Saturday, January 17, 2015

ಕೊಡೆಂಕಿರಿ ಕುಟುಂಬ : ಸಾಹಿತ್ಯ-ಕಲೆಗಳಿಗಿಲ್ಲಿ ಮೊದಲ ಮಣೆ


              ಪುತ್ತೂರು ಸನಿಹದ ಕೊಡೆಂಕಿರಿ ಶಾರದಾ ಭಟ್ಟರ ಮನೆಯ ಬಹುತೇಕ ಸಮಾರಂಭಗಳಲ್ಲಿ ಕಲೆ, ಸಾಹಿತ್ಯಕ್ಕೆ ಕೆಲವು ಘಂಟೆಗಳು ಸೀಮಿತ. ಆತಿಥ್ಯ, ಉಪಚಾರ, ಭೋಜನಗಳ ಜತೆಗೆ ಮೆದುಳಿಗೆ ಮೇವನ್ನು ನೀಡುವ ಉಪಕ್ರಮ. ಪ್ರಕಾಶ್ ಕುಮಾರ್ ಮತ್ತು ಉದಯಕುಮಾರ್ ಇವರ ಚಿರಂಜೀವಿಗಳು. ಪ್ರಕಾಶ್ಗೆ ಸಾಹಿತ್ಯ, ಪುಸ್ತಕ ವ್ಯಾಪಾರ ವೃತ್ತಿಯಾದರೆ ಉದಯರಿಗೆ ಪೌರೋಹಿತ್ಯ. ಪುಸ್ತಕ ಪ್ರೀತಿಗೆ, ಸರಸ್ವತಿ ಆರಾಧನೆಗೆ ಕುಟುಂಬದ ಮೊದಲ ಒಲವು.
               ಈಚೆಗೆ ಉದಯಕುಮಾರ್-ಸ್ವಪ್ನ ದಂಪತಿಯ ಪುತ್ರ ಚಿ| ನಚಿಕೇತನ ಉಪನಯನದ ಸಂದರ್ಭದಲ್ಲಿ ಯಕ್ಷಗಾನದ ಗುಂಗು. ದೂರದೂರಿಂದ ಆಗಮಿಸಿದ ಕುಟುಂಬಸ್ಥರಿಗೆ ಕಲಾಸೊಬಗಿನ ಆಸ್ವಾದನೆ. ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯರ ನೇತೃತ್ವದಲ್ಲಿ 'ಶಾಂಭವಿ ವಿಜಯ' ಎನ್ನುವ ಯಕ್ಷಗಾನ. ಪುತ್ತೂರಿನ ದೀಃಶಕ್ತಿ ಮಹಿಳಾ ಯಕ್ಷ ಬಳಗದವರಿಂದ 'ಕರ್ಣರ್ಜುನ’  ತಾಳಮದ್ದಳೆಗಳ ಪ್ರಸ್ತುತಿ.
              ಶಾರದಾ ಭಟ್ಟರ ಮನೆಯಲ್ಲಿ ಈ ಹಿಂದೆ ಜರುಗಿದ ಸಮಾರಂಭಗಳಲ್ಲೂ ಉಪನ್ಯಾಸ, ಯಕ್ಷಗಾನ, ಸಾಹಿತ್ಯಾರಾಧನೆಗಳಿಗೆ ಮೊದಲ ಮಣೆ. ಬಹಳ ಅಪರೂಪದ ಕುಟುಂಬ. ಶುಭ ಕಾರ್ಯಕ್ರಮಗಳು, ಸಭೆ-ಸಮಾರಂಭಗಳಲ್ಲಿ  ಪುಸ್ತಕ ಮಳಿಗೆಯನ್ನು ತೆರೆದು ಆಸಕ್ತರ ಕೈಗೆ ಪುಸ್ತಕವನ್ನಿಟ್ಟಾಗಲೇ ಖುಷಿ-ಸಂತೃಪ್ತಿ. ಪರೋಕ್ಷವಾಗಿ ಕನ್ನಡದ ಕಾಯಕ.
               ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ ಗರಡಿಯಲ್ಲಿ ಪಳಗಿದ ಪ್ರಕಾಶ್ ಕುಮಾರ್ ಪ್ರಸ್ತುತ ಶ್ರೀ ಜ್ಞಾನ ಗಂಗಾ ಪುಸ್ತಕ ಮಳಿಗೆಯನ್ನು ಹೊಂದಿದ್ದಾರೆ. ವಿವಿಧ, ವೈವಿಧ್ಯ ಪುಸ್ತಕಗಳ ಸಂಗ್ರಹ ಜ್ಞಾನಗಂಗಾದ ವೈಶಿಷ್ಯ. ಪುಸ್ತಕ ವ್ಯಾಪಾರ ಹೊಟ್ಟೆಪಾಡಾದರೂ ಅದರಲ್ಲಿ ನ್ಯಾಯಿಕವಾದ ಬದ್ಧತೆಯಿದೆ. ಜೀವನ ಧರ್ಮವಿದೆ. ಹಾದಿ ತಪ್ಪದ ಎಚ್ಚರವಿದೆ. ಬದುಕಿನ ದೂರದೃಷ್ಟಿಯಿದೆ.
              ಪ್ರಕಾಶ್ ಪುಸ್ತಕ ಓದುತ್ತಾರೆ, ವಿಮರ್ಶಿಸುತ್ತಾರೆ. ಜನರ ನಾಡಿಮಿಡಿತವನ್ನರಿತು ಓದುವಂತೆ ಪ್ರೇರೇಪಿಸುತ್ತಾರೆ. "ಪುಸ್ತಕ ವ್ಯಾಪಾರವನ್ನು ಕೀಳಾಗಿ ಕಾಣುವ ಕನ್ನಡ ಮನಸ್ಸುಗಳೂ ಇವೆ!  ಇದನ್ನು ಅವಮಾನವೆಂದು ಗ್ರಹಿಸುತ್ತಾರೆ. ಹಗುರ ಮಾತುಗಳಿಂದ ಚುಚ್ಚುತ್ತಾರೆ. ಪುಸ್ತಕ ಕಾಯಕದ ಎದುರು ಇವೆಲ್ಲಾ ಗೌಣ. ಈ ರೀತಿಯ ಮಾತನಾಡುವವರ ಮನೆಯಲ್ಲಿ ಒಂದು ಪುಸ್ತಕವೂ ಇಲ್ಲದಿರುವುದು ದುರಂತ," ಎನ್ನುತ್ತಾರೆ ಪ್ರಕಾಶ್.
                 ತಮ್ಮ ಮನೆಯಂಗಳದಲ್ಲಿ ಮನೆ ಸಾಹಿತ್ಯ ಸಮ್ಮೇಳನವನ್ನು ಪ್ರಥಮವಾಗಿ ನಡೆಸಿದ ಕೀರ್ತಿ ಕೊಡೆಂಕಿರಿ ಕುಟುಂಬದ ಹಿರಿಮೆ. ನಾಡಿನ ಖ್ಯಾತ ಸಾಹಿತಿಗಳನ್ನು  ಬರಮಾಡಿ, ಹಳ್ಳಿ ಸೊಬಗಿನ ಆತಿಥ್ಯವನ್ನು ತೋರಿಸಿದವರು. ವೈಚಾರಿಕವಾಗಿ ಯೋಚಿಸುವ, ಚಿಂತಿಸುವ ಅಪರೂಪದ ಕುಟುಂಬ. ಹಾಗೆಂತ ಇವರೇನೂ ಆರ್ಥಿಕ ಶ್ರೀಮಂತರಲ್ಲ. ಆದರೆ ಹೃದಯ ಶ್ರೀಮಂತಿಕೆಯಿದೆ. ಸಿಕ್ಕಾಗ ಮಾತನಾಡುವ ಧಾರಾಳತನವಿದೆ. ನಗುಮುಖದ ಮಾತುಕತೆಯಿದೆ. ಮನೆಯಲ್ಲಿ ಆತಿಥ್ಯದ ಧಾರಾಳತನವಿದೆ. ಇದಕ್ಕಿಂತ ದೊಡ್ಡ ಶ್ರೀಮಂತಿಕೆ ಇನ್ನೇನು ಬೇಕು? ನನ್ನ ಮಗನ ಅಂಗಡಿಯಲ್ಲಿ ಲಕ್ಷಗಟ್ಟಲೆ ಪುಸ್ತಕಗಳಿವೆ. ನಾನೂ ಲಕ್ಷಾಧೀಶೆ ಅಲ್ವಾ, ಎಂದು ಖುಷಿಯಿಂದ ಹೇಳುತ್ತಾರೆ ಶಾರದಮ್ಮ.
               ಎಲ್ಲವನ್ನೂ ಕೋಟಿಯ ಮಾನದಂಡದಲ್ಲಿ ಅಳೆದು, ತೂಗುವ; ಸಂಪತ್ತು ಬಂದಾಗ ಹಗುರವಾಗಿ ಕಾಣುವ, ಕೀರ್ತಿಗಾಗಿ ಹಪಹಪಿಸುವ ಸಮಾಜದ ಹಲವರ ಮಧ್ಯೆ ಕೊಡೆಂಕಿರಿ ಕುಟುಂಬ ವಿಭಿನ್ನವಾಗಿ ಕಾಣುತ್ತದೆ. ಇಂತಹ ಚಿಕ್ಕಪುಟ್ಟ ಕೆಲಸಗಳು-ಮನಸ್ಸುಗಳು ಕನ್ನಡ, ಸಾಹಿತ್ಯ, ಕಲೆಯನ್ನು ಉಳಿಸುವ ಉಪಾಧಿಗಳು.


Thursday, January 15, 2015

'ಶಾಂಭವಿ ವಿಜಯ' ಯಕ್ಷಗಾನ ಪ್ರದರ್ಶನ

ಕೊಡೆಂಕಿರಿ ಉದಯಕುಮಾರ್-ಸ್ವಪ್ನ ದಂಪತಿಯ ಪುತ್ರ ಚಿ| ನಚಿಕೇತ ಬ್ರಹ್ಮೋಪದೇಶ ಸಮಾರಂಭದ ಪ್ರಯುಕ್ತ ಕೆಮ್ಮಾಯಿ ವಿಷ್ಣು ಮಂಟಪದಲ್ಲಿ ಜನವರಿ 11ರಂದು 'ಶಾಂಭವಿ ವಿಜಯ' ಯಕ್ಷಗಾನ ಪ್ರದರ್ಶನ ಜರುಗಿತು. ಹಿಮ್ಮೇಳದಲ್ಲಿ ಸತ್ಯನಾರಾಯಣ ಪುಣಿಂಚಿತ್ತಾಯ, ಸತೀಶ ಪುಣಿಂಚಿತ್ತಾಯ, ರಮೇಶ ಭಟ್ ಪುತ್ತೂರು, ಶ್ರೀಧರ ಪಡ್ರೆ, ಜಗನ್ನಿವಾಸ ರಾವ್ ಪುತ್ತೂರು; ಮುಮ್ಮೇಳದಲ್ಲಿ ರಾಧಾಕೃಷ್ಣ ನಾವಡ (ರಕ್ತಬೀಜ), ನಾ. ಕಾರಂತ ಪೆರಾಜೆ (ಶ್ರೀದೇವಿ), ಶಶಿಕಿರಣ ಕಾವು (ಶುಂಭ), ಲಕ್ಷ್ಮಣ ಕುಮಾರ್ ಮರಕಡ, ಗುಂಡಿಮಜಲು ಗೋಪಾಲ ಭಟ್ (ಚಂಡ-ಮುಂಡ), ಪೆರುವೋಡಿ ಸುಬ್ರಹ್ಮಣ್ಯ ಭಟ್ (ಹಾಸ್ಯ) ಮೊದಲಾದವರು ಭಾಗವಹಿಸಿದ್ದರು.



Friday, January 2, 2015

ಹತ್ತನೇ ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನದ (2-1-2015) ಉದ್ಘಾಟನೆಯ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಮೂಡಂಬೈಲು ಶ್ರೀ ಸಿ.ಗೋಪಾಲಕೃಷ್ಣ ಶಾಸ್ತ್ರಿಯವರು ಮಾಡಿದ ಅಧ್ಯಕ್ಷೀಯ ಭಾಷಣದ ಆಯ್ದ ಭಾಗ : -

          ".. ಕಲೆಯು ಧನ ಸಂಪಾದನೆಯ ಉದ್ಯಮವಾಗುವಾಗ ಅವನತಿಗೆ ಅವಕಾಶ ಹೆಚ್ಚು. ದೇಶಮಟ್ಟದಲ್ಲಿ ಸಿನೆಮಾ ಹಣ ಗಳಿಸುವ ಅತ್ಯಂತ ದೊಡ್ಡ ಕ್ಷೇತ್ರ. ಅಲ್ಲಿಯೂ ಕಲಾತ್ಮಕತೆ ನಷ್ಟವಾಗುತ್ತಾ ಬಂದಿದೆ. ಆ ಪರಿಸ್ಥಿತಿ ಯಕ್ಷಗಾನಕ್ಕೆ ಬರಬಾರದು. ಈಗ ದಿನಪತ್ರಿಕೆಗಳಲ್ಲಿ ಕಾಣುವಂತೆ, 30-35 ವೃತ್ತಿನಿರತ ಮೇಳಗಳು ಪ್ರತಿದಿನ ಪ್ರದರ್ಶನವನ್ನೀಯುತ್ತಿವೆ. ಜಾತ್ರೆ, ವಾರ್ಶಿಕೋತ್ಸವ, ಬ್ರಹ್ಮಕಲಶ.. ಇತ್ಯಾದಿಗಳಲ್ಲಿ ಬೇರೆಯೇ ಬಯಲಾಟಗಳಿರುತ್ತವೆ. ಕಾಲಬೇಧವಿಲ್ಲದೆ ಪ್ರತಿದಿನ ನೂರಾರು ತಾಳಮದ್ದಳೆಗಳು ಜರುಗುತ್ತಿವೆ. ಮುಂಬಯಿ, ಬೆಂಗಳೂರು, ಮೈಸೂರು ಮುಂತಾದ ದೂರದ ಪಟ್ಟಣಗಳನ್ನೂ ಗಣಿಸಿದರೆ, ಪ್ರತಿದಿನ 200-300ಕ್ಕಿಂತ ಹೆಚ್ಚು ಪ್ರದರ್ಶನಗಳೂ, ಕೂಟಗಳೂ ಜರಗುತ್ತಿವೆ ಎಂಬುದರಲ್ಲಿ ಸಂದೇಹವಿಲ್ಲ. ಗತ ಶತಮಾನದಲ್ಲಿ ಟೆಂಟ್ ಮೇಳಗಳು ಬಹು ಸಂಖ್ಯಾತವಾಗಿದ್ದು, ಪ್ರತಿದಿನ ಲಕ್ಷಾಂತರ ರೂಪಾಯಿ ಗಳಿಕೆಯ ಕೇಂದ್ರಗಳಾಗಿದ್ದುವು. ಕನ್ನಡ ಮಾತ್ರವಲ್ಲದೆ ತುಳು ಭಾಷಾ  ಪ್ರೇಮವೂ ಆಟಗಳಲ್ಲಿ ಬೆಸೆದು ಹೋಗಿತ್ತು. ಯಕ್ಷಗಾನ ಕಲೆಗಾಗಿ ಅಲ್ಲ, ಹಣಕ್ಕಾಗಿ ಎಂಬಂತಾಗಿತ್ತು. ಆಗ ಆಟದ ಪೂರ್ವರಂಗ ಪೂರ್ಣಮಯವಾಗಿ, ನೃತ್ಯ, ಕೋಲಾಟ ಇತ್ಯಾದಿಗಳೂ ಆ ಸ್ಥಾನಕ್ಕೆ ಬಂದಿದ್ದುವು. ಕೆಲವರು ಕೋಳಿ ಕಾಳಗ, ಕಂಬಳದ ಕೋಣ, ಭೂತದ ವೇಷ.. ಇತ್ಯಾದಿಗಳಿಗೂ ಅವಕಾಶ ಕಲ್ಪಿಸಿದ್ದರು. ಏಳು ಮಂದಿ ಭಾಗವತರು, ಒಬ್ಬನೇ ಏಕಕಾಲದಲ್ಲಿ 7-8 ಮದ್ದಳೆ ನುಡಿಸುವುದು, ದೇವಿಯ ವೇಷ ಆಕಾಶದಿಂದ ಇಳಿಯುವುದು, ಸಂಶಪ್ತಕರು ಏಳು ಮಂದಿ ಎಂಬ ತಪ್ಪು ಕಲ್ಪನೆ ಮಾಡಿಕೊಂಡು, ಏಳು ಕೇಸರಿ ತಟ್ಟಿ ವೇಷಗಳೂ ರಂಗಸ್ಥಳಕ್ಕೆ ಬಂರುವುದು (ಸಂಶಪ್ತಕರು ಏಳು ಮಂದಿ ಅಲ್ಲ. ಅವರು ರಾಕ್ಷಸರೂ ಅಲ್ಲ. ತ್ರಿಗರ್ತರಾಜ ಸಹೋದರರು) - ಹೀಗೆ ಇನ್ನೆಷ್ಟೋ ಅಸಂಬದ್ಧ, ಹೊಸ ಎಂಬ ವಿಶೇಷಣಯುಕ್ತ ಆಕರ್ಷಣೆಗಳು, ಪರಂಪರಾಗತ ಯಕ್ಷಗಾನ ಕಲೆಯನ್ನೂ ಮುರಿದು, ಮುಕ್ಕಿ ತೇಗಿದುವು! ಹಣ ಸಂಪಾದನೆಗಾಗಿ ಮಾಡುತ್ತಿದ್ದ ಈ ರೀತಿಯ ಕುತ್ಸಿತ ಪ್ರದರ್ಶನಗಳನ್ನು, ಪ್ರಾರಂಭದಲ್ಲಿ ಪ್ರೇಕ್ಷಕರು ಸಹಜ ಕುತೂಹಲದಿಂದ ಪ್ರೋತ್ಸಾಹಿಸಿದರೂ ಅನಂತರ ಸಾರಾಸಗಟಾಗಿ ತಿರಸ್ಕರಿಸಿದರು...
        ..ಜಾತಿಯತೆ ಒಂದು ಅಂಟು ಜಾಡ್ಯ. ಅದು ಸಾಮಾಜಿಕ ಕ್ಷೇತ್ರವನ್ನು ಸಾವಿರಾರು ವರ್ಷ ಹಾಳು ಮಾಡಿತು. ರಾಜಕೀಯ ಕ್ಷೇತ್ರವಂತೂ ಈ ಪಿಡುಗಿಗೆ ಬಲಿಯಾಗಿ ದೇಶವನ್ನೇ ಬಲಿಕೊಟಿತು. ಇದೀಗ ಯಕ್ಷಗಾನವನ್ನೂ ಆಕ್ರಮಿಸುತ್ತಿದೆಯೇ ಎಂಬ ಭಯಕ್ಕೆ ಕಾರಣವಾಗಿದೆ. ಜಾತಿ, ವಿಜಾತಿ ಎನಬೇಡ, ದೇವನೊಲಿದಾತನೇ ಜಾತ ಎಂಬ ಸರ್ವಜ್ಞನ ವಚನವನ್ನು ರಂಗಸ್ಥಳದಲ್ಲಿ, ವೇದಿಕೆಗಳಲ್ಲಿ ಸಾರುತ್ತಿರುವ ಯಕ್ಷಗಾನ ಕಲಾವಿದರನ್ನು ಒಡೆದು, ಕಲಾಕ್ಷೇತ್ರವನ್ನೇ ಆಳುವ ಹುನ್ನಾರ, ಕೆಲವು ಸ್ಥಾಪಿತ ಹಿತಾಸಕ್ತರಿಂದ ನಡೆಯುತ್ತಿರುವುದು ವಿಷಾದನೀಯ ಹಾಗೂ ಖಂಡನೀಯ. ನೂರಾರು ವರ್ಷಗಳಿಂದ ಪಂಡಿತ ಪಾಮರನ್ನೆಲ್ಲಾ ರಂಜಿಸುತ್ತಾ, ಕಾಂತಾ ಸಮ್ಮಿತ ಮಾರ್ಗದಿಂದ, ಸಮಾಜದ ನೈತಿಕ ಮಟ್ಟವನ್ನೂ, ಸಂಸ್ಕಾರ ಸಾರವನ್ನೂ ಕಾಯ್ದುಕೊಡು ಬಂದಿರುವ ಯಕ್ಷಗಾನ, ಕೆಲವೇ ಮಂದಿ ಸ್ವಾರ್ಥ, ಸಂಕುಚಿತ ಮನೋಭಾವವುಳ್ಳವರ ಕೈಗೆ ಸಿಲುಕಿ, ಸರ್ವನಾಶವಾಗುವ ಸ್ಥಿತಿಗೆ ಬಂದಿರುವುದು, ಅತ್ಯಂತ ದುಃಖಕಾರಕ ವಿಚಾರ. ಯಕ್ಷಗಾನದಲ್ಲಿ ಬ್ರಾಹ್ಮಣ, ಬಂಟ, ಬೋವಿ, ಕುಡುಬಿ, ಕೋಲಾರಿ, ಗಾಣಿಗ, ನೇಕಾರ, ಹೆಗ್ಗಡೆ, ವಿಶ್ವಕರ್ಮ ಎಂಬ ಯಾವ ವರ್ಗ ವ್ಯತ್ಯಾಸವೂ ಇಲ್ಲದೆ, ಒಂದೇ ಚೌಕಿಯಲ್ಲಿ, ಒಂದೇ ವೇದಿಕೆಯಲ್ಲಿ ಮೇಲು ಕೀಳನ್ನು ಪರಿಗಣಿಸದೆ, ಅಣ್ಣ-ತಮ್ಮ, ಗಂಡ-ಹೆಂಡತಿ, ತಂದೆ-ಮಗನ ಪಾತ್ರ ವಹಿಸುತ್ತಿದ್ದ, ಹೃದಯ ವೈಶಾಲ್ಯವುಳ್ಳ ಕಲಾವಿದರನ್ನು ಪ್ರತ್ಯೇಕಿಸುವುದು. ಜಾತಿ ವರ್ಗವೆಂಬ ವಿಷಕನ್ಯೆಯನ್ನು ಬೆಳೆಸುತ್ತಿರುವುದು, ಕಲಾವೇದಿಕೆಯಲ್ಲೂ ಜಾತೀಯ ಸಂಘರ್ಷವನ್ನು ಹುಟ್ಟು ಹಾಕುವುದು - ಸುಸಂಸ್ಕೃತ ಸಮಾಜಕ್ಕೆ ಶೋಭೆಯಲ್ಲ. ಆದುದರಿಂದ ಇಂತಹ ಅನಿಷ್ಟಕಾರಕ, ಅವಾಂತರಕಾರಿ ಮುಳ್ಳುಕಂಟೆಗಳನ್ನು, ಮೊಳಕೆಯಲ್ಲೇ ಚಿವುಟಬೇಕೆಂದು ಎಲ್ಲಾ ಕಲಾವಿದರಲ್ಲೂ, ಪ್ರಾಯೋಜಕರಲ್ಲೂ ನನ್ನ ಕಳಕಳಿಯ ಪ್ರಾರ್ಥನೆ.