Monday, April 15, 2013

ಮಾಸ್ಟರ್ ವಿಠಲ ಶೆಟ್ಟಿಯವರಿಗೆ ಪಾತಾಳ ಪ್ರಶಸ್ತಿ ಪ್ರದಾನ

                         "ಸದ್ಗುಣ, ಸೌಜನ್ಯ ಮತ್ತು ಪ್ರಾಮಾಣಿಕತೆಗಳಿಂದ ಕಲಾವಿದ ಸಮಾಜದಲ್ಲಿ ಮಾನಿಸಲ್ಪಡುತ್ತಾನೆ. ಜತೆಗೆ ಆತನಲ್ಲಿರುವ ಕಲಾವಂತಿಕೆಯೂ ಬೆಳಗುತ್ತದೆ. ಕಲೆಯನ್ನು ಆರಾಧಿಸಿದಾಗ ಕಲೆಯೂ ಬೆಳಗುತ್ತದೆ. ಕಲಾವಿದನೂ ಬೆಳೆಯುತ್ತಾನೆ. ಇದಕ್ಕಾಗಿ ಪರಿಶ್ರಮ ಬೇಕು," ಎಂದು ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

                        ಅವರು ಸೌರಮಾನ ಯುಗಾದಿಯಂದು ಶ್ರೀ ಎಡನೀರು ಮಠದ ಶ್ರೀಕೃಷ್ಣ ರಂಗಮಂಟಪದಲ್ಲಿ ಹಿರಿಯ ನೃತ್ಯಗುರು ಮಾಸ್ಟರ್ ವಿಠಲ ಶೆಟ್ಟಿಯವರಿಗೆ 'ಪಾತಾಳ ಪ್ರಶಸ್ತಿ 2013'ಯನ್ನು ಪ್ರದಾನ ಮಾಡುತ್ತಾ, "ಮಾಸ್ಟರ್ ವಿಠಲರು ಕಲೆಯನ್ನು ಆರಾಧನಾ ಭಾವದಿಂದ ಸ್ವೀಕರಿಸಿದ್ದರಿಂದ ಕಲಾದೇವಿ ಅವರನ್ನು ಎತ್ತರಕ್ಕೇರಿಸಿದ್ದಾಳೆ," ಎಂದರು. ಹಾರ, ಶಾಲು, ಗುಣಕಥನ ಫಲಕ, ಸ್ಮರಣಿಕೆ, ಹಣ್ಣುಹಂಪಲಿನೊಂದಿಗೆ ಪ್ರಶಸ್ತಿ ಮೊತ್ತ ಐದು ಸಾವಿರ ರೂಪಾಯಿಗಳನ್ನು ಪ್ರಶಸ್ತಿ ಪುರಸ್ಕೃತರಿಗೆ ಶ್ರೀಗಳು ಪ್ರದಾನ ಮಾಡಿದರು. 

                     ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ, ಎಡನೀರು ಇದರ ವತಿಯಿಂದ ನೀಡಲಾಗುವ ಒಂಭತ್ತನೇ ವರುಷದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಕೆ.ಅನಂತಕೃಷ್ಣ ವಹಿಸಿ, "ವಿದ್ಯೆ ಇಂದು ವ್ಯಾಪಾರವಾಗುತ್ತಿದೆ. ದಾನ ಪ್ರವೃತ್ತಿ ಕಡಿಮೆಯಾಗುತ್ತಿದೆ. ಕಲೆ ಬದುಕಿಗೆ ಸುಭಗತನವನ್ನು ನೀಡುತ್ತದೆ. ಮಾಸ್ಟರ್ ವಿಠಲರು ಹಲವಾರು ಶಿಷ್ಯರನ್ನು ರೂಪಿಸಿದ ಮಹಾನ್ ಗುರು," ಎಂದರು.

                       ಯಕ್ಷಗಾನ ವಿದ್ವಾಂಸ ಡಾ.ರಮಾನಂದ ಬನಾರಿ, ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ್ ಶುಭಾಶಂಸನೆ ಮಾಡಿದರು. ಉಪನ್ಯಾಸಕ ಡಾ. ಬಿ.ಎನ್.ಮಹಾಲಿಂಗ ಭಟ್ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು. ಹಿರಿಯ ಕಲಾವಿದ ಪಾತಾಳ ವೆಂಕಟ್ರಮಣ ಭಟ್ ಮತ್ತು ಅಂಬಾಪ್ರಸಾದ್ ಪಾತಾಳರು ಗುರು ವಿಠಲ ಶೆಟ್ಟರಿಗೆ ಗುರುವಂದನೆ ಸಲ್ಲಿಸಿದರು.

                       ಪಾತಾಳ ಯಕ್ಷ ಪ್ರತಿಷ್ಠಾನದ ಆಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸ್ವಾಗತಿಸಿದರು. ಶ್ರೀರಾಮ ಪಾತಾಳ, ಮಹಾಲಿಂಗ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು.
               
                    ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಶ್ರೀ ಎಡನೀರು ಮೇಳದವರಿಂದ 'ಲಕ್ಷ್ಮೀ ಸ್ವಯಂವರ' ಯಕ್ಷಗಾನ ಬಯಲಾಟ ಜರುಗಿತು. ಪ್ರತಿಷ್ಠಾನದ ಹಿತೈಷಿ ಬೆಂಗಳೂರಿನ ಮಹಮ್ಮದ್ ಅನ್ವರ್ ಅವರು ಬಯಲಾಟವನ್ನು ಆಯೋಜಿಸಿದ್ದರು.

No comments:

Post a Comment