎಂದರಂತೆ. ಆಗ ಟೇಪ್ ಅಂದರೆ ಅದು 'ಬಹುದೊಡ್ಡ' ಕೂಟ ಅಂತ ಲೆಕ್ಕ. ನನ್ನ ಪಾತ್ರ ಭೀಷ್ಮ. ತಾಳಮದ್ದಳೆ ಮುಂದುವರಿಯಿತು. ನನ್ನ ಸ್ವಗತ ಮುಗಿಯುತ್ತಿದ್ದಂತೆ ಸಂಘಟಕರು ಕಿವಿಯಲ್ಲಿ ಹೇಳಿದರು - ಒಂದು ಗಂಟೆಯ ಕ್ಯಾಸೆಟ್ ಮುಗಿಯಿತು! ಈಗ ಎರಡನೇ ಕ್ಯಾಸೆಟ್ ಹಾಕಬೇಕಷ್ಟೇ! ತಾಳಮದ್ದಳೆ ಮುಗಿದು,  ನನ್ನ ಅರ್ಥವನ್ನು ಟೇಪ್ನಲ್ಲಿ ಕೇಳಿದೆ. ನನಗೆ ಅಷ್ಟು ದೀರ್ಘವಾದ ಅರ್ಥಗಾರಿಕೆ ಎಷ್ಟು ಕಿರಿಕಿರಿಯಾಯಿತೆಂದರೆ, 'ಇನ್ನು ಮುಂದೆ ದೀರ್ಘವಾದ ಸ್ವಗತ ಹೇಳುವುದಿಲ್ಲ' ಎಂದು ಶಪಥ ಮಾಡಿದೆ. ಹೀಗೆ ಅರ್ಥಗಾರಿಕೆಯಲ್ಲಿ ಸ್ವ-ನಿಯಂತ್ರಣ. 

ಯಾವುದೇ ಶ್ರುತಿಗೆ ಹೊಂದಾಣಿಕೆಯಾಗಬಲ್ಲ ಅದ್ಭುತ ಸ್ವರಸಂಪತ್ತು. ಎದುರಾಳಿಯ ಪ್ರಶ್ನೆಗೆ 'ರಪ್' ಅಂತ ಬರುವ ಪ್ರತ್ಯುತ್ತರ. ಎದುರಾಳಿಯ ಅರ್ಥಗಾರಿಕೆಯ ನಡೆ ಹೇಗುಂಟೋ, ಅದೇ ದಾರಿಯಲ್ಲಿ ಸಾಗುವ ಪರಿ. ಹರಿಹಾಯುವ ಸ್ವಭಾವದ ಅರ್ಥಗಾರಿಕೆಯಲ್ಲ. ಆದರೆ ಎಲ್ಲಾದರೂ ತನ್ನ ಮೇಲೆ 'ಅ್ಯಟಾಕ್ ಮಾಡ್ತಾನೆ' ಎಂದು ಗೊತ್ತಾದರೆ ಸಾಕು. ಮತ್ತಿನ 'ಗಣಪಯ್ಯ'ರನ್ನು ನೋಡಬೇಕು. ಆಗ ಇದಿರಾಳಿಗೆ ನೀಡುವ ಚಿಕಿತ್ಸೆಗೆ ಮತ್ತೆಂದೂ ಆ ಕಲಾವಿದ ಗಣಪಯ್ಯರ ಹೆಸರು ಹೇಳಿದಾಗಲೇ ಬೆವರಬೇಕು' ಸ್ನೇಹಿತ ಗಂಗಾಧರ ಬೆಳ್ಳಾರೆ ನೆನಪಿಸಿಕೊಂಡಿದ್ದರು.   

ಇವರ ಅರ್ಥಗಾರಿಕೆಯಲ್ಲಿ ಪ್ರತ್ಯೇಕವಾದ 'ಶಾಸ್ತ್ರೀಯ ಮಟ್ಟು' ಗಮನಿಸಬಹುದು. ಕಾವ್ಯದ ಹೊಸ ಹೊಳಹುಗಳನ್ನು ತೆರೆದುಕೊಳ್ಳುವ ಪರಿ ಅನ್ಯಾದೃಶ. ಇವರದು ಸ್ವರ ಪ್ರಧಾನವಾದ ಅರ್ಥ. ಉದಾ: ಕೃಷ್ಣನ ಮೃದುತ್ವ, ಕೌರವ ದೌಷ್ಟ್ರ್ಯ..ಇತ್ಯಾದಿ. 

ಇವರು ಎಂದಿಗೂ ಸಂಘಟಕರಿಗೆ ಹೊರೆಯಲ್ಲ. 'ಇಂತಹುದೇ ಅರ್ಥ ಬೇಕು' ಎಂದು ಪಟ್ಟು ಹಿಡಿವವರಲ್ಲ. ತನಗೆ ಪ್ರತ್ಯೇಕವಾದ ವ್ಯವಸ್ಥೆ ಬೇಕು ಎಂದು ಸಂಘಟಕರ 'ತಲೆ ತಿಂದದ್ದಿಲ್ಲ'! ಒಪ್ಪಿದ ತಾಳಮದ್ದಳೆಗೆ ನಿಖರವಾಗಿ ಭಾಗವಹಿಸುತ್ತಿದ್ದರು. ಇದ್ದ ವ್ಯವಸ್ಥೆಯಲ್ಲಿ, ಪಾಲಿಗೆ ಬಂದ ಪಾತ್ರವನ್ನು 'ಅದ್ಭುತ'ವಾಗಿ ಬಿಂಬಿಸುವ ಗಣಪಯ್ಯರ ಅರ್ಥಕ್ಕೆ ಸಾಟಿಯಿಲ್ಲ. ಅವರೇ ಸಾಟಿ. 

'ರಾಗ ಬರುವಾಗ ತಂತಿ ಕಡಿಯಿತು. ಬೇಡಿಕೆ ಬರುವಾಗ ಮನೆಯ ತಾಪತ್ರಯ' - ತಾಳಮದ್ದಳೆಯ ಕ್ಷೇತ್ರದಿಂದ ತಾನು ದೂರವಾದ ಕಾರಣವನ್ನು ಹೇಳುತ್ತಾರೆ. ಈಗಂತೂ ಪೂರ್ತಿ ವಿಶ್ರಾಂತ. 'ಹಳೆಯ ನೆನಪುಗಳು ಸಿಹಿ' ಎನ್ನುತ್ತಾ ಬುತ್ತಿ ಬಿಚ್ಚಿದರೆ ಸಾಕು - ಅದರಲ್ಲಿ ಸಿಗುವ ಅನುಭವ ಇದೆಯಲ್ಲಾ, ಅದು ದಾಖಲಾಗಬೇಕಾದ ಅಂಶಗಳು. ಹಿರಿಯ, ವಿದ್ವಾಂಸ ಕೆ.ವಿಗಣಪಯ್ಯರ ಯಕ್ಷಗಾನ ಕ್ಷೇತ್ರದ ಅವರ ಸಾಧನೆಗೆ 'ಬೊಳ್ಳಿಂಬಳ ಪ್ರಶಸ್ತಿ' ಅರಸಿ ಬಂದಿದೆ.

          ಗಣಪಯ್ಯನವರು ಇಂದು (4-2-2025) ದೈವಾಧೀನರಾದರು. ಅವರಿಗಿದು ಅಕ್ಷರ ನಮನ.

 

 

Saturday, January 4, 2025

'ಸ್ಮೃತಿ ಕೃತಿಗಳು ಮುಂದಿನ ತಲೆಮಾರಿಗೆ ದೀವಿಗೆ' - ಕುಂಬಳೆ ಶ್ರೀಧರ ರಾವ್ ಸ್ಮೃತಿ ಕಾರ್ಯಕ್ರಮದಲ್ಲಿ ಪೂಜ್ಯ ಎಡನೀರು ಶ್ರೀಗಳು


“ಕುಂಬಳೆ ಶ್ರೀಧರ ರಾವ್ ಅವರು ನಿರ್ವಹಿಸುತ್ತಿದ್ದ ಪಾತ್ರಗಳೆಲ್ಲವೂ ಗೌರವದ ಮಿತಿಯೊಳಗೆ ಅಭಿವ್ಯಕ್ತಿಸಲ್ಪಡುತ್ತಿತ್ತು. ಸಜ್ಜನಿಕೆ, ವಿಧೇಯತೆ ಅವರ ವ್ಯಕ್ತಿತ್ವ. ಅವರ ಸ್ಮೃತಿಯೊಂದಿಗೆ ಅವರ ಬಗೆಗಿನ ನೆನಪು ಸಂಚಿಕೆಯು ಪ್ರಕಟವಾಗಿರುವುದು ಶ್ಲಾಘನೀಯ. ಇದು ಮುಂದಿನ ತಲೆಮಾರಿಗೆ ಹಿರಿಯರೊಬ್ಬರ ಜೀವಿತದ ಕಾಲಘಟ್ಟವನ್ನು, ಅವರ ಕೊಡುಗೆಯನ್ನು ಪರಿಚಯಿಸುವ ದೀವಿಗೆಯಾಗುತ್ತದೆ.” ಎಂದು ಎಡನೀರು ಶ್ರೀಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

ಅವರು ರವಿವಾರ ಕುಂಬಳೆಯ ಶ್ರೀ ಕಣಿಪುರ ಗೋಪಾಲಕೃಷ್ಣ ದೇವಳದ ಸಭಾಭವನದಲ್ಲಿ ಜರುಗಿದ ಕುಂಬಳೆ ಶ್ರೀಧರ ರಾವ್ (Kumble Shreedhar Rao) ಸ್ಮೃತಿ ಕಾರ್ಯಕ್ರಮದಲ್ಲಿ - 29-12-2024) ಆಶೀರ್ವಚನ ನೀಡುತ್ತಾ ಮಾತನಾಡಿದರು. ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಶ್ರೀಧರ ರಾಯರ ವ್ಯಕ್ತಿತ್ವವನ್ನು ಜ್ಞಾಪಿಸಿಕೊಂಡರು.

ಧರ್ಮಸ್ಥಳ ಎಸ್.ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಡಿ.ಹರ್ಷೇಂದ್ರ ಕುಮಾರ್ ಮಾತನಾಡುತ್ತಾ, “ಧರ್ಮಸ್ಥಳ ಮೇಳವೊಂದರಲ್ಲೇ ಐದು ದಶಕಗಳ ಕಾಲ ನಿಷ್ಠೆಯಿಂದ ದುಡಿದವರು ಶ್ರೀಧರ ರಾಯರು. ಕಲಾನಿಷ್ಠನಾಗಿ, ಮೇಳನಿಷ್ಠನಾಗಿ ಮೃದು ಸ್ವಭಾವಗಳಿಂದ ಎಲ್ಲರ ಒಡನಾಡಿಯಾಗಿದ್ದರು. ಪಾತ್ರಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಅವರು ಮೇಳಕ್ಕೊಂದು ಆಸ್ತಿಯಾಗಿದ್ದರು” ಎಂದರು.

ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರು ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿಯನ್ನು ಮಾಡಿದರು. “ಶ್ರೀಧರ ರಾಯರ ದಮಯಂತಿ, ಸುಭದ್ರೆ, ಚಿತ್ರಾಂಗದೆ, ಕಯಾದು.. ಮೊದಲಾದ ಪಾತ್ರಗಳು ತುಂಬಾ ಚೆನ್ನಾಗಿ ಹಾಗೂ ಅಚ್ಚುಕಟ್ಟಾಗಿ ಮೂಡಿಬರುತ್ತಿತ್ತು. ಇನ್ನೊಂದು ನೆನಪಿಸುವ ಪಾತ್ರ. 'ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ'ಯ 'ಅಮ್ಮು ಬಲ್ಲಾಳ್ತಿ'. ದೊಡ್ಡ ಮನೆತನದ ರಾಣಿಯಂತಹ ಸ್ಥಾನಮಾನ. ಜಿನಭಕ್ತಿ, ಸೌಮ್ಯತೆ, ಸರಳತೆ, ಆಶ್ರಯದಾತೃತ್ವ.. ಈ ಸನ್ನಿವೇಶವನ್ನು ಅಸ್ತಿತ್ವದ ಯೋಗ್ಯತೆಯಿಂದಲೇ ಮೆರೆಸಿದರು. ಆದು ಶಾಶ್ವತವಾದ ಕಲಾಕೃತಿ” ಎಂದರು.

ಈ ಸಂದರ್ಭದಲ್ಲಿ ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಸಂಪಾದಿತ ಶ್ರೀಧರ ರಾಯರ ಸ್ಮೃತಿ ಸಂಚಿಕೆ 'ಕಲಾ ಶ್ರೀಧರ' ಕೃತಿಯನ್ನು ಪೂಜ್ಯ ಎಡನೀರು ಶ್ರೀಗಳು ಅನಾವರಣಗೊಳಿಸಿದರು. ಕೃತಿ ಪ್ರಕಟಣೆಯ ಆಶಯ ಮತ್ತು ಅದರ ರಚನೆಯ ಹಿಂದಿನ ಅನುಭವಗಳನ್ನು ನಾ. ಕಾರಂತರು ವಿವರಿಸಿದರು. ವೇದಿಕೆಯಲ್ಲಿ ಸ್ಮೃತಿ ಕೃತಿ ಸಮಿತಿಯ ಅಧ್ಯಕ್ಷ ಶ್ರೀ ಭಗವಾನ್‌ ದಾಸ್‌ ಹಾಗೂ ಶ್ರೀಧರ ರಾಯರ ಪತ್ನಿ ಸುಲೋಚನ ಉಪಸ್ಥಿತರಿದ್ದರು.

ಆರಂಭದಲ್ಲಿ ಕುಂಬ್ಳೆ ಗೋಪಾಲ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಗಣೇಶ ಪ್ರಸಾದ್ ಕುಂಬ್ಳೆ ಹಾಗೂ ದೇವಿ ಪ್ರಸಾದ್ ಕುಂಬ್ಳೆಯವರು ಯತಿದ್ವಯರಿಗೆ ಫಲಕಾಣಿಕೆ, ಹಾರದೊಂದಿಗೆ ಸ್ವಾಗತಿಸಿದರು. ಸುಕುಮಾರ್ ಅನಂತಪುರ, ರಾಮಚಂದ್ರ ಬೆಂಗಳೂರು ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಕೃತಿ ಸಂಪಾದಕ ನಾ. ಕಾರಂತ ಪೆರಾಜೆ, ಮಾಣಿಲ ಮೇಳದ ಸಂಚಾಲಕ ಡಾ.ಸತೀಶ ಪುಣಿಂಚತ್ತಾಯರನ್ನು ಗೌರವಿಸಲಾಯಿತು. ಸಂಘಟಕ, ಅರ್ಥದಾರಿ ಶ್ರೀ ಉಜಿರೆ ಅಶೋಕ ಭಟ್ ನಿರ್ವಹಿಸಿದರು. ಶ್ರೀ ಭಗವಾನ ದಾಸ್‌ ವಂದಿಸಿದರು.

ಉದ್ಘಾಟನೆ : 'ಕಲಾ ಶ್ರೀಧರ' ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಣಿಪುರದ ಪ್ರಧಾನ ಅರ್ಚಕ ವೇ.ಮೂ.ಮಾಧವ ಅಡಿಗಳು ಉದ್ಘಾಟಿಸಿ ಶುಭ ಹಾರೈಸಿದರು. ಧರ್ಮಸ್ಥಳ ಮೇಳದ ಭಾಗವತ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು, ನ್ಯಾಯವಾದಿ ಕಲಾರತ್ನ ಶಂನಾ ಅಡಿಗ ಉಪಸ್ಥಿತರಿದ್ದರು. ನಾರಾಯಣ ರಾವ್ ಬೇರಿಕೆ, ಕೃಷ್ಣ ಮುಖಾರಿ, ರಾಮ ರಾವ್ ಬೇರಿಕೆ, ಪ್ರತಾಪ ಕುಂಬ್ಳೆ, ಅಶೋಕ್ ಕುಂಬ್ಳೆ, ಗೋಪಾಲಕೃಷ್ಣ ಸೂರಂಬೈಲು.. ಮೊದಲಾದವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಶ್ರೀ ಗುರುಮೂರ್ತಿ ನಾಯ್ಕಾಪು ನಿರ್ವಹಿಸಿ, ವಂದಿಸಿದರು.

ಕುಂಬಳೆ ಶ್ರೀಧರ ಪಾತ್ರಗಳನ್ನು ನೆನಪಿಸುವ ಎರಡು ಸನ್ನಿವೇಶವನ್ನು ತಾಳಮದ್ದಳೆ ರೂಪದಲ್ಲಿ ಪ್ರಸ್ತುತ ಪಡಿಸಲಾಯಿತು. ಅಪರಾಹ್ನ 'ಕೃಷ್ಣ ಸಂಧಾನ' ತಾಳಮದ್ದಳೆ ನಡೆಯಿತು. ಕಲಾವಿದರಾಗಿ - ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ (ಭಾಗವತರು), ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್, ರಾಮಮೂರ್ತಿ ಕುದ್ರೆಕೂಡ್ಲು, ಲವಕುಮಾರ್ ಐಲ (ಮದ್ದಳೆ - ಚೆಂಡೆ ವಾದನ ಕಲಾವಿದರು), ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಶಂಭು ಶರ್ಮ, ಗೋಪಾಲ ನಾಯಕ್ ಸೂರಂಬೈಲು, ಎಂ.ಕೆ.ರಮೇಶ ಆಚಾರ್ಯ, ವಸಂತ ಗೌಡ ಕಾಯರ್ತಡ್ಕ, ದಿವಾಕರ ಆಚಾರ್ಯ ಗೇರುಕಟ್ಟೆ, ಅಶೋಕ ಕುಂಬ್ಳೆ (ಅರ್ಥದಾರಿಗಳು) ಭಾಗವಹಿಸಿದ್ದರು.

ಕೊನೆಗೆ ಶ್ರೀ ಮಹಾಲಕ್ಷ್ಮೀ ಕೃಪಾಪೋಶಿತ ಯಕ್ಷಗಾನ ಮಂಡಳಿ, ಶ್ರೀಧಾಮ-ಮಾಣಿಲ ಇವರಿಂದ 'ಕಂಸವಧೆ' ಬಯಲಾಟ ನಡೆಯಿತು. ಒಟ್ಟೂ ಕಾರ್ಯಕ್ರಮಕ್ಕೆ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ ನಾರಾಯಣಮಂಗಲ, ಶ್ರೀ ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ ಶೇಡಿಕಾವು, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಹಾಗೂ ಕುಂಬಳೆ ಶ್ರೀಧರ ರಾವ್ ಅಭಿಮಾನಿಗಳು ಹೆಗಲೆಣೆ ನೀಡಿದ್ದರು.

Wednesday, January 1, 2025

ಭಾಗವತ ಪುತ್ತಿಗೆ ರಘುರಾಮ ಹೊಳ್ಳರಿಗೆ - ಆತ್ಮಾಲಯ ಅಕಾಡೆಮಿ ಪ್ರಶಸ್ತಿ ಪ್ರದಾನ


 

     ಭಾರತದ ಸಂಪತ್ತು ಕಲೆ ಮತ್ತು ಸಾಹಿತ್ಯ. ಬದುಕಿನ ನಾಟಕದಲ್ಲಿ ಯಶಸ್ವಿಯಾಗಲು ಕಲೆ ಅಗತ್ಯ. ಜೀವನವೆಂಬುದು ಕಲೆಯ ಪ್ರತೀಕ. ಬದುಕು ಬಲೆ ಆಗಬಾರದ, ಕಲೆ ಆಗಬೇಕು. ಧರ್ಮದ ಉಳಿವಿಗೆ ಯಕ್ಷಗಾನದ ಕೊಡುಗೆ ಅನನ್ಯ” ಎಂದು ಶ್ರೀಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

    ಬೆಂಗಳೂರಿನ ಆತ್ಮಾಲಯ ಕಲೆ ಮತ್ತು ಸಂಸ್ಕೃತಿ ಆಕಾಡೆಮಿಯು ಶ್ರೀಮತಿ ಶಾಂತಾ ಮತ್ತು ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಪ್ರಶಸ್ತಿಯನ್ನು ಯಕ್ಷಗಾನದ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳರಿಗೆ ಪ್ರಶಸ್ತಿ ಪ್ರದಾನ ಮಾಡಿ ಶ್ರೀಗಳು ಮಾತನಾಡುತ್ತಾ “ಬದುಕಿನ ಪಾಠಶಾಲೆಗೆ ಯಕ್ಷಗಾನವೊಂದು ಪಠ್ಯವಿದ್ದಂತೆ” ಎಂದರು.

    ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ 'ನಟರಾಜ ವೇದಿಕೆ'ಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 'ಆಂಜನೇಯ 56' ಸಂದರ್ಭದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಉಪಸ್ಥಿತರಿದ್ದರು. ಜಸ್ಟೀಸ್ ಜಗನ್ನಾಥ ಶೆಟ್ಟಿ ಇವರ ಚಿರಂಜೀವಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಡಾ. ರಮಾನಂದ ಶೆಟ್ಟಿ ಉಪಸ್ಥಿತರಿದ್ದರು.

    ಪ್ರಶಸ್ತಿ ಪುರಸ್ಕೃತರ ಕುರಿತು ಪತ್ರಕರ್ತ, ಲೇಖಕ ನಾ. ಕಾರಂತ ಪೆರಾಜೆಯವರು ನುಡಿಹಾರಗಳನ್ನು ಸಲ್ಲಿಸುತ್ತಾ,” ರಘುರಾಮ ಹೊಳ್ಳರದು ನಿಜಾರ್ಥದ ಯಕ್ಷಧ್ವನಿ. ಒಂದು ಕಾಲಘಟ್ಟದ ಕ್ರಾಂತಿಧ್ವನಿ” ಎಂದರು. ಪ್ರಶಸ್ತಿಯು ಶಾಲು, ಹಾರ, ಹಣ್ಣುಹಂಪಲು, ಪ್ರಶಸ್ತಿ ಪತ್ರ ಮತ್ತು ರೂ.25,000 ನಿಧಿಯನ್ನು ಒಳಗೊಂಡಿತ್ತು.

    ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಅಚ್ಯುತ ಪಾಂಗಣ್ಣಾಯ ವಂದಿಸಿದರು. ಪೂಜ್ಯ ಶ್ರೀಗಳಿಗೆ  ಹರಿಣಾಕ್ಷಿ ಜೆ.ಶೆಟ್ಟಿ ಮತ್ತು ಸಂಘದ ಸದಸ್ಯೆಯರು ಫಲ ಸಮರ್ಪಣೆಯೊಂದಿಗೆ ಪೂರ್ಣಕುಂಭ ಸ್ವಾಗತ ಕೋರಿದರು. ಶ್ರೀಮತಿ ಶಾರದಾ ಅರಸ್, ಕಿಶೋರಿ ದುಗ್ಗಪ್ಪ, ದುಗ್ಗಪ್ಪ ಎನ್. ರಂಗನಾಥ ರಾವ್ ಅತಿಥಿಗಳನ್ನು ಗೌರವಿಸಿದರು. ಗುಡ್ಡಪ್ಪ ಬಲ್ಯ ನಿರ್ವಹಿಸಿದರು.

    ಆತ್ಮಾಲಯ ಅಕಾಡೆಮಿಯು ಈ ಹಿಂದಿನ ವರುಷಗಳಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕರಾದ ಪೆರುವೋಡಿ ನಾರಾಯಣ ಭಟ್, ಗಾನಕೇಸರಿ ಕುದ್ಮಾರು ವೆಂಕಟ್ರಮಣ, ಪೂಕಳ ಲಕ್ಷ್ಮೀನಾರಾಯಣ ಭಟ್, ಹೆಚ್.ದಾಸಪ್ಪ ರೈ, ಕುಂಬಳೆ ಶ್ರೀಧರ ರಾವ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು.

Tuesday, December 31, 2024

'ಸ್ಮೃತಿ ಕೃತಿಗಳು ಮುಂದಿನ ತಲೆಮಾರಿಗೆ ದೀವಿಗೆ' - ಕುಂಬಳೆ ಶ್ರೀಧರ ರಾವ್ ಸ್ಮೃತಿ ಕಾರ್ಯಕ್ರಮದಲ್ಲಿ ಪೂಜ್ಯ ಎಡನೀರು ಶ್ರೀಗಳು


“ಕುಂಬಳೆ ಶ್ರೀಧರ ರಾವ್ ಅವರು ನಿರ್ವಹಿಸುತ್ತಿದ್ದ ಪಾತ್ರಗಳೆಲ್ಲವೂ ಗೌರವದ ಮಿತಿಯೊಳಗೆ ಅಭಿವ್ಯಕ್ತಿಸಲ್ಪಡುತ್ತಿತ್ತು. ಸಜ್ಜನಿಕೆ, ವಿಧೇಯತೆ ಅವರ ವ್ಯಕ್ತಿತ್ವ. ಅವರ ಸ್ಮೃತಿಯೊಂದಿಗೆ ಅವರ ಬಗೆಗಿನ ನೆನಪು ಸಂಚಿಕೆಯು ಪ್ರಕಟವಾಗಿರುವುದು ಶ್ಲಾಘನೀಯ. ಇದು ಮುಂದಿನ ತಲೆಮಾರಿಗೆ ಹಿರಿಯರೊಬ್ಬರ ಜೀವಿತದ ಕಾಲಘಟ್ಟವನ್ನು, ಅವರ ಕೊಡುಗೆಯನ್ನು ಪರಿಚಯಿಸುವ ದೀವಿಗೆಯಾಗುತ್ತದೆ.” ಎಂದು ಎಡನೀರು ಶ್ರೀಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

ಅವರು ರವಿವಾರ ಕುಂಬಳೆಯ ಶ್ರೀ ಕಣಿಪುರ ಗೋಪಾಲಕೃಷ್ಣ ದೇವಳದ ಸಭಾಭವನದಲ್ಲಿ ಜರುಗಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿದರು. ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಶ್ರೀಧರ ರಾಯರ ವ್ಯಕ್ತಿತ್ವವನ್ನು ಜ್ಞಾಪಿಸಿಕೊಂಡರು.

ಧರ್ಮಸ್ಥಳ ಎಸ್.ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಡಿ.ಹರ್ಷೇಂದ್ರ ಕುಮಾರ್ ಮಾತನಾಡುತ್ತಾ, “ಧರ್ಮಸ್ಥಳ ಮೇಳವೊಂದರಲ್ಲೇ ಐದು ದಶಕಗಳ ಕಾಲ ನಿಷ್ಠೆಯಿಂದ ದುಡಿದವರು ಶ್ರೀಧರ ರಾಯರು. ಕಲಾನಿಷ್ಠನಾಗಿ, ಮೇಳನಿಷ್ಠನಾಗಿ ಮೃದು ಸ್ವಭಾವಗಳಿಂದ ಎಲ್ಲರ ಒಡನಾಡಿಯಾಗಿದ್ದರು. ಪಾತ್ರಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಅವರು ಮೇಳಕ್ಕೊಂದು ಆಸ್ತಿಯಾಗಿದ್ದರು” ಎಂದರು.

ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರು ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿಯನ್ನು ಮಾಡಿದರು. “ಶ್ರೀಧರ ರಾಯರ ದಮಯಂತಿ, ಸುಭದ್ರೆ, ಚಿತ್ರಾಂಗದೆ, ಕಯಾದು.. ಮೊದಲಾದ ಪಾತ್ರಗಳು ತುಂಬಾ ಚೆನ್ನಾಗಿ ಹಾಗೂ ಅಚ್ಚುಕಟ್ಟಾಗಿ ಮೂಡಿಬರುತ್ತಿತ್ತು. ಇನ್ನೊಂದು ನೆನಪಿಸುವ ಪಾತ್ರ. 'ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ'ಯ 'ಅಮ್ಮು ಬಲ್ಲಾಳ್ತಿ'. ದೊಡ್ಡ ಮನೆತನದ ರಾಣಿಯಂತಹ ಸ್ಥಾನಮಾನ. ಜಿನಭಕ್ತಿ, ಸೌಮ್ಯತೆ, ಸರಳತೆ, ಆಶ್ರಯದಾತೃತ್ವ.. ಈ ಸನ್ನಿವೇಶವನ್ನು ಅಸ್ತಿತ್ವದ ಯೋಗ್ಯತೆಯಿಂದಲೇ ಮೆರೆಸಿದರು. ಆದು ಶಾಶ್ವತವಾದ ಕಲಾಕೃತಿ” ಎಂದರು.

ಈ ಸಂದರ್ಭದಲ್ಲಿ ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಸಂಪಾದಿತ ಶ್ರೀಧರ ರಾಯರ ಸ್ಮೃತಿ ಸಂಚಿಕೆ 'ಕಲಾ ಶ್ರೀಧರ' ಕೃತಿಯನ್ನು ಪೂಜ್ಯ ಎಡನೀರು ಶ್ರೀಗಳು ಅನಾವರಣಗೊಳಿಸಿದರು. ಕೃತಿ ಪ್ರಕಟಣೆಯ ಆಶಯ ಮತ್ತು ಅದರ ರಚನೆಯ ಹಿಂದಿನ ಅನುಭವಗಳನ್ನು ನಾ. ಕಾರಂತರು ವಿವರಿಸಿದರು. ವೇದಿಕೆಯಲ್ಲಿ ಸ್ಮೃತಿ ಕೃತಿ ಸಮಿತಿಯ ಅಧ್ಯಕ್ಷ ಶ್ರೀ ಭಗವಾನ್‌ ದಾಸ್‌ ಹಾಗೂ ಶ್ರೀಧರ ರಾಯರ ಪತ್ನಿ ಸುಲೋಚನ ಉಪಸ್ಥಿತರಿದ್ದರು.

ಆರಂಭದಲ್ಲಿ ಕುಂಬ್ಳೆ ಗೋಪಾಲ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಗಣೇಶ ಪ್ರಸಾದ್ ಕುಂಬ್ಳೆ ಹಾಗೂ ದೇವಿ ಪ್ರಸಾದ್ ಕುಂಬ್ಳೆಯವರು ಯತಿದ್ವಯರಿಗೆ ಫಲಕಾಣಿಕೆ, ಹಾರದೊಂದಿಗೆ ಸ್ವಾಗತಿಸಿದರು. ಸುಕುಮಾರ್ ಅನಂತಪುರ, ರಾಮಚಂದ್ರ ಬೆಂಗಳೂರು ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಕೃತಿ ಸಂಪಾದಕ ನಾ. ಕಾರಂತ ಪೆರಾಜೆ, ಮಾಣಿಲ ಮೇಳದ ಸಂಚಾಲಕ ಡಾ.ಸತೀಶ ಪುಣಿಂಚತ್ತಾಯರನ್ನು ಗೌರವಿಸಲಾಯಿತು. ಸಂಘಟಕ, ಅರ್ಥದಾರಿ ಶ್ರೀ ಉಜಿರೆ ಅಶೋಕ ಭಟ್ ನಿರ್ವಹಿಸಿದರು. ಶ್ರೀ ಭಗವಾನ ದಾಸ್‌ ವಂದಿಸಿದರು.

ಉದ್ಘಾಟನೆ : 'ಕಲಾ ಶ್ರೀಧರ' ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಣಿಪುರದ ಪ್ರಧಾನ ಅರ್ಚಕ ವೇ.ಮೂ.ಮಾಧವ ಅಡಿಗಳು ಉದ್ಘಾಟಿಸಿ ಶುಭ ಹಾರೈಸಿದರು. ಧರ್ಮಸ್ಥಳ ಮೇಳದ ಭಾಗವತ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು, ನ್ಯಾಯವಾದಿ ಕಲಾರತ್ನ ಶಂನಾ ಅಡಿಗ ಉಪಸ್ಥಿತರಿದ್ದರು. ನಾರಾಯಣ ರಾವ್ ಬೇರಿಕೆ, ಕೃಷ್ಣ ಮುಖಾರಿ, ರಾಮ ರಾವ್ ಬೇರಿಕೆ, ಪ್ರತಾಪ ಕುಂಬ್ಳೆ, ಅಶೋಕ್ ಕುಂಬ್ಳೆ, ಗೋಪಾಲಕೃಷ್ಣ ಸೂರಂಬೈಲು.. ಮೊದಲಾದವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಶ್ರೀ ಗುರುಮೂರ್ತಿ ನಾಯ್ಕಾಪು ನಿರ್ವಹಿಸಿ, ವಂದಿಸಿದರು.

ಕುಂಬಳೆ ಶ್ರೀಧರ ಪಾತ್ರಗಳನ್ನು ನೆನಪಿಸುವ ಎರಡು ಸನ್ನಿವೇಶವನ್ನು ತಾಳಮದ್ದಳೆ ರೂಪದಲ್ಲಿ ಪ್ರಸ್ತುತ ಪಡಿಸಲಾಯಿತು. ಅಪರಾಹ್ನ 'ಕೃಷ್ಣ ಸಂಧಾನ' ತಾಳಮದ್ದಳೆ ನಡೆಯಿತು. ಕಲಾವಿದರಾಗಿ - ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ (ಭಾಗವತರು), ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್, ರಾಮಮೂರ್ತಿ ಕುದ್ರೆಕೂಡ್ಲು, ಲವಕುಮಾರ್ ಐಲ (ಮದ್ದಳೆ - ಚೆಂಡೆ ವಾದನ ಕಲಾವಿದರು), ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಶಂಭು ಶರ್ಮ, ಗೋಪಾಲ ನಾಯಕ್ ಸೂರಂಬೈಲು, ಎಂ.ಕೆ.ರಮೇಶ ಆಚಾರ್ಯ, ವಸಂತ ಗೌಡ ಕಾಯರ್ತಡ್ಕ, ದಿವಾಕರ ಆಚಾರ್ಯ ಗೇರುಕಟ್ಟೆ, ಅಶೋಕ ಕುಂಬ್ಳೆ (ಅರ್ಥದಾರಿಗಳು) ಭಾಗವಹಿಸಿದ್ದರು.

ಕೊನೆಗೆ ಶ್ರೀ ಮಹಾಲಕ್ಷ್ಮೀ ಕೃಪಾಪೋಶಿತ ಯಕ್ಷಗಾನ ಮಂಡಳಿ, ಶ್ರೀಧಾಮ-ಮಾಣಿಲ ಇವರಿಂದ 'ಕಂಸವಧೆ' ಬಯಲಾಟ ನಡೆಯಿತು. ಒಟ್ಟೂ ಕಾರ್ಯಕ್ರಮಕ್ಕೆ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ ನಾರಾಯಣಮಂಗಲ, ಶ್ರೀ ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ ಶೇಡಿಕಾವು, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಹಾಗೂ ಕುಂಬಳೆ ಶ್ರೀಧರ ರಾವ್ ಅಭಿಮಾನಿಗಳು ಹೆಗಲೆಣೆ ನೀಡಿದ್ದರು.

Saturday, December 28, 2024

ದಶಂಬರ 29ರಂದು ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ - ‘ಕಲಾ ಶ್ರೀಧರ' ಕೃತಿ ಅನಾವರಣ

 


      ಯಕ್ಷಗಾನದ ಹಿರಿಯ ಕಲಾವಿದ, ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಐದು ದಶಕಕ್ಕೂ ಮಿಕ್ಕಿ ಸೇವೆಗೈದ ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿ ಕಾರ್ಯಕ್ರಮವು 2024ರ ದಶಂಬರ 29, ರವಿವಾರರಂದು ಕುಂಬಳೆಯಲ್ಲಿ ಜರುಗಲಿದೆ. ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಮಂಟಪದಲ್ಲಿ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ವಿವಿಧ ಕಲಾಪಗಳು ಸಂಪನ್ನವಾಗಲಿವೆ.

    ಸಂಜೆ ಗಂಟೆ 4ಕ್ಕೆ ಶ್ರೀಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹಾಗೂ ಶ್ರೀಧಾಮ-ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನದಲ್ಲಿ 'ಶ್ರೀಧರ ಸ್ಮೃತಿ' ಕಾರ್ಯಕ್ರಮ ಜರುಗಲಿದೆ.

    ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಧರ್ಮಸ್ಥಳ ಎಸ್.ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಡಿ.ಹರ್ಷೇಂದ್ರ ಕುಮಾರ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಬಹುಶ್ರುತ ವಿದ್ವಾಂಸ, ಅರ್ಥದಾರಿ ಡಾ.ಎಂ.ಪ್ರಭಾಕರ ಜೋಶಿಯವರು 'ಶ್ರೀಧರ ಸ್ಮೃತಿ'ಯನ್ನು ಮಾಡಲಿದ್ದಾರೆ.  ಈ ಸಂದರ್ಭದಲ್ಲಿ ಪತ್ರಕರ್ತ, ಕಲಾವಿದ ಶ್ರೀ ನಾ. ಕಾರಂತ ಪೆರಾಜೆ ಇವರ ಸಂಪಾದಕತ್ವದ 'ಕಲಾ ಶ್ರೀಧರ' ಸ್ಮೃತಿ-ಕೃತಿಯನ್ನು ಪೂಜನೀಯ ಯತಿದ್ವಯರು ಅನಾವರಣಗೊಳಿಸಲಿದ್ದಾರೆ.

    ಪೂರ್ವಾಹ್ನ ಗಂಟೆ 9ಕ್ಕೆ ಶ್ರೀ ಕಣಿಪುರ ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ. ಮಾಧವ ಅಡಿಗ, ಸಾಮಾಜಿಕ ಸೇವಾ ಕಾರ್ಯಕರ್ತ ಹಾಗೂ ಕಲಾಪೋಷಕ ಶ್ರೀ ಮಂಜುನಾಥ ಆಳ್ವ, ಶ್ರೀ ಧರ್ಮಸ್ಥಳ ಮೇಳದ ಭಾಗವತ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕಲಾರತ್ನ ಶಂ.ನಾ.ಅಡಿಗ ಇವರ ಉಪಸ್ಥಿತಿಯಲ್ಲಿ 'ಶ್ರೀಧರ ಸ್ಮೃತಿ' ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.

ಬೆಳಿಗ್ಗೆ ಗಂಟೆ 9-30ರಿಂದ ಕುಂಬಳೆ ಶ್ರೀಧರ ರಾವ್ ಅವರ ಪ್ರಧಾನ ಪಾತ್ರಗಳ ನೆನವರಿಕೆಯ 'ಸಂವಾದದ ತಾಳಮದ್ದಳೆ' ಹಾಗೂ 'ಕೃಷ್ಣ ಸಂಧಾನ' ಆಖ್ಯಾನದ ತಾಳಮದ್ದಳೆ ಜರುಗಲಿದೆ. ಶ್ರೀಗಳಾದ ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ (ಭಾಗವತರು), ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್, ರಾಮಮೂರ್ತಿ ಕುದ್ರೆಕೂಡ್ಲು, ಲವಕುಮಾರ್ ಐಲ (ಮದ್ದಳೆ - ಚೆಂಡೆ); ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಆಶೋಕ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಶಂಭು ಶರ್ಮ, ಎಂ.ಕೆ.ರಮೇಶ ಆಚಾರ್ಯ, ವಸಂತ ಗೌಡ ಕಾಯರ್ತಡ್ಕ, ಗೋಪಾಲ ನಾಯಕ್ ಸೂರಂಬೈಲು, ದಿವಾಕರ ಆಚಾರ್ಯ ಗೇರುಕಟ್ಟೆ, ಅಶೋಕ್ ಕುಂಬ್ಳೆ (ಅರ್ಥದಾರಿಗಳು) ಭಾಗವಹಿಸಲಿದ್ದಾರೆ. ಈ ಕಲಾಪವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇವರು ಸಂಯೋಜಿಸಿದ್ದಾರೆ.

    ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀಧಾಮ, ಮಾಣಿಲ ಇವರಿಂದ ಶ್ರೀ ಸತೀಶ ಪುಣಿಂಚತ್ತಾಯ, ಪೆರ್ಲ ಇವರ ಸಂಯೋಜನೆಯಲ್ಲಿ 'ಕಂಸವಧೆ' ಬಯಲಾಟ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ, ನಾರಾಯಣ ಮಂಗಲ, ಕುಂಬಳೆ;  ಶ್ರೀ ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ, ಶೇಡಿಕಾವು-ಕುಂಬಳೆ, ಕುಂಬಳೆ ಶ್ರೀಧರ ರಾವ್ ಅಭಿಮಾನಿಗಳು ಆಯೋಜಿಸಿದ್ದಾರೆ. ಕಾರ್ಯಕ್ರಮಕ್ಕೆ ಮುಕ್ತ ಸ್ವಾಗತ. 

(ಚಿತ್ರಗಳು : ಶ್ಯಾಮಪ್ರಸಾದ್‌ ಕುಂಚಿನಡ್ಕ ಮತ್ತು ಮಧುಸೂದನ ಅಲೆವೂರಾಯ)

Monday, October 21, 2024

ಹಿರಿಯ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್‌ ಇನ್ನು ನೆನಪು.

 



 ಮೊನ್ನೆ ಮಂಗಳವಾರ ಪುತ್ತೂರಿನ ʼನಟರಾಜ ವೇದಿಕೆʼಯಲ್ಲಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಪ್ರವಾಸಿ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ. ಶ್ರೀ ಧರ್ಮಸ್ಥಳ ಮೇಳದ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಸಾರಥ್ಯ. ಅಂದು ಚೌಕಿಯಲ್ಲಿ ಒಬ್ಬರೇ ಕುಳಿತಿದ್ದರು. ಮಾತನಾಡಿಸಿದೆ. ಎಂದಿನಂತೆ ಉಭಯಕುಶಲೋಪರಿ.. ʼಈಗ ನನ್ನ ಬೆಲೆ ಹೆಚ್ಚಾಗಿದೆʼ ಎಂದು ಕಿವಿ ತೋರಿಸಿದ್ರು. ಫಕ್ಕನೆ ಅ‍ರ್ಥವಾಗಲಿಲ್ಲ. ಮತ್ತೆ ತಿಳಿಯಿತು.

          ಅವರ ಶ್ರವಣಶಕ್ತಿ ಕೆಲವು ವರುಷಗಿಂದ ಕುಂಠಿತವಾಗಿತ್ತು. ಅದಕ್ಕವರು ವೈದ್ಯಕೀಯ ವ್ಯವಸ್ಥೆ ಮಾಡಿಕೊಂಡಿದ್ದರು. “ಈಗ ಎರಡು ಕಿವಿಯೂ ಚೆನ್ನಾಗಿ ಕೇಳುತ್ತದೆ. ಇನ್ನು ನೀವು ಬಯ್ದರೆ ಗೊತ್ತಾಗ್ತದೆ. ಮೂವತ್ತು ಸಾವಿರ ರೂಪಾಯಿಗೂ ಅಧಿಕ ಖರ್ಚಾಯಿತು.” ಎಂದು ವಿನೋದದಿಂದ ಅನುಭವ ಹಂಚಿಕೊಂಡಿದ್ದರು. ಒಂದೇ ವಾರದಲ್ಲಿ ಸಾವಿನ ಸುದ್ದಿ. ಇಂದು ಅಂದರೆ 21-10-2024 ಮುಂಜಾನೆ ವಿಧಿವಶರಾದರು.

          ದಕ್ಷಾಧ್ವರ ಪ್ರಸಂಗವೊಂದರಲ್ಲಿ ವಿಪ್ರನ ಪಾತ್ರ ಮಾಡಿ ಹೇಳಿದ ಮಾತು ನೆನಪಾಗುತ್ತದೆ... “ ಕೆಮ್ಮು, ದಮ್ಮು,. ನಡೆಯುವುದಕ್ಕೆ ಆಗುವುದಿಲ್ಲ. ಹೆಂಡತಿ, ಮಕ್ಕಳು, ಬಂಧುಗಳು ಎಲ್ಲರೂ ಇದ್ದಾರೆ. ಆದರೆ ಯಾರಿಗೂ ಹೊರೆಯಾಗದೆ ಸಾಯಬೇಕೆನ್ನುವುದು ಆಶೆ” ಎಂದಿದ್ದರು.

 ದೈವಾಧೀನರಾದ ಬಂಟ್ವಾಳ ಹಾಸ್ಯಗಾರರಿಗೆ (Bunwala Jayarama Achar)  ಕಂಬನಿ...

( 2018 ಮಾರ್ಚ್‌ 9 ರಂದು ಪ್ರಜಾವಾಣಿಯ ಮಂಗಳೂರು ಆವೃತ್ತಿಯಲ್ಲಿ ಪ್ರಕಟವಾದ ನನ್ನ ʼದಧಿಗಿಣತೋʼ ಅಂಕಣ ಬರಹದ ಮರುಓದು. ಬಂಟ್ವಾಳರಿಗಿದು ಅಕ್ಷರ ನಮನ)  

     ಯಕ್ಷಗಾನದಲ್ಲಿ ನಾಟ್ಯದಿಂದ ತೊಡಗಿ ವೇಷದ ತನಕ ಎಲ್ಲವೂ ಕಲಿಕೆಯ ಹಿನ್ನೆಲೆಯಲ್ಲಿ ಪಕ್ವಗೊಳ್ಳುತ್ತಾ ಸಾಗುತ್ತವೆ. ಆದರೆ ಹಾಸ್ಯವು ಕಲಿತು ಬರುವಂತಹುದಲ್ಲ. ಅದು ಸ್ವ-ಭಾವ. ಇದರೊಂದಿಗೆ ಕಲಿಕೆಯು ಮಿಳಿತಗೊಂಡಾಗ 'ಹಾಸ್ಯಗಾರ' ರೂಪುಗೊಳ್ಳುತ್ತಾನೆ. ಹೀಗೆ ರೂಪುಗೊಂಡ ಹಾಸ್ಯಗಾರನೊಳಗೆ ಮೂರನೇ ಕಣ್ಣು ಜಾಗೃತವಾಗಿರಬೇಕು. ಜತೆಗೆ ಸ್ವ-ಎಚ್ಚರ ಕೂಡಾ. ಹೀಗೆ ರೂಪುಗೊಂಡರೆ ಯಕ್ಷಗಾನವೂ ಸೇರಿದಂತೆ ಎಲ್ಲಾ ರಂಗದಲ್ಲೂ ಜೈಸಬಹುದು.

ಬಂಟ್ವಾಳ ಜಯರಾಮ ಆಚಾರ್ ಅವರೊಂದಿಗೆ ಮಾತಿಗೆ ಕುಳಿತಾಗ ಇಂತಹ ಸೂಕ್ಷ್ಮ ವಿಚಾರಗಳು ಹೊಕ್ಕು ಹೊರಬರುತ್ತವೆ. ಇವರದು ನಕ್ಕು ನಗಿಸುವ ಹಾಸ್ಯವಲ್ಲ! ತಾನೇ ನಗುವ ಹಾಸ್ಯವೂ ಅಲ್ಲ! ಹಾಸ್ಯವು ಮಾತನ್ನು ಬಯಸುವುದಿಲ್ಲ. ಹಾಸ್ಯಗಾರ ವಾಚಾಳಿಯಾದಾಗ ಹಾಸ್ಯರಸವು ಮುಸುಕು ಹಾಕಿಕೊಳ್ಳುತ್ತದೆ! ಹಾಸ್ಯವೆಂದರೆ ವಿಕಾರವಲ್ಲ. ರಂಗದಲ್ಲಿ ಏನು ಮಾಡಿದರೂ ಪ್ರೇಕ್ಷಕರು ಸಹಿಸಿಕೊಳ್ಳುತ್ತಾರೆ ಎನ್ನುವುದು ಭ್ರಮೆ. 

ತುಳು ಪ್ರಸಂಗವೊಂದರ ಸಂವಾದವೊಂದರಲ್ಲಿ ಸಹ ಪಾತ್ರಧಾರಿಗಳು ಉಚ್ಛರಿಸಿದ ಪದವೊಂದನ್ನು ಅಬದ್ಧವಾಗಿ ಹೇಳಿದ್ದರಂತೆ. ಆಟ ನೋಡುತ್ತಿದ್ದ ಮಹಿಳೆಯೋರ್ವರು ತಲೆತಗ್ಗಿಸಿ ಎದ್ದು ಹೋದರು. ಅವರು ಹೇಳಿದ ಪದವು ತುಳುವಿನಲ್ಲಿ ಒಂದು ಅರ್ಥ ಕೊಟ್ಟರೆ, ಹಿಂದಿಯಲ್ಲಿ ಅಶ್ಲೀಲ ಅರ್ಥವನ್ನು ಸ್ಫುರಿಸಿತ್ತು. ಅರಿಯದೆ ರಂಗದಲ್ಲಿ ಬಳಸಿದ್ದರು. ಅಲ್ಲದೆ ಪ್ರೇಕ್ಷಕರನ್ನು ಟಾರ್ಗೆಟ್‌ ಮಾಡಿದ ಹಾಸ್ಯಗಳು ಎಂದೂ ಅಲ್ಪಾಯುಷಿ.

 ಇಂತಹ ಪ್ರಕರಣಗಳು ಆದಾಗ ನಾವೆಲ್ಲಿ ತಪ್ಪುತ್ತಿದ್ದೇವೆ ಎನ್ನುವ ಅರಿವಾಗುತ್ತದೆ. ಪ್ರೇಕ್ಷಕರು ಜಾಗೃತರಾಗಿದ್ದರೆ ರಂಗವು ಆಭಾಸವಾಗುವುದಿಲ್ಲ. ನಾನು ಬೆಳೆಯುತ್ತಿದ್ದ ಆರಂಭ ಕಾಲದಲ್ಲಿ ಪ್ರೇಕ್ಷಕರಲ್ಲಿ ರಂಗಎಚ್ಚರವಿತ್ತು. ಆಭಾಸಗಳನ್ನು ಸಹಿಸುತ್ತಿರಲಿಲ್ಲ. ಏಕಾಂತದಲ್ಲಿ ಕಲಾವಿದರೊಂದಿಗೆ ಅಸಹನೆಯಿಂದ ಹೇಳುತ್ತಿದ್ದರು. ಹೀಗೆ ಪ್ರೇಕ್ಷಕರಿಂದ ಹಿಮ್ಮಾಹಿತಿ ಸಿಕ್ಕಾಗ ತಪ್ಪನ್ನು ಸರಿಪಡಿಸಿಕೊಳ್ಳಲು ಸಹಾಯಕವಾಗುತ್ತದೆ. ಇಂತಹ ಘಟನೆಗಳು ನನ್ನೊಳಗೆ ಸದಾ ಜಾಗೃತ - ಬಂಟ್ವಾಳರ ಯಶದ ಹಾದಿಯ ಕ್ಯಾಪ್ಸೂಲುಗಳಿವು.

ಹಿಂದಿನ ಹಾಸ್ಯ ಹೇಗಿತ್ತು? ಬಂಟ್ವಾಳರು ಹೇಳುತ್ತಾರೆ – “ಪಾತ್ರದ ಕುಣಿತದ ವಿನ್ಯಾಸಗಳು ಯಕ್ಷಗಾನದ ಚೌಕಟ್ಟಿನಲ್ಲಿದ್ದುವು. ಈಗಿನಂತೆ ಫಿನಿಶಿಂಗ್ ಇದ್ದಿರಲಿಲ್ಲ. ಹಾಸ್ಯಗಾರ ಕಲಿಕಾ ಪಠ್ಯದೊಳಗೆ ತನ್ನ ಜಾಣ್ಮೆಯನ್ನು ಪ್ರದರ್ಶಿಸಬೇಕು. ಮಾತಿನಲ್ಲಿ ಹೆಚ್ಚು ದ್ವಂದ್ವಾರ್ಥ ಪದಗಳಿರುತ್ತಿದ್ದುವು. ಜನರು ಅದನ್ನು ಅಶ್ಲೀಲ, ಅಬದ್ಧ ಎಂದು ಸ್ವೀಕರಿಸುತ್ತಿರಲಿಲ್ಲ. ಎಂಜಾಯ್ ಮಾಡುತ್ತಿದ್ದರು. ಹಾಸ್ಯ ರಸವಾಗಿಯೇ ಸ್ವೀಕೃತಿ ಪಡೆಯುತ್ತಿತ್ತು. ಜಾತಿಗೆ ಸಂಬಂಧಪಟ್ಟ ಪಾತ್ರಗಳು ಬಂದಾಗ ಎಲ್ಲೂ ಜಾತಿಯ ಸಮಸ್ಯೆ ಉಂಟಾಗುತ್ತಿರಲಿಲ್ಲ. ಈಗ ಬಿಡಿ, ಒಂದೊಂದು ಪದವನ್ನು ಎತ್ತಿ ಹಿಡಿದು ವಿವಾದವನ್ನುಂಟು ಮಾಡುವ ಮನಃಸ್ಥಿತಿ ಉಂಟಾಗಿದೆ.”

ಬಂಟ್ವಾಳ ಜಯರಾಮ ಆಚಾರ್ ಹನುಮಗಿರಿ ಶ್ರೀ ಕೋದಂಡರಾಮ ಮೇಳದ ಹಾಸ್ಯಗಾರರು. ಸುಮಾರು ಅರ್ಧ ಶತಮಾನದ ರಂಗಾನುಭವ. ಇವರ ತಂದೆ ಹಾಸ್ಯಗಾರರು. ತಂದೆ ಅಮ್ಟಾಡಿ ಮೇಳದಲ್ಲಿದ್ದಾಗ ಚಿಕ್ಕ ಪಾತ್ರಗಳ ಮೂಲಕ ಬಣ್ಣ ಹಚ್ಚಿದರು. ಶಾಲಾ ಕಲಿಕೆಯ ನಿಲುಗಡೆಯ ಬಳಿಕ ಬಣ್ಣದ ಲೋಕದತ್ತ ಚಿತ್ತ. ಅಮ್ಮನ ಪ್ರೋತ್ಸಾಹ. ಮುಂದೆ ಸುಂಕದಕಟ್ಟೆ, ಸೊರ್ನಾಡು, ಕಟೀಲು ಮೇಳಗಳಲ್ಲಿ ನಾಲ್ಕು ವರುಷಗಳ ಅಭ್ಯಾಸ. ನಂತರವಷ್ಟೇ ಶ್ರೀಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಕಲಿಕೆ. “ನಾನೇನು ಕುಣಿಯುತ್ತೇನೆ ಎಂದು ಹೇಳಬೇಕಾದರೆ ಗುರುವಿನ ಬಳಿಯೇ ಕಲಿಯಬೇಕು. ಮಹಾನ್ ಗುರು ಪಡ್ರೆ ಚಂದು ಗುರುಗಳಾಗಿ ಒದಗಿದ್ದರು. ಧರ್ಮಸ್ಥಳದ ಪೂಜ್ಯ ಖಾವಂದರು ನನ್ನೊಳಗಿನ ಹಾಸ್ಯಗಾರನಿಗೆ ರೂಪು ಕೊಟ್ಟರು.” ಎನ್ನುತ್ತಾರೆ.

ಆ ಘಟನೆಯನ್ನು ಬಂಟ್ವಾಳರು ಸ್ವಾರಸ್ಯವಾಗಿ ಹೇಳುತ್ತಾರೆ. ಕಲಿಕೆಯ ಕೊನೆಗೆ ವಿದ್ಯಾರ್ಥಿಗಳಿಂದ ಪ್ರದರ್ಶನ. ಪ್ರಸಂಗ ರತಿ ಕಲ್ಯಾಣ. ಬಂಟ್ವಾಳರದು 'ಮೇಘಸ್ತನಿ'ಯ ಪಾತ್ರ. ತುಂಬು ಉತ್ಸಾಹದಿಂದ ಅಭಿನಯಿಸಿದ್ದರು ಕೂಡಾ. ಕೊನೆಗೆ ಗುರು ಪಡ್ರೆ ಚಂದು ಅವರಲ್ಲಿ ಖಾವಂದರು ಹೇಳಿದರಂತೆ - 'ಇವರಿಗೆ ಬಣ್ಣದ ವೇಷ ಬೇಡ, ಹಾಸ್ಯಕ್ಕೆ ತಯಾರು ಮಾಡಿ'. ಅಂದರೆ ಅಂದಿನ ಮೇಘಸ್ತನಿಯ ರಾಕ್ಷಸಿಯ ಅಭಿವ್ಯಕ್ತಿಯಲ್ಲಿ ಹಾಸ್ಯರಸವೇ ಹೆಚ್ಚಿತ್ತಂತೆ! ಆಗ ಗುರುಕುಲದಲ್ಲಿ ಕಲಿಸುವ ರೀತಿಯೂ ಅನನ್ಯ. ಮನಮುಟ್ಟುವ ಪಾಠ, ಪಠ್ಯ. ನಂತರ ಕಟೀಲು, ಸುಂಕದಕಟ್ಟೆ ಪುತ್ತೂರು, ಹೊಸನಗರ, ಎಡನೀರು ಮೇಳಗಳಲ್ಲಿ ತಿರುಗಾಟ.

ಹಾಸ್ಯಗಾರರಾದ ಸುಜನ ಸುಳ್ಯ, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು, ಮಿಜಾರು ಅಣ್ಣಪ್ಪ, ವಿಟ್ಲ ಗೋಪಾಲಕೃಷ್ಣ ಜೋಶಿ.. ಹೀಗೆ ಹಿರಿಯ ಹಾಸ್ಯಗಾರರ ಪ್ರಭಾವ. ಆದರೆ ಯಾರದ್ದೇ ಅನುಕರಣೆಯಿಲ್ಲ. ಸ್ವ-ಪಾಕದಲ್ಲಿ ಕಟ್ಟಿಕೊಂಡ ಬದುಕು. ಬಹುಶಃ ರಂಗಶಿಸ್ತು ಬಂದಿರುವುದು ಇಂತಹ ಹಿರಿಯರ ಒಡನಾಟದ ಫಲ. ಶಿಷ್ಟ ಹಾಸ್ಯವು ಮೂಡಿಬಂದಿರುವುದು 'ರಂಗದಲ್ಲಿ ಹೇಗಿರಬಾರದು' ಎನ್ನುವ ಎಚ್ಚರವು ಕಲಿಸಿದ ಪಾಠ. ಹಾಸ್ಯಗಾರರು ನಿರ್ವಹಿಸುವ ಹಾಸ್ಯೇತರ ಪಾತ್ರಗಳಲ್ಲಿ ಹಾಸ್ಯ ನುಸುಳಬಾರದು ಎನ್ನುವ ಸ್ಪಷ್ಟ ಜ್ಞಾನ ಬಂಟ್ವಾಳರಲ್ಲಿದೆ.

ಯಕ್ಷಗಾನದ ಹಾಸ್ಯದ ಸ್ವರೂಪ ಹೇಗೆ? ಹಾಸ್ಯಗಾರ ತನ್ನ ಹಾಸ್ಯವನ್ನು ರಂಗದಲ್ಲಿ ದುರುಪಯೋಗ ಮಾಡಬಾರದು. ಯಾರನ್ನೋ ಮೆಚ್ಚಿಸಲು ಹಗುರನಾಗಬಾರದು. ಮಾತು ಮಿತವಾಗಿದ್ದರೆ ಹಾಸ್ಯ ರಸದ ಉತ್ಪತ್ತಿಗೆ ಅವಕಾಶ ಹೆಚ್ಚು. ಒಂದು ನೋಟದಿಂದ, ನಗೆಯಿಂದ, ನಡಿಗೆಯಿಂದ ಹಾಸ್ಯ ರಸ ಸಾಧ್ಯ. ಹಾಸ್ಯದ ಪಾತ್ರಾಭಿವ್ಯಕ್ತಿಗೆ ಪೂರ್ವಸಿದ್ಧತೆ ಮಾಡಿಕೊಂಡರೆ ಪ್ರಯೋಜನವಿಲ್ಲ. ರಂಗದಲ್ಲಿ ಸಹಪಾತ್ರ, ಹಿಮ್ಮೇಳ, ಪ್ರೇಕ್ಷಕರ ಪ್ರತಿಕ್ರಿಯೆ ಜತೆಗೆ ಪಾತ್ರಧಾರಿಯ ಅಂದಿನ ಮನಃಸ್ಥಿತಿ... ಹೀಗೆ ಎಲ್ಲಾ ಒಳಸುರಿಗಳು ಒಗ್ಗೂಡಿ ಅಭಿವ್ಯಕ್ತಿ ರೂಪುಗೊಳ್ಳುತ್ತದೆ. ಮುಖ್ಯವಾಗಿ ಗಮನಿಸಬೇಕಾದ್ದು ಹಾಸ್ಯಗಾರ ರಂಗದಲ್ಲಿ ಸ್ವತಂತ್ರನಲ್ಲ. ಸಹಪಾತ್ರದ ಓಘ, ಅನುಭವದಂತೆ ಹಾಸ್ಯಗಾರದ ಅಭಿವ್ಯಕ್ತಿ. ಸಹಪಾತ್ರ ಸೊರಗಿದರೆ ಹಾಸ್ಯವೂ ಸೊರಗುತ್ತದೆ.

ಬದಲಾದ ಮನಃಸ್ಥಿತಿಯಲ್ಲಿ ಎಲ್ಲಾ ರಂಗದಲ್ಲೂ ಹಾಸ್ಯವು ಹಾಸ್ಯಾಸ್ಪದವಾಗುತ್ತಿವೆ. ರಂಗದಲ್ಲಿ ಹಾಸ್ಯಗಾರ ಇರುತ್ತಾರೆ ಹೊರತು ಅವರ ಹಾಸ್ಯಕ್ಕೆ ಪ್ರೇಕ್ಷಕರು ನಗುವುದಿಲ್ಲ! ಬದುಕಿನಲ್ಲಿ ನಗು ಕಳೆದುಹೋಗಿದೆ! ನಗಲೂ ಗೊತ್ತಿಲ್ಲ! ಮತ್ತೊಂದೆಡೆ ಹಾಸ್ಯ ರಸಗಳ ಉತ್ಪತ್ತಿಯಲ್ಲಿ ಹಾಸ್ಯಗಾರರು ಸೋಲುತ್ತಿದ್ದಾರೆ!  ಇಂತಹ ಸ್ಥಿತಿಯಲ್ಲಿ ಬಂಟ್ವಾಳರ ಹಾಸ್ಯ ಪ್ರಸ್ತುತವಾಗುತ್ತದೆ. ತನ್ನದು ಯಕ್ಷಗಾನದ ಹಾಸ್ಯ ಎನ್ನುವ 'ಸದಾಎಚ್ಚರ' ಇವರ ಹಾಸ್ಯ ಪಾತ್ರಗಳ ಯಶದ ಗುಟ್ಟು. ದಕ್ಷಾಧ್ವರ ಪ್ರಸಂಗದ 'ವಿಪ್ರ', ದೇವಿಮಹಾತ್ಮೆಯ 'ಮಾಲಿನಿ ದೂತ', ಬೇಡರಕಣ್ಣಪ್ಪ ಪ್ರಸಂಗದ 'ಕೈಲಾಸ ಶಾಸ್ತ್ರಿ', ಮಹಾಕಲಿ ಮಗಧೇಂದ್ರದ 'ಜಗಜಟ್ಟಿ'.. ಹೀಗೆ ವಿವಿಧ ಪಾತ್ರ ವೈವಿಧ್ಯಗಳಲ್ಲಿ ಬಂಟ್ವಾಳರ ಅಭಿವ್ಯಕ್ತಿ ಮೇಲ್ಮೆ ಪಡೆದಿದೆ.

ನಮ್ಮ ಕಲಾ ಬದುಕಿನ ಮಹತ್ವದ ಕಾಲಘಟ್ಟ ಯಾವುದು? ಎನ್ನುವ ಪ್ರಶ್ನೆಗೆ ಬಂಟ್ವಾಳ ಜಯರಾಮ ಆಚಾರ್ಯರು ಹೇಳುತ್ತಾರೆ – “ಪುತ್ತೂರು ಮೇಳದ ತಿರುಗಾಟದ ಸಮಯ. ಬಾಲೆನಾಗಮ್ಮ, ರಾಣಿ ಚಿತ್ರಾಂಗದೆ ಮೊದಲಾದ ಪ್ರಸಂಗಗಳು ಹಿಟ್ ಆಗಿತ್ತು. ಆಗ ಕಾಳಿಂಗ ನಾವಡರ ವಿಜೃಂಬಣೆಯ ಕಾಲ. ಪತ್ರಿಕೆಯಲ್ಲಿ ಅವರ ಹೆಸರು ರಾರಾಜಿಸುತ್ತಿತ್ತು. ಆ ಹೊತ್ತಲ್ಲಿ 'ಬಂಟ್ವಾಳ ಜಯರಾಮ ಆಚಾರ್ಯರ ಪಾತ್ರವನ್ನು ನೋಡಲು ಮರೆಯದಿರಿ' ಎಂದು ಪತ್ರಿಕೆಯಲ್ಲಿ ಪ್ರಕಟವಾಗಲು ಶುರುವಾಗಿತ್ತು. ಆಗದು ದೊಡ್ಡ ಸಂಗತಿ. ನಮ್ಮಂತಹ ಸಣ್ಣ ಕಲಾವಿದರಿಗೆ ಹೆಸರು ತಂದುಕೊಟ್ಟ ಪುತ್ತೂರು ಮೇಳದ ಪ್ರಸಂಗಗಳು, ತಂದುಕೊಟ್ಟ ಕೀರ್ತಿಗಳು ಮರೆಯುವಂತಹುದಲ್ಲ.”

ನಾಲ್ಕೈದು ದಶಕದ ಹಿಂದೆ ನೋಟ ಹರಿಸೋಣ. ನಾಟಕ ಕಂಪೆನಿಗಳಲ್ಲಿ ತಯಾರಾದ ಕಲಾವಿದರು ಸಿನಿಮಾ ರಂಗದಲ್ಲಿ ಮಿಂಚಿದ್ದೇ ಹೆಚ್ಚು. ನಾಟಕ ರಂಗವು ಭಾವಗಳನ್ನು ಕಟ್ಟಿಕೊಡುತ್ತದೆ. ಅಭಿನಯಗಳಲ್ಲಿ ಭಾವನೆಗಳ ಅನಾವರಣಕ್ಕೆ ನಾಟಕ ರಂಗ ದೊಡ್ಡ ಕೊಡುಗೆ. ಈ ಹಿನ್ನೆಲೆಯಲ್ಲಿ ಬಂಟ್ವಾಳರು ನಾಟಕ, ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ಕ್ಷೇತ್ರಗಳ ದಟ್ಟ ಅನುಭವ ಅವರನ್ನು ನಿಜಾರ್ಥದ ಹಾಸ್ಯಗಾರರನ್ನಾಗಿ ರೂಪಿಸಿದೆ. ಯಕ್ಷಗಾನದ ಆರಂಭ ಕಾಲದಲ್ಲಿ ಕಲಿತ ಹಿಮ್ಮೇಳ ಜ್ಞಾನವೂ ಕಲಾಯಾನಕ್ಕೆ ಪೂರಕವಾಗಿದೆ.

(ಚಿತ್ರಗಳು : ರಾಮ್ ನರೇಶ್ ಮಂಚಿ)

 


Wednesday, July 10, 2024

ಪಡುಕಾನ ತಿಮ್ಮಯ್ಯ ಆಚಾರ್ ಸ್ಮೃತಿ - ಹೊಸ ತಲೆಮಾರಿಗೆ ಗತಿಸಿದ ಸಾಧಕರನ್ನು ಪರಿಚಯಿಸಬೇಕು - ನಾ. ಕಾರಂತ ಪೆರಾಜೆ


 

     “ಒಂದೊಂದು ಕಾಲಘಟ್ಟದಲ್ಲಿ ಯಕ್ಷಗಾನವನ್ನು ಮನಸಾ ಆರಾಧಿಸಿ, ಅದನ್ನು ಜನಮಾನಸದಲ್ಲಿ ಹಬ್ಬಿಸಿದ ಅನೇಕರು ಗತಿಸಿದ್ದಾರೆ. ಅವರ ಕೊಡುಗೆಗಳು ದಾಖಲಾಗಲಿಲ್ಲ. ದಾಖಲು ಮಾಡಬೇಕಾದ ಸಂಪನ್ಮೂಲಗಳು ವಿರಳವಾಗಿದ್ದುವು. ಅವರ ಸಾಂಗತ್ಯದಲ್ಲಿದ್ದ ಬೆರಳೆಣಿಕೆಯ ಮಂದಿ ಅಂತಹ ಹಿರಿಯರನ್ನು ಜ್ಞಾಪಿಸಿ, ಹೊಸ ತಲೆಮಾರಿಗೆ ಪರಿಚಯಿಸುವುದು ಕಲೆಯ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಬದ್ಧತೆಯಲ್ಲಿ ಮಾಡಬೇಕಾದ ಕಾಯಕವಾಗಿದೆ.” ಎಂದು ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಹೇಳಿದರು.

     ಅವರು ಪುತ್ತೂರು ಸನಿಹದ ದೊಡ್ಡಡ್ಕದ ಪಾಲೆಚ್ಚಾರು ಗೋವಿಂದ ನಾಯಕರ 'ಶಿವಕೃಪಾ ನಿವಾಸ'ದಲ್ಲಿ ಜರುಗಿದ ಕೀರ್ತಿಶೇಷ ಮದ್ದಲೆಗಾರ ಪಡುಕಾನ ತಿಮ್ಮಯ್ಯ ಆಚಾರ್ ಅವರ ಸ್ಮೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಪಡುಕಾನ ತಿಮ್ಮಯ್ಯರು ಗತಿಸಿ ನಾಲ್ಕು ದಶಕದ ಹತ್ತಿರವಾದರೂ ಅವರನ್ನು ಸ್ಮರಿಸಿ ಗೌರವಿಸುವ ಮೂಲಕ ಅವರ ಶಿಷ್ಯ ಗೋವಿಂದ ನಾಯಕರು ನಿಜಾರ್ಥದ ಗುರುವಂದನೆಯನ್ನು ಸಲ್ಲಿಸಿದ್ದಾರೆ” ಎಂದರು.

     ಯಕ್ಷಗಾನ ಹಿಮ್ಮೇಳದ ಭಾಷಾವಿದ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಅರ್ಥಧಾರಿ, ವೇಷಧಾರಿ ಗುಂಡ್ಯಡ್ಕ ಈಶ್ವರ ಭಟ್ ಜತೆಯಾಗಿ ಸಮಾರಂಭವನ್ನು ದೀಪಜ್ವಲನದ ಮೂಲಕ ಉದ್ಘಾಟಿಸಿದರು. ತಿಮ್ಮಯ್ಯ ಆಚಾರ್ ಅವರ ಚಿರಂಜೀವಿ ಕೃಷ್ಣಯ್ಯ ಆಚಾರ್ ಉಪಸ್ಥಿತರಿದ್ದರು. ಗೋವಿಂದ ನಾಯಕ್ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು. ದುರ್ಗಾಪ್ರಸಾದ್, ಗಣಪತಿ ನಾಯಕ್  ಅತಿಥಿಗಳನ್ನು ಗೌರವಿಸಿದರು.

     ಪೂರ್ವಾಹ್ನ ದೇವತಾರಾಧನೆಯ ಜತೆಗೆ ಬಾಲ ಕಲಾವಿದರಿಂದ ಸಂಗೀತ, ಸ್ಮೃತಿ ಕಲಾಪದ ಕೊನೆಗೆ 'ಶ್ರೀಕೃಷ್ಣ ರಾಯಭಾರ, ಸುಧನ್ವ ಮೋಕ್ಷ' ಪ್ರಸಂಗಗಳ ತಾಳಮದ್ದಳೆಗಳು ಜರುಗಿದ್ದುವು. ಕಲಾವಿದರಾಗಿ - ಪಾಲೆಚ್ಚಾರು ಗೋವಿಂದ ನಾಯಕ್, ಶ್ರೀಪತಿ ನಾಯಕ್ ಆಜೇರು, ಶ್ರೀಮತಿ ಅಮೃತಾ ಅಡಿಗ (ಭಾಗವತರು), ಪದ್ಯಾಣ ಶಂಕರನಾರಾಯಣ ಭಟ್, ಮುರಾರಿ ಕಡಂಬಳಿತ್ತಾಯ, ಕೌಶಿಕ್ ರಾವ್ ಪುತ್ತಿಗೆ, ಕೃಷ್ಣಪ್ರಕಾಶ ಉಳಿತ್ತಾಯ, ಪಿ.ಜಿ.ಜಗನ್ನಿವಾಸ ರಾವ್, ಮುರಳೀಧರ ಕಲ್ಲೂರಾಯ, ಕೃಷ್ಣಯ್ಯ ಆಚಾರ್, ಸತ್ಯನಾರಾಯಣ ಅಡಿಗ (ಚೆಂಡೆ, ಮದ್ದಳೆ), ಪಕಳಕುಂಜ ಶ್ಯಾಮ ಭಟ್, ಗುಂಡ್ಯಡ್ಕ ಈಶ್ವರ ಭಟ್, ನಾ. ಕಾರಂತ ಪೆರಾಜೆ, ಗುಡ್ಡಪ್ಪ ಬಲ್ಯ, ಭಾಸ್ಕರ ಶೆಟ್ಟಿ ಸಾಲ್ಮರ, ಕೇಶವ ಭಟ್ ಕೇಕಣಾಜೆ, ಅಶೋಕ ಸುಬ್ರಹ್ಮಣ್ಯ ಭಟ್ ಪೆರುವಡಿ, ಸಚ್ಚಿದಾನಂದ ಪ್ರಭು (ಅರ್ಥದಾರಿಗಳು) ಭಾಗವಹಿಸಿದ್ದರು.