Monday, December 26, 2011

ಡಾ.ವೆಂಕಟರಾಜ ಪುಣಿಂಚಿತ್ತಾಯರಿಗೆ 'ಬೊಳ್ಳಿಂಬಳ ಪ್ರಶಸ್ತಿ'

ಪಾಣಾಜೆಯ 'ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ'ವು ವಾರ್ಶಿಕವಾಗಿ ನೀಡುವ 'ಬೊಳ್ಳಿಂಬಳ ಪ್ರಶಸ್ತಿ'ಗೆ ಈ ಸಾರಿ ಹಿರಿಯ ವಿದ್ವಾಂಸ, ಸಂಶೋಧಕ ಡಾ.ವೆಂಕಟರಾಜ ಪುಣಿಂಚಿತ್ತಾಯರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಐದು ಸಾವಿರ ರೂಪಾಯಿ ನಗದು ಪುರಸ್ಕಾರ, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ.

ದಶಂಬರ 25ರಂದು ಸಂಜೆ ಗಂಟೆ 4ಕ್ಕೆ ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ ಜರಗುವ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವದಂದು ಪ್ರಶಸ್ತಿ ಪ್ರದಾನ ನಡೆಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಕುಂಬಳೆ ಸುಂದರ ರಾವ್ ಪ್ರಶಸ್ತಿ ಪ್ರದಾನ ಮಾಡಿದರು.

ಒಂದು ವಿಶ್ವವಿದ್ಯಾನಿಲಯವು ಒಂದು ಭಾಷೆಯ ಕುರಿತು ಏನೆಲ್ಲಾ ಮಾಡಬಹುದೋ, ಅದನ್ನು ಏಕಾಂಗಿಯಾಗಿ ಪುಣಿಂಚಿತ್ತಾಯರು ತುಳು ಭಾಷೆಯ ಬಗ್ಗೆ ಮಾಡಿದ್ದಾರೆ. 'ತುಳುವಿನಲ್ಲಿ ಶಿಷ್ಟ ಸಾಹಿತ್ಯ ಪರಂಪರೆಯೇ ಇದ್ದಿರಲಿಲ್ಲ ಎಂಬ ವಾದವನ್ನು ಅಲ್ಲಗೆಳೆದು, ನಾಲ್ಕು ಅತೀ ಪ್ರಾಚೀನ ತಾಡವಾಲೆ ಗ್ರಂಥಗಳನ್ನು ಪತ್ತೆ ಮಾಡಿ; ಅವುಗಳನ್ನು ಕನ್ನಡಕ್ಕೆ ಲಿಪ್ಯಂತರಗೊಳಿಸಿ ವಿಸ್ತಾರವಾದ ಪೀಠಿಕೆ, ಅಡಿಟಿಪ್ಪಣಿ, ಅರ್ಥಕೋಶದೊಂದಿಗೆ ಸಂಪಾದಿಸುವ ಮೂಲಕ ತುಳು ಭಾಷೆಗೆ ಭಾರತದ ಇತರ ಇಪ್ಪತ್ತು ಭಾಷೆಯಲ್ಲಿ ಸಮಾನ ಸ್ಥಾನವನ್ನು ಒದಗಿಸಿಕೊಟ್ಟ ಸಾಧನೆ ಪುಣಿಂಚಿತ್ತಾಯರದು.

ನೂರಾರು ಪಾಡ್ದನ ಸಂಗ್ರಹ, ಜಾನಪದ ರಾಮಾಯಣದ ಲಿಪಿಗಾರಿಕೆ, ದೈವಾರಾಧನೆ ಕುರಿತು ಬರೆಹ, ಕನ್ನಡ ತುಳು ಕವನ ಸಂಗ್ರಹ, ಯಕ್ಷಗಾನ ಕಲಾವಿದ ಅಲ್ಲದೆ ಕನ್ನಡ ಸಾಹಿತ್ಯ, ಸಂಸ್ಕೃತ, ಮಲೆಯಾಳ, ಹಿಂದಿ ಭಾಷೆಗಳಲ್ಲಿ ಖಚಿತ ಅನುಭವ. ನಾಟಕ, ಶಿಶುಗೀತೆ, ಧ್ವನಿಸುರುಳಿಗಳ ಸಾಹಿತ್ಯಗಳು, ಗಿಡಮೂಲಿಕೆಗಳ ಅರ್ಥಕೋಶ, ಎಪ್ಪತ್ತೈದಕ್ಕೂ ಮಿಕ್ಕಿ ಸಂಶೋಧನಾ ಬರೆಹಗಳು.. ಹೀಗೆ ಪುಣಿಂಚಿತ್ತಾಯರ ಕುರಿತು ಮೊಗೆದಷ್ಟೂ ತುಂಬುವ ಸಂಪತ್ತು.

ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ದೇರಾಜೆ ಪ್ರಶಸ್ತಿ, ದ್ರಾವಿಡಿಯನ್ ಯುನಿವರ್ಸಿಟಿ ಕುಪ್ಪಂ ಇದರ ಬೆಸ್ಟ್ ರೀಸರ್ಚ್ ಅವಾರ್ಡ್ ಪುರಸ್ಕಾರ.. ಹೀಗೇ ಪ್ರಶಸ್ತಿಗಳ ಸರಮಾಲೆ. ಈ ಮಾಲೆಗೆ ಈಗ 'ಬೊಳ್ಳಿಂಬಳ ಪ್ರಶಸ್ತಿ'ಯ ಗರಿ.

ಹಿರಿಯ ಕಲಾವಿದ, ಅಧ್ಯಾಪಕ ಬಿ.ಎಸ್.ಓಕುಣ್ಣಾಯರು ತನ್ನ ತೀರ್ಥರೂಪದ ನೆನಪಿಗಾಗಿ 'ಬೊಳ್ಳಿಂಬಳ ಪ್ರಶಸ್ತಿ'ಯನ್ನು ಸ್ಥಾಪಿಸಿದ್ದು, ಈ ಹಿಂದಿನ ಸಾಲಿನಲ್ಲಿ ಹಿರಿಯ ಕಲಾವಿದರಾದ ಕೆ.ವಿ.ಗಣಪಯ್ಯ, ಎಡಮಂಗಲ ಎನ್.ಆರ್.ಚಂದ್ರ, ಬೆಟ್ಟಂಪಾಡಿ ಪಿ.ಸದಾಶಿವ ಭಟ್ - ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಇದೇ ವೇದಿಕೆಯಲ್ಲಿ ಶ್ರಿ ಆಂಜನೇಯ ಯಕ್ಷಗಾನ ಕಲಾ ಸಂಘದ ಸಂಮಾನವನ್ನು ಹಿರಿಯ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯ ಮತ್ತು ಕಲಾವಿದ ರಾಜರತ್ನಂ ಅವರಿಗೆ ಗೌರವಪೂರ್ವಕವಾಗಿ ಸಲ್ಲಿಸಲಾಯಿತು.

No comments:

Post a Comment