Monday, January 9, 2012

ಮೂರು ಪ್ರಸಂಗವೂ, ಏಳು ಮಂದಿ ಕಲಾವಿದರೂ..!

ಕಾಲು ಶತಮಾನದ ಹಿಂದೆ. 'ಚೌಡೇಶ್ವರಿ ಮೇಳ'ವು ಸುಳ್ಯ-ಕೊಡಗು ವ್ಯಾಪ್ತಿಯಲ್ಲಿ ಖ್ಯಾತಿ. ಬಹುತೇಕ ಹವ್ಯಾಸಿ ಕಲಾವಿದರು. ಅಪ್ಪಟ ಭಾಗವತ ಕೀರ್ತಿಶೇಷ ದಾಸರಬೈಲು ಚನಿಯ ನಾಯ್ಕರ ನಿರ್ದೇಶನ. ಆ ತಂಡದಲ್ಲಿ ಈಗ ನಮ್ಮೊಂದಿಗಿಲ್ಲದ ಹಾಸ್ಯಗಾರ ಪ್ಯಾರ್ ನಾವೂರು ಇದ್ದರು.

ಆ ಭಾಗಕ್ಕೆ ಆಟಕ್ಕೆ ಬಂದಾಗಲೆಲ್ಲಾ ಭಾಗವತ ಚನಿಯ ನಾಯ್ಕರು ಬಿಡುವಿದ್ದಾಗ ನಮ್ಮಲ್ಲಿಗೆ ಬರುತ್ತಿದ್ದರು. ಒಂದು ದಿವಸ ಮಡಿಕೇರಿ ಹತ್ತಿರದ ಹಳ್ಳಿಯೊಂದರ ಆಟ ಮುಗಿಸಿ ಮನೆಗೆ ಬರುವಾಗಲೇ ಅವರ ಮೂಡ್ ಔಟ್ ಆಗಿತ್ತು! 'ಎಂಚಿನ ಸಾವುದ ಆಟ. ಯಕ್ಷಗಾನ ಪಂಡ ಗೊತ್ತಿಜ್ಜಿ. ಸಾಕೋ ಸಾಕಾಂಡ್' (ನಾಯ್ಕರು ಹೆಚ್ಚಾಗಿ ತುಳುವಿನಲ್ಲಿ ಸಂಭಾಷಿಸುತ್ತಿದ್ದರು.)

ಅಜಾತ ಶತ್ರುವಾಗಿದ್ದ ನಾಯ್ಕರು ಅಂದು ಯಾಕೆ ಅಸಹನೆಗೊಂಡಿದ್ದರು. 'ಭಾಗವತರೆ, ದೂರದ ಆಟ. ಸಂಭಾವನೆಗೆ ತೊಂದರೆಯಾಯಿತಾ' ಅಂತ ಮಾತಿಗಿಳಿದೆ. 'ಕವರ್ ಏರೆಗ್ ಬೋಡು. ಯಾನೇ ಕೊರ್ತುವೆ! ಅಕ್ಲೆಗ್ ಯಕ್ಷಗಾನ, ನಾಟಕ, ಕೋರಿಕಟ್ಟ ಪೂರಾ ಒಂಜೇ, ಯಕ್ಷಗಾನದ ಮರ್ಯಾದಿ ಪೋಂಡ್...', ಅವರ ಅಸಹನೆ ಕಡಿಮೆಯಾದಂತಿಲ್ಲ. ಸ್ನಾನ, ಕಾಫಿ ಮುಗಿಸಿ, ಅವರಿಗೆ ನಿದ್ರಿಸಲು ವ್ಯವಸ್ಥೆ ಮಾಡುತ್ತಿದ್ದಂತೆ, 'ಅವು ಎಂಚಿನ ಪಂನ್ಡಾ...' ಅಂತ ನಿನ್ನೆಯ ಆಟದ ಕತೆಗೆ ಮುಂದಾದರು.

ಮಡಿಕೇರಿ ಸನಿಹದ ಹಳ್ಳಿಯೊಂದರಲ್ಲಿ ಚೌಡೇಶ್ವರಿ ಮೇಳದ ಆಟ. ಏಳು ಮಂದಿ ವೇಷಕ್ಕಾದರೆ, ಹಿಮ್ಮೇಳಕ್ಕೆ ಮೂರು ಮಂದಿ. ಹೆಚ್ಚು ವೇಷ ಇರುವ ದೇವಿ ಮಹಾತ್ಮೆಯಂತಹ ಪ್ರಸಂಗ ಹೊರತು ಪಡಿಸಿ ಉಳಿದ ಪ್ರಸಂಗಗಳಿಗೆ ಸೂಕ್ತವಾಗುವಂತಹ ವೇಷಭೂಷಣ. ಅಂದು ವೀಳ್ಯ ಕೊಟ್ಟವರು ನಿಗದಿಪಡಿಸಿದ ಪ್ರಸಂಗ - 'ಶ್ವೇತಕುಮಾರ ಚರಿತ್ರೆ'.

ಸಮಯಕ್ಕೆ ಸರಿಯಾಗಿ ಕಲಾವಿದರ ದಂಡು ಆಟದ ಜಾಗ ತಲುಪಿತು. ವೀಳ್ಯಕೊಟ್ಟವರಿಂದ ಸ್ವಾಗತ. ಉಪಾಹಾರ-ಭೋಜನ ವ್ಯವಸ್ಥೆ. ನಾಲ್ಕು ಕಂಬದ ರಂಗವೇದಿಕೆ. ಗ್ಯಾಸ್ಲೈಟ್ ಬೆಳಕು. ಸಂಜೆಯಾದಂತೆ ಮೈಕಾಸುರನ ಅಟ್ಟಹಾಸ. ಚೌಕಿ ತೆರೆದುಕೊಂಡಿತು. ಪಾತ್ರ ಹಂಚೋಣವಾಯಿತು. ಎಂಟು ಗಂಟೆಯಿಂದ ಹನ್ನೆರಡು ಗಂಟೆ ತನಕ ಪ್ರದರ್ಶನ.

ಒಮ್ಮೆ ಚೌಕಿ ತೆರೆದುಕೊಂಡರೆ ಆಯಿತು, ಮತ್ತೆ ಭಾಗವತ ಚನಿಯ ನಾಯ್ಕರು ದೇವರ ಪೆಟ್ಟಿಗೆಯ ಸನಿಹವೇ ಕುಳಿತುಕೊಳ್ಳುತ್ತಿರುವುದು ಜಾಯಮಾನ. ಭಾಗವತನ ಲಕ್ಷಣವೂ ಹೌದೆನ್ನಿ. ಆಟ ಶುರುವಾಗಲು ಹಸಿರು ನಿಶಾನೆ ಸಿಕ್ಕಿತು.
ಚೌಕಿ ಪೂಜೆ, ಪೀಠಿಕೆ. ಪ್ರಸಂಗ ಶುರುವಾಯಿತು. ಅಷ್ಟರಲ್ಲಿ ಚೌಕಿಗೆ 'ನಿಶೆ ಏರಿಸಿಕೊಂಡ' ಹತ್ತಾರು ಮಂದಿಯ ದಂಡು ನುಗ್ಗಿತು. ಆ ತಂಡದಲ್ಲಿ ವೀಳ್ಯ ನೀಡಿದ ವ್ಯಕ್ತಿಯೂ ಇದ್ದ! 'ನಿಮ್ಮದು ಎಂತಹ ಪ್ರಸಂಗ. ನಮಗೆ ಮಹಿಷಾಸುರ ಬರುವ ಪ್ರಸಂಗವೇ ಆಗಬೇಕು' ಎನ್ನಬೇಕೆ!

ಚೌಕಿಯಲ್ಲಿ ಗೊಂದಲ. ಉತ್ತರ ಕಾಣದ ಕ್ಷಣಗಳು. ಕಾರಣ ನಿಗದಿಯಾಗಿದ್ದ ಪ್ರಸಂಗಕ್ಕೆ ಎಲ್ಲಾ ಕಲಾವಿದರೂ ತಯಾರಾಗಿದ್ದರು. ಹೊಸ ಪ್ರಸಂಗಕ್ಕೆ ಅಣಿಯಾಗಲು ಅವಕಾಶವಿಲ್ಲ. ಕಲಾವಿದರಿಗೆ ಅಷ್ಟು ಸುಲಭವೂ ಅಲ್ಲ. ಅಲ್ಲದೆ, ಪ್ರಸಂಗ ಪುಸ್ತಕವೂ ಇಲ್ಲ. ಏನು ಮಾಡೋಣ?

ಸರಿ, ಅವರನ್ನು ಹಾಸ್ಯಗಾರರಾದ ಪ್ಯಾರ್ ನಾವೂರು ಸಮಾಧಾನಪಡಿಸಿ ಸಾಗಹಾಕಿದರು. ಆಟ ಮುಂದುವರಿದು ಒಂದು ಗಂಟೆಯಾಗಿರಬಹುದು, ಇನ್ನೊಂದು ತಂಡ ಚೌಕಿಗೆ ನುಗ್ಗಿತು. ಅವರಿಗೆ 'ತ್ರಿಜನ್ಮ ಮೋಕ್ಷ' ಪ್ರಸಂಗವೇ ಆಗಬೇಕಂತೆ. ಎರಡೂ ತಂಡಗಳ ಬೇಡಿಕೆಯ ಮುಂದೆ ಮೇಳದ ಕಲಾವಿದರು ಕಂಗಾಲು.

ರಂಗ ಪ್ರವೇಶ ಮಾಡಿದ ಪಾತ್ರಗಳು ಚೌಕಿಗೆ ಬಂದುವು. ಮುಂದಿನ ವೇಷ ಪ್ರವೇಶ ಮಾಡೋಣ ಅಂದರೆ ಚೌಕಿ ಗೊಂದಲದ ಗೂಡಾಗಿತ್ತು. ಪ್ರೇಕ್ಷಕರಲ್ಲೂ ಗುಲ್ಲು, ಶಿಳ್ಳೆ ಜೋರಾಯಿತು. 'ಐವತ್ತು ರೂಪಾಯಿ ಕೊಟ್ಟಿದ್ದೇನೆ. ಆಟ ಯಾಕೆ ನಿಲ್ಲಿಸಿದ್ರಿ' ಎನ್ನುತ್ತಾ ಒಬ್ಬರು ಚೌಕಿಗೆ ನುಗ್ಗಲು ಪ್ರಯತ್ನಿಸುತ್ತಿದ್ದಂತೆ, 'ನಾನು ಇನ್ನೂರು ರೂಪಾಯಿ ಕೊಟ್ಟಿದ್ದೇನೆ' ಎಂದರು ಇನ್ನೊಬ್ಬರು..!

ಪರಿಸ್ಥಿತಿ ಕೈಮೀರುವ ಲಕ್ಷಣ ಕಂಡು ಬಂತು. 'ನಿಮಗೆ ಮಹಿಷಾಸುರ, ಹಿರಣ್ಯಾಕ್ಷ, ಹಿರಣ್ಯಕಶಿಪು ಸ್ಟೇಜ್ಗೆ ಬರಬೇಕಲ್ವಾ. ಬರುತ್ತದೆ. ನೀವೆಲ್ಲಾ ಹೋಗಿ. ಆಟ ಶುರುಮಾಡೋಣ' ಎನ್ನುವ ಧೈರ್ಯ ನೀಡಿದ ಚನಿಯ ನಾಯ್ಕರು; ವೀಳ್ಯ ಹಾಕಿ, ಮುಂಡಾಸು, ಶಾಲು ಏರಿಸಿ, ಜಾಗಟೆಯೊಂದಿಗೆ ರಂಗಕ್ಕೆ ಬರಲು ಸಿದ್ಧರಾದರು.

ಮರುದಿವಸದ ಆಟ ಮಹಿಷ ಮರ್ದಿನಿ. ಅದಕ್ಕಾಗಿ ಮಹಿಷಾಸುರ ಪಾತ್ರದ ಕೊಂಬು ಕ್ಯಾಂಪ್ನಲ್ಲಿತ್ತು. ಶ್ವೇತಕುಮಾರ ಪ್ರಸಂಗದ 'ಕರಾಳನೇತ್ರೆ' ರಾಕ್ಷಸಿಯ ಪಾತ್ರಕ್ಕೆ ಕೊಂಬು ಬಿಗಿಯಲಾಯಿತು. 'ತ್ರಿಲೋಕ ಸುಂದರಿ' ಪಾತ್ರಕ್ಕೆ ಸಿದ್ಧರಾದವರಿಗೆ ಶ್ರೀದೇವಿ ಪಾತ್ರ ಆವಾಹನೆಯಾಯಿತು. ಹಿರಣ್ಯಾಕ್ಷ ಅಲ್ವಾ, ದುರ್ಜಯನ ಪಾತ್ರ ಮಾಡುವಾತ 'ಹಿರಣ್ಯಾಕ್ಷ'ನಾದ. ಮತ್ಯಾರೋ ಹಿರಣ್ಯಕಶಿಪು, ನರಸಿಂಹನಾದರು. ಪಾತ್ರಗಳ ಪಕ್ಷಾಂತರ!

ಪಡಿಮಂಚವನ್ನೇರಿದ ಭಾಗವತರು 'ಶ್ವೇತಕುಮಾರ' ಪ್ರಸಂಗವನ್ನು ಸ್ವಲ್ಪ ಮುಂದುವರಿಸುತ್ತಾ, 'ಮಹಿಷಾಸುರನ' ಪ್ರವೇಶಕ್ಕೆ ಅಣಿಯಾದರು. ಸೂಟೆ, ಮುಳಿಹುಲ್ಲು.. ಅಬ್ಬರ ಜೋರಾಗಿಯೇ ಇತ್ತು. 'ಸ್ವಲ್ಪ ನಿಧಾನಕ್ಕೆ ರಂಗಕ್ಕೆ ಬಂದರೆ ಸಾಕು. ಅವರೆಲ್ಲಾ ಕುಣಿದು ಕುಪ್ಪಳಿಸಲಿ' ಎಂದು ವೇಷಧಾರಿಗೆ ಸೂಚನೆ ಕೊಟ್ಟರು. ಅಂದಿನ ಮಹಿಷಾಸುರನಿಗೆ ಏನಿಲ್ಲವೆಂದರೂ ರಂಗವೇದಿಕೆ ತಲುಪಲು ಮುಕ್ಕಾಲು ಗಂಟೆ.

ರಂಗದಲ್ಲಿ ಮಹಿಷಾಸುರನ ಅಬ್ಬರ. ಕುಣಿತ. ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ. ಇವರು ಸಂತೋಷದ ಪರಾಕಾಷ್ಠೆಗೇರುತ್ತಲೇ ಭಾಗವತರು, 'ದೇವಿ ಮತ್ತು ಮಹಿಷಾಸುರ' ಯುದ್ಧ ಪದ್ಯಗಳನ್ನು ಎತ್ತುಗಡೆ ಮಾಡಿ ಮಹಿಷಾಸುರನನ್ನು ಕೊಂದೇ ಬಿಟ್ಟರು! ದೇವಿ ಪಾತ್ರಧಾರಿಗೆ ಹೂವಿನ ಮಾಲೆ, ಮಹಿಷಾಸುರನಿಗೆ ವಿಶೇಷ ಆತಿಥ್ಯ! ಚಳಿಯ ಊರಲ್ವಾ..! ಏನಂತೀರಿ?

ಸರಿ, ಹಿರಣ್ಯಾಕ್ಷನ ಪ್ರವೇಶ. ದೇವಿ ಪಾತ್ರ ಮಾಡಿದರು ಅಷ್ಟಭುಜವನ್ನು ಕಳಚಿಕೊಂಡು, ಹಿರಣ್ಯಾಕ್ಷನ ಮುಂದೆ ಪ್ರ್ರತ್ಯಕ್ಷ. ಬಳಿಕ ಹಿರಣ್ಯಕಶಿಪು. ಅಂತೂ ಮಧ್ಯರಾತ್ರಿಯಾಗುವಾಗ ಆಟಕ್ಕೆ ಮಂಗಳ. ಸ್ವಲ್ಪ ಹೆಚ್ಚೆ ವೀಳ್ಯವೂ ಸಿಕ್ಕಿತು.

'ನಾವು ಹೇಳಿದ ಪ್ರಸಂಗವೇ ಆಯಿತಲ್ಲಾ' ಎಂಬ ಸಂತೋಷ ಒಂದು ವರ್ಗಕ್ಕಾದರೆ, 'ನಮ್ಮದೂ ಪ್ರದರ್ಶನವಾಯಿತಲ್ಲಾ' ಎನ್ನುವುದು ಇನ್ನೊಂದು ತಂಡದ ಖುಷಿ. ಆದರೆ ಕಲಾವಿದರಿಗೆ ಬೇಸರವಾಗಿತ್ತು. 'ಯಕ್ಷಗಾನದ ಪರಂಪರೆಗೆ ನಾವು ಅನ್ಯಾಯ ಮಾಡಿದೆವು' ಎಂಬ ಕೊರಗು.

ಆಟದ ಕತೆಯನ್ನು ಹೇಳಿದ ಚನಿಯ ನಾಯ್ಕರಲ್ಲೂ ಮನಶ್ಶಾಂತಿಯಿರಲಿಲ್ಲ. 'ಹೇಗೂ ಆಯ್ತಲ್ಲಾ, ನಿದ್ದೆ ಮಾಡಿ. ಸಂಜೆಯ ಆಟಕ್ಕೆ ಹೋಗಬೇಡ್ವಾ' ಎಂದರು ನನ್ನಮ್ಮ.

'ನನ್ನ ಯಕ್ಷಗಾನದ ಬದುಕಿನಲ್ಲಿ ಇಂತಹ ಅವಸ್ಥೆ ಅದುದೇ ಇಲ್ಲ. ಮುಂದೆಯೂ ಹೀಗಾಗದಿರಲಿ' ಎನ್ನುತ್ತಾ ನಿದ್ದೆಗೆ ಜಾರಲು ಪ್ರಯತ್ನಿಸಿದರು.

1 comment:

  1. --------------------------------------------- ಅಷ್ಟರಲ್ಲಿ ಚೌಕಿಗೆ 'ನಿಶೆ ಏರಿಸಿಕೊಂಡ' ಹತ್ತಾರು ಮಂದಿಯ ದಂಡು ನುಗ್ಗಿತು. ಆ ತಂಡದಲ್ಲಿ ವೀಳ್ಯ ನೀಡಿದ ವ್ಯಕ್ತಿಯೂ ಇದ್ದ! 'ನಿಮ್ಮದು ಎಂತಹ ಪ್ರಸಂಗ. ನಮಗೆ ಮಹಿಷಾಸುರ ಬರುವ ಪ್ರಸಂಗವೇ ಆಗಬೇಕು' ಎನ್ನಬೇಕೆ!
    ----------------------------------------------

    ೨ ವರ್ಷ ಮೊದಲು ಕಾಸರಗೋಡಿನ ಒಂದು ಹಳ್ಳಿಯಲ್ಲಿ ಮಹಿಷಾಸುರ ವೇಷದ ಪಾತ್ರಧಾರಿ ಮತ್ತು ನಶೆ ಏರಿದ ಊರಿನವರಿಗೆ ಜಗಳ ನಡೆದು ಯಕ್ಷಗಾನ ಅರ್ಧದಲ್ಲೇ ನಿಂತು ಹೋಗಿತ್ತು.

    ReplyDelete