Saturday, November 21, 2015

'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಗೆ ಕುಂಞಿಹಿತ್ಲು ಸೂರ್ಯನಾರಾಯಣ ಭಟ್


            ಹಿರಿಯ ಯಕ್ಷಗಾನ ಕಲಾವಿದ, ಕವಿ, ಸಾಹಿತಿ ಕುಂಞಿಹಿತ್ಲು ಸೂರ್ಯನಾರಾಯಣ ಭಟ್ಟರು ಈ ಸಾಲಿನ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. ನವೆಂಬರ್ 22, ರವಿವಾರ, ಸಂಜೆ 5 ಗಂಟೆಗೆ ಪುತ್ತೂರು ಟೌನ್ ಬ್ಯಾಂಕ್ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ. ಪುತ್ತೂರಿನ 'ಬೋಳಂತಕೋಡಿ ಅಭಿಮಾನಿ ಬಳಗ'ವು ಆಯೋಜಿಸುವ ಸಮಾರಂಭದಲ್ಲಿ ಕನರ್ಾಟಕ ಸಂಘದ ಮಾಜಿ ಅಧ್ಯಕ್ಷ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ ಸಂಸ್ಮರಣೆ ನಡೆಯಲಿದೆ.
              ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಹೆಚ್. ಮಾಧವ ಭಟ್ ವಹಿಸಲಿದ್ದಾರೆ. ಮಾಜಿ ಶಾಸಕ ಉರಿಮಜಲು ರಾಮ ಭಟ್ಟರು 'ಪುಸ್ತಕ ಹಬ್ಬ'ವನ್ನು ಉದ್ಘಾಟಿಸಲಿದ್ದಾರೆ. ನಿವೃತ್ತ ಕನ್ನಡ ಉಪನ್ಯಾಸಕ ಪ್ರೊ: ಹರಿನಾರಾಯಣ ಮಾಡಾವು ಬೋಳಂತಕೋಡಿಯವರ ಒಡನಾಟವನ್ನು ಜ್ಞಾಪಿಸಿಕೊಳ್ಳಲಿದ್ದಾರೆ. ಮನಃಶಾಸ್ತ್ರಜ್ಞ ಗಂಗಾಧರ ಬೆಳ್ಳಾರೆ ಅಭಿನಂದನಾ ಭಾಷಣ ಮಾಡಲಿದ್ದಾರೆ.  
               ಈ ಸಂದರ್ಭದಲ್ಲಿ ಕವಿ ರಾಧೇಶ್ ತೋಳ್ಪಾಡಿ ರಚಿತ ಶಿಶುಗೀತೆ 'ತುಂಟಗಾಳಿ ಕೈಯಲಿ' ಕೃತಿಯು ಅನಾವರಣಗೊಳ್ಳಲಿದೆ. ರಂಗಕರ್ಮಿ ಐ.ಕೆ.ಬೊಳುವಾರು ಪುಸ್ತಕ ಪರಿಚಯ ಮಾಡಲಿದ್ದಾರೆ. ರಾಜೇಶ್ ಪವರ್ ಪ್ರೆಸ್ಸಿನ ಎಂ.ಎಸ್.ರಘುನಾಥ ರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮರಂಭದ ಬಳಿಕ 'ಕವಿಕಾವ್ಯ ವಾಚನ ಗಾಯನ' ನಡೆಯಲಿದೆ. ಪದ್ಮಾ ಕೆ.ಆರ್.ಆಚಾರ್ ರಚಿಸಿರುವ ರಚನೆಗಳನ್ನು ಡಾ.ಶೋಭಿತಾ ಸತೀಶ್ ಹಾಡಲಿದ್ದಾರೆ.
            ಪ್ರಶಸ್ತಿ ಪುರಸ್ಕೃತರ ಪರಿಚಯ : ಸೂರ್ಯನಾರಾಯಣ ಭಟ್ಟರು ಮೂಲತಃ ಸುಳ್ಯ ತಾಲೂಕಿನ ಕಲ್ಮಡ್ಕದವರು. ಬೆಳ್ಳಾರೆಯಲ್ಲಿ 1976ರಿಂದ 'ಶ್ರೀ ವಾಣಿಗಣೇಶ ಪ್ರಸಾದಿತ ಕಲಾ ವೃಂದ'ದ ಮೂಲಕ ಇಪ್ಪತ್ತೈದು ವರುಷಗಳ ಕಾಲ ಯಕ್ಷಗಾನ ಕೈಂಕರ್ಯವನ್ನು ಮಾಡುತ್ತಾ ಬಂದವರು. ಯಕ್ಷಗಾನ ತಾಳಮದ್ದಳೆ, ತರಬೇತಿ, ಪ್ರಕಾಶನ, ಪುರಸ್ಕಾರ.. ಮೊದಲಾದ ಯೋಜನೆಗಳನ್ನು ಕಲಾ ವೃಂದದ ಮೂಲಕ ಮಾಡಿದವರು. ಬಹುತೇಕ ಎಲ್ಲಾ ಯಕ್ಷಗಾನ ಪ್ರಸಂಗಗಳಲ್ಲಿ ಅರ್ಥ ಹೇಳಿದ ಅನುಭವ.
             'ಜಲಜಸಖ' ಎನ್ನುವ ಕಾವ್ಯನಾಮದಿಂದ ನೂರಾರು ಸಾಹಿತ್ಯಗಳನ್ನು ರಚಿಸಿದ್ದಾರೆ. ಒಂದು ಸಾವಿರ ಚೌಪದಿಗಳನ್ನು ಕನ್ನಡದಲ್ಲಿ ಬರೆದ ಸಾಹಿತಿ. 'ಚುಟುಕು ಪಂಚಶತಿ', 'ಚಾವಟಿ' ಎನ್ನುವ ಕವನಸಂಕಲನಗಳು ಅಚ್ಚಾಗಿವೆ. ತುಳು ಚುಟುಕುಗಳು, ಭಕ್ತಿಗೀತೆಗಳು, ಕಾದಂಬರಿ, ಮಕ್ಕಳ ಸಾಹಿತ್ಯ, ಯಕ್ಷಗಾನ ಪ್ರಸಂಗ, ನಾಟಕಗಳು, ಕೀರ್ತನ ಮಾಲಾ... ಹೀಗೆ ವಿವಿಧ ವೈವಿಧ್ಯಗಳ ಸಾಹಿತ್ಯ ರಚಯಿತರು.
           ಬಹುಭಾಷಾ ಕವಿಗೋಷ್ಠಿಯೂ ಸೇರಿದಂತೆ ವಿವಿಧ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಕುಟುಂಬ ಯೋಜನೆ ಕುರಿತು ಇವರ ರಚಿಸಿದ 'ಜನಕಲ್ಯಾಣ' ಎನ್ನುವ ಯಕ್ಷಗಾನ ಪ್ರಸಂಗದ ಕೂಟಗಳು ಜನಪ್ರಿಯವಾಗಿದೆ. ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸಂಮಾನಿಸಿವೆ. ಪ್ರಕೃತ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ವಾಸವಾಗಿದ್ದಾರೆ.
          ಪುತ್ತೂರು ಟೌನ್ ಹಾಲ್ ಸಭಾಂಗಣದಲ್ಲಿ ನವೆಂಬರ್ 22 ರಿಂದ 29ರ ತನಕ 'ಪುಸ್ತಕ ಹಬ್ಬ' ಜರುಗಲಿದೆ.

No comments:

Post a Comment