Monday, July 2, 2018

ಮೇಳ ಯಶದ ಆ ಈರೇಳು ವರುಷ



ಗಣೇಶ್ ಪಾಲೆಚ್ಚಾರು ಅವರ ‘ದೇವೇಂದ್ರ’



ಶಶಿಧರ್ ಕುಲಾರ್ ಕನ್ಯಾನ ಅವರ ‘ಗುಳಿಗ’ನ ಪಾತ್ರ



ಜಲದುರ್ಗೆಯರಾಗಿ – ಕಿರಣ್ ಮಾಸ್ತರ್, ಪುನೀತ್, ನಾ. ಕಾರಂತ ಪೆರಾಜೆ, ಸೀತಂಗೋಳಿ ಬಾಲಕೃಷ್ಣ, ಗುರುತೇಜ್, ಸಂದೇಶ್ 
ಮತ್ತು ವಿಷ್ಣುವಾಗಿ ತಾರಾನಾಥ ವರ್ಕಾಡಿ



ಪಾಪಣ್ಣ ವಿಜಯ ಪ್ರಸಂಗ – ಹಾಸ್ಯಗಾರ್ ಮೊವ್ವಾರು ಬಾಲಕೃಷ್ಣ ಮಣಿಯಾಣಿಯವರ ‘ಪಾಪಣ್ಣ’.
ಭಾಗವತರು - ರಸರಾಗ ಚಕ್ರವರ್ತಿ ಎಂ.ದಿನೇಶ ಅಮ್ಮಣ್ಣಾಯ


          ಪತ್ತನಾಜೆ ಕಳೆಯಿತು. ಇನ್ನಾರು ತಿಂಗಳು ಗೆಜ್ಜೆಯ ಸದ್ದಿಗೆ ರಜೆ. ಹೆಜ್ಜೆಗೆ ವಿಶ್ರಾಂತಿ. ಸಂಭ್ರಮಿಸುವ ಮನಸ್ಸುಗಳಿಗೆ ಗತ-ಮೆಲುಕುಗಳು ಗ್ರಾಸ. ಮೇಳದ ಸಿಹಿಯ ಸಂತಸ ಒಂದೆಡೆ, ಕಹಿಯ ವಿಷಾದ ಮತ್ತೊಂದೆಡೆ. ಕಹಿಯ ಕಾರಣಗಳನ್ನು ಅರಸಲು ಸುಸಮಯ. ಮುಂದಿನ ತಿರುಗಾಟದ ಸುಸೂತ್ರತೆಗೆ ನಾಂದಿ. ಕಲೆಯನ್ನೇ ಬದುಕಾಗಿಸಿದವರಿಗೆ ಸ್ವ-ಸ್ವರೂಪ ವ್ಯಕ್ತಿತ್ವ ಕಟ್ಟಿಕೊಳ್ಳಲು ಸಕಾಲ. ಇವೆಲ್ಲ ಹೇಳುವಷ್ಟು ಸುಲಭವಲ್ಲ. ಆದರೆ ಅನುಷ್ಠಾನಿಸುವ ಅಗತ್ಯ ಮತ್ತು ಅನಿವಾರ್ಯವಿದೆ.
                ತಾರಾಮೌಲ್ಯಗಳ ಬೀಜವು ಸಂದು ಹೋದ ಪ್ರದರ್ಶನಗಳ ಮೆಲುಕಿನ ಗರ್ಭದಲ್ಲಿದೆ. ಅದು ತಡವಾಗಿ ಪ್ರಕಟಗೊಳ್ಳುತ್ತದೆ, ಪ್ರಕಟಗೊಳ್ಳಬೇಕು. ಅದು ಅದರ ಸ್ವ-ಭಾವ. ಅದು ದಿಢೀರದೆ ಹುಟ್ಟಲಾರದು. ಹುಟ್ಟಿದರೂ ಬೆಳೆಯದು. ಬೆಳೆದರೂ ಫಲಕ್ಕಾಗಿ ಕಾಯಬೇಕು. ಹಾಗಾಗಿ ನೋಡಿ, ಓರ್ವ ಕಲಾವಿದನಿಗೆ ಆತನ ಅರ್ಧಾಯುಷ್ಯದ ನಂತರವೇ ಕಲೆಯು ಗೌರವ, ತಾರಾಮೌಲ್ಯಗಳನ್ನು ತಂದೀಯುತ್ತದೆ. ತನ್ನ ವೈಯಕ್ತಿಕವಾದ ನಿಲುವು ಮತ್ತು ಸ್ವ-ರೂಢನಾ ವ್ಯಕ್ತಿತ್ವಗಳ ರೂಢನೆಗನುಸಾರ ಅದರ ದರ್ಶನ-ಪ್ರದರ್ಶನ. 
                ಮೇಳಗಳ ಪ್ರಸಂಗ, ಪ್ರದರ್ಶನಗಳಿಗೆ ಹೊಂದಿಕೊಂಡು ಕಲಾವಿದನ ಬೆಳವಣಿಗೆ. ದಿನಾ ಒಂದೇ ಪಾತ್ರವನ್ನು ಮಾಡುವಾತನಲ್ಲಿಅಭಿವೃದ್ಧಿಎನ್ನುವುದು ಅಜ್ಞಾತವಾಗಿರುತ್ತದೆ. ತಾನು ಅಜ್ಞಾತನಾಗಿದ್ದೇನೆಂದು ಅಭಿವೃದ್ಧಿಗೆ ತಿಳಿಯದು! ಭಿನ್ನ ಪ್ರಸಂಗಗಳಲ್ಲಿ ವಿಭಿನ್ನ ಪಾತ್ರಗಳ ಅಭಿವ್ಯಕ್ತಿಗಳು ಬೆಳೆಯುವ ಕಲಾವಿದನಿಗೆ ಸವಾಲು. ಇದು ಛಲವಾಗಿ ಸ್ವೀಕರಿಸಿದಾಗ ಕಲೆಯು ಒಲಿಯುತ್ತದೆ. ದಿಢೀರ್ ಕಲಾವಿದನಾಗುವವನಿಗೆ, ತಾರಾಮೌಲ್ಯ ಬಯಸುವವನಿಗೆ ಇದ್ಯಾವುದೂ ಅನ್ವಯಿಸುವುದಿಲ್ಲ. ದಿಢೀರ್ ಎನ್ನುವುದೇ ಅಲ್ಪಾಯುಷಿ.
                ಪೀಠಿಕೆ ಉದ್ದ ಆಯಿತಲ್ವಾ! ಕಾಸರಗೋಡು ಜಿಲ್ಲೆಯ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯು (ಎಡನೀರು ಮೇಳ) ಹದಿನಾಲ್ಕು ವರುಷದ ತಿರುಗಾಟವನ್ನು ಪೂರೈಸಿದ ಸಂದರ್ಭ. ಮೇಲಿನ ಭಾವಗಳೆಲ್ಲಾ ಮಾತುಕತೆಗೆ ತೊಡಗಿದುವು. ಅದಕ್ಕೆ ಅಕ್ಷರ ರೂಪ ಕೊಡುವ ಹೊಣೆ ನನ್ನದು. ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಯೋಚನೆ, ಯೋಜನೆಯಂತೆ ಮೇಳದ ವ್ಯವಸ್ಥೆಗಳ ವಿನ್ಯಾಸ. ರಾಜೇಂದ್ರ ಕಲ್ಲೂರಾಯ ಮತ್ತು ಜಯರಾಮ ಮಂಜತ್ತಾಯರಿಗೆ ಮೇಳ ನಿರ್ವಹಣೆಯ ಜವಾಬ್ದಾರಿ.
                ಮೇಳ ಮತ್ತು ಪ್ರದರ್ಶನ ಅಂದಾಗ ಒಂದು ಸ್ಥಾಪಿತ ಮಾದರಿಗಳು ಕಣ್ಣ ಮುಂದೆ ಹಾದುಹೋಗುತ್ತದೆ. ಬಹುತೇಕ ನಿಶ್ಚಿತ ಪಾತ್ರಗಳನ್ನುಸೀನಿಯಾರಿಟಿಹೊಂದಿದ ಕಲಾವಿದ ನಿಭಾಯಿಸಬೇಕು. ಎಷ್ಟು ವರುಷವಾದರೂ ಪಾತ್ರ ಅವರಿಗೇ ಮೀಸಲು. ಇನ್ನು ಮಿಕ್ಕುಳಿದ ಪಾತ್ರಗಳ, ಪಾತ್ರಧಾರಿಗಳ ಪಾಡು ಇಷ್ಟೇನೇ. ಚೌಕಿಯೊಳಗೆ ಕಲಾವಿದನ ಸ್ಥಾನ-ಮಾನದ ನಿಗದಿಗೆ ಮತ್ತು ವೇಷಕ್ಕೆ ಸಂಬಂಧಿಸಿದ ಪರಿಕರಗಳಪೆಟ್ಟಿಗೆಯಿದೆ. ಇದು ಕಲಾವಿದನ ಪ್ರತಿಷ್ಠೆಯ ದ್ಯೋತಕ. ಆದರೊಳಗಿದೆ, ಕಲಾಬದುಕಿನ ವಾಸದ ಸುಭಗತೆ. ಕೆಲವೊಮ್ಮೆ ಮೇಳ ಬದಲಾಯಿಸಿದಾಗಲೂನನ್ನ ಪೆಟ್ಟಿಗೆ ಯಾವುದುಎಂದೇ ಮಾತಿಗೆ ತೊಡಗುತ್ತಾನೆ. ಇಲ್ಲಿಪೆಟ್ಟಿಗೆಎನ್ನುವುದು ಹಿರಿಯರು ಪಾಲಿಸಿಕೊಂಡು ಬಂದ ಚೌಕಿಯ ನಿಭಾವಣೆಯ ಒಂದು ವ್ಯವಸ್ಥೆ.               
          ಎಡನೀರು ಮೇಳದಲ್ಲಿಪೆಟ್ಟಿಗೆಯನ್ನು ನಿರೀಕ್ಷಿಸುವ ಕಲಾವಿದರಿಲ್ಲ! ಕಲಾವಿದ ಅದರೊಳಗೆ ಬಂಧಿಯಾದರಂತೂ ಮುಗಿಯಿತು! ಪ್ರದರ್ಶನಗಳಾಗುತ್ತಾ ಸಾಗಿದಂತೆ ಬೆಳವಣಿಗೆ ಹೊಂದಬೇಕು ಎನ್ನುವ ಅವ್ಯಕ್ತ ಸಂದೇಶವು ಸ್ವಾಮೀಜಿಯವರ ಇಂಗಿತ. ವ್ಯವಸ್ಥೆಯನ್ನು ಕಲಾವಿದರು ಒಪ್ಪಿದ್ದಾರೆ. ಪೆಟ್ಟಿಗೆಯೊಳಗಿಂದ ಜಿಗಿದಿದ್ದಾರೆ. ಹೊರಗಿನ ಪ್ರಪಂಚವನ್ನು ಕಲಾವಿದರು ನೋಡುವುದಲ್ಲ, ಕಾಣುತ್ತಿದ್ದಾರೆ. ಪರಿಣಾಮ, ಓರ್ವ ಕಲಾವಿದ ಆರು ತಿಂಗಳ ತಿರುಗಾಟದಲ್ಲಿ ಭಿನ್ನ ಪಾತ್ರಗಳನ್ನು ನಿರ್ವಹಿಸುವ ಅವಕಾಶ. ಬಹುತೇಕ ಕಲಾವಿದರ ಉತ್ಕರ್ಷಕ್ಕೆ ಮೇಳವು ಕಾರಣವಾಗಿದೆ. ಹಾಗಾಗಿ ಇತರ ಮೇಳಗಳ ಪ್ರದರ್ಶನಕ್ಕಿಂತ ಎಡನೀರು ಮೇಳದ ಪ್ರದರ್ಶನ ಭಿನ್ನ. ಪ್ರೇಕ್ಷಕರು ಕೂಡಾ ನಿಜಾಸಕ್ತರು, ನಿರಾಸಕ್ತರಲ್ಲ.
                ಮೇಳವು ನಾಲ್ಕು ನಾಲ್ಕೂವರೆ ಗಂಟೆಗಳ ಕಾಲಮಿತಿ ಪ್ರದರ್ಶನ ನೀಡುತ್ತಿದೆ. ಕಲಾವಿದರ ಸಾಮಥ್ರ್ಯಕ್ಕೆ ಹೊಂದಿಕೊಂಡು ಪಾತ್ರಗಳ ಹಂಚೋಣ. ಓರ್ವ ಕಲಾವಿದನಿಗೆ ಭಿನ್ನ ಪಾತ್ರಗಳನ್ನು ಮಾಡುವ ಅರ್ಹತೆ ಮತ್ತು ಯೋಗ್ಯತೆ ಇದೆಯೆಂದು ಗೊತ್ತಾದರೆ ಆತನಿಗೆ ಮುಂದಿನ ಪ್ರದರ್ಶನಗಳಲ್ಲಿ ಪಾತ್ರಗಳ ಹೊಂದಾಣಿಕೆ. ಒಮ್ಮೆ ಕೃಷ್ಣಲೀಲೆ, ಶಿವಲೀಲೆ, ದೇವಿ ಮಹಾತ್ಮೆ.. ಪ್ರಸಂಗಗಳ ಪ್ರದರ್ಶನ ಆಯಿತೆಂದು ಕೊಳ್ಳೋಣ. ಮುಂದೆ ಇದೇ ಪ್ರಸಂಗ ಬಂದಾಗ ಹಿಂದಿನ ಪ್ರದರ್ಶನಗಳಲ್ಲಿದ್ದ ಪಾತ್ರಗಳೇ ಸಿಗುವುದು ಖಾತ್ರಿಯಲ್ಲ! ಸ್ವಾಮಿಜಿಯವರೇ ಸ್ವತಃ ಪಾತ್ರಗಳನ್ನು ಹಂಚಿ ಪಾತ್ರಪಟ್ಟಿಯನ್ನು ಭಾಗವತರಿಗೆ ನೀಡುತ್ತಾರೆ. ಒಮ್ಮೆ ಪಟ್ಟಿ ಅಂತಿಮ ಗೊಂಡಿತೋ ನಂತರ ಅಂದಿನ ಮಟ್ಟಿಗೆ ಬದಲಾವಣೆಯಿಲ್ಲ.
                ಮಠದಿಂದ ನಡೆಯುವ ಮೇಳ, ಸ್ವಾಮೀಜಿಯವರ ನಿಗಾ, ವ್ಯವಸ್ಥಾಪಕರಿಬ್ಬರ ಕ್ಯಾಂಪ್ ನಿರ್ವಹಣೆ. ಅವ್ಯಕ್ತವಾದ ಶಿಸ್ತು ಮೇಳದಲ್ಲಿ ಸಂಚರಿಸುತ್ತದೆ. ಅದು ಕಣ್ಣಿಗೆ ಕಾಣುವುದಿಲ್ಲ. ಕಲಾವಿದರ ಬೌದ್ಧಿಕತೆಯ ಹರಹು ಮತ್ತು ವ್ಯವಸ್ಥೆಯನ್ನು ಒಪ್ಪುವ ಶುದ್ಧ ಮನಸ್ಸಿನ ಮೇಲ್ಮೆಯಂತೆ ಶಿಸ್ತಿನ ಸ್ವೀಕೃತಿ ಮತ್ತು ಪಾಲನೆ. ಒಂದು ವೇಳೆ ಪಾಲಿಸದಿದ್ದರೆ ಏನು ಎಂಬ ಉಡಾಫೆಯು ಮೈತಾಳಿದಾಗ ನಾಳೆಯ ಪಾತ್ರಪಟ್ಟಿಯಲ್ಲಿ ಆತನ ಹೆಸರಿರುವುದಿಲ್ಲ ಅಷ್ಟೇ!
                ಎಡನೀರು ಮೇಳದ ಕಾಲಮಿತಿ ಪ್ರದರ್ಶನಗಳನ್ನು ಕಲಾಭಿಮಾನಿಗಳು ಸ್ವೀಕರಿಸಿದ್ದಾರೆ. ಅದು ಮಠದ ಮೇಳ ಎನ್ನುವುದಕ್ಕಲ್ಲ. ಒಟ್ಟೂ ಪ್ರದರ್ಶನದಉತ್ತಮ ಪರಿಣಾಮದಿಂದ ಆರು ತಿಂಗಳು ಪೂರ್ತಿ ತಿರುಗಾಟ ಮಾಡಿದೆ. ಸಪ್ತಾಹ, ದಶಾಹಗಳ ಆಯೋಜನೆ ಮೂಲಕ ಪ್ರೇಕ್ಷಕರನ್ನು ಸೃಷ್ಟಿ ಮಾಡುವ ಕೆಲಸವೂ ಜತಜತೆಗೆ ನಡೆಯುತ್ತಿದೆ. ಪ್ರಾಯೋಜಕರೂ ಶೃದ್ಧೆಯಿಂದ ಮತ್ತು ಕಲೆಯ ಪ್ರೀತಿಯಿಂದ ಪ್ರೋತ್ಸಾಹಿಸುತ್ತಿದ್ದಾರೆ. ಆಧುನಿಕ ಗಿಮಿಕ್ಸ್ಗಳನ್ನು ಉದ್ದೇಶಪೂರ್ವಕವಾಗಿ ತುರುಕುವುದರಲ್ಲಿ ಮೇಳಕ್ಕೆ ವಿಶ್ವಾಸವಿಲ್ಲ. ಪ್ರಸಂಗವೊಂದರ ಮಿತಿ ಮತ್ತು ಅದು ಸಾರುವ ಸಂದೇಶದ ಪ್ರಸ್ತುತಿಯತ್ತ ಒಲವು.
                ಕಳೆದ ತಿರುಗಾಟದಲ್ಲಿಪಾಪಣ್ಣ ವಿಜಯವು ಜನರ ಪ್ರೀತಿಯನ್ನು ಪಡೆದ ಭಾಗ್ಯ-ಪ್ರಸಂಗ. ಇದು ಡಾ.ಶೇಣಿಯವರ ಕಾಲದಲ್ಲಿ ಮೆರೆದ ಪ್ರಸಂಗ. ಸುರತ್ಕಲ್ ಮೇಳದ ಕೌಂಟರನ್ನು ತುಂಬಿದ ಆಖ್ಯಾನ. ಸಹಜ ಹಾಸ್ಯ ಖ್ಯಾತಿಯ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟರು ಕಡೆದ ಪಾಪಣ್ಣ, ವರ್ತಮಾನದಲ್ಲೂ ಪ್ರಸ್ತುತ.  ಸುರತ್ಕಲ್ ಮೇಳದ ನಿಲುಗಡೆಯ ಬಳಿಕ ಬಹುತೇಕ ನೇಪಥ್ಯಕ್ಕೆ ಸರಿದ ಪ್ರಸಂಗವನ್ನು ಎಡನೀರು ಮೇಳವು ಬಾರಿ ಪ್ರಾಯೋಗಿಕವಾಗಿ ಎತ್ತಿಕೊಂಡಿತ್ತು. ಕಲಾವಿದರ ಮನಸಾ ಸ್ವೀಕಾರದ ಪರಿಣಾಮವಾಗಿ ಪ್ರಸಂಗ ಗೆದ್ದಿದೆ.  ಇಡೀ ರಾತ್ರಿಯ ಕಥಾನಕವನ್ನು ನಾಲ್ಕೂವರೆ ಗಂಟೆಗೆ ಎಡಿಟ್ ಮಾಡಿ, ಮನದೊಳಗೆ ಕಥೆಯ ತಿರುಳನ್ನು ಇಳಿಬಿಡುವಲ್ಲಿ ಯಶಕಂಡಿದೆ.
                ಇಂದುಸತ್ಯಹರಿಶ್ಚಂದ್ರ, ನಳದಮಯಂತಿ, ಪಾಪಣ್ಣ, ಸತಿ ಸುಶೀಲೆ..’ ಮೊದಲಾದ ಸಂದೇಶಭರಿತ ಪ್ರಸಂಗಗಳ ಪ್ರದರ್ಶನಗಳು ತೀರಾ ಕಡಿಮೆ. ಎಷ್ಟೋ ಕಡೆಗಳಲ್ಲಿ ಕಲಾವಿದರೇ - ಎಲ್ಲರೂ ಅಲ್ಲ - ಪ್ರದರ್ಶನಕ್ಕೆ ಅಸಹಕಾರ ನೀಡಿದ್ದೂ ಇದೆ. ‘ಪ್ರಸಂಗ ಸಪ್ಪೆಯಾಗುತ್ತದೆ, ರೈಸುವುದಿಲ್ಲ, ಬೋರ್ ಆಗುತ್ತದೆಎಂದು ಸಂಘಟಕರ, ಸೇವಾಕರ್ತರ ಕಿವಿಯೊಳಗೆ ಗೊಣಗಾಟ ಸುರಿಯುವುದನ್ನು ಗಮನಿಸಿದ್ದೇನೆ. ಹಿಂದಿನಂತೆ ಅಲ್ಲದಿದ್ದರೂ ಇಂತಹ ಪ್ರಸಂಗಗಳನ್ನು ಪ್ರದರ್ಶನ ಮಾಡುವ ಯೋಗ್ಯತೆ, ಅರ್ಹತೆ ಕಲಾವಿದರಿಗಿಲ್ವಾ? ಇವುಗಳ ಪ್ರದರ್ಶನ ಕಷ್ಟವಿಲ್ಲ. ಹಿಂದಿನವರು ಕಡೆದು ಶಿಲ್ಪವಾಗಿಸಿದ್ದಾರೆ. ನಾವೇನೂ ಹೊಸದು ಮಾಡಬೇಕಾಗಿಲ್ಲ. ಶಿಲ್ಪವನ್ನು ನೋಡುವ ಕಣ್ಣು ತೆರೆದರೆ ಸಾಕು, ಮನನಿಸುವ ಮನದ ತೇವ ಅರದಂತೆ ನೋಡಿಕೊಂಡರೆ ಸಾಕು.
                ಒಂದು ಕಾಲಘಟ್ಟದ ಬಳಿಕ ಭಕ್ತಿ, ಕರುಣ, ದುಃಖ ರಸದ ಪ್ರಸಂಗಗಳು ಹೇಗೆ ಹಿಂದೆ ಸರಿದುವೋ, ಈಗ ಅವು ಮುನ್ನಲೆಗೆ ಬರಲಾರಂಭಿಸಿದೆ. ಕಲಾವಿದ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಇದು ಸವಾಲು ಕೂಡಾ. ಜನರನ್ನು ಆಕರ್ಷಿಸುವ ಅದರಲ್ಲೂ ಮಾತೆಯರನ್ನು ಪ್ರದರ್ಶನಕ್ಕೆ ಸೆಳೆಯುವ ಇಂತಹ ಪ್ರದರ್ಶನಗಳು ವರ್ತಮಾನದ ಅಗತ್ಯ ಎನ್ನುವುದಕ್ಕೆ ಎಡನೀರು ಮೇಳದ ಪಾಪಣ್ಣ ಪ್ರಸಂಗವೇ ಸಾಕ್ಷಿ.
                ಎಡನೀರು ಮೇಳಕ್ಕೆ ಮುಂದಿನದು ಹದಿನೈದನೇ ತಿರುಗಾಟ. ಮೇಳಕ್ಕೆ ಯಾವುದೇ ಢಾಂಢೂಂ ಪ್ರಚಾರವಿಲ್ಲ. ಆಟವನ್ನು ನೋಡಿದ ಪ್ರೇಕ್ಷಕರೇ ಪ್ರಚಾರಕರು. ಸೇವಾಕರ್ತರೇ ಮೇಳವನ್ನು ಆಧರಿಸುವ ಸ್ತಂಭಗಳು. ಸಂಘಟಕರ ಆಶಯವನ್ನು ಅರ್ಥಮಾಡಿಕೊಂಡ ಕಲಾವಿದರು. ಪ್ರದರ್ಶನವನ್ನು ಯಶಗೊಳಿಸುವ ಇವರಲ್ಲಿ ಬದುಕಿನ ಹಸಿವಿದೆ. ಬದುಕಿನ ಹಸಿವಿದ್ದರೆ ಮೇಳದ ತಿರುಗಾಟ ಸಲೀಸು. ಇದೇ ಮೇಳದ ಯಶದ ಗುಟ್ಟು.

ಚಿತ್ರ : ಕೊಂಗೋಟ್ ರಾಧಾಕೃಷ್ಣ ಭಟ್, ಸಂದೀಪ್ ಬಲ್ಲಾಳ್ ನೀರ್ಚಾಲು


Prajavani / ದಧಿಗಿಣತೋ / 15-6-2018