Sunday, January 3, 2010

’ಹಿರಿಯಣ್ಣ’ನ ಒಡನಾಟದ ನೆನಪು (ಕಂತು-೨)

ನಮ್ಮ ಹವ್ಯಾಸಿ ಚೌಕಿಯನ್ನೊಮ್ಮೆ ನೋಡುವಾ.

ಇಂದಿನ ಆಟದಂದು ನಿನ್ನೆಯ-ಮೊನ್ನೆಯ ಆಟದ ಸುದ್ದಿಯನ್ನೋ, ವಿಕಾರಗಳನ್ನೋ, ಪಾತ್ರಧಾರಿಗಳ ನಿಂದೆಯನ್ನೋ ಮಾಡುತ್ತಾ ತಮ್ಮನ್ನು ತಾವೇ ಉದ್ಘಾಟಿಸಿಕೊಳ್ಳುವ 'ಪತನಸುಖಿ' ಕಲಾವಿದರು ಎಷ್ಟಿಲ್ಲ? ನಾಳೆಯ ಆಟದ ಬಗ್ಗೆ, ಅವರು ನೀಡುವ ಸಂಭಾವನೆ ಬಗ್ಗೆ, ಅಲ್ಲಿನ ವ್ಯವಸ್ಥೆಗಳ ಕುರಿತು ವಿಮರ್ಶೆ ನಡೆಯುತ್ತದೇ ವಿನಾ, ಇಂದು ನಡೆಯುತ್ತಿರುವ ಪ್ರದರ್ಶನದ ಕುರಿತಾಗಿ ಯಾರೂ ಮಾತನಾಡುವುದಿಲ್ಲ. ಪೂರ್ವಸಿದ್ಧತೆಯಂತೂ ಇಲ್ಲವೇ ಇಲ್ಲ.

ಇಂತಹ ಚೌಕಿಯಲ್ಲಿ ಚನಿಯ ನಾಯ್ಕರು 'ಅವರಿಗೇ ಮೀಸಲಾದ ಜಾಗದಲ್ಲಿ' ಕುಳಿತು ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚೆಂದರೆ ಒಂದು ಕಿರುನಗೆ. ಅವರಿಗೆ ಮತ್ತೂ ಅಸಹನೆಯಾದರೆ, ತಾವು ನಂಬಿದ ಆಪ್ತರನ್ನು ಹತ್ತಿರ ಕುಳ್ಳಿರಿಸಿಕೊಂಡು ವೀಳ್ಯ ಮೆಲ್ಲುತ್ತಾ ಇರುವುದು ನಾಯ್ಕರದೇ ಸ್ಟ್ರೈಲ್.

ಶ್ವೇತವಸ್ತ್ರಧಾರಿಯಾದ ನಾಯ್ಕರು ಕೆಂಪು ಯಾ ಹಸಿರು ಶಾಲನ್ನು ಹೆಗಲಿಗೇರಿಸಿ, ಕಪ್ಪಂಚಿನ ಚಷ್ಮಾವನ್ನು ಧರಿಸಿ, ಕೆಂಪು ತಿಲಕವಿಟ್ಟು ರಂಗದಲ್ಲಿ ಕುಳಿತಾಗಲೇ 'ಅವ್ಯಕ್ತ ಶಿಸ್ತು' ಆವರಿಸಿಬಿಡುತ್ತದೆ. (ಶೇಣಿಯವರು ಅರ್ಥಗಾರಿಗೆ ಬಂದಾಗ ಉಂಟಾಗುತ್ತಿದ್ದಂತೆ!) ಆ ನಂತರದ ಆಟದ ಕಳೆಯೇ ಬೇರೆ. ಇದು ಅನುಭವವೇದ್ಯ.

ಪೆರಾಜೆಯ ಯಕ್ಷಗಾನ ಇತಿಹಾಸದಲ್ಲಿ ಚನಿಯ ನಾಯ್ಕರ ಹೆಸರು ಅಜರಾಮರ. ಸುಮಾರು ಏಳರ ದಶಕದಲ್ಲಿ ಇವರ ಸಮರ್ಥ ನಿರ್ದೇಶನ ಮತ್ತು ಪ್ರಕಾಶ್ಚಂದ್ರ ರಾವ್ ಬಾಯಾರು ಇವರ ಗುರುತ್ವದಲ್ಲಿ ರೂಪುಗೊಂಡ ತಂಡಗಳ ಪ್ರದರ್ಶನ ಮತ್ತು ಅವು ಬಾಚಿದ ಪುರಸ್ಕಾರಗಳು ಕಾಲದ ದಾಖಲೆಗಳು. ಮತ್ತೆ ಪುನಃ 87-88ರ ಸುಮಾರಿಗೆ ಚಿಗುರೊಡೆದು ಗಿಡವಾಗಿತ್ತು. ಆದರೆ ಗಿಡದ ಆರೋಗ್ಯ ಮಾತ್ರ ಮೊದಲಿನಂತಿರಲಿಲ್ಲ!

ಚನಿಯರು ಅಜಾತ ಶತ್ರು. ಅವರು ಪೆರಾಜೆಯಲ್ಲಿ ಬಸ್ಸಿಳಿದು ಹೋಟೆಲ್ ಬಾಬಣ್ಣದ ಹೋಟೆಲಿನಲ್ಲಿ ಚಹಾ ಕುಡಿದಾದ ಬಳಿಕವೇ ಮುಂದಿನ ಪ್ರಯಾಣ. ನಮ್ಮ ಮನೆಗೆ ಒಂದೂವರೆ ಕಿಲೋಮೀಟರ್ ದೂರವಷ್ಟೇ. ನಾಯಕರು ನಮ್ಮನೆಗೆ ತಲಪುವಾಗ ಭರ್ತಿ ಎರಡು ಗಂಟೆ! ಕಾರಣ, ಅವರನ್ನು ಮಾತನಾಡಿಸುವ, ಅವರಿಗೆ ಚಹ-ಬೀಡಿ ನೀಡಿ ಗೌರವಿಸುವ ಅಭಿಮಾನಿಗಳಿದ್ದರು.

ಪೆರಾಜೆಯಲ್ಲಿ ನಾಯ್ಕರ ಹೆಸರು, ಅವರ ಭಾಗವತಿಕೆ ಮನೆಮಾತು. ಒಪ್ಪಿಕೊಂಡ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರು. ಅಸೌಖ್ಯದಿಂದ ಒಂದು ಬರಲಾಗದಿದ್ದರೆ ಊರಿನವರಿಗೆ ಏನೋ ಕಳಕೊಂಡ ಭಾವ. ಹೀಗಾದಾಗ ಇನ್ನೊಂದು ದಿವಸ ಬಂದು, ಅಲ್ಲಿನ ಸಂಘದ ಕೆಲವರ ಮನೆಗೆ ಹೋಗಿ ಚಹಾ ಕುಡಿದು, ಮಾತನಾಡಿಸುವ ದೊಡ್ಡಗುಣ.
(ಮುಂದಿನ ಕಂತಲ್ಲಿ ಮುಂದುವರಿಯುವುದು)

No comments:

Post a Comment