Monday, June 2, 2025

'ತಾರಾಮೌಲ್ಯ'ಕ್ಕೆ ಮರು ಜೀವ ಬಂತು!




 ಯಕ್ಷಗುರು ಶ್ರೀ ಪಾಲೆಚ್ಚಾರು ಗೋವಿಂದ ನಾಯಕರ ಕಲಾಯಾನ ʼಗೋವಿಂದ ಗಾಥೆʼ... ಲೇಖಕ ಶ್ರೀ ಕೃಷ್ಣ ಪ್ರಕಾಶ್‌ ಉಳಿತ್ತಾಯ... 2025 ಜೂನ್‌ 1 ರಂದು ಪುತ್ತೂರು ಬೊಳ್ವಾರಿನ ಶ್ರೀ ದುರ್ಗಾಪರಮೇ‍ಶ್ವರೀ (ಉಳ್ಳಾಲ್ತಿ) ಮಲರಾಯ ಸಪರಿವಾರ ಕ್ಷೇತ್ರದ ವಠಾರದಲ್ಲಿ ಕೃತಿ ಅನಾವರಣ... ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಂದ ಕೃತಿ ಬಿಡುಗಡೆ....  ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್‌ ಅವರಿಂದ ಸಮಾರಂಭದ ಉದ್ಘಾಟನೆ... ಶ್ರೀ ಕ್ಷೇತ್ರದ ಪವಿತ್ರಪಾಣಿ ಶ್ರೀ ಬಾಲಸುಬ್ರಹ್ಮಣ್ಯ ಭಟ್‌ ಅಧ್ಯಕ್ಷತೆ...  ಶ್ರೀ ಅಗರಿ ರಾಘವೇಂದ್ರ ರಾವ್‌, ಶ್ರೀ ಲಕ್ಷ್ಮೀ ಮಚ್ಚಿನ, ಶ್ರೀ ಮಹಾಲಿಂಗೇಶ್ವರ ಭಟ್‌, ಶ್ರೀ ವೆಂಕಟ್ರಮಣ ಉಳಿತ್ತಾಯ ಉಪಸ್ಥಿತಿ. ಗುರು ಶ್ರೀ ಪಾಲೆಚ್ಚಾರು ಗೋವಿಂದ ನಾಯಕರಿಗೆ ʼಈಶಾವಾಸ್ಯ ಪ್ರಶಸ್ತಿʼ ಪ್ರದಾನ. ಪೆರ್ಮಂಕಿ-ಉಳಾಯಿಬೆಟ್ಟು ʼಈಶಾವಾಸ್ಯʼ ಮತ್ತು ಶ್ರೀ ದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನ (ರಿ) ಬೊಳ್ವಾರು ಇವರ ಜಂಟಿ ಆಯೋಜನೆ....

          ಅನಾವರಣಗೊಂಡ ʼಗೋವಿಂದ ಗಾಥೆʼ (ಪ್ರಕಟಣೆ : ಈಶಾವಾಸ್ಯ ಪ್ರಕಾಶನ) ಪುಸ್ತಕಕ್ಕೆ ಮುನ್ನುಡಿ ಬರೆಯುವ ಅವಕಾಶವನ್ನು ಕೃಷ್ಣ ಪ್ರಕಾಶರು ನೀಡಿದ್ದರು. ಆ ಮುನ್ನುಡಿ ಇಲ್ಲಿದೆ... ತಮ್ಮ ಓದಿಗಾಗಿ...

-------------------------------------------------------------- 

'ಅಭಿನಂದನ ಗ್ರಂಥ' -  ಇಲ್ಲಿವೆ, ಕಣ್ಮನ ದಣಿಯುವಷ್ಟು ಉತ್ಪ್ರೇಕ್ಷೆಗಳ ಗೊಂಚಲು. ಹೂರಣಗಳಿಗೆ ಅನಿವಾರ್ಯತೆಯ ಹಂಗು. ಕಲಾವಿದನ ಕಲಾಯಾನದ ಸಾರ್ಥಕ್ಯದ ತುತ್ತ ತುದಿ. ನೆಮ್ಮದಿಯತ್ತ ಜಾರುವ ಹೃದಯ. ಭಾವ ತೇವದ ಜಿನುಗುವಿಕೆಗೆ ಮರುಜೀವ.

ಹತ್ತಾರು ಲೇಖನಗಳು ಹೊಸೆದುಕೊಂಡರೆ ತೃಪ್ತ ಭಾವ. ಅಷ್ಟಿಷ್ಟು ಪರಿಚಿತ ಸ್ನೇಹಿತರಲ್ಲಿ ಲೇಖನಕ್ಕಾಗಿ ಒತ್ತಾಯ, ಮರುಒತ್ತಾಯ, ಪೀಡನೆ. ಕೆಲವೊಮ್ಮೆ 'ನಿಮ್ಮ ಹಳೆಯ ಲೇಖನವೂ ಆದೀತು' ಎನ್ನುವ ಗಂಟಲ ಮೇಲಿನ ವಿನಯವಂತಿಕೆ.

ಒಂದು ನೋಟದಿಂದ ಸರಿ. ಇಲ್ಲಿ ಗ್ರಂಥ ಪ್ರಕಟಣೆ ಮತ್ತು ಗೌರವಾರ್ಪಣೆ ಮುಖ್ಯ! ಆದರೆ ಇದೇ ಗ್ರಂಥವನ್ನು ಅಕಾಡೆಮಿಕ್ ಕಣ್ಣಿನಿಂದ ನೋಡಿದರೆ ತೀರಾ ಢಾಳು ಢಾಳು. ಯಾಕೆ ಹೇಳಿ? ಅಲ್ಲಿನ ಬಹುತೇಕ ಬರಹಗಳಲ್ಲಿ ಅವರ 'ಬಯೋಡಾಟಾ' ವಿಚಾರಗಳದ್ದೇ ಮೇಲ್ಮೆ.

ಒಂದು ಬರೆಹದಲ್ಲಿ ಇರಲಿ. ಜತೆಗೆ ಕಲಾವಿದನ ಕಲಾಯಾನ ಸಿಹಿ-ಕಹಿ ಅನುಭವಗಳು, ಆ ರಂಗದಲ್ಲಿ ಅವರ ಸಾಹಸ - ಸಾಧನೆ, ಅನುಭವಿಸಿದ ಪಾಡು.. ಇವೆಲ್ಲಾ 'ಆಕರ' ದೃಷ್ಟಿಯಿಂದ ದಾಖಲಾಗಬೇಕು. ಹಾಗಾಗುತ್ತಿಲ್ಲ. ಇಂತಹ 'ಸ್ಥಿರ ವಿನ್ಯಾಸ'ಗಳಿಗೆ ರೋಸಿದವರೆಷ್ಟೋ. ಅವರು 'ಅಭಿನಂದನ ಗ್ರಂಥ'ವನ್ನು ಓದುವುದು ಬಿಡಿ, ಪುಟ ತಿರುವಿಯೂ ನೋಡುತ್ತಿಲ್ಲ. ಪುಸ್ತಕ ಸಂಗ್ರಹಕ್ಕೆ ಹೊಸ ನೆಂಟನ ಸೇರ್ಪಡೆ!

ಜತೆಗೆ ಸಂಪಾದಕನ 'ವಾಟ್ಸಾಪ್, ಫೇಸ್ಬುಕ್ಕಿನಲ್ಲಿ ಬರೆಯಿರಿ' ಎಂಬ ವಿನೀತತೆಯಿಲ್ಲದ ವಿನಂತಿಗಳು, ಸಂದೇಶಗಳು.  ಸಾವಿರಾರು ರೂಪಾಯಿ ಖರ್ಚು ಮಾಡಿ ಗ್ರಂಥ ಅಚ್ಚು ಹಾಕಿಸಿ, ವಿತರಣೆಯೂ ಮಾಡದೆ, ಲೇಖಕರಿಗೂ ಕಳುಹಿಸದೆ, ಆಸಕ್ತರಿಗೆ ನೀಡಿದೆ.. ಎಲ್ಲೋ ಒಂದೆಡೆ ಪೇರಿಸಿಟ್ಟರೆ ಏನು ಪ್ರಯೋಜನ?

ಪುಟ ತಿನ್ನುವ ಗ್ರಂಥಗಳ ಬದಲು ಒಬ್ಬೊಬ್ಬ ಕಲಾವಿದರ ಕಲಾಯಾನದ ಚಿಕ್ಕ ಪುಸ್ತಕಗಳು ಪ್ರಕಟಗೊಳ್ಳಬೇಕು. ಒಂದೆರಡು ಗಂಟೆಯಲ್ಲಿ ಓದಿ ಮುಗಿಸುವ ಒಳಸುರಿಗಳಿರಬೇಕು. ಈ ವಿಚಾರಗಳೆಲ್ಲಾ ಮನದಲ್ಲೇ ಗುಂಯ್ಗುಡುತ್ತಿದ್ದುವು. 

ಈ ಹಿನ್ನೆಲೆಯಲ್ಲಿ ಮಿತ್ರ ಕೃಷ್ಣಪ್ರಕಾಶ ಉಳಿತ್ತಾಯರು ಬರೆದ ಪಾಲೆಚ್ಚಾರು ಗೋವಿಂದ ನಾಯಕರ  ಕಲಾಯಾನದ ಹೆಜ್ಜೆಗಳು ಆಪ್ತವಾದುವು. ಒಬ್ಬ ಕಲಾವಿದನ ಬದುಕಿನಲ್ಲಿ ಹಾದು ಹೋಗುವ ಚಿಕ್ಕ ಚಿಕ್ಕ ಘಟನೆಗಳೇ ಕಲಾಯಾನದ ಗರ್ಭ. ಅದು ಕಾಲದ ಕಥನ. ಗೋವಿಂದ ನಾಯಕ್ ಪಾಲೆಚ್ಚಾರರ ಬದುಕಿನ ಗರ್ಭಕ್ಕೆ ಉಳಿತ್ತಾಯರು ಕನ್ನಡಿ ಹಿಡಿದಿದ್ದಾರೆ. ಅವರ ಶಿಷ್ಯರಾಗಿ ಹತ್ತಿರದಿಂದ ನೋಡಿ, ತಿಳಿದ ವಿಚಾರಗಳ ಪ್ರಸ್ತುತಿಗಳು ಪುಸ್ತಕದ ಜೀವಂತಿಕೆ.

ಸುಮಾರು ಮೂರುವರೆ ದಶಕಗಳಿಂದ ಗೋವಿಂದ ನಾಯಕರ ಒಡನಾಟವಿದೆ. ನನ್ನ ಯಕ್ಷಕಲಿಕೆಯ ಆರಂಭದ ದಿನಮಾನಗಳಲ್ಲಿ ನಾಯಕರ ನಿರ್ದೇಶನ, ಪಾತ್ರಗಳ ಕುರಿತಾದ ತಿಳುವಳಿಕೆಗಳ ಫಲಾನುಭವಿ. ನಾಯಕರು ಅಕ್ಷರಾರ್ಥದಲ್ಲಿ 'ರಂಗ ನಿರ್ದೇಶಕ'. ತನ್ನ ಕಸುಬಿನಲ್ಲಿ ರಾಜಿಯಿಲ್ಲದ ನಿರ್ವಹಣೆ. ಮೇಳಗಳ ತಿರುಗಾಟ, ಹಿರಿಯರ ಒಡನಾಟಗಳು ಅವರ ಬೌದ್ಧಿಕ ಶಕ್ತಿಗೊಂದು 'ನಂದದ ಬೆಳಕು'.

 ಗೋವಿಂದ ನಾಯಕರು ಹೊಸಬರಿಗೆ 'ಒರಟಾಗಿ' ಕಂಡರೆ ಅದು ನಾಯಕರ ದೋಷವಲ್ಲ! ಕಾರಣ, ಯಕ್ಷಗಾನದ ರಂಗದಲ್ಲಿ ಅವರ ನಿಯತ್ತು, ರೂಢಿಗತವಾದ ಶಿಸ್ತು ಮತ್ತು ಅನುಭವಗಳಲ್ಲಿ ಪರಿಪಕ್ವ. ಅವರೊಂದಿಗೆ ಒಡನಾಟ ತೀವ್ರವಾದಂತೆ ನಿರ್ಮಲ ಮನಸ್ಸು ಮತ್ತು ಮಗು ಮನಸ್ಸಿನ ಪರಿಚಯವಾಗುತ್ತದೆ

 ನಾಯಕರ ಶಿಷ್ಯ ಗಡಣ ಸಣ್ಣದಲ್ಲ. ಕಲಿಕಾ ರೀತಿ ಭಿನ್ನ. ವಿದ್ಯಾರ್ಥಿಯ ಸುಪ್ತವಾದ ಆಸಕ್ತಿಯನ್ನು ಹೆಕ್ಕಿ ತೆಗೆಯುವಲ್ಲಿ ನಿಷ್ಣಾತ. ಮಕ್ಕಳ ಆಸಕ್ತಿಯ ಹರಹು ಎಷ್ಟಿದೆ ಎಂದು ಒಂದೆರಡು ವಾರದಲ್ಲಿ ತಿಳಿದುಬಿಡುತ್ತದೆ. ಅದಕ್ಕೆ ಹೊಂದಿಕೊಂಡು ಕಲಿಕಾ ವಿಧಾನಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಮಾಡಿಕೊಂಡು ಕಲಿಸಬೇಕಾಗುತ್ತದೆ. ಗುರುಕುಲದಲ್ಲಿ ಶಿಷ್ಯರ ಮುಂದೆ ನಾನೂ ಮಗುವಾಗಬೇಡ್ವಾ. ಗೋವಿಂದ ನಾಯಕರೊಮ್ಮೆ ಆಡಿದ ಮಾತು ಮರೆಯುವಂತಹುದಲ್ಲ.

 ಪುತ್ತೂರು ಬೊಳ್ವಾರಿನ ಶ್ರೀ ದುರ್ಗಾ ಪರಮೇಶ್ವರೀ (ಉಳ್ಳಾಲ್ತಿ) ಮಲರಾಯ ಸಪರಿವಾರ ದೇವಾಲಯದಲ್ಲಿ ತರಗತಿಗಳು ನಡೆಯುತ್ತವೆ. ತಿಂಗಳ ತಾಳಮದ್ದಳೆಗಳಲ್ಲಿ ಕಲಿಯುವ ಶಿಷ್ಯರಿಗೂ 'ಪ್ರಾಕ್ಟಿಕಲ್' ಅವಕಾಶ. ಎಳವೆಯಿಂದಲೇ 'ಸಭಾಕಂಪನ'ವನ್ನು ಚಿವುಟಿ ತೆಗೆಯುವ ವಿಧಾನ. ಶಿಷ್ಯಂದಿರ ಹೆತ್ತವರು ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಮಕ್ಕಳ ಗುರುವನ್ನೂ ಪ್ರೀತಿಸುತ್ತಾರೆ, ಗೌರವಿಸುತ್ತಾರೆ.  ಕಲಿಕೆಗೆ ಮಾತ್ರ ಗುರುವಲ್ಲ, ನಿಜ ಜೀವನದಲ್ಲೂ 'ಗುರು'ವಾಗಿ ಸ್ವೀಕರಿಸಿದ್ದಾರೆ.

ನಾನು ಕೃಷ್ಣಪ್ರಕಾಶ್ ಉಳಿತ್ತಾಯರ ಬೌದ್ಧಿಕ ಪ್ರೌಢಿಮೆಯನ್ನು ದೂರದಿಂದಲೇ ನೋಡುತ್ತಾ, ಅಭಿಮಾನ ಪಡುತ್ತಾ ಬಂದವನು. ಹಲವಾರು ಪಕ್ವ ಬರಹಗಳಿಂದ ಪಕ್ವರಾದವರು. ನಿರಂತರ ಓದುವಿಕೆ ಬದುಕಿನ ಭಾಗ. ತಾನು ಪ್ರೀತಿಸುವ ರಂಗದ 'ಅಕಾಡೆಮಿಕ್' ವಿಚಾರಗಳನ್ನು ಬರಹಗಳ ಮೂಲಕ ಹಂಚುವುದು ಸಣ್ಣ ಕೆಲಸವಲ್ಲ. ಹಿಮ್ಮೇಳ ಕಲಾವಿದನಾಗಿದ್ದುಕೊಂಡು, ರಂಗದ ಚಲನೆಗಳಿಗೆ ಕಣ್ಣಾಗುತ್ತಾರೆ.  ತಾಳಮದ್ದಳೆಯಲ್ಲಿ ಮಾತಿಗೆ ಕಿವಿಯಾಗುತ್ತಾರೆ. ಈ ಎಲ್ಲಾ 'ಹಿರಿದಾದ' ಬೌದ್ಧಿಕ ಪಕ್ವತೆಯು ಅವರನ್ನು ಗಟ್ಟಿಗೊಳಿಸಿದೆ. ಬದುಕಿನಲ್ಲಿ ಜತೆಜತೆಗೆ ಹೆಜ್ಜೆಯೂರಿದ ಸ್ನೇಹಿತನೋರ್ವ 'ಬೆಳೆದ ಪರಿ' ಅಭಿಮಾನಪಡಬೇಕಾದ ಸಂಗತಿ. ಅಭಿಮಾನ ಪಟ್ಟಿದ್ದೇನೆ.

ಭಾಗವತ ಪಾಲೆಚ್ಚಾರು ಗೋವಿಂದ ನಾಯಕರ ಬದುಕಿನ ಕಲಾಯಾನವು ಅಕ್ಷರಗಳಾಗಿ ನಿಮ್ಮ ಮುಂದಿದೆ. ಕೃಷ್ಣಪ್ರಕಾಶ್ ಉಳಿತ್ತಾಯರ ಶ್ರಮ ಸಾರ್ಥಕ.

ತಾರಾಮೌಲ್ಯ ಎನ್ನುವುದು ಸ್ಥಾಪಿತ ಮಂದಿಯ ಸೊತ್ತಲ್ಲ. ಈ ಪುಸ್ತಕದ ಮೂಲಕ  'ತಾರಾಮೌಲ್ಯ'ಕ್ಕೆ ಮರು ಜೀವ ಬಂತು!

 

Saturday, May 31, 2025

2025 ಜೂನ್ 1 ರಂದು ಯಕ್ಷಗುರು ಪಾಲೆಚ್ಚಾರು ಗೋವಿಂದ ನಾಯಕರಿಗೆ 'ಈಶಾವಾಸ್ಯ ಪ್ರಶಸ್ತಿ' ಹಾಗೂ 'ಗೋವಿಂದ ಗಾಥೆ' ಕೃತಿ ಅನಾವರಣ

 


   

ಯಕ್ಷಗುರು, ಭಾಗವತ ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ 'ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ' ಪ್ರದಾನ. ದಿನಾಂಕ 1-6-2025, ರವಿವಾರದಂದು ಪುತ್ತೂರು ಬೊಳ್ವಾರಿನ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ಮಲರಾಯ ಸಪರಿವಾರ ಕ್ಷೇತ್ರದ ವಠಾರದಲ್ಲಿ ಸಂಜೆ ಗಂಟೆ 5-30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

     ಈ ಸಂದರ್ಭದಲ್ಲಿ ಶ್ರೀ ಕೃಷ್ಣಪ್ರಕಾಶ್ ಉಳಿತ್ತಾಯರು ಬರೆದ  ಪಾಲೆಚ್ಚಾರು ಗೋವಿಂದ ನಾಯಕ್ ಅವರ ಕಲಾಯಾನ ಕೃತಿ 'ಗೋವಿಂದ ಗಾಥೆ' ಅನಾವರಣಗೊಳ್ಳಲಿದೆ. 'ಈಶಾವಾಸ್ಯ ಪೆರ್ಮಂಕಿ' ಮತ್ತು ಶ್ರೀ ದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನ (ರಿ) ಬೊಳ್ವಾರು - ಇವರ ಜಂಟಿ ಆಯೋಜನೆಯಲ್ಲಿ ಕಾರ್ಯಕ್ರಮ ಸಂಪನ್ನವಾಗಲಿದೆ.

     ಶ್ರೀ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭವನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಶ್ರೀ ಕ್ಷೇತ್ರದ ಪವಿತ್ರಪಾಣಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ ವಹಿಸಲಿದ್ದಾರೆ. 'ಗೋವಿಂದ ಗಾಥೆ' ಪುಸ್ತಕದ ಕುರಿತು ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ಶ್ರೀ ನಾ. ಕಾರಂತ ಪೆರಾಜೆ ಮಾತನಾಡಲಿದ್ದಾರೆ.

     ಮುಖ್ಯ ಅತಿಥಿಗಳಾಗಿ ಮಂಗಳೂರಿನ ಅಗರಿ ಎಂಟರ್ಪ್ರೈಸಸ್ ಇದರ  ಶ್ರೀ ಅಗರಿ ರಾಘವೇಂದ್ರ ರಾವ್, ಸಾಹಿತಿ ಶ್ರೀ ಲಕ್ಷ್ಮೀ ಮಚ್ಚಿನ, ವಿಶ್ರಾಂತ ಪ್ರಾಂಶುಪಾಲ ಶ್ರೀ ಮಹಾಲಿಂಗೇಶ್ವರ ಭಟ್ ಹಾಗೂ ಹಿರಿಯ ಮದ್ಲೆಗಾರ್ ಶ್ರೀ ವೆಂಕಟ್ರಮಣ ಉಳಿತ್ತಾಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರಂಭದ ಪೂರ್ವದಲ್ಲಿ 'ಜಾಂಬವತಿ ಕಲ್ಯಾಣ' ಪ್ರಸಂಗದ ತಾಳಮದ್ದಳೆ ಜರುಗಲಿದೆ.


Tuesday, February 4, 2025

ಹಿರಿಯ ಅರ್ಥಧಾರಿ ಕೆ.ವಿ.ಗಣಪಯ್ಯ


 (ಹದಿನಾರು ವರುಷದ ಹಿಂದೆ ಕೆ.ವಿ.ಗಣಪಯ್ಯರಿಗೆ ʼಬೊಳ್ಳಿಂಬಳ ಪ್ರಶಸ್ತಿʼ ಪ್ರಾಪ್ತವಾದಾಗ ಅವರನ್ನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಹೊಸೆದ ಲೇಖನವಿದು. ಇಂದು ಗಣಪಯ್ಯನವರು ದೈವಾಧೀನರಾದರು. ಅವರ ನೆನಪಿನಲ್ಲಿ ಈ ಲೇಖನದ ಮರುಓದು.)

ಕಲ್ಮಡ್ಕದಲ್ಲೊಂದು 'ದೊಡ್ಡ ಸೆಟ್ಟಿನ' ತಾಳಮದ್ದಳೆ. ಪ್ರಸಂಗ 'ಮಾಗಧ ವಧೆ'. ಕೀರ್ತಿಶೇಷ ಶೇಣಿಯವರ 'ಮಾಗಧ'. ವಿದ್ವಾನ್ ಪೆರ್ಲ ಪಂಡಿತರ 'ಕೃಷ್ಣ'. ಗಣಪಯ್ಯರ 'ಭೀಮ'. ಶೇಣಿಯವರ ʼಮಾಗಧʼ ಎಂದರೆ ಕೇಳಬೇಕೇ? ವಾದ-ಪ್ರತಿವಾದ, ಹೂಂಕಾರ-ಝೇಂಕಾರ! ಕೊನೆಗೆ ಮಾಗಧ-ಭೀಮರ ಮುಖಾಮುಖಿ. ಗಣಪಯ್ಯರು 'ದುಷ್ಟ..ನಿಲ್ಲಿಸು' ಎಂದಷ್ಟೇ ಹೇಳಿದ್ದು, ಆ ಸ್ವರ ಸ್ಥಾಯಿಯ ಗುಡುಗಿಗೆ ಇಡೀ ಸಭೆಯೇ ಸ್ತಬ್ಧ! ಗಪ್-ಚಿಪ್! ವಾದ ಬಿಸಿಬಿಸಿಯಾಗಿ ಮುಂದುವರಿದು, ಮಾಗಧನಿಗೆ ನಿಂದೆಯ ಸುರಿಮಳೆ. 

ತಾಳಮದ್ದಳೆ ಮುಗಿದು ಗಣಪಯ್ಯನವರಲ್ಲಿ ಅವರಾಪ್ತರು ಹೇಳಿದರಂತೆ - 'ಶೇಣಿಯವರ ಎದುರು ಹಾಗೆ ಮಾತನಾಡೋದಾ'? ಅದಕ್ಕೆ ಗಣಪಯ್ಯರ ಉತ್ತರ - ತಾಳಮದ್ದಳೆಯಲ್ಲಿ 'ಮಾಗಧ' ಕಾಣದಿದ್ದರೆ 'ಭೀಮ'ನನ್ನು ಕಾಣಿಸುವುದು ಹೇಗೆ? ನಾನು ಮಾಗಧನಲ್ಲಿ 'ಶೇಣಿ'ಯನ್ನು ಕಂಡರೆ, ತಾಳಮದ್ದಳೆ ಪೂರ್ತಿ ಶೇಣಿಯೆ ಕಾಡುತ್ತಾರೆ! ಆಗ ನನ್ನೊಳಗಿನ 'ಭೀಮ' ಮೂಡಿ ಬರುವುದು ಹೇಗೆ? 

ಬಹುಶಃ ಈ ಘಟನೆ ಗಣಪಯ್ಯನವರ ಅರ್ಥಗಾರಿಕೆಯನ್ನು ಅರಿಯಲು ಸಾಕು. ವ್ಯಕ್ತಿಗಿಂತ ಪಾತ್ರ ಮುಖ್ಯ ಎಂದು ನಂಬಿದವರು. ಆಗಾಗಿಯೇ ಇರಬೇಕು, ಅವರಲ್ಲಿ 'ವ್ಯಕ್ತಿ ಆರಾಧನೆ' ಇರಲಿಲ್ಲ! 

ಗಣಪಯ್ಯನವರದು ದಶಮುಖ ವ್ಯಕ್ತಿತ್ವ. ಯಕ್ಷಗಾನ, ಶಿಕ್ಷಣ, ಸಮಾಜ ಸೇವೆ, ಧಾರ್ಮಿಕ, ಯುವ ಸಂಘಟನೆ, ಗ್ರಾಮೀಣಾಭಿವೃದ್ಧಿ, ಸಾಹಿತ್ಯ, ನಾಟಕ, ಪುರಾಣ ಪ್ರವಚನ, ಕಲಾವಿದರಿಗೆ ಪ್ರೋತ್ಸಾಹ, ಉಪನ್ಯಾಸ. 

ಗಣಪಯ್ಯನವರು ಅಧ್ಯಾಪಕರಾಗಿದ್ದು ಈಗ ನಿವೃತ್ತರು. ಬಂಗಾಡಿ-ಮಿತ್ತಬಾಗಿಲು ಶಾಲೆಯ ಮಾಸ್ತರಿಕೆಯೊಂದಿಗೆ ಸೇವಾರಂಭ. ಕಾಣಿಯೂರು ಶಾಲೆಯಲ್ಲಿ ನಿವೃತ್ತ. ಕೊಳಂಬೆ ಪುಟ್ಟಣ್ಣ ಗೌಡರು ಗುರುಸಮಾನ. ಶಾಲಾ ಕಲಿಕೆಯಲ್ಲಿದ್ದಾಗಲೇ ಗಣಪಯ್ಯರಿಗೆ ಯಕ್ಷಗಾನ ಅಂಟಿತ್ತು. ಮುಂದದು ಬದುಕಿನೊಂದಿಗೆ ನಂಟಾಯಿತು. ಆ ನಂಟು 'ಹವ್ಯಾಸ'ವಾಗಿಯೇ ಉಳಿಯಿತು! 

ಗಣಪಯ್ಯರಿಗೆ ಯಕ್ಷಗಾನ ಅರ್ಥಗಾರಿಕೆಯಲ್ಲಿ ಸಿದ್ಧಿಯಿದೆ. ಪ್ರಸಿದ್ಧಿಯಿದೆ. ಆದರೆ 'ಸುಪ್ರಸಿದ್ಧ' ಎಂಬ ಮನೆಗೆ ಪ್ರವೇಶ ಮಾಡುತ್ತಿರುವಾಗಲೇ, ಯಾಕೋ ಆ ಮನೆಯ ಬಾಗಿಲು ಸುಲಲಿತವಾಗಿ ಅವರಿಗೆ ತೆರೆಯಲಿಲ್ಲ! ಬಾಗಿಲು ತೆರೆದುಕೊಳ್ಳದಿದ್ದರೆ, ಪ್ರವೇಶ ಮಾಡುವುದಾದರೂ ಹೇಗೆ? 'ಈ ಮನೆಯ ಸಹವಾಸವೇ ಬೇಡ' ಎನ್ನುತ್ತಾ ದೂರವುಳಿದರು! 

'ಸುಪ್ರಸಿದ್ಧ'ರಾಗದಿದ್ದರೆ ಏನಾಯಿತು? 'ಪ್ರಸಿದ್ಧಿ' ಇದೆಯಲ್ಲಾ. ಅದು ಅರಸಿಕೊಂಡು ಬಂತು. ನಾಡಿನುದ್ದಗಲಕ್ಕೂ ಅವಕಾಶದ ಬಾಗಿಲು ತೆರೆಯಿತು. ತನ್ನ ಅದ್ಭುತ ಪಾಂಡಿತ್ಯದಿಂದ ಪ್ರಾಕಾಂಡರೂ ತಲೆದೂಗುವಂತೆ ಮಾಡಿದರು. 'ಇಂದು ಗಣಪಯ್ಯರ ಅರ್ಥ' ಎನ್ನುವಾಗಲೆ ಸಹ ಅರ್ಥಧಾರಿಗಳು ಕರವಸ್ತ್ರದಿಂದ ಮುಖ ಒರೆಸಿಕೊಳ್ಳವಷ್ಟು ಸ್ವ-ವರ್ಚಸ್ಸನ್ನು ರೂಪಿಸಿಕೊಂಡರು. . ಜತೆಜತೆಗೆ ಸುಪ್ರಸಿದ್ಧರ ಕೂಟಗಳಲ್ಲಿ ಗಣಪಯ್ಯರೆಡೆಗೆ ಸಭಾಸದರ ವಿಶೇಷ ನೋಟ ಹರಿದುದಂತೂ ನಿಜ! 

'ಮತ್ಸರ ಬಿಟ್ರೆ ಸಿದ್ಧಿ ಬೆಳಕಿಗೆ ಬರುತ್ತದೆ', 'ಅರ್ಥಧಾರಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಬೇಕು. ಆಗ ಸ್ವಯಂಸ್ಪೂರ್ತಿಯಿಂದ ವಿಚಾರ ಹೊರಹೊಮ್ಮುತ್ತದೆ' - ಮಾತಿನ ಮಧ್ಯೆ ಗಣಪಯ್ಯನವರು ಹೇಳಿದ ಮಾತು. ಅವರ ಅರ್ಥಗಾರಿಕೆಯಲ್ಲಿ ಈ ಹೊಳಹನ್ನು ಕಾಣಬಹುದು. 

ಬಹುತೇಕ ಎಲ್ಲಾ ವಿಧದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೃಷ್ಣ ಸಂಧಾನ ಪ್ರಸಂಗದ 'ಕೌರವ'ನ ಅರ್ಥಗಾರಿಕೆಯ ಮೊನಚು, 'ಕೃಷ್ಣ'ನ ಜಾಣ್ಮೆ; ಅಂತೆಯೇ 'ದಶರಥ', 'ಮಾಗಧ', 'ವಾಲಿ'ಪಾತ್ರಗಳಲ್ಲಿ ಗಣಪಯ್ಯರ ಛಾಪು ಪ್ರತ್ಯೇಕ. ಯಾರದ್ದೇ ನಕಲಲ್ಲ. ಸ್ವ-ನಿರ್ಮಿತ ಶಿಲ್ಪಗಳು. ಪುರಾಣದ ಚೌಕಟ್ಟಿನಲ್ಲಿ ಪ್ರಸಂಗದ ಆಶಯವನ್ನು ಬಿಂಬಿಸುವ ರೀತಿ ಅನನ್ಯ. ಒಂದು ಪಾತ್ರದಲ್ಲಿ ಎಷ್ಟು ಪ್ರಶ್ನೆಗಳು ಮೂಡುತ್ತದೋ, ಅಷ್ಟು ಪ್ರಶ್ನೆಗಳನ್ನು ಕೇಳುವುದರಲ್ಲಿ ರಾಜಿಯಿಲ್ಲ. 

ಮೊದಮೊದಲು ಇವರು ಯಾವುದೇ ಪಾತ್ರವನ್ನು ನಿರ್ವಹಿಸಿದರೂ, 'ಸ್ವಗತ' ದೀರ್ಘವಾಗಿ ಲಂಬಿಸುತ್ತಿತ್ತಂತೆ. 'ಓ..ಅವರದಾ.ಒಂದು ಗಂಟೆ ಸ್ವಗತ ಗ್ಯಾರಂಟಿ' ಜತೆ ಅರ್ಥಧಾರಿಗಳು ವಿನೋದಕ್ಕೆ ಹೇಳುತ್ತಿದ್ದರಂತೆ. ದೀರ್ಘವಾದ ಸ್ವಗತ ಹೇಗೆ ಕಡಿಮೆಯಾಯಿತು? ಅವರ ಮಾತಲ್ಲೇ ಕೇಳೋಣ – ಒಮ್ಮೆ ಭೀಷ್ಮಾರ್ಜುನ ಪ್ರಸಂಗ. ಸ್ಥಳ ನೆನಪಿಲ್ಲ. ಸಂಘಟಕರು 'ಇಂದಿನ ಕೂಟಕ್ಕೆ ಟೇಪ್ ಉಂಟು' ಎಂದರಂತೆ. ಆಗ ಟೇಪ್ ಅಂದರೆ ಅದು 'ಬಹುದೊಡ್ಡ' ಕೂಟ ಅಂತ ಲೆಕ್ಕ. ನನ್ನ ಪಾತ್ರ ಭೀಷ್ಮ. ತಾಳಮದ್ದಳೆ ಮುಂದುವರಿಯಿತು. ನನ್ನ ಸ್ವಗತ ಮುಗಿಯುತ್ತಿದ್ದಂತೆ ಸಂಘಟಕರು ಕಿವಿಯಲ್ಲಿ ಹೇಳಿದರು - ಒಂದು ಗಂಟೆಯ ಕ್ಯಾಸೆಟ್ ಮುಗಿಯಿತು! ಈಗ ಎರಡನೇ ಕ್ಯಾಸೆಟ್ ಹಾಕಬೇಕಷ್ಟೇ! ತಾಳಮದ್ದಳೆ ಮುಗಿದು,  ನನ್ನ ಅರ್ಥವನ್ನು ಟೇಪ್ನಲ್ಲಿ ಕೇಳಿದೆ. ನನಗೆ ಅಷ್ಟು ದೀರ್ಘವಾದ ಅರ್ಥಗಾರಿಕೆ ಎಷ್ಟು ಕಿರಿಕಿರಿಯಾಯಿತೆಂದರೆ, 'ಇನ್ನು ಮುಂದೆ ದೀರ್ಘವಾದ ಸ್ವಗತ ಹೇಳುವುದಿಲ್ಲ' ಎಂದು ಶಪಥ ಮಾಡಿದೆ. ಹೀಗೆ ಅರ್ಥಗಾರಿಕೆಯಲ್ಲಿ ಸ್ವ-ನಿಯಂತ್ರಣ. 

ಯಾವುದೇ ಶ್ರುತಿಗೆ ಹೊಂದಾಣಿಕೆಯಾಗಬಲ್ಲ ಅದ್ಭುತ ಸ್ವರಸಂಪತ್ತು. ಎದುರಾಳಿಯ ಪ್ರಶ್ನೆಗೆ 'ರಪ್' ಅಂತ ಬರುವ ಪ್ರತ್ಯುತ್ತರ. ಎದುರಾಳಿಯ ಅರ್ಥಗಾರಿಕೆಯ ನಡೆ ಹೇಗುಂಟೋ, ಅದೇ ದಾರಿಯಲ್ಲಿ ಸಾಗುವ ಪರಿ. ಹರಿಹಾಯುವ ಸ್ವಭಾವದ ಅರ್ಥಗಾರಿಕೆಯಲ್ಲ. ಆದರೆ ಎಲ್ಲಾದರೂ ತನ್ನ ಮೇಲೆ 'ಅ್ಯಟಾಕ್ ಮಾಡ್ತಾನೆ' ಎಂದು ಗೊತ್ತಾದರೆ ಸಾಕು. ಮತ್ತಿನ 'ಗಣಪಯ್ಯ'ರನ್ನು ನೋಡಬೇಕು. ಆಗ ಇದಿರಾಳಿಗೆ ನೀಡುವ ಚಿಕಿತ್ಸೆಗೆ ಮತ್ತೆಂದೂ ಆ ಕಲಾವಿದ ಗಣಪಯ್ಯರ ಹೆಸರು ಹೇಳಿದಾಗಲೇ ಬೆವರಬೇಕು' ಸ್ನೇಹಿತ ಗಂಗಾಧರ ಬೆಳ್ಳಾರೆ ನೆನಪಿಸಿಕೊಂಡಿದ್ದರು.   

ಇವರ ಅರ್ಥಗಾರಿಕೆಯಲ್ಲಿ ಪ್ರತ್ಯೇಕವಾದ 'ಶಾಸ್ತ್ರೀಯ ಮಟ್ಟು' ಗಮನಿಸಬಹುದು. ಕಾವ್ಯದ ಹೊಸ ಹೊಳಹುಗಳನ್ನು ತೆರೆದುಕೊಳ್ಳುವ ಪರಿ ಅನ್ಯಾದೃಶ. ಇವರದು ಸ್ವರ ಪ್ರಧಾನವಾದ ಅರ್ಥ. ಉದಾ: ಕೃಷ್ಣನ ಮೃದುತ್ವ, ಕೌರವ ದೌಷ್ಟ್ರ್ಯ..ಇತ್ಯಾದಿ. 

ಇವರು ಎಂದಿಗೂ ಸಂಘಟಕರಿಗೆ ಹೊರೆಯಲ್ಲ. 'ಇಂತಹುದೇ ಅರ್ಥ ಬೇಕು' ಎಂದು ಪಟ್ಟು ಹಿಡಿವವರಲ್ಲ. ತನಗೆ ಪ್ರತ್ಯೇಕವಾದ ವ್ಯವಸ್ಥೆ ಬೇಕು ಎಂದು ಸಂಘಟಕರ 'ತಲೆ ತಿಂದದ್ದಿಲ್ಲ'! ಒಪ್ಪಿದ ತಾಳಮದ್ದಳೆಗೆ ನಿಖರವಾಗಿ ಭಾಗವಹಿಸುತ್ತಿದ್ದರು. ಇದ್ದ ವ್ಯವಸ್ಥೆಯಲ್ಲಿ, ಪಾಲಿಗೆ ಬಂದ ಪಾತ್ರವನ್ನು 'ಅದ್ಭುತ'ವಾಗಿ ಬಿಂಬಿಸುವ ಗಣಪಯ್ಯರ ಅರ್ಥಕ್ಕೆ ಸಾಟಿಯಿಲ್ಲ. ಅವರೇ ಸಾಟಿ. 

'ರಾಗ ಬರುವಾಗ ತಂತಿ ಕಡಿಯಿತು. ಬೇಡಿಕೆ ಬರುವಾಗ ಮನೆಯ ತಾಪತ್ರಯ' - ತಾಳಮದ್ದಳೆಯ ಕ್ಷೇತ್ರದಿಂದ ತಾನು ದೂರವಾದ ಕಾರಣವನ್ನು ಹೇಳುತ್ತಾರೆ. ಈಗಂತೂ ಪೂರ್ತಿ ವಿಶ್ರಾಂತ. 'ಹಳೆಯ ನೆನಪುಗಳು ಸಿಹಿ' ಎನ್ನುತ್ತಾ ಬುತ್ತಿ ಬಿಚ್ಚಿದರೆ ಸಾಕು - ಅದರಲ್ಲಿ ಸಿಗುವ ಅನುಭವ ಇದೆಯಲ್ಲಾ, ಅದು ದಾಖಲಾಗಬೇಕಾದ ಅಂಶಗಳು. ಹಿರಿಯ, ವಿದ್ವಾಂಸ ಕೆ.ವಿಗಣಪಯ್ಯರ ಯಕ್ಷಗಾನ ಕ್ಷೇತ್ರದ ಅವರ ಸಾಧನೆಗೆ 'ಬೊಳ್ಳಿಂಬಳ ಪ್ರಶಸ್ತಿ' ಅರಸಿ ಬಂದಿದೆ.

          ಗಣಪಯ್ಯನವರು ಇಂದು (4-2-2025) ದೈವಾಧೀನರಾದರು. ಅವರಿಗಿದು ಅಕ್ಷರ ನಮನ.

 

 

Saturday, January 4, 2025

'ಸ್ಮೃತಿ ಕೃತಿಗಳು ಮುಂದಿನ ತಲೆಮಾರಿಗೆ ದೀವಿಗೆ' - ಕುಂಬಳೆ ಶ್ರೀಧರ ರಾವ್ ಸ್ಮೃತಿ ಕಾರ್ಯಕ್ರಮದಲ್ಲಿ ಪೂಜ್ಯ ಎಡನೀರು ಶ್ರೀಗಳು


“ಕುಂಬಳೆ ಶ್ರೀಧರ ರಾವ್ ಅವರು ನಿರ್ವಹಿಸುತ್ತಿದ್ದ ಪಾತ್ರಗಳೆಲ್ಲವೂ ಗೌರವದ ಮಿತಿಯೊಳಗೆ ಅಭಿವ್ಯಕ್ತಿಸಲ್ಪಡುತ್ತಿತ್ತು. ಸಜ್ಜನಿಕೆ, ವಿಧೇಯತೆ ಅವರ ವ್ಯಕ್ತಿತ್ವ. ಅವರ ಸ್ಮೃತಿಯೊಂದಿಗೆ ಅವರ ಬಗೆಗಿನ ನೆನಪು ಸಂಚಿಕೆಯು ಪ್ರಕಟವಾಗಿರುವುದು ಶ್ಲಾಘನೀಯ. ಇದು ಮುಂದಿನ ತಲೆಮಾರಿಗೆ ಹಿರಿಯರೊಬ್ಬರ ಜೀವಿತದ ಕಾಲಘಟ್ಟವನ್ನು, ಅವರ ಕೊಡುಗೆಯನ್ನು ಪರಿಚಯಿಸುವ ದೀವಿಗೆಯಾಗುತ್ತದೆ.” ಎಂದು ಎಡನೀರು ಶ್ರೀಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

ಅವರು ರವಿವಾರ ಕುಂಬಳೆಯ ಶ್ರೀ ಕಣಿಪುರ ಗೋಪಾಲಕೃಷ್ಣ ದೇವಳದ ಸಭಾಭವನದಲ್ಲಿ ಜರುಗಿದ ಕುಂಬಳೆ ಶ್ರೀಧರ ರಾವ್ (Kumble Shreedhar Rao) ಸ್ಮೃತಿ ಕಾರ್ಯಕ್ರಮದಲ್ಲಿ - 29-12-2024) ಆಶೀರ್ವಚನ ನೀಡುತ್ತಾ ಮಾತನಾಡಿದರು. ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಶ್ರೀಧರ ರಾಯರ ವ್ಯಕ್ತಿತ್ವವನ್ನು ಜ್ಞಾಪಿಸಿಕೊಂಡರು.

ಧರ್ಮಸ್ಥಳ ಎಸ್.ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಡಿ.ಹರ್ಷೇಂದ್ರ ಕುಮಾರ್ ಮಾತನಾಡುತ್ತಾ, “ಧರ್ಮಸ್ಥಳ ಮೇಳವೊಂದರಲ್ಲೇ ಐದು ದಶಕಗಳ ಕಾಲ ನಿಷ್ಠೆಯಿಂದ ದುಡಿದವರು ಶ್ರೀಧರ ರಾಯರು. ಕಲಾನಿಷ್ಠನಾಗಿ, ಮೇಳನಿಷ್ಠನಾಗಿ ಮೃದು ಸ್ವಭಾವಗಳಿಂದ ಎಲ್ಲರ ಒಡನಾಡಿಯಾಗಿದ್ದರು. ಪಾತ್ರಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಅವರು ಮೇಳಕ್ಕೊಂದು ಆಸ್ತಿಯಾಗಿದ್ದರು” ಎಂದರು.

ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರು ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿಯನ್ನು ಮಾಡಿದರು. “ಶ್ರೀಧರ ರಾಯರ ದಮಯಂತಿ, ಸುಭದ್ರೆ, ಚಿತ್ರಾಂಗದೆ, ಕಯಾದು.. ಮೊದಲಾದ ಪಾತ್ರಗಳು ತುಂಬಾ ಚೆನ್ನಾಗಿ ಹಾಗೂ ಅಚ್ಚುಕಟ್ಟಾಗಿ ಮೂಡಿಬರುತ್ತಿತ್ತು. ಇನ್ನೊಂದು ನೆನಪಿಸುವ ಪಾತ್ರ. 'ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ'ಯ 'ಅಮ್ಮು ಬಲ್ಲಾಳ್ತಿ'. ದೊಡ್ಡ ಮನೆತನದ ರಾಣಿಯಂತಹ ಸ್ಥಾನಮಾನ. ಜಿನಭಕ್ತಿ, ಸೌಮ್ಯತೆ, ಸರಳತೆ, ಆಶ್ರಯದಾತೃತ್ವ.. ಈ ಸನ್ನಿವೇಶವನ್ನು ಅಸ್ತಿತ್ವದ ಯೋಗ್ಯತೆಯಿಂದಲೇ ಮೆರೆಸಿದರು. ಆದು ಶಾಶ್ವತವಾದ ಕಲಾಕೃತಿ” ಎಂದರು.

ಈ ಸಂದರ್ಭದಲ್ಲಿ ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಸಂಪಾದಿತ ಶ್ರೀಧರ ರಾಯರ ಸ್ಮೃತಿ ಸಂಚಿಕೆ 'ಕಲಾ ಶ್ರೀಧರ' ಕೃತಿಯನ್ನು ಪೂಜ್ಯ ಎಡನೀರು ಶ್ರೀಗಳು ಅನಾವರಣಗೊಳಿಸಿದರು. ಕೃತಿ ಪ್ರಕಟಣೆಯ ಆಶಯ ಮತ್ತು ಅದರ ರಚನೆಯ ಹಿಂದಿನ ಅನುಭವಗಳನ್ನು ನಾ. ಕಾರಂತರು ವಿವರಿಸಿದರು. ವೇದಿಕೆಯಲ್ಲಿ ಸ್ಮೃತಿ ಕೃತಿ ಸಮಿತಿಯ ಅಧ್ಯಕ್ಷ ಶ್ರೀ ಭಗವಾನ್‌ ದಾಸ್‌ ಹಾಗೂ ಶ್ರೀಧರ ರಾಯರ ಪತ್ನಿ ಸುಲೋಚನ ಉಪಸ್ಥಿತರಿದ್ದರು.

ಆರಂಭದಲ್ಲಿ ಕುಂಬ್ಳೆ ಗೋಪಾಲ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಗಣೇಶ ಪ್ರಸಾದ್ ಕುಂಬ್ಳೆ ಹಾಗೂ ದೇವಿ ಪ್ರಸಾದ್ ಕುಂಬ್ಳೆಯವರು ಯತಿದ್ವಯರಿಗೆ ಫಲಕಾಣಿಕೆ, ಹಾರದೊಂದಿಗೆ ಸ್ವಾಗತಿಸಿದರು. ಸುಕುಮಾರ್ ಅನಂತಪುರ, ರಾಮಚಂದ್ರ ಬೆಂಗಳೂರು ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಕೃತಿ ಸಂಪಾದಕ ನಾ. ಕಾರಂತ ಪೆರಾಜೆ, ಮಾಣಿಲ ಮೇಳದ ಸಂಚಾಲಕ ಡಾ.ಸತೀಶ ಪುಣಿಂಚತ್ತಾಯರನ್ನು ಗೌರವಿಸಲಾಯಿತು. ಸಂಘಟಕ, ಅರ್ಥದಾರಿ ಶ್ರೀ ಉಜಿರೆ ಅಶೋಕ ಭಟ್ ನಿರ್ವಹಿಸಿದರು. ಶ್ರೀ ಭಗವಾನ ದಾಸ್‌ ವಂದಿಸಿದರು.

ಉದ್ಘಾಟನೆ : 'ಕಲಾ ಶ್ರೀಧರ' ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಣಿಪುರದ ಪ್ರಧಾನ ಅರ್ಚಕ ವೇ.ಮೂ.ಮಾಧವ ಅಡಿಗಳು ಉದ್ಘಾಟಿಸಿ ಶುಭ ಹಾರೈಸಿದರು. ಧರ್ಮಸ್ಥಳ ಮೇಳದ ಭಾಗವತ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು, ನ್ಯಾಯವಾದಿ ಕಲಾರತ್ನ ಶಂನಾ ಅಡಿಗ ಉಪಸ್ಥಿತರಿದ್ದರು. ನಾರಾಯಣ ರಾವ್ ಬೇರಿಕೆ, ಕೃಷ್ಣ ಮುಖಾರಿ, ರಾಮ ರಾವ್ ಬೇರಿಕೆ, ಪ್ರತಾಪ ಕುಂಬ್ಳೆ, ಅಶೋಕ್ ಕುಂಬ್ಳೆ, ಗೋಪಾಲಕೃಷ್ಣ ಸೂರಂಬೈಲು.. ಮೊದಲಾದವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಶ್ರೀ ಗುರುಮೂರ್ತಿ ನಾಯ್ಕಾಪು ನಿರ್ವಹಿಸಿ, ವಂದಿಸಿದರು.

ಕುಂಬಳೆ ಶ್ರೀಧರ ಪಾತ್ರಗಳನ್ನು ನೆನಪಿಸುವ ಎರಡು ಸನ್ನಿವೇಶವನ್ನು ತಾಳಮದ್ದಳೆ ರೂಪದಲ್ಲಿ ಪ್ರಸ್ತುತ ಪಡಿಸಲಾಯಿತು. ಅಪರಾಹ್ನ 'ಕೃಷ್ಣ ಸಂಧಾನ' ತಾಳಮದ್ದಳೆ ನಡೆಯಿತು. ಕಲಾವಿದರಾಗಿ - ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ (ಭಾಗವತರು), ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್, ರಾಮಮೂರ್ತಿ ಕುದ್ರೆಕೂಡ್ಲು, ಲವಕುಮಾರ್ ಐಲ (ಮದ್ದಳೆ - ಚೆಂಡೆ ವಾದನ ಕಲಾವಿದರು), ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಶಂಭು ಶರ್ಮ, ಗೋಪಾಲ ನಾಯಕ್ ಸೂರಂಬೈಲು, ಎಂ.ಕೆ.ರಮೇಶ ಆಚಾರ್ಯ, ವಸಂತ ಗೌಡ ಕಾಯರ್ತಡ್ಕ, ದಿವಾಕರ ಆಚಾರ್ಯ ಗೇರುಕಟ್ಟೆ, ಅಶೋಕ ಕುಂಬ್ಳೆ (ಅರ್ಥದಾರಿಗಳು) ಭಾಗವಹಿಸಿದ್ದರು.

ಕೊನೆಗೆ ಶ್ರೀ ಮಹಾಲಕ್ಷ್ಮೀ ಕೃಪಾಪೋಶಿತ ಯಕ್ಷಗಾನ ಮಂಡಳಿ, ಶ್ರೀಧಾಮ-ಮಾಣಿಲ ಇವರಿಂದ 'ಕಂಸವಧೆ' ಬಯಲಾಟ ನಡೆಯಿತು. ಒಟ್ಟೂ ಕಾರ್ಯಕ್ರಮಕ್ಕೆ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ ನಾರಾಯಣಮಂಗಲ, ಶ್ರೀ ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ ಶೇಡಿಕಾವು, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಹಾಗೂ ಕುಂಬಳೆ ಶ್ರೀಧರ ರಾವ್ ಅಭಿಮಾನಿಗಳು ಹೆಗಲೆಣೆ ನೀಡಿದ್ದರು.

Wednesday, January 1, 2025

ಭಾಗವತ ಪುತ್ತಿಗೆ ರಘುರಾಮ ಹೊಳ್ಳರಿಗೆ - ಆತ್ಮಾಲಯ ಅಕಾಡೆಮಿ ಪ್ರಶಸ್ತಿ ಪ್ರದಾನ


 

     ಭಾರತದ ಸಂಪತ್ತು ಕಲೆ ಮತ್ತು ಸಾಹಿತ್ಯ. ಬದುಕಿನ ನಾಟಕದಲ್ಲಿ ಯಶಸ್ವಿಯಾಗಲು ಕಲೆ ಅಗತ್ಯ. ಜೀವನವೆಂಬುದು ಕಲೆಯ ಪ್ರತೀಕ. ಬದುಕು ಬಲೆ ಆಗಬಾರದ, ಕಲೆ ಆಗಬೇಕು. ಧರ್ಮದ ಉಳಿವಿಗೆ ಯಕ್ಷಗಾನದ ಕೊಡುಗೆ ಅನನ್ಯ” ಎಂದು ಶ್ರೀಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

    ಬೆಂಗಳೂರಿನ ಆತ್ಮಾಲಯ ಕಲೆ ಮತ್ತು ಸಂಸ್ಕೃತಿ ಆಕಾಡೆಮಿಯು ಶ್ರೀಮತಿ ಶಾಂತಾ ಮತ್ತು ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಪ್ರಶಸ್ತಿಯನ್ನು ಯಕ್ಷಗಾನದ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳರಿಗೆ ಪ್ರಶಸ್ತಿ ಪ್ರದಾನ ಮಾಡಿ ಶ್ರೀಗಳು ಮಾತನಾಡುತ್ತಾ “ಬದುಕಿನ ಪಾಠಶಾಲೆಗೆ ಯಕ್ಷಗಾನವೊಂದು ಪಠ್ಯವಿದ್ದಂತೆ” ಎಂದರು.

    ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ 'ನಟರಾಜ ವೇದಿಕೆ'ಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 'ಆಂಜನೇಯ 56' ಸಂದರ್ಭದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಉಪಸ್ಥಿತರಿದ್ದರು. ಜಸ್ಟೀಸ್ ಜಗನ್ನಾಥ ಶೆಟ್ಟಿ ಇವರ ಚಿರಂಜೀವಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಡಾ. ರಮಾನಂದ ಶೆಟ್ಟಿ ಉಪಸ್ಥಿತರಿದ್ದರು.

    ಪ್ರಶಸ್ತಿ ಪುರಸ್ಕೃತರ ಕುರಿತು ಪತ್ರಕರ್ತ, ಲೇಖಕ ನಾ. ಕಾರಂತ ಪೆರಾಜೆಯವರು ನುಡಿಹಾರಗಳನ್ನು ಸಲ್ಲಿಸುತ್ತಾ,” ರಘುರಾಮ ಹೊಳ್ಳರದು ನಿಜಾರ್ಥದ ಯಕ್ಷಧ್ವನಿ. ಒಂದು ಕಾಲಘಟ್ಟದ ಕ್ರಾಂತಿಧ್ವನಿ” ಎಂದರು. ಪ್ರಶಸ್ತಿಯು ಶಾಲು, ಹಾರ, ಹಣ್ಣುಹಂಪಲು, ಪ್ರಶಸ್ತಿ ಪತ್ರ ಮತ್ತು ರೂ.25,000 ನಿಧಿಯನ್ನು ಒಳಗೊಂಡಿತ್ತು.

    ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಅಚ್ಯುತ ಪಾಂಗಣ್ಣಾಯ ವಂದಿಸಿದರು. ಪೂಜ್ಯ ಶ್ರೀಗಳಿಗೆ  ಹರಿಣಾಕ್ಷಿ ಜೆ.ಶೆಟ್ಟಿ ಮತ್ತು ಸಂಘದ ಸದಸ್ಯೆಯರು ಫಲ ಸಮರ್ಪಣೆಯೊಂದಿಗೆ ಪೂರ್ಣಕುಂಭ ಸ್ವಾಗತ ಕೋರಿದರು. ಶ್ರೀಮತಿ ಶಾರದಾ ಅರಸ್, ಕಿಶೋರಿ ದುಗ್ಗಪ್ಪ, ದುಗ್ಗಪ್ಪ ಎನ್. ರಂಗನಾಥ ರಾವ್ ಅತಿಥಿಗಳನ್ನು ಗೌರವಿಸಿದರು. ಗುಡ್ಡಪ್ಪ ಬಲ್ಯ ನಿರ್ವಹಿಸಿದರು.

    ಆತ್ಮಾಲಯ ಅಕಾಡೆಮಿಯು ಈ ಹಿಂದಿನ ವರುಷಗಳಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕರಾದ ಪೆರುವೋಡಿ ನಾರಾಯಣ ಭಟ್, ಗಾನಕೇಸರಿ ಕುದ್ಮಾರು ವೆಂಕಟ್ರಮಣ, ಪೂಕಳ ಲಕ್ಷ್ಮೀನಾರಾಯಣ ಭಟ್, ಹೆಚ್.ದಾಸಪ್ಪ ರೈ, ಕುಂಬಳೆ ಶ್ರೀಧರ ರಾವ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು.

Tuesday, December 31, 2024

'ಸ್ಮೃತಿ ಕೃತಿಗಳು ಮುಂದಿನ ತಲೆಮಾರಿಗೆ ದೀವಿಗೆ' - ಕುಂಬಳೆ ಶ್ರೀಧರ ರಾವ್ ಸ್ಮೃತಿ ಕಾರ್ಯಕ್ರಮದಲ್ಲಿ ಪೂಜ್ಯ ಎಡನೀರು ಶ್ರೀಗಳು


“ಕುಂಬಳೆ ಶ್ರೀಧರ ರಾವ್ ಅವರು ನಿರ್ವಹಿಸುತ್ತಿದ್ದ ಪಾತ್ರಗಳೆಲ್ಲವೂ ಗೌರವದ ಮಿತಿಯೊಳಗೆ ಅಭಿವ್ಯಕ್ತಿಸಲ್ಪಡುತ್ತಿತ್ತು. ಸಜ್ಜನಿಕೆ, ವಿಧೇಯತೆ ಅವರ ವ್ಯಕ್ತಿತ್ವ. ಅವರ ಸ್ಮೃತಿಯೊಂದಿಗೆ ಅವರ ಬಗೆಗಿನ ನೆನಪು ಸಂಚಿಕೆಯು ಪ್ರಕಟವಾಗಿರುವುದು ಶ್ಲಾಘನೀಯ. ಇದು ಮುಂದಿನ ತಲೆಮಾರಿಗೆ ಹಿರಿಯರೊಬ್ಬರ ಜೀವಿತದ ಕಾಲಘಟ್ಟವನ್ನು, ಅವರ ಕೊಡುಗೆಯನ್ನು ಪರಿಚಯಿಸುವ ದೀವಿಗೆಯಾಗುತ್ತದೆ.” ಎಂದು ಎಡನೀರು ಶ್ರೀಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

ಅವರು ರವಿವಾರ ಕುಂಬಳೆಯ ಶ್ರೀ ಕಣಿಪುರ ಗೋಪಾಲಕೃಷ್ಣ ದೇವಳದ ಸಭಾಭವನದಲ್ಲಿ ಜರುಗಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿದರು. ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಶ್ರೀಧರ ರಾಯರ ವ್ಯಕ್ತಿತ್ವವನ್ನು ಜ್ಞಾಪಿಸಿಕೊಂಡರು.

ಧರ್ಮಸ್ಥಳ ಎಸ್.ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಡಿ.ಹರ್ಷೇಂದ್ರ ಕುಮಾರ್ ಮಾತನಾಡುತ್ತಾ, “ಧರ್ಮಸ್ಥಳ ಮೇಳವೊಂದರಲ್ಲೇ ಐದು ದಶಕಗಳ ಕಾಲ ನಿಷ್ಠೆಯಿಂದ ದುಡಿದವರು ಶ್ರೀಧರ ರಾಯರು. ಕಲಾನಿಷ್ಠನಾಗಿ, ಮೇಳನಿಷ್ಠನಾಗಿ ಮೃದು ಸ್ವಭಾವಗಳಿಂದ ಎಲ್ಲರ ಒಡನಾಡಿಯಾಗಿದ್ದರು. ಪಾತ್ರಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಅವರು ಮೇಳಕ್ಕೊಂದು ಆಸ್ತಿಯಾಗಿದ್ದರು” ಎಂದರು.

ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರು ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿಯನ್ನು ಮಾಡಿದರು. “ಶ್ರೀಧರ ರಾಯರ ದಮಯಂತಿ, ಸುಭದ್ರೆ, ಚಿತ್ರಾಂಗದೆ, ಕಯಾದು.. ಮೊದಲಾದ ಪಾತ್ರಗಳು ತುಂಬಾ ಚೆನ್ನಾಗಿ ಹಾಗೂ ಅಚ್ಚುಕಟ್ಟಾಗಿ ಮೂಡಿಬರುತ್ತಿತ್ತು. ಇನ್ನೊಂದು ನೆನಪಿಸುವ ಪಾತ್ರ. 'ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ'ಯ 'ಅಮ್ಮು ಬಲ್ಲಾಳ್ತಿ'. ದೊಡ್ಡ ಮನೆತನದ ರಾಣಿಯಂತಹ ಸ್ಥಾನಮಾನ. ಜಿನಭಕ್ತಿ, ಸೌಮ್ಯತೆ, ಸರಳತೆ, ಆಶ್ರಯದಾತೃತ್ವ.. ಈ ಸನ್ನಿವೇಶವನ್ನು ಅಸ್ತಿತ್ವದ ಯೋಗ್ಯತೆಯಿಂದಲೇ ಮೆರೆಸಿದರು. ಆದು ಶಾಶ್ವತವಾದ ಕಲಾಕೃತಿ” ಎಂದರು.

ಈ ಸಂದರ್ಭದಲ್ಲಿ ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಸಂಪಾದಿತ ಶ್ರೀಧರ ರಾಯರ ಸ್ಮೃತಿ ಸಂಚಿಕೆ 'ಕಲಾ ಶ್ರೀಧರ' ಕೃತಿಯನ್ನು ಪೂಜ್ಯ ಎಡನೀರು ಶ್ರೀಗಳು ಅನಾವರಣಗೊಳಿಸಿದರು. ಕೃತಿ ಪ್ರಕಟಣೆಯ ಆಶಯ ಮತ್ತು ಅದರ ರಚನೆಯ ಹಿಂದಿನ ಅನುಭವಗಳನ್ನು ನಾ. ಕಾರಂತರು ವಿವರಿಸಿದರು. ವೇದಿಕೆಯಲ್ಲಿ ಸ್ಮೃತಿ ಕೃತಿ ಸಮಿತಿಯ ಅಧ್ಯಕ್ಷ ಶ್ರೀ ಭಗವಾನ್‌ ದಾಸ್‌ ಹಾಗೂ ಶ್ರೀಧರ ರಾಯರ ಪತ್ನಿ ಸುಲೋಚನ ಉಪಸ್ಥಿತರಿದ್ದರು.

ಆರಂಭದಲ್ಲಿ ಕುಂಬ್ಳೆ ಗೋಪಾಲ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಗಣೇಶ ಪ್ರಸಾದ್ ಕುಂಬ್ಳೆ ಹಾಗೂ ದೇವಿ ಪ್ರಸಾದ್ ಕುಂಬ್ಳೆಯವರು ಯತಿದ್ವಯರಿಗೆ ಫಲಕಾಣಿಕೆ, ಹಾರದೊಂದಿಗೆ ಸ್ವಾಗತಿಸಿದರು. ಸುಕುಮಾರ್ ಅನಂತಪುರ, ರಾಮಚಂದ್ರ ಬೆಂಗಳೂರು ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಕೃತಿ ಸಂಪಾದಕ ನಾ. ಕಾರಂತ ಪೆರಾಜೆ, ಮಾಣಿಲ ಮೇಳದ ಸಂಚಾಲಕ ಡಾ.ಸತೀಶ ಪುಣಿಂಚತ್ತಾಯರನ್ನು ಗೌರವಿಸಲಾಯಿತು. ಸಂಘಟಕ, ಅರ್ಥದಾರಿ ಶ್ರೀ ಉಜಿರೆ ಅಶೋಕ ಭಟ್ ನಿರ್ವಹಿಸಿದರು. ಶ್ರೀ ಭಗವಾನ ದಾಸ್‌ ವಂದಿಸಿದರು.

ಉದ್ಘಾಟನೆ : 'ಕಲಾ ಶ್ರೀಧರ' ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಣಿಪುರದ ಪ್ರಧಾನ ಅರ್ಚಕ ವೇ.ಮೂ.ಮಾಧವ ಅಡಿಗಳು ಉದ್ಘಾಟಿಸಿ ಶುಭ ಹಾರೈಸಿದರು. ಧರ್ಮಸ್ಥಳ ಮೇಳದ ಭಾಗವತ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು, ನ್ಯಾಯವಾದಿ ಕಲಾರತ್ನ ಶಂನಾ ಅಡಿಗ ಉಪಸ್ಥಿತರಿದ್ದರು. ನಾರಾಯಣ ರಾವ್ ಬೇರಿಕೆ, ಕೃಷ್ಣ ಮುಖಾರಿ, ರಾಮ ರಾವ್ ಬೇರಿಕೆ, ಪ್ರತಾಪ ಕುಂಬ್ಳೆ, ಅಶೋಕ್ ಕುಂಬ್ಳೆ, ಗೋಪಾಲಕೃಷ್ಣ ಸೂರಂಬೈಲು.. ಮೊದಲಾದವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಶ್ರೀ ಗುರುಮೂರ್ತಿ ನಾಯ್ಕಾಪು ನಿರ್ವಹಿಸಿ, ವಂದಿಸಿದರು.

ಕುಂಬಳೆ ಶ್ರೀಧರ ಪಾತ್ರಗಳನ್ನು ನೆನಪಿಸುವ ಎರಡು ಸನ್ನಿವೇಶವನ್ನು ತಾಳಮದ್ದಳೆ ರೂಪದಲ್ಲಿ ಪ್ರಸ್ತುತ ಪಡಿಸಲಾಯಿತು. ಅಪರಾಹ್ನ 'ಕೃಷ್ಣ ಸಂಧಾನ' ತಾಳಮದ್ದಳೆ ನಡೆಯಿತು. ಕಲಾವಿದರಾಗಿ - ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ (ಭಾಗವತರು), ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್, ರಾಮಮೂರ್ತಿ ಕುದ್ರೆಕೂಡ್ಲು, ಲವಕುಮಾರ್ ಐಲ (ಮದ್ದಳೆ - ಚೆಂಡೆ ವಾದನ ಕಲಾವಿದರು), ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಶಂಭು ಶರ್ಮ, ಗೋಪಾಲ ನಾಯಕ್ ಸೂರಂಬೈಲು, ಎಂ.ಕೆ.ರಮೇಶ ಆಚಾರ್ಯ, ವಸಂತ ಗೌಡ ಕಾಯರ್ತಡ್ಕ, ದಿವಾಕರ ಆಚಾರ್ಯ ಗೇರುಕಟ್ಟೆ, ಅಶೋಕ ಕುಂಬ್ಳೆ (ಅರ್ಥದಾರಿಗಳು) ಭಾಗವಹಿಸಿದ್ದರು.

ಕೊನೆಗೆ ಶ್ರೀ ಮಹಾಲಕ್ಷ್ಮೀ ಕೃಪಾಪೋಶಿತ ಯಕ್ಷಗಾನ ಮಂಡಳಿ, ಶ್ರೀಧಾಮ-ಮಾಣಿಲ ಇವರಿಂದ 'ಕಂಸವಧೆ' ಬಯಲಾಟ ನಡೆಯಿತು. ಒಟ್ಟೂ ಕಾರ್ಯಕ್ರಮಕ್ಕೆ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ ನಾರಾಯಣಮಂಗಲ, ಶ್ರೀ ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ ಶೇಡಿಕಾವು, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಹಾಗೂ ಕುಂಬಳೆ ಶ್ರೀಧರ ರಾವ್ ಅಭಿಮಾನಿಗಳು ಹೆಗಲೆಣೆ ನೀಡಿದ್ದರು.

Saturday, December 28, 2024

ದಶಂಬರ 29ರಂದು ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ - ‘ಕಲಾ ಶ್ರೀಧರ' ಕೃತಿ ಅನಾವರಣ

 


      ಯಕ್ಷಗಾನದ ಹಿರಿಯ ಕಲಾವಿದ, ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಐದು ದಶಕಕ್ಕೂ ಮಿಕ್ಕಿ ಸೇವೆಗೈದ ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿ ಕಾರ್ಯಕ್ರಮವು 2024ರ ದಶಂಬರ 29, ರವಿವಾರರಂದು ಕುಂಬಳೆಯಲ್ಲಿ ಜರುಗಲಿದೆ. ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಮಂಟಪದಲ್ಲಿ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ವಿವಿಧ ಕಲಾಪಗಳು ಸಂಪನ್ನವಾಗಲಿವೆ.

    ಸಂಜೆ ಗಂಟೆ 4ಕ್ಕೆ ಶ್ರೀಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹಾಗೂ ಶ್ರೀಧಾಮ-ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನದಲ್ಲಿ 'ಶ್ರೀಧರ ಸ್ಮೃತಿ' ಕಾರ್ಯಕ್ರಮ ಜರುಗಲಿದೆ.

    ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಧರ್ಮಸ್ಥಳ ಎಸ್.ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಡಿ.ಹರ್ಷೇಂದ್ರ ಕುಮಾರ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಬಹುಶ್ರುತ ವಿದ್ವಾಂಸ, ಅರ್ಥದಾರಿ ಡಾ.ಎಂ.ಪ್ರಭಾಕರ ಜೋಶಿಯವರು 'ಶ್ರೀಧರ ಸ್ಮೃತಿ'ಯನ್ನು ಮಾಡಲಿದ್ದಾರೆ.  ಈ ಸಂದರ್ಭದಲ್ಲಿ ಪತ್ರಕರ್ತ, ಕಲಾವಿದ ಶ್ರೀ ನಾ. ಕಾರಂತ ಪೆರಾಜೆ ಇವರ ಸಂಪಾದಕತ್ವದ 'ಕಲಾ ಶ್ರೀಧರ' ಸ್ಮೃತಿ-ಕೃತಿಯನ್ನು ಪೂಜನೀಯ ಯತಿದ್ವಯರು ಅನಾವರಣಗೊಳಿಸಲಿದ್ದಾರೆ.

    ಪೂರ್ವಾಹ್ನ ಗಂಟೆ 9ಕ್ಕೆ ಶ್ರೀ ಕಣಿಪುರ ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ. ಮಾಧವ ಅಡಿಗ, ಸಾಮಾಜಿಕ ಸೇವಾ ಕಾರ್ಯಕರ್ತ ಹಾಗೂ ಕಲಾಪೋಷಕ ಶ್ರೀ ಮಂಜುನಾಥ ಆಳ್ವ, ಶ್ರೀ ಧರ್ಮಸ್ಥಳ ಮೇಳದ ಭಾಗವತ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕಲಾರತ್ನ ಶಂ.ನಾ.ಅಡಿಗ ಇವರ ಉಪಸ್ಥಿತಿಯಲ್ಲಿ 'ಶ್ರೀಧರ ಸ್ಮೃತಿ' ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.

ಬೆಳಿಗ್ಗೆ ಗಂಟೆ 9-30ರಿಂದ ಕುಂಬಳೆ ಶ್ರೀಧರ ರಾವ್ ಅವರ ಪ್ರಧಾನ ಪಾತ್ರಗಳ ನೆನವರಿಕೆಯ 'ಸಂವಾದದ ತಾಳಮದ್ದಳೆ' ಹಾಗೂ 'ಕೃಷ್ಣ ಸಂಧಾನ' ಆಖ್ಯಾನದ ತಾಳಮದ್ದಳೆ ಜರುಗಲಿದೆ. ಶ್ರೀಗಳಾದ ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ (ಭಾಗವತರು), ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್, ರಾಮಮೂರ್ತಿ ಕುದ್ರೆಕೂಡ್ಲು, ಲವಕುಮಾರ್ ಐಲ (ಮದ್ದಳೆ - ಚೆಂಡೆ); ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಆಶೋಕ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಶಂಭು ಶರ್ಮ, ಎಂ.ಕೆ.ರಮೇಶ ಆಚಾರ್ಯ, ವಸಂತ ಗೌಡ ಕಾಯರ್ತಡ್ಕ, ಗೋಪಾಲ ನಾಯಕ್ ಸೂರಂಬೈಲು, ದಿವಾಕರ ಆಚಾರ್ಯ ಗೇರುಕಟ್ಟೆ, ಅಶೋಕ್ ಕುಂಬ್ಳೆ (ಅರ್ಥದಾರಿಗಳು) ಭಾಗವಹಿಸಲಿದ್ದಾರೆ. ಈ ಕಲಾಪವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇವರು ಸಂಯೋಜಿಸಿದ್ದಾರೆ.

    ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀಧಾಮ, ಮಾಣಿಲ ಇವರಿಂದ ಶ್ರೀ ಸತೀಶ ಪುಣಿಂಚತ್ತಾಯ, ಪೆರ್ಲ ಇವರ ಸಂಯೋಜನೆಯಲ್ಲಿ 'ಕಂಸವಧೆ' ಬಯಲಾಟ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ, ನಾರಾಯಣ ಮಂಗಲ, ಕುಂಬಳೆ;  ಶ್ರೀ ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ, ಶೇಡಿಕಾವು-ಕುಂಬಳೆ, ಕುಂಬಳೆ ಶ್ರೀಧರ ರಾವ್ ಅಭಿಮಾನಿಗಳು ಆಯೋಜಿಸಿದ್ದಾರೆ. ಕಾರ್ಯಕ್ರಮಕ್ಕೆ ಮುಕ್ತ ಸ್ವಾಗತ. 

(ಚಿತ್ರಗಳು : ಶ್ಯಾಮಪ್ರಸಾದ್‌ ಕುಂಚಿನಡ್ಕ ಮತ್ತು ಮಧುಸೂದನ ಅಲೆವೂರಾಯ)