Tuesday, February 14, 2012

’ಕಲಾವಿದರನ್ನು ಗೌರವಿಸುವುದು ಸಮಾಜದ ಧರ್ಮ’: ಎಡನೀರು ಶ್ರೀಗಳು

"ಯಕ್ಷಗಾನದ ಪೌರಾಣಿಕ ಸ್ತ್ರೀಪಾತ್ರಗಳ ವೈಭವಕ್ಕೆ ಕೊಕ್ಕಡ ಈಶ್ವರ ಭಟ್ಟರದು ಪ್ರತ್ಯೇಕ ಕೊಡುಗೆಯಿದೆ. ಇಂತಹ ಅನುಭವಿ ಮತ್ತು ಕಲೆಗಾಗಿಯೇ ಬದುಕನ್ನು ಸವೆಸಿದ ಕಲಾವಿದರನ್ನು ಗೌರವಿಸುವುದು ಸಮಾಜದ ಧರ್ಮ. ನಮ್ಮ ಮಠವು ಯಕ್ಷಗಾನ ಮಾತ್ರವಲ್ಲ, ಎಲ್ಲಾ ಕಲೆಗಳನ್ನು ಗೌರವಿಸುತ್ತದೆ, ಪ್ರದರ್ಶನ ಏರ್ಪಡಿಸುತ್ತದೆ, ಎಂದು ಶ್ರೀ ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಹೇಳಿದರು.

ಅವರು ಫೆ.13ರಂದು ಎಡನೀರಿನಲ್ಲಿ ಜರುಗಿದ ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನದ ವಾರ್ಶಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸ್ತ್ರೀಪಾತ್ರಧಾರಿ ಶ್ರೀ ಕೊಕ್ಕಡ ಈಶ್ವರ ಭಟ್ಟರಿಗೆ ಈ ಸಾಲಿನ 'ಪಾತಾಳ ಪ್ರಶಸ್ತಿ'ಯನ್ನು ಪ್ರದಾನಿಸಿ ಆಶೀರ್ವಚನ ನೀಡಿದರು. ಪ್ರಶಸ್ತಿಯು ಶಾಲು, ಹಾರ, ಫಲಪುಪ್ಪ, ಪ್ರಸಸ್ತಿ ಪತ್ರ, ಸ್ಮರಣಿಕೆ ಮತ್ತು ರೂಪಾಯಿ ಐದು ಸಾವಿರ ರೂಪಾಯಿಯ ಒಳಗೊಂಡಿತ್ತು.

ಸಮಾರಂಭದ ಅಧ್ಯಕ್ಷತೆಯನ್ನು ಕಾಸರಗೋಡು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಶ್ರೀ ಐ.ವಿ.ಭಟ್ ವಹಿಸಿದ್ದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾದ ಪ್ರೊ: ಎಂ.ಎಲ್.ಸಾಮಗ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಮಾಲತೀ ಶ್ರೀಧರ್, ಹಿರಿಯ ಸ್ತ್ರೀಪಾತ್ರಧಾರಿ ಶ್ರೀ ಪಾತಾಳ ವೆಂಕಟ್ರಮಣ ಭಟ್ ಉಪಸ್ಥಿತರಿದ್ದರು.

ಪಾತಾಳ ಯಕ್ಷ ಪ್ರತಿಷ್ಠಾನದ ಅಧ್ಯಕ್ಷರಾದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅತಿಥಿಗಳಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಶ್ರೀ ಶ್ರೀರಾಮ ಪಾತಾಳ ಸ್ಮರಣಿಕೆ ನೀಡಿದರು. ಪತ್ರಕರ್ತ, ಕಲಾವಿದ ಶ್ರೀ ನಾ. ಕಾರಂತ ಪೆರಾಜೆ ಪ್ರಶಸ್ತಿಯ ಗುಣಕಥನ ಫಲಕವನ್ನು ವಾಚಿಸಿದರು. ಶ್ರೀಮಠದ ಶ್ರೀ ರಾಜೇಂದ್ರ ಕಲ್ಲೂರಾಯರು ವಂದಿಸಿದರು. ವೇದಮೂರ್ತಿ ಶ್ರೀ ಪೋಳ್ಯ ಅನಂತೇಶ್ವರ ಭಟ್ಟರಿಂದ ವೇದಪಠಣದೊಂದಿಗೆ ಆರಂಭಗೊಂಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರತಿಷ್ಠಾನದ ಡಾ.ಬಿ.ಎನ್.ಮಹಾಲಿಂಗ ಭಟ್ ನಿರ್ವಹಿಸಿದರು.

No comments:

Post a Comment