Thursday, September 27, 2018

ಸುಮನಸ ಮತ್ತು ಅಡ್ಡಿಗೆ



ಯಕ್ಷಗಾನ ಕಲಾವಿದರಿಗೆ, ಕಲಾಸಕ್ತರಿಗೆ, ಕಲಾಭಿಮಾನಿಗಳಲ್ಲಿ ಇರಬೇಕಾದ ಪುಸ್ತಕ
 ‘ ಸುಮನಸ’ ಮತ್ತು ‘ಅಡ್ಡಿಗೆ’

ಸುಮನಸ : 21 ಮಂದಿ ಕೀರ್ತಿಶೇಷ ಕಲಾವಿದರ ಪರಿಚಯ ಮತ್ತು 32 ಮಂದಿ ಹಿರಿಯ ಕಲಾವಿದರ ಕಲಾಯಾನಕ್ಕೆ ಬೆಳಕು ಹಾಕುವ ವಿಶೇಷ ಲೇಖನಗಳಿವೆ. ಎಲ್ಲೂ ಸುಲಭವಾಗಿ ಸಿಗದ ಮಾಹಿತಿಗಳು.

ಸುಮನಸ ಕೃತಿಯ ಪ್ರಕಟಣೆಯನ್ನು ಸಂಪಾಜೆಯ ‘ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ’ ಮಾಡಿ ನನ್ನ ಅಕ್ಷರಯಾನವನ್ನು ಬೆಂಬಲಿಸಿದೆ. ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.

ಈ ಹಿನ್ನೆಲೆಯಲ್ಲಿ ‘ಸುಮನಸ’ ಕೃತಿಯನ್ನು ಓದುಗರಿಗೆ ರಿಯಾಯಿತಿ ದರದಲ್ಲಿ ನೀಡುತ್ತಿದ್ದೇನೆ.  ಪುಸ್ತಕದ ಬೆಲೆ ರೂ.150. ಯಕ್ಷಪ್ರಿಯ ಓದುಗರಿಗೆ ರಿಯಾಯಿತಿಯಲ್ಲಿ - ರೂ.80

ಅಡ್ಡಿಗೆ  (ಯಕ್ಷ ಯವನಿಕೆಯ ಸುತ್ತಮುತ್ತ) – ಯಕ್ಷಗಾನದ ಕುರಿತ ವಿಶೇಷ ಬರಹಗಳ ಅಂಕಣ. ಉದಾ : ‘ಬಪ್ಪ’ ಸಾರಿದ ಸಹಿಷ್ಣುತೆ, ಬಾಹುನ ಭಾವುಕ ಅಂತರಂಗ, ಕಾಫಿ ನಾಡಿನಲ್ಲಿ ಅರಳಿದ ಪಾಪಣ್ಣ, ಅಯ್ಯಪ್ಪ ಆಖ್ಯಾನಕ್ಕೆ ಅರ್ಧ ಶತಮಾನ, ಮೂಲ್ಕಿ ಮೇಳದ ಯಶೋಯಾನ, ಅಮೇರಿಕಾದಲ್ಲಿ ತಾಳಮದ್ದಳೆಯ ಹಸಿವು....) ಪುತ್ತೂರಿನ ಶ್ರೀ ಜ್ಞಾನಗಂಗಾ ಪುಸ್ತಕ ಮಳಿಗೆಯು ಪ್ರಕಾಶಿಸಿದೆ. ಈ ಪುಸ್ತಕದ ಬೆಲೆ ರೂ.100. . ಯಕ್ಷಪ್ರಿಯ ಓದುಗರಿಗೆ ರಿಯಾಯಿತಿಯಲ್ಲಿ  - ರೂ.70

ಪುಸ್ತಕದ ಕುರಿತು ತಮಗೆ ಆಸಕ್ತಿಯಿದ್ದರೆ ಎಂಓ ಮಾಡಬಹುದು. ಅಥವಾ ಆನ್ ಲೈನ್ ಮೂಲಕವೂ ಪಾವತಿ ಸಲ್ಲಿಸಬಹುದು. ಪುಸ್ತಕವನ್ನು ಸಾದಾ ಅಂಚೆಯಲ್ಲಿ ಕಳುಹಿಸಲಾಗುವುದು. ತಾವು ಎಂಒ ಅಥವಾ ಆನ್ ಲೈನ್ ಪಾವತಿ ಕಳುಹಿಸಿದ ತಕ್ಷಣ 9448625794 ಸಂಖ್ಯೆಗೆ ತಮ್ಮ ವಿಳಾಸವನ್ನು ಮೆಸ್ಸೇಜ್ ಅಥವಾ ವಾಟ್ಸಾಪ್ ಸಂದೇಶ ಕಳುಹಿಸಿದರೆ ಉಪಕಾರ. ಇಲ್ಲಿದಿದ್ದರೆ ಯಾರ ಪಾವತಿ ಎಂದು ಗೊತ್ತಾಗದು. 

(ನನ್ನ ವಿಳಾಸ : ನಾ. ಕಾರಂತ ಪೆರಾಜೆ, ಅಂಚೆ ಪೆಟ್ಟಿಗೆ 08, ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು – 574 201 – ದ.ಕ. 9448625794, karanth2005@gmail.com)

Bank Details :
 Name : Narayana Karantha : Bank – Canara Bank, Puttur (Karnataka – D.K.Dist) S.B.A/c No. 0615101028712 :  IFSC Code – CNRB 0000615


Friday, September 7, 2018

ಪಾಪಣ್ಣ ಪ್ರಸಂಗದೊಳಗೆ ಮೌನದ ಸ್ವಗತ

(ಸಾಂದರ್ಭಿಕ ಚಿತ್ರ : ಪೆರುವಡಿಯವರಪಾಪಣ್ಣ, ಕೊಕ್ಕಡ ಈಶ್ವರ ಭಟ್ಟರಗುಣಸುಂದರಿ - ಬಹುಶಃ ಅರ್ಧ ಶತಮಾನ ದಾಟಿದ ಚಿತ್ರವು ಕೊಕ್ಕಡದವರ ಸಂಗ್ರಹದಲ್ಲಿತ್ತು)      
    
              ಪೆರುವಡಿ ನಾರಾಯಣ ಭಟ್ಟರ ಯಜಮಾನಿಕೆಯ ಮೂಲ್ಕಿ ಮೇಳವು - 1960 ಆಜೂಬಾಜು - ‘ಪಾಪಣ್ಣ ವಿಜಯ-ಗುಣಸುಂದರಿಪ್ರಸಂಗವನ್ನು ರಂಗದಲ್ಲಿ ಪ್ರಸಿದ್ಧೀಕರಿಸಿತ್ತು. ಪೌರಾಣಿಕದಂತೆ ಕಾಲ್ಪನಿಕ ಪ್ರಸಂಗವು ಗೆಲ್ಲದು, ಪ್ರೇಕ್ಷಕರು ಸ್ವೀಕರಿಸಲಾರರು ಎಂಬ ಭಯದಿಂದ ಮೊದಲ ಪ್ರದರ್ಶನವು ಕೊಪ್ಪದ ಎಸ್ಟೇಟಿನಲ್ಲಿ ಜರುಗಿತ್ತು! ಪೌರಾಣಿಕದ ಸೆಳೆತವನ್ನು ಬಿಟ್ಟುಕೊಡದ ಪ್ರಸಂಗವು ಗೆದ್ದಿತು. ನಂತರದ ದಿವಸಗಳಲ್ಲಿ ಪಾಪಣ್ಣ ಸುರತ್ಕಲ್ ಮೇಳದ ಟೆಂಟ್ ಭರ್ತಿಗೆ ಕಾರಣನಾದ! ಬಳಿಕ ಬಡಗು ತಿಟ್ಟಿನ ಮೇಳಗಳು, ಹವ್ಯಾಸಿ ತಂಡಗಳು ಪ್ರಸಂಗವನ್ನು ಸ್ವೀಕರಿಸಿದ್ದುವು. 
       ಪಾಪಣ್ಣ ಪಾತ್ರವನ್ನು ಕಡೆದವರು ಹಾಸ್ಯಗಾರ ಪೆರುವಡಿಯವರು. ಆಗಲೇಬಾಹುಕ ಪಾತ್ರವು ಸಿದ್ಧಿ-ಪ್ರಸಿದ್ಧಿಯನ್ನು ತಂದಿತ್ತು. ಮೇಲ್ನೋಟಕ್ಕೆ ಬಾಹುಕ ಮತ್ತು ಪಾಪಣ್ಣ ಪಾತ್ರಗಳ ಬಾಹ್ಯ ಸ್ವರೂಪದಲ್ಲಿ ವ್ಯತ್ಯಾಸವಿಲ್ಲ. ಬಾಹುಕನಂತೆ ಪಾಪಣ್ಣನ ಚಿತ್ರಣ ಆಗಬಾರದೆಂಬ ಎಚ್ಚರವು ಪಾತ್ರಕ್ಕೆ ಹೊಸ ರೂಪ, ಅಂದವನ್ನು ನೀಡಿತು. ಪೆರುವಡಿಯವರಿಗೆಪಾಪಣ್ಣ ಭಟ್ರುಎನ್ನುವ ಅಭಿದಾನವನ್ನು ಪ್ರಸಂಗವೇ ತಂದು ಕೊಟ್ಟಿತು.
       ಪ್ರಸಂಗದಲ್ಲಿ ಗಟ್ಟಿಗರ ಪಾತ್ರವರ್ಗ ಗಮನಿಸಿ. ಪೆರವೋಡಿಯವರಪಾಪಣ್ಣ’, ಪಾತಾಳ ವೆಂಕಟ್ರಮಣ ಭಟ್ಟರಗುಣಸುಂದರಿ’, ಗುಂಪೆ ರಾಮಯ್ಯ ರೈಗಳಉಗ್ರಸೇನ’, ಪುತ್ತೂರು ನಾರಾಯಣ ಹೆಗಡೆ ಮತ್ತು ಎಂಪೆಕಟ್ಟೆ ರಾಮಯ್ಯ ರೈಗಳದುರ್ಮುಖ-ದುರ್ಮತಿ(ಈಗದು ಹರಮತಿ, ಕಾಲಮತಿಯಾಗಿ ನಾಮಾಂತರವಾಗಿದೆ), ಮಧೂರು ಗಣಪತಿ ರಾಯರಚಂದ್ರಸೇನ’, ಚಂದ್ರಗಿರಿ ಅಂಬು ಅವರಕರಡಿಪಾತ್ರಗಳು ಜನಮೆಚ್ಚುಗೆ ಪಡೆದುವು. ‘ಕರಡಿಪಾತ್ರವನ್ನು ಚಂದ್ರಗಿರಿಯವರು ಮುಖವರ್ಣಿಕೆ, ವೇಷಭೂಷಣ ತೊಟ್ಟು ಅಂದವಾಗಿ ಮಾಡುತ್ತಿದ್ದರಂತೆ. ಮುಂದೆ ಗುಣಸುಂದರಿ ಪಾತ್ರವನ್ನು ಕೊಕ್ಕಡ ಈಶ್ವರ ಭಟ್, ಎಂ.ಕೆ.ರಮೇಶ ಆಚಾರ್ಯರು ಪಾತ್ರವನ್ನು ಎತ್ತರಕ್ಕೆ ಒಯ್ದರು. 
       ಸುರತ್ಕಲ್ ಮೇಳದಲ್ಲಿ ತೆಕ್ಕಟ್ಟೆ ಆನಂದ ಮಾಸ್ತರರಸಿದ್ಧಯೋಗಿ’, ಶೇಣಿಯವರಕುಬೇರ ಪಾತ್ರಗಳು ಮರುಹುಟ್ಟು ಪಡೆದುವು. ಮೂಲ್ಕಿ ಮತ್ತು ಸುರತ್ಕಲ್ ಮೇಳಗಳಲ್ಲಿ ಅತಿ ಹೆಚ್ಚು ಪ್ರದರ್ಶನಗಳಾಗಿವೆ. ಹಿರಿಯ ಕಲಾವಿದರ ಬೌದ್ಧಿಕ ಕುಶಲಗಾರಿಕೆಯಿಂದ ಪಾತ್ರಗಳು ಮೇಲ್ಮೆ ಸಾಧಿಸಿವೆ. ಅದಕ್ಕೊಂದು ಅಂದವಾದ ರೂಪವನ್ನು ನೀಡಿದ್ದಾರೆ. ಸೌಂದರ್ಯವನ್ನು ಕೆಡಿಸುವ ಅರ್ಹತೆ ಮತ್ತು ಹಕ್ಕು ನಮಗಿಲ್ಲ. ಬೇಕಾದಂತೆ ಪಾತ್ರವನ್ನು ತಿರುಚಿದರೆ ಹಿರಿಯರಿಗೆ ಮಾಡುವ ಅವಮಾನ,” ಎನ್ನುತ್ತಾರೆ ಪೂಕಳ ಲಕ್ಷ್ಮೀನಾರಾಯಣ ಭಟ್. ಇವರು ಸುರತ್ಕಲ್ ಮೇಳದಲ್ಲಿಉಗ್ರಸೇನಪಾತ್ರ ಮಾಡುತ್ತಿದ್ದರು.
       ಪೂಕಳದವರ ಆಶಯದ ಹಿಂದೆ ಪ್ರಸಂಗದ ಮತ್ತು ಕವಿಯ ಕುರಿತಾದ ಗೌರವವಿದೆ. ನಮಗೆ ಬೇಕಾದಂತೆ ರಂಗದಲ್ಲಿ ಪಾತ್ರವನ್ನು ತಿರುಚುವುದು ಕಲೆಗೆ ಮಾಡುವ ಅವಮಾನವೆಂಬ ಸಂದೇಶವಿದೆ. ವರ್ತಮಾನದ ರಂಗದಲ್ಲಿ ಇಂತಹ ವಿದ್ಯಮಾನಗಳು ಅಲ್ಲಿಲ್ಲಿ ಮಿಂಚುತ್ತಿವೆ! ಅದಕ್ಕೆ ಒಂದಷ್ಟು ಸಮರ್ಥನೆಗಳ ಲೇಪ. ಅಭಿಮಾನಿಗಳ ಮುದ್ರೆ. ಲೇಖನಗಳ ಮೂಲಕ ಅಂಕಿತ. ಅನಿವಾರ್ಯವೆಂಬ ಹಣೆಪಟ್ಟಿ. ಮಾತನಾಡಿದರೆ ಬಾಯಿಮುಚ್ಚಿಸುವ ತಂತ್ರಗಾರಿಕೆ!
       ಎಚ್ಚರಗಳ ಹಿನ್ನೆಲೆಯಲ್ಲಿ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯು ಕಳೆದ ತಿರುಗಾಟದಲ್ಲಿಪಾಪಣ್ಣ ವಿಜಯಪ್ರಸಂಗವನ್ನು ಪ್ರದರ್ಶನ ಮಾಡಿತ್ತು. ಅಂದು ಸುರತ್ಕಲ್ ಮೇಳದಲ್ಲಿದ್ದ ಪೂಕಳ ಲಕ್ಷ್ಮೀನಾರಾಯಣ ಭಟ್ಟರು ಬಹುತೇಕ ಪ್ರದರ್ಶನಗಳಲ್ಲಿ ಕಲಾವಿದರಾಗಿ ಭಾಗವಹಿಸಿದ್ದರು. ನಿರ್ದೇಶನಗಳನ್ನೂ ನೀಡಿದ್ದರು. ಪರಿಣಾಮಕಾರಿ ಸಂವಾದದ ಸೊಗಸನ್ನು ಕಲಾವಿದರಿಗೆ ನಿರೂಪಿಸಿದ್ದರು. ಪಾತ್ರಗಳ ಜವಾಬ್ದಾರಿಗಳನ್ನು ಹೇಳಿದ್ದರು. ಎಡನೀರು ಮೇಳದ ಕಲಾವಿದರು ಪಾತ್ರಗಳಿಗೆ ನ್ಯಾಯ ಒದಗಿಸಿದ್ದು,  ಪ್ರೇಕ್ಷಕರಿಂದ ಪ್ರಶಂಸೆಯನ್ನೂ ಪಡೆದಿದ್ದಾರೆ.
       ಮೇಳವು ನನಗೆಗುಣಸುಂದರಿಪಾತ್ರವನ್ನು ಮಾಡುವ ಅವಕಾಶ ಒದಗಿಸಿತ್ತು. ಹಿರಿಯರು ಹಾಕಿಕೊಟ್ಟ ದಾರಿ, ಊರಿದ ಹೆಜ್ಜೆ ಏನಿದೆಯೋ ಅದನ್ನು ನೆನಪಿಟ್ಟುಕೊಂಡು ಯಥಾಶಕ್ತಿ, ಯಥಾಮತಿಯಿಂದ ನಿರ್ವಹಿಸಿದ್ದೇನೆ. (ಇಲ್ಲಿನಾನು, ನನ್ನಎನ್ನುವ ಪದಪ್ರಯೋಗ ಅಹಂಕಾರವಲ್ಲ. ವಿಷಯ ಪ್ರಸ್ತುತಿಯ ಕೊಂಡಿಯಷ್ಟೇ) ಹಿರಿಯರು ಪಾತ್ರಕ್ಕೆ ತಮ್ಮ ಗರಿಷ್ಠತಮ ಬೌದ್ಧಿಕತೆಯನ್ನು ಧಾರೆಯೆರಿದಿದ್ದರು. ನನ್ನ ಪಾತ್ರವಿದೆಯಲ್ಲಾ, ಅದು ಧಾರೆಯ ಒಂದು ಹನಿ ಮಾತ್ರವಷ್ಟೇ. ಪಾತ್ರವೊಂದನ್ನು ಅನುಭವಿಸುವುದಕ್ಕೆ ಗುಣಸುಂದರಿಗೆ ಹೇರಳ ಅವಕಾಶಗಳಿವೆ.
           ಪಾತ್ರದ ಪೂರ್ವಾರ್ಧವನ್ನು ಮೇಳದ ಸ್ತ್ರಿಪಾತ್ರಧಾರಿ ಬಾಲಕೃಷ್ಣ ಸೀತಾಂಗೋಳಿ ನಿರ್ವಹಿಸುತ್ತಿದ್ದರು. ಪಾಪಣ್ಣ ಮತ್ತು ಗುಣಸುಂದರಿಯನ್ನು ರಾಜ್ಯದಿಂದ ಹೊರ ಹಾಕುವ ದೃಶ್ಯದಿಂದ ಮುಂದುವರಿಸುತ್ತಿದ್ದೆ. ಹಾಸ್ಯಗಾರ ಮೊವ್ಬಾರು ಬಾಲಕೃಷ್ಣ ಮಣಿಯಾಣಿಯವರು ತುಂಬಾ ಉತ್ತಮವಾಗಿ ಮತ್ತು ಪರಿಣಾಮಕಾರಿಯಾಗಿ ಪಾಪಣ್ಣನನ್ನು ಚಿತ್ರಿಸಿದ್ದರು. ಜತೆ ಪಾತ್ರಧಾರಿಯಾದ ನನ್ನನ್ನುಹವ್ಯಾಸಿಯಾಗಿ ಹಗುರದಿಂದ ಕಂಡಿಲ್ಲ. ಅದು ಅವರ ವೃತ್ತಿ ಸುಭಗತನ.
         ‘ಚಂದ್ರಸೇನನಾಗಿ ಶಶಿಧರ ಕುಲಾಲ್ ಕನ್ಯಾನ. ‘ಹರಮತಿ, ಕಾಲಮತಿಯಾಗಿ ಶಂಭಯ್ಯ ಕಂಜರ್ಪಣೆ, ಮೋಹನ್ ಕುಮಾರ್ ಅಮ್ಮುಂಜೆ, ಲಕ್ಷ್ಮಣ ಕುಮಾರ ಮರಕಡ. ‘ಕರಡಿಯಾಗಿ ಶೇಖರ ಜಯನಗರ.. ಮಿಕ್ಕುಳಿದ ಪಾತ್ರಗಳಲ್ಲಿ ಶ್ರೀಧರ ಭಂಡಾರಿ ಪುತ್ತೂರು, ತಾರಾನಾಥ ವರ್ಕಾಡಿ, ಮಾಧವ ಪಾಟಾಳಿ ನೀರ್ಚಾಲು, ದೇವಕಾನ ಕೃಷ್ಣ ಭಟ್, ಗಣೇಶ ಪಾಲೆಚ್ಚಾರು, ಮಧುರಾಜ್, ಪುನೀತ್, ಸಚಿನ್, ಗುರುತೇಜ, ಸಂದೇಶ.., ಹಿಮ್ಮೇಳದಲ್ಲಿ ದಿನೇಶ ಅಮ್ಮಣ್ಣಾಯ, ರಮೇಶ್ ಭಟ್ ಪುತ್ತೂರು, ಹೊಸಮೂಲೆ ಗಣೇಶ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ್ ಐಲ... ಮೊದಲಾದವರೊಂದಿಗೆ ನೇಪಥ್ಯ ಕಲಾವಿದರ ಟೀಂವರ್ಕ್ ಪ್ರಸಂಗವನ್ನು ಗೆಲ್ಲಿಸಿದೆ.
         ಈ ಬರಹ ವಿಮರ್ಶೆಯಲ್ಲ. ಪ್ರದರ್ಶನದೊಳಗಿದ್ದುಕೊಂಡ ಸ್ವಗತ. ಪ್ರಸಂಗವನ್ನು ಪ್ರೇಕ್ಷಕರು ಸ್ವೀಕರಿಸಿದ ಕ್ಷಣಗಳು ದಾಖಲಾಗುವುದಿಲ್ಲವಲ್ಲಾ. ಹೆಚ್ಚಿನ ಆಟಗಳಲ್ಲಿ ಮಹಿಳೆಯರ ಸಂಖ್ಯೆ ಅಧಿಕವಾಗಿತ್ತು. ಅದು ಪ್ರಸಂಗದ ಹೆಚ್ಚುಗಾರಿಕೆ. ದುಃಖ-ಕರುಣ ರಸವೇ ಪ್ರಧಾನವಾಗಿರುವ ಗುಣಸುಂದರಿ ಪಾತ್ರದೊಂದಿಗೆ ಪ್ರೇಕ್ಷಕರ ಮನಸ್ಸು ಕೂಡಾ ಅನುಸಂಧಾನವಾಗಿರುವ ಘಳಿಗೆಯನ್ನು ಹಲವು ಬಾರಿ ಅನುಭವಿಸಿದ್ದೇನೆ. ಪುತ್ತೂರು, ಪೆರಡಾಲ, ನೀರ್ಚಾಲು, ಬೀಜದಕಟ್ಟೆ, ಕಾಂಚನ.. ಗಳಲ್ಲಿ ಸಂಘಟಕರ, ಪ್ರೇಕ್ಷಕರ ಹಿಮ್ಮಾಹಿತಿಗೆ ಪುಳಕಗೊಂಡಿದ್ದೆ. 
           ಪ್ರಸಂಗದಲ್ಲಿ ಒಂದು ಸನ್ನಿವೇಶ ಹೀಗಿದೆ : ಪಾಪಣ್ಣನ ಜೀವನದ ನಿಜವೃತ್ತಾಂತವು ಪರರ ಕಿವಿ ಸೇರಿದರೆ  ಪಾಪಣ್ಣ ಶಾಶ್ವತವಾಗಿ ಕರಡಿಯಾಗುತ್ತಾನೆ ಎನ್ನುವುದು ಶಾಪ, ವರ. ಒಂದು ಸಂದರ್ಭದಲ್ಲಿ ಯಕ್ಷಲೋಕಕ್ಕೆ ಹೋದ ಗಂಡನನ್ನು ಹುಡುಕಿಕೊಂಡು ತವರು ಮನೆಗೆ ಗುಣಸುಂದರಿ ಬಂದಾಗ ಅಕ್ಕಂದಿರು ತನ್ನನ್ನು, ಗಂಡನನ್ನು ಹಂಗಿಸುತ್ತಾರೆ. ಸಹಿಸಲಾರದ ಗುಣಸುಂದರಿ ಸತ್ಯ ವಿಷಯವನ್ನು ಹೇಳುತ್ತಾಳೆ. ಇದರಿಂದಾಗಿ ಮುಂದೆ ಆತ ಕರಡಿಯಾಗುತ್ತಾನೆ. ಸಂದರ್ಭ ಇದೆಯಲ್ಲಾ... ಗುಣಸುಂದರಿ ಬಾಯಿತಪ್ಪಿ ಸತ್ಯವನ್ನು ಹೇಳುತ್ತಿದ್ದಾಗ ಮುಂದಿನ ಸಾಲಿನ ಪ್ರೇಕ್ಷಕರು ನಿಬ್ಬೆರಗಾಗಿ ತಲೆಯ ಮೇಲೆ ಕೈಯಿಟ್ಟು... ಛೇ... ಛೇ.. ಎಂದು ಲೊಚಗುಟ್ಟುವುದನ್ನು ಕೇಳಿ ಬೆರಗಾಗಿದ್ದೆ!
ಕೊನೆಗೆ ಶಿವಪಾರ್ವತಿಯವರುಕಿರಾತ ರೂಪದಿಂದ ಬಂದು ಕರಡಿ ರೂಪಿನ ಪಾಪಣ್ಣನನ್ನು ಭಿಕ್ಷೆಯಾಗಿ ಕೇಳುತ್ತಾರೆ. ಅವರಿಗೆ ಕರಡಿಯನ್ನು ಒಪ್ಪಿಸುವ ಕ್ಷಣ... ಸಭಾಭವನ ನಿಶ್ಶಬ್ದ.... ಕರಡಿಯನ್ನು ಒಪ್ಪಿಸಿ ಗುಣಸುಂದರಿ ದುಃಖದಿಂದ ಕುಸಿವಾಗ ಪ್ರೇಕ್ಷಕ ವರ್ಗದಿಂದ ಕರತಾಡನ. ಮುಂಭಾಗ ಕುಳಿತ ಮಾತೆಯರು ಕರವಸ್ತ್ರದಿಂದ ಕಣ್ಣೀರು ಒರೆಸಿಕೊಳ್ಳುತ್ತಿರುವುದನ್ನು ನೋಡಿದೆ! ಕ್ಷಣವನ್ನು ನೆನಪಿಸಿಕೊಂಡಾಗ ಪ್ರಸಂಗದ ಗಟ್ಟಿತನದ ಗಾಢತೆ ಅರಿವಾಗುತ್ತದೆ. 
            ಇಡೀ ರಾತ್ರಿಯ ಪ್ರಸಂಗವನ್ನು ನಾಲ್ಕೂವರೆ ಗಂಟೆಗೆ ಕುಬ್ಜಗೊಳಿಸುವಾಗ ಸಹಜವಾಗಿ ಕೆಲವೊಮ್ಮೆ ಲಂಬಿಸುತ್ತಿತ್ತು. ಮೊದಲೇ ಶೆಡ್ಯೂಲ್ ಫಿಕ್ಸ್ ಮಾಡಿಕೊಂಡ ಕಲಾವಿದರಿಗೆ ತೊಂದರೆಯಾಗುತ್ತಿತ್ತು. ಅವರ ಗೊಣಗಾಟಕ್ಕೂ ಬಲಿಯಾಗಿದ್ದೆ. ಆಟಕ್ಕೆ ಬಂದ ಹಿರಿಯರೊಬ್ಬರು, ‘ಗುಣಸುಂದರಿ ಪಾತ್ರವು ಕುಣಿಯಲಿಲ್ಲ. ಕುಣಿಯದ ಪಾತ್ರ ಯಕ್ಷಗಾನಕ್ಕೆ ನಾಲಾಯಕ್ಕು ಪಾತ್ರಧಾರಿ ಅನ್ಫಿಟ್ ಎಂದರ್ಥ ಬರುವ ಸಂದೇಶವನ್ನು ವಾಟ್ಸಾಪ್ ಗುಂಪಿನಲ್ಲಿ ಹರಿಯಬಿಟ್ಟರು.
ಮೊದಲ ಭಾಗದಲ್ಲಿ ಪಾತ್ರಕ್ಕೆ ಕುಣಿಯಲು ಅವಕಾಶವಿದೆ. ಎರಡನೇ ಭಾಗದಲ್ಲಿ ಅವಕಾಶಗಳೇ ಇಲ್ಲ. ಕೇವಲ ಭಾವ ಪ್ರದಾನ. ಕುಣಿತ ಪ್ರಧಾನ ಅಲ್ಲವೇ ಅಲ್ಲ. ಯಾವ ಉದ್ದೇಶದಿಂದ ಹೇಳಿದರೋ ಗೊತ್ತಿಲ್ಲ. “ಒಂದು ಪ್ರದರ್ಶನ ನೋಡಿ ಕಲೆಯನ್ನು, ಕಲಾವಿದರನ್ನು ವಿಮರ್ಶೆ ಮಾಡಬಾರದು,” ಎಂದು ಪ್ರತಿಪಾದಿಸುವ  ಮಲ್ಪೆ ವಾಸುದೇವ ಸಾಮಗರು ನೆನಪಾದರು. ಸ್ಟೇಟಸಿಗೆ ಮುಸಿಮುಸಿ ನಕ್ಕವರ ಮುಖದ ನೆರಿಗೆಯನ್ನು ಮರೆಯಲು ಸ್ವಲ್ಪ ದಿವಸವೇ ಬೇಕಾಯಿತು! 
            ಈಗೆಲ್ಲಾ ಕುಣಿತದ ಕಾಲ. ಪಾತ್ರ, ಪಾತ್ರಸ್ವಭಾವವು ಹೇಗೂ ಇರಲಿ, ಕುಣಿಯಬೇಕು, ಕುಣಿಯುತ್ತಲೇ ಇರಬೇಕು ಎನ್ನುವ ಮನಸ್ಸುಗಳಿಗೆಪಾಪಣ್ಣ ವಿಜಯ, ಗುಣಸುಂದರಿ, ನಳದಮಯಂತಿಪ್ರಸಂಗಗಳು ಢಾಳಾಗಿ ಕಾಣುವುದು ಪ್ರಸಂಗದ ದೋಷವಲ್ಲ. ಕಣ್ಣು ಮಂಜಾದ ಭಾವ ದೌರ್ಬಲ್ಯದ ದೋಷ. ಏನೇ ಇರಲಿ. ಹಳೆಯ ಪ್ರಸಂಗವೊಂದು ಜನಸ್ವೀಕೃತಿ ಗೊಂಡಿದ್ದರ ಕೀರ್ತಿಯು ಎಡನೀರು ಮೇಳಕ್ಕೆ ಮತ್ತು ಹಿಂದಿನ ಹಿರಿಯರಿಗೆ ಸಲ್ಲಬೇಕು
(ಪ್ರಜಾವಾಣಿ / ದಧಿಗಿಣತೋ / 29-6-2018)