Monday, May 9, 2011

ಯಕ್ಷಗಾನಕ್ಕೆ ಶೈಕ್ಷಣಿಕ ಸ್ಪರ್ಶ


ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ. ಕೆಲವರು ಅಜ್ಜಿಮನೆ ಸೇರಿದ್ದಾರೆ. ಕೆಲವರನ್ನು ವಿವಿಧ ಕೋರ್ಸ್, ಶಿಬಿರ, ಇಂಗ್ಲಿಷ್ ಕ್ಲಾಸ್ಗಳು ಆವರಿಸಿವೆ. ಇನ್ನು ಯಕ್ಷಗಾನದತ್ತ ಹೊರಳಿದರೆ ಅಲ್ಲಲ್ಲಿ ಯಕ್ಷಗುರುಗಳಿಂದ ಯಕ್ಷಾಭ್ಯಾಸ ನಡೆಯುತ್ತಲೇ ಇದೆ. ಯಕ್ಷಗಾನ ಕೇಂದ್ರಗಳ ಚಟುವಟಿಕೆಗಳು ನಿರಂತರ.

ಇಲ್ನೋಡಿ, ಒಂದು ವಾರದ ವಿಶಿಷ್ಟ 'ಯಕ್ಷಶಿಕ್ಷಣ ಕಾರ್ಯಾಗಾರ' ಯಾ ಶಿಬಿರ. ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪರಿಕಲ್ಪನೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸಾರಥ್ಯ. ಅರುವತ್ತೈದು ವಿದ್ಯಾರ್ಥಿಗಳು. ಯಾವುದೇ ಶುಲ್ಕವಿಲ್ಲ.

ಯಕ್ಷಗಾನದ ಕುರಿತಾದ ಮೂಲಭೂತ ಸಂಗತಿಗಳನ್ನು ತಿಳಿಸಿಕೊಡುವುದು ಉದ್ದೇಶ. ಇಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್ ಜತೆಜತೆಗೆ ನಡೆದಿದೆ. ಕಾರ್ಯಾಗಾರದುದ್ದಕ್ಕೂ ಶಿಬಿರಾರ್ಥಿಗಳ ಉಪಸ್ಥಿತಿ ಶಿಬಿರ ಯಶಕ್ಕೆ ಕನ್ನಡಿ.
'ಒಂದು ವಾರದಲ್ಲಿ ಏನು ಗೊತ್ತಾಗುತ್ತದೆ' ಶಿಬಿರಪೂರ್ವದಲ್ಲಿ ಕೇಳಿಬಂದ ಅಡ್ಡಪ್ರಶ್ನೆ. ಸಹಜವೂ ಕೂಡ. 'ಒಂದು ವಾರದಲ್ಲಿ ಕಲಾವಿದನಾಗಿಯೋ, ಕಲಾವಿದೆಯಾಗಿಯೋ ರೂಪುಗೊಳ್ಳಲಾರರು. ಆದರೆ ಎಲ್ಲೂ ಸಿಗದ ಬೇಸಿಕ್ ಮಾಹಿತಿಗಳು ಸಿಕ್ತವಲ್ಲಾ. ಮಕ್ಕಳು ಮುಂದೆ ಯಕ್ಷಗಾನದ ಒಲವು ಮೂಡಿಸಿಕೊಳ್ಳಲು ಇದು ಸಹಕಾರಿ' ಎಂಬ ಉತ್ತರ ನೀಡಿದರು, ಶಿಬಿರದ ನಿರ್ದೇಶಕ, ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್.

ಪ್ರಕೃತ 'ಬದಲಾವಣೆ' ಎಂದು ನಾವು ಒಪ್ಪಿಕೊಂಡ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಯಕ್ಷಗಾನದ ಆಸಕ್ತಿಯನ್ನು ಕುದುರಿಸಲು, ಇದ್ದ ಆಸಕ್ತಿಯನ್ನು ಗಟ್ಟಿಮಾಡಲು ಇಂತಹ ಕಾರ್ಯಾಗಾರ ಹೆಚ್ಚು ಸೂಕ್ತ.

ಶಿಬಿರದಲ್ಲಿ ತೆಂಕುತಿಟ್ಟಿನ ವಿವಿಧ ವೇಷಗಳ ವೈವಿಧ್ಯವನ್ನು ಪವರ್ ಪಾಯಿಂಟ್ ಮೂಲಕ ವಿವರಣೆ, ಕಲಾವಿದ ದಿವಾಣ ಶಿವಶಂಕರ ಭಟ್ಟರಿಂದ ಕಿರೀಟ ವೇಷಗಳ ಮಾಹಿತಿ, ಹಿರಿಯ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಯವರಿಂದ ಪುಂಡು ವೇಷಗಳ ಮತ್ತು ಶಿಕ್ಷಕ ಚಂದ್ರಶೇಖರ್ ಅವರಿಂದ ರಾಕ್ಷಸ ವೇಷಗಳ ಮಾಹಿತಿ ನೀಡಿಕೆ.

ರಂಗದಲ್ಲಿ ಹಾಸ್ಯ ಹೊಮ್ಮುವ ಪರಿಯನ್ನು ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ತಾನೇ ಅಭಿನಯಿಸಿ, ಪಾತ್ರ ಸ್ವಭಾವಕ್ಕನುಗುಣವಾದ ಸ್ವರ ಬದಲಾವಣೆಯನ್ನು ಮಾಡಿ ತೋರಿಸಿದರು. ಕಲಾವಿದ, ಉಪನ್ಯಾಸ ವೆಂಕಟರಾಮ ಭಟ್ ಸುಳ್ಯ ಇವರಿಂದ ಸ್ತ್ರೀ ಪಾತ್ರಗಳ ವಿವರಣೆ. ಪಾತ್ರಗಳು, ಅವುಗಳ ಸ್ವಭಾವಗಳು, ಮುಖವರ್ಣಿಕೆಯ ರೀತಿ, ಯಾವ್ಯಾವ ಪಾತ್ರಗಳು ಯಾವ್ಯಾವ ಗುಣಗಳನ್ನು ಪ್ರತಿನಿಧಿಸುತ್ತವೆ ಎಂಬ ವಿಚಾರಗಳ ಕುರಿತು ಥಿಯರಿ.

ಮಹಾಬಲ ಕಲ್ಮಡ್ಕರಿಂದ ಯಕ್ಷಗಾನದ ಮುಖವರ್ಣಿಕೆಯ ಪ್ರಾತ್ಯಕ್ಷಿಕೆ. ಎಲ್ಲಾ ಮಕ್ಕಳ ಮುಖದಲ್ಲೂ ಅಂದು ಯಕ್ಷಗಾನದ ಕಳೆ. ಶಿಕ್ಷಕ ರುಕ್ಮಯ ಪೂಜಾರಿ ಯಕ್ಷ ಮುಖವಾಡಗಳ ರಚನೆಯನ್ನು ಶಿಬಿರಾರ್ಥಿಯಿಂದಲೇ ಮಾಡಿಸಿದ್ದರು. ಅರ್ಥಗಾರಿಕೆ ಮತ್ತು ಪುರಾಣ ಜ್ಞಾನವನ್ನು ಉಪನ್ಯಾಸಕ ರಾಧಾಕೃಷ್ಣ ಕಲ್ಚಾರ್ ವಿವರಿಸಿ, ಅರ್ಥಗಾರಿಕೆ ಮೂಡುವ ರೀತಿಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಸ್ತುತಿ. ಕಲಾವಿದ ರಾಮ ಜೋಯಿಸ್ ಬೆಳ್ಳಾರೆ ಸಾಥಿ. ಮನೋವಿಶ್ಲೇಷಕರಾದ ಗಂಗಾಧರ ಬೆಳ್ಳಾರೆ ನಿರ್ವಹಣೆ. ಬಯಲಾಟ ಅಕಾಡೆಮಿಯ ಸದಸ್ಯ ಡಾ.ಸುಂದರ ಕೇನಾಜೆಯವರ 'ಯಕ್ಷಗಾನ-ಸಾಮಾಜಿಕ ಪ್ರೇರಣೆ' ವಿಚಾರಗಳು ಶಿಬಿರಾರ್ಥಿಗಳಲ್ಲಿ ಕುತೂಹಲ ಮೂಡಿದುದಕ್ಕೆ ಅವರಿಂದ ಬಂದ ಹಲವು ಪ್ರಶ್ನೆಗಳೇ ಸಾಕ್ಷಿ.

ಅಪರಾಹ್ನದ ಅವಧಿಯಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷ ನಡೆಗಳ ಶಿಕ್ಷಣ. ನಡೆದ ಥಿಯರಿ ಸೆಶನ್ಗಳಲ್ಲೂ ಕರ್ಗಲ್ಲು ಅವರ ಭಾಗಿ. ಹುಬ್ಬುಗಳು ಹೇಗಿರಬೇಕು, ವೇಷಗಳಿಗೆ ಕಣ್ಣು ಬರೆಯುವ ಕ್ರಮ, ಮುದ್ರೆಗಳ ವೈವಿಧ್ಯ, ತಿಲಕಗಳ ರೀತಿ, ಯಾವ್ಯಾವ ಪಾತ್ರಗಳು ಯಾವ್ಯಾವ ತಿಲಕವನ್ನು ಧರಿಸಬೇಕು.. ಮುಂತಾದ ಸೂಕ್ಷ್ಮ ವಿಚಾರಗಳನ್ನು ರೇಖಾಚಿತ್ರ ಸಹಿತ ವಿವರಣೆ.

ಶಿಬಿರದ ಕಲಿಕೆ ಮಕ್ಕಳಲ್ಲಿ ಹೆಚ್ಚು ಪರಿಣಾಮ ಬೀರಿದೆ. 'ಯಕ್ಷಗಾನದ ಬೇರೆ ಬೇರೆ ಪಾತ್ರಗಳ ಉಡುಗೆ ತೊಡುಗೆಗಳು ಹೇಗಿರುತ್ತವೆ ಎಂದು ತಿಳಿಯಿತು. ಅದರಲ್ಲೂ ವಾನರ ಪಾತ್ರಗಳ ಮುಖವರ್ಣಿಕೆ, ಉಡುಗೆಗಳು ಮನದಲ್ಲಿ ಅಚ್ಚೊತ್ತಿವೆ' ಎಂದು ಶ್ವೇತಾ ಜೆ. ಹೇಳಿದರೆ; ನಿಶ್ಮಿತಾಳ ಅನುಭವವೇ ಬೇರೆ - 'ಮೊದಲು ನನಗೆ ಯಕ್ಷಗಾನದಲ್ಲಿ ಆಸಕ್ತಿ ಇರಲಿಲ್ಲ. ಇಲ್ಲಿನ ಮಾಹಿತಿಯಿಂದ ಒಲವು ಮೂಡಿದೆ'.

ಶಿಬಿರದಲ್ಲಿ ಯಕ್ಷಗಾನದ ಪರಿಚಯವಿದ್ದ ಒಂದಷ್ಟು ಮಂದಿ ವಿದ್ಯಾರ್ಥಿಗಳಿದ್ದರು. ಅವರಲ್ಲಿ ಕೆಲವರು ಪಾತ್ರಗಳನ್ನೂ ನಿರ್ವಹಿಸಿದ್ದರು. ಯಕ್ಷಗಾನವೇ ಗೊತ್ತಿಲ್ಲದ ಮಂದಿಯೂ ಇದ್ದರು. 'ಶಿಬಿರದಿಂದ ಯಕ್ಷಗಾನದ ಕುರಿತು ವಿಚಾರಗಳು ತಿಳಿಯಿತು. ಕಲಾವಿದೆಯಾಗಬೇಕೆನ್ನುವ ತುಡಿತ ಮೂಡಿಸಿದೆ' ಎನ್ನುತ್ತಾಳೆ ಪವಿತ್ರಾ ಜೆ.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬಳೆ ಸುಂದರ ರಾಯರು ಸಮಾರೋಪದಂದು ಪೂರ್ತಿಯಾಗಿ ಶಿಬಿರದಲ್ಲಿ ಭಾಗವಹಿಸಿ ಅನುಭವ ಹಂಚಿಕೊಂಡರು. 'ಯಕ್ಷಗಾನ ಯಾವಾಗ ಆರಂಭವಾಯಿತು?' 'ಯಕ್ಷಗಾನವನ್ನು ಯಾರು ಶುರು ಮಾಡಿದರು?' 'ಒಂದು ಯಕ್ಷಗಾನ ನೋಡಿದರೆ ಹಲವು ರಂಗಪೂಜೆ ಯಾಕೆ ನೋಡಬೇಕು?'.. ಮುಂತಾದ ಫಕ್ಕನೆ ಉತ್ತರಿಸಲಾಗದ ಪ್ರಶ್ನೆಗಳಿಗೆ ನವಿರಾದ ಉತ್ತರವನ್ನು ಕುಂಬಳೆಯವರು ನೀಡಿದರು.

'ಒಂದು ವಾರ ಯಕ್ಷ ಶಿಕ್ಷಣದೊಂದಿಗೆ ಯೋಗಾಸನ, ಯೋಗಗಳನ್ನು ಕೂಡಾ ಮಕ್ಕಳಿಗೆ ತರಬೇತಿ ನೀಡಿದ್ದೇವೆ. ಯಕ್ಷಶಿಕ್ಷಣ ಎನ್ನುವ ಶಿಬಿರ ಒಂದು ಕಲ್ಪನೆ. ಯಕ್ಷಗಾನಕ್ಕೆ ಶೈಕ್ಷಣಿಕ ಸ್ಪರ್ಶ ನೀಡುವ ಪ್ರಯತ್ನ. ಇನ್ನಷ್ಟು ಬೆಳೆಸಲು ಅವಕಾಶವಿದೆ' ಎನ್ನುತ್ತಾರೆ ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ.

'ಯಕ್ಷಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಎಲ್ಲರೂ ಕಲಾವಿದರಾಗಲು ಆಸಾಧ್ಯ. ಆದರೆ ಒಳಿತು. ಕೊನೇಪಕ್ಷ ಯಕ್ಷಗಾನದ ಸಹೃದಯೀ ಪ್ರೇಕ್ಷಕರಾದರೂ ಆದಾರಲ್ಲ.' ಎಂದರು ಕರ್ಗಲ್ಲು. ಸಮಾರೋಪದಲ್ಲಿ ಹಿರಿಯ ವಿದ್ವಾಂಸ, ವಿಮರ್ಶಕ ಡಾ.ಎಂ.ಪ್ರಭಾಕರ ಜೋಷಿಯವರು 'ಯಕ್ಷಗಾನದ ಕಲಿಕೆ ಎನ್ನುವುದು ಸಮಗ್ರ ಕಲಿಕೆಗೆ ಪೂರಕವಾಗಬೇಕು. ಶಿಕ್ಷಣದ ವಿಸ್ತರಣೆಯಾಗುವಾಗ ಅದರ ಸ್ವರೂಪ ಬದಲಾಗುವುದು ಸಹಜ. ಅನಿವಾರ್ಯ ಕೂಡಾ. ಈ ನಿಟ್ಟಿನಲ್ಲಿ ಯಕ್ಷಶಿಕ್ಷಣದ ಯೋಜನೆ, ಯೋಚನೆ ಶ್ಲಾಘ್ಯ' ಎಂದರು.

ಯಕ್ಷ ಶಿಕ್ಷಣದಂತಹ ಶಿಬಿರಗಳು ಶಾಲಾ ಮಟ್ಟದಲ್ಲಿ ನಡೆಯಬೇಕು. ಹದಿನೈದು ದಿವಸಕ್ಕೆ ಒಮ್ಮೆಯಾದರೂ ಯಕ್ಷಗಾನದ ಕುರಿತು ಒಂದು ಅವಧಿ ಪಾಠವನ್ನು ರೂಪಿಸಬೇಕಾಗಿದೆ. ಇದರಿಂದಾಗಿ ಕೂಟಾಟಗಳ ಹೊರತಾಗಿ ಒಂದಷ್ಟು ಯಕ್ಷಗಾನೀಯ ವಿಚಾರಗಳ ಕುರಿತು ಮಾಹಿತಿ ಹರಿದಂತಾಗುತ್ತದೆ. ಇಲ್ಲದಿದ್ದರೆ ಯಕ್ಷಗಾನವೆಂದರೆ 'ವೇಷ ಮಾಡುವುದು, ಅರ್ಥ ಹೇಳುವುದು' ಇಷ್ಟಕ್ಕೇ ಮೈಂಡ್ ಸೆಟ್ ಆಗುತ್ತದೆ. ಅದರ ಸುತ್ತಲೇ ಸುತ್ತುತ್ತಿರುತ್ತದೆ.

ಡಾ.ಕೋಳ್ಯೂರು ರಾಮಚಂದ್ರ ರಾಯರು ಕಾರ್ಯಾಗಾರವನ್ನು ಉದ್ಘಾಟಿಸುತ್ತಾ, 'ಮುಂದಿನ ದಿನಗಳಲ್ಲಿ ಯಕ್ಷಗಾನದ ಪ್ರೇಕ್ಷಕರಿಗೂ ಕೂಡ ಕಾರ್ಯಾಗಾರ ಬೇಕಾಗಬಹುದು' ಎಂದಿರುವುದು ವರ್ತಮಾನ ಮತ್ತು ಭವಿಷ್ಯದ ಕರೆಗಂಟೆ.

1 comment:

  1. "ಮುಂದಿನ ದಿನಗಳಲ್ಲಿ ಯಕ್ಷಗಾನದ ಪ್ರೇಕ್ಷಕರಿಗೂ ಕೂಡ ಕಾರ್ಯಾಗಾರ ಬೇಕಾಗಬಹುದು"
    ವರ್ತಮಾನ ಮತ್ತು ಭವಿಷ್ಯದ ಕರೆಗಂಟೆ.
    ನೂರಕ್ಕೆ ನೂರು ನಿಜ.

    ReplyDelete