Saturday, October 31, 2015

ನಿಜಾರ್ಥದ 'ಒಂದನೇ ವೇಷಧಾರಿ'


             ವಿದ್ವಾಂಸ ಅರ್ಥಧಾರಿಗಳಿದ್ದ ತಾಳಮದ್ದಳೆ. ಸ್ವಗತದಲ್ಲೊಬ್ಬರು ಒಂದೆರಡು ಬಾರಿ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿದ್ದರು. ತಕ್ಷಣ ಭಾಗವತರು 'ಏನಿದರ ಅರ್ಥ' ಎಂದರು. ಅರ್ಥಧಾರಿ ಶ್ಲೋಕದ ಆರ್ಥವನ್ನು ವಿವರಿಸಿ ಅರ್ಥಗಾರಿಕೆ ಮುಂದುವರಿಸಿದರು. ನಂತರ ಭಾಗವತರನ್ನು ಮಾತನಾಡಿಸಿದಾಗ "ಆ ಶ್ಲೋಕದ ಅರ್ಥ ಗೊತ್ತಾಗಬೇಡ್ವಾ. ಪ್ರೇಕ್ಷಕರು ವಿದ್ವಾಂಸರಲ್ಲವಲ್ಲಾ" ಎಂದರು. ನಂತರ ಜರುಗಿದ ಪ್ರದರ್ಶನದಲ್ಲೂ ರಂಗವನ್ನು ನಿಯಂತ್ರಿಸುವ, ತಪ್ಪಾದಾಗ ಸ್ಥಳದಲ್ಲೇ ಸರಿಪಡಿಸುವ ಅವರು 'ಒಂದನೇ ವೇಷಧಾರಿ'ಯಾಗಿ ಕಂಡರು.
              ಇವರು ಬೇರಾರು ಅಲ್ಲ, ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳು. ಇವರೊಬ್ಬ ರಂಗ ನಿರ್ದೇಶಕ. 'ಯಕ್ಷಗಾನಕ್ಕೆ ನಿರ್ದೇಶಕ ಬೇಕೇ ಬೇಡ್ವೇ' ಎಂಬ ಜಿಜ್ಞಾಸೆಗೆ ಕುರಿಯ ಭಾಗವತರು ಪ್ರತ್ಯಕ್ಷ ಉತ್ತರದಂತೆ ಕಂಡರು. ಹಾಗಾಗಿಯೇ ಇರಬೇಕು - ಅವರಿಗೆ ಇಳಿವಯಸ್ಸಲ್ಲೂ ಕೂಟಾಟಗಳಿಗೆ ಬಹು ಬೇಡಿಕೆ. ಸಂಮಾನಗಳ ಮಾಲೆ. ಸರ್ವಾದರಣೀಯ ಪುರಸ್ಕಾರ. ಬೌದ್ಧಿಕ ಮತ್ತು ತಾಂತ್ರಿಕ ಸ್ಪರ್ಶ ಬಯಸುವ 'ದುಶ್ಶಾಸನ ವಧೆ, ಮೈರಾವಣ ಕಾಳಗ, ಇಂದ್ರಕೀಲಕ'ದಂತಹ ಪ್ರಸಂಗಗಳು ಕುರಿಯರನ್ನು ಕಾಯುತ್ತವೆ!
              ಕುರಿಯ ಶಾಸ್ತ್ರಿಗಳು ಮೊದಲು ಹವ್ಯಾಸಿಯಾಗಿ ಬಣ್ಣದ ವೇಷಧಾರಿ. ಕಲಾವಿದರಿಗೆ, ಯಕ್ಷಗಾನಕ್ಕೆ ಗೌರವ ತಂದ ಪ್ರಸಿದ್ಧ ಕುರಿಯ ಮನೆತನ. ಕಲಾವಿದರನ್ನು ಬೆಳೆಸಿದ ಗುರುಕುಲ. ಸಮಗ್ರ ಯಕ್ಷಗಾನದ ನೋಟ, ಮುನ್ನೋಟ. ಇವರ ದೊಡ್ಡಪ್ಪ ಪ್ರಾತಃಸ್ಮರಣೀಯ ಕುರಿಯ ವಿಠಲ ಶಾಸ್ತ್ರಿಗಳು. ಮೇಳಗಳ ಯಾಜಮಾನ್ಯದ ಸರ್ವಾನುಭವ. ಈ ಸಂಸ್ಕಾರದ ಪಾಕದಲ್ಲಿ ಗಣಪತಿ ಶಾಸ್ತ್ರಿಗಳು ಕಲಾ ಬದುಕನ್ನು ಕಟ್ಟಿಕೊಂಡರು. ಭಾಗವತನಾಗಿ ರೂಪುಗೊಂಡರು. ಕಟೀಲು ಮೇಳದಲ್ಲಿ ಗುರಿಕಾರ್ ನೆಡ್ಲೆ ನರಸಿಂಹ ಭಟ್ಟರಿಂದ ಪಕ್ವಗೊಂಡರು. ನಿಜಾರ್ಥದ ಒಂದನೇ ವೇಷಧಾರಿಯಾಗಿ ಬೆಳೆದರು.
             ಕುರಿಯರಿಗೆ ತನ್ನ ಭಾಗವತಿಕೆ ಒಳ್ಳೆಯದಾಗಬೇಕು, ನಾಲ್ಕು ಜನ ಹಾಡಿ ಹೊಗಳಬೇಕು ಎನ್ನುವ ಬಯಕೆ ಇಲ್ಲವೇ ಎಳ್ಳಷ್ಟಿಲ್ಲ. 'ಆಟ ಒಳ್ಳೆಯದಾಗಬೇಕು' ಎಂಬ ಕಾಳಜಿ. ದೈಹಿಕವಾದ ಯಾವುದೇ ಸಮಸ್ಯೆಗಳು ರಂಗದ ಮುಂದೆ ಗೌಣ. "ನನಗೆ ಪ್ರಸಿದ್ಧ ವೇಷಧಾರಿಗಳೇ ಆಗಬೇಕೆಂದಿಲ್ಲ. ಸಾಮಾನ್ಯರನ್ನು ನೀಡಿ. ಆಟ ಮೇಲೆ ಹಾಕ್ತೇನೋ ಇಲ್ವೋ ನೋಡಿ," ಹಿಂದೊಮ್ಮೆ ಹೇಳಿದ್ದರು. ಪಾತ್ರಕ್ಕೆ ಅನುಗುಣವಾಗಿ ಕಲಾವಿದರನ್ನು ಸಿದ್ಧಗೊಳಿಸುವ ಜಾಣ್ಮೆ ಕುರಿಯರಿಗೆ ಹಿರಿಯರ ಬಳುವಳಿ. ಅವರು ಆಡಿಸುವ ಆಟದಲ್ಲೆಲ್ಲಾ ಯಕ್ಷಗಾನದ ಸಮಗ್ರತೆಯ ದರ್ಶನವನ್ನು ಕಂಡಿದ್ದೇನೆ.
           ಕುರಿಯರನ್ನು ಚೌಕಿ(ಬಣ್ಣದ ಮನ)ಯಲ್ಲಿ ಗಮನಿಸಿ. ಪ್ರದರ್ಶನ ಆರಂಭವಾಗುವ ಒಂದು ತಾಸಾದರೂ ಮುಂಚೆ ಆಗಮಿಸುತ್ತಾರೆ. ಒಂದೆಡೆ ಕುಳಿತಿರುತ್ತಾರೆ. ಅವರ ನಿರ್ದೇಶನದ ಪ್ರಸಂಗವಾದರೆ ಕಲಾವಿದರಿಗೆ ಮಾರ್ಗದರ್ಶನ ನೀಡುವ ಹಲವಾರು ಸಂದರ್ಭಗಳಿಗೆ ಸಾಕ್ಷಿಯಾಗಿದ್ದೇನೆ. ಎಷ್ಟು ಪದ್ಯ, ಅದಕ್ಕೆ ಹೇಗೆ ಅರ್ಥ, ರಂಗ ಕ್ರಿಯೆ, ಆಗಮನ-ನಿರ್ಗಮನ..ವನ್ನು ಸ್ಪಷ್ಟವಾಗಿ ಹೇಳುತ್ತಾರೆ. ಹೇಳಿದಂತೆ ರಂಗದಲ್ಲಿ ನಿರ್ವಹಿಸುತ್ತಾರೆ.
           ರಂಗಸ್ಥಳದ ಪಡಿಮಂಚದಲ್ಲಿ ಕುಳಿತರೆ ಸಾಕು. ಇಡೀ ರಂಗವೆ ಶರಣಾಗುವ ಅವ್ಯಕ್ತ ವ್ಯಕ್ತಿತ್ವ. ಪಾತ್ರಗಳು ತನ್ನ ನಿಲುಕಿನಾಚೆ ದಾಟಿದರೆ ಸ್ಥಳದಲ್ಲೇ ಹೊಗಳಿಕೆ. ತಪ್ಪಿದರೆ ಒಂದೆರಡು ಬಾರಿ ಜೀವದಾನ. ಕೈಯಲ್ಲಿದ ಜಾಗಟೆ ದೊಡ್ಡದನಿಯಲ್ಲಿ ಕೂಗಿತೋ ಪಾತ್ರಧಾರಿ ನಿರ್ಗಮಿಸಬೇಕು. ಇಲ್ಲದಿದ್ದರೆ ನಿರ್ಗಮನ ಮಾಡಿಸಿಬಿಡುತ್ತಾರೆ! ಇದು ಭಾಗವತರ ತಾಕತ್ತು. ಕಲಾವಿದರು ಒಪ್ಪಿದ್ದಾರೆ. ರಂಗ ಒಪ್ಪಿದೆ. ಕುಣಿಯುವ ಪಾತ್ರಗಳಿಗೆ ರಂಗದಲ್ಲೇ ಆಶುರಚನೆಯನ್ನು ಮಾಡಿ ಹಾಡಿದ್ದಿದೆ. ಇದರಿಂದ ಕಲೆಗೂ, ಕಲಾವಿದನಿಗೂ ರಂಗಸುಖದ ಅನುಭವ. ಪಾತ್ರವೊಂದರಿಂದ ಸನ್ನಿವೇಶ 'ಬೋರ್' ಆಗುತ್ತದೆ ಎಂದು ಕಂಡರೆ ನಿರ್ದಾಕ್ಷಿಣ್ಯವಾಗಿ ನೇಪಥ್ಯಕ್ಕೆ ತಳ್ಳುತ್ತಾರೆ!
            ಈ ರೀತಿಯ ರಂಗಶಿಕ್ಷಣದಿಂದ ಹಲವಾರು ಕಲಾವಿದರು ಸಿದ್ಧರಾಗಿದ್ದಾರೆ. ಕುರಿಯ ಭಾಗವತರನ್ನು ದಿನವೂ ಜ್ಞಾಪಿಸಿಕೊಳ್ಳುತ್ತಾರೆ. ವೇಷವನ್ನು ಮೆರೆಸುವ ಭಾಗವತಿಕೆ, ರಂಗದ ಕಲಾವಿದರ ಕಷ್ಟ-ಸುಖ, ತಾನೇ ಒಂದು ಪಾತ್ರವಾಗುವ ಲೀನತೆ, ಪ್ರಸಂಗದ ಸಮಗ್ರ ಮಾಹಿತಿ, ಒಂದು ಪ್ರಸಂಗ ಕೃತಿಯನ್ನು ತನ್ನದನ್ನಾಗಿ ಮಾಡಿಕೊಳ್ಳುವ ಪರಿ, ಒಟ್ಟೂ ರಂಗಕ್ಕೆ ಚಿಮ್ಮು ಉತ್ಸಾಹ ತರುವ ಕುರಿಯ ಭಾಗವತರಿಗೆ ಅವರೇ ಸಾಟಿ.
              ಇವರೊಂದಿಗೆ ಮದ್ಲೆಗಾರ ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ಹತ್ತು ವರುಷದ ತಿರುಗಾಟ. ಅವರೆನ್ನುತ್ತಾರೆ, "ರಂಗವು ಹೇಗೆ ಇರಬೇಕು ಎಂದು ಗ್ರಹಿಸಿದ್ದರೋ ಅದರಂತೆ ರೂಪುಗೊಳಿಸುವ ಅಪೂರ್ವ ಪ್ರತಿಭಾವಂತ. ಆಟದ ರೈಸುವಿಕೆಗೆ ರಾಜಿಯಿಲ್ಲದ ನಿರ್ವಹಣೆ. ಕಲಾವಿದರ ನಿಷ್ಠುರಗಳನ್ನು ಎದುರಿಸಿದ್ದಾರೆ. ಕುರಿಯರಂತೆ ಕಲಾವಿದರನ್ನು ವೇಷಕ್ಕೆ ತಯಾರು ಮಾಡುವ ಜ್ಞಾನ ಅಗರಿ ಶ್ರೀನಿವಾಸ ಭಾಗವತರಲ್ಲಿತ್ತು. ಸಂಘಟಕರು ಯಾವುದೇ ಪ್ರಸಂಗ ಹೇಳಲಿ ಅದನ್ನು ಒಪ್ಪಿಕೊಳ್ಳುವ, ಆಟವನ್ನು ಯಶಗೊಳಿಸುವ ಅವ್ಯಕ್ತ ಶಕ್ತಿಯನ್ನು ಕುರಿಯರಲ್ಲಿ ಕಂಡಿದ್ದೇನೆ."
             ಕಲಾವಿದರ ಕಷ್ಟಗಳಿಗೆ ಮಿಡಿಯುವ ಮನಸ್ಸು. ಅನಾರೋಗ್ಯದಲ್ಲಿದ್ದವರಿಗೆ ನೆರವಾಗುವ ಗುಣ. ಮೇಳದಲ್ಲಿದ್ದಷ್ಟು ಸಮಯ ಯಜಮಾನರಿಗೆ ತೊಂದರೆಯಾಗಲಿಲ್ಲ.  ಕಲಾವಿದರ ಯೋಗ-ಕ್ಷೇಮದ ಹೊಣೆಯನ್ನು ಕರ್ತವ್ಯ ದೃಷ್ಟಿಯಿಂದ ಮಾಡುತ್ತಿದ್ದರು. ಹೊಸಬರಿಗೆ ರಂಗದಲ್ಲಿ ಒರಟನಂತೆ ಫಕ್ಕನೆ ಕಂಡರೂ ನಿಜಕ್ಕೂ ಅವರದು ಮಗುವಿನ ಮನಸ್ಸು. ಮರುಗುವ ಮನಸ್ಸು. ಅವರಿಗೆ ಸಿಗುವ ಸಂಭಾವನೆಗಿಂತಲೂ ಹೆಚ್ಚು ಕಲಾವಿದರ ಆರೋಗ್ಯಕ್ಕಾಗಿ ವ್ಯಯಿಸುತ್ತಿದ್ದರು, ಜ್ಞಾಪಿಸುತ್ತಾರೆ ಪದ್ಯಾಣ. ಇಷ್ಟೆಲ್ಲಾ ಪರರಿಗಾಗಿ ಮಿಡಿಯುವ ಕುರಿಯರು ಎಂದೂ ವೈಯಕ್ತಿಕ ಕಷ್ಟ, ಸಮಸ್ಯೆಯನ್ನು ಯಾರಲ್ಲೂ ಹೇಳಿಕೊಂಡಿಲ್ಲ ಎನ್ನುವುದು ಗಮನೀಯ.
            'ಯಕ್ಷಮಿತ್ರ ನಮ್ಮ ವೇದಿಕೆ' ವಾಟ್ಸ್ಪ್ ತಂಡವು ನವೆಂಬರ್ 2ರಂದು ಕುರಿಯ ಭಾಗವತರಿಗೆ ಸಂಮಾನ ಏರ್ಪಡಿಸಿದೆ. ಕಟೀಲಿನಲ್ಲಿ ಸಂಜೆ 7 ಗಂಟೆಗೆ ಸಂಮಾನ ಸಮಾರಂಭ ಜರುಗಲಿದೆ. ಬಳಿಕ ನಿಶಿಪೂರ್ತಿ ಯಕ್ಷಗಾನ. ತಂಡದ ಎರಡನೇ ಕಾರ್ಯಕ್ರಮವಿದು. ಡಾ.ಪದ್ಮನಾಭ ಕಾಮತರ ಸರ್ವಸಾರಥ್ಯ. ನಾಲ್ಕುನೂರಕ್ಕೂ ಮಿಕ್ಕಿ ಸದಸ್ಯರನ್ನೊಳಗೊಂಡ ತಂಡದ ಕಾರ್ಯ ಮಾದರಿ.

(ಚಿತ್ರಗಳು - ಉದಯ ಕಂಬಾರ್, ವರ್ಣ ಸ್ಟುಡಿಯೋ, ಬದಿಯಡ್ಕ)


Tuesday, October 27, 2015

ಮತ್ತೆ ಬದುಕಿದ ದೇಶಮಂಗಲ..! .

                  ಕಾಸರಗೋಡು ಬೆದ್ರಡ್ಕ ಪೂಮಾಣಿ-ಕಿನ್ನಿಮಾಣಿ ಸನ್ನಿಧಿಯಲ್ಲಾಗುವ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದ ಸಮಯ. ಆಗ ದೇಶಮಂಗಲ ಕೃಷ್ಣ ಕಾರಂತರನ್ನು ನೋಡಿದ, ಮಾತನಾಡಿದ ನೆನಪು. ವಿವಿಧ ಸಂದರ್ಭಗಳಲ್ಲಿ ಕಾರಂತರ ಬೌದ್ಧಿಕ ಗಟ್ಟಿತನವನ್ನು ಗಣ್ಯರು ನೆನಪಿಸುವುದನ್ನು ಕೇಳಿದ್ದೇನೆ. ಅವರು ದೂರವಾಗಿ ದಶಕ ಕಳೆದರೂ ಯಕ್ಷಗಾನದ ಸುದ್ದಿ ಮಾತನಾಡುವಾಗಲೆಲ್ಲಾ ದೇಶಮಂಗಲದವರನ್ನು ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ.
               ಸುಮಾರು ತೊಂಭತ್ತು ಸಂವತ್ಸರ ಬದುಕಿದ ಕೃಷ್ಣ ಕಾರಂತರು ಕುಟುಂಬಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಲಿಲ್ಲ. ಸಾಮಾಜಿಕವಾಗಿ ಬದ್ಧತೆಯ ಬದುಕನ್ನು ರೂಢಿಸಿಕೊಂಡವರು. ಯಕ್ಷಗಾನದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡವರು. ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಮಾಡಿದವರು. ಅವರ ಪ್ರವೃತ್ತಿಗೆ ದಶಬಾಹುಗಳು. ತಾನುಣ್ಣದಿದ್ದರೂ ಉಣ್ಣದವರಿಗೆ ನೆರಳಾದವರು. ಹಾಗೆಂತ ಕಾರಂತರೇನೂ ಆರ್ಥಿಕ ಶ್ರೀಮಂತರಲ್ಲ. ಹೃದಯ ಶ್ರೀಮಂತಿಕೆ ಇದ್ದುದರಿಂದಲೇ ಈಗಲೂ ಪ್ರಸ್ತುತರು.
               ವ್ಯಕ್ತಿ ಮರಣಿಸಿದಾಗ ಊರಿನ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದರ ಮೇಲೆ ಆತನ ಸಿದ್ಧಿ-ಪ್ರಸಿದ್ಧಿ. ಊರು ಮಾತ್ರವಲ್ಲ ಹೊರ ಊರಿನ ಗಣ್ಯರು ಕೂಡಾ ನೆನಪಿಸುವ ವ್ಯಕ್ತಿತ್ವ ಕಾರಂತರಲ್ಲಿತ್ತು. ನ್ಯಾಯಾಲಯದ ಮೆಟ್ಟಲೇರುವ ಬಹುವಿಧದ ವಿವಾದಗಳಿಗೆ ಕಾರಂತರು ಸ್ಪಂದಿಸುತ್ತಿದ್ದ ರೀತಿ ಅನನ್ಯ.  ವಿವಾದಗಳು ರಾಜಿಯಲ್ಲಿ ಮುಗಿಯುವುದಿದ್ದರೆ ಕಾರಂತರ ಮಧ್ಯಸ್ತಿಕೆ. ಅವರು ನೀಡುವ ನಿಷ್ಪಕ್ಷಪಾತ ತೀರ್ಮಾನವನ್ನು ಜನ ಸ್ವೀಕರಿಸುತ್ತಿದ್ದರು. ನ್ಯಾಯದ, ನ್ಯಾಯಾಲಯದ ಎಲ್ಲಾ ಪ್ರಕ್ರಿಯೆಗಳು ಅವರಿಗೆ ಸಲೀಸು.
                ಕಾರಂತರ ಭಾವ ಸಿರಿಬಾಗಿಲು ವೆಂಕಪ್ಪಯ್ಯ. ಇಬ್ಬರೂ ಯಕ್ಷ ಜಿಜ್ಞಾಸುಗಳು. ಪಾರ್ತಿಸುಬ್ಬ ರಚಿತ ರಾಮಾಯಣದ ಓಲೆಗರಿಗಳನ್ನು ಸಂಗ್ರಹಿಸಲು ನೆರವಾದ ಹಿರಿಚೇತನಗಳು. ಪುತ್ರಕಾಮೇಷ್ಟಿಯಿಂದ ಸುಗ್ರೀವ ಸಖ್ಯದ ತನಕದ ಕಥಾಭಾಗವನ್ನು ಇವರಿಬ್ಬರು ಸಂಗ್ರಹಿಸಿ ಸಹಕರಿದ್ದಾರೆಂದು ಕುಕ್ಕಿಲ ಕೃಷ್ಣ ಭಟ್ಟರು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ನಿಜಕ್ಕೂ ಇದು ಮಹಾತ್ಕಾರ್ಯ. ರಾಮಾಯಣ ಕೃತಿಯು ಅಚ್ಚಾಗಿದೆ. ಕಲಾವಿದರಲ್ಲಿ ಇರಲೇಬೇಕಾದ ಪುಸ್ತಕ.
               ಕೃಷ್ಣ ಕಾರಂತರಿಗೂ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರಿಗೂ ನಂಟು. ಸಾಮಗರೊಂದಿಗೆ ಒಡನಾಟ. ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದಲ್ಲಿ ನಡೆಯುತ್ತಿದ್ದ ಉದ್ಧಾಮರ ಕೂಟಗಳಲ್ಲಿ ಕಾರಂತರೂ ಭಾಗಿ. ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯುದ್ದಕ್ಕೂ ಕಾರ್ಯಕ್ರಮವನ್ನು ನೀಡಿದ ಹಿರಿಮೆ. ಶೇಣಿ-ಸಾಮಗ ಯುಗದಲ್ಲಿ ಅವರಿಗೆ ಸಮದಂಡಿಯಾಗಿ ಕಲಾವಿದರಾಗಿ, ವಿಮರ್ಶಕರಾಗಿ ಕಾಣಿಸಿಕೊಂಡಿದ್ದರು. "ತಾಳಮದ್ದಳೆಯಲ್ಲಿ ಇವರೆದುರು ಅರ್ಥಗಾರಿಕೆ ಹೇಳಲು ಬಹುತೇಕರು ಹಿಂಜರಿಯುತಿದ್ದರು. ಎದುರು ಅರ್ಥಧಾರಿಯನ್ನು ಅಟ್ಯಾಕ್ ಮಾಡುವ ಗುಣವು ಅವರ ಅಪಾರ ಜ್ಞಾನದ ಪ್ರತೀಕ," ಎನ್ನುತ್ತಾರೆ ಹಿರಿಯ ಅರ್ಥಧಾರಿ ಮಧೂರು ವೆಂಕಟಕೃಷ್ಣ.
              ಎಡನೀರು ಮಠದ ಹಿಂದಿನ ಯತಿಗಳಾದ ಪೂಜ್ಯ ಶ್ರೀ ಶ್ರೀ ಈಶ್ವರಾನಂದ ಭಾರತೀ ಸ್ವಾಮಿಗಳ ಆಪ್ತರಾಗಿದ್ದರು. ಶ್ರೀಮಠದ ವ್ಯವಹಾರಗಳನ್ನು ಸುಸೂತ್ರವಾಗಿ ಸೇವಾ ಭಾವದಿಂದ ಮಾಡುತ್ತಿದ್ದರು ಎಂದು ಹತ್ತಿರದಿಂದ ಬಲ್ಲವರು ನೆನಪಿಸುತ್ತಾರೆ. ಅಂತೆಯೇ ಅರಮನೆಗಳ ಕೆಲವು ವ್ಯವಹಾರಗಳ ಹೊಣೆಯೂ ಕಾರಂತರಿಗೆ ಇತ್ತಂತೆ. ಇದು ಅವರ ವ್ಯವಹಾರ ಕುಶಲತೆಗಳಿಗೆ ದೃಷ್ಟಾಂತ. ಊರಿನ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ದುಡಿದದ್ದಲ್ಲದೆ ಮಾರ್ಗದರ್ಶಕರಾಗಿದ್ದರು.
             "1962ರಲ್ಲಿ ಮಧೂರು ಕ್ಷೇತ್ರದಲ್ಲಿ ಜರುಗಿದ ಮೂಡಪ್ಪ ಸೇವೆ, 1961ರಲ್ಲಿ ಜರುಗಿದ ಕೋಟಿ ನಾಮಾರ್ಚನೆಗಳ ಸಂದರ್ಭದಲ್ಲಿ ಕಾರಂತರು ಕಾರ್ಯಕರ್ತರಾಗಿ ದುಡಿದಿದ್ದರು. ಇಂಡಿಯನ್ ನೇಶನಲ್ ಕಾಂಗ್ರೆಸಿನ ಸಕ್ರಿಯ ಕಾರ್ಯಕರ್ತರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದರು. ಇವರ ಸಾಮಥ್ರ್ಯವನ್ನು ಅರ್ಥಮಾಡಿಕೊಂಡಿದ್ದ ಆಗಿನ ಮದರಾಸು ಸರಕಾರವು ಮಾಯಿಪ್ಪಾಡಿ ಶಿಕ್ಷಕರ ತರಬೇತಿ ಶಾಲೆಯ ಕಟ್ಟಡ ನಿರ್ಮಾಣದ ಕಾರ್ಯವನ್ನು ಇವರಿಗೆ ವಹಿಸಿತ್ತು. ಕ್ಲುಪ್ತ ಸಮಯದಲ್ಲಿ ಕಾಮಗಾರಿಯನ್ನು ಮುಗಿಸಿದ್ದರು. ಇವರ ಸೇವೆಗೆ ಆಗಿನ ಶಿಕ್ಷಣ ಸಚಿವರಾದ ಭಕ್ತವತ್ಸಲಂ ಕಾರಂತರನ್ನು  ಅಭಿನಂದಿಸಿದ್ದರು," ಎಂದು ಮಧೂರು ಎಂ.ನರಸಿಂಹ ಮಯ್ಯರು ರಜತ ಕೂಟ ಎನ್ನುವ ಕೃತಿಯಲ್ಲಿ ಉಲ್ಲೇಖಿಸಿದ್ದು ಗಮನೀಯ.
             18-11-1915 ದೇಶಮಂಗಲ ಕೃಷ್ಣ ಕಾರಂತರ ಜನನ. ತಂದೆ ಸುಬ್ರಾಯ ಕಾರಂತ. ತಾಯಿ ಮೀನಾಕ್ಷಿ ಅಮ್ಮ. ಮಗ ಜಯರಾಮ. ಮಗಳು ಮೀನಾಕ್ಷಿ. ಕಾರಂತರ ಅಳಿಯ ಭಾಗವತ ರಾಮಕೃಷ್ಣ ಮಯ್ಯ. ಇವರ ಕನಸಿನ 'ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ'ವು ಕಾರಂತರ ಜನ್ಮಶತಮಾನೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ 'ಯಕ್ಷಪೂರ್ಣಿಮ' ಶೀರ್ಶಿಕೆಯಲ್ಲಿ ಆಚರಿಸಿದೆ.  ಹನ್ನೆರಡು ತಾಳಮದ್ದಳೆಗಳನ್ನು ಕೇರಳ, ಕರ್ನಾಟಕಗಳಲ್ಲಿ ಏರ್ಪಡಿಸಿದೆ. ಈ ಮೂಲಕ ಕಾರಂತರು ಮತ್ತೆ ಬದುಕಿದ್ದಾರೆ.
           "ಯಕ್ಷಗಾನ ಕಲಾವಿದ ಎಂದಾಗ ಸಮಾಜವು ಹಗುರವಾಗಿ ಕಾಣುತ್ತಿದ್ದ ಕಾಲಘಟ್ಟದಲ್ಲಿ ನನ್ನ ಮಾವ ಬೆನ್ನುತಟ್ಟಿ ಪ್ರೋತ್ಸಾಹಿಸಿದವರು. ಈ ಋಣ ಹೇಗೆ ತೀರಿಸಲಿ? ಹಿರಿಯರನ್ನು ಮಾನಿಸಬೇಕೆನ್ನುವುದು ಯಕ್ಷಗಾನ ಕಲಿಸಿದ ಪಾಠ. ಹೋದೆಡೆಯಲ್ಲೆಲ್ಲಾ ಕಲಾಭಿಮಾನಿಗಳು ಪ್ರಾಂಜಲವಾಗಿ ಪ್ರೋತ್ಸಾಹಿಸಿದ್ದಾರೆ," ಎನ್ನುತ್ತಾರೆ ರಾಮಕೃಷ್ಣ ಮಯ್ಯರು. ಯಕ್ಷಪೂರ್ಣಿಮಾದ ಸಮಾರೋಪವು ಅಕ್ಟೋಬರ್ 24 (ಇಂದು) ಬೆಳಿಗ್ಗೆ ಗಂಟೆ 10 ರಿಂದ ರಾತ್ರಿ 10ರ ತನಕ ಮಧೂರು ಪರಕ್ಕಿಲದಲ್ಲಿ ಸಂಪನ್ನವಾಗಿದೆ.  ಸಂಸ್ಮರಣೆ, ಗೋಷ್ಠಿ, ತಾಳಮದ್ದಳೆ, ಸಾಧಕ ಸಂಮಾನ, 'ಪುಳ್ಕೂರು ಬಾಚ' ಪ್ರಸಂಗ ಬಿಡುಗಡೆ, ದೊಂದಿಯಾಟ.. ಹೀಗೆ ತುಂಬು ಕಾರ್ಯಹೂರಣಗಳಿದ್ದುವು.
             ಹನ್ನೆರಡು ಕಾರ್ಯಕ್ರಮಗಳನ್ನು ಸಿರಿಬಾಗಿಲು ರಾಮಕೃಷ್ಣ ಮಯ್ಯರು ಏರ್ಪಡಿಸಿದ್ದರಲ್ಲಾ. ಆಯೋಜಕರಿಗೆ ಹೊರೆಯಾಗದೆ ನೀಡಿದಷ್ಟು ಮೊತ್ತವನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಆದರೆ ಶೇ.70ರಷ್ಟು ಆರ್ಥಿಕತೆಯನ್ನು ತನ್ನ ಯಕ್ಷಗಾನದ ಗಳಿಕೆಯಿಂದಲೇ ಹೊಂದಾಣಿಸಿದ್ದಾರೆ ಎನ್ನುವುದು ಅಜ್ಞಾತ ಸತ್ಯ. ಯಕ್ಷಗಾನವು 'ಪಕ್ಕಾ ಕಮರ್ಶಿಯಲ್'ನತ್ತ ಹೊರಳುತ್ತಿರುವ ದಿನಮಾನದಲ್ಲಿ ಮಯ್ಯರ ಸಾಹಸ ಮತ್ತು ನಿರ್ಧಾಾರದ ಮನಃಸ್ಥಿತಿಗಳು ಗ್ರೇಟ್. ವೃತ್ತಿ/ಹವ್ಯಾಸಿ ಕಲಾವಿದ ಬಂಧುಗಳು ಒಮ್ಮೆ ಕತ್ತು ತಿರುಗಿಸಿ ಇತ್ತ ನೋಡುವಿರಾ? ಅದರಲ್ಲೇನೋ ಸಂದೇಶವಿದೆಯಲ್ವಾ.

Monday, October 19, 2015

ರಂಗ ಮರೀಚಿಕೆಗಳ ಮಧ್ಯೆ ಸಜೀವ ಗುರುಕುಲ

            ಅದೊಂದು ಯಕ್ಷಗಾನ ಕಲಿಕಾ ಶಾಲೆ. ದಿನಪೂರ್ತಿ ಗುರುಗಳ ಉಪಸ್ಥಿತಿ. ಶಿಷ್ಯರು ತಮ್ಮ ಬಿಡುವಿನ ವೇಳೆಯಲ್ಲಿ ಕಲಿಯುವ ವ್ಯವಸ್ಥೆ. ಸಮಯ ಹೊಂದಾಣಿಸಿಕೊಂಡರಾಯಿತು. ಗುರುವಿನ ಜತೆ ಇದ್ದು ಬೌದ್ಧಿಕವಾಗಿ ಅಪ್ಡೇಟ್ ಆಗಲು ಅವಕಾಶ.
ಇದು ಗುರು ಮೋಹನ ಬೈಪಾಡಿತ್ತಾಯರ ಕಲಿಕಾ ಶಾಲೆಯ ಸೂಕ್ಷ್ಮ ಚಿತ್ರ. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಗೆ ತಾಗಿಕೊಂಡಿರುವ  ಕಟ್ಟಡವೊಂದರಲ್ಲಿ ಇವರ ಗುರುಕುಲ. ಇಪ್ಪತ್ತಕ್ಕೂ ಮಿಕ್ಕಿ ಅಭ್ಯಾಸಿಗಳು ಒಂದು ವರುಷದಿಂದ ವಿದ್ಯಾರ್ಜನೆ ಮಾಡುತ್ತಿದ್ದಾರೆ.
           ಯಕ್ಷಗಾನ ಕೇಂದ್ರಗಳ ಏರು ಪರ್ವಕಾಲದತ್ತ ತಿರುಗಿ ನೋಡೋಣ.  ಯಕ್ಷಜ್ಞಾನ ಕಲಿಯುವ ದಾಹವಿದ್ದ ನೂರಾರು ಮನಸ್ಸುಗಳು. ಐದಾರು ತಿಂಗಳ ದಿನಪೂರ್ತಿ ಕಲಿಕೆ. ಗುರುಕುಲದಿಂದ ಹೊರ ಬಂದಾಗ ಹತ್ತಾರು ಕನಸುಗಳು. ಕೆಲವರಿಗೆ ವೃತ್ತಿ ಕಲಾವಿದನಾಗುವ ಆಸೆ.  ಮತ್ತೆ ಕೆಲವರಿಗೆ ಸ್ವವೃತ್ತಿಯೊಂದಿಗೆ ಹವ್ಯಾಸಿಯಾಗಿದ್ದುಕೊಳ್ಳುವ ನಿರೀಕ್ಷೆ.
               ಈಚೆಗೆ ಕೇಂದ್ರಗಳು ಅಭ್ಯಾಸಿಗಳ ಅಲಭ್ಯತೆಯಿಂದ ಉಸಿರೆಳೆದುಕೊಳ್ಳುತ್ತಿದೆ. ಸಾಮಾಜಿಕ ಬದುಕಿನ  ಪಲ್ಲಟಗಳ ಜತೆಗೆ ಯಕ್ಷಗಾನವನ್ನು ಪೂರ್ಣಕಾಲಿಕ ವೃತ್ತಿಯನ್ನಾಗಿ ಸ್ವೀಕರಿಸುವ ಅನಿವಾರ್ಯ ಇಲ್ಲದಿರುವುದೂ ಕಾರಣ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಒತ್ತಡ.  ಅಂಕ ಪಡೆಯುವ ಹುಮ್ಮಸ್ಸಿನಲ್ಲಿ ಸಾಂಸ್ಕೃತಿಕ ಭಾವಕ್ಕೆ ಮಸುಕು. ಕೂಡುಕುಟುಂಬ ಛಿದ್ರತೆ - ಹೀಗೆ ಹಲವು ಕಾರಣಗಳನ್ನು ಹುಡುಕಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಯಕ್ಷಗಾನವನ್ನು ಪ್ರೀತಿಸುವ ಮನಸ್ಸಿನ ಶುಷ್ಕತೆ.
               ಬೈಪಾಡಿತ್ತಾಯರ ಗುರುಕುಲ ಈ ಹಿನ್ನೆಲೆಯಲ್ಲಿ ಮುಖ್ಯವಾಗುತ್ತದೆ. 'ವಾರಕ್ಕೊಂದು ಕ್ಲಾಸ್' ಎನ್ನುವ ಪ್ಯಾಕೇಜ್ ಕಲಿಕೆಗಿಂತ ಭಿನ್ನ. ಇದು ಆರ್ಥಿಕವಾಗಿ ಗುರುವಿಗೆ ಸಬಲವಾಗದು. ಆದರೆ ವಿದ್ಯಾರ್ಥಿಗಳಿಗೆ ಗಟ್ಟಿ ಗುರುಬಲ. ವಾರದ ತರಗತಿಗಳು ಬೇರೆ ಬೇರೆ ಕಡೆ ನಡೆದರೆ  ವಿದ್ಯಾರ್ಥಿಗಳ ಸಂಖ್ಯೆ ಅಧಿಕಗೊಳ್ಳಬಹುದು. ಒಂದು ಕಾಲಘಟ್ಟದಲ್ಲಿ ಪುತ್ತೂರು, ಸುಳ್ಯ, ವಿಟ್ಲ, ಸವಣೂರು, ಮುಂಬಯಿ.. ಹೀಗೆ ತರಗತಿಗಳನ್ನು ಮಾಡಿದ ಅನುಭವಿ
               ಇಂದು ಕಲಿಕಾ ಶಾಲೆಗಳು ವಿಸ್ತೃತವಾಗಿವೆ. ಅನುಭವಿ ಕಲಾವಿದರು ಗುರುಗಳಾಗಿ ರೂಪುಗೊಂಡಿದ್ದಾರೆ. ಹವ್ಯಾಸಿ ಕಲಾವಿದರು ಬೆಳೆದಿದ್ದಾರೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿ ತಂಡ ವೃತ್ತಿಪರರಂತೆ ಪ್ರದರ್ಶನ ನೀಡುತ್ತಿವೆ. ಖುಷಿ ಪಡುವ ಸಂಗತಿ. ಮೋಹನ ಬೈಪಾಡಿತ್ತಾಯರ ಗರಡಿಯಲ್ಲಿ ಪಳಗಿದ ಅನೇಕ ಶಿಷ್ಯರು ರಂಗದಲ್ಲಿ ಗುರುತರ ಹೆಜ್ಜೆಯೂರಿದ್ದಾರೆ. ಕಡಬ ನಾರಾಯಣ ಆಚಾರ್ಯ (ದಿ|), ರಮೇಶ ಭಟ್ ಪುತ್ತೂರು, ಜಗನ್ನಿವಾಸ ರಾವ್ ಪಿ.ಜಿ., ವಿಟ್ಲ ಪ್ರಕಾಶ್, ಶ್ರೀಶ ನೆಡ್ಲೆ, ಮಹೇಶ ಕನ್ಯಾಡಿ... ಹೀಗೆ ಸು-ಮನಸ್ಸಿನ ಹಲವು ಶಿಷ್ಯರು ತಮ್ಮ ಗುರುವಿನ ಜ್ಞಾನವನ್ನು ರಂಗದಲ್ಲಿ ಮರುಸೃಷ್ಟಿ ಮಾಡುತ್ತಾರೆ. 'ತಾನು ಬೈಪಾಡಿತ್ತಾಯರ ಶಿಷ್ಯ'ನೆಂದು ಸಂಭ್ರಮಿಸುತ್ತಾರೆ.
               ಸಾಂಸ್ಕೃತಿಕ ವಿಚಾರಗಳನ್ನು ನೋಡುವ ದೃಷ್ಟಿ ಬದಲಾಗುತ್ತಿದೆ. ತಂತ್ರಜ್ಞಾನಗಳ ಬೀಸುನಡೆಗೆ ಯುವಕರು ಹೆಜ್ಜೆ ಹಾಕುತ್ತಿದ್ದಾರೆ. ಬದುಕಿಗೆ ಮಾರಕವೋ, ಪೂರಕವೋ ಎಂದು ಗೊತ್ತಿಲ್ಲದೆ ಮುನ್ನುಗ್ಗುವ ಮನಃಸ್ಥಿತಿಯನ್ನು ನೋಡಿದರೆ ಕಣ್ಣೆದುರೇ ಬೆಳೆಯುತ್ತಿರುವ ಯುವಮನಸ್ಸುಗಳು ಸಾಂಸ್ಕೃತಿಕ ಲೋಕದಿಂದ ಕಳಚಿಕೊಳ್ಳುತ್ತಿದ್ದಾರೇನೋ ಅನ್ನಿಸುತ್ತದೆ. ಈ ವಿಷಾದಗಳ ಮಧ್ಯೆ ಭರತನಾಟ್ಯ, ಸಂಗೀತ, ಯಕ್ಷಗಾನದಂತಹ ಶ್ರೀಮಂತ ಕಲೆಗಳನ್ನು ಅಪ್ಪಿಕೊಂಡ, ಒಪ್ಪಿಕೊಂಡ ಕಲಾಮನಸ್ಸಿನವರಿದ್ದಾರೆ.
              "ಯಕ್ಷಗಾನದ ಒಲವು ಎಲ್ಲೆಡೆ ಇದೆ. ಶಾಲಾ ವ್ಯವಸ್ಥೆಗಳು ಮತ್ತು ಮನೆಯ ವಾತಾವರಣಗಳು ಮಕ್ಕಳನ್ನು ಯಕ್ಷಗಾನ ಪ್ರವೇಶಕ್ಕೆ ಬಿಡುತ್ತಿಲ್ಲ. ಯಕ್ಷ ಕಲಿಕೆ ಕೆಲವೆಡೆ ಐಕಾನ್ ಆಗುತ್ತಿದೆ. ಪೂರ್ಣವಾಗಿ ಕಲಿಯುವ ಹುಮ್ಮಸ್ಸಿರುವುದಿಲ್ಲ. ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಕೆಂಬ ತುಡಿತ. ಮಕ್ಕಳಿಂದ ಹೆಚ್ಚು ಹೆತ್ತವರಲ್ಲಿ ಇಂತಹ ನಡೆಗಳಿವೆ. ಪೂರ್ಣವಾಗಿ ಯಕ್ಷಗಾನದ ಒಂದೊಂದು ವಿಭಾಗದ ಅಭ್ಯಾಸಕ್ಕೆ ಕನಿಷ್ಠವೆಂದರೂ ನೂರೈವತ್ತು ತರಗತಿಗಳು ಬೇಕು" ಎನ್ನುತ್ತಾರೆ ಬೈಪಾಡಿತ್ತಾಯರು.
               ಮುಂಬಯಿಯಲ್ಲಿ ಸ್ವಲ್ಪ ಕಾಲ ಬದುಕಿಗಾಗಿ ವಾಸವಾಗಿದ್ದರು. ಹಲವೆಡೆ ತರಗತಿಗಳನ್ನು ಮಾಡಿದ್ದರು. ಶಿಷ್ಯರ ಸಂಖ್ಯೆ ಅಧಿಕವಾಗಿತ್ತು. ಕರಾವಳಿ ಮೂಲದ ಸಾವಿರಾರು ಮಂದಿ ಮುಂಬಯಿಯಲ್ಲಿ ಇರುವುದರಿಂದ ಯಕ್ಷಗಾನಕ್ಕೆ ತುಂಬು ಬೆಂಬಲ. ಮುಂಬಯಿ ಬದುಕು ಬೈಪಾಡಿತ್ತಾಯರ ಬದುಕಿಗೆ ಟರ್ನ್. "ಮೋಹನ ಬೈಪಾಡಿತ್ತಾಯ ಯಾರೆಂದು ಕರಾವಳಿಯಲ್ಲಿ ಗೊತ್ತಿಲ್ಲ! ಆದರೆ ದೂರದ ಮುಂಬಯಿಯ ಯಕ್ಷಪ್ರಿಯರಿಗೆಲ್ಲ ಗೊತ್ತು," ಎನ್ನುತ್ತಾರೆ. ಅವರ ವಿನೋದದ ಮಾತಿನ ಸುತ್ತ ಕಾಣದ ಬಿಸಿಯುಸಿರಿನ ತಲ್ಲಣಗಳಿವೆ.
            ತನ್ನ ಸೋದರ ಹರಿನಾರಾಯಣ ಬೈಪಾಡಿತ್ತಾಯರು ಮೋಹನರಿಗೆ ಗುರು. ಅತ್ತಿಗೆ ಲೀಲಾವತಿ ಬೈಪಾಡಿತ್ತಾಯರ ಮಾರ್ಗದರ್ಶನ. ಕಲಿಕಾ ನಂತರ ಹತ್ತು ವರುಷ ಹವ್ಯಾಸಿಯಾಗಿ ಸಂಚಾರ. ಬಳಿಕ ಆದಿಸುಬ್ರಹ್ಮಣ್ಯ, ನಂದಾವರ, ಕಾಂತಾವರ, ಕರ್ನಾಟಕ, ಬೆಳ್ಮಣ್ಣು ಮೇಳಗಳಲ್ಲಿ ಎರಡು ದಶಕಗಳ ತಿರುಗಾಟ. ಬೆಳ್ಮಣ್ಣು ಮೇಳದ ವಾಹನ ಅಪಘಾತವು ಮೋಹನರ ಮೇಳ ಜೀವನಕ್ಕೆ ಕೊನೆಬಿಂದು. ಮೂರು ವರುಷ ಓಡಾಡದ ಸ್ಥಿತಿ. ಜತೆಗೆ ಆರ್ಥಿಕ ಸಂಕಟಗಳ ಮಾಲೆ. ಆರೋಗ್ಯ ಸುಧಾರಣೆ. 1995ರಿಂದ ಯಕ್ಷಗಾನ ಗುರುವಾಗಿ ಬದುಕಿಗೆ ದಾರಿ ಮಾಡಿಕೊಂಡರು. "ಬಹುಶಃ ನಾನು ಮೇಳದ ತಿರುಗಾಟದಲ್ಲಿರುತ್ತಿದ್ದರೆ ಎಂದೋ ಕಳೆದುಹೋಗುತ್ತಿದ್ದೆ. ಈಗ ನನಗೆ ನೂರಾರು ಶಿಷ್ಯರಿದ್ದಾರೆ. ಇದು ನನ್ನ ದೊಡ್ಡ ಆಸ್ತಿ," ಎನ್ನುವಾಗ ಮೋಹನರ ಮುಖ ಅರಳುತ್ತದೆ.
           ಮಡದಿ ಲಲಿತಾ. ರಾಮಕೃಷ್ಣ, ನವೀನ ಮಗಂದಿರು. ಮಗಳು ಮಮತಾ. ಉಜಿರೆ ಸನಿಹ ಮಗನ ಮನೆಯಲ್ಲಿ ವಾಸ್ತವ್ಯ. ಅಕ್ಟೋಬರ್ 18ರಂದು ಅಪರಾಹ್ನ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಮೊಹನ ಬೈಪಾಡಿತ್ತಾಯರಿಗೆ ಶಿಷ್ಯಾಭಿವಂದನ ಸಮಾರಂಭ. ಅರುವತ್ತಮೂರರ ಕಾಣ್ಕೆ. ಕಣ್ಣಿಗೆ ಕಾಣದ ತನ್ನ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ಕಂಡು ಆನಂದಿಸುವ ಕ್ಷಣ.


Thursday, October 15, 2015

ತ್ಯಾಗಕ್ಕೆ ತೋರಣ ಕಟ್ಟಿದ ’ಸಹಧರ್ಮಿಣಿ ಸಂಮಾನ

            "ಮೇಳಕ್ಕೆ ಹೊರಡುವ ದಿನ ಹತ್ತಿರ ಬಂದಾಗ ಮಡದಿ ಸಾವಿತ್ರಿ ಮ್ಲಾನವಾಗುತ್ತಿದ್ದಳು. ಅಂದು ದೇವರಿಗೆ ತುಪ್ಪದ ದೀಪ ಹಚ್ಚಿ, ಹಣೆಗೆ ಬೊಟ್ಟಿಟ್ಟು, ನಮಸ್ಕಾರ ಮಾಡಿ, ಇಷ್ಟದೈವಕ್ಕೆ ಕಾಣಿಕೆ ಹಾಕಿ ನನ್ನನ್ನು ಕಳುಹಿಸಿಕೊಡುತ್ತಿದ್ದ ದಿನಗಳನ್ನು ಮರೆಯುವಂತಿಲ್ಲ.  ತಂದೆಯವರ ತಿಥಿ ಜನವರಿ-ಫೆಬ್ರವರಿ ತಿಂಗಳಲ್ಲಿ ಆಗುತ್ತಿತ್ತು. ಆಗ ಒಂದು ದಿವಸಕ್ಕೆ ಹೇಗೋ ಹೊಂದಿಸಿಕೊಂಡು ಮನೆಗೆ ಬರುತ್ತಿದ್ದೆ. ಬಳಿಕ ಪತ್ತನಾಜೆ - ಮೇ - ಕಳೆದೇ ನಮ್ಮಿಬ್ಬರ ಭೇಟಿ. ಅಷ್ಟು ಸಮಯ ವಿರಹ!.." ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ಮೇಳಜೀವನದ ಕ್ಷಣಗಳನ್ನು ಹಂಚಿಕೊಂಡರು.
              ಕಲಾವಿದನು ಮನೆ, ಮಡದಿ, ಮಕ್ಕಳ ಮೋಹ ತೊರೆದು ಬಣ್ಣದ ನಂಟನ್ನು ಅಂಟಿಸಿಕೊಳ್ಳಬೇಕು. ಆಟದಿಂದ ಆಟಕ್ಕೆ ಕಾಲ್ನಡಿಗೆಯ ಪಯಣ. ಒಂದು ಹೊತ್ತು ಊಟ ಸಿಕ್ಕರೆ ಅದುವೇ ಮೃಷ್ಟಾನ್ನ. ಕೈಗೇನಾದರೂ ನಾಲ್ಕುಕಾಸು ಬಿದ್ದರಂತೂ ಈಗಿನ ಕೋಟಿ ರೂಪಾಯಿ ಸಿಕ್ಕಷ್ಟು ಖುಷಿ. ಸಾಮಾಜಿಕ ಸ್ಥಿತಿಯೂ ಹಾಗಿತ್ತೆನ್ನಿ. ಬಣ್ಣ ಹಚ್ಚಿದರೆ ಮಾತ್ರ ಮನೆಯ ಬದುಕಿನ ರಥದ ಗಾಲಿ ತಿರುಗಬಹುದಷ್ಟೇ. ಹಿರಿಯರನ್ನು ಮಾತನಾಡಿಸಿ ನೋಡಿ. ಸಂಕಷ್ಟಗಳ ಸರಮಾಲೆಗಳ ದಿನಮಾನಗಳಿಗೆ ದನಿಯಾಗುತ್ತಾರೆ.
                ಸರಿ, ಯಜಮಾನನಿಗೆ ಮೇಳದ ತಿರುಗಾಟ. ಮನೆಯ ನಿರ್ವಹಣೆಯ ಹೊಣೆ ಪತ್ನಿಯ ಹೆಗಲಿಗೆ. ಮಕ್ಕಳ ವಿದ್ಯಾಭ್ಯಾಸದಿಂದ ತೊಡಗಿ ಹಿರಿಯರ ಯೋಗಕ್ಷೇಮದ ತನಕ. ಬೇಕಾದೆಡೆಯಲ್ಲೆಲ್ಲಾ ಸ್ವಯಂ ನಿರ್ಧಾರ. ಕೃಷಿ, ಹೈನುಗಾರಿಕೆ ಇದ್ದರಂತೂ ಕೆಲಸಗಳ ಹೊರೆ. ಎಲ್ಲವನ್ನೂ ಗೊಣಗಾಟವಿಲ್ಲದೆ ನಿರ್ವಹಿಸಿದ ಅಮ್ಮಂದಿರ ಬೆವರ ಶ್ರಮವನ್ನು ಎಷ್ಟು ಮಂದಿ ಗಮನಿಸಿದ್ದಾರೆ?
                 ಪತ್ನಿಯ ನೆನಹು ಒಂದೆಡೆ, ಮಕ್ಕಳ ನೆನಪು ಇನ್ನೊಂದೆಡೆ, ಹಿರಿಯರ ಆರೋಗ್ಯದ ಚಿಂತೆ, ಕೃಷಿ ಕಾರ್ಯಗಳ ಯೋಚನೆ - ಎಲ್ಲವನ್ನೂ ಮನಸ್ಸಿಗೆ ಹಚ್ಚಿಕೊಂಡೇ ಬಣ್ಣದ ಲೋಕಕ್ಕೆ ಬಿನ್ನಾಣದ ಸ್ಪರ್ಶವನ್ನು ನೀಡಬೇಕು. ಚಿಂತೆಯನ್ನು ಹಂಚಿಕೊಳ್ಳೋಣ ಅಂದರೆ ಇತರರದ್ದೂ ಇದೇ ಹಾಡು-ಪಾಡು. ಚಿಂತೆಯ ಮೂಟೆಯೊಳಗೆ ಬದುಕಿನ ರಿಂಗಣ. ಪಾತ್ರಾಭಿವ್ಯಕ್ತಿಗೆ ಹೊಗಳಿಕೆ, ಪ್ರಶಂಸೆ ಬಂದಾಗಲೆಲ್ಲಾ ನೆನಪಾಗುವ ಮನೆಮಂದಿ. ಖುಷಿಯನ್ನು ಅನುಭವಿಸಲು ಆಗದ ಕಲಾಬದುಕು.
           ಮನೆಯ ಹೊಣೆಯನ್ನು ಜಾಣ್ಮೆಯಿಂದ ಹತ್ತಿಯಂತೆ ಹಗುರ ಮಾಡಿಕೊಂಡು ಮಾನಿನಿಯರಿದ್ದಾರೆ. ಆದರೆ ಪತಿಯ ವಿಯೋಗದ ಕ್ಷಣ ಇದೆಯಲ್ಲಾ. ಅದಕ್ಕೆ ಶಬ್ದಗಳಿಲ್ಲ, ದನಿಯಿಲ್ಲ.! ಮಕ್ಕಳಿಗೆ ಅಪ್ಪನ ನೆನಪು ಬಂದಾಗ ನೋವನ್ನು ಮರೆತು ಎಳೆಯ ಮನಸ್ಸುಗಳಿಗೆ ಸಾಂತ್ವನ ಹೇಳಬೇಕು. ಸಂದುಹೋದ ಬದುಕಿನಲ್ಲಿ ಜೀವನದಲ್ಲೂ ಇಂತಹ ದಿನಮಾನಗಳು ಹಾದುಹೋಗಿದೆ.
             ಈಗ ಕಾಲಘಟ್ಟ ಬದಲಾಗಿದೆ. ಆಧುನಿಕ ತಂತ್ರಜ್ಞಾನಗಳು ಧಾಂಗುಡಿಯಿಡುತ್ತಿವೆ. ಬೇಕಾದಾಗ ಮನೆಯವರೊಂದಿಗೆ ಸಂಪರ್ಕ ಸಾಧಿಸಬಹುದಾದ ಸಾಧನ ಅಂಗೈಯಲ್ಲಿದೆ.  ಒಬ್ಬೊಬ್ಬ ಸದಸ್ಯರೂ ವಾಹನ ಹೊಂದಬಹುದಾದ ಆರ್ಥಿಕ ಮೇಲ್ಮೈ ಹೊಂದಿದ್ದಾರೆ. ದುಡಿತಕ್ಕೆ ತಕ್ಕ ಅಲ್ಲದಿದ್ದರೂ ತೃಪ್ತಿಕರವಾದ ಸಂಭಾವನೆ. ಊಟ-ಉಪಾಹಾರದಲ್ಲಿ ಸಂತೃಪ್ತಿ. ಪ್ರತಿ ದಿನ ಮನೆಗೆ ಬಂದು, ಮನೆವಾರ್ತೆಯನ್ನೆಲ್ಲಾ ನಿಭಾಯಿಸಿ ಪುನಃ ಆಟಕ್ಕೆ ಹೋಗುವ ಸುಧಾರಣೆ ಬಂದಿದೆ.. ಇದು ಅಪೇಕ್ಷಣೀಯ ಮತ್ತು ಅಭಿಮಾನ.
              ಅಕ್ಟೋಬರ್ 2, ೧೯೧೫ರಂದು ಪಾವಂಜೆಯಲ್ಲಿ ಹತ್ತು ಮಂದಿ ಯಕ್ಷಗಾನ ಕಲಾವಿದರ ಸಹಧರ್ಮಿಣಿಯರಿಗೆ  ಸಂಮಾನ ಜರುಗಿತು. ಶ್ರೀಮತಿಯರಾದ ಜಯಲಕ್ಷ್ಮೀ ನಾರಾಯಣ ಬಲಿಪ ಭಾಗವತ, ವನಜಾಕ್ಷಿ ಶಂಕರನಾರಾಯಣ ಭಟ್ ಪದ್ಯಾಣ, ಶೀಲಾಶಂಕರಿ ಗಣಪತಿ ಭಟ್ ಪದ್ಯಾಣ, ಶೋಭಾ ಪುರುಷೋತ್ತಮ ಪೂಂಜ ಬೊಟ್ಟಿಕೆರೆ, ಶ್ಯಾಮಲಾ ಗಣಪತಿ ಶಾಸ್ತ್ರಿ ಕುರಿಯ, ವಾಣಿ ರಘುರಾಮ ಹೊಳ್ಳ ಪುತ್ತಿಗೆ, ಶಾರದಾ ಶ್ರೀಧರ ರಾವ್ ಕುಬಣೂರು, ಸುಧಾ ದಿನೇಶ ಅಮ್ಮಣ್ಣಾಯ, ಸಾವಿತ್ರಿ ಗೋವಿಂದ ಭಟ್, ಯಶೋದಾ ಮೋನಪ್ಪ ಗೌಡ - ಸಂಮಾನ ಸ್ವೀಕರಿಸಿದ ಅಮ್ಮಂದಿರು.
           'ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ರಿಲೀಜಿಯಸ್ ಟ್ರಸ್ಟ್' - ಈ ಮಾತೃಸಂಸ್ಥೆಯಡಿ ರೂಪುಗೊಂಡ 'ಚಂದ್ರಮ್ಮ ವಾಸುಭಟ್ಟ ಸ್ಮಾರಕ ಮಹಿಳಾ ಮಂಡಳಿ'ಯ ಚೊಚ್ಚಲ ಕಾರ್ಯಕ್ರಮವಿದು. ಪತಿಯ ತಾರಾಮೌಲ್ಯಕ್ಕೆ ಪರೋಕ್ಷವಾಗಿ ಹೆಗಲು ಕೊಟ್ಟ ಮನಸ್ಸುಗಳಿಗೆ ಸಂದ ನಿಜ ಗೌರವ. ಅವ್ಯಕ್ತ ತ್ಯಾಗ, ಸಹಿಷ್ಣು ಗುಣಗಳಿಗೆ ಪ್ರಾಪ್ತವಾದ ಮಾನ. ಸಂಮಾನದ ಕ್ಷಣ ಹೃದಯಸ್ಪರ್ಶಿಯಾಗಿತ್ತು. ಕಲಾವಿದರ ಸತಿಯರಿಗೆ ಸಾರ್ಥಕ್ಯದ ಕ್ಷಣವನ್ನು ತರುವಂತೆ ಸಂಘಟಕರು ಗೌರವಿಸಿದ್ದಾರೆ. ಈ ಪರಂಪರೆ ಮುಂದುವರಿಯಬೇಕು, ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ ಕಲಾವಿದೆ ವಿದುಷಿ ಸುಮಂಗಲ ರತ್ನಾಕರ್.
            ಸಾಧಕ ಕಲಾವಿದರಿಗೆ ಸಪತ್ನಿ ಸಹಿತ ಗೌರವ ಸಲ್ಲುವುದು ಅಲ್ಲೋ ಇಲ್ಲೋ ಅಪರೂಪಕ್ಕೊಮ್ಮೆ ಮಾತ್ರ. ಬದುಕಿನಲ್ಲಿ 'ಸತಿಯರ್ಧ-ಪತಿಯರ್ಧ' ಇದ್ದಂತೆ ಗೌರವದಲ್ಲೂ ಸಮಪಾಲು ಬೇಕು. ಗಂಡನ ಕ್ಷೇಮದ ಹಾರೈಕೆಯೊಂದಿಗೆ ಕುಟುಂಬವನ್ನು ಆಧರಿಸುವ ನಿಜವಾದ ಸಾಧಕಿಗೆ ಗೌರವ ಸಲ್ಲಬೇಕು. ಪತಿಯ ಗುಣಕಥನದೊಂದಿಗೆ ಪತ್ನಿಯ ಸಾಧನೆಯ ಮಿಂಚಿಂಗ್ ಪ್ರಸ್ತುತಿಗೊಂಡಾಗ ಕುಟುಂಬವೊಂದು ಕಲೆಯ ಪೋಷಣೆಗೆ ಸಮರ್ಪಿಸಿಕೊಂಡ ವೃತ್ತಾಂತ ಅನಾವರಣಗೊಳ್ಳುತ್ತದೆ.
           ಸಂಮಾನ ಸಮಾರಂಭಗಳು ಕಲಾವಿದರ ಬದುಕಿಗೊಂದು ತೋರಣ. ಅದು ಹತ್ತರೊಟ್ಟಿಗೆ ಹನ್ನೊಂದಾದರೆ ಸಂಮಾನದ ಗೌರವ ಗೌಣವಾಗುತ್ತದೆ. ನಿಧಿಯೊಂದಿಗೆ ಪ್ರಶಸ್ತಿ, ಸಂಮಾನ ಪ್ರದಾನಿಸುವ ಸಂಘಟನೆಗಳಿವೆ. ಇದು ಖುಷಿ ಕೊಡುವ ವಿಚಾರ. ಈ ಮಧ್ಯೆ ಕಾಟಾಚಾರದ ಎಷ್ಟೋ ಕಾರ್ಯಕ್ರಮಗಳನ್ನು ಎಣಿಸುವಾಗ ನೋವಾಗುತ್ತದೆ.
ಪಾವಂಜೆಯಲ್ಲಿ ಜರುಗಿದ ವಿನೂತನ ಸಂಮಾನ ಯೋಚನೆಯು ಹೊಸ ಹಾದಿ ತೋರಿದೆ. ಇದು ಅನುಸರಣೀಯ, ಅನುಕರಣೀಯ.
 
(ಚಿತ್ರ : ಕೃಷ್ಣಕುಮಾರ್ ಜೋಡುಕಲ್ಲು)


Monday, October 5, 2015

ಚಿತ್ರ ಸಾರಿದ ಯಕ್ಷಪಯಣ


            ಹಳೆಯ ಕಡತಗಳನ್ನು ಜಾಲಾಡುತ್ತಿದ್ದಾಗ ಅವಿತುಕೊಂಡಿದ್ದ ಚಿತ್ರವೊಂದು ಗೋಚರವಾಯಿತು. ಅದು ವಿಂಶತಿಯ ಖುಷಿಯಲ್ಲಿ ನಗುತ್ತಿತ್ತು! 'ನೀನು ಮರೆತರೂ ನಾನು ಮರೆತಿಲ್ಲ' ಎಂದು ಅಣಕಿಸಿತು. ಆಗಿನ ರೀಲ್ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಚಿತ್ರ. ಗುಣಮಟ್ಟ ಅಷ್ಟಕ್ಕಷ್ಟೇ. ಚಿತ್ರವನ್ನು ನೋಡುತ್ತಾ ಇದ್ದಂತೆ ನೆನಪುಗಳು ರಾಚಿದುವು. ಶುರುವಾಯಿತು, ಯಕ್ಷ ಪಯಣದ ಸೈಡ್ರೀಲ್. 
            1995 ಮಾರ್ಚ್ ತಿಂಗಳ ಎರಡನೇ ವಾರ. ದೆಹಲಿಯಲ್ಲಿ ಅಂತಾರಾಷ್ಟ್ರೀಯ ಕೃಷಿ ಮೇಳ. ಅದರಲ್ಲಿ ಪುತ್ತೂರಿನ 'ಕರ್ನಾಟಕ ಯಕ್ಷ ಭಾರತಿ' ತಂಡದ ಯಕ್ಷಗಾನ ಪ್ರದರ್ಶನ. ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿಯವರ ನೇತೃತ್ವ. ದ.ಕ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯೋಜನೆ. ತೋನ್ಸೆ ಪುಷ್ಕಳ ಕುಮಾರ್, ರಮೇಶ ಶೆಟ್ಟಿ ಬಾಯಾರ್, ಕೃಷ್ಣಪ್ಪ ಕಿನ್ಯ, ಜಲಂಧರ ರೈ, ಕೆ.ಯು.ಬಸ್ತಿ, ಭಾಸ್ಕರ ರೈ, ನಾ. ಕಾರಂತ, ಹರಿಶ್ಚಂದ್ರ ನಾಯ್ಗ - ಕಲಾವಿದರು. ನರಕಾಸುರ ಮೋಕ್ಷ, ಸುಧನ್ವ ಮೋಕ್ಷ, ಘೋರ ಮಾರಕ ಪ್ರಸಂಗಗಳ ಪ್ರಸ್ತುತಿ.
             ಪ್ರಯಾಣವು ಪ್ರಯಾಸದ ಕಾಲಘಟ್ಟ. ಇಲಾಖೆ ಕೊಡುವ ವೀಳ್ಯ ಅಲ್ಲಿಂದಲ್ಲಿಗೆ ಚುಕ್ತಾ. ಬಸ್ ಪ್ರಯಾಣ ದುಬಾರಿ. ವಿಮಾನ ಊಹಿಸುವಂತಿಲ್ಲ ಬಿಡಿ. ಕೊನೆಯ ಆಯ್ಕೆ ರೈಲು. ಆಗ ದೆಹಲಿ ಪ್ರಯಾಣವೆಂದರೆ ಈಗ ವಿದೇಶಕ್ಕೆ ಹಾರಿದಂತೆ! ರೈಲಿನಲ್ಲಿ ಹೋಗಲು, ಬರಲು ಆರು ದಿನ. ದೆಹಲಿಯಲ್ಲಿ ಪ್ರದರ್ಶನ ಮೂರು ದಿವಸ. ಹೀಗೆ ಸುಮಾರು ಹತ್ತು ದಿವಸದ ಯಕ್ಷಟೂರ್.
            ಯಕ್ಷಗಾನದ ಡ್ರೆಸ್ನೊಂದಿಗೆ ತಂಡ ರೈಲೇರಿದಾಗ ಪುಳಕದ ಅನುಭವ! ಕಲಾವಿದರೊಂದಿಗೆ ಇಲಾಖೆಯ ವರಿಷ್ಠರು ಸೇರಿ ಹತ್ತು ಮಂದಿ. ಮೂರು ದಿವಸದ ರೈಲು ವಾಸ. ಪ್ರಯಾಣವಿಡೀ ಯಕ್ಷಗಾನದ್ದೇ ಗುಂಗು ಗೆಜಲುವಿಕೆ. ಮಾತುಕತೆಗಳಿಗೆ ಅಕ್ಕಪಕ್ಕದವರು ಕಿವಿಯಾದರೂ ಭಾಷೆಯ ತೊಡಕಿತ್ತು. ಜಲಂಧರ ರೈ, ಕೆ.ಯು.ಬಸ್ತಿ, ಕೃಷ್ಣಪ್ಪ ಇವರ ಲೈವ್ ಅನುಭವಗಳು! ಬೋಗಿಯಲ್ಲೇ ತಾಳಮದ್ದಳೆಯ ಅಣಕು. ವೇಷಭೂಷಣದೊಂದಿಗೆ ಆಯುಧಗಳೂ ಇದ್ದುವಲ್ಲ. ಕತ್ತಿ, ಗದೆ ಹಿಡಿದು ಪ್ರಾತ್ಯಕ್ಷಿಕೆ!
            ರೈಲ್ವೇ ನಿಲ್ದಾಣದಲ್ಲಿ ವೇಷಭೂಷಣವನ್ನು ಇಳಿಸುವುದು, ಏರಿಸುವುದು; ಅಲ್ಲಿಂದ ಟ್ಯಾಕ್ಸಿ ಮೂಲಕ ಸಭಾಭವನ ತಲುಪಿಸುವ ಸ್ಥಿತಿ ಇದೆಯಲ್ಲಾ... ಶತ್ರುವಿಗೂ ಬೇಡ. ರೈಲ್ವೇ ನಿಲ್ದಾಣದ ಶ್ರಮಜೀವಿಗಳ ಉಡಾಫೆಗಳನ್ನು ಹೆಜ್ಜೆ ಹೆಜ್ಜೆಗೂ ಅನುಭವಿಸಿದ ನೆನಪಿನ್ನೂ ಹಸಿಯಾಗಿದೆ. ಕತ್ತಿ, ಬಿಲ್ಲು-ಬಾಣ, ಗದೆಗಳು ಆರಕ್ಷಕರ ಕಂಗೆಣ್ಣಿಗೆ ಗುರಿಯಾಗಿತ್ತು. ಒಂದೆರಡು ಬಾರಿ ಪರೀಕ್ಷೆಗೂ ಒಳಪಟ್ಟಿತ್ತು. ಸಾರಥಿ ಕುಕ್ಕುವಳ್ಳಿಯವರ ಜಾಣ್ಮೆಗಳಿಗೆ ಸವಾಲು!   
              ಹಿಂದಿ ಭಾಷೆಯ ಇರುನೆಲೆ ದೆಹಲಿ. ಸಾಕಷ್ಟು ಕನ್ನಡಗರೂ ಇದ್ದರೆನ್ನಿ. ಅವರಿಗೆಲ್ಲಾ ಯಕ್ಷಗಾನ ಗೊತ್ತಷ್ಟೇ. ಒಂದು ಗಂಟೆಯಲ್ಲಿ ಪ್ರಸಂಗವನ್ನು ಮುಗಿಸುವ ವೇಳಾಪಟ್ಟಿ. ವೇಷ, ಹಿಮ್ಮೇಳದ ನಾದಕ್ಕೆ ದೆಹಲಿಗರ ಖುಷಿಯ ಪ್ರೋತ್ಸಾಹ. ಅರ್ಥಗಾರಿಕೆಯನ್ನು ಸೀಮಿತ ಗೊಳಿಸಿ ಪದ್ಯಕ್ಕೆ ಹೆಚ್ಚು ಸಮಯ ನಿಗದಿ. ಕರ್ನಾಟಕ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪೂರ್ತಿ ಕನ್ನಡಿಗರಿದ್ದರು. ಕೃಷಿ ಮೇಳದ ಕಾರ್ಯಕ್ರಮಕ್ಕೆ ಆಗಮಿಸಿದ ಪತ್ರಕರ್ತ ಮಿತ್ರ ರವಿಪ್ರಸಾದ್ ಕಮಿಲ ಚಿತ್ರಗಳನ್ನು ಕ್ಲಿಕ್ಕಿಸಿದ್ದರು. ಅವರು ಆಗ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದರು.
            ಹೇಳುವಂತಹ ಯಾವುದೇ ಆಧುನಿಕ ಸೌಲಭ್ಯ, ಸವಲತ್ತುಗಳಿಲ್ಲದ ಆ ದಿವಸಗಳ ದೆಹಲಿ ಪ್ರದರ್ಶನ ಮಾಸದ ನೆನಪಾಗಿ ಉಳಿದಿದೆ. ದೆಹಲಿಯ ಹಿಂದಿ ಭಾಷಿಗರು ಯಕ್ಷಗಾನದ ವೇಷಭೂಷಣಕ್ಕೆ ಮನಸೋತಿದ್ದರು. ಪ್ರದರ್ಶನದ ನಂತರ ಬಣ್ಣದ ಮನೆಗೆ ಬಂದು ಕಿರೀಟ, ಚೆಂಡೆ, ಮದ್ದಳೆಗಳ ವಿವರಗಳನ್ನು ಪಡೆಯುತ್ತಿದ್ದರು. ಅಲ್ಲಿನ ಪತ್ರಿಕೆಗಳು ವರದಿಯೊಂದಿಗೆ ನುಡಿಚಿತ್ರಗಳನ್ನು ಪ್ರಕಟಿಸಿದ್ದುವು. ಪ್ರದರ್ಶನದ ಪ್ರಸ್ತುತಿಗಿಂತಲೂ ಕರಾವಳಿಯನ್ನು ಪ್ರತಿನಿಧಿಸಿದ ಯಕ್ಷಗಾನ ತಂಡ ಎನ್ನುವ ಆನಂದ ನಮ್ಮೆಲ್ಲರಲ್ಲಿತ್ತು. 
          ಒಂದು ವಿಚಾರ ಮರೆತೆ. ರೈಲು ಪ್ರಯಾಣದಲ್ಲಿ ಕಲಾವಿದರಲ್ಲಿ ಓರ್ವರಾದ ಜಲಂಧರ ರೈಯವರ ಶ್ರೀಮತಿ ಮತ್ತು ಪುಟ್ಟ ಮಗು ಜತೆಗಿದ್ದರು. ಬಟ್ಟೆಯನ್ನೇ ತೊಟ್ಟಿಲಿನಂತೆ ಮಾಡಿ ಮಗುವನ್ನು ತೂಗುವ, ಆರೈಕೆ ಮಾಡುವ ಸರದಿ ತಂಡದ್ದು! ಅಂದಿನ ಎಂಟು ಮಂದಿ ತಂಡದಲ್ಲಿದ್ದ ಇಬ್ಬರು ಈಗ ಕೀರ್ತಿಶೇಷ. ಅವರಿಬ್ಬರ ಕುರಿತು ಎರಡು ಮಾತು.
           ಎಸ್. ಜಲಂಧರ ರೈ : ಚಿಮ್ಮು ಉತ್ಸಾಹಿ. ಕಿರೀಟ ವೇಷಗಳಿಗೆ ಒಪ್ಪುವ ಆಭಿವ್ಯಕ್ತಿ. ತುಂಬು ಶಾರೀರ. ಕಾರ್ತವೀರ್ಯ, ಅರ್ಜುುನ, ಅತಿಕಾಯ, ಇಂದ್ರಜಿತು..ಮೊದಲಾದ ಪಾತ್ರಗಳಲ್ಲಿ ಗಮನೀಯ ರಂಗನಿರ್ವಹಣೆ. ನಿರ್ವಹಿಸಿದ ಪಾತ್ರಗಳಲ್ಲಿ ವೃತ್ತಿಪರತೆಯ ಸ್ಪರ್ಶ. ಮುಖ್ಯವಾಗಿ ಸ್ನೇಹಕ್ಕೆ ಒಡ್ಡಿಕೊಳ್ಳುವ ಆಪ್ತತೆ. ಕೋಟೆಕಾರಿನ ಆನಂದಾಶ್ರಮದಲ್ಲಿ ಅಧ್ಯಾಪಕರಾಗಿದ್ದರು. ಉತ್ತಮ ಶಿಕ್ಷಕನೆಂಬ ನೆಗಳ್ತೆ. ವಿವಿಧ ಸಂಸ್ಥೆಗಳಲ್ಲಿ ಸೇವಾ ಕೈಂಕರ್ಯ. 9 ಮೇ 2000ರಂದು ವಿಧಿವಶ.
            ಕುಂಞಪ್ಪ ಬಸ್ತಿ : ಕೋಟೆಕಾರು-ಉಚ್ಚಿಲ ಕಲಾಗಂಗೋತ್ರಿ ಸಂಸ್ಥೆಯ ಸಕ್ರಿಯ ಸದಸ್ಯರಾಗಿದ್ದರು. ಯಾವುದೇ ಪೂರ್ವ ತಯಾರಿ ಇಲ್ಲದೆ ರಂಗ ಪ್ರವೇಶಿಸಬಾರದು, ಎನ್ನುವ ಖಚಿತ ನಿಲುವಿನವರು. ಹಾಗಾಗಿ ಅವರು ನಿರ್ವಹಿಸುತ್ತಿದ್ದ ಪಾತ್ರಗಳೆಲ್ಲಾ ನಿರುಮ್ಮಳ. ಹೆಣ್ಣು ಬಣ್ಣಗಳ ಪಾತ್ರಗಳಲ್ಲಿ ಮಿಂಚಿದ್ದು ಹೆಚ್ಚು. ದಕ್ಷ, ಪರೀಕ್ಷಿತ, ಕರ್ಣ, ಅರ್ಜುನ ಮೊದಲಾದ ಕಿರೀಟಿ ವೇಷಗಳಲ್ಲಿ ಸ್ವಂತಿಕೆಯ ನಿಲುವು. 4 ಸೆಪ್ಟೆಂಬರ್ 1998ರಲ್ಲಿ ವಿಧಿವಶ.
            ಚಿತ್ರ ತಂದಿತ್ತ ನೆನಪುಗಳು ಕಾಲದ ದಾಖಲೆ.