ಯಕ್ಷಗುರು ಶ್ರೀ ಪಾಲೆಚ್ಚಾರು ಗೋವಿಂದ ನಾಯಕರ ಕಲಾಯಾನ ʼಗೋವಿಂದ ಗಾಥೆʼ... ಲೇಖಕ ಶ್ರೀ ಕೃಷ್ಣ ಪ್ರಕಾಶ್ ಉಳಿತ್ತಾಯ... 2025 ಜೂನ್ 1 ರಂದು ಪುತ್ತೂರು ಬೊಳ್ವಾರಿನ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ಮಲರಾಯ ಸಪರಿವಾರ ಕ್ಷೇತ್ರದ ವಠಾರದಲ್ಲಿ ಕೃತಿ ಅನಾವರಣ... ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಂದ ಕೃತಿ ಬಿಡುಗಡೆ.... ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಅವರಿಂದ ಸಮಾರಂಭದ ಉದ್ಘಾಟನೆ... ಶ್ರೀ ಕ್ಷೇತ್ರದ ಪವಿತ್ರಪಾಣಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ... ಶ್ರೀ ಅಗರಿ ರಾಘವೇಂದ್ರ ರಾವ್, ಶ್ರೀ ಲಕ್ಷ್ಮೀ ಮಚ್ಚಿನ, ಶ್ರೀ ಮಹಾಲಿಂಗೇಶ್ವರ ಭಟ್, ಶ್ರೀ ವೆಂಕಟ್ರಮಣ ಉಳಿತ್ತಾಯ ಉಪಸ್ಥಿತಿ. ಗುರು ಶ್ರೀ ಪಾಲೆಚ್ಚಾರು ಗೋವಿಂದ ನಾಯಕರಿಗೆ ʼಈಶಾವಾಸ್ಯ ಪ್ರಶಸ್ತಿʼ ಪ್ರದಾನ. ಪೆರ್ಮಂಕಿ-ಉಳಾಯಿಬೆಟ್ಟು ʼಈಶಾವಾಸ್ಯʼ ಮತ್ತು ಶ್ರೀ ದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನ (ರಿ) ಬೊಳ್ವಾರು ಇವರ ಜಂಟಿ ಆಯೋಜನೆ....
ಅನಾವರಣಗೊಂಡ ʼಗೋವಿಂದ ಗಾಥೆʼ (ಪ್ರಕಟಣೆ : ಈಶಾವಾಸ್ಯ ಪ್ರಕಾಶನ) ಪುಸ್ತಕಕ್ಕೆ ಮುನ್ನುಡಿ
ಬರೆಯುವ ಅವಕಾಶವನ್ನು ಕೃಷ್ಣ ಪ್ರಕಾಶರು ನೀಡಿದ್ದರು. ಆ ಮುನ್ನುಡಿ ಇಲ್ಲಿದೆ... ತಮ್ಮ ಓದಿಗಾಗಿ...
--------------------------------------------------------------
'ಅಭಿನಂದನ ಗ್ರಂಥ' - ಇಲ್ಲಿವೆ, ಕಣ್ಮನ ದಣಿಯುವಷ್ಟು ಉತ್ಪ್ರೇಕ್ಷೆಗಳ ಗೊಂಚಲು. ಹೂರಣಗಳಿಗೆ ಅನಿವಾರ್ಯತೆಯ ಹಂಗು. ಕಲಾವಿದನ ಕಲಾಯಾನದ ಸಾರ್ಥಕ್ಯದ ತುತ್ತ ತುದಿ. ನೆಮ್ಮದಿಯತ್ತ ಜಾರುವ ಹೃದಯ. ಭಾವ ತೇವದ ಜಿನುಗುವಿಕೆಗೆ ಮರುಜೀವ.
ಹತ್ತಾರು ಲೇಖನಗಳು ಹೊಸೆದುಕೊಂಡರೆ ತೃಪ್ತ
ಭಾವ. ಅಷ್ಟಿಷ್ಟು ಪರಿಚಿತ ಸ್ನೇಹಿತರಲ್ಲಿ ಲೇಖನಕ್ಕಾಗಿ ಒತ್ತಾಯ, ಮರುಒತ್ತಾಯ, ಪೀಡನೆ. ಕೆಲವೊಮ್ಮೆ
'ನಿಮ್ಮ ಹಳೆಯ ಲೇಖನವೂ ಆದೀತು' ಎನ್ನುವ ಗಂಟಲ ಮೇಲಿನ ವಿನಯವಂತಿಕೆ.
ಒಂದು ನೋಟದಿಂದ ಸರಿ. ಇಲ್ಲಿ ಗ್ರಂಥ ಪ್ರಕಟಣೆ
ಮತ್ತು ಗೌರವಾರ್ಪಣೆ ಮುಖ್ಯ! ಆದರೆ ಇದೇ ಗ್ರಂಥವನ್ನು ಅಕಾಡೆಮಿಕ್ ಕಣ್ಣಿನಿಂದ ನೋಡಿದರೆ ತೀರಾ ಢಾಳು
ಢಾಳು. ಯಾಕೆ ಹೇಳಿ? ಅಲ್ಲಿನ ಬಹುತೇಕ ಬರಹಗಳಲ್ಲಿ ಅವರ 'ಬಯೋಡಾಟಾ' ವಿಚಾರಗಳದ್ದೇ ಮೇಲ್ಮೆ.
ಒಂದು ಬರೆಹದಲ್ಲಿ ಇರಲಿ. ಜತೆಗೆ ಕಲಾವಿದನ
ಕಲಾಯಾನ ಸಿಹಿ-ಕಹಿ ಅನುಭವಗಳು, ಆ ರಂಗದಲ್ಲಿ ಅವರ ಸಾಹಸ - ಸಾಧನೆ, ಅನುಭವಿಸಿದ ಪಾಡು.. ಇವೆಲ್ಲಾ
'ಆಕರ' ದೃಷ್ಟಿಯಿಂದ ದಾಖಲಾಗಬೇಕು. ಹಾಗಾಗುತ್ತಿಲ್ಲ. ಇಂತಹ 'ಸ್ಥಿರ ವಿನ್ಯಾಸ'ಗಳಿಗೆ ರೋಸಿದವರೆಷ್ಟೋ.
ಅವರು 'ಅಭಿನಂದನ ಗ್ರಂಥ'ವನ್ನು ಓದುವುದು ಬಿಡಿ, ಪುಟ ತಿರುವಿಯೂ ನೋಡುತ್ತಿಲ್ಲ. ಪುಸ್ತಕ ಸಂಗ್ರಹಕ್ಕೆ
ಹೊಸ ನೆಂಟನ ಸೇರ್ಪಡೆ!
ಜತೆಗೆ ಸಂಪಾದಕನ 'ವಾಟ್ಸಾಪ್, ಫೇಸ್ಬುಕ್ಕಿನಲ್ಲಿ
ಬರೆಯಿರಿ' ಎಂಬ ವಿನೀತತೆಯಿಲ್ಲದ ವಿನಂತಿಗಳು, ಸಂದೇಶಗಳು.
ಸಾವಿರಾರು ರೂಪಾಯಿ ಖರ್ಚು ಮಾಡಿ ಗ್ರಂಥ ಅಚ್ಚು ಹಾಕಿಸಿ, ವಿತರಣೆಯೂ ಮಾಡದೆ, ಲೇಖಕರಿಗೂ ಕಳುಹಿಸದೆ,
ಆಸಕ್ತರಿಗೆ ನೀಡಿದೆ.. ಎಲ್ಲೋ ಒಂದೆಡೆ ಪೇರಿಸಿಟ್ಟರೆ ಏನು ಪ್ರಯೋಜನ?
ಪುಟ ತಿನ್ನುವ ಗ್ರಂಥಗಳ ಬದಲು ಒಬ್ಬೊಬ್ಬ
ಕಲಾವಿದರ ಕಲಾಯಾನದ ಚಿಕ್ಕ ಪುಸ್ತಕಗಳು ಪ್ರಕಟಗೊಳ್ಳಬೇಕು. ಒಂದೆರಡು ಗಂಟೆಯಲ್ಲಿ ಓದಿ ಮುಗಿಸುವ ಒಳಸುರಿಗಳಿರಬೇಕು.
ಈ ವಿಚಾರಗಳೆಲ್ಲಾ ಮನದಲ್ಲೇ ಗುಂಯ್ಗುಡುತ್ತಿದ್ದುವು.
ಈ ಹಿನ್ನೆಲೆಯಲ್ಲಿ ಮಿತ್ರ ಕೃಷ್ಣಪ್ರಕಾಶ
ಉಳಿತ್ತಾಯರು ಬರೆದ ಪಾಲೆಚ್ಚಾರು ಗೋವಿಂದ ನಾಯಕರ ಕಲಾಯಾನದ
ಹೆಜ್ಜೆಗಳು ಆಪ್ತವಾದುವು. ಒಬ್ಬ ಕಲಾವಿದನ ಬದುಕಿನಲ್ಲಿ ಹಾದು ಹೋಗುವ ಚಿಕ್ಕ ಚಿಕ್ಕ ಘಟನೆಗಳೇ ಕಲಾಯಾನದ
ಗರ್ಭ. ಅದು ಕಾಲದ ಕಥನ. ಗೋವಿಂದ ನಾಯಕ್ ಪಾಲೆಚ್ಚಾರರ ಬದುಕಿನ ಗರ್ಭಕ್ಕೆ ಉಳಿತ್ತಾಯರು ಕನ್ನಡಿ ಹಿಡಿದಿದ್ದಾರೆ.
ಅವರ ಶಿಷ್ಯರಾಗಿ ಹತ್ತಿರದಿಂದ ನೋಡಿ, ತಿಳಿದ ವಿಚಾರಗಳ ಪ್ರಸ್ತುತಿಗಳು ಪುಸ್ತಕದ ಜೀವಂತಿಕೆ.
ಸುಮಾರು ಮೂರುವರೆ ದಶಕಗಳಿಂದ ಗೋವಿಂದ
ನಾಯಕರ ಒಡನಾಟವಿದೆ. ನನ್ನ ಯಕ್ಷಕಲಿಕೆಯ ಆರಂಭದ ದಿನಮಾನಗಳಲ್ಲಿ ನಾಯಕರ ನಿರ್ದೇಶನ, ಪಾತ್ರಗಳ ಕುರಿತಾದ
ತಿಳುವಳಿಕೆಗಳ ಫಲಾನುಭವಿ. ನಾಯಕರು ಅಕ್ಷರಾರ್ಥದಲ್ಲಿ 'ರಂಗ ನಿರ್ದೇಶಕ'. ತನ್ನ ಕಸುಬಿನಲ್ಲಿ ರಾಜಿಯಿಲ್ಲದ
ನಿರ್ವಹಣೆ. ಮೇಳಗಳ ತಿರುಗಾಟ, ಹಿರಿಯರ ಒಡನಾಟಗಳು ಅವರ ಬೌದ್ಧಿಕ ಶಕ್ತಿಗೊಂದು 'ನಂದದ ಬೆಳಕು'.
ಗೋವಿಂದ ನಾಯಕರು ಹೊಸಬರಿಗೆ 'ಒರಟಾಗಿ'
ಕಂಡರೆ ಅದು ನಾಯಕರ ದೋಷವಲ್ಲ! ಕಾರಣ, ಯಕ್ಷಗಾನದ ರಂಗದಲ್ಲಿ ಅವರ ನಿಯತ್ತು, ರೂಢಿಗತವಾದ ಶಿಸ್ತು ಮತ್ತು
ಅನುಭವಗಳಲ್ಲಿ ಪರಿಪಕ್ವ. ಅವರೊಂದಿಗೆ ಒಡನಾಟ ತೀವ್ರವಾದಂತೆ ನಿರ್ಮಲ ಮನಸ್ಸು ಮತ್ತು ಮಗು ಮನಸ್ಸಿನ
ಪರಿಚಯವಾಗುತ್ತದೆ
ನಾಯಕರ ಶಿಷ್ಯ ಗಡಣ ಸಣ್ಣದಲ್ಲ. ಕಲಿಕಾ
ರೀತಿ ಭಿನ್ನ. ವಿದ್ಯಾರ್ಥಿಯ ಸುಪ್ತವಾದ ಆಸಕ್ತಿಯನ್ನು ಹೆಕ್ಕಿ ತೆಗೆಯುವಲ್ಲಿ ನಿಷ್ಣಾತ. ಮಕ್ಕಳ ಆಸಕ್ತಿಯ
ಹರಹು ಎಷ್ಟಿದೆ ಎಂದು ಒಂದೆರಡು ವಾರದಲ್ಲಿ ತಿಳಿದುಬಿಡುತ್ತದೆ. ಅದಕ್ಕೆ ಹೊಂದಿಕೊಂಡು ಕಲಿಕಾ ವಿಧಾನಗಳಲ್ಲಿ
ಅಲ್ಪ ಸ್ವಲ್ಪ ವ್ಯತ್ಯಾಸ ಮಾಡಿಕೊಂಡು ಕಲಿಸಬೇಕಾಗುತ್ತದೆ. ಗುರುಕುಲದಲ್ಲಿ ಶಿಷ್ಯರ ಮುಂದೆ ನಾನೂ ಮಗುವಾಗಬೇಡ್ವಾ.
ಗೋವಿಂದ ನಾಯಕರೊಮ್ಮೆ ಆಡಿದ ಮಾತು ಮರೆಯುವಂತಹುದಲ್ಲ.
ಪುತ್ತೂರು ಬೊಳ್ವಾರಿನ ಶ್ರೀ ದುರ್ಗಾ
ಪರಮೇಶ್ವರೀ (ಉಳ್ಳಾಲ್ತಿ) ಮಲರಾಯ ಸಪರಿವಾರ ದೇವಾಲಯದಲ್ಲಿ ತರಗತಿಗಳು ನಡೆಯುತ್ತವೆ. ತಿಂಗಳ ತಾಳಮದ್ದಳೆಗಳಲ್ಲಿ
ಕಲಿಯುವ ಶಿಷ್ಯರಿಗೂ 'ಪ್ರಾಕ್ಟಿಕಲ್' ಅವಕಾಶ. ಎಳವೆಯಿಂದಲೇ 'ಸಭಾಕಂಪನ'ವನ್ನು ಚಿವುಟಿ ತೆಗೆಯುವ ವಿಧಾನ.
ಶಿಷ್ಯಂದಿರ ಹೆತ್ತವರು ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಮಕ್ಕಳ ಗುರುವನ್ನೂ ಪ್ರೀತಿಸುತ್ತಾರೆ,
ಗೌರವಿಸುತ್ತಾರೆ. ಕಲಿಕೆಗೆ ಮಾತ್ರ ಗುರುವಲ್ಲ, ನಿಜ
ಜೀವನದಲ್ಲೂ 'ಗುರು'ವಾಗಿ ಸ್ವೀಕರಿಸಿದ್ದಾರೆ.
ನಾನು ಕೃಷ್ಣಪ್ರಕಾಶ್ ಉಳಿತ್ತಾಯರ ಬೌದ್ಧಿಕ
ಪ್ರೌಢಿಮೆಯನ್ನು ದೂರದಿಂದಲೇ ನೋಡುತ್ತಾ, ಅಭಿಮಾನ ಪಡುತ್ತಾ ಬಂದವನು. ಹಲವಾರು ಪಕ್ವ ಬರಹಗಳಿಂದ ಪಕ್ವರಾದವರು.
ನಿರಂತರ ಓದುವಿಕೆ ಬದುಕಿನ ಭಾಗ. ತಾನು ಪ್ರೀತಿಸುವ ರಂಗದ 'ಅಕಾಡೆಮಿಕ್' ವಿಚಾರಗಳನ್ನು ಬರಹಗಳ ಮೂಲಕ
ಹಂಚುವುದು ಸಣ್ಣ ಕೆಲಸವಲ್ಲ. ಹಿಮ್ಮೇಳ ಕಲಾವಿದನಾಗಿದ್ದುಕೊಂಡು, ರಂಗದ ಚಲನೆಗಳಿಗೆ ಕಣ್ಣಾಗುತ್ತಾರೆ. ತಾಳಮದ್ದಳೆಯಲ್ಲಿ ಮಾತಿಗೆ ಕಿವಿಯಾಗುತ್ತಾರೆ. ಈ ಎಲ್ಲಾ
'ಹಿರಿದಾದ' ಬೌದ್ಧಿಕ ಪಕ್ವತೆಯು ಅವರನ್ನು ಗಟ್ಟಿಗೊಳಿಸಿದೆ. ಬದುಕಿನಲ್ಲಿ ಜತೆಜತೆಗೆ ಹೆಜ್ಜೆಯೂರಿದ
ಸ್ನೇಹಿತನೋರ್ವ 'ಬೆಳೆದ ಪರಿ' ಅಭಿಮಾನಪಡಬೇಕಾದ ಸಂಗತಿ. ಅಭಿಮಾನ ಪಟ್ಟಿದ್ದೇನೆ.
ಭಾಗವತ ಪಾಲೆಚ್ಚಾರು ಗೋವಿಂದ ನಾಯಕರ ಬದುಕಿನ
ಕಲಾಯಾನವು ಅಕ್ಷರಗಳಾಗಿ ನಿಮ್ಮ ಮುಂದಿದೆ. ಕೃಷ್ಣಪ್ರಕಾಶ್ ಉಳಿತ್ತಾಯರ ಶ್ರಮ ಸಾರ್ಥಕ.
ತಾರಾಮೌಲ್ಯ ಎನ್ನುವುದು ಸ್ಥಾಪಿತ ಮಂದಿಯ ಸೊತ್ತಲ್ಲ. ಈ
ಪುಸ್ತಕದ ಮೂಲಕ 'ತಾರಾಮೌಲ್ಯ'ಕ್ಕೆ ಮರು ಜೀವ
ಬಂತು!