Tuesday, August 21, 2012

ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ರಂಗದ ಮಹಾನ್ ಗುರು


          ಕೀರ್ತಿಶೇಷ ಕುರಿಯ ವಿಠಲ ಶಾಸ್ತ್ರಿಗಳು ಯಕ್ಷಗಾನದ ಮಹಾನ್ ಗುರು. ಅವರ ಗರಡಿಯಲ್ಲಿ ಪಳಗಿದ ಕಲಾವಿದರು ಗುರುವಿನ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ರಂಗದಲ್ಲಿ ವಿಜೃಂಭಿಸುತ್ತಿದ್ದಾರೆ. ಶಾಸ್ತ್ರಿಗಳು ಅಳಿದು ಮೂರು ದಶಕ ಮೀರಿದರೂ ಅವರ ಹೆಸರು ಯಕ್ಷಗಾನ ರಂಗದಲ್ಲಿ ಈಗಲೂ ಸ್ಥಾಯಿಯಾಗಿದೆ,' ಎಂದು ಪತ್ರಕರ್ತ, ಕಲಾವಿದ, ಅಂಕಣಕಾರ ನಾ. ಕಾರಂತ ಪೆರಾಜೆ ಹೇಳಿದರು.

         ಅವರು ಈಚೆಗೆ ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚ್ಯಾರಿಟೇಬಲ್ ಟ್ರಸ್ಟ್ (ರಿ) ಕುರುಡಪದವು ಇದರ ಆಶ್ರಯದಲ್ಲಿ ಕುರಿಯ ವಿಠಲ ಶಾಸ್ತ್ರಿ ಜನ್ಮಶತಮಾನೋತ್ಸವದ ಆರನೇ ಸರಣಿ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ 'ದೇವಿ ಭಟ್ರು' ಎಂದೇ ಪರಿಚಿತರಾದ ಮುಳಿಯಾಲ ಭೀಮಭಟ್ಟರನ್ನು ಅಭಿನಂದಿಸಿ ಮಾತನಾಡುತ್ತಿದ್ದರು.

        ನಿವೃತ್ತ ಪ್ರಾಧ್ಯಾಪಕ, ಹಿರಿಯ ಪತ್ರಕರ್ತ ಪ್ರೊ: ವಿ.ಬಿ.ಅರ್ತಿಕಜೆಯವರು ವಿಠಲ ಶಾಸ್ತ್ರಿಗಳ ಕಲಾ ಕೊಡುಗೆಗಳನ್ನು ನೆನಪಿಸುತ್ತಾ, 'ಶಾಸ್ತ್ರಿಗಳು ಯಕ್ಷಗಾನ ರಂಗದ ಸಮಗ್ರ ಕಲಾವಿದ. ನಿರಂತರ ಪ್ರಯೋಗ ಪ್ರಕ್ರಿಯೆಗಳಿಂದ ಪಾತ್ರಗಳಿಗೆ ಹೊಸ ಆಯಾಮವನ್ನು ನೀಡಿದವರು. ಉಭಯತಿಟ್ಟುಗಳಲ್ಲೂ ಕೀರ್ತಿಯನ್ನು ಗಳಿಸಿದವರು. ದೇಶದುದ್ದಗಲಕ್ಕೂ ತೆಂಕುತಿಟ್ಟು ಯಕ್ಷಗಾನದ ಕಂಪನ್ನು ಬೀರಿದವರು,' ಎಂದರು.    
          ಪುಣಚ ದೇವಿನಗರದ ಶ್ರೀ ದೇವಿ ವಿದ್ಯಾಕೇಂದ್ರದಲ್ಲಿ ಜರುಗಿದ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ವಹಿಸಿ, ಶಾಸ್ತ್ರಿಗಳ ಕಲಾದಿನಗಳನ್ನು ನೆನಪಿಸಿಕೊಂಡರು. ಸಂಮಾನಿತರಾದ ಮುಳಿಯಾಲ ಭೀಮಭಟ್ಟರನ್ನು ಶಾಲು, ಹಾರ, ಹಣ್ಣುಹಂಪಲು, ಸ್ಮರಣಿಕೆ ಮತ್ತು ನಿಧಿಯೊಂದಿಗೆ ಸಂಮಾನಿಸಲಾಯಿತು.      

          ಶ್ರೀದೇವಿ ವಿದ್ಯಾಕೇಂದ್ರದ ಕಾರ್ಯದರ್ಶಿ ಜಯಶ್ಯಾಮ ನೀರ್ಕಜೆ, ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್ ಶುಭಾಶಂಸನೆ ಮಾಡಿದರು. ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚ್ಯಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಕುರಿಯ ವೆಂಕಟ್ರಮಣ ಶಾಸ್ತ್ರಿ ಉಪಸ್ಥಿತರಿದ್ದರು.

          ಪ್ರಾಧ್ಯಾಪಕ ಜಿ.ಕೆ. ಭಟ್ ಸೇರಾಜೆ ಪ್ರಸ್ತಾವನೆಗೈದು, ಸ್ವಾಗತಿಸಿದರು. ಚ್ಯಾರಿಟೇಬಲ್ ಟ್ರಸ್ಟಿನ ಕುರಿಯ ಗೋಪಾಲಕೃಷ್ಣ ಶಾಸ್ತ್ರಿ ವಂದಿಸಿದರು. ಅಧ್ಯಾಪಕಿ ಗಂಗಾ ಹರಿಕೃಷ್ಣ ಶಾಸ್ತ್ರಿ ನಿರೂಪಿಸಿದರು. ಟ್ರಸ್ಟಿನ ವತಿಯಿಂದ ಶ್ರೀ ದೇವಿ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಮದ್ದಳೆಯನ್ನು ಕೊಡುಗೆಯಾಗಿ ನೀಡಲಾಯಿತು.

          ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ ನಿರ್ದೇಶನದಲ್ಲಿ 'ವೀರಮಣಿ ಕಾಳಗ' ಯಕ್ಷಗಾನ ಪ್ರದರ್ಶನ ನಡೆಯಿತು. ಸೂರಿಕುಮೇರು ಗೋವಿಂದ ಭಟ್, ಶಿವರಾಮ ಜೋಗಿ, ಜಗದಾಭಿರಾಮ ಪಡುಬಿದ್ರಿ. ಸರವು ರಮೇಶ ಭಟ್.. ಮೊದಲಾದ ಖ್ಯಾತ ಕಲಾವಿದರು ಭಾಗವಹಿಸಿದ್ದರು.

No comments:

Post a Comment