Monday, October 31, 2011

ನಂದಿದ ಶತಮಾನದ ಧ್ವನಿ

ತೆಂಕು ಮತ್ತು ಬಡಗು ತಿಟ್ಟುಗಳ ಸವ್ಯಸಾಚಿ ಭಾಗವತ ಕಡತೋಕ ಮಂಜುನಾಥ ಭಾಗವತರು ವಿಧಿವಶರಾದರು. ಅಗಲಿದ ಚೇತನಕ್ಕೆ ಅಕ್ಷರ ನಮನ.

'ಕಡತೋಕ' ಎಂದರೆ ಸಾಕು, ಧರ್ಮಸ್ಥಳ ಮೇಳವೇ ಕಣ್ಣಮುಂದೆ ನಿಲ್ಲುತ್ತದೆ. ಇವರ ಹಾಡುಗಾರಿಕೆ ಒಂದು ಕಾಲಘಟ್ಟದ ಅದ್ಭುತ! ಶತಮಾನದ ಧ್ವನಿ. ಕಾಳಿಂಗ ನಾವುಡರ ಮಿಂಚಿನ ಸಂಚಾರದ ಸಮಯದಲ್ಲೂ ಕಡತೋಕ ಭಾಗವತರು ಸರಿಸಾಟಿಯಾಗಿ ಯಕ್ಷಗಾನ ರಂಗದಲ್ಲಿ ನಿಂತವರು. ಧರ್ಮಸ್ಥಳ ಮೇಳದ ಯಕ್ಷಗಾನ ವೈಭವಗಳ ದಿನಗಳ ಕುರಿತು ಮಾತನಾಡುವಾಗ ಕಡತೋಕರನ್ನು ಬಿಟ್ಟು ಮಾತನಾಡಲು ಸಾಧ್ಯವಿಲ್ಲ. ತನ್ನ ಹಾಡುಗಾರಿಕೆ ಮೂಲಕ ಪ್ರಸಂಗಗಳಿಗೆ, ಪಾತ್ರಕ್ಕೆ, ಪಾತ್ರಧಾರಿಗಳಿಗೆ ಹೊಸ 'ಸೃಷ್ಟಿ'ಯನ್ನು, 'ದೃಷ್ಟಿ'ಯನ್ನು ನೀಡಿದ ಅಸಾಮಾನ್ಯ. ಕಡತೋಕರು ರಂಗದಲ್ಲಿ ಜಾಗಟೆ ಹಿಡಿದಷ್ಟು ದಿವಸ ಅವರೇ ತ್ರಿವಿಕ್ರಮ.
ಶ್ರೀ ಧರ್ಮಸ್ಥಳ ಮೇಳದ ಮುಮ್ಮೇಳ, ಕಡತೋಕರ ಸಾರಥ್ಯದಲ್ಲಿ ಹಿಮ್ಮೇಳ, ಮುಗಿಬೀಳುವ ಪ್ರೇಕ್ಷಕ ವರ್ಗ..ಅದ್ದೂರಿ.. ಇವೆಲ್ಲ ಯಕ್ಷಗಾನದ ವೈಭವದ ದಿನಗಳು. "ಮಾತಿಗೆ" ಸಾಂಸ್ಕೃತಿಕವಾದ ಮೌಲ್ಯವನ್ನು ಕೊಟ್ಟ ದಿನಮಾನಗಳು. ಕಡತೋಕರು ಇಂದು ದೈಹಿಕವಾಗಿ ಅಗಲಿದ್ದಾರೆ. ಮಾನಸಿಕವಾಗಿ ಜೀವಂತ.

1 comment:

  1. Kadatoka was a great Bhagavata. He was one who brought life to Amrit Someshwara's prasangas during 1980s.

    ReplyDelete