Thursday, December 19, 2019

ಮಾಂಬಾಡಿ ಮನೆತನದಲ್ಲಿ ಯಕ್ಷಗಾನದ ಶೈಕ್ಷಣಿಕ ಶಿಸ್ತಿನ ಬದ್ಧತೆಯಿದೆ.

"ಕಲಾ ಬದುಕಿನ ಒಂದು ಕಾಲಘಟ್ಟದ ಬಳಿಕ ಪ್ರಾಪ್ತವಾಗುವ ಪ್ರಶಸ್ತಿಗಳು, ಸಂಮಾನಗಳು, ಗೌರವಗಳು ಕಲಾವಿದನಿಗೆ ಸಂತೃಪ್ತ ಭಾವ ತರಲು ಸಹಕಾರಿ. ತನ್ನ ನಡುವೆ ಇರುವ ಸಾಧಕ ಕಲಾವಿದರನ್ನು ಹುಡುಕಿ ಗೌರವಿಸುವುದು ಕೂಡಾ ಸುಸಂಸ್ಕೃತ ಸಮಾಜದ ಜವಾಬ್ದಾರಿಯಾಗಿರುತ್ತದೆ. ಅದು ಕಲೆಗೆ ನೀಡುವ ಗೌರವ ಕೂಡಾ ಹೌದು. ಯಕ್ಷಗಾನದ ಶೈಕ್ಷಣಿಕ ಶಿಸ್ತನ್ನು ಹಾಗೂ ಬದ್ಧತೆಯನ್ನು ಮಾಂಬಾಡಿ ಮನೆತನದಲ್ಲಿ ಕಾಣಬಹುದು" " ಎಂದು ಕರ್ನಾಟಕ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ, ವಿಶ್ರಾಂತ ಪ್ರಾಚಾರ್ಯ ಪ್ರೊ.ಎಂ.ಎಲ್.ಸಾಮಗ ಹೇಳಿದರು. ಅವರು ಬಂಟ್ವಾಳ ತಾಲೂಕಿನ ಮಿತ್ತನಡ್ಕ ಸನಿಹದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ಜರುಗಿದ 'ಪದ್ಯಾಣ ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ (15-12-2019) ಮಾತನಾಡಿದರು.

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಸಭಾಧ್ಯಕತೆಯನ್ನು ವಹಿಸಿದ್ದರು. ಯಕ್ಷಶಿಕ್ಷಣ ಗುರು ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಹಾರ, ಶಾಲು, ಹಣ್ಣುಹಂಪಲು, ಸಂಮಾನ ಪತ್ರ, ಸ್ಮರಣಿಕೆ ಮತ್ತು ನಿಧಿಯೊಂದಿಗೆ 'ಪದ್ಯಾಣ ಪ್ರಶಸ್ತಿ'ಯನ್ನು ಪ್ರದಾನಿಸಲಾಯಿತು. ವೇದಿಕೆಯಲ್ಲಿ ಮಾಂಬಾಡಿಯರ ಧರ್ಮಪತ್ನಿ ಲಕ್ಷ್ಮೀ ಅಮ್ಮ ಉಪಸ್ಥಿತರಿದ್ದರು. ಸಂಮಾನಿತರನ್ನು ಅರ್ಥದಾರಿ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟರು ನುಡಿಹಾರಗಳೊಂದಿಗೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಮಾಂಬಾಡಿಯವರ ಕುರಿತು ಪತ್ರಕರ್ತ, ಅಂಕಣಗಾರ ನಾ. ಕಾರಂತ ಪೆರಾಜೆ ಸಂಪಾದಕತ್ವದ ಕಿರು ಪುಸ್ತಿಕೆಯನ್ನು ಟಿ.ಶ್ಯಾಮ ಭಟ್ಟರು ಬಿಡುಗಡೆಗೊಳಿಸಿದರು. ಪದ್ಯಾಣ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀ ಸೇರಾಜೆ ಸತ್ಯನಾರಾಯಣ ಭಟ್ಟರು ಶುಭಾಶಂಸನೆ ಮಾಡಿದರು. ಪದ್ಯಾಣ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಸ್ವಸ್ತಿಕ್ ಪದ್ಯಾಣ ಸ್ವಾಗತಿಸಿದರು. ಡಾ.ಸುಬ್ರಹ್ಮಣ್ಯ ಭಟ್ ಪದ್ಯಾಣ ವಂದಿಸಿದರು. ನಾ. ಕಾರಂತ ಪೆರಾಜೆ ನಿರ್ವಹಿಸಿದರು.

 ಸಮಿತಿಯ ಅಧ್ಯಕ್ಷರಾದ ಪದ್ಯಾಣ ಗೋಪಾಲಕೃಷ್ಣ ಭಟ್ಟರು ಅತಿಥಿಗಳಿಗೆ ಸ್ಮರಣಿಕೆ ನೀಡಿದರು.  ಪದ್ಯಾಣ ಗಣಪತಿ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಶಿವರಾಮ ಭಟ್.. ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಹನುಮಗಿರಿ ಮೇಳದವರಿಂದ 'ಸತ್ಯಾಂತರಂಗ' ಪ್ರದರ್ಶನ ಜರುಗಿತು.
(ಚಿತ್ರ : ಉದಯ ಕಂಬಾರ್)

Friday, December 6, 2019

'ಪದ್ಯಾಣ ಪ್ರಶಸ್ತಿ'ಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ


            ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಹಾಗೂ ಯಕ್ಷಶಿಕ್ಷಣ ಶಿಕ್ಷಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಈ ಸಾಲಿನ 'ಪದ್ಯಾಣ ಪ್ರಶಸ್ತಿ' ಘೋಷಣೆಯಾಗಿದೆ. ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ 2019 ದಶಂಬರ 15ರಂದು ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
           ಪದ್ಯಾಣ ಕುಟುಂಬದ ಹಿರಿಯರಾದ ಕೀರ್ತಿಶೇಷ ಪದ್ಯಾಣ ಪುಟ್ಟು ಭಾಗವತರ ನೆನಪಿನಲ್ಲಿ ಪದ್ಯಾಣ ಪ್ರಶಸ್ತಿ ರೂಪುಗೊಂಡಿದೆ. ಮೂರು ವರುಷಗಳ ಹಿಂದೆ ಸ್ಥಾಪಿಸಿದ ಪ್ರಶಸ್ತಿಯನ್ನು ಹಿರಿಯ ಭಾಗವತರಾದ ಅಗರಿ ರಘುರಾಮ ಭಾಗವತರು, ಬಲಿಪ ನಾರಾಯಣ ಭಾಗವತರು, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಇವರಿಗೆ ಪ್ರದಾನಿಸಲಾಗಿತ್ತು.
            ಪದ್ಯಾಣ ಮನೆತನಕ್ಕೆ ಯಕ್ಷ ಕಲೆಯು ನೀಡಿದ ಗೌರವಕ್ಕೆ ಪ್ರತಿಯಾಗಿ 'ಕಲಾಕೃತಜ್ಞತೆ'ಯ ದ್ಯೋತಕವಾಗಿ ಪದ್ಯಾಣ ಪ್ರಶಸ್ತಿ ಸ್ಥಾಪಿತವಾಗಿದೆ. ಈ ವರುಷ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಪ್ರಶಸ್ತಿ. ತೆಂಕುತಿಟ್ಟಿನ ಹಳೆಯ ಪಾರಂಪರಿಕ ಶೈಲಿಯೊಂದಕ್ಕೆ ಸಲ್ಲುವ ಗೌರವವಿದು.
             ಸುಬ್ರಹ್ಮಣ್ಯ ಭಟ್ಟರು ತೆಂಕುತಿಟ್ಟು ಯಕ್ಷಗಾನದ ಪರಂಪರೆಯ ಪ್ರಾತಿನಿಧಿಕ ಕಲಾವಿದ. ಪ್ರಸಿದ್ಧ ಮಾಂಬಾಡಿ ಮನೆತನ. ಇವರ ತಂದೆ ಮಹಾನ್ ಗುರು ಮಾಂಬಾಡಿ ನಾರಾಯಣ ಭಾಗವತರು. ಸುಬ್ರಹ್ಮಣ್ಯ ಭಟ್ಟರು ಸಾವಿರಾರು ಹಿಮ್ಮೇಳ ಕಲಾವಿದರನ್ನು ರೂಪಿಸಿದವರು. ಕಳೆದ ಐದು ದಶಕಗಳಿಂದ ಯಕ್ಷ ಶಿಕ್ಷಣಕ್ಕೆ ಮಾನ ನೀಡಿದವರು. ವಿವಿಧ ಮೇಳಗಳಲ್ಲಿ ವ್ಯವಸಾಯ ಮಾಡಿದ ಅನುಭವಿ. ಈಗವರಿಗೆ ಪದ್ಯಾಣ ಪ್ರಶಸ್ತಿಯ - Padyana Prashasthi - ಬಾಗಿನ.
         ಈ ಸಂದರ್ಭದಲ್ಲಿ 'ಶ್ರೀ ಹನುಮಗಿರಿ ಮೇಳ'ದವರಿಂದ 'ಸತ್ಯಾಂತರಂಗ' ಪ್ರಸಂಗದ ಬಯಲಾಟ. 


Saturday, July 13, 2019

ಶಿಸ್ತಿಗೆ ‘ಶಿಸ್ತು’ ನೀಡಿದ ಅರ್ಥದಾರಿ ಮಾಸ್ಟ್ರು!


ಸುಮಾರು ಎರಡು ದಶಕದ ಹಿಂದಿನ ಒಂದು ತಾಳಮದ್ದಳೆ. ಪ್ರಸಂಗ : ಶಾಂಭವಿ ವಿಜಯ. ಕಥಾರಂಭದ ಮೊದಲು ಸ್ತುತಿಪದ್ಯ ಭಾಗವತರು ಹಾಡುತ್ತಿದ್ದರು. ದೇವೇಂದ್ರನ ಪೀಠಿಕೆ ಸಾಗುತ್ತಿತ್ತು. ಅರ್ಥದಾರಿ ಪಾವಲಕೋಡಿ ಗಣಪತಿ ಭಟ್ಟರೊಂದಿಗೆ ಉಭಯಕುಶಲೋಪರಿ ಮಾತನಾಡುತ್ತಿದ್ದೆ. ಅವರು ಕೂಡಾ ಲಹರಿಯಲ್ಲಿದ್ದರು

ದೇವೇಂದ್ರನ ಅರ್ಥಗಾರಿಕೆ ಇನ್ನೇನು ಮುಗಿಯುತ್ತಾ ಬಂತು ಎನ್ನುವಾಗ ಪಾವಲಕೋಡಿಯವರು ಅಲರ್ಟ್ ಆದರು. ಲಹರಿಯ ಮಾತುಗಾರಿಕೆಯು ಗಂಭೀರವಾಯಿತು. ಅವರ ದೃಷ್ಟಿಯೆಲ್ಲಾ ರಂಗದೆಡೆಗೆ ವಾಲಿತು. ಹೆಗಲಿನ ಶಾಲನ್ನು ಸರಿಪಡಿಸಿಕೊಳ್ಳುತ್ತಿದ್ದರು. ಮುಖಭಾವದಲ್ಲಿ ಏನೋ ವ್ಯತ್ಯಾಸವನ್ನು ಗಮನಿಸಿದೆ. ತಕ್ಷಣ ಅವರಲ್ಲಾದ ಬದಲಾವಣೆಗೆ ಕಾರಣ ಗೊತ್ತಾಗಲಿಲ್ಲ.

ಶುಂಭ ಅರ್ಥಗಾರಿಕೆ ಆರಂಭವಾಗುವ ಮೊದಲು ಬಯಲಾಟ ಕ್ರಮದಂತೆ ಅಟ್ಟಹಾಸಕ್ಕೆ ಚೆಂಡೆವಾದಕರು ಅಣಿಯಾಗಿ ನುಡಿತಗಳನ್ನು ಬಾರಿಸಿದಾಗತುಂಬಾ ಗಂಭೀರನಾಗಿ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ ಪಡಿಮಂಚವನ್ನು ಏರಿದರು. ಅಟ್ಟಹಾಸ ಕೊಟ್ಟರು. ಶುಂಭನ ಅರ್ಥಗಾರಿಕೆ, ಆಂಗಿಕವಾದ ಭಾಷೆಗಳಿಂದ ತಾಳಮದ್ದಳೆಯ ವೇದಿಕೆಯು ಬಯಲಾಟದ ವೇದಿಕೆಯ ಅನುಭವ ಕೊಟ್ಟಿತು. ಅವರ ಅರ್ಥಗಾರಿಕೆಯನ್ನು ಪ್ರಥಮ ಬಾರಿಗೆ ನೋಡಿದ್ದರಿಂದ ಬೆರಗಾಗಿದ್ದೆ.

ಅಂದಿನಶುಂಭ ಅರ್ಥದಾರಿ ಅಧ್ಯಾಪಕ ಪಾವಲಕೋಡಿ ಗಣಪತಿ ಭಟ್ಟರು. ಪಾತ್ರದೊಳಗೆ ತಲ್ಲೀನನಾಗಿ ಮಾತಿನ ಮೂಲಕ ಪುರಾಣ ಲೋಕವನ್ನು ಕಟ್ಟಲು ಆಂಗಿಕ ಭಾಷೆಯನ್ನು ತಾವಾಗಿಯೇ ರೂಢಿಸಿಕೊಂಡಿದ್ದರು. ರಾಕ್ಷಸ ಸ್ವಭಾವದ ಪಾತ್ರಗಳಿಗೆ ಸ್ವಲ್ಪವಾದರೂ ಬಯಲಾಟದ ಸ್ವರೂಪ ಕೊಡದಿದ್ದರೆ ಪಾತ್ರವು ಸೊರಗುತ್ತದೆ ಮಾತ್ರವಲ್ಲ ಅದರ ವ್ಯಕ್ತಿತ್ವದ ಅನಾವರಣ ಮಸುಕಾಗುತ್ತದೆ ಎನ್ನುವ ವಿಚಾರಗಳನ್ನು ಬಲ್ಲಿದರೊಂದಿಗೆ ವಿಮರ್ಶಿಸಿ ರೂಢಿಸಿಕೊಂಡಿದ್ದಾರೆ

ಗಣಪತಿ ಭಟ್ಟರು ಮೂರ್ನಾಲ್ಕು ದಶಕದ ತಾಳಮದ್ದಳೆಯ ಹವ್ಯಾಸಿ ರಂಗದ ಸಾಕ್ಷಿಯಾಗಿ ಕಾಣುತ್ತಾರೆ. ಹಿರಿಯರ ಕೂಟಗಳನ್ನು ಕೇಳಲೆಂದೇ ದೂರದೂರಿಗೆ ಹೋಗಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗರಂತಹ ಉದ್ಧಮರ ಒಡನಾಟಗಳಿದ್ದುವು. ಹಾಗೆಂತ ಎಂದೂ ಅವರ ಅರ್ಥಗಾರಿಕೆಯನ್ನು ನಕಲು ಮಾಡಲಿಲ್ಲ. ಬದಲಿಗೆ ತನ್ನಮಿತಿಯನ್ನರಿತುನಿರ್ವಹಿಸುತ್ತಿದ್ದರು. ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಲ್ಲಿ ಸಕ್ರಿಯ ಅರ್ಥದಾರಿಯಾಗಿದ್ದರು

ಬರೆಪ್ಪಾಡಿ ಅನಂತಕೃಷ್ಣ ಭಟ್, ಎಸ್.ಆರ್.ಪಾಡಿ, ಬೆಣ್ಣೆಮನೆ ಗೋಪಾಲಕೃಷ್ಣ ಭಟ್, ಬಿ.ಎಸ್.ಓಕುಣ್ಣಾಯ, ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್, ಕೋಡಿಯಾಡಿ ಶ್ರೀನಿವಾಸ ರೈ, ಜೆಡ್ಡು ನಾರಾಯಣ ಭಟ್.. ಮೊದಲಾದ ಹಿರಿಯರ ಅರ್ಥದಾರಿಗಳ ತಂಡದ ತಾಳಮದ್ದಳೆಯು ಕಾಲಘಟ್ಟದಲ್ಲಿ ಮಾತಿಗೆ ವಿಷಯ. ‘ಪರಸ್ಪರ ಇದಿರಾಗಿ ಬರುವ ಪಾತ್ರಗಳ ಅರ್ಥಗಳನ್ನು ಹೇಳುತ್ತಿರಬೇಕುಎನ್ನುವ ಅನಂತಕೃಷ್ಣ ಭಟ್ಟರ ಸೂಚನೆಯನ್ನು ಮಾನಿಸಿದ್ದರಿಂದ ಎಲ್ಲಾ ನಮೂನೆಯ ಅರ್ಥಗಳನ್ನು ಹೇಳಬಲ್ಲೆ ಎನ್ನುವ ಧೈರ್ಯ ಬಂದಿದೆಎನ್ನುತ್ತಾರೆ.

ತನ್ನ ನಲವತ್ತೈದನೇ ವಯಸ್ಸು. ವೇಷಧಾರಿಯಾಗಬೇಕೆನ್ನುವ ಹಪಾಹಪಿ. ವೇಷಧಾರಿ ಕುಡಾಣ ಗೋಪಾಲಕೃಷ್ಣ ಭಟ್ಟರನ್ನು ಮನೆಗೆ ಆಹ್ವಾನಿಸಿ ಸುಮಾರು ಆರು ತಿಂಗಳು ನಾಟ್ಯ ಕಲಿಕೆ. ತನ್ನ ವಯೋಮಾನಕ್ಕೆ ಹೊಂದುವ, ಮುಖ್ಯವಾಗಿ ಕಿರೀಟ ವೇಷ, ರಾಕ್ಷಸ ಪಾತ್ರಗಳ ನಡೆಗಳನ್ನು ಕಲಿತರು. “ಹಾಸ್ಯ, ಸ್ತ್ರೀವೇಷ ಹೊರತಾಗಿ ಬಹುತೇಕ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಮುಂದಿನ ದಿನಗಳಲ್ಲಿ ವಯೋಸಹಜವಾಗಿ ಪಾತ್ರ ನಿರ್ವಹಿಸಲು ಕಷ್ಟವಾದಾಗ ನಾನಾಗಿಯೇ ವಿರಮಿಸಿದ್ದೇನೆ.” ಎನ್ನುತ್ತಾರೆ. ವೀರವರ್ಮ, ಶತ್ರುಘ್ನ, ಭೀಷ್ಮ, ಅರ್ಜುನ, ಕಂಸ, ಶುಂಭ, ವೀರಭದ್ರ, ಪಂಚಜನ.. ಗಣಪತಿ ಭಟ್ಟರಿಗೆರಂಗಸುಖವನ್ನು ನೀಡಿದ ಪಾತ್ರಗಳು

ಅರ್ಥದಾರಿಯಾದವನಿಗೆ ಓದುವಿಕೆ ಬಹಳ ಮುಖ್ಯ. ಮನೆಯಲ್ಲಿ ಚಿಕ್ಕ ಗ್ರಂಥಾಲಯ ಬೇಕೇ ಬೇಕುಎಂದು ತಮ್ಮ ಪುಸ್ತಕ ಸಂಗ್ರಹವನ್ನು ತೋರಿಸುತ್ತಾರೆ. ಪ್ರಸಂಗ ಪುಸ್ತಕಗಳ ಮುದ್ರಣ ಪ್ರತಿ ಸಿಗದಿದ್ದ ಕಾಲಘಟ್ಟದಲ್ಲಿ ಅದನ್ನೆಲ್ಲಾ ಕೈಬರಹದಲ್ಲಿ ಬರೆದು ಸಂಗ್ರಹಿಸಿದ್ದಾರೆ. “ನಾನು ಮತ್ತು ಮಗಳು ಎಷ್ಟು ಪ್ರಸಂಗಗಳನ್ನು ಕೈಬರಹದಲ್ಲಿ ನಕಲು ಮಾಡಿದ್ದೇವೆ ಎನ್ನುವ ಲೆಕ್ಕ ಸಿಗದು,” ಎಂದ ಮಡದಿ ಲಲಿತಾರ ಮನದ ಮಾತಿಗೆ ಗಣಪತಿ ಭಟ್ಟರ ತುಂಬು ನಗುವಿನ ಪುರಸ್ಕಾರ. ಮಗ ನಾರಾಯಣ, ಮಗಳು ಉಮಾ.

ಗಣಪತಿ ಭಟ್ಟರ ಮುಖ್ಯ ವೃತ್ತಿ ಅಧ್ಯಾಪಕ. ಕನ್ಯಾನದ ಮಾದರಿ ಶಾಲೆಯ ಮೂಲಕ ಮಾಸ್ತರಿಕೆ ಆರಂಭ. ಮುಂದೆ ಉಪ್ಪಿನಂಗಡಿ, ಪುತ್ತೂರಿನ ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕಾಣಿಯೂರು ಜ್ಯೂನಿಯರ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ. 2002 ಜನವರಿ 31ರಂದು ನಿವೃತ್ತ. ಶಿಸ್ತಿಗೆಶಿಸ್ತುಕೊಟ್ಟವರು. ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರು

ಈಗವರಿಗೆ ಎಪ್ಪತ್ತಾರರ ಹರೆಯ. ಮಾತಿಗೆ ನಿಂತರೆ ಮೂರ್ನಾಲ್ಕು ದಶಕದ ಹಿಂದಿನ ತಾಳಮದ್ದಳೆಗಳ ರೋಚಕ ಸನ್ನಿವೇಶಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಪುತ್ತೂರಿನಲ್ಲಿ ಹವ್ಯಾಸಿ ಕಲಾವಿದನಾಗಿ ಯಕ್ಷಗಾನದ ಕಲಾ ತೇವವನ್ನು ಆರಲು ಬಿಡದ ಪಾವಲಕೋಡಿಯವರಂತಹ ನಿಸ್ಪø ಕಲಾವಿದರ ಕಲಾಯಾನವು ದಾಖಲಾಗುವುದಿಲ್ಲ. ದಾಖಲಿಸುವವರೂ ಇಲ್ಲ! 30-6-2019 ಪಾವಲಕೋಡಿ ಗಣಪತಿ ಭಟ್ಟರಿಗೆ ಬಪ್ಪಳಿಗೆಯಅಗ್ರಹಾರಗೃಹದಲ್ಲಿಪುತ್ತೂರು ಗೋಪಣ್ಣನೆನಪಿನ ಗೌರವ ಪ್ರದಾನ

ಊರುಸೂರು / 30-6-2019