Wednesday, November 1, 2023

‘ಹಾಸ್ಯವೂ ಒಂದು ರಸ’ : ಪೆರುವಡಿ ನಾರಾಯಣ ಭಟ್ - ನೆನಪು



    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜಯ್ಯ ಹೆಗ್ಗಡೆಯವರು ಧರ್ಮಾಧಿಕಾರಿಗಳಾಗಿದ್ದ ಸಮಯ. ಧರ್ಮಸ್ಥಳ ಮೇಳದ ಪ್ರದರ್ಶನವೊಂದರಲ್ಲಿ ಡಾ. ಶಿವರಾಮ ಕಾರಂತರ ಉಪಸ್ಥಿತಿ. ಪ್ರಸಂಗ 'ಚೂಡಾಮಣಿ'. ನಾಟ್ಯಾಚಾರ್ಯ ಕುರಿಯ ವಿಠಲ ಶಾಸ್ತ್ರಿಗಳಹನುಮಂತನ’ ಪಾತ್ರ. ಖುಷಿಯಾದ  ಕಾರಂತರು 'ಆಟವನ್ನು ಸಿನೆಮಾ ಮಾಡೋಣ' ಎಂದರಂತೆ. ಹೆಗ್ಗಡೆಯವರ ಸಮ್ಮತಿ. ಶೂಟಿಂಗಿಗೆ ಹಗಲು ಸೂಕ್ತ ಸಮಯ. ಕಲಾವಿದರು ಒಲ್ಲದ ಮನಸ್ಸಿನಿಂದ ಒಪ್ಪಿ ಸಹಕರಿಸಿದರು. ಮೊದಲ ದಿನ ಆರ್ಧ ಚಿತ್ರೀಕರಣ. ಮುಂದಿನದು ಮೂಡುಬಿದಿರೆಯಲ್ಲಿ ಎಂದು ನಿಗದಿಯಾಯಿತು. ಹಗಲು ವೇಷ ನಿರ್ವಹಿಸಲು ಕಲಾವಿದರ ಅಸಮ್ಮತಿ. ಹಾಗಾಗಿ ಶೂಟಿಂಗ್ ಅರ್ಧದಲ್ಲಿ ನಿಂತುಬಿಟ್ಟಿತು. ಪ್ರಸಂಗದಲ್ಲಿ ನಾನೂ ಪಾತ್ರ ವಹಿಸಿದ್ದೆ. ಕಾರಂತರು ಚೆನ್ನಾಗಿ ನೋಡಿಕೊಂಡಿದ್ದರು”, ಎಂದು ಹಾಸ್ಯಗಾರ ಪೆರುವಡಿ (ಪೆರ್ವಡಿ, ಪೆರುವೋಡಿ) ನಾರಾಯಣ ಭಟ್ಟರು ತಮ್ಮ ನೆನಪಿನ ಸುರಳಿಯನ್ನೊಮ್ಮೆ ಬಿಚ್ಚಿದ್ದರು.

 ಉಭಯತಿಟ್ಟುಗಳಲ್ಲಿ 'ರಾಜಾಹಾಸ್ಯ' ಎಂಬ ನೆಗಳ್ತೆಯನ್ನು ಪಡೆದ ಪೆರುವಡಿ ನಾರಾಯಣ ಭಟ್ಟರು ಮಾತಿಗಿಳಿದರೆ ಒಂದು ಕಾಲಘಟ್ಟದ ಯಕ್ಷಗಾನದ ಬದುಕು, ಸಾಮಾಜಿಕ ಜವಾಬ್ದಾರಿ, ಕಲಾವಿದನ ಹೊಣೆ.. ಹೀಗೆ ಮಿಂಚುತ್ತಿತ್ತು. 'ಹಾಸ್ಯವೆಂದರೆ ವಿಕಾರವಲ್ಲ. ಅದೊಂದು ರಸ. ಅದನ್ನು ಕಲಾವಿದ ಅನುಭವಿಸಬೇಕು. ಕಲಾವಿದನ ಅಭಿವ್ಯಕ್ತಿಯಂತೆ ಪ್ರೇಕ್ಷಕನೂ ಅನುಭವಿಸಬೇಕು. ಯಕ್ಷಗಾನದ ಹಾಸ್ಯವೆಂದರೆ ನಕ್ಕು ನಲಿವ ಹಾಸ್ಯವಲ್ಲ. ಸಮಾಜದ ವಿಕಾರಗಳನ್ನು ಎತ್ತಿ ತೋರಿಸಿ, ಅದನ್ನು ತಿದ್ದುವ ಕೆಲಸವನ್ನೂ ಹಾಸ್ಯಗಾರ ಮಾಡಬೇಕಾಗುತ್ತದೆ' ಎನ್ನುತ್ತಿದ್ದರು.

ಪೆರುವಡಿಯವರ ತಿರುಗಾಟದ ಕಾಲದ ಸಾಮಾಜಿಕ ವ್ಯವಸ್ಥೆಗಳು ತಪ್ಪನ್ನು ಎತ್ತಿ ತೋರಿದಾಗ ಒಪ್ಪಿಕೊಳ್ಳುವ, ರಂಗದ ಅಭಿವ್ಯಕ್ತಿಯನ್ನು 'ಕಲೆ' ಎಂದು ಸ್ವೀಕರಿಸುವ ಮನಃಸ್ಥಿತಿಯಿತ್ತು. ಈಗ ಕಾಲ ಬದಲಾದುದೋ, 'ಬೌದ್ಧಿಕವಾಗಿ ಮುಂದುವರಿದ' ಫಲವೋ ಗೊತ್ತಿಲ್ಲ, ರಂಗದ ಅಭವ್ಯಕ್ತಿಗೆ ಜಾತಿಯನ್ನೋ, ಅಂತಸ್ತನ್ನೋ ಪೋಣಿಸುವ ವಿಪರೀತ ಸ್ಥಿತಿಯನ್ನು ಕಾಣಬಹುದು. ಪಾತ್ರವೊಂದು ಪ್ರೇಕ್ಷಕರ ಅಭಿರುಚಿಯಂತೆ, ಆಸಕ್ತಿಯಂತೆ ರಂಗದಲ್ಲಿ ಓಡಾಡುವಂತಹ ಪರೋಕ್ಷ ನಿಯಂತ್ರಣ.

 ಪೆರುವಡಿಯವರು ಹಾಸ್ಯಕ್ಕೆ ಗೌರವವನ್ನು ತಂದು ಕೊಟ್ಟವರು. ದಕ್ಷಾಧ್ವರ ಪ್ರಸಂಗದಲ್ಲಿ ಬರುವ 'ಬ್ರಾಹ್ಮಣ' ಅಭಿವ್ಯಕ್ತಿಯಲ್ಲಿ ಗೇಲಿಯಿಲ್ಲ, ಶ್ರೀ ರಾಮ ವನಗಮನ ಪ್ರಸಂಗದ 'ಗುಹ' ಪಾತ್ರವು ಜಾತಿಯನ್ನು ಲೇವಡಿ ಮಾಡುವುದಿಲ್ಲ. ಜರಾಸಂಧ ಪ್ರಸಂಗದ 'ಶೇಂದಿ ಮಾರಾಟಗಾರ' ಪಾತ್ರವು ಯಾವುದೇ ವರ್ಗವನ್ನು ನೋಯಿಸುವುದಿಲ್ಲ. ಆದರೆ ಪಾತ್ರದ ಸುತ್ತ ಮುತ್ತ ಇರುವ ವಿಕಾರಗಳನ್ನು ಎತ್ತಿ ತೋರಿಸುತ್ತಿದ್ದರು. ಹೀಗೆ ಮಾಡುತ್ತಿದ್ದಾಗಲೆಲ್ಲಾ ವಿಪರೀತದ ಸೋಂಕಿಲ್ಲ. ನಕ್ಕು ನಲಿಯುವುದಿಲ್ಲ!

'ಪಾಪಣ್ಣ ವಿಜಯ' ಪ್ರಸಂಗದ 'ಪಾಪಣ್ಣ' ಪಾತ್ರವು ಪೆರುವಡಿಯವರ ರಂಗಛಾಪನ್ನು ಎತ್ತರಕ್ಕೇರಿಸಿತು. ಹೆಸರಿನೊಂದಿಗೆ 'ಪಾಪಣ್ಣ ಭಟ್ರು' ಹೊಸೆಯಿತು. ಒಂದು ವರ್ಷವಲ್ಲ, ಹಲವು ಕಾಲ ಪ್ರಸಂಗವು ವಿಜೃಂಭಿಸಿತು. 'ಇದನ್ನು ಮೊದಲು ಆಡುವಾಗ ಹೆದರಿಕೆಯಿತ್ತು. ಪೌರಾಣಿಕ ಪ್ರಸಂಗವನ್ನು ಒಪ್ಪಿಕೊಂಡ ಕಲಾಭಿಮಾನಿಗಳು ಸಾಮಾಜಿಕ ಕಥೆಯನ್ನು ರಂಗದಲ್ಲಿ ಸ್ವೀಕರಿಸಬಹುದೇ? ಇದಕ್ಕಾಗಿ ಕಾಫಿ ಎಸ್ಟೇಟ್ನಲ್ಲಿ ಮೊದಲ ಪ್ರಯೋಗವನ್ನು ಮಾಡಿದೆವು. ಹತ್ತಾರು ಪ್ರದರ್ಶನವಾದ ಬಳಿಕ ಧೈರ್ಯ ಬಂತು' ಎಂದು ಪಾಪಣ್ಣನ ಬದುಕನ್ನು ಮುಂದಿಡುತ್ತಿದ್ದರು.

 ಪೆರುವಡಿಯವರದು ಸಹಜ ಹಾಸ್ಯ. ಕೃಷ್ಣಲೀಲೆ ಪ್ರಸಂಗದ 'ವಿಜಯ', ಕೃಷ್ಣಾರ್ಜುನ ಕಾಳಗದ 'ಮಕರಂದ', ದೇವ ದೂತ, ರಾಕ್ಷಸದೂತ.. ಹೀಗೆ ಪ್ರತೀ ಪಾತ್ರಗಳಿಗೂ ಪ್ರತ್ಯಪ್ರತ್ಯೇಕವಾದ ಅಭಿವ್ಯಕ್ತಿ. ರಂಗದಲ್ಲಿ ದೊರೆಯನ್ನೋ, ರಾಜನನ್ನೋ ಮೀರಿಸುವ ಆಳಲ್ಲ. ದೇವೇಂದ್ರನ ಸ್ಥಾನಗೌರವವನ್ನು ಅರಿತ ದೇವದೂತ. ನಾರದನಂತಹ ಭಕ್ತಿ ಹಿನ್ನೆಲೆಯ ಪಾತ್ರಗಳಲ್ಲಿ ಹಾಸ್ಯದ ಸೋಂಕಿಲ್ಲ. ಶ್ರೀದೇವಿಯಲ್ಲಿ ಸಂಧಾನಕ್ಕೆ ಬರುವ ಶುಂಭನ ಸಚಿವ 'ಸುಗ್ರೀವ' ಹಾಸ್ಯಗಾರನಾಗುವುದಿಲ್ಲ! ಹೀಗೆ ಒಂದಲ್ಲ ಒಂದು ಪಾತ್ರಗಳನ್ನು ಹಿಡಿದು ಮಾತನಾಡಿದರೆ ಪೆರುವಡಿಯವರ ಪಾತ್ರವೈಶಿಷ್ಟ್ಯದ ಪಾರಮ್ಯ ಅರ್ಥವಾಗುತ್ತದೆ.

 ಒಂದೆರಡು ವರುಷದ ಹಿಂದೆ ಪೆರುವಡಿಯವರು ತಮ್ಮ ಕಲಾವ್ಯವಸಾಯದ ದಿವಸಗಳನ್ನು ಮೆಲುಕು ಹಾಕುವಾಗ ಅವರ ವಯಸ್ಸು ಹಿಂದೋಡುತ್ತಿತ್ತು. 'ಔಚಿತ್ಯ ಪ್ರಜ್ಞೆಯ ಸುಳಿವಿಲ್ಲದ ಹಾಸ್ಯ ನಗೆಗೀಡು. ರಂಗಕ್ಕೆ ಅನ್ಯಾಯ. ಪರೋಕ್ಷವಾಗಿ ತನಗೆ ತಾನು ಮಾಡಿಕೊಂಡ ಅಪಮಾನ. ಪ್ರೇಕ್ಷಕರು ನಗುತ್ತಾರೆ ಎಂದು ತೋಚಿದ್ದನ್ನು ಗೀಚುವುದಲ್ಲ. ಹಾಸ್ಯಗಾರನ ಪ್ರವೇಶ ಯಾವಾಗ ಆಗುತ್ತೆ ಎಂದು ಸಭಿಕರು ಕಾಯುವಂತಹ  ಸ್ಥಿತಿಯನ್ನು ಹಾಸ್ಯಗಾರ ನಿರ್ಮಾಣ ಮಾಡಬೇಕು' ಎನ್ನುತ್ತಿದ್ದರು.

 ಪ್ರಸಿದ್ಧ ಪದ್ಯಾಣ ಮನೆತನ. 1927ರಲ್ಲಿ ಜನನ. ಆರರ ತನಕ ವಿದ್ಯಾಭ್ಯಾಸ.  ಸಂಕಯ್ಯ ಭಾಗವತರು ಮತ್ತು ಈಶ್ವರ ಭಾಗವತರು ಇವರ ಅಜ್ಜ. ಎಂಟನೇ ವರುಷದಿಂದ ತಾಳಮದ್ದಳೆಯಲ್ಲಿ ಭಾಗಿ. ಸ್ವಲ್ಪ ಸಂಸ್ಕೃತ ಅಭ್ಯಾಸ. ಕುರಿಯ ವಿಠಲ ಶಾಸ್ತ್ರಿಗಳ 'ಕೃಷ್ಣ' ಪಾತ್ರದಿಂದ ಪ್ರಭಾವಿ. ಪಾತ್ರದ ಗುಂಗು ಅಂಟಿತು. ಅದು ಬಿಡಿಸಲಾರದ ಅಂಟು. ಬಣ್ಣದ ಗೀಳು ಹೆಚ್ಚಾಯಿತು. ಮೇಳ ಕೈಬೀಸಿ ಕರೆಯಿತು. ಪಾರಂಪರಿಕವಾದ ಆರಂಭಿಕ ಕಲಿಕೆ. ಮುಂದೆ ದೇಹ, ಭಾಷೆ, ಶಾರೀರಗಳು ಹಾಸ್ಯ ರಸದ ಒತ್ತಿಗಿದ್ದುದರಿಂದ 'ಹಾಸ್ಯಗಾರ'ರಾದುದು ಇತಿಹಾಸ.

 ಶ್ರೀ ಧರ್ಮಸ್ಥಳ ಮೇಳದಿಂದ ವ್ಯವಸಾಯ. ಬದುಕಿಗಾಗಿ ಹಲವು ಮೇಳಗಳಿಗೆ 'ಜಂಪಿಂಗ್'. ಮುಂದೆ ಮೂಲ್ಕಿ ಮೇಳದ ಯಜಮಾನಿಕೆ. ಹಾಸ್ಯಗಾರ ಮಾತ್ರವಲ್ಲ, 'ಮೇಳದ ಯಜಮಾನ'ನೆಂಬ ಹೆಗ್ಗಳಿಕೆ. ಮನೆತನಕ್ಕೂ, ಕಲಾಭಿಮಾನಿಗಳಿಗೂ ಮಾನ. ಡಾ.ಶೇಣಿ ಗೋಪಾಲಕೃಷ್ಣ ಭಟ್ಟರಿಗೆ ಸಾಥ್ ಆಗಿದ್ದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಹಿರಿಯರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ. 'ಇವರ ಯಜಮಾನಿಕೆಯ ಮೂಲ್ಕಿ ಮೇಳದ ಅಂದಿನ ಆಟಗಳ ಸ್ವಾರಸ್ಯಗಳು, ಯಶಸ್ಸು, ಸಂಪಾದನೆ, ಕಲಾವಿದರನ್ನು ಗುರುತಿಸುವ ಪರಿಯನ್ನು ಕಂಡಾಗ ಯಕ್ಷಗಾನಕ್ಕಾಗ ಸಂಭ್ರಮದ ದಿನಗಳು. ಆರ್ಥಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಖುಷಿ ಕೊಟ್ಟ ದಿನಮಾನಗಳು' ಎಂದು ಹಿಂದೊಮ್ಮೆ ನೆನಪಿಸಿಕೊಂಡಿದ್ದರು, ಹಿರಿಯರಾದ ಪಾತಾಳ ವೆಂಕಟ್ರಮಣ ಭಟ್.

 ದೇಹ ಮಾಗಿತ್ತು. ರಂಗದಲ್ಲಿ ಭಾಗವಹಿಸಲು ವಯಸ್ಸು ಅಡ್ಡಿಯಾಗಿತ್ತು. ದೇಹ ಓಕೆ ಅಂದರೂ, ಮನಸ್ಸು ಮುಷ್ಕರ ಹೂಡುತ್ತಿತ್ತು. ಇವೆಲ್ಲಾ ಹತ್ತೋ ಹದಿನೈದೋ ವರುಷದ ಹಿಂದಿನ ದೇಹಸ್ಥಿತಿ. ತನುತಾಕತ್ತು ಇದ್ದಷ್ಟು ಕಾಲ ಸುತ್ತೆಲ್ಲಾ ನಡೆಯುವ ಪ್ರದರ್ಶನಗಳಿಗೆ ಭೇಟಿ ನೀಡುತ್ತಿದ್ದರು. ಪ್ರದರ್ಶನವನ್ನು ಆಸ್ವಾದಿಸುತ್ತಿದ್ದರು.  ಬಣ್ಣದ ಮನೆಗೆ ಹೋಗಿ ನೆನಪಿನ ಬುತ್ತಿಯನ್ನು 'ಅಗತ್ಯ ಬಿದ್ದರೆ' ಬಿಚ್ಚುತ್ತಿದ್ದರು. ತಾನು ನಿರ್ವಹಿಸುತ್ತಿದ್ದ ಪಾತ್ರಗಳು ರಂಗದಲ್ಲಿ ಇತರರಿಂದ ಕಳಪೆಯಾಗಿ ನಿರ್ವಹಿಸಲ್ಪಟ್ಟಾಗ ಮಮ್ಮಲ ಮರುಗಿದ್ದುಂಟು.

 ಹಾಸ್ಯಬ್ರಹ್ಮ ಪೆರುವಡಿ ನಾರಾಯಣ ಭಟ್ಟರಿಗೆ ಹಲವು ಪುರಸ್ಕಾರಗಳು ಪ್ರಾಪ್ತವಾಗಿವೆ. “ನನ್ನನ್ನು. ನನ್ನ ಹಾಸ್ಯವನ್ನು ಕಲಾಭಿಮಾನಿಗಳು ಸ್ವೀಕರಿಸಿದ್ದಾರಲ್ಲಾ, ಅದೇ ದೊಡ್ಡ ಪ್ರಶಸ್ತಿ. ಹಳಬರು ಸಿಕ್ಕಾಗಲೆಲ್ಲಾ ಅಂದಿನ ಅಭಿವ್ಯಕ್ತಿಯನ್ನು ನೆನಪಿಸಿ ಗಂಟೆಗಟ್ಟಲೆ ಮಾತನಾಡುತ್ತಾರಲ್ಲಾ.. ಇದಕ್ಕಿಂತ ದೊಡ್ಡ ಗೌರವ ಇನ್ನೇನು ಬೇಕು ಹೇಳಿ”, ಆಪ್ತರೊಂದಿಗೆ ಮನದ ಭಾವಕ್ಕೆ ಮಾತನ್ನು ನೀಡಿದ್ದುಂಟು.

ಪೆರುವಡಿಯವರು 31-10-2023ರಂದು ದೂರವಾದರು.

 ಹೊಸ ತಲೆಮಾರಿಗೆ ಅವರ ಪರಿಚಯ, ವೇಷದ ಸೊಗಸುಗಾರಿಕೆಯ ಸೊಬಗು ಅಷ್ಟೊಂದು ಗೊತ್ತಿರಲಾದರು. ಹಳೆ ತಲೆಮಾರಿನವರನ್ನು ಕೇಳೋಣವೋ, ಬಹುತೇಕರು ವಯೋಸಹಜವಾಗಿ ಮಾಗಿದ್ದಾರೆ. ಎತ್ತಿ ಹೇಳುವಂತಹ ದಾಖಲಾತಿಗಳು ಇಲ್ಲ. ಇದು ಪೆರುವಡಿಯವರಿಗೆ ಮಾತ್ರವಲ್ಲ, ಬಹುತೇಕ ಎಲ್ಲಾ ಹಿರಿಯರ ಕಲಾವಿದರಿಗೆ ವಿಷಾದವಾಗುವ ವಿಚಾರಗಳು. 

1 comment:

  1. ನಿಜವಾಗಿ ಕಾರಂತರೇ...🙏🙏🙏

    ದಿವಂಗತ ಹಾಸ್ಯಗಾರ ಪೆರುವಡಿ ನಾರಾಯಣಭಟ್ಟರ ಜೀವನವೇ ಸ್ವಚ್ಛ, ನಿರ್ಮಲ. ದುರಾಗ್ರಹದ ಸ್ಪರ್ಶವಿಲ್ಲದ ಅವಧೂತಜೀವನ ಆ ಪ್ರಾತಃಸ್ಮರಣೀಯರದ್ದು. ಹಾಗಿದ್ದ ಕಾರಣವೇ ಅವರು ದೀರ್ಘಾಯುಷಿಗಳಾದರು. ಅವರ ಜೀವನವೆಷ್ಟು ಸ್ವಚ್ಛ-ನಿರ್ಮಲವೋ ಅಷ್ಟೇ ಸ್ವಚ್ಛ-ನಿರ್ಮಲಗಳ ಆಕರ ಅವರ ವೇಷಗಳು. ಅವರ ವೇಷಗಳಲ್ಲಿ ವೇಷಾಂತರಂಗವು ಎದ್ದು ಕಾಣುತ್ತಿತ್ತು. ನಾ ಕಂಡಂತೆ ಅವರ ಭಾವಶುದ್ಧಿ, ಉಚ್ಚಾರಶುದ್ಧಿ ಅನುಸರಣೀಯ. ಅವರು ಅನುಭವಿಸಿದ ಜೀವನದ ಸಿಹಿ-ಕಹಿಗಳು ಅವರ ಪಾತ್ರಸಂದೇಶಗಳಲ್ಲಿ ತುಂಬಿತ್ತು. ಅದು ಆಗಿನವರಿಗೆ ಜೀವನಸಂದೇಶವಾಗಿಯೂ ಪರಿಣಮಿಸುತ್ತಿತ್ತು. ಜೀವತುಂಬಿದ ಪಾತ್ರಗಳು ಅವರದ್ದಾದ ಕಾರಣ ಆ ಪಾತ್ರಗಳು ಸಾಮಾಜಿಕಜೀವನಕ್ಕೆ ಜೀವ ತುಂಬುತ್ತಿತ್ತು. ಅಂಥಹ ಮಹಾಮಹಿಮರು ಒಂದೊಂದು ಯುಗಕ್ಕೆ ಒಬ್ಬೊಬ್ಬರೇ ಆಗಿ ಹೋಗುವುದಂತೆ..!!!

    ಏನು ಮಾಡುವುದು..!!! ಕಾಲದ ಗತಿ..!!! ಅದರೊಳಗೆ ಪ್ರತಿಜೀವಿಯ ಜೀವತಂತು..!!! ಆದರೆ ನಮ್ಮ ಸಾಧನೆ, ಸ್ವಚ್ಛನಡೆ, ಜನಾನುರಾಗ, ಕೀರ್ತಿಗಳೇ ಯಾವತ್ತೂ ಅಜರಾಮರ. ಆ ಅಮೂಲ್ಯವಾದ ಜೀವನಧರ್ಮಗಳು ಇತರರಿಗೆ ಆದರ್ಶವಾಗಿರುತ್ತದೆ ಎಂಬುದು ದಿವಂಗತ ಪೆರುವಡಿಯವರ ಜೀವನಧರ್ಮದಿಂದ ನಾವು ಕಲಿಯಬಹುದು.

    ವೇಷಾಂತರಂಗದಿಂದ ಯಕ್ಷಾಂತರಂಗಕ್ಕೆ ಪ್ರವೇಶಿಸಿದ ಆ ಮಹಾತ್ಮರಿಗೊಂದು ಗೌರವದ ಸಾವಿರದ ನಮನಗಳು..🙏🙏🙏🙏

    ReplyDelete