Tuesday, August 23, 2011

ಕಡತೋಕರಿಗೆ ಪಾರ್ತಿಸುಬ್ಬ ಪ್ರಶಸ್ತಿ

ಕಡತೋಕ ಮಂಜುನಾಥ ಭಾಗವತರು (1926) ಉತ್ತರಕನ್ನಡದ ಕುಮಟ ತಾಲೂಕಿನವರು. ಸಮಕಾಲೀನ ಯಕ್ಷಗಾನ ರಂಗದ ಅಗ್ರಗಣ್ಯ ಮಹಾನ್ ಭಾಗವತರಲ್ಲಿ ಒಬ್ಬರು. ತಂದೆ ಶಂಭು ಭಾಗವತರು. ನಟ ಪರಮಯ್ಯ ಹಾಸ್ಯಗಾರ, ಕೆರೆಮನೆ ಶಿವರಾಮ ಹೆಗಡೆ ಮತ್ತು ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರಾಗಿ ತೆಂಕು-ಬಡಗು ತಿಟ್ಟುಗಳಲ್ಲಿ ಸಮಾನ ಪ್ರಭುತ್ವವುಳ್ಳ ವಿರಳ ಕಲಾವಿದರಲ್ಲಿ ಒಬ್ಬರು.

ಇವರು ಕರ್ಕಿ, ಕೊಳಗಿಬೀಸ್, ಮೂರೂರು, ಮೂಲ್ಕಿ ಮೇಳಗಳಲ್ಲಿ ಪಳಗಿ, ಶ್ರೀ ಧರ್ಮಸ್ಥಳ ಮೇಳದಲ್ಲಿ ನಾಲ್ಕು ದಶಕಗಳ ಕಾಲ ಭಾಗವತರಾಗಿ ಕೀರ್ತಿಗಳಿಸಿದ ಶ್ರೇಷ್ಠ ಕಲಾವಿದರು. ಮಾಧುರ್ಯ ಸಾಹಿತ್ಯ ಶುದ್ಧಿ, ಛಂದಸ್ಸಿನ ಅಂದ, ಲಯದ ಹಿಡಿತ, ಅಭಿನಯಪೋಷಕ ರಂಗ ನಿರ್ವಹಣೆ, ಪ್ರಯೋಗಶೀಲತೆಯಲ್ಲಿ ಮಹೋನ್ನತ ಸಿದ್ಧಿಯುಳ್ಳ ಕಡತೋಕರು, ಪ್ರದರ್ಶನದ ಯಶಸ್ಸು ಮತ್ತು ಜೀವಂತಿಕೆಯಲ್ಲಿ ನಿಜಾರ್ಥದ ಭಾಗವತರು. ರಂಗದಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಗೈದು ಮಾದರಿಗಳನ್ನು ನಿರ್ಮಿಸಿದವರು.

ಕೆಲಕಾಲ ಅಧ್ಯಾಪಕರಾಗಿದ್ದ ಕಡತೋಕರು, ಉತ್ತಮ ಮೌಲ್ಯದ ಕಲಾ ಕಾರ್ಯಕ್ರಮಗಳ ಸಂಘಟಕರಾಗಿಯೂ ಪ್ರಸಿದ್ಧರು. ತನ್ನ 22ನೇ ವಯಸ್ಸಿನಲ್ಲಿ ಯಕ್ಷಗಾನ ಪತ್ರಿಕೆ ಸ್ಥಾಪಿಸಿ ದಾಖಲೆ ನಿರ್ಮಿಸಿದ ಇವರು, ಉತ್ತರ ಕನ್ನಡದ ಅಭಿನಯ ಶೈಲಿಯನ್ನು ತೆಂಕುತಿಟ್ಟಿನಲ್ಲಿ ಸಮನ್ವಯಗೊಳಿಸಿದ ಯುಗಪ್ರವರ್ತಕರು. ಸುಮಾರು ಇಪ್ಪತ್ತು ಯಕ್ಷಗಾನ ಪ್ರಸಂಗಗಳನ್ನೂ, ಹಲವು ಲೇಖನಗಳನ್ನು ಬರೆದಿರುವ ಕಡತೋಕ ಮಂಜುನಾಥ ಭಾಗವತರು ಪಾರ್ತಿಸುಬ್ಬನ ಕೃತಿಗಳ ಹಾಡುಗಾರಿಕೆಯಲ್ಲಿ ಓರ್ವ ನಿಷ್ಣಾತ ಭಾಗವತರಾಗಿದ್ದಾರೆ. ಅವರಿಗೀಗ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ವತಿಯಿಂದ ಪ್ರತಿಷ್ಠಿತ 'ಪಾರ್ತಿಸುಬ್ಬ ಪ್ರಶಸ್ತಿ. ಆಗಸ್ಟ್ ೨೬ರಂದು ರಾತ್ರಿ ೮ ಗಂಟೆಗೆ ಬಜಪೆಯ ರಾಘವೇಂದ್ರ ಸಭಾಸದನದಲ್ಲಿ ಪ್ರಶಸ್ತಿ ಪ್ರದಾನ.

ಈ ಹಿಂದಿನ ಸಾಲಿನಲ್ಲಿ ಡಾ.ಅಮೃತ ಸೋಮೇಶ್ವರ (2009), ಹೊಸ್ತೋಟ ಮಂಜುನಾಥ ಭಾಗವತರು (2010) ಪ್ರಶಸ್ತಿ ಪಡೆದಿದ್ದಾರೆ.