Friday, September 2, 2016

'ಬಪ್ಪ' ಸಾರಿದ ಸಹಿಷ್ಣುತೆ

                           Dr.Sheni Gopalakrihna Bhat (Bappa) and Vittal Gopalakrishna Joshi (usman)
         
              ಸುರತ್ಕಲ್ ಮೇಳದ ಉಚ್ಚ್ರಾಯ ಕಾಲದ ಪ್ರದರ್ಶನಗಳು ಯಕ್ಷಗಾನ ಕಂಡ ಅನನ್ಯತೆ. ನಗರದಿಂದ ಹಳ್ಳಿ ತನಕ ವ್ಯಾಪಿಸಿದ ಮೇಳದ ತಿರುಗಾಟಗಳು, ಹಳ್ಳಿ ಮಂದಿ ಮೇಳವನ್ನು ಸ್ವೀಕರಿಸಿದ ರೀತಿ, ಕಲಾವಿದರ ಸ್ಪಂದನ.. ಇವೆಲ್ಲಾ 'ಹೀಗೂ ಇತ್ತೇ' ಎಂದು ಬೆರಗು ಮೂಡಿಸುವ ಘಟನೆಗಳು.
           'ಬಪ್ಪನಾಡು ಕ್ಷೇತ್ರ ಮಹಾತ್ಮೆ' ಪ್ರಸಂಗವು ಮೇಳಕ್ಕೆ ಹೆಸರನ್ನು ತಂದಿತ್ತ ಆಖ್ಯಾನ. ಪ್ರಸಂಗದಲ್ಲಿ ಬರುವ 'ಬಪ್ಪ ಬ್ಯಾರಿ' ಪಾತ್ರಕ್ಕೆ ಶೇಣಿ ಗೋಪಾಲಕೃಷ್ಣ ಭಟ್ಟರು ಧಾರ್ಮಿಕ ಆಯಾಮ, ಧರ್ಮಸಹಿಷ್ಣು ಮನೋಭಾವ, ಶಾಸ್ತ್ರೀಯ ಅಡಿಗಟ್ಟನ್ನ ಹಾಕಿದವರು. ಶೇಣಿಯವರು ದೂರವಾಗಿ ಇಷ್ಟು ವರುಷವಾದರೂ ಆ ಪಾತ್ರವನ್ನು ನೆನಪಿಸಿಕೊಂಡರೆ ಶೇಣಿಯವರಲ್ಲದೆ ಇನ್ನೊಬ್ಬರು ನೆನಪಾಗುವುದಿಲ್ಲ.
           ಶೇಣಿಯವರ 'ಬಪ್ಪ' ಪಾತ್ರವು ಜನಮನದಲ್ಲಿ ನೆಲೆಯೂರಿತ್ತು. ಮುಸ್ಲಿಂ ಬಂಧುಗಳು ಮೆಚ್ಚಿಕೊಂಡಿದ್ದರು. ಪಾತ್ರದ ಮೂಲಕ ನೀಡುವ ಶಾಸ್ತ್ರೀಯ ಸಂದೇಶಗಳು ಪಾತ್ರವನ್ನು ಔನ್ನತ್ಯಕ್ಕೇರಿಸಿತ್ತು. ಈ ಪಾತ್ರವನ್ನು ಶೇಣಿಯವರಲ್ಲದೆ ಇನ್ನೊಬ್ಬ ಕಲಾವಿದ ಮಾಡಿದರೂ ಪಾತ್ರವು ಮಾತ್ರ ಶೇಣಿಯವರನ್ನೇ ಅಪೇಕ್ಷಿಸುತ್ತಿತ್ತು.
             ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ಟರು ಸುರತ್ಕಲ್ ಮೇಳದಲ್ಲಿನ ಒಂದು ಘಟನೆಯನ್ನು ಜ್ಞಾಪಿಸಿಕೊಳ್ಳುತ್ತಾರೆ -     ಬಣಕಲ್ನಲ್ಲಿ 'ಬಪ್ಪನಾಡು ಕ್ಷೇತ್ರ ಮಹಾತ್ಮೆ' ಪ್ರಸಂಗದ ಆಟ. ಆಗ 'ಶಬರಿಮಲೆ ಕ್ಷೇತ್ರ ಮಹಾತ್ಮೆ' ಪ್ರಸಂಗವೂ ಪ್ರಸಿದ್ಧಿಯಾಗಿತ್ತು.  ಅದರಲ್ಲಿ ಬರುವ 'ಅಬ್ಬು, ಶೇಕು' ಪಾತ್ರಗಳು ಕೆಲವೆಡೆ ಔಚಿತ್ಯದ ಎಲ್ಲೆಯನ್ನೂ ಮೀರಿತ್ತು ಕಾಣ್ತದೆ. ಈ ಸುದ್ದಿ ಮುಸ್ಲಿಂ ಬಂಧುಗಳ ಕಿವಿಗೆ ಯಾರೋ ಸುರಿದಿದ್ದರು. 'ಪ್ರಸಂಗದಲ್ಲಿ ನಮ್ಮನ್ನು ಗೇಲಿ ಮಾಡುತ್ತಾರೆ' ಎಂದು ಮುಖ್ಯಸ್ಥರಿಗೆ ದೂರನ್ನು ನೀಡಿದ್ದರು. 
            ಅದು ಮಧಾಹ್ನ ಒಂದಷ್ಟು ಮಂದಿ ಮುಸ್ಲಿಮರು ಬಿಡಾರಕ್ಕೆ ಬಂದರು.  'ಇದು ಆಟ ಆಡಲು ಬಿಡುವುದಿಲ್ಲ. ನಮ್ಮನ್ನು ಗೇಲಿ ಮಾಡುತ್ತೀರಿ' ಎಂದು ಬೆದರಿಕೆ ಹಾಕಿದರು. 'ಹಾಗೇನಿಲ್ಲ. ಇಂದು ಬಂದು ಆಟ ನೋಡಿ' ಎಂದ ದನಿಗಳು ಸಮಜಾಯಿಷಿಕೆ ನೀಡಿದರು. 'ಏನಾದರೂ ಗೇಲಿ ಮಾಡಿದರೆ ಪರಿಣಾಮ ನೆಟ್ಟಗಾಗದು,' ಎಂದು ಪುನಃ ಎಚ್ಚರಿಸಿದರು. ಮೇಳದ ದನಿಗಳು ಶೇಣಿಯವರಿಗೆ ತಿಳಿಸಿದಾಗ 'ಅಷ್ಟೇ ಅಲ್ವಾ' ಎಂದರು.
            ಈ ವಿಷಯ ನಾಲ್ದಸೆ ಹರಡಿತು. ಅಂದಿನ ಆಟದಲ್ಲಿ ಟೆಂಟ್ ತುಂಬಿತ್ತು ಕೂಡಾ. ಅಗರಿಯವರ ಭಾಗವತಿಕೆ. ಎರಡೂವರೆ ಗಂಟೆಯಾಗುವಾಗ ಸುಮಾರು ಅರುವತ್ತು ಮಂದಿ ಟೆಂಟಿನೊಳಗೆ ಆಗಮಿಸಿದರು. ಅವರಿಗೆ ಪ್ರತ್ಯೇಕವಾದ ಆಸನ ವ್ಯವಸ್ಥೆಯನ್ನು ಮಾಡಲಾಗಿತ್ತು.
            ಸರಿಯಾಗಿ ಮೂರು ಗಂಟೆಗೆ ಅಗರಿಯವರು 'ಬಪ್ಪನೆಂದೆನುವ ಮುಸಲ್ಮಾನ ವ್ಯಾಪಾರಿ ತಪ್ಪದೆ ಕುಲಧರ್ಮವ....' ಪದ್ಯ ಎತ್ತುಗಡೆ ಮಾಡಿದರು. ಶೇಣಿಯವರ 'ಬಪ್ಪ'ನ ಪ್ರವೇಶ. ಅಂದಿನ ಅವರ ವೇಷಗಾರಿಕೆಯು ಥೇಟ್ ಧರ್ಮಿಷ್ಟ ಗುರುವೊಬ್ಬರನ್ನು ನೆನಪಿಸುತ್ತಿತ್ತು. ಮುಸ್ಲಿಂ ಬಂಧುಗಳು ನಿಬ್ಬೆರಗಾದರು. ಕುರಾನನ್ನು ಉಲ್ಲೇಖಿಸಿದ ಧರ್ಮಸೂಕ್ಷ್ಮದ ವಿಚಾರಗಳು ಬಪ್ಪ ಪಾತ್ರವನ್ನು ಎತ್ತರಕ್ಕೇರಿಸಿತ್ತು. ಶಾಸ್ತ್ರೀಯವಾದ 'ಮಾಪಿಳೆ ಪಾಟ್'ನ್ನು ಹೇಳಿದ್ದರು. ಶಾಸ್ತ್ರಗಳನ್ನು ಓದಿದ, ಬೌದ್ಧಿಕ ಗಟ್ಟಿತನವನ್ನು ಹೊಂದಿದ, ಸಾತ್ವಿಕ ಧಾರ್ಮಾನುಯಾಯಿ 'ಬಪ್ಪ'ನ ಪಾತ್ರಕ್ಕೆ ಮುಸ್ಲಿಂ ಬಂಧುಗಳು ತಲೆದೂಗಿದರು.
ಪಾತ್ರ ಮುಗಿದು ಶೇಣಿಯವರು ಚೌಕಿಗೆ ನಿರ್ಗಮಿಸಿದರು. ಆಟ ನೋಡುತ್ತಿದ್ದವರು ಚೌಕಿಗೆ ಬಂದು ಶೇಣಿಯವರನ್ನು ಅಭಿನಂದಿಸಿದರು. ಕೈ ಕುಲುಕಿದರು. ಕೆಲವರು ಆಶೀರ್ವಾದ ಬೇಡಿದರು. ನಮಗೆ ಇದೆಲ್ಲಾ ಹೊಸತು. ನೀವು ಎಲ್ಲಿ ಕಲಿತಿರಿ. ನಮ್ಮ ಧರ್ಮಗ್ರಂಥವನ್ನು ಎಲ್ಲಿ ಅಭ್ಯಾಸ ಮಾಡಿದಿರಿ, ಎಂದು ತಂಡದ ಮುಖ್ಯಸ್ಥರು ಹೇಳಿದಾಗ ಶೇಣಿಯವರ ಕಣ್ಣಂಚಲ್ಲಿ ಆನಂದದ ಕಣ್ಣೀರು ತೊಟ್ಟಿಕ್ಕುತ್ತಿತ್ತು. ಶೇಣಿಯವರಿಗೆ ಬಹುಮಾನವನ್ನು ನೀಡಿ, 'ಯಾರದ್ದೋ ಮಾತನ್ನು ಕೇಳಿ ತಪ್ಪಾಗಿ ಅರ್ಥ ಮಾಡಿಕೊಂಡೆವು' ಎಂದು ತೆರಳಿದರು.
                ಇದು ಶೇಣಿಯವರ ತಾಕತ್ತು. ವಿಪತ್ತು ಬಂದಾಗ ಅದನ್ನು ಶಾಸ್ತ್ರಾಧಾರಗಳನ್ನು ಮುಂದಿಟ್ಟು ಮಂಡಿಸುವ ಕ್ರಮ ಇದೆಯಲ್ಲಾ, ಶೇಣಿಯವರಿಗೆ ಮಾತ್ರ ಸಾಧ್ಯ. ನಂತರದ ದಿವಸಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಟೆಂಟಿನ ಒಳಗಡೆ ಪ್ರತ್ಯೇಕ ವ್ಯವಸ್ಥೆ ಮಾಡಿ ಬಪ್ಪ ಪಾತ್ರವನ್ನು ತೋರಿಸಲಾಗಿತ್ತಂತೆ.
             ಕೂಡ್ಲು ಮೇಳಕ್ಕೆ ಕಟಪಾಡಿಯಲ್ಲಿ ಬಪ್ಪನಾಡು ಕ್ಷೇತ್ರ ಮಹಾತ್ಮೆಯನ್ನು ಮೊದಲ ಬಾರಿಗೆ ಪ್ರದರ್ಶನ ಮಾಡಿದ ಹಿರಿಮೆ. ಪ್ರಸಂಗ ಕರ್ತ ಭಾಗವತರಾದ ಅಗರಿ ಶ್ರೀನಿವಾಸ ಭಾಗವತರು. ಶೇಣಿಯವರಿಗೆ ಆರಂಭದಲ್ಲಿ 'ದಾರುಕಾಸುರ'ನ ಪಾತ್ರ. ಬಳಿಕ 'ಬಪ್ಪ'ನ ಪಾತ್ರವನ್ನೂ ನಿರ್ವಹಿಸಿದ್ದರು. ಹಾಸ್ಯಗಾರ ವಿಟ್ಲ ಗೋಪಾಲಕೃಷ್ಣ ಜೋಶಿಯವರದು 'ಉಸ್ಮಾನ್' ಪಾತ್ರ. ಈ ಜತೆಗಾರಿಕೆಯು ಬಹಳ ವರುಷ ರಂಗದಲ್ಲಿ ಮೆರೆದಿತ್ತು.
           ಅಂಗಡಿಮೊಗರಿನ ಮುಹಮ್ಮದ್ ಶೆರೂಲ್ ಆ ಕಾಲದ ಧರ್ಮಿಷ್ಟ. ಗಾಂಧಿವಾದಿ. ವಿದ್ಯಾಪ್ರೇಮಿ. ಅವರೊಂದಿಗಿನ ಒಡನಾಟವು 'ಮುಸ್ಲೀಮ್ ಗೃಹಸ್ಥ ಹೇಗಿರುತ್ತಾನೆ' ಎಂಬುದನ್ನು ಅನುಭವದಿಂದ ತಿಳಿದಿದ್ದೆ. ಬಪ್ಪ ಬ್ಯಾರಿಯ ವೇಷದಲ್ಲಿ ಸಹಜತೆಯನ್ನು ತರುವುದಕ್ಕೆ ಸಾಧ್ಯವಾಯಿತು. ಬಪ್ಪನ ಪಾತ್ರದಲ್ಲಿ ಶೆರೂಲರಂಥ ಸರ್ವಮತ ಸಹಿಷ್ಣುತೆಯುಳ್ಳ ವ್ಯಕ್ತಿಯ ನೆನಪಿನೊಂದಿಗೆ ಅವರದೇ ಕೃತಿಯಾದ ಅರ್ಥಪೂರ್ಣವಾದ ಮಾಪಿಳಾ ಪಾಟನ್ನೂ ಹಾಡುವುದನ್ನು ಬಳಸಿಕೊಂಡು ಬಂದೆ. ನನಗೆ ಆ ಪಾತ್ರವು ಹೆಸರನ್ನು ತಂದಿದೆ. ಜತೆಗೆ ಮುಸಲ್ಮಾನ ಬಂಧುಗಳಿಗೂ ತೃಪ್ತಿಯನ್ನು ತಂದಿದೆ, ಎಂದು ಶೇಣಿಯವರು ತನ್ನ 'ಯಕ್ಷಗಾನ ಮತ್ತು ನಾನು' ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
             ಶೇಣಿಯವರು ಸುರತ್ಕಲ್ ಮೇಳದಲ್ಲಿ ಇದ್ದಾಗ ಬಣಕಲ್ಲಿನ ಘಟನೆ ನಡೆಯಿತಷ್ಟೇ. ಅದಕ್ಕಿಂತ ಹಿಂದೆ ಕೂಡ್ಲು ಮೇಳದಲ್ಲೂ ಒಂದು ಘಟನೆಯು ಅರ್ಕುುಳದಲ್ಲಿ ನಡೆದಿತ್ತು. ಈ ಘಟನೆಯ ಪರಿಣಾಮವನ್ನು ಶೇಣಿಯವರ ಮಾತಲ್ಲೇ ಕೇಳೋಣ, ರಂಗನಿರ್ವಹಣೆ ಮುಗಿಸಿದ ನಾನು ಮತ್ತು ಜೋಷಿಯವರು ಚೌಕಿಗೆ ನಿರ್ಗಮಿಸಿದಾಗ ನಮ್ಮನ್ನು ಹಿಂಬಾಲಿಸಿದರು. ಹಸ್ತಲಾಘವ ಮಾಡಿದರು. ಕೆಲವರು ಸಿಗರೇಟು ಪೆಟ್ಟಿಗೆಗಳನ್ನು, ಯಾರೋ ಒಬ್ಬಿಬ್ಬರು ಫೌಂಟನ್ ಪೆನ್ನುಗಳನ್ನು ಉಡುಗೊರೆಯಾಗಿ ನೀಡಿದರು.
             'ದೇವನೊಬ್ಬ ನಾಮ ಹಲವು. ಮತ ಯಾವುದಾದರೇನು? ಮನುಷ್ಯ ಒಳ್ಳೆಯವನಾದರೆ ಸಾಕು, ಎಂಬ ತತ್ತ್ವದ ಜೀವಂತ ಸಾಕ್ಷಿ 'ಬಪ್ಪನಾಡು ಕ್ಷೇತ್ರ ಮಹಾತ್ಮೆ' ಪ್ರಸಂಗ.
(ಚಿತ್ರ : ಯಜ್ಞ, ಮಂಗಳೂರು)



Wednesday, March 2, 2016

ಪುರಭವನ ಇಳಿಬಿಟ್ಟ ಸಾಂಸ್ಕೃತಿಕ ಬೇರುಗಳು

               'ಮಂಗಳೂರು ಪುರಭವನ' - ಅದೊಂದು ಸರಕಾರಿ ಸಭಾಭವನ. ಬಾಡಿಗೆ ಪಾವತಿಸಿದರೆ ಆಯಿತು, ಕಾರ್ಯಕ್ರಮಗಳನ್ನು ಯಾರಿಗೂ ಮಾಡಬಹುದು. ಅಂತಸ್ತಿಗೆ ತಕ್ಕಂತೆ ಗೌಜಿ-ಗಮ್ಮತ್ತು ಏರ್ಪಡಿಸಬಹುದು. 'ಯಾಕೆ ಮಾಡಿದಿರಿ' ಅಂತ ಯಾರೂ ಕೇಳುವವರಿಲ್ಲ. ಯಾಕೆ ಹೇಳಿ? ನೀವು ಬಾಡಿಗೆ ನೀಡಿದ್ದೀರಿ. ನಿಮ್ಮ ಖುಷಿ. ಸರಕಾರಕ್ಕೆ ಯಾರಾದರು ಏನು? ಇಂದು ನೀವು, ನಾಳೆ ಇನ್ನೊಬ್ಬರು. ಸರಕಾರಿ ಪೋಶಿತ ಪುರಭವನದ ವ್ಯವಹಾರಕ್ಕೆ ಇಷ್ಟು ಪೀಠಿಕೆ ಸಾಕು.
               ಕರಾವಳಿಯ ಸಾಂಸ್ಕೃತಿಕ ಇತಿಹಾಸದೊಳಗೆ ಇಣುಕಿದರೆ ಪುರಭವನದ ಕಲಾಭಾವಗಳ ತರಂಗಗಳು ಸುತ್ತುತ್ತಿರುವುದನ್ನು ಕಾಣಬಹುದು. ಸಂಸ್ಕೃತಿಯ ವೈವಿಧ್ಯಗಳು ಗೋಚರಿಸುತ್ತವೆ. ಭಾಷಾ ಬಾಂಧವ್ಯವನ್ನು ಗಟ್ಟಿಗೊಳಿಸಿದ ದಿನಮಾನಗಳು ಕಾಣುತ್ತವೆ. ಉಭಯ ಜಿಲ್ಲೆಗಳ ಕಲಾ ಮನಸ್ಸುಗಳನ್ನು ಒಗ್ಗೂಡಿಸಿದ ಚಿತ್ರಗಳಿವೆ. ಅಕ್ಷರ ಲೋಕವನ್ನು ಕಟ್ಟಿಕೊಟ್ಟ ಕ್ಷಣಗಳಿವೆ. ಗೆಜ್ಜೆಗಳ ನಾದಗಳಿಗೆ ಮಾತನ್ನು ಕೊಟ್ಟಿದೆ. ವಾಗ್ದೇವಿ ನಲಿದಾಡಿದ್ದಾಳೆ. ಸಿದ್ಧಿ-ಸಾಧನೆಗಳಿಗೆ ಗೌರವ ಪ್ರಾಪ್ತವಾಗಿದೆ.
               1986ನೇ ಇಸವಿ. ಹೊಟ್ಟೆಪಾಡಿಗಾಗಿ ಮಂಗಳೂರಿನಲ್ಲಿದ್ದೆ. ಪುರಭವನ, ನೆಹರು ಮೈದಾನದ ಯಕ್ಷಗಾನ ಸುದ್ದಿಗಳ ರೋಚಕ ಮಾತುಗಳಿಗೆ ಕಿವಿಯಾಗುತ್ತಿದ್ದೆ. ಪುರಭವನದ ಎದುರು ಯಕ್ಷಗಾನದ ದೊಡ್ಡ ಗಾತ್ರದ ಫಲಕವೊಂದು ಸೆಳೆಯಿತು. ಖ್ಯಾತನಾಮ ಕಲಾವಿದರಿಂದ ಅದ್ದೂರಿ ಪ್ರದರ್ಶನ - 'ದಕ್ಷಾಧ್ವರ-ದಮಯಂತಿ ಪುನ:ಸ್ವಯಂವರ - ಗದಾಯುದ್ಧ'. ಒಬ್ಬನೇ ಒಬ್ಬ ಕಲಾವಿದರ ಪರಿಚಯವಿಲ್ಲ. ಯಕ್ಷಗಾನದ ಮೊದಲಾಕ್ಷರದ ಪರಿಚಯವಿರಲಿಲ್ಲ. ಐದು ರೂಪಾಯಿ ಬಾಲ್ಕನಿ ಟಿಕೇಟು ಪಡೆದು ಪುರಭವನ ಹೊಕ್ಕಿದ್ದೆ. ಆಟ ನೋಡಿ ಮರಳುವಾಗ ಯಕ್ಷಗಾನದ ಗುಂಗು ಅಂಟಿತ್ತು. ಅಲ್ಲಿಂದ ಪುರಭವನಕ್ಕೂ ನನಗೂ ನಂಟು-ಅಂಟು. ನಡೆಯುತ್ತಿದ್ದ ಬಹುತೇಕ ಆಟ-ಕೂಟಗಳಿಗೆ ಖಾಯಂ ಹಾಜರ್.
               ಯಕ್ಷಗಾನಕ್ಕೂ ಪುರಭವನಕ್ಕೂ ಬಿಗಿಯಾದ ಬಂಧ-ಸಂಬಂಧ. ಕಾರ್ಯಕ್ರಮಗಳನ್ನು ಸಂಯೋಜಿಸುವುದು 'ಪ್ರತಿಷ್ಠೆ'. ಮಳೆಗಾಲದ ಶನಿವಾರಗಳ ಪ್ರದರ್ಶನಗಳು ಐದಾರು ತಿಂಗಳ ಮೊದಲೇ ಮುಂಗಡವಾಗಿ ಕಾದಿರಿಸಲಾಗುತ್ತಿತ್ತು. ಕೆಲವೊಮ್ಮೆ ಕಲಾವಿದರೇ ಆಯೋಜಕರಾಗುವುದುಂಟು. ತಮ್ಮ ಮೇಳ ತಿರುಗಾಟದ ಅವಧಿಯಲ್ಲಿ 'ಪುರಭವನದ ಆಟ'ದ ಟಿಕೇಟ್ ಮಾರಾಟ ಮಾಡಲು ಖುಷಿ. ದೊಡ್ಡದಾದ ಕರಪತ್ರ. ಭಾಗವಹಿಸುವ ಕಲಾವಿದರೆಲ್ಲರ ವಿವರ. ತಮ್ಮ ಹೆಸರು 'ನೋಟೀಸಿನಲ್ಲಿ ಬಿದ್ದಿದೆ' ಎನ್ನಲು ಕಲಾವಿದರಿಗೂ ಹೆಮ್ಮೆ. 'ಗೌರವ ಪ್ರವೇಶ' ಪ್ರವೇಶಿಕೆಗಳನ್ನು ಪ್ರತಿಷ್ಠಿತರಿಗೆ ಮುಜುಗರದಿಂದ ಹಂಚುತ್ತಿದ್ದ ಆ ಮುಖಗಳು ನೆನಪಾಗುತ್ತವೆ.
                ಹಿರಿಯರಿಗೆ ಸಂಮಾನ, ಪ್ರಶಸ್ತಿ ಪ್ರದಾನ, ಪುರಸ್ಕಾರ, ಪುಸ್ತಕ ಬಿಡುಗಡೆ, ಗೋಷ್ಠಿ, ಸಂಸ್ಮರಣೆಗಳಿಗೆ ಪುರಭವನ ಸಾಕ್ಷಿಯಾಗಿದೆ.  'ಟೌನ್ಹಾಲಿನ ಸನ್ಮಾನ'ವೆಂದರೆ ಅದನ್ನು ಸ್ವೀಕರಿಸುವ ಸಾಧಕನಿಗೂ ಪುಳಕ. ವೇದಿಕೆಯಲ್ಲಿ ನಿಂತು ಮಾತನಾಡುವುದೂ ಪ್ರತಿಷ್ಠೆ. ನೇಪಥ್ಯದಲ್ಲಿ 'ಪುರಭವನದಲ್ಲೇ ಆಗಬೇಕು' ಎನ್ನುವ ಪ್ರೀತಿಯ ಹಠವೂ ಆಯೋಜಕರಲ್ಲಿದೆ. ದಾಖಲೆ ಬರೆದ ತಾಳಮದ್ದಳೆಗಳು ಪುರಭವನಕ್ಕೆ ಮಾತ್ರ ಇತಿಹಾಸವಲ್ಲ. ಯಕ್ಷಗಾನಕ್ಕೂ ಕೂಡಾ.
               ಪುರಭವನವು  ಯಕ್ಷಗಾನ ವಾಹಿನಿಯೊಳಗೆ ಮಿಳಿತವಾಗಿರುವುದರಿಂದ ಇದರ ಹೊರತಾಗಿ ಬೇರೆ ಯೋಚನೆಯಿಲ್ಲ. ನೂರಾರು ಕಲಾವಿದರಿಗೆ ಅವಕಾಶವನ್ನು ನೀಡಿದೆ. ತಾರಾಮೌಲ್ಯ ತಂದಿದೆ. ಪ್ರೇಕ್ಷಕರಿಗೂ ಕಲಾವಿದರನ್ನು ನೋಡುವ, ಮಾತನಾಡಿಸುವ ಆನಂದ. ಶೇಣಿ-ಸಾಮಗ, ಕಡತೋಕ-ಕಾಳಿಂಗ ನಾವಡ, ಕೆರೆಮನೆ ಸಹೋದರರು.. ಹೀಗೆ ಸಂದುಹೋದ ಹಿರಿಯರು ಮೂಡಿಸಿದ ಯಶೋಹೆಜ್ಜೆಯು ಪುರಭವನದ ರಂಗವೇದಿಕೆಯಲ್ಲಿ ಅಚ್ಚಾಗಿವೆ. ಸಿನಿಮಾ ಥಿಯೇಟರಿನಂತೆ 'ಟಿಕೇಟು ಇಲ್ಲ' ಎನ್ನುವ ಫಲಕವನ್ನು ತೂಗುಹಾಕಿದ್ದನ್ನು ನೋಡಿದ್ದೇನೆ.
                 ಮೇಳದ ಯಜಮಾನ ಕೀರ್ತಿಶೇಷ ಕರ್ನೂರು ಕೊರಗಪ್ಪ ರೈಗಳು ಪುರಭವನದಲ್ಲಿ ಮಳೆಗಾಲದಲ್ಲಿ ತೆಂಕು-ಬಡಗು ತಿಟ್ಟುಗಳ ಪ್ರದರ್ಶನಕ್ಕೆ ಶ್ರೀಕಾರ ಹಾಕಿದವರು ಎಂದು ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ. ಕಲಾವಿದರಿಗೆ 'ಲಕೋಟೆ(ಕವರ್)ಯೊಳಗೆ ಸಂಭಾವನೆ ತುಂಬಿಸಿ' ನೀಡುವ ಪರಿಪಾಠ ರೈಗಳಿಂದ ಆರಂಭವಾಯಿತು ಎನ್ನುತ್ತಾರೆ.  ಯಕ್ಷಗಾನ ಕ್ಷೇತ್ರಕ್ಕೆ ಅಪರೂಪವಾದ ಇಂತಹ ವ್ಯವಸ್ಥೆಗಳ ಮೊದಲಾರಂಭಕ್ಕೆ ಪುರಭವನ ಸಾಕ್ಷಿಯಾಗಿದೆ. ತೆಂಕು-ಬಡಗಿನ ಕಲಾವಿದರೊಳಗೆ ಸ್ನೇಹ-ಸೇತುವನ್ನು ಕಟ್ಟಿದೆ.
                  ಕಳೆದ ಒಂದು ವರುಷ ನವೀಕರಣಕ್ಕಾಗಿ ಪುರಭವನ ಮುಚ್ಚಿತ್ತು. ಎಷ್ಟೋ ಕಲಾ ಕಾರ್ಯಕ್ರಮಗಳು ರಜೆ ಮಾಡಿದುವು! ಇಲ್ಲಿನ ಸೊಬಗು, ಸೊಗಸು ಇತರೆಡೆ ಸಿಗದ ಭಯದಿಂದ ಆಟ-ಕೂಟಗಳು ರದ್ದಾದುವು. ಕೆಲವು ಬೇರೆಡೆ ಸ್ಥಳಾಂತರಗೊಂಡುವು. ಹೋದಲ್ಲಿ, ಬಂದಲ್ಲಿ ಪುರಭವನದ ಅಲಭ್ಯತೆಯ ಮಾತುಕತೆ. ಕಲಾ ಕಾರ್ಯಕ್ರಮಕ್ಕೆ ಬಾಡಿಗೆ ಕಡಿಮೆ ಎನ್ನುವ ಕಾರಣವಲ್ಲ. 'ನಮಗೆ ಪುರಭವನ ಬೇಕು. ಅಲ್ಲೇ ಕಾರ್ಯಕ್ರಮ ಆಗಬೇಕು' ಎನ್ನುವ ಸಾಂಸ್ಕೃತಿಕ ನರಜಾಲ.
               'ಬಣ್ಣದ ಮನೆಯ ಗಾತ್ರ ದೊಡ್ಡದಾಗಬೇಕು' ಎನ್ನುವುದು ಕಲಾವಿದರ ಬೇಡಿಕೆ. ಈಗ ಹವಾನಿಯಂತ್ರಿತ ವ್ಯವಸ್ಥೆ ಹೊಸೆದಿದೆ. ಆರ್ಥಿಕವಾಗಿ ದುಬಾರಿ. ಯಕ್ಷಗಾನ, ನಾಟಕ, ನೃತ್ಯ.. ಮೊದಲಾದ ಕಲಾ ಸಂಬಂಧಿ ಚಟುವಟಿಕೆಗಳಿಗೆ ಹೊರೆಯಾಗದಂತೆ ಆಡಳಿತ ನೋಡಿಕೊಳ್ಳಬೇಕಿದೆ. ಬಣ್ಣದ ಮನೆಯಲ್ಲಿ ಇರುವಷ್ಟು ಹೊತ್ತು ಯಥಾಸಾಧ್ಯ ಶುಚಿಯಾಗಿಟ್ಟುಕೊಳ್ಳುವುದು ಕಲಾವಿದರ ಜವಾಬ್ದಾರಿ. ಶುಚಿತ್ವದ ಕಾರಣಕ್ಕಾಗಿಯೇ ಹಲವು ಸಭಾಭವನಗಳು ಕಲಾ ಕಾರ್ಯಕ್ರಮಕ್ಕೆ ಒದಗದಿರುವ ಸುದ್ದಿಗಳನ್ನು ಅಲ್ಲಿಲ್ಲಿ ಕೇಳುತ್ತೇವೆ.
               ಪುರಭವನಕ್ಕಿಂತ ಹೆಚ್ಚು ಸ್ಥಳಾವಕಾಶವಿರುವ ಸಭಾಭವನಗಳು ಮಂಗಳೂರಿನಲ್ಲಿ ಎಷ್ಟಿಲ್ಲ? ಆದರೂ ಸಂಘಟಕರು ಇದನ್ನೇ ಯಾಕೆ ಆಯ್ಕೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ! ಕಲೆಯ ಸ್ಪರ್ಶವಿರುವ ಸುಮನಸ್ಸಿನೊಳಗೆ ಪುರಭವನವು ಸಾಂಸ್ಕೃತಿಕ ಬೇರುಗಳನ್ನು ಇಳಿಯಬಿಟ್ಟಿದೆ. ಸುವರ್ಣ ಹೊಳಪಿನ ಪುರಭವನವು ನವೀಕೃತಗೊಂಡಿದೆ. ಬದಲಾಗುತ್ತಿರುವ ಆಡಳತ ವ್ಯವಸ್ಥೆಗಳು ಈ ಕಲಾ ಪರಂಪರೆಯನ್ನು ಮುಂದುವರಿಸಬೇಕು.
                  ಆಗಿನ ಮುನಿಸಿಪಲ್ ಅಧ್ಯಕ್ಷ ಮಣೇಲ್ ಶ್ರೀನಿವಾಸ ನಾಯಕರ ಪುರಭವನ ನಿರ್ಮಾಣದ ಸಂಕಲ್ಪವು ಒಂದು ಪ್ರದೇಶದ ಸಂಸ್ಕೃತಿಯ ದ್ಯೋತಕವಾಗಿ ಎದ್ದು ನಿಂತಿದೆ.
(ಪ್ರಜಾವಾಣಿ/ದಧಿಗಿಣತೋ/27-3-2016 ಅಂಕಣ)


Tuesday, February 23, 2016

ಭಾವದಲೆಯಲಿ ಮೀಯಲು ಪಾತ್ರಗಳು ಕಾಯುತ್ತಿವೆ!

              ಒಂದು ಕಾಲಘಟ್ಟವಿತ್ತು. ಸ್ತ್ರೀಪಾತ್ರಗಳಿಗೆ ಕಲಾವಿದರು ರೂಪುಗೊಳ್ಳುವುದು ತೀರಾ ಕಡಿಮೆ. ಹವ್ಯಾಸಿ ರಂಗದಲ್ಲಂತೂ ನಿರ್ಲಕ್ಷಿತ. ಮೇಳಗಳ ಹೊರತಾದ ಆಟಗಳಲ್ಲೆಲ್ಲಾ ಸ್ತ್ರೀ ಪಾತ್ರಗಳಿಲ್ಲದ ಪ್ರಸಂಗಗಳನ್ನು ಆಯ್ದುಕೊಳ್ಳಲಾಗುತ್ತಿತ್ತು. ಆಗ ರಂಗದಲ್ಲಿ ಸ್ತ್ರೀಯಾಗುತ್ತಿದ್ದ ಬೆರಳೆಣಿಕೆಯ ಕಲಾವಿದರಿಗೆ ಅವಕಾಶಗಳ ಸುಗ್ಗಿ. ಅಭಿವ್ಯಕ್ತಿಗಿಂತಲೂ ರಂಗಕ್ಕೆ ಪಾತ್ರವು ಪ್ರವೇಶಿಸಿದರೆ ಸಾಕು!
             ಈಗ ಹಾಗಲ್ಲ. ಸ್ತ್ರೀಪಾತ್ರಧಾರಿಗಳ ಸಂಖ್ಯೆ ಹೆಚ್ಚಾಗಿದೆ. ಪಾತ್ರವನ್ನು ಮಾಡಲು ಒಲವಿದೆ, ಮುಜುಗರವಿಲ್ಲ. ಶರೀರ, ಶಾರೀರ, ಒನಪು, ಒಯ್ಯಾರಗಳನ್ನು ರೂಢಿಸಿಕೊಂಡ ಕಲಾವಿದರು ಸಾಕಷ್ಟಿದ್ದಾರೆ. ವಿವಿಧ ಭಂಗಿಗಳ ಚಿತ್ರಗಳು ಫೇಸ್ಬುಕ್ಕಿನಲ್ಲಿ ಇಣುಕುತ್ತವೆ. ಅಬ್ಬಾ.. ಸ್ತ್ರೀಯರನ್ನು ನಾಚಿಸುವ ರೂಪ. ಕಲಾವಿದರ ಶ್ರಮ ಗುರುತರ. ಇದೊಂದು ಉತ್ತಮ ಬೆಳವಣಿಗೆ.
ಹೀಗಿದ್ದೂ ಅಭಿವ್ಯಕ್ತಿಯಲ್ಲಿ ಪಾತ್ರಗಳು ಯಾಕೆ ಸೋಲುತ್ತಿವೆ? ಹಲವು ಸಮಯದಿಂದ ಕಾಡುವ ಚೋದ್ಯ. ತೊಡುವ ವೇಷದಲ್ಲಿ ಸೌಂದರ್ಯದ ಕಾಳಜಿಗೆ ಮೊದಲ ಮಣೆ. ಕೆಲವೊಮ್ಮೆ ಪಾತ್ರೋಚಿತವಾದ ವೇಷಭೂಷಣಗಳ ಜಾಗಕ್ಕೆ ನವ್ಯತೆಯ ಮೆರುಗು, ಥಳುಕು. ಸಖಿ ಪಾತ್ರಕ್ಕೂ, ರಾಣಿಗೂ ವ್ಯತ್ಯಾಸವಿಲ್ಲದೆ ತೊಡುವ ವೇಷಭೂಷಣಗಳನ್ನು ಪ್ರೇಕ್ಷಕರು ಸ್ವೀಕರಿಸಬಹುದು. ರಂಗ ಸ್ವೀಕರಿಸದು.
               ಉದಾ: ದೇವಿ ಮಹಾತ್ಮೆ ಪ್ರಸಂಗದ 'ದಿತಿ'. ಕಲಾವಿದನಿಗೆ ಮಾಲಿನಿ ಪಾತ್ರ(ಧಾರಿ)ಕ್ಕಿಂತ ತಾನು ಕಡಿಮೆಯೇನಲ್ಲ ಎನ್ನುವ ಮನಃಸ್ಥಿತಿಯಿಂದ ಶೃಂಗಾರಗೊಂಡು ರಂಗಕ್ಕೆ ಬಂದರೆ? ಋಷಿ ಪತ್ನಿಯರ ಪಾತ್ರಕ್ಕೊಂದು ಸಿದ್ಧ ಮಾದರಿಗಳಿವೆ. ಅವುಗಳು ಹೊಳೆಯುವ ಆಭರಣಗಳನ್ನು ಧರಿಸಿದರೆ? ದ್ವಿಜನ ಹೆಂಡತಿಯ ಪಾತ್ರ ಸಕಲಾಭರಣ ಭೂಷಿತೆಯಾಗಿ ಬಂದರೆ? ಇವೆಲ್ಲಾ 'ಔಚಿತ್ಯ' ಬಯಸುವ ಪ್ರಶ್ನೆಗಳು. ಇವಕ್ಕೆ ಸಮರ್ಥನೆಯ ಉತ್ತರಗಳು ಬೇಕಾದಷ್ಟಿವೆ ಬಿಡಿ.
               ದೇವಿ ಮಹಾತ್ಮೆಯ 'ಮಾಲಿನಿ'ಯ ಪ್ರವೇಶದಲ್ಲಿ ಪ್ರಸಂಗದಲ್ಲಿ ಮೂರು ಪದ್ಯಗಳಿವೆ. ಆಕೆ ಯೌವನಭರಿತೆಯಾದರೂ ಸನ್ನಿವೇಶದಲ್ಲಿ ಶೃಂಗಾರ ಭಾವವಿಲ್ಲ. ಹಲವು ಮಾಲಿನಿಯರನ್ನು ನೋಡಿದ್ದೇನೆ, ನೋಡುತ್ತಿದ್ದೇನೆ. ಅಬ್ಬಾ.. ಶೃಂಗಾರದ ವಿಲಾಸವೆ..! 'ಮೋಹಿನಿ'ಯೂ ನಾಚುವ ಅಭಿವ್ಯಕ್ತಿ. ಭಾಗವತರಿಗೂ ಹಾಡಲು ಹುಮ್ಮಸ್ಸು. ಪಾತ್ರಧಾರಿಗೂ ಕುಣಿಯಲು ಉತ್ಸಾಹ. ಈ ಮಧ್ಯೆ ಪಾತ್ರದ ಆಶಯ, ಅಭಿವ್ಯಕ್ತಿ ಮಣ್ಣುಪಾಲು! "ಕುಣಿಯದಿದ್ದರೆ ಪ್ರೇಕ್ಷಕರು ಸಹಿಸರು. ಆತನಿಗೆ ಕುಣಿಯಲು ಗೊತ್ತಿಲ್ಲ ಅಂತಾರೆ. ಈಗಿನ ಕಾಲಕ್ಕೆ ಬೇಕಲ್ವಾ," - ಕಲಾವಿದರೊಬ್ಬರ ಅಭಿಪ್ರಾಯ. ಔಚಿತ್ಯವನ್ನು ಮೀರಿದ ರಂಗಕ್ರಮವನ್ನು ಯಾವ ಪ್ರೇಕ್ಷಕನೂ ಬಯಸಲಾರ ಎಂಬುದು ಪಾತ್ರಧಾರಿಗೆ ತಿಳಿದಿರಬೇಕಲ್ವಾ. ಈಗಿನ ಕಾಲ ಅಂದರೆ..?
                   ದಕ್ಷಾಧ್ವರ ಪ್ರಸಂಗದ 'ದಾಕ್ಷಾಯಿಣಿ'. ಹಲವು ರಸಗಳ ಅಭಿವ್ಯಕ್ತಿಗೆ ಒದಗುವ ಪಾತ್ರ. ಪ್ರವೇಶದಿಂದ ಅಂತ್ಯದ ತನಕ ವಿವಿಧ ಭಾವಗಳ ಪ್ರಸ್ತುತಿಗಳಿಗೆ ಹೇರಳ ಅವಕಾಶ. 'ವರಮಹಾ ಕೈಲಾಸ ಶಿಖರದಿ' ಎನ್ನುವ ಭಾಮಿನಿಗೆ ಪಾತ್ರ ಪ್ರವೇಶ. ಗರತಿ ಪಾತ್ರವಾದ್ದರಿಂದ ಹಿತಮಿತ ನಾಟ್ಯ ಸಾಕು. ಯಾಕೋ ಏನೋ, ಕೆಲವು ದಾಕ್ಷಾಯಿಣಿ ಪಾತ್ರಗಳು ರಂಗದಲ್ಲಿ 'ಮಾಯಾಶೂರ್ಪನಖಿ'ಯನ್ನು ನಾಚಿಸುತ್ತಿವೆ. ಶಿವನ ಮಡದಿ ಎನ್ನುವ ಪ್ರಜ್ಞೆಯನ್ನು ಮರೆತಿವೆ. ಪಾತ್ರ ಪೋಷಣೆಗೆ ಬೇಕಾದ ಭಾವಗಳ ರಸಘಟ್ಟಿಗಳ ತೇವ ಆರಿದೆ!
                 ಬಬ್ರುವಾಹನ ಕಾಳಗ ಪ್ರಸಂಗದ 'ಚಿತ್ರಾಂಗದೆ'. ಇದು ಗರತಿ ಪಾತ್ರ. ತನ್ನೂರಿಗೆ ಅರ್ಜುನ ಬಂದಿದ್ದಾನೆ ಎಂಬ ಸುದ್ದಿ ತಿಳಿದ ಆಕೆ ಸಂತೋಷದಿಂದ 'ಅಹುದೇ ಎನ್ನಯ ರಮಣ' ಎನ್ನುವ ಪದ್ಯಕ್ಕೆ ಕುಣಿಯುವ ಪರಿ ನೋಡಿದರೆ ಸಂತೋಷದ ಪರಾಕಾಷ್ಠೆ! ತಾನು ಆಳೆತ್ತರಕ್ಕೆ ಬೆಳೆದ ಹೊಂತಕಾರಿ ಬಬ್ರುವಾಹನನ ತಾಯಿ ಎನ್ನುವ ಪ್ರಜ್ಞೆಯನ್ನು ಪಾತ್ರಧಾರಿ ಮರೆಯುವುದು ಅಪಕ್ವತೆಯ ಲಕ್ಷಣ. ಪುರಾಣ ಪಾತ್ರಗಳು, ಅವುಗಳ ನಡೆಗಳನ್ನು ತಮಗೆ ಬೇಕಾದಂತೆ ಹಿಗ್ಗಾಮುಗ್ಗಾ ಜಗ್ಗಲು ಬರುವುದಿಲ್ಲ.
                 ತನಗೆ ಕುಣಿಯಲು ಬರುತ್ತದೆ ಎಂದು - ವನವಾಸದ ಸೀತೆ, ರೇಣುಕೆ, ಖ್ಯಾತಿ - ಮೊದಲಾದ ಪಾತ್ರಗಳನ್ನು ಹಿಚುಕುವಾಗ ಕಿಂಚಿತ್ತೂ ನೋವಾಗುವುದಿಲ್ಲವಲ್ಲ! ಹಿರಿಯರು ಹಾಕಿದ ದಾರಿಯಲ್ಲಿ ಸಾಗುತ್ತಿದ್ದೇವೆ ಎನ್ನುವ ಕನಿಷ್ಠ ಸೌಜನ್ಯವೂ ಇಲ್ಲವಲ್ಲಾ. ಪಾತ್ರಧಾರಿಯಲ್ಲಿ ಯೌವನವಿದೆ, ರೂಪವಿದೆ, ಲಾವಣ್ಯವಿದೆ ಎನ್ನುವ ಅರ್ಹತೆಯು ಔಚಿತ್ಯವನ್ನು ಮೀರಲಿರುವ ಮಾನದಂಡವಾಗಬಾರದು. ಮದುವೆ ದೃಶ್ಯದಲ್ಲಿ ಪುರೋಹಿತನ ಜತೆ ಬರುವ ಆತನ ಪತ್ನಿಯನ್ನು 'ಜೋಕರ್' ರೀತಿಯಲ್ಲಿ ಬಿಂಬಿಸಲಾಗುತ್ತದೆ. ದ್ವಂದ್ವಾರ್ಥ ಸಂಭಾಷಣೆಗೆ ಪ್ರೇಕ್ಷಕರು ನಗುವುದು 'ಅಭಿವ್ಯಕ್ತಿಗೆ ಸಿಕ್ಕ ಮಾನ್ಯತೆ' ಎಂದು ಕಲಾವಿದ ತಿಳಿದುಕೊಂಡರೆ ಅದು ಆತನ ದೌರ್ಬಲ್ಯ.
                  'ಶ್ರೀದೇವಿ'ಯ ಪಾತ್ರ. ಗಂಭೀರ ಸ್ವ-ಭಾವ. ಹಿರಿಯ ಸ್ತ್ರೀ ಪಾತ್ರಧಾರಿ ಪಾತಾಳ ವೆಂಕಟ್ರಮಣ ಭಟ್ ಹೇಳುತ್ತಾರೆ, ಕೊರಳಿಗೆ ಹಾಕಿದ ಮಲ್ಲಿಗೆ ಹೂವಿನ ಹಾರದ ಒಂದು ಹೂ ಕೂಡಾ ರಂಗದಲ್ಲಿ ಉದುರಿ ಬೀಳಬಾರದು. ಆ ಪಾತ್ರ ಗಂಭೀರವಾದಷ್ಟು ಪರಿಣಾಮ ಹೆಚ್ಚು. ಭಯ, ಭಕ್ತಿಯ ಭಾವದಿಂದ ಪ್ರೇಕ್ಷಕರು ಸ್ವೀಕರಿಸುವ ಪಾತ್ರದ ಘನತೆಯನ್ನು ಕಾಪಾಡಬೇಕು. ಶುಂಭ-ನಿಶುಂಭರಿಂದ ಸೋತ ದೇವೇಂದ್ರನು ದೇವಿಯ ಮೊರೆ ಹೋಗುತ್ತಾನೆ. ದೇವಿ ಅಭಯ ನೀಡಿದ ಬಳಿಕ 'ಎಂದು ಯೋಚಿಸಿ ಮಹಮ್ಮಾಯೆ' ಎಂದು ಸ್ವ-ಯೋಚಿಸುವ ಪದ್ಯಗಳಿಗೆ ಹಿತ-ಮಿತವಾದ ನಾಟ್ಯ ಸಾಕು. ಆ ಸನ್ನಿವೇಶ ಶೃಂಗಾರವಲ್ಲ.
                ಸತ್ಯಹರಿಶ್ಚಂದ್ರ, ಸತಿ ಸಾವಿತ್ರಿ, ನಳದಮಯಂತಿ ಪ್ರಸಂಗಗಳ ಪಾತ್ರಗಳಿಗೆ ಹಿರಿಯ ಕಲಾವಿದರು ಛಾಪನ್ನು ಒತ್ತಿ ಪ್ರಸಿದ್ಧಿಯಾದವರು. ಅವರೆಲ್ಲರೂ ದಂತಕಥೆಗಳಾಗಿ ಮಾತಿಗೆ ನಿಲುಕುತ್ತಾರೆ.  ಆ ಜಾಡಿನಲ್ಲಿ ಸಾಗಿದರೆ 'ಯಕ್ಷಗಾನ ವೇಷ'ವನ್ನು ರಂಗದಲ್ಲಿ ಕಾಣಬಹುದು. ಪಾತ್ರವು ಬಯಸುವ 'ವೇಷಭೂಷಣ, ಭಾವ, ಮಾತು, ರಂಗನಡೆ'ಯನ್ನು ಕಲಾವಿದ ರೂಢಿಸಿಕೊಳ್ಳಬೇಕಾದ್ದು ಅಗತ್ಯ. ಇವೆಲ್ಲವೂ ಅನುಭವದಲ್ಲಿ ಮಿಳಿತಗೊಂಡು ರಂಗಮರ್ಯಾದೆಗೆ ಗೌರವ ತರುತ್ತಿರುವ ಕೆಲವು ಕಲಾವಿದರ ಶ್ರಮ ಗುರುತರ, ಮಾನ್ಯ.
                 ಭಾವದಲೆಯಲ್ಲಿ ಮೀಯಲು ಪಾತ್ರಗಳು ಕಾಯುತ್ತಿವೆ! ತಮ್ಮನ್ನು ಮೀರಿಸುವ ಪಾತ್ರಗಳನ್ನು ನೇಪಥ್ಯದಿಂದ ನೋಡುತ್ತಿರುವ 'ಮಾಯಾಶೂರ್ಪನಖಿ, ಮೋಹಿನಿ, ಮಾಯಾ ಅಜಮುಖಿ, ರಂಭೆ, ಊರ್ವಶಿ'ಯರು ಮರುಗುತ್ತಿದ್ದಾರೆ!

(ಸಾಂದರ್ಭಿಕ ಚಿತ್ರ : ಸುಮಾರು ಅರ್ಧಶತಮಾನದಾಚೆಗಿನ ಪಾತಾಳ ವೆಂಕಟ್ರಮಣ ಭಟ್ಟರ 'ಮೋಹಿನಿ' ಪಾತ್ರ)


Monday, February 15, 2016

ಬಾಹುಕನ ಭಾವುಕ ಅಂತರಂಗ

              "ನಳಚರಿತ್ರೆ ಸಿನೆಮಾದಲ್ಲಿ ನಟ ಕೆಂಪೇಗೌಡರ 'ಬಾಹುಕ' ಪಾತ್ರ ನನ್ನನ್ನು ಆಕರ್ಶಿಸಿತು. ಪಾತ್ರದ ನಡೆ, ಗೂನು ಬೆನ್ನು, ಮುಖದ ಭಾವ, ವೇಷ ಮತ್ತು ನಟನೆಗೆ ಮಾರುಹೋದೆ. ಅಭ್ಯಾಸ ಮಾಡಲೆಂದೇ ಹಲವು ಬಾರಿ ಸಿನಿಮಾ ನೋಡಿದೆ. ಅವರಂತೆ ಅಲ್ಲದಿದ್ದರೂ ಆ ಪಾತ್ರದ ಹಾಗೆ ಬಾಹುಕನನ್ನು ಚಿತ್ರಿಸಲು ಯತ್ನಿಸಿದೆ," ಹಾಸ್ಯಗಾರ್ ಪೆರುವೋಡಿ ನಾರಾಯಣ ಭಟ್ಟರು 'ಬಾಹುಕ'ನನ್ನು ತಾನು ಚಿತ್ರಿಸಿದ್ದ ಆರಂಭದ ದಿವಸಗಳನ್ನು ನೆನಪಿಸಿಕೊಂಡರು.
               ನಾರಾಯಣ ಭಟ್ಟರು ಶ್ರೀ ಧರ್ಮಸ್ಥಳ ಮೇಳದ (ಸುಮಾರು 1940-45) ತಿರುಗಾಟದಲ್ಲಿದ್ದರು. ಮೇಳದ ಪ್ರಧಾನ ಹಾಸ್ಯಗಾರರಾದ ಕಿಟ್ಟಪ್ಪ ಹಾಸ್ಯಗಾರರ ಸೂಚನೆ, ಮಾರ್ಗದರ್ಶನದಂತೆ ಚಿಕ್ಕಪುಟ್ಟ ಪಾತ್ರಗಳ ನಿರ್ವಹಣೆ. ಒಂದು ದಿನ ಕಿಟ್ಟಪ್ಪರು ನಾಪತ್ತೆ! ಅಂದು ಮುಡಿಪಿನಲ್ಲಿ ಆಟ. ಪ್ರಸಂಗ 'ನಳ ಚರಿತ್ರೆ'. ಕೈರಂಗಳ ಈಶ್ವರ ಭಟ್, ತೋಡುಗುಳಿ ಶಂಕರ ಭಟ್ಟರ ಹಿರಿತನ. ಚೌಕಿಯಲ್ಲಿ ಸ್ವಲ್ಪ ಹೊತ್ತು ಗೊಂದಲವಾಯಿತು. ಅದುವರೆಗೆ ಪ್ರಸಂಗವನ್ನು ಓದಲೂ ಇಲ್ಲ, ವೇಷವನ್ನು ಮಾಡಿದ್ದೂ ಅಲ್ಲ. ಕೈಕಾಲು ನಡುಗುವ ಹೊತ್ತು!
                ಬೇರೆ ದಾರಿಯಿಲ್ಲ. ಮುಖ್ಯ ಹಾಸ್ಯಗಾರರು ಬರುವ ಲಕ್ಷಣವಿಲ್ಲ. ಬಾಹುಕ ನೀವೇ ಮಾಡಬೇಕಷ್ಟೇ, ಮೇಳದ ಹಿರಿಯರು ಪ್ರೋತ್ಸಾಹಿಸಿದರು. ಒಲ್ಲೆ ಎಂದರೂ ಮಾಡುವುದು ಅನಿವಾರ್ಯವಾಗಿತ್ತು. ಅಂದು ಕೋಳ್ಯೂರು ನಾರಾಯಣ ಭಟ್ಟರ 'ನಳ', ಕುರಿಯ ವಿಠಲ ಶಾಸ್ತ್ರಿಗಳ 'ಶುಕ' ಪಾತ್ರಗಳನ್ನು ಮಾಡಿದ್ದರು.  ಬಾಹುಕ ಪಾತ್ರ ಪಾಲಿಗೆ ಬಂದಾಗ ಅಧೀರರಾದರು. ನಾನು ಬೇರೆ ಯಾರದ್ದೇ ಪಾತ್ರವನ್ನು ನೋಡಿಲ್ಲ. ಪಾತ್ರದ ಕಲ್ಪನೆಯೂ ಇಲ್ಲ. ವೇಷಗಾರಿಕೆಯ ಸ್ವರೂಪವೂ ಗೊತ್ತಿಲ್ಲ. ಕಳ್ಳನ ಹಾಸ್ಯ, ಕಟ್ಟುಹಾಸ್ಯಕ್ಕೆ ಧರಿಸುವ ಮಂಕಿಟೊಪ್ಪಿಯನ್ನು ಹೋಲುವ ಟೊಪ್ಪಿಗೆಯನ್ನು ಧರಿಸಿದೆ. ಮುಖವನ್ನು ಸ್ವಲ್ಪ ವಿಕಾರ ಮಾಡಿದೆ. ಅಂದು ಹೇಗೋ ಅಧೈರ್ಯದಿಂದ ಅಭಿನಯಿಸಿದೆ. ಪಾತ್ರ ಮುಗಿಯುವಾಗ ಬದುಕಿದೆಯಾ ಬಡಜೀವವೇ ಎಂಬಂತಾಯಿತು, ಮೊದಲ ದಿನದ ಅಸಹಾಯಕತೆಯನ್ನು ವಿವರಿಸುತ್ತಾರೆ.
               ನಂತರ ಅಧ್ಯಯನ ಶುರು. ದೇರಾಜೆಯವರ 'ಪುನರ್ಮಿಲನ' ಕೃತಿಯು ಪಾತ್ರಚಿತ್ರಣಕ್ಕೆ ಸಹಕಾರಿಯಾಯಿತು. ಮುಖ ಓರೆ ಕಾಣುವಂತೆ ಚಿತ್ರಿಸಿದರು. ಮೂಲ್ಕಿ ಮೇಳದಲ್ಲಿ ಹಿರಿಯ ಕಲಾವಿದ ಸಣ್ಣ ತಿಮ್ಮಪ್ಪ (ಪಂಜಿ ತಿಮ್ಮಪ್ಪ) ಅವರಿಂದ ಮಾರ್ಗದರ್ಶನ. ರಂಗದಲ್ಲಿ ಹೇಗೆ, ಎಲ್ಲಿ ನಿಲ್ಲಬೇಕೆನ್ನುವ ಮಾಹಿತಿ. ರಂಗಪ್ರವೇಶ, ಪತ್ರ ಓದುವಿಕೆ, ಚಲನೆಗಳ ಸೂಕ್ಷ್ಮ ಪಾಠಗಳ ಆರ್ಜನೆ. ಬಾಲ್ಯದಲ್ಲಿದ್ದಾಗ ಬಣ್ಣದ ಅಯ್ಯಪ್ಪು ಅವರ ವೇಷವನ್ನು ಭಟ್ಟರ ಅಮ್ಮ ನೋಡಿದ್ದರಂತೆ. ಅವರಿಂದ ಪಡೆದ ಮಾಹಿತಿಯೂ ಪಾತ್ರಭಿವ್ಯಕ್ತಿಗೆ ಪೂರಕವಾಯಿತು. ಆಗ ಬಡಗಿನಲ್ಲಿ ಕೊಗ್ಗು ಹಾಸ್ಯಗಾರರು ಓರೆಮೋರೆ ವೇಷ ಮಾಡಿಕೊಂಡಿದ್ದರಂತೆ.
               ಮೂಲ್ಕಿ ಮೇಳದಲ್ಲಿ ’ನಳ ಚರಿತ್ರ” ಪ್ರದರ್ಶನವು ಪ್ರೇಕ್ಷಕರ ಮನ ಗೆದ್ದಿತು. ಮೊದಲಿಗೆ ಸಣ್ಣ ತಿಮ್ಮಪ್ಪ ಅವರ ಋತುಪರ್ಣ, ನಂತರ ಕಡಾರು ನಾರಾಯಣ ಭಟ್, ಪುತ್ತೂರು ನಾರಾಯಣ ಹೆಗಡೆಯವರ 'ಋತುಪರ್ಣ' ಜತೆಗಾರಿಕೆಯು ಖ್ಯಾತಿ ಪಡೆಯಿತು. ಆಗ ಈಶ್ವರಪ್ಪಯ್ಯ ಭಾಗವತ. ತಲೆಂಗಳ ಶಂಭಟ್ಟರ ಭಾಗವತಿಕೆ . ಕತೆಯ ಕರುಣ, ದುಃಖ ರಸಗಳ ಓಟವು ಪ್ರೇಕ್ಷಕರನ್ನು ಹಿಡಿದಿಡುತ್ತಿತ್ತು. ದಮಯಂತಿ, ನಳ ಅತ್ತಾಗ ಪ್ರೇಕ್ಷಕರೂ ಕಣ್ಣೀರು ಹಾಕುತ್ತಿದ್ದರಂತೆ!
                ಬಾಹುಕ - ರೂಪಾಂತರವನ್ನು ಹೊಂದಿದ ನಳ ಎನ್ನುವ ಪ್ರಜ್ಞೆ ಪೆರುವೋಡಿಯವರ ಬಾಹುಕನಲ್ಲಿತ್ತು. ಆ ಪ್ರಜ್ಞೆಯೇ ತಾರಾಮೌಲ್ಯ ತಂದು ಕೊಟ್ಟಿತು. ಪ್ರಸಂಗದ ಕೊನೆಯ ಭಾಗದಲ್ಲಿ ಬಾಹುಕ ಮತ್ತು ದಮಯಂತಿಯರ ಮಿಲನದ ಸಂದರ್ಭ. ಈ ಸನ್ನಿವೇಶದ ಅರ್ಥಗಾರಿಕೆಯನ್ನು ಪರಿಣಾಮಕಾರಿಯಾಗಿ ರೂಪಿಸಿದ್ದರು. ಬಾಹುಕ ಜೊಲ್ಲು ಸುರಿಸುತ್ತಾ ರಂಗ ಪ್ರವೇಶ ಮಾಡುವ ದೃಶ್ಯ ಅಬ್ಬಾ...! ರಂಗಪ್ರವೇಶಕ್ಕಿಂತ ಮೊದಲು ಮಸಿಯನ್ನು ಅಗಿಯುತ್ತಿದ್ದರಂತೆ.  ಜೊಲ್ಲನ್ನು ಕಡೆವಾಯಲ್ಲಿ ಬಿಟ್ಟಾಗ ವಿಷ ಹೊರಬಂದಂತೆ ತೋರುತ್ತಿತ್ತು! ಪ್ರೇಕ್ಷಕರು ನಿಬ್ಬೆರಗಾಗುತ್ತಿದ್ದರು. ಮುಂದೆ ಮಸಿ ಅಗಿಯುವುದು ಅಸಹ್ಯವಾಗಿ ಬಿಟ್ಟುಬಿಟ್ಟರಂತೆ!
               ಮೂಲ್ಕಿ ಮೇಳದಲ್ಲಿ ದಿವಾಕರ ಭಟ್ಟರಿಗೆ ದಮಯಂತಿಯ ಪಾತ್ರ. ನಮ್ಮೊಳಗೆ ಹೊಂದಾಣಿಕೆ ಮತ್ತು ಮನೋಧರ್ಮಗಳು ಹೊಂದುತ್ತಿದ್ದುದರಿಂದ ಸನ್ನಿವೇಶ ಭಾವನಾತ್ಮಕವಾಗಿ ಮೂಡುತ್ತಿದ್ದುವು. ವಿದ್ಯಾವಂತರೂ ಮೆಚ್ಚಿಕೊಂಡರು. ಕಲಾವಿದರೂ ಸ್ಪಂದಿಸುತ್ತಿದ್ದರು. ಕೆಲವೊಮ್ಮೆ 'ಎಲ್ಲ ಸಮಯ ಅವರೇ ತಿಂದ್ರು' ಎಂಬ ಗೊಣಗಾಟವೂ ಇತ್ತೆನ್ನಿ, ಪೆರುವೋಡಿಯವರು ಕಳೆದ ಕಾಲದ ಬಾಹುಕನನ್ನು ನೆನದು  ಭಾವುಕರಾಗುತ್ತಾರೆ.
                 ಬಡಗಿನ ಅಮೃತೇಶ್ವರಿ ಮೇಳದಲ್ಲಿ ತಿರುಗಾಟದಲ್ಲಿದ್ದಾಗಲೂ ನಳಚರಿತ್ರೆಯ ಪ್ರಸಂಗ ಪ್ರದರ್ಶನವಾಗಿತ್ತು. ಉಪ್ಪೂರು ಭಾಗವತರು ಪ್ರಸಂಗವನ್ನು ಅಚ್ಚುಕಟ್ಟಾಗಿ ಆಡಿಸುತ್ತಿದ್ದರು. ಸನ್ನಿವೇಶವನ್ನು ಯಥಾವತ್ ಆಗಿ ತೋರಿಸುವ ಸಾಮಥ್ರ್ಯ ಬಡಗಿನ ಕಲಾವಿದರಲ್ಲಿ ಹೆಚ್ಚಿದೆ. ಅಲ್ಲಿ ಬಾಹುಕನನ್ನು ತುಂಬಾ ಅನುಭವಿಸಿದ್ದೇನೆ. ಬಡಗಿನ ಅಭಿಮಾನಿಗಳು ಹಾರ್ದಿಕವಾಗಿ ಸ್ವೀಕರಿಸಿದ್ದಾರೆ. ಕರ್ಕಿ, ಇಡಗುಂಜಿ ಮೇಳದವರು ಮೆಚ್ಚಿಕೊಂಡಿದ್ದಾರೆ. 'ನೈಜ ಭಾವ, ಸಹಜಾಭಿನಯ' ಎನ್ನುವ ಹೊಗಳಿಕೆಯನ್ನು ಕೊಟ್ಟು ಪ್ರೋತ್ಸಾಹಿಸಿದ್ದಾರೆ. ನಾರಾಯಣ ಭಟ್ಟರ ಬಾಹುಕ ದಕ್ಷಿಣೋತ್ತರ ಜಿಲ್ಲೆಗಳ ರಂಗದಲ್ಲಿ ಮೂಡಿಸಿದ ದೊಡ್ಡ ಹೆಜ್ಜೆಯಿದು.
                 ಪಾಪಣ್ಣ ಮತ್ತು ಬಾಹುಕ - ಈ ಎರಡೂ ಪಾತ್ರಗಳ ನಡೆ, ಸ್ವಾಭಾವಗಳು ವಿಭಿನ್ನ. ಒಂದರಂತೆ ಇನ್ನೊಂದಿಲ್ಲ. ಪೆರುವೋಡಿಯವರ ಅಭಿವ್ಯಕ್ತಿಯಲ್ಲಿ ಇವೆರಡೂ ಬೇರೆ ಬೇರೆಯಾಗಿ ಗೋಚರವಾಗುತ್ತಿದ್ದುವು. ಕಾರ್ಕೋಟಕ ಕಚ್ಚಿದುದರಿಂದ ನಳನಿಗೆ ಪರಿಭವ. ಪಾಪಣ್ಣ ಹಾಗಲ್ಲ. ಅದು ಕೃತಕ ನಾಟಕ. ಪಾಪಣ್ಣನ ಹಿನ್ನೆಲೆಯಲ್ಲಿ ಸುಂದರ ರೂಪವಿದೆ ಎನ್ನುವ ಪ್ರಜ್ಞೆ ಪಾತ್ರಧಾರಿಯಲ್ಲಿದ್ದರೆ ಒಳ್ಳೆಯದು, ಕಿವಿಮಾತು.
                  ಪೆರುವೋಡಿಯವರ 'ಬಾಹುಕ' ಒಂದು ಕಾಲಘಟ್ಟದಲ್ಲಿ ಯಕ್ಷರಂಗದಲ್ಲಿ ಸಂಚಲನ ಮೂಡಿಸಿತ್ತು. ಬದುಕಿನಲ್ಲಿ ರಸ, ಭಾವಗಳು ಶುಷ್ಕವಾಗಿರುವಾಗ ಇಂತಹ ಪ್ರಸಂಗಗಳನ್ನು ಸ್ವೀಕರಿಸುವ ಪ್ರೇಕ್ಷಕರು ಎಷ್ಟಿದ್ದಾರೆ, ಎಂದು ಪ್ರಶ್ನಿಸುವ ಪೆರುವೋಡಿ ನಾರಾಯಣ ಭಟ್ಟರಿಗೆ ಈಗ ಎಂಭತ್ತೆಂಟರ ಹರೆಯ. (ಜನನ : 28-5-1927) ಉಮೇದು ಬಂದರೆ ಈಗಲೂ ಬಾಹುಕ, ಪಾಪಣ್ಣನಾಗುತ್ತಾರೆ!


Tuesday, February 2, 2016

ಯಕ್ಷ ಪ್ರಚಾರಗಳ ಆಧುನೀಕರಣ


                 ಬಯಲು ಸೀಮೆಯ ಹಳ್ಳಿಯಲ್ಲಿದ್ದೆ. ಅಲಂಕೃತ ಟ್ರಾಕ್ಟರಿಗೆ ಧ್ವನಿವರ್ಧಕ ಬಿಗಿದು ಸಿನೆಮಾ ಪ್ರಚಾರ ಸಾಗುತ್ತಿತ್ತು.  ಟ್ರಾಕ್ಟರ್ ಹಿಂದೆ ಏನಿಲ್ಲವೆಂದರೂ ಐವತ್ತಕ್ಕೂ ಮಿಕ್ಕಿ ಮಕ್ಕಳು, ಯುವಕರ ಹಿಂಡು ಅನುಸರಿಸುತ್ತಿತ್ತು. ತೆಳುಕಾಗದದ ಸಿನೆಮಾದ ಕರಪತ್ರ ಹಳ್ಳಿ ತುಂಬುವಷ್ಟು ಕೈಯಿಂದ ಕೈಗೆ ಬದಲಾಗುತ್ತಿದ್ದುವು. ಊರು ಹೊಸ ಸಿನೆಮಾವನ್ನು ಸ್ವಾಗತಿಸಲು ಸಜ್ಜಾಗುತ್ತಿತ್ತು.
               ಇದು ಸಿನೆಮಾ ಕತೆ. ಮೂರ್ನಾಲ್ಕು ದಶಕದ ಹಿಂದಿನ ಯಕ್ಷಗಾನ ಪ್ರಚಾರವೂ ಇದಕ್ಕಿಂತ ಹೊರತಿಲ್ಲ. ರಿಕ್ಷಾ, ಜೀಪ್, ಅಂಬಾಸಿಡರ್ ಕಾರಿನಲ್ಲಿ 'ಬನ್ನಿರಿ, ನೋಡಿರಿ, ಆನಂದಿಸಿರಿ' ಎನ್ನುವ ಸ್ಲೋಗನ್ ಕೇಳಿದರೆ ಸಾಕು, ಹಳ್ಳಿ ಅಲರ್ಟ ಆಗುತ್ತದೆ. ಕರಪತ್ರಗಳನ್ನು ಆಯಲು ಮಕ್ಕಳ ತಂಡ ಸಿದ್ಧವಾಗುತ್ತದೆ. ಒಂದರ್ಧ ಗಂಟೆಯಲ್ಲಿ ಇಡೀ ಹಳ್ಳಿಯಲ್ಲಿ ಯಕ್ಷಗಾನದ್ದೇ ಸುದ್ದಿ.
                ಪ್ರಚಾರದ ವೈಖರಿಯೂ ವಿಭಿನ್ನ. ಊರಿನ ಬಸ್ನಿಲ್ದಾಣ, ಹೋಟೆಲ್ ಮತ್ತು ಕೆಂಪುಬೋರ್ಡಿ ಅಂಗಡಿ(!) - ಹೀಗೆ ಮೂರು ಕಡೆ 'ವಾಲ್ಪೋಸ್ಟರ್' ಅಂಟಿಸಿದರೆ ಸಾಕು, ಊರಿಡೀ ಪ್ರಚಾರವಾಗುತ್ತಿತ್ತು! ಅಂದರೆ ಹೆಚ್ಚು ಜನ ಸೇರುವ ಜಾಗವದು. ಅಲ್ಲಿಂದ ಶುರು ಆಟದ ಚರ್ಚೆ.  ಕಲಾವಿದರ ಅಭಿವ್ಯಕ್ತಿಯ ವಿಮರ್ಶೆ. ಮೇಳದ ಆಟದ ಸಾಮಗ್ರಿಗಳನ್ನು ಹೊತ್ತ ಲಾರಿ ಬಂದಾಗ ಅಪಾರ ಸಡಗರ. ಮೇಳದ ಚಿಕ್ಕ ಮೆಟಡೋರ್ ವ್ಯಾನ್ನಲ್ಲಿ ಅಳವಡಿಸಿದ ಕ್ಷೀಣ ಧ್ವನಿವರ್ಧಕವು ಹಗಲಿಡೀ ಸದ್ದು ಮಾಡುತ್ತಾ ಪ್ರಚಾರ ಆರಂಭಿಸುತ್ತದೆ. ಪ್ರಚಾರದಲ್ಲಿ ಬಳಸಿದ ಭಾಷೆಯ ವಿನ್ಯಾಸಗುಚ್ಛದಿಂದಲೇ 'ಯಕ್ಷಗಾನದ ಪ್ರಚಾರ' ಎಂದು ತಿಳಿಯುತ್ತಿತ್ತು.
                ಯಕ್ಷಗಾನದ ಕರಪತ್ರವನ್ನು ಜತನದಿಂದ ಕಾಪಿಡುವ ಕಲಾಭಿಮಾನಿಗಳಿದ್ದರು. ಮೊದಲ ದರ್ಜೆಯ ಆಸನಕ್ಕೆ ಮೂರು ರೂಪಾಯಿ, ಎರಡನೆಯದ್ದಕ್ಕೆ ಎರಡು ರೂಪಾಯಿ, ಮೂರು - ನಾಲ್ಕನೇ ದರ್ಜೆಯ ಆಸನಕ್ಕೆ ಒಂದು ರೂಪಾಯಿ ಮತ್ತು ಎಪ್ಪತ್ತೈದು ಪೈಸೆ ದರ. ನೆಲಕ್ಕೆ ಐವತ್ತು ಪೈಸೆ. ಅವರವರ ಗಳಿಕೆಯ ಸಾಮಥ್ರ್ಯದಂತೆ ಆಸನದ ದರ್ಜೆಯನ್ನು ಮೊದಲೇ ನಿಗದಿಪಡಿಸಿಕೊಳ್ಳುತ್ತಿದ್ದರು. ಅಂದಿಗೆ ಹೊಂದುವಂತೆ ಗಳಿಕೆಯಲ್ಲಿ ಒಂದು ಪಾಲನ್ನು ಆಟಕ್ಕಾಗಿಯೇ ಹೊಂದಾಣಿಸಿದ ದಿನಮಾನಗಳ ಫಲಾನುಭವಿ ನಾನು!
                ಆಟದ ಟೆಂಟ್ ಮೈದಾನಿನಲ್ಲಿ ತೆರೆದುಕೊಳ್ಳುತ್ತಿದ್ದಂತೆ ಹೋಟೆಲ್, ಮಣಿಸರಕು, ಬೀಡ-ಬೀಡಿ, ಸೋಜಿ (ರವೆಯ ತೆಳು ಪಾಯಸ) .. ಅಂಗಡಿಗಳ ದಿಢೀರ್ ಸೂರು ತಯಾರಾಗಿ ಸಂಜೆ ಎಲ್ಲವೂ ಸಿದ್ಧವಾಗುತ್ತದೆ. ಕೊರೆಯುವ ಚಳಿಯನ್ನು ಶಮನಿಸುವ, ಬಡವರ ಪಾನೀಯ ಎಂದೇ ಬಿಂಬಿತವಾಗಿರುವ 'ಸೋಜಿ'ಯ ಅಂಗಡಿಯ ಮುಂದೆ ಕ್ಯೂ ನಿಂತ ದೃಶ್ಯ ಕಾಡುತ್ತದೆ. ಈಗ 'ಸೋಜಿ' ಪಾನೀಯ ಮಾಯವಾಗಿದೆ. ಆಟಕ್ಕೂ ಭರ್ಜರಿ ಕಲೆಕ್ಷನ್, ಅಂಗಡಿಗಳಿಗೂ ಬರೋಬ್ಬರಿ ವ್ಯಾಪಾರ. ಒಂದು ಜಾತ್ರೆಯನ್ನು ನೆನಪಿಸುವ ಸಂಭ್ರಮ.
                ಆಧುನಿಕ ತಂತ್ರಜ್ಞಾನಗಳು ಕಾಲೂರದ ದಿವಸಗಳಲ್ಲಿ ನಾಟಕ, ಯಕ್ಷಗಾನಗಳ ಪ್ರಚಾರ ತಂತ್ರಗಳು ಅಪ್ಪಟ ದೇಸಿ. ಪ್ರಚಾರದಲ್ಲೂ ಕಾಳಜಿ, ಸಡಗರ. ರಸ್ತೆ ಬದಿಯಲ್ಲಿ ಬಿಗಿದ ಬಟ್ಟೆಯ ಬ್ಯಾನರ್ಗಳು ರಸ್ತೆಗೆ ಶೋಭೆ. ಓದುವವರಿಗೂ ಕೂಡಾ. ಅದನ್ನು ಹರಿಯುವ, ನಾಶ ಮಾಡುವ ವಿಘ್ನಸಂತೋಷಿಗಳು ಇಲ್ಲವೇ ಇಲ್ಲ. ಆಟ, ನಾಟಕ, ಜಾತ್ರೆ, ಕೋಳಿ ಅಂಕ, ನೇಮೋತ್ಸವ... ಈ ಕಾರ್ಯಕ್ರಮಗಳು ಬಂತೆಂದರೆ ಬ್ಯಾನರ್ ಬರೆಯುವ ಕಲಾವಿದರಿಗೆ ರಾತ್ರಿ ಜಾಗರಣೆ!
                ಬರಬರುತ್ತಾ ಕರಪತ್ರಗಳ ವಿನ್ಯಾಸಗಳು ಹಿರಿದಾದುವು. ಹೆಸರಿನೊಂದಿಗೆ ಕಲಾವಿದರ ಚಿತ್ರಗಳು ಅಚ್ಚಾಗುತ್ತಿದ್ದುವು. ಮುದ್ರಣಾಲಯದಲ್ಲಿ ಅದಕ್ಕೆ ಹೆಚ್ಚುವರಿ ಖರ್ಚುಗಳು. ಒಂದೊಂದು ಚಿತ್ರದ ಅಚ್ಚು ತಯಾರಿಸುವುದು ಶ್ರಮ-ಹಣ ಬೇಡುವ ಕೆಲಸ. ಕೆಲವೊಮ್ಮೆ ಚಿತ್ರಗಳು ಪರಿಚಯ ಸಿಗದಷ್ಟು ಕಪ್ಪಗಾಗಿ 'ಇಂತಹವರ ಚಿತ್ರ' ಎಂದು ಊಹಿಸಬೇಕಾಗುತ್ತಿತ್ತು! ಆ ಕರಪತ್ರವನ್ನು ಬೇಕಾಬಿಟ್ಟಿ ಹಂಚದೆ ಬೇಕಾದವರಿಗೆ ಮಾತ್ರ ವಿತರಿಸುವ ಪರಿಪಾಠ ಶುರು. ಮುದ್ರಣ ವೆಚ್ಚದ ಹೆಚ್ಚಳದಿಂದಾಗಿ ಈ ಕ್ರಮ.
                  ತಂತ್ರಜ್ಞಾನಗಳು ಅಭಿವೃದ್ಧಿಗೊಂಡಂತೆ ಮುದ್ರಣಾಯಗಳಿಗೆ ಕಂಪ್ಯೂಟರ್ಗಳು ಪ್ರವೇಶವಾದುವು. ಅಕ್ಷರ ಮೊಳೆಗಳು ಬದಿಗೆ ಸರಿದುವು. ಚಿತ್ರಗಳಿಗೆ ಸ್ಪಷ್ಟತೆ ಬಂದುವು. ಎದ್ದು ತೋರುವ ಬಗೆಬಗೆಯ ವಿನ್ಯಾಸಗಳು. ವಾಲ್ಪೋಸ್ಟರ್ಗಳು ಕೂಡಾ ಹೊಸ ವ್ಯವಸ್ಥೆಗೆ ತೆರೆದುಕೊಂಡುವು. ಈಚೆಗಿನ ಐದಾರು ವರುಷದಿಂದ ಡಿಜಿಟಲ್ ಪರ್ವ. ದಿನಪತ್ರಿಕೆಯ ಆಕಾರದಲ್ಲಿ ಯಕ್ಷಗಾನದ ಕರಪತ್ರಗಳು ಅಚ್ಚಾಗುತ್ತವೆ. ಕಲಾವಿದರ ಚಿತ್ರದೊಂದಿಗೆ ಅವರ ವೇಷದ ಚಿತ್ರಗಳು ಪ್ರಕಟವಾಗುತ್ತವೆ. ಅಭಿಮಾನ ತುಂಬಿ ಹರಿಯುತ್ತದೆ.
             ಫ್ಲೆಕ್ಸಿ ತಂತ್ರಜ್ಞಾನದಿಂದಾಗಿ ಚಿತ್ರಗಾರರು ಮರೆಯಾದರು. ಬಟ್ಟೆಯ ಮೇಲೆ ವಿವಿಧ ವಿನ್ಯಾಸದಲ್ಲಿ ಚಿತ್ರಗಳನ್ನು ಮೂಡಿಸುತ್ತಿದ್ದ ಕೈಗಳಿಗೆ ಉದ್ಯೋಗವಿಲ್ಲ. ಕೆಲವರು ಅನಿವಾರ್ಯವಾಗಿ ಡಿಜಿಟಲ್ ತಂತ್ರಗಾರಿಕೆಯನ್ನು ಕಲಿತರು. ಇನ್ನೂ ಕೆಲವರು ಬೇರೆ ಕೆಲಸಕ್ಕೆ ವರ್ಗಾವಣೆಗೊಂಡರು. ಸಣ್ಣ ಆಕಾರದ ಗಾತ್ರದಿಂದ ತೊಡಗಿ ಭೀಮ ಗಾತ್ರದ ಫ್ಲೆಕ್ಸಿಗಳು ಪ್ರಚಾರದ ಸರಕಾದುವು. ರಂಗದ ದೃಶ್ಯವನ್ನು ಸೆರೆ ಹಿಡಿದು ಫ್ಲೆಕ್ಸಿಯಲ್ಲಿ ಮುದ್ರಿಸುವುದು ಅನಿವಾರ್ಯ ಎಂದಾಯಿತು. ಯಕ್ಷಗಾನದಿಂದ ತೊಡಗಿ, ನೇಮ, ನಾಟಕ, ಬ್ರಹ್ಮಕಲಶ, ಜಾತ್ರೆ... ಹೀಗೆ ಸಮಾಜದೊಳಗಿರುವ ಎಲ್ಲಾ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಫ್ಲೆಕ್ಸಿಗೆ ಮೊದಲ ಮಣೆ.
                 ಜತೆಜತೆಗೆ ಜಾಲತಾಣಗಳ ಭರಾಟೆ. ವಾಟ್ಸಪ್, ಫೇಸ್ಬುಕ್ಗಳು, ವೆಬ್ಪುಟಗಳು.. ಯಕ್ಷಗಾನ ಪ್ರದರ್ಶನಗಳ ಪ್ರಚಾರಕ್ಕೆ ದೊಡ್ಡ ಕೊಡುಗೆ ನೀಡಿದುವು. 'ಲೈವ್' ವರದಿಯ ತುಣುಕುಗಳನ್ನು ಪ್ರಸಾರ ಮಾಡುವ ವಾಟ್ಸ್ಪ್ ಬಳಗಗಳಿವೆ. ಪ್ರಶಂಸೆ, ಹೊಗಳಿಕೆ, ತೆಗಳಿಕೆ, ವಿಮರ್ಶೆಗಳು ನಿತ್ಯ ಹರಿದಾಡುತ್ತಿರುತ್ತವೆ. ಕಲೆಯೊಂದರ ಜೀವಂತಿಕೆಗೆ ಆಧುನಿಕ ತಂತ್ರಜ್ಞಾನಗಳು ಪೂರಕವಾಗಿವುದು ಹೆಮ್ಮೆಯ ವಿಚಾರ. ಆದರೆ 'ಸಮಗ್ರ ಯಕ್ಷಗಾನ'ದ ನೋಟ ಬೀರುವಲ್ಲಿ ಏದುಸಿರು ಬಿಡುವಂತೆ ಭಾಸವಾಗುತ್ತದೆ. ಬೌದ್ಧಿಕ ಪಕ್ವತೆಯನ್ನು ರೂಢಿಸಿಕೊಂಡ ವಿಮರ್ಶೆಗಳಿಂದ ಕಲೆ ಗಟ್ಟಿಯಾಗುತ್ತದೆ. ಕಲಾವಿದ ಪಕ್ವನಾಗುತ್ತಾನೆ. ರಂಗ ಜೀವಂತವಾಗಿರುತ್ತದೆ.
              ಕರಪತ್ರಗಳ ವಿನ್ಯಾಸಗಳು ಹೇಗೆ ಬದಲಾಗುತ್ತಾ ಬಂದುವೋ ಅದೇ ರೀತಿ ಯಕ್ಷಗಾನದ ಪ್ರದರ್ಶನಗಳ ವಿನ್ಯಾಸವೂ ಕೂಡಾ ಪರಿಷ್ಕಾರಗೊಂಡಿರುವುದು ಖುಷಿಯ ಸಂಗತಿಯಲ್ಲ.

(ಪ್ರಜಾವಾಣಿ/ದಧಿಗಿಣತೋ/30-1-2016 ಪ್ರಕಟ)
ಕಪ್ಪುಬಿಳುಪು ಚಿತ್ರವು ಫೇಸ್ ಬುಕ್ಕಿನಿಂದ ಪ್ರಾಪ್ತಿ.
 


Thursday, January 28, 2016

ಕಾಫಿ ನಾಡಲ್ಲರಳಿದ ಪಾಪಣ್ಣ

              ಯಕ್ಷಗಾನ ರಂಗದಲ್ಲಿ 'ಪಾಪಣ್ಣ' ಪಾತ್ರವನ್ನು ನೆನಪಿಸಿಕೊಂಡರೆ ಥಟ್ಟನೆ ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ಕಣ್ಣ ಮುಂದೆ ಬರುತ್ತಾರೆ. ಇವರು 'ಪಾಪಣ್ಣ'ನನ್ನು ಕಡೆದ ಶಿಲ್ಪಿ. ಜೀವ ಕೊಟ್ಟ ಮಾಂತ್ರಿಕ. 'ಪಾಪಣ್ಣ ವಿಜಯ' ಪ್ರಸಂಗವು ಭಟ್ಟರನ್ನು ಎತ್ತರಕ್ಕೇರಿಸಿ ತಾನೂ ಎತ್ತರಕ್ಕೆ ಏರಿದೆ.  ಪಾತ್ರವೇ ಭಟ್ಟರಿಗೆ 'ಪಾಪಣ್ಣ ಭಟ್ರು' ಎನ್ನುವ ಅಭಿದಾನ ನೀಡಿದೆ.
ನಾರಾಯಣ ಭಟ್ಟರ ಯಜಮಾನಿಕೆಯಲ್ಲಿ ಸುಮಾರು ಆರರ ದಶಕದಲ್ಲಿ ಮೂಲ್ಕಿ ಮೇಳ ವಿಜೃಂಭಿಸುತ್ತಿತ್ತು. ಭದ್ರಾಯು ಚರಿತ್ರೆ, ಜಲಂಧರ ಕಾಳಗ, ವಜ್ರಬಾಹು ಕಾಳಗ, ವಿದ್ಯುನ್ಮತಿ ಕಲ್ಯಾಣ, ಕುಮಾರ ವಿಜಯ, ನಳಚರಿತ್ರೆ, ಹರಿಶ್ಚಂದ್ರ.. ಪ್ರಸಂಗಗಳಿಂದ ಟೆಂಟ್ ಫುಲ್! ಉದ್ಧಾಮ ಕಲಾವಿದರ ತಂಡಕ್ಕೆ ಅಭಿಮಾನದ ಹೊನಲಿನ ಸಮೃದ್ಧತೆ. ಆಗಲೇ ಪೆರುವಡಿ ಭಟ್ಟರಿಗೆ ನಳಚರಿತ್ರೆಯ 'ಬಾಹುಕ' ಪಾತ್ರವು ಒಲಿದಿತ್ತು.
             ಪಾದೆಕಲ್ಲು ಛತ್ರದ ವೆಂಕಟ್ರಮಣ ಭಟ್ಟರು ಮೂಲ್ಕಿ ಮೇಳಕ್ಕಾಗಿಯೇ 'ಪಾಪಣ್ಣ ವಿಜಯ' ಪ್ರಸಂಗವನ್ನು ರಚಿಸಿದ್ದರು. ಮೇಳದ ಕಲಾವಿದರಿಗೆ ಹೊಂದುವಂತಹ ಪಾತ್ರಸೃಷ್ಟಿಗಳು ಪ್ರಸಂಗದಲ್ಲಿದ್ದುವು. ಪರಿಣಾಮಕಾರಿಯಾದ ರಸಭಾವಗಳಿದ್ದುವು. 'ಕಾಲ್ಪನಿಕ ಪ್ರಸಂಗ' ಎನ್ನುವ ಮುಜುಗರ ಒಂದೆಡೆ. ಜನಸ್ವೀಕೃತಿಯಾದೀತೇ ಎಂಬ ಭಯ ಇನ್ನೊಂದೆಡೆ. ಪೌರಾಣಿಕ ವಾತಾವರಣದ ಮಧ್ಯೆ ಪಾಪಣ್ಣ ಗೆಲ್ಲಬಹುದೇ ಎನ್ನುವ ಆತಂಕ. ಸ್ವಲ್ಪ ದಿವಸ ಮೀನಮೇಷದಿಂದಲೇ ದಿನ ಸಂದಿತು.
             ಪಾಪಣ್ಣನ ಪಾತ್ರ ರಚನೆಯು ಫಕ್ಕನೆ ನೋಡುವಾಗ 'ಬಾಹುಕ'ನನ್ನು ನೆನಪಿಸುತ್ತದೆ. ಆದರೆ ಬಾಹುಕನ ಗುಣ-ಸ್ವಭಾವ ಬೇರೆ, ಪಾಪಣ್ಣನ ಚಿತ್ರಣವೇ ಬೇರೆ. ಸನ್ನಿವೇಶದಿಂದ ಸನ್ನಿವೇಶಕ್ಕೆ ಕುತೂಹಲ ಮೂಡಿಸುವ ಪ್ರಸಂಗದ ಪ್ರದರ್ಶನಕ್ಕೆ ಪೆರುವೋಡಿಯವರು ಉತ್ಸುಕರಾದರು. ಮೇಳದಲ್ಲಿ ಏನಾದರೂ ಹೊಸತನ್ನು ರೂಪಿಸಬೇಕು, ಜನರ ಒಲವನ್ನು ಪಡೆಯಬೇಕೆನ್ನುವ ತುಡಿತವಿತ್ತು. ಅದಕ್ಕೆ ಈ ಪ್ರಸಂಗ ನೀರೆರೆದು ಪೋಷಿಸಿತು.
               ಮೂಲ್ಕಿ ಮೇಳವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಟೆಂಟ್ ಊರಿನ ಸಮಯ. ಮೊದಲ ಪ್ರದರ್ಶನಕ್ಕೆ ಕೊಪ್ಪದ 'ಕುದ್ರೆಗುಂಡಿ ಎಸ್ಟೇಟ್'ನ್ನು ಆರಿಸಿಕೊಂಡರು. 'ಒಂದು ವೇಳೆ ಪ್ರದರ್ಶನ ಕೈಕೊಟ್ಟರೆ ಇದೇ ಮೊದಲು, ಇದೇ ಕೊನೆ ಎನ್ನುವ ನಿರ್ಧಾರಕ್ಕೆ ಬರಬಹುದಲ್ಲಾ. ಜತೆಗೆ ಊರಿನಲ್ಲಿ ಕಾಲ್ಪನಿಕ ಪ್ರಸಂಗವನ್ನು ಆಡಲು ಭಯ. ಆಗ ಪ್ರೇಕ್ಷಕರೂ ವಿಮರ್ಶಕರಾಗಿದ್ದರು ನೋಡಿ. ಹಾಗಾಗಿ ಕೊಪ್ಪವು ಸೂಕ್ತ ಜಾಗ ಅಂತ ಅಲ್ಲಿ ಮೊದಲ ಪ್ರದರ್ಶನ ಮಾಡಿದೆವು, ಆ ದಿವಸಗಳನ್ನು ನಾರಾಯಣ ಭಟ್ ಜ್ಞಾಪಿಸಿಕೊಳ್ಳುತ್ತಾರೆ.
                  ಪೆರವೋಡಿಯವರ 'ಪಾಪಣ್ಣ', ಪಾತಾಳ ವೆಂಕಟ್ರಮಣ ಭಟ್ಟರ 'ಗುಣಸುಂದರಿ', ಗುಂಪೆ ರಾಮಯ್ಯ ರೈಗಳ 'ಉಗ್ರಸೇನ', ಪುತ್ತೂರು ನಾರಾಯಣ ಹೆಗಡೆ ಮತ್ತು ಎಂಪೆಕಟ್ಟೆ ರಾಮಯ್ಯ ರೈಗಳ 'ದುಮರ್ುಖ-ದುರ್ಮತಿ', ಮಧೂರು ಗಣಪತಿ ರಾಯರ 'ಚಂದ್ರಸೇನ', ಚಂದ್ರಗಿರಿ ಅಂಬು ಅವರ 'ಕರಡಿ' ಪಾತ್ರಗಳು ಜನಮೆಚ್ಚುಗೆ ಪಡೆದುವು. ಅಂಬು ಅವರು ಕರಡಿ ಪಾತ್ರವನ್ನು ಮುಖವರ್ಣಿಕೆ, ವೇಷಭೂಷಣ ತೊಟ್ಟು ಅಂದವಾಗಿ ಮಾಡಿದ್ದರು. ಕೃತಕ ಮುಖವಾಡದ ಬದಲಿಗೆ ವೇಷತೊಟ್ಟೇ ಪ್ರಾಣಿಪಾತ್ರಗಳನ್ನು ಮಾಡಿದರೆ ಅದು ಯಕ್ಷಗಾನವಾಗಿ ಕಾಣುತ್ತದೆ, ಎನ್ನುತ್ತಾರೆ.
                  ಬಾಹುಕನಂತೆ ಮುಖವರ್ಣಿಕೆ, ಅಭಿನಯ ಅಗಬಾರದು ಎನ್ನುವ ಎಚ್ಚರವಿತ್ತು. 'ಪಾಪಣ್ಣ'ನ ಪೂರ್ವರೂಪ ರಾಜಕುಮಾರನದ್ದೆಂಬ ಹಿನ್ನೆಲೆಯಲ್ಲಿ ಹಾಸ್ಯರಸ ತರುತ್ತಿರಲಿಲ್ಲ. ಗಂಭೀರವಾದ ಅಭಿವ್ಯಕ್ತಿ. ಆರಂಭದಲ್ಲಿ ಪಾತಾಳರು ’ಗುಣಸುಂದರಿ’ಯಾದರೆ ನಂತರದ ವರುಷಗಳಲ್ಲಿ ಕೊಕ್ಕಡ ಈಶ್ವರ ಭಟ್ಟರು ಪಾಪಣ್ಣದ ಹೆಂಡತಿಯಾದರು. ಈ ಜತೆಗಾರಿಕೆ ಪ್ರಸಂಗವನ್ನು ಹಲವು ವರುಷ ಜೀವಂತವಾಗಿಟ್ಟಿತು. ಈಗಲೂ ಇವರಿಬ್ಬರ ರಂಗ ಕಾಂಬಿನೇಶನ್ ಮಾತಿಗೆ ವಿಷಯ.
                    ಪಾಪಣ್ಣ ಪ್ರದರ್ಶನದ ಒಂದು ಘಟನೆಯನ್ನು ಅವರೇ ಹೇಳಬೇಕು : ರಂಗದಲ್ಲಿ ಬಿಕ್ಷು ಪಾತ್ರಗಳನ್ನು ಮಾಡಿದಾಗ ಪಾತ್ರವು ಪ್ರೇಕ್ಷಕರ ಮಧ್ಯೆ ಹೋಗಿ ಬೇಡುವುದು ಹಿಂದಿನಿಂದಲೇ ಬಂದ ಪದ್ಧತಿ. ಈ ಕ್ರಮವನ್ನು ಮಡದಿ ಸಾವಿತ್ರಿ ಆಕ್ಷೇಪಿಸಿದ್ದಳು. ಜತೆಗೆ ಮೇಳದ ಯಜಮಾನ ಎಂಬ ನೆಲೆಯಲ್ಲಿ ನನಗೂ ರುಚಿಸುತ್ತಿರಲಿಲ್ಲ. ಇಂತಹ ಪಾತ್ರಗಳನ್ನು ಮಾಡಿದಾಗ ಪ್ರೇಕ್ಷಕರೇ ರಂಗಕ್ಕೆ ನಾಣ್ಯಗಳನ್ನು ಚೆಲ್ಲುತ್ತಿದ್ದರು. ಕೆಲವರು ರಂಗಕ್ಕೆ ಬಂದು ಕೈಗಿಡುತ್ತಿದ್ದರು. ಹೆಚ್ಚೆಂದರೆ ನೂರು ರೂಪಾಯಿ ಸಂಗ್ರಹ ಆದುದೂ ಇದೆ. ಇದನ್ನು ಹಿಮ್ಮೇಳದವರಿಗೆ, ಸಹ ಭಿಕ್ಷು ಪಾತ್ರಧಾರಿಗಳಿಗೆ ಹಂಚುತ್ತಿದ್ದೆ. ಕೆಲವೊಮ್ಮೆ ಎಲ್ಲರಿಗೂ ಸಿಹಿ ತಿನ್ನಿಸುತ್ತಲೂ ಇದ್ದೆ..
                  'ಪಾಪಣ್ಣ'ನ ಮುಖವರ್ಣಿಕೆ ನೋಡುವಾಗ ನಿಕೃಷ್ಟ! ಮೈಯೆಲ್ಲಾ ಹುಣ್ಣಾಗಿ ರಕ್ತ ಸೋರುವಂತಹ ಬಣ್ಣಗಾರಿಕೆ. ಕಪ್ಪು ಬಣ್ಣದ ಡ್ರೆಸ್. ಮುಖವೂ ವಿಚಿತ್ರ. ಕೈಯ ಬೆರಳೆಲ್ಲವೂ ಮುರುಟಿದಂತೆ ತೋರಿಸಬೇಕು. ಕುಂಟುತ್ತಾ ನಡೆಯುವ ಸಾಹಸ. ನಾರಾಯಣ ಭಟ್ಟರು ಪಾಪಣ್ಣನಾಗಿ ರಂಗದಲ್ಲಿರುವ ತನಕ ಈ ಎಲ್ಲಾ ಪಾತ್ರ ಗುಣಗಳು ಸಡಿಲವಾಗಲು ಬಿಡುತ್ತಿರಲಿಲ್ಲ. ರಂಗನಡೆ, ಮಾತುಗಳು ಸಹಜವೆಂಬಂತೆ ಚಿತ್ರಿಸುತ್ತಿದ್ದರು. ಅವರೊಂದಿಗೆ ಹಲವು ಬಾರಿ 'ಗುಣಸುಂದರಿ'ಯಾಗಿ ಪಾತ್ರವಹಿಸಿದ ಸಂದರ್ಭ ನನಗೂ ಪ್ರಾಪ್ತವಾಗಿತ್ತು. ಅಭಿವ್ಯಕ್ತಿಯನ್ನು ಮರೆತು ಪಾತ್ರೋಚಿತ ನಡೆಗಳಿಗೆ ಎಷ್ಟೋ ಬಾರಿ ರಂಗದಲ್ಲಿ ದಂಗಾಗಿದ್ದೆ.
                 "ನಾರಾಯಣ ಭಟ್ಟರ ’ಪಾಪಣ್ಣ’ ಮತ್ತು ಕೊಕ್ಕಡ ಈಶ್ವರ ಭಟ್ಟರ ’ಗುಣಸುಂದರಿ’ ಪಾತ್ರಗಳನ್ನು ನೋಡಿದಾಗ ಇವರಿಗಾಗಿಯೇ ಬರೆಯಲ್ಪಟ್ಟ ಪ್ರಸಂಗವೆಂದು ಕೆಲವು ಭಾವಿಸಿದ್ದುಂಟು," ಎಂದು ಬ್ರಹ್ಮಾವರದ ಎಚ್.ಸುಬ್ಬಣ್ಣ ಭಟ್ ಉಲ್ಲೇಖಿಸುತ್ತಾರೆ. "ಪಾಪಣ್ಣ ಪಾತ್ರಕ್ಕೆ ರೂಪದಾನ, ಪ್ರಾಣದಾನ ನೀಡಿದ್ದು ಪೆರುವೋಡಿಯವರೇ. ಆ ವೇಷಕಲ್ಪನೆ, ಬಣ್ಣಗಾರಿಕೆ, ಅಭಿನಯಗಳು ಅವರ ಪ್ರತಿಭೆಯ ಕಣ್ಣಲ್ಲಿ ಮೂಡಿದ್ದು," ಎಂದು ಕೀರ್ತಿಶೇಷ ಮಧೂರು ಗಣಪತಿ ರಾಯರು ಒಂದೆಡೆ ಹೇಳಿದ್ದರು.
                ಹವ್ಯಾಸಿ ಮತ್ತು ವೃತ್ತಿ ರಂಗಗಳಿಗೆ ಈ ಪ್ರಸಂಗ ಒಗ್ಗುತ್ತದೆ. ಪ್ರೇಕ್ಷಕರನ್ನು ಸೆರೆಹಿಡಿದು, ಅವರೊಳಗೆ ಚಿಂತನೆಯನ್ನು ಇಳಿಬಿಡುವ ಪ್ರಸಂಗವು ಈಗಲೂ ಜೀವಂತ. ಕಾಫಿಯ ಪರಿಮಳದ ನಡುವೆ ಅರಳಿದ ಪಾಪಣ್ಣ ಮತ್ತೆಂದೂ ಮುದುಡಿಲ್ಲ. ಅರಳುತ್ತಲೇ ಇದ್ದಾನೆ. ಅದು ಪ್ರಸಂಗದ ಗಟ್ಟಿತನ.

(ಪ್ರಜಾವಾಣಿ-ದಧಿಗಿಣತೋ ಅಂಕಣದಲ್ಲಿ ಪ್ರಕಟ 23-1-2016)



Monday, January 11, 2016

ಮಾತಿನ ಲೋಕದ ಮೆಲುಕು

            ಯಕ್ಷಗಾನದ ಪೂರ್ಣಾವತಾರಿ ಸೂರಿಕುಮೇರು ಗೋವಿಂದ ಭಟ್ಟರು ಆರು ದಶಕದ ಯಕ್ಷಗಾನದ ಇತಿಹಾಸಕ್ಕೆ ಸಾಕ್ಷಿಯಾಗುತ್ತಾರೆ. ಅವರೊಂದಿಗೆ ಸ್ವಲ್ಪ ಹೊತ್ತು :-
           1953-54 ಇಸವಿಯ ಆಜೂಬಾಜು. ಕಲಾಭಿಮಾನಿ ಕಾಂದಿಲ ವೆಂಕಟ್ರಾಯರ ಯಜಮಾನಿಕೆಯಲ್ಲಿ ಕೂಡ್ಲು ಮೇಳ ಸಂಪನ್ನವಾಗಿತ್ತು. ರಂಗದಲ್ಲಿ ಮಾತುಗಾರಿಕೆಯನ್ನು ಅಪೇಕ್ಷಿಸಿದ ಕಾಲಘಟ್ಟವದು. ಮೇಳಕ್ಕೆ ಹರಿದಾಸ್ ಮಲ್ಪೆ ಶಂಕರನಾರಾಯಣ ಸಾಮಗರು ಸೇರ್ಪಡೆಗೊಂಡರು. ಅವರ ಅರ್ಥಗಾರಿಕೆ ಆಗ  ಮನೆಮಾತು. ಮೇಳಕ್ಕೆ ಕಲೆಕ್ಷನ್ ಹೆಚ್ಚಾಯಿತು. ಅದೇ ಸಮಯಕ್ಕೆ ಶೇಣಿ ಗೋಪಾಲಕೃಷ್ಣ ಭಟ್ಟರ ಪ್ರವೇಶವಾಗಿತ್ತು. 'ನನಗೆ ಕುಣಿತ ಗೊತ್ತಿಲ್ಲ, ಬಣ್ಣಗಾರಿಕೆ ಗೊತ್ತಿಲ್ಲ' ಅಂತ ಶೇಣಿಯವರು ಹೇಳಿದರೂ ಕೇಳಲಿಲ್ಲ. ಬಳಿಕ ಮಲ್ಪೆ ರಾಮದಾಸ ಸಾಮಗರನ್ನು ರಂಗಕ್ಕೆ ತಂದರು. ಆಗ 'ಆಟ ನೋಡುವ' ಪ್ರೇಕ್ಷಕರಲ್ಲಿ ಬೌದ್ಧಿಕತೆಯಿತ್ತು. ವಿಮರ್ಶಿಸುವ ಗುಣವಿತ್ತು. ಹರಿದಾಸರುಗಳ ಪ್ರವೇಶದಿಂದ ಯಜಮಾನರ ಆರ್ಥಿಕ ಸ್ಥಿತಿ ಸುಧಾರಿಸಿತು. ಎಲ್ಲಾ ವರ್ಗದ ಜನ ಬರಲು ಶುರು ಮಾಡಿದರು.
             1967-68. ಮಾತುಗಾರಿಕೆಯನ್ನು ಪ್ರೀತಿಸಿದ ಪ್ರೇಕ್ಷಕರ ನಂತರದ ಪೀಳಿಗೆಗೆ ಮಾತುಗಾರಿಕೆ ದೀರ್ಘ ಅಂತ ಅನ್ನಿಸಿತು. ಅವರ ಮನಃಸ್ಥಿತಿಗೆ 'ಬೋರ್' ಆಯಿತು! ಹಿರಿಯರಿಂದ ಬೌದ್ಧಿಕ ಸಂಪತ್ತು ಹೇಳುವಷ್ಟು ಕಿರಿಯರಿಗೆ ವರ್ಗಾವಣೆಯಾಗಲಿಲ್ಲ. 'ಯಕ್ಷಗಾನ ನಾಶವಾಯಿತು' ಎಂಬಲ್ಲಿಗೆ ಬಂತು! ಪ್ರೇಕ್ಷಕರು ಬದಲಾವಣೆ ಬಯಸಿದರು.  ಇರಾ ಸೋಮನಾಥೇಶ್ವರ ಯಕ್ಷಗಾನ ನಾಟಕ ಮಂಡಳಿಯವರು ಮೊದಲ ಬಾರಿಗೆ ಹೆಜಮಾಡಿಯಲ್ಲಿ 'ಕೋಟಿ ಚೆನ್ನಯ' ತುಳು ಆಖ್ಯಾನವನ್ನು ಪ್ರದರ್ಶಿಸಿದರು. ಎರಡು ವರುಷ ಜಯಭೇರಿ ಬಾರಿಸಿತು. ನಂತರ ಪಾಡ್ದನ ಆಧಾರಿತ ತುಳು ಪ್ರಸಂಗಗಳು ರಚನೆಯಾದುವು. ಪ್ರೇಕ್ಷಕರ ಒಲವು ಗಳಿಸಿತು.
          1956 ಇರಬೇಕು, ಕಲ್ಲಾಡಿ ಕೊರಗ ಶೆಟ್ಟರು ಎರಡು ಮೇಳ ಮಾಡಿದ್ರು. ಒಂದು ಮೇಳವನ್ನು ವಿಠಲ ಶೆಟ್ಟರಿಗೆ ಬಿಟ್ಟು ಕೊಟ್ಟರು. ಕೊರಗ ಶೆಟ್ಟರು ಹೊಸ ಸೆಟ್ ಮಾಡಿದ್ರು. ಆ ಕಾಲಕ್ಕೆ ವೀರಭದ್ರ ನಾಯಕರು, ರಾಮದಾಸ ಸಾಮಗರು.. ಮೇಳದಲ್ಲಿ ಮುಖ್ಯ ಕಲಾವಿದರು. ಒಂದೇ ಕಡೆ ವಾರ, ಹದಿನೈದು ದಿವಸಗಳ ಟೆಂಟ್ ಪ್ರದರ್ಶನಗಳಾಗುತ್ತಿದ್ದುವು.
           1995-96 - 'ಮಾತು ಹೆಚ್ಚಾಯಿತು' ಎನ್ನುವವರು ಕಡಿಮೆಯಾದರು. 'ಕುಣಿತ ಹೆಚ್ಚಾಯಿತು' ಕೂಗು ಎದ್ದಿತು. ಈಗ....! ಕಲಾವಿದರು ಚೆನ್ನಾಗಿ ಕುಣಿಯುತ್ತಾರೆ. 'ನೀನು ಏನು ಕುಣಿಯುತ್ತಿ' ಎಂದು ಕೇಳಿದರೆ ಹೇಳಲು ಕಷ್ಟವಾಗಬಹುದೇನೋ? ಮೊದಲು 'ತಾನೇನು ಕುಣಿಯುತ್ತೇನೆ' ಎನ್ನುವ ಜ್ಞಾನ ಕುಣಿಯುವವನಿಗೆ ಗೊತ್ತಿತ್ತು. ಶಾಸ್ತ್ರವು ಬೆಳೆದು ಬಂದದ್ದೇ ಹಾಗೆ ಅಲ್ವಾ. ಶಾಸ್ತ್ರೀಯವಾದ ಆಧಾರ ಇಲ್ಲ ಅಂತ ವಾದ ಶುರುವಾಯಿತು. ಹೇಗೆ ಬೇಕಿದ್ದರೂ ಮಾಡಬಹುದು. ಈಗ ಹೇಗೆ ಮಾಡ್ತಿ ಅಂತ ಕೇಳುವ ಹಾಗಿಲ್ಲ. ಅವನವನಿಗೆ ಖುಷಿ ಬಂದ ಹಾಗೆ ರಂಗದಲ್ಲಿ ನಡೆಯುತ್ತದೆ.
            ವೇಷಕ್ಕೆ 'ಇದಮಿತ್ಥಂ' ಎನ್ನುವ ತೀರ್ಮಾನ ಮೊದಲಿನಿಂದಲೂ ಇಲ್ಲ. 'ಇದು ಬಣ್ಣದ ವೇಷ' ಅಂತ  ಒಬ್ಬರು ಮಾಡಿದರು. ಅವರನ್ನು ಇತರರು ಅನುಕರಿಸಿದರು. ಅವರವರ ಜ್ಞಾನದಂತೆ ಅಭಿವೃದ್ಧಿಪಡಿಸಿದರು. ನಾಟ್ಯ ಶಾಸ್ತ್ರವನ್ನು ಯಾರೂ ನೋಡಿದವರಿಲ್ಲ. ನೋಡಿ ಹೀಗೆ ಆಗಬೇಕು ಎಂದು ಹೇಳಿದವರಿಲ್ಲ. ಹಾಗಾದರೆ ಶಾಸ್ತ್ರ ಎಂದಿನಿಂದ ಆರಂಭ ಆಯಿತು? ಆರಂಭ ಕಾಲದಲ್ಲಿ ಜನಪದದಲ್ಲಿ ಇದ್ದಂತಹ ನೃತ್ಯ ವಿಶೇಷ, ಮಾತು, ಅಭಿನಯಗಳನ್ನು ಶಾಸ್ತ್ರಕಾರ ಒಂದು ಸ್ವರೂಪಕ್ಕೆ ತಂದಿರಬಹುದು. ಗ್ರಾಮ್ಯವಾದ ಕಲೆಗೆ ಆಕಾರ ಕೊಡುವ, ಜನಜೀವನವನ್ನು ತಿದ್ದುವುದಕ್ಕೆ ಗ್ರಾಮ್ಯಧರ್ಮಕ್ಕೆ ಸುಂದರತೆ ಕೊಟ್ಟಿದ್ದಿರಬೇಕು.
              ಆಗ ಒಂದೆರಡು ವಾಕ್ಯದ ಅರ್ಥಗಾರಿಕೆಯಷ್ಟೇ. ಪದ್ಯದಲ್ಲಿರುವ ಭಾವಾರ್ಥ ಹೇಳಿದರೆ ಹೆಚ್ಚು. ಕ್ರಮೇಣ ಕುರಿಯ ಶಾಸ್ತ್ರಿಗಳಂತಹ ಪ್ರತಿಭಾ ಸಂಪನ್ನರು, ಪ್ರಜ್ಞಾವಂತರು ರಂಗ ಪ್ರವೇಶಿಸಿದರು. ವಿದ್ಯಾವಂತ ಪ್ರೇಕ್ಷಕರು ಸಿದ್ಧರಾದರು. ಅರ್ಥಗಾರಿಕೆಯಲ್ಲಿ ಸುಧಾರಣೆಯಾಯಿತು. ಹಿರಿಯ ಬಲಿಪ ನಾರಾಯಣ ಭಾಗವತರು (ಈಗಿನ ಬಲಿಪ ನಾರಾಯಣ ಭಾಗವತರ ಅಜ್ಜ) 'ಮಾತಿನಲ್ಲಿ ಸ್ಪಷ್ಟತೆ ಬೇಕು. ರಂಗಸ್ಥಳದಲ್ಲಿ ಹಗುರವಾಗಿ ಮಾತನಾಡಕೂಡದು' ಎಂದು ಎಚ್ಚರಿಸುತ್ತಿದ್ದರು. ಕಲಾವಿದರಿಗೆ ಅರ್ಥ, ಸನ್ನಿವೇಶಗಳ ಪಾಠ ಮಾಡುತ್ತಿದ್ದರು. ಕಲಾವಿದರು ಒಪ್ಪಿಕೊಂಡಿದ್ದರು ಕೂಡಾ. ಕ್ರಮೇಣ ಭಾಗವತರಲ್ಲಿ ಅರ್ಥವನ್ನು ಕೇಳಿಯೇ ರಂಗಪ್ರವೇಶ ಮಾಡುವ ಪರಿಪಾಠ ಬಂತು. ಈಗಿನ ಭಾಗವತರುಗಳಿಗೂ ಕಲಾವಿದರು 'ಕೇಳಿದರೆ' ಹೇಳಲು ಗೊತ್ತು!
              ಶೇಣಿ, ಸಾಮಗರು ರಂಗಪ್ರವೇಶಿಸಿದ ಬಳಿಕ ಅವರ ಜತೆಗಿದ್ದ ಕಲಾವಿದರು ಅನಿವಾರ್ಯವಾಗಿ ಅರ್ಥ ಕಲಿಯಲು ಶುರು ಮಾಡಿದರು. ಅರ್ಥಗಾರಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಭೆಯಿಂದ ಪ್ರತಿಕ್ರಿಯೆ ಬರುತ್ತಿತ್ತು. ಅದನ್ನು ಯಾರೂ ಆಕ್ಷೇಪಿಸುತ್ತಿರಲಿಲ್ಲ. ಅಂದರೆ ಪ್ರೇಕ್ಷಕರಿಗೂ ಪುರಾಣ, ಪ್ರಸಂಗದ ಜ್ಞಾನವಿತ್ತು. ರಂಗವನ್ನು ಪ್ರೇಕ್ಷಕರು ಗಮನಿಸುತ್ತಾ ಇರುತ್ತಾರೆ. ಆದರೆ ಈಗ ನೋಡಿ.. ಎಷ್ಟೊಂದು ಬದಲಾಗಿದೆ. ಕಲಾವಿದ ಪ್ರೇಕ್ಷಕರ ಕುರಿತು ಗಮನವೇ ಕೊಡುವುದಿಲ್ಲ! ಯಾಕೆಂದರೆ ಅವನ ಅಭಿಮಾನಿಗಳು ತೃಪ್ತರಾಗುವಷ್ಟು ಮಾತ್ರ ಅಭಿವ್ಯಕ್ತಿ ಮಾಡುತ್ತಾನೆ! ಇದು ಪ್ರೇಕ್ಷಕರ ಕುರಿತಾದ ಅಸಡ್ಡೆ ಅಲ್ಲ.
              ಈಗ ಪೂರ್ಣಪ್ರಮಾಣದ ಪ್ರೇಕ್ಷಕರು ತೀರಾ ಕಡಿಮೆ. ಹೊಸತಾಗಿ ಆಸಕ್ತಿ ರೂಢಿಸಿಕೊಂಡ ಪ್ರೇಕ್ಷಕರಿದ್ದಾರಲ್ಲಾ, ಅವರ ಅಭಿರುಚಿಗಳೇ ಬೇರೆ.  ಅವರಿಗೆ ಬೇಗ ಆಟ ಮುಗಿಯಬೇಕು. ರಾತ್ರಿಯಿಡೀ ನಿದ್ರೆಗೆಡುವುದು ಸಾಧ್ಯವಿಲ್ಲ. ಜೀವನದಲ್ಲಿ ಬೇರೆ ಬೇರೆ ವ್ಯವಹಾರಗಳಿವೆ. ಒತ್ತಡವಿದೆ. ಕೂಡುಕುಟುಂಬಗಳೆಲ್ಲಾ ಛಿದ್ರವಾದುವು. ಕುಟುಂಬಗಳು ಬೇರೆಯಾದುವು. ಮನೆಯಲ್ಲಿರುವುದು ಗಂಡ, ಹೆಂಡತಿ, ಎರಡು ಮಕ್ಕಳು ಮಾತ್ರ.... ಹೀಗೆ ಕೌಟುಂಬಿಕ ಸಮಸ್ಯೆಗಳು. ಯಕ್ಷಗಾನದ ಆಸಕ್ತಿಗಳಿಗೆ ಈಗಿನ ಜೀವನ ವಿಧಾನವು ಸ್ಪಂದಿಸುವುದಿಲ್ಲ.
(ಚಿತ್ರ : ಮಹೇಶ್ಕೃಷ್ಣ ತೇಜಸ್ವಿ)