Monday, October 24, 2022

ಪದ್ಯಾಣ ಗಣಪತಿ ಭಟ್ಟರ ‘ನೆನಪು’ - ‘ಪದ್ಯಾಣ ಪ್ರಶಸ್ತಿ’ ಪ್ರದಾನ.




ನಿನ್ನೆ (23-10-2022) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಶ್ರೀ ನಟರಾಜ ವೇದಿಕೆ’ಯಲ್ಲಿ ಭಾಗವತ ಪದ್ಯಾಣ ಗಣಪತಿ ಭಟ್ಟರ ‘ನೆನಪು’ ಕಾರ್ಯಕ್ರಮ.

* ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ಆಶೀರ್ವಚನ.

* ಕಲಾಪೋಷಕ, ‘ಪದ್ಯಾಣ ಪ್ರಶಸ್ತಿ ಸಮಿತಿ’ಯ ಗೌರವಾಧ್ಯಕ್ಷ ಡಾ.ಟಿ.ಶ್ಯಾಮ ಭಟ್ಟರ ಸಭಾಧ್ಯಕ್ಷತೆ

* ಪುತ್ತೂರು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ಮುಳಿಯ ಕೇಶವ ಪ್ರಸಾದರಿಂದ ನಲ್ನುಡಿ

* ಯಕ್ಷ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿಯವರಿಂದ ‘ಪದ್ಯಾಣ ಸ್ಮೃತಿ’

* ರಸರಾಗಚಕ್ರವರ್ತಿ ಶ್ರೀ ದಿನೇಶ ಅಮ್ಮಣ್ಣಾಯರಿಗೆ ಹಾಗೂ ಭಾಗವತ ಹಂಸ ಶ್ರೀ ಪುತ್ತಿಗೆ ರಘುರಾಮ ಹೊಳ್ಳರಿಗೆ ‘ಪದ್ಯಾಣ ಪ್ರಶಸ್ತಿ’ ಪ್ರದಾನ.

* ಪ್ರಶಸ್ತಿ ಪುರಸ್ಕೃತರ ಕುರಿತಾದ  ‘ಹಸ್ತಕ’ ಬಿಡುಗಡೆ. (ಸಂ. ನಾ. ಕಾರಂತ ಪೆರಾಜೆ)

* ಪದ್ಯಾಣರ ಶಿಷ್ಯ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರಿಗೆ ‘ಪದ್ಯಾಣ ಶಿಷ್ಯ ಸಂಮಾನ’ ಹಾಗೂ ಪದ್ಯಾಣರ ಆಭಿಮಾನಿ ಶ್ರೀ ರಾಮ ಜೋಯಿಸ್ ಬೆಳ್ಳಾರೆಯವರಿಗೆ ‘ಪದ್ಯಾಣ ಅಭಿಮಾನಿ ಶಿಷ್ಯ ಸಂಮಾನ.’

* ವೇಷಧಾರಿ, ಅರ್ಥದಾರಿ, ಸುಳ್ಯ ಪ್ರತಿಭಾ ವಿದ್ಯಾಲಯದ ಪ್ರಾಚಾರ್ಯ ಶ್ರೀ ವೆಂಕಟರಾಮ ಭಟ್ಟ ಸುಳ್ಯ ಇವರಿಂದ ಅಭಿನಂದನಾ ನುಡಿ ಹಾರಗಳು.

* ದಿನಪೂರ್ತಿ ಜರುಗಿದ ಕಾರ್ಯಕ್ರಮ. * ಪದ್ಯಾಣ ಮನೆಯವರ ಆಯೋಜನೆ.

(ಚಿತ್ರಗಳು : ಶ್ರೀ ದುರ್ಗಾಪ್ರಸಾದ್ ದಿವಾಣ, ಕಟೀಲು)


 

Saturday, July 9, 2022

ಹಾಸ್ಯಗಾರ್ ಪೆರುವೋಡಿ ನಾರಾಯಣ ಭಟ್ಟರಿಗೆ 'ಶ್ರೀ ನರಹರಿ ತೀರ್ಥ ಪ್ರಶಸ್ತಿ'

 ಯಕ್ಷಗಾನ ಹಿರಿಯ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ಟರಿಗೆ ಉಡುಪಿ ಶ್ರೀ ಅದಮಾರು ಮಠವು ಪ್ರಾಯೋಜಿಸುವ 'ಶ್ರೀ ನರಹರಿ ತೀರ್ಥ ಪ್ರಶಸ್ತಿ' ಪ್ರಾಪ್ತವಾಗಿದೆ. 2022 ಜುಲೈ 11, ಸೋಮವಾರ ಸಂಜೆ ಉಡುಪಿಯ ಶ್ರೀ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿಯು ರೂಪಾಯಿ ಐವತ್ತು ಸಾವಿರ ರೂಪಾಯಿ ಮೊತ್ತವನ್ನೊಳಗೊಂಡಿದೆ.

 ಪೆರುವೋಡಿ ನಾರಾಯಣ ಭಟ್ಟರು ಯಕ್ಷಗಾನದ ಹಾಸ್ಯ ಪಾತ್ರಗಳಿಗೆ ಮಾನವನ್ನು ತಂದುಕೊಟ್ಟ ಹಾಸ್ಯಗಾರ. 'ಪಾಪಣ್ಣ ವಿಜಯ' ಪ್ರಸಂಗದ 'ಪಾಪಣ್ಣ' ಪಾತ್ರದ ವಿನ್ಯಾಸ ಹಾಗೂ ಪಾತ್ರಾಭಿವ್ಯಕ್ತಿ ಪೆರುವೋಡಿಯವರ ಕಲ್ಪನಾಶಕ್ತಿಗೆ ಮಾದರಿ. ದಯಮಂತಿ ಪುನರ್ ಸ್ವಯಂವರ ಪ್ರಸಂಗದ 'ಬಾಹುಕ' ಪಾತ್ರಕ್ಕೆ ಮರುಹುಟ್ಟು ನೀಡಿದವರು. ಪೌರಾಣಿಕ ಪ್ರಸಂಗದ ಬಹುತೇಕ ಎಲ್ಲಾ ಪಾತ್ರಗಳಲ್ಲೂ ಸ್ವಂತಿಕೆಯ ಮೇಲ್ಮೆ.

 ಪೆರುವಡಿ ನಾರಾಯಣ ಭಟ್ಟರಿಗೆ ಈಗ 95 ವಯಸ್ಸು. ವಿವಿಧ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವಿ. ಸ್ವಂತದ್ದಾದ 'ಮೂಲ್ಕಿ ಮೇಳ' ಯಜಮಾನಿಕೆಯು ಒಂದು ಕಾಲಘಟ್ಟದ ವಿದ್ಯಮಾನ. ಪೆರುವೋಡಿಯವರ ಕಲಾ ಬದುಕಿನ ಚಿತ್ರಣ - 'ಹಾಸ್ಯಗಾರನ ಅಂತರಂಗ' ಪುಸ್ತಕವನ್ನು ಪುತ್ತೂರಿನ ಕರ್ನಾಟಕ ಸಂಘ ಪ್ರಕಟಿಸಿದೆ. ಕಾಂತಾವರದ ಕನ್ನಡ ಸಂಘವು ತನ್ನ 'ನಾಡಿಗೆ ನಮಸ್ಕಾರ' ಮಾಲಿಕೆಯಲ್ಲಿ ಪುಸ್ತಿಕೆಯನ್ನು ಪ್ರಕಟಸಿದೆ.

Friday, July 8, 2022

ಸಮರ್ಪಿತ ಕಲಾಯಾನ

 



 

(ಹಿರಿಯ ಕಲಾವಿದ ಶ್ರೀ ಶಿವರಾಮ ಜೋಗಿ ಬಿ.ಸಿ.ರೋಡು ಇವರಿಗೆ 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾದ ಸಂದರ್ಭದಲ್ಲಿ ಉದಯವಾಣಿಯ ಕಲಾವಿಹಾರ ಪುರವಣಿಯಲ್ಲಿ ಪ್ರಕಟವಾದ ಲೇಖನ....  ಈಗ ಜೋಗಿಯವರಿಗೆಹಾಸ್ಯರತ್ನ ವೇಣೂರು ಸುಂದರ ಆಚಾರ್ಯ ಸ್ಮೃತಿ ಗೌರವ... 2022 ಜುಲೈ 10ರಂದು ವೇಣೂರಿನಲ್ಲಿ ಪ್ರಶಸ್ತಿ ಪ್ರದಾನ... ಬರೆಹದ ಮೂಲಕ ಶಿವರಾಮ ಜೋಗಿಯವರಿಗೆ ಅಭಿನಂದನೆಗಳು..)

2015 ಇರಬೇಕು... ಕಲ್ಲಡ್ಕ ಸನಿಹ 'ದೇವಿ ಮಹಾತ್ಮೆ' ಆಟ. ಜೋಗಿಯವರ ಮತ್ತು ಶೀನಪ್ಪ ರೈಯವರ 'ಮಧು-ಕೈಟಭ' ಜತೆಗಾರಿಕೆ. ಇಬ್ಬರಲ್ಲೂ ಪಾತ್ರಗಳು ಮೈಮೇಲೆ ಬಂದಿದ್ದುವು!  ವಯಸ್ಸನ್ನು ಮರೆತ ಅಭಿವ್ಯಕ್ತಿ. ಪ್ರೇಕ್ಷಕರ ಜತೆ ಸಹಕಲಾವಿದರೂ ಬೆರಗು. ಎಪ್ಪತ್ತು ಮೀರಿದ ವಯೋಮಾನವನ್ನು ಪಾತ್ರಗಳು ಮರೆಸಿದ್ದುವು. ಇಬ್ಬರೂ ಮರೆತಿದ್ದರು! ಅನುಭವ ಕಟ್ಟಿಕೊಡುವ ರಂಗದ ಘಟನೆಗಳ ಹಿಂದೆ ಇಂತಹ ಬೆರಗುಗಳು ಸುತ್ತುತ್ತಿರುತ್ತವೆ. ಅಲ್ಲಿರುವುದು ಅಪ್ಪಟ 'ಯಕ್ಷಗಾನ' ಮಾತ್ರ.

ಶಿವರಾಮ ಜೋಗಿ(ಜನನ 7-6-1947)ಯವರ ರಂಗಕುಸುಬಿಗೆ ಆರು ದಶಕದ ಹೊಳಪು. ಹದಿನೈದನೇ ವರುಷದಲ್ಲಿ ಬಣ್ಣದ ಬದುಕಿಗೆ ಶ್ರೀಕಾರ. ಕೂಡ್ಲು, ಮೂಲ್ಕಿ ಮೇಳದಿಂದ ಗೆಜ್ಜೆಯ ಹೆಜ್ಜೆ. ಸುರತ್ಕಲ್ ಮೇಳವೊಂದರಲ್ಲೇ ನಲವತ್ತು ತಿರುಗಾಟ. ಎಡನೀರು, ಹೊಸನಗರ, ಹನುಮಗಿರಿ.. ಮೇಳಗಳಲ್ಲಿ ವ್ಯವಸಾಯ.

ಯಕ್ಷಗಾನವನ್ನು ನಂಬಿದ ಸುದೀರ್ಘ ದುಡಿಮೆಯ ಕಲಾಯಾನ. ಯಕ್ಷಗಾನದಲ್ಲಿ ದೊಡ್ಡ ಹೆಜ್ಜೆಯೂರಿದ ಉದ್ಧಾಮರೆಲ್ಲರ ಜತೆ ಪಾತ್ರನಿರ್ವಹಿಸಿದ ಹಿರಿಮೆ. ಅವರೆಲ್ಲರ ಜತೆಗಾರಿಕೆಯ ಪ್ರಭಾವದಿಂದ ದಟ್ಟತೆ ಪಡೆದ ಅನುಭವ. ಪಕ್ವವಾದ ಬೌದ್ಧಿಕತೆ. ಬಾಲ ಪಾತ್ರದಿಂದ ಖಳ ಪಾತ್ರದ ವರೆಗೆ ಬೆಳೆಯಲು ಹಿರಿಯರ ಮೇಲ್ಪಂಕ್ತಿ. ಕಲಿಕೆಯ ಮೊದಲಾಕ್ಷರದಿಂದ ಮೇಲೆದ್ದು ಬಂದ ಕಲಾಗಾರಿಕೆ. ಒಂದು ಕಾಲಘಟ್ಟದ ರಂಗಬದುಕಿನ ದನಿ. 

ಶ್ರೀ ಮಹಮ್ಮಾಯಿ ಕೃಪಾಪೋಶಿತ ಯಕ್ಷಗಾನ ಮಂಡಳಿ, ಸುರತ್ಕಲ್ (ಸುರತ್ಕಲ್ ಮೇಳ) - ಪೌರಾಣಿಕ ಪ್ರಸಂಗಗಳ ದೊಡ್ಡ ಚಾವಡಿ. ಅಗರಿ ಭಾಗವತರು, ಡಾ.ಶೇಣಿ, ದೊಡ್ಡ ಸಾಮಗರು, ತೆಕ್ಕಟ್ಟೆ, ಸಣ್ಣ ಸಾಮಗರು, ವಿಟ್ಲ ಜೋಷಿ, ಕ್ರಿಶ್ಚನ್ ಬಾಬು.. ಹೀಗೆ ಹಲವಾರು ಹಿರಿಯರೊಂದಿಗೆ ಕಿರಿಯನಾಗಿ ಕಲಿತರು. ಹೆಚ್ಚು ಆವರಿಸಿದ್ದು ಶೇಣಿಯವರು. ಬಹುಶಃ ಅರ್ಥಗಾರಿಕೆಯ ಮೊದಲಾಕ್ಷರಕ್ಕೆ ಶೇಣಿಯವರೇ ಗುರು. ತನ್ನ ಸಾಮಥ್ರ್ಯಕ್ಕೆ ತಕ್ಕಂತೆ ಶೇಣಿಯೆಂಬ ಸಮುದ್ರದಿಂದ ಬೊಗಸೆ ನೀರು ಎತ್ತಿದರು. ಬೊಗಸೆಯ ಗಾತ್ರ ಸಣ್ಣದಾದರೂ ಅದರೊಳಗಿರುವುದು 'ಸಮುದ್ರದ ನೀರು' ಎನ್ನುವ ಕೃತಜ್ಞತೆ ಸದಾ ಜಾಗೃತ.  

ಸುರತ್ಕಲ್ ಮೇಳದ ಪ್ರಸಂಗಗಳೆಲ್ಲವೂ ಮೇಳಕ್ಕೆ ಹೇಗೆ ಹೆಸರು ತಂದಿತ್ತೋ ಕಲಾವಿದರಿಗೂ ಅಷ್ಟೇ ಗೌರವ, ಮಾನ, ಕೀರ್ತಿ. ಮೇಳದ ಯಜಮಾನರಾದ ಕಸ್ತೂರಿ ಪೈ ಸಹೋದರರ ಆಪ್ತರಾದ ಜೋಗಿಯವರು ಮೇಳದ ಒಂದು ಭಾಗವೇ ಆಗಿದ್ದರು. ವಾಹನ ಚಾಲನೆಯಿಂದ ಉಸ್ತುವಾರಿ ತನಕ. ಅದು ಸಮರ್ಪಿತ ಮನಸ್ಸಿನ ಪ್ರತಿಫಲನ. ಮೇಳ ನಿಷ್ಠತೆಯ ಪ್ರತೀಕ. ರೀತಿಯ ದುಡಿಮೆಯಲ್ಲಿ ಬದ್ಧತೆಯ ಮೇಲ್ಮೆ.

ಮೇಳವು ಕಲಾವಿದರ ಪಾಲಿಗೊಂದು ಮನೆ. ಕಲಾವಿದರೆಲ್ಲರೂ ಕೂಡುಕುಟುಂಬದ ಸದಸ್ಯರಿದ್ದಂತೆ. ಮೇಳದ ದನಿಯೇ ಮನೆಯ ಯಜಮಾನ. ಅವರ ಮಾತೇ ಅಂತಿಮ. ಭಾಗವತ ಪದ್ಯಾಣ ಗಣಪತಿ ಭಟ್ಟರು ಹೇಳಿದ್ದರು. ಇದು ಸುರತ್ಕಲ್ ಮೇಳದ ಅರ್ಧ ಶತಮಾನದ ಯಶೋಯಾನದ ಗುಟ್ಟು. ಕಲಾವಿದರೆಲ್ಲರೂ ಮೇಳವನ್ನು ಪ್ರೀತಿಸುತ್ತಿದ್ದರು. ಜೋಗಿಯವರನ್ನು ಮಾತನಾಡಿಸಿದಾಗ ಇಂತಹ ಪ್ರೀತಿಯ ಮನಸ್ಸು ಅನಾವರಣಗೊಳ್ಳುತ್ತದೆ.

ನನಗೆ 'ರಾಜಾ ಯಯಾತಿ' ಪ್ರಸಂಗವು ಬಹುವಾಗಿ ಕಾಡಿದ ಪ್ರಸಂಗ. ಅದರಲ್ಲಿ ಜೋಗಿಯವರದು ಮೊದಲ ಭಾಗದ 'ಯಯಾತಿ'. ಪುಂಡುವೇಷದಲ್ಲಿ ರಂಗಛಾಪನ್ನು ಸ್ಥಾಪಿಸುತ್ತಾ ಬಂದುದರಿಂದಲೇ ಇರಬೇಕು, ಯಯಾತಿಯ ಪ್ರವೇಶದಿಂದಲೇ ಪ್ರೇಕ್ಷಕರೊಳಗೆ ಪ್ರಸಂಗ ಇಳಿಯಲು ಆರಂಭವಾಗುತ್ತದೆ. ಹದಗೊಂಡು ಪಕ್ವವಾದ ಪಾತ್ರ ವಿನ್ಯಾಸಗಳ ರಚನೆಗಳು ಸುರತ್ಕಲ್ ಮೇಳದ ಕೊಡುಗೆ. ಎಲ್ಲರೊಂದಿಗೆ ಬೆರೆಯುತ್ತಾ, ಅರ್ಥ-ವೇಷಗಳನ್ನು ನೋಡುತ್ತಾ, ಎಲ್ಲೂ ಅವರಂತಾಗದೆ ಸ್ವ-ರೂಪಿತವಾದ ಪಾತ್ರ ವೈಶಿಷ್ಟ್ಯವನ್ನು ಸ್ಥಾಪಿಸಿದ್ದಾರೆ.

“ಸಾದ್ವಿ ಸದಾರಮೆ, ಕಡುಗಲಿ ಕುಮಾರ ರಾಮ, ಬಪ್ಪನಾಡು ಕ್ಷೇತ್ರ ಮಹಾತ್ಮೆ, ಶನೀಶ್ವರ ಮಹಾತ್ಮೆ, ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಸತಿ ಶೀಲವತಿ, ತುಳುನಾಡ ಬಲಿಯೇಂದ್ರ..'” ಪ್ರಸಂಗಗಳು ಸುರತ್ಕಲ್ ಮೇಳಕ್ಕೆ ತಾರಾಮೌಲ್ಯ ತಂದವುಗಳು. ಶೇಣಿಯವರ ನೆರಳಿನಲ್ಲಿ ಬೆಳೆದ ಶಿವರಾಮರ 'ಬಪ್ಪ' ಪಾತ್ರವು ವರ್ತಮಾನದಲ್ಲೂ ಪ್ರಸ್ತುತ. ಶೇಣಿಯವರನ್ನು ನೆನಪಿಸುವ ಅಭಿವ್ಯಕ್ತಿ. ಹಾಗಾಗಿ ಜೋಗಿಯವರು ಕಾಲಘಟ್ಟಗಳ ನಡುವಿನ ಸೇತು.  

'ಹಿರಣ್ಯಾಕ್ಷ, ರಕ್ತಬೀಜ, ಇಂದ್ರಜಿತು, ಭಾನುಗೋಪ, ಹಿರಣ್ಯಕಶ್ಯಪು, ರಾವಣ, ದುರ್ಜಯ..' ಪಾತ್ರಗಳ ನಡೆ, ಅರ್ಥಗಾರಿಕೆಗಳಲ್ಲಿ ಭಿನ್ನ ಅಭಿವ್ಯಕ್ತಿ. ಕೆಲವೊಮ್ಮೆ ವಾಕ್ಯಗಳನ್ನು ಪೂರ್ಣಮಾಡುತ್ತಾ, ಕೆಲವೊಮ್ಮೆ ಅಲ್ಲಲ್ಲಿ ಅರ್ಧವಿರಾಮಗಳನ್ನು ಹಾಕಿಕೊಳ್ಳುತ್ತಾ, ಕೆಲವೊಮ್ಮೆ ಅಪೂರ್ಣ ಎಂದು ಭಾಸವಾಗುವ ಪದಪುಂಜಗಳ ಅರ್ಥಗಾರಿಕೆಯು 'ಜೋಗಿ ಸ್ಟೈಲ್' ಎಂದೇ ಬಿಂಬಿತವಾಗಿದೆ. ತೀರಾ ಸರಳವಾಗಿ ಕಂಡರೂ ಅನುಕರಣೆಗೆ ಸಿಗದ ಪದಸರಣಿ, ವಾಕ್ಯಸರಣಿ. ಸಿಕ್ಕರೂ ಅದು ಜೋಗಿಸ್ಟೈಲಿನಿಂದ ಕಳಚಿಕೊಳ್ಳದಷ್ಟು ಬಂಧ.

ಪೌರಾಣಿಕ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸುವ ಕಲಾವಿದರು ತುಳು ಪ್ರಸಂಗಗಳಲ್ಲಿ ಹಿಂಜರಿಯುತ್ತಾರೆ. ಅದು ತುಳು ಭಾಷೆಯ ಹಿಡಿತದ ಸಮಸ್ಯೆ. ತುಳುವಿನೊಂದಿಗೆ ಕನ್ನಡವನ್ನು ಬೆರೆಸಿ ಮಾತನಾಡುವುದು ತುಳುವಲ್ಲ. ನಮ್ಮ ವಾಹಿನಿಗಳ 'ರಸರುಚಿ' ಕಾರ್ಯಕ್ರಮದಂತಾಗುತ್ತದೆ! ಭಾಷಾಸೌಂದರ್ಯಕ್ಕೆ ಪರ್ಯಾಯ ಪದ ರಾಮದಾಸ ಸಾಮಗರು. ಇವರ ಮತ್ತು ಹಿರಿಯ ಸಹ ಕಲಾವಿದರ ಅರ್ಥಗಾರಿಕೆಯ ಪ್ರಭಾವಗಳಿಂದಾಗಿ ಜೋಗಿಯವರ ತುಳು ಪ್ರಸಂಗಗಳ ಪಾತ್ರಗಳೆಲ್ಲವೂ ಮೆಚ್ಚುಗೆ ಪಡೆದುವು.  

ಮೇಳದ ಔನ್ನತ್ಯದಿಂದ ಕಲಾವಿದರು ಬೆಳಗುವುದು ಒಂದು. ಕಲಾವಿದರ ಔನ್ನತ್ಯದಿಂದ ಮೇಳವು ವಿಜೃಂಭಿಸುವುದು ಇನ್ನೊಂದು. ಸುರತ್ಕಲ್ ಮೇಳದ ಯಶದ ಹಿಂದೆ ಕಲಾವಿದರ ಕೊಡುಗೆ ಅನನ್ಯ. ಇಲ್ಲಿ ಕೊಡುಗೆ ಎನ್ನುವುದಕ್ಕೆ ಮೇಳನಿಷ್ಠತೆಯೇ ಮಾನದಂಡ. ಮೇಳನಿಷ್ಠತೆಯು ಹೊಟ್ಟೆಪಾಡಿನದ್ದಲ್ಲ. ಅದು ಮನದ ಒಂದು ಸ್ಥಿತಿ. ಯಾರಲ್ಲಿ ಇಂತಹ ಸ್ಥಿತಿಯ ತೇವ ಆರುವುದಿಲ್ಲವೋ ಆತ ಕಲಾಯಾನದಲ್ಲಿ ಸೋಲುವುದಿಲ್ಲ. ಕಲೆಯೇ ಆತನ ಹೊಟ್ಟೆಯನ್ನು ತಂಪಾಗಿಸುತ್ತದೆ. ಜೋಗಿಯವರಲ್ಲಿರುವ ಮೇಳನಿಷ್ಠೆಯ ಸ್ವ-ಭಾವಗಳು ಎತ್ತರಕ್ಕೆ ಏರಿಸಿದೆ.

ಹರಿದು ಬಂದ ಕಾಲಘಟ್ಟಗಳಿಗೆ ಜೋಗಿ ಸಾಕ್ಷಿಯಾಗುತ್ತಾರೆ. ಹಲವಾರು ಉದ್ಧಾಮರ ರಂಗಾಭಿವ್ಯಕ್ತಿಯ ಮನಸ್ಸಾಗಿದ್ದಾರೆ. ರಂಗಪಲ್ಲಟಗಳನ್ನು ನೋಡುತ್ತಾ, ಅದಕ್ಕೆ ಸಿಲುಕದೆ ನಿಜಾರ್ಥದ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ಮಾಗಿನ ಅನುಭವದ ಮುಂದೆ ಸೊಂಟತ್ರಾಣ, ವಯೋಮಾನ ಗೌಣ ಎನ್ನುವುದನ್ನು ಸ್ಥಾಪಿಸಿದ್ದಾರೆ.

ತಲೆಮಾರು ಬದಲಾಗಿದೆ. ಯುವಕರ ಪ್ರವೇಶವಾಗಿದೆ. ಯುವಕರ ಮಧ್ಯೆ ಜೋಗಿಯವರಿಗೆ  ಯುವಕರಾಗುವ ಮನಸ್ಸಿದೆ. ಬೀಸುಹೆಜ್ಜೆಗಳು ತಾವೇ ನಿಯಂತ್ರಿತವಾಗಿವೆ. ಒಂದು ಕಾಲಘಟ್ಟದಲ್ಲಿ ಬೀಸುಹೆಜ್ಜೆಗಳಿಗೆ ಪ್ರಶಂಸೆ ಮಾಡಿದ ಪ್ರೇಕ್ಷಕ ಈಗ ಮೌನ. ಬದುಕಿನ ಮುಕ್ಕಾಲು ಭಾಗ ದಾಟಿದ್ದಾರೆ ಎನ್ನುವ ಮನಃಸ್ಥಿತಿ ಪ್ರೇಕ್ಷಕರಿಗೂ ಗೊತ್ತಿದೆ. ರಂಗಕ್ಕೂ ಗೊತ್ತಿದೆ. ಉತ್ಸಾಹದ ಮನೋವೇಗವೇ ವೇಗವನ್ನು ನಿಯಂತ್ರಿಸಿದೆ. ಇಂತಹ ಮನಃಸ್ಥಿತಿಯಲ್ಲೂ ಜೋಗಿಯವರ ವೇಷಗಳು ಯೌವನದತ್ತ ಇಣುಕುತ್ತಿರುತ್ತವೆ. ಚಿಕ್ಕ ಪಾತ್ರಗಳನ್ನು ನಿರ್ವಹಿಸಿದರೂ ಜೋಗಿಯಂತಹ ಹಿರಿಯರು ಬಣ್ಣದ ಮನೆಯಲ್ಲಿ ಬೇಕು, ರಂಗವೂ ಅಪೇಕ್ಷಿಸುತ್ತದೆ.

ಕಲಾವಿದ ಎಷ್ಟು ವರುಷ ಮೇಳದ ತಿರುಗಾಟ ಮಾಡಿದ ಎನ್ನುವ ಲೆಕ್ಕವು ಬಯೋಡಾಟ ಬರೆಯಲು ಆದೀತು! ಆದರೆ ಮಾಡಿದ ತಿರುಗಾಟದಲ್ಲಿ ಆತನೊಳಗೆ 'ಯಕ್ಷಗಾನ'ವು ಎಷ್ಟು ಇಳಿದಿದೆ ಎನ್ನುವ ಲೆಕ್ಕಣಿಕೆಯಲ್ಲಿ 'ಸಾಧನೆ'ಯು ಗೌಪ್ಯವಾಗಿ ಮುದುಡಿರುತ್ತದೆ. ಅದೀಗ ಚಿಪ್ಪಿನಿಂದ ಹೊರಬಂದಿದೆ. ರಾಜ್ಯ ಸರಕಾರದ ಕದ ತಟ್ಟಿದೆ. 'ರಾಜ್ಯೋತ್ಸವ ಪ್ರಶಸ್ತಿ' ಬಾಗಿನ ತಂದುಕೊಟ್ಟಿದೆ.

(ಚಿತ್ರಗಳು : ರಾಮ್ ನರೇಶ್ ಮಂಚಿ)