Wednesday, April 10, 2013

ಮಾಸ್ಟರ್ ವಿಠಲ ಶೆಟ್ಟರಿಗೆ 'ಪಾತಾಳ ಪ್ರಶಸ್ತಿ'


               ಹಿರಿಯ ಭರತನಾಟ್ಯ ಗುರು ಮಾಸ್ಟರ್ ವಿಠಲ ಶೆಟ್ಟರು ಈ ಸಾಲಿನ 'ಪಾತಾಳ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. ಎಪ್ರಿಲ್ 14ರಂದು ರಾತ್ರಿ 8-30ಕ್ಕೆ ಶ್ರೀ ಎಡನೀರು ಮಠದ ಶ್ರೀಕೃಷ್ಣ ಸಭಾಭವನದಲ್ಲಿ ಜರಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ.

                ಪೂಜನೀಯ ಶ್ರೀ ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಗಳ ದಿವ್ಯ ಉಪಸ್ಥಿತಿ. ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಶ್ರೀ ಕೆ. ಅನಂತಕೃಷ್ಣ ಸಭಾಧ್ಯಕ್ಷತೆ. ಹಿರಿಯ ವಿದ್ವಾಂಸ ಡಾ. ರಮಾನಂದ ಬನಾರಿ ಶುಭಾಶಂಸನೆ. ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಅಭಿನಂದನಾ ನುಡಿ. ಸಮಾರಂಭದ ಬಳಿಕ ಎಡನೀರು ಮೇಳದವರಿಂದ 'ಲಕ್ಷ್ಮೀ ಸ್ವಯಂವರ' ಬಯಲಾಟ. ಬೆಂಗಳೂರಿನ ಶ್ರೀ ಮಹಮ್ಮದ್ ಅನ್ವರ್ ಪ್ರಾಯೋಜಕತ್ವ.

                   ಎಂಭತ್ತೇಳು ವರುಷದ ವಿಠಲ ಶೆಟ್ಟರು ತಮ್ಮ ಜೀವನ ಪೂರ್ತಿ ಭರತನಾಟ್ಯಕ್ಕೆ ಸಮರ್ಪಿಸಿಕೊಂಡ ಹಿರಿಯ ಕಲಾವಿದರು. ಮಹಾನ್ ಗುರು ರಾಜನ್ ಅಯ್ಯರ್ ಅವರಿಂದ 1940ರಲ್ಲಿ ನೃತ್ಯ ಕಲಿಕೆ. ಐದು ಸಾವಿರಕ್ಕೂ ಶಿಷ್ಯರನ್ನು ರೂಪಿಸಿದ ವಿಠಲ ಮಾಸ್ಟರ್ ವಿದೇಶದಲ್ಲೂ ಶಿಷ್ಯರನ್ನು ಹೊಂದಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ಶ್ರೀ ಪಾತಾಳ ವೆಂಕಟ್ರಮಣ ಭಟ್ ಮತ್ತು ಇವರ ಚಿರಂಜೀವಿ ಪಾತಾಳ ಶ್ರೀ ಅಂಬಾಪ್ರಸಾದ್ ಇವರು ವಿಠಲ ಶೆಟ್ಟರಲ್ಲಿ ಭರತನಾಟ್ಯದ ಅಭ್ಯಾಸ ಮಾಡಿದವರು.

                      ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಗೌರವಾಧ್ಯಕ್ಷರಾಗಿರುವ 'ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ, ಎಡನೀರು' ಇದರ ಅಧ್ಯಕ್ಷ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು. ಪ್ರತಿಷ್ಠಾನವು ಕಳೆದ ಎಂಟು ವರುಷಗಳಿಂದ ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ.

No comments:

Post a Comment