Saturday, December 4, 2010

'ಮಹಿಳಾ ಯಕ್ಷಧ್ವನಿ'ಗೆ ಐದರ ಸಡಗರ

ಪುತ್ತೂರು ಬೊಳುವಾರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘಕ್ಕೆ ಈಗ ಐದರ ಸಡಗರ. ಇಪ್ಪತ್ತೊಂದು ಮಂದಿಯ ತಂಡವು ಕನ್ನಾಡಿನಾದ್ಯಂತ ಎಂಭತ್ತಕ್ಕೂ ಮಿಕ್ಕಿ ತಾಳಮದ್ದಳೆಗಳನ್ನು ಪ್ರಸ್ತುತಪಡಿಸಿದೆ. ಒಂದು ಕಾಯಕ್ರಮದಿಂದ ಮತ್ತೊಂದಕ್ಕೆ ಗುಣಮಟ್ಟದಲ್ಲಿ 'ಬೆಳವಣಿಗೆ'ಯನ್ನು ತೋರಿಸುತ್ತಿದ್ದು, ಸಾಕಷ್ಟು ಪುರಸ್ಕಾರಗಳನ್ನು ಪಡೆದಿದ್ದಾರೆ. ತಾಳಮದ್ದಳೆಯೇ ಉಪಾಧಿಯಾಗಿ ಮನೆ-ಮನೆಗಳಲ್ಲಿ ಆರೋಗ್ಯಕರ ಬಾಂಧವ್ಯ ವೃದ್ಧಿಸಿದೆ.
’ತಾಯಿ ಮೊದಲ ಗುರು. ಮನೆಯೇ ಪಾಠಶಾಲೆ.’ ಗುರುವಿನ ಸ್ಥಾನದಲ್ಲಿರುವ ತಾಯಿ ಬದುಕಿನ ಸುಭಗತೆಯನ್ನು ರೂಢಿಸಿಕೊಳ್ಳದಿದ್ದರೆ ಮಣ್ಣಿನ ಮುದ್ದೆಯಂತಿರುವ ಮಗುವಿಗೆ ರೂಪವನ್ನು ಹೇಗೆ ಕೊಟ್ಟಾಳು? ವಾಹಿನಿಯೊಂದರಲ್ಲಿ ಮಾತಿನ ಮಧ್ಯೆ ಹಾದು ಹೋದ ಸೊಲ್ಲಿದು. ಪುತ್ತೂರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ
ಕಲಾ ಸಂಘದ ತಾಳಮದ್ದಳೆಯನ್ನು ಆಲಿಸಿದಾಗ, ಮನನಿಸಿಕೊಂಡಾಗ ಆಗಾಗ ಮಿಂಚಿ ಮರೆಯಾಗುವ ಮಾತಿದು.

ಈ ಸುಭಗತೆಯ ರೂಢನೆ ಹೇಗೆ? ಕೆಲವರಿಗಿದು ಜನ್ಮದತ್ತ. ಮತ್ತೆ ಕೆಲವರಿಗೆ ಸ್ವ-ರೂಢಿ. ಇನ್ನೂ ಕೆಲವರಿಗೆ ಸ್ವ-ಆರ್ಜನೆ. ಒಟ್ಟೂ ಫಲಿತಾಂಶ ಮನಕ್ಕೆ-ಮನೆಗೆ-ಮಗುವಿಗೆ. ಇದು ಕಾಲದ ಅನಿವಾರ್ಯತೆ.

ಕಾಲದ ವೇಗಕ್ಕೆ ಯಕ್ಷಗಾನದಂತಹ ಸಮೃದ್ಧ ಕಲೆಗಳು ಬದುಕಿನಲ್ಲಿ ಕಳೆದುಹೋಗುತ್ತಿದೆ. ಒಂದು ಕಾಲಮಾನದಲ್ಲಿ ಕಲೆಗಳು ಬದುಕಿಗಂಟದಿದ್ದರೆ, ಮತ್ತೆಂದೂ ಅವು ಹತ್ತಿರ ಸುಳಿಯವು. ಅವು ಸುಳಿಯದಿದ್ದರೆ ಬದುಕಿನಲ್ಲಿ ಸುಭಗತೆ ಎಲ್ಲಿಂದ?

ಈ ಅಜ್ಞಾತ ಸತ್ಯ ಹೇಳುವುದಕ್ಕೆ ಬಾರದು, ಬರೆಯುವುದಕ್ಕೆ ಬಾರದು. ಅನುಭವಿಸಬೇಕು, ಅನುಭವಿಸಲೇಬೇಕು. ತಾಯಿ ಯಕ್ಷಗಾನ ಆರ್ಥವನ್ನು ಹೇಳಿದಾಗ ಮಗುವಿನೊಳಗೆ ಅವ್ಯಕ್ತವಾಗಿ ಈ ಯಕ್ಷಗುಂಗಿನ ಬೀಜ ಸೇರಿಬಿಡುತ್ತದೆ, ಮೊಳಕೆಯೊಡೆಯುತ್ತದೆ. ತಾಯಿಯ ಪೋಷಣೆಯಂತೆ ಮುಂದದು ಚಿಗುರೊಡೆಯುತ್ತದೆ. ಒಮ್ಮೆ ಚಿಗುರೊಡೆದರೆ ಮತ್ತೆ ಪೋಷಣೆ ಮಾತ್ರ ಸಾಕು.

ಪುತ್ತೂರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ತಾಳಮದ್ದಳೆ ಈ ಹಿನ್ನೆಲೆಯಲ್ಲಿ ನೋಡಿದಾಗ ಅದಕ್ಕೆ ಎತ್ತರದ ಸ್ಥಾನ. ಈಗದಕ್ಕೆ ಪಂಚವರ್ಷೀಯ ಸಂಭ್ರಮ. ಐದು ವರುಷ ಪೂರ್ತಿ ಹೂವಿನದ್ದೇ ದಾರಿ. ತಾಳಮದ್ದಳೆಯ ಕುರಿತು ವಿಮರ್ಶೆಗಳು ನಡೆಯುತ್ತಿವೆ. 'ನಾನೂ ಅರ್ಥಧಾರಿಯಾಗಬೇಕು' ಎಂಬ ತುಡಿತ ಅಡುಗೆ ಮನೆಯಲ್ಲಿ ಮೊಳಕೆಯೊಡೆಯುತ್ತಿದೆ. ಇದೊಂದು ಉತ್ತಮ ಬೆಳವಣಿಗೆ. ಚೆಂಡೆ-ಮದ್ದಳೆಯ ಸದ್ದು ಹರಟೆಯಾಗುವವರೂ(!) ಕೂಡಾ, 'ಮಹಿಳೆಯರ ತಾಳಮದ್ದಳೆಯಲ್ವಾ, ಒಮ್ಮೆ ಕೇಳೋಣ' ಅನ್ನುವವರೂ ಇಲ್ಲದಿಲ್ಲ
ಮಹಿಳೆಯರ ತಂಡ ರೂಪೀಕರಣದ ರೂವಾರಿ ಹಿರಿಯ ಕಲಾವಿದ ಬರೆಪ್ಪಾಡಿ ಅನಂತಕೃಷ್ಣ ಭಟ್. ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಮತ್ತು ಕಾರ್ಯದರ್ಶಿ ಟಿ.ರಂಗನಾಥ್ ರಾವ್ ವೇಗದ ಚಾಲನೆ ನೀಡಿದರು.

ಇಲ್ಲಿ ಕಲಾವಿದೆಯರು ಉರು ಹೊಡೆದು 'ಗಿಳಿಪಾಠ' ಒಪ್ಪಿಸುವುದಲ್ಲ. ತಮಗೆ ನೀಡಿದ ಕರಡು ಅರ್ಥಗಳಿಗೆ, ತಮ್ಮ ಅಧ್ಯಯನದ ಹರಹು ಸೇರಿಸಿ ಪ್ರಸ್ತುತಿ. ಹಾಗಾಗಿ ಎರಡು ಗಂಟೆಗಳಿಗೆ ಸೀಮಿತವಾಗುತ್ತಿದ್ದ ಪ್ರದರ್ಶನವು ಮೂರೂ-ಮೂರುವರೆ ತನಕ ಲಂಬಿಸುವ ತಾಕತ್ತು ಮಹಿಳಾ ಅರ್ಥಧಾರಿಗಳಿಗಿದೆ.

ಬಹುತೇಕ ಎಲ್ಲಾ ಕಲಾವಿದೆಯರಲ್ಲಿ ಪ್ರಸಂಗ ಪುಸ್ತಕಗಳು, ಆಕರ ಗ್ರಂಥಗಳು, ಪೌರಾಣಿಕ ಪುಸ್ತಕಗಳು, ವೈಚಾರಿಕ ಪುಸ್ತಕಗಳ ಸಂಗ್ರಹದ ಆಸಕ್ತಿ ಎದ್ದು ಕಾಣುತ್ತಿದೆ. ಓದುವ ಪ್ರವೃತ್ತಿ ಆರಂಭವಾಗಿದೆ. ತಾಯಿ ಓದುತ್ತಿದ್ದಾಗ, ಮಕ್ಕಳು ಓದದೇ ಇರುತ್ತಾರೆಯೇ? ಒಂದಿಬ್ಬರು ಓದಲು ಶುರು ಮಾಡಿದಾಗ ಮಿಕ್ಕ ಸದಸ್ಯರು ಟಿವಿ ಆಫ್ ಮಾಡದೆ ಇದ್ದಾರೆಯೇ? ಒಮ್ಮೆ ಟಿವಿ ಆಫ್ ಆದರೆ ಬದುಕಿನ ಸುಭಗತೆಯ ಸ್ವಿಚ್ 'ಅನ್' ಆದಂತೆ!

'ಪಂಚವಟಿ' ಪ್ರಥಮ ಪ್ರಯೋಗದ ಪ್ರಸಂಗ. ಶ್ರೀಕೃಷ್ಣ ರಾಯಭಾರ, ಸುಧನ್ವ, ಪಟ್ಟಾಭಿಷೇಕ, ಚೂಡಾಮಣಿ, ಅತಿಕಾಯ, ಸುದರ್ಶನ.. ಹೀಗೆ ಹನ್ನೆರಡಕ್ಕೂ ಮಿಕ್ಕಿ ಪ್ರಸಂಗಗಳು. ಕನ್ನಾಡಿನಾದ್ಯಂತ ಸಂಚರಿಸಿದ ತಂಡ ಯಶಸ್ವೀ ಪ್ರದರ್ಶನ ನೀಡಿದೆ. 'ನಿಜಕ್ಕೂ ಆಶ್ಚರ್ಯವಾಗಿದೆ. ತಮ್ಮ ಕೋಮಲ ಸ್ವರವನ್ನು ಹಿಗ್ಗಾ-ಮುಗ್ಗಾ ದುಡಿಸಿಕೊಳ್ಳುವ ಪರಿ ಅನನ್ಯ' - ಧಾರವಾಡದಲ್ಲಿ ತಂಡದ ಪ್ರದರ್ಶನವನ್ನು ವೀಕ್ಷಿಸಿದ ಕಲಾವಿದ ಡಾ.ಪ್ರಕಾಶ್ ಭಟ್ ಉದ್ಘರಿಸಿದ ರೀತಿ.

ಪ್ರೇಮಲತಾ ಟಿ.ರಾವ್, ಶೋಭಿತಾ ಸತೀಶ್, ಶುಭಾ ಜೆ.ಸಿ.ಅಡಿಗ, ಪದ್ಮಾ ಕೆ.ಆರ್.ಆಚಾರ್ಯ, ವೀಣಾ ಕೊಳತ್ತಾಯ, ಉಮಾ ಡಿ. ಪ್ರಸನ್ನ.. ಹೀಗೆ ತಂಡದಲ್ಲಿ ಇಪ್ಪತ್ತೊಂದು ಮಂದಿ ಸದಸ್ಯರು. ಪ್ರಸಂಗ ಹೊಂದಿಕೊಂಡು ಕಲಾವಿದೆಯರ ಆಯ್ಕೆ. ಒಂದು ಪ್ರದರ್ಶನದಲ್ಲಿ ಒಬ್ಬರು ಕಲಾವಿದೆ ಗೈರು ಹಾಜರಾದರೆ ಇನ್ನೊಬ್ಬರು ಆ ಪಾತ್ರಕ್ಕೆ ಸಿದ್ಧರಾಗುವಷ್ಟು ಪಕ್ವತೆ. 'ಪಾತ್ರ ಚೆನ್ನಾಗಿ ಮೇಳೈಸಲಿದೆ.

Friday, November 5, 2010

ವಿಂಶತಿ ಸಡಗರದಲ್ಲಿ ಸಂಪಾಜೆ ಯಕ್ಷೊತ್ಸವ

ಸಂಪಾಜೆಯಲ್ಲಿ ಪ್ರತೀ ವರುಷ ನವೆಂಬರ್ ತಿಂಗಳಲ್ಲಿ ನಡೆಯುವ ಯಕ್ಷಗಾನವು ಕಲಾಸಕ್ತರಿಗೆ, ಕಲಾವಿದರಿಗೆ, ಯಕ್ಷಪ್ರೇಮಿಗಳಿಗೆ ಹಬ್ಬ! ಇಂದು ಬೇರೆ ಬೇರೆ ಕ್ಷೇತ್ರದಲ್ಲಿ ವಿವಿಧ ಹೂರಣದ 'ಮೇಳಗಳು' ನಡೆಯುತ್ತಿವೆ. ವಿಷಯಾಧಾರಿತವಾಗಿ ಅರಿವನ್ನು ಬಿತ್ತಲು ಮೇಳಗಳು ಸಹಕಾರಿ. ಯಕ್ಷಗಾನಕ್ಕೆ ಅದರದ್ದೇ ಆದ ಮೇಳಗಳು ಇವೆ. ಸಂಪಾಜೆಯ ಕಾರ್ಯಕ್ರಮವು 'ಸಮಾವೇಶ'ದ ಕಲ್ಪನೆಯಲ್ಲಿ ಮೈದಳೆಯುತ್ತದೆ.

ತಂತಮ್ಮ ನೆಚ್ಚಿನ ಕಲಾವಿದರ ರಂಗಾಭಿವ್ಯಕ್ತಿಯನ್ನು ರಂಗದಲ್ಲಿ ನೋಡುವ ಕುತೂಹಲ, ಪೈಪೋಟಿಗೆ ಸಾಕ್ಷಿಯಾಗುವ ಕೆಲವರು, ಭಾಗವತರ ಹಾಡಿನ ರಸಾಸ್ವಾದನೆಗಾಗಿಯೇ ಬರುವವರು, ಮದ್ದಳೆ-ಚೆಂಡೆಯ ನಾದ ಕೇಳುವುದಕ್ಕಾಗಿಯೇ ಮುಗಿಬೀಳುವ ಒಂದಷ್ಟು ಮಂದಿ. ಇವರ ಮಧ್ಯೆ ಎಲ್ಲವನ್ನು ಸಮಗ್ರವಾಗಿ ಸ್ವೀಕರಿಸುವ ವಿಮರ್ಶಾ ಮನಸ್ಸುಗಳು. ಕಲಾವಿದರನ್ನು ಮಾತನಾಡಿಸಲೆಂದೇ ಬರುವ ಅಭಿಮಾನಿ ಬಳಗ - ಹೀಗೆ ಬೇರೆ ಬೇರೆ ಆಸಕ್ತಿಗಳ ಕಲಾಸಕ್ತರು ಒಂದೇ ಸೂರಿನಡಿ ಕಲೆಯುತ್ತಾರೆ. ಮನಸಾ ನಲಿಯುತ್ತಾರೆ.

ಪರಸ್ಪರ ಸಿಕ್ಕಾಗ 'ನೀವು ಸಂಪಾಜೆಗೆ ಹೋಗಿಲ್ವಾ' ಎಂಬಲ್ಲಿಂದ ಮಾತುಕತೆ ಶುರು. ಹೋಗಿಲ್ಲ ಎಂದಾದರೆ 'ನೀವೆಂತ ಜನ ಮಾರಾಯ್ರೆ. ಒಳ್ಳೆಯ ಆಟ ಮಿಸ್ ಮಾಡಿಕೊಂಡ್ರಿ' ಎಂಬ ಸಾತ್ವಿಕ ಬೈಗಳು. ಯಕ್ಷಗಾನದ ಕುರಿತಾದ ಅಭಿಮಾನ, ಪ್ರೀತಿಗಳ ಪ್ರಕಟೀಕರಣದ ಸ್ಯಾಂಪಲ್ಗಳಿವು. ಯಕ್ಷೊತ್ಸವ - ಕೇವಲ ಆಟಕ್ಕಾಗಿ ಅಟವಲ್ಲ.

ಒಂದರ್ಥದಲ್ಲಿ ಕಲಾವಿದರ 'ಮೇಳ' (ಸಮಾವೇಶ). ಪ್ರಸಂಗವನ್ನಾಧರಿಸಿ ತೆಂಕು-ಬಡಗು ತಿಟ್ಟುಗಳ 'ಕ್ವಾಲಿಟಿ' ಕಲಾವಿದರ ಸಮ್ಮಿಲನ. ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುವ, ಆತಿಥ್ಯ ನೀಡುವ, ಗೌರವಿಸುವ ಸಂಘಟಕರು ತೆರೆಮರೆಯಲ್ಲೇ ಇರುತ್ತಾರೆ. ಸಂಜೆಯಿಂದ ಆರಂಭವಾದ ಯಕ್ಷಾಗಾನೀಯ ವಾತಾವರಣ ಆರುವುದು ಮರುದಿನ ಸೂರ್ಯೋದಯದ ಬಳಿಕವೇ. ಎಂದೂ ಕೂಡಾ ಖಾಲಿ ಆಸನಗಳನ್ನು ಸಂಪಾಜೆಯ ಯಕ್ಷೊತ್ಸವ ಕಂಡದ್ದೇ ಇಲ್ಲ!

ಆರಂಭದಿಂದಲೂ ಯಕ್ಷೊತ್ಸವಕ್ಕೆ ಡಾ.ಕೀಲಾರು ಗೋಪಾಲಕೃಷ್ಣಯ್ಯ ಅವರ ಸಾರಥ್ಯ. ಅವರು ವಿಧಿವಶರಾದ ಬಳಿಕ 'ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ-ಸಂಪಾಜೆ' ಎಂಬ ಟ್ರಸ್ಟ್ ರೂಪೀಕರಣದ ಮೂಲಕ ಸಾಂಸ್ಥಿಕ ರೂಪ. ಈ ಟ್ರಸ್ಟಿನ ಮೂಲಕ ಯಕ್ಷೊತ್ಸವ. ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಮತ್ತು ಪ್ರೋತ್ಸಾಹ ರೂಪದ ದೇಣಿಗೆ ಪ್ರದಾನ. ಕಲಾವಿದರಿಗೆ, ವೈದಿಕರಿಗೆ ಸಂಮಾನ. ಜತೆಗೆ ಆರೋಗ್ಯ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ. ಆದ್ಯತೆಯ ಮೇರೆಗೆ ಸಂಘ-ಸಂಸ್ಥೆಗಳಿಗೆ ಆರ್ಥಿಕ ಸಹಕಾರ. ದೇವಸ್ಥಾನ, ಮಠ, ಮಂದಿರ, ವೃದ್ದಾಶ್ರಮ, ಅನಾಥಾಶ್ರಮಗಳ ಅಭಿವೃದ್ಧಿಯತ್ತ ಒಲವು. ಅಶಕ್ತರಿಗೆ ನೆರವು. ಯಕ್ಷಗಾನ ಸಂಬಂಧಿ ಪ್ರಕಟಣೆಗಳು. ಹೀಗೆ ಹಲವು ಕ್ಷೇತ್ರಗಳಿಗೆ ಆರ್ಥಿಕ ಅಸರೆ.

ಈ ಎಲ್ಲಾ ಆರ್ಥಿಕ ಪ್ರೋತ್ಸಾಹಗಳನ್ನು ನೀಡಿದಲ್ಲಿಗೆ ಟ್ರಸ್ಟ್ ಕೆಲಸ ಮುಗಿಯುವುದಿಲ್ಲ. ಅದರ 'ಫಾಲೋಅಪ್' ಕೂಡಾ ಜತೆಜತೆಗೆ ನಡೆಯುತ್ತದೆ. ಕೊಡಲ್ಪಟ್ಟ ದೇಣಿಗೆ ಸರಿಯಾದ ರೀತಿಯಲ್ಲಿ ವಿನಿಯೋಗವಾಗಬೇಕೆಂಬ ಕಾಳಜಿ. ಈ ಕೊಡುಗೆಗಳ ಹಿಂದೆ ಜಾತಿ-ಧರ್ಮಗಳ ಸೋಂಕಿಲ್ಲ. ಅಂತಸ್ತುಗಳ ತಾಳ-ಮೇಳವಿಲ್ಲ. ಯಾವುದೇ ರಾಜಕೀಯ-ವಶೀಲಿಗಳ ಟಚ್ ಇಲ್ಲ. ಇಲ್ಲಿರುವುದು ಕಲೆಯ ಆರಾಧನೆ ಮಾತ್ರ.

ಶೇಣಿ, ಸಾಮಗ, ನೆಡ್ಲೆ ನರಸಿಂಹ ಭಟ್.. ಮೊದಲಾದ ಹಿರಿಯರಿಂದ ಆರಂಭವಾಗಿ ಸಮಕಾಲಿನ ಸೀನಿಯರ್ ಕಲಾವಿದರ ವರೆಗೆ ನೀಡಲ್ಪಟ್ಟ ಸಂಮಾನವು 'ರಾಜ್ಯ ಪ್ರಶಸ್ತಿ'ಗಿಂತಲೂ ಮೇಲು. ಯಾಕೆಂದರೆ ಪ್ರಶಸ್ತಿ ನೀಡಿಕೆಯ ಹಿಂದೆ ಒಳ್ಳೆಯ ಸದುದ್ದೇಶವಿದೆ. ಗೌರವವಿದೆ. ಕಲಾವಿದರ ಬಗ್ಗೆ ಆದರವಿದೆ. ಸಂಮಾನವನ್ನು ಪಡೆದ ಕಲಾವಿದನಿಗೂ ಸಾರ್ಥಕ ಭಾವ.

ಟ್ರಸ್ಟಿನ ಎಲ್ಲಾ ಚಟುವಟಿಕೆಯ ಹಿಂದಿನ ರೂವಾರಿ ಡಾ.ಕೀಲಾರ್ ಅವರ ಪುತ್ರ ಕೆ.ಜಿ.ರಾಜಾರಾಂ ಭಟ್ ಮತ್ತು ಪುತ್ರಿ ಸುಮನಾ ಶ್ಯಾಂ ಭಟ್. ಟ್ರಸ್ಟಿನ ಸಲಹೆಗಾರರಾಗಿ ಟಿ. ಶ್ಯಾಮ ಭಟ್ ಒಟ್ಟೂ ವ್ಯವಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. 'ತೀರಾ ಸಂಪ್ರದಾಯವಲ್ಲದ, ಹಾಗೆಂತ ತೀರಾ ಆಧುನಿಕವಲ್ಲದ ಯಕ್ಷಗಾನವನ್ನು ವರ್ತಮಾನದಲ್ಲಿ ಹೇಗುಂಟೋ ಹಾಗೆ ಪ್ರದರ್ಶಿಸುವುದು ಆಶಯ' ಎನ್ನುತ್ತಾರೆ ಟಿ.ಶ್ಯಾಮ ಭಟ್.

ಈ ವರುಷದ ಯಕ್ಷೊತ್ಸವವು ನವೆಂಬರ್ 6, ಶನಿವಾರ ಪೂರ್ವಾಹ್ನ ಆರಂಭಗೊಂಡು, ಮರುದಿನ ಸೋರ್ಯೋದಯದ ತನಕ ನಡೆಯಲಿದೆ. ಪೂಜನೀಯ ಯತಿಗಳ ಉಪಸ್ಥಿತಿಯಲ್ಲಿ ಇಪ್ಪತ್ತನೇ ವರುಷದ ಸಮಾರಂಭದಲ್ಲಿ ಇಪ್ಪತ್ತು ಮಂದಿ ಹಿರಿಯ ಕಲಾವಿದರಿಗೆ 'ಸಾಧಕ ಪ್ರಶಸ್ತಿ', ಹನ್ನೆರಡು ಮಂದಿಗೆ 'ವಿದ್ವತ್ ಪ್ರಶಸ್ತಿ', 'ಶೇಣಿ ಪ್ರಶಸ್ತಿ', 'ವಿಂಶತಿ ಯಕ್ಷೊತ್ಸವ ಪ್ರಶಸ್ತಿ'ಗಳ ಪ್ರದಾನ ನಡೆಯಲಿದೆ.ಅಪರಾಹ್ನ ಗಂಟೆ 1ರಿಂದ 'ಬೇಡರ ಕಣ್ಣಪ್ಪ, ಸುಧನ್ವಾಜರ್ುನ, ವಿಶ್ವಾಮಿತ್ರ ಪ್ರತಾಪ, ಜ್ವಾಲಾ-ಜಾಹ್ನವಿ, ಮಹಿಷೋತ್ಪತ್ತಿ' ಯಕ್ಷಗಾನ ಪ್ರದರ್ಶನ ನಡೆಯಲಿದೆ.

'ಇದೊಂದು ಕಲೋತ್ಸವ. ಯಕ್ಷಗಾನಕ್ಕೆ ಉತ್ಸವ. ಕಮ್ಮಟ, ವಿಚಾರಗೋಷ್ಠಿಗಳ ಹಿನ್ನೆಲೆಯಲ್ಲಿ ಇಲ್ಲಿನ ಪ್ರದರ್ಶನವನ್ನು ವೀಕ್ಷಿಸಬಾರದು' - ಯಕ್ಷೊತ್ಸವ ಪ್ರದರ್ಶನವನ್ನು ವಿಮಶರ್ೆಯ ಕಣ್ಣಿಂದ ನೋಡುತ್ತಾರೆ ಉಜಿರೆ ಅಶೋಕ ಭಟ್.

Friday, October 22, 2010

ಯಕ್ಷಗಾನ ಭಾಗವತ ತಿಂಬರ ಗೋಪಾಲಕೃಷ್ಣ ಮಯ್ಯ

ನಿವೃತ್ತ ಅಧ್ಯಾಪಕ, ಯಕ್ಷಗಾನ ಕಲಾವಿದ ಮಂಗಲ್ಪಾಡಿ ತಿಂಬರ ಗೋಪಾಲಕೃಷ್ಣ ಮಯ್ಯರು ಅಕ್ಟೋಬರ್ 19ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಎಂಭತ್ತು ವರುಷ ವಯಸ್ಸಾಗಿತ್ತು.

ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಬಹುಕಾಲ ಸೇವೆ ಸಲ್ಲಿಸಿದ ಮಯ್ಯರು ಖ್ಯಾತ ಯಕ್ಷಗಾನ ಭಾಗವತರಾಗಿದ್ದರು. ತನ್ನ ಕಂಚಿನ ಕಂಠ ಮತ್ತು ಪ್ರಸಂಗದ ಹಿಡಿತಗಳಿಂದ ಅವರ ಭಾಗವತಿಕೆಯಲ್ಲಿ ಆಟಗಳು ಯಶಸ್ಸಾಗುತ್ತಿದ್ದುವು. ವೇಷಧಾರಿಯಾಗಿಯೂ ಅನುಭವ. ದಿ.ಕುಂಬಳೆ ಶೇಷಪ್ಪ ಅವರ ನೇತೃತ್ವದಲ್ಲಿದ್ದ ಉಪ್ಪಳ ಶ್ರೀ ಭಗವತಿ ಮೇಳಕ್ಕೆ ಬಹುಕಾಲ ಅವರ ಸೇವೆ ಸಲ್ಲಲ್ಪಟ್ಟಿತ್ತು. ಅಮ್ಟಾಡಿ ಮೇಳದಲ್ಲೂ ತಿರುಗಾಟ ಮಾಡಿದ್ದರು.

ತನ್ನ ಇಳಿ ವಯಸ್ಸಲ್ಲೂ ಸ್ಥಳೀಯ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಹಳ್ಳಿಯ ಮಕ್ಕಳಿಗೆ ವಿದ್ಯಾಭ್ಯಾಸ ಸಿಗಬೇಕೆಂಬ ದೃಷ್ಟಿಯಿಂದ ಕೋಡಿಬೈಲು ಎಂಬಲ್ಲಿ ಶಾಲೆಯೊಂದನ್ನು ಆರಂಭಿಸಿದ ಹೆಗ್ಗಳಿಕೆ ಇವರದು. ಇವರ ಪತ್ನಿ ಜಯಲಕ್ಷ್ಮೀ ಮಯ್ಯ. ಮಂಗಲ್ಪಾಡಿ ಗ್ರಾಮ ಪಂಚಾಯತಿನ ಪ್ರತಾಪನಗರದ ಸದಸ್ಯೆ.

ಅಗಲಿದ ಚೇತನಕ್ಕೆ ಕಂಬನಿ. ಅಕ್ಷರ ನಮನ.

Monday, October 18, 2010

ಸಂಪಾಜೆ ಯಕ್ಷೊತ್ಸವಕ್ಕೆ ಇಪ್ಪತ್ತರ ಸಂಭ್ರಮ

ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸಾರಥ್ಯದಲ್ಲಿ ನಡೆಯುವ ಯಕ್ಷೊತ್ಸವಕ್ಕೆ ಈಗ ಇಪ್ಪತ್ತರ ಹರುಷ. 6 ನವೆಂಬರ್ 2010, ಶನಿವಾರ ಪೂರ್ವಾಹ್ನ ಗಂಟೆ 10 ಕ್ಕೆ ಸಂಪಾಜೆ ಕಲ್ಲುಗುಂಡಿ ಶಾಲಾ ವಠಾರದಲ್ಲಿ ಯಕ್ಷೊತ್ಸವದ ಶುಭಾರಂಭ.

ಘನ ಅಧ್ಯಕ್ಷತೆ : ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ
ಮಹಾಸ್ವಾಮಿಗಳವರು * ಆಶೀರ್ವಚನ : ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಮಹಾಸ್ವಾಮಿಗಳವರು, ಶ್ರೀ ಪೇಜಾವರ ಮಠ, ದಿವ್ಯ ಉಪಸ್ಥಿತಿ : ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಮಹಾಸ್ವಾಮಿಗಳವರು, ಶ್ರೀ ಸುಬ್ರಹ್ಮಣ್ಯ ಮಠ.

ಅಭಿನಂದನೆ : ಖ್ಯಾತ ಜ್ಯೋತಿಷಿ ಶ್ರೀ ವಳಕ್ಕುಂಜ ವೆಂಕಟ್ರಮಣ ಭಟ್ಟರಿಗೆ.
ಯಕ್ಷಗಾನ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ.
ಸಾವಯವ ಕೃಷಿ ತಜ್ಞೆ ಶ್ರೀಮತಿ ಸರವು ರತ್ನವೇಣಿ ರಾಮಭಟ್ ಇವರಿಗೆ

ಸಂಮಾನ : ಯಕ್ಷಗಾನ ಭಾಗವತ ಶ್ರೀ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ.

ಶೇಣಿ ಪ್ರಶಸ್ತಿ : ಯಕ್ಷಗಾನ ಅರ್ಥಧಾರಿ ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಇವರಿಗೆ.

ವಿಂಶತಿ ಯಕ್ಷೊತ್ಸವ ಪ್ರಶಸ್ತಿ :* ವೇ.ಮೂ.ಪರಕಜೆ ಗಣಪತಿ ಭಟ್ * ವೇ.ಮೂ.ಉಡುಪಮೂಲೆ ಗೋಪಾಲಕೃಷ್ಣ ಭಟ್ * ಖ್ಯಾತ ಜ್ಯೋತಿಷಿ ವೇ.ಮೂ.ಬೇಳ ಪದ್ಮನಾಭ ಶರ್ಮ * ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ * ಶ್ರೀ ಸೂರಿಕುಮೇರು ಗೋವಿಂದ ಭಟ್ * ಶ್ರೀ ಮಂಟಪ ಪ್ರಭಾಕರ ಉಪಾಧ್ಯ

ಕಲಾಸಾಧಕ ಪ್ರಶಸ್ತಿ:* ಶ್ರೀ ಕುಂಬಳೆ ಸುಂದರ ರಾವ್, ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ.

ವಿಂಶತಿತಮ ವಿದ್ವತ್ ಪ್ರಶಸ್ತಿ:
ಗೌರವಾನ್ವಿತರಾದ * ಪ್ರೊ: ಹೆರಂಜೆ ಕೃಷ್ಣ ಭಟ್ * ಪ್ರೊ: ಅಮೃತ ಸೋಮೇಶ್ವರ * ವೇ.ಮೂ.ಮಣಿಮುಂಡ ಮಹಾಲಿಂಗ ಉಪಾಧಾಯ * ವೇ.ಮೂ.ಉಚ್ಚಿಲ ಪದ್ಮನಾಭ ತಂತ್ರಿ * ಡಾ.ಎಂ.ಪ್ರಭಾಕರ ಜೋಶಿ * ವಿದ್ವಾನ್ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ * ವಿದ್ವಾನ್ ಕೆರೆಕೈ ಉಮಾಕಾಂತ ಭಟ್ * ವೇ.ಮೂ.ಪಳ್ಳತಡ್ಕ ವಿಶ್ವೇಶ್ವರ ಭಟ್ * ವಿದ್ವಾನ್ ಶಿಮಂತೂರು ನಾರಾಯಣ ಶೆಟ್ಟಿ * ಜ್ಯೋತಿಷಿ ಮಧೂರು ನಾರಾಯಣ ರಂಗಭಟ್ * ಜ್ಯೋತಿಷಿ ಚೇಕೋಡು ಸುಬ್ರಹ್ಮಣ್ಯ ಭಟ್ * ರಾಘವ ನಂಬಿಯಾರ್.

ವಿಂಶತಿತಮ ಕಲಾ ಸಾಧಕ ಪ್ರಶಸ್ತಿ:
ಶ್ರೀಗಳಾದ * ಅಗರಿ ರಘುರಾಮ ಭಾಗವತ * ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ * ತಲೆಂಗಳ ಗೋಪಾಲಕೃಷ್ಣ ಭಟ್ * ಗೋಪಾಲಕೃಷ್ಣ ಕುರೂಪ್ * ಮಾಂಬಾಡಿ ಸುಬ್ರಹ್ಮಣ್ಯ ಭಟ್ * ಕಡಂದೇಲು ಪುರುಷೋತ್ತಮ ಭಟ್ * ಪೆರುವೋಡಿ ನಾರಾಯಣ ಭಟ್ * ಮಿಜಾರು ಅಣ್ಣಪ್ಪ * ಸಕ್ಕಟ್ಟು ಲಕ್ಷ್ಮೀನಾರಾಯಣ * ಬಳ್ಳಂಬೆಟ್ಟು ಶೀನಪ್ಪ ಭಂಡಾರಿ * ಮಧೂರು ಗಣಪತಿ ರಾವ್ * ಮುಳಿಯಾಲ ಭೀಮ ಭಟ್ * ಹೊಸಹಿತ್ಲು ಮಹಾಲಿಂಗ ಭಟ್ * ಕೋಳ್ಯೂರು ನಾರಾಯಣ ಭಟ್ * ಮುಂಡ್ರುಕಜೆ ರಾಮಚಂದ್ರ ಭಟ್ * ಕುಡಾನ ಗೋಪಾಲಕೃಷ್ಣ ಭಟ್ * ಜಲವಳ್ಳಿ ವೆಂಕಟೇಶ ರಾವ್ * ಕುಂಜಾಲು ರಾಮಕೃಷ್ಣ * ಕೊಕ್ಕಡ ಈಶ್ವರ ಭಟ್ * ಪೆರುವಾಯಿ ನಾರಾಯಣ ಶೆಟ್ಟಿ.

ಅಭಿನಂದನಾ ಭಾಷಣ :
ಶ್ರೀ ಉಜಿರೆ ಅಶೋಕ ಭಟ್, ಶ್ರೀ ಜಿ.ಕೆ.ಭಟ್ ಸೇರಾಜೆ, ಉಡುವೆಕೋಡಿ ಸುಬ್ಬಪ್ಪಯ್ಯ, ವೇ.ಮೂ.ಹಿರಣ್ಯ ವೆಂಕಟೇಶ್ವರ ಭಟ್.

ಈ ಸಂದರ್ಭದಲ್ಲಿ
- ಭಾಗವತ ಶ್ರೀ ಪದ್ಯಾಣ ಗಣಪತಿ ಭಟ್ಟರು ಹಾಡುಗಾರಿಕೆಯ ಧ್ವನಿಸುರುಳಿ ಬಿಡುಗಡೆ.* ಶ್ರೀ ತಾರಾನಾಥ ಬಲ್ಯಾರ ಅವರ 'ಕಬ್ಬಿನ ಕೋಲು' ಕೃತಿ ಬಿಡುಗಡೆ.

ಮಧ್ಯಾಹ್ನ 1 ಗಂಟೆಯಿಂದ ಮರುದಿವಸ ಸೂರ್ಯೋದಯದ ತನಕ
ತೆಂಕು-ಬಡಗು ಕಲಾವಿದರ ಸಮ್ಮಿಳನದಲ್ಲಿ ಅಮೋಘ ಯಕ್ಷಗಾನ ಪ್ರದರ್ಶನ -
ಬೇಡರ ಕಣ್ಣಪ್ಪ, ಸುಧನ್ವಾರ್ಜುನ, ವಿಶ್ವಾಮಿತ್ರ ಪ್ರತಾಪ, ಜ್ವಾಲಾ-ಜಾಹ್ನವಿ, ಮಹಿಷೋತ್ಪತ್ತಿ

Friday, July 23, 2010

ಕುಂಬಳೆ, ಸೂರಿಕುಮೇರಿಗೆ ಯಕ್ಷ ಕಲಾನಿಧಿ ಪ್ರಶಸ್ತಿ

ಹೊಸದಿಲ್ಲಿಯ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ಸಂಸ್ಥೆಯು 2010ನೇ ಸಾಲಿನ 'ಯಕ್ಷ ಕಲಾನಿಧಿ' ಪ್ರಶಸ್ತಿಗಾಗಿ ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದರಾದ ಶ್ರೀ ಕುಂಬಳೆ ಸುಂದರ ರಾವ್ ಮತ್ತು ಶ್ರೀ ಸೂರಿಕುಮೇರು ಗೋವಿಂದ ಭಟ್ ಇವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ಅಕ್ಟೋಬರ್ 16ರಂದು ನಡೆಯಲಿದೆ. ಪ್ರಶಸ್ತಿಯು ಹನ್ನೆರಡು ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶಿತವಾಗಲಿದೆ. ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ಸಂಸ್ಥೆಯು ಕಳೆದ ಐದು ವರುಷಗಳಲ್ಲಿ ಶ್ರೀಗಳಾದ ಕಟೀಲು ಪುರುಶೋತ್ತಮ ಭಟ್, ಪೆರುವೋಡಿ ನಾರಾಯಣ ಭಟ್, ಮಿಜಾರು ಅಣ್ಣಪ್ಪ, ಮಲ್ಪೆ ರಾಮದಾಸ ಸಾಮಗ, ಕೋಳ್ಯೂರು ರಾಮಚಂದ್ರ ರಾವ್ ಇವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು

Thursday, April 29, 2010

ಮರೆಯಾದ ಮಾತಿನ 'ಮಾಣಿಕ್ಯ'!



ಹರಿದಾಸ ಮಲ್ಪೆ ರಾಮದಾಸ ಸಾಮಗ - 'ಸಣ್ಣ ಸಾಮಗ'ರು. ಇವರಣ್ಣ ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗ 'ದೊಡ್ಡ ಸಾಮಗ'ರು. ಇಬ್ಬರದೂ 'ದೊಡ್ಡ ವ್ಯಕ್ತಿತ್ವ'. ಅರ್ಥಗಾರಿಕೆಯಲ್ಲಿ 'ದೊಡ್ಡ ಹೆಜ್ಜೆ'. ಇವರ ಮಾತಿನ ಝರಿಯ ಮುಂದೆ ಮಾಣಿಕ್ಯದ ಪ್ರಭೆಯೂ ಮಸುಕಾಗುತ್ತಿತ್ತು! ಆದರೆ ಮಾತಿನ ಲೋಕದಲ್ಲೀಗ ಮೌನ! ಎಂಭತ್ತನಾಲ್ಕು ಸಂವತ್ಸರದ ಮಾತಿನ ಬದುಕಿಗೆ ವಿರಾಮ.

ರಾಮದಾಸ ಸಾಮಗರು - ಹರಿದಾಸರು. ಸಂಗೀತ ಅವರಿಗೆ ಖುಷಿ. ರಾಗ, ತಾಳ, ಲಯಗಳಲ್ಲಿ ಬಿಗಿ. ಒಂದು ಕಾಲಘಟ್ಟದಲ್ಲಿ ಮೃದಂಗವಾದಕರು. ಇವೆಲ್ಲವೂ ಹರಿಕೀರ್ತನೆ(ಕಥೆ)ಯಲ್ಲಿ ಮೇಳೈಸುತ್ತಿದ್ದುವು.

ಸಾಮಗರದು ಕಾವ್ಯಪ್ರಧಾನ ಅರ್ಥಗಾರಿಕೆ. ಕಾವ್ಯಾತ್ಮಕ ಶೈಲಿ-ವಾಕ್ಸರಣಿ. ಭಾವಾತ್ಮಕ ಧೋರಣೆ. ಧರ್ಮಶಾಸ್ತ್ರದ ಕಾವ್ಯಾತ್ಮಕ ಜ್ಞಾನ. ಶಬ್ಧಾಲಂಕಾರ ಹೆಚ್ಚು. ವೇಗದ ನುಡಿ.

ತಾಳಮದ್ದಳೆಯಲ್ಲಿ ಹಿಮ್ಮೇಳವನ್ನು ಪೂರ್ತಿ 'ಅನುಭವಿಸುವ' ಅರ್ಥಧಾರಿ. ಭಾಗವತಿಕೆ, ಚೆಂಡೆ, ಮದ್ದಳೆಯೊಂದಿಗೆ ಸಾಗುತ್ತದೆ-ಅಭಿವ್ಯಕ್ತಿ ಸಂಸಾರ. ಲಹರಿ ಬಂದಾಗ ಭಾಗವತರೊಂದಿಗೆ 'ಭಾಗವತ'ರಾಗುವುದೂ ಇದೆ. ರಂಗದಲ್ಲಿದ್ದಷ್ಟೂ ಹೊತ್ತು ಪಾತ್ರ - ಪಾತ್ರಧಾರಿ ಒಂದೇ.

ಸಾಮಗರ ವೇಷಭೂಷಣ - ಜುಟ್ಟು, ಜುಬ್ಬಾ, ಕಚ್ಚೆ, ಶಾಲು. ಆಧುನಿಕದ ಸೋಂಕಿಲ್ಲ. ಕಚ್ಚೆಯ 'ಮುನ್ನಿ'ಯ ತುದಿಯನ್ನು ಎಡಗೈ ಮೇಲೆ ಬಿಟ್ಟು ಮಾತಿನ ಮಂಚವನ್ನು ಏರುವುದೇ ಸಂಭ್ರಮ! ಮೊದಲ ವಂದನೆ ಭಾಗವತರಿಗೆ. ಅದೂ ಪೂರ್ಣಪ್ರಮಾಣದ ನಮಸ್ಕಾರ. ಇದು ಶ್ರಾವ್ಯ ವೇದಿಕೆಯ 'ದೃಶ್ಯ'. ತನ್ನದೇ ಆದ ಪರಂಪರೆ. ವೇದಾಂತ, ತರ್ಕ, ಮಂಡನೆ, ಕಥೆ-ಉಪಕಥೆಗಳಿಂದ ಆವರಿಸಿದ 'ಸ್ವಗತ'. ಯಾವುದೂ ಪೂರ್ವ ನಿರ್ಧರಿತವಲ್ಲ, ಅಲ್ಲಲ್ಲಿನ ಸ್ಪುರಣೆ.
ಪಾತ್ರ ವೈಭವ
ಕೂಡ್ಲು, ಮೂಲ್ಕಿ, ಕರ್ನಾಟಕ, ಇರಾ, ಸುರತ್ಕಲ್, ಕದ್ರಿ, ಬಪ್ಪನಾಡು, ಅಮೃತೇಶ್ವರೀ, ಶಿರಸಿ, ಪೆರ್ಡೂರು ಮೇಳಗಳಲ್ಲಿ ವೇಷಧಾರಿಯಾಗಿ ವ್ಯವಸಾಯ. ಬಯಲಾಟದ ಅರ್ಥಗಾರಿಕೆಗೆ ಸೊಗಸು ತಂದ ದಿನಗಳೀಗ ನೆನಪು. ನಾಟ್ಯ ಕೊರತೆಯನ್ನು 'ಮಾತಿನ ಕುಣಿತ'ದಿಂದ ತುಂಬಿದ್ದಾರೆ. ಪೂರ್ತಿ ರಂಗವನ್ನಾವರಿಸುವ ಮಾತು - ಸಹಜ ಅಂಗಾಭಿನಯ.

ಪಟ್ಟಾಭಿಷೇಕ ಪ್ರಸಂಗದ 'ದಶರಥ', ರುಕ್ಮಾಂಗದ ಚರಿತ್ರೆಯ 'ರುಕ್ಮಾಂಗದ', ಕರ್ಮಬಂಧದ 'ಭೀಷ್ಮ', ಬ್ರಹ್ಮಕಪಾಲದ 'ಈಶ್ವರ', ದಕ್ಷಾಧ್ವರದ 'ಶಿವ', ಅಕ್ಷಯಾಂಬರದ 'ಶಕುನಿ', ಪಾರಿಜಾತದ 'ಕೃಷ್ಣ', ಯಾವುದೇ ಪ್ರಸಂಗದ 'ರಾಮ'-'ಕೃಷ್ಣ' ಪಾತ್ರಗಳು ಮತ್ತು 'ಶಂತನು', 'ಉತ್ತರಕುಮಾರ', - ಮಾತಲ್ಲೇ ಮರುಹುಟ್ಟು ಪಡೆದಿವೆ. ಬಯಲಾಟದಲ್ಲಿ 'ವಿಶ್ವಾಮಿತ್ರ', 'ನಳ', 'ಹರಿಶ್ಚಂದ್ರ', 'ಕೈಲಾಸ ಶಾಸ್ತ್ರಿ', 'ಮಾಧವ ಭಟ್ಟ' ಪಾತ್ರಗಳಿಗೆ ಮುಗಿಬೀಳುವ ದಿನಗಳಿದ್ದುವು. ಕೋಳ್ಯೂರು ರಾಮಚಂದ್ರ ರಾವ್ ಮತ್ತು ಸಾಮಗರ 'ಯಕ್ಷದಾಂಪತ್ಯ'ವು ನಿಜದಾಂಪತ್ಯಕ್ಕೊಂದು ಆದರ್ಶ! ನಳ-ದಮಯಂತಿ, ಹರಿಶ್ಚಂದ್ರ-ಚಂದ್ರಮತಿಯರು ರಂಗದಲ್ಲಿ ಅತ್ತರೆ ಸಾಕು, ಪ್ರೇಕ್ಷಕರೂ ಕೂಡಾ ಕಣ್ಣೊರೆಸಿಕೊಳ್ಳುತ್ತಿದ್ದರು.

ತುಳು ಯಕ್ಷಗಾನವನ್ನು ಜ್ಞಾಪಿಸಿಕೊಳ್ಳಿ. 'ತುಳು' ಭಾಷೆಯನ್ನು ಅಲ್ಲಿ ಹುಡುಕಬೇಕು! ಸಾಮಗರು ನಿರ್ವಹಿಸಿದ ಪಾತ್ರಗಳು 'ತುಳು'ವಿಗೊಂದು ಸಂಭ್ರಮ. ಹೊಸಹೊಸ ಶಬ್ಧಗಳು. 'ತುಳುವರು ಹುಬ್ಬೇರುವಷ್ಟು ಭಾಷಾ ಪ್ರಯೋಗ ಅವರಿಗೆ ಸಿದ್ಧಿ. 'ಕೋಳ್ಯೂರು-ಸಾಮಗರ ಮತ್ತು 'ಸಾಮಗ-ಮಿಜಾರು ಅಣ್ಣಪ್ಪ ಹಾಸ್ಯಗಾರರ' ಅಂದಿನ ರಂಗಪಾತ್ರಗಳ ವೈಭವ ಒಂದು 'ತುಳು ಪಠ್ಯ'! ಕೋಟಿಚೆನ್ನಯ್ಯ ಪ್ರಸಂಗದ 'ಬುದ್ಧಿವಂತ', ತುಳುನಾಡ ಸಿರಿಯ 'ಕಾಂತುಪೂಂಜ', ಕಾಡಮಲ್ಲಿಗೆಯ 'ಉದಯವರ್ಮ' - ಮತ್ತೆ ಮತ್ತೆ ಕಾಡುವ ಪಾತ್ರಗಳು.
ಮಾತಿನ ದಿಂಙಣ
ಸಾಮಗರದು 'ಚಿಂತನೆ ಮತ್ತು ರಂಜನೆ'ಯ ಮಾತು. ಅರ್ಥಗಾರಿಯಲ್ಲಿ 'ಚಿತ್ರಕ ಸಾಮಥ್ರ್ಯ'. ಒಂದು ವಸ್ತುವಿಷಯವನ್ನು ತಂದು ಕಣ್ಣಿಗೆ ಕಟ್ಟುವಂತೆ ಸನ್ನಿವೇಶವನ್ನು ನಿರ್ಮಿಸುವ ಅಪೂರ್ವತೆ.' ಮೂಲದಲ್ಲಿ ಕಥೆ ಒಂದು, ಪ್ರಸಂಗದಲ್ಲಿ ಇನ್ನೊಂದು. ಇಂತಹ ವೈರುಧ್ಯದ ಹೊತ್ತಲ್ಲಿ ವಾದ-ವಿವಾದಗಳು ಏರ್ಪಟ್ಟರೆ ತುದಿಮುಟ್ಟುವುದು ತ್ರಾಸ. ಈ ಎರಡನ್ನೂ ತಮ್ಮ ಅರ್ಥಗಾರಿಕೆಯಲ್ಲಿ ಸಮನ್ವಯ ಮಾಡಿ, ಪಾತ್ರಕ್ಕೆ ನ್ಯಾಯ ಸಲ್ಲಿಸುವತ್ತ ಗಮನ. ಮೊಗೆಮೊಗೆದು ಉಂಡ ಜ್ಞಾನದ ಫಲ!

ಸಾಮಗರ ಅರ್ಥಗಾರಿಕೆ ಅಂದರೆ 'ವ್ಯಾಕರಣ ಪಾಠ' ಎಂದು ವಿನೋದಕ್ಕೆ ಹೇಳುವುದುಂಟು. ಇಲ್ಲಿ ಪ್ರಜ್ಞಾಪೂರ್ವಕವಾದ ಶುದ್ಧ ಕನ್ನಡ. 'ಶುದ್ಧ ಪ್ರಯೋಗಗಳು ಅರ್ಥಗಾರಿಕೆಯಲ್ಲಿ ಬರಬೇಕು' ಎನ್ನುತ್ತಾ 'ಇದು ಕನ್ನಡ ಭಾಷೆ ಉಳಿಸಲು ಯಕ್ಷಗಾನದ ಕೊಡುಗೆ' ಎಂದು ಪ್ರತಿಪಾದಿಸುತ್ತಿದ್ದರು.

ಸಾಮಾನ್ಯವಾಗಿ ಅರ್ಥಧಾರಿ ಎಲ್ಲಿ ತಪ್ಪುತ್ತಾನೋ - ಇದಿರು ಅರ್ಥಧಾರಿ ಕಾಯುತ್ತಿರುತ್ತಾನೆ - ಆಕ್ರಮಣ ಮಾಡಲು! ಸಾಮಗರು ಇದಿರಿದ್ದಾಗ ಸಣ್ಣ ಅರ್ಥಧಾರಿ ಬೆವರಬೇಕಾದ್ದಿಲ್ಲ. ಒಂದು ವೇಳೆ ತಪ್ಪಿದರೂ, ತಾನೇ ಸರಿಪಡಿಸುತ್ತಾ, ತನ್ನ ಪಾತ್ರವನ್ನು ಕೆಡಿಸಿಕೊಂಡಾದರೂ ಇದಿರಿನ ಪಾತ್ರವನ್ನೂ ಪೋಶಿಸುವ ಗುಣ. ಮನೋಭಂಗ ಮಾಡುವುದಿಲ್ಲ. ಇವರಿಂದಾಗಿ ಅಸಂಖ್ಯ ಪ್ರತಿಪಾತ್ರಗಳು ವಿಜೃಂಭಿಸಿವೆ.

ವಾದ-ಪ್ರತಿವಾದಗಳ ಹರಹು ತನ್ನ ನಿರ್ಣಯದ-ದಾರಿಯ ಚೌಕಟ್ಟಿನೊಳಗೆ ಸಂಚರಿಸುತ್ತವೆ. ಒಣಚರ್ಚೆಗಳಿಲ್ಲ. ಪಾತ್ರದ ಗೌರವವುಳಿಸಿಕೊಂಡೇ ಮಾತು. ಕೆಲವೊಂದು ಸಲ ವೀರರಸದ ಸಂದರ್ಭದಲ್ಲಿ ಕೆರಳುವಾಗ ಹಿಮ್ಮೇಳವೂ ಒಂದು ಕ್ಷಣ ಬೆರಗಾಗುತ್ತಿತ್ತು!

ಸಾಮಗರ ಅರ್ಥದಲ್ಲಿ ಚಿಂತನಗ್ರಾಹ್ಯ ವಿಚಾರಗಳ ಮಳೆ! ಉದಾ. 'ಅಮರಾವತಿಯೋ, ಅಮರವತಿಯೋ' ದ್ವಾರಾವತಿಯೋ, ದ್ವಾರವತಿಯೋ..ಏನೋ..ನನಗೆ ಗೊತ್ತಿಲ್ಲ' ಅಂತ ನಿಲ್ಲಿಸಿಬಿಡುತ್ತಾರೆ. ಅಂದರೆ ಅವರಿಗೆ ಗೊತ್ತಿಲ್ಲ ಎಂದಲ್ಲ. ಅಷ್ಟಕ್ಕೆ ನಿಲ್ಲಿಸಿ ಮುಂದಕ್ಕೆ ಹೋಗುತ್ತಾರೆ. ಇದನ್ನು 'ವಿನೋದ -ಗೇಲಿ'ಯಾಗಿ ಸ್ವೀಕರಿಸಿದವರೇ ಹೆಚ್ಚು. ಅದಕ್ಕೆ ಹಾಗೊಂದು ಅರ್ಥ ಇದೆಯಾ ಅಂತ ಆಲೋಚಿಸಿದವರು ಕಡಿಮೆ.

ನಮ್ಮಲ್ಲಿ ಪ್ರತಿಭೆಯನ್ನು ಒಪ್ಪಲು, ಪ್ರಶಂಸಿಸಲು ಮಾತಿನ ದಾರಿದ್ರ್ಯ ಕಾಣುತ್ತೇವೆ. ಒಬ್ಬ ಅರ್ಥಧಾರಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಾಗ, ಕೀಳರಿಮೆಯನ್ನು ಆವಾಹಿಸಿಕೊಳ್ಳುವ ಸಹವರ್ತಿಗಳು ಎಷ್ಟು ಮಂದಿ ಬೇಕು? ಸಾಮಗರಿಗೆ ತನ್ನಿದಿರಿನ ಅರ್ಥಧಾರಿಗೆ ಪ್ರಶಂಸೆ ಸಿಕ್ಕಿದಾಗ, ತಾನೂ ಅದರೊಂದಿಗೆ ಬೆರೆಯುತ್ತಾರೆ. ಮುಖವರ್ತನೆಯಿಂದ ತಿಳಿಸುತ್ತಾರೆ. ಮುಂದಿನ ಅರ್ಥದಲ್ಲಿ ತಂದೇ ತರುತ್ತಾರೆ.

ಯಕ್ಷಗಾನದ ಚೌಕಟ್ಟಿನೊಳಗೆ ಪೌರಾಣಿಕವಾದ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದರು. ರಾಜಕಾರಣ ಅವರ ಆರ್ಥಗಾರಿಕೆಯಲ್ಲಿಲ್ಲ. ಇವರ ಬಹುಕಾಲದ ಒಡನಾಡಿ ಕೋಳ್ಯೂರು ರಾಮಚಂದ್ರ ರಾಯರು ಒಂದೆಡೆ ಹೇಳುತ್ತಾರೆ -'ಪತ್ರಿಕೆಯ ಭಾಷೆಯನ್ನು ಪಾತ್ರ ಚಿತ್ರಣದಲ್ಲಿ ಬಳಸಿಕೊಂಡಿರುವುದನ್ನು ನಾನು ನೋಡಿಲ್ಲ'!
ಮದುಡುವ ಮಗು-ಮನಸ್ಸು
ಬದುಕಿನಲ್ಲೂ ಸಾಮಗರು ಸರಳ, ಭಾವಜೀವಿ. ಮಗುವಿನ ಮನಸ್ಸು. ಭೇಟಿಗೆ ಬಂದವರನ್ನು ಪ್ರೀತಿಪೂರ್ವಕವಾಗಿ ಮಾತನಾಡಿಸಿ ತಾನು ಪಡೆವ ಸತ್ಕಾರವನ್ನು ಅವರಿಗೂ ಕೊಡಿಸುವ ಗುಣ. ಬಟ್ಟಲಿನ ದೋಸೆಯನ್ನು ಹಂಚಿ ತಿನ್ನುವ ಮನೋಭಾವ.

ಧುತ್ತೆಂದು ಎರಗಿದ ಶಾರೀರಿಕ ಅಸಹಾಯಕತೆ ಸಾಮಗರನ್ನು ಹಿಂಡಿ-ಹಿಪ್ಪೆ ಮಾಡಿತ್ತು. ರಂಗದಲ್ಲಿ ಶನಿಕಾಟಕ್ಕೆ ತುತ್ತಾದ 'ನಳ' ಪಾತ್ರದ ಭಾವವೇ ಯೋಗವಾಗಿ ಬಂತೋ ಏನೋ? ಕಳೆದೆರಡು ವರುಷಗಳಿಂದ ಹಾಸಿಗೆಗೆ ಒರಗಿದ 'ಮಾತಿನ ಮಾಣಿಕ್ಯ'ದ ಹೊಳಪು ಮಸುಕಾಗಿತ್ತು. ಈಗ ಪೂರ್ತಿ ಮೌನ. ಮಡದಿ ನಾಗರತ್ನ. ಇಬ್ಬರು ಗಂಡುಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳ ಸಂಸಾರ. ಎಪ್ರಿಲ್ 27, ೨೦೧೦ರಂದು ಎಂಭತ್ತನಾಲ್ಕು ಸಂವತ್ಸರ ಬಾಳಿದ ರಾಮದಾಸ ಸಾಮಗರ (20-6-1926) ಬದುಕು ಪೂರ್ತಿಯಾಯಿತು.

ಡಾ. ಶೇಣಿ ಗೋಪಾಲಕೃಷ್ಣ ಭಟ್ ಮತ್ತು ರಾಮದಾಸ ಸಾಮಗ - ಎಂಬ ಮಾತಿನ ಮಂಟಪದ ಎರಡು ಪ್ರಧಾನ ಸ್ತಂಭಗಳು ಕಳಚಿಬಿದ್ದುವು. ಇಹದಿಂದ ದೂರವಾದ ಮಲ್ಪೆ ರಾಮದಾಸ ಸಾಮಗರಿಗಿದು ನುಡಿನಮನ.

ಹಳ್ಳಿ ಸೊಗಸಿನ ಕಲಾವರಣ

ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನದ 'ಸಾವಿರ ಸಂಭ್ರಮ'ವು ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಸಂಪನ್ನಗೊಂಡಿತು. ಅಂದು ಕೇರಳದ ಪ್ರಸಿದ್ಧ 'ಕಥಕ್ಕಳಿ'ಯ ಪ್ರದರ್ಶನವಿತ್ತು.

ಕಥಕ್ಕಳಿಗೂ ಹಿಮ್ಮೇಳವಿದೆ ತಾನೆ. ಅದರ ಹಿಮ್ಮೇಳದವರು ಬರಿಮೈಯಲ್ಲಿ ರಂಗಸ್ಥಳಕ್ಕೆ ಬಂದಾಗ, ಓರ್ವ ಸುಶಿಕ್ಷಿತ ಮಹನೀಯ, 'ಛೇ.. ಇವರು ಕಾಲದಲ್ಲಿದ್ದಾರೆ... ಸಮವಸ್ತ್ರವನ್ನಾದರೂ ಧರಿಸಬಹುದಿತ್ತಲ್ಲಾ. ನಾವಿಷ್ಟು ಮಂದಿ ಪ್ರೇಕ್ಷಕರಿದ್ದಾಗ ಬರಿಮೈಯಲ್ಲಿ ರಂಗಕ್ಕೆ ಬರುವುದು ಆಶ್ಲೀಲವಲ್ವಾ' ತಮ್ಮ ಮಾತನ್ನು ಇತರರು ಕೇಳಿಸಿಕೊಳ್ಳಲೇಬೇಕು ಎಂಬ ಹಠದಲ್ಲಿದ್ದಂತೆ ವರ್ತಿಸುದ್ದರು.

ಕಥಕ್ಕಳಿಯ ಹಿಮ್ಮೇಳ ಕಲಾವಿದರು 'ಬರಿಮೈ'ಯಲ್ಲಿ ಬಂದಿರುವುದು ಇವರಿಗೆ ಅಶ್ಲೀಲ! ಇಂತಹ 'ಅಪೂರ್ವ ಆಲೋಚನೆ' ಅಲ್ಲಿ ಸೇರಿದ್ದ ಬೇರ್ಯಾವ ವಿದ್ವಾಂಸರಿಗೂ ಹೊಳೆಯಲೇ ಇಲ್ಲ. ಅದು ಆ ಕಲೆಯ ಸೊಗಸು-ಸೊಗಡು. ಬಹುಶಃ ಕಥಕ್ಕಳಿಯ ಪರಿಚಯವಿರುತ್ತಿದ್ದರೆ, ನೋಡಿರುತ್ತಿದ್ದರೆ ಪ್ರಾಯಃ ಅವರು ಹೀಗನ್ನುತ್ತಿರಲಿಲ್ಲವೋ ಏನೋ? ಬಿಳಿವಸ್ತ್ರ, ಹಣೆಯಲ್ಲಿ ಭಸ್ಮ-ತಿಲಕ ಧರಿಸಿ, ವಾದನ ಪರಿಕರಗಳೊಂದಿಗೆ ರಂಗದಲ್ಲಿ ನಿಂತಾದ ಕಥಕ್ಕಳಿಯ ಲೋಕವೊಂದು ಅನಾವರಣಗೊಳ್ಳುತ್ತದೆ. ಆದರೂ ಅವರ 'ಸಮವಸ್ತ್ರದ ಕಲ್ಪನೆ' ಆಲೋಚಿಸುವಂತಾದ್ದು.

ಭಾರತೀಯ ಕಲೆಗಳು ಇತ್ತೀಚೆನ ದಿನಗಳಲ್ಲಿ 'ಆದುನಿಕ ಸ್ಪರ್ಶಕ್ಕೆ' ಒಳಗಾಗುತ್ತಿವೆ. ಬಹುಶಃ ಕಥಕ್ಕಳಿಯ ಬಗ್ಗೆ 'ಬರಿಮೈ' ವಿಮರ್ಶೆಯನ್ನು ಮಾಡಿದ ಮಹನೀಯರು ಕೂಡಾ ಆಧುನಿಕ ಸ್ಪರ್ಶಕ್ಕೆ ಒಳಗಾಗಿರಬಹುದು. ಕಲೆಯನ್ನು ನೋಡುವ ನಮ್ಮ ಕಣ್ಣುಗಳಿಗೆ ಮೊದಲಾದ್ಯತೆಯಲ್ಲಿ ಚಿಕಿತ್ಸೆಯಾಗಬೇಕು ಅನ್ನಿಸುತ್ತದೆ. ಹೆಚ್ಚಿನ ಸಮಾರಂಭಗಳಲ್ಲಿ ನೋಡಿದ್ದೇನೆ - ವಸ್ತುವಿನೊಳಗೆ ಇಳಿಯದೆ, ಸುತ್ತಾಡದೆ 'ತಕ್ಷಣದ ಪ್ರತಿಕ್ರಿಯೆ' ನೀಡಿ ಸುಭಗನಂತೆ ಕಾಣಿಸಿಕೊಳ್ಳುವ ಮಂದಿಗಳನ್ನು!

ಇರಲಿ, ಯಕ್ಷಗಾನವನ್ನು ನೋಡಿದರೆ ಕೆಲವೊಂದು ವೇಷಭೂಷಣಗಳಲ್ಲಿ ಮಾತ್ರ ಯಕ್ಷಗಾನವನ್ನು ಗುರುತಿಸಬಹುದೇ ವಿನಾ, ಮತ್ತೆಲ್ಲಾ ಬಹುತೇಕ ಪರಿಷ್ಕಾರವಾಗಿದೆ. ಈ ಬದಲಾವಣೆ, ಪರಿಷ್ಕಾರವನ್ನು 'ಅಭಿವೃದ್ಧಿ' ಎಂದು ವ್ಯಾಖ್ಯಾನಿಸುತ್ತೇವೆ. ಕಾಲದ ಪರಿಮಾಣಕ್ಕೆ ತಕ್ಕಂತೆ ಚೌಕಟ್ಟಿನೊಳಗೆ ಬದಲಾವಣೆ ಗ್ರಾಹ್ಯ. ಬದಲಿಗೆ ಯಕ್ಷಗಾನ ಭಾಗವತಿಕೆಯಲ್ಲಿ ಜಾನಪದ ಹಾಡನ್ನೋ, ಹಿಂದಿ ಹಾಡಿನ ನಡೆಯನ್ನೋ ಬಳಸಿದರೆ 'ಆಟ ಮುಗಿಯುತ್ತದೆ- ಬೆಳಗಾಗುತ್ತದೆ' ಅಷ್ಟೇ.

ನಮ್ಮ ಹಳ್ಳಿಗಳಲ್ಲಿ ನಡೆಯುವ ಯಕ್ಷಗಾನ, ಯುವಕ ಮಂಡಲಗಳ ವಾರ್ಷಿಕೋತ್ಸವ, ಜಾತ್ರಾ ಸಮಯಗಳ ಸಾಂಸ್ಕೃತಿಕ ಸಮಾರಂಭಗಳಲ್ಲಿ ಹಳ್ಳಿ ಸೊಗಸಿದ್ದ ದಿನಗಳಿದ್ದುವು. ಹೇಳುವಂತಹ 'ಫಿನಿಶಿಂಗ್' ಇಲ್ಲದೆ, ಅಲ್ಲಲ್ಲಿನ ಸಂಪನ್ಮೂಲಗಳನ್ನು ಬಳಸಿ ಅಭಿವ್ಯಕ್ತಗೊಳ್ಳುತ್ತಿದ್ದುವು. ನಾಟಕವೊಂದು ನಿಶ್ಚಿತವಾದರೆ, ಒಂದೆರಡು ತಿಂಗಳ ಹಿಂದೆಯೇ ಅದಕ್ಕೆ ತಾಲೀಮು. ಸ್ಟೇಜ್ ಪ್ರಾಕ್ಟೀಸ್. ಯಕ್ಷಗಾನವಾದರೆ ಮೂರ್ನಾಲ್ಕು ತಿಂಗಳಿಂದಲೇ ತರಬೇತಿ-ಆಧ್ಯಯನ.

ಇಂತಹ ಸ್ಥಿತಿ ಬದಲಾಗಿದೆ. ಎಲ್ಲಾ ಕಡೆ 'ರೆಡಿ ಟು ಈಟ್'! ಜನಪ್ರಿಯತೆಯ ಗುಂಗು ಹಳ್ಳಿ ಪ್ರತಿಭೆಗಳನ್ನೂ ಬಿಟ್ಟಿಲ್ಲ. ಸಿನಿಮಾ ಢಾಂಢೂಂ ಹಾಡುಗಳು, ಕುಣಿತಗಳು, ಮೈಕುಲುಕಾಟ.. ಇತ್ಯಾದಿಗಳು ಹಳ್ಳಿ ಸ್ಟೇಜ್ಗಳನ್ನೂ ಬಿಟ್ಟಿಲ್ಲ. ಇದರಿಂದಾಗಿ ಪಾರಂಪರಿಕವಾಗಿ ನಡೆಯುತ್ತಿದ್ದ ನಾಟಕ, ಯಕ್ಷಗಾನ, ದೇವರನಾಮ.. ಗಳು ಮಸುಕಾಗಿವೆ.

ಮೊನ್ನೆ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅರುವತ್ತಾರನೇ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಈ ಎಲ್ಲಾ ವಿಚಾರಗಳು ಗಿರಕಿ ಹೊಡೆದುವು! ಕನ್ನಾಡು-ಕೇರಳದ ಗಡಿಯಂಚಿನ ಗ್ರಾಮ 'ಬನಾರಿ'. ಯಕ್ಷಗಾನದ ಪ್ರಾತಃಸ್ಮರಣೀಯ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ - ಆರೇಳು ದಶಕಗಳ ಹಿಂದೆ ಹುಟ್ಟು ಹಾಕಿದ ಸಾಂಸ್ಕೃತಿಕ ವೇದಿಕೆಯು ಬದುಕನ್ನರಳಿಸುವ ಉಪಾದಿ.

ಕೀರ್ತಿಶೇಷ ಗುಡ್ಡಪ್ಪ ಗೌಡರು ಒಮ್ಮೆ ಹೇಳಿದ್ದರು - 'ಬನಾರಿ ಸುತ್ತೆಲ್ಲಾ ಅಕ್ಷರಾಭ್ಯಾಸಿಗಳು ಕಡಿಮೆಯಿದ್ದ ಕಾಲದಲ್ಲಿ, ಕೈಹಿಡಿದು ಅಕ್ಷರ ಬರೆಸಿದವರು ವಿಷ್ಣು ಭಟ್ಟರು. ಹಿಂದೆಲ್ಲಾ ಋಷ್ಯಾಶ್ರಮದಲ್ಲಿರುವ ಗುರುಕುಲ ಮಾದರಿಯಂತಹುದನ್ನು ಬನಾರಿಯಲ್ಲಿ ಕಟ್ಟಿ, ಶಿಷ್ಯರನ್ನು ರೂಪಿಸಿ, ಅವರ ಮೂಲಕ ತನ್ನಾಶಯದ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸುತ್ತಿದ್ದ ಪರಿ ಅನ್ಯಾದೃಶ'.
ಬನಾರಿಯ ನೆಲದಲ್ಲಿ ಕುಣಿದ, ಮಾತನಾಡಿದ ಎಷ್ಟೋ ಕಲಾವಿದರು 'ಹೆಸರು' ಮಾಡಿದವರೇ. ನಿರಕ್ಷರಿಗಳಿಗೆ ಅಕ್ಷರಪ್ರೀತಿಯನ್ನು ಹುಟ್ಟಿಸಿ, ಓದುವ ಅಭ್ಯಾಸವನ್ನು ಮಾಡಿಸಿದ ಮಾಸ್ತರರು ಬನಾರಿ ನೆಲದಲ್ಲಿ ಜೀವಂತ.

ತಾನು ಗೆಜ್ಜೆ ಕಟ್ಟಿದರು. ವೇಷ ತೊಟ್ಟರು. ಕುಣಿದರು. ತನ್ನ ಶಿಷ್ಯರಲ್ಲೂ ಅದನ್ನೇ ನಿರೀಕ್ಷಿಸಿದ್ದರು. ಊಟ, ವಸತಿ ಕೊಟ್ಟು ಒಂದಷ್ಟು ಯಕ್ಷಗಾನ ಕಲಾವಿದರನ್ನು ರೂಪಿಸಿದ ಮಾಸ್ತರ್ ವಿಷ್ಣು ಭಟ್ಟರ ಬನಾರಿ ನೆಲ ಯಕ್ಷಗಾನಕ್ಕೆ ವಿಶ್ವವಿದ್ಯಾನಿಲಯ.
ಭೂಒಡಲಲ್ಲಿ ಸಿಕ್ಕ ಕೃಷ್ಣನ ಸುಂದರ ಮೂರ್ತಿಗೆ ಚಿಕ್ಕ ಆಲಯ ಕಟ್ಟಿಸಿ, ಅದಕ್ಕೆ ಯಕ್ಷಗಾನವನ್ನು ಥಳಕು ಹಾಕಿ, ಆರಾಧನಾ ಕಲೆಯಾದ ಯಕ್ಷಗಾನಕ್ಕೆ ಮತ್ತಷ್ಟು ದೇವತಾ ಸ್ಪರ್ಶ ಕೊಟ್ಟರು. ಕಲಾವಿದರಲ್ಲಿ ಭಯ-ಭಕ್ತಿ ಹುಟ್ಟಿತು. ಕಲೆಯ ಬಗ್ಗೆಯೂ ಆದರ ಹೆಚ್ಚಾಯಿತು.

ತನ್ನ ಶಿಷ್ಯರ ಕುಡಿತವನ್ನು ಬಿಡಿಸಲು ತಾನೇ 'ಅನ್ನ ಸತ್ಯಾಗ್ರಹ' ಮಾಡಿ ಯಶಸ್ವಿಯಾದ ಬಗೆ ಕಾಲದ ಕಥನ. ತಪ್ಪಿದವರಿಗೆ ಸಾತ್ವಿಕ ಶಿಕ್ಷೆ ಕಾದಿತ್ತು. ಅವರ ಕೋಪದ, ಶಿಕ್ಷೆಯ ಹಿಂದೆ ಇದ್ದುದು - ತಾಯಿಯ ಪ್ರೀತಿ-ಮಮತೆ. ನಮ್ಮ ಎಷ್ಟು ಯಕ್ಷಗಾನದ ಗುರುಗಳಲ್ಲಿ ಈ ಭಾವವಿದೆ ಹೇಳಿ? ಯಕ್ಷಗಾನವನ್ನು ಮನೆಯ ಅಂಗವಾಗಿ, ಕುಟುಂಬ ಸದಸ್ಯರ ಮಿಳಿತದೊಂದಿಗೆ ಕಟ್ಟಿದ ಆ ಕಾಲದ ವಾತಾವರಣವಿದೆಯಲ್ಲಾ, ಅದೇ ಈಗಲೂ ಮುಂದುವರಿಯುತ್ತಿರುವುದು ವಿಷ್ಣು ಭಟ್ಟರ ತಪ್ಪಸ್ಸಿನ ಫಲ.

ವಿಷ್ಣು ಭಟ್ಟರ ಚಿರಂಜೀವಿಗಳು ತಂದೆಯ ದಾರಿಯಲ್ಲಿ ಸಾಗುತ್ತಿದ್ದಾರೆ. ಜರಗುವ ಎಲ್ಲಾ ಕಾರ್ಯಕ್ರಮಗಳಿಗೂ 'ಆರಾಧನಾ ಸ್ಪರ್ಶ'. ಆಧುನಿಕತೆಯ ಥಳಕು ಕಡಿಮೆ. ಊರಿನ ಜನರಿಗೂ ಅಷ್ಟೇ - ಇದು ನಮ್ಮದು ಎಂಬ ಭಾವ. ಹಾಗಾಗಿ ಬನಾರಿ ನೆಲದಲ್ಲಿ ಜರಗುವ ಎಲ್ಲಾ ಕಲಾ ಸಂಬಂಧಿ ಕಾರ್ಯಕ್ರಮಗಳಂದು ಬಹುತೇಕ ಎಲ್ಲಾ ಮನೆಗಳಿಗೂ ಬೀಗ!

ತೀರಾ ಹಳ್ಳಿ ಸೊಗಸಿನಲ್ಲಿ ಸಹಜವಾಗಿ ನಡೆಯುವ ಬನಾರಿಯ ಯಕ್ಷಗಾನ ವಾರ್ಷಿಕೋತ್ಸವದಲ್ಲಿ ಭಾಗವಹಿಸುವುದು ಮುದ ನೀಡುವ ಸಂಗತಿ. ಕೈಯಲ್ಲಿ ರಿಮೋಟ್ ಹಿಡಿದು ಚಾನೆಲ್ ಬದಲಾಯಿಸುವ ಮನಸ್ಸುಗಳಿಲ್ಲಿ ಗೆಜ್ಜೆಕಟ್ಟಿ, ವೇಷತೊಟ್ಟು ಕುಣಿಯುತ್ತವೆ; ತಾಳ ಹಿಡಿದು ಹಾಡುತ್ತವೆ. ಇಂತಹ ಮನಸ್ಸುಗಳ ರೂಪೀಕರಣ ಕಾಲದ ಆವಶ್ಯಕತೆ.

Wednesday, April 28, 2010

ಮಲ್ಪೆ ಹರಿದಾಸ ರಾಮದಾಸ ಸಾಮಗ ವಿಧಿವಶ

ಯಕ್ಷರಂಗದ ಮೇರು, ಹರಿದಾಸ ಮಲ್ಪೆ ರಾಮದಾಸ ಸಾಮಗರು ಎಪ್ರಿಲ್ 27, ಮಂಗಳವಾರ ಅಪರಾಹ್ನ ನಿಧನರಾದರು. ಯಕ್ಷಗಾನ, ಹರಿಕಥೆ, ತಾಳಮದ್ದಳೆ, ಬಯಲಾಟಗಳಲ್ಲಿ ಸುಮಾರು ಐದಾರು ದಶಕಗಳ ಕಾಲ ಮಿಂಚಿ, ಹೊಸ ಹುರುಪನ್ನು ಸ್ಥಾಪಿಸಿದವರು.

ಸಂಸ್ಕೃತ, ಕನ್ನಡ, ಸಾಹಿತ್ಯ, ಸಂಗೀತ ಕ್ಷೇತ್ರದ ಆಳ ವಿದ್ವತ್ ಹೊಂದಿದ ಸಾಮಗರು, ತುಳು ಭಾಷೆಗೆ ತನ್ನ ಪಾತ್ರಗಳ ಮೂಲಕ ಕೊಟ್ಟ ಕೊಡುಗೆ ಅಪಾರ. ತೆಂಕು-ಬಡಗು ತಿಟ್ಟುಗಳ ವಿವಿಧ ಮೇಳಗಳಲ್ಲಿ ವ್ಯವಸಾಯ ಮಾಡಿದ ಸಾಮಗರು ಎರಡು ವರುಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ, ಒಂದು ಕಾಲನ್ನು ಕಳೆದುಕೊಂಡರು. ಅಲ್ಲಿಂದೀಚೆಗೆ ಪತ್ನಿ ನಾಗರತ್ನ ಅವರ ಆಸರೆ.

* ಜನನ ದಿನಾಂಕ : 20-6-1926 * ತಂದೆ : ಮಲ್ಪೆ ಲಕ್ಷ್ಮೀನಾರಾಯಣ ಸಾಮಗ * ತಾಯಿ : ಲಕ್ಷ್ಮೀ ಅಮ್ಮ * ಅಣ್ಣ : ಮಲ್ಪೆ ಶಂಕರನಾರಾಯಣ ಸಾಮಗ * ಮಲ್ಪೆ ಎಲಿಮೆಂಟರಿ ಶಾಲೆ, ಕೊಡವೂರು ಹಾಯರ್ ಪ್ರೈಮರಿ ಶಾಲೆಗಳಲ್ಲಿ ಓದು. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಶನ್ ಪಾಸ್. ನಂತರ ಉಡುಪಿ ಸಂಸ್ಕ್ರತ ಕಾಲೇಜಿನಲ್ಲಿ ವಿದ್ಯಾರ್ಜನೆ. * 1947ರಲ್ಲಿ ನಾಗರತ್ನ ಇವರೊಂದಿಗೆ ವಿವಾಹ * ಐವರು ಮಕ್ಕಳು - ವಾರಿಜಾ, ವಾಸುದೇವ, ಅಶೋಕ (ದಿವಂಗತ), ಮಾಲಿನಿ, ಅಂಬುಜಾ * ರಾಮದಾಸ ಸಾಮಗರ ನಿಧನ - 27-4-2010 - ಮಣಿಪಾಲ ಆಸ್ಪತ್ರೆಯಲ್ಲಿ * ದೇಹಸಂಸ್ಕಾರ - 28-4-2010, ಬೆಳಿಗ್ಗೆ 9-45, ಕೊಡವೂರು ಗ್ರಾಮದ ಮೂಡಬೆಟ್ಟು ಸ್ವಗೃಹದಲ್ಲಿ.
- ಅಗಲಿದ ಹಿರಿಯ ಚೇತನಕ್ಕೆ ಕಂಬನಿ -

Friday, April 23, 2010

ಪೊಳಲಿ ಲೋಕಯ್ಯ ನಿಧನ

ಯಕ್ಷಗಾನದ ಹಿರಿಯ ಸ್ತ್ರೀಪಾತ್ರಧಾರಿ ಪೊಳಲಿ ಲೋಕಯ್ಯ (೭೦) ಎಪ್ರಿಲ್ 20, ೨೦೧೦ರಂದು ಪೊಳಲಿಯ ತಮ್ಮ ಗೃಹದಲ್ಲಿ ನಿಧನರಾದರು. ಕೆಲವು ದಿವಸಗಳಿಂದ ಅವರು ಅನಾರೋಗ್ಯಪೀಡಿತರಾಗಿದ್ದರು. ಲೋಕಯ್ಯರಿಗೆ ಕ್ರಿಶ್ಚಿಯನ್ ಬಾಬು ಗುರು. ಸ್ತ್ರೀವೇಷಗಳಲ್ಲೇ ಪ್ರಸಿದ್ಧಿ. ಸೀತೆ, ಗೌರಿ, ಮಂಡೋದರಿ, ಕೈಕೆ ಮುಂತಾದ ಪಾತ್ರಗಳಲ್ಲಿ ಖ್ಯಾತಿ. ಸಿರಿ, ಕಿನ್ನಿದಾರ, ಪುಲ್ಲುಪೆರ್ಗಡ್ತಿ ಇತ್ಯಾದಿ ಪಾತ್ರಗಳು ಅವರ ಮಾಸ್ಟರ್ ಪೀಸ್. ತುಳು ಭಾಷೆಯ ದೇಸೀ ಸೊಗಡು, ಗಾದೆ, ಕತೆ, ಕವಿತೆ..ಗಳು ಅವರ ಪಾತ್ರಗಳನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ದುವುದು. ಅಗಲಿದ ಚೇತನಕ್ಕೆ ನುಡಿನಮನ.

Sunday, April 11, 2010

ಸಂಮಾನದಿಂದ.. ಡಾಕ್ಟರೇಟ್ವರೆಗೆ...

ಹಗಲಿಡೀ ಕಾಲ್ನಡಿಗೆ. ರಾತ್ರಿಯಿಡೀ ಜಾಗರಣೆ. ಕಾಸು ಸಿಕ್ಕರೆ ಪುಣ್ಯ! ಹೊತ್ತು ತಪ್ಪಿ ಭೋಜನ. ಅಪರೂಪಕ್ಕೊಮ್ಮೆ ಸುಗ್ರಾಸ. ಆಟ ಆಡಿಸುವಾತ ಉಳ್ಳವನಾದರೆ ಕೈಗೆ ನಾಲ್ಕಾಣೆ ಬಿದ್ದೀತು. ಆಗದು ಲಕ್ಷಕ್ಕೂ ಹಿರಿದು!

ಆಟವನ್ನು ಮೊದಲೇ ಬುಕ್ ಮಾಡುವುದು ವಿರಳ. ಕಾಲ್ನಡಿಗೆಯಲ್ಲಿ ಸಾಗುತ್ತಾ, ದೊಡ್ಡ 'ಮನೆ-ಮನೆತನ' ಸಿಕ್ಕರೆ ಅವರಲ್ಲಿ ವಿನಂತಿಸಿ, ತಾಳಮದ್ದಳೆ. ಒಂದು ಹೊತ್ತಿನ ಊಟ ಆಯಿತಲ್ವಾ! ಸ್ವಲ್ಪ ಹೆಚ್ಚೆ ಮನೆಯಜಮಾನನನ್ನು ಉಬ್ಬಿಸಿ, ರಾತ್ರಿಯ ಆಟಕ್ಕೆ ವೀಳ್ಯ ಪಡೆಯುವುದೂ ಇದೆ! ಕೇವಲ ಇಪ್ಪತ್ತೈದು ರೂಪಾಯಿ ವೀಳ್ಯ! ಆಟ 'ರೈಸಿದರೆ' ಮರುದಿವಸವೂ ಠಿಕಾಣಿ.

ಹೊಟ್ಟೆ ತುಂಬುವುದು ಮುಖ್ಯ. ಸಿಕ್ಕಿದ ಪುಡಿಗಾಸು ಮನೆವಾರ್ತೆಗೆ. ರಜೆ ಎಂಬುದಿಲ್ಲ. ಜ್ವರ ಬಂದರೂ ಚೌಕಿಯಲ್ಲೇ ಇರಬೇಕೇ ವಿನಾ, ರಜೆ ಮಾಡಿ ಮನೆಗೆ ಹೋಗುವಂತಿಲ್ಲ! ಒಂದು ಆಟದಿಂದ ಮತ್ತೊಂದು ಕಡೆಗೆ ಹತ್ತೋ-ಇಪ್ಪತ್ತೋ ಮೈಲು ಅಂತರ. ತಲಪಿದ ನಂತರಷ್ಟೇ ಸ್ನಾನ-ನಿತ್ಯಾನುಷ್ಠಾನ. ಭೋಜನವಾಗುವಾಗ ಗಂಟೆ ನಾಲ್ಕು ಮೀರುತ್ತಿತ್ತು. ಕೆಲವು ಸಲ ಮಧ್ಯಾಹ್ನ-ರಾತ್ರಿಯದು ಒಟ್ಟಿಗೆ ಆಗುವುದೂ ಇದೆ! ಸಣ್ಣ 'ಕೋಳಿನಿದ್ದೆ' ಪೂರೈಸಿ, ರಾತ್ರಿಯ ವೇಷಕ್ಕೆ ಅಣಿಯಾಗಬೇಕಾಗುತ್ತಿತ್ತು. ಅದೂ ಒಂದೇ ವೇಷವಲ್ಲ, ರಾತ್ರಿಯಿಡೀ-ಪಾಲಿಗೆ ಬಂದುದೆಲ್ಲವನ್ನೂ ನಿರ್ವಹಿಸಬೇಕು.

ಹಗಲಿನ ತನುಶ್ರಮ ಎಷ್ಟೋ ಸಲ ವೇಷಗಾರಿಕೆಯಲ್ಲಿ ಪ್ರತಿಫಲಿತವಾದುದಿದೆ. ಏನು ಮಾಡೋಣ. ಈಗಿನ ಹಾಗೆ ಸಾರಿಗೆಯಿರಲಿಲ್ಲ. ದೂರವಾಣಿಯಿಲ್ಲ. ಆಟಕ್ಕೆಂತ ಮನೆಯಿಂದ ಹೊರಟರೆ ಎರಡೋ, ಮೂರೋ ತಿಂಗಳು ಸಂಚಾರ. ನಮ್ಮ ಜವ್ವನದ ಕಾಲದ ತಿರುಗಾಟವನ್ನು ನೆನೆಸಿಕೊಂಡರೆ, ಈಗಿನವರಿಗೆ ಸುಖ ಸುಪ್ಪತ್ತಿಗೆ! ಆಟದಿಂದ ಆಟಕ್ಕೆ ಬಸ್ಸು ವ್ಯವಸ್ಥೆಯಿದೆ. ವಸತಿ-ಆಸನ ವ್ಯವಸ್ಥೆ ತುಂಬಾ ಸುಧಾರಿಸಿದೆ. ಕಲಾವಿದನ ಬದುಕು ಮೊದಲಿಗಿಂತ ಭಿನ್ನ. ಮಾನ-ಸಂಮಾನಗಳು ಅರಸಿಕೊಂಡು ಬರುತ್ತಿವೆ. ಸಮಾಜ ಕಲಾವಿದನನ್ನು ಗುರುತಿಸುತ್ತದೆ-ಮಾನಿಸುತ್ತದೆ. 'ಛೇ.. ನಾನು ತಿರುಗಾಟ ಮಾಡುತ್ತಿದ್ದಾಗ ಈಗಿನ ವ್ಯವಸ್ಥೆಗಳು ಬೇಕಿತ್ತು.. ಆಟದ ಕತೇನೇ ಬೇರಿತ್ತು..'

- ಹೀಗೆ ತನ್ನ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟವರು ಬಡಗು ತಿಟ್ಟಿನ ಹಿರಿಯ ಸ್ತ್ರೀಪಾತ್ರಧಾರಿ ಮಾರ್ಗೋಳಿ ಗೋವಿಂದ ಸೇರಿಗಾರ್. ಈ ಸಾಲಿನ 'ಪಾತಾಳ ಪ್ರಶಸ್ತಿ'ಯ ಆಯ್ಕೆಯನ್ನು ತಿಳಿಸಲು ಅವರ ಕುಂದಾಪುರದ ಮನೆಗೆ ಕಾಲಿಟ್ಟಾಗ, ಎಂಭತ್ತನಾಲ್ಕರ ಮಾರ್ಗೋಳಿ ಯವರು ಇಪ್ಪತ್ತನಾಲ್ಕಕ್ಕೆ ಇಳಿದಿದ್ದರು! ಇಳಿ ವಯಸ್ಸಲ್ಲೂ ತುಂಬು ಉತ್ಸಾಹ. ಹಳೆಯ ಕಲಾದಿನಗಳ ಪುಟಗಳನ್ನು ಪುನಃ ಓದುವ ಹಂಬಲ. ಇತರರಿಗೂ ತಿಳಿಸುವ ಕಾತರ. ರಂಗದ ಹಳೆಯ ಸಂಪ್ರದಾಯಗಳಿಗೆ ಅವರೊಬ್ಬ 'ಅಥಾರಿಟಿ'.

ಬಡಗಿನ ಐವತ್ತು ದಶಕದ ಮೇಳದ ವ್ಯವಸಾಯದಲ್ಲಿ ಎರಡು ವರುಷ ಕೂಡ್ಲು ಮೇಳದಲ್ಲಿ ತಿರುಗಾಟ ಮಾಡಿರುವ ಮಾರ್ಗೋಳಿ ಯವರು, ಇಲ್ಲಿನ ದೇವಿ ಮಹಾತ್ಮೆ ಪ್ರಸಂಗವನ್ನು ಅಭ್ಯಸಿಸಿ, ಬಡಗಿನಲ್ಲಿ ಇನ್ನಷ್ಟು ಒಪ್ಪ-ಓರಣಗೊಳಿಸಿದರು. 'ಶ್ರೀದೇವಿ' ಪಾತ್ರಕ್ಕೆ ಹೊಸ ಭಾಷೆಯನ್ನೇ ಬರೆದರು. ಭಾವವನ್ನು ಕೊಟ್ಟರು. ಸ್ವ-ಭಾವವನ್ನು ನೀಡಿದರು.

ಒಟ್ಟಿನಲ್ಲಿ - ನಮ್ಮಲ್ಲಿ ಪಾತಾಳ ವೆಂಕಟ್ರಮಣ ಭಟ್, ಕೋಳ್ಯೂರ್ ರಾಮಚಂದ್ರ ರಾವ್ ಹೇಗೋ, ಬಡಗಿನಲ್ಲಿ ಮಾರ್ಗೋಳಿ ಗೋವಿಂದ ಸೇರಿಗಾರ್. ಎಲ್ಲರೂ ಅಪ್ಪಟ ಚಿನ್ನ.

ಡಾಕ್ಟರೇಟ್

ಹಾಂ.. ಮರೆತೇ ಬಿಟ್ಟೆ. ಕೋಳ್ಯೂರ್ ರಾಮಚಂದ್ರ ರಾಯರಿಗೆ ಮಂಗಳೂರು ವಿಶ್ವವಿದ್ಯಾನಿಲಯವು 'ಡಾಕ್ಟರೇಟ್' ಪದವಿ ನೀಡಿ ಗೌರವಿಸಿದೆ. ಇನ್ನವರು ಡಾ.ಕೋಳ್ಯೂರು ರಾಮಚಂದ್ರ ರಾವ್. ಇದು ಯಕ್ಷಗಾನಕ್ಕೆ ಸಂದ ಗೌರವ.

ಕೀರ್ತಿಶೇಷ ಶೇಣಿ ಗೋಪಾಲಕೃಷ್ಣ ಭಟ್ಟರಿಗೆ 'ಡಾಕ್ಟರೇಟ್' ಪದವಿ ಬಂದಾಗ ಹಾಸಿಗೆಗಂಟಿದ್ದರು. ದೃಷ್ಠಿ ಮಂಜಾಗಿತ್ತು. ಮಾತು ತೊದಲುತ್ತಿತ್ತು. ಯಕ್ಷರಂಗದ ಒಂಟಿಸಲಗ ಒಂಟಿಯಾದ ಹೊತ್ತು. 'ಹತ್ತು ವರ್ಷದ ಮೊದಲೇ ಈ ಪದವಿ ಬರುತ್ತಿದ್ದರೆ, ನಾನು ಡಾ.ಶೇಣಿ ಅಂತ ಸೈನ್ ಮಾಡುತ್ತಿದ್ದೆ. ಲೆಟರ್ಹೆಡ್ ಮಾಡಿಸಿಕೊಳ್ಳುತ್ತಿದ್ದೆ. ಈಗ ಬಂದು ಏನು ಪ್ರಯೋಜನ' ಎಂದು ಮಾರ್ಮಿಕವಾಗಿ ಹೇಳಿದ್ದು ಮರೆಯದ ಮಾತು. ಬದುಕಿನ ಕೊನೆಯ ಕ್ಷಣದಲ್ಲೂ ಪುಟಿಯುತ್ತಿದ್ದ ಜೀವನೋತ್ಸಾಹ - ಕಾಡುವ ನೆನಪು.
ಸಂಮಾನ, ಪುರಸ್ಕಾರ, ಪದವಿಗಳು - ಕಲಾವಿದ ಸಕ್ರಿಯನಾಗಿದ್ದಾಗಲೇ ಮಡಿಲಿಗೆ ಬೀಳಬೇಕು. ಆಗ ಅದನ್ನು ಅನುಭವಿಸುವ, ಆನಂದಿಸುವ, ಖುಷಿಪಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕೋಳ್ಯೂರ್ ಅವರಿಗೆ ಸಂದ ಗೌರವ ಸಕಾಲಿಕ. ಡಾ.ಕೋಳ್ಯೂರ್ರಿಗೆ ಅಭಿನಂದನೆಗಳು.

'ಪುತ್ತೂರು ಪ್ರಶಸ್ತಿ'

ಪುತ್ತೂರು ನಾರಾಯಣ ಹೆಗಡೆ ಅಂದರೆ ಸಾಕು, ನಮ್ಮ ಕಣ್ಣೆದುರಿಗೆ ಸಾಲು ಸಾಲು ಖಳ ಪಾತ್ರಗಳು ಮಿಂಚಿ ಮರೆಯಾಗುತ್ತವೆ. ಅವರು ಕಾಲವಾಗಿ ಸುಮಾರು ಎರಡು ದಶಕಗಳು ಸಂದರೂ ಪಾತ್ರಗಳು ಮನಃಪಟಲದಿಂದ ಮಾಸಿಲ್ಲ. ಮಸುಕಾಗಿಲ್ಲ. ಆ ಕಂಸ, ಜರಾಸಂದ, ಮಾಗಧ, ಭೌಮಸುರ, ಅಣ್ಣಪ್ಪ.. ಇವೆಲ್ಲಾ ಹೆಗಡೆಯವರಲ್ಲಿ ಮರುಹುಟ್ಟು ಪಡೆದ ದಿನಗಳು ಈಗ 'ಕಾಲದ ಕಥನ'.

ಹೆಗಡೆಯವರ ಚಿರಂಜೀವಿಗಳು ತಮ್ಮ ತೀರ್ಥರೂಪರ ನೆನಪಿಗಾಗಿ 'ಪುತ್ತೂರು ಪ್ರಶಸ್ತಿ'ಯನ್ನು ಸ್ಥಾಪಿಸಿದ್ದು, 'ಯಕ್ಷ ಸಂಜೀವಿನಿ ಪ್ರತಿಷ್ಠಾನ' ಮೂಲಕ ವರುಷಕ್ಕೊಮ್ಮ ಹಿರಿಯ ಕಲಾವಿದರಿಗೆ ಪ್ರದಾನ ಮಾಡುವ ಸಂಕಲ್ಪ ಮಾಡಿರುವುದು ನಿಜಕ್ಕೂ ಶ್ಲಾಘನೀಯ.
ಎಪ್ರಿಲ್ 11ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ಗದ್ದೆಯಲ್ಲಿ ನಡೆಯುವ ಶ್ರೀ ಧರ್ಮಸ್ಥಳ ಮೇಳದ ರಂಗವೇದಿಕೆಯಲ್ಲಿ, ಕಡತೋಕ ಮಂಜುನಾಥ ಭಾಗವತರಿಗೆ ಪ್ರಥಮ ಪ್ರಶಸ್ತಿಯ ಪ್ರದಾನವಾಗಲಿದೆ.

ಕೊನೆಯದಾಗಿ - ಖ್ಯಾತ ಹಾಸ್ಯಗಾರ ಪೆರುವೋಡಿ ನಾರಾಯಣ ಭಟ್ಟರಿಗೆ ಈ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಅರಸಿ ಬಂದಿದೆ. ಹೀಗೆ ಪಾತಾಳ ಪ್ರಶಸ್ತಿ, ಕೋಳ್ಯೂರ್ಗೆ ಡಾಕ್ಟರೇಟ್, ಪುತ್ತೂರು ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ.. ಒಂದೇ ಎರಡೇ. ಕಲೆಯನ್ನು, ಕಲಾವಿದನನ್ನು ಪ್ರೀತಿಸುವವರಿಗೆ ಇಷ್ಟವಾಗುವ ಸಂಗತಿಗಳಿವು.

Thursday, April 8, 2010

ಪಾತಾಳ ಪ್ರಶಸ್ತಿ ಪುರಸ್ಕೃತ ಮಾರ್ಗೋಳಿ ಗೋವಿಂದ ಸೇರಿಗಾರ್

'ಹಳೆಯ ಪ್ರಸಂಗಗಳು ರಂಗದಿಂದ ದೂರವಾಗುತ್ತಿರುವುದನ್ನು ನೋಡಿ ಬೇಸರವಾಗುತ್ತದೆ. ಅದರಲ್ಲಿರುವಷ್ಟು ಸತ್ವ, ಸತ್ಯ, ಬದುಕಿಗೆ ಪೂರಕವಾಗಿರುವ ಹೂರಣ ಮತ್ತು ಕಲಾಗಾರಿಕೆ ಆಧುನಿಕ ಪ್ರಸಂಗಗಳಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಯಕ್ಷಗಾನದ ವೈಭವಕ್ಕೆ ಮಸುಕಾಗಿದೆ' - ಎಂಬ ದುಃಖ ಬಡಗು ತಿಟ್ಟಿನ ಖ್ಯಾತ ಸ್ತ್ರೀಪಾತ್ರಧಾರಿ ಮಾರ್ಗೋಳಿ ಗೋವಿಂದ ಸೇರಿಗಾರ್ ಅವರದು.

ಐವತ್ತು ವರುಷಗಳ ರಂಗ ಬದುಕಿನಲ್ಲಿ ತೆಂಕು-ಬಡಗಿನುದ್ದಕ್ಕೂ ತಿರುಗಾಟ ಮಾಡಿದ ಮಾರ್ಗೋಳಿಯವರು ಬಡಗು ತಿಟ್ಟಿನ ಪ್ರಾತಿನಿಧಿಕ ಕಲಾವಿದ. ಬಡಗಿನ ಹಳೆಯ ಕ್ರಮಗಳ ಬಗ್ಗೆ ಅಧಿಕೃತ ದನಿ. ನಾಟ್ಯದಿಂದ ರಂಗಸೂಕ್ಷ್ಮದ ವರೆಗಿನ ಸಂಗತಿಗಳಿಗೆ ಈ ಕಾಲಘಟ್ಟದಲ್ಲಿ ಮಾರ್ಗೋಳಿಯವರು ಯಕ್ಷಗಾನಕ್ಕೆ ಅನಿವಾರ್ಯ.

ಮಾರ್ಗೋಳಿಯವರಿಗೀಗ ಎಂಭತ್ತನಾಲ್ಕು. ರಂಗ ಬದುಕಿನ ಉಚ್ಛ್ರಾಯ ಕಾಲದ ನೆನಪು ಅವರ ಇಳಿವಯಸ್ಸಿನ ಲವಲವಿಕೆಯ ಗುಟ್ಟು. ತನ್ನ ಹದಿಮೂರನೇ ವರುಷದಿಂದ ಬಣ್ಣದ ಬದುಕು ಆರಂಭ. ಕುಂದಾಪುರದ ಬಸ್ರೂರಿನಲ್ಲಿ ನಾಲ್ಕನೇ ತರಗತಿ ತನಕ ವಿದ್ಯಾಭ್ಯಾಸ. ಬದುಕಿನ ಅನಿವಾರ್ಯತೆಯೊಂದಿಗೆ ಬೆಳೆದು, ಬಡಗುತಿಟ್ಟಿನ ಬಹುತೇಕ ಖ್ಯಾತರೊಡನೆ ಪಾತ್ರವಹಿಸಿ, ತಾನೂ ಗಟ್ಟಿಯಾಗಿ ರಂಗದ ಸಾರಸರ್ವಸ್ವವನ್ನುಂಡ ಅಪರೂಪದ ಕಲಾಗಾರಿಕೆ.

ಗುರು ವೀರಭದ್ರ ನಾಯಕ್, ಕೊಕ್ಕರ್ಣೆ ಗುಂಡು ನಾಯಕ್, ನರಸಿಂಹ ಕಮ್ತಿ.. ಮೊದಲಾದ ಆಢ್ಯರ ಗರಡಿಯಲ್ಲಿ ತಿದ್ದಿ-ತೀಡಿದ ಅಪ್ಪಟ ಪ್ರತಿಭೆ. ತೆಂಕುಟ್ಟಿನಲ್ಲಿ ಪ್ರಸಿದ್ಧವಾದ 'ದೇವಿ ಮಹಾತ್ಮೆ' ಪ್ರಸಂಗದ 'ಶ್ರೀದೇವಿ' ಪಾತ್ರಕ್ಕೆ ಬಡಗಿನ ರಂಗದಲ್ಲಿ ಜೀವತುಂಬಿ, ಅದಕ್ಕೆ ಪ್ರತ್ಯೇಕವಾದ ಎತ್ತರದ ಸ್ಥಾನ ರೂಪಿಸಿದ ಕೀರ್ತಿ ಮಾರ್ಗೋಳಿಯವರಿಗೆ ಸಲ್ಲಬೇಕು.

ಮಂದಾರ್ತಿ ಮೇಳದಿಂದ ತಿರುಗಾಟ (1939)ಆರಂಭ. ಮುಂದೆ ಸೌಕೂರು, ಸಾಲಿಗ್ರಾಮ, ಇಡಗುಂಜಿ, ಪೆರ್ಡೂರು, ಅಮೃತೇಶ್ವರೀ, ಕಮಲಶಿಲೆ, ಕೂಡ್ಲು, ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ. ಈ ಮಧ್ಯೆ ಅಮೃತೇಶ್ವರಿ ಮೇಳದ ಯಜಮಾನಿಕೆ ಮಾಡಿದ ಅನುಭವ. 'ಮಾರಣಕಟ್ಟೆ ಮೇಳವೊಂದರಲ್ಲೇ ಮೂವತ್ತಾರು ತಿರುಗಾಟ ಮಾಡಿದ್ದೇನೆ' ಎನ್ನುತ್ತಾ, ಮೇಳದ ತಿರುಗಾಟದ ರಸನಿಮಿಷಗಳನ್ನು ಹಂಚಿಕೊಳ್ಳುತ್ತಾರೆ.

ಏರುಜವ್ವನದದ ಇವರ ಸ್ತ್ರೀಸಹಜ ಒನಪು-ಒಯ್ಯಾರಗಳ ಪಾತ್ರಗಳನ್ನು ಈಗಲೂ ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ. ನಾಲ್ಕೈದು ದಶಕದ ಹಿಂದೆ ಕುಂಬಳೆಯಲ್ಲಿ ಜರುಗಿದ 'ಪಂಚವಟಿ' ಪ್ರಸಂಗದ 'ಮಾಯಾಶೂರ್ಪನಖಿ'ಯ ಪಾತ್ರವನ್ನು ರಂಗದಲ್ಲಿ ಬಿಡಿ, ಚೌಕಿಯಲ್ಲೇ ನೋಡಲು ಜನ ಮುಗಿಬೀಳುತ್ತಿದ್ದರಂತೆ. ಚೌಕಿಯಿಂದ ರಂಗಸ್ಥಳಕ್ಕೆ ಹೋಗುವ ದಾರಿಯ ಇಕ್ಕೆಡೆಯಲ್ಲೂ ಇವರಿಗೆ ರಕ್ಷಣೆ ಒದಗಿಸಬೇಕಾದ ಪ್ರಸಂಗ ಬಂದಿತಂತೆ. ಈ ಘಟನೆ ಹೇಳುವಾಗ 84ರ ಮಾರ್ಗೋಳಿಯರು ನಾಚಿ ನೀರಾಗಿ 24ರ ಯುವಕರಾಗುತ್ತಾರೆ!

ಮಾರ್ಗೋಳಿಯವರ ಕಸೆ ಸ್ತ್ರೀಪಾತ್ರಗಳಲ್ಲಿ ಪ್ರತ್ಯೇಕವಾದ ಛಾಪು. 'ಮೀನಾಕ್ಷಿ' ಮೆಚ್ಚಿನ ಪಾತ್ರ. ಶಶಿಪ್ರಭೆ, ಭ್ರಮರಕುಂತಳೆ, ಚಿತ್ರಾಂಗದೆ, ಚಿತ್ರಲೇಖೆ ಹೀಗೆ ಅನೇಕ ಪಾತ್ರಗಳ ಶಿಲ್ಪ ಎಂದೂ ಮಾಸದು! ದೇಹ ಮಾಗುತ್ತಿದ್ದಾಗ 'ನನ್ನ ಸ್ತ್ರೀಪಾತ್ರ ಇನ್ನು ಸಾಕು' ಎಂದು ಕಂಡದ್ದೇ ತಡ, ಪುರುಷ ಪಾತ್ರಗಳ ನಿರ್ವಹಣೆ. ರಾಮ, ಕೃಷ್ಣ, ಅರ್ಜುನ, ಸುಧನ್ವ, ತಾಮ್ರಧ್ವಜ, ಕಮಲಭೂಪ.. ಪಾತ್ರಗಳ ನಿರ್ವಹಣೆ. ಪಾತ್ರಗಳನ್ನು ನಿರ್ವಹಿಸಿ, ಪ1986ರಿಂದ ರಂಗನಿವೃತ್ತಿ. ಎಂಟು ವರುಷ ಮಹಿಳೆಯರಿಗೆ ತರಬೇತಿ ನೀಡಿ ತನ್ನದೇ ಆದ ಯಕ್ಷತಂಡವನ್ನು ರೂಪಿಸಿದ್ದರು.

'ಸ್ತ್ರೀವೇಷಧಾರಿಯಾದವನು ಭಾವಜೀವಿಯಾಗಿರಬೇಕು. ಜೀವನವನ್ನು ಅತ್ಯಂತ ಸೂಕ್ಷ್ಮವಾಗಿ ಅನುಭವಿಸುವವರಿಗೆ, ಗಮನಿಸುವವರಿಗೆ ಹೆಚ್ಚಿಗೆ ಒಲಿಯುತ್ತದೆ' ಎನ್ನುತ್ತಾರೆ. ಹದಿನೆಂಟು ದಿವಸದ ಮಹಾಭಾರತ, ಹನ್ನೆರಡು ದಿವಸದ ರಾಮಾಯಣ ಪ್ರಸಂಗಗಳ ಪ್ರದರ್ಶನಗಳನ್ನು ನೆನಪಿಸಿಕೊಳ್ಳುವಾಗ ಭಾವುಕರಾಗುತ್ತಾರೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಬೆಂಗಳೂರಿನ 'ಕಲಾಶ್ರೀ ಪ್ರಶಸ್ತಿ', 'ಯಕ್ಷ ಸವ್ಯಸಾಚಿ', 'ರಂಗಸ್ಥಳದ ರಾಣಿ' ಪುರಸ್ಕಾರಗಳಿಂದ ಭಾಜನರು. ಮಾರ್ಗೋಳಿಯವರು ಕಲಾಸೇವೆಗೆ ಈಗ 'ಪಾತಾಳ ಪ್ರಶಸ್ತಿ'. ಎಪ್ರಿಲ್ 15, ೨೦೧೦ರಂದು ರಾತ್ರಿ 8 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಮಾರ್ಗೋಳಿಯವರಿಗೆ ಪಾತಾಳ ಪ್ರಶಸ್ತಿಯ ಪ್ರದಾನ.

ಪುತ್ತೂರು ನಾರಾಯಣ ಹೆಗಡೆ ಸಂಸ್ಮರಣೆ - ಪ್ರಶಸ್ತಿ ಪ್ರದಾನ

ತೆಂಕುತಿಟ್ಟು ಯಕ್ಷಗಾನದ ರಂಗಸ್ಥಳದ 'ಖಳ' ಕಲಾವಿದ ಪುತ್ತೂರು ನಾರಾಯಣ ಹೆಗಡೆಯವರು ಕಾಲವಾಗಿ ಹತ್ರಹತ್ರ ಎರಡು ದಶಕಗಳಾದುವು. ಅವರ ಹೆಸರಿನಲ್ಲಿ 'ಯಕ್ಷ ಸಂಜೀವಿನಿ ಪ್ರತಿಷ್ಠಾನ' ಸ್ಥಾಪನೆಯಾಗಿದೆ. ಅವರ ಚಿರಂಜೀವಿಗಳು ಪ್ರತಿಷ್ಠಾನ ಮೂಲಕ ವರುಷಕ್ಕೊಬ್ಬ ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡಲು ಮುಂದಾಗಿದ್ದಾರೆ. ಈ ಸಲದ ಮೊದಲ 'ಪುತ್ತೂರು ಹೆಗಡೆ ಪ್ರಶಸ್ತಿ' - 'ತನ್ನ ಪಾತ್ರಗಳಿಗೆ ಜೀವಕಳೆ ತುಂಬಿದ' ಕಡತೋಕ ಮಂಜುನಾಥ ಭಾಗವತರಿಗೆ. ಎಪ್ರಿಲ್ 11, 2010ರಂದು ಸಂಜೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಸನಿಹ ನಡೆಯುವ ಶ್ರೀ ಧರ್ಮಸ್ಥಳ ಮೇಳದ ಬಯಲಾಟದ ರಂಗದಲ್ಲಿ ಪ್ರಶಸ್ತಿ ಪ್ರದಾನ.

ಕೋಳ್ಯೂರ್ ರಾಮಚಂದ್ರ ರಾಯರಿಗೆ 'ಡಾಕ್ಟರೇಟ್'

ತೆಂಕುತಿಟ್ಟು ಯಕ್ಷಗಾನದ ಹಿರಿಯ ಸ್ತ್ರೀಪಾತ್ರಧಾರಿ ಶ್ರೀ ಕೋಳ್ಯೂರು ರಾಮಚಂದ್ರ ರಾಯರಿಗೆ (7-4-2010) ಮಂಗಳೂರು ವಿಶ್ವವಿದ್ಯಾನಿಲಯವು 'ಡಾಕ್ಟರೇಟ್' ಪದವಿ ನೀಡಿ ಪುರಸ್ಕರಿಸಿದೆ. ವಿಶ್ವವಿದ್ಯಾನಿಲಯದ 28ನೇ ಘಟಿಕೋತ್ಸವದಲ್ಲಿ ಮಾನ್ಯ ರಾಜ್ಯಪಾಲ ಹೆಚ್.ಆರ್.ಭಾರದ್ವಾಜ್ ಅವರು ಪದವಿ ಪ್ರದಾನ ಮಾಡಿದರು. ಕೋಳ್ಯೂರು ರಾಮಚಂದ್ರ ರಾಯರು ಈ ಹಿಂದೆ ರಾಜ್ಯ, ರಾಷ್ಟ್ರ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದು, ಅವರ ಕಲಾ ಸೇವೆಗೆ ಈಗ ಮತ್ತೊಂದು ಗರಿ - ಡಾಕ್ಟರೇಟ್ ಪದವಿ. ಕೋಳ್ಯೂರು ಅವರಿಗೆ ಮನತುಂಬಿದ ಹಾರ್ದಿಕ ಅಭಿನಂದನೆಗಳು.

Wednesday, March 31, 2010

ಏಕವ್ಯಕ್ತಿ ಯಕ್ಷಗಾನದ 'ಸಾವಿರದ ಸಂಭ್ರಮ'


ಯಕ್ಷಗಾನ ರಂಗಭೂಮಿಯ ಹೊಸ ಸಾಧ್ಯತೆಯ ಸಾಧಕ ಶ್ರೀ ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನದ 'ಸಾವಿರದ ಸಂಭ್ರಮ' - ಇದೇ ಫೆಬ್ರವರಿ 2ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ.

ಬೆಳಿಗ್ಗೆ 10 ರಿಂದ ರಾತ್ರಿ 9 ರ ತನಕ - ಉದ್ಘಾಟನೆ, ಮೋಹಿನಿಅಟ್ಟಂ, ಕಥಕ್ಕಳಿ, ಸಂವಾದ, ಸಾವಿರದ ಪ್ರದರ್ಶನ, ಕೃತಿ ಅನಾವರಣ, ಅಭಿನಂದನೆ - ಹೀಗೆ ವಿವಿಧ ಕಲಾಪಗಳು.

ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯ. ಕನ್ನಾಡಿನ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಉಪಸ್ಥಿತಿ. ಸರ್ವಶ್ರೀಗಳಾದ ಟಿ.ಶ್ಯಾಮ ಭಟ್, ಎಸ್. ಶಿವರಾವ್, ಡಾ.ಎಂ.ಪ್ರಭಾಕರ ಜೋಷಿ, ಎಚ್.ಬಿ.ರಾಜೀವ ಶೆಟ್ಟಿ, ಅಂಬಾತನಯ ಮುದ್ರಾಡಿ, ಡಾ.ಸದಾನಂದ ಮಯ್ಯ, ಪ್ರಮೋದ್ ಹೆಗಡೆ, ಕಬ್ಯಾಡಿ ಜಯರಾಮ ಆಚಾರ್ಯ, ಕುಂಬಳೆ ಸುಂದರ ರಾವ್, ಶ್ರೀಮತಿ ಸಂಧ್ಯಾ ಎಸ್. ಪೈ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕೆ.ಅಭಯಚಂದ್ರ ಜೈನ್, ಕೆ. ರಘುಪತಿ ಭಟ್, ಪುಂಡಲೀಕ ಹಾಲಂಬಿ, ಕೆ.ಅಮರನಾಥ ಶೆಟ್ಟಿ - ಮೊದಲಾದ ಗಣ್ಯರು ಭಾಗಿ.

ಏಕವ್ಯಕ್ತಿ ಭೂಮಿಕೆಯ ಮಂಟಪರಿಗೆ ಅಭಿನಂದನೆಗಳು - ಶುಭ ಹಾರೈಕೆಗಳು.

Tuesday, March 2, 2010

ಪೆರುವೋಡಿ ನಾರಾಯಣ ಭಟ್ಟರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ

ತೆಂಕುತಿಟ್ಟು ಯಕ್ಷಗಾನ ಅಗ್ರಮಾನ್ಯ ಹಾಸ್ಯ ಕಲಾವಿದ ಪುತ್ತೂರಿನ ಶ್ರೀ ಪೆರುವೋಡಿ ನಾರಾಯಣ ಭಟ್ಟರಿಗೆ ಈ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ. ಪೆರುವೋಡಿಯವರು ಕುಂಡಾವು ಮೇಳದಲ್ಲಿ ಕುರಿಯ ವಿಠಲ ಶಾಶ್ತ್ರಿಗಳ `ಕೃಷ್ಣ' ವೇಷಕ್ಕೆ ಮಾರುಹೋಗಿ, ಅದೇ ಮೇಳದಿಂದ ತಿರುಗಾಟ ಆರಂಭ. ಮುಂದೆ ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ. ಮೂಲ್ಕಿಮೇಳ, ಕೂಡ್ಲು ಮೇಳ, ಸುರತ್ಕಲ್ ಮೇಳ, ಬಡಗಿನ ಅಮೃತೇಶ್ವರೀ ಮೇಳ, ನಂದಾವರ ಮೇಳ, ಕದ್ರಿ ಮೇಳ, ಕುಂಬಳೆ ಮೇಳ, ಬಪ್ಪನಾಡು...ಹೀಗೆ ವಿವಿಧ ಮೇಳಗಳಲ್ಲಿ 47 ವರುಷ ತಿರುಗಾಟ.

ದಕ್ಷಾಧ್ವರ ಪ್ರಂಗದ `ಬ್ರಾಹಣ', ನಳದಮಯಂತಿ ಪ್ರಸಂಗದ `ಬಾಹುಕ', ಪಾರಿಜಾತದ `ಮಕರಂದ', ಕೃಷ್ಣಲೀಲೆ-ಕಂಸವಧೆ ಪ್ರಸಂಗದ `ಪಂಡಿತ ಮತ್ತು ಅಗಸ',ಕೊಕ್ಕೆಚಿಕ್ಕನ ಹಾಸ್ಯ, ಗುಹ, ಸಾರಥಿ, ದೇವಲೋಕದ ದೂತ, ಬೇಟೆಗಾರರು, ಹನುಮನಾಯಕ, ಪರಾಕು ಹಾಸ್ಯ, ಬೈರಾಗಿ, ಪಾಪಣ್ಣ....ಯಕ್ಷಲೋಕದ ಎಲ್ಲಾ ಪಾತ್ರಗಳು ಪೆರುವೋಡಿಯವರಲ್ಲಿ ಮರುಹುಟ್ಟು ಪಡೆದಿದೆ.

ಯಕ್ಷಗಾನದ `ರಾಜಾ ಹಾಸ್ಯ' ಎಂಬ ನೆಗಳ್ತೆಗೆ ಪಾತ್ರರಾಗಿ, `ಪಾಪಣ್ಣ ಭಟ್ರು' ಎಂದೇ ಜನಪ್ರಿಯ. ತನ್ನ ಯಜಮಾನಿಕೆಯ ಮೂಲ್ಕಿ ಮೇಳದಲ್ಲಿ ಪಾದೆಕಲ್ಲು ವೆಂಕಟ್ರಮಣ ಭಟ್ಟರ ಯಕ್ಷಗಾನ ಪ್ರಸಂಗ `ಪಾಪಣ್ಣ ವಿಜಯ - ಗುಣಸುಂದರಿ' ಪ್ರಸಂಗದ ಪ್ರದರ್ಶನದ ವಿಜೃಂಬಣೆ. ಇದರಿಂದ ತನಗೂ, ಜತೆ ಕಲಾವಿದರಿಗೂ ಸಾರ್ವತ್ರಿಕ ಮನ್ನಣೆ, ಗೌರವ. ಮುಂದೆ ಸುರತ್ಕಲ್ ಮೇಳದಲ್ಲಿ `ಟೆಂಟ್ ಫುಲ್' ಮಾಡಿದ ಈ ಪ್ರಸಂಗ ಇಂದಿಗೂ ಜನಪ್ರಿಯ.

ರಂಗದಲ್ಲಿ ಅವರ ಅಭಿನಯ, ನಡೆನುಡಿಗಳಲ್ಲಿ ಹಾಸ್ಯ ಉನ್ನತ ಮಟ್ಟದಲ್ಲಿರುತ್ತಿತ್ತು. ಹಾಸ್ಯಕ್ಕಾಗಿ ಕೆಳಮಟ್ಟದಲ್ಲಿ ವರ್ತಿಸುವ ಹಾಸ್ಯವಲ್ಲ ಅಭಿನಯದಲ್ಲಿ ಸಹಜತೆ, ಅರ್ಥಗಾರಿಕೆಯಲ್ಲಿ ಪಾತ್ರೌಚಿತ್ರ....ಗಳನ್ನು ಸದಾ ಕಾಪಾಡಿಕೊಂಡು ಬಂದ, ಒಬ್ಬ ಅಭಿಜಾತ ಹಾಸ್ಯಗಾರ. ಡಾ.ಶಿವರಾಮ ಕಾರಂತರು ಚಿತ್ರೀಕರಿಸಿದ `ಯಕ್ಷಗಾನ ಸಿನಿಮಾ' ಒಂದರಲ್ಲಿ ಕಲಾವಿದನಾಗಿ ಭಾಗವಹಿಸಿದ್ದರು.

ಶೇಣಿ ದತ್ತಿ ಪುರಸ್ಕಾರ, ಕುರಿಯ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ಕರ್ಗಲ್ಲು ಸುಬ್ಬಣ್ಣ ಭಟ್ ಪ್ರಶಸ್ತಿ, ಪಾತಾಳ ಪ್ರಶಸ್ತಿಯಂತಹ ಪ್ರತಿಷ್ಠಿತ ಗೌರವಗಳನ್ನು ಪಡೆದ ನಾರಾಯಣ ಭಟ್ಟರ ಜೀವನಗಾಥೆ `ಹಾಸ್ಯಗಾರನ ಅಂತರಂಗ' ಕೃತಿ ಪ್ರಕಟವಾಗಿದೆ.(ಲೇಖಕ : ನಾ. ಕಾರಂತ ಪೆರಾಜೆ). ಪುತ್ತೂರಿನ ಕರ್ನಾಟಕ ಸಂಘವು ಇದನ್ನು ಪ್ರಕಟಿಸಿದೆ.
ಪ್ರಶಸ್ತಿ ಪುರಸ್ಕೃತ ಪೆರುವೋಡಿಯವರಿಗೆ ಅಭಿನಂದನೆಗಳು.

Sunday, January 17, 2010

ನೆನಪಿನಂಗಳದಲ್ಲಿ : ಕೇದಗಡಿ ಗುಡ್ಡಪ್ಪ ಗೌಡ

ಕಲಾವಿದ ವಿಧಿವಶವಾದಾಗ ಆತನ ಬಗೆಗೆ ಸಂಸ್ಮರಣೆ, ಪತ್ರಿಕಾ ಲೇಖನ, ವರ್ಷ ಕಳೆದಾಗ ನೆನಪು ಸಮಾರಂಭ....ಹೀಗೆ ಒಂದೆರಡು ವರ್ಷ ನಡೆಯುತ್ತಿದ್ದಂತೆ ಮನದಿಂದ ಮರೆಯಾಗುತ್ತಾರೆ! ಆದರೆ ಮರೆಯಲಾಗದಷ್ಟು ರಂಗದಲ್ಲಿ ಬಿಟ್ಟುಹೋದ ಅವರ ಕಲಾವಂತಿಕೆಯನ್ನು ಮರೆಯಲಾದೀತೆ! ಕೆದಗಡಿ ಗುಡ್ಡಪ್ಪ ಗೌಡರು ನಿಧನರಾದಾಗ ಕಾಡಿದ ಪ್ರಶ್ನೆಗಳಿವು.

ಇಂತಹ ಹಿರಿಯರ ರಂಗಕೊಡುಗೆಗಳು ಯಕ್ಷಗಾನದ ಶ್ರೀಮಂತಿಕೆಯ ಮೂಲಸರಕುಗಳು. ಹಿಂದೆಲ್ಲಾ ಕಲಾವಿದ ಮಾಗುತ್ತಿದ್ದಂತೆ, ಆತನ ನೆರಳಲ್ಲಿ ಒಂದಿಬ್ಬರಾದರೂ ಕಲಾವಿದರು ರೂಪುಗೊಳ್ಳುತ್ತಿದ್ದರು. 'ನಾನು ಇಂತಹವರ ಜತೆಯಿದ್ದು ಕಲಿತೆ' ಎನ್ನುವಾಗ ಏನೊಂದು ಅಭಿಮಾನ! 'ನಾನು ಕುರಿಯ ಶಾಸ್ತ್ರಿಗಳ ಶಿಷ್ಯ' ಎಂದಾಗ ಒಂದು ಕಾಲಘಟ್ಟದ ರಂಗ ಮಿಂಚಿ ಮರೆಯಾಗುತ್ತದೆ. ಆದರೆ ಈಗೀಗ ಇಂತಹ ಪರಂಪರೆ ಕಡಿಮೆಯಾಗುತ್ತಿದೆ. ರಂಗದ ದೃಷ್ಟಿಯಿಂದ ಯಾಕೋ 'ಇಂತಹ ಪರಂಪರೆ' ಬೇಕೆನಿಸುತ್ತದೆ. ಗುರುಕುಲಗಳಿರಬಹುದು, ಕಲಿಕಾ ಕೇಂದ್ರಗಳಿರಬಹುದು....ಅವೆಲ್ಲಾ ಪ್ರಾಥಮಿಕ ಅಂಶವನ್ನಷ್ಟೇ ಹೇಳಿಕೊಡಬಲ್ಲುದು. ಆದರೆ 'ಜತೆಗಿದ್ದು ಕಲಿಯುವುದು' ಇದಕ್ಕಿಂತ ಎಷ್ಟೋ ಪಾಲು. ಬದಲಾದ ಕಾಲ ಪ್ರವಾಹದಲ್ಲಿ `ಇದೆಲ್ಲಾ ಸಾಧ್ಯವಿಲ್ಲ' ಎಂದು ಸುಲಭದಲ್ಲಿ ಹೇಳಬಹುದು!

ಇರಲಿ, ವಿಷಯ ಎಲ್ಲೋ ಹೋಯಿತಲ್ವಾ. ಇಂತಹ ಪರಂಪರೆಯಲ್ಲಿ ಬೆಳೆದವರು ಕೇದಗಡಿ ಗುಡ್ಡಪ್ಪ ಗೌಡರು. ಬಾಲ್ಯ ಬಡತನ. ಅರ್ಧದಲ್ಲೇ ಮೊಟಕಾದ ಶಾಲಾ ಕಲಿಕೆ. ಆದರೂ ಕಲಿಯಬೇಕೆನ್ನುವ ತುಡಿತ. ಊರಲ್ಲಿ ಅಲ್ಲಿಂದಿಲ್ಲಿಂದ ಕೇಳುತ್ತಿದ್ದ ಯಕ್ಷಗಾನದ ಸುದ್ದಿಯ ಕಿಡಿಗೆ ಕಿವಿಯರಳಿಸಿದೆ ಗುಡ್ಡಪ್ಪ ಗೌಡರು ನಿಂತುದು ಕೀರಿಕ್ಕಾಡು ವಿಷ್ಣು ಭಟ್ಟರ ಗುರುಕುಲದ ಮುಂದೆ.

ಬನಾರಿಯ ಹಳ್ಳಿಮಂದಿಗೆ ಕೀರಿಕ್ಕಾಡು ಅವರ ಪಾಠಶಾಲೆ ಆಗ ವಿಶ್ವವಿದ್ಯಾಲಯ. ಹಗಲು ದುಡಿಯುತ್ತಾ - ನಾಟ್ಯ, ಪ್ರಸಂಗ, ಪುರಾಣ ಕಥೆಗಳನ್ನು ಕಲಿವ ರೀತಿ. ಜತೆಜತೆಗೆ ಸಂಸ್ಕಾರ ಪಾಠ. ಮಣ್ಣಿನ ಮುದ್ದೆಗಳು ಮಾಸ್ತರರ ಕೈಯಲ್ಲಿ ಶಿಲ್ಪಗಳಾಗುತ್ತಿದ್ದುವು. ಕೇದಗಡಿ ಕೂಡಾ ಇಂತಹ ಶಿಲ್ಪಗಳಲ್ಲೊಬ್ಬರು. ಕಡಾರು ನಾರಾಯಣ ಭಟ್ಟರಿಂದ ನಾಟ್ಯ, ಮಾಸ್ತರರಿಂದ ಅರ್ಥಗಾರಿಕೆ ಕಲಿಕೆ. ಎಷ್ಟು ಶೀಘ್ರ ಕಲಿತರೆಂದರೆ, ರಾತ್ರಿ ಹೇಳಿದ ಪಾಠ ಬೆಳಗಾಗುವಾಗ ವಶವಾಗುವಷ್ಟು. ಹಗಲು ತೋಟದಲ್ಲಿ ದುಡಿಯುವಾಗಲೂ ಪಾಠಗಳ ಗುಣುಗುಣಿಕೆ. ಹೀಗಾಗಿ ಗುಡ್ಡಪ್ಪರ ಮಾಸ್ತರರ ಮೆಚ್ಚಿನ ಶಿಷ್ಯ.

ಮೇಳ ಸೇರಲೇ ಬೇಕು ಎಂಬಷ್ಟರ ಮಟ್ಟಿಗೆ ಯಕ್ಷಗಾನದ ಗುಂಗು ಅವರನ್ನಾವರಿಸಿತು. ತನ್ನ ಹನ್ನೆರಡನೇ ವರುಷಕ್ಕೆ ಕದ್ರಿಮೇಳದಿಂದ ಬಣ್ಣದ ಬದುಕು ಆರಂಭ. ನಿತ್ಯ ವೇಷದಿಂದ ಹೆಜ್ಜೆ ಶುರು. ಕದ್ರಿವಿಷ್ಣು, ಕುಂಬಳೆ ತಿಮ್ಮಪ್ಪ ಮೊದಲಾದ ಹಿರಿಯರಿದ್ದ ಮೇಳದ ತಿರುಗಾಟ ಕೇದಗಡಿಯವರ ಯಕ್ಷಯಶಸ್ಸಿನ ಅಡಿಗಟ್ಟು. ಮುಂದೆ ಕದ್ರಿ, ಮೂಲ್ಕಿ, ಕೂಡ್ಲು, ಮುಚ್ಚೂರು ಮೇಳಗಳಲ್ಲಿ ವ್ಯವಸಾಯ. ನಿಜವಾದ ಯಕ್ಷಗಾನ ಅರಿವು ಬರಲು ಇಷ್ಟು ಮೇಳಗಳ ತಿರುಗಾಟ ಬೇಕಾಯಿತು. ಮಾತಿನ ಮಧ್ಯೆ ಹಿಂದೊಮ್ಮೆ ಹೇಳಿದ ಮಾತು ಮಿಂಚಿಮರೆಯಾಗುತ್ತದೆ.

ಕಟೀಲು ಮೇಳದ ಪ್ರವೇಶ ಕೇದಗಡಿಯವರ ಬಣ್ಣದ ಬದುಕಿಗೆ ಹೊಸ ತಿರುವನ್ನು ನೀಡಿತು. ಮೂರು ದಶಕಕ್ಕೂ ಮಿಕ್ಕಿ ಕಟೀಲು ರಂಗಸ್ಥಳದಲ್ಲಿ ಕುಣಿದರು, ಅಭಿನಯಿಸಿದರು. ಅತಿಕಾಯ, ಹಿರಣ್ಯಕಶಿಪು, ತಾಮ್ರಧ್ವಜ, ಕರ್ಣ, ಕಂಸ, ವೀರಮಣಿ, ರಕ್ತಬೀಜ, ಅರುಣಾಸುರದಂತಹ ಪಾತ್ರಗಳು 'ಗುಡ್ಡಪ್ಪಣ್ಣನ ವೇಷ ನೋಡಬೇಕು' ಎನ್ನುವಷ್ಟರ ಮಟ್ಟಿಗೆ ಬೆಳೆಸಿದರು. 'ತಾರಾಮೌಲ್ಯ' ಅರಸಿ ಬಂತು. ಜವ್ವನದಲ್ಲಿ ಆಭಿಮನ್ಯು, ಬಬ್ರುವಾಹನ, ಶ್ರೀದೇವಿ, ಕಯಾದು ಪಾತ್ರಗಳನ್ನು ಹಿರಿಯರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ.
ಗೌಡರಿಗೆ ಓದುವಿಕೆ ಸಂಗಾತಿ ಇದ್ದಂತೆ. ಹಾಗಾಗಿ ವೇಷ ನಿರ್ವಹಣೆಯಲ್ಲಿ ಸಾಹಿತ್ಯ ಪರಿಪಕ್ವತೆ. ಪಾತ್ರ ಸ್ವಭಾವಗಳ ಅನಾವರಣ ಅವರ ವೈಶಿಷ್ಟ್ಯ. ಕೇವಲ ಒಂದು ಪದ್ಯಕ್ಕೋ, ಒಂದು ’ಬಾಣ’ಕ್ಕೆ ಸಾಯುವ ಪಾತ್ರ ಅವರದ್ದಲ್ಲ!


ಕೀರಿಕ್ಕಾಡು ಮಾಸ್ತರರ ಗರಡಿಯಲ್ಲಿ ಪಡೆದ ಸಂಸ್ಕಾರಗಳು ಜೀವನದುದ್ದಕ್ಕೂ ಅವರನ್ನು ರೂಪಿಸುವಲ್ಲಿ ಸಹಕಾರಿಯಾದುವು. 'ಕಲಾವಿದ ಶುಚಿ-ರುಚಿಯಾಗಿರಬೇಕು' ಇದು ಬಹುತೇಕ ಉಪದೇಶವಾದರೂ, ಕೇದಗಡಿಯವರಿಗೆ ನಿತ್ಯಾನುಷ್ಠಾನ. ಅವರು ವೇಷ ತೊಡುವಲ್ಲಿಂದ, ಕಳಚುವ ತನಕವೂ ಈ ಶುಚಿ-ರುಚಿಗಳು ಅವರನ್ನಾವರಿಸಿತ್ತು. ಬದುಕಿನ ವೇಷ ತೊಟ್ಟು, ಕಳಚುವ ತನಕವೂ ಹಾಗೇನೇ.

ತಾಳಮದ್ದಳೆಯಲ್ಲೂ ಕೇದಗಡಿಯವರದು ಹರಿತ ಚಿಂತನೆ. ಪಾತ್ರಗಳಲ್ಲೂ ಅಷ್ಟೇ. ನಾಟ್ಯ, ಅಭಿನಯ, ಮಾತುಗಾರಿಕೆ ಎಲ್ಲವೂ ಸಮಪಾಕ. ಹಾಸ್ಯಗಾರ ಪೆರುವಡಿ ನಾರಾಯಣ ಭಟ್ ಹೇಳುತ್ತಾರೆ - ಗುಡ್ಡಪ್ಪ ಗೌಡರು ವೇಷ ತೊಟ್ಟು ರಂಗಪ್ರವೇಶಿಸಿದರೆ ಸಾಕು, 'ರಂಗಸ್ಥಳ ತುಂಬುವಂತಹ' ಅಭಿವ್ಯಕ್ತಿ ಅವರದು.

ಅರುವತ್ತಕ್ಕೂ ಮಿಕ್ಕಿ ಪ್ರಶಸ್ತಿ-ಪುರಸ್ಕಾರಗಳಿಂದ ಪುರಸ್ಕೃತರಾಗಿದ್ದ ಕೇದಗಡಿ ಗುಡ್ಡಪ್ಪ ಗೌಡರು ೬-೧-೨೦೦೮ರಂದು ವಿಧಿವಶರಾದರು. ಅವರನ್ನು ನೆನಪಿಸುವ ವೇಷವೂ ಇದ್ದಿದ್ದರೆ! (ಸಾಧ್ಯವಿಲ್ಲ ಎಂಬ ಅರಿವಿನೊಂದಿಗೆ) ಲೇಖನಾರಂಭದ ನನ್ನ ಆಶಯವೂ ಅದೇ.

Friday, January 15, 2010

’ಹಿರಿಯಣ್ಣ’ನ ಒಡನಾಟದ ನೆನಪು (ಕೊನೆಯ ಕಂತು)

ಸಾಮಾನ್ಯವಾಗಿ ಪದ್ಯ ಹೇಳಿದ ಬಳಿಕ 'ಬಚ್ಚುಂಡು' ಅಂತ ಹೇಳುತ್ತಿದ್ದ ನಾಯ್ಕರಂದು, 'ಆಟ ಪೊರ್ಲು ಆಯಿಜಾ' (ಅಟ ಒಳ್ಳೆಯದಾಗಲಿಲ್ಲವಾ) ಅಂತ ಅಭಿಪ್ರಾಯ ಕೇಳಿದರು. ಎಂದೂ ಅವರು ಆಟ ಕಳೆದಾದ ಬಳಿಕ ಹೀಗೆ ಕೇಳಿದವರಲ್ಲ. ಯಾರ ಮಾತಿಗೂ ಕಿವಿಗೊಡುವವರಲ್ಲ. ಚೌಕಿಯಲ್ಲಿ ಮಂಗಲವಾದ ನಂತರ ತನ್ನ ಚೀಲ ಹೆಗಲಿಗೆ ಹಾಕಿ ಹೊರಡುತ್ತಿದ್ದರು.

ದೇವಿಮಹಾತ್ಮೆ ಪ್ರಸಂಗದ ಗುಂಗಿನಲ್ಲೇ ಇದ್ದರು. ಸರಿ, ಸ್ನಾನ, ಉಪಾಹಾರ ಮುಗಿಸುತ್ತಿದ್ದಂತೆ, ಕೃ.ಶಾ.ಶಾಸ್ತ್ರಿಗಳು ಜೀಪಿನೊಂದಿಗೆ ಹಾಜರ್. ಸುಮಾರು ಎಂಟು ಗಂಟೆಗೆ ಮಂಗಳೂರಿಗೆ ನಮ್ಮ ಪ್ರಯಾಣ. ಅಂದು ಕಲಾವಿದ ಚೇಕೋಡು ಕೃಷ್ಣ ಭಟ್ಟರು ತಮ್ಮ ತಾಳಮದ್ದಳೆ ರೆಕಾರ್ಡಿಂಗ್ ಇಟ್ಟುಕೊಂಡಿದ್ದರು. ಅದರ ಮಧ್ಯೆ ನಾಯ್ಕರ ಮೇಲಿನ ಅಭಿಮಾನದಿಂದ ಒಂದು ಗಂಟೆ ಅವರ ವೆಚ್ಚದಲ್ಲೇ ನಮಗಾಗಿ ಬಿಟ್ಟುಕೊಟ್ಟಿದ್ದರು.

ಮಂಗಳೂರಿಗೆ ಹೋಗುವ ದಾರಿಮಧ್ಯದಲ್ಲಿ ಆಟದ್ದೇ ಸುದ್ದಿ. ಹಳೆಯ ನೆನಪುಗಳನ್ನು ನಾಯ್ಕರು ಬಿಚ್ಚುತ್ತಿದ್ದರು. ಅದರಲ್ಲಿ ಸಿಹಿಯಿತ್ತು, ಕಹಿಯಿತ್ತು. ಬದುಕಿನ ನಡೆಯಿತ್ತು. ಕುಟುಂಬದ ಸುಖ-ದುಃಖವಿತ್ತು.

ಮಂಗಳೂರು ತಲುಪಿದೆವು. ರೆಕಾರ್ಡಿಂಗ್ ರೂಂ ನಿಗದಿನ ಸಮಯಕ್ಕೆ ಸಿಕ್ಕಿತು. ಮದ್ದಳೆಗೆ ಪದ್ಯಾಣ ಜಯರಾಮ ಭಟ್ ಮತ್ತು ಚೆಂಡೆಗೆ ಪೆರುವಾಯಿ ನಾರಾಯಣ ಭಟ್ಟರ ಸಾಥಿ. ಒಂದೊಂದು ಪದ್ಯವನ್ನು ಬಹಳ ಚೆನ್ನಾಗಿ ಹಾಡಿದರು. ಒಂದು ಗಂಟೆ ಸ್ಟುಡಿಯದೊಳಗೆ ಕಳೆದದ್ದೇ ಗೊತ್ತಾಗಿಲ್ಲ. ದಕ್ಷಾಧ್ವರ, ಕರ್ಣಾವಸಾನ, ತಮ್ಮ ಗುರು ಅಜ್ಜನಗದ್ದೆ ಗಣಪಯ್ಯನವರ ಕೆಲವು ಕೃತಿಗಳು, ದೇವೇಂದ್ರನ ಒಡ್ಡೋಲಗ.. ಹೀಗೆ 'ವೆರೈಟಿ' ಪದ್ಯಗಳಿದ್ದುವು.

ಕ್ಯಾಸೆಟ್ಟಿನ ಕವರನ್ನು ವರ್ಣದಲ್ಲಿ ಚೇಕೋಡು ಕೃಷ್ಣ ಭಟ್ರು ಉಚಿತವಾಗಿ ಮುದ್ರಸಿ ಕೊಟ್ಟಿದ್ದರು. ಒಳಗಿನ ಧ್ವನಿಸುರುಳಿ ವೆಚ್ಚವನ್ನು ಮಾತ್ರ ಪಡೆದಿದ್ದರು. ಆದರೆ ವಿಧಿ ಹೇಗೆ ಮನುಷ್ಯನನ್ನು ಅಟ್ಟಿಸಿಕೊಂಡು ಬರುತ್ತದೆ ಅಂತ! ಉತ್ತಮ ಧ್ವನಿಮುದ್ರಣದ ಸ್ಟುಡಿಯೋ. ಯಾವುದೆ ಲೋಪದೋಷಗಳಿಲ್ಲ. ಇಂತಹ ಸ್ಟುಡಿಯೋದಲ್ಲಿ ನಾಯಕರು ಹಾಡಿದಾಗ ಮದ್ದಳೆಯ ದನಿ 'ಇಳಿಸ್ವರ'ದಲ್ಲಿ ರೆಕಾರ್ಡಿಂಗ್ ಆಗಬೇಕೇ? ಏನೇನು 'ಸರ್ಕಸ್' ಮಾಡಿದರೂ ಸರಿಮಾಡಲಾಗಲೇ ಇಲ್ಲ! 'ಅಷ್ಟಾದರೂ ಆಯಿತಲ್ಲಾ' ಅಂತ ಸಮಾಧಾನ.

24-3-1999. ನಾಯ್ಕರ ಶಿಷ್ಯ ದಾಮೋದರ ಪಾಠಾಳಿಯವರು ಮಿತ್ತಡ್ಕದಲ್ಲಿ ಕಟೀಲು ಮೇಳದ ಆಟ ಆಡಿಸಿದ್ದರು. ಅಂದು ಧ್ವನಿಸುರಳಿಯ ಬಿಡುಗಡೆ ಸಮಾರಂಭ. ವೇದಿಕೆ ಸಂಪನ್ನಗೊಂಡಿತ್ತು. ಗಣ್ಯರು ಉಪಸ್ಥಿತರಿದ್ದರು. ಧ್ವನಿಸುರುಳಿಯನ್ನು ಹಿರಿಯ ಮತ್ತು ಖ್ಯಾತ ಭಾಗವತರಾದ ಬಲಿಪ ನಾರಾಯಣ ಭಾಗವತರು ಬಿಡುಗಡೆ ಮಾಡಿ, ಶುಭ ಹಾರೈಸಿದ್ದರು.

ಬಲಿಪರು ತಮ್ಮ ಮಾತು ಮುಗಿಸಿ ಇನ್ನೇನು ತಮ್ಮ ಆಸನದಲ್ಲಿ ಕುಳಿತುಕೊಳ್ಳಬೇಕು ಎಂದಿರುವಾಗ, ಚನಿಯ ನಾಯ್ಕರು ಅವರ ಬಳಿಗೆ ಹೋಗಿ, ನಮಸ್ಕರಿಸಿ, ಅವರಿಗೆ 'ತಾನು ಬಳಸುತ್ತಿದ್ದ ಜಾಗಟೆ ಮತ್ತು ಜಾಗಟೆ ಕೋಲು' ಪ್ರದಾನ ಮಾಡಿದರು! ಈ ಜಾಗಟೆ ಕೋಲು ಚನಿಯರಿಗೆ ಪರಂಪರಾ ಹಿನ್ನೆಲೆಯ ಭಾಗವತರಿಗೇ ನೀಡುವುದು ಔಚಿತ್ಯವೆಂದು ಬಗೆದು ಬಲಿಪರಿಗೇ ನೀಡಿರಬೇಕು. ಅಂದಿನಿಂದ ಚನಿಯರ ಜಾಗಟೆ ಹಿಡಿದೇ ಇಲ್ಲ!

ನನ್ನ ತೀರ್ಥರೂಪರು ಆಸ್ಪತ್ರೆಯಲ್ಲಿ ಬದುಕಿನ ಇಳಿಲೆಕ್ಕದಲ್ಲಿದ್ದರು. ಅವರನ್ನು ನೋಡಲು ಬಂದ ಚನಿಯರು ಮಾತನಾಡುತ್ತಿದ್ದಂತೆ, ಕಣ್ಣನ್ನು ಒರೆಸಿಕೊಳ್ಳುತ್ತಿದ್ದರು. ನಮ್ಮ ಸಂಬಂಧಿಕರಲ್ಲೂ ಬಾರದ ಕಣ್ಣೀರು ಚನಿಯರಲ್ಲಿ ಬಂದಿತ್ತು.

ಚನಿಯರ ಆರೋಗ್ಯದ ಕ್ಷೀಣತೆಯನ್ನ ಕಂಡು ಅಡೂರು ಶ್ರೀಧರ ರಾಯರು ಪರೀಕ್ಷೆಗಾಗಿ ಹುಬ್ಬಳ್ಳಿಯ ಅವರ ಮಗನ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷೆ ಮುಗಿಸಿ ಒಂದಷ್ಟು ಮಾತ್ರೆಗಳನ್ನು ಕಟ್ಟಿಕೊಟ್ಟು ಅವರ ಮನೆಗೆ ಬಿಟ್ಟು, ನೇರವಾಗಿ ನಮ್ಮನೆಗೆ ಬಂದರು. 'ಕೆಲಸ ಕೆಟ್ಟು ಹೋಯಿತು. ಭಾಗವತರಿಗೆ ಗಂಟಲಿನ ಸಮಸ್ಯೆ. ಅದಿನ್ನು ಗುಣವಾಗದು. ಎರಡೇ ತಿಂಗಳು' ಎಂದು ಕಣ್ಣೀರು ಹಾಕಿದರು. ಈ ವಿಚಾರ ಅವರಿಗೆ ಗೊತ್ತಿಲ್ಲ.

ದಿನ ಸರಿಯುತ್ತಿತ್ತು. ಒಂದೆರಡು ಬಾರಿ ಅವರನ್ನು ನೋಡಿ ಬಂದೆವು. ಕೃಶರಾಗಿದ್ದರು. ಮಾತುಕತೆಯೂ ದಿನೇ ದಿನೇ ಕಡಿಮೆಯಾಗುತ್ತಿತ್ತು. ಜತೆಗೆ ಆಹಾರ.. ನಿದ್ರೆ.. ಎಲ್ಲವೂ. 'ಆಯಿತು, ನಮ್ಮ ಭಾಗವತರ ಕತೆ ಮುಗಿಯಿತು' ಎನ್ನುತ್ತಾ ಬಂದೆವು.

ಮರುದಿನ ಅಂದರೆ 7-8-1999. 'ಚನಿಯ ನಾಯ್ಕರು ಹೋದರು' - ಫೋನ್ ಕರೆ. 20-25 ವರುಷದಿಂದ ಮನದಲ್ಲೆಲ್ಲಾ ಸುಳಿದಾಡುತ್ತ ಇದ್ದ ನಾಯ್ಕರ ಬದುಕಿನ ಅಂತ್ಯ. ಈ ವಿಚಾರವನ್ನು ಪೆರಾಜೆಯ ಅವರ 'ಅಭಿಮಾನಿಗಳೆಂದು ಗುರುತಿಸಿಕೊಂಡ' ಕೆಲವರನ್ನು ವಿಚಾರ ತಿಳಿಸಿದಾಗ 'ಹೌದಾ. ಛೇ.' ಉತ್ತರಕ್ಕೇ ಸೀಮಿತ.

ಚನಿಯ ನಾಯ್ಕರು ನನಗೆ ಬಂಧುವಲ್ಲ. ಆದರೆ ಬಂಧುಗಳಿಗಿಂತ ಹೆಚ್ಚಿನ ಅಭಿಮಾನವಿತ್ತು. ಅವರು ನನಗೆ ಅಣ್ಣನಲ್ಲ. ಆದರೆ ಒಡಹುಟ್ಟಿದ ಅಣ್ಣನಂತೆ ಅವರ ವ್ಯವಹಾರವಿತ್ತು. ನಾಕರು ರಕ್ತಸಂಬಂಧಿಯಲ್ಲ. ಆದರೆ ನನ್ನ ರಕ್ತಸಂಬಂಧಿಕರಿಗಿಂತಲೂ ಹೆಚ್ಚಿನ ಪ್ರೀತಿ-ವಿಶ್ವಾಸವಿತ್ತು.

ಚನಿಯರು ಕುಟುಂಬದ ಓರ್ವ ಸದಸ್ಯನಂತಿದ್ದರು. ಹಾಗಾಗಿ ಅವರ ಮರಣದಂದು ನನಗರಿವಿಲ್ಲದೇ ಬಿದ್ದ ನಾಲ್ಕು ಹನಿ ಕಣ್ಣೀರು ಅವರಿಗೆ ಸಂದ ಶೃದ್ಡಾಂಜಲಿ. ಸಂಬಂಧಿಕರು ಅಸ್ತಂಗತರಾದಾಗಲೂ ಅಷ್ಟು ಅಧೀರನಾಗಲಿಲ್ಲ.

ಚನಿಯರು ದೂರವಾಗಿ ಹನ್ನೆರಡು ವರುಷವಾಯಿತು. ಆದರೆ ಅವರ ಒಡನಾಡ, ನೆನಪು ನಿತ್ಯ ಜೀವಂತ. ಭಾಗವತಿಕೆಯಲ್ಲಿ ಯಾರೂ ಅನುಕರಿಸದ ಛಾಪು ಮೂಡಿಸಿದ ಚನಿಯರು ಯಕ್ಷಗಾನ ಮರೆಯದ ಯಕ್ಷಕೋಗಿಲೆ.

Wednesday, January 6, 2010

’ಹಿರಿಯಣ್ಣ’ನ ಒಡನಾಟದ ನೆನಪು (ಕಂತು ೪)

ಪೆರಾಜೆ ಸುತ್ತಮುತ್ತ ಕನಿಷ್ಠ ಐದಾರು ಬಯಲಾಟಗಳು ನಡೆಯುತ್ತಿದ್ದುವು. ತಾಳಮದ್ದಳೆಗಳೂ ಸಾಕಷ್ಟು ಆಗುತ್ತಿದ್ದುವು. ಬಯಲಾಟಕ್ಕೆ ಅತಿಥಿ ಕಲಾವಿದರನ್ನು ಆಹ್ವಾನಿಸಲಾಗುತ್ತಿತ್ತು. ಆಟದ ಪ್ರದರ್ಶನದಂದು ಕೆಲವು 'ಗಮ್ಮತ್ತು' ಕಲಾವಿದರು, ಅಭಿಮಾನಿಗಳು 'ಭಾಗವತೆರೆ ಚಾ(!) ಪರ್ಕ' ಎಂದು ಅವರನ್ನು 'ಗರಂ' ಮಾಡಲು ಯತ್ನಿಸಿದರೂ ಚನಿಯರು ಅವರ ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿ ಕೇವಲ 'ಬೀಡಾ' ತಿನ್ನುತ್ತಿದ್ದರಷ್ಟೇ. ಬಹುಶಃ ಅವರ ಕಲಾಜೀವನದ ಉತ್ತರಾರ್ಧದಲ್ಲಿ ಅವರಿಗೆ ಸಿಕ್ಕ ಆತ್ಮೀಯರ ಸಹವಾಸ.

ತಾಳಮದ್ದಳೆ ನಡೆಯುತ್ತಿದ್ದಾಗ ಅಸಹನೆಯಿಂದ ಜಾಗಟೆಯನ್ನು ಕೆಳಗಿಟ್ಟು ನಡೆದ ಭಾಗವತರಿದ್ದಾರೆ! ಮದ್ದಳೆ ಬಾರಿಸುತ್ತಿದ್ದಂತೆ ಮದ್ದಳೆಯನ್ನು ಬಿಟ್ಟು ಓಡಿದ ವಾದಕರನ್ನೂ ಗೊತ್ತು. ಇಂತಹ ಕಲಾ ದ್ರೋಹ ಚನಿಯರ ಹತ್ತಿರ ಸುಳಿಯುವುದಿಲ್ಲ. ಅದು ಅವರ ಸಂಸ್ಕಾರ. ರಂಗಕ್ಕೆ ತೆರಳುವಾಗ ಸ್ವಸ್ತಿಕಕ್ಕೆ ನಮಸ್ಕರಿಸಿ, ರಂಗದಲ್ಲಿ ಚೆಂಡೆ-ಮದ್ದಳೆಗಳಿಗೆ ವಂದಿಸಿ ಭಾಗವತರ ಮಣೆಯೇರುತ್ತಿದ್ದರು. ಅವರಿಗದು ಆರಾಧ್ಯಕಲೆ.

ನನ್ನ ಯಕ್ಷಗಾನಾಸಕ್ತಿಯ ಆರಂಭ ಕಾಲದಲ್ಲಿ (1986) 'ಪುಂಡುವೇಷ'ವೆಂದರೆ ಪ್ರಿಯವಾಗಿತ್ತು. ಕುಣಿಯಲು, ಹಾರಲು, ಮಾತನಾಡಲು ಹರಸಾಹಸ ಪಡುತ್ತಿದ್ದರೂ ಸಂಘದ ಆಟಗಳಲ್ಲಿ ನನಗೆ ಮೊದಲ ಮಣೆ! ಒಮ್ಮೆ ಶಿವಪಂಚಾಕ್ಷರಿ ಮಹಾತ್ಮೆ ಪ್ರಸಂಗದಲ್ಲಿ ನನಗೆ 'ಶ್ವೇತಕುಮಾರ'ನ ಪಾತ್ರ. ಚನಿಯರದ್ದೇ ಭಾಗವತಿಕೆ. ಆಟವೇನೋ ಮುಗಿಯಿತು. ಮನೆಗೆ ಬಂದೆವು. ವಿಶ್ರಾಂತಿಯಾಗಿ ಉಭಯಕುಶಲೋಪರಿ ಮಾತನಾಡುತ್ತಿದ್ದಾಗ, 'ಈರೆಗ್ ಪುಂಡು ವೇಷ ಒಲಿಯಂದ್. ಸ್ತ್ರೀವೇಷ ಮಲ್ಪೊಳಿ' ಅಂದರು. ನನ್ನ ಪುಂಡುವೇಷದ 'ಮರ್ಲ್’ ಅಲ್ಲಿಗೆ ಮುಕ್ತಾಯ.

98-99ರ ಸಮಯ. ಯಾಕೋ ಅಶಕ್ತತೆ ಅವರನ್ನು ಕಾಡತೊಡಗಿತ್ತು. ಒಪ್ಪಿದ ಕಾರ್ಯಕ್ರಮಗಳಿಗೆ ಗೈರುಹಾಜರಾಗುತ್ತಿದ್ದರು. ಅವರ ಉತ್ಸಾಹವನ್ನು ಅಸೌಖ್ಯತೆ ನಿಯಂತ್ರಿಸುತ್ತಿತ್ತು. ಆಗಾಗ ಜ್ವರ, ಶಾರೀರದಲ್ಲಿ ಕರ್ಕಶತೆ ಬಾಧಿಸುತ್ತಿತ್ತು. 'ಇವರಲ್ಲಿ ಏನೋ ಬದಲಾವಣೆಯಾಗುತ್ತಿದೆ. ಟೆಸ್ಟ್ ಮಾಡಿಸಬೇಕು' ಅಡೂರು ಶ್ರೀಧರ ರಾಯರು ನೆನಪಿಸುತ್ತಿದ್ದರು.

ಚನಿಯರ ಹಾಡುಗಾರಿಕೆಯ ಧ್ವನಿಸುರುಳಿಯೊಂದನ್ನು ತಯಾರಿಸಿದರೆ ಹೇಗೆ? ಮರ್ಕಂಜದ ಕೃ.ಶಾ.ಶಾಸ್ತ್ರಿ, ಜಗನ್ಮೋಹನ ರೈ, ದಾಮೋದರ ಪಾಟಾಳಿ.. ಹೀಗೆ ಸಮಾನಾಸಕ್ತರ ಸಮಾಲೋಚನೆ. ಚನಿಯರ ಮನದ ಬಯಕೆಯೂ ಇತ್ತೆನ್ನಿ.

ಒಂದು ಕ್ಯಾಸೆಟ್ಟಿಗೆ ಐವತ್ತು ರೂಪಾಯಿಯಂತೆ ಹಣ ಸಂಗ್ರಹವಾಯಿತು. ಕೆಲವರು ನೂರು, ಇನ್ನೂರು ನೀಡಿದರು. ಇದರಿಂದಾಗಿ ಪ್ರಯಾಣ, ಸ್ಟುಡಿಯೋ ಬಾಡಿಕೆ ಹೊಂದಾಣಿಕೆಯಾಯಿತು. ಇದರಲ್ಲಿ ಉಳಿದ ಅಲ್ಪಸ್ವಲ್ಪ ಮೊತ್ತ ಮತ್ತು ಕ್ಯಾಸೆಟ್ ಮಾರಾಟದಿಂದ ಸಿಗುವ ಮೊತ್ತವೆಲ್ಲವೂ ಚನಿಯರಿಗೆ ನೀಡುವುದೆಂದು ನಿಶ್ಚಯವಾಯಿತು. ಇದಕ್ಕವರ ವಿರೋಧವಿತ್ತಾದರೂ, ಒತ್ತಾಯಕ್ಕೆ ಮಣಿದರು.

ಕ್ಯಾಸೆಟ್ಟಿಗೆ - ಮದ್ದಳೆಗೆ ಪದ್ಯಾಣ ಜಯರಾಮ ಭಟ್, ಚೆಂಡೆಗೆ ಪೆರುವಾಯಿ ನಾರಾಯಣ ಭಟ್ಟರನ್ನು ಗೊತ್ತುಮಾಡಲಾಯಿತು. ಅವರಿಬ್ಬರೂ ಚನಿಯರ ಮೇಲಿನ ಅಭಿಮಾನದಿಂದ ಸಂಭಾವನೆ ರಹಿತವಾಗಿ ರೆಕಾರ್ಡಿಂಗ್ನಲ್ಲಿ ಭಾಗವಹಿಸಿದ್ದರು. ನಿರೂಪಣೆಗೆ ಕೃ.ಶಾ.ಮರ್ಕಂಜ. ಈ ಮಧ್ಯೆ ಒಂದು ಅಪಸ್ವರ ಎದ್ದಿತು. ಕ್ಯಾಸೆಟ್ಟಿನ ರಕ್ಷಾಪುಟದಲ್ಲಿ ಇವೆಲ್ಲವನ್ನೂ ಸಂಘಟಿಸಿದ ನನ್ನ ಹೆಸರನ್ನೂ ಸೇರಿಸಿದ್ದೆ. 'ಐವತ್ತು ರೂಪಾಯಿ ಕೊಟ್ಟ ನಾವೆಲ್ಲರೂ ಸಂಘಟಕರಲ್ವಾ' ಅಂತ ಒಂದಿಬ್ಬರು ಕೇಳಿಬಿಟ್ಟರು. ಈ ವಾದದ ಮುಂದೆ ನನ್ನ ಹೆಸರನ್ನು ನಾನೇ ಕೈಬಿಟ್ಟೆ! ಇದು ಚನಿಯ ನಾಯ್ಕರಿಗೆ ತುಂಬಾ ನೋವುಂಟುಮಾಡಿತ್ತು. ಸಿಕ್ಕಗಲೆಲ್ಲಾ 'ಈರ್ ಅಂಚ ಮಾಲ್ತ್ನೆ ಸರಿಯತ್ತ್' ಎನ್ನುತ್ತಿದ್ದರು.

ಧ್ವನಿಸುರುಳಿಗಾಗಿ ಚನಿಯರೇ ಪದ್ಯಗಳನ್ನು ಗೊತ್ತುಮಾಡಿದ್ದರು. ದಕ್ಷಾಧ್ವರ, ಕರ್ಣಪರ್ವ ಪ್ರಸಂಗಗಳ ಅವರ 'ಹಿಟ್' ಪದ್ಯಗಳತ್ತ ಅವರಿಗೆ ಮೋಹವಿತ್ತು. ಒಂದು ಸೋಮವಾರ ರೆಕಾರ್ಡಿಂಗ್ ಅಂತ ನಿಶ್ಚಯವಾಯಿತು. ಅದರ ಮುನ್ನಾ ದಿನ ಅರಂಬೂರಿನಲ್ಲಿ ದೇವಿಮಹಾತ್ಮೆ ಬಯಲಾಟ. ಮರುದಿನದ ರೆಕಾರ್ಡಿಂಗ್ ಗುಂಗಿನಲ್ಲಿದ್ದ ನಾಯ್ಕರ ಅಂದಿನ ಭಾಗವತಿಗೆ ನಿಜಕ್ಕೂ 'ಅದ್ಭುತ'. ಸೊರಗಿದ ಕಂಠಕ್ಕೆ ಮತ್ತೊಮ್ಮೆ ಮರುಜೀವ. ಚಂಡಮುಂಡರು ದೇವಿಯನ್ನು ವರ್ಣಿಸುವ ಸಂದರ್ಭದ ಪದ್ಯಗಳನ್ನು ನಾನು ಆ ವರೆಗೆ ಕೇಳಿರಲಿಲ್ಲ.
(ಮುಂದುವರಿಯುತ್ತದೆ)

Tuesday, January 5, 2010

'ಹಿರಿಯಣ್ಣ'ನ ಒಡನಾಟದ ನೆನಪು (ಕಂತು 3)

ಪೆರಾಜೆ ಶ್ರೀ ಶಾಸ್ತಾವೇಶ್ವರ ಯಕ್ಷಗಾನ ಕಲಾ ಸಂಘವು 1988ರಲ್ಲಿ ಚನಿಯ ನಾಯ್ಕರಿಗೆ 'ಸಂಮಾನ'ವೊಂದನ್ನು ಆಯೋಜಿಸಿತ್ತು. ಶ್ರೀ ಕೆ.ಡಿ.ಕುಶಾಲಪ್ಪನವರ ಸಾರಥ್ಯದಲ್ಲಿ ಅದ್ದೂರಿಯಾಗಿಯೇ ಸಮಾರಂಭ ನಡೆದಿತ್ತು. ಬಹುಶಃ ಪೆರಾಜೆಯ ಇತಿಹಾಸದಲ್ಲಿಯೇ 'ಸಂಮಾನ' ಎಂಬ ಕಲ್ಪನೆಯೇ ಹೊಸತು.

ಶಾಲು, ಹಣ್ಣುಹಂಪಲು, ಸ್ಮರಣಿಕೆ, ಗುಣಕಥನಫಲಕ, ಹಾರ... ಇತ್ಯಾದಿ ವಸ್ತುಗಳು ಸಂಮಾನಕ್ಕೆ ಬೇಕೆಂಬುದೇ ಅಲ್ಲಿ ಗೊತ್ತಿರಲಿಲ್ಲ. ಇದನ್ನೆಲ್ಲಾ ಬೆರಗು ಕಣ್ಣುಗಳಿಂದ ನೋಡದ ಅನೇಕ ಹಿರಿಯರ ಶ್ಲಾಘನೆ ನೆನಪಾಗುತ್ತದೆ. ಈ ಅದ್ದೂರಿ ವ್ಯವಸ್ಥೆಯ ನೊಣಭಾರವನ್ನು ನಾನೂ ಹೊತ್ತಿದ್ದೆ. ಕೆಲವು ಪಾನಪ್ರಿಯ ಬಂಧುಗಳಿಂದ ಸಂಮಾನದ ಬಳಿಕ ನನಗೂ 'ಅದ್ದೂರಿ ಸಂಮಾನ'ವೂ ಸಿಕ್ಕಿತೆನ್ನಿ. ಇದು ಪೆರಾಜೆ ಕಲಾಬದುಕಿನ ಒಂದಂಗ. ಇದನ್ನು ಹೇಂಗೆ ಮರೆಯಲಿ? 'ಈರೆಗ್ ಬೋಡ್ಚಾಂಡ್' ಚನಿಯರೇ ಹೇಳಿದ್ದರು.

ಹಲವು ದಶಕಗಳಿಂದ ಚನಿಯ ನಾಯ್ಕರಿಗೆ ಪೆರಾಜೆಯ ನಂಟಿತ್ತು. ಸುಳ್ಯ, ಪುತ್ತೂರು, ಕಾಸರಗೋಡು..ಮೊದಲಾದೆಡೆ ಇವರ ಭಾಗವತಿಕೆ ಇಲ್ಲದೆ ಆಟವಿಲ್ಲ! ಹೀಗೆ ಸಿಕ್ಕಾಗಲೆಲ್ಲಾ 'ಆಕಾಶವಾಣಿಗೊಮ್ಮೆ ಹೋಗಬೇಕು' ಎಂಬ ಆಶೆ ತೋಡಿಕೊಳ್ಳುತ್ತಿದ್ದರು. ಅದಕ್ಕಾಗಿಯೇ 'ಯಕ್ಷರಂಜಿನಿ ಸುಳ್ಯ' ಅಂತ ತಂಡವೊಂದನ್ನು ರೂಪಿಸಿದ್ದೆ. ಸಮಾನ ಮನಸ್ಕ ಹವ್ಯಾಸಿ ಕಲಾವಿದರನ್ನು ಸೇರಿಸಿದ್ದೆ. ಪೃಥುರಾಜ ವಿಜಯ, ನರಕಾಸುರ.. ಮೊದಲಾದ ನಾಲ್ಕಾರು ಪ್ರಸಂಗಗಳು ಪ್ರಸಾರವಾಗಿದ್ದುವು. ಶ್ರೋತೃಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಂಭಾವನೆ ವಿಚಾರದಲ್ಲಿ ಒಬ್ಬ ಕಲಾವಿದರ ಅಪಸ್ವರ ಬಂದಾಗ 'ನಮ ಈಡೆಗ್ ಉಂತಾಕೋ' ಎಂದು ಬಿಟ್ಟರು. ಎರಡೇ ವರುಷದಲ್ಲಿ ಯಕ್ಷರಂಜಿನಿಗೆ ವಿದಾಯ!

ಸಲುಗೆಯ ಕವಚದೊಳಗೆ ನಾಯ್ಕರಲ್ಲಿ ಲಘುವಾಗಿ ವ್ಯವಹರಿಸಿ, ಅನಾವಶ್ಯಕವಾಗಿ ವಾಚಾಳಿತನ ತೋರಿ, ತಾನೊಬ್ಬ 'ಯಕ್ಷಬ್ರಹ್ಮ' ನೆಂದೆಣಿಕೊಳ್ಳುವ ಹವ್ಯಾಸಿ ಕಲಾವಿದರನೇಕರು ಅವರ ಬದುಕಿನಲ್ಲಿ ಹಾದು ಹೋಗಿದ್ದಾರೆ. ಈ ಕುರಿತು ಅವರನ್ನೊಮ್ಮೆ ಪ್ರಶ್ನಿಸಿದ್ದಾಗ ಅವರದು ಒಂದೇ ಪದದ ಉತ್ತರ - 'ಸಯ್ಯಡ್'! ಈ ಪದದಲ್ಲಿ ಖಚಿತ ನಿಲುವಿತ್ತು. ಉದಾಸೀನತೆಯಿತ್ತು. ಸ್ವಷ್ಪ ನಿಲುವಿತ್ತು.

(ಮುಂದಿನ ಕಂತಲ್ಲಿ ಮುಂದುವರಿಯುವುದು)

Sunday, January 3, 2010

’ಹಿರಿಯಣ್ಣ’ನ ಒಡನಾಟದ ನೆನಪು (ಕಂತು-೨)

ನಮ್ಮ ಹವ್ಯಾಸಿ ಚೌಕಿಯನ್ನೊಮ್ಮೆ ನೋಡುವಾ.

ಇಂದಿನ ಆಟದಂದು ನಿನ್ನೆಯ-ಮೊನ್ನೆಯ ಆಟದ ಸುದ್ದಿಯನ್ನೋ, ವಿಕಾರಗಳನ್ನೋ, ಪಾತ್ರಧಾರಿಗಳ ನಿಂದೆಯನ್ನೋ ಮಾಡುತ್ತಾ ತಮ್ಮನ್ನು ತಾವೇ ಉದ್ಘಾಟಿಸಿಕೊಳ್ಳುವ 'ಪತನಸುಖಿ' ಕಲಾವಿದರು ಎಷ್ಟಿಲ್ಲ? ನಾಳೆಯ ಆಟದ ಬಗ್ಗೆ, ಅವರು ನೀಡುವ ಸಂಭಾವನೆ ಬಗ್ಗೆ, ಅಲ್ಲಿನ ವ್ಯವಸ್ಥೆಗಳ ಕುರಿತು ವಿಮರ್ಶೆ ನಡೆಯುತ್ತದೇ ವಿನಾ, ಇಂದು ನಡೆಯುತ್ತಿರುವ ಪ್ರದರ್ಶನದ ಕುರಿತಾಗಿ ಯಾರೂ ಮಾತನಾಡುವುದಿಲ್ಲ. ಪೂರ್ವಸಿದ್ಧತೆಯಂತೂ ಇಲ್ಲವೇ ಇಲ್ಲ.

ಇಂತಹ ಚೌಕಿಯಲ್ಲಿ ಚನಿಯ ನಾಯ್ಕರು 'ಅವರಿಗೇ ಮೀಸಲಾದ ಜಾಗದಲ್ಲಿ' ಕುಳಿತು ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚೆಂದರೆ ಒಂದು ಕಿರುನಗೆ. ಅವರಿಗೆ ಮತ್ತೂ ಅಸಹನೆಯಾದರೆ, ತಾವು ನಂಬಿದ ಆಪ್ತರನ್ನು ಹತ್ತಿರ ಕುಳ್ಳಿರಿಸಿಕೊಂಡು ವೀಳ್ಯ ಮೆಲ್ಲುತ್ತಾ ಇರುವುದು ನಾಯ್ಕರದೇ ಸ್ಟ್ರೈಲ್.

ಶ್ವೇತವಸ್ತ್ರಧಾರಿಯಾದ ನಾಯ್ಕರು ಕೆಂಪು ಯಾ ಹಸಿರು ಶಾಲನ್ನು ಹೆಗಲಿಗೇರಿಸಿ, ಕಪ್ಪಂಚಿನ ಚಷ್ಮಾವನ್ನು ಧರಿಸಿ, ಕೆಂಪು ತಿಲಕವಿಟ್ಟು ರಂಗದಲ್ಲಿ ಕುಳಿತಾಗಲೇ 'ಅವ್ಯಕ್ತ ಶಿಸ್ತು' ಆವರಿಸಿಬಿಡುತ್ತದೆ. (ಶೇಣಿಯವರು ಅರ್ಥಗಾರಿಗೆ ಬಂದಾಗ ಉಂಟಾಗುತ್ತಿದ್ದಂತೆ!) ಆ ನಂತರದ ಆಟದ ಕಳೆಯೇ ಬೇರೆ. ಇದು ಅನುಭವವೇದ್ಯ.

ಪೆರಾಜೆಯ ಯಕ್ಷಗಾನ ಇತಿಹಾಸದಲ್ಲಿ ಚನಿಯ ನಾಯ್ಕರ ಹೆಸರು ಅಜರಾಮರ. ಸುಮಾರು ಏಳರ ದಶಕದಲ್ಲಿ ಇವರ ಸಮರ್ಥ ನಿರ್ದೇಶನ ಮತ್ತು ಪ್ರಕಾಶ್ಚಂದ್ರ ರಾವ್ ಬಾಯಾರು ಇವರ ಗುರುತ್ವದಲ್ಲಿ ರೂಪುಗೊಂಡ ತಂಡಗಳ ಪ್ರದರ್ಶನ ಮತ್ತು ಅವು ಬಾಚಿದ ಪುರಸ್ಕಾರಗಳು ಕಾಲದ ದಾಖಲೆಗಳು. ಮತ್ತೆ ಪುನಃ 87-88ರ ಸುಮಾರಿಗೆ ಚಿಗುರೊಡೆದು ಗಿಡವಾಗಿತ್ತು. ಆದರೆ ಗಿಡದ ಆರೋಗ್ಯ ಮಾತ್ರ ಮೊದಲಿನಂತಿರಲಿಲ್ಲ!

ಚನಿಯರು ಅಜಾತ ಶತ್ರು. ಅವರು ಪೆರಾಜೆಯಲ್ಲಿ ಬಸ್ಸಿಳಿದು ಹೋಟೆಲ್ ಬಾಬಣ್ಣದ ಹೋಟೆಲಿನಲ್ಲಿ ಚಹಾ ಕುಡಿದಾದ ಬಳಿಕವೇ ಮುಂದಿನ ಪ್ರಯಾಣ. ನಮ್ಮ ಮನೆಗೆ ಒಂದೂವರೆ ಕಿಲೋಮೀಟರ್ ದೂರವಷ್ಟೇ. ನಾಯಕರು ನಮ್ಮನೆಗೆ ತಲಪುವಾಗ ಭರ್ತಿ ಎರಡು ಗಂಟೆ! ಕಾರಣ, ಅವರನ್ನು ಮಾತನಾಡಿಸುವ, ಅವರಿಗೆ ಚಹ-ಬೀಡಿ ನೀಡಿ ಗೌರವಿಸುವ ಅಭಿಮಾನಿಗಳಿದ್ದರು.

ಪೆರಾಜೆಯಲ್ಲಿ ನಾಯ್ಕರ ಹೆಸರು, ಅವರ ಭಾಗವತಿಕೆ ಮನೆಮಾತು. ಒಪ್ಪಿಕೊಂಡ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರು. ಅಸೌಖ್ಯದಿಂದ ಒಂದು ಬರಲಾಗದಿದ್ದರೆ ಊರಿನವರಿಗೆ ಏನೋ ಕಳಕೊಂಡ ಭಾವ. ಹೀಗಾದಾಗ ಇನ್ನೊಂದು ದಿವಸ ಬಂದು, ಅಲ್ಲಿನ ಸಂಘದ ಕೆಲವರ ಮನೆಗೆ ಹೋಗಿ ಚಹಾ ಕುಡಿದು, ಮಾತನಾಡಿಸುವ ದೊಡ್ಡಗುಣ.
(ಮುಂದಿನ ಕಂತಲ್ಲಿ ಮುಂದುವರಿಯುವುದು)

Saturday, January 2, 2010

'ಹಿರಿಯಣ್ಣ'ನ ಒಡನಾಟದ ನೆನಪು



ಮರೆಯಾದವರು-ಮರೆಯಲಾಗದವರು ಮಾಲಿಕೆ - ೨


(ದಾಸರಬೈಲು ಚನಿಯ ನಾಯ್ಕರು ಸುಳ್ಯ ಸನಿಹದ ಮರ್ಕಂಜದವರು. ಯಕ್ಷಗಾನ ಭಾಗವತರು. ಶ್ರೀ ಧರ್ಮಸ್ಥಳ ಮೇಳದಲ್ಲಿ ಕಡತೋಕರ ಗರಡಿಯಲ್ಲಿ ಪಳಗಿದವರು. ಅವರು ಮರಣಿಸಿ ದಶಕಗಳು ಸಂದಿವೆ. ಅವರ ಒಡನಾಟದ ನೆನಪನ್ನು ಮೆಲುಕು ಹಾಕುವುದು ಬರೆಹದ ಉದ್ದೇಶ. 2004 ರಲ್ಲಿ ಅವರ ಕುರಿತಾದ ಸಂಸ್ಮರಣ ಕೃತಿ 'ಯಕ್ಷಕೋಗಿಲೆ' ಎಂಬುದನ್ನು ಸಂಪಾದಿಸಿದ್ದೆ. ಅದರಲ್ಲಿರುವ ನನ್ನ ಬರೆಹವನ್ನು ಮೂರ್ನಾಲ್ಕು ಕಂತುಗಳಲ್ಲಿ ಇಲ್ಲಿ ನಿರೂಪಿಸುತ್ತಿದ್ದೇನೆ.)

ಒಂದು ಕಾಲಘಟ್ಟದಲ್ಲಿ ಸುಳ್ಯ ತಾಲೂಕಿನಲ್ಲಿ ನಡೆಯುತ್ತಿದ್ದ ಕೂಟಾಟಗಳಲ್ಲಿ ದಾಸರಬೈಲು ಚನಿಯ ನಾಯ್ಕರಿಗೆ ಮೊದಲ ಮಣೆ. ಅವರಿಲ್ಲದೆ ಕಾರ್ಯಕ್ರಮಗಳಿಲ್ಲ. ಯಾವುದೇ ಯಕ್ಷಗಾನ ಸಂಬಂಧಿ ಕರಪತ್ರದಲ್ಲಿ ಚನಿಯರ ಹೆಸರು ಇಲ್ಲದಿರುವುದು ವಿರಳ.
ಚನಿಯರು ಗತಿಸಿ (7-8-1999) ದಶಕಗಳೇ ಸಂದುವು. ಅವರು ಜಾಗಟೆ ಹಿಡಿಯುತ್ತಿದ್ದಷ್ಟು ಕಾಲ ರಂಗೇರುತ್ತಿದ್ದ ರಂಗವೀಗ ಮಸುಕು.

ಚೌಕಿಯಲ್ಲಿ ಸದ್ದಿಲ್ಲದೆ, ಸದ್ದುಮಾಡದೆ ಇರುವ ನಾಯ್ಕರು ಏನೂ ಅರಿಯದವರಂತೆ ಇದ್ದು ಬಿಡುವುದು ಜಾಯಮಾನ. ಆದರೆ ಜಾಗಟೆ ಹಿಡಿದಾಗ ಅವರೊಳಗಿನ 'ಸಮರ್ಥ ನಿರ್ದೇಶಕ' ಅನಾವರಣಗೊಳ್ಳುತ್ತಾನೆ. 'ನಿರ್ದೇಶನ’ ಎಂಬುದು ಹೇರುವ ಸರಕಾಗಬಾರದು. ಅದು ಸ್ವ-ರೂಢವಾಗಿ ಬರಬೇಕು. ಚನಿಯರು ರಂಗದಲ್ಲಿದ್ದರೆ ವೇಷಧಾರಿಗೆ ಅರಿವಾಗದಂತೆ ರಂಗವನ್ನು ನಿರ್ದೇಶಿಸುತ್ತಿದ್ದರು. ಇದು ಅವರ ಜಾಣ್ಮೆ. ನಿರ್ದೇಶನ ಎಂಬುದು ಅಹಂಕಾರ ಪ್ರಕಟಣೆಯ ಹುದ್ದೆಯಲ್ಲ ಎಂಬುದನ್ನು ನಾಯ್ಕರು ನಡೆದು ತೋರಿದವರು.

ಹತ್ತು ಗಂಟೆಗೆ ಆಟ ಶುರುವೆಂದರೆ, ಹವ್ಯಾಸಿ ರಂಗದಲ್ಲಿ ಭಾಗವತನಾದವ 9-55ಕ್ಕೆ ಚೌಕಿಗೆ ಬಂದು ಗಡಿಬಿಡಿ ಮಾಡುವ ಸ್ಥಿತಿ ಎಷ್ಟೋ ಸಲ ನೋಡಿದ್ದೆ. ಇದಕ್ಕೆ 'ಬ್ಯುಸಿ'ಯ ಲೇಪ! ಚನಿಯರು ಇಂತಹ ಅಪವಾದದಿಂದ ದೂರ. ಆಟ ಎಷ್ಟು ಹೊತ್ತಿಗೆ ಶುರುವಾಗಲಿ, ಎಂಟು ಗಂಟೆಗೆಲ್ಲಾ ಚೌಕಿಯಲ್ಲಿ ಹಾಜರ್. ಇದು ಭಾಗವತನ ಶಿಸ್ತು, ನಿಯಮ. ಪೆರಾಜೆಯಲ್ಲಿ ನಡೆಯುತ್ತಿದ್ದ ಆಟ, ಕೂಟಗಳಿಗೆ ಚನಿಯರು ಬೆಳಿಗ್ಗೆಯೇ ಬರುತ್ತಿದ್ದರು. ನಮ್ಮಲ್ಲಿ ವಿಶ್ರಾಂತಿಯಾಗಿ ಆಟಕ್ಕೆ ಹೋಗುತ್ತಿದ್ದರು. ಇದು ಕೆಲವರ ಕಂಗೆಣ್ಣಿಗೂ ಗುರಿಯಾಗಿತ್ತು!

ಒಂದು ರಾತ್ರಿ ಎರಡ್ಮೂರು ಕಾರ್ಯಕ್ರಮಕ್ಕೆ ಒಪ್ಪಿ, ಸಂಘಟಕರ ಚಿತ್ತಸ್ಥೈರ್ಯವನ್ನು ಪರೀಕ್ಷಿಸುವ ಭಾಗವತರುಗಳನ್ನು ಹತ್ತಿರದಿಂದ ಬಲ್ಲೆ. ಎಷ್ಟು ಹೊತ್ತಿಗೇ ಬರಲಿ 'ಕವರ್ ಮಾತ್ರ ಫುಲ್' ಇರಲೇಬೇಕು! ಇಲ್ಲದಿದ್ದಲ್ಲಿ ಜಗಳ ತೆಗೆವವರ ನೆನಪಿನ್ನೂ ಮಾಸಿಲ್ಲ. ಚನಿಯರು ಎಂದೂ 'ಕವರಿಗಾಗಿ' ಭಾಗವತಿಗೆ ಮಾಡಿಲ್ಲ. ಭಾಗವತನ ಶಿಸ್ತು ಮತ್ತು ಗೌರವವನ್ನು ಕವರಿಗೆ ಒತ್ತೆಯಿಡುತ್ತಿರಲಿಲ್ಲ.

ಒಂದು ರಾತ್ರಿಗೆ ಒಂದೇ ಕಾರ್ಯಕ್ರಮ. ಅನಿವಾರ್ಯವೆಂದಾದಲ್ಲಿ ಸಂಘಟಕರಿಗೆ ಹೊರೆಯಾಗದಂತೆ ವ್ಯವಹಾರ.
ಚನಿಯ ನಾಯಕರಿಗೆ ಬೆಳಗ್ಗಿನ ಜಾವ ಭಾಗವತಿಕೆ ಇದೆಯೆನ್ನಿ. ಮೊದಲು ಒಬ್ಬರೋ, ಇಬ್ಬರೋ ಭಾಗವತರ ಪಾಳಿ ಇದ್ದೇ ಇದೆ. ಆ ಹೊತ್ತಲ್ಲಿ ಚೌಕಿಯಲ್ಲಿ ಮುಸುಕೆಳೆದು, ಗೊರಕೆ ಹೊಡೆದು, ಚೌಕಿಯ ಪಾವಿತ್ರ್ಯತೆಯನ್ನು ಎಂದೂ ಕೆಡಿಸುತ್ತಿರಲಿಲ್ಲ. ಇತರರ ಭಾಗವತಿಕೆಯನ್ನು ಕೇಳುವ, ಪ್ರಶಂಸಿಸುವ ದೊಡ್ಡ ಗುಣ ಇತ್ತು.
(ಮುಂದಿನ ಕಂತಲ್ಲಿ ಮುಂದುವರಿಯುವುದು)