Monday, September 28, 2020

ಪದ್ಯಾಣ ‘ಪದಯಾನ’ - ಎಸಳು 46


ರಂಗದಲ್ಲಿ ಸಕ್ರಿಯ

ಲೇ :  ಕೋಳ್ಯೂರು ನಾರಾಯಣ ಭಟ್

ಗಿರಿನಗರ, ಬೆಂಗಳೂರು

 

                ನನ್ನ ಮತ್ತು ಗಣಪಣ್ಣನವರ ಪರಿಚಯ ಸುಮಾರು ಮೂರು ದಶಕಕ್ಕಿಂತಲೂ ಹಳೆಯದು. ಅವರು ಸುರತ್ಕಲ್ ಮೇಳದಲ್ಲಿರುವಾಗ ಪ್ರಾತಃಸ್ಮರಣೀಯರಾದ, ಯಕ್ಷಭೀಷ್ಮ, ಶೇಣಿಯವರನ್ನು ಕಾರ್ಯನಿಮಿತ್ತ ನೋಡಲು ಹೋದಾಗ ಗಣಪಣ್ಣನವರನ್ನು ಮಾತನಾಡಿಸಿದ್ದು.

                ದೊಡ್ಡಪ್ಪ ಮಾಣಂಗಾಯಿ ಕೃಷ್ಣಭಟ್ಟರು, ಸೋದರ ಮಾವ ಪಾತಾಳ ವೆಂಕಟರಮಣ ಭಟ್ಟರ ವೇಷಗಳಿಂದ ಪ್ರಭಾವಿತನಾಗಿ ಯಕ್ಷಗಾನಕ್ಕೆ ಪ್ರೇಕ್ಷಕನಾದೆ. ತೆಂಕು-ಬಡಗು ತಿಟ್ಟಿನ ಹೆಚ್ಚಿನ ಕಲಾವಿದರ ಪರಿಚಯ ಇದ್ದರೂ ಗಣಪಣ್ಣನವರ ಸರಳ ವ್ಯಕ್ತಿತ್ವದಿಂದಾಗಿ ಅವರೆಡೆಗೆ ಆಕರ್ಷಿತನಾದೆ. ಸಲುಗೆಯಿಂದ ಮಾತನಾಡುವಷ್ಟು ಹತ್ತಿರವಾದೆ.

                ಬೆಂಗಳೂರು ಗಿರಿನಗರದಲ್ಲಿ ಎಡನೀರು ಶ್ರೀಗಳ ನೇತೃತ್ವದ ತಾಳಮದ್ದಲೆ ಸಪ್ತಾಹ, ಮಿತ್ತೂರು ಈಶ್ವರ ಭಟ್ಟರ ಕುರುಕ್ಷೇತ್ರ ಸಿ.ಡಿ ರೆಕಾರ್ಡಿಂಗ್,  ಪುತ್ತೂರು ಶ್ರೀಧರ ಭಂಡಾರಿಯವರ ಯಕ್ಷಗಾನ ಮಂಡಳಿಯ ತಿರುಗಾಟ, ಒಂದು ಕಾಲದ ತೆಂಕುತಿಟ್ಟು ಯಕ್ಷಗಾನದ ಆಡೊಂಬಲವಾಗಿದ್ದ ಗಿರಿನಗರದ ನಿರ್ಮಾತೃ ಬಿ.ಕೃಷ್ಣಭಟ್ಟರ ಪ್ರಾಯೋಜಕತ್ವದ ಯಕ್ಷಗಾನ ಪ್ರದರ್ಶನಗಳಿಂದ ನನ್ನ, ಪದ್ಯಾಣರ ಬಾಂಧವ್ಯ ಗಟ್ಟಿಯಾಯಿತು. ಹಾಗೆಯೇ ಗೆಳೆತನದೊಂದಿಗೆ ಸಂಬಂಧಿಗಳಾಗುವ ಭಾಗ್ಯವು ದೊರೆಯಿತು.

                ಯಕ್ಷಗಾನ ಪ್ರಪಂಚದ ಅದ್ಭುತವೋ ಎಂಬಂತೆ ಜರಗುವ "ಸಂಪಾಜೆ ಯಕ್ಷೊತ್ಸವ"ದಲ್ಲಿ ಪ್ರೇಕ್ಷಕನಾಗುವ ಸೌಭಾಗ್ಯ ದೊರೆತದ್ದು ಪದ್ಯಾಣರ ಒತ್ತಾಸೆಯಿಂದಲೇ. ಕಳೆದ  ಹಲವು ವರ್ಷಗಳಿಂದ ಯಕ್ಷೊತ್ಸವಕ್ಕೆ ನಾನು ಖಾಯಂ ಸದಸ್ಯ. ಬಗ್ಗೆ ಅವರಿಗೆ ಸದಾ ಕೃತಜ್ಞ. ಅವರು ಬೆಂಗಳೂರಿಗೆ ಬಂದಾಗಲಂತೂ ನಮ್ಮ ಭೇಟಿ ನಿಶ್ಚಿತ. ವಾರಕ್ಕೊಮ್ಮೆ ಯಾ ಎರಡು ಬಾರಿ ವಿನಿಮಯವಾಗದಿದ್ದರಂತೂ ಆತ್ಮೀಯವಾಗಿಯೇ ಬಯ್ಯವುದುಂಟು. ಅಂತಹಾ ಸಲುಗೆ.

                ಯಕ್ಷಗಾನ ಹಾಡಿನ ಸ್ವರ-ತಾಳ-ಲಯಗಳ ಜ್ಞಾನ ನನಗಿಲ್ಲದಿದ್ದರೂ ಅವರು ಹಾಡುವ ಶೈಲಿ, ಜಾಗಟೆ ಹಿಡಿಯುವ ರೀತಿ, ಜಾಗಟೆ ಕೋಲಿನ ಉರುಳಿಕೆ ನೋಡಲು ತುಂಬಾ ಅಂದ. ರಂಗಸ್ಥಳದಲ್ಲಿ ಸಕ್ರಿಯವಾಗಿ ಇರುತ್ತಾ ಪಾತ್ರಗಳ ಸಂಭಾಷಣೆ ಮುಗಿದೊಡನೆ ಪದ ತೆಗೆಯುವ ಚುರುಕು, ಲಾಲಿತ್ಯ ಆಪ್ಯಾಯಮಾನವಾದುದು.

                ಸ್ನೇಹಕ್ಕೆ, ಆತಿಥ್ಯಕ್ಕೆ ಪದ್ಯಾಣ ಕುಟುಂಬವೇ ಹೆಸರುವಾಸಿ. ವರ್ಷಕ್ಕೆ ಒಂದೆರಡು ಬಾರಿ ಅವರ ಮನೆಗೆ ಹೋಗುವುದು ರೂಢಿಯಾಗಿದೆ. ಅವರ ಮಾತೃಶ್ರೀ(ದೂರದ ಸಂಬಂಧದಲ್ಲಿ ದೊಡ್ಡಮ್ಮ)ಯವರಿಗೂ ನನ್ನಲ್ಲಿ ಅತಿಯಾದ ಮಮತೆಯಿತ್ತು. ಅವರ ಕುಟುಂಬ ಸದಸ್ಯರೆಲ್ಲರಿಗೂ ಆತ್ಮೀಯ.

 

(ಸಾಂದರ್ಭಿಕ ಚಿತ್ರ : ಭಾಗವತ ಹಂಸ ಪುತ್ತಿಗೆ ರಘುರಾಮ ಹೊಳ್ಳ ದಂಪತಿ ಪದ್ಯಾಣರನ್ನು ಸಂಮಾನಿಸುತ್ತಿರುವುದು. ‘ರಘುರಾಮಾಭಿನಂದನಮ್’ ಸಂದರ್ಭ)

No comments:

Post a Comment