Thursday, August 27, 2015

ಯಕ್ಷಕವಿಗೆ ಗಾನಮೇಧದ ಅಭಿಷೇಕ

 ಕುಮಾರ ವಿಜಯ ಪ್ರಸಂಗ ಪುಸ್ತಕ
 ಗಾನಾರಾಧನೆಯಲ್ಲಿ ಶ್ರೀ ದಿನೇಶ ಅಮ್ಮಣ್ಣಾಯ, ಬಲಿಪ ನಾರಾಯಣ ಭಾಗವತರು, ಪುತ್ತಿಗೆ ರಘುರಾಮ ಹೊಳ್ಳ
 ನಂದಳಿಕೆಯ ಲಕ್ಷ್ಮೀನಾರ್ಣಪ್ಪಯ್ಯ (ಮುದ್ದಣ)


             ಯಕ್ಷಗಾನ ಕೂಟಾಟಗಳಲ್ಲಿ ಪ್ರಸಂಗ ಕವಿಯ ನೆನವರಿಕೆ ತೀರಾ ಕಡಿಮೆ. ಪ್ರಸಂಗದೊಂದಿಗೆ ಆತನ ಹೆಸರು ಹೊಸೆಯುವುದು ಅಪರೂಪ. ಕವಿಯೆಂದೂ ಹೆಸರಿಗೆ ಕೊಸರಾಡಿದವನಲ್ಲ. ರಾಡಿ ಎಬ್ಬಿಸಿದವನಲ್ಲ. ಅನೂಚಾನವಾಗಿ ಬೆಳೆದ ಪರಂಪರೆ. ಇದನ್ನು ಅನಾದರ ಎಂದು ಭಾವಿಸಬೇಕಾಗಿಲ್ಲ. ಕೆಲವು ಪ್ರಸಂಗ ಪುಸ್ತಕದಲ್ಲಿ ಕವಿಯ ಹೆಸರು ಅಚ್ಚಾಗಿದೆ. ಕೆಲವು ಸಲ ಕವಿ ಯಾರೆಂದು ತಿಳಿಯದೆ ಗೊಂದಲವಾಗಿರುವುದೂ ಇದೆ. ಮುದ್ರಕ,  ಪ್ರಕಾಶಕನಿಗೆ ಪ್ರಸಂಗವೇ ಮುಖ್ಯ ಹೊರತು ಕವಿಯಲ್ಲ! ಶೋಧಬುದ್ಧಿಯ ಮಸುಕಿನಲ್ಲಿ ಕವಿಯೂ ಅಜ್ಞಾತ.
              ಯಕ್ಷಗಾನ ಕವಿ, ಕಾವ್ಯಕ್ಕೆ ಮಾನ ಕೊಡುವ ಮೊದಲ ಯತ್ನವೊಂದು ಶ್ರೀ ಕ್ಷೇತ್ರ ಪಾವಂಜೆಯಲ್ಲಿ ನಡೆಯಿತು. ನಂದಳಿಕೆಯ ಲಕ್ಷ್ಮೀನಾರ್ಣಪ್ಪಯ್ಯ (ಮುದ್ದಣ) ಕವಿ ವಿರಚಿತ 'ಕುಮಾರ ವಿಜಯ'        
ಪ್ರಸಂಗಗಳ ಪದ್ಯಗಳಿಗೆ ಇಪ್ಪತ್ತೆರಡು ಭಾಗವತರು ದನಿಯಾದರು. ಪೂರ್ವಾಹ್ನ ಆರು ಗಂಟೆಯಿಂದ ರಾತ್ರಿ ಎಂಟರ ತನಕ ಗಾನಾರಾಧನೆಯ ಮೇಧ. ಮುದ್ದಣನ ಸಾಹಿತ್ಯ ಮಟ್ಟುಗಳ ಪರಿಚಯ. ತೆಂಕುತಿಟ್ಟಿನ ಹಿರಿ-ಕಿರಿಯ ಭಾಗವತರ ಸಮ್ಮಿಲನ.
              ಬಲಿಪ ನಾರಾಯಣ ಭಾಗವತರು, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ, ಅಗರಿ ರಘುರಾಮ ಭಾಗವತರು, ಕುರಿಯ ಗಣಪತಿ ಶಾಸ್ತ್ರಿ, ಪದ್ಯಾಣ ಗಣಪತಿ ಭಟ್.... ಮೊದಲಾದ ಹಿರಿಯರು ಮುದ್ದಣನ ಹಾಡಿನ ಜಾಡನ್ನರಿಸಿ ಸುಲಲಿತವಾಗಿ ಹಾಡಿದರು. ಹೊಸಬರಿಗೆ ಮಟ್ಟಿನ ರೂಢಿಯಿಲ್ಲದೆ ಎಡವಟ್ಟಾದುದೂ ಇಲ್ಲದಿಲ್ಲ. "ಹಾಡಿನ ಮಟ್ಟುಗಳು ತಿಳಿದರೆ ಮುದ್ದಣನ ಸಾಹಿತ್ಯ ಕಷ್ಟವಲ್ಲ. ಸಾಹಿತ್ಯದ ನಡೆ, ಛಂದಸ್ಸುಗಳ ಗತಿಗಳು ವಿಭಿನ್ನ. ಯಕ್ಷಗಾನ ಕ್ಷೇತ್ರದ ಕವಿಯೊಬ್ಬರಿಗೆ ಮೊಟ್ಟಮೊದಲ ಬಾರಿ ಸಂದ ಗೌರವವಿದು," ಎನ್ನುತ್ತಾರೆ ಪ್ರಸಂಗಕರ್ತ, ಕವಿ ಕಿನ್ನಿಗೋಳಿಯ ಶ್ರೀಧರ್ ಡಿ.ಎಸ್.
               ಎರಡೆರಡು ಘಂಟೆಗಳಂತೆ ಒಟ್ಟು ಏಳು ಪಾಳಿಗಳು. ಒಂದೊಂದು ಪಾಳಿಗೆ ಮೂರು, ನಾಲ್ಕು ಭಾಗವತರು. ಎಲ್ಲರಿಗೂ ನಿರ್ಧರಿತ ಹಾಡಿನ ಸೂಚಿ. ಪ್ರಸಂಗದ ನಡೆಯಂತೆ ಪದ್ಯಗಳ ಮಾಲೆ. ಭಾಗವತರಿಗೆ ವಿವಿಧ ಮಟ್ಟುಗಳಲ್ಲಿ ಹಾಡಲು ಅನುಕೂಲವಾಗುವಂತೆ ಕೆಲವೆಡೆ ಹಾಡುಗಳಲ್ಲಿ ಪುನರಾವರ್ತನೆ. ಪ್ರತೀ ಪಾಳಿ ಮುಗಿದಾಗಲೂ ಕವಿಗೆ ನಮನ. ಕಾರ್ಯಕ್ರಮದುದ್ದಕ್ಕೂ ಕಾವ್ಯದ ವರ್ಣನೆ. ಪ್ರಸಂಗ ಸಾಹಿತ್ಯ ಗಟ್ಟಿತನದ ವಿವರಣೆ. ಕವಿಯ ವ್ಯಕ್ತಿತ್ವದ ದರ್ಶನ.
ಮುದ್ದಣ ತನ್ನ ಇಪ್ಪತ್ತೆರಡನೆಯ ವಯಸ್ಸಿನಲ್ಲಿ 'ಕುಮಾರ ವಿಜಯ' ಪ್ರಸಂಗವನ್ನು ರಚಿಸಿದರಂತೆ. ಪಾವಂಜೆಯ ಕಾವ್ಯಾರಾಧನೆಯಲ್ಲಿ ಇಪ್ಪತ್ತೆರಡು ಭಾಗವತರು ಭಾಗವಹಿಸಿದ್ದರು. ಈ ಸಂಖ್ಯಾ ಚಮತ್ಕೃತಿ ಕಾಕತಾಳೀಯ.
             'ರತ್ನಾವತಿ ಕಲ್ಯಾಣ' ಪ್ರಸಂಗ ರಚಿಸುವಾಗ ಮುದ್ದಣ ಕವಿಗೆ ಹತ್ತೊಂಭತ್ತು ವರುಷ. ಮುದ್ದಣ ಕವಿಯ ಸಾಹಿತ್ಯದಲ್ಲಿ ಶೇ.50ರಷ್ಟು ಛಂದಸ್ಸುಗಳು ಆತನದ್ದೇ ಸಂಶೋಧನೆ ಎನ್ನಬಹುದು. ಸುಮಾರು ನೂರಹತ್ತಕ್ಕೂ ಮೀರಿ ಮಟ್ಟುಗಳಿವೆ. ಮುದ್ರಿತ ಪುಸ್ತಕದಲ್ಲಿ ಏಳುನೂರ ಇಪ್ಪತ್ತು ಪದ್ಯಗಳು ಸಿಗುತ್ತವೆ. ಸಾವಿರಕ್ಕೂ ಮಿಕ್ಕಿ ಪದ್ಯಗಳಿವೆ ಎಂದು ಬಲಿಪ ನಾರಾಯಣ ಭಾಗವತರ ಅಭಿಮತ, ಪ್ರಸಂಗವನ್ನು ಅಧ್ಯಯನ ಮಾಡಿದ ಶ್ರೀಧರ್ ಡಿ.ಎಸ್. ಹೇಳುತ್ತಾರೆ.
            ಕಾವ್ಯಾರಾಧನೆಯು ಪಾವಂಜೆಯ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಯಕ್ಷ ಕಲಾ ವಿಭಾಗದ ಕಲ್ಪನೆ. ಇದರ ಸಾಕಾರದಲ್ಲಿ ಸಶಕ್ತ ಯಕ್ಷಗಾನ ವಿದ್ವಾಂಸರ ಹೆಗಲೆಣೆ. ಕುಮಾರ ವಿಜಯದ ಎಲ್ಲಾ ಪದ್ಯಗಳನ್ನು ತೆಗೆದುಕೊಂಡು ಏಳು ದಿವಸದ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುವ ಯೋಚನೆಯಿದೆ. ಅಲ್ಲದೆ ಕವಿಯ ವಿವಿಧ ಮಟ್ಟುಗಳನ್ನು ಗಾನಾರಾಧನೆಯ ಮೂಲಕ ಪ್ರಸ್ತುತ ಪಡಿಸಬೇಕೆಂಬ ಯೋಜನೆಯಿದೆ,  ಹೊಸ ಸುಳಿವನ್ನು ವಿದ್ಯಾಶಂಕರ್ ನೀಡಿದರು. ಇವರು ವೇದಿಕೆಯ ಕಾರ್ಯದರ್ಶಿಗಳು.
             ಪಾವಂಜೆ ಶ್ರೀಕ್ಷೇತ್ರ ಯಕ್ಷಗಾನ ಸರಸ್ವತಿಯ ತಾಣವಾಗಿ ರೂಪುಗೊಳ್ಳುತ್ತಿರುವುದು ಹೆಮ್ಮೆ. ಭಾಗವಹಿಸಿದ ಎಲ್ಲರಿಗೂ ಊಟೋಪಚಾರದ ಆತಿಥ್ಯ. ಆಚೆ ಉಡುಪಿಗೂ, ಈಚೆ ಮಂಗಳೂರಿಗೂ ಮಧ್ಯದಲ್ಲಿರುವ  ಪಾವಂಜೆಯು ಕಾವ್ಯಾರಾಧನೆ ನಡೆಸುವ ಮೂಲಕ ಹೊಸ ಉಪಕ್ರಮಕ್ಕೆ ಹಾದಿ ತೋರಿದೆ. ಕವಿ-ಕಾವ್ಯವನ್ನು ಮಾನಿಸುವ ಹೊಸ ಸಂಪ್ರದಾಯಕ್ಕೆ ಶ್ರೀಕಾರ ಬರೆದಿದೆ. ಅಜ್ಞಾತ ಕವಿಯನ್ನು ಪ್ರಸಂಗದ ಮೂಲಕ ಜನಮಾನಸಕ್ಕೆ ಬಿಂಬಿಸುವ ಕಲಾಪೋಷಕ ವೇದಿಕೆಯ ದೂರದೃಷ್ಟಿ ಶ್ಲಾಘ್ಯ.
            ಮುದ್ದಣ (1870-1901) - ಸಾಹಿತ್ಯ ಲೋಕದ ವಿಸ್ಮಯ. 'ಮುದ್ದಣ ಸ್ಮಾರಕ ಮಿತ್ರ ಮಂಡಳಿ'ಯ ಮೂಲಕ ನಂದಳಿಕೆ ಬಾಲಚಂದ್ರ ರಾವ್ ಮತ್ತು ಅವರ ತಂಡ ಸದ್ದಿಲ್ಲದ ಕೆಲಸ ಮಾಡುತ್ತಿದೆ. ಮುದ್ದಣ ಪ್ರಕಾಶನವು 'ರಾಮಾಶ್ವಮೇಧ'ವನ್ನು ಪ್ರಕಟಿಸಿದೆ. ಕುಮಾರ ವಿಜಯ, ರತ್ನಾವತಿ ಕಲ್ಯಾಣ ಪ್ರಸಂಗಗಳ ಅಡಕ ತಟ್ಟೆಯನ್ನು ರೂಪಿಸಿದೆ. ಮುದ್ದಣ ಹೆಸರಿನ ಪ್ರಶಸ್ತಿಯನ್ನು ಸ್ಥಾಪಿಸಿದೆ.
            ಕಲಾಪೋಷಕ ವೇದಿಕೆಯು ಯಕ್ಷಗಾನ ಕವಿಗಳಿಗೆ ಮಾನ ಕೊಡುವ ಮೊದಲ ಹೆಜ್ಜೆ ಯಶವಾಗಿದೆ. ಗಾನಮೇಧದ ಅಭಿಷೇಕದಲ್ಲಿ ಪೂರ್ಣ ಮಿಂದು ಪುಳಕಿತರಾದ ಶ್ರೋತೃಗಳ ಸಾಕ್ಷಿಯಾಗಿ ಮುದ್ದಣ ಕವಿಗೆ ನಿಜಾರ್ಥನ ನಮನ ಸಲ್ಲಿಸಲ್ಪಟ್ಟಿದೆ.
(ಯಕ್ಷ ಚಿತ್ರ : ರಾಮ್ ನರೇಶ್ ಮಂಚಿ)


Monday, August 17, 2015

ಕಲೆ ಮೆಚ್ಚಿದ ಕಲಾವಿದ - ರೆಂಜಾಳ

               ಜುಲೈ ಕೊನೆ ವಾರ ಪುತ್ತೂರಿನಲ್ಲಿ 'ದಮಯಂತಿ ಪುನರ್ ಸ್ವಯಂವರ' ಯಕ್ಷಗಾನ ಪ್ರದರ್ಶನ. ರೆಂಜಾಳರ 'ಬಾಹುಕ'ನ ಪಾತ್ರ. ಹಾಸ್ಯಗಾರರನೇಕರ ಬಾಹುಕನನ್ನು ನೋಡಿದ್ದೆ. ಅವರೆಲ್ಲರಿಗಿಂತ ಇವರದು ಭಿನ್ನ. ಮುಖವರ್ಣಿಕೆಯಲ್ಲಿ ಹೊಸತನ. ರಂಗನಡೆಯಲ್ಲಿ ಸ್ವ-ನಿಲುವು. ಬಾಹುಕನೊಳಗೆ ನಳನೊಬ್ಬನಿದ್ದಾನೆ ಎನ್ನುವ ಎಚ್ಚರ. ಸತ್ಯವನ್ನು ಬಿಡದ ಸೂಕ್ಷ್ಮತೆ. ಹಾಸ್ಯದ ಸೋಂಕಿಲ್ಲದ ಗಂಭೀರತೆ. ಪಾತ್ರ ತುಂಬಾ ಇಷ್ಟವಾಯಿತು.
              ಎರಡೂವರೆ ದಶಕದಿಂದ ರೆಂಜಾಳ ರಾಮಕೃಷ್ಣ ರಾವ್(71) ಅವರನ್ನು ನೋಡುತ್ತಿದ್ದೇನೆ. ಅವರ ಪಾತ್ರಾಭಿವ್ಯಕ್ತಿಯಲ್ಲಿ ಪೂರ್ಣ ಪ್ರಮಾಣದ ಯಕ್ಷಗಾನವಿದೆ. ಬದಲಾವಣೆಯ ಕಾಲಘಟ್ಟದ ಹೊಸತನದ ಮುಂದೆ ಇವರ ವೇಷಕ್ಕೆ ಪ್ರತ್ಯೇಕ ಮಣೆ. ಪಾತ್ರ, ಕಾಲ, ಔಚಿತ್ರಕ್ಕೆ ಅನುಸರಿಸಿದ ನಡೆ. ಈ ಸಿದ್ಧಿಗೆ ಐದು ದಶಕದ ತಪಸ್ಸಿದೆ. 'ದಿಢೀರ್ ಕಲಾವಿದ'ರಾಗಿ ಮೇಲೆದ್ದು ಬಂದವರಲ್ಲ!
             ರಾಮಕೃಷ್ಣ ರಾಯರ ತನು ಮಾಗಿದೆ. ಮನ ಮಾಗಿಲ್ಲ. ಕಲೆಯಲ್ಲಿ ಅದೇ ಭಕ್ತಿ, ಶ್ರದ್ಧೆ. ಹಗಲಿಡೀ ವಯೋಸಹಜ ಅಸಹಾಯಕತೆ. ರಾತ್ರಿ ಹೊಂತಕಾರಿ ಹಿರಣ್ಯಾಕ್ಷ, ರಕ್ತಬೀಜ, ಇಂದ್ರಜಿತು ಆವೇಶವಾಗುತ್ತಾರೆ. ತನ್ನ ಇಪ್ಪತ್ತೆರಡನೇ ಹರೆಯದಲ್ಲಿ ರಂಗಪ್ರವೇಶ. ಅಗರಿ ಶ್ರೀನಿವಾಸ ಭಾಗವತರ ಪೂರ್ಣಾಾಶೀರ್ವಾದ. ಅಡ್ಕಸ್ಥಳ ನಾರಾಯಣ ಶೆಟ್ಟಿ ಮತ್ತು ಕುಡಾನ ಗೋಪಾಲಕೃಷ್ಣ ಭಟ್ಟರಿಂದ ನಾಟ್ಯಾಭ್ಯಾಸ. ಕುದ್ಕಾಡಿ ವಿಶ್ವನಾಥ ರೈ ಅವರಿಂದ ಭರತ ನಾಟ್ಯ ಕಲಿಕೆ. ಹಾಗಾಗಿ ಆರಂಭದ ದಿವಸಗಳ  ಸ್ತ್ರೀಪಾತ್ರಗಳ ಲಾಲಿತ್ಯ, ವೈಯಾರ, ಬಿನ್ನಾಣಗಳು ಗಮನ ಸೆಳೆಯುತ್ತಿದ್ದುವು.
              ಕೂಡ್ಲು ಮೇಳದಿಂದ ಮೇಳದ ಬದುಕು ಆರಂಭ. ಅಲ್ಲಿ ನಾಲ್ಕು ವರ್ಷ ತಿರುಗಾಟ. ಬಳಿಕ ಮೂರು ವರುಷ ಬಣ್ಣದ ಬದುಕಿಗೆ ಹಿನ್ನಡೆ. ಮುಂದೆ ಚೌಡೇಶ್ವರಿ ಮೇಳದ ಒಂದು ವರುಷದ ತಿರುಗಾಟ. ಆ ನಂತರ ನಾಲ್ಕು ದಶಕಕ್ಕೂ ಮಿಕ್ಕಿ ಕಟೀಲು ಶ್ರೀ ದುರ್ಗಾಾಪರಮೇಶ್ವರಿ ಮೇಳವೊಂದರಲ್ಲೇ ವ್ಯವಸಾಯ. ಈಗವರು ಪ್ರಧಾನ ವೇಷಧಾರಿ.
             ದೇವಿ ಮಹಾತ್ಮೆಯ 'ಶ್ರೀದೇವಿ' ಪಾತ್ರವು ರೆಂಜಾಳರಲ್ಲಿ ಹೆಚ್ಚು ಗೌರವ ಪಡೆಯುತ್ತದೆ. ಅಭಿವ್ಯಕ್ತಿಯಲ್ಲಿ ದೇವಿಯ ಅಲೌಕಿಕ ಶಕ್ತಿಯ ಅನಾವರಣ. ರಂಗವನ್ನು ನೋಡುತ್ತಾ ನಿಂತರೆ ಯಕ್ಷಗಾನ ಮರೆತುಹೋಗಿ ದೈವತ್ವದ ಭಾವ ಮೂಡುವಂತಹ ಛಾಪು. ಉಯ್ಯಾಲೆಯಲ್ಲಿ ಕುಳಿತ ದೇವಿಗೆ ಕೈಮುಗಿದು, ತಲೆಬಾಗಿ ನಮಸ್ಕರಿಸಿದವರೆಷ್ಟೋ. ಒಂದು ಪಾತ್ರವು ಪ್ರೇಕ್ಷಕರಲ್ಲಿ ಎಷ್ಟು ಮತ್ತು ಹೇಗೆ ಪರಿಣಾಮ ಬೀರಬಹುದು ಎನ್ನುವುದಕ್ಕೆ ರೆಂಜಾಳರ ದೇವಿ ಸಾಕ್ಷಿಯಾಗಿ ಕಣ್ಣೆದುರು ನಿಲ್ಲುತ್ತದೆ.
              ಈಚೆಗೆ ಕಟೀಲಿನಲ್ಲಿ 'ಯಕ್ಷಮಿತ್ರ ನಮ್ಮ ವೇದಿಕೆ' ವಾಟ್ಸಪ್ ಬಳಗವು ಪ್ರದರ್ಶನವೊಂದನ್ನು ಆಯೋಜಿಸಿತ್ತು. ಅಂದಿನ ಕೊನೆಯ ಪ್ರಸಂಗ ಶ್ರೀನಿವಾಸ ಕಲ್ಯಾಣ. ರೆಂಜಾಳರದು 'ಕೊರವಂಜಿ'. ಕಲಾಭಿಮಾನಿಗಳು ಮೆಚ್ಚಿದ ಪಾತ್ರ. ಪಾತ್ರಶಿಲ್ಪವೊಂದು ವಾಸ್ತವತೆಯತ್ತ ಇಣುಕದೆ ಪಾತ್ರಕಾಲದಲ್ಲೇ ಸಂಚರಿಸುವಂತೆ ಮಾಡುವ ಕೆಲವೇ ಕೆಲವು ಕಲಾವಿದರ ಸಾಲಲ್ಲಿ ರೆಂಜಾಳರಿದ್ದಾರೆ. ಸುಭದ್ರೆ, ದಮಯಂತಿ, ಕೊರವಂಜಿ, ಶಶಿಪ್ರಭೆ.. ವೇಷಗಳು ನೂತನ.
             ಸ್ತ್ರೀಪಾತ್ರಗಳು ವಶವಾಗುತ್ತಲೇ ಪುರುಷ ಪಾತ್ರದತ್ತ ವಾಲಿದರು. ದೇವೇಂದ್ರ, ಅರ್ಜುುನ, ಕಾರ್ತವೀರ್ಯ, ಕೌಂಡ್ಲಿಕ, ಅತಿಕಾಯ, ಇಂದ್ರಜಿತು, ರಕ್ತಬೀಜ. ಹರಿಶ್ಚಂದ್ರ.. ಹೀಗೆ ವಿವಿಧ ಸ್ವರೂಪದ, ಭಾವಗಳ ಪಾತ್ರಗಳನ್ನು, ಅದರ ಸ್ವಭಾವದಂತೆ ಚಿತ್ರಿಸುವ ಸಾಮಥ್ರ್ಯವೇ ಅವರ ಯಶದ ಗುಟ್ಟು. ಸಂದರ್ಭ ಬಂದಾಗ ಬಾಹುಕ, ವಿಜಯ, ಪಂಡಿತ, ಮಕರಂದ.. ಪಾತ್ರಗಳಿಗೂ ಸೈ.
               ಪೀಠಿಕೆ ವೇಷಗಳ ಸಭಾಕ್ಲಾಸಿನ ಸೊಗಸು, ರಂಗ ತುಂಬು ಹೆಜ್ಜೆಗಳು, ಪಾತ್ರಕ್ಕನುಸಾರವಾದ ಅರ್ಥಗಾರಿಕೆ, ಅಧಿಕವಲ್ಲದ ನಾಟ್ಯ, ಸಾಂಪ್ರದಾಯಿಕ ಬಣ್ಣಗಾರಿಕೆ, ಪೌರಾಣಿಕ ಆವರಣದೊಳಗೆ ತುಂಬಿಕೊಳ್ಳುವ ಅಭಿವ್ಯಕ್ತಿ, ನಿಜ ಬದುಕಿನಲ್ಲೂ ಹೊರೆಯಾಗದ ಸ್ನೇಹಶೀಲತೆ, ಪುರಾಣ ಜ್ಞಾನ, ಪಾತ್ರಗಳ ನಡೆಗಳಲ್ಲಿ ನಿಖರತೆ. ಚೌಕಿ ಮತ್ತು ರಂಗಸ್ಥಳ ನಿಷ್ಠ. ಅಗ್ಗದ ಪ್ರಚಾರಕ್ಕಾಗಿ ಪಾತ್ರವನ್ನು ಹಿಗ್ಗಾಮುಗ್ಗಾ ಜಗ್ಗಿಸುವ ಮನಃಸ್ಥಿತಿ ಇವರದಲ್ಲ.
               ನಿಜ ಬದುಕಿನ ವಿನಯ ವ್ಯಕ್ತಿತ್ವದ ಶೋಭೆ. ಏರಿದ ಮೆಟ್ಟಿಲನ್ನು ಮರೆಯದ ಕೃತಜ್ಞ.  ಹಿರಿತನಕ್ಕೆ ತಲೆಬಾಗುವ, ಪಾಂಡಿತ್ಯವನ್ನು ಗೌರವಿಸುವ, ಕಿರಿಯರ ಪ್ರತಿಭೆಯನ್ನು ಮೆಚ್ಚಿಕೊಳ್ಳುವ ರೆಂಜಾಳರ ಗುಣಗಳು ನೂರಾರು ಸ್ನೇಹಿತರನ್ನು ಸಂಪಾದಿಸಿ ಕೊಟ್ಟಿದೆ. ಕಲೆಯು ಇವರನ್ನು ಮೆಚ್ಚಿದೆ.
                 'ಕಲಾವಿದ ಪರಿಪೂರ್ಣನಾಗಲು ಮೇಳದ ತಿರುಗಾಟದಿಂದ ಮಾತ್ರ ಸಾಧ್ಯ. ಈಗೀಗ ಯುವಕರು ಯಕ್ಷಗಾನತ್ತ ಒಲವು ತೋರಿಸುತ್ತಿರುವುದು ಉತ್ತಮ ಬೆಳವಣಿಗೆ. ಕೇವಲ ನಾಟ್ಯ ಕಲಿತರೆ ಕಲಾವಿದನಾಗಲಾರ. ರಂಗ ಮಾಹಿತಿ, ಪುರಾಣ ಜ್ಞಾನದ ಕಲಿಕೆಯೂ ಮುಖ್ಯ ಎನ್ನುತ್ತಾರೆ. ಹಲವು ಪ್ರಶಸ್ತಿ, ಸಂಮಾನಗಳು ರಾಯರನ್ನು ಅರಸಿ ಬಂದಿವೆ.
                 ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರವು ಕೀರ್ತಿಶೇಷ ವನಜಾಕ್ಷಿ ಜಯರಾಮ ಅವರ ನೆನಪಿನಲ್ಲಿ ನೀಡುವ 'ವನಜ ರಂಗಮನೆ ಪ್ರಶಸ್ತಿ'ಗೆ ರೆಂಜಾಳರು ಭಾಜನರಾಗಿದ್ದಾರೆ. ಆಗಸ್ಟ್ 16ರಂದು ಸಂಜೆ ರಂಗಮನೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ. ಈ ಪ್ರಶಸ್ತಿಯು ರಾಮಕೃಷ್ಣ ರಾಯರಿಗೆ ಎಪ್ಪತ್ತರ ಕಾಣ್ಕೆ.  (ಯಕ್ಷ ಚಿತ್ರಗಳು: ನಟೇಶ್ ವಿಟ್ಲ)


Saturday, August 15, 2015

”ಉದ್ದೇಶ ಶುದ್ಧಿಯಿದ್ದಲ್ಲಿ ಭಗವಂತನ ಅನುಗ್ರಹವಿದೆ’ - ಬ್ರಹ್ಮಶ್ರೀ ರವೀಶ ತಂತ್ರಿ

              "ಯಕ್ಷಗಾನಕ್ಕೀಗ ಕಲಾಭಿಮಾನಿಗಳ ಪ್ರೋತ್ಸಾಹ ಯಥೇಷ್ಟವಾಗಿದೆ. ಆರಾಧನಾ ಕಲೆಯಾದ ಯಕ್ಷಗಾನದಲ್ಲಿ ಉದ್ದೇಶ ಶುದ್ಧಿಯಿದ್ದಾಗ ಅಲ್ಲಿ ಭಗವಂತನ ಅನುಗ್ರಹ ಸದಾ ಪ್ರೇರಕಶಕ್ತಿಯಾಗಿ ಮುನ್ನಡೆಸುತ್ತದೆ. ಕಲಾ ವ್ಯವಸಾಯದೊಂದಿಗೆ ಕಲಾವಿದರಿಗೂ ಮನ್ನಣೆ ಕೊಡುವ ಸಂಸ್ಕಾರಗಳಿಂದ ಸ್ವ-ವರ್ಚಸ್ಸು ವೃದ್ಧಿಸುತ್ತದೆ. ಕಲಾ ಕ್ಷೇತ್ರಕ್ಕೂ ನ್ಯಾಯ ಸಲ್ಲಿಸಿದಂತಾಗುತ್ತದೆ," ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹೇಳಿದರು.
             ಕೀರ್ತಿಶೇಷ ಪುತ್ತೂರು ಶೀನಪ್ಪ ಭಂಡಾರಿ ಪ್ರತಿಷ್ಠಾನ ಹಮ್ಮಿಕೊಂಡ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಂತ್ರಿಗಳು, "ಹಿರಿಯರ ಹಾದಿಯಲ್ಲಿ ಕ್ರಮಿಸುವ ಒಂದು ಕಲಾ ಪರಂಪರೆಯನ್ನು ಗುರುತಿಸಿ, ಮಾನಿಸುವುದು ಸಾಮಾಜಿಕ ಹೋಣೆ. ಶೀನಪ್ಪ ಭಂಡಾರಿಯವರು ಬದುಕಿನಲ್ಲಿ ಹಾಕಿಕೊಟ್ಟ ಹಾದಿಯಲ್ಲಿ ಅವರ ಚಿರಂಜೀವಿಗಳು ಮುನ್ನಡೆಯುವುದು ಒಂದು ಮಾದರಿ," ಎಂದರು.
              ಡಾ.ಶ್ರೀಧರ ಭಂಡಾರಿ ನೇತೃತ್ವದ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಬೆಳ್ಳಿಹಬ್ಬ ಸರಣಿ ಕಾರ್ಯಕ್ರಮದ ಉದ್ಘಾಟನೆ ಮತ್ತು ನೂತನ ರಂಗಸ್ಥಳದ ಉದ್ಘಾಟನೆಯನ್ನು ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ದೀಪಜ್ವಲನದ ಮೂಲಕ ಉದ್ಘಾಟಿಸಿದರು. ಇವರು ಶೀನಪ್ಪ ಭಂಡಾರಿಯವರ ಸಂಸ್ಮರಣೆಯನ್ನು ಮಾಡುತ್ತಾ, "ಕಲೆಯನ್ನು ಎತ್ತರಕ್ಕೆ ಏರಿಸಿದ ಕೀರ್ತಿ  ಶೀನಪ್ಪ ಭಂಡಾರಿಗಳದು. ಭಾರತೀಯ ಸಂಸ್ಕೃತಿಗೆ ಇದೊಂದು ದೊಡ್ಡ ಕೊಡುಗೆ," ಎಂದರು.
               ಹಿರಿಯ ಕಲಾವಿದ ಶಿವರಾಮ ಜೋಗಿ, ಬಿ.ಸಿರೋಡು ಇವರಿಗೆ ಈ ಸಾಲಿನ ಪ್ರತಿಷ್ಠಾನದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪತ್ರವನ್ನು ಮಣಿಲ ಮಹಾದೇವ ಶಾಸ್ತ್ರಿ ವಾಚಿಸಿದರು. ವೇದಿಕೆಯಲ್ಲಿ ರಾಜೇಶ್ ಬನ್ನೂರು, ಕಜೆ ಈಶ್ವರ ಭಟ್, ಪೂವಪ್ಪ, ಕೆ.ಎಚ್.ದಾಸಪ್ಪ ರೈ, ಪೆರುವೋಡಿ ನಾರಾಯಣ ಭಟ್, ಕುರಿಯ ವೆಂಕಟ್ರಮಣ ಶಾಸ್ತ್ರಿ, ಶೇಖರ ಭಂಡಾರಿ ಉಪಸ್ಥಿತರಿದ್ದರು.
              ಚಕ್ರಕೋಡಿ ಮಹಾದೇವ ಶಾಸ್ತ್ರಿ ಮಣಿಲ ಸ್ವಾಗತಿಸಿದರು. ಡಾ. ಶ್ರೀಧರ ಭಂಡಾರಿ ಪುತ್ತೂರು ಪ್ರಸ್ತಾವನೆಗೈದರು. ಅಂಕಣಗಾರ ನಾ. ಕಾರಂತ ಪೆರಾಜೆ ನಿರ್ವಹಿಸಿ, ವಂದಿಸಿದರು. ಕೊನೆಯಲ್ಲಿ 'ಸತಿ ಸುಕನ್ಯಾ ಮತ್ತು ಕಂಸ ವಿವಾಹ' ಪ್ರಸಂಗಗಳ ಪ್ರದರ್ಶನ ಜರುಗಿತು.


Monday, August 10, 2015

ಕಲಾಬದುಕಿನ ಮರುಓದು - 'ತೊಳಲಾಟ'

 ವಿಭಿನ್ನ ಪಾತ್ರಗಳಲ್ಲಿ ಶೇಣಿ ವೇಣುಗೋಪಾಲ್ (ವೀಜಿ) ಮತ್ತು ಗೋವಿಂದ ಭಟ್ ಸೂರಿಕುಮೇರು

              ಹದಿಮೂರು ನಿಮಿಷದ ಕಿರು ಚಿತ್ರ-'ತೊಳಲಾಟ'. ಯಕ್ಷಗಾನ ಕಲಾವಿದನೊಬ್ಬನ ಕಲಾ ಬದುಕಿನ ಕುತೂಹಲದ ಸುತ್ತ ಸುತ್ತುವ ಝಲಕ್ ಕಥಾವಸ್ತು. ಇಲ್ಲಿ ಕಲಾವಿದ ನಾಯಕ. ಸೂಕ್ಷ್ಮತೆಯ ಬಲೆಯೊಳಗೆ ಚಿತ್ರ ಆತುಕೊಂಡಿದೆ. ಬದುಕನ್ನು ಅಕ್ಷರಕ್ಕಿಳಿಸುವ ಪಣತೊಟ್ಟ ಲೇಖಕ ಮುಖಾಮುಖಿಯಾಗುವ ಮೊದಲ, ನಂತರದ ಮುಜುಗರ ಸ್ಥಿತಿ. ಮನದ ಭಾವಗಳಿಗೆ ಭಾಷೆ ಕೊಡುವ ಮನಃಸ್ಥಿತಿ. ಮೌನದಲ್ಲಿ ಪ್ರತಿಫಲಿಸುವ ಸುಭಗತೆ. ಫಕ್ಕನೆ ಅರ್ಥವಾಗದ ಸೂಕ್ಷ್ಮ ಸಂವೇದನೆ. ಒಂದೆರಡು ಬಾರಿ ವೀಕ್ಷಿಸಿದರೂ ತಕ್ಷಣ ಗ್ರಹಿಕೆಗೆ ನಿಲುಕದ ಒಳನೋಟ. ವೀಕ್ಷಕನಿಗೂ ತೊಳಲಾಟ! ಕಿರುಚಿತ್ರಗಳ ಹಂದರವೇ ಹೀಗೆ. 
            ಮೇರು ಕಲಾವಿದ ಸೂರಿಕುಮೇರು ಗೋವಿಂದ ಭಟ್ಟರು ಚಿತ್ರದ ಮುಖ್ಯ ಕಲಾವಿದ. ಸುಬ್ರಾಯ ಭಟ್ಟರ ಪಾತ್ರದ ಮೂಲಕ ತನ್ನ ಕಲಾ ಜೀವನಕ್ಕೆ ಕನ್ನಡಿ ಹಿಡಿದಿದ್ದಾರೆ. ಶೇಣಿ ವೇಣುಗೋಪಾಲ್ ಕಾಸರಗೋಡು (ವೀಜಿ) ಇವರಿಗೆ ಅಧ್ಯಾಪಕನ ಪಾತ್ರ. ಸುಬ್ರಾಯ ಭಟ್ಟರ ಅನುಭವಕ್ಕೆ ಅಕ್ಷರ ರೂಪ ಕೊಡುವ ಲೇಖಕ. ಇಬ್ಬರದೂ ಉತ್ತಮ ಅವಕಾಶ.
             ವೀಜಿ ಹಲವು ವರುಷಗಳಿಂದ ಕಿರುಚಿತ್ರಗಳ ಅಧ್ಯಯನದ ಕುತೂಹಲಿ. 'ಕಬ್ಬಿನ ಹಾಲು, ಕಾವಳ' ಕಿರುಚಿತ್ರಗಳಲ್ಲಿ ಅಭಿನಯಿಸಿದ ಅನುಭವ. ಕಬ್ಬಿನ ಹಾಲು ಚಿತ್ರಕ್ಕೆ 'ವಿಭಾ ಪ್ರಶಸ್ತಿ'ಯೂ ಬಂದಿತ್ತು. ಕಿರು ಚಿತ್ರಗಳ ಅನ್ವೇಷಕ ವೀಜಿ ಮತ್ತು ಸಹೋದರ ಶೇಣಿ ಮುರಳಿ 'ತೊಳಲಾಟ'ವನ್ನು ಸಿದ್ಧಪಡಿಸಿದ್ದಾರೆ. ಕೀರ್ತಿಶೇಷ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರ ಮೊಮ್ಮಕ್ಕಳಿವರು.
               ಯಕ್ಷಗಾನ ರಂಗದಲ್ಲಿ ಬಣ್ಣ ಹಚ್ಚಿದ ಎಪ್ಪತ್ತು ದಾಟಿದ ಗೋವಿಂದ ಭಟ್ಟರಿಗೆ ಕ್ಯಾಮೆರಾ ಎದುರಿಸುವುದು ಹೊಸತು. ಪಂಥಾಹ್ವಾನವೂ ಕೂಡಾ. "ಅಭಿನಯಿಸಬೇಕೆಂದು ಮನವಿ ಮಾಡಿದಾಗ ಮುಜುಗರದಿಂದ ಅಸಾಧ್ಯವೆಂದು ಹಿಂದೆ ಸರಿದಿದ್ದರು. ಒತ್ತಾಯದಿಂದ ಮನವೊಲಿಸಿದೆವು. ನೋಡೋಣ, ರಿಹರ್ಸಲ್ ಬೇಕೆಂದರು. ಕೊನೆಗೆ ಯಾವುದೇ ರಿಹರ್ಸಲ್ ಇಲ್ಲದೆ ಸಿಂಗಲ್ ಟೇಕ್ನಲ್ಲಿ ಗೋವಿಂದ ಭಟ್ಟರು ಉತ್ತಮವಾಗಿ ಅಭಿನಯಿಸಿದರು," ಎಂಬ ಅನುಭವ ಹಂಚಿಕೊಳ್ಳುತ್ತಾರೆ ಚಿತ್ರದ ನಿರ್ದೇಶಕ ಶೇಣಿ ಮುರಳಿ.
              ಕಾಸರಗೋಡು ಮಧೂರಿನ ಉಳಿಯ ಮನೆ, ಕಡಲ ಕಿನಾರೆ, ನೀರ್ಚಾಲು ಶಾಲೆ..ಗಳಲ್ಲಿ ಹತ್ತು ದಿವಸಗಳ ಚಿತ್ರೀಕರಣ. ಗೋವಿಂದ ಭಟ್ಟರು ರಚಿಸಿದ ಸಾಹಿತ್ಯಕ್ಕೆ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಸಂಗೀತ ಸಂಯೋಜಿಸಿದ್ದಾರೆ, ಹಾಡಿದ್ದಾರೆ. ಬದುಕಿನ ಎಷ್ಟೋ ಸಂಗತಿಗಳು ಹಾಡು ಮತ್ತು ಅಭಿನಯದೊಂದಿಗೆ ಮಿಳಿತವಾಗಿವೆ. ಹತ್ತಾರು ಬಾರಿ ಪ್ರಾಕ್ಟೀಸ್ ಮಾಡಿದಂತೆ ಭಾಸವಾಗುತ್ತದೆ.
             ತಾನು ಸಾಗಿ ಬಂದ ಹಾದಿಯನ್ನು ಗೊವಿಂದ ಭಟ್ಟರು ಪರಿಣಾಮಕಾರಿಯಾಗಿ ಸುಬ್ರಾಯ ಭಟ್ಟರ ಮೂಲಕ ಬಿಂಬಿಸಿದ್ದಾರೆ. ತನಗೆ ತಾರಾಮೌಲ್ಯ ತಂದುಕೊಟ್ಟ ಯಕ್ಷಗಾನದ 'ಕೌರವ'ವನನ್ನು ಎಣಿಸುವಾಗ ಉಂಟಾಗುವ ಭಾವತೀವ್ರತೆಯ ಅಭಿವ್ಯಕ್ತಿ ಅನನ್ಯ. ಉದಾ: ಕಿರೀಟವನ್ನು ನೋಡುತ್ತಿದ್ದಂತೆ ಉಂಟಾಗುವ ಗತ ವೈಭವದ ಮೆಲುಕು, ಬೀರುವ ನೋಟ ಮತ್ತು ಆ ಪಾತ್ರವು ತನ್ನೊಳಗೇ ಪಾತ್ರವಾಗುವ ಪರಾಕಾಯ ಸ್ಥಿತಿ.
             'ಶೇಣಿ ರಂಗ ಜಂಗಮ ಟ್ರಸ್ಟ್' ತೊಳಲಾಟವನ್ನು ನಿರ್ಮಿಸಿದೆ. ಸನ್ ಟಿವಿ ವಾಹಿನಿಯಲ್ಲಿ ಪಳಗಿದ ಮಹೇಶಕೃಷ್ಣ ತೇಜಸ್ವಿಯವರ ಕ್ಯಾಮರಾ ತಂತ್ರವು ಚಿತ್ರವನ್ನು ಗೆಲ್ಲಿಸಿದೆ. "ಇದಕ್ಕಿಂತ ಉತ್ತಮ ಚಿತ್ರಗಳು ಬಂದಿರಬಹುದು. ನಮ್ಮ ಆರ್ಥಿಕ ಮಿತಿ ಮತ್ತು ಅನುಭವದಲ್ಲಿದು ಚಿಕ್ಕ ಹೆಜ್ಜೆ. ಯಲ್ಲಿ ಸಿದ್ಧಪಡಿಸಿದ್ದೇವೆ. ಇದೊಂದು ಚಿಕ್ಕ ಹೆಜ್ಜೆ. ಸುಧಾರಣೆಗಳು ಸಾಕಷ್ಟು ಅಗಬೇಕಾಗಿದೆ," ಎನ್ನುತ್ತಾರೆ ಮುರಳಿ. ಚಿತ್ರ ವೀಕ್ಷಿಸಿದ ಅನೇಕರು ಮೆಚ್ಚಿದ್ದಾರೆ, ಹಿಮ್ಮಾಹಿತಿ ನೀಡಿದ್ದಾರೆ.
                ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಆರ್ಥಿಕ ಹೊರೆಯನ್ನು ತುಂಬಾ ಹಗುರ ಮಾಡಿದ್ದಾರೆ. ಹಾಗಾಗಿ ಚಿತ್ರದ ಸಿಡಿಯನ್ನು ತೀರಾ ಕಡಿಮೆ ಬೆಲೆಗೆ ನೀಡಲು ಟ್ರಸ್ಟಿಗೆ ಸಾಧ್ಯವಾಯಿತು. ಬೆಲೆ ನಿಗದಿ ಮಾಡಿದರೂ ಸಿಂಹಪಾಲು ಉಚಿತವಾಗಿಯೇ ನೀಡಿದ್ದಾರೆ. ಮಾರುಕಟ್ಟೆಯಲ್ಲಿ ಮಾರಾಟಕ್ಕಿಲ್ಲ. ಯೂಟ್ಯೂಬ್ ಜಾಲತಾಣದಲ್ಲಿ ಲಭ್ಯ.
              "ಕಲಾವಿದ ಕುಟುಂಬವೊಂದು ಚಿತ್ರ ನಿರ್ಮಾಣದ ದಾಖಲೀಕರಣ ಮಾಡಿದುದು ಶ್ಲಾಘ್ಯ. ಬಾಹುಬಲಿಯಂತಹ ಕೋಟಿ ಲೆಕ್ಕದ ಚಿತ್ರಗಳ ಅಬ್ಬರದ ಮಧ್ಯೆ ಇಂತಹ ಸಣ್ಣ ಧ್ವನಿಗಳು ಹಬ್ಬಬೇಕು. ಚಿತ್ರ ಹದಿಮೂರು ನಿಮಿಷಗಳ ಬದಲು ಇಪ್ಪತ್ತೋ ಮೂವತ್ತು ನಿಮಿಷ ಇರಬೇಕಿತ್ತು," ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ - ಹಿರಿಯ ವಿದ್ವಾಂಸ, ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ. ಯಕ್ಷಗಾನ ಹಿನ್ನೆಲೆಯ ಸಿನೆಮಾಗಳು ಬಂದಿದೆ. ಕಿರುಚಿತ್ರ ಬಹುಶಃ ಇದು ಮೊದಲು. 'ತೊಳಲಾಟ' - ಗೋವಿಂದ ಭಟ್ಟರ ಕಲಾ ಸಾಧನೆಗೊಂದು ಕಿರೀಟ.
                       ಇನ್ನಷ್ಟು ವೃತ್ತಿಪರವಾಗಿ ಮಾಡಬಹುದೆಂಬ ಕಾಳಜಿ ತಂಡಕ್ಕಿದೆ. ಹೆಚ್ಚು ಶ್ರಮ ಮತ್ತು ಆರ್ಥಿಕ ವ್ಯವಸ್ಥೆ ಬೇಡುವ ಚಿತ್ರದ ತಯಾರಿ ದುಬಾರಿ. ಆಧುನಿಕ ತಂತ್ರಜ್ಞಾನಗಳ ಬೀಸುಹೆಜ್ಜೆಯ ಕಾಲಘಟ್ಟದಲ್ಲಿ ಇಂತಹ ಚಿತ್ರಗಳು, ದಾಖಲೀಕರಣಗಳು ಅಗತ್ಯ. ಭವಿಷ್ಯಕ್ಕೊಂದು ಆಕರ. ಅನ್ವೇಷಕ ಪ್ರವೃತ್ತಿಯ ಡಾ.ಶೇಣಿಯವರು ಬದುಕಿರುತ್ತಿದ್ದರೆ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದರು! ಚಿತ್ರದ ನಿರ್ದೇಶಕರಿಗೆ ಒಂದು ಒಳ್ಳೆಯ ಮಾತು ಹೇಳೋಣ. ಆಗದೇ? (8762709251)
 

Wednesday, August 5, 2015

ಕೂಟ ಸೌಂದರ್ಯಕ್ಕೆ ಬದ್ಧತೆಯ ಬೇಲಿ ಹಾಕಿದ - 'ಯಕ್ಷಲಹರಿ'

ದಶಮಾನೋತ್ಸವದ ತಾಳಮದ್ದಳೆ - ಅರ್ಥಧಾರಿಯಾಗಿ ಡಾ.ಶೇಣಿ ಗೋಪಾಲಕೃಷ್ಣ ಭಟ್, ಮದ್ದಳೆವಾದಕರಾಗಿ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ (ಇಬ್ಬರೂ ದಿವಂಗತ)
     ತಾಳಮದ್ದಳೆ ಸಪ್ತಾಹ - ಬಲತುದಿಯಲ್ಲಿ ಸತ್ಯಮೂರ್ತಿ ದೇರಾಜೆ (ಈಗ ದಿವಂಗತ)  

             ಕಿನ್ನಿಗೋಳಿಯ ಯಕ್ಷಲಹರಿ ಆಯೋಜಿಸಿದ ತಾಳಮದ್ದಳೆ ಸ್ಪರ್ಧೆ. ಯಕ್ಷಕೂಟ ಪುತ್ತೂರು ತಂಡದಿಂದ ಭಾಗವಹಿಸಿದ್ದೆ. ಸ್ಪರ್ಧಾ ಪೂರ್ವದ ಸಿದ್ಧತೆಗಳು, ನಿಯಮಗಳಿಗೆ ದಂಗಾಗಿದ್ದೆ. ’ತಾಳಮದ್ದಳೆಗೆ ಇಷ್ಟೆಲ್ಲಾ ನಿಯಮಗಳು ಬೇಕಿತ್ತ” ಎನ್ನುವ ಪ್ರಶ್ನೆ ಆಗ ಮೂಡಿಸಿತ್ತು. ಸ್ಪರ್ಧೆಯ ದಿವಸ ಏನೋ ಬಿಗುವಿನ ವಾತಾವರಣ. ತೀರ್ಪುುಗಾರರು ಮತ್ತು ಕಲಾವಿದರು ಜತೆಯಲ್ಲಿ ಉಪಾಹಾರ ಸೇವಿಸುತ್ತಿದ್ದರೂ ಕಣ್ಣಿಗೆ ಕಾಣದ ಅಂತರ. ಎಷ್ಟು ಬೇಕು ಅಷ್ಟೇ ನಗು-ವ್ಯವಹಾರ. ಅವ್ಯಕ್ತವಾದ ಶಿಸ್ತು, ದುಗುಡ. ಸಮಯಕ್ಕೆ ಹೆಚ್ಚು ಮಹತ್ವ. ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಪಡೆದಾಗ ಅವರ್ಣನೀಯ ಖುಷಿ. ಆಗ ನಿಯಮಗಳೊಳಗೆ ಅವಿತ ಪಾತ್ರ ಸೌಂದರ್ಯಗಳು ಕಣ್ಣು ಮಿಟುಕಿಸಿದುವು.
             "ಅರ್ಥಧಾರಿಗೆ ಪ್ರಸಂಗದ ಚೌಕಟ್ಟಿದೆ. ಸಂಘಟಕರಿಗೂ ಚೌಕಟ್ಟು ಬೇಕಲ್ವಾ. ಗುಣಮಟ್ಟದ ಕೂಟ  ಪ್ರಸ್ತುತಿಯಾಗಲು ಶಿಸ್ತು, ನಿಯಮಗಳನ್ನು ತರಬೇಕಾಯಿತು. ಯಾವುದೇ ರಾಜಿ, ವಶೀಲಿಗೆ ಆಸ್ಪದವಿಲ್ಲದ  ಮೌಲ್ಯಮಾಪನ. ಪಾರದರ್ಶಕ ನಡವಳಿಕೆ. ಹಾಗಾಗಿ ನೋಡಿ, ನಮ್ಮೆಲ್ಲಾ ಕಾರ್ಯಕ್ರಮಗಳಲ್ಲಿ ಅವ್ಯಕ್ತವಾದ ಶಿಸ್ತೊಂದು ಅನಾವರಣಗೊಳ್ಳುತ್ತದೆ," ಎನ್ನುತ್ತಾರೆ ಕಿನ್ನಿಗೋಳಿ ಯಕ್ಷಲಹರಿಯ ಅಧ್ಯಕ್ಷ ಲ|ಇ.ಶ್ರೀನಿವಾಸ ಭಟ್. ಯಕ್ಷಲಹರಿಗೆ ಈಗ ರಜತದ ಖುಷಿ. ಜುಲೈ 30ರಿಂದ ಆಗಸ್ಟ್ 8ರ ವಿವಿಧ ತಾಳಮದ್ದಳೆಗಳ ಸಂಪನ್ನತೆ.
               1990, ಆಗಸ್ಟ್ 12ರಂದು ಯಕ್ಷಲಹರಿಯ ಹುಟ್ಟು. ವಿವಿಧ ಪ್ರದೇಶಗಳಿಂದ ಉದ್ಯೋಗ ನಿಮಿತ್ತ ಕಿನ್ನಿಗೋಳಿಯ ಪರಿಸರದಲ್ಲಿ ತಾಳಮದ್ದಳೆಯ ನಂಟಿದ್ದವರು ಒಟ್ಟಾಗಿ ರೂಪಿಸಿದ ಸಂಸ್ಥೆಯಿದು. ತೊಂಭತ್ತರ ಕಾಲಘಟ್ಟದಲ್ಲಿ ತಾಳಮದ್ದಳೆಗಳ ಬೀಸು ದಿವಸಗಳೇನೂ ಆಗಿರಲಿಲ್ಲ. ವಿಶೇಷ ಸಂದರ್ಭಗಳಲ್ಲಿ ಮತ್ತು ಖ್ಯಾತರ ಕೂಟಗಳು ನಡೆಯುತ್ತಿದ್ದುವು. ಹವ್ಯಾಸಿ ಕಲಾವಿದರಿಗೆ ಪ್ರತ್ಯೇಕವಾದ ವೇದಿಕೆಯಿರಲಿಲ್ಲ. ಹೀಗಾಗಿ ಸಂಸ್ಥೆಯು ತಾಳಮದ್ದಳೆಗೆ ಆದ್ಯತೆ ನೀಡಿತು. ವಿಶೇಷ ಕೂಟಗಳನ್ನು ಏರ್ಪಡಿಸಿತು. ಬೆಳಕಿಗೆ ಬಾರದ ಕಲಾವಿದರನ್ನು ಆಹ್ವಾನಿಸಿತು. ಪ್ರಸಿದ್ಧರೊಂದಿಗೆ ಕಲೆಯದ, ಕಲೆಯಲಾಗದ ಹವ್ಯಾಸಿಗಳಿಗೆ ವೇದಿಕೆ ನೀಡಿತು.
              ಕೂಟಗಳಿಂದ ಬೌದ್ಧಿಕ ಅನುಭವ ಗಟ್ಟಿಯಾಗುತ್ತಿದ್ದಂತೆ ತಂಡದೊಳಗೆ ಜಿಜ್ಞಾಸೆ. ಪ್ರಸಂಗಕ್ಕೆ ಸರಿಯಾಗಿ ಕಲಾವಿದರನ್ನು ಆಯ್ಕೆ ಮಾಡಬೇಕೋ ಅಥವಾ ಕಲಾವಿದರಿಗೆ ತಕ್ಕಂತೆ ಪ್ರಸಂಗವನ್ನು ಹೊಂದಾಣಿಸಬೇಕೋ? ಕಲಾವಿದರಿಗೆ ತಕ್ಕಂತೆ ಪ್ರಸಂಗ ನಿಶ್ಚಯ ಮಾಡಿದರೆ ಪಾತ್ರ ಹಂಚುವಿಕೆಯಲ್ಲಿ ಗೊಣಗಾಟ. ಬದಲಿಗೆ, ನಿಶ್ಚಯಿತ ಪ್ರಸಂಗಕ್ಕೆ ಹೊಂದುವ ಕಲಾವಿದರನ್ನು ಆಯ್ಕೆ ಮಾಡುವ ಪರಿಪಾಠವನ್ನು ಆರಂಭಿಸಿತು. ಅದಕ್ಕೆ ಸಮಯದ ಚೌಕಟ್ಟು ಹಾಕಿತು. ಸಪ್ತಾಹಗಳ ಮೂಲಕ ಪ್ರಯೋಗವೂ ನಡೆಯಿತು. ಮೊದಮೊದಲು ಕಲಾವಿದರಿಂದ ಧನಾತ್ಮಕ ಅಭಿಪ್ರಾಯಗಳು ಬಾರದಿದ್ದರೂ ನಂತರದ ದಿವಸಗಳಲ್ಲಿ ಕಲಾವಿದರೇ ಸಮರ್ಥಸಿಕೊಂಡಿದ್ದರು.
               ಈಗ ’ಕಿನ್ನಿಗೋಳಿ ತಾಳಮದ್ದಳೆ ಸಪ್ತಾಹ ’ಎಂದಾಗಲೇ ಅದರ ಲಿಖಿತ, ಅಲಿಖಿತ ಶಾಸನಗಳು ಕಣ್ಣ ಮುಂದೆ ಹಾಯುತ್ತದೆ. ಕಲಾವಿದರಿಂದ ಸ್ವೀಕೃತಿ ಪಡೆದಿದೆ. ಕೂಟಕ್ಕೆ ಮೂರು ಗಂಟೆಯ ಅವಧಿ.  ಸಂಸ್ಥೆಯ ಸದಸ್ಯರು ಪ್ರಸಂಗವನ್ನು ಗೊತ್ತು ಮಾಡುತ್ತಾರೆ. ಯಾವ್ಯಾವ ಪಾತ್ರಗಳಿಗೆ ಎಷ್ಟೆಷ್ಟು ಪದ್ಯಗಳು ಬೇಕೆಂಬುದನ್ನು ನಿಶ್ಚಯ ಮಾಡಿ ಎಲ್ಲಾ ಕಲಾವಿದರಿಗೂ ಲಿಖಿತವಾಗಿ ತಿಳಿಸುತ್ತಾರೆ. ಸೆಕೆಂಡ್ ಸಮಯವೂ ವ್ಯರ್ಥವಾಗದ ಕಾಳಜಿ. ಮುಗಿಯುವಾಗಲೂ ಅಷ್ಟೇ - ನಿಗದಿತ ಸಮಯಕ್ಕೆ ಮಂಗಲವೂ ಆಗಿಬಿಡಬೇಕು. ಇಷ್ಟೆಲ್ಲಾ ಲಿಖಿತವಾಗಿ ಸ್ಪಷ್ಟ ಸೂಚನೆ ನೀಡಿದ್ದರೂ, ಸಮಯದ ಮಿತಿಯೊಳಗೆ ಪದ್ಯಗಳನ್ನು ಬದಲಾಯಿಸುವ ಸ್ವಾತಂತ್ರ್ಯ ಭಾಗವತರಿಗಿದೆ. ಕಲಾವಿದರು ತಂತಮ್ಮೊಳಗೆ ಮಾತನಾಡಿಕೊಂಡು ಒಟ್ಟೂ ಕೂಟವನ್ನು ಯಶಸ್ವಿಗೊಳಿಸುತ್ತಿರುವುದು ಯಕ್ಷಲಹರಿಯ ಮೇಲಿಟ್ಟಿರುವ ವಿಶ್ವಾಸ, ಎನ್ನುತ್ತಾರೆ ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ. ಆರಂಭದ ದಿವಸಗಳಲ್ಲಿ ಯಕ್ಷಲಹರಿಯು ಸಪ್ತಾಹ, ಸ್ಪರ್ಧೆಗಳಿಗೆ ಕಟ್ಟುನಿಟ್ಟಿನ ಬೇಲಿ ಹಾಕದಿರುತ್ತಿದ್ದರೆ 'ಹತ್ತರೊಟ್ಟಿಗೆ ಹನ್ನೊಂದು' ಆಗುತ್ತಿತ್ತಷ್ಟೇ.
                ಪ್ರಸಂಗ ಕೇಂದ್ರಿತ ತಾಳಮದ್ದಳೆಯನ್ನು ಪ್ರೇಕ್ಷಕರು ಸ್ವೀಕರಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಆಗಮಿಸುವ ಪ್ರೇಕ್ಷಕರ ಬದ್ಧತೆಯು ಯಕ್ಷಲಹರಿಗೆ ಬೆನ್ನೆಲುಬು. ಇಲ್ಲಿ ವೃತ್ತಿ ಮತ್ತು ಹವ್ಯಾಸಿ ಕಲಾವಿದರಿಗೆ ಸಮಾನ ಮಣೆ. ವ್ಯಕ್ತಿ ಆರಾಧನೆಯಿಂದ ದೂರ. ಪ್ರಸಂಗಕ್ಕೆ ಆದ್ಯತೆ. ರಂಗದಲ್ಲಿ ಸನ್ನಿವೇಶವು ತೀರಾ ಲಂಬಿಸಿ, ಪ್ರೇಕ್ಷಕರು ಆಕಳಿಸುವ ಮೊದಲೇ ಸಂಬಂಧಪಟ್ಟ ಕಲಾವಿದರಿಗೆ ಸಾತ್ವಿಕ ಸೂಚನೆ ತಲುಪಿಸಲು ಅಧ್ಯಕ್ಷರು ಮುಜುಗರ ಪಡುವುದಿಲ್ಲ! ಕಾರ್ಯಕ್ರಮದ ಒಟ್ಟಂದದ ದೃಷ್ಟಿ. ಸಂಘಟನೆಯ ಬಲವರ್ಧನೆ ಮತ್ತು ವಿಶ್ವಾಸವರ್ಧನೆಗೆ ಇಂತಹ ಅಲಿಖಿತ ನಿಯಮಗಳು ಪೂರಕ. ಪ್ರೇಕ್ಷಕರ ಸೃಷ್ಟಿಗೂ ಸಹಾಯಕ. ಕೆಲವು ವರುಷಗಳಿಂದ ಸಪ್ತಾಹ ತಾಳಮದ್ದಳೆಯನ್ನು 'ನಮ್ಮ ಕುಡ್ಲ' ವಾಹಿನಿಯು ನೇರ ಪ್ರಸಾರವನ್ನು ಮಾಡುತ್ತಿದೆ.
              ಇಪ್ಪತ್ತೈದು ವರುಷಗಳ ಕಾಲ ಕಲೆಯೊಂದರ ಸರ್ವಾಂಗ ಸುಂದರ ಬೆಳವಣಿಗೆಯಲ್ಲಿ ಯಕ್ಷಲಹರಿಯ ಹೆಜ್ಜೆ ದೊಡ್ಡದು. ಬದಲಾದ ಕಾಲಘಟ್ಟದಲ್ಲಿ ಸಮಯ ಕೇಂದ್ರಿತ ತಾಳಮದ್ದಳೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಪೂರಕ. ಸಮಯದೊಳಗೆ ಕಥಾನಕವನ್ನು ಚಂದಗೊಳಿಸುವ ಜಾಣ್ಮೆ ಕಲಾವಿದರಲ್ಲಿ ರೂಪುಗೊಳ್ಳುತ್ತದೆ. ಅದಕ್ಕಾಗಿ ಯತ್ನವನ್ನೂ ಮಾಡುತ್ತಾರೆ. ಸಪ್ತಾಹದಲ್ಲಿ ಹೊಸ ಪ್ರಸಂಗಗಳ ಪ್ರಯೋಗ ನಡೆದಿದೆ. ಯಕ್ಷ ಕವಿಗೆ ಮನ್ನಣೆಯ ಗೌರವ ನೀಡುತ್ತಿದೆ. ಆಟ, ಯಕ್ಷಗಾನ ತರಬೇತಿ, ಹಿರಿಯ ಕಲಾವಿದರಿಗೆ ಸಂಮಾನ, ಯಕ್ಷ-ಗಾನ ವೈಭವ... ಮೊದಲಾದುಗಳನ್ನು ಯಕ್ಷಲಹರಿಯು ತನ್ನ ಕಾರ್ಯಹೂರಣದಲ್ಲಿ ಸೇರಿಸಿಕೊಳ್ಳುತ್ತಾ ಇಪ್ಪತ್ತೈದರ ತರುಣನಾಗಿ ಎದ್ದು ನಿಂತಿದೆ. ಕಿನ್ನಿಗೋಳಿಯ 'ಯುಗಪುರುಷ'ದ ಸಭಾಂಗಣದಲ್ಲೀಗ ದಿನಕ್ಕೆರಡು ತಾಳಮದ್ದಳೆಗಳ ಸಂಪನ್ನವಾಗುತ್ತಿವೆ. ಆಗಸ್ಟ್ ಎಂಟರಂದು ಬೆಳ್ಳಿಹಬ್ಬದ ಸಂಭ್ರಮ.