Thursday, September 22, 2016

ಇನ್ನು ಆ ಮನಸ್ಸು ಕನಸನ್ನು ಹೆಕ್ಕದು!


 ಜೂನ್ ತಿಂಗಳಲ್ಲಿ ಪೋಳ್ಯದಲ್ಲಿ ಜರುಗಿದ ತಾಳಮದ್ದಳೆಯೊಂದರಲ್ಲಿ



                                                ಯಕ್ಷಗಾನ - ಸುದರ್ಶನ ವಿಜಯದಲ್ಲಿ ವಿಷ್ಣುವಿನ ಪಾತ್ರ

                   "ಬದುಕಿನಲ್ಲಿ ನಿರೀಕ್ಷೆಗಳು ಕನಸುಗಳನ್ನು ಕಟ್ಟುತ್ತವೆ. ಅದರ ಬೆನ್ನಟ್ಟಿ ಹಿಡಿಯಲು ಇನ್ನಿಲ್ಲದ ಯತ್ನ ಮಾಡುತ್ತೇವೆ. ನಮ್ಮ ನಿರೀಕ್ಷೆಯೆಲ್ಲದರ ಸಾಕಾರಕ್ಕೆ ಕಾಲ ಅನುವು ಮಾಡಿಕೊಡುವುದಿಲ್ಲ. ಕೊಟ್ಟರೂ ವಿಧಿ ಸಹಿಸುವುದಿಲ್ಲ. ಹಾಗಾಗಿ ಬದುಕಿನಲ್ಲಿ ಸಂತೃಪ್ತಿಯ ಭಾವ ಬಂದಾಗ ಕನಸುಗಳಿಗೆ ಸ್ವಲ್ಪ ವಿರಾಮ ಕೊಡುವುದೇ ಲೇಸು."  ಒಂದೂವರೆ ತಿಂಗಳ ಹಿಂದೆ 'ರುಕ್ಮಿಣಿ ಕಲ್ಯಾಣ' ಪ್ರಸಂಗದಲ್ಲಿ 'ವೃದ್ಧವಿಪ್ರ'ನಾಗಿ ಗಂಗಾಧರ ಬೆಳ್ಳಾರೆಯವರ ಅರ್ಥಗಾರಿಕೆಯಲ್ಲಿ ಸುಳಿದ ಸಾಲುಗಳಿವು. ಇದು ತನ್ನ ಕುರಿತಾಗಿಯೇ ಹೇಳಿದೆಂದು ಅವರ ಸಾವಿನ ನಂತರವಷ್ಟೇ ಅರಿಯಿತು.
                  ಮನೋವಿಶ್ಲೇಷಕ, ಉಪನ್ಯಾಸಕ, ಲೇಖಕ, ಅಂಕಣಗಾರ, ಕಥೆಗಾರ.. ಹೀಗೆ ಗಂಗಾಧರ ಬೆಳ್ಳಾರೆ (ಗಂಗಣ್ಣ)ಯವರ ಹೆಸರಿನೊಂದಿಗೆ ಹವ್ಯಾಸ-ವೃತ್ತಿಗಳು ಹೊಸೆದಿವೆ.  ಕಳೆದ ಮೂರುವರೆ ದಶಕದಿಂದ ನನಗವರು ಓರ್ವ 'ಮನುಷ್ಯ'ನಾಗಿ, 'ಕಲಾವಿದ'ನಾಗಿಯೇ ಕಂಡಿದ್ದಾರೆ. ಈ ಪದದ ವ್ಯಾಪ್ತಿ ಕೇವಲ ಅರ್ಥ ಹೇಳುವ, ವೇಷ ಮಾಡುವ ವ್ಯಾಪ್ತಿಗೆ ಸೀಮಿತವಾದುದಲ್ಲ. ಅಂದರೆ ಬದುಕಿನಲ್ಲಿ ಕಲೆಯನ್ನು ಹುಡುಕಿದ ಕಲಾವಿದ. ಅದು ಸಿಕ್ಕಾಗ ಸಂತೋಷಗೊಂಡು, ಆಪ್ತರೊಂದಿಗೆ ಹಂಚಿಕೊಂಡ ಸಹೃದಯಿ. ಕಲೆಯೆಂಬುದು ಬದುಕನ್ನು ಅರಳಿಸುವ ಉಪಾಧಿಯೆಂದು ನಂಬಿದ ಆಪ್ತ. ಕೊನೆಕೊನೆಗೆ ನಂಬುಗೆಯ ಗಾಢತೆಗೆ ಮಸುಕು ಆವರಿಸಿದಾಗ ಅದರಿಂದ ಕಳಚಿಕೊಂಡು ದೂರವಿದ್ದರು. ಇವರೊಳಗಿನ ಕಲಾವಿದನಿಗೆ 'ಸ್ವ-ಪ್ರಜ್ಞೆ'ಯಿತ್ತು.
               ಸೆಪ್ಟೆಂಬರ್ 10ರಂದು ಬೆಳ್ಳಾರೆ ದೂರವಾದರು. ಕಳೆದೊಂದು ವರುಷದಿಂದ ಅವರ ಖುಷಿಯನ್ನು ಸ್ವಾಸ್ಥ್ಯವು ಕಸಿದುಕೊಂಡಿತ್ತು. ಲವಲವಿಕೆ ಕುಸಿದಿತ್ತು. ಅವರ ಬದುಕಿನ ಖುಷಿಯನ್ನು, ಸಾಧನೆಯನ್ನು ಲೇಖನವಾಗಿಸಬೇಕೆಂದು ಯೋಚಿಸುತ್ತಲೇ ಇದ್ದೆ. ಅದು ಒದಗಿದುದು ಅವರ ಸಾವಿನ ಬಳಿಕ. "ವ್ಯಕ್ತಿಯ ಸಾಧನೆಯು ಆತ ಬದುಕಿರುವಾಗಲೇ ದಾಖಲಾಗಬೇಕು. ಈಗೀಗ ಸಂಮಾನದ ಸಂದರ್ಭ ಮತ್ತು ಆತ ದೂರವಾದ ಬಳಿಕ ಮಾತ್ರ ಕಲಾವಿದ ಪತ್ರಿಕೆಯ ಪುಟಗಳಲ್ಲಿ ಕಾಣಿಸಿಕೊಳ್ಳುತ್ತಾನೆ." - ಅವರ ಮಾತು ಚುಚ್ಚಿತು, ಕಚ್ಚಿತು.
                 ಗಂಗಾಧರ ಬೆಳ್ಳಾರೆ ಸೊನ್ನೆಯಿಂದ ಬದುಕನ್ನು ಕಟ್ಟುತ್ತಾ ಬಂದವರು. ಬಡ ಕುಟುಂಬ. ಆರ್ಥಿಕವಾಗಿ ಸದೃಢರಲ್ಲ.  ಆಕರ್ಷಕ ಕಂಠಶ್ರೀ. ಪರಿಣಾಮಕಾರಿಯಾದ ಸೆಳೆತ. ಶಾಲೆಗಳಲ್ಲಿ ನಡೆಯುವ ಕಲಾ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿ. ಎಲ್ಲವನ್ನೂ ಕಲಿಯಬೇಕೆಂಬ ತುಡಿತ. ಅಪಾರ ನೆನಪು ಶಕ್ತಿ. ಸದಾ ಓದುವ ಗೀಳು. ವಿಮರ್ಶಿಸುವ ಗುಣ. ಆಪ್ತವಾಗಿ ತುಂಬುವ ಸ್ನೇಹಪರತೆ. ಮತಿಯರಿತ ಮಾತು. ಬೆಳ್ಳಾರೆಯ ಕಿರಣ್ ಮುದ್ರಣಾಲಯದಲ್ಲಿ ದಶಕದ ದುಡಿತ.
                 ಬಾಲ್ಯದಿಂದಲೇ ತಲೆತುಂಬಾ ಯಕ್ಷಗಾನ. ಸುತ್ತೆಲ್ಲಾ ನಡೆಯುವ ಕೂಟಾಟಗಳಿಗೆ ಖಾಯಂ ಪ್ರೇಕ್ಷಕ. ಆಟದಲ್ಲಿ ವೇಷ ಮಾಡಿದರು. ಕೂಟದಲ್ಲಿ ಅರ್ಥ ಹೇಳಿದರು. ಹವ್ಯಾಸಿ ರಂಗಕ್ಕೆ ಬೇಡಿಕೆಯ ಕಲಾವಿದರಾದರು. ಯಕ್ಷಗಾನದಲ್ಲಿ ಒಂದೊಂದೇ ಹೆಜ್ಜೆ ಊರುತ್ತಿದ್ದಂತೆ ಬೌದ್ಧಿಕವಾಗಿ ಗಟ್ಟಿಯಾಗಿದ್ದರು. ಪಾತ್ರಾಭಿವ್ಯಕ್ತಿಯಲ್ಲಿ ರಾಜಿಯಿದ್ದಿರಲಿಲ್ಲ. ರಂಗದಲ್ಲೇ ಪಟ್ಟು, ಪೆಟ್ಟು, ವಾದ, ಜಿದ್ದಾ-ಜಿದ್ದಿ. ಇದರಿಂದಾಗಿ ಒಂದಷ್ಟು ಮಂದಿಯ ಅಸಹನೆಗೂ ಕಾರಣರಾಗಿದ್ದರು. ಇದಿರರ್ಥಧಾರಿಯನ್ನು ಏನು ಮಾಡಿಯಾದರೂ ಅಂಗೈಯೊಳಗಿಟ್ಟು ಪುಡಿ ಮಾಡಬೇಕು ಎನ್ನುವ ವಿನೋದದ ಮಾತು ಬೆಳ್ಳಾರೆಯವರಿಗೆ ಸ್ವಭಾವವಾಗಿ ಕಾಡಿತು. ಬೆಳವಣಿಗೆಗೆ ಅದು ಮಾರಕ ಎಂದು ತಿಳಿದಾಗ ಸ್ವ-ಭಾವ ತಿದ್ದಿಕೊಂಡಿದ್ದರು ಕೂಡಾ.
                ಒಂದೂವರೆ ದಶಕದ ಕಾಲ ಅವರೊಂದಿಗೆ ವೇಷ ಮಾಡಿದ ಕಳೆದ ಕಾಲವು ಕಾಡುತ್ತವೆ. ಸುದರ್ಶನ ವಿಜಯದ 'ವಿಷ್ಣು', ಭೀಷ್ಮ ಪರ್ವದ 'ಭೀಷ್ಮ', ಭೀಷ್ಮ ವಿಜಯದ 'ಪರಶುರಾಮ', ಕೃಷ್ಣಾರ್ಜುನದ 'ಕೃಷ್ಣ'.. ಮೊದಲಾದ ಪಾತ್ರಗಳು ಮೆರೆದವುಗಳು. 1992ನೇ ಇಸವಿ ಇರಬೇಕು. ಪುತ್ತೂರಿನ ಯಕ್ಷಕೂಟದ ಆಯೋಜನೆಯ 'ಚಂದ್ರಹಾಸ ಚರಿತ್ರೆ' ಪ್ರಸಂಗವನ್ನು ಹವ್ಯಾಸಿಗಳೂ ಆಡಬಹುದು ಎಂದು ತೋರಿಕೊಟ್ಟ ದಿನಮಾನಗಳು. ಅದರಲ್ಲಿ 'ದುಷ್ಟಬುದ್ಧಿ'ಯ ಪಾತ್ರವನ್ನು ಬೆಳ್ಳಾರೆಯವರು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು. ಹಲವೆಡೆ ಈ ಪ್ರಸಂಗವು ಪ್ರದರ್ಶನ ಕಂಡಿವೆ.
              ಬೆಳ್ಳಾರೆಯ ಜತೆ ಅರ್ಥಹೇಳುವುದು, ವೇಷಮಾಡುವುದು ಸುಲಲಿತ. ಅರ್ಥದ ಜಾಡನ್ನು ಸುಲಭವಾಗಿ ತಿಳಿಯುವ ಬುದ್ಧಿಮತ್ತೆ. ಕೆಲವೊಮ್ಮೆ ಪೌರಾಣಿಕ ಲೋಕವನ್ನು ಸಮಕಾಲೀನಗೊಳಿಸುವ ಜಾಣ್ಮೆ. ಬಣ್ಣದ ಮನೆಯಲ್ಲಿ ಸಮಾಲೋಚನೆ ಮಾಡದೆ ವೇಷ ಮಾಡುತ್ತಿರಲಿಲ್ಲ. ಸಂವಾದವನ್ನು ಬೆಳೆಸುವ ಕೌಶಲ್ಯವಿತ್ತು. ಸ್ವತಃ ಕೂಟಾಟಗಳನ್ನು ಸಂಘಟಿಸುತ್ತಿದ್ದರು. ಸದಾ ಹಾಸ್ಯಪ್ರಿಯರಾದ ಬೆಳ್ಳಾರೆಯವರೊಂದಿಗೆ ಮಾತಿಗಿಳಿಯುವುದೇ ಖುಷಿಯ ಕ್ಷಣ.
               ಮನಶಾಸ್ತ್ರಜ್ಞ ಡಾ.ಮೀನಗುಂಡಿ ಸುಬ್ರಹ್ಮಣ್ಯಂ ಅವರ ಶಿಷ್ಯರಾದ ಬಳಿಕ ಮನೋಲೋಕ ಸೆಳೆಯಿತು. ಮನಃಶಾಸ್ತ್ರದ ಶೈಕ್ಷಣಿಕ ಅಧ್ಯಯನ ಮಾಡಿದರು. ಅನುಭವಕ್ಕೆ ಲೋಕ ಸುತ್ತಿದರು. ವಿಶ್ವವಿದ್ಯಾಲಯದ ಪದವಿ ಪಡೆದರು. ಇಷ್ಟು ಹೊತ್ತಿಗೆ ತಾನೂ ಬದಲಾದರು. 'ಸ್ಕೋಪ್ ಕೌನ್ಸೆಲಿಂಗ್ ಸೆಂಟರ್' ಸ್ಥಾಪಿಸಿದರು. ಇದರ ಮೂಲಕ ವಿವಿಧ ತರಬೇತಿಗಳನ್ನು ಏರ್ಪಡಿಸಿದರು. ವರ್ತನಾ ಶಿಬಿರಗಳನ್ನು ಸಂಘಟಿಸಿದರು. ಮನೋವ್ಯಾಧಿಗೆ ವೈದ್ಯರಾಗಿ ಹಲವರ ಬಾಳಿಗೆ ನೆರವಾದರು. ವರ್ತನೆಗಳ ಕುರಿತು ಪುಸ್ತಕಗಳನ್ನು ಬರೆದರು. ಗಾಜಿನ ತೇರು, ತಬ್ಬಲಿಯು ನೀನಲ್ಲ ಮಗಳೆ, ಕಲಿಕೆ ಹಾದಿಯ ಮನಸು, ಇವರು ನೀವಲ್ಲ, ನೆನಪಿಗೊಂದು ಕೌನ್ಸೆಲಿಂಗ್, ತಪ್ಪು ತಿದ್ದುವ ತಪ್ಪು, ಮೌನಗರ್ಭ.. ಪ್ರಕಟಿತ ಕೃತಿಗಳು. ಸಿನೆಮಾ ಒಂದರಲ್ಲೂ ನಟಿಸಿದ್ದರು.
                 ಮನಃಶಾಸ್ತ್ರದ ವಿಚಾರಗಳನ್ನು ಒಪ್ಪಿಕೊಂಡು, ಅಪ್ಪಿಕೊಂಡ ಬಳಿಕ ಯಕ್ಷಗಾನವು ವೀಕ್ಷಣೆಗೆ ಸೀಮಿತವಾಯಿತು. ಸ್ಕೋಪ್ ಮೂಲಕ 'ಸ್ವಗತ-ಗುಚ್ಛ' ಎನ್ನುವ ವಿಶಿಷ್ಟ ಕಲಾಪವನ್ನು ಆಯೋಜಿಸಿದರು. ಮನಃಶಾಸ್ತ್ರವನ್ನು ಹಿನ್ನೆಲೆಯಾಗಿಟ್ಟುಕೊಂಡು ಪುರಾಣದ ಕೆಲವು ಪಾತ್ರಗಳು ಮಾತನಾಡಿದುವು. ಪಾತ್ರಗಳಿಗೂ ಒಂದು ಮನಸ್ಸಿದೆ ಎಂದು ತೋರಿದರು. ಈ ಕಲಾಪ ಕ್ಲಿಕ್ ಆಯಿತು.
              ಬದ್ಧತೆಯ ಬದುಕಿಗಾಗಿ ಶ್ರಮಿಸಿದ್ದಾರೆ. ಗಂಟೆ ನೋಡದೆ ತನುವನ್ನು ಸವೆಸಿ ಏಕಲವ್ಯನಂತೆ ಮೇಲೆದ್ದಿದ್ದಾರೆ. ಗಂಗಾಧರರ ಉತ್ಕರ್ಷ 'ಕಾಲ'ಕ್ಕೆ ಬೇಡವಾಗಿದೆ. ಮನೋಚಿಕಿತ್ಸಕನ ಮನವಲ್ಲ, ಬದುಕನ್ನೇ ಅಪಹರಿಸಲು ಹೊಂಚುಹಾಕಿತು. ಒಂದೆರಡು ಬಾರಿ ಚೇತರಿಸಿದರು. 'ಇನ್ನೇನಾಗದು' ಎನ್ನುತ್ತಿರುವಾಗಲೇ ಕಾಲ ಕರೆದೊಯ್ದ. ಕನಸುಗಳು ಚಿಲಕ ಹಾಕಿದುವು. ಕನಸು ಹೆಕ್ಕುವ ಮನಸ್ಸು ಸ್ಥಬ್ದವಾಯಿತು.  ಪತ್ನಿ ಆಶಾ, ಅಧ್ಯಾಪಕಿ. ಮಕ್ಕಳು ಪ್ರಣವ, ಅವನಿ. ಫೇಸ್ಬುಕ್ಕಿನಲ್ಲಿ ಒಮ್ಮೆ ಬರೆದಿದ್ದರು, "ನನ್ನ ದುಃಖದ ಕ್ಷಣಗಳಲ್ಲಿ ಆಶಾ ಅಮ್ಮನಾಗಿದ್ದಾಳೆ. ಸಹಿಸಿಕೊಂಡು ನಕ್ಕಳೇ ಹೊರತು ಹಾಯಾಗಲಿಲ್ಲ. ನಾನು ಏನಾಗಿದ್ದೇನೆ.. ಹುಡುಕಿಕೊಳ್ಳಬೇಕಿದೆ." ಮಾರ್ಮಿಕ ಮಾತನ್ನು ಗ್ರಹಿಸಿದಾಗ ಕಣ್ಣೀರು ಜಿನುಗುತ್ತದೆ.  ನಿತ್ಯ ಭೇಟಿ ಇಲ್ಲದಿದ್ದರೂ ಮನದಿಂದ ಅಳಿಸಲಾಗದ ಬಂಧ-ಅನುಬಂಧ.
             ಬೆಳ್ಳಾರೆ  ದೂರವಾಗಿದ್ದಾರೆ. "ಮನುಷ್ಯನನ್ನು ಸಾವು ಹಂತಹಂತವಾಗಿ ಕೊಲ್ಲಬಾರದು. ಅವೆಲ್ಲವೂ ಒಂದೈದು ನಿಮಿಷದಲ್ಲಿ ಮುಗಿದುಹೋಗಬೇಕು," ಎಂದಿದ್ದ ಸ್ನೇಹಿತನ ಮಾತು ಕಾಡುತ್ತದೆ.
              ಬರುವುದಿದ್ದರೆ ನನಗೂ ಅಂತಹ ಯೋಗವೇ ಬಂದುಬಿಡಲಿ.
(16-9-2016ರ ಪ್ರಜಾವಾಣಿಯ ಕಾಲಂ)
    



Saturday, September 3, 2016

ಕೆನಡಾ ಯಕ್ಷಮಿತ್ರರ ಅರ್ಥಪೂರ್ಣ ಪಯಣ



                "ವಿದೇಶದಲ್ಲೂ ಅತ್ಯಂತ ಸುಸಜ್ಜಿತ ಯಕ್ಷಗಾನ ಮೇಳವಿದೆ."
               ಯಕ್ಷಗಾನ ವಿದ್ವಾಂಸ, ಆರ್ಥದಾರಿ ಡಾ.ಎಂ.ಪ್ರಭಾಕರ ಜೋಶಿಯವರು ಕೆನಡಾದಿಂದ ಮಿಂಚಂಚೆ ಕಳುಹಿಸಿದರು.  ವಿನೋದಕ್ಕೆ ಅಂದಿರಬಹುದೆಂದು ಮರೆತುಬಿಟ್ಟಿದ್ದೆ. ವಾರದಲ್ಲೇ ಕಾರ್ಯಕ್ರಮಗಳ ರಾಶಿ ರಾಶಿ ಚಿತ್ರಗಳು ಕಂಪ್ಯೂನ ಇನ್ಬಾಕ್ಸಿನಲ್ಲಿತ್ತು. ಯಕ್ಷಗಾನವು ಇರುನೆಲೆಯಲ್ಲಿ ಇನ್ನೂ ಅಭಿವೃದ್ಧಿಯಾಗಬೇಕೆನ್ನುವ ತಿಳಿವಳಿಕೆ ಪ್ರಬಲವಾಗಿ ಮೂಡಬೇಕು. ಅಲ್ಲಿ ಈಗಲೇ ಅದು ಬೇರುಬಿಟ್ಟಿರುವುದು ಖುಷಿ ತಂದಿದೆ, ಎಂದು ಮಾತಿಗಿಳಿದರು.
                ಕೆನಾಡಾ ಟೊರೆಂಟೋದ 'ಯಕ್ಷ ಮಿತ್ರ' ಸಂಘಟನೆಯು ಪೂರ್ಣ ಪ್ರಮಾಣದ ಮೇಳ ಸ್ವರೂಪದಲ್ಲಿದೆ. ಪ್ರಾಯಃ ಅದಕ್ಕೀಗ ದಶಮಾನದ ಖುಷಿ. ಸಾಗರ ಮೂಲದ ರಾಘವೇಂದ್ರ ಕಟ್ಟಿನಕೆರೆ ನಿರ್ದೇಶಕರು. ವರುಷಕ್ಕೆ ಏನಿಲ್ಲವೆಂದರೂ ಇಪ್ಪತ್ತರಿಂದ ಇಪ್ಪತ್ತೈದು ಆಟಗಳು. ೨೦೧೬ ಜೂನ್ 2 ರಿಂದ 14ರ ತನಕ ಜೋಶಿಯವರ ಪ್ರವಾಸ. ಸುಮಾರು ಐದಾರು ದಿವಸ ಟೊರೆಂಟೋ, ಒಟ್ಟಾವಾ, ಮೋಂಟ್ರಿಯಲ್..ಗಳಲ್ಲಿ ಯಕ್ಷಗಾನದ್ದೇ ಕಾರ್ಯಕ್ರಮ.
                   ಟೊರೆಂಟೋದ ಕಾರ್ಯಕ್ರಮಕ್ಕೆ ಹೊರಗಿನಿಂದ ಆಮದು ಕಲಾವಿದರಿಲ್ಲ. ಜೋಶಿ ಒಬ್ಬರು ಮಾತ್ರ ಅತಿಥಿ. ಮಿಕ್ಕವರೆಲ್ಲಾ ಅಲ್ಲೇ ಸಿದ್ಧರಾದವರು. ವೀಡಿಯೋ ಕಾನ್ಪರೆನ್ಸ್ ಮೂಲಕ ಸಮಾಲೋಚನೆ. ಯಾವ ಪಾತ್ರವನ್ನು ಯಾವ ಕೋನದಲ್ಲಿ ಚಿತ್ರಿಸಬೇಕೆನ್ನುವ ಪೂರ್ವಭಾವಿ ತರಬೇತಿಗಳು ಪ್ರದರ್ಶನದ ಒಟ್ಟಂದಕ್ಕೆ ಪೂರಕ. ’ರಾವಣ ವಧೆ ಮತ್ತು ಭೀಷ್ಮ ಪರ್ವ ಪ್ರಸಂಗಗಳ ತಾಳಮದ್ದಳೆ. ಜೋಶಿಯವರಿಗೆ 'ರಾವಣ ಮತ್ತು ಭೀಷ'್ಮನ ಪಾತ್ರ.  ಮೇಳದಿಂದ ವಾಲಿ ವಧೆ ಪ್ರಸಂಗದ ಪ್ರದರ್ಶನ.
                  ನಮ್ಮಲ್ಲಿ ಧ್ವನಿವರ್ಧಕದ ವಿಪರೀತ ಬೊಬ್ಬಾಟದಿಂದಾಗಿ ಯಕ್ಷಗಾನವನ್ನು ವೀಕ್ಷಿಸುವುದು, ಆಲಿಸುವುದು ತೀರಾ ಹಿಂಸೆ! ಎಲ್ಲಿಯವರೆಗೆ ಅಂದರೆ ಧ್ವನಿಯ ಅಟ್ಟಹಾಸಕ್ಕೆ ಪ್ರೇಕ್ಷಕರೇ ಎದ್ದು ಹೋಗಿರುವುದನ್ನು ನೋಡಿದ್ದೇನೆ. ಕಲಾವಿದರಿಗೆ ವಾಲ್ಯೂಮ್ ಹೈ ಮತ್ತು ಶಾರ್ಪ್  ಕೊಟ್ಟಷ್ಟು ಸಂತೃಪ್ತಿ. ಎಷ್ಟೋ ಸಲ ಭಾಗವತಿಕೆಯನ್ನು ಚೆಂಡೆ, ಮದ್ದಳೆಗಳ ನುಡಿತಗಳು ನುಂಗಿಬಿಡುತ್ತವೆ! ಟೊರೆಂಟೋದ ಧ್ವನಿವರ್ಧಕ ವ್ಯವಸ್ಥೆ ತುಂಬಾ ಖುಷಿಯಾಯಿತು. ಕಾರ್ಯಕ್ರಮಕ್ಕೆ ಒಂದರ್ಧ ಗಂಟೆ ಮೊದಲು ಮೈಕ್ ಬ್ಯಾಲೆನ್ಸ್ ಮಾಡಿಬಿಡುತ್ತಾರೆ. ಮಧ್ಯೆ ಮಧ್ಯೆ ಏರಿಸುವ, ಇಳಿಸುವ ಪ್ರಕ್ರಿಯೆ ಇಲ್ಲ. ನಮ್ಮಲ್ಲೂ ಇಂತಹ ಪ್ರಕ್ರಿಯೆಗಳತ್ತ ಯೋಚಿಸಬೇಕು.
              ಕನ್ನಡ ಮೂಲದ ಸೀಮಿತ ಪ್ರೇಕ್ಷಕರು. ಜತೆಗೆ ರಂಗದ ಬಣ್ಣ, ನಡೆ, ಕುಣಿತದಲ್ಲಿ ಕಲೆಯನ್ನು ಕಂಡ ವಿದೇಶಿ ಕಲಾಪ್ರಿಯರು. ಪ್ರಸಂಗದ ಪದ್ಯ ಮತ್ತು ಭಾವಾರ್ಥವನ್ನು ಪರದೆಯಲ್ಲಿ ಮೂಡಿಸುವ ತಾಂತ್ರಿಕ ವ್ಯವಸ್ಥೆಗಳು ಕನ್ನಡೇತರರಿಗೆ ಕಥೆಯನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗಿತ್ತು.  ಕರಪತ್ರ, ಕಟೌಟ್ಗಳೆಲ್ಲಾ ಯಕ್ಷಗಾನೀಯ. ತಾಳಮದ್ದಳೆಗೆ ಎರಡು ಗಂಟೆಯ ಕಾಲಾವಧಿ. ಹಿಮ್ಮಾಹಿತಿ ನೀಡುವ ಜಾಗೃತ ಪ್ರೇಕ್ಷಕ ವರ್ಗ. ಪ್ರಶ್ನೋತ್ತರಗಳ ಮೂಲಕ ಸಂದೇಹ ನಿವಾರಣೆ.  ವಾಲಿ ವಧೆ ಪ್ರಸಂಗದಲ್ಲಿ 'ವಾಲಿ-ತಾರೆ' ಪಾತ್ರಗಳ ಸಂವಾದವನ್ನು ಅನೇಕ ಮಂದಿ ಮೆಚ್ಚಿಕೊಂಡಿದ್ದರು. ರಾವಣ ಪಾತ್ರ ಮಾಡಿ ರಾಜನೀತಿಯಲ್ಲಿ ಹೇಗೆ ಮೈತ್ರಿ ಹುಟ್ಟುತ್ತದೆ ಎನ್ನುವ ತರ್ಕಗಳು ಜನ ಮುಟ್ಟಿದೆ. ಭೀಷ್ಮ ಪರ್ವದ 'ಭೀಷ್ಮ' ಪಾತ್ರ ಲೌಕಿಕ ಉದಾಹರಣೆಯನ್ನು ಕೊಡಬಹುದೇ ಎನ್ನುವ ಪ್ರಶ್ನೆಯನ್ನು ಎದುರಿಸಿದೆ, ಎಂದು ಕೆನಡಾ ಕೂಟದ ಅನುಭವ ಹಂಚಿಕೊಳ್ಳುತ್ತಾರೆ;
                ವೇಷ, ಸಂಪ್ರದಾಯದಲ್ಲಿ ರಾಜಿಯಿಲ್ಲದ ನಿಲುವು. ಮೆಚ್ಚಬೇಕಾದ ಪ್ರಗತಿ ಸಾಧಿಸಿದ್ದಾರೆ. ವಿದೇಶದಲ್ಲಿ ಯಕ್ಷಗಾನದ ಹೆಸರಿನಲ್ಲಿ ಏನೇನೋ ಮಾಡಿಲ್ಲ. ಅಲ್ಲಿ ರಂಗಭೂಮಿಯನ್ನು ಮೆಚ್ಚುವ ಕಣ್ಣಿದೆ. ಕಲಾರಸಿಕತೆಯ ಮಟ್ಟ ಚೆನ್ನಾಗಿದೆ. ರಂಗದಲ್ಲಿ ಗಾಢ ಬೆಳಕಿಲ್ಲ. ಅವರು ತಂತ್ರಜ್ಞಾನವನ್ನು ಆಟಕ್ಕೆ ಅಳವಡಿಸಿದ್ದಾರೆ. ತರಬೇತಿಯಿದೆ. ಪ್ರತಿ ನಿಮಿಷವೂ ಯೋಚನೆ, ಯೋಜನೆ. ಮಧ್ಯೆ ಮಧ್ಯೆ ಪ್ರೇಕ್ಷಕರು ಎದ್ದು ಹೋಗುವುದಿಲ್ಲ. ಶಿಳ್ಳೆ, ಚಪ್ಪಾಳೆಗಳಿಲ್ಲ. ಕಾರ್ಯಕ್ರಮದ ಕೊನೆಗೆ ದೀರ್ಘ ಕರತಾಡನದ ಪ್ರಶಂಸೆ.
                ಪ್ರಜ್ಞಾಪೂರ್ವಕವಾದ ರಂಗಶಿಸ್ತು. ರಂಗಭೂಮಿಯನ್ನು ಬಳಸುವ ಕ್ರಮ, ನೃತ್ಯದ ತಿದ್ದುವಿಕೆ ಇನ್ನಷ್ಟು ಸುಧಾರಿಸಬೇಕಾಗಿದೆ. ಮಾಧ್ಯಮಗಳಲ್ಲಿ ಯಕ್ಷಗಾನ ಪರಿಚಯವಾಗಬೇಕು. ವಿಶ್ವ ಥಿಯೇಟರಿಗೆ ಅಲೌಕಿಕ ಕಲೆಯ ಸೊಬಗನ್ನು ತಿಳಿಸುವ ಕೆಲಸ ಆಗಬೇಕಾಗಿದೆ. ಕೆನಡಾ, ಅಮೇರಿಕಾದಂತಹ ವಿದೇಶ ನೆಲದಲ್ಲಿ ದುಡಿಯುವ ಕೈಗಳಿಗೆ ಉಣ್ಣಲು ಪುರುಸೊತ್ತಿಲ್ಲ! ಉದ್ಯೋಗದ ಧಾವಂತದಲ್ಲಿ ಇಂತಹ ಆಸಕ್ತಿಗಳಿಗೆ ಸಮಯವನ್ನು ಹೊಂದಿಸುವುದು ದೊಡ್ಡ ಸವಾಲಿನ ಕೆಲಸ.
               ನಮ್ಮಲ್ಲಿಗೆ ತಾಳಮದ್ದಳೆ ತಂಡವನ್ನು ತನ್ನಿ, ಎನ್ನುವ ಬೇಡಿಕೆಯನ್ನು ಜೋಶಿಯವರಲ್ಲಿ ಮುಂದಿಟ್ಟರಂತೆ. ಇಲ್ಲಿಂದ ಒಯ್ಯುವುದು ದೊಡ್ಡದಲ್ಲ. ಆದರೆ ಅವರನ್ನು ತಯಾರು ಮಾಡಿ, ಅವರಿಂದಲೇ ಪ್ರದರ್ಶನ, ತಾಳಮದ್ದಳೆ ಏರ್ಪಡಿಸುವುದರಿಂದ ಕಲೆಯ ವಿಸ್ತರಣೆ ಸಾಧ್ಯ, ಎನ್ನುತ್ತಾರೆ. ಸಾಂಸ್ಕೃತಿಕ ಮುಂದುವರಿಕೆ ವಿದೇಶಿ ನೆಲದಲ್ಲೂ ಆಗುತ್ತಾ ಇರುವುದು ಶ್ಲಾಘ್ಯ. ಸಣ್ಣ ಮಕ್ಕಳೂ ಯಕ್ಷಗಾನವನ್ನು ಆಸಕ್ತಿಯಿಂದ ನೋಡುತ್ತಾರೆ.
              'ವಾಲಿ ವಧೆ' ಪ್ರದರ್ಶನಕ್ಕೆ ಮುನ್ನ ಮೌಲ್ಯವರ್ಧನಾ ಶಿಬಿರ ಜರುಗಿತ್ತು.  ವೇಷಗಳ ಪ್ರವೇಶ, ರಂಗಚಲನೆ, ವಾಲಿಯನ್ನು ತಾರೆ ತಡೆಯುವ ರೀತಿ, ಯುದ್ಧಗಳು, ಕೊರಿಯೋಗ್ರಫಿಯ ಬಳಕೆ, ಅರ್ಥಗಾರಿಕೆಯ ಪ್ರಸ್ತುತಿ... ಇವೇ ಮೊದಲಾದ ಮೂಲಭೂತ ಅಂಶಗಳ ಹೂರಣವನ್ನಿಟ್ಟುಕೊಂಡ ಕಾರ್ಯಸೂಚಿ. ಈ ರೀತಿಯ ಸಮಾಲೋಚನೆಗಳು ಪ್ರದರ್ಶನದ ಒಟ್ಟಂದಕ್ಕೆ ಸಹಕಾರಿ. ನಮ್ಮಲ್ಲೂ ಇಂತಹ ಮನಃಸ್ಥಿತಿಗಳನ್ನು ರೂಪಿಸಿಕೊಳ್ಳಲೇ ಬೇಕಾಗಿದೆ, ಎನ್ನುವ ಆಗ್ರಹ ಜೋಶಿಯವರದು.
                ವಿನಾಯಕ ಹೆಗಡೆ, ಪರಮ್ ಭಟ್, ರಘು ಕಟ್ಟಿನಕೆರೆ, ನವೀನ್ ಹೆಗಡೆ, ಶ್ರೀಕಾಂತ ಹೆಗಡೆ, ನಾಗಭೂಷಣ ಮಧ್ಯಸ್ಥ, ಉದಯ ಶಾಸ್ತ್ರಿ, ವಿಷ್ಣು ಭಟ್ - ಟೊರೆಂಟೋ ಮೇಳದ ಸಾರಥಿಗಳು.  ಕಲ್ಲಭಾಗ್ ವಿನಾಯಕ್ ಹೆಗಡೆ, ರಘು ಕಟ್ಟಿನಕೆರೆ - ಮೇಳದ ಭಾಗವತರು. ಎಲ್ಲರೂ ಕನ್ನಾಡಿನವರೇ. ದೂರದಲ್ಲಿದ್ದರೂ ಯಕ್ಷಗಾನದ ಆಸಕ್ತಿಯನ್ನು ಬಿಡದೆ, ಸ್ಫೂರ್ತಿಯಿಂದ ತಂಡ ಕಟ್ಟಿರುವುದು ಇತರರಗೆ ಸ್ಫೂರ್ತಿ. 
               ಇನ್ನೊಮ್ಮೆ ಕೆನಡಾಕ್ಕೆ ಹೋಗುವ ಅವಕಾಶ ಸಿಕ್ಕರೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತೀರಿ? ಎನ್ನುವ ಕೀಟಲೆ ಪ್ರಶ್ನೆಗೆ ಜೋಶಿಯವರ ಉತ್ತರ ನೋಡಿ, "ಎರಡೂವರೆ ಗಂಟೆ ತಾಳಮದ್ದಳೆಯನ್ನು ಹೇಗೆ ಕ್ರಿಸ್ಪ್ ಆಗಿ ಕೊಡಬಹುದು. ಅಲ್ಲಿನ ಕಲಾವಿದರನ್ನು ಹೇಗೆ ಜೋಡಿಸಬಹುದು ಎನ್ನುವ ಯೋಚನೆಯಿದೆ," ಎಂದರು. ಕೆನಡಾದ ಆದಿವಾಸಿಗಳ ಕಥೆಯನ್ನು ಯಕ್ಷಗಾನಕ್ಕೆ ಅಳವಡಿಸುವ ದೊಡ್ಡ ಯೋಜನೆಯು ಯಕ್ಷಮಿತ್ರಕ್ಕಿದ್ದು ಜೋಶಿ ಬೆಂಬಲ ನೀಡಿದ್ದಾರೆ.
              ಕಡಲಾಚೆ ಹಾರಿದ ಜೋಶಿಯವರಿಗೆ ಯಕ್ಷಗಾನವನ್ನು ಮರೆತು ಕುಟುಂಬದೊಂದಿಗೆ ಹಾಯಾಗಿ ವಿಹರಿಸಬಹುದಿತ್ತು. ಆದರೆ ಅಲ್ಲಿನ ಅಭಿಮಾನಿಗಳು ಪ್ರೀತಿಯ ಹಗ್ಗದಿಂದ ಕಟ್ಟಿಬಿಟ್ಟರು. ಜೋಶಿಯವರೊಂದಿಗೆ ಮಾತನಾಡುತ್ತಾ ಇದ್ದಂತೆ ನನಗೆ ಅರಿವಾದುದು ಇಷ್ಟು - ಪ್ರದರ್ಶನದ ಪೂರ್ವಭಾವಿಯಾಗಿ ಸಮಾಲೋಚನೆ ಮಾಡಿಕೊಂಡರೆ ಉತ್ತಮವಾದ ಪ್ರದರ್ಶನವನ್ನು ಯಕ್ಷಗಾನೀಯವಾಗಿ ಕೊಡಬಹುದು. ನಮ್ಮಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ?
(ಪ್ರಜಾವಾಣಿ | ದಧಿಗಿಣತೋ | ೨-೯-೨೦೧೬)

ಬುದ್ಧಿಗೆ ಗ್ರಾಸವಾದ ತಾಳಮದ್ದಳೆ ಸಪ್ತಾಹ


                ಕಾಸರಗೋಡು ಜಿಲ್ಲೆಯ ಎಡನೀರು ಶ್ರೀಮಠವು ಯಕ್ಷಗಾನ ಕಲಾವಿದರಿಗೆ ಮನೆ. ಯಕ್ಷಗಾನ ತಾಳಮದ್ದಳೆ, ಆಟಕ್ಕೆ ಇಲ್ಲಿ ಆರಾಧನಾ ಭಾವ. ಕಲಾರಾಧನೆ ಶ್ರೀಮಠದ ವೈಶಿಷ್ಟ್ಯ. ಅರ್ಧಶತಮಾನದೀಚೆಗೆ, ಆಚೆಗೆ ಬಾಳಿದ ಅನೇಕ ವಿದ್ವಾಂಸ ಅರ್ಥಧಾರಿಗಳ ನೆಚ್ಚಿನ ತಾಣ. ತಾಳಮದ್ದಳೆಯ ಮೂಲಕ ವಿದ್ವತ್ತಿನ ಪ್ರದರ್ಶನಕ್ಕೆ ಸುಂದರ ಅವಕಾಶ.
               ಅರ್ಥಧಾರಿಗಳು ಜತೆಯಾದರೆ ಮಠದಲ್ಲಿ ತಾಳಮದ್ದಳೆ ಖಚಿತ. ಪ್ರೇಕ್ಷಕರು ಮುಖ್ಯವಲ್ಲ, ರಸಪೋಶಿತವಾದ ಪ್ರಸ್ತುತಿ ಮುಖ್ಯ. ಕೆಲವೊಮ್ಮೆ ನಾಲ್ಕೈದು ದಿವಸ ನಿರಂತರ ಕೂಟಗಳು. ಮರುದಿವಸ ಕೂಟದ ಕಟು ವಿಮರ್ಶೆ. ಎಡನೀರು ಮಠಾಧೀಶ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಸ್ವತಃ ಭಾಗವತಿಕೆ ಮಾಡುವುದು ಕಲಾವಿದರಿಗೆ ಸ್ಫೂರ್ತಿ. ಸ್ವಾಮಿಗಳಿಗೆ ತೃಪ್ತಿ.
               ಹೀಗೆ ನಡೆಯುತ್ತಿದ್ದ ತಾಳಮದ್ದಳೆಗೆ ಸಪ್ತಾಹದ ಸ್ವರೂಪ ಬಂತು. ಮುಂದೆ ಶ್ರೀಗಳ ಚಾತುರ್ಮಾಸ್ಯ ಅವಧಿಯಲ್ಲಿ ಸಪ್ತಾಹವು ಪೋಣಿಕೆಯಾಯಿತು. ಪ್ರಸಂಗ, ಪದ್ಯ, ಕಲಾವಿದರರನ್ನು ಸ್ವಾಮೀಜಿ ಗೊತ್ತು ಮಾಡುತ್ತಾರೆ. ಪ್ರಸಂಗವೊಂದು ಸಹಜವಾಗಿ ಎಷ್ಟು ಲಂಬಿಸಬಹುದೋ ಅಷ್ಟರ ಲಂಬನೆಗೆ ಅವಕಾಶವಿರುವುದು ವೈಶಿಷ್ಟ್ಯ ಇಷ್ಟು ಸಮಯದೊಳಗೆ ಮುಗಿಸಬೇಕೆನ್ನುವ ಸಮಯದ ಪ್ಯಾಕೇಜ್ ಇಲ್ಲ.
               ಕೀರ್ತಿಶೇಷ ಶಂಕರನಾರಾಯಣ ಸಾಮಗರು, ಡಾ.ಶೇಣಿ, ಕವಿಭೂಷಣ ವೆಂಕಪ್ಪ ಶೆಟ್ಟರು, ಸಣ್ಣ ಸಾಮಗರು, ತೆಕ್ಕಟ್ಟೆ... ಹೀಗೆ ಉದ್ಧಾಮರಿದ್ದ ಕೂಟಗಳು ಹೃಸ್ವಗೊಳ್ಳುತ್ತಿರಲಿಲ್ಲ. ಕಲಾವಿದನ ಪ್ರತಿಭೆ, ವಿದ್ವತ್ತಿಗೆ ಪೂರ್ಣ ದುಡಿತ. ಹಾಗಾಗಿ ರಾಮ-ರಾವಣ, ವಾಲಿ-ರಾಮ, ಮಾಗಧ-ಕೃಷ್ಣ...  ಪಾತ್ರಗಳ ಸಂಭಾಷಣೆಗಳು ದೀರ್ಘವೆಂದು ಕಂಡುಬಂದರೂ ಅದರಲ್ಲಿ ವಿದ್ವತ್ತಿನ ಭಾರವಿದೆ. ವೈಚಾರಿಕ ವಿಸ್ತಾರವಿದೆ. ಪ್ರೇಕ್ಷಕರು ಕೂಡಾ ಆಸ್ವಾದನೆಯಲ್ಲಿ ಕಲಾವಿದರ ಮಟ್ಟಕ್ಕೆ ಏರುವುದುಂಟು!
                ಬಹುಶಃ ಇದೇ ಜಾಡಿನಲ್ಲಿ ಸಾಗಿ ಬಂದ ಎಡನೀರು ಸಪ್ತಾಹವು ಎಂದೂ 'ಪ್ಯಾಕೇಜ್ ಅರ್ಥಗಾರಿಕೆ'ಗೆ ತನ್ನನ್ನು ಒಡ್ಡಿಕೊಳ್ಳಲಿಲ್ಲ. ಸ್ವತಃ ಸ್ವಾಮೀಜಿ ಹಾಡುವುದರಿಂದ ಅವ್ಯಕ್ತವಾಗಿ ಶಿಸ್ತು ಅನಾವರಣಗೊಳ್ಳುತ್ತದೆ. ಕಲಾವಿದರು ಈ ಆವರಣದ ತೆಕ್ಕೆಗೆ ತಮಗರಿವಿಲ್ಲದಂತೆ ಬಂಧಿಯಾಗುತ್ತಾರೆ. ಹಗುರ ವಿಚಾರಗಳು ಸುಳಿಯದಂತೆ ಎಚ್ಚರವಹಿಸುತ್ತಾರೆ. ಇದು ಕೂಟದ ಒಟ್ಟಂದದ ಪರೋಕ್ಷ ಒಳಸುರಿಗಳು.
             ಈ ಬಾರಿ ಪುತ್ತೂರಿನ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎಡನೀರು ಶ್ರೀಗಳ ಚಾತುರ್ಮಾಸ್ಯ ವೃತಾಚರಣೆ. ಆಗಸ್ಟ್ 9 ರಿಂದ 15ರ ತನಕ ತಾಳಮದ್ದಳೆ ಸಪ್ತಾಹ ಸಂಪನ್ನವಾಗಿತ್ತು. ಭರತಾಗಮನ, ಭೀಷ್ಮ ವಿಜಯ, ಪಂಚವಟಿ, ವಾಲಿ ವಧೆ, ಭೀಷ್ಮ ಸೇನಾಧಿಪತ್ಯ-ಕರ್ಮಬಂಧ, ಸುಧನ್ವ ಮೋಕ್ಷ, ಮಾಗಧ ವಧೆ.. ಪ್ರಸಂಗಗಳು. ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ, ಕುರಿಯ ಗಣಪತಿ ಶಾಸ್ತ್ರಿ, ಜನ್ಸಾಲೆ ರಾಘವೇಂದ್ರ ಆಚಾರ್, ಸತ್ಯನಾರಾಯಣ ಪುಣಿಂಚಿತ್ತಾಯ, ರಮೇಶ ಭಟ್ ಪುತ್ತೂರು... ಸಪ್ತಾಹದಲ್ಲಿ ಭಾಗವತರಾಗಿದ್ದರು. ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ,  ದೇಲಂತಮಜಲು ಸುಬ್ರಹ್ಮಣ್ಯ ಭಟ್, ಸುನಿಲ್ ಭಂಡಾರಿ, ಪಿ.ಜಿ.ಜಗನ್ನಿವಾಸ ರಾವ್, ಕೃಷ್ಣಪ್ರಕಾಶ್ ಉಳಿತ್ತಾಯ... ಚೆಂಡೆ, ಮದ್ದಳೆ ವಾದಕರಾಗಿದ್ದರು.
ಉಡುವೆಕೋಡಿ ಸುಬ್ಬಪ್ಪಯ್ಯ (ಭರತ) - ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ (ರಾಮ); ಉಜಿರೆ ಅಶೋಕ ಭಟ್ (ಭೀಷ್ಮ) - ವಿಟ್ಲ ಶಂಭು ಶರ್ಮ (ಪರಶುರಾಮ); ಎಂ.ಎಲ್.ಸಾಮಗ (ಶ್ರೀರಾಮ) - ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ (ಶೂರ್ಪನಖಿ); ವಿದ್ವಾನ್ ಮೇಲುಕೋಟೆ ಉಮಾಕಾಂತ ಭಟ್ (ವಾಲಿ) - ಹಿರಣ್ಯ (ರಾಮ)', ಬರೆ ಕೇಶವ ಭಟ್ (ಭೀಷ್ಮ) - ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ (ಕೃಷ್ಣ); ಮೇಲುಕೋಟೆ (ಸುಧನ್ವ) - ಸುಣ್ಣಂಬಳ ವಿಶ್ವೇಶ್ವರ ಭಟ್ (ಅರ್ಜುನ) - ಡಾ.ರಮಾನಂದ ಬನಾರಿ (ಕೃಷ್ಣ); ಮೇಲುಕೋಟೆ (ಮಾಗಧ) - ಬನಾರಿ (ಕೃಷ್ಣ)... 'ನೋಟ್' ಮಾಡಬಹುದಾದ ಜತೆ ಪಾತ್ರ-ಪಾತ್ರಧಾರಿಗಳು. ಅಲ್ಲದೆ ಉಳಿದ ಪಾತ್ರಧಾರಿಗಳ ಪ್ರಸ್ತುತಿಗಳು ಏಳು ದಿವಸಗಳ ತಾಳಮದ್ದಳೆಯ ಪರಿಣಾಮಗಳನ್ನು ಎತ್ತಿಹಿಡಿದಿವೆ.
             ಭೀಷ್ಮ ವಿಜಯ, ಸುಧನ್ವ ಮೋಕ್ಷ, ವಾಲಿವಧೆ ಪ್ರಸಂಗಗಳು ತುಸು ಹೆಚ್ಚೇ ಲಂಬಿಸಿದ್ದುವು. ಎಷ್ಟೋ ಸಲ ಅರ್ಥಗಾರಿಕೆಯಲ್ಲಿ ನುಸುಳುವ ಹೊರಗಿನ ವಿಚಾರಗಳು, ಸೂಕ್ಷ್ಮ ಸಂಗತಿಗಳು ಜಿದ್ದಿಗೆ ಬಿದ್ದಾಗ ಸಹಜವಾಗಿ ಲಂಬನವಾಗುತ್ತದೆ. ಅದು ಅರ್ಥಧಾರಿಗಳ ವಿವೇಚನೆ, ಸಾಮಥ್ರ್ಯಕ್ಕೆ ಸಂಬಂಧಪಟ್ಟ ವಿಚಾರ. ಹಿಂದೆಲ್ಲಾ ಮನೆಗಳಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಇಂತಹ ವೈಚಾರಿಕ ಜಿದ್ದಾಜಿದ್ದಿ ಇತ್ತೆಂಬುದನ್ನು ಹಿರಿಯರು ಜ್ಞಾಪಿಸುತ್ತಾರೆ. ಎಡನೀರು ಸಪ್ತಾಹವು ಹಿಂದಿನ ತಾಳಮದ್ದಳೆಯನ್ನು ಜ್ಞಾಪಿಸುತ್ತದೆ ಎಂದಾದರೆ ಅದು ಸಾರ್ಥಕ ಅಲ್ವಾ.
              ವರ್ತಮಾನದ ಮನಃಸ್ಥಿತಿಯು ಇಂತಹ ತಾಳಮದ್ದಳೆಯನ್ನು ಒಪ್ಪುವುದಿಲ್ಲ. ಎಲ್ಲದಕ್ಕೂ 'ಬ್ಯುಸಿ' ಹಣೆಪಟ್ಟಿ. ಸಮರ್ಥನೆಗಳ ಭರ. ಈಗಲೂ ರಾತ್ರಿಯಿಡೀ ತಾಳಮದ್ದಳೆ ಜರುಗಿದಾಗ ಬೆಳಗ್ಗಿನವರೆಗೆ ಆಸ್ವಾದಿಸುವ, ಮರುದಿವಸ ಚರ್ಚಿಸುವ, ವಿಮರ್ಶಿಸುವ ಪ್ರೇಕ್ಷಕರಿದ್ದಾರೆ. ಇವರನ್ನೆಲ್ಲಾ 'ಪುರುಸೊತ್ತು ಇದ್ದವರು' ಪಟ್ಟಿಗೆ ಸೇರಿಸಬೇಕಾಗಿಲ್ಲ. ಇವರಿಗೂ 'ಬ್ಯುಸಿ' ಇದೆ! ಇಂತಹ ಕಾಲಸ್ಥಿತಿಯಲ್ಲೂ ತಾಳಮದ್ದಳೆ ಲಂಬಿಸಿದಾಗ ಅದನ್ನು ಕೇಳುವ, ಅನುಭವಿಸುವ ಪ್ರೇಕ್ಷಕರನ್ನು ಎಡನೀರು ಸಪ್ತಾಹದಲ್ಲಿ ನೋಡಿದೆ. ಇವರಾರೂ ಒತ್ತಾಯಕ್ಕೆ ಕುಳಿತವರಲ್ಲ. ಹಂಗಿಗೆ ಒಳಗಾದವರಲ್ಲ. ತಾಳಮದ್ದಳೆಯನ್ನು ಕೇಳಲೆಂದೇ ಕುಳಿತವರು. ಮರುದಿವಸ ಕಟುವಾದ ವಿಮರ್ಶೆಯನ್ನೂ ಮಾಡುವವರು.
               ಎಡನೀರು ಸಪ್ತಾಹಕ್ಕೆ ನಾಲ್ಕೂವರೆ ದಶಕದ ಇತಿಹಾಸವಿದೆ. ಸಂದು ಹೋದ ಮತ್ತು ಈಗ ಪ್ರಸಿದ್ಧವಾಗಿರುವ ಅನೇಕ ಮಂದಿ ಸಪ್ತಾಹದಲ್ಲಿ ಭಾಗವಹಿಸಿದ್ದಾರೆ. ಬದುಕಿಗೆ ಪೂರಕವಾದ ಸಂದೇಶಗಳನ್ನು ಯಕ್ಷಗಾನ ಪ್ರಸಂಗಗಳು ಸಾರುತ್ತವೆ. ಪ್ರಸಂಗದ ಆಶಯವನ್ನು ಅರ್ಥಧಾರಿಗಳು ಸಮಕಾಲೀನ ವಿವೇಚನೆಯೊಳಗೆ ಅದ್ದಿ ಪ್ರಸ್ತುತಪಡಿಸಿದಾಗ ಪುರಾಣದ ಆಶಯವನ್ನು ಪ್ರೇಕ್ಷಕರಿಗೆ ಕಟ್ಟಿ ಕೊಡಲು ಸಾಧ್ಯ. ಸಪ್ತಾಹದ ಎಲ್ಲಾ ಪ್ರಸಂಗಗಳ ಬಹುತೇಕ ಪಾತ್ರಗಳು ನಮ್ಮ ಆಶಯವನ್ನು ಅರ್ಥಮಾಡಿಕೊಂಡಿದ್ದಾರೆ, ಎನ್ನುವ ಧನ್ಯತೆ ಎಡನೀರು ಶ್ರೀಗಳದ್ದು.
                ಎರಡು ತಿಂಗಳು ನಡೆಯುವ ಚಾತುರ್ಮಾಸ್ಯದಲ್ಲಿ ಸಪ್ತಾಹವೂ ಸೇರಿದಂತೆ ಕೂಟ, ಆಟ, ಸಂಗೀತಗಳಿಗೆ ಮಣೆ. ಕಲಾರಾಧನೆ, ಮತ್ತು ಅದರಿಂದ ಉಂಟಾಗುವ ಕಲಾನುಭವ ಮನಸ್ಸನ್ನು ಮುದಗೊಳಿಸುವ ಉಪಾಧಿ. ಪುತ್ತೂರಿನಲ್ಲಿ ಯಕ್ಷಗಾನದ ಮೂಲಕ ಕಲಾನುಭವವನ್ನು ನಿರೀಕ್ಷಿಸುವ ಸಿದ್ಧ ಪ್ರೇಕ್ಷಕರಿರುವುದು ಈ ಭಾಗದ ಸಾಂಸ್ಕೃತಿಕ ಜೀವಂತಿಕೆಗೆ ಸಾಕ್ಷಿ.
(ಚಿತ್ರ : ಲ.ನಾ.ಭಟ್, ಬೆಂಗಳೂರು)

ನಾಲ್ಕು ದಶಕದ ತೀರ್ಥಯಾತ್ರೆ - ಎಡನೀರು ತಾಳಮದ್ದಳೆ ಸಪ್ತಾಹದ ಹಿರಿಮೆ


                  ಯಕ್ಷಗಾನದ ಹಿರಿಯ ಕಲಾವಿದರ ಮಾತಿಗೆ ಕಿವಿಯಾದಾಗ ಶ್ರೀ ಎಡನೀರು ಮಠದ ಉಲ್ಲೇಖವಿಲ್ಲದೆ ಮಾತು ಪೂರ್ಣವಾಗುವುದಿಲ್ಲ. ಆ ಮಾತಿನಲ್ಲಿ ಖುಷಿಯಿದೆ, ಆನಂದವಿದೆ, ವಿಶ್ವಾಸವಿದೆ, ನಂಬುಗೆಯಿದೆ. ಮಾತೃತ್ವದ ಸ್ಪರ್ಶವಿದೆ. ಮಗುವಿನ ಪ್ರೀತಿಯನ್ನು ಅನುಭವಿಸಿದ ಸಂತೃಪ್ತಿಯಿದೆ. ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ಕಲಾವಿದರ ಪಾಲಿಗೆ ಗುರು, ಮಗು, ತಾಯಿ, ಬಂಧು, ವೈದ್ಯ.
                  ಕಲಾವಿದರಿಗೆ ಶ್ರೀಮಠವು ಮನೆ. ಶೇಣಿಯವರೊಮ್ಮೆ ಹೇಳಿದ ನೆನಪು, ಪೂಜ್ಯರ ಪ್ರೀತಿಯ ತೆಕ್ಕೆಯಿಂದ ಬಿಡಿಸಲಾಗದಷ್ಟು ಬಂಧ, ಅನುಬಂಧ. ಸಿಗುವ ಅಕ್ಕರೆಯು ಸಕ್ಕರೆಯಷ್ಟು ಸಿಹಿ. ಕೂಟ, ಆಟಗಳು ಜರುಗಿದಾಗ ಕಲಾವಿದರಿಗಿಂತಲೂ ಹೆಚ್ಚು ಅನುಭೂತಿಯನ್ನು ಶ್ರೀಗಳು ಅನುಭವಿಸುತ್ತಾರೆ. ಒಂದರ್ಥದಲ್ಲಿ ಶ್ರೀಮಠವು ಯಕ್ಷಗಾನಕ್ಕೆ, ಕಲಾವಿದರಿಗೆ ಕೇಂದ್ರವಿದ್ದಂತೆ...
                ನಾಲ್ಕಾರು ಅರ್ಥಧಾರಿಗಳು ಸೇರಿದರೆ ಸಾಕು, ಅಹೋರಾತ್ರಿ ತಾಳಮದ್ದಳೆ ಖಚಿತ. ಮರುದಿವಸ ಕೂಟದ ಕಟು ವಿಮರ್ಶೆ. ಹಿಮ್ಮೇಳದಿಂದ ತೊಡಗಿ ಅರ್ಥಗಾರಿಕೆ ತನಕ. ಮೂರ್ನಾಲ್ಕು ದಿವಸ ನಿರಂತರ ತಾಳಮದ್ದಳೆಯ ದಾಸೋಹ. ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು, ಕುಬಣೂರು ಬಾಲಕೃಷ್ಣ ರಾಯರು, ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್, ದೇರಾಜೆ ಸೀತಾರಾಮಯ್ಯ, ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ಶಂಕರನಾರಾಯಣ ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್... ಹೀಗೆ ಅನೇಕರು ಕೂಟಕ್ಕೆ ಕಳೆಯೇರಿಸಿದವರು. ಇವರೆಲ್ಲರ ಅರ್ಥವನ್ನು ಕೇಳಿಯೇ ಕಲಾವಿದರಾಗಿ ರೂಪುಗೊಂಡವರೆಷ್ಟೋ.
              ಹೀಗೆ ನಡೆಯುತ್ತಿದ್ದ ತಾಳಮದ್ದಳೆಯು ಮುಂದೆ ಸಪ್ತಾಹವಾಗಿ ರೂಪಾಂತರಗೊಂಡಿತು. ದೂರದೂರಿನ ಕಲಾವಿದರು ಆಗಮಿಸಿದರು. ಮುಂದೆ ಪೂಜ್ಯ ಶ್ರೀಗಳ ಚಾತುರ್ಮಾಸ್ಯ ವೃತಾಚರಣೆ ಸಂದರ್ಭದಲ್ಲಿ ಸಪ್ತಾಹವು  ಪೋಣಿಕೆಯಾಯಿತು. ಕೂಟಕ್ಕೆ ವೈಭವ ಬಂತು. ಅರ್ಥಧಾರಿಯಾಗಿ ಪಡಿಮಂಚವೇರುವುದು ಕಲಾವಿದರಿಗೆ ಹೆಮ್ಮೆ. ಮಠದ ಹೊರತಾಗಿ ಪೂಜ್ಯರು ಹಾಡುವುದಿದ್ದರೆ ಸಪ್ತಾಹದಲ್ಲಿ ಮಾತ್ರ.
                ತಾಳಮದ್ದಳೆಯ ಸ್ವರೂಪ ನೀರ್ಣಯಕ್ಕೆ ಸ್ವಾಮೀಜಿಯವರೇ ನಿರ್ದೇಶಕ. ಕಲಾವಿದರ ಸಾಮಥ್ರ್ಯಕ್ಕನುಸಾರವಾಗಿ ಪಾತ್ರ ನಿರ್ಣಯ. ನಿಗದಿತ ಸಮಯಕ್ಕೆ ಹೊಂದುವ ಪ್ರಸಂಗ ಮತ್ತು ಪದ್ಯಗಳ ಆಯ್ಕೆ. ಕೂಟ ಯಶಕ್ಕೆ ಕಲಾವಿದರೊಂದಿಗೆ ಸಮಾಲೋಚನೆ. ಹಿರಿಯರೊಂದಿಗೆ ಕಿರಿಯ ಅರ್ಥಧಾರಿಗಳ ಮಿಳಿತ. ಸಮರ್ಥ ಹಿಮ್ಮೇಳದ ಜೋಡಣೆ. ಶ್ರೀಗಳು ಭಾಗವತಿಕೆ ಮಾಡುತ್ತಾ, ಅರ್ಥವನ್ನೂ ಗಮನಿಸುತ್ತಾ ಇರುವುದರಿಂದ  ಪಾತ್ರಗಳು ಹಳಿ ತಪ್ಪುವುದಿಲ್ಲ! ಶ್ರೀಗಳ ನಿರ್ದೇಶನಕ್ಕೆ ಪ್ರತ್ಯೇಕವಾದ ಸೌಂದರ್ಯವಿದೆ. ಸಪ್ತಾಹದಲ್ಲಿ ಪ್ರಸಂಗಕ್ಕೆ ನ್ಯಾಯ ಸಲ್ಲುತ್ತದೆ. ಸ್ವಾಮೀಜಿಯವರು ಹಾಡುವ ಕಾರಣ ಅವ್ಯಕ್ತ ಶಿಸ್ತು ರಂಗದಲ್ಲಿ ಮಾತ್ರವಲ್ಲ, ಪ್ರೇಕ್ಷಕರಲ್ಲೂ ಅನಾವರಣಗೊಳ್ಳುತ್ತದೆ, ಎನ್ನುತ್ತಾರೆ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್.
                ಸ್ವಾಮೀಜಿಯವರ ಭಾಗವತಿಕೆಯನ್ನು ನೋಡಿದ್ದೇನೆ, ಕೇಳಿದ್ದೇನೆ, ಅನುಭವಿಸಿದ್ದೇನೆ. ಪಾತ್ರ ಮಾತ್ರವಲ್ಲ ಪಾತ್ರಧಾರಿಗೂ ಒಪ್ಪುವಂತೆ ಹಾಡುವುದು ಶ್ರೀಗಳ ವಿಶೇಷ. ಭಾವದ ಭಾಷೆಯನ್ನು ಉದ್ದೀಪನಗೊಳಿಸುವ ವಿಶೇಷತೆ. ಪದ್ಯಛೇದ, ಪದಛೇದದ ನಾಜೂಕುತನ ಅನನ್ಯ, ಸುಸ್ಪಷ್ಟ.  ರಂಗವು ಸುಭಗಕ್ಕೇರಿದಾಗ ಅನುಭವಿಸುವ ಆನಂದ ಅಪಾರ. ರಂಗಸೊಬಗಿಗೆ ಅರ್ಥವು ತೊಡಕಾದಾಗ ಶ್ರೀಗಳೊಳಗಿನ ನಿರದೇಶಕ ಜಾಗೃತನಾಗುತ್ತಾನೆ. ಯಾವಾಗ ನಿರ್ದೇಶಕ ಎದ್ದುನಿಂತನೋ ಆಗ ಅರ್ಥಧಾರಿ ಬೆವರದೆ ವಿಧಿಯಿಲ್ಲ!
                ಸ್ವಾಮೀಜಿ ಹಾಡುವಾಗ ರಾಗಗಳು ತನುವನ್ನು ನೇವರಿಸುತ್ತವೆ. ನಾದಗಳು ತನುಸ್ಪರ್ಶವನ್ನು ಬಯಸುತ್ತವೆ. ಹಾಡುತ್ತಾ, ತನ್ಮಯತೆಯನ್ನು ಹೊಂದಿ ಸುಖಿಸುತ್ತಾರೆ. ತನ್ಮಯತೆಯು ಶ್ರೀಗಳಿಗೆ ಪೂಜೆ. ವೇಷಧಾರಿ, ಅರ್ಥಧಾರಿಗೆ ಈ ಅವ್ಯಕ್ತ ಜಾಡು ಗೊತ್ತಾಗಿಬಿಟ್ಟರೆ ಭಾವವೇ ಬಂದು ಪರಿಚಯಿಸುತ್ತದೆ. ರಾಗಗಳ 'ಸುಖ' ಅನುಭವ ವೇದ್ಯವಾಗುತ್ತದೆ. ಶ್ರೀಗಳ ದುಃಖ, ಕರುಣ ರಸಗಳ ಹಾಡುಗಳು ನಮಗರಿವಿಲ್ಲದೆ ಲೀನವಾಗಿಸುತ್ತವೆ.
                 ಶ್ರೀಮಠದಲ್ಲಿ ಜರುಗಿದ ಋತಿಗಳೇ ಅರ್ಥಧಾರಿಗಳಾಗಿ ಜರುಗಿದ್ದ ತಾಳಮದ್ದಳೆಯೊಂದು ಈಗ ಇತಿಹಾಸ. ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಶ್ರೀ ಶ್ರೀ ವಿದ್ಯಾಭೂಷಣತೀರ್ಥ ಶ್ರೀಪಾದಂಗಳವರು (ಆಗ), ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಭಾಗವಹಿಸಿದ್ದರು. ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಕಲಾಮಾಧ್ಯಮವೊಂದರ ಮೂಲಕ ಜನರಿಗೆ ಮನದಟ್ಟು ಮಾಡುವುದು ಯತಿಧರ್ಮಕ್ಕೆ ಪೂರಕ, ಎನ್ನುತ್ತಾರೆ ಸ್ವಾಮೀಜಿ.
                  ಚಾತುರ್ಮಾಸ ವೃತಾಚರಣೆ ಎಂದಾಗ ಕಾಯಕಷ್ಟ ಸಹಜ. ವಿಶ್ರಾಂತಿ ದೂರ. ಹೀಗಿದ್ದೂ ಕಲಾಕಲಾಪಗಳನ್ನು ಕಾರ್ಯಕ್ರಮಗಳನ್ನು ಸ್ವಾಮೀಜಿ ವೀಕ್ಷಿಸುತ್ತಾರೆ, ವಿಮರ್ಶಿಸುತ್ತಾರೆ. ಕಲಾವಿದರನ್ನು ಮಾತನಾಡಿಸುತ್ತಾರೆ. ಯೋಗಕ್ಷೇಮ ವಿಚಾರಿಸುತ್ತಾರೆ. ಇಲ್ಲಿ ಯಕ್ಷಗಾನವು ಮನೋರಂಜನೆಯಲ್ಲ, ಅದು ಆರಾಧನಾ ಕಲೆ. ತೆಂಕುತಿಟ್ಟು, ಬಡಗುತಿಟ್ಟಿಗೆ ಸಮಾನ ಮಣೆ.
                   ಎಡನೀರು ಮೇಳಕ್ಕೆ ಬಹುತೇಕ ವರುಷಪೂರ್ತಿ ಹರಕೆ ಆಟಗಳು. ಅಲ್ಲೂ ಸಪ್ತಾಹ, ದಶಾಹಗಳ ಆಯೋಜನೆ. ಸ್ವಾಮೀಜಿಯ ನಿರ್ದೇಶನ, ಆಶಯವನ್ನು ಮೇಳದ ಎಲ್ಲಾ ಕಲಾವಿದರು ಗೌರವಿಸಿದ್ದಾರೆ, ಅನುಸರಿಸುತ್ತಿದ್ದಾರೆ. ಮೇಳವು ಮಠದಲ್ಲಿ ಪ್ರದರ್ಶನ ನೀಡುವಾಗ ಸ್ವಾಮೀಜಿ ಭಾಗವತಿಕೆ ಮಾಡುತ್ತಾರೆ. ಎಲ್ಲವೂ ಕಾಲಮಿತಿ ಪ್ರದರ್ಶನಗಳು. ಶ್ರೀಮಠಕ್ಕೆ ಆಗಮಿಸಿದವರು ಹೊಟ್ಟೆತುಂಬಾ ಉಂಡು ತೇಗಿದಾಗ ಮಾತ್ರ ಶ್ರೀಗಳಿಗೆ ಸಮಾಧಾನ. ಅದು ಮಠದ ಪರಂಪರೆ. ಎಡನೀರು ಯಕ್ಷಗಾನ ಸಪ್ತಾಹಕ್ಕೆ ನಾಲ್ಕು ದಶಕ ಮೀರಿತು.
                     ಈ ಬಾರಿ ಪುತ್ತೂರಿನ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎಡನೀರು ಶ್ರೀಗಳ ಚಾತುರ್ಮಾಸ್ಯ ವೃತಾಚರಣೆ. ಈ ಸಂದರ್ಭದಲ್ಲಿ ೨೦೧೬ ಆಗಸ್ಟ್ 9 ರಿಂದ 15ರ ತನಕ ಸಂಜೆ ಏಳೂವರೆಯಿಂದ ಹತ್ತರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಂಪನ್ನವಾಗಲಿದೆ. ಭರತಾಗಮನ, ಭೀಷ್ಮವಿಜಯ, ಪಂಚವಟಿ, ಭೀಷ್ಮಸೇನಾಧಿಪತ್ಯ-ಕರ್ಮಬಂಧ, ವಾಲಿವಧೆ, ಸುಧನ್ವಾರಜುನ, ಮಾಗಧ ವಧೆ ಪ್ರಸಂಗಗಳ ಪ್ರಸ್ತುತಿ.

(ಚಿತ್ರ : ಉದಯ ಕಂಬಾರು, ನೀರ್ಚಾಲು)

ನೃತ್ಯಾರಾಧನೆಗೆ ಎರಕವಾದ ಯಕ್ಷಾರಾಧನೆ


             ವಿದುಷಿ ಸುಮಂಗಲಾ ರತ್ನಾಕರ್ ಯಾಕೋ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೋ ಎನ್ನುವ ಗುಮಾನಿ! ನಿರಂತರ ಓಡಾಟ. ಕಲೆಯ ಹೊರತು ಅನ್ಯ ಮಾತುಕತೆಯಿಲ್ಲ. ಕಾರ್ಯಕ್ರಮಗಳಲ್ಲಿ ತುಂಬ ಓಡಾಡುವವರು. ಹಲವು ಜವಾಬ್ದಾರಿಗಳ ನಿಭಾವಣೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತುಕೊಳ್ಳುವುದೇ ಕಡಿಮೆ!
               ಸುಮಂಗಲಾ ಭರತನಾಟ್ಯ ಕಲಾವಿದೆ. ನಾಟ್ಯ ಕ್ಷೇತ್ರದ ಆಳ-ವಿಸ್ತಾರವನ್ನು ಬಲ್ಲವರು. ಸತತ ಅಧ್ಯಯನ-ವಿಮರ್ಶೆ. ಶಿಷ್ಯರ ರೂಪೀಕರಣ. ವಿಚಾರ ಮಂಥನ, ಪ್ರಾತ್ಯಕ್ಷಿಕೆ, ಪ್ರಬಂಧ.. ಹೀಗೆ ಆ ಕ್ಷೇತ್ರದ ಗರಿಷ್ಠ ಸಾಧ್ಯತೆಯನ್ನು ಆಪೋಶನ ಮಾಡಿಕೊಂಡವರು.
             ನಾನು ಹಲವು ವರುಷದಿಂದ ಭರತನಾಟ್ಯ, ಸಂಗೀತ, ಯಕ್ಷಗಾನ ಕಲಾವಿದರನ್ನು 'ಒಬ್ಬ ಕಲಾವಿದ'ನಾಗಿ ನೋಡುತ್ತಿದ್ದೇನೆ. ಭರತನಾಟ್ಯ ಪ್ರದರ್ಶನಕ್ಕೆ ಯಕ್ಷಗಾನದವರು ಮುಖ ಮಾಡುವುದಿಲ್ಲ. ಯಕ್ಷಗಾನದತ್ತ ಭರತನಾಟ್ಯ ಕಲಾವಿದ/ದೆಯರು ಇಣುಕುವುದಿಲ್ಲ. ಸಂಗೀತ ಕಲಾವಿದರು ಅವರಷ್ಟಕ್ಕೆ. ಹೀಗೆ ಒಂದು ಕಲಾ ಪ್ರಕಾರ ಮತ್ತೊಂದನ್ನು ಸ್ಪರ್ಶಿಸುವುದಿಲ್ಲ. ಹಾಗೆಂತ ಮೂರರಲ್ಲೂ ಆಸಕ್ತಿಯಿರುವವರೂ ಇದ್ದಾರೆ.
              ನನ್ನ ಗೊಣಗಾಟ ಅದಲ್ಲ. ಯಾವುದೇ ಕ್ಷೇತ್ರದ ಕಲಾವಿದರಿಗೆ ಅನ್ಯ ಕಲೆಗಳ ಕನಿಷ್ಠ ಪರಿಚಯವಾದರೂ ಬೇಕು. ಆಸಕ್ತಿ ಹುಟ್ಟಲು ಕಲಿಯಲೇ ಬೇಕು ಎಂದೇನೂ ಇಲ್ಲ. ಎಲ್ಲಾ ಕಲೆಗಳ ಅಂತಿಮ ಗುರಿ - ರಂಗಸುಖ ಅಲ್ವಾ. ಭರತನಾಟ್ಯ ಕಲಾವಿದೆಯಾದ ಸುಮಂಗಲಾ ರತ್ನಾಕರ್ ಅವರ ಸ್ವ-ಕ್ಷೇತ್ರದಲ್ಲಿ ತುಂಬು ಸಕ್ರಿಯ. ಜತೆಗೆ ಯಕ್ಷಗಾನವನ್ನೂ ತಲೆತುಂಬಿಕೊಂಡು ತಂಡ ಕಟ್ಟಿ ಪ್ರದರ್ಶನ ನೀಡುತ್ತಿರುವುದನ್ನು ನೋಡಿದರೆ ಖುಷಿ. ಜತೆಗೆ ಓರ್ವ ಯಕ್ಷಗಾನ ಕಲಾವಿದನಾಗಿ - ಛೇ.. ಅವರಂತೆ ಆಗುವುದಿಲ್ಲವಲ್ಲಾ - ಎನ್ನುವ ನಂಜು ನನಗರಿವಿಲ್ಲದೆ ಹುಟ್ಟಿಕೊಂಡಿದೆ!
               ಮಂಗಳೂರಿನ ಉರ್ವ 'ಯಕ್ಷಾರಾಧನಾ ಕಲಾ ಕೇಂದ್ರ'ವು ಸುಮಂಗಲಾರ ಕೂಸು. ಅದಕ್ಕೀಗ ಏಳರ ಹರೆಯ.  ಆರು ವರುಷಗಳಲ್ಲಿ ಕೇಂದ್ರವು ವಾರ್ಶಿಕ ಪ್ರದರ್ಶನಕ್ಕೆ ಮಾತ್ರ ತನ್ನನ್ನು ಒಡ್ಡಿಕೊಳ್ಳಲಿಲ್ಲ. ಒಂದೇ ಸೂರಿನಡಿ ಭರತನಾಟ್ಯದ ಗೆಜ್ಜೆಯ ಸದ್ದು, ಯಕ್ಷಗಾನದ ಜಾಗಟೆ ದನಿ. ಮಕ್ಕಳು, ಮಹಿಳೆಯರಲ್ಲಿ ನಮ್ಮ ಸಂಸ್ಕೃತಿ, ಪುರಾಣ, ಆಚಾರ, ವಿಚಾರಗಳ ಚಿಂತನೆ ಮೂಡಲು ಪೂರಕವಾದ ಮನಸ್ಸನ್ನು ಕಟ್ಟುವುದು ಕೇಂದ್ರದ ಉದ್ದೇಶ,ಎನ್ನುತ್ತಾರೆ. ಮನಸ್ಸಿನ ಅರಳುವಿಕೆಗೆ ಭರತನಾಟ್ಯ, ಬುದ್ಧಿಯ ವಿಕಸನಕ್ಕೆ ಯಕ್ಷಗಾನ.
              ಶಾಸ್ತ್ರೀಯ ಚೌಕಟ್ಟಿನೊಂದಿಗೆ ಯಕ್ಷಗಾನದಲ್ಲಿ ರಸೋತ್ಪತ್ತಿಯ ಸೃಷ್ಟಿ - ಸುಮಂಗಲಾರ ದೂರದೃಷ್ಟಿ. ವರ್ತಮಾನದ ಯಕ್ಷಗಾನದಲ್ಲಿ 'ರಸೋತ್ಪತ್ತಿ' ಹೊರತು ಪಡಿಸಿ ಮಿಕ್ಕೆಲ್ಲವೂ ಯಥೇಷ್ಟವಾಗಿದೆ! ಅತಿ ಕುಣಿತದ ಧಾವಂತದಲ್ಲಿ ಮಾತುಗಾರಿಕೆಗೆ ಏದುಸಿರು! ಹೆಚ್ಚು ಕುಣಿದರೆ 'ರೈಸುತ್ತದೆ' ಎನ್ನುವ ಭಾವ, ಭಾವನೆ. ಪ್ರೇಕ್ಷಕರಿಂದ ಚಪ್ಪಾಳೆ, ಶಿಳ್ಳೆಯೇ ಕುಣಿತಕ್ಕಿರುವ ಅಂತಿಮ ಮಾನದಂಡ ಎಂದು ಕಲಾವಿದರು (ಎಲ್ಲರೂ ಅಲ್ಲ) ತಿಳಿದಂತಿದೆ. ಅರ್ಥಗಾರಿಕೆ, ಭಾವನೆ, ಪಾತ್ರ ಸ್ವಭಾವಗಳನ್ನು ಕುಣಿತಗಳು ನುಂಗುತ್ತಿವೆ. ಈ ಹಿನ್ನೆಲೆಯಲ್ಲಿ ರಸೋತ್ಪತ್ತಿಯನ್ನು ರಂಗದಲ್ಲಿ ಪುನಃ ಸ್ಥಾಪಿಸುವ ಅಗತ್ಯವಿದೆ. ಸುಮಂಗಲಾ ಅವರ ಟೀಮ್ ಈ ದಿಸೆಯಲ್ಲಿ ಯೋಚಿಸುತ್ತಿರುವುದು ಶ್ಲಾಘ್ಯ.
                ಕಲಾಶಿಸ್ತಿನೊಂದಿಗೆ ತರಬೇತಿ. ಇಂದು ಯಕ್ಷಗಾನದ ತರಬೇತಿ ಕೇಂದ್ರಗಳು ವಿರಳವಾಗುತ್ತಿವೆ. ಸಂಘಗಳು, ಶಾಲೆಗಳಲ್ಲಿ ಅನುಭವಿ ಕಲಾವಿದರಿಂದ ತರಬೇತಿ ನಡೆಯುತ್ತಿದೆ. ಕಲಿಸುವ ಗುರುಗಳ ಅನುಭವ ಮತ್ತು ಬೌದ್ಧಿಕ ಸಾಮಥ್ರ್ಯದಂತೆ ವಿದ್ಯಾರ್ಥಿಗಳು ರೂಪುಗೊಳ್ಳುತ್ತಾರೆ. ಒಂದೆರಡು ಪ್ರದರ್ಶನದ ಬಳಿಕ ಬಹುತೇಕ ಕೇಂದ್ರಗಳು ಮೌನದತ್ತ ವಾಲುವುದನ್ನು ನೋಡುತ್ತಿದ್ದೇನೆ. ತರಬೇತಿಯಲ್ಲಿ ಕಲಾಶಿಸ್ತು ಎನ್ನುವ ವಿಚಾರ ತುಂಬಾ ವಿಶಾಲವಾದುದು. ನಿಭಾವಣೆ ಕಷ್ಟ. ಗುರುವಿನಲ್ಲಿ ಛಲವಿದ್ದರೆ ಕಷ್ಟವಲ್ಲ. ಸುಮಂಗಲಾ ಅವರಲ್ಲಿ ಇಂತಹ ಕಲಾಸೂಕ್ಷ್ಮ ವಿಚಾರಗಳು ಹುಟ್ಟಿಕೊಂಡಿರುವುದೇ ಗ್ರೇಟ್.
'ಯಕ್ಷೊಪಾಸನಾ ಶಿಬಿರ'ವು ಕೇಂದ್ರದ ಯಶಸ್ವೀ ಕಲಾಪ. ಯಕ್ಷ ವಿದ್ವಾಂಸರ, ಹಿರಿಯ ಕಲಾವಿದರ ಉಪಸ್ಥಿತಿ. ಮಾತುಗಾರಿಕೆ, ಭಾಷೆ, ವೈಚಾರಿಕತೆ, ಪಾತ್ರ ಚಿತ್ರಣ, ಪ್ರಸಂಗ ಪ್ರಸ್ತುತಿ.. ಮುಂತಾದ ಹೂರಣಗಳು. ಯಕ್ಷಗಾನದ ಕೆಲಸವೆಂದರೆ ಕೇವಲ ತರಬೇತಿ ಮತ್ತು ವೇಷ ಮಾಡುವುದು ಅಲ್ಲ. ಒಂದೊಂದು ವಿಭಾಗದ ಬೆಳವಣಿಗೆಗೆ ಆಗುತ್ತಾ ಇರಬೇಕು. ಶಿಬಿರಗಳು ಹೊಸದಾಗಿ ರಂಗ ಪ್ರವೇಶಿಸುವವರಿಗೆ ತುಂಬಾ ಸಹಕಾರಿ, ಎನ್ನುತ್ತಾರೆ. ನಮ್ಮ ನಡುವಿನ ಸಂಘಸಂಸ್ಥೆಗಳು ಆಟ-ಕೂಟದ ಜತೆಗೆ ಇಂತಹ ಹೂರಣವನ್ನು ಪೋಣಿಸಿಕೊಳ್ಳಬಹುದು.  
               ಯಕ್ಷಾರಾಧನಾ ಕಲಾ ಕೇಂದ್ರವು ಎಪ್ಪತ್ತೈದಕ್ಕೂ ಮಿಕ್ಕಿ ಪ್ರದರ್ಶನವನ್ನು ನೀಡಿದೆ. ಮಹಿಳಾ ತಾಳಮದ್ದಳೆ ತಂಡವು ಸುಪುಷ್ಟವಾಗಿದೆ. ಸಂದರ್ಭಾನುಸಾರ ಪ್ರಾತ್ಯಕ್ಷಿಕೆ, ಕಲಾ ಮಾತುಕತೆಯನ್ನು ಏರ್ಪಡಿಸುತ್ತಿದೆ. ಸುಮಂಗಲಾರಿಗೆ ಎಲ್ಲಾ ಕಲಾ ಪ್ರಕಾರಗಳಲ್ಲಿ ಆಸಕ್ತಿಯಿರುವುದರಿಂದ ಸಹಜವಾಗಿಯೇ ಕಲಾ ಮನಸ್ಸು ರೂಪುಗೊಂಡಿದೆ. ಜತೆ ಕಲಾವಿದರೂ ಅದೇ ಜಾಡಿನಲ್ಲಿ ಸಾಗುತ್ತಿದ್ದಾರೆ. ಈಗ ಕಲಾ ಕೇಂದ್ರಕ್ಕೆ ಏಳರ ಸಂಭ್ರಮ. ೨೦೧೬ ಆಗಸ್ಟ್ 21 ರವಿವಾರದಂದು ಸಂಜೆ 4 ಗಂಟೆಯಿಂದ ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಕಲಾ ಸಂಭ್ರಮ.
                ಪರಂಪರೆಯ ಹಾದಿಯನ್ನು ಬಿಡದೆ, ಅಪ್ಪಟ ಯಕ್ಷಗಾನವನ್ನು ಮೈತುಂಬಿಕೊಂಡ ಕಟೀಲು ಮೇಳದ ಕಲಾವಿದ ಕೈರಂಗಳ ಕೃಷ್ಣ ಮೂಲ್ಯರಿಗೆ 'ಯಕ್ಷಕಲಾರಾಧಕ' ಪ್ರಶಸ್ತಿ, ಹವ್ಯಾಸಿ ಕಲಾವಿದರಾಗಿದ್ದು ವೃತ್ತಿ ರಂಗದಿಂದ ಮೆಚ್ಚುಗೆ ಪಡೆಯುತ್ತಿರುವ ಕೃಷ್ಣಪ್ರಕಾಶ ಉಳಿತ್ತಾಯರಿಗೆ 'ಯುವ ಯಕ್ಷಕಲಾರಾಧಕ' ಪ್ರಶಸ್ತಿ ಪ್ರದಾನ. ಉಳಿತ್ತಾಯರು ಕನರ್ಾಟಕ ಬ್ಯಾಂಕಿನ ಅಧಿಕಾರಿ. ಹಿಮ್ಮೇಳದ ಸೂಕ್ಷ್ಮ ಸಂಗತಿಗಳನ್ನು ಗೌರವಿಸಿದ ಮದ್ದಳೆಗಾರ, ಲೇಖಕ. ಸುಮಂಗಲಾ ಮತ್ತು ಪೂರ್ಣಿಮಾ ಯತೀಶ ರೈ ನಿರ್ದೇಶನದ 'ಶ್ರೀ ಕೃಷ್ಣ ಲೀಲೆ ಮತ್ತು ಅಂಬಾ ಶಪಥ' ಆಖ್ಯಾನಗಳ ಪ್ರದರ್ಶನ ಜರುಗಲಿದೆ. 
                ನಮ್ಮ ನಡುವೆ ನೂರಾರು ಮಹಿಳಾ ತಾಳಮದ್ದಳೆ, ಆಟಗಳ ತಂಡಗಳಿರುವುದು ಹೆಮ್ಮೆಯ ವಿಚಾರ. ಸ್ವ-ಬೆಳವಣಿಗೆ, ಬೌದ್ಧಿಕ ಗಟ್ಟಿತನ ಮತ್ತು ಯಕ್ಷಗಾನ ರಂಗದ ಸರ್ವತೋಮುಖ ಜ್ಞಾನಾವೃದ್ಧಿಗೆ ಪೂರಕವಾದ ಕನಿಷ್ಠ ಕಾರ್ಯಹೂರಣಗಳ ಸುಪುಷ್ಟ ಮರುಪೋಣಿಕೆ ಆಗಬೇಕಾಗಿದೆ. ದೂರದೂರದ ತಂಡಗಳೊಳಗೆ ಸಂಪರ್ಕ ಸೇತುವಾಗಬೇಕು. ಮಂಗಳೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ಸುಮಂಗಲಾ ರತ್ನಾಕರ್ ಯಕ್ಷಗಾನದ ಸಂಘಟನೆಯಲ್ಲಿ ದೊಡ್ಡ ಹೆಜ್ಜೆ ಊರಿದ್ದಾರೆ. ಅದನ್ನು ನೋಡುವ, ಮನನಿಸುವ, ಖುಷಿಪಡುವ, ಬೆನ್ನುತಟ್ಟುವ, ಪ್ರೋತ್ಸಾಹಿಸುವ, ಹೆಗಲು ಕೊಡುವ ಯಕ್ಷಮನಸ್ಸುಗಳು ತಯಾರಾಗುವುದು ಜತೆಜತೆಗೆ ಆಗಬೇಕಾಗಿದೆ. 
(ಪ್ರಜಾವಾಣಿ | ದಧಿಗಿಣತೋ ಅಂಕಣ)

ಕಲಾವಿದನಿಗೂ ಮನದ ಮಾತಿದೆ



              ಜುಲೈ ತಿಂಗಳಲ್ಲಿ ಮಿತ್ರ ವಸಂತ ಶೆಟ್ಟಿ ಬೆಳ್ಳಾರೆಯವರಿಂದ ಮಿಂಚಂಚೆ - ದೆಹಲಿಯಲ್ಲಿ ಪ್ರಥಮ ಬಾರಿಗೆ ಅಹೋರಾತ್ರಿ ಯಕ್ಷಗಾನ ಪ್ರದರ್ಶನ ಜರುಗಲಿದೆ. ಸಾಲಿಗ್ರಾಮ ಮೇಳದವರಿಂದ 'ಭೀಷ್ಮ ವಿಜಯ' ಮತ್ತು 'ನಾಗಶ್ರೀ' ಪ್ರಸಂಗಗಳು. ಕಲಾವಿದರೊಂದಿಗೆ ಮುಖಾಮುಖಿ. ಕಲಾವಿದರನ್ನು ಪ್ರೇಕ್ಷಣೀಯ ಸ್ಥಳಗಳಿಗೆ ಒಯ್ಯುವ ವ್ಯವಸ್ಥೆ. ಯಥಾಸಾಧ್ಯ ಪಾರಂಪರಿಕ ಕ್ರಮಗಳಿಗೆ ಒತ್ತು. ದೆಹಲಿ ಕರ್ನಾಟಕ ಸಂಘ ಮತ್ತು ಅನ್ಯಾನ್ಯ ಸಂಸ್ಥೆಗಳ ಆಯೋಜನೆ.
            ದೇಶದ ರಾಜಧಾನಿಯಲ್ಲಿರುವ ಕನ್ನಡ ಮೂಲದ ಯಕ್ಷಪ್ರಿಯರಿಗೆ ಖುಷಿಯ ಸುದ್ದಿ. ಬಾಲ್ಯದಲ್ಲಿ ನೋಡಿದ ಆಟದ ನೆನಹು. ವೃತ್ತಿ ಜಂಜಾಟ ಮತ್ತು ನಗರದ ಒತ್ತಡಗಳಿಗೆ ಒಂದು ರಾತ್ರಿ ರಿಲಾಕ್ಸ್. ಕಲಾವಿದರೊಂದಿಗೆ ಮುಖಿಮುಖಿಯ ಕಲಾಪವನ್ನು ಪೋಣಿಸಿರುವುದು ಖುಷಿಯ ಸಂಗತಿ. ನಾವೆಲ್ಲಾ ಚೌಕಿ, ರಂಗಸ್ಥಳಕ್ಕೆ ಕಲಾವಿದರನ್ನು ಸೀಮಿತಗೊಳಿಸಿದ್ದೇವೆ. ಅವರ ಮಾತಿಗೆ ಕಿವಿಯಾಗುವ ಅವಕಾಶಗಳನ್ನು ಎಷ್ಟು ಮಂದಿ ಆಯೋಜಿಸಿದ್ದಾರೆ?
             ದಿನಮಾನಗಳು ಬದಲಾಗಿವೆ. ಕಲಾವಿದ ವಿದ್ಯಾವಂತನಾಗಿದ್ದಾನೆ. ಲೋಕಗಳನ್ನು ತಿಳಿಯುವ ಸಾಮಥ್ರ್ಯ ಹೊಂದಿದ್ದಾನೆ. ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಂಡಿದ್ದಾನೆ. ಅಂಗೈಗೆ ಬಗೆಬಗೆಯ ಮೊಬೈಲ್ಗಳು ಅಂಟಿವೆ. ಆತನಿಗೂ ಒಂದು ಮನಸ್ಸಿದೆ. ಆಶೆಯಿದೆ. ಕನಸಿದೆ. ದೂರದೃಷ್ಟಿಯಿದೆ. ಮನೆಮಂದಿಯಿದ್ದಾರೆ. ಅವನಿಗೂ ಏನನ್ನೋ ಹೇಳಬೇಕೆಂಬ ತುಡಿತವಿದೆ. ಅದಕ್ಕೆಲ್ಲಿ ಅವಕಾಶವಿದೆ. ಕಲಾವಿದನ ಮೇಲೆ ಹಲವು ಬಗೆಯ ನಿರೀಕ್ಷೆಯನ್ನಿಟ್ಟ 'ಅಭಿಮಾನಿ'ಗಳು ಹೊಗಳಿಕೆಯ ಕೂಪಕ್ಕೆ ತಳ್ಳುತ್ತಿದ್ದಾರೆ! ಅದರಿಂದ ಏಳಲಾಗದೆ, ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಾನೆ! ಎಬ್ಬಿಸುವವರು ಬೇಕಾಗಿದ್ದಾರೆ.
           ಕಲಾವಿದನಿಗೂ ಮಿತಿಯಿದೆ. ಯಕ್ಷಗಾನದ ಹೊರತಾದ ಯೋಚನೆಗಳು ಸುಳಿಯುವುದಿಲ್ಲ. ಕಲೆಗೆ ಅಂಟಿದ ಮನಸ್ಸಿಗೆ ಬೇರೆ ವಿಚಾರಗಳು ನಂಟಾಗುವುದಿಲ್ಲ. ಅದರ ಹೊರತು ಯೋಚಿಸುವುದಕ್ಕೆ ವ್ಯವಧಾನವಿಲ್ಲ, ಪುರುಸೊತ್ತಿಲ್ಲ. ಗೊತ್ತಿಲ್ಲ! ವರ್ತಮಾನದ ಆಗುಹೋಗುಗಳಿಗೆ ಅಪ್ಡೇಟ್ ಆಗುವ ಜ್ಞಾನ ಬೇಕಾಗಿದೆ. ಹಾಗೆಂತ ಶೈಕ್ಷಣಿಕ ಹಿನ್ನೆಲೆಯ ಹಲವು ಕಲಾವಿದರು ವರ್ತಮಾನಕ್ಕೆ ಸ್ಪಂದಿಸುತ್ತಿದ್ದಾರೆ. ಇಂತಹ ಮಾತುಕತೆಯಲ್ಲಿ ವೈಚಾರಿಕ ಗಾಢತೆ ಇಲ್ಲದಿರಬಹುದು, ಕೇವಲ ಉಭಯಕುಶಲೋಪರಿಯೂ ಸಾಕು. ಸಂಘಟಕರ ಜತೆ ಮನಸ್ಸನ್ನು ಹಂಚಿಕೊಳ್ಳುವುದಕ್ಕಿದು ವೇದಿಕೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟು ನೋಡಿದಾಗ ದೆಹಲಿಯಲ್ಲಿ ಕಲಾವಿದರೊಂದಿಗೆ ಮುಖಾಮುಖಿ ಏರ್ಪಡಿಸಿದ್ದು ಉತ್ತಮ ಬೆಳವಣಿಗೆ.
          1980ರ ಆಜೂಬಾಜಿನಲ್ಲಿ ಸಾಲಿಗ್ರಾಮ ಮೇಳದಲ್ಲಿ ನಾಗಶ್ರೀ ಮತ್ತು ಸಮಗ್ರ ಭೀಷ್ಮ ಪ್ರಸಂಗಗಳು ಜನಮೆಚ್ಚುಗೆ ಗಳಿಸಿತ್ತು. ಕಲಾವಿದರಿಗೂ ತಾರಾಮೌಲ್ಯ ಬಂದಿತ್ತು. ಈ ಎರಡೂ ಪ್ರಸಂಗಗಳು ದೆಹಲಿಯಲ್ಲಿ ಪ್ರದರ್ಶಿತವಾಗಿತ್ತು. ತಾರಾಮೌಲ್ಯ ಪಡೆದ ಕಲಾವಿದರ ತಂಡಗಳು ದೆಹಲಿಯಲ್ಲಿ ಪ್ರದರ್ಶನ ನೀಡಿವೆ. ಆದರೆ ಇಡೀ ಮೇಳವೊಂದು ಆಗಮಿಸಿ ರಾಷ್ಟ್ರದ ರಾಜಧಾನಿಯಲ್ಲಿ ಆಟ ಆಡಿದ್ದು, ಅದರಲ್ಲಿ ಭಾಗವಹಿಸಲು ಅವಕಾಶ ಪಡೆದುದು ತುಂಬಾ ಖುಷಿ ಪಡುವ ವಿಚಾರ, ಎಂಬ ಅನುಭವ ಹಂಚಿಕೊಳ್ಳುತ್ತಾರೆ ಕಲಾವಿದ ಶಶಿಕಾಂತ ಶೆಟ್ಟಿ ಕಾರ್ಕಳ. ಕಲಾವಿದರೊಂದಿಗೆ ಮಾತುಕತೆ ಹೊಸ ಕಾನ್ಸೆಪ್ಟ್. ದೆಹಲಿಗೆ ಬಂದ ಕಲಾವಿದರು ಮನತುಂಬಿ ಭಾವನೆಗಳನ್ನು ಹಂಚಿಕೊಂಡರು. ಎಲ್ಲರೂ ಮೇಳದ ಯಜಮಾನರ ಕುರಿತು ಗೌರವವಾಗಿ ಮಾತನಾಡಿದ್ದು ಮನ ತುಂಬಿ ಬಂತು  ಎನ್ನುತ್ತಾರೆ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮತ್ತು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಸಕಾರಾಮ ಉಪ್ಪೂರು.
          ಈ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರ ಹಂಚಿಕೊಳ್ಳಬೇಕೆನಿಸುತ್ತದೆ. ಕಮ್ಮಟ, ಪ್ರಾತ್ಯಕ್ಷಿಕೆ, ವಿಚಾರಗೋಷ್ಠಿಗಳು ಹಲವು ಕಾಲದಿಂದ ನಡೆಯುತ್ತಲೇ ಇವೆ. ಪ್ರಾತ್ಯಕ್ಷಿಕೆಗಳನ್ನು ಸಂಘಟಿಸುವ ವ್ಯವಸ್ಥೆಯನ್ನು ಹೊಂದಿಕೊಂಡು ಕಾರ್ಯಹೂರಣ. ಗೋಷ್ಠಿಗಳಲ್ಲಿ ಕಲಾವಿದರು ಭಾಗವಹಿಸುತ್ತಿಲ್ಲ. ಎಷ್ಟೋ ಸಂದರ್ಭದಲ್ಲಿ ಅವರಿಗೆ ವಿಚಾರವೇ ತಿಳಿದಿರುವುದಿಲ್ಲ. ತಿಳಿದಿದ್ದರೂ 'ನಮಗೆ ಅದರಲ್ಲಿ ಕಲಿಯುವುದಕ್ಕೆ ಏನಿದೆ' ಎನ್ನುವ ಉಡಾಫೆ. 'ತನಗೆ ಎಲ್ಲಾ ಕಲಿತು ಆಯಿತು' ಎನ್ನುವ ಮನಃಸ್ಥಿತಿ. ಇಂತಹ ಸನ್ನಿವೇಶದಲ್ಲಿ ಮೇಳಗಳ ಕಲಾವಿದರೊಂದಿಗೆ ಮುಖಾಮುಖಿ ಹೆಚ್ಚು ಪರಿಣಾಮಕಾರಿಯಾಗಬಹುದೇನೋ? ಒಂದೊಂದು ಮೇಳಗಳ ಕಲಾವಿದರು ಒಟ್ಟಾದರೂ ಸಾಕು.
            ಪ್ರಾತ್ಯಕ್ಷಿಕೆ, ಸಂವಾದಗಳು ಇಂತಹ ತಂಡಗಳಲ್ಲಿ ಪ್ರಸ್ತುತಿಯಾಗಬೇಕು. ರಂಗದಲ್ಲದು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನವಾದೀತು ಎನ್ನುವಂತಿಲ್ಲ. ಆದರೆ ವಿಚಾರಗಳನ್ನು ಕಲಾವಿದರಿಗೆ ತಲುಪಿಸಲು ಸಹಕಾರಿ.  ಹಿಂದೊಮ್ಮೆ ಪುತ್ತೂರಿನಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಮೇಳದ ಸಪ್ತಾಹ ಸಂದರ್ಭದಲ್ಲಿ ಕಲಾವಿದರೊಂದಿಗೆ ಮುಖಾಮುಖಿ ನಡೆದಿತ್ತು. ಆಸಕ್ತ ಕಲಾವಿದರು, ಅಭಿಮಾನಿಗಳು ಜತೆಗಿದ್ದರು. ಪ್ರದರ್ಶನ ಸಿದ್ಧತೆ, ಅಭಿವ್ಯಕ್ತಿ, ಪ್ರಸಂಗದ ಎಡಿಟಿಂಗ್, ಸಂಭಾಷಣೆ, ಅವಧಿಯೊಳಗೆ ಮುಗಿಸುವ ತಯಾರಿ.. ಇವೇ ಮುಂತಾದ ವಿಚಾರಗಳು ಹಾದುಹೋಗಿದ್ದುವು. ಕಲಾವಿದರ ಕಷ್ಟ-ಸುಖಗಳಿಗೆ ವೇದಿಕೆಯಾಗಿತ್ತು. ಇದೆಲ್ಲಾ ಹೊಟ್ಟೆಪಾಡಿನ ವಿಚಾರವಾದರೂ ಕಲಾವಿದ ರಂಗಕ್ಕೆ ನ್ಯಾಯ ಒದಗಿಸಬೇಕು, ಎನ್ನುವ ಕೊಂಡದಕುಳಿಯವರ ಮಾತನ್ನು ನೆನಪಿಟ್ಟುಕೊಂಡಿದ್ದೇನೆ
             ಎಲ್ಲಾ ಕಲಾವಿದರೂ ಈ ಆಶಯಕ್ಕೆ ಸ್ಪಂದಿಸುವುದು ಕಷ್ಟ. ಸಹಜವಾಗಿ ಅಂಟಿರಬಹುದಾದ ಪ್ರತಿಷ್ಠೆ, ವಿಚಾರಗಳನ್ನು ಹಗುರವಾಗಿ ಕಾಣುವ ಮನಃಸ್ಥಿತಿ, ರಂಗದ ಸೀಮಿತ ಸ್ಕ್ರಿಪ್ಟಿಗೆ ಒಗ್ಗಿಕೊಂಡ ಮನಸ್ಸಿಗೆ ಹೊರ ವಿಚಾರಗಳು ಕಿರಿಕಿರಿಯಾಗುವ ಸಾಧ್ಯತೆ ನಿಚ್ಚಳ. 'ನಾನಿರುವುದು ಹೀಗೆ', 'ಬೇಕಾದರೆ ಪ್ರೇಕ್ಷಕರು ಒಪ್ಪಿಕೊಳ್ಳಲಿ, ಬಿಡಲಿ' ಎನ್ನುವ ಮನಃಸ್ಥಿತಿ. 'ತಾನು ಏನು ಮಾಡಿದರೂ ಅಭಿಮಾನಿಗಳು ಸ್ವೀಕರಿಸುತ್ತಾರೆ,' ಎಂಬ ಮಗದೊಂದು ವರ್ಗ. ಏನೇ ಇರಲಿ, ಸಮಗ್ರ ಯಕ್ಷಗಾನದ ಕಲ್ಪನೆಯ ಮನಃಸ್ಥಿತಿ ರೂಪುಗೊಳ್ಳಬೇಕಷ್ಟೇ.
              ಇಂದು ಕಲಾವಿದರಿಗೆ ನೆರಳಾಗುವ ಎಷ್ಟು ವ್ಯವಸ್ಥೆಗಳಿಲ್ಲ. ಉಡುಪಿಯ ಕಲಾರಂಗ, ಪಟ್ಲ ಪೌಂಡೇಶನ್ ಮತ್ತು ತೆಂಕು-ಬಡಗು ತಿಟ್ಟಿನಲ್ಲಿರುವ ಸಂಘಗಳು ಕಲಾವಿದರ ಯೋಗಕ್ಷೇಮವನ್ನು ಹೊತ್ತಿದೆ. ಕಲಾರಂಗವು ವಾರ್ಶಿಕವಾಗಿ ಸಮಾವೇಶವನ್ನು ಏರ್ಪಡಿಸುತ್ತಿದೆ. ಇವೆಲ್ಲಾ ಸುಭಗದ ಬದುಕಿಗೆ ಸಂಬಂಧಿಸಿದ ವಿಚಾರಗಳು. ಶೈಕ್ಷಣಿಕವಾಗಿ ಪಕ್ವಗೊಳಿಸುವ, ಬುದ್ಧಿಯನ್ನು ಜಾಗೃತಗೊಳಿಸುವ, ಅರಿವನ್ನು ಹೆಚ್ಚಿಸುವ, ಜ್ಞಾನವನ್ನು ವೃದ್ಧಿಸುವ ಕಾರ್ಯಕ್ರಮಗಳು ಬೇಕಾಗಿವೆ. ಅವುಗಳ ಅನುಷ್ಠಾನವು ದೊಡ್ಡ ಸಮೂಹಕ್ಕೆ ಕಷ್ಟ. ಚಿಕ್ಕಪುಟ್ಟ ಗುಂಪುಗಳಲ್ಲಿ ಸಾಧ್ಯ. ಇದರಿಂದ ವೈಯಕ್ತಿಕವಾಗಿ ಕಲಾವಿದನೂ ಬೆಳೆಯುತ್ತಾನೆ. ರಂಗದಲ್ಲೂ ಬದಲಾವಣೆ ಕಾಣಬಹುದು. ಥಿಯರಿಗಳು ಮನಸ್ಸಿನೊಳಗೆ ಇಳಿಯುವುದು ನಿಧಾನ.
ಇವನ್ನೆಲ್ಲಾ ಬರೆಯುವುದು ಸುಲಭ ಅಂತ ಗೊತ್ತಿದೆ. ಬದಲಾವಣೆಯನ್ನು, ಸ್ವ-ಅಭಿವೃದ್ಧಿಯನ್ನು (ಆರ್ಥಿಕವಾಗಿ ಅಲ್ಲ) ಬಯಸುವ ಕಲಾವಿದರು ಖಂಡಿತವಾಗಿ ಸ್ಪಂದಿಸಿಯಾರು, ಸ್ಪಂದಿಸಬೇಕು. ಇಲ್ಲದಿದ್ದರೆ ಸಂಭಾವನೆಯ 'ಕವರಿನೊಳಗೆ' ರಂಗಬದುಕಿನ ಬಲೆ ನೇಯುತ್ತಾ ಇರುತ್ತದಷ್ಟೇ.
             ದೆಹಲಿ ಕರ್ನಾಟಕ ಸಂಘವು ಕಲಾವಿದರ ಮತಿಗೆ, ಮಾತಿಗೆ, ಮನಸ್ಸಿಗೆ ಮಾನ ಕೊಟ್ಟಿದೆ. ಹೊಸ ಹಾದಿ ತೋರಿದೆ.

(ಪ್ರಜಾವಾಣಿ | ದಧಿಗಿಣತೋ ಅಂಕಣ)

Friday, September 2, 2016

ಮೋಹದ ಕಚಗುಳಿಗೆ ಭಾವದ ಭಾರ




                  ಯಕ್ಷಗಾನ ಆಟಗಳಲ್ಲಿ ರಂಗ ಸುಖದ ಪದರ ಯಾಕೆ ತೆಳುವಾಗಿದೆ?,  ಹವ್ಯಾಸಿಯಾಗಿ ವೇಷಮಾಡುವ ಖಯಾಲಿಯ ನನ್ನನ್ನು ಆಗಾಗ್ಗೆ ಕಾಡುವ ಪ್ರಶ್ನೆ. ವೇಷವೋ, ಕಲಾವಿದನೋ, ಹಿಮ್ಮೇಳವೋ... ಅರ್ಥವಾಗದೆ ಅರ್ಥವನ್ನು ಹುಡುಕುತ್ತಿದ್ದೇನೆ! ಅರ್ಥ ಆಗದೇ ಇರುವುದು ನನ್ನ ದೌರ್ಬಲ್ಯ! ಮಿತಿ, ಮನಃಸ್ಥಿತಿ. ಬಹುತೇಕ ಸಂದರ್ಭಗಳಲ್ಲಿ ಪಾತ್ರದ ಬದಲು ವೇಷಧಾರಿಯೇ ಕಣ್ಮುಂದೆ ಕಾಣುತ್ತಿರುತ್ತಾರೆ. ಪೌರಾಣಿಕ ಲೋಕವನ್ನು ರಂಗವು ಕಟ್ಟಿಕೊಡುವಲ್ಲಿ ಸೊರಗುತ್ತಿದ್ದರೂ ಆಟವು 'ರೈಸುತ್ತಿದೆ'!
                ಪುತ್ತೂರಿನ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎಡನೀರು ಮಠಾಧೀಶ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ 'ಚಾತುರ್ಮಾಸ್ಯ ವೃತಾಚರಣೆ'.  ಈ ಸಂದರ್ಭದಲ್ಲಿ - 27-7-2016- ಮಂಟಪ ಪ್ರಭಾಕರ ಉಪಾಧ್ಯರ 'ಮೋಹ ಮೇನಕೆ' ಪ್ರದರ್ಶನ. ಎರಡು ಗಂಟೆಗಳ ಕೌಶಿಕ ಚರಿತ್ರೆ ಆಖ್ಯಾನ. ಪ್ರದರ್ಶನ ಮುಗಿದಾಗ ಕೆಲವು ಚೋದ್ಯಗಳಿಗೆ ಉತ್ತರ ಸಿಕ್ಕಿತ್ತು.
              ರಂಗವನ್ನು ವೀಕ್ಷಿಸುತ್ತಾ ಹೋದಂತೆ ನಮಗರಿವಿಲ್ಲದೆ ಭಾವದೊಳಗಿಳಿಯುವುದೇ ರಂಗಸುಖ. ಪಾತ್ರವೊಂದರ ನಿರ್ವಹಣೆಯಲ್ಲಿ ಸೂಕ್ಷ್ಮ ಸಂಗತಿಗಳು ಕ್ಷಿಪ್ರವಾಗಿ ಹಾದುಹೋದಾಗ ಬುದ್ಧಿ ಚುರುಕಾಗುತ್ತದೆ. ಏಕಾಗ್ರತೆಯತ್ತ ವಾಲುತ್ತೇವೆ. ಆವಾಗಲೇ ಭಾವಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವ ಅರ್ಹತೆ ಬಂದುಬಿಡುತ್ತದೆ. ಯಾವಾಗ ಅರ್ಹತೆ ಬಂತೋ ಆಗ ರಂಗಸುಖದ ಬಾಗಿಲು ತೆರೆದುಕೊಳ್ಳುತ್ತದೆ. ಅನುಭವಿಸಲು ಮನಸ್ಸು ಸಜ್ಜಾಗುತ್ತದೆ.
                  ಮಂಟಪ ತಂಡದ 'ಮೋಹ ಮೇನಕೆ'ಯು ರಂಗಸುಖವನ್ನು ಕೊಡುವ ಬಗೆಯಿದು. ಕುಣಿತಗಳ ಲಂಬನವಿಲ್ಲ. ಭಾವಾಭಿವ್ಯಕ್ತಿಗೆ ಒತ್ತು. ರಸಭಂಗ ವಿಚಾರಗಳ ನುಸುಳುವಿಕೆಯಿಲ್ಲ. ತ್ರಿವುಡೆ ತಾಳಗಳ ಪದ್ಯಗಳು ಬಂದಾಗ ಹಿಮ್ಮೇಳ ಗೆಜಲುವುದಿಲ್ಲ! ಮದ್ದಳೆ, ಚೆಂಡೆಗಳು ಅನಗತ್ಯವಾಗಿ ಸದ್ದುಮಾಡುವುದಿಲ್ಲ. ವೈಯಕ್ತಿಕ ವಿಚಾರಗಳ ಹಿಂಸೆಯಿಲ್ಲ. ಪ್ರೇಕ್ಷಕರನ್ನು ನಗಿಸಲೇಬೇಕೆಂಬ ಹಠವಿಲ್ಲ. ಸನ್ನಿವೇಶ ಪೋಷಣೆಗೆ ಪೂರಕವಾಗುವಂತಹ ಪಾತ್ರಗಳ ಆಯ್ಕೆ.
                 ರಂಗಸುಖದ ಅನುಭವ ಹೇಳುವಾಗ ಇಷ್ಟು ಹೇಳಲೇಬೇಕಲ್ವಾ. ಇದೇನೂ ಹೊಗಳಿಕೆಯಲ್ಲ. ಕೌಶಿಕ, ಮೇನಕೆ, ಮನ್ಮಥ, ವಸಂತ, ನಾರದ, ಕಣ್ವ ಪಾತ್ರಗಳು ರಂಗವನ್ನು ಗೆದ್ದಿವೆ. ಇಲ್ಲಿ ಮನದೊಳಿಗೆ ಸ್ಥಾಪಿಸಲ್ಪಟ್ಟ 'ರೈಸುವಿಕೆ' ಇಲ್ಲದಿರಬಹುದು. ಆದರೆ ಪಾತ್ರವೊಂದರ ಪೂರ್ತಿ ಚಿತ್ರಣವನ್ನು ಕೊಡುವಲ್ಲಿ ಮಂಟಪರ ಮೇನಕೆಯು ಸುಪುಷ್ಟವಾಗಿತ್ತು. ಭಾವಕ್ಕೂ ಭಾಷೆಯಿದೆ. ಆ ಭಾಷೆಗೂ ಶಿಷ್ಟತೆಯಿದೆ. ಶಿಸ್ತಿನ ಆವರಣವಿದೆ. ಪೌರಾಣಿಕ ಎನ್ನುವ ಪ್ರಜ್ಞೆಯಿದೆ.
                ಮೇನಕೆ ವೇಶ್ಯೆಯಲ್ಲ. ಕೌಶಿಕ ಕಾಮಾಂಧನಲ್ಲ. ಕೌಶಿಕನನ್ನು ಒಲಿಸಿಕೊಳ್ಳುವುದು ಮೇನಕೆಗೆ ಅಷ್ಟು ಸುಲಭವಲ್ಲ. ಈ ಪ್ರಜ್ಞೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ, ಎನ್ನುತ್ತಾರೆ ಮಂಟಪರು. ಶೃಂಗಾರ ಸನ್ನಿವೇಶದಲ್ಲಿ ವಿಶ್ವಾಮಿತ್ರ-ಮೇನಕೆ ಸನ್ನಿವೇಶವು ಬಹುಕಡೆ ತಲೆ ತಗ್ಗಿಸುವಷ್ಟು ಅಗ್ಗವಾಗಿ ಸಂಭಾಷಣೆ ಲಂಬಿತವಾಗುತ್ತದೆ. ಅಶ್ಲೀಲದ ಸೋಂಕಿಲ್ಲದೆ ಮಂಟಪರು ಮೇನಕೆಯನ್ನು ಕಡೆದಿದ್ದಾರೆ. ಹಾಗಾದರೆ ಆಶ್ಲೀಲ ಇಲ್ಲವೋ? ಭಾವದಲ್ಲಿದೆ, ಮಾತಿನಲ್ಲಿಲ್ಲ. ಅದು ನಂನಮ್ಮ ಗ್ರಹಿಕೆಗೆ ಬಿಟ್ಟ ವಿಚಾರ.
                ರಂಗದ ಸೂಕ್ಷ್ಮ ಸಂಗತಿಗಳತ್ತ ಎಚ್ಚರ ವಹಿಸಿದ್ದಾರೆ. ಉದಾ: ಕೌಶಿಕ-ಮೇನಕೆಯರ 'ಶಿಶು'. ಬೊಂಬೆಯೊಂದಕ್ಕೆ ಆಶ್ರಮದ ಮಗು ಎಂದು ಬಿಂಬಿಸಲು ತೊಡಿಸಿದ ವಸ್ತ್ರ. ಇದು ನಿರ್ಜೀವ ಗೊಂಬೆಯೆನ್ನುವುದು ಮರೆತುಹೋಗುತ್ತದೆ. ಮಗುವನ್ನು ಮುದ್ದಿಸಿ ಆಡಿಸುವ ತಾಯಿಯ ಚರ್ಯೆ ನಿಜ ಬದುಕಿನ ಕನ್ನಡಿ. ಇನ್ನೊಂದು ಶಿಶುವನ್ನು ಅಗಲುವ ಸಂದರ್ಭ. ಮೈಮೇಲಿನ ಒಡವೆ ತೆಗೆದು ಮಗುವಿನ ಮೇಲಿಡುತ್ತಾ, ಕಾಲ್ಗಜ್ಜೆಯನ್ನು ಬಿಚ್ಚಲು ತೊಡಗಿದಾಗ, 'ತಾನು ದೇವಲೋಕದ ಗಣಿಕೆ' ಪ್ರಜ್ಞೆಯ ಅಭಿವ್ಯಕ್ತಿ ಇಡೀ ಪ್ರದರ್ಶನದ ಹೈಲೈಟ್. ದುಃಖ, ಕರುಣ ರಸದ ಸಂದರ್ಭದಲ್ಲಿ ಹಿಮ್ಮೇಳದ ನವಿರಾದ ನಾದಸ್ಪಂದನ. ಹಿಮ್ಮೇಳ ಕಲಾವಿದರೂ 'ಒಂದು ಪಾತ್ರವಾಗಿ' ಕಂಡುದು ಇಷ್ಟವಾಯಿತು. ಹೀಗೆ ಪಾತ್ರವಾದಾಗ ಪ್ರೇಕ್ಷಕರ ಸಾಲಿನ ಪಿಸುದನಿಯೂ ಏಕಾಗ್ರತೆಗೆ ತೊಡಕುಂಟುಮಾಡುತ್ತದೆ.
                ಅಭಿವ್ಯಕ್ತಿಯಲ್ಲಿ ಬರುವ, ಒದಗುವ, ಒದಗಬಹುದಾದ ಚಿಕ್ಕ ಚಿಕ್ಕ ಸಂಗತಿಗಳನ್ನು ಕ್ಷಿಪ್ರವಾಗಿ ಅಭಿವ್ಯಕ್ತಿಗೊಳಿಸುವ ಕಾರಣದಿಂದಲೋ ಏನೋ ರಂಗದಾಚೆಗೆ ನಮ್ಮ ದೃಷ್ಟಿಗಳು ಹರಿಯುವುದಿಲ್ಲ. ರಂಗದಾಚೆಗೆ ದೃಷ್ಟಿ ಸರಿಯುತ್ತದೆ ಎಂತಾದರೆ ದೃಷ್ಟಿ ದೋಷವಲ್ಲ. ರಂಗವು ನಮ್ಮ ದೃಷ್ಟಿಯನ್ನು ಸೆರೆಹಿಡಿಯಲು ಸೋತಿದೆ ಎಂದರ್ಥ. ಮೋಹ ಮೇನಕೆಯು ನೂರಿಪ್ಪತ್ತು ನಿಮಿಷ ದೃಷ್ಟಿಯನ್ನು ಸೆರೆಹಿಡಿದಿದೆ. ಹಾಗಾಗಿಯೇ ರಂಗಸುಖದ ಅನುಭವ. ಮೋಹದ ವಿವಿಧ ಸ್ತರಗಳ ಪ್ರಸ್ತುತಿಯು ಪ್ರಸಂಗದ ಸೂಕ್ಷ್ಮ ಆಶಯವನ್ನು ಬಿಂಬಿಸಿತು.
                 ಮಂಟಪ ಪ್ರಭಾಕರ ಉಪಾಧ್ಯ ಮತ್ತು ಎ.ಪಿ.ಪಾಠಕರ ನಿರ್ದೇಶನ. ನಿರ್ದೇಶನವೆಂದರೆ 'ಎಷ್ಟು ಪದ್ಯ ಹಾಡಬೇಕು, ಎಷ್ಟು ಕುಣಿಯಬೇಕು, ಎಷ್ಟು ಹೊತ್ತಿಗೆ ಮುಗಿಸಬೇಕು, ಎಂದಲ್ಲ. ಇಡೀ ಕಥಾನಕವನ್ನು ಯೋಜಿತ ಸಮಯದಲ್ಲಿ ಹಿಡಿದಿಡುವ ಎಡಿಟಿಂಗ್, ಫ್ರೇಮಿಂಗ್, ಸಂಕ್ಷಿಪ್ತ ಅರ್ಥಗಾರಿಕೆ, ಪದ್ಯಗಳು, ಯಾವ ಪದ್ಯಕ್ಕೆ ಎಷ್ಟು ಅಭಿನಯ.. ಇತ್ಯಾದಿ ಅಂಶಗಳು ನಿರ್ದೇಶನ ವ್ಯಾಪ್ತಿಗೆ ಬರುತ್ತದೆ. 'ನಿರ್ದೆೇಶನ ಗಟ್ಟಿಯಾಗಿದ್ದರೆ ಪ್ರದರ್ಶನವೂ ಪರಿಣಾಮಕಾರಿ' ಎನ್ನುವುದನ್ನು ಮೋಹಮೇನಕೆ ತೋರಿಸಿಕೊಟ್ಟಿತು.
                   ಮೋಹಮೇನಕೆಯನ್ನು ವೀಕ್ಷಿಸಿದ ಕಲಾವಿದೆ ಪದ್ಮಾ ಕೆ.ಆರ್.ಆಚಾರ್ಯರ ಅಭಿಮತ -  " ಮಂಟಪರು ಅವರ ಪ್ರಾಯವನ್ನೂ ಮರೆತು, ಪಾತ್ರವಾಗುವ ರೀತಿ, ಬಳುಕುವ ಬಳ್ಳಿಯಾಗಿ, ಅಭಿನಯದೊಡತಿಯಾಗಿ ಪ್ರೇಕ್ಷರ ಮೆಚ್ಚುಗೆಗೆ ಪಾತ್ರವಾಗುವ ಬಗೆಯನ್ನು ನೋಡಿಯೇ ಅನುಭವಿಸಬೇಕು. ಪಾತ್ರದಲ್ಲಿ ತಲ್ಲೀನರಾಗುವ ಬಗೆಯಂತೂ ಅನನ್ಯ."
                ಹಿಮ್ಮೇಳದಲ್ಲಿ ಅನಂತ ಪದ್ಮನಾಭ ಪಾಠಕ್ (ಭಾಗವತಿಕೆ), ದೇವದಾಸ್ ರಾವ್ (ಮದ್ದಳೆ), ಗುರುರಾಜ ಐತಾಳ್ (ಚೆಂಡೆ), ಮಂಟಪ ಉಪಾಧ್ಯ, ಪ್ರಶಾಂತವರ್ಧನ್, ಮಂಜು ಹವ್ಯಕ, ವಿನಯ ಭಟ್ - ವೇಷಧಾರಿಗಳು. ಧಾರವಾಡದ ದಿವಾಕರ ಹೆಗಡೆಯವರಿಂದ ಪದ್ಯ ರಚನೆ. ಇದು ಎಪ್ಪತ್ತನಾಲ್ಕನೇ ಪ್ರದರ್ಶನ. ಏಕವ್ಯಕ್ತಿಯಿಂದ ಯುಗಳದತ್ತ ಹೆಜ್ಜೆಯೂರಿದ ಮಂಟಪರಿಂದ ಈಗ ಪೂರ್ಣ ಪ್ರಮಾಣದ ಪ್ರದರ್ಶನ.
                ಸಮಕಾಲೀನ ಯಕ್ಷಗಾನವು ಮಂಟಪರನ್ನು ಒಪ್ಪದಿರಬಹುದು. ಒಪ್ಪಬೇಕೆಂಬ ಆಗ್ರಹ ಅವರಿಗಿಲ್ಲ ಬಿಡಿ. ರಂಗ ನಿರ್ದೇಶನದ ಅಗತ್ಯವನ್ನು ಹಲವು ದಶಕಗಳಿಂದ ಮಾತನಾಡುತ್ತಾ ಬಂದಿದ್ದೇವೆ. ಈಗಲೂ ಮಾತನಾಡುತ್ತೇವೆ. ಮುಂದೆಯೂ ಮತನಾಡದೆ ಬಿಡುವುದಿಲ್ಲ! ಕನಿಷ್ಠ ನಮಗೆ ನಾವೇ ನಿರ್ದೇಶಕರಾದರೆ ಬಹುತೇಕ ರಂಗ ಸನ್ನಿವೇಶಗಳನ್ನು ಜನರ ಮನದೊಳಗೆ ಇಳಿಯುವಂತೆ ಮಾಡಬಹುದು.

(ಚಿತ್ರಗಳು: ಮುರಳಿ ರಾಯರಮನೆ)

ಟೆಂಟಿನೊಳಗೆ ಅರ್ಧಾಯುಷ್ಯವನ್ನು ಮುಗಿಸಿದ ಯಜಮಾನ



                 ಕಸ್ತೂರಿ ವರದರಾಯ ಪೈಗಳು ಸುರತ್ಕಲ್ ಮೇಳದ ಯಜಮಾನ. ಮೇಳದ ಗಾಥೆಗೆ ಹತ್ತಿರ ಹತ್ತಿರ ಅರ್ಧ ಶತಮಾನ. ಯಜಮಾನಿಕೆಗೂ 'ಅರ್ಹತೆಯಿದೆ' ಮತ್ತು 'ಅರ್ಹತೆ ಬೇಕು' ಎಂದು ಅನುಷ್ಠಾನಿಸಿ ತೋರಿಸಿದವರು. ಅಭಿಮಾನಿಗಳನ್ನು ಅರ್ಹತೆಯ ಬಲದಿಂದ ಹೊಂದಿದವರು. ಪೌರಾಣಿಕ ಪ್ರಸಂಗ-ಪಾತ್ರಗಳ ಆವರಣ ಮತ್ತು ಬದುಕಿನ ಆಸಕ್ತಿಗಳನ್ನು ಮಿಳಿತಗೊಳಿಸಿದರು. ರಂಗ ಒಪ್ಪುವ ಪ್ರದರ್ಶನಗಳನ್ನು ಸ್ಮರಣೀಯವಾಗಿ ಸಂಪನ್ನಗೊಳಿಸಿದರು. ತುಂಬು ತೊಂಭತ್ತೊಂದು ವರುಷದ ಜೀವನವನ್ನು ಅನುಭವಿಸಿದ ವರದರಾಯ ಪೈಗಳು 2016 ಜುಲೈ 17 ರಂದು ದೈವಾಧೀನರಾದರು. ಅರ್ಧಾಯುಷ್ಯವನ್ನು ಚೌಕಿಯಲ್ಲೇ ಕಳೆದಿದ್ದರು!
                 'ಶ್ರೀ ಮಹಮ್ಮಾಯಿ ಕೃಪಾಪೋಶಿತ ಯಕ್ಷಗಾನ ಮಂಡಳಿ, ಸುರತ್ಕಲ್' - ಯಕ್ಷಗಾನಕ್ಕೆ ವಾಙ್ಮಯ ವೈಭವವನ್ನು ತಂದು ಕೊಟ್ಟ ಮೇಳ. ಸೊಂಟತ್ರಾಣದ ಬದಲಿಗೆ ಪಾತ್ರತ್ರಾಣ, ಭಾವ-ಭಾವನೆಗಳಿಗೆ ಮಾನ, ಬುದ್ಧಿಗೆ ಗ್ರಾಸ, ಶಿಸ್ತಿನ ಬಣ್ಣದ ಮನೆ, ಶಿಸ್ತಿನ ಪ್ರೇಕ್ಷಕರು, ಪೌರಾಣಿಕ ಜಾಡಿನಲ್ಲಿ ಕಾಲ್ಪನಿಕ ಪ್ರಸಂಗ.. ಹೀಗೆ ಮೇಳದ ಒಂದೊಂದು ವಿಭಾಗವನ್ನು ಪೋಸ್ಟ್ಮಾರ್ಟಂ ಮಾಡಿದರೆ ಅಪ್ಪಟ ಯಕ್ಷಗಾನದ ಜೀವಂತಿಕೆ ಮಿಣುಕುತ್ತದೆ.  'ಸುರತ್ಕಲ್ ಮೇಳವು ನಮ್ಮದು' ಎನ್ನುವ ಸಾವಿರಾರು ಮನಸ್ಸುಗಳನ್ನು ಗೆಲ್ಲುವುದು ಸಣ್ಣ ಕೆಲಸವಲ್ಲ. ಅದು ವರದರಾಯ ಪೈಗಳ ಜಾಣ್ಮೆಯ ನಿರ್ವಹಣೆ.
                 ಮೇಳ ಕಟ್ಟುವುದು ಯೌವನದ ಕನಸು. 1955ರ ಹಿಂದೆ ಮುಂದೆ. ಅಚಾನಕ್ಕಾಗಿ ಅದೃಷ್ಟಕ್ಕೆ ಒಲಿದ ಐದು ಸಾವಿರ ರೂಪಾಯಿ ಮೂಲ ಬಂಡವಾಳ. ಅಣ್ಣ ಕಸ್ತೂರಿ ವಾಸುದೇವ ಪೈಯೊಂದಿಗೆ ಹೊಸ ಮೇಳದ ರೂಪೀಕರಣ. ಸಾಮಾಜಿಕ ಸ್ಥಿತಿ-ಗತಿ, ವೈಯಕ್ತಿಕ ಬದುಕು, ಕಲಾವಿದರ ಜೋಡಣೆ, ಮೇಳ ನಿರ್ವಹಣೆ.. ಹೀಗೆ ಸವಾಲುಗಳನ್ನು ಎದುರಿಸಿದ ಪೈ ಸಹೋದರರ ಮೇಳವು ಒಂದೊಂದೇ ಹೆಜ್ಜೆಯೂರಿತು. ತ್ರಿವಿಕ್ರಮನಾಗಿ ಬೆಳೆದು ನಿಂತಿತು. ಅನುಭವವು 'ಮಾಗಲು ಮತ್ತು ಬಾಗಲು' ಕಲಿಸಿತ್ತು! ಹಾಗಾಗಿ ದೀರ್ಘ ಕಾಲ ಮೇಳ ಬಾಳಿತು. ಕಲಾವಿದರಿಗೆ ಬಾಳ್ವೆ ನೀಡಿತು.
               ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಕಡುಗಲಿ ಕುಮಾರ ರಾಮ, ರಾಜ ಯಯಾತಿ, ಸತಿ ಶೀಲವತಿ, ತುಳುನಾಡ ಬಲಿಯೇಂದ್ರ, ರಾಣಿ ರತ್ನಾವಳಿ.. ಪ್ರಸಂಗಗಳ ಮಾಲೆಗಳು ಮೇಳದ ವಿಜಯಮಾಲೆಗಳಾದುವು.  ಜನರ ಮನಸ್ಸನ್ನು ಓದುವ ಸಾಮಥ್ರ್ಯದ ವರದರಾಯ ಪೈಗಳು ಹೊಸ ಪ್ರಸಂಗಗಳ ಹುಡುಕಾಟ ಮಾಡಿದರು. ಯಕ್ಷಗಾನದ ಸ್ವರೂಪಕ್ಕೆ ತೊಂದರೆಯಾಗದಂತೆ ಪರಿಷ್ಕರಿಸಿದರು. ಕಾಲ್ಪನಿಕ ಪ್ರಸಂಗಗಳ ಪ್ರಸ್ತುತಿಗಳು ಕಾಲಧರ್ಮದ ಪಲ್ಲಟ. ಶನೀಶ್ವರ ಮಹಾತ್ಮೆ, ಬಪ್ಪನಾಡು ಕ್ಷೇತ್ರ ಮಹಾತ್ಮೆಯಂತಹ ಪ್ರಸಂಗಗಳನ್ನು ರಂಗ ಒಪ್ಪಿತು. ಪ್ರೇಕ್ಷಕರು ಸ್ವೀಕರಿಸಿದರು.
                ಅಗರಿ ಶ್ರೀನಿವಾಸ ಭಾಗವತ, ಅಗರಿ ರಘುರಾಮ ಭಾಗವತ, ಶೇಣಿ ಗೋಪಾಲಕೃಷ್ಣ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಮಧೂರು ಗಣಪತಿ ರಾವ್, ರಾಮದಾಸ ಸಾಮಗ.. ಹೀಗೆ ಹಿರಿಯರಿದ್ದ ಮೇಳವು 'ಸುಸಂಸ್ಕೃತ' ಪದವ್ಯಾಪ್ತಿಯೊಳಗಿತ್ತು. ಗಾನಗಂಧರ್ವ ಪದ್ಯಾಣ ಗಣಪತಿ ಭಟ್ಟರನ್ನು 'ಭಾಗವತ'ನನ್ನಾಗಿ ರೂಪಿಸಿದ ಮೇಳವಿದು. ಒಬ್ಬೊಬ್ಬ ಕಲಾವಿದನ ಕೊಡುಗೆಯು ಪ್ರಸಂಗಗಳನ್ನು ಉತ್ತುಂಗಕ್ಕೇರಿಸಿತ್ತು. ಇದರಿಂದಾಗಿ ಕಲಾವಿದರಿಗೆ, ಮೇಳಕ್ಕೆ, ಪ್ರಸಂಗಕ್ಕೆ ತಾರಾಮೌಲ್ಯ ಬಂತು. ಜತೆಗೆ ಯಜಮಾನರಿಗೆ ಕಲೆಕ್ಷನ್ ತುಂಬಿ ಬಂತು.
                  ಪೈಗಳು ಬಹುಶಃ ವೇಷ ಮಾಡಲಿಲ್ಲ. ಅರ್ಥ ಹೇಳಲಿಲ್ಲ. ಯಾವುದೇ ಪಾತ್ರದ ಆಳೆತ್ತರ, ಅದರ ರಂಗವ್ಯಾಪ್ತಿ, ಪ್ರಸ್ತುತಿಯಲ್ಲಿ ಕಲಾವಿದನ ಜವಾಬ್ದಾರಿಗಳ ಸ್ಪಷ್ಟ ಅರಿವಿತ್ತು, ನಿಲುವಿತ್ತು. ಯಾವ ಕಲಾವಿದನಲ್ಲಿ ಎಷ್ಟು ಅಭಿವ್ಯಕ್ತಿಯಿದೆ ಎನ್ನುವ ಮಾಪಕ ಮತಿಯಲ್ಲಿತ್ತು. ಅದನ್ನು ಹೊರಗೆಳೆವ ಕುಶಾಗ್ರಮತಿ ಅಪೂರ್ವ. ಈ ಮಾಪಕವೇ ಪ್ರದರ್ಶನಗಳ ಯಶಸ್ಸಿನ ಗುಟ್ಟು. ಯಜಮಾನರ ಹಾದಿಯನ್ನು ಅರ್ಥಮಾಡಿಕೊಂಡ ಕಲಾವಿದ ಗಡಣ. ಹಾಗಾಗಿ ನೋಡಿ. ಸುರತ್ಕಲ್ ಮೇಳವು ನಿಲುಗಡೆಯಾಗಿ ಹದಿನಾರು ವರುಷ ಕಳೆದರೂ ಅದರ ಪ್ರದರ್ಶನಗಳು ಕಾಡುತ್ತವೆ.
                  ಸಾಮಾನ್ಯವಾಗಿ ಚೌಕಿಗೂ ಯಜಮಾನನಿಗೂ ತುಂಬಾ ಅಂತರ. ಪೈಗಳ ಮೇಳದ ಚೌಕಿ ಮನೆಯಿದ್ದಂತೆ! ಕುಟುಂಬ ಸಹಿತವಾಗಿ ಚೌಕಿಯಲ್ಲಿ ಧಾರಾಳವಾಗಿ ಕುಳಿತುಕೊಳ್ಳಬಹುದು! ಕಲಾವಿದರೊಂದಿಗೆ ಮಾತನಾಡಬಹುದು. ಕಲಾವಿದರ ಕುಟುಂಬವು ಚೌಕಿಗೆ ಬಂದರಂತೂ ಎಲ್ಲರಿಗೆ ಖುಷಿ. ಬೆಸೆದುಕೊಳ್ಳುವ ಇಂತಹ ಆಪ್ತತೆಗಳೇ ಮೇಳದ ಗಟ್ಟಿ ಅಡಿಗಟ್ಟು.  ಕಲಾವಿದರೊಂದಿಗೆ ಪೈಗಳ ಊಟ, ತಿಂಡಿ, ನಿದ್ದೆ, ಮಾತುಕತೆ, ಸುಖ-ದುಃಖ ವಿನಿಮಯ. ಮೇಳದ ಯಜಮಾನನಾದವನು ಮೇಳದಲ್ಲೇ ಇರಬೇಕು, ಕಲಾವಿದರೊಂದಿಗೆ ಬೆರೆಯಬೇಕು, ಎಂದು ಶೇಣಿಯವರೂ ಹೇಳುತ್ತಿದ್ದರು. ಪೈಗಳಿಗೂ ಶೇಣಿಯವರಿಗೂ ಕಳಚದ ನಂಟು. ಶೇಣಿಯವರಿಗೂ ಯಜಮಾನರ ಮೇಲೆ ಗೌರವ. ಮೇಳದ ಕುರಿತು ಬಿಟ್ಟುಕೊಡದ ಪ್ರೀತಿ. ಇಂತಹ ಗುಣಗಳು ಕಲಾವಿದರಿಗೆ ಮೇಲ್ಪಂಕ್ತಿ.
             ವರದರಾಯ ಪೈಗಳ ಮೇಳದ ನಿರ್ವಹಣೆ ಜಾಣ್ಮೆಯಿಂದ ಕೂಡಿತ್ತು. ದುಬಾರಿತನದಿಂದ ದೂರ. ಅಡುಗೆಗೆ ಸಾಧ್ಯವಾದಷ್ಟೂ ಸ್ಥಳೀಯ ತರಕಾರಿಗಳ ಅವಲಂಬನೆ. ಮೇಳವು ಊರಿನಿಂದ ಊರಿಗೆ ಹೋಗುವಾಗ ಆ ಊರಿನ ಪಾರಂಪರಿಕ ತರಕಾರಿ ಯಾವುದಿದೆಯೋ ಅದರತ್ತ ಆಸಕ್ತಿ. ಎಲ್ಲೆಲ್ಲಿ ಸಂತೆ ಆಗುತ್ತದೋ ಅ ಜಾಗವೆಲ್ಲಾ ಪೈಗಳಿಗೆ ಪರಿಚಿತ. ಸಂತೆ ಆಗುವಲ್ಲಿ ಸುರತ್ಕಲ್ ಮೇಳದ ಆಟ ಖಚಿತ. ಟೆಂಟ್ ಹೌಸ್ಫುಲ್.
                ಬದ್ಧತೆಯ ಮೇಳದಲ್ಲಿ ಸಮಯಕ್ಕೆ ಮಹತ್ವ. ಕಲಾವಿದರೆಲ್ಲರೂ ಎಂಟು ಗಂಟೆಯೊಳಗೆ ಚೌಕಿಯಲ್ಲಿರಬೇಕೆಂಬ ಅಲಿಖಿತ ಶಾಸನ. ಎಂಟೂವರೆಗೆ ಚೌಕಿ ಪೂಜೆ, ಒಂಭತ್ತು ಗಂಟೆಯಿಂದ ಕಟ್ಟುವೇಷ, ನಿತ್ಯ ವೇಷಗಳ ಕುಣಿತ. ಹತ್ತು ಗಂಟೆ ಹತ್ತು ನಿಮಿಷಕ್ಕೆ ಪ್ರಸಂಗ ಶುರು. ಚೌಕಿಯಲ್ಲಿ ದೇವರಿಗೆ ಹೂ, ಹಣ್ಣು ಖಾಯಂ. ಸ್ವತಃ ಪೈಗಳೇ ದೇವರಿಗೆ ಅಲಂಕಾರ ಮಾಡುತ್ತಿದ್ದರು. ಪೂಜೆಯ ಬಳಿಕ ಮೇಳದ ಟಿಕೇಟ್ ಕೌಂಟರ್ ತೆರೆದುಕೊಳ್ಳುತ್ತಿತ್ತು. ಸ್ವತಃ ಪೈಗಳೇ ಕೌಂಟರಿನಲ್ಲಿರುತ್ತಿದ್ದರು. ಕಲೆಕ್ಷನ್ ಆದ ಬಳಿಕ ಕೌಂಟರಿಗೆ ಬಾಗಿಲು ಹಾಕಿ ಚೌಕಿಗೆ ಬಂದು ಕಲಾವಿದರೊಂದಿಗೆ ಮಾತನಾಡಿದ ಬಳಿಕವೇ ನಿದ್ದೆ. ಬೆಳಿಗ್ಗೆ ಐದು ಗಂಟೆಗೆ ಸ್ನಾನ. ಚೌಕಿ ಪೂಜೆಗೆ ಅಣಿ. ಈ ನಿಯತ್ತು ಬಹಳ ವರುಷ ಅನುಷ್ಠಾನ ಮಾಡಿದ್ದರು - ಭಾಗವತ ಪದ್ಯಾಣ ಗಣಪತಿ ಭಟ್ಟರು ಪೈಗಳ ಕಾಯಕವನ್ನು ಸ್ಮರಿಸಿಕೊಳ್ಳುತ್ತಾರೆ.
            ವರದರಾಯ ಪೈಗಳು 2000ರಲ್ಲಿ ಮೇಳ ನಿಲ್ಲಿಸುವ ಹೊತ್ತಲ್ಲಿ, ಮೇಳವೇನೋ ನಿಲ್ಲಿಸಬಹುದು. ಕಲಾವಿದರಿಗೆ ಏನು ಗತಿ. ಎಂದು ಮರುಗಿದ್ದರು. ಕಲಾವಿದರ ಯೋಗಕ್ಷೇಮವು ಪೈಗಳ 'ಯಜಮಾನಿಕೆಯ' ವ್ಯಾಪ್ತಿಯೊಳಗಿತ್ತು. ಇಂತಹ ಯಜಮಾನರನ್ನು ಪಡೆದ ಸುರತ್ಕಲ್ ಮೇಳ ಧನ್ಯ. ಕಲಾವಿದರಿಗೂ ಸಾರ್ಥಕ. ಅಗಲಿದ ಪೈಗಳಿಗೆ ಅಕ್ಷರ ನಮನ.
ಚಿತ್ರಗಳು : ಶಾಂತಾರಾಮ ಕುಡ್ವ



    




ಶಿಷ್ಟ ಯಕ್ಷಪ್ರಜ್ಞೆಯನ್ನು ಮರೆಯದ ಅಂಬಾ



              ಮೂರು ದಶಕಗಳ ಹಿಂದಿನ ಆ ದಿನಗಳು ನೆನಪಿವೆ. ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳ. 'ಗೆಜ್ಜೆದ ಪೂಜೆ' ಪ್ರಸಂಗ. ಅಂಬಾಪ್ರಸಾದರ 'ತುಳಸಿ' ಪಾತ್ರಾಭಿವ್ಯಕ್ತಿಗೆ ಮಾರುಹೋಗಿದ್ದೆ. ಹಲವು ಬಾರಿ ಪ್ರಸಂಗವನ್ನು ವೀಕ್ಷಿಸಿದ್ದೆ. ಶಾರೀರ, ಹೆಣ್ತನ, ರಸೋತ್ಪತ್ತಿ, ಚುರುಕುಗತಿ, ಮನದೊಳಗಿಳಿಯುವ ಅಭಿವ್ಯಕ್ತಿಗಳು ಮೋಡಿ ಮಾಡಿದ್ದುವು. ನಂತರದ ದಿನಗಳಲ್ಲಿ ಕರ್ನೂರರು ಕೂಟಾಟಗಳನ್ನು ಸಂಯೋಜಿಸುತ್ತಿದ್ದರು. ಗೆಜ್ಜೆದ ಪೂಜೆಯ 'ತುಳಸಿ'ಯನ್ನು ಕರ್ನೂರರು ಹಲವು ಬಾರಿ ಜ್ಞಾಪಿಸುತ್ತಿದ್ದುದನ್ನು ಗಮನಿಸಿದ್ದೇನೆ.
               ಹೊಸನಗರ ಮೇಳದಲ್ಲಿ 'ಕನ್ಯಾಂತರಂಗ' ಪ್ರಸಂಗದ 'ಅಹಲ್ಯೆ'ಯು ಅಂಬಾಪ್ರಸಾದರ ಮಾಸ್ಟರ್ಪೀಸ್! ಉಜಿರೆ ಅಶೋಕ ಭಟ್ಟರ 'ಗೌತಮ'. ಬಳಿಕ 'ಪುಣ್ಯಕೋಟಿ' ಪ್ರಸಂಗ. ಇವರ ಅನುಭವದ ಪರಿಪುಷ್ಟತೆಯ ಮೇಲ್ಮೆಗಳು ಪಾತ್ರಗಳಿಗೆ ಹೊಸ ಸೃಷ್ಟಿ, ನೋಟವನ್ನು ನೀಡಿದೆ. ಎಷ್ಟು ವರುಷ ತಿರುಗಾಟ ಮಾಡಿದ ಎನ್ನುವ ಲೆಕ್ಕಣಿಕೆಯು ಅನುಭವಕ್ಕೆ ಮಾನದಂಡವಲ್ಲ. ಪಾತ್ರಗಳೇ ಬೆರಗಾಗುವಂತೆ ಮಾಡುವ ಅಭಿವ್ಯಕ್ತಿ ಇದೆಯಲ್ಲಾ, ಅದು ನಿಜವಾದ ಕೊಡುಗೆ. ಅಂಬಾಪ್ರಸಾದರು ತಮ್ಮೆಲ್ಲಾ ಪಾತ್ರಗಳಲ್ಲಿ ಇಂತಹ 'ಕೊಡುಗೆ'ಗಳನ್ನು ಸ್ಥಾಪಿಸಿದ್ದಾರೆ.
              ಅಂಬಾರಿಗೀಗ ಐವತ್ತಮೂರು. ಒಂದು ಕಾಲಘಟ್ಟದ ಪಾತ್ರಗಳೆಲ್ಲವೂ ಶೃಂಗಾರಕ್ಕೆ ಸೀಮಿತ. ಯಕ್ಷಗಾನದ ಚೌಕಟ್ಟಿನೊಳಗೆ, ಶಿಷ್ಟತೆಯನ್ನು ಕಾಪಾಡಿಕೊಂಡ ಶೃಂಗಾರ. ವೇಷಭೂಷಣದಿಂದ ತೊಡಗಿ, ಮಾತಿನ ವರೆಗೆ 'ಯಕ್ಷಗಾನ'ದ ಪ್ರಜ್ಞೆಯಿಟ್ಟುಕೊಂಡೇ ವ್ಯವಹರಿಸಿದ ಕಲಾವಿದ. ಶೃಂಗಾರ ಪಾತ್ರವೆಂದರೆ ರಂಗದಲ್ಲಿ 'ಹೆಚ್ಚು ತೆರೆದು' ಕಾಣಿಸಿಕೊಳ್ಳಬೇಕೆಂಬ ಪ್ರಸ್ತುತ ದಿನಮಾನಗಳೇ 'ಪಾತಾಳರ ಯೌವನದ ಶೃಂಗಾರ'ಕ್ಕೆ ನಾಚಿವೆ!
              ಅಂಬಾಪ್ರಸಾರ ಗರತಿ ಪಾತ್ರಗಳು ಔಚಿತ್ಯದ ಕಕ್ಷೆಯನ್ನು ಮೀರಿದ್ದಿಲ್ಲ. ಅಭಿಮನ್ಯು ಕಾಳಗದ 'ಸುಭದ್ರೆ'ಯು ತಾನು ಅಭಿಮನ್ಯುವಿನ ತಾಯಿ ಎನ್ನುವುದನ್ನು ಮರೆಯುವುದಿಲ್ಲ! ಬೆಳೆದು ನಿಂತ ಬಬ್ರುವಾಹನನ ತಾಯಿ ಎನ್ನುವ ಪ್ರಜ್ಞೆ ಇವರ ಚಿತ್ರಾಂಗದೆಗಿದೆ. ವಿವಿಧ ಭಾವಗಳ ಗನಿ 'ದಾಕ್ಷಾಯಿಣಿ' ಪಾತ್ರದ ಭಾವತೀವ್ರತೆಗಳು, ಕ್ಷಿಪ್ರ ರಂಗನಡೆಗಳು ಜತೆಪಾತ್ರಧಾರಿಗೆ ಸವಾಲಾಗಿ ಪರಿಣಮಿಸಿದುದನ್ನು ಕಂಡಿದ್ದೇನೆ. ಸಹಜವಾಗಿ ಸ್ತ್ರೀಪಾತ್ರಧಾರಿಗಳಿಗೆ ಹಿನ್ನಡೆ ತರುವ ವೀರರಸ ಪ್ರಧಾನವಾದ ಪ್ರಮೀಳೆ, ಶಶಿಪ್ರಭಾ, ಮೀನಾಕ್ಷಿ ಪಾತ್ರಗಳಲ್ಲಿ ಅಂಬಾಪ್ರಸಾದರ ಮುನ್ನಡೆಯಿದೆ. ಸಂದರ್ಭ ಸಿಕ್ಕಾಗ ಪುರುಷ ಪಾತ್ರಗಳನ್ನು ನಿರ್ವಹಿಸಿದ್ದಿದೆ.
              ಪಾತಾಳ ವೆಂಕಟ್ರಮಣ ಭಟ್ಟರು ಅಂಬಾಪ್ರಸಾದರ ತೀರ್ಥರೂಪರು. ಸ್ತ್ರೀಪಾತ್ರಕ್ಕೆ ಹೊಸ ಸ್ವರೂಪವನ್ನು ತಂದು, ರಂಗದಲ್ಲಿ ಅಳವಡಿಸಿದ ಅನ್ವೇಷಕ. ರಂಗದ ಕುರಿತು ನಿಖರವಾದ ನಡೆ, ನುಡಿಯನ್ನು ಹೊಂದಿದವರು. ಇವರ ಒಂದು ಕಾಲಘಟ್ಟದ ತಿರುಗಾಟವು ಯಕ್ಷಗಾನ ವೈಭವಕ್ಕೆ ಸಾಕ್ಷಿ. ವೆಂಕಟ್ರಮಣ ಭಟ್ಟರ ಕೀತರ್ಿಯ ಜಾಡಿನಲ್ಲಿ ಮಗ ಅಂಬಾ ಮುಂದುವರಿದರು. ಸ್ವಂತಿಕೆಯಲ್ಲಿ ಕಾಣಿಸಿಕೊಂಡರು. ಯಾರದ್ದೇ ನಕಲಾಗಲಿಲ್ಲ. ನೋಡಿ ಕಲಿತರು. ನೋಡಿ ತಿಳಿದರು. ತಿಳಿದು ತಿದ್ದಿಕೊಂಡರು.
                 ದೇಹ ಸ್ಥೂಲ ಆಗದಂತೆ ಕಾಪಾಡಿಕೊಳ್ಳುವುದು ಸ್ತ್ರೀಪಾತ್ರಧಾರಿಗಳಿಗೆ ಸವಾಲು. ಅಲ್ಲೋ ಇಲ್ಲೋ ಕೆಲವರು ಗೆದ್ದುಬಿಡುತ್ತಾರಷ್ಟೆ. ತನಗೂ ಸ್ಥೂಲತೆಯ ಕಾಟವಾದಾಗ ಅಂಬಾಪ್ರಸಾದರು ಅಧೀರರಾಗಿದ್ದರು.  ವೇಷದ ಆಕರ್ಷಣೆಯು ಸೊರಗುವುದನ್ನು ನೋಡಿ ದುಃಖಿಸಿದ್ದರು. ಮುಂದಿನ ಹಾದಿ ಕಾಣದೆ ಪರಿತಾಪ. ಸ್ತ್ರೀಪಾತ್ರಧಾರಿಗೆ 'ತನ್ನ ವೇಷದ ಆಕರ್ಷಣೆ ಕಡಿಮೆಯಾಗುತ್ತಿದೆ' ಎನ್ನುವ ಅರಿವು ಮೂಡುವುದೇ ಗ್ರೇಟ್. ಅಂಬಾಪ್ರಸಾದರು ಹೊಸನಗರ ಮೇಳದ ಪ್ರವೇಶದಿಂದ ಮೊದಲಿನಂತೆ ಬ್ಯಾಟಿಂಗ್! ಗರತಿ ಪಾತ್ರಗಳಿಗೆ ಹೊಸ ಹಾದಿ, ಪರಿಪೂರ್ಣ ಅಭಿವ್ಯಕ್ತಿಯನ್ನು ನೀಡಲು ಪೂರ್ಣ ಅವಕಾಶ. ತಾರಾಮೌಲ್ಯವು ಇವರೊಳಗೆ ಸ್ಥಿರವಾಯಿತು.
              ಓದಿದ್ದು ಒಂಭತ್ತನೇ ತರಗತಿ. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ಕಲಿಕೆ. ಗೋವಿಂದ ಭಟ್ ಸೂರಿಕುಮೇರಿ, ನೆಡ್ಲೆ ನರಸಿಂಹ ಭಟ್ಟರಿಂದ ಅಭ್ಯಾಸ. ಮಂಗಳೂರಿನ ಮಾಸ್ಟರ್ ವಿಠಲರಿಂದ ಭರತನಾಟ್ಯಾಭ್ಯಾಸ.  ಧರ್ಮಸ್ಥಳ ಮೇಳದಲ್ಲಿ ಆರಂಭದ ತಿರುಗಾಟ. ಸುಂಕದಕಟ್ಟೆ ಮೇಳದಲ್ಲಿ 'ಕಲಾವಿದ'ನಾಗಿ ರೂಪುಗೊಂಡರು. ಬಳಿಕ ಕದ್ರಿ, ಸುರತ್ಕಲ್, ಮಧೂರು, ಕಾಟಿಪಳ್ಳ, ಮಂಗಳಾದೇವಿ, ಪುತ್ತೂರು, ಕರ್ನಾಟಕ, ಎಡನೀರು, ಹೊಸನಗರ ಮೇಳಗಳಲ್ಲಿ ಮೂವತ್ತೆಂಟು ವರುಷದ ತಿರುಗಾಟಗಳು. ಈ ಮಧ್ಯೆ ಬಡಗು ತಿಟ್ಟಿನ ಶಿರಸಿ ಮಾರಿಕಾಂಬಾ ಮೇಳದಲ್ಲಿ ವ್ಯವಸಾಯ ಮಾಡಿದ್ದರು.
              ಅಂಬಾಪ್ರಸಾದರ ಸ್ತ್ರೀವೇಷದಲ್ಲಿ  'ಯಕ್ಷಗಾನ'ವಿದೆ. ಈಗಲೂ, ಮೊದಲೂ ಆ ಪ್ರಜ್ಞೆ ಅವರಲ್ಲಿ ಜಾಗೃತ. ಬಹುಶಃ ವೆಂಕಟ್ರಮಣ ಭಟ್ಟರ ರಂಗದ ಬದ್ಧತೆಯೂ ಕಾರಣವಿರಬಹುದು. ಪಾತ್ರ ಬಯಸುವ ಆಶಯ ಮತ್ತು ವ್ಯಾಪ್ತಿ ಇದೆಯಲ್ಲಾ, ಅದನ್ನು ಅನುಭವದ ಮೂಲಕ ಅಧ್ಯಯನ ಮಾಡಿದ್ದಾರೆ. ಹಾಗಾಗಿ ಅಂಬಾಪ್ರಸಾದರ ಪಾತ್ರಗಳೆಲ್ಲವೂ ಮೆಲುಕು ಹಾಕಬಹುದಾದುದು. ರಂಗಕ್ಕೆ ಬೇಕಾಗಿರುವುದು 'ಸ್ತ್ರೀವೇಷ, ಸ್ತ್ರೀಯಲ್ಲ'! ಬದುಕಿಗೆ ಹೆಚ್ಚು ಅಂಟಿಕೊಳ್ಳುವ ಸಿನಿಮಾ ಪ್ರಭಾವ ಇವರ ವೇಷಕ್ಕೆ ಸೋಕಿಲ್ಲದಿರುವುದರಿಂದಲೇ ಈಗಲೂ ಅಂಬಾಪ್ರಸಾದರಿಗೆ ಬೇಡಿಕೆ.
             ಪಾತಾಳ ವೆಂಕಟ್ರಮಣ ಭಟ್ಟರು ಒಂದೆಡೆ ಉಲ್ಲೇಖಿಸುತ್ತಾರೆ, ನನ್ನ ಸ್ತ್ರೀವೇಷವು ರಂಗಕ್ಕೆ ಬಂದಾಗ ಪ್ರೇಕ್ಷಕರು ಅಲರ್ಟ್ ಆಗುತ್ತಿದ್ದ ದಿನಗಳಿದ್ದುವು. ನಿದ್ದೆಗೆ ಜಾರಿದವರು ಎದ್ದು ಕುಳಿತುಕೊಳ್ಳುತ್ತಿದ್ದರು. ಬರಬರುತ್ತಾ ನನ್ನ ವೇಷಕ್ಕೆ ಪ್ರೇಕ್ಷಕರಿಂದ ಹೇಳುವಂತಹ ಪ್ರತಿಕ್ರಿಯೆ ಬಾರದೇ ಇದ್ದಾಗ ರಂಗನಿರ್ಗಮನಕ್ಕೆ ಮನ ಮಾಡಿದೆ, ಎಂದಿದ್ದರು. ಅಂಬಾಪ್ರಸಾದರು ಹಲವು ಬಾರಿ ತಂದೆಯವರ ಈ ನಿಲುವನ್ನು ನೆನಪಿಸುತ್ತಿದ್ದರು. ಸಮರ್ಥಿಸುತ್ತಿದ್ದರು.
              ಯಕ್ಷರಂಗಕ್ಕೆ 'ಗರತಿ ಪಾತ್ರಧಾರಿ'ಗಳು ಬೇಕಾಗಿದ್ದಾರೆ! ಗರತಿ ಪಾತ್ರ ನಿರ್ವಹಣೆ ಸುಲಭವಲ್ಲ. ಅನುಭವದಿಂದ ಮಾಗಿದಾಗ ಮಾತ್ರ ಪರಾಕಾಯ ಪ್ರವೇಶ ಸಾಧ್ಯ. ಅಂಬಾಪ್ರಸಾದರ ಸೀತೆ, ಚಂದ್ರಮತಿ, ದಮಯಂತಿ ಪಾತ್ರಾಭಿವ್ಯಕ್ತಿಗಳೆಲ್ಲಾ ಉತ್ತುಂಗಕ್ಕೇರಿದವುಗಳು. ಸುಭದ್ರೆ ಮತ್ತು ಚಿತ್ರಾಂಗದೆ, ಮಾಲಿನಿ ಮತ್ತು ಮೋಹಿನಿ ಪಾತ್ರಗಳ ವ್ಯತ್ಯಾಸಗಳನ್ನು ಸ್ತ್ರೀಪಾತ್ರಧಾರಿ ಅರಿಯದಿದ್ದರೆ ಅದನ್ನು 'ಪಾತ್ರ' ಎಂದು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆಗೆ ಸೀಮಿತವಾದೀತಷ್ಟೇ. ಆದರೆ ಅಂಬಾಪ್ರಸಾದರಲ್ಲಿ  ಇಂತಹ ಪಾತ್ರಸೂಕ್ಷ್ಮಗಳ ಅರಿವು ಗಟ್ಟಿಯಾಗಿದೆ. ಹಾಗಾಗಿ ರಂಗ ಎಂದೂ ಅವರನ್ನು ಬಿಡದು!
                ಅಂಬಾಪ್ರಸಾದ ಪಾತಾಳರ ಕಲಾಯಾನವನ್ನು ಗುರುತಿಸಿ ಉಪ್ಪಿನಂಗಡಿಯ ಸೌಹಾರ್ದ ಯಕ್ಷಗಾನ ಸಮಿತಿ ಮತ್ತು ಶ್ರೀ ಶಾರದೋತ್ಸವ ಸಮಿತಿಯು ಗೌರವಿಸುತ್ತಿದೆ. ೨೦೧೬ ಜುಲೈ 16, ಶನಿವಾರದಂದು ಸಂಜೆ ಉಪ್ಪಿನಂಗಡಿ ರಾಮನಗರದ 'ಶ್ರೀ ಶಾರದಾ ಮಂದಿರ'ದಲ್ಲಿ ಸಂಮಾನ ಕಾರ್ಯಕ್ರಮ ಜರುಗಲಿದೆ.
(Prajavani/Dadhiginatho Coloum)



ಹಬ್ಬುತ್ತಿದೆ, ವಾಟ್ಸಪ್ ಯಕ್ಷಗಾನ


               ಬದುಕಿಗೊಂದು ನಿಶ್ಚಿತ ವೇಗವಿದೆ. ಈ ವೇಗವನ್ನು ಹಿಂದಿಕ್ಕುವ ಧಾವಂತ ಸಾಮಾಜಿಕ ಜಾಲತಾಣಗಳಿಗಿವೆ. ಅದರಲ್ಲೂ 'ವಾಟ್ಸಪ್' ತಾಣದ ವೇಗದ ಲೆಕ್ಕಣವನ್ನು 'ಬಾಹುಕ'ನೇ ಹೇಳಬೇಕು!  ಹಿಡಿಯೊಳಗೆ ಅವಿತುಕೊಂಡು ಬೆರಳಿನಿಂದ ಆಟವಾಡಿಸುವ ಮಾಹಿತಿಗಳಿಗೆ 'ಲೈವ್' ಸ್ಪರ್ಶ! ಕಣ್ಣೆವೆ ತೆರೆಯುವುದರೊಳಗೆ ದೂರದೂರಿಗೆ ಸಂದೇಶ ರವಾನೆ. ಕ್ಷಿಪ್ರ ಸಂವಹನಕ್ಕೆ ಸಶಕ್ತ, ಪರಿಣಾಮಕಾರಿ ಮಾಧ್ಯಮ.
             ರಾತ್ರಿಯಿಡೀ ಆಟದಲ್ಲಿ ಕುಳಿತು ಪ್ರತೀ ಸನ್ನಿವೇಶವನ್ನು ಲೈವ್ ಆಗಿ ಹರಿಯಬಿಡುವ ಕೆಲವು ಗ್ರೂಪ್ಗಳ ಸಹನಾಶಕ್ತಿಗೆ ಶರಣು. ಜತೆಗೆ ಚಿತ್ರಗಳು, ಆಡಿಯೋ ಸ್ವರಗಳು ಬೋನಸ್. ಮನೆಯಲ್ಲಿ ಹಾಯಾಗಿದ್ದವರಿಗೆ ಮೃಷ್ಟಾನ್ನ. ಸ್ಕ್ರೀನ್ ಮೇಲೆ ಬೆರಳಾಡಿಸಿದರೆ ಆಯಿತು, ಆಟದ ಸಾಕಾರತೆ! ಪ್ರಸಂಗ, ಪಾತ್ರ, ಸನ್ನಿವೇಶಗಳ ಜತೆಗೆ ಕಲಾವಿದರ ಅಭಿವ್ಯಕ್ತಿಯ ವಿಮರ್ಶೆಯೂ ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಅಭಿಮಾನದ ಹೊನಲು ಅತಿರೇಕವಾಗುವುದೂ ಇದೆ!
              'ಯಕ್ಷಗಾನ ತಾಳಮದ್ದಳೆ' ವಾಟ್ಸಪ್ ಬಳಗಕ್ಕೆ ಒಂದು ವರುಷದ ಹುರುಪು. ಜುಲೈ 3ರಂದು ಮೂಡುಬಿದಿರೆಯಲ್ಲಿ ಸದಸ್ಯರ ಸಮಾವೇಶ. ಬಹ್ವಂಶ ಸದಸ್ಯರ ಉಪಸ್ಥಿತಿ. ನಿರಾಕಾರದಿಂದ ಸಾಕಾರದತ್ತ! ಪರಸ್ಪರ ಮಾತುಕತೆ, ಮುಖಾಮುಖಿ. ಸುಃಖ ದುಃಖ ವಿನಿಮಯ. ಮನಸ್ಸಿಗೆ ಮೇವನ್ನು ಒದಗಿಸುವ ವಿವಿಧ ಕಲಾಪಗಳು. ಸದಸ್ಯರಿಂದ ತಾಳಮದ್ದಳೆ. ಬೆಳಿಗ್ಗೆ 11 ರಿಂದ ರಾತ್ರಿ 10ರ ತನಕ ಲಂಬಿಸಿದ ಕಾರ್ಯಕ್ರಮ. ಇನ್ನೂ ಮೂರ್ನಾಲ್ಕು ತಾಸು ಹೃಸ್ವವಾಗಬೇಕು ಅನ್ನಿಸಿತು.
             ಒಂದು ಯಕ್ಷಗಾನ ಸಂಘವು ಹೇಗೆ ಕ್ರಿಯಾಶೀಲವಾಗಿರುವುದೋ, ಅದೇ ರೀತಿ ವಾಟ್ಸಪ್ ಬಳಗವೂ ಕೂಡಾ. ವ್ಯವಸ್ಥಾಪಕರಿಗೆ (ಅಡ್ಮಿನ್) ನೂರಾರು ಸದಸ್ಯರನ್ನು ಸಮಚಿತ್ತದಿಂದ ಮುಂದೊಯ್ಯಬೇಕಾದ ಹೊಣೆ.  ಆಸಕ್ತಿ ಇದ್ದವರೂ, ಅತೀ ಆಸಕ್ತಿ ಹೊಂದಿದವರು, ಪಂಡಿತರು, ಪಾಮರರು.. ಇವರೆಲ್ಲರನ್ನೂ ಸಂಭಾಳಿಸುವ ಜಾಣ್ಮೆ ಬೇಕು. ಎಲ್ಲರಿಗೂ ಎಲ್ಲವೂ ಇಷ್ಟವಾಗದು. ಇಂತಹ ಸಂದರ್ಭಗಳಲ್ಲಿ ವ್ಯವಸ್ಥಾಪಕರೊಂದಿಗೆ ಸದಸ್ಯರಿಗೂ ಸ್ವ-ನಿಯಂತ್ರಣ ಮುಖ್ಯವಾಗುತ್ತದೆ. ನಮ್ಮ ಬಹುತೇಕ ಗ್ರೂಪ್ಗಳು ಸ್ವ-ನಿಯಂತ್ರಣವನ್ನು ಹೊಂದಿಕೊಂಡಿರುವುದರಿಂದ ಸಕ್ರಿಯವಾಗಿದೆ.
             ಯಕ್ಷಗಾನ ತಾಳಮದ್ದಳೆ ವಾಟ್ಸಪ್ ಬಳಗದಲ್ಲಿ ಇನ್ನೂರ ನಲವತ್ತು ಸದಸ್ಯರಿದ್ದಾರೆ. ಕಿರಿಯರಿಂದ ಹಿರಿಯರ ತನಕ ಸಂವಾದಗಳು ಉತ್ತಮವಾಗಿ ನಡೆಯುತ್ತಿದೆ. ಸಂಸ್ಕೃತ ಸೂಕ್ತಿಗಳು, ಪ್ರಸಂಗಗಳ ಜಿಜ್ಞಾಸೆಗಳು,  ಸಂಶಯಗಳು, ಪುರಾಣ ವಿಚಾರಗಳತ್ತ ಕೆಲವೊಂದು ಸಂಶಯಗಳಿಗೆ ಪರಸ್ಪರ ಉತ್ತರ ಕಂಡುಕೊಳ್ಳುವ ಯತ್ನ. ಚಿಂತನಗ್ರಾಹ್ಯವಾದ ಮಾತುಕತೆಗಳು. ಮಧ್ಯೆ ಮಧ್ಯೆ ಕುಟುಕುಗಳೂ, ಚುಟುಕುಗಳೂ ಇಲ್ಲದಿಲ್ಲ! ಕೆಲವೊಮ್ಮೆ ಸಂಬಂಧಪಡದ ವಿಷಯಗಳೂ ಇವೆಯೆನ್ನಿ.
             ಈಚೆಗೆ ಉಪ್ಪಿನಂಗಡಿಯಲ್ಲಿ ಯಕ್ಷ ಸಂಗಮ ವಾಟ್ಸಪ್ ಬಳಗವು ಅದ್ದೂರಿಯಾಗಿ ಬಯಲಾಟವನ್ನು ಏರ್ಪಡಿಸಿತ್ತು. ಕಿಕ್ಕಿರಿದ ಅಭಿಮಾನಿಗಳಿಗೆ ಪ್ರದರ್ಶನ ಮುದ ನೀಡಿತ್ತು. ಯಕ್ಷಗಾನ ಕಲಾವಿದರನ್ನು ಗೌರವಿಸಿತ್ತು. ಒಂದು ಸಾಮಾಜಿಕ ಜಾಲತಾಣವು ಯಕ್ಷಗಾನಕ್ಕೆ ಸಲ್ಲಿಸಬಹುದಾದ ಮಾನವನ್ನು ಸಲ್ಲಿಸಿದೆ ಎನ್ನಲು ಅಭಿಮಾನವಾಗುತ್ತದೆ. ಇಲ್ಲಿ ವಾಟ್ಸಪ್ ಬಳಗದ ಸದಸ್ಯರ ಸಕ್ರಿಯತೆ ಮೇಲ್ಮೆ ಪಡೆದಿದೆ.
              'ಯಕ್ಷಮಿತ್ರ ನಮ್ಮ ವೇದಿಕೆ' ಬಳಗವು ಎರಡು ಯಕ್ಷ ಸತ್ಸಂಗವನ್ನು ಆಯೋಜಿಸಿತ್ತು. ಅದ್ದೂರಿಯಾದ ಸ್ಮರಣೀಯ ಕಲಾಪವನ್ನು ಜರುಗಿಸಿತ್ತು. ಪ್ರಸಿದ್ಧ ವೈದ್ಯ ಡಾ.ಪದ್ಮನಾಭ ಕಾಮತರ ಯೋಚನೆ. ಅದನ್ನು ಯೋಜಿಸುವ ತಂಡ. ಕಳೆದ ವರುಷ ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳನ್ನು ಸಂಮಾನಿಸಿತ್ತು. ಪ್ರದರ್ಶನಗಳು ಪರಿಣಾಮಕಾರಿಯಾಗಿದ್ದುವು. ಗುಣಮಟ್ಟದ ಚಿಂತನೆಗಳ ಗಾಢತೆಯ ವಿಸ್ತಾರವು ಆಯೋಜಕರಲ್ಲಿ ಎಷ್ಟಿದೆಯೋ ಅದರಂತೆ ಪ್ರದರ್ಶನ ಪರಿಣಾಮ ಎನ್ನುವುದಕ್ಕೆ ಯಕ್ಷಮಿತ್ರ ನಮ್ಮ ವೇದಿಕೆಯ ಎರಡೂ ಸತ್ಸಂಗಗಳು ಉದಾಹರಣೆ.
              ಯಕ್ಷಗಾನ ಸಂಘವೊಂದು ರೂಪುಗೊಂಡರೆ ಅದರ ಅಂತಿಮ ಯಾತ್ರೆಯೂ ಅಂದೇ ಪರೋಕ್ಷವಾಗಿ ನಿರ್ಧಾರವಾಗಿ ಬಿಡುತ್ತದೆ! ಹಿಂದೊಮ್ಮೆ ಕುಂಬಳೆ ಸುಂದರ ರಾಯರು ಕಾರ್ಯಕ್ರಮವೊಂದರಲ್ಲಿ ಸೋದಾಹರಣವಾಗಿ ಆಡಿದ ಮಾತು. ವಿನೋದದ ಮಾತನಾದರೂ ಸತ್ಯವೂ ಕೂಡಾ! ಸಂಘದೊಳಗಿನ 'ರಾಜಕೀಯ'ಗಳು ಉದ್ದೇಶವನ್ನು ಮಸುಕುಗೊಳಿಸುತ್ತವೆ. ವೈಮನಸ್ಸನ್ನು ಹುಟ್ಟುಹಾಕುತ್ತವೆ. ನಂಜು, ಮತ್ಸರಗಳನ್ನು ತಂದು ರಾಚುತ್ತವೆ. ಇಂತಹುಗಳ ನೇರ ಪರಿಣಾಮ ವಾಟ್ಸಪ್ ಯಕ್ಷಗಾನ ತಂಡಕ್ಕಿಲ್ಲದಿದ್ದರೂ ಎಚ್ಚರವಾಗಿರುವುದು ಕ್ಷೇಮ. 'ಸ್ವ-ನಿಯಂತ್ರಣ'ವೇ ಪರಿಹಾರ.
             ಗುಂಪಿನ ಆಶಯದಂತೆ ಮಾತುಕತೆ ನಡೆಯಬೇಕು. ಆಶಯದ ಆಸಕ್ತಿಯಿದ್ದವರು ಗುಂಪಿನ ಸದಸ್ಯರಾಗಿರಬೇಕು. ಬದುಕಿನಲ್ಲಿ ಕಳೆದುಹೋಗಿರುವ ಹಾಸ್ಯವನ್ನು ವಾಟ್ಸಪ್ಪಿನಲ್ಲಾದರೂ ಅನುಭವಿಸೋಣ. ಉತ್ತಮ ವಿಚಾರವಾದರೂ ಅನಪೇಕ್ಷಿತವಾದ ವಿಚಾರಗಳ ತುರುಕುವಿಕೆಗೂ ಸ್ವ-ನಿಯಂತ್ರಣ ಬೇಕು. ಯಾಕೆಂದರೆ ವಿವಿಧ ಆಶಯದಿಂದ ರೂಪುಗೊಂಡ ವಾಟ್ಸಪ್ ಬಳಗ ಸಾವಿರಾರಿವೆ. ಗುಂಪುಗಳ ಆಯುಷ್ಯ ವೃದ್ಧಿಗೆ ಸಮ್ಮನಸ್ಸು ಟಾನಿಕ್.
            ಮಾಧ್ಯಮವು ಸಮಾಜಮುಖಿಯಾಗಿ ಹರಿಯಬೇಕು. ಸಾಮಾಜಿಕ ಬದ್ಧತೆಗಳನ್ನು ರೂಢಿಸಿಕೊಳ್ಳಬೇಕು. ಧನಾತ್ಮಕ ಅಂಶಗಳನ್ನು ಬಿತ್ತರಿಸಬೇಕು. ಸ್ವಾಸ್ಥ್ಯ ಕೆಡಿಸುವ, ಸಂಬಂಧಗಳನ್ನು ಹಾಳು ಮಾಡುವ ಮನಃಸ್ಥಿತಿಯಿಂದ ದೂರವಿರಬೇಕು. ಈ ಕಾಲಘಟ್ಟದಲ್ಲಿ ಇದೆಲ್ಲ ಸಾಧ್ಯವಾ? ಎನ್ನುವ ಪ್ರಶ್ನೆ ಸಹಜ. ಮಾಧ್ಯಮ ಅಂದಾಗ ಟಿವಿ, ಪತ್ರಿಕೆ ಮಾತ್ರವಲ್ಲ; ವಾಟ್ಸಪ್, ಫೇಸ್ಬುಕ್, ವೈಬ್ಸೈಟ್ ಎಲ್ಲವೂ ಈ ಸರದಿಗೆ ಸೇರುತ್ತವೆ.
             ಯಕ್ಷಗಾನದ ವಾಟ್ಸಪ್ ಗುಂಪುಗಳು ಮುಖ್ಯವಾಗಿ ಒಂದು ವಿಚಾರದತ್ತ ಯೋಚಿಸಬೇಕಾಗಿದೆ. ಎಲ್ಲರ  ಚಿಂತನೆಗಳು 'ಸಮಗ್ರ ಯಕ್ಷಗಾನ'ದತ್ತ ಹರಿಯಬೇಕು. ವ್ಯಕ್ತಿ ಕೇಂದ್ರಿತವಾದ ಆರಾಧನೆಯ ಬದಲು ಒಟ್ಟೂ ಕಲೆಯನ್ನು ಆರಾಧಿಸುವ ಮನಃಸ್ಥಿತಿ ರೂಪುಗೊಳ್ಳಬೇಕು. ಆಗ ಕಲೆಗೂ ಮಾನ. ಕಲಾವಿದನಿಗೂ ಕ್ಷೇಮ.

(ಸಾಂದರ್ಭಿಕ ಚಿತ್ರ : ಕೊಂಗೋಟ್ ರಾಧಾಕೃಷ್ಣ ಭಟ್)

ಕಲಾವಿದನಾಗದ ಕಲಾವಿದ ಈ ದೇವದರ್ಜಿ


              ಪುತ್ತೂರಿನ 'ಆಶಾ ಟೈಲರ್' ಮಳಿಗೆಯ ನಾರಾಯಣ ರಾಯರಿಗೆ ಟೈಲರಿಂಗ್ ಹೊಟ್ಟೆಪಾಡು. ಕಲಾವಿದರಿಗೆ ಇವರ ಅಂಗಡಿಯು ಸಂವಾದ ಕೇಂದ್ರ. ಮೇಳದ ಯಜಮಾನರುಗಳಿಗೆ ಕಚೇರಿ. ಯಕ್ಷಾಸಕ್ತರಿಗೆ ಮಾತಿನ ವೇದಿಕೆ. ಯಕ್ಷಗಾನದ ಹಲವು ಸಂಗತಿಗಳ ಮೂಲಸ್ಥಾನ. ಏನಿದ್ದರೂ ನಾರಾಯಣ ರಾಯರದು ಕೊನೆಯ ಮಾತು. ಕೆಲವೊಮ್ಮೆ ಮೊದಲ ಮಾತು.
ಇವರು ವೇಷ ತೊಟ್ಟು ಕುಣಿವ ಕಲಾವಿದನಲ್ಲ. ಆದರೆ ಕಲಾವಿದನಿಗೆ ಪಾತ್ರ, ಪ್ರಸಂಗಗಳ ಮಾಹಿತಿ ಕೊಡುವ ಜ್ಞಾನಸಂಪನ್ನ. ಪಡಿಮಂಚವೇರಿ ಅರ್ಥ ಹೇಳುವವರಲ್ಲ. ಆದರೆ ಅರ್ಥಧಾರಿಗಿರಬೇಕಾದ ಬೌದ್ಧಿಕ ಪಕ್ವತೆಯಿದೆ. ಸಹಾಯಾರ್ಥ(!) ಆಟ ಆಡಿಸುವವರಲ್ಲ. ಆಟ ಆಡಿಸುವವರಿಗೆ ನಿರ್ದೇಶನವನ್ನು ಕೊಡಬಲ್ಲ ಅನುಭವಿ. ಯಕ್ಷಗಾನದ ಪ್ರದರ್ಶನದ ಫಲಿತಾಂಶವನ್ನು ಇವರು ಪ್ರಶಂಸಿಸಿದರೆ ಅದು ಆಗ ದೊಡ್ಡ ವಿಚಾರ.
             ಒಂದು ಕಾಲಘಟ್ಟದಲ್ಲಿ ಐ.ವಿ.ಕೃಷ್ಣ ರಾಯರ ಜವುಳಿ ಮಳಿಗೆಯು ಪುತ್ತೂರಿನಲ್ಲಿ ಪ್ರಸಿದ್ಧ. ಯಕ್ಷಗಾನ ಕಲಾವಿದರ ಸಂಪರ್ಕವುಳ್ಳವರು. ಸ್ವತಃ ಕಲಾವಿದ ಕೂಡಾ. ಅವರೊಂದಿಗೆ ಬೆಳೆದ ನಾರಾಯಣ ರಾಯರಿಗೆ ಸಹಜವಾಗಿ ಯಕ್ಷಗಾನ ಅಂಟಿತು. ಮುಂದೆ ಸ್ವಂತವಾಗಿ ಮಳಿಗೆ ತೆರೆದ ಬಳಿಕ ಕಲಾವಿದರೆಲ್ಲರ ನೆಚ್ಚಿನ ಅಣ್ಣನಾದರು. ಅವರ ಮಳಿಗೆಯು ಯಕ್ಷಗಾನದ ಸಂಪರ್ಕ ಕೇಂದ್ರವಾಗಿ ರೂಪುಗೊಂಡಿತು.
             ಯಕ್ಷಗಾನ ವೇಷಭೂಷಣ (ಮಣಿಸಮಾನು ರಹಿತ) ತಯಾರಿಯಲ್ಲಿ ನಾರಾಯಣ ರಾಯರದು ಸುಭಗತೆಯ ಕೈಂಕರ್ಯ. ತೆಂಕುತಿಟ್ಟಿನ ಬಹುತೇಕ ಮೇಳಗಳ ವೇಷಭೂಷಣಗಳು ಇವರಲ್ಲೇ ಸಿದ್ಧವಾದವುಗಳು. 1965ನೇ ಇಸವಿ ಇರಬೇಕು, ಶ್ರೀಧರ್ಮಸ್ಥಳ ಮೇಳಕ್ಕೆ ನಾರಾಯಣ ರಾಯರೇ ಜೌಳಿಯನ್ನು ಹೊಲಿದಿದ್ದರು. ಇವರ ಕೈಚಳಕವನ್ನು ಕಂಡು ಖಾವಂದರು ಶ್ಲಾಘಿಸಿದ್ದರಂತೆ.
               ಮೂರ್ನಾಲ್ಕು ದಶಕಗಳ ಹಿಂದೆ ಒಂದು ಮೇಳಕ್ಕೆ ಬೇಕಾಗುವಷ್ಟು ವೇಷಭೂಷಣ ತಯಾರಿ ಅಂದರೆ ಸುಲಭದ ಮಾತಾಗಿರಲಿಲ್ಲ. ಹೆಚ್ಚು ಆರ್ಥಿಕ ಬಂಡವಾಳ ಬೇಡುವ ಕಾಯಕ. ಕಾಯಕಷ್ಟವನ್ನು ಲೆಕ್ಕಿಸದೆ ವೇಷಭೂಷಣ ಸಿದ್ಧಪಡಿಸಿ ನೀಡುತ್ತಿದ್ದರು. ಹೆಚ್ಚಿನ ಸಂದರ್ಭದಲ್ಲಿ 'ಪ್ರತಿಫಲ' ಶೂನ್ಯ!  'ನಾಳೆ ಕೊಡುವೆ, ನಾಡಿದ್ದು ಕೊಡುವೆ' ಎನ್ನುವ ಚಾಳಿ. 'ಇದು ಬರುವ ಹಣ ಅಲ್ಲ' ಎನ್ನುವುದು ಅವರಿಗೂ ಗೊತ್ತು. ಹಾಗೆಂತ ಎಂದೂ ಯಾರಲ್ಲೂ ನಿಷ್ಠುರ ಮಾಡಿಕೊಂಡವರಲ್ಲ.
               ಕೆಲವೊಮ್ಮೆ ಗ್ರಾಹಕರಿಗೆ ಅನುಕೂಲವಾಗಲಿ ಎಂದು ಪ್ಯಾಂಟ್, ಶರ್ಟ್ ಪೀಸ್ಗಳನ್ನು ಖರೀದಿಸಿಡುತ್ತಿದ್ದರು. ಈ ವ್ಯವಸ್ಥೆಯು ಕಲಾವಿದರಿಗೆ ಬಟ್ಟೆ ಖರೀದಿಗೆ ಜವುಳಿ ಅಂಗಡಿ ಅಲೆಯುವುದನ್ನು  ತಪ್ಪಿಸಿತ್ತು. ತಮ್ಮ ಅಳತೆಗೆ ಅಂಗಿಯೋ, ಪ್ಯಾಂಟು ಹೊಲಿಸಿ, ಕೊನೆಗೆ 'ಲೆಕ್ಕಕ್ಕೆ ಬರೆಯಿರಿ' ಎಂದು ಒಯ್ದವರು ಎಷ್ಟೋ ಮಂದಿ! ಹೀಗೆ 'ಲೆಕ್ಕಕ್ಕೆ ಬರೆದ' ಪುಸ್ತಕದಲ್ಲಿ ಬರೆಯಲು ಜಾಗವೇ ಇಲ! ವಿಧವಿಧದ ತೊಂದರೆಯನ್ನು ಅನುಭವಿಸಿದ ಸ್ಥಿತಪ್ರಜ್ಞ.
              ಪುತ್ತೂರಿಗೆ ಯಾರೇ ಕಲಾವಿದರು ಬರಲಿ, ನಾರಾಯಣ ರಾಯರನ್ನು ಭೇಟಿ ಮಾಡದೆ ಪ್ರಯಾಣ ಮುಗಿಯುತ್ತಿರಲಿಲ್ಲ. ದಿನವಿಡೀ ಅವರ ಸಮಯ, ತಲೆಯನ್ನು ತಿನ್ನದೆ (!) ಸಮಾಧಾನವಿಲ್ಲ. ಇಂತಹವರಿಗೆ ಉಪಾಹಾರ, ಭೋಜನದ ಗೊಣಗಾಟವಿಲ್ಲದ ಆತಿಥ್ಯ. ಯಕ್ಷಗಾನ ಸುದ್ದಿಗೆ ಕಿವಿಯಾಗುತ್ತಾ, ದನಿಯಾಗುತ್ತಾ ಅಪ್ಡೇಟ್ ಆಗುತ್ತಿದ್ದರು. ಬಾಕಿಯುಳಿದ ಟೈಲರಿಂಗ್ ಕೆಲಸವನ್ನು ರಾತ್ರಿ ಪೂರೈಸಿ ಗ್ರಾಹಕರ ಒಲವು ಗಳಿಸಿದ್ದರು. ಇಷ್ಟೆಲ್ಲ ಯಕ್ಷಗಾನದ ಗುಂಗು ಅಂಟಿಸಿಕೊಂಡರೂ ಬದುಕಿನಲ್ಲಿ ಬದ್ಧತೆಯಿತ್ತು. ಹೊಲಿಗೆ ಯಂತ್ರದ ಗಾಲಿಯು ತಿರುಗಿದಾಗ ಮಾತ್ರ ಹೊಟ್ಟೆ ತಂಪಾಗುತ್ತದೆ ಎನ್ನುವ ಸ್ಪಷ್ಟ ಅರಿವಿತ್ತು.
              ನಾರಾಯಣ ರಾಯರು ಉದಾರಿ, ನಿಗರ್ವಿ. ಬಡತನವನ್ನು ಅನುಭವಿಸಿದ ಅನುಭವ. ಶ್ರೀಧರ ಭಂಡಾರಿಯವರು ಒಂದು ಘಟನೆಯನ್ನು ಜ್ಞಾಪಿಸಿಕೊಂಡರು - ನನಗೆ 1965ನೇ ಇಸವಿಯಲ್ಲೊಮ್ಮೆ ಮುಂಬಯಿಗೆ ಹೋಗುವ ಸಂದರ್ಭ ಬಂದಿತ್ತು. ಆಧುನಿಕ ಪ್ಯಾಂಟ್, ಷರ್ಟ್ ಹೊಲಿಸಲು ಆರ್ಥಿಕ ಅಡಚಣೆ. ಹಾಗೆಂತೆ ಹೋಗದಿರಲೂ ಸಾಧ್ಯವಿಲ್ಲ. ನಾರಾಯಣ ರಾಯರಿಗೆ ವಿಚಾರ ಗೊತ್ತಾಗಿ ಎರಡು ಜತೆ ಪೈಜಾಮ್ ಹೊಲಿದು ನನ್ನ ಮುಂಬಯಿ ಪ್ರವಾಸಕ್ಕೆ ಅನುವು ಮಾಡಿಕೊಟ್ಟ ಉದಾರಿ.
             ಕಲಾವಿದ ದಾಸಪ್ಪ ರೈ ಅವರೊಂದಿಗೆ ನಿಕಟ ಸಂಪರ್ಕ, ಸಂಬಂಧ ಹೊಂದಿದ್ದರು. ಒಂದು ಜೋಡಾಟದ ಘಟನೆ. ದಾಸಪ್ಪ ರೈಗಳ ಕುಂಬಳೆ ಮೇಳಕ್ಕೂ, ಶ್ರೀಧರ ಭಂಡಾರಿಗಳ ಪುತ್ತೂರು ಮೇಳಕ್ಕೂ ಮಂಗಳೂರಿನಲ್ಲಿ ಜೋಡಾಟ. ನಾಗೇಶ್ ರಾಯರ ಆಯೋಜನೆ. ನಾರಾಯಣ ರಾಯರು ಉಸ್ತುವಾರಿ ಜವಾಬ್ದಾರಿಯೊಂದಿಗೆ  ಮುಖ್ಯಸ್ಥನ ಜಾಗವನ್ನೂ ತುಂಬಿದ್ದರು. ಒಂದು ಹಂತದಲ್ಲಿ ಚೆಂಡೆವಾದಕರೊಂದಿಗೆ ಜುಗಲ್ಬಂಧಿ ತಾರಕಕ್ಕೇರಿದಾಗ ನಾರಾಯಣ ರಾಯರು ಮಧ್ಯಪ್ರವೇಶಿಸಿ ಪ್ರಕಟರಣವನ್ನು ತಿಳಿಗಿಳಿಸಿದ ಘಟನೆಯು ಅವರ ವ್ಯಕ್ತಿತ್ವಕ್ಕೆ ಕನ್ನಡಿ.
              ಎಲ್ಲಾ ಕಲಾವಿದರಿಗೂ ಒಂದೇ ರೀತಿಯ ಆತಿಥ್ಯ. ತೀರಾ ಹತ್ತಿರದವರನ್ನು ಹೊರತು ಪಡಿಸಿದರೆ ಮಿಕ್ಕವರಲ್ಲಿ ವ್ಯವಹಾರ ಅಷ್ಟಕ್ಕಷ್ಟೇ. ಕಲಾವಿದನ ವ್ಯಾವಹಾರಿಕ ದೌರ್ಬಲ್ಯಗಳ ಹತ್ತಿರದ ಪರಿಚಯವಿದ್ದುದರಿಂದ ಹೆಚ್ಚು ಈ ಅಂತರದ ವ್ಯಾಪ್ತಿ ಕಲಾವಿದನಿಗೆ ಅರಿಯದಂತೆ ಜಾಣ್ಮೆಯಿಂದ ವ್ಯವಹರಿಸುತ್ತಿದ್ದರು. ರಂಗ, ಕಲಾವಿದರೊಳಗಿನ ಅನೇಕ ಸಮಸ್ಯೆಗಳಿಗೆ ಪರಿಹಾರದ ಹಾದಿಯನ್ನು ತೋರಿದ್ದರು. ಬಹುತೇಕ ಮೇಳಗಳಿಗೆ ಕಲಾವಿದರನ್ನು ಗೊತ್ತು ಮಾಡುವ, ನಿರ್ಧಾರ ಮಾಡುವ ಅಜ್ಞಾತ ಕೆಲಸಗಳು ಆಶಾ ಟೈಲರ್ ಮಳಿಗೆಯಲ್ಲಿ ನಡೆಯುತ್ತಿದ್ದುವು!
             ಭರತನಾಟ್ಯ, ಭೂತಾರಾಧನೆ ಮತ್ತು ದೇವಸ್ಥಾನಕ್ಕೆ ಸಂಬಂಧಪಟ್ಟ ಕಲಾತ್ಮಕ ಹೊಲಿಗೆಗಳಲ್ಲಿ ನಾರಾಯಣ ರಾಯರ ಅನುಭವ ಹಿರಿದು. ದೇವಳದ ಪಕ್ಕೆ ನಿಶಾನಿ, ಪುಷ್ಪಕನ್ನಡಿ, ದಂಡಮಾಲೆ, ಹಸ್ತ ಕೊಡೆ, ಮಕರ ತೋರಣಗಳ ತಯಾರಿಗೆ ರಾಯರಿಗೆ ರಾಯರೇ ಸಾಟಿ. ಪುತ್ತೂರು ಬ್ರಹ್ಮರಥದ ಧ್ವಜಗಳನ್ನು ಸ್ವತಃ ಹೊಲಿದಿದ್ದರು. ಒಂದರ್ಥದಲ್ಲಿ ಇವರು 'ದೇವದರ್ಜಿ’.
ನಾರಾಯಣ ರಾಯರಿಗೆ ಈಗ ಎಂಭತ್ತೊಂದರ ಹರೆಯ. ಮಹಾಲಿಂಗೇಶ್ವರ ದೇವಳದ ಸನಿಹ, ಮುಖ್ಯರಸ್ತೆಗೆ ತಾಗಿಕೊಂಡಿರುವ 'ಆಶಾ ಟೈಲರ್' ಅಂಗಡಿಗೆ ಈಗ ಕಲಾವಿದರು ಬರುತ್ತಿಲ್ಲ! ಕಾರಣ, ಅಲ್ಲಿ ನಾರಾಯಣ ರಾಯರಿಲ್ಲ. ದೇಹ ಮಾಗಿದೆ. ಮಕ್ಕಳಾದ ಕುಮಾರಸ್ವಾಮಿ, ಕಿಶೋರ್ ಕುಮಾರ್, ಪ್ರಶಾಂತ್ ಇವರೊಂದಿಗೆ ವಿಶ್ರಾಂತಿಯಲ್ಲಿದ್ದಾರೆ. ಒಂದೊಂದು ರೂಪಾಯಿಯನ್ನು ಉಳಿಸಿ, ಬೆಳೆಸಿ ರೂಪಿಸಿದ ಕುಟುಂಬದ ಏಳ್ಗೆಯನ್ನು ಕಣ್ತುಂಬ ನೋಡಿ ಅನುಭವಿಸಲು ಯಾಕೋ ನೆನಪು ಕೈಕೊಡುತ್ತಿದೆ. ಆಗೊಮ್ಮೆ ಈಗೊಮ್ಮೆ ಬರುವ ಆಪ್ತರು ಹೊರತುಪಡಿಸಿದರೆ ಮಿಕ್ಕೆಲ್ಲಾ ಸಂಪರ್ಕಗಳು ದೂರ, ಬಹುದೂರ. ತನ್ನ ಸಂಪರ್ಕದಲ್ಲಿದ್ದ, ಪ್ರಯೋಜನ ಪಡೆದವರನ್ನು ಅವರ ಕಣ್ಣುಗಳು ಅರಸುತ್ತಿವೆ.
             ನಾರಾಯಣ ರಾಯರ ನಿಕಟ ಬಂಧು ಪುತ್ತೂರು ಗೋಪಾಲಕೃಷ್ಣಯ್ಯ (ಗೋಪಣ್ಣ).  ಯಕ್ಷಗಾನದ ಚೆಂಡೆಗೆ ನಾದದ ಭಾಷೆಯ ಶ್ರೀಕಾರ ಬರೆದವರು. ಅವರ ಚಿರಂಜೀವಿ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ್ ರಾವ್. ಇವರು ೨೦೧೬ ಜುಲೈ 2ರಂದು ಬಪ್ಪಳಿಗೆಯ ತನ್ನ 'ಅಗ್ರಹಾರ'ದಲ್ಲಿ ತಂದೆಯವರ ನೆನಪಿನಲ್ಲಿ ನಾರಾಯಣ ರಾಯರನ್ನು ಗೌರವಿಸಲಿದ್ದಾರೆ.
(Prajavani/Dadhiginatho/1-7-2016)


ಬದ್ಧತೆಗೆ ಒಳಗಾಗಬೇಕಾಗಿದೆ - ಪ್ರಶಸ್ತಿ, ಸಂಮಾನಗಳ ಅರ್ಥವ್ಯಾಪ್ತಿ


              ಸಂಮಾನ, ಪ್ರಶಸ್ತಿ, ಪುರಸ್ಕಾರ, ಗೌರವ.. ಈ ಪದಗಳ ಅರ್ಥಗಳು ಪದಕೋಶದಲ್ಲಿ ಸಿಗುತ್ತಿಲ್ಲ! ಹುಡುಕಿ ಸುಸ್ತಾದೆ. ಎಲ್ಲಾ ಪದಗಳಿಗೂ ಒಂದೇ ಅರ್ಥವನ್ನು ಕಲ್ಪಿಸಿದ್ದೇವೆ. ಕೆಲವೊಮ್ಮೆ ಅರ್ಥವೇ ಇಲ್ಲ! ಅರ್ಥಾರ್ಥ ಸಂಬಂಧವೂ ಇಲ್ಲ. ಪ್ರಶಸ್ತಿಗೂ ಪುರಸ್ಕಾರಕ್ಕೂ ವ್ಯತ್ಯಾಸ ಬೇಡವೇ? ಪದಕೋಶದಲ್ಲಿ ಈ ಪದಗಳೆಲ್ಲಾ ಮಸುಕಾಗಿವೆ. ಅರ್ಥ ಸ್ಫುರಿಸಲು ಒದ್ದಾಡುತ್ತಿವೆ.
               ಯಕ್ಷಗಾನ ಕಾರ್ಯಕ್ರಮಗಳಲ್ಲಿ ಎಷ್ಟೊಂದು ಸಂಮಾನಗಳು, ಪುರಸ್ಕಾರಗಳು. ಶಾಲು ಹಾಕ್ಕೊಂಡರೆ ಆಯಿತು, ಅದು ಗೌರವಾರ್ಪಣೆ ಸಾಲಿಗೆ ಸೇರಿಕೊಳ್ಳುತ್ತದೆ. ಸ್ಮರಣಿಕೆ ಪಡೆದರೆ, ಅದು ಪುರಸ್ಕಾರವಾಗುತ್ತದೆ. ಒಂದು ಹಾರ, ಶಾಲು, ಹಣ್ಣುಹಂಪಲು ಪ್ರದಾನಿಸಿದರೆ ಸಂಮಾನ. ಇದರೊಂದಿಗೆ ಮೊತ್ತವೂ ಸೇರಿಕೊಂಡರೆ ಪ್ರಶಸ್ತಿ. ಮಾನ-ಸಂಮಾನಗಳು ಸಮಾನ. ಮರುದಿನ ಮಾಧ್ಯಮದಲ್ಲಿ ವರದಿ ಪ್ರಕಟವಾದಾಗ ಖುಷಿ.
                 ಈಚೆಗಿನ ವರುಷಗಳಲ್ಲಿ ಗಮನಿಸಿ. ಕೂಟವೋ, ಆಟವೋ ಆಯೋಜನೆಗೊಂಡಾಗ ಅಲ್ಲೊಂದು ಸಭಾ ಕಾರ್ಯಕ್ರಮ, ಅದರಲ್ಲೊಂದು ಸಂಮಾನ ಇರಲೇಬೇಕೆಂಬ ಹಟ. ಯಾರನ್ನು ಸಂಮಾನಿಸುತ್ತೇವೋ ಅವರ ಬಗ್ಗೆ ಆಯೋಜಕರಿಗೆ ಗೌರವ ಇದೆಯೋ ಇಲ್ಲವೋ ಮುಖ್ಯವಲ್ಲ. ಕಾರ್ಯಕ್ರಮಕ್ಕಾಗಿ ಕಾರ್ಯಕ್ರಮ ಅಷ್ಟೇ. ಆದರೆ ಪ್ರಶಸ್ತಿ, ಸಂಮಾನ ಪ್ರದಾನಿಸುವಲ್ಲಿ ಕೆಲವೊಂದು ಸಂಸ್ಥೆಗಳಿಗೆ ಬದ್ಧತೆಯಿದೆ. ಯಾರಿಗೆ ಗೌರವ ನೀಡುತ್ತೇವೋ ಅಂತಹವರನ್ನು ಗೌರವಪೂರ್ವಕವಾಗಿ ಆದರಿಸುವ ಪರಿಪಾಠದ ಉದಾಹರಣೆಗಳು ಕಣ್ಣಮುಂದಿವೆ. ಇವರ ಮಾದರಿಗಳು ಅನುಸರಣಯೋಗ್ಯ.
               ಸುಮಾರು 1987-88ರ ಆಜೂಬಾಜು. ನನಗೆ ಯಕ್ಷಗಾನದ ಗೀಳು ಅಂಟಿಗೊಂಡ ಕಾಲಘಟ್ಟ. ಮಂಗಳೂರಿನ ಕಾರ್ಯಕ್ರಮಗಳಲ್ಲಿ ನಿರಂತರ ಭಾಗವಹಿಸುತ್ತಿದ್ದೆ. ಬಹಳ ಅರ್ಥಪೂರ್ಣವಾಗಿ ಪ್ರಶಸ್ತಿ, ಸಂಮಾನ ಕಾರ್ಯಕ್ರಮಗಳು ನಡೆಯುತ್ತಿತ್ತು. ಅದನ್ನೆಲ್ಲ ಬೆರಗುಕಣ್ಣುಗಳಿಂದ ನೋಡುತ್ತಿದ್ದೆ. ಕಲಾಪಗಳ ವಿಧಿವಿಧಾನಗಳು ಮನದಲ್ಲಿ ಅಚ್ಚೊತ್ತಿದ್ದುವು. ಸಂಮಾನಿತರಿಗೆ ಸಿಗುವ ಗೌರವಗಳ ಗಾಢತೆಗಳು ಮನಸ್ಸನ್ನು ಕಾಡಿತ್ತು.
               ಅದೇ ಹೊತ್ತಿಗೆ ನನ್ನೂರಿನಲ್ಲೂ ಯಕ್ಷಗಾನೀಯ ವಾತಾವರಣ ಚೆನ್ನಾಗಿತ್ತು. ಸ್ಥಳೀಯ ಶ್ರೀ ಶಾಸ್ತಾವೇಶ್ವರ ಯಕ್ಷಗಾನ ಕಲಾ ಸಂಘವು ಕೂಟಾಟಗಳನ್ನು ಏರ್ಪಡಿಸುತ್ತಿತ್ತು. ಕೀರ್ತಿಶೇಷ ಪ್ರಕಾಶ್ಚಂದ್ರ ಬಾಯಾರು ಅವರಿಂದ ತರಬೇತಿಯೂ ನಡೆಯುತ್ತಿತ್ತು. ತರಬೇತಿಯ ಆ ವರುಷದ ಸಮಾರೋಪಕ್ಕೆ ಯಕ್ಷಗಾನ ಪ್ರದರ್ಶನ ಎಂದು ಗೊತ್ತು ಮಾಡಲಾಗಿತ್ತು. ಸಂಘಕ್ಕೆ ಹಲವು ಕಾಲ ಭಾಗವತರಾಗಿದ್ದ ಹಿರಿಯರಾದ ದಾಸರಬೈಲು ಚನಿಯ ನಾಯ್ಕರನ್ನು ಸಂಮಾನಿಸುವ ಪ್ರಸ್ತಾಪಕ್ಕೆ ಸಂಘದ ಕಾರ್ಯದರ್ಶಿ ಕೆ.ಡಿ.ಕುಶಾಲಪ್ಪರು ಸಮ್ಮತಿಸಿದ್ದರು.
                 ಹಳ್ಳಿ ಸೊಗಸಿನ ಸಂಘ. ವಿವಿಧ ಮನಃಸ್ಥಿತಿಯ ಸಮ್ಮನಸ್ಸಿನ ಕಲಾವಿದರು. 'ಸಂಮಾನ' ಎನ್ನುವ ಪದ ತೀರಾ ಹೊಸತು. ಅದೂ ಯಕ್ಷಗಾನ ಕಲಾವಿದರಿಗೆ ಸಂಮಾನ ಎಂದಾಗ ಏನೋ ಒಂದು ರೀತಿಯ ಸಂಭ್ರಮ. ಮಂಗಳೂರಿನಲ್ಲಿ ನೋಡಿದ ಕೆಲವು ಸಮಾರಂಭಗಳ ಕಲಾಪದ ಮಾದರಿಯಲ್ಲಿ ಕಾರ್ಯಕ್ರಮದ ರೂಪುರೇಷೆ ಹೆಣೆದೆ. ಸಮಾರಂಭಕ್ಕೊಂದು ಅಧ್ಯಕ್ಷ, ಅತಿಥಿ, ಅಭಿನಂದನಾ ಭಾಷಣಗಳಿಗೆ ಗಣ್ಯರನ್ನು ಮಂಗಳೂರಿನಿಂದಲೇ ಗೊತ್ತು ಮಾಡಿದ್ದೆ.
                  'ಸಂಮಾನ' ಪದವು ಕಲಾವಿದರಿಗೆ ಎಷ್ಟು ಖುಷಿಯಾಗಿತ್ತೋ, ಅಷ್ಟೇ ಗೇಲಿಯ ವಿಷಯವೂ ಆಗಿತ್ತು! ಮನೆಗೆ ನೆಂಟರು ಬಂದಾಗ, ಮದುವೆ ಸಂದರ್ಭದ ಮಾಂಸಾಹಾರದ ಭೋಜನಕ್ಕೆ 'ಸಂಮಾನ' ಎನ್ನುವ ಪರಿಭಾಷೆಯನ್ನು ಊರಲ್ಲಿ ಬಳಸುತ್ತಿದ್ದರು. ಆಮಂತ್ರಣ ಪತ್ರಿಕೆಯಲ್ಲಿ 'ಸಂಮಾನ' ಶಬ್ದ ಇದೆಯಲ್ಲ, 'ಭಾಗವತರಿಗೆ ನಾಡಿದ್ದು ಗಡದ್ದು ಸಂಮಾನ' ಎಂದು ಊರಲ್ಲೆಲ್ಲಾ ಗುಸುಗುಸು! ಚನಿಯ ನಾಯ್ಕರ ಕಿವಿಗೂ ಬಿದ್ದು ಇರಿಸುಮುರಿಸಾಗಿತ್ತು. ಒಬ್ಬ ಗೇಲಿಗೆ ತೊಡಗಿದರೆ, ಅದಕ್ಕೆ ಸಾಥ್ ಕೊಡುವವರು ಹತ್ತಾರು ಮಂದಿ ಸಿಕ್ಕೇ ಸಿಗುತ್ತಾರೆ.
                 ಸಂಘದ ಚರಿತ್ರೆಯಲ್ಲಿ 'ಸಂಮಾನ ಪತ್ರ' ಎನ್ನುವುದೂ ಹೊಸತೇ. ಆ ಹೊತ್ತಲ್ಲಿ ನನಗೆ ಮಿತ್ರ ಭಾಸ್ಕರ ರೈ ಕುಕ್ಕುವಳ್ಳಿಯವರ ನೆರವಿತ್ತು. ಬಹುಶಃ ಅವರೇ ಚನಿಯ ನಾಯ್ಕರ ಅಭಿನಂದನಾ ಭಾಷಣ ಮಾಡಿದ್ದರು. ಮಲ್ಲಿಗೆಯ ಹಾರ, ಹಣ್ಣುಹಂಪಲು, ಶಾಲು, ಸ್ಮರಣಿಕೆ, ಗುಣಕಥನ ಫಲಕದೊಂದಿಗೆ ಭಾಗವತರನ್ನು ಸಾರ್ವಜನಿಕರ ಮುಂದೆ ಸಂಮಾನಿಸಿದಾಗ ಸಾವಿರಾರು ಮಂದಿ ಕಣ್ಣು ತುಂಬಿಕೊಂಡರು. ಆಗ ಕೈಯಲ್ಲೊಂದು ರೀಲು ಕ್ಯಾಮರಾ ಇದ್ದುಬಿಟ್ಟರೆ ಮರ್ಯಾದೆ ಇಮ್ಮಡಿ! ಯಾರಿಂದಲೋ ಎರವಲು ಪಡೆದ ಕ್ಯಾಮರಾದೊಂದಿಗೆ ಮರ್ಯಾದಿ ಪಡೆಯುವ 'ದುರ್ಯೋಗ' ನನ್ನದಾಗಿತ್ತು.
                ಇಲ್ಲಿ ಜರುಗಿದ ಸಂಮಾನಕ್ಕೆ ನಗದಿನ ಸ್ಪರ್ಶವಿಲ್ಲ. ಕೆಲವು ಅಭಿಮಾನಿಗಳು ಉಡುಗೊರೆಯನ್ನು ಭಾಗವತರಿಗೆ ನೀಡಿದ್ದರು. ಸಂಮಾನದ ಸುದ್ದಿಯು ಮಾಧ್ಯಮಗಳಲ್ಲಿ ಬಂದಾಗ ಹೀಗೂ ಸಾಧ್ಯವಾ ಎಂದು ಕಣ್ಣರಳಿಸಿದವರು ಅನೇಕ ಮಂದಿ. ಹಿರಿಯ ಭಾಗವತರನ್ನು ಸಂಮಾನಿಸಿದ ತೃಪ್ತಿ ಸಂಘಕ್ಕಿತ್ತು. ಆ ಕಾಲಘಟ್ಟದಲ್ಲಿ ಅದೊಂದು ದೊಡ್ಡ ಸುದ್ದಿ. ಭಾಗವತ ಚನಿಯರನ್ನು ಕಂಡಾಗಲೆಲ್ಲಾ ಬಹುತೇಕ ಅಭಿಮಾನಿಗಳು ಸಂಮಾನದ ಸುದ್ದಿಯನ್ನೇ ಮಾತನಾಡುತ್ತಿದ್ದರು. ಬಹುಶಃ ಅಲ್ಲಿ ನಡೆದ ಸಂಮಾನಕ್ಕಿಂತಲೂ, ಸಂಮಾನದ ಸುದ್ದಿ ಮಾತನಾಡುವುದಿದೆಯಲ್ಲಾ, ಅದೇ ಒಂದು ದೊಡ್ಡ ಸಂಮಾನ.
                ೨೦೧೬ ಜೂನ್ ಮೊದಲ ವಾರ ಮಂಗಳೂರಿನಲ್ಲಿ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಸಮಾರಂಭದಲ್ಲಿ ಅಭಿಮಾನಿಗಳು ಹಾರಾರ್ಪಣೆ ಮಾಡುತ್ತಿದ್ದಾಗ ಚನಿಯ ನಾಯ್ಕರ ಅಂದಿನ ಸಂಮಾನ ನೆನಪಾಯಿತು. ಚನಿಯರು ಪದ್ಯಾಣರಿಗೆ ಗುರುಸದೃಶ. ಅವರ ಭಾಗವತಿಕೆಗೆ ಪದ್ಯಾಣರು ಮದ್ದಳೆ, ಚೆಂಡೆ ಸಾಥ್ ಆಗಿದ್ದರು. ಬಳಿಕ ಗಣಪತಿ ಭಟ್ಟರು ಸುರತ್ಕಲ್ ಮೇಳ ಸೇರಿದರು. ಖ್ಯಾತ ಕಲಾವಿದರಾದರು. ಪದ್ಯಾಣರ 'ಪದಯಾನ', ರಘುರಾಮಾಭಿವಂದನಮ್, ಪಟ್ಲ ಪೌಂಡೇಶನ್ನಿನ ಕಾರ್ಯಕ್ರಮಗಳು, ಉಡುಪಿ ಕಲಾರಂಗದ ಕಾರ್ಯಹೂರಣಗಳು, ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಗೌರವ.. ಹೀಗೆ ಬಹಳ ಅರ್ಥವತ್ತಾಗಿ ನಡೆದಿರುವುದು, ನಡೆಯುತ್ತಿರುವುದು ಇತಿಹಾಸ ಮತ್ತು ಸಂಭ್ರಮ.
                   ಹಿಂದಿನದಕ್ಕೆ ಹೋಲಿಸಿದಾಗ ಆಗಿನ ಸಂಮಾನಕ್ಕೂ, ಈಗಿನ (ಕೆಲವು) ಸಂಮಾನಕ್ಕೂ - ಕೊಡುವ ವಸ್ತುವಿನಲ್ಲಲ್ಲ - ವ್ಯತ್ಯಾಸಗಳಿವೆ. ಭಾವ, ಭಾವನೆಯಲ್ಲೂ ಬದಲಾವಣೆಗಳಾಗಿವೆ. ಕಲಾಪಗಳ ವಿನ್ಯಾಸದಲ್ಲೂ ಪರಿಷ್ಕಾರಗಳಾಗಿವೆ. ಆರಂಭದಲ್ಲಿ ನಿರೂಪಿಸಿದ ಪ್ರಶಸ್ತಿ, ಸಂಮಾನ, ಗೌರವಾರ್ಪಣೆ, ಪುರಸ್ಕಾರ.. ಈ ನಾಲ್ಕು ಪದಗಳು ಒಂದೇ ಅಲ್ಲ. ಅವು ಸ್ಫುರಿಸುವ ಅರ್ಥವ್ಯಾಪ್ತಿಯಲ್ಲೇ ಕಲಾಪಗಳು ನಡೆಯುವಂತಾಗಬೇಕು. ಬದ್ಧತೆಗೆ ಒಳಗಾಗಬೇಕು. ಹೀಗೆಂದಾಗ 'ಅರ್ಥವ್ಯಾಪ್ತಿಯನ್ನು ನಿರ್ಧರಿಸುವವರಾರು?' ಎನ್ನುವ ಚೋದ್ಯ ಕಾಡಿತು!




 

ಗಾನಗಂಧರ್ವನ ಪದಯಾನ


                 ನಾಲ್ಕು ದಶಕಕ್ಕೂ ಮೀರಿದ ಯಕ್ಷ ಯಾನ. ಯಕ್ಷಗುರು ಮಾಂಬಾಡಿ ನಾರಾಯಣ ಭಟ್ಟರ ಶಿಷ್ಯ. ಶೇಣಿ, ಸಾಮಗರಂತಹ ಉದ್ಧಾಮರ ಮಾರ್ಗದರ್ಶನ. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು, ದಿವಾಣ ಭೀಮ ಭಟ್ಟ ಮೊದಲಾದ ಪ್ರಚಂಡ ಹಿರಿಯರೊಂದಿಗೆ ಹದವಾದ ನಾದಪಾಕ. ಅಗರಿಯವರ ರಂಗ ನಿರ್ದೇಶನದ ಉತ್ತರಾಧಿಕಾರಿ. ಸುರತ್ಕಲ್ ಮೇಳಕ್ಕೆ ಶಾರೀರ ಬಲದಿಂದ ಮಾನ-ಸಂಮಾನವನ್ನು ಒದಗಿಸಿಕೊಟ್ಟವರು.  ಬದ್ಧತೆಯ ಬದುಕಿಗೆ ಗೌರವ ತಂದವರು.
              ಇದು ಭಾಗವತ ಪದ್ಯಾಣ ಗಣಪತಿ ಭಟ್ಟರ (Padyana Ganapathi Bhat) ಗುಣ-ಕಥನ. ಯಕ್ಷಗಾನಕ್ಕೆ ಪೂರ್ತಿ ಸಮರ್ಪಿತ. ಬದುಕು ಸಮರ್ಪಿತವಾಗದ್ದಿರೆ ವಶವಾಗುವುದೆಂತು? ಗಣಪತಿ ಭಟ್ಟರು ರಂಗಕ್ಕೆ ಶರಣಾಗಿದ್ದಾರೆ. ಶರಣಾಗುವುದು ಇವರಿಗೆ ಸ್ವ-ಭಾವ. ಶರಣಾಗತನನ್ನು ಮೇಲೆತ್ತುವುದು ರಂಗದ ಭಾವ. ಹಾಗಾಗಿ ನೋಡಿ, ಹಲವು ಶೈಲಿ, ಮಟ್ಟುಗಳ ಮಧ್ಯೆ 'ಸ್ವ-ಶೈಲಿ'ಯ ರೂಪೀಕರಣ. ಬಲಿಪ, ಕಡತೋಕ, ಅಗರಿ.. ಯಂತಹ ಪ್ರಸಿದ್ಧ ಶೈಲಿಗಳ ಸಾಲಿಗೆ ಪದ್ಯಾಣ ಶೈಲಿಯ ಪೋಣಿಕೆ.
ಪೋಣಿಕೆಯಾದ ಸುವರ್ಣ ಪುಷ್ಪ ಬಾಡಿಲ್ಲ, ಬಾಡುವುದಿಲ್ಲ. ಬಾಡಿದರೆ ಸುವರ್ಣವಾಗುವುದು ಹೇಗೆ? ಸುವರ್ಣದಂತೆ ಕೋರೈಸದ, ಆದರೆ ಮನಸೆಳೆಯುವ, ಮನದೊಳಗೆ ಇಳಿಯುವ, ಇಳಿದು ಪರಿಣಾಮ ಬೀರುವ ಪದ್ಯಾಣರ ಹಾಡಿನ ನಾದತೆಯು ಅನ್ಯಾದೃಶ. ಆ ನಾದಕ್ಕೊಂದು ಮನಸ್ಸಿದೆ. ಭಾಷೆಯಿದೆ. ಹಾಗಾಗಿ ನೋಡಿ, ಪದ್ಯಾಣರು ಹಾಡಿದರೆಂದರೆ ಭಾವ ನಲಿಯುತ್ತದೆ. ಒಂದು ಭಾಗವತಿಕೆ ಇಷ್ಟು ಪರಿಣಾಮ ನೀಡಿದರೆ ಸಾಕಲ್ವಾ.
               ಬಾಲಕ ಗಣಪತಿ, ಮನೆಗೆ ಭಾರ! ಶಾಲೆಗೆ ಬಾರ. ಉತ್ತಮಿಕೆ ದೂರ. ತನಗೆ ತಾನೇ ಭಾರ! ಇದು ಧರ್ಮಸ್ಥಳದಲ್ಲಿ ಹಗುರವಾಯಿತು. ಗುರು ಮಾಂಬಾಡಿಯವರು ಹದಗೊಳಿಸಿದರು. ಮನದೊಳಗೆ ಯಕ್ಷಗಾನವನ್ನು ಇಳಿಸಿದರು. ಅದು ರೂಪು ಪಡೆಯಿತು. ರೂಪಕ್ಕೆ ಚೆಲುವು ಕೊಟ್ಟರು. ಸೊಗಸು ಹೊಸೆಯಿತು. ಮೂರುವರೆ ತಿಂಗಳ ಕಲಿಕೆಯಲ್ಲಿ 'ಭರವಸೆ'ಯೊಂದು ಚಿಗುರಿತು. ಅದು ಸಸಿಯಾಗಿ ಹೆಮ್ಮರವಾಯಿತು.
               ಪದ್ಯಾಣ ಪುಟ್ಟುನಾರಾಯಣ ಭಾಗವತರ ಮೊಮ್ಮಗ ಗಣಪತಿ ಭಟ್. ತಂದೆ ತಿರುಮಲೇಶ್ವರ ಭಟ್. ಪದ್ಯಾಣದಿಂದ ಕಲ್ಮಡ್ಕದ ಗೋಳ್ತಾಜೆಯಲ್ಲಿ ವಸತಿ. ಮನೆಯೊಳಗೊಂದು ಭರವಸೆಯ ಸಸಿ ಮೊಳಕೆಯೊಡೆಯುವುದು ಯಕ್ಷಗಾನದ ಸಂಕಲ್ಪ. ಅದು ಇಡೀ ಕುಟುಂಬದ ಯಕ್ಷಾರಾಧನೆಯ ಫಲ. ಹಿರಿಯರ ಹರಕೆ.
              ಸುರತ್ಕಲ್ ಮೇಳದಿಂದ ನಾದದ ಬದುಕು. ಹೊಟ್ಟೆಪಾಡಿಗಲ್ಲವೇ ಅಲ್ಲ. ಸಮಯ ಕೊಲ್ಲಲಂತೂ ಅಲ್ಲ. ಮಾಂಬಾಡಿಯವರು ಮನದೊಳಗೆ ಇಳಿಸಿದ ಕಲೆಯ ತೇವ ಆರಬಾರದಲ್ಲಾ. ಆ ತೇವವೇ ತನ್ನ ಬದುಕಿನ ಅಮೃತವೆಂದು ಮನದಟ್ಟಾಯಿತು. ಅಗರಿ ರಘುರಾಮ ಭಾಗವತರು ಹಸಿದ ಗಣಪತಿ ಭಟ್ಟರಿಗೆ ಬಡಿಸುತ್ತಾ ಬಂದರು. ಜಾಗೃತೆಯಿಂದ ಉಂಡರು. ಆದರೆ ಮುಕ್ಕಲಿಲ್ಲ! ಉಂಡದ್ದೆಲ್ಲಾ ಅಮೃತವಾಗುವಂತೆ ಯತ್ನಿಸಿದರು. ಸಾಧಿಸಿದರು.
              ಯಕ್ಷಾಗಾನ ಭೀಷ್ಮ ಶೇಣಿ ಗೋಪಾಲಕೃಷ್ಣರ ನಲ್ಮೆಯ ಭಾಗವತರಾದರು. ರಾಗ, ತಾಳ, ಲಯ, ಭಾವದ ಭಾಷೆ, ಭಾಷೆಯ ಲಯ, ಪಾತ್ರದೊಳಗಿನ ಮನಸ್ಸು, ಮನಸ್ಸು ಸ್ಫುರಿಸುವ ರಸ.. ಛೇ... ಒಂದೇ, ಎರಡೇ.. ಶೇಣಿಯವರು ಮೊಗೆಮೊಗೆದು ಕೊಟ್ಟರು. ಆಪೋಶನ ಮಾಡಿದರು. ಹಾಗಾಗಿ ನೋಡಿ, ಪದ್ಯಾಣರಲ್ಲಿ ಐವತ್ತಕ್ಕೂ ಮಿಕ್ಕಿ ರಾಗಗಳು ರಸಸೃಷ್ಟಿ ಮಾಡುತ್ತವೆ!
                ಮಾಂಬಾಡಿಯವರು ಯಕ್ಷಾಕ್ಷರ ಕಲಿಸಿದರು. ಅಗರಿಯವರು ಪದ ಜೋಡಿಸಲು ಹೇಳಿಕೊಟ್ಟರು. ವಾಕ್ಯವಾಗಿಸುವ ಜಾಣ್ಮೆಯನ್ನು ಶೇಣಿಯವರಿಂದ ಆರ್ಜಿಸಿದರು. ಅಕ್ಷರವಾಗಿ, ಪದವಾಗಿ, ವಾಕ್ಯವಾಗಿ ಒಂದು ಕಾಲಘಟ್ಟದ ಯಕ್ಷ ಧ್ವನಿಯಾಗಿ ಹೊರಹೊಮ್ಮಿದರು. ಅವರ ಚಿಕ್ಕಪ್ಪ ಪದ್ಯಾಣ ಶಂಕರನಾರಾಯಣ ಭಟ್ ಮನತುಂಬಿ ಹೇಳುತ್ತಾರೆ, ಗಣಪತಿ ಭಟ್ಟರು ಪದ್ಯಾಣ ಮನೆತನಕ್ಕೆ ಹೆಸರು ತಂದಿದ್ದಾರೆ. ಅಲ್ಲಿಂದ  ಹೆಸರಿನೊಂದಿಗೆ ಊರು ಹೊಸೆಯಿತು. ಆ ಊರು ಯಕ್ಷಗಾನ ಪದಕೋಶದೊಳಗೆ ನುಸುಳಿತು. ಭಾಗವತಿಕೆಗೆ ಅನ್ವರ್ಥನಾಮವಾಯಿತು.
               ಪದ್ಯಾಣ ಮತ್ತು ಸುರತ್ಕಲ್ ಮೇಳ - ಎರಡನ್ನೂ ಬಿಡಿಬಿಡಿಯಾಗಿ ನೋಡುವಂತಿಲ್ಲ. ಮಿಳಿತವಾದ ಪದಗಳು. ರಾಜಾಯಯಾತಿ, ನಾಟ್ಯರಾಣಿ ಶಾಂತಲಾ, ಕಡುಗಲಿ ಕುಮಾರ ರಾಮ, ಸತಿ ಶೀಲವತಿ, ಪಾಪಣ್ಣ ವಿಜಯ.. ಮೊದಲಾದ ಭಾವಸ್ಪರ್ಶದ, ಮನಸ್ಪರ್ಶದ ಕಥಾನಕಗಳ ಯಶದ ಹಿಂದೆ ಪದ್ಯಾಣದ ಅಜ್ಞಾತ 'ಕೆಣಿ'ಯಿದೆ. ಆಧುನಿಕ ಪ್ರಸಂಗಗಳಿಗೆ ಪೌರಾಣಿಕದ ಅಚ್ಚಿನಲ್ಲಿ ಹೊಸ ವಿನ್ಯಾಸ ನೀಡಿದ ಮೇಳದ ಎಲ್ಲಾ ಕಲಾವಿದರ ಶ್ರಮ. ಸುರತ್ಕಲ್ ಮೇಳ ಹೋದಲ್ಲೆಲ್ಲಾ ಟೆಂಟ್ ಭರ್ತಿ. ಕೋಶವೂ ಭರ್ತಿ. ಮುಗಿ ಬೀಳುವ ಪ್ರೇಕ್ಷಕರು.
               ಸುರತ್ಕಲ್ ಮೇಳದ ತಿರುಗಾಟವು ಸುವರ್ಣ ದಿನಮಾನಗಳು. ರಂಗದಲ್ಲಿ ವಿಜೃಂಭಿಸುತ್ತಿರುವ ಹೊಸ ಶೈಲಿಯೊಂದು ಪದ್ಯಾಣರನ್ನು ರಂಗಕ್ಕೆ ಅನಿವಾರ್ಯ ಮಾಡಿಬಿಟ್ಟಿತು. ಇದು ನಿಜಾರ್ಥದ ಅದ್ಭುತ. ಮಂಗಳಾದೇವಿ, ಕರ್ನಾಟಕ, ಎಡನೀರು ಮೇಳಗಳ ತಿರುಗಾಟ. ಬಳಿಕ ಹತ್ತು ವರುಷ ಹೊಸನಗರ ಮೇಳದಲ್ಲಿ ವ್ಯವಸಾಯ.
               ಮಾತಿಗೆ ಸಿಕ್ಕಾಗ ಹೇಳಿದರು, ನಾನೀಗ ಮೊದಲಿನ ಪದ್ಯಾಣ ಅಲ್ಲ! ವಯಸ್ಸಾಯಿತು. ಅರುವತ್ತು ಮೀರಿತು. ಹಿಂದಿನಂತೆ ಹಾಡಲು ಸಾಧ್ಯವಾ? ಅಭಿಮಾನಿಗಳಿಗೂ ಗೊತ್ತಿದೆ. ಜನರು ನನ್ನ ಹಾಡುಗಾರಿಕೆಯನ್ನು ತಿರಸ್ಕರಿಸಲಿಲ್ಲ ದಿಟ. ಪದ್ಯಾಣರಿಗೆ ವಿಶ್ವಾಸವಿದೆ. ರಂಗಕ್ಕೆ ಎಷ್ಟೇ ಆಧುನಿಕತೆ ಬಂದರೂ ಅದರ ಮಧ್ಯೆ ಪದ್ಯಾಣ ಶೈಲಿ ಈಗಲೂ ವಿಜೃಂಭಿಸುವುದಕ್ಕೆ ಕಾರಣವೇನು? ಗಟ್ಟಿಗರ ಮಧ್ಯೆ ಗಟ್ಟಿಯಾಗಿ ಬೆಳೆದ ಬೌದ್ಧಿಕತೆ. ರಂಗಾನುಭವ.
             ಈಗಲೂ ಆ ಸ್ವರಕ್ಕೆ ಮಹತ್ತಿದೆ. ಬಲಿಪರು, ಅಗರಿಯವರಂತೆ 'ಪಾರಂಪರಿಕ'ವಾದ ಯಕ್ಷ ಶೈಕ್ಷಣಿಕ ಹಿನ್ನೆಲೆಯಿದೆ. ರಂಗದಲ್ಲಿ ಗಳಿಸಿದ ಅನುಭವ ಇದೆಯಲ್ಲಾ, ಅದು ಒಂದು ವಿಶ್ವವಿದ್ಯಾನಿಲಯದ ಕಲಿಕೆಗೆ ಸಮ. ಪದ್ಯಾಣರು ಈಗಲೂ ಮುಂಚೂಣಿಯಲ್ಲಿದ್ದಾರೆ.
                ಪದ್ಯಾಣರಿಗೆ ಅರುವತ್ತರ ಸಂಭ್ರಮ. ತನ್ನ ಪದಯಾನದತ್ತ ಒಂದು ತಾಣದಲ್ಲಿ ನಿಂತು ಹಿಂತಿರುಗಿ ನೋಡುವ ಕಾಲಘಟ್ಟ. ಒಂದೊಂದು ಕಾಲಘಟ್ಟದಲ್ಲಿ ಎಲ್ಲರೂ ಸಂತೋಷದಿಂದ ನಿಲ್ಲುತ್ತಾರೆ. 'ಸಂಭ್ರಮ, ವೈಭವ'ಗಳನ್ನು ಹಂಚುತ್ತಾರೆ. ಆದರೆ ಯಾರೂ ಸಾಗಿ ಬಂದ ಪಥವನ್ನು ಹಿಂತಿರುಗಿ ನೋಡುವುದಿಲ್ಲ. ಪದ್ಯಾಣರು ನೋಡಿದ್ದಾರೆ. ನೋಡುತ್ತಿದ್ದಾರೆ. ಅವರ ಸುತ್ತ ನಾದಗಳು ಸುತ್ತಿವೆ, ಸುತ್ತುತ್ತಿವೆ. ಶೈಲಿಯೊಳಗೆ  ನಾಲ್ಕು ದಶಕಗಳ ಕಾಲ ಸಕ್ರಿಯವಾಗಿದ್ದ ನಾದಗಳು, ಗಣಪಣ್ಣ ನಿಂತಾಗ ದಿಗಿಲುಗೊಂಡಿವೆ! ಅವಕ್ಕೆ ಸಮಾಧಾನ ಹೇಳಿದ್ದಾರೆ ಬಿಡಿ.
                ಒಂದು ಕೀಟಲೆ ಪ್ರಶ್ನೆ ಎಸೆದೆ - 'ನಿಮ್ಮ ಪದ್ಯ ಆಧುನಿಕಗೊಂಡಿದೆ, ಹೌದೇ?'. ಹೌದು, ಒಪ್ಪಿಕೊಳ್ಳುತ್ತೇನೆ. ಮೇಳದ ಹಿತದೃಷ್ಟಿಯ ಮುಂದೆ ಸ್ವಂತದ್ದಾದ ಕಾಮಿತಗಳು ಗೌಣ. ಒಬ್ಬನೇ ಮೆರೆಯಬೇಕು ಎನ್ನುವ ಜಾಯಮಾನ ನನ್ನಲ್ಲಿಲ್ಲ. ನಾವು ಮೇಳವನ್ನು ಒಪ್ಪಿದ್ದೇವೆ. ನಮ್ಮನ್ನು ಮೇಳ ಒಪ್ಪಿದೆ. ಜನರು ಒಪ್ಪಿದ್ದಾರೆ. ಒಪ್ಪಿತ ಬದುಕಿನಲ್ಲಿ ಆಗಬೇಕಾದುದು ಏನು? ಪ್ರದರ್ಶನ ಕಳೆಗಟ್ಟಬೇಕು. ಅಭಿಮಾನಿಗಳ ಆಕ್ಷೇಪ ಸಹಜ. ಆದರೆ ಹತ್ತು ಪದ್ಯದಲ್ಲಿ ಎರಡು ಪದ್ಯವನ್ನಾದರೂ ಹಳೆ ಶೈಲಿಯಲ್ಲಿ ಹೇಳದೆ ಬಿಡುವುದಿಲ್ಲ!
                ಪದ್ಯಾಣ ಗಣಪತಿ ಭಟ್ಟರು ಅರ್ಥಪೂರ್ಣವಾಗಿ ಅರುವತ್ತರ ಖುಷಿಯನ್ನು ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಅವರ ಅಭಿಮಾನಿಗಳು 'ಪದಯಾನ' ಎನ್ನುವ ಸಮಿತಿಯನ್ನು ರೂಪುಗೊಳಿಸಿದ್ದಾರೆ. ೨೦೧೬ ಜೂನ್ 4, 5ರಂದು ಮಂಗಳೂರಿನ ಪುರಭವನದಲ್ಲಿ ದಿನಪೂರ್ತಿ ಕಾರ್ಯಕ್ರಮ. ಪದ್ಯಾಣರಿಗೆ ಗೌರವಾರ್ಪಣೆ,  'ಪದಯಾನ' ಗೌರವ ಗ್ರಂಥ ಸಮರ್ಪಣೆ. ಸಾಕ್ಷ್ಯಚಿತ್ರ ಅನಾವರಣ. ತಾಳಮದ್ದಳೆ, ಗಾನವೈಭವ, ನೃತ್ಯ ವೈಭವ, ಪ್ರದರ್ಶನಗಳು.
               ಈ ಸಂದರ್ಭದಲ್ಲಿ ಪದ್ಯಾಣ ಕುಟುಂಬವು ತನ್ನ ಅಜ್ಜ ಪುಟ್ಟು ನಾರಾಯಣ ಭಾಗವತರ ನೆನಪಿನಲ್ಲಿ 'ಪದ್ಯಾಣ ಪ್ರಶಸ್ತಿ'ಯನ್ನು ಸ್ಥಾಪಿಸಿದೆ. ಅದರ ಮೊದಲ ಪ್ರಶಸ್ತಿಯನ್ನು ಅಗರಿ ರಘುರಾಮ ಭಾಗವತರಿಗೆ ಪ್ರದಾನಿಸಲಿದ್ದಾರೆ.
(udayavani/kalaavihar)









ಕಲೆಯ ಬಲೆಯೊಳಗೆ 'ಭಾಗವತ' ಕುಟುಂಬ

 ಸ್ವಸ್ತಿಕ್ ಪದ್ಯಾಣರಿಂದ ಕಲಾಪ ನಿರ್ವಹಣೆ
ಪದ್ಯಾಣ ಕುಟುಂಬದ 'ಕಲಾ-ಮಿಳಿತ'
              
            ಬದುಕು ಕಲೆಯಾಗಬೇಕು. ಆದರೆ ಬದುಕಿಗೆ 'ಕಲೆ' ಸೋಂಕಬಾರದು! ಎರಡೂ ವಾಕ್ಯಗಳಲ್ಲಿ ಬರುವ 'ಕಲೆ' ಶಬ್ದವು ಸ್ಫುರಿಸುವ ಅರ್ಥ, ಭಾವಗಳು ಭಿನ್ನ. ಬದುಕು ಕಲೆಯಾಗದಿದ್ದರೆ, ಕಲೆಯಾಗಿಸದಿದ್ದರೆ ಜಾಣ್ಮೆಯ ಒಳಸುರಿಗಳು ಮೌನವಾಗುತ್ತವೆ. ಇವು ಸದ್ದಾಗದಿದ್ದರೆ 'ಇದ್ದೂ ಇಲ್ಲದಂತಿರುವುದು' ಅಷ್ಟೇ.
             ಬದುಕಿನಲ್ಲಿ ಕಲೆಯ ಮಿಳಿತ ಸುಲಭವಲ್ಲ. ಪಾರಂಪರಿಕ ಹಿನ್ನೆಲೆ, ಮನೆಯ ವಾತಾವರಣ, ಮನದ ಸಾಧ್ಯತೆ-ಸಿದ್ಧತೆ, ಪ್ರೀತಿ, ಆರಾಧನೆಗಳು ಪೂರಕ. ಎಷ್ಟೋ ಮಂದಿ ಗೊಣಗಾಡುವುದನ್ನು ಕೇಳಿದ್ದೇನೆ, ಅಯ್ಯೋ, ನಮ್ಮ ಕಾಲಕ್ಕೆ ಸಾಕು. ಮಕ್ಕಳ ಕಾಲಕ್ಕೆ ಇದು ಬೇಡ,. ಕಲಾನೋಟದಲ್ಲಿ ನೋಡಿದಾಗ ಈ ನಿಲುವು ಸಹ್ಯವಾಗುವುದಿಲ್ಲ. ಆದರೆ ದಶಕಕ್ಕೂ ಮಿಕ್ಕಿ ಕಲೆಯಲ್ಲಿ ತೊಡಗಿಸಿದ ಕಲಾವಿದರ ಅನುಭವ ಹೀಗಿರುವಾಗ ಅದರ ಹಿಂದಿನ ನೋವಿನ ಬದುಕು ಅರ್ಥವಾಗುತ್ತದೆ. ಆಗದಿದ್ದರೆ  ಅರ್ಥ ಮಾಡಿಕೊಳ್ಳಬೇಕು.
              ಯಕ್ಷಗಾನವನ್ನೇ ತೆಗೆದುಕೊಳ್ಳೋಣ.  ಪ್ರಕೃತ ಸ್ಥಿತಿಯಲ್ಲಿ ಕುಟುಂಬವನ್ನು ಸಾಕಲು ಯಕ್ಷಗಾನಕ್ಕೆ ಕಷ್ಟವಾಗಲಾರದು. ಬಣ್ಣವನ್ನೇ ನಂಬಿದ ಎಷ್ಟೋ ಕುಟುಂಬಗಳಿಲ್ವಾ. ಅದನ್ನೇ ನೆಚ್ಚಿಕೊಂಡ ನೂರಾರು ಕಲಾವಿದರ ಬಾಳು 'ತೊಂದರೆಯಿಲ್ಲ' ಎನ್ನುವಷ್ಟು ಹಸನಾಗಿದೆ. ಇದು ಒಂದು ವಿಭಾಗದ ಕಲಾವಿದರ ಸ್ಥಿತಿ. ಮತ್ತೊಂದು ವಿಭಾಗಕ್ಕೆ ಹೊರಳಿದರೆ, ಮೇಳದ ತಿರುಗಾಟದ ಬಳಿಕ ಐದಾರು ತಿಂಗಳು ಮನೆಯಲ್ಲೇ ಕಳೆಯುವ (ಅವಕಾಶವಿಲ್ಲದೆ) ಕಲಾವಿದರು. ಇವರಿಗೆ ತಾರಾಮೌಲ್ಯ ಏನೆಂಬುದೇ ಗೊತ್ತಿಲ್ಲ. ಗುಂಪುಗಳು, ಇಸಂಗಳು, ಲಾಬಿಗಳ ಪರಿಚಯ.. ಊಹೂಂ. ಆಟ ಇಲ್ಲದ ಸಮಯದಲ್ಲಿ ಇತರ ಕೆಲಸಗಳನ್ನು ಮಾಡುತ್ತಾ ಜೀವಿಸುತ್ತಾರೆ. ಇವರಿಗೆ 'ಯಕ್ಷಗಾನದ ಹೆಸರಿನಲ್ಲಿ' ಏನೇನೋ ಮಾಡಲು ಗೊತ್ತಿಲ್ಲ, ಬರುವುದಿಲ್ಲ. ಈ ಎರಡೂ ವಿಭಾಗಗಳಿಗೆ ನಿಲುಕದ ಬೆರಳೆಣಿಕೆಯ ಕಲಾವಿದರು ವರುಷವಿಡೀ ಬ್ಯುಸಿ! ಖುಷಿಯ ವಿಚಾರ.
               ವಿಷಯ ಎಲ್ಲೋ ಹೊರಳಿತಲ್ಲಾ. ಬದುಕಿನಲ್ಲಿ ಕಲೆ ಮಿಳಿತವಾಗಬೇಕು ಎನ್ನುವ ವಿಷಯದಲ್ಲಿ ತೊಡಗಿದ್ದೆ. ಅದು ಮಿಳಿತವಾಗದಿದ್ದರೆ 'ಸಂಬಂಧ'ವೇ ಇಲ್ಲದಂತೆ ಇದ್ದುಬಿಡುತ್ತೇವೆ. ರಂಗದಲ್ಲಿದ್ದಷ್ಟು ಹೊತ್ತು 'ಕಲಾವಿದ' ಅಷ್ಟೇ. ರಂಗವಿಳಿದರೆ ಕಲೆಗೂ, ಕಲಾವಿದನಿಗೂ ಸಂಪರ್ಕವೇ ಇಲ್ಲ! ಈ ಮನಃಸ್ಥಿತಿಯನ್ನು ಕಲೆಯೂ ಸ್ವೀಕರಿಸುವುದಿಲ್ಲ. ಆದರೆ ನಮ್ಮೊಳಗಿನ 'ಕಲಾವಿದ' ಸದಾ ಜಾಗೃತನಾಗಿದ್ದರೆ ನಮಗರಿವಿಲ್ಲದೆ ಬದುಕೂ ಕಲೆಯಾಗುತ್ತದೆ. ಹೀಗೆ ಬದುಕನ್ನು ಕಲೆಯಾಗಿಸಿದ ಉದಾಹರಣೆ 'ಪದ್ಯಾಣ ಕುಟುಂಬ' ಮುಂದಿದೆ.
                 ಪದ್ಯಾಣ ಕುಟುಂಬ - ಎಂದಾಕ್ಷಣ ಅದರ ಹಿರಿದಾದ ವ್ಯಾಪ್ತಿ ಧುತ್ತೆಂದು ನಿಲ್ಲುತ್ತದೆ. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಒಂದೆಡೆ ಉಲ್ಲೇಖಿಸುತ್ತಾರೆ, ಪದ್ಯಾಣ ಕುಟುಂಬವು ವಿದ್ಯಾವಂತರ ನೆಲೆವೀಡು. ಇಲ್ಲಿ ಉನ್ನತ ವ್ಯಾಸಂಗವನ್ನು ಗೈದವರಿದ್ದಾರೆ. ಸರಕಾರ ಮತ್ತು ಸಾರ್ವಜನಿಕ ವಲಯಗಳಲ್ಲಿ ಉನ್ನತೋನ್ನತವಾಗಿರುವ ಹುದ್ದೆಗಳನ್ನು ಅಲಂಕರಿಸಿದವರಿದ್ದಾರೆ. ಅಧ್ಯಾಪಕರಿದ್ದಾರೆ. ಸಂಗೀತ ಶಿಕ್ಷಕರಿದ್ದಾರೆ. ಯಕ್ಷಗಾನ ಕಲಾವಿದರು - ಗುರುಗಳು, ಸಂಗೀತಗಾರರು, ಗಮಕಿಗಳು, ಕಲಾಭಿಮಾನಿಗಳು ಮತ್ತು ಕಲಾ ಪ್ರೋತ್ಸಾಹಕರಿರುವ ಈ ಕುಟುಂಬವು ಸಾಂಸ್ಕೃತಿಕವಾಗಿ ಔನ್ನತ್ಯವನ್ನು ಹೊಂದಿದೆ. ಸಂಗೀತ,  ಯಕ್ಷಗಾನಕ್ಕೆ ಪಾರಂಪರಿಕಾ ಕೊಡುಗೆಯನ್ನು ನೀಡಿರುವ ಕುಟುಂಬವಿದು.
                 ಈ ಕುಟುಂಬದ ಒಂದು ಕವಲಿಗೆ ಯಕ್ಷಗಾನ ಎನ್ನುವುದು ಜೀವ-ಭಾವ. ಭಾಗವತ ಪುಟ್ಟು ನಾರಾಯಣ ಭಾಗವತರ ಕುಟುಂಬದ ಎಲ್ಲಾ ಸದಸ್ಯರಲ್ಲೂ ಕಲಾವಾಹಿನಿ ಹರಿದಿದೆ. ಭಾಗವತಿಕೆ, ಚೆಂಡೆ, ಮದ್ದಳೆ, ಸಂಗೀತ, ಭಜನೆ, ನೃತ್ಯ, ಮೃದಂಗ, ವೇಷಗಾರಿಕೆ.. ಹೀಗೆ ಒಂದೊಂದು ಆಸಕ್ತಿಗಳು. ಈಚೆಗೆ ಮಂಗಳೂರಿನ ಪುರಭವನದಲ್ಲಿ ಪದ್ಯಾಣ ಗಣಪತಿ ಭಟ್ಟರ ಅರುವತ್ತರ ಸಂಭ್ರಮದ 'ಪದಯಾನ' ಜರುಗಿತ್ತು. ಸಂಪನ್ನವಾದ 'ಪದ್ಯಾಣ ವೈಭವ'ವು ಪ್ರೇಕ್ಷಕರಿಗೆ ಮುದ ನೀಡಿತ್ತು. ನಾವು ಹೀಗಿದ್ದೇವೆ, ನೀವು? ಎನ್ನುವ ಸಂದೇಶವನ್ನೂ ರವಾನಿಸಿತ್ತು.
                 ಪುಟ್ಟು ನಾರಾಯಣ ಭಾಗವತರ ಹಿರಿಯ ಪುತ್ರ ತಿರುಮಲೇಶ್ವರ ಭಟ್.  ನಾರಾಯಣ, ಪರಮೇಶ್ವರ, ಗಣಪತಿ, ಗೋಪಾಲಕೃಷ್ಣ ಮತ್ತು ಜಯರಾಮ - ಐವರು ಚಿರಂಜೀವಿಗಳು. ಮಧ್ಯಮನಾದ  ಗಣಪತಿ, ಈಗ ಪ್ರಸಿದ್ಧ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರು. ಇವರ ಚಿಕ್ಕಪ್ಪ ಹಿಮ್ಮೇಳದ ಭಾಷಾವಿದ ಪದ್ಯಾಣ ಶಂಕರನಾರಾಯಣ ಭಟ್. ಪದಯಾನದಲ್ಲಿ ಇಡೀ ಕುಟುಂಬದ ಕಲಾ ವೈಭವ ಸಾಕಾರಗೊಂಡಿತ್ತು. ಯಕ್ಷಗಾನವು ನಮ್ಮನ್ನು ಮನುಷ್ಯರನ್ನಾಗಿ ಮಾಡಿದೆ. ಮನುಷ್ಯತ್ವವನ್ನು ತುಂಬಿದೆ, ಎಂದು ಸ್ವಸ್ತಿಕ್ ಪದ್ಯಾಣ ಅಭಿಮಾನದಿಂದ ಆಡಿಕೊಂಡರು. ಇದೇನೂ ಗಂಟಲ ಮೇಲಿನ ಮಾತಲ್ಲ.
                 'ಪದ್ಯಾಣ ವೈಭವ'ದಲ್ಲಿ ಭಾಗವತ ಪದ್ಯಾಣ ಗಣಪತಿ ಭಟ್ಟರು ಕೇಂದ್ರ ಬಿಂದು. ಇವರ ನಾಲ್ವರು ಸಹೋದರರಿಗೂ ಯಕ್ಷಗಾನದ ಹಿಮ್ಮೇಳ ಕರಗತ. ಇವರೊಂದಿಗೆ ಚಿಕ್ಕಪ್ಪ ಶಂಕರನಾರಾಯಣ ಭಟ್, ಇನ್ನೋರ್ವ ಚಿಕ್ಕಪ್ಪನ ಮಗ ಚೈತನ್ಯಕೃಷ್ಣ ಪದ್ಯಾಣ ಇವರೂ ಸೇರಿಕೊಂಡಂತೆ ಗದಾಯುದ್ಧ ಪ್ರಸಂಗದ 'ಕಪಟ ನಾಟಕ ರಂಗ' ಪದ್ಯದ ಪ್ರಸ್ತುತಿ ಕಲಾಪದ ಹೈಲೈಟ್. ಚೆಂಡೆ, ಮದ್ದಳೆಯಲ್ಲಿ ಪದ್ಯಾಣ ಗೋಪಾಲಕೃಷ್ಣ ಭಟ್ (ಗಣಪತಿ ಭಟ್ಟರ ಚಿಕ್ಕಪ್ಪ), ಶಂಕರನಾರಾಯಣ ಭಟ್; ಮದ್ದಳೆಯಲ್ಲಿ ಸಹೋದರರಾದ ಪರಮೇಶ್ವರ  ಭಟ್, ಗೋಪಾಲಕೃಷ್ಣ ಭಟ್, ಜಯರಾಮ ಭಟ್; ಚಕ್ರತಾಳದಲ್ಲಿ ಹಿರಿಯಣ್ಣ ನಾರಾಯಣ ಭಟ್.
                  ಪದ್ಯಾಣರ ಪತ್ನಿ ಶೀಲಾಶಂಕರಿ. ಸೌಂದರ್ಯಲಹರಿಯನ್ನು ವಿವಿಧ ರಾಗಗಳಲ್ಲಿ ಪ್ರಸ್ತುತಪಡಿಸಿದ್ದರು. ಅರವಿಂದ ಪದ್ಯಾಣ, ಅಜಿತ್ ಪದ್ಯಾಣ, ತಿರುಮಲೇಶ್ವರೀ.. ಹೀಗೆ ವಿವಿಧ ಸದಸ್ಯರಿಂದ ವೈವಿಧ್ಯ ಕಲಾ ಪ್ರಸ್ತುತಿ. ಗಮಕ ವಾಚನದಲ್ಲಿ ಗಣಪತಿ ಪದ್ಯಾಣ ಪ್ರಸಿದ್ಧರು. ಮಾನಸ ರಾಮಚಂದ್ರ ಭಟ್ ಸಂಗೀತ ವಿದುಷಿ, ಅಧ್ಯಾಪಿಕೆ.
                  ಕುಟುಂಬದ ಒಬ್ಬೊಬ್ಬ ಸದಸ್ಯರಲ್ಲಿ ಕಲೆಯ ಸ್ಪರ್ಶವಿದೆ. ಬಹುತೇಕ ಎಲ್ಲರೂ ಬೇರೆ ಬೇರೆ ಉದ್ಯೋಗದಲ್ಲಿರುವವರು. ತಾವೆಲ್ಲಿ ನೆಲೆಯಾದರೂ ಅಲ್ಲಿ ಕಲೆಯ ಬಲೆಯನ್ನು ನೇಯ್ದು ಅದರೊಳಗೆ ಬದುಕನ್ನು ರೂಪಿಸಿರುವುದು ಹೆಗ್ಗಳಿಕೆ. ಪದಯಾನದಲ್ಲಿ ಪದ್ಯಾಣರ ಸೊಸೆ ತಿರುಮಲೇಶ್ವರೀ, ನಾನು ಈ ಮನೆಯ ಸೊಸೆಯಾಗಿ ಬಂದಿರುವುದು ಹೆಮ್ಮೆಯೆನಿಸುತ್ತದೆ, ಎಂದರು. ಪ್ರಕೃತ ಕಾಲಸ್ಥಿತಿಯಲ್ಲಿ ಹೀಗೆನ್ನಲು ಎಷ್ಟು ಮಂದಿ ಸೊಸೆಯಂದಿರಿಗೆ ಧೈರ್ಯ ಬಂದೀತು! ಇದು ಪದ್ಯಾಣ ಕುಟುಂಬ ಹಿರಿಮೆ. ಕಲೆಯ ಗರಿಮೆ.
(ಚಿತ್ರ : ದೇವಾನಂದ ಭಟ್ ಬೆಳುವಾಯಿ)

(ಪ್ರಜಾವಾಣಿ/ದಧಿಗಿಣತೋ ಅಂಕಣ)

"ನನ್ನ ಹಾಡುಗಾರಿಕೆಗೆ ಶೇಣಿಯವರು ಹೊಳಪನ್ನು ನೀಡಿದರು" - ಪದ್ಯಾಣ ಗಣಪತಿ ಭಟ್


           ತೆಂಕುತಿಟ್ಟು ಯಕ್ಷಗಾನದ ಭಾಗವತ - ಪದ್ಯಾಣ ಗಣಪತಿ ಭಟ್. ಯಕ್ಷಗುರು ದಿ.ಮಾಂಬಾಡಿ ನಾರಾಯಣ ಭಾಗವತರ ಶಿಷ್ಯ.  ಸುರತ್ಕಲ್, ಮಂಗಳಾದೇವಿ, ಕರ್ನಾಟಕ, ಎಡನೀರು, ಹೊಸನಗರ ಮೇಳಗಳಲ್ಲಿ ನಾಲ್ಕು ದಶಕಕ್ಕೂ ಮಿಕ್ಕಿದ ವ್ಯವಸಾಯ. ಯಾರದ್ದೇ ಮಾದರಿಯಾಗದೆ ಸ್ವ-ಶೈಲಿಯೊಂದನ್ನು ರೂಪಿಸಿದ ಭಾಗವತ. ಒಂದು ಕಾಲಘಟ್ಟದಲ್ಲಿ ಮಿಂಚಿನ ಸಂಚಾರವನ್ನುಂಟು ಮಾಡಿದ 'ಯಕ್ಷಮೇಘ!'
            ಪದ್ಯಾಣ ಗಣಪತಿ ಭಟ್ಟರ ಗಾಯನಕ್ಕೆ ಹೊಳಪನ್ನು ನೀಡಿದವರು ಕೀರ್ತಿಶೇಷ ಶೇಣಿ ಗೋಪಾಲಕೃಷ್ಣ ಭಟ್ಟರು. ಅವರೊಂದಿಗೆ ಕೂಟಾಟಗಳಲ್ಲಿ ಭಾಗವಹಿಸುತ್ತಾ ಅವಕಾಶಗಳನ್ನು ಆಪೋಶನ ಮಾಡಿಕೊಂಡವರು. ಶೇಣಿಯವರೊಂದಿಗಿನ ಒಡನಾಟದ ಕೆಲವು ಕ್ಷಣಗಳನ್ನು ಅವರ ಮಾತಿನಲ್ಲೇ ಕೇಳೋಣ.
                                         *****                                              *****

              ...ಸುರತ್ಕಲ್ ಮೇಳದಲ್ಲಿ 'ಸಂಗೀತಗಾರ' ಹೇಳಿಕೊಳ್ಳಲು ಹೆಮ್ಮೆಪಡುತ್ತಿದ್ದ ದಿನಮಾನಗಳು. ದಿನಗಳು ಸರಿದಂತೆ 'ಯಕ್ಷಗಾನಕ್ಕೂ ಆಳವಿದೆ! ಎಂಬ ಅರಿವು ಮೂಡುತ್ತಾ ಬಂತು. ಆಗ ಶೇಣಿ ಗೋಪಾಲಕೃಷ್ಣ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಬಣ್ಣದ ಮಾಲಿಂಗ, ಕೊಕ್ಕಡ ಈಶ್ವರ ಭಟ್, ಮಧೂರು ಗಣಪತಿ ರಾವ್.. ಮೊದಲಾದ ಕಲಾವಿದರಿಂದ ಮೇಳ ಸಂಪನ್ನವಾಗಿತ್ತು.. 'ಎಲ್ಲರಂತೆ ಇವರೂ ಕಲಾವಿದರು' ಎಂದಷ್ಟೇ ತಿಳಿದಿದ್ದೆ. ಐದು ವರುಷ ಹೀಗೆ ಕಳೆದಿತ್ತು.
              ನನ್ನ ಶ್ರದ್ಧೆ ಮತ್ತು ಪದ್ಯದ ಸೊಗಸುಗಾರಿಕೆಯನ್ನು ನೋಡಿಯೇ ಇರಬೇಕು, ಅಗರಿ ರಘುರಾಮ ಭಾಗವತರು ಪ್ರಸಂಗಗಳ ಪದ್ಯಗಳನ್ನು ಹೇಳಲು ಅನುವು ಮಾಡಿಕೊಟ್ಟರು. ರಾಗಜ್ಞಾನವನ್ನು ಕೇಳಿದ ಮೇಳದ ಯಜಮಾನ ವರದರಾಜ ಪೈಗಳು ಅಗರಿಯವರನ್ನು ಒಲಿಸಿದ್ದಿರಬೇಕು. ಹೀಗೆ ಅವಕಾಶ ಸಿಕ್ಕಾಗ ಶೇಣಿಯವರ ವೇಷಗಳಿಗೆ ಪದ್ಯ ಹೇಳುವ ಸಂದರ್ಭಗಳು ಒದಗಿದುವು.  ಉದಾ: 'ತಿರುಪತಿ ಕ್ಷೇತ್ರ ಮಹಾತ್ಮೆ' ಪ್ರಸಂಗದಲ್ಲಿ ಅವರ 'ಮಾಧವ ಭಟ್ಟ' ಪಾತ್ರ. ಇದರ ಪದ್ಯಗಳನ್ನು ತೋಚಿದಂತೆ ರಾಗಸಂಯೋಜಿಸಿ ಹೇಳುತ್ತಿದ್ದೆ.
                 ಒಂದಿವಸ ಹಗಲು ಅವರು ವಿಶ್ರಾಂತಿ ಪಡೆಯುವ ಚಾಪೆಯಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ಭಯ, ಭಕ್ತಿಯಿಂದ ಹೆದರಿ ಮುದುಡಿ ಕುಳಿತೆ. ಹಿಂದಿನ ಆಟಗಳಲ್ಲಿ ಹಾಡಿದ ಪದ್ಯವನ್ನು ಹೇಳಿಸಿದರು. ಬಳಸಿದ ರಾಗಗಳಿಗೆ ಬದಲಿ ರಾಗಗಳನ್ನು ಹಾಕಿ ಹಾಡಿ ತೋರಿಸಿದರು. ನಿಜಕ್ಕೂ ಅಚ್ಚರಿಯಾಯಿತು. ವೇಷಧಾರಿಗೆ ಹಾಡಲು ಬರುತ್ತದಾ?
             ಅವರಿಗೆ ತಾಳ, ರಾಗ, ರಂಗಮಾಹಿತಿ, ಯಾವ ದುಃಖಕ್ಕೆ ಯಾವ ರಾಗದಲ್ಲಿ ಹಾಡಬೇಕು ಎನ್ನುವ ಜ್ಞಾನವಿತ್ತು. ಅವರ ಪಾತ್ರದಲ್ಲಿ ಬರುವ ಪದ್ಯಗಳನ್ನು ಹೇಗೆ ಮತ್ತು ಯಾವ ರಾಗದಲ್ಲಿ ಹೇಳಬೇಕೆನ್ನುವ ಪಾಠವನ್ನು ಮಾಡಿದರು. ಶೇಣಿಯವರು ಹೇಗೆ ಪಾಠ ಮಾಡಿದರೋ ಅಂದು ರಾತ್ರಿಯ ಪ್ರದರ್ಶನದಲ್ಲಿ ಹಾಡಿ ಒಪ್ಪಿಸುತ್ತಿದ್ದೆ. ಒಂದೇ ವಾರದಲ್ಲಿ ಶೇಣಿಯವರ ಆ ಪಾತ್ರದ ಪದ್ಯಗಳು ಹಿಡಿತಕ್ಕೆ ಬಂದುವು.
               ಕೆಲವು ದಿವಸಗಳಲ್ಲಿ 'ರಾವಣ ವಧೆ' ಪ್ರಸಂಗ. ಶೇಣಿಯವರದು 'ರಾವಣ'ನ ಪಾತ್ರ.  'ಹರನೇ ಶಂಕರನೇ..' ಪದ್ಯವನ್ನು 'ಶುಭಪಂತುರಾವಳಿ' ರಾಗದಲ್ಲಿ ಹೇಳುತ್ತಿದ್ದೆ. ನಾಲ್ಕೈದು ದಿವಸ ಸಹಿಸಿದರು! ಇದನ್ನು 'ಆನಂದಭೈರವಿ' ರಾಗದಲ್ಲಿ ಹೇಳುವುದರಿಂದ ಪರಿಣಾಮ ಹೆಚ್ಚು ಎಂದರು. ಶೇಣಿಯವರ ದೃಷ್ಟಿಯಲ್ಲಿ ಅದು ರಾವಣನಿಗೆ ಅದು  ದುಃಖವಲ್ಲ. ಅವನಿಗಿರುವುದು ಚಿಂತೆ. ದುಃಖ, ಚಿಂತೆಯ ಸ್ಥಾಯಿಭಾವಗಳು ಬೇರೆ ಬೇರೆ. ಅವರು ಸೂಚಿಸಿದ 'ಆನಂದ ಭೈರವಿ' ರಾಗ ಕ್ಲಿಕ್ ಆಯಿತು.
                  ಮಾಗಧ ವಧೆ ಪ್ರಸಂಗ. ಅವರ 'ಮಾಗಧ' ಜನಪ್ರಿಯ. ಭೇರಿಯ ಶಬ್ದವನ್ನಾಲಿಸಿದ ಮಾಗಧನ ಚಿತ್ರಣ ಪರಿಣಾಮಕಾರಿ. ಅಬ್ಬಾ.. ಗ್ರಹಿಸಿದರೆ ಮೈಜುಂ ಎನ್ನುತ್ತದೆ. 'ತಿಳಿಯದಾದಿರೆ..' ಪದ್ಯಗಳನ್ನು 'ಮಾಂಡು ರಾಗ'ದಲ್ಲಿ ಎತ್ತುಗಡೆ ಮಾಡುತ್ತಾ, ವಿವಿಧ ರೀತಿಯಲ್ಲಿ ಹಾಡಿಸಿದ್ದರು. ಪಾತ್ರದ ಸ್ವಭಾವವನ್ನು ಹಾಡಿನ ಮೂಲಕವೂ ತೋರಿಸುವ ಜಾಣ್ಮೆ ಅದ್ಭುತ.
ರಾಗ ಸಂಚಾರವು 'ಪಂಚಮ'ಕ್ಕೆ ಹೋಗಿ ಮತ್ತೆ ಇಳಿಯುವ ಶೈಲಿಯು ಶೇಣಿಯವರಿಗೆ ಇಷ್ಟವಾಗುತ್ತಿತ್ತು.  ಆಟ, ಕೂಟಗಳಲ್ಲಿ ಹಾಡುವಾಗ ಜತೆಗೆ ಸ್ವರ ಸೇರಿಸುತ್ತಿದ್ದರು. ಇದು ಅವರ ಅರ್ಥಗಾರಿಕೆಗೆ ಬಂಗಾರದ ಕವಚ ತೊಡಿಸಿದಂತೆ ಸುಂದರವಾಗಿ ಕಾಣುತ್ತಿತ್ತು. ಪಂಚಮಕ್ಕೆ ಹೋಗುವ, ಇಳಿಯುವ ಶೈಲಿ ಇದೆಯಲ್ಲಾ ಇದೇ 'ಪದ್ಯಾಣ ಶೈಲಿ - ಶೇಣಿಯವರ ಪ್ರಶಂಸೆಯೂ ಹೌದು. ವಾಸ್ತವವೂ ಹೌದು.
                ಮೊದಮೊದಲು 'ಸಾಮ, ದೇವಗಾಂಧಾರ' ರಾಗಗಳು ಕೈಕೊಡುತ್ತಿದ್ದುವು. ಶೇಣಿಯವರು ರಂಗದಲ್ಲೇ ತಾನು ಹೇಳುತ್ತಾ, ಹೇಳಿಸಿ ಸರಿಪಡಿಸುತ್ತಿದ್ದರು. ಪದ್ಯಗಳಲ್ಲಿರುವ ಸಾಹಿತ್ಯಗಳನ್ನು ತಿದ್ದಿದ್ದರು. ಹಾಡುವಾಗ 'ಸಾಹಿತ್ಯ ಸ್ಪಷ್ಟತೆ' ಬೇಕು ಎಂದು ಪ್ರತಿಪಾದಿಸುತ್ತಿದ್ದರು. ರಂಗದಲ್ಲಿ ಅರ್ಥಗಾರಿಕೆಗೂ ಕಿವಿಯಾಗುತ್ತಿದ್ದೆ. ಇಂದೊಂದು ರೀತಿಯ 'ರಾವಣ'ನಾದರೆ ನಾಳೆ ಮತ್ತೊಂದು ರೂಪದ 'ರಾವಣ'.
                 'ರಾಜಾ ಯಯಾತಿ'ಯಲ್ಲಿ ಅವರದು ಎರಡನೇ ಭಾಗದ ಯಯಾತಿ, 'ಕಡುಗಲಿ ಕುಮಾರ ರಾಮ'ದಲ್ಲಿ  ಅವರ ತುಘಲಕ್ ಪಾತ್ರವು ರಂಗಕ್ಕೆ ಬರುವಾಗ ಮಧ್ಯರಾತ್ರಿ ಮೀರುತ್ತಿದ್ದುವು. ಆಗ ಅಗರಿ ರಘುರಾಮ ಭಾಗವತರ ಸರದಿ. ಮದ್ದಳೆಯಲ್ಲೋ, ಚಕ್ರತಾಳದಲ್ಲಿದ್ದುಕೊಂಡು ಅರ್ಥಗಳನ್ನು ಕೇಳುತ್ತಿದ್ದೆ.
                 ಅವರ ಮನೋಧರ್ಮವೂ ನನ್ನ ಮನೋಧರ್ಮವೂ ಮಿಳಿತವಾದುದರಿಂದಲೇ ಶೇಣಿಯವರು ಬಹಳವಾಗಿ ಒಲವು ಇರಿಸಿದ್ದರು ಎಂದು ನಂಬಿದ್ದೇನೆ. ಹಾಗಾಗಿ ಅವರು ಭಾಗವಹಿಸುವ ಬಹುತೇಕ ತಾಳಮದ್ದಳೆಗಳಿಗೆ ಅವಕಾಶ ಬಂತು. ಸಂಘಟಕರು ಬಯಸಿದರು. ಹೀಗಾಗಿ ಒಂದು ಕಾಲಘಟ್ಟದ ತಾಳಮದ್ದಳೆ, ಆಟ ತಿರುಗಾಟಗಳು 'ಶೇಣಿ ಯುಗ'..
                                          *****                                    *****
              ಅನುಭವದಿಂದ ಮಾಗಿದ ಪದ್ಯಾಣರಿಗೆ ಈಗ ಅರುವತ್ತರ ಹರೆಯ. ತನ್ನ ಪದಯಾನ ಸಂಭ್ರಮವು  ಅಭಿಮಾನಿಗಳ ಪ್ರೀತಿಯ ಮೇರೆಗೆ ಮಂಗಳೂರು ಪುರಭವನದಲ್ಲಿ ೨೦೧೬ ಜೂನ್ 4, 5ರಂದು ಸಂಪನ್ನವಾಗಲಿದೆ. ಎರಡೂ ದಿನವೂ ಯಕ್ಷಾಂಜಲಿ. ಅಭಿನಂದನೆ. ಅಭಿವಂದನೆ. ಗೌರವ ಗ್ರಂಥ ಸಮರ್ಪಣೆ. ಸಾಕ್ಷ್ಯ ಚಿತ್ರ ಅನಾವರಣ.. ಹೀಗೆಲ್ಲ ತುಂಬು ಹೂರಣಗಳು. ತನ್ನ ಹಾಡುಗಾರಿಕೆಯನ್ನು ಸುರತ್ಕಲ್ ಮೇಳದಲ್ಲಿ ತಿದ್ದಿ, ರೂಪುಕೊಟ್ಟ ಅಗರಿ ರಘುರಾಮ ಭಾಗವತರಿಗೆ ಚೊಚ್ಚಲ 'ಪದ್ಯಾಣ ಪ್ರಶಸ್ತಿ' ಪ್ರದಾನ.
              ಆಧುನಿಕದ ಸುನಾಮಿಯ ಹೊಡೆತಕ್ಕೆ ಗಾಯನ ಕ್ಷೇತ್ರವು ಜೀಕುತ್ತಿರುವ ಹೊತ್ತಿನಲ್ಲೂ ಅನುಭವ ಪಕ್ವತೆಯಿಂದ ಎದ್ದು ಕಾಣುವ ಪದ್ಯಾಣ ಗಣಪತಿ ಭಟ್ಟರ ಪದಯಾನಕ್ಕೆ ಸಾಕ್ಷಿಯಾಗೋಣ. ಪುರಭವನಕ್ಕೆ ಬನ್ನಿ.
(ಚಿತ್ರಗಳು : ಯಜ್ಞ ಮಂಗಳೂರು)





ಗಾನಾಮೃತದಲ್ಲಿ ಮಿಳಿತವಾದ ಯಕ್ಷಗಾನ!


              ಯಕ್ಷಗಾನದಲ್ಲಿ 'ಗಾನ ವೈಭವ' ಈಚೆಗಿನ ಭರಾಟೆ. ಮೊದಲಿತ್ತು, ಶುಭ ಸಮಾರಂಭಗಳಂದು ತಾಳಮದ್ದಳೆ, ವಿಮರ್ಶೆ. ಅದು ಬದುಕಿನೊಂದಿಗೆ ಮಿಳಿತವಾದ ಕಲಾಪ. ಈಗ ಹಾಗಲ್ಲ, 'ಅಂಜಾಯ್' ಮನಃಸ್ಥಿತಿ. ಹೀಗಾದಾಗ ಅದರಿಂದ ಸಿಗಬಹುದಾದ ರಸಾಸ್ವಾದನೆಯಿಂದ ವಂಚಿತರಾಗುತ್ತೇವೆ. ರಂಗದ ಒಂದೊಂದು ಅಂಗದಲ್ಲಿ ಸುಖ ಪಡುವ, ಖುಷಿ ಪಡುವ ಪ್ರಕ್ರಿಯೆ. ಅದೂ ಆನಂದದ ರಸ ಸೃಷ್ಟಿಯಾಗಿ ನಮ್ಮೊಳಗೆ ಇಳಿದರೆ ಮಾತ್ರ..!
               ಈಚೆಗೆ (ಮೇ ತಿಂಗಳು) ಪುತ್ತೂರು ತಾಲೂಕಿನ ಕಾವು ಬರೆಕರೆ ಡಾ.ಪಟ್ಟಾಜೆ ಗಣೇಶ ಭಟ್ಟರಲ್ಲಿ 'ಯಕ್ಷಾರಾಧನಾ' ಜರುಗಿತು. ಪದ್ಯಾಣ ಗಣಪತಿ ಭಟ್, ಪ್ರಸಾದ ಬಲಿಪ, ಪ್ರಫುಲ್ಲಚಂದ್ರ  ನೆಲ್ಯಾಡಿ, ತೆಂಕಬೈಲು ಮುರಳಿ ಶಾಸ್ತ್ರಿ - ನಾಲ್ವರು ಭಾಗವತರು.  ಇಲ್ಲಿ 'ಗಾನ ವೈಭವ' ಇರಲಿಲ್ಲ! ಬದಲಿಗೆ 'ಗಾನಾಮೃತದ ಉಣಿಕೆ'ಯಿತ್ತು. ರಸ ವೈಭವಗಳ ಸಂಪನ್ನತೆಯಿತ್ತು. ಪದ್ಯಗಳ ಪ್ರಸ್ತುತಿಯಲ್ಲಿ ಯಕ್ಷಗಾನವಿತ್ತು. ಆಯೋಜನರ ಉದ್ದೇಶವೂ ಅದೇ. ಪದ್ಯಾಣ ಶಂಕರನಾರಾಯಣ ಭಟ್, ಬೊಳಿಂಜಡ್ಕ ಗುರುಪ್ರಸಾದ್, ಪಡ್ರೆ ಶ್ರೀಧರ, ಕೊಂಕಣಾಜೆ ಚಂದ್ರಶೇಖರ್ .. ಇವರ ಹಿಮ್ಮೇಳ ಸಾಥ್.
                  ಸುಮಾರು ಎರಡೂವರೆ ಗಂಟೆ ಜರುಗಿದ ಗಾನಾಮೃತದಲ್ಲಿ ಡಾ.ಪಟ್ಟಾಜೆ ಗಣೇಶ ಭಟ್ಟರು ರಚಿಸಿದ ಪ್ರಸಂಗಗಳ ಹಾಡುಗಳು. ಮೊದಲೇ ಎಲ್ಲರಿಗೂ ಪದ್ಯಗಳ ವಿವರಗಳನ್ನು ನೀಡಲಾಗಿತ್ತು. ಎಲ್ಲಾ ಭಾಗವತರು ಆಯೋಜಕರ ಉದ್ದೇಶವನ್ನು ಅರ್ಥಮಾಡಿಕೊಂಡಿದ್ದರು. ಪದ್ಯವೊಂದರ ಬಂಧದೊಳಗೆ ಎಷ್ಟು ಲಂಬಿಸಬೇಕೋ ಅಷ್ಟೇ ಲಂಬನೆಯು ಕಾರ್ಯಕ್ರಮದ ಧನಾಂಶ. ಚಪ್ಪಾಳೆಗಾಗಿ ಹಾಡು ಇದ್ದಿರಲಿಲ್ಲ. ಬದಲಿಗೆ ಹಾಡಿನ ಮೋಹ, ಲಾಲಿತ್ಯ, ಸೊಗಸುಗಳಿಗೆ ಚಪ್ಪಾಳೆಯಿತ್ತು.  ಹಳೆ ಮಟ್ಟುಗಳು ಹಾಡಿನಲ್ಲಿ ಇಣುಕಿದಾಗ ಪ್ರೋತ್ಸಾಹದ ಸಿಂಚನ.
                ಈಚೆಗೆ ಜಾಲತಾಣದಲ್ಲಿ ಒಂದು ಉಲ್ಲೇಖ ಇತ್ತು - ಕಲಾಭಿಮಾನಿಗಳನ್ನು ತೃಪ್ತಿ ಪಡಿಸುವುದು ಕಲಾವಿದರ ಹೊಣೆ!  ಯಾರನ್ನಾದರೂ ತೃಪ್ತಿ ಪಡಿಸಲು ಸಾಧ್ಯವೇ? ತನ್ನ ಆಸಕ್ತಿಗಳನ್ನು ರಂಗದಲ್ಲಿ, ಕಲಾವಿದರಲ್ಲಿ ನಿರೀಕ್ಷಿಸಿದರೆ ಅವರಿಂದ ನೀಡಲು ಸಾಧ್ಯವೇ? ರಂಗದಲ್ಲಾಗುವ ಕ್ಷಣಗಳು ತನ್ನ ತೃಪ್ತಿಯಷ್ಟು - ರಂಗದ ಮಿತಿಯಲ್ಲಿ - ಏರಿದಾಗ ಸಂತೋಷ ಪಡಬಹುದಲ್ಲವೇ? ನಾಟಕದಂತೆ ಯಕ್ಷರಂಗವು ಸಿದ್ಧರಸವನ್ನು ಕೊಡುವುದಿಲ್ಲವಲ್ಲಾ. ಇದಕ್ಕಾಗಿ ಕಲಾವಿದರಿಗೆ ಒತ್ತಡ, ಪೀಡನೆ ಸಾಧುವಲ್ಲ.
                 ಕಲಾವಿದರಿಗೂ ಸಂದಿಗ್ಧ. ಅಭಿಮಾನಿಗಳ ಪ್ರೀತಿಯ ಒತ್ತಡವನ್ನು ಸ್ವೀಕರಿಸಬೇಕು. ಅವರ ಅಪೇಕ್ಷೆಯಂತೆ ಹಾಡಬೇಕು. ಅವರು ಹೇಳಿದ ಪದ್ಯವನ್ನು, ರಾಗವನ್ನು ಪ್ರಸ್ತುತಪಡಿಸಬೇಕು, ಲಂಬಿಸಬೇಕು. ಒಂದಷ್ಟು ಹೊತ್ತು ಯಕ್ಷಗಾನವನ್ನು ಮರೆಯಬೇಕು! ಹೀಗಾಗದಿದ್ದರೆ ಕಲೆ, ಕಲಾವಿದರ ಸಾಮಥ್ರ್ಯವನ್ನು ತನ್ನ ಮಿತಿಯೊಳಗೆ ವಿಮರ್ಶಿಸುತ್ತಾರೆ, ಕ್ಷಮತೆಯನ್ನು ನಿರ್ಧರಿಸಿಬಿಡುತ್ತಾರೆ. ಇಂತಹ 'ತೀರ್ಪುುಗಳು' ರಂಗಕ್ಕೆ ಅಪಾಯಕಾರಿ. ಕಲಾವಿದರ ಬೆಳವಣಿಗೆಗೆ ತೊಂದರೆ.
              ಗಾನವೈಭವಗಳ ಕುರಿತು ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿಯವರು ಹೇಳಿದ ನೆನಪು, ವೇಷ, ನಾಟ್ಯ, ಸಭಾಲಕ್ಷಣ.. ಇವುಗಳೆಲ್ಲಾ ಸೇರಿ ಆಟವಾಗುತ್ತದೆ. ಅದರ ಒಂದೊಂದು ತುಂಡು ತೆಗೆದು 'ವೈಭವ' ಮಾಡುತ್ತೇವೆ. ಅದು ಹೇಗಾಗ್ತದೆ? ಇದು ವೈಭವ ಆದರೆ ಅದು ಅಲ್ವಾ. ಸಾಂಪ್ರದಾಯಿಕ ಕಲೆಯ ಮರ್ಮವರಿಯದೆ, ಅದರ ಬಳಕೆಯ ರಹಸ್ಯವನ್ನು ತಿಳಿಯದೆ ಹಿಗ್ಗಾಮುಗ್ಗಾ ಎಳೆದರೆ..? ಹಾಗಾಗಬಾರದು. ಅರ್ಥದಲ್ಲೂ ಹಾಗೆನೇ. ಎರಡು ಪಾತ್ರಗಳ ಸಂವಾದಗಳು ತಾಳಮದ್ದಳೆ ರೂಪದಲ್ಲಿ ಆಗುತ್ತಿವೆ. ಜತೆಗೆ ಏಕವ್ಯಕ್ತಿ ರಂಗ ಪ್ರವೇಶಿಸಿತು. ಇವೆಲ್ಲಾ ಪ್ರಾತ್ಯಕ್ಷಿಕೆಗಳು. ಪ್ರದರ್ಶನಗಳಲ್ಲ. ಆದರೆ ಪ್ರಾತ್ಯಕ್ಷಿಕೆಗಳು ಪ್ರದರ್ಶನಗಳಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಕುರಿತು ಮಾತನಾಡಿದರೆ ನಮಗೆ ಗೊತ್ತಿಲ್ಲ ಅಂತ ಸ್ಥಾಪಿತವಾಗುತ್ತದೆ.
               ಈಚೆಗೆ ಯಾವುದೇ ಕಾರ್ಯಕ್ರಮಗಳ ಮಧ್ಯೆ 'ಗಾನ ವೈಭವ' ಪೋಣಿತವಾಗುತ್ತಿದೆ. ಐದಾರು ಮಂದಿ ಭಾಗವತರು, ಮೂರ್ನಾಲ್ಕು ಮಂದಿ ಹಿಮ್ಮೇಳ ಕಲಾವಿದರು, ನಿರೂಪಣೆಗೆಂದೇ ಪ್ರತ್ಯೇಕ (!) ವ್ಯವಸ್ಥೆ, ಅದಕ್ಕೆ ಪೂರಕವಾದ ಧ್ವನಿವರ್ಧಕ... ಹೀಗೆ ಒಟ್ಟೂ ಪ್ರತ್ಯೇಕ ವ್ಯವಸ್ಥೆ. ಸಂಘಟಕರು ಹೊಂದಾಣಿಸಿಕೊಳ್ಳುತ್ತಾರೆ ಬಿಡಿ. ಗಾನವೈಭವಕ್ಕೆಂದೇ ಪದ್ಯಗಳನ್ನು ಒಟ್ಟುಸೇರಿಸಿದ ಸ್ವ-ಬರೆಹದ ಹಾಡುಗಳು ಭಾಗವತರಲ್ಲಿವೆ. ಕೆಲವೊಮ್ಮೆ ಯಕ್ಷಸಾಕ್ಷರ ಸಂಘಟಕರು ತಾವೇ ಹಾಡುಗಳನ್ನು ಆಯ್ಕೆ ಮಾಡಿ ಕೊಡವುದೂ ಇದೆ.
               ಗಾನವೈಭವಗಳು ನಿಜಾರ್ಥದ ರಸವೈಭವಗಳಾಗಬೇಕು. ಅದು ಪ್ರೇಕ್ಷಕರೊಳಗೆ ಇಳಿಯಬೇಕು. ಅವರ ಅನುಭವವಾಗಬೇಕು. ಆಗ ಆನಂದದ ಹೊನಲಿನ ಆರಂಭ. ಮತ್ತೆಯಷ್ಟೇ ಚಪ್ಪಾಳೆ. ಇದಾವುದರತ್ತ ಲಕ್ಷ್ಯ ಇಲ್ಲದೆ - ಬೇಕಾಗದ - ಚಪ್ಪಾಳೆ, ಶಿಳ್ಳಿನಲ್ಲಿ ಕಲಾವಿದರನ್ನು ತೋಯಿಸುವ ಅಭಿಮಾನಿಗಳು, ಪ್ರೇಕ್ಷಕರು, ಸಂಘಟಕರು ಒಂದು ಕ್ಷಣ ನಿಂತು ಯೋಚಿಸಿ. ಗಾನದ ಮೂಲಕ ರಸ ಸೃಷ್ಟಿಯಾಗುವುದು ಸುಲಭದ ಕೆಲಸವಲ್ಲ. ಅದು ಕಲಾವಿದರ ಅನುಭವದ ಅಡಿಗಟ್ಟಿನ ಮೇಲಿದೆ. ಯಕ್ಷಗಾನದ ಚೌಕಟ್ಟಿನಲ್ಲಿದ್ದರೆ ಮಾತ್ರ ಗಾನವು ರಸವಾಗಲು ಸಾಧ್ಯ. ಇದು ಸಂಗೀತ ಕಛೇರಿ ಅಲ್ಲವಲ್ಲಾ! ಹಾಗಾಗಿ ಕಲಾವಿದರನ್ನು ಯಕ್ಷಗಾನದ ಚೌಕಟ್ಟಿನಲ್ಲಿರಲು ಬಿಡಿ. ಇದು ಆಕ್ಷೇಪ ಅಲ್ಲ. ಕೋರಿಕೆ.
              ಆರಂಭದಲ್ಲಿ ಉಲ್ಲೇಖಿಸಿದ್ದೇನಲ್ಲಾ, ಬರೆಕರೆಯ ಗಾನಾಮೃತದಲ್ಲಿ ಎಲ್ಲಾ ಭಾಗವತರೂ ಅತ್ಯುತ್ತಮವಾಗಿ ರಾಗ, ಲಯಗಳನ್ನು ಕಾಪಾಡಿಕೊಂಡಿದ್ದಾರೆ. ಪ್ರೇಕ್ಷಕರ ಚಪ್ಪಾಳೆಗೆ ಯಾರೂ ಕಾದು ಕೂರಲಿಲ್ಲ. ಆದರೆ ಹಾಡಿಗೆಲ್ಲಾ ಚಪ್ಪಾಳೆಯ ಪ್ರಶಂಸೆ ಬಂದಿರುವುದು ಪ್ರಸ್ತುತಿಯ ವೈಭವದಿಂದ. ಪದ್ಯಾಣ ಗಣಪತಿ ಭಟ್ ಮತ್ತು ಪದ್ಯಾಣ ಶಂಕರನಾರಾಯಣ ಭಟ್ಟರು ಗಾನಾಮೃತವನ್ನು ತಮ್ಮ ಅನುಭವದ ಪಕ್ವತೆಯಿಂದ ಮುನ್ನಡೆಸಿದ ರೀತಿ ಅನನ್ಯ.
                ಪಟ್ಟಾಜೆ ಗಣೇಶ ಭಟ್ಟರ ಬಗ್ಗೆ ಒಂದು ಮಾತು ಹೇಳಲೇಬೇಕು. ಗಂಧರ್ವಕನ್ಯೆ, ನೈಮಿಷಾರಣ್ಯ, ಪಾಂಚಜನ್ಯ, ಶತ್ರುದಮನ, ಪಾರ್ವತೀ ಪ್ರತಿಜ್ಞೆ, ನಾಗಮಣಿ ಮಾಣಿಕ್ಯ, ಹಂಸಡಿಭಿಕೋಪಾಖ್ಯಾನ, ಕಾವು ಕ್ಷೇತ್ರ ಮಹಾತ್ಮೆ, ಉದಯ ಚಂದ್ರಿಕಾ.. ಹೀಗೆ ಒಂಭತ್ತು ಪ್ರಸಂಗಗಳನ್ನು ರಚಿಸಿದ್ದಾರೆ. ಕೆಲವು ಪ್ರದರ್ಶನಗಳಾಗಿವೆ. ಹಿಂದೊಮ್ಮೆ ಇವರ ಪ್ರಸಂಗಗಳಿಂದ ಉದ್ಧರಿಸಿದ ಪದ್ಯಗಳ ಗಾನಾಮೃತ ಜರುಗಿತ್ತು. ಇದು ಎರಡನೇ ಬಾರಿ. ಉತ್ತಮ ಆಯೋಜನೆ. ಗಾನವೈಭವ ಯಾ ಗಾನಾಮೃತದಲ್ಲಿ ಯಕ್ಷಗಾನವೂ ಮಿಳಿತವಾದರೆ ಅದರ ಸೊಗಸು ಅನನ್ಯ ಎನ್ನುವುದರ ಸಂದೇಶವನ್ನು ಭಟ್ಟರ ಹಳ್ಳಿ  ಮನೆ ಸಾರಿದೆ.
(ಪ್ರಜಾವಾಣಿ-ದಧಿಗಿಣತೋ ಅಂಕಣ)