Tuesday, April 21, 2026
ʼಅಪರಂಜಿʼಯ ಬಿಡುಗಡೆ.
ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಇವರ ಪ್ರಕಾಶನದಲ್ಲಿ ಹಿರಿಯ ಕಲಾವಿದ, ನಿವೃತ್ತ ಅಂಚೆಮಾಸ್ತರ್, ಪತ್ರಕರ್ತ, ಕೃಷಿಕ, ಲೇಖಕ, ಪ್ರಸಂಗಕರ್ತ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ-ಕೃತಿ ʼಅಪರಂಜಿʼಯ ಬಿಡುಗಡೆ. ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಅನಾವರಣಗೊಳಿಸಿದ ಸಂದರ್ಭ. ಕೋಟೂರು ನೆಕ್ರಂಪಾರೆ ʼಸ್ಕಂದ ಪ್ಲಾಸ್ಟಿಕ್ʼ ಉದ್ಯಮದ ಆವರಣದೊಳಗೆ ಕಾರ್ಯಕ್ರಮದ ಸಂಪನ್ನಗೊಂಡಿತು.
Monday, April 20, 2026
ʼಅಡ್ಕ ವಚೋಹಾಸʼ - ʼಅಪರಂಜಿʼ
ಯಕ್ಷಗಾನದ ಹಿರಿಯ ವೇಷಧಾರಿ, ಅರ್ಥದಾರಿ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ ಇವರ ಅಭಿನಂದನಾ ಗ್ರಂಥ ʼಅಡ್ಕ ವಚೋಹಾಸʼವು 13-5-2016ರಂದು ಪ್ರಕಾಶಗೊಂಡಿತು. ಇವರ ಅಳಿಯ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ ಕೃತಿ ʼಅಪರಂಜಿʼಯು 19-4-2026ರಂದು ಬೆಳಕು ಕಂಡಿತು. ಎರಡು ಕೃತಿಗಳ ಸಂಪಾದಕನಾಗಿ ತೊಡಗಿಸಿಕೊಳ್ಳುವ ಅವಕಾಶವನ್ನು ಕೃತಿಗಳ ಪ್ರಕಾಶನ ಸಂಸ್ಥೆ ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಒದಗಿಸಿದ್ದರು. ಎರಡೂ ಕೃತಿಗಳನ್ನು ಮೈತುಂಬಿಸಿದ ಯಕ್ಷಗಾನದ ಸಹೃದಯಿ ಹಿರಿಯರು, ಅಡ್ಕ ಹಾಗೂ ಪೆರಡಂಜಿ ಕುಟುಂಬಗಳ ಬಂಧುಗಳಿಗೆ ಕೃತಜ್ಞತೆಗಳು.
ಅಭಿನಂದನೆ ಪಡೆದ ಖುಷಿ.
ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಇವರ ಪ್ರಕಾಶನದಲ್ಲಿ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ-ಕೃತಿ ʼಅಪರಂಜಿʼಯ ಸಂಪಾದಕನಾಗುವ ಅವಕಾಶ ಪ್ರಾಪ್ತವಾಗಿತ್ತು. ಅನ್ಯಾನ್ಯ ಕಾರಣಗಳಿಂದ ಪ್ರಕಟಣೆಯ ಕಾರ್ಯಕ್ಕೆ ಸ್ವಲ್ಪ ಹೆಚ್ಚು ಕಾಲಾವಕಾಶ ಬೇಕಾಗಿತ್ತು. 19-4-2026ರಂದು ಕೃತಿ ಅನಾವರಣಗೊಂಡಿತು. ಈ ಸಂದರ್ಭದಲ್ಲಿ ಸಂಪಾದಕನ ನೆಲೆಯಲ್ಲಿ ಅಭಿನಂದನೆ ಪಡೆದ ಖುಷಿ. ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದ ಧನ್ಯತೆ. (ಚಿತ್ರಗಳು : ಶ್ರೀ ಗೋವಿಂದ ಬಳ್ಳಮೂಲೆ)
ಚಿತ್ರಕಲೆಯ ಸೊಗಸುಗಾರಿಕೆ.
ದಿನಾಂಕ 19-4-2026ರಂದು ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಇವರ ದಶಮಾನ ಸಂಭ್ರಮದ ಸಮಾರಂಭ. ಈ ಸಂದರ್ಭದಲ್ಲಿ ಕು. ಶ್ರೀಲಕ್ಷ್ಮೀ ಕುಳೂರು ಇವರ ಚಿತ್ರಕಲೆಯ ಸೊಗಸುಗಾರಿಕೆ. ವೇದಿಕೆಯಲ್ಲಿ ಕು.ಸಾಧ್ವಿಕೃಷ್ಣ ವಯನಾಡು ಹಾಗೂ ಕು.ಅನ್ವಿತಾ ಪೆರಡಂಜಿ ಇವರ ಭರತನಾಟ್ಯದ ಹಿನ್ನೆಲೆಯ ಸಾಹಿತ್ಯಕ್ಕೆ ಅನುಸಾರವಾಗಿ ದಾರದ ಮೂಲಕ ಮೂಡಿಸಿದ ಚಿತ್ರ. ಹಿರಿಯ ಕಲಾವಿದ ಶ್ರೀ ನೀರ್ನಳ್ಳಿ ಗಣಪತಿ ಅವರ ಶಿಷ್ಯೆ. ಶ್ರೀಲಕ್ಷ್ಮೀಯವರ ಕಲೆಗೆ ಸಭಿಕರಿಂದ ಪ್ರಶಂಸೆಗಳ ಮಹಾಪೂರ.. ಅಭಿನಂದನೆಗಳು ಶ್ರೀಲಕ್ಷ್ಮೀ.
(ಚಿತ್ರ : ಶ್ರೀ ಗೋವಿಂದ
ಬಳ್ಳಮೂಲೆ)
Monday, March 30, 2026
‘ಹಸ್ತಕಾಕೃತಿಯ ಸ್ಮೃತಿ-ಕೃತಿಗಳು ಪ್ರಕಟವಾಗಬೇಕು' : ಕಲಾವಿದ, ಲೇಖಕ : ನಾ. ಕಾರಂತ ಪೆರಾಜೆ
“ಪುಂಡಿಕಾಯಿ ಕೃಷ್ಣ ಭಟ್ಟರು ಹಳೆ ತಲೆಮಾರಿನ ಅಪ್ಪಟ ಮದ್ಲೆಗಾರ. ಪ್ರಾತಃಸ್ಮರಣೀಯ ಕುದ್ರೆಕೂಡ್ಲು ರಾಮ ಭಟ್ಟರ ಶಿಷ್ಯರಾಗಿ, ಸಂಪ್ರದಾಯದ ಚೌಕಟ್ಟನ್ನು ವೃತ್ತಿಯಲ್ಲಿ ಕಾಣಿಸಿದವರು. ಮದ್ದಳೆಯಲ್ಲಿ ಅವರದು ಶುದ್ಧ ಪಾಠ. ಯಾವುದೇ ಆರ್ಥಿಕ ಅಪೇಕ್ಷೆಯಿಲ್ಲದೆ ಶಿಷ್ಯರನ್ನು ರೂಪಿಸಿದ ಗುರು. ಮುಮ್ಮೇಳ ಹಾಗೂ ಹಿಮ್ಮೇಳದ ಅಪಸವ್ಯಗಳನ್ನು ಸಾತ್ವಿಕವಾಗಿ ಖಂಡಿಸುತ್ತಿದ್ದರು. ವಿವಿಧ ಮೇಳಗಳಲ್ಲಿ ನಾಲ್ಕು ದಶಕ ವ್ಯವಸಾಯ ಮಾಡಿದ್ದರು. ವೈಯಕ್ತಿವಾಗಿ ಬಡತನವಿದ್ದರೂ, ಯಕ್ಷಗಾನವನ್ನು ಶ್ರೀಮಂತಗೊಳಿಸಿದ ಕಲಾವಿದ.” ಎಂದು ಕಲಾವಿದ, ಲೇಖಕ ಶ್ರೀ ನಾ. ಕಾರಂತ ಪೆರಾಜೆ ಹೇಳಿದರು.
ಅವರು ಕಾಸರಗೋಡು ಜಿಲ್ಲೆಯ ಕುಂಟಾರು ದೇವಳದ ವಠಾರದಲ್ಲಿ (29-3-2026) ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ, ಕೂಡ್ಲು ಇದರ 'ರಜತ ರಂಗ'ದ ಹನ್ನೊಂದನೇ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಕೀರ್ತಿಶೇಷ ಪುಂಡಿಕಾಯಿ ಕೃಷ್ಣಭಟ್ಟರ ಸಂಸ್ಮರಣೆಯನ್ನು ಮಾಡುತ್ತಾ, “ಅಭಿನಂದನ ಹಾಗೂ ಸ್ಮೃತಿ ಕೃತಿಗಳು ಯಕ್ಷಪ್ರಿಯರಿಗೆ ಒದಗುತ್ತಿಲ್ಲ. ಹಾಗಾಗಿ ಕೀರ್ತಿಶೇಷ ಕಲಾವಿದರ ಸಂಕ್ಷಿಪ್ತ ಪರಿಚಯವುಳ್ಳ ಹಸ್ತಕಾಕೃತಿಯ ಪುಸ್ತಿಕೆಗಳು ಪ್ರಕಟವಾಗಬೇಕು” ಎಂದರು
ಸಮಾರಂಭದಲ್ಲಿ ಉಪಸ್ಥಿತರಿದ್ದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರು ಮಾತನಾಡಿ, “ವಿವಿಧ ರಂಗುರಂಗಿನ ಮಾಧ್ಯಮಗಳ ಭರಾಟೆಯಲ್ಲಿ ಕನ್ನಡ ಬಾಷೆಯ ಉಳಿವಿಗೆ ಯಕ್ಷಗಾನದ ಕೊಡುಗೆ ಗುರುತರ” ಎಂದರು. ವೇದಿಕೆಯಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು, ಶ್ರೀ ಪದ್ಮನಾಭ ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪುಂಡಿಕಾಯಿ ಕೃಷ್ಣ ಭಟ್ಟರ ಸುಪುತ್ರ ಶ್ರೀ ರಾಜೇಂದ್ರ ಭಟ್ಟರನ್ನು ಗೌರವಿಸಲಾಯಿತು. ರಜತ ರಂಗದ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ತಂತ್ರಿಯವರು ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮವನ್ನು ನಿರ್ವಹಿಸಿದರು.
ಆರಂಭದಲ್ಲಿ ಕು. ಸಂಹಿತಾಲಕ್ಷ್ಮೀ ಇವರ ಪ್ರಾರ್ಥನೆಯಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಯಕ್ಷಗಾನ ತರಬೇತಿ ಕೇಂದ್ರದ ಶ್ರೀ ಸುರೇಶ್ ಮಣಿಯಾಣಿ ಸ್ವಾಗತಿಸಿದರು. ಅಧ್ಯಕ್ಷ ಶ್ರೀ ಗೋಪಾಲಕೃಷ್ಣ ಬಲ್ಯಾಯರು ವಂದಿಸಿದರು. ಒಟ್ಟೂ ಕಾರ್ಯಕ್ರಮವನ್ನು ಶ್ರೀ ಸತ್ಯನಾರಾಯಣ ತಂತ್ರಿಯವರು ಪ್ರಾಯೋಜಿಸಿದ್ದರು.
ಕಾರ್ಯಕ್ರಮದ ಅಂಗವಾಗಿ 'ಸುಧನ್ವ ಮೋಕ್ಷ' ಪ್ರಸಂಗದ ತಾಳಮದ್ದಳೆ ಸಂಪನ್ನಗೊಂಡಿತು. ಕಲಾವಿದರಾಗಿ ಶ್ರೀಗಳಾದ ರಾಮಪ್ರಸಾದ್ ಮಯ್ಯ ಕೂಡ್ಲು (ಭಾಗವತರು), ಲಕ್ಷ್ಮೀಶ ಬೆಂಗ್ರೋಡಿ (ಮದ್ದಳೆ), ರಾಜೇಂದ್ರ ಭಟ್ ಪುಂಡಿಕಾಯಿ (ಚೆಂಡೆ); ಜಬ್ಬಾರ್ ಸಮೋ (ಅರ್ಜುನ), ನಾ. ಕಾರಂತ ಪೆರಾಜೆ (ಸುಧನ್ವ), ಗೋಪಾಲಕೃಷ್ಣ ನಾಯಕ್ ಸೂರಂಬೈಲು (ಕೃಷ್ಣ) - ಭಾಗವಹಿಸಿದ್ದರು.
// ಪ್ರಕಟಣೆಯ ಕೃಪೆಗಾಗಿ //







