Monday, March 17, 2014

ಯಕ್ಷಗಾನ ಸಹವಾಸ - ಸ್ವಾನುಭವ



ಸ್ವಾನುಭವ : 1
- ಹವ್ಯಾಸಿ, ವೃತ್ತಿ ರಂಗಭೂಮಿಯ ಪ್ರದರ್ಶನಗಳಲ್ಲಿ ಬಹುತೇಕ ವೀರರಸ ಪ್ರಧಾನವಾಗುಳ್ಳ ಕಥಾನಕಗಳನ್ನೇ ಆರಿಸುತ್ತಾರೆ. 'ಆಟ ರೈಸಲು' ಓಕೆ.
- ಈಚೆಗೆ ಒಂದು ಆಟದಲ್ಲಿ ಪಾತ್ರಧಾರಿಯಾಗಿ ಭಾಗವಹಿಸಿದ್ದೆ. ಪ್ರಸಂಗ : ತ್ರಿಜನ್ಮ ಮೋಕ್ಷ. ಹಿರಣ್ಯಕಶ್ಯಪು-ಕಯಾದು-ಪ್ರಹ್ಲಾದ : ಸನ್ನಿವೇಶಗಳು ಸಹಜವಾಗಿ ದುಃಖ-ಕರುಣ ರಸವೇ ಪ್ರಧಾನವಾಗುಳ್ಳದ್ದು. ಸನ್ನಿವೇಶವು 'ಅವಸರವನ್ನು' ಸಹಿಸುವುದಿಲ್ಲ. ಆದರೆ ಅಂದಿನ ಯುವ ಭಾಗವತರು - ತಾರಾಮೌಲ್ಯ ಇದೆ ಎಂದು ಗ್ರಹಿಸಿದ - ಕಯಾದು ಪದ್ಯಗಳಿಗೆಲ್ಲಾ ಕತ್ತರಿ ಹಾಕಿ, ಎರಡ ಪದ್ಯದಲ್ಲೇ ಮುಗಿಸಿಬಿಟ್ಟರು.
- ಯಾಕೆ ಹೀಗೆ ಎಂದು ಪ್ರಶ್ನಿಸಿದೆ. 'ಸೌಮ್ಯ ಪದ್ಯ ಅಲ್ವೋ, ಪ್ರೇಕ್ಷಕರಿಗೆ ಬೋರ್ ಆಗುತ್ತದೆ. ಆಟ ಮೇಲೆ ಬೀಳುವುದಿಲ್ಲ' (ಯಕ್ಷಗಾನದ ಪರಿಭಾಷೆ) ಎಂಬ ಉತ್ತರ. ಆಶ್ಚರ್ಯವಾಯಿತು. ಪ್ರೇಕ್ಷಕರು ಪ್ರದರ್ಶನವನ್ನು ಆಸ್ವಾದಿಸಿದ್ದರು. ಯಾರು ಆಕಳಿಸಿದ್ದನ್ನು ನಾನು ನೋಡಿಲ್ಲ. ಆದರೂ ಅಂದಿನ ಭಾಗವತರಿಗೆ 'ಬೋರ್' ಆಯಿತು!
- ಮತ್ತೆ ತಿಳಿಯಿತು. ಇವರು 'ವೀರರಸ ಪದ್ಯಗಳ ಪ್ರಿಯ'ರೆಂದು! ಸೌಮ್ಯ ಪದ್ಯಗಳು ಬಂದಾಗ 'ಪ್ರಸಿದ್ಧರ ಬಣ್ಣ' ಬಯಲಾಗುತ್ತದೆ. ಹಾಗಾಗಿ ಇಂತಹ ಬುದ್ಧಿವಂತಿಕೆಯನ್ನು ಮಾಡುವುದು ಮಾಮೂಲಿ.
- ನೋಡಿ, ಒಬ್ಬನ ದೌರ್ಬಲ್ಯಕ್ಕೆ ಇಡೀ ರಂಗ, ರಂಗವ

ಸ್ವಾನುಭವ - 2
- ಅದೊಂದು ಆಟ. ಪ್ರಸಂಗ: ದೇವಿಮಹಾತ್ಮೆ. ಯಾವ್ಯಾವ ಕಲಾವಿದರು ಎಂದು ನಿಶ್ಚಯವಾಗಿತ್ತು. ಕಾರ್ಯಕ್ರಮದ ದಿವಸ ಹತ್ತಿರವಾಗುತ್ತಿದ್ದಂತೆ ಪ್ರಸಿದ್ಧರೆಂದು ಹಣೆಪಟ್ಟಿ ಅಂಟಿಸಿಕೊಂಡ ಕಲಾವಿದರೊಬ್ಬರು ಸಮಾರಂಭಕ್ಕೆ 5000 ರೂಪಾಯಿ ದೇಣಿಗೆ ನೀಡಿ, 'ಮಹಿಷಾಸುರ' ಪಾತ್ರ ತನಗೆ ನೀಡಬೇಕೆಂದು ಮನವಿ ಸಲ್ಲಿಸಿದರು. ಇವರ ಐದು ಸಾವಿರದಿಂದ ಸಂಘಟಕರು ನಿಶ್ಚಿಂತೆಯಿಂದ ಉಸಿರು ಬಿಟ್ಟರಾದರೂ, ಅವರ ಬೇಡಿಕೆ ಇರಿಸು ಮುರಿಸು ಉಂಟು ಮಾಡಿತ್ತು. ಸರಿ, ದಾಕ್ಷಿಣ್ಯಕ್ಕೆ ಒಪ್ಪಿಕೊಂಡರು.
ಆಟದ ದಿವಸ. ಮಹಿಷಾಸುರ ಚೌಕಿಯಲ್ಲಿ ಸಿದ್ಧವಾಗಿತ್ತು. ರಂಗದಿಂದ ಸ್ವಲ್ಪ ದೂರದಿಂದ ಮಹಿಷನ ಪ್ರವೇಶ ಹೊರಡುವುದೆಂದು ನಿಶ್ಚಯವಾಗಿತ್ತು. ಚೌಕಿಯಲ್ಲಿ ಆಗಲೇ ಅರ್ಧ ಅಮಲೇರಿದ್ದರು. ಮಹಿಷಾಸುರನ ಆವಾಹನೆಯಾಗಿತ್ತು! ಅವರಿಗೆ ಬೇಕಾದಷ್ಟು ಮದಿರೆಯನ್ನು ಸಪ್ಲೈ ಮಾಡುವ ಅಭಿಮಾನಿ ವರ್ಗವೂ ಇತ್ತು. ಹಾಗಾಗಿ ಮಹಿಷ ರಂಗಸ್ಥಳದ ಹತ್ತಿರಕ್ಕೆ ಅಬ್ಬರದ ಪ್ರವೇಶ ಮಾಡುತ್ತಾ ಬರುವಾಗಲೇ ಬಸವಳಿದಿದ್ದರು. ಹೇಗೋ ರಂಗಸ್ಥಳ ಪ್ರವೇಶ ಮಾಡಿದರೆನ್ನಿ. ಆಮೇಲೆ ಬಂದವರು ಚೌಕಿಯಲ್ಲಿ ವಿಶ್ರಮಿಸಿದರಿಗೆ ಎಚ್ಚರವಾದುದು ಬೆಳಿಗ್ಗೆ ಮಂಗಲವಾದ ಬಳಿಕವೇ!
- ಇವರ ಅವಸ್ಥೆ ನೋಡಿ ಚೌಕಿಯಲ್ಲಿದ್ದ ಸಹ ಕಲಾವಿದರು ಮತ್ತೆ ಮಹಿಷರಾದರು! ಆಟ ಮಾತ್ರ ಮೂವತ್ತು ನಿಮಿಷ ಸ್ಥಬ್ದವಾಗಿತ್ತು. ಇನ್ನೊಬ್ಬ ಮಹಿಷ ಸಿದ್ಧನಾಗಬೇಕಲ್ಲಾ...!
- ಇಲ್ಲಿ ಘಟನೆ ಮುಖ್ಯವಲ್ಲ. ಅಭಿಮಾನದ ಹುಚ್ಚು ಅಮಲಿನಲ್ಲಿ ಕಲಾವಿದರಿಗೆ 'ಗಮ್ಮತ್ತು ಮಾಡುವ, ಮಾಡಿಸುವ' ಅಭಿಮಾನಿಗಳಿಗೆ 'ಆಟ ಕುಲಗೆಟ್ಟರೂ ತೊಂದರೆಯಿಲ್ಲ, ಕಲಾವಿದರಿಗೆ ಖುಷಿಯಾಗಬೇಕು' ಎನ್ನುವ ಜಾಯಮಾನ ಇದೆಯಲ್ಲಾ, ಇದೂ ಕಲೆಗೆ ಮಾರಕ...!ಏನಂತೀರಿ?
- ಕಲಾವಿದರನ್ನು ತೃಪ್ತಿ ಪಡಿಸುವುದರಲ್ಲೇ ತನ್ನ ಸಾರ್ಥಕ್ಯ ಎಂದಿದ್ದರೆ ಬೆಳಿಗ್ಗೆನ್ನು ಒಪ್ಪಿದ ಪ್ರೇಕ್ಷಕರು, ಸಂಘಟಕರು = ಹೀಗೆ ಎಲ್ಲರೂ ಬಲಿಪಶುಗಳಾಗುತ್ತಾರೆ.

ಸ್ವಾನುಭವ 3 
- ಯಕ್ಷಗಾನದ ಚೌಕಿಯನ್ನು ಆಟಕ್ಕೆ ಬಂದ ಬಹುತೇಕ ಕಲಾಭಿಮಾನಿಗಳು ಒಮ್ಮೆ ಇಣುಕಿ, ತಮಗೆ ಇಷ್ಟಪಟ್ಟ ಕಲಾವಿದರನ್ನು ಮಾತನಾಡಿಸಿ ಹೋಗುವುದು. ಇದು ಯಕ್ಷಗಾನದ ಕುರಿತಾದ ಅಭಿಮಾನ. ಜತೆಗೆ ಕಲಾವಿದನ ಅಭಿಮಾನವೂ ಕೂಡಾ. ಹಾಗಾಗಿ ಚೌಕಿಯಲ್ಲಿ ಕನಿಷ್ಠ ಶಿಸ್ತನ್ನು ಕಾಪಾಡಿಕೊಳ್ಳುವ (ಹವ್ಯಾಸಿ ರಂಗದಲ್ಲಿ) ಹೊಣೆ ಎಲ್ಲಾ ಕಲಾವಿದರದ್ದು. ಮದ್ಯಪಾನ ಮಾಡಿ ಚೌಕಿಯಲ್ಲೇ ರಾದ್ಧಾಂತ ಎಬ್ಬಿಸುತ್ತಾ ಇದ್ದರೆ, ಹಗುರ ಮಾತುಗಳಿಂದ ತಾನು ಶ್ರೇಷ್ಠ ಎಂದು ಪ್ರತಿಷ್ಠಾಪಿಸಲು ಹೊರಟರೆ ಕಲಾಭಿಮಾನಿಗಳು ಕಲಾವಿದರಿಂದ, ಯಕ್ಷಗಾನದಿಂ ದೂರವಾಗುತ್ತಾರೆ. ಹೀಗಾಗದಂತೆ ಎಚ್ಚರ ಅಗತ್ಯ.
- ಮದ್ಯಪಾನ ಮಾಡುವುದು ಅವನವನ ವೈಯಕ್ತಿಕ ವಿಚಾರ. ಅದನ್ನು ಪ್ರಶ್ನಿಸುವಮತಿಲ್ಲ. ಆದರೆ ಸಾಮಾಜಿಕ ಕಾಳಜಿ ಮತ್ತು ಬದ್ಧತೆ ಇದೆಯಲ್ಲಾ.... ಹಿನ್ನೆಲೆಯಲ್ಲಿ ಚೌಕಿಯ ಪಾವಿತ್ರ್ಯತೆ ಯನ್ನು ಕಾಪಾಡಲೇಬೇಕು.
- ಪಾವಿತ್ರ್ಯತೆ ಎಲ್ಲಿಂದ ಬರಬೇಕು? ಕಲಾವಿದನಲ್ಲಿ ಶಿಸ್ತು, ನಂಬುಗೆ ಮತ್ತು ಪಾವಿತ್ರ್ಯದ ಭಾವಗಳಿಂದರೆ ತನ್ನಿಂತಾತೆ ಪಾವಿತ್ರ್ಯ ಅನಾವರಣಗೊಳ್ಳುತ್ತದೆ.

ಸ್ವಾನುಭವ - 4
 - ಯಕ್ಷಗಾನದ ಬಣ್ಣದ ಮನೆ(ಚೌಕಿ)ಗೆ ಪಾವಿತ್ರ್ಯದ ನಂಬುಗೆ. ನಮ್ಮೆಲ್ಲಾ ಹಿರಿಯ ಕಲಾವಿದರು ಯಕ್ಷಗಾನವನ್ನು 'ದೇವತಾರಾಧನೆ' ಎಂಬ ನಂಬುಗೆಯಿಂದ ಕಲಾ ವ್ಯವಸಾಯ ಮಾಡಿದವರು. ಚೌಕಿಯನ್ನು, ರಂಗವನ್ನು ಪೂಜ್ಯ ಭಾವನೆಯಿಂದ ಕಂಡವರು. ಈಗಲೂ ಹಲವು ಕಲಾವಿದರಲ್ಲಿ ಅಂತಹ ಭಾವನೆಗಳು ತುಂಬಿವೆ.
- ಇಂತಹ ಭಾವನೆಗಳಿಗೆ ಯಕ್ಷಗಾನದ ಹವ್ಯಾಸಿ ರಂಗಭೂಮಿಯೂ ಹೊರತಲ್ಲ. ಹವ್ಯಾಸಿ ಕ್ಷೇತ್ರದಲ್ಲಿ ಅನುಭವಿಗಳನ್ನು ಕಲೆ ಹಾಕಿ ಅದಕ್ಕೊಂದು ಸಂಘಟಿತ ರೂಪ ಕೊಟ್ಟು ಮೇಳವಾಗಿ ತಿರುಗಾಟ ಮಾಡುವುದನ್ನು ಕಾಣಬುಹುದು. ಇಲ್ಲೂ ಕೂಡಾ ದೇವತಾರಾಧನೆಯ ಭಾವ, ಭಾವನೆ.
- ಆದರೆ ಇದೆಲ್ಲವನ್ನೂ ಕಡೆಗಣಿಸಿ ಚೌಕಿಯಲ್ಲಿ ಧೂಮಪಾನ ಮಾಡುತ್ತಾ, ಸ್ವೇಚ್ಛೆಯಿಂದ ಇರುವ; ಮದ್ಯಪಾನ ಮಾಡಿ, ಅಮಲೇರಿ ಚೌಕಿಯಲ್ಲಿ ಹೇಸಿಗೆ ಹುಟ್ಟಿಸುವ, ಲಘುವಾಗಿ ಮಾತನಾಡುವ, ವ್ಯಕ್ತಿಗಳು (ಕಲಾವಿದರು ಅನ್ನಿಸಕೊಂಡ) ಇದ್ದಾರೆ. ಇವರಿಂದಾಗಿ ಇಡೀ ತಂಡಕ್ಕೆ ಕೆಟ್ಟ ಹೆಸರು. ಇಂತಹವರನ್ನು ಕಲಾವಿದರೇ ದೂರವಿಟ್ಟರೆ ತಂಡಕ್ಕೂ, ಪ್ರದರ್ಶನಕ್ಕೂ ಕ್ಷೇಮ.