Monday, March 17, 2014

ಯಕ್ಷಗಾನ ಸಹವಾಸ - ಸ್ವಾನುಭವ



ಸ್ವಾನುಭವ : 1
- ಹವ್ಯಾಸಿ, ವೃತ್ತಿ ರಂಗಭೂಮಿಯ ಪ್ರದರ್ಶನಗಳಲ್ಲಿ ಬಹುತೇಕ ವೀರರಸ ಪ್ರಧಾನವಾಗುಳ್ಳ ಕಥಾನಕಗಳನ್ನೇ ಆರಿಸುತ್ತಾರೆ. 'ಆಟ ರೈಸಲು' ಓಕೆ.
- ಈಚೆಗೆ ಒಂದು ಆಟದಲ್ಲಿ ಪಾತ್ರಧಾರಿಯಾಗಿ ಭಾಗವಹಿಸಿದ್ದೆ. ಪ್ರಸಂಗ : ತ್ರಿಜನ್ಮ ಮೋಕ್ಷ. ಹಿರಣ್ಯಕಶ್ಯಪು-ಕಯಾದು-ಪ್ರಹ್ಲಾದ : ಸನ್ನಿವೇಶಗಳು ಸಹಜವಾಗಿ ದುಃಖ-ಕರುಣ ರಸವೇ ಪ್ರಧಾನವಾಗುಳ್ಳದ್ದು. ಸನ್ನಿವೇಶವು 'ಅವಸರವನ್ನು' ಸಹಿಸುವುದಿಲ್ಲ. ಆದರೆ ಅಂದಿನ ಯುವ ಭಾಗವತರು - ತಾರಾಮೌಲ್ಯ ಇದೆ ಎಂದು ಗ್ರಹಿಸಿದ - ಕಯಾದು ಪದ್ಯಗಳಿಗೆಲ್ಲಾ ಕತ್ತರಿ ಹಾಕಿ, ಎರಡ ಪದ್ಯದಲ್ಲೇ ಮುಗಿಸಿಬಿಟ್ಟರು.
- ಯಾಕೆ ಹೀಗೆ ಎಂದು ಪ್ರಶ್ನಿಸಿದೆ. 'ಸೌಮ್ಯ ಪದ್ಯ ಅಲ್ವೋ, ಪ್ರೇಕ್ಷಕರಿಗೆ ಬೋರ್ ಆಗುತ್ತದೆ. ಆಟ ಮೇಲೆ ಬೀಳುವುದಿಲ್ಲ' (ಯಕ್ಷಗಾನದ ಪರಿಭಾಷೆ) ಎಂಬ ಉತ್ತರ. ಆಶ್ಚರ್ಯವಾಯಿತು. ಪ್ರೇಕ್ಷಕರು ಪ್ರದರ್ಶನವನ್ನು ಆಸ್ವಾದಿಸಿದ್ದರು. ಯಾರು ಆಕಳಿಸಿದ್ದನ್ನು ನಾನು ನೋಡಿಲ್ಲ. ಆದರೂ ಅಂದಿನ ಭಾಗವತರಿಗೆ 'ಬೋರ್' ಆಯಿತು!
- ಮತ್ತೆ ತಿಳಿಯಿತು. ಇವರು 'ವೀರರಸ ಪದ್ಯಗಳ ಪ್ರಿಯ'ರೆಂದು! ಸೌಮ್ಯ ಪದ್ಯಗಳು ಬಂದಾಗ 'ಪ್ರಸಿದ್ಧರ ಬಣ್ಣ' ಬಯಲಾಗುತ್ತದೆ. ಹಾಗಾಗಿ ಇಂತಹ ಬುದ್ಧಿವಂತಿಕೆಯನ್ನು ಮಾಡುವುದು ಮಾಮೂಲಿ.
- ನೋಡಿ, ಒಬ್ಬನ ದೌರ್ಬಲ್ಯಕ್ಕೆ ಇಡೀ ರಂಗ, ರಂಗವ

ಸ್ವಾನುಭವ - 2
- ಅದೊಂದು ಆಟ. ಪ್ರಸಂಗ: ದೇವಿಮಹಾತ್ಮೆ. ಯಾವ್ಯಾವ ಕಲಾವಿದರು ಎಂದು ನಿಶ್ಚಯವಾಗಿತ್ತು. ಕಾರ್ಯಕ್ರಮದ ದಿವಸ ಹತ್ತಿರವಾಗುತ್ತಿದ್ದಂತೆ ಪ್ರಸಿದ್ಧರೆಂದು ಹಣೆಪಟ್ಟಿ ಅಂಟಿಸಿಕೊಂಡ ಕಲಾವಿದರೊಬ್ಬರು ಸಮಾರಂಭಕ್ಕೆ 5000 ರೂಪಾಯಿ ದೇಣಿಗೆ ನೀಡಿ, 'ಮಹಿಷಾಸುರ' ಪಾತ್ರ ತನಗೆ ನೀಡಬೇಕೆಂದು ಮನವಿ ಸಲ್ಲಿಸಿದರು. ಇವರ ಐದು ಸಾವಿರದಿಂದ ಸಂಘಟಕರು ನಿಶ್ಚಿಂತೆಯಿಂದ ಉಸಿರು ಬಿಟ್ಟರಾದರೂ, ಅವರ ಬೇಡಿಕೆ ಇರಿಸು ಮುರಿಸು ಉಂಟು ಮಾಡಿತ್ತು. ಸರಿ, ದಾಕ್ಷಿಣ್ಯಕ್ಕೆ ಒಪ್ಪಿಕೊಂಡರು.
ಆಟದ ದಿವಸ. ಮಹಿಷಾಸುರ ಚೌಕಿಯಲ್ಲಿ ಸಿದ್ಧವಾಗಿತ್ತು. ರಂಗದಿಂದ ಸ್ವಲ್ಪ ದೂರದಿಂದ ಮಹಿಷನ ಪ್ರವೇಶ ಹೊರಡುವುದೆಂದು ನಿಶ್ಚಯವಾಗಿತ್ತು. ಚೌಕಿಯಲ್ಲಿ ಆಗಲೇ ಅರ್ಧ ಅಮಲೇರಿದ್ದರು. ಮಹಿಷಾಸುರನ ಆವಾಹನೆಯಾಗಿತ್ತು! ಅವರಿಗೆ ಬೇಕಾದಷ್ಟು ಮದಿರೆಯನ್ನು ಸಪ್ಲೈ ಮಾಡುವ ಅಭಿಮಾನಿ ವರ್ಗವೂ ಇತ್ತು. ಹಾಗಾಗಿ ಮಹಿಷ ರಂಗಸ್ಥಳದ ಹತ್ತಿರಕ್ಕೆ ಅಬ್ಬರದ ಪ್ರವೇಶ ಮಾಡುತ್ತಾ ಬರುವಾಗಲೇ ಬಸವಳಿದಿದ್ದರು. ಹೇಗೋ ರಂಗಸ್ಥಳ ಪ್ರವೇಶ ಮಾಡಿದರೆನ್ನಿ. ಆಮೇಲೆ ಬಂದವರು ಚೌಕಿಯಲ್ಲಿ ವಿಶ್ರಮಿಸಿದರಿಗೆ ಎಚ್ಚರವಾದುದು ಬೆಳಿಗ್ಗೆ ಮಂಗಲವಾದ ಬಳಿಕವೇ!
- ಇವರ ಅವಸ್ಥೆ ನೋಡಿ ಚೌಕಿಯಲ್ಲಿದ್ದ ಸಹ ಕಲಾವಿದರು ಮತ್ತೆ ಮಹಿಷರಾದರು! ಆಟ ಮಾತ್ರ ಮೂವತ್ತು ನಿಮಿಷ ಸ್ಥಬ್ದವಾಗಿತ್ತು. ಇನ್ನೊಬ್ಬ ಮಹಿಷ ಸಿದ್ಧನಾಗಬೇಕಲ್ಲಾ...!
- ಇಲ್ಲಿ ಘಟನೆ ಮುಖ್ಯವಲ್ಲ. ಅಭಿಮಾನದ ಹುಚ್ಚು ಅಮಲಿನಲ್ಲಿ ಕಲಾವಿದರಿಗೆ 'ಗಮ್ಮತ್ತು ಮಾಡುವ, ಮಾಡಿಸುವ' ಅಭಿಮಾನಿಗಳಿಗೆ 'ಆಟ ಕುಲಗೆಟ್ಟರೂ ತೊಂದರೆಯಿಲ್ಲ, ಕಲಾವಿದರಿಗೆ ಖುಷಿಯಾಗಬೇಕು' ಎನ್ನುವ ಜಾಯಮಾನ ಇದೆಯಲ್ಲಾ, ಇದೂ ಕಲೆಗೆ ಮಾರಕ...!ಏನಂತೀರಿ?
- ಕಲಾವಿದರನ್ನು ತೃಪ್ತಿ ಪಡಿಸುವುದರಲ್ಲೇ ತನ್ನ ಸಾರ್ಥಕ್ಯ ಎಂದಿದ್ದರೆ ಬೆಳಿಗ್ಗೆನ್ನು ಒಪ್ಪಿದ ಪ್ರೇಕ್ಷಕರು, ಸಂಘಟಕರು = ಹೀಗೆ ಎಲ್ಲರೂ ಬಲಿಪಶುಗಳಾಗುತ್ತಾರೆ.

ಸ್ವಾನುಭವ 3 
- ಯಕ್ಷಗಾನದ ಚೌಕಿಯನ್ನು ಆಟಕ್ಕೆ ಬಂದ ಬಹುತೇಕ ಕಲಾಭಿಮಾನಿಗಳು ಒಮ್ಮೆ ಇಣುಕಿ, ತಮಗೆ ಇಷ್ಟಪಟ್ಟ ಕಲಾವಿದರನ್ನು ಮಾತನಾಡಿಸಿ ಹೋಗುವುದು. ಇದು ಯಕ್ಷಗಾನದ ಕುರಿತಾದ ಅಭಿಮಾನ. ಜತೆಗೆ ಕಲಾವಿದನ ಅಭಿಮಾನವೂ ಕೂಡಾ. ಹಾಗಾಗಿ ಚೌಕಿಯಲ್ಲಿ ಕನಿಷ್ಠ ಶಿಸ್ತನ್ನು ಕಾಪಾಡಿಕೊಳ್ಳುವ (ಹವ್ಯಾಸಿ ರಂಗದಲ್ಲಿ) ಹೊಣೆ ಎಲ್ಲಾ ಕಲಾವಿದರದ್ದು. ಮದ್ಯಪಾನ ಮಾಡಿ ಚೌಕಿಯಲ್ಲೇ ರಾದ್ಧಾಂತ ಎಬ್ಬಿಸುತ್ತಾ ಇದ್ದರೆ, ಹಗುರ ಮಾತುಗಳಿಂದ ತಾನು ಶ್ರೇಷ್ಠ ಎಂದು ಪ್ರತಿಷ್ಠಾಪಿಸಲು ಹೊರಟರೆ ಕಲಾಭಿಮಾನಿಗಳು ಕಲಾವಿದರಿಂದ, ಯಕ್ಷಗಾನದಿಂ ದೂರವಾಗುತ್ತಾರೆ. ಹೀಗಾಗದಂತೆ ಎಚ್ಚರ ಅಗತ್ಯ.
- ಮದ್ಯಪಾನ ಮಾಡುವುದು ಅವನವನ ವೈಯಕ್ತಿಕ ವಿಚಾರ. ಅದನ್ನು ಪ್ರಶ್ನಿಸುವಮತಿಲ್ಲ. ಆದರೆ ಸಾಮಾಜಿಕ ಕಾಳಜಿ ಮತ್ತು ಬದ್ಧತೆ ಇದೆಯಲ್ಲಾ.... ಹಿನ್ನೆಲೆಯಲ್ಲಿ ಚೌಕಿಯ ಪಾವಿತ್ರ್ಯತೆ ಯನ್ನು ಕಾಪಾಡಲೇಬೇಕು.
- ಪಾವಿತ್ರ್ಯತೆ ಎಲ್ಲಿಂದ ಬರಬೇಕು? ಕಲಾವಿದನಲ್ಲಿ ಶಿಸ್ತು, ನಂಬುಗೆ ಮತ್ತು ಪಾವಿತ್ರ್ಯದ ಭಾವಗಳಿಂದರೆ ತನ್ನಿಂತಾತೆ ಪಾವಿತ್ರ್ಯ ಅನಾವರಣಗೊಳ್ಳುತ್ತದೆ.

ಸ್ವಾನುಭವ - 4
 - ಯಕ್ಷಗಾನದ ಬಣ್ಣದ ಮನೆ(ಚೌಕಿ)ಗೆ ಪಾವಿತ್ರ್ಯದ ನಂಬುಗೆ. ನಮ್ಮೆಲ್ಲಾ ಹಿರಿಯ ಕಲಾವಿದರು ಯಕ್ಷಗಾನವನ್ನು 'ದೇವತಾರಾಧನೆ' ಎಂಬ ನಂಬುಗೆಯಿಂದ ಕಲಾ ವ್ಯವಸಾಯ ಮಾಡಿದವರು. ಚೌಕಿಯನ್ನು, ರಂಗವನ್ನು ಪೂಜ್ಯ ಭಾವನೆಯಿಂದ ಕಂಡವರು. ಈಗಲೂ ಹಲವು ಕಲಾವಿದರಲ್ಲಿ ಅಂತಹ ಭಾವನೆಗಳು ತುಂಬಿವೆ.
- ಇಂತಹ ಭಾವನೆಗಳಿಗೆ ಯಕ್ಷಗಾನದ ಹವ್ಯಾಸಿ ರಂಗಭೂಮಿಯೂ ಹೊರತಲ್ಲ. ಹವ್ಯಾಸಿ ಕ್ಷೇತ್ರದಲ್ಲಿ ಅನುಭವಿಗಳನ್ನು ಕಲೆ ಹಾಕಿ ಅದಕ್ಕೊಂದು ಸಂಘಟಿತ ರೂಪ ಕೊಟ್ಟು ಮೇಳವಾಗಿ ತಿರುಗಾಟ ಮಾಡುವುದನ್ನು ಕಾಣಬುಹುದು. ಇಲ್ಲೂ ಕೂಡಾ ದೇವತಾರಾಧನೆಯ ಭಾವ, ಭಾವನೆ.
- ಆದರೆ ಇದೆಲ್ಲವನ್ನೂ ಕಡೆಗಣಿಸಿ ಚೌಕಿಯಲ್ಲಿ ಧೂಮಪಾನ ಮಾಡುತ್ತಾ, ಸ್ವೇಚ್ಛೆಯಿಂದ ಇರುವ; ಮದ್ಯಪಾನ ಮಾಡಿ, ಅಮಲೇರಿ ಚೌಕಿಯಲ್ಲಿ ಹೇಸಿಗೆ ಹುಟ್ಟಿಸುವ, ಲಘುವಾಗಿ ಮಾತನಾಡುವ, ವ್ಯಕ್ತಿಗಳು (ಕಲಾವಿದರು ಅನ್ನಿಸಕೊಂಡ) ಇದ್ದಾರೆ. ಇವರಿಂದಾಗಿ ಇಡೀ ತಂಡಕ್ಕೆ ಕೆಟ್ಟ ಹೆಸರು. ಇಂತಹವರನ್ನು ಕಲಾವಿದರೇ ದೂರವಿಟ್ಟರೆ ತಂಡಕ್ಕೂ, ಪ್ರದರ್ಶನಕ್ಕೂ ಕ್ಷೇಮ.

Saturday, January 4, 2014

ಉಳಿಯ ಯಕ್ಷಗಾನ ಸಂಘ : ಮೆರೆದು ಮಿರುಗಿದ ಸುವರ್ಣ







               ಮಧೂರು ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘವು ಕಳೆದ ವಾರ ಚಿನ್ನದ ಹೊಳಪಿನಿಂದ ಮೆರೆಯಿತು. ವೈವಿಧ್ಯ ಹೂರಣಗಳಿಂದ ಮೆರೆಸಿತು. ಬಹುಕಾಲ ಮೆರುಗುವಂತೆ ಮಾಡಿತು. ಸಂಘವೊಂದರ ಗರಿಷ್ಠ ಸಾಧ್ಯತೆಗಳನ್ನು ಸಾಕಾರಗೊಳಿಸಿತು.
                  ಎಷ್ಟು ಬೇಕೋ ಅಷ್ಟು ಸಭಾ ಕಲಾಪ. ಒಂದು ನೆನಪು ಸಂಚಿಕೆ ಅನಾವರಣಕ್ಕೆ, ಇನ್ನೊಂದು ಸಮಾರೋಪ. ಮಿಕ್ಕ ಸಮಯವೆಲ್ಲವೂ ಯಕ್ಷಗಾನದ ವಿವಿಧ ವೈವಿಧ್ಯಗಳ ಪ್ರಸ್ತುತಿ. ಹಿರಿಯ ಕಲಾವಿದರ ಉಪಸ್ಥಿತಿ. ಕಾಪಿಟ್ಟ ಕಲಾ ಔಚಿತ್ಯದ ಮಿತಿ.
ಸಂಘವು ಚಿನ್ನದ ಹಬ್ಬಕ್ಕಾಗಿ ಐವತ್ತು ತಾಳಮದ್ದಳೆ ನಡೆಸಿತ್ತು. ಅಭಿಮಾನಿಗಳಿಂದ ಅಭಿಯಾನಕ್ಕೆ ತುಂಬು ಅಭಿಮತ. ಇಲ್ಲಿ ಪ್ರೇಕ್ಷಕರು ಮುಖ್ಯವಾಗಿರಲಿಲ್ಲ. ಮನೆ ಮಂದಿ ತಾಳಮದ್ದಳೆ ವೀಕ್ಷಿಸಬೇಕು. ಯಕ್ಷಗಾನೀಯ ವಾತಾವರಣವು ಮನೆ ಮನಗಳಲ್ಲಿ ಬೆಳಗಬೇಕು. ಆ ಮೂಲಕ ಯಕ್ಷಗಾನ ಬದುಕಬೇಕು ಎನ್ನುವ ದೂರದೃಷ್ಟಿ.
                ಅಭಿಯಾನವನ್ನು ಪ್ರಾಂಜಲವಾಗಿ ಸಮಾಜ ಸ್ವೀಕರಿಸಿದೆ. ಮನೆಯ ಜಗಲಿಯಲ್ಲಿ ಜಾಗ ಕೊಟ್ಟಿದೆ. ಅಭಿಮಾನದ ಹೊನಲು ಹರಿಸಿದೆ. ಸುವರ್ಣಾಭಿಯಾನ ಯಶದ ಹಿನ್ನೆಲೆಯಲ್ಲಿ ಚಿನ್ನದ ಹಬ್ಬದಲ್ಲಿ ಮೊದಲ ಸೆಶನ್ - ಸಂಘದ ಕಲಾವಿದರಿಂದ ತಾಳಮದ್ದಳೆ. ಅಪರಾಹ್ನ ಶ್ರೀ ಧರ್ಮಸ್ಥಳ ಮೇಳದ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರ ನಿದರ್ೇಶನದಲ್ಲಿ 'ಪೂರ್ವರಂಗ' ಪ್ರಾತ್ಯಕ್ಷಿಕೆ.
                  ಹಿಂದೆಲ್ಲಾ ಪೂರ್ವರಂಗವು ಸರಿಸುಮಾರು ರಾತ್ರಿ ಎಂಟು ಗಂಟೆಗೆ ಆರಂಭವಾಗಿ ಹತ್ತು ಗಂಟೆಯ ತನಕ ಪ್ರದರ್ಶಿತವಾಗುತ್ತಿದ್ದುವು. ಆಗಷ್ಟೇ ರಂಗಪ್ರವೇಶಿಸುವ ಕಲಾವಿದನಿಗೆ ಪೂರ್ವರಂಗ ಎನ್ನುವುದು ಕಲಿಕಾ ಶಾಲೆ. ಎಲ್ಲಾ ತಾಳ, ನಡೆಗಳ ಅಭ್ಯಾಸ. ಸಮರ್ಥವಾಗಿ ಪೂರ್ವರಂಗವನ್ನು ಅಭ್ಯಾಸ ಮಾಡಿದ ಕಲಾವಿದ ಮುಂದೆ ಎಂತಹ ಪಾತ್ರವನ್ನಾದರೂ ಮಾಡಬಹುದಾದಷ್ಟು ಸಮರ್ಥನಾಗಬಲ್ಲ. ಬಾಲಗೋಪಾಲರಲ್ಲಿಂದ ಪೀಠಿಕೆ ಸ್ತ್ರೀವೇಷದ ತನಕ ವಿವಿಧ ಪಾತ್ರಗಳ ಅಭಿವ್ಯಕ್ತಿ. ಈಗಾಗಲೇ ರಂಗದಿಂದ ಮರೆಯಾದ ಷಣ್ಮುಖ ಸುಬ್ರಾಯ ಕುಣಿತ ಮತ್ತು ಅರ್ಧನಾರೀಶ್ವರ ಪಾತ್ರಗಳ ಪ್ರಸ್ತುತಿಗಳು ಬಹುತೇಕರಲ್ಲಿ ಕುತೂಹಲ ಮೂಡಿಸಿದುವು.
                     ಸಂಜೆ 'ಅಭಿಮನ್ಯು ಕಾಳಗ', ಮತ್ತು 'ದುಶ್ಶಾಸನ ವಧೆ' ಪ್ರಸಂಗಗಳ ಪ್ರದರ್ಶನ. ಅಭಿಮನ್ಯು ಕಾಳಗವು ಸಿರಿಬಾಗಿಲು ರಾಮಕೃಷ್ಣ ಮಯ್ಯರ ಭಾಗವತಿಕೆಯಲ್ಲಿ ವಿಜೃಂಬಿಸಿದರೆ, ದುಶ್ಶಾಸನ ಕಾಳಗ ಪ್ರಸಂಗವು ಹಿರಿಯ ಕಲಾವಿದ ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಲ್ಲಿ ಯಶ ಕಂಡಿತು. ಚಂದ್ರಶೇಖರ ಧರ್ಮಸ್ಥಳ ಅವರ ಸಮರ್ಥ ಅಭಿಮನ್ಯು. ನೃತ್ಯ, ಅಭಿನಯ, ಮಾತಿನ ಸಮಪಾಕ. ಆರೋಹಣ ಕ್ರಮದ ಬೀಸು ನಡೆ. ಕೊನೆಯವರೆಗೆ 'ಅಭಿಮನ್ಯು' ಎನ್ನುವುದನ್ನು ಮರೆಯದ ಅಭಿವ್ಯಕ್ತಿ. ಬೀಸುಹೆಜ್ಜೆಯ ಪಾತ್ರಗಳಲ್ಲಿ ಭಾವಾಭಿನಯಕ್ಕೆ ಅವಕಾಶ ಕಡಿಮೆ. ತ್ರಾಸವೂ ಕೂಡಾ. ಚಂದ್ರಶೇಖರ್ ಇದನ್ನು ಸಮನ್ವಯಗೊಳಿಸಿದ್ದಾರೆ. ಖುಷಿ ನೀಡಿದ ಪಾತ್ರ. ಬಹುಕಾಲ ನೆನಪಿನಲ್ಲಿ ಉಳಿವ ಅಭಿವ್ಯಕ್ತಿ.
                      ಕುರಿಯ ಗಣಪತಿ ಶಾಸ್ತ್ರಿಗಳ ಹಾಡುಗಾರಿಕೆಯಲ್ಲಿ 'ದುಶ್ಶಾಸನ ವಧೆ' ಪ್ರಸಂಗ. ಈ ಪ್ರಸಂಗದಲ್ಲಿರುವ ಪಾರಂಪರಿಕ ಮತ್ತು ಖಚಿತ ನಡೆಗಳಿಂದಾಗಿ ಮೇಳದ ಕಲಾವಿದರು ಕೂಡಾ ಆಡಲು ಹಿಂದೇಟು ಹಾಕುವುದುಂಟು. ಆದರೆ ಕುರಿಯ, ಪದ್ಯಾಣ ಜತೆಗಾರಿಕೆಗೆ ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರ 'ರುದ್ರಭೀಮ' ಉತ್ತಮ ಸಾಥ್. ನಿಧಾನಗತಿಯಲ್ಲಿ ಸಾಗುವ ಪ್ರಸಂಗದ ಆರಂಭ, ಅದಕ್ಕೆ ಸರಿಯಾದ ಚೆಂಡೆಯ ನುಡಿ, ಭಾಗವತಿಕೆಯ ವೇಗ, ಪ್ರಸಂಗ ಸಾಹಿತ್ಯ...ಗಳು ಕಲಾವಿದರಿಗೆ ಸವಾಲು. ಈ ಸವಾಲಿಗೆ ಎಲ್ಲಾ ಕಲಾವಿದರು ಉತ್ತರ ನೀಡಿ ಉತ್ತಮ ಪ್ರದರ್ಶನ ನೀಡಿರುವುದು ಸುವರ್ಣ ಹಬ್ಬದ ಹೈಲೈಟ್.
                    ಮರುದಿವಸ ಬಲಿಪ ನಾರಾಯಣ ಭಾಗವತರು, ಪುತ್ತಿಗೆ ರಘುರಾಮ ಹೊಳ್ಳ ಮತ್ತು ದಿನೇಶ ಅಮ್ಮಣ್ಣಾಯರಿಂದ ಗಾನವೈವಿಧ್ಯ. ಪಾರಂಪರಿಕ ಪದ್ಯಗಳ ಪ್ರಸ್ತುತಿ. ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯಾಯ ಮತ್ತು ದೇಲಂತಮಜಲು ಸುಬ್ರಹ್ಮಣ್ಯ ಭಟ್. ವಾಸುದೇವ ರಂಗಾಭಟ್ಟರ ನಿರೂಪಣೆ. ಮೂರೂ ಭಾಗವತರಲ್ಲಿ ರಾಗಗಳು ವಿಸ್ತಾರವಾಗುವ ಬಗೆ, ಸಾಹಿತ್ಯದ ಸ್ಪಷ್ಟತೆ, ಮಟ್ಟುಗಳು, ಸಂಗೀತ ರಾಗಗಳ ಬಳಕೆ.. ಹೀಗೆ ವಿವಿಧ ಸ್ತರಗಳಲ್ಲಿ ಸಂಪನ್ನ. 'ಭೀಷ್ಮ ಪ್ರತಿಜ್ಞೆ' ತಾಳಮದ್ದಳೆ ಮತ್ತು 'ಶಿವಪಂಚಾಕ್ಷರಿ ಮಹಿಮೆ' ಬಯಲಾಟಗಳು - ಹೀಗೆ ಚಿನ್ನದ ಹಬ್ಬದಲ್ಲಿ ಸಮೃದ್ಧ ಹೂರಣ.
                      ಉದ್ಘಾಟನಾ ಸಮಾರಂಭದಲ್ಲಿ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿಯವರು ಪ್ರಸ್ತುತ ಕಾಲಘಟ್ಟದ ಯಕ್ಷರಂಗವನ್ನು ವಿಮರ್ಶೆ ಮಾಡಿದರು - ಯಕ್ಷಗಾನದ ಪ್ರಸ್ತುತಿಗಳು ಹೃಸ್ವವಾಗುತ್ತಿವೆ. ಲಘುಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಆಟ, ಕೂಟಗಳಲ್ಲೂ ಇಂತಹ ಲಘುತ್ವ ಕಾಣಬಹುದಾಗಿದೆ. ಕಾಲಮಿತಿ ಪ್ರದರ್ಶನವು ಕಾಲದ ಕರೆ. ಯಕ್ಷಗಾನ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆ, ವಿಮರ್ಶೆ, ಪರಿಷ್ಕರಣೆ ಆಗಬೇಕಾಗಿದೆ.
                      ಡಾ.ಶೇಣಿಯವರು ಓಡಾಡಿದ ಕಾಸರಗೋಡು ನೆಲದಲ್ಲಿ ಅವರಿಗೆ ಉತ್ತಮವಾದ ಸ್ಮಾರಕ ಇನ್ನೂ ನಿರ್ಮಾಣಗೊಂಡಿಲ್ಲ. ಶೇಣಿಯವರು ಬದುಕಿರುವಾಗಲೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬರಬೇಕಿತ್ತು. ಬಂದಿಲ್ಲ. ಆ ಯತ್ನಗಳು ಆಗಿಲ್ಲ, ಎಂದ ಜೋಶಿಯವರು ಮಾತು ಮರೆತು ಬಿಡುವಂತಹುದಲ್ಲ.

Tuesday, November 12, 2013

ಹೆಮ್ಮೆಯ ಕಲೆಗೊಂದು ಹಬ್ಬ


            ಯಕ್ಷಗಾನ ಶುರುವಾಗುವಾಗ ಸಂಜೆ ಗಂಟೆ ಐದು. ಮುಗಿಯುವಾಗ ಮರುದಿವಸ ಮಧ್ಯಾಹ್ನ ಒಂದು ಮೀರಿತ್ತು! ನಾಡಿನ ಖ್ಯಾತ ಕಲಾವಿದರ ಸಮ್ಮಿಲನ. ಪೈಪೋಟಿಯ ಅಭಿವ್ಯಕ್ತಿ. ತುಳುಕಿದ ಯಕ್ಷಪ್ರೇಮಿಗಳ ಸಂದೋಹ. ತಂತಮ್ಮೊಳಗೆ ವಿಮರ್ಶೆ. ಮಾತುಕತೆ, ಜಿಜ್ಞಾಸೆ. ಉಭಯ ಜಿಲ್ಲೆಗಳೆರಡರಿಂದಲೂ ಪ್ರೋತ್ಸಾಹ. ಸಂಪಾಜೆಯ 'ಯಕ್ಷೊತ್ಸವ' ಸಂಪನ್ನವಾಗಿ ಬಸ್ಸನ್ನೇರುವಾಗ ಯಕ್ಷಗಾನದ್ದೇ ಗುಂಗು. ಛೇ.. ಮುಗಿಯಿತಲ್ಲಾ ಎನ್ನುವ ಪೆಚ್ಚುಮೋರೆ.

              ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸಾರಥ್ಯದಲ್ಲಿ ನಡೆಯುವ ಯಕ್ಷೊತ್ಸವಕ್ಕೆ ಅದೇ ಸಾಟಿ. ವರುಷದಿಂದ ವರುಷಕ್ಕೆ ಏರುಗತಿ. ಕಲಾವಿದರಿಗೂ ಪ್ರತಿಷ್ಠೆ. ಒಂದೆಡೆ ಬೆರೆಯುವ ಅವಕಾಶ. ಕಲಾಭಿಮಾನಿಗಳಿಗೂ ನೆಚ್ಚಿನ ಕಲಾವಿದರನ್ನು ಒಂದೇ ಸೂರಿನಡಿ ನೋಡುವ, ಮಾತನಾಡುವ ಹಪಾಹಪಿ. ಮೂರ್ನಾಲ್ಕು ಪ್ರಸಂಗವಿದ್ದರೂ ಸಮಯವಿಲ್ಲವೆಂದು ಕತೆಯನ್ನು ಕುಗ್ಗಿಸುವ ಜಾಯಮಾನವೇ ಇಲ್ಲ. ಪ್ರಸಂಗದ ಸಾರಸರ್ವಸ್ವದ ಸಾಕಾರ.

              ಹಬ್ಬ ಎಂದಾಕ್ಷಣ ಅಲ್ಲಿ ಗೌಜಿ, ಗಮ್ಮತ್ತು ಇರಲೇಬೇಕಲ್ವಾ. ಸಂತೋಷವೇ ಆಶಯ.  ಮನಸ್ಸಿಗೆ ಮುದ ನೀಡುವ ಹೂರಣ. ಕಲಾವಿದನ ಅರ್ಹತೆಗೆ ತಕ್ಕ ಪಾತ್ರಗಳು. ಕಲಾವಿದನಿಗೂ ಮಾನ, ಸಂಮಾನ. ಮನ ತುಂಬುವ  ಸಂಭಾವನೆ. ಹಬ್ಬವಾದ್ದರಿಂದ ಪ್ರದರ್ಶನದಲ್ಲಿ ಹೆಚ್ಚು  ಗುಣಮಟ್ಟವನ್ನು ನಿರೀಕ್ಷಿಸಲಾಗದು. ನಿರೀಕ್ಷಿಸಬಾರದು. ಅದು ಸಾಧ್ಯವೂ ಇಲ್ಲ. ಆದರೆ ಚೌಕಟ್ಟನ್ನು ಮೀರದ ಎಚ್ಚರ ಸಂಘಟಕರಲ್ಲೂ ಇದೆ, ಕಲಾವಿದರಲ್ಲೂ ಇದೆ. 

             ಯಕ್ಷ ಹಬ್ಬಕ್ಕೆ ಆಗಮಿಸಿದ ಎಲ್ಲರಿಗೂ ಹೊಟ್ಟೆ ಬಿರಿಯುವಷ್ಟು ದಾಸೋಹ. ಆಟ ಮುಗಿದರೂ ಅಡುಗೆ ಶಾಲೆಯ ಬಳಿ ಕ್ಯೂ! ಬಗೆಬಗೆಯ ತಿಂಡಿಗಳು, ಸಿಹಿ, ಕಾಫಿ, ಚಹಾ.  ಬೇಕಾದ್ದನ್ನು ಬೇಕಾದಷ್ಟು ಹೊತ್ತಿಗೆ ಸವಿಯುವ ಅವಕಾಶ ಅದು ಸಂಪಾಜೆಯ ಯಕ್ಷೊತ್ಸವದಲ್ಲಿ ಮಾತ್ರ! ಆಟದ ಸಿಹಿಯೊಂದಿಗೆ ತೆರಳಿದ ಯಕ್ಷಪ್ರೇಕ್ಷಕರು ಅಲ್ಲಿನ ವರ್ತಮಾನವನ್ನು, ಅಡುಗೆ ಮನೆಯ ವಿಶೇಷಗಳನ್ನು ಸ್ನೇಹಿತರಲ್ಲಿ, ಬಂಧುಗಳಲ್ಲಿ ಹೇಳಿಕೊಂಡಷ್ಟೂ ಅಭಿಮಾನ.

             ಪಾತ್ರ ಪರಿಚಯದ ದೊಡ್ಡ ಗಾತ್ರದ ಕರಪತ್ರವನ್ನು ಆಗಾಗ್ಗೆ ತೆರೆದು ರಂಗಕ್ಕೆ ಪ್ರವೇಶವಾಗುವ ವೇಷ, ವೇಷಧಾರಿಗಳ ಪರಿಚಯ ಮಾಡಿಕೊಳ್ಳುತ್ತಿದ್ದುದು ಗಮನಾರ್ಹ. ಇದರಿಂದಾಗಿ ಪ್ರಸಂಗವೊಂದರಲ್ಲಿ ಎಷ್ಟು ಪಾತ್ರಗಳಿವೆ ಎನ್ನುವ ಕನಿಷ್ಠ ಜ್ಞಾನವಾದರೂ ಪ್ರಾಪ್ತವಾಗುವುದು ನೇಪಥ್ಯ ಸತ್ಯ.

              ನೀವಿಂದು ಯಾರನ್ನೇ ಕೇಳಿ, 'ಪುರುಸೊತ್ತಿಲ್ಲಾ, ಮಾರಾಯ್ರೆ' ಎಂಬ ಸಿದ್ಧ ಢಾಳು ಉತ್ತರ ರಾಚುತ್ತದೆ. ಸಂಪಾಜೆಯ ಹಬ್ಬ ಇಂತಹ ಮನಸ್ಸುಗಳನ್ನು ಎರಡು ದಿವಸ ಸೆಳೆದಿದೆ. ತನ್ನಲ್ಲಿ ಸೇರಿಸಿಕೊಂಡಿದೆ. ಬ್ಯುಸಿಗೆ ಉತ್ತರ ನೀಡಿದೆ.  ಬ್ಯುಸಿಯು ಮೊಬೈಲುಗಳ ಬಳಕೆಯ ವೇಗವನ್ನು ಕಡಿಮೆಗೊಳಿಸಿದೆ. ಇದು ಉತ್ರೇಕ್ಷೆಯಲ್ಲ. ಇದು ಫೇಸ್ ಬುಕ್ಕಿನ ಕಾಲ. ಅದಕ್ಕಾಗಿ ಫೋಟೋ ಕ್ಲಿಕ್ಕಿಸುವ, ಮೊಬೈಲ್ ಫೋಟೋ ತೆಗೆವ, ಅದನ್ನು ಪೇಸ್ಬುಕ್ಕಿಗೆ ಏರಿಸಿ, ಖುಷಿ ಪಡುವವರು ತಮ್ಮ ಪಾಡಿಗೆ ತಾವಿದ್ದರು! 

           ಯಕ್ಷಾಭಿಮಾನಿಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಆಸಕ್ತಿ. ಕೆಲವರಿಗೆ ಭಾಗವತಿಕೆ ಇಷ್ಟ. ಹಲವರಿಗೆ ಪುಂಡುವೇಷ ಪ್ರಿಯ. ಸ್ತ್ರೀವೇಷವನ್ನು ಮೆಚ್ಚಿಕೊಳ್ಳುವ ಇನ್ನೊಂದು ವರ್ಗ. ಮಾತುಗಾರಿಕೆಯನ್ನು ಪ್ರೀತಿಸುವ, ಪುಂಡುವೇಷಗಳ ದಿಂಗಿಣವನ್ನು ನೋಡುವ, ದಿಂಗಿಣವನ್ನು ಲೆಕ್ಕ ಹಾಕುವ, ಹಾಸ್ಯ ರಸವನ್ನು ಸವಿಯುವ, ರಾಕ್ಷಸ ಪಾತ್ರಗಳ ಅತಿಮಾನುಷತೆಯನ್ನು ಕಣ್ತುಂಬಿಕೊಳ್ಳವ.. ಹೀಗೆ ವಿವಿಧ ವೈವಿಧ್ಯ ಮನಸ್ಸುಗಳು. ತಂತಮ್ಮ ಅಭಿಮಾನಿ ಕಲಾವಿದರು ಬಂದಾಗ ಕರತಾಡನದ ಬೆಂಬಲ. 

            ಸಂಪಾಜೆಯ ಶಾಲಾ ವಠಾರದಲ್ಲಿ ಸೀಮಿತ ಜಾಗ ವ್ಯವಸ್ಥೆ. ಇದ್ದ ಜಾಗದಲ್ಲಿ ಕುಳಿತುಕೊಳ್ಳುವ ಏರ್ಪಾವು. ಕುಳಿತಷ್ಟೇ ಜನ ನಿಂತೇ ಆಟವನ್ನು ನೋಡಿದ್ದಾರೆ. ಇಲ್ಲಿ ಗೊಣಗಾಟವಿರಲ್ಲ. ಅತೃಪ್ತಿಯಿರಲಿಲ್ಲ. ಆಟವೊಂದೇ ಜಪ-ತಪ. ನಿಜಕ್ಕೂ ಸಂಪಾಜೆ ನೆಲದ ಗುಣ.

             ಪ್ರತಿಷ್ಠಾನವು ಶಿಕ್ಷಣ, ವೈದ್ಯಕೀಯ ಚಿಕಿತ್ಸೆಗಳಿಗೆ ಆರ್ಥಿಕ ನೆರವು ನೀಡುತ್ತದೆ. ಕಲಾವಿದರನ್ನು ಸಂಮಾನಿಸುತ್ತದೆ. ಶೇಣಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಯತಿಗಳನ್ನು ಗೌರವಪೂರ್ವಕವಾಗಿ ಆಹ್ವಾನಿಸಲಾಗುತ್ತದೆ. 'ಸಂಪಾಜೆಯ ಯಕ್ಷೊತ್ಸವದಲ್ಲಿ ಪಡೆದ ಸಂಮಾನವು ಕನ್ನಾಡ ರಾಜ್ಯೋತ್ಸವ ಸಂಮಾನಕ್ಕಿಂತಲೂ ಹಿರಿದು! ತೂಕದಲ್ಲಿ, ಗೌರವದಲ್ಲಿ ಮತ್ತು ಭಾವನೆಗಳಲ್ಲಿ ಎತ್ತರದಲ್ಲಿರುವ ಪ್ರಶಸ್ತಿಯನ್ನು ಪಡೆದ ಹಿರಿಯರೆಷ್ಟೋ? ಸಾಧನೆ, ವಯಸ್ಸು, ಅರ್ಹತೆಗಳ ಆಧಾರದಲ್ಲಿ ಪ್ರಶಸ್ತಿ-ಸಂಮಾನ. 

               ಕಳೆದ ಶನಿವಾರ-ರವಿವಾರ ಯಕ್ಷೊತ್ಸವ ಜರುಗಿತು. ಹಳ್ಳಿಗಳಿಗೆ ಹೋಗಿ. ಅಲ್ಲಿ ಯಕ್ಷೊತ್ಸವದ ಗುಂಗು ಇನ್ನೂ ಆರಿಲ್ಲ. ನಿರಂತರ ಮಾತುಕತೆ, ವಿಮರ್ಶೆ. ತಂತಮ್ಮ ಅಭಿಮಾನಿ ಕಲಾವಿದರ ಅಭಿವ್ಯಕ್ತಿಯನ್ನು ಬಿಟ್ಟು ಕೊಡದ ಬಿಸಿ ಬಿಸಿ ಚರ್ಚೆ. ಯಾಕೆ ಹೇಳಿ? ಅಲ್ಲಿ ಈಗಲೂ ರಸ-ಭಾವ ತುಂಬಿದ ಮನಸ್ಸುಗಳು ಬಡವಾಗಿಲ್ಲ. ಹಾಗಾಗಿ ನಿರಂತರ ಯಕ್ಷಗಾನಗಳಾಗುತ್ತಿವೆ, ನಾಟಕಗಳಾಗುತ್ತಿವೆ. ಹಳ್ಳಿ ಸೊಗಸಿನ ಸಾಂಸ್ಕೃತಿಕ ಕಾರ್ಯಕ್ರಮಗಳಾಗುತ್ತಿವೆ.

      ಹಳ್ಳಿ ಬಿಟ್ಟು ಈಚೆಗೆ ಬನ್ನಿ, ಶುರುವಾಯಿತು, ಒತ್ತಡದ ಬದುಕು, ಮೊಬೈಲಿನ ರಿಂಗಣ., ಮಿಂಚಂಚೆಗಳ ಅಬ್ಬರ. ಜಾಲತಾಣಗಳ ಅಟ್ಟಹಾಸ!ಒತ್ತಡದ ಬದುಕಿಗೆ ಬೇಕು ಯಕ್ಷೊತ್ಸವದಂತಹ ಟಾನಿಕ್. ಯಕ್ಷಗಾನ ಕ್ಷೇತ್ರದಲ್ಲೇ ಅಪೂರ್ವವಾದ ಕಲಾಪವನ್ನು ನಡೆಸಿಕೊಡುತ್ತಿರುವ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನಕ್ಕೆ ಅಭಿನಂದನೆ.

Friday, July 26, 2013

ಶೀನಪ್ಪ ಭಂಡಾರಿಗಳ ಮೇಳ - ಹಳ್ಳಿಗಳ ಸಾಂಸ್ಕೃತಿಕ ಉಸಿರು


                 ಕೃಷ್ಣ ವರ್ಣದ ಕಲಾವಿದರೊಬ್ಬರು ಕಂಕುಳಲ್ಲಿ ಆಟದ ವಾಲ್ಪೋಸ್ಟ್ ಇಟ್ಟುಕೊಂಡು ಬಸ್ಸಿಳಿದರೆ ಸುತ್ತುಮುತ್ತ ಶ್ರೀ ಸುಬ್ರಹ್ಮಣ್ಯ ಮೇಳದ ಆಟವಿದೆ ಎಂದರ್ಥ. ಚಹದಂಗಡಿ, ಸೆಲೂನ್, ಸ್ಫೂರ್ತಿ ರಸಾಯನ ಸೇವಿಸುವ ಅಂಗಡಿಗಳ ಗೋಡೆಗಳಲ್ಲಿ ವಾಲ್ಪೋಸ್ಟ್ ಅಂಟಿಸಿ, ಕರಪತ್ರಗಳನ್ನಿಟ್ಟು ಮುಂದಿನ ಬಸ್ಸಲ್ಲಿ ತೆರಳುತ್ತಾರೆ. ಈ ಮೂರು ಸ್ಥಳಗಳಲ್ಲಿ ಒಂದಕ್ಕಾದರೂ ಜನ ಬಾರದಿರರು ಎಂಬ ನಂಬುಗೆ ಕಲಾವಿದ ಅಂಬು ಶೆಟ್ಟರದು. ಅಂಟಿಸಿದ ಬ್ಯಾನರ್ ಪ್ರದರ್ಶನ ಮುಗಿಯುವಲ್ಲಿಯ ತನಕ ಸಾಂಸ್ಕೃತಿಕ ಗುಂಗನ್ನು ಜೀವಂತ ಹಿಡಿದಿಡುತ್ತಿತ್ತು.

             ಪುತ್ತೂರು ಶೀನಪ್ಪ ಭಂಡಾರಿ (ಶೀನಪ್ಪಣ್ಣ, ಶೀನಣ್ಣ) ಇನ್ನಿಲ್ಲ. ಜೂನ್ 24ರಂದು ವಿಧಿವಶ. ಅರ್ಧ ಶತಮಾನಕ್ಕೂ ಮಿಕ್ಕಿ ಸದ್ದಿಲ್ಲದೆ ಕರಾವಳಿಯುದ್ದಕ್ಕೂ ಯಕ್ಷಗಾನ ಮೇಳವನ್ನು ಒಯ್ದಿದ್ದಾರೆ. ಸಾರಿಗೆಯ ತೊಂದರೆಯಿಂದಾಗಿ ದೊಡ್ಡ ಮೇಳಗಳು ಹೋಗಲಾಗದ ಸ್ಥಳಗಳಲ್ಲಿ ಟೆಂಟ್ ಊರಿದ್ದಾರೆ. ಇವರ ಮೇಳದ ಸರಕು ಸಾಗಾಟಕ್ಕೆ ಎತ್ತಿನ ಗಾಡಿ ಹೋಗುವಷ್ಟು ದಾರಿ ಸಾಕು. ಹೀಗಾಗಿ ನಗರಕ್ಕಿಂತಲೂ ಹಳ್ಳಿಯ ಜನ ಸುಬ್ರಹ್ಮಣ್ಯ ಮೇಳವನ್ನು ಒಪ್ಪಿಕೊಂಡಿದ್ದರು, ಅಪ್ಪಿಕೊಂಡಿದ್ದರು. ಇದು ಒಂದು ಕಾಲಘಟ್ಟದ ಚಿತ್ರಣ.

             ಸಾರಿಗೆ ಬಂತು. ವ್ಯವಸ್ಥೆಗಳು ದಾಂಗುಡಿಯಿಟ್ಟವು. ಮೇಳಗಳ ಸಂಖ್ಯೆ ಬೆಳೆದುವು. ವೈವಿಧ್ಯ ಪ್ರಸಂಗಗಳು ಪ್ರದರ್ಶಿತಗೊಂಡುವು. ರಂಗುರಂಗಿನ ವೇಷಭೂಷಣಗಳು, ರಂಗವೇದಿಕೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುವು. ಇವುಗಳ ಮಧ್ಯೆ ಭಂಡಾರಿಗಳ ಮೇಳ ಯಾವ ಪ್ರಚಾರ ರಂಪಾಟಕ್ಕೂ ಸಿಕ್ಕದೆ ಹಳ್ಳಿಯ ಪ್ರೇಕ್ಷಕರನ್ನು ನಂಬಿತು. ಕಿಸೆ ತುಂಬಿ ತುಳುಕದಿದ್ದರೂ, ಎಂದೂ ಖಾಲಿಯಾದುದಿಲ್ಲ; ಅರೆಹೊಟ್ಟೆಯಲ್ಲಿ ನಿದ್ರಿಸಲಿಲ್ಲ, ಮನೆಮಂದಿ ಉಪವಾಸ ಕೂರಲಿಲ್ಲ ಎನ್ನುವುದು ಗಮನಾರ್ಹ.

              ಶೀನಣ್ಣ ತುಳು ಪ್ರಸಂಗಗಳ ಮೂಲಕ ಹಳ್ಳಿಯ ಮನಸ್ಸು ಗೆದ್ದಿದ್ದರು. ಒಂದು ಪ್ರಸಂಗದ ಪ್ರದರ್ಶನದಲ್ಲಂತೂ ರಾತ್ರಿ ಪ್ರೇಕ್ಷಕರಿಗೆ ಚಹ ವಿತರಿಸಿ ಟೆಂಟ್ ಫುಲ್ ಮಾಡಿದುದು ಇತಿಹಾಸಕ್ಕೆ ಸೇರಿದ ಸಂಗತಿ. ಹಿತಮಿತವಾದ ವೇಷಭೂಷಣವಿದ್ದರೂ ಪ್ರೇಕ್ಷಕರಿಗೆ ಗೊಂದಲವಾಗದಂತೆ ಸರಿದೂಗಿಸುವ ಜಾಣ್ಮೆ ಮೇಳ ಕಲಿಸಿದ ಅನುಭವ. ಪ್ರದರ್ಶನದ ಮಧ್ಯೆ ಜನರೇಟರಿನಲ್ಲಿ ಡೀಸಿಲ್ ಕೈಕೊಟ್ಟಾಗ, ವಿದ್ಯುತ್ ಕಣ್ಣುಮುಚ್ಚಾಲೆಯಾಡಿದಾಗ ಭಂಡಾರಿಗಳು ಅಧೀರರಾದುದಿಲ್ಲ. ಪ್ರೇಕ್ಷಕರಿಗೆ ನಿರಾಶೆ ಮಾಡದೆ ಬೆಳಗ್ಗಿನವರೆಗೆ ಆಟ ರೈಸುವಂತೆ ಮಾಡುವಲ್ಲಿ ಪರಿಣತ!

               ಆಟಕ್ಕೆ ಜನ ಕಡಿಮೆಯಾಗಿ ವೆಚ್ಚಕ್ಕೆ ಹಣ ಸಾಕಾಗದ ಸಂದರ್ಭಗಳಲ್ಲಿ ಹಳ್ಳಿಯ ಅಭಿಮಾನಿಗಳು ಆಧರಿಸಿ, ಹಣ ಸಂಗ್ರಹಿಸಿ ಕೈಗಿತ್ತುದನ್ನು ನೆನಪಿಸಿಕೊಳ್ಳುತ್ತಿದ್ದರು. ಚೌಕಿಯೊಳಗೆ ಇಣುಕಿದರೆ ಐದೋ ಹತ್ತೋ ಮಂದಿ ಕಲಾವಿದರು. ಬೆಳಗ್ಗಿನವರೆಗೆ ದೇವಿ ಮಹಾತ್ಮೆ ಪ್ರಸಂಗವನ್ನು ನಿರ್ವಹಿಸುವಷ್ಟು ಅನುಭವಿಗಳು. ಶೀನಪ್ಪಣ್ಣನ ಗರಡಿಯಲ್ಲಿ ಪಳಗಿದ ಚಾಣಾಕ್ಷರಿವರು. ಒಂದು ರಾತ್ರಿ ಮೂರೋ ನಾಲ್ಕೋ ವೇಷವನ್ನು ನಿರ್ವಹಿಸುವಷ್ಟು ಗಟ್ಟಿಗರು.

                ಶ್ರೀ ಸುಬ್ರಹ್ಮಣ್ಯ ಮೇಳವು ಕಲಾವಿದರನ್ನು ಸೃಷ್ಟಿಸುವ ಒಂದು ಕಾರ್ಖಾನೆ. ಇಲ್ಲಿ ಗೆಜ್ಜೆ ಕಟ್ಟಿ ಕುಣಿಯದ ಕಲಾವಿದರು ವಿರಳ. ಒಂದೆರಡು ವರುಷ ವ್ಯವಸಾಯ ಮಾಡಿದರೆ ಸಾಕು, ಕಷ್ಟ-ಸುಖಗಳ ಆರ್ಜನೆಯಾಗುತ್ತಿತ್ತು. ರಂಗಮಾಹಿತಿಗಳು ಕರಗತವಾಗುತ್ತಿತ್ತು. ತೆಂಕಿನ ಬಹುತೇಕ ಮೇಳಗಳಲ್ಲಿ ಭಂಡಾರಿಗಳ ಗರಡಿಯಲ್ಲಿ ಪಳಗಿದ ಕಲಾವಿದರು ಒಬ್ಬಿಬ್ಬರಾದರೂ ಮಾತಿಗೆ ಸಿಗುತ್ತಾರೆ.

              ಮೇಳದ ಬದುಕು ಹೂವಿನ ಹಾಸಿಗೆ ಕೊಟ್ಟಿಲ್ಲ, ಆದರೆ ಮುಳ್ಳಿನಲ್ಲಿ ನಡೆದಿಲ್ಲ. ಕಾಂಚಾಣ ಸದ್ದುಮಾಡಿಲ್ಲ, ಆದರೆ ಬದುಕು ನಲುಗಲಿಲ್ಲ. ಕೊನೆಯವರೆಗೂ ಯಕ್ಷಗಾನದ್ದೇ ಮಂತ್ರ. ರಂಗದಲ್ಲಿ ಕೌರವನಾಗಿ, ಹಿರಣ್ಯಾಕ್ಷನಾಗಿ ಮೆರೆದ ಭಂಡಾರಿಗಳಿಗೆ ಪುರಾಣ ಪಾತ್ರಗಳ ಸೂಕ್ಷ್ಮಾತಿಸೂಕ್ಷ್ಮಗಳ ಅರಿವಿತ್ತು. ಮೇಳ ಮುನ್ನಡೆಸುವ, ಕಲಾವಿದರನ್ನು ಪೋಶಿಸುವ ದೃಷ್ಟಿಯಿಂದ ತುಳು ಪ್ರಸಂಗಗಳನ್ನು ನೆಚ್ಚಿಕೊಳ್ಳಬೇಕಾಯಿತು.

              ಶೀನಪ್ಪಣ್ಣ ರಾಜ್ಯ ಪ್ರಶಸ್ತಿ ಪುರಸ್ಕೃತರು. ಸರಕಾರಿ ವಲಯದಲ್ಲಿ ಯಕ್ಷಗಾನದ ಹೆಸರು ಬಂದಾಗಲೆಲ್ಲಾ ವರಿಷ್ಠರಿಗೆ ಭಂಡಾರಿಗಳು ಪರಿಚಿತ. ಬಹಳ ಆಪ್ತ ಸಂಬಂಧವಿತ್ತು. ಅಷ್ಟೇ ಅಂತರವನ್ನು ಕಾಪಾಡಿಕೊಂಡಿದ್ದರು. ಸರಕಾರಿ ಆಯೋಜಿತ ಯಕ್ಷಗಾನ ಪ್ರದರ್ಶನಗಳನ್ನು ನಿರುಮ್ಮಳವಾಗಿ ನಡೆಸಿಕೊಡುತ್ತಿದ್ದರು. ಕಚೇರಿಗಳ ಕೆಂಪುಪಟ್ಟಿ ವ್ಯವಸ್ಥೆಯ ಹತ್ತಿರದ ಪರಿಚಯವಿತ್ತು.

              ನಯ ವಿನಯ ಮಾತುಗಳು ಜನ್ಮದತ್ತ. ವ್ಯವಹಾರ ಕುಶಲಿ. ಅರ್ಧ ಶತಮಾನಕ್ಕೂ ಮಿಕ್ಕಿದ ಯಕ್ಷಬದುಕಿನ ಯಶದ ಕಾರಣವಿದು. ಮೇಳದ ಪ್ರದರ್ಶನಗಳಲ್ಲಿ, ವ್ಯವಸ್ಥೆಗಳಲ್ಲಿ ವ್ಯತ್ಯಾಸ ಬಂದಾಗ ಪ್ರೇಕ್ಷಕರು ಶೀನಪ್ಪಣ್ಣನ ಬೆನ್ನ ಹಿಂದೆ ಇರುತ್ತಿದ್ದರು. ಆಕ್ಷೇಪಿಸುತ್ತಿರಲಿಲ್ಲ. ಒಮ್ಮೆ ಅವರ ಸ್ನೇಹ ತೆಕ್ಕೆಗೆ ಸಿಕ್ಕರೆ ಸಾಕು, ಮತ್ತೆಂದು ಬಿಡದಷ್ಟು ಆಪ್ತತೆ.

               ಆಜಾನುಬಾಹು ದೇಹ, ಧರಿಸಿದ ಶುಚಿ ಉಡುಪು, ಹಣೆಯ ತಿಲಕ, ಹೊಳಪು ಕಂಗಳುಗಳಿಗೆ ಸೆಳೆಮಿಂಚಿನ ತಾಕತ್ತು. ಕಲಾವಿದರ ವರ್ತನೆ, ಅಭಿವ್ಯಕ್ತಿಗಳು ದಾರಿತಪ್ಪಿದಾಗ ತಿಳಿಹೇಳುವ ಹಿರಿಯಜ್ಜ. ಮಾತು ಕೇಳದಿದ್ದರೆ ಮನಸ್ಸಿನಲ್ಲಿ ಕೊರೆಯುವ ತಾತ. ಮಾತಿಗೆ ತೊಡಗಿದರೆ ಮನದ ಮೌನ ಮಾತಾಗುತ್ತಿತ್ತು. ಅಲ್ಲಿ ಅಸಹಾಯಕತೆ, ಚಡಪಡಿಕೆಗಳಿರುತ್ತಿತ್ತು. ವಿಷಾದವಿರುತ್ತಿರಲಿಲ್ಲ.

               ತಮ್ಮ ಮಕ್ಕಳಿಗೆಲ್ಲಾ ಯಕ್ಷಗಾನವನ್ನು ಬಾಲ್ಯದಲ್ಲೇ ಅಂಟಿಸಿದ್ದರು. ಅವರಲ್ಲೊಬ್ಬರಾದ ಪುತ್ತೂರು ಶ್ರೀಧರ ಭಂಡಾರಿಯವರು ತೆಂಕುತಿಟ್ಟು ರಂಗದ ಸಿಡಿಲಮರಿ! ಮೇಳದ ತಿರುಗಾಟ ನಿರ್ವಹಣೆಗಿಂತಲೂ ಮಗ ಶ್ರೀಧರರನ್ನು ಯಕ್ಷಗಾನನಲ್ಲಿ ಬೆಳೆಸಿರುವುದು ಶೀನಣ್ಣದ ಯಕ್ಷಗಾನದ ದೊಡ್ಡ ಕೊಡುಗೆ. 'ದೊಡ್ಡ ಮೇಳದ ಕಲಾವಿದ' ಎಂದು ಮಗನನ್ನು, 'ಯಜಮಾನ್ರ (ತಂದೆಯ) ಮೇಳ' ಎಂಬ ಭಾವಸಂಚಾರಗಳು ಅವರಿಬ್ಬರ ಸಂಭಾಷಣೆಯಲ್ಲಿ ನೋಡಿದ್ದೇನೆ.

               ಶೀನಪ್ಪಣ್ಣ ಈಗಿಲ್ಲ. ಪ್ರಚಾರ ಜವಾಬ್ದಾರಿ ಹೊತ್ತ ಅಂಬು ಶೆಟ್ರೂ ಇಲ್ಲ. ಅಂದು ವಾಲ್ಪೋಸ್ಟ್ ಅಂಟಿಸುತ್ತಿದ್ದ ಗೋಡೆಗಳೆಲ್ಲಾ ನುಣುಪಾಗಿ ಮಿರಿಮಿರಿಯಾಗಿವೆ. ಅಲ್ಲಿ ಮೊಬೈಲ್ ಕಂಪೆನಿಗಳ ವಾಲ್ಪೋಸ್ಟ್ ರಾರಾಜಿಸುತ್ತಿವೆ. ಒಂದೆಡೆ ಕಾಲದ ಓಟದ ಅನುಭವ. ಮತ್ತೊಂದೆಡೆ ಕಳೆದು ಹೋದ ಸಾಂಸ್ಕೃತಿಕ ದಿನಗಳು. ಬದುಕಿನ ದ್ವಂದ್ವಗಳಿವು.

              ಇವರ ಯಕ್ಷ ಬದುಕಿನ ಅನುಭವವನ್ನು 'ಯಕ್ಷ ಭಂಡಾರಿ' ಕೃತಿಯಲ್ಲಿ ಪತ್ರಕರ್ತ ಚಂದ್ರಶೇಖರ ಮಂಡೆಕೋಲು ಪೋಣಿಸಿದ್ದಾರೆ. ಶೀನಪ್ಪಣ್ಣನ ಕಲಾ ಸಾಕ್ಷಿಗೆ ಇದೊಂದೇ ದಾಖಲೆ ಈಗ ಉಳಿದಿರುವುದು. ಯಕ್ಷಗಾನವನ್ನು ಪ್ರೀತಿಸುವ ಎಲ್ಲರ ಮನದಲ್ಲೂ ಸಾಕ್ಷಿಯಾಗಿ ಶೀನಪ್ಪಣ್ಣ ಸ್ಥಾಯಿಯಾಗಿದ್ದಾರೆ. ಅಗಲಿದ ಹಿರಿಯ ಚೇತನಕ್ಕೆ ಅಕ್ಷರ ನಮನ.

Saturday, July 20, 2013

ಉಪನಯನದ ಬೌದ್ಧಿಕ ಉಪಾಯನ


            ದೇವರ ನಾಡಿನ ಊರಲ್ಲಿ ಮಾಹಿತಿಯೊಂದರ ಬೆನ್ನೇರಿದ್ದೆ. ಹಿರಿಯರನ್ನು ಮಾತನಾಡಿಸುತ್ತಿದ್ದೆ. ತಿಂಗಳಲ್ಲಿ ಇಪ್ಪತ್ತು ದಿವಸ ಒಂದಲ್ಲ ಒಂದು ಮನೆಯಲ್ಲಿ ತಾಳಮದ್ದಳೆಗಳು ಆಗುತ್ತಿದ್ದುವು, ಬಹುತೇಕರು ಕಾಲ ಶತಮಾನದ ಹಿಂದಿನ ದವಸಗಳನ್ನು ನೆನಪು ಮಾಡಿಕೊಳ್ಳುತ್ತಾ, 'ಈಗ ತಾಳಮದ್ದಳೆಗಳು ಅಪರೂಪ. ಸಿಡಿಯಲ್ಲೋ, ಕ್ಯಾಸೆಟ್ಟಿನಲ್ಲೋ ಇದೆಯಷ್ಟೇ,' ಎಂಬ ವಿಷಾದ.

             ಆಗ ಗ್ರಹಿಸಿದಾಗ ಎಟಕುವ ಸಾಂಸ್ಕೃತಿಕ ಆಯ್ಕೆಗಳಿರಲಿಲ್ಲ ಎಂಬುದು ನಿಜ. ಆದರೆ ತಾಳಮದ್ದಳೆಗಳು ಹಳ್ಳಿಯಲ್ಲಿ, ಕುಟುಂಬದಲ್ಲಿ ಪೌರಾಣಿಕವಾದ ಗುಂಗನ್ನು ಉಂಟುಮಾಡುತ್ತಿತ್ತು. ಜ್ಞಾನ ಪ್ರಸಾರವೂ ಉಂಟಾಗುತ್ತಿತ್ತು. ಪುರಾಣ ಪುಸ್ತಕಗಳನ್ನು ಓದದೆ ಪೌರಾಣಿಕ ವಿಚಾರಗಳನ್ನು ಗ್ರಹಿಸಬಲ್ಲರು, ಮಾತನಾಡಬಲ್ಲರು, ಚರ್ಚೆ ಮಾಡಬಲ್ಲರು. ಅದು ಯಕ್ಷಗಾನದ ಗಟ್ಟಿತನ.

             ಈಚೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 'ನಟರಾಜ ವೇದಿಕೆ'ಯಲ್ಲಿ ಜರುಗಿದ ತಾಳಮದ್ದಳೆಯನ್ನು ಆಲಿಸುತ್ತಿದ್ದಾಗ ಹಿರಿಯರ ಮೇಲಿನ ಮಾತುಗಳು ನೆನಪಾದುವು. ಈಗಲೂ ಅಲ್ಲೋ ಇಲ್ಲೋ ನಡೆವ ಮನೆ ತಾಳಮದ್ದಳೆಗಳ ನೆನಪು ಕಾಡುತ್ತದೆ. ಸಮಾರಂಭಗಳಲ್ಲಿ ತಾಳಮದ್ದಳೆಗಳನ್ನು ಹಮ್ಮಿಕೊಳ್ಳುವ ಮನಸ್ಸು ಈಗೀಗ ರೂಪುಗೊಳ್ಳುತ್ತಿರುವುದು ಶ್ಲಾಘನೀಯ. 

           ಪುತ್ತೂರಿನ ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ (ಜಗ್ಗಣ್ಣ) ಮತ್ತು ಶ್ರೀವಿದ್ಯಾ ದಂಪತಿಗಳ ಪುತ್ರ ಶ್ರೀಕೃಷ್ಣನ ಉಪನಯನ. (3-6-2013) ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರ ದಿವ್ಯ ಸಾನ್ನಿಧ್ಯ. ನಟರಾಜ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾಪ. ಜಗನ್ನಿವಾಸರ ಸ್ನೇಹಿತರ, ಆಪ್ತರ ಹೆಗಲೆಣೆ. ಉಪನಯನದ ಮುನ್ನಾದಿನ ಬೆಂಗಳೂರಿನ ಸುಪ್ರಿತಾ ರಾವ್ ಅವರಿಂದ ಹಾಡುಗಾರಿಕೆ. ಬಳಿಕ ಪುತ್ತೂರಿನ ಪಶುಪತಿ ಶರ್ಮ ಮತ್ತು ಕೃಷ್ಣಮೋಹನ್ ಇವರಿಂದ ಮೆದುಳಿಗೆ ಮೇವನ್ನು ನೀಡುವ ಹಲವು ಸಂಗತಿಗಳ ಪ್ರಸ್ತುತಿ.

           ಮರುದಿವಸ ಪೂರ್ವಾಹ್ನ ಯಕ್ಷಕೂಟ ಪುತ್ತೂರು ಇವರ ಸಾರಥ್ಯದಲ್ಲಿ 'ಜಾಂಬವತಿ ಕಲ್ಯಾಣ', ಅಪರಾಹ್ನ 'ಸುಧನ್ವ ಮೋಕ್ಷ' ತಾಳಮದ್ದಳೆ. ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಮತ್ತು ರಮೇಶ ಭಟ್ ಪುತ್ತೂರು ಇವರ ಭಾಗವತಿಕೆ. ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಜಯರಾಮ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ಕೃಷ್ಣಪ್ರಕಾಶ್ ಉಳಿತ್ತಾಯ, ವದ್ವ ರಾಮ್ಪ್ರಸಾದ್, ರಮೇಶ್ ಕಜೆ.. ಹಿಮ್ಮೇಳ ಸಾಥಿ. ಡಾ.ಎಂ. ಪ್ರಭಾಕರ ಜೋಶಿ, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗಾಭಟ್ಟ, ಕಾರನ್ತ, ರಮಾನಂದ ನೆಲ್ಲಿತ್ತಾಯ, ರಾಮ ಜೋಯಿಸ್ ಬೆಳ್ಳಾರೆ, ಹರೀಶ ಬೊಳಂತಿಮೊಗರು.. ಅರ್ಥಧಾರಿಗಳು.

              'ಸಮಾರಂಭಗಳಲ್ಲಿ ತಾಳಮದ್ದಳೆ, ಆಟಗಳನ್ನು ಆಯೋಜಿಸಿದ್ದರೆ ಜನ ನಿಲ್ಲುವುದಿಲ್ಲ ಮಾರಾಯ್ರೆ,' ಬಹುತೇಕ ಯಕ್ಷಪ್ರಿಯ ಸಂಘಟಕರ ಪೂರ್ವನಿರ್ಧಾರ! ಆದರೆ ಕಾರ್ಯಕ್ರಮ ಏರ್ಪಡಿಸಿದರೆ ಬದುಕಿನ ತೀವ್ರ ಒತ್ತಡದ ಮಧ್ಯೆಯೂ ತಾಸುಗಟ್ಟಲೆ ಕುಳಿತು ಕೇಳುವವರಿದ್ದಾರೆ ಎನ್ನುವುದಕ್ಕೆ ಶ್ರೀಕೃಷ್ಣನ ಉಪನಯನ ಸಾಕ್ಷಿ.

             ತಾಳಮದ್ದಳೆ ಬಿಸಿಯೇರುವುದಿಲ್ಲ, ಪ್ರದರ್ಶನ ಕುಲಗೆಟ್ಟಿತು.. ಎಂದು ನಾಲ್ಕು ಮಂದಿ ಸೇರುವಲ್ಲಿ ಸಂಭಾಷಣೆಗಳು ಆರಂಭವಾಗುತ್ತವೆ. ಕಾರ್ಯಕ್ರಮದಲ್ಲಿ ಭಾಗವಹಿಸದೆ ಗಂಭೀರ ಸಂಭಾಷಣೆ ಯಾ ಆರೋಪಗಳು ನಿತ್ಯ ನಡೆಯುತ್ತಲೇ ಇರುತ್ತದೆ! ಇವೆಲ್ಲಾ ಸಮಯ ಕೊಲ್ಲುವ ಮಾತುಕತೆಗಳಷ್ಟೇ.

             ಮದುವೆ, ಉಪನಯನದಂತಹ ಶುಭ ದಿವಸದಂದು ಧಾರ್ಮಿಕ ಪ್ರಕ್ರಿಯೆಯೊಂದಿಗೆ ಕಲಾರಾಧನೆಯೂ ಮಿಳಿತಗೊಳ್ಳಬೇಕು. ಸಾಂಸ್ಕೃತಿಕ ಆಯ್ಕೆಗಳು ಕೈಬೆರಳಿನಲ್ಲಿ ಕುಣಿಯುತ್ತಿರುವ ಕಾಲಘಟ್ಟದಲ್ಲಿ ಬೌದ್ಧಿಕ ಗಟ್ಟಿತನಕ್ಕೆ ಸಹಾಯವಾಗುವ ಯಕ್ಷಗಾನ ಮಾಧ್ಯಮವನ್ನು ಸಾಮಾಜಿಕವಾಗಿ ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರಲ್ಲಿ ಇಲ್ವಾ. ಈ ಹಿನ್ನೆಲೆಯಲ್ಲಿ ಪಿ.ಜಿ. ಜಗನ್ನಿವಾಸ ರಾವ್, ಪಿ.ಜಿ.ಚಂದ್ರಶೇಖರ್ ರಾವ್ ಕುಟುಂಬ ಅಭಿನಂದನಾರ್ಹರು. ಇಂತಹ ಸಾಂಸ್ಕೃತಿಕ ಮನಸ್ಸುಗಳು ರೂಪುಗೊಳ್ಳಬೇಕಾದುದು ಕಾಲದ ಅನಿವಾರ್ಯ.

Tuesday, July 16, 2013

ಆಪ್ತ ಭಾಗವತ : ಪುತ್ತಿಗೆ ರಘುರಾಮ ಹೊಳ್ಳ (Bhagavth Puttige Raghurama Holla)

 




                 ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದ 'ಧರ್ಮದೇವತೆ'ಗಳು, ಗದಾಯುದ್ಧ ಪ್ರಸಂಗದ 'ಕೌರವ', ಭರತಾಗಮನದ 'ಭರತ', ದ್ರುಪದ ಗರ್ವಭಂಗದ 'ಏಕಲವ್ಯ', ತ್ರಿಪುರ ಮಥನದ 'ಚಾರ್ವಾಕ', ಭೌಮಾಸುರ... ಪಾತ್ರಗಳು ರಂಗದಲ್ಲಿ ಮಾತ್ರವಲ್ಲ, ಮನದಲ್ಲೂ ನಿತ್ಯ ಕುಣಿಯುತ್ತವೆ. ಅಭಿನಯ ಮಾಡುತ್ತವೆ. ಮಾತನಾಡುತ್ತವೆ. ಇದರ ಹಿಂದೆ ಪಾತ್ರಧಾರಿಯ ಸಾಮಥ್ರ್ಯದೊಂದಿಗೆ ಭಾಗವತನ ನಿರ್ದೇಶನವೂ ಮಿಳಿತಗೊಂಡಿರುತ್ತದೆ. ಇದು ಅಜ್ಞಾತ. ಒಟ್ಟೂ ಪ್ರದರ್ಶನವನ್ನು ಆಕಳಿಸದೆ ಆಸ್ವಾದಿಸಿದರೆ ಮಾತ್ರ ಗೋಚರ.

                ಹಾಗಾಗಿಯೇ ಇರಬೇಕು, ಇಂತಹ ಪಾತ್ರಗಳನ್ನು ಜ್ಞಾಪಿಸಿಕೊಂಡರೆ ಸಾಕು, ಕಡತೋಕ ಮಂಜುನಾಥ ಭಾಗವತರ ದಿನಮಾನಗಳು ಮಿಂಚಿ ಮರೆಯಾಗುತ್ತವೆ. ಪ್ರಸಂಗ ಸಾಹಿತ್ಯಕ್ಕೆ ಬಾಧಕವಾಗದಂತೆ ಭಾಗವತಿಕೆಯಿಂದಲೇ ಕೆಲವೆಡೆ 'ಪಂಚ್ ಸನ್ನಿವೇಶ'ಗಳನ್ನು ರೂಪಿಸಿರುವುದನ್ನು ನೋಡುತ್ತೇವೆ. ಪಂಚ್ ಸನ್ನಿವೇಶಗಳ ಸೃಷ್ಟಿಗೆ ಇವರು ಖ್ಯಾತಿ. ಅವರ ಬಳಕ ಅಷ್ಟೇ ಸಮರ್ಥವಾಗಿ ರಂಗದ ಪಡಿಮಂಚವನ್ನು ಏರಿದವರು ಪುತ್ತಿಗೆ ರಘುರಾಮ ಹೊಳ್ಳರು (58).

                ತಂದೆ ಕೀರ್ತಿಶೇಷ ಪುತ್ತಿಗೆ ರಾಮಕೃಷ್ಣ ಜೋಯಿಸರು ಒಂದು ಕಾಲಘಟ್ಟದ ಯಕ್ಷಗಾನದ ದಂತಕತೆಗಳ ಮೂಟೆ. ಅವರ ಭಾಗವತಿಕೆ ರಂಗದ ಕ್ರಾಂತಿದನಿ. ತಂದೆಗಂಟಿಗೊಂಡೇ ಯಕ್ಷಗಾನದ ನಂಟನ್ನು ಅಂಟಿಸಿಕೊಂಡ ಹೊಳ್ಳರಿಗೆ ಮದ್ದಳೆ ಮತ್ತು ಚೆಂಡೆಯತ್ತ ಮೊದಲಾಸಕ್ತಿ. ಮವ್ವಾರು ಕಿಟ್ಟಣ್ಣ ರೈಗಳು ಮತ್ತು ಕುದ್ರೆಕೂಡ್ಲು ರಾಮ ಭಟ್ಟರಂತಹ ಉದ್ಧಾಮ ಗುರುಗಳನ್ನು ಪಡೆದ ರಘುರಾಮರಿಗೆ ತಂದೆಯೇ ಭಾಗವತಿಕೆಗೆ ಗುರು.

              ಕರ್ನೂರು ಕೊರಗಪ್ಪ ರೈಗಳ ನೇತೃತ್ವದ ಕದ್ರಿಮೇಳವು ತುಳು ಪ್ರಸಂಗದ ಪ್ರದರ್ಶನದಲ್ಲಿ ಜನಮಾನಸವನ್ನು ಹೊಕ್ಕ ಕಾಲ. ಆಗ ರಘುರಾಮ ಹೊಳ್ಳರು ಮೇಳದಲ್ಲಿ ಭಾಗವತ. 'ಗೆಜ್ಜೆಪೂಜೆ' ಪ್ರಸಂಗಕ್ಕೆ ಜನಮಾನ್ಯತೆ. ಪ್ರಸಂಗ, ಮೇಳ, ಕಲಾವಿದರಿಗೆ ಕೀರ್ತಿ. ಭಾಗವತ ರಘುರಾಮರು ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದರು. ಯಕ್ಷಲೋಕದಲ್ಲಿ ಹಾರಿದರು. ಹಲವರ ಹುಬ್ಬು ಮೇಲೇರಿತು. ಬೆನ್ನುತಟ್ಟಿದರು. ಅಂದು ಕೈಹಿಡಿದ ಯಶಲಕ್ಷ್ಮಿಯು ಹೊಳ್ಳರ ಭಾಗವತಿಕೆಯ ಸಿರಿಗೆ ಬೀಸುಹೆಜ್ಜೆ ನೀಡಿದಳು.

                  ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳವು ಸಮರ್ಥ ಕಲಾವಿದರೊಂದಿಗೆ ಕಡತೋಕ ಭಾಗವತರ ನಿರ್ದೇಶನದಲ್ಲಿ ವಿಜೃಂಬಿಸುತ್ತಿತ್ತು. ಪೂಜ್ಯ ಖಾವಂದರ ಅಪೇಕ್ಷೆಯಂತೆ ರಘುರಾಮ ಹೊಳ್ಳರು ಶ್ರೀ ಧರ್ಮಸ್ಥಳ ಮೇಳಕ್ಕೆ ಭಾಗವತರಾಗಿ ಸೇರ್ಪಡೆ. ಮೇಳದಲ್ಲಾಗ ಪುರಾಣ ಪ್ರಸಂಗಗಳ ಪ್ರದರ್ಶನ, ಪ್ರಬುದ್ಧ ಕಲಾವಿದರು, ಗಟ್ಟಿ ಹಿಮ್ಮೇಳ, ಚಿಕಿತ್ಸಕ ನೋಟದ ಪ್ರೇಕ್ಷಕರು, ತೂಗಿ ಅಳೆದು ಮಾತನಾಡುವ ವಿಮರ್ಶಕರು, ಕಡತೋಕ ಭಾಗವತರ ಪ್ರಭಾವಲಯ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆ-ಚೆಂಡೆಯ ಮಿಡಿತ ನುಡಿತಗಳ ಅನುರಣನ.. ಇವಿಷ್ಟನ್ನು ಎದುರಿಸುವುದು ರಘುರಾಮರಿಗೆ ಮೊದಲ ಸವಾಲು. ಯಾಕೋ ಸವಾಲುಗಳಿಗೆ ಎದೆಯೊಡ್ಡುವುದು ಹುಟ್ಟು ಗುಣ. ಅಲ್ಲಿಂದ ನಿರಂತರ ಅಧ್ಯಯನ.

                 ಬಹುಶಃ ರಂಗ ಸವಾಲನ್ನು ಸಮರ್ಥವಾಗಿ ಎದುರಿಸುವ ಗಟ್ಟಿತನ ನೀಡಿರುವುದು ಕದ್ರಿ ಮೇಳದ ಹಿಮ್ಮೇಳ. ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಚೆಂಡೆ, ಮದ್ದಳೆ ಸಾಥಿಯಾಗಿದ್ದು ಹೊಳ್ಳರ ಭಾಗವತಿಕೆಯನ್ನು ಹರಿತ ಮಾಡಿದ್ದರು. ನಾವು ಹಿಮ್ಮೇಳದಲ್ಲಿ ಮಾಡುತ್ತಿದ್ದ ಹೊಂದಾಣಿಕೆಗಳು ಸ್ವಾರಸ್ಯಕರ. ಚೆಂಡೆಯಲ್ಲಿ ನಾನೇನಾದರೂ ಹೊಸತಾದ ಒಂದು ನಾಟ್ಯದ ಪೆಟ್ಟು ತೆಗೆದುಕೊಟ್ಟರೂ ಅದನ್ನು ಕೂಡಲೇ ಗ್ರಹಿಸಿ, ಅದೇ ರೀತಿ ತಾಳ ಹೊಂದಿಸಿ, ವೇಷಧಾರಿಗೆ ಅವಕಾಶಕೊಟ್ಟು, ಅವರ ಪ್ರತಿಭೆ ಎದ್ದು ಕಾಣುವಂತೆ ಮಾಡುತ್ತಿದ್ದರು. ಗೆಜ್ಜೆ ಪೂಜೆಯು ಜನಾಕರ್ಷಣೆ ಪಡೆದು ದಾಖಲೆ ನಿಮರ್ಿಸಿದ್ದು ಹೊಳ್ಳರ ಭಾಗವತಿಕೆಯಲ್ಲಿ... ಹೊಳ್ಳರ ಬಗೆಗೆ ಮಾಂಬಾಡಿಯವರ ಮನಸ್ಸಿನ ಮಾತು.

                 ಶ್ರೀ ಧರ್ಮಸ್ಥಳ ಮೇಳದಲ್ಲಿ ರಘುರಾಮರು ಕಡತೋಕರ ಭಾಗವತಿಕೆಯ ಪ್ರಖರತೆಗೆ ಮೈಯೊಡ್ಡಿದರೂ ಕರಕಲಾಗಲಿಲ್ಲ. ಬೆಂದು ಹದವಾದರು. ಕ್ಷಣ ಕ್ಷಣವೂ ಮೈಯೆಲ್ಲಾ ಕಣ್ಣಾದರು. ರಂಗಸೂಕ್ಷ್ಮಗಳನ್ನು ಅಭ್ಯಸಿಸಿದರು. ಚಿಪ್ಪಾರರ ನುಡಿತಗಳನ್ನು ಬೆರಗು ಕಣ್ಣುಗಳಿಂದ ನೋಡಿದರು. ಚೆಂಡೆ-ಮದ್ದಳೆಯ ನುಡಿತದ ಜ್ಞಾನ ಇದ್ದುದರಿಂದ ಬೆರಗಾಗಲಿಲ್ಲ. ಮೇಳದಲ್ಲಿ ಪೂರ್ವಾರ್ಧ ರಘುರಾಮರ ಪಾಳಿ. ಬಳಿಕ ಕಡತೋಕರ ಸರದಿ. ರಘುರಾಮರು ಹಾಡಿ ರಂಗವಿಳಿದ ಬಳಿಕವೂ ರಂಗದ ಗುಂಗು ಉಸಿರಾಡುತ್ತಿತ್ತು.

              ಕಡತೋಕ ಭಾಗವತರ ನಿವೃತ್ತಿಯ ಬಳಿಕ ಮೇಳದಲ್ಲಿ ಹೊಳ್ಳರು ಮುಖ್ಯ ಭಾಗವತ. ಅಮೃತ ಸೋಮೇಶ್ವರ, ರಾಘವ ನಂಬಿಯಾರ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜರಂತಹ ಹಿರಿಯ ಸಾಹಿತಿಗಳ ಪ್ರಸಂಗಗಳಿಗೆ ಭಾಗವತಿಕೆ ಮತ್ತು ರಂಗಕ್ರಿಯೆಯ ಮೂಲಕ ಹೊಸ ಸಾಧ್ಯತೆಗಳನ್ನು ತೋರಿದ್ದರು. ಯಕ್ಷಾಸಕ್ತರು ಪ್ರದರ್ಶನಗಳಿಗೆ ಮುಗಿಬೀಳುವಷ್ಟು ಪ್ರಸಂಗಗಳೂ ಜನಪ್ರಿಯವಾದುವು.

               ಇವರ ಭಾಗವತಿಕೆಯಲ್ಲಿ ವೇಷ ಮಾಡುವುದು, ತಾಳಮದ್ದಳೆಯಲ್ಲಿ ಅರ್ಥ ಹೇಳುವುದು ನಿರಾಯಾಸ. ಯಾಕೆಂದರೆ ಅವರು ಕೂಡಾ ನಿರಾಯಾಸವಾಗಿ ರಂಗದಲ್ಲಿರುತ್ತಾರೆ. ಪಾತ್ರದೊಂದಿಗೆ ತಾನೂ ಪಾತ್ರವಾಗುತ್ತಾರೆ. ರಂಗವನ್ನು ಸೊರಗದಂತೆ ಬೆಳಗ್ಗಿನ ತನಕ ಜೀವಂತವಾಗಿಡುವ ಜ್ಞಾನ ಸಿದ್ಧಿಸಿದೆ.

            ಹೊಳ್ಳರ ಹಾಡುಗಳಿಗೆ ಒಮ್ಮೆ ಕಿವಿಯಾದರೆ ಅವ್ಯಕ್ತವಾದ ಮೋಹಕ ಶಕ್ತಿ ನಮ್ಮನ್ನು ಆವರಿಸುತ್ತದೆ. ಎಲ್ಲಾ ರಸಗಳಿಗೆ ಒಗ್ಗುವ ಕಂಠ. ಇವರಲ್ಲಿ ಪ್ರಸಂಗದ ಸಾಹಿತ್ಯಗಳಿಗೆ ಮಾನ. ಅನಾವಶ್ಯವಾಗಿ ಅಕ್ಷರಗಳನ್ನು ಲಂಬಿಸುವ, ಸಾಹಿತ್ಯ ಲೋಪ ಮಾಡಿದ್ದನ್ನು ನಾನು ನೋಡಿಲ್ಲ. ರಂಗದಲ್ಲಿರುವಷ್ಟೂ ಹೊತ್ತು 'ತಾನು ಭಾಗವತ' ಎಂಬ ಪ್ರಜ್ಞೆ ಜಾಗೃತ. ರಂಗದಲ್ಲಿ ಪಾತ್ರವು ಸೊರಗಿದಾಗ ಸನ್ನಿವೇಶವನ್ನು ಕುಂಠಿತಗೊಳಿಸುವ, ವಿಜೃಂಬಿಸಿದಾಗ ಲಂಬಿಸುವಂತೆ ಮಾಡುವ ರಂಗನಿರ್ದೇಶಕ. ನಿಜಾರ್ಥದಲ್ಲಿ ಒಂದನೇ ವೇಷಧಾರಿ.

                 "ಯಕ್ಷಗಾನದ ಶಿಸ್ತನ್ನು ಎಲ್ಲಿಯೂ ಮೀರದೆ ನಗುನಗುತ್ತಾ ಅನುಭವಿಸುತ್ತಾ ಅವರು ಹಾಡುವ ರೀತಿ ಅಷ್ಟು ಚಂದ ಮತ್ತು ಅಂದ," ಹಿರಿಯ ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್ಟರು ಹೊಳ್ಳರ ರಂಗಕಸುಬನ್ನು ಬಣ್ಣಿಸುತ್ತಾರೆ. ಆಧುನಿಕ ಪ್ರೇಕ್ಷಕ ವರ್ಗದ ಆಸಕ್ತಿಯನ್ನು ಗೌರವಿಸುತ್ತಾ, ಯಕ್ಷಗಾನ ಚೌಕಟ್ಟನ್ನು ಮೀರದೆ, ಕಲಾವಿದರಿಗೆ ತೊಂದರೆಯಾಗದಂತೆ ಹಾಡಿ ಪ್ರದರ್ಶನಕ್ಕೆ ನ್ಯಾಯ ಒದಗಿಸುವ ಅವರ ಒಳಮನಸ್ಸು ಸದಾ ಎಚ್ಚರದಲ್ಲಿರುತ್ತದೆ.

               ಬಹುತೇಕ ಎಲ್ಲಾ ಭಾಗವತರು ಮೆಚ್ಚುವ ಭಾಗವತ. ದ್ವಂದ್ವ ಹಾಡುಗಾರಿಕೆಗೆ ಒಗ್ಗುವ ಶಾರೀರ. ಸಹ ಕಲಾವಿದನನ್ನು ಶೋಷಿಸದ ಜಾಯಮಾನ. ಎಷ್ಟೋ ಸಲ ವಿಕ್ಷಿಪ್ತವಾಗಿ ಕಾಣುತ್ತಾರೆ. ತಮ್ಮಷ್ಟಕ್ಕೆ ತಾವಿದ್ದುಕೊಳ್ಳುವ ಗುಣ. ಅನಾವಶ್ಯಕವಾಗಿ ಹೆಚ್ಚು ತೆರೆದುಕೊಳ್ಳರು. ಒಮ್ಮೆ ತೆರೆದುಕೊಂಡ ಸ್ನೇಹ ಮತ್ತೆಂದೂ ಮುಚ್ಚಿಕೊಳ್ಳದು. ಮೇಲ್ನೋಟಕ್ಕೆ ಬಿಗುವಾಗಿ ಕಾಣಿಸಿಕೊಳ್ಳುವ ಹೊಳ್ಳರು ಬೀಗಿದ್ದು ಕಡಿಮೆ. ಬೀಗಿದಂತೆ ಕಾಣುವುದು ಸ್ವ-ಭಾವ.

               ಕೆಲವೊಂದು ಪೌರಾಣಿಕ ಪ್ರಸಂಗಳನ್ನು ನೆನಪಿಸಿಕೊಂಡರೆ ಬಲಿಪ ನಾರಾಯಣ ಭಾಗವತರು, ಪದ್ಯಾಣ ಗಣಪತಿ ಭಟ್, ದಿನೇಶ ಅಮ್ಮಣ್ಣಾಯರು.. ಹೇಗೆ ನೆನಪಾಗುತ್ತಾರೋ, ಅದೇ ರೀತಿ ಧರ್ಮಸ್ಥಳ ಮೇಳವು ಆಡಿ ಇತಿಹಾಸ ನಿರ್ಮಿಸಿದ ಕಾಯಕಲ್ಪ, ತ್ರಿಪುರ ಮಥನ, ರಂಭಾ ರೂಪರೇಖಾ, ಸಹಸ್ರಕವಚ ಮೋಕ್ಷ, ಪರೀಕ್ಷಿತ, ಮಹಾಬ್ರಾಹ್ಮಣ.. ಮೊದಲಾದ ಪ್ರಸಂಗಗಳ ಹಿಂದೆ ಹೊಳ್ಳರ ಹೆಸರು ಅಜ್ಞಾತವಾಗಿ ಮಿಳಿತವಾಗಿದೆ.

                   ಹಿಂದಿ, ಸಂಸ್ಕೃತ ಭಾಷೆಯ ಪ್ರಸಂಗಗಳನ್ನು ಹಾಡಿದ್ದಾರೆ. 'ಯಕ್ಷ ಮಂಜೂಷಾ' ತಂಡದೊಂದಿಗೆ ಕಡಲಾಚೆ ಹಾರಿದ್ದಾರೆ. ಅಭಿಮಾನಿಗಳನ್ನು ಪಡೆದಿದ್ದಾರೆ. ಮಾನ-ಸಂಮಾನಗಳು ಪ್ರಾಪ್ತವಾಗಿವೆ. 'ಕಲಾವಿದನಿಗೆ ಜನರ ಪ್ರೀತಿ-ಅಭಿಮಾನವೇ ಪ್ರಶಸ್ತಿ. ಯಕ್ಷಗಾನವು ಒಪ್ಪುವಂತೆ ರಂಗದಲ್ಲಿ ವ್ಯವಸಾಯ ಮಾಡುವುದೇ ದೊಡ್ಡ ಪ್ರಶಸ್ತಿ, ಎಂದು ಹೊಳ್ಳರೊಮ್ಮೆ ಹೇಳಿದ ಮಾತು ಮರೆಯುವಂತಹುದಲ್ಲ.

                  ಸುಮಾರು ನಾಲ್ಕು ದಶಕಗಳ ಯಕ್ಷಗಾನ ನಂಟು. ಹೊಗಳಿಕೆಗೆ ಮಣೆ ಹಾಕದೆ, ಟೀಕೆಗಳಿಗೆ ಕುಗ್ಗದೆ, ವಿಮರ್ಶೆಗಳನ್ನು ಸವಾಲಾಗಿ ಸ್ವೀಕರಿಸುವ, ಅಭಿಪ್ರಾಯಗಳನ್ನು ಗೌರವಿಸುವ ಪುತ್ತಿಗೆ ರಘುರಾಮ ಹೊಳ್ಳರು ನಮ್ಮ ನಡುವಿನ ಆಪ್ತ ಭಾಗವತ. ಪ್ರಸ್ತುತ ಮಂಗಳೂರಿನಲ್ಲಿ ವಾಸ. ಮಡದಿ ವಾಣಿ. ಶ್ರೀಲಕ್ಷ್ಮೀ, ಶ್ರೀ ವಿದ್ಯಾ ಪುತ್ರಿಯರು.

               ಅವರ ರಂಗ ಬದುಕನ್ನು ಕೃತಿಯ ಮೂಲಕ ದಾಖಲಿಸುವ, ಬೌದ್ಧಿಕ ಗಟ್ಟಿತನವನ್ನು ಅನಾವರಣಗೊಳಿಸುವ, ಸಾಗಿ ಬಂದ ಪಥವನ್ನು ತಿರುಗಿ ನೋಡುವ, ಅದಕ್ಕೆ ಕಾರಣರಾದವರನ್ನು ಗೌರವಿಸುವ ಅಪರೂಪದ 'ರಘುರಾಮಾಭಿನಂದನಮ್' ಸಮಾರಂಭವು ಜುಲೈ 5 ರಿಂದ 7ರ ತನಕ ಮಂಗಳೂರು ಪುರಭವನದಲ್ಲಿ ಜರುಗಿದೆ.