Friday, July 31, 2020

ಪದ್ಯಾಣರ ಸ್ವಗತ – (ಎಸಳು 5)

ದಿನ ಸರಿಯುತ್ತಿದ್ದಂತೆ ಶಾಲೆಯು ಬಂಧನವಾಯಿತು. ಯಾರಲ್ಲೂ ಹೇಳುವ ಹಾಗಿಲ್ಲ. ಮಾನಸಿಕ ಕೊರಗು. ಅಮ್ಮನಿಗೆ ಮಗ ಶಾಲೆಗೆ ಹೋಗುತ್ತಿದ್ದಾನೆ ಎಂಬ ಸಮಾಧಾನ ಮತ್ತು ಖುಷಿ. ಮಾರ್ಕು ತೆಗೆಯಲಿ, ಬಿಡಲಿ, ಶಾಲೆಗೆ ಹೋದರೆ ಸಾಕು ಅಪ್ಪನಿಗೆ ನೆಮ್ಮದಿ. ಇಷ್ಟೆಲ್ಲಾ ಆದರೂ ಬೀಡಿ ಸಹವಾಸ ಬಿಟ್ಟಿರಲಿಲ್ಲ. ದಿನಕ್ಕೆ ಮೂರ್ನಾಲ್ಕು ಸೇದದಿದ್ದರೆ ಹುಚ್ಚು ಹಿಡಿದ ಅನುಭವ.

ಒಮ್ಮೆ ಹೀಗಾಯಿತು. ಪರೀಕ್ಷೆ ನಡೆಯುತ್ತಿತ್ತು. ಹಿಂದಿನ ಬೆಂಚ್ನಲ್ಲಿ ಕುಳಿತಿದ್ದೆ. ಡೆಸ್ಕ್ ಒಳಗೆ ತಲೆಯಿಟ್ಟು ಬೀಡಿ ಸೇದಲಾರಂಭಿಸಿದೆ. ಡೆಸ್ಕಿನ ಒಳಗಿನಿಂದ ಧೂಮ ಮೇಲೆದ್ದಾಗ ಅಧ್ಯಾಪಕರ ಬೆತ್ತ ಚುರುಕಾಯಿತು. ಎಲ್ಲಿಂದ ಪೆಟ್ಟು ಬಿತ್ತೋ ಗೊತ್ತಿಲ್ಲ. ಪರೀಕ್ಷೆ ಕೊಠಡಿಯಿಂದ ಹೊರ ದಬ್ಬಲ್ಪಟ್ಟೆ.
         
ಅಧ್ಯಾಪಕರು ಅವಮಾನ ಮಾಡಿದ್ರಲ್ಲಾ.. ಇದಕ್ಕೆ ಶಾಸ್ತಿ ಮಾಡಲೇಬೇಕು. ಹುಚ್ಚು ಮನಸ್ಸು ಎತ್ತೆತ್ತಲೋ ಓಡಾಡಿತು. ಏನು ಮಾಡಬಹುದು? ಇಬ್ಬರು ಕಟ್ಟಾಳುಗಳೊಂದಿಗೆ ಅಧ್ಯಾಪಕರ ಮುಂದೆ ನಿಂತೆ. ನನ್ನ ಸಿದ್ಧತೆ ನೋಡಿ ಕಂಗಾಲಾಗಿರಬೇಕು. ಓ ನೀನಾ.. ಬಹಳ ಚಲಾಕಿ ಇದ್ದಿಯ. ನೀನು ತಿರುಮಲೇಶ್ವರ ಭಟ್ಟರ ಮಗನಲ್ವಾ.. ಎಂದು ಬೆನ್ನು ಸವರಿ ಕುದಿಯುತ್ತಿದ್ದ ಜ್ವಾಲೆಯನ್ನು ತಣಿಸಿದರು. ಪ್ರತಿಕಾರ ಭಾವನೆ ಮಾತ್ರ ಮನದಿಂದ ಅಳಿದಿಲ್ಲ.

ಮುಖ್ಯಗುರುಗಳು ಕೊಠಡಿಯೊಳಗೆ ಪಾಠ ಮಾಡುತ್ತಿದ್ದಾಗ ಗೊತ್ತಾಗದಂತೆ ಅವರ ಬೆನ್ನಿಗೆ ಶಾಯಿಯನ್ನು ಸಿಂಪಡಿಸಿದೆ.  ಈ ಕೃತ್ಯದಿಂದ ಮುಖ್ಯಗುರುಗಳು ಸಿಟ್ಟಾದರು. ನಾಳೆ ತಂದೆಯನ್ನು ಕರೆದುಕೊಂಡು ಬಾ, ಆಜ್ಞಾಪಿಸಿ ಕಳುಹಿಸಿದರು. ಎರಡನೇ ಬಾರಿ ದಬ್ಬುವಿಕೆ! ಸ್ನೇಹಿತರ ಮುಂದೆ ಮುಖ ತೋರಿಸಲು ನಾಚಿಕೆಯಾಯಿತು.

ತಂದೆಯವರು ಮನೆಯಲ್ಲಿರಲಿಲ್ಲ. ಹಣಕಾಸು ವ್ಯವಹಾರಕ್ಕೆ ಮೂರ್ನಾಲ್ಕು ದಿವಸ ಮನೆಯಿಂದ ಹೊರಗಿದ್ದರು. ಹಗಲಿಡೀ ಗುಡ್ಡದಲ್ಲಿ ತಿರುಗಾಡಿ ಸಂಜೆ ಮನೆಗೆ ಬರುತ್ತಿದ್ದೆ. ಮಗ ಶಾಲೆಗೆ ಹೋಗಿದ್ದಾನೆ ಎಂದು ಅಮ್ಮ ನಂಬಿದ್ದರು. ಒಂದು ದಿವಸ ನಾನು ಶಾಲೆಗೆ ಹೋಗುವುದಿಲ್ಲ ಎಂದೆ. ಅಮ್ಮನಿಗೆ ದಿಗಿಲು, ಕೋಪ, ದುಃಖ ಎಲ್ಲವೂ ಒತ್ತರಿಸಿ ಬಂತು.

ತಂದೆಯವರು ಶಿಸ್ತಿನ ಮನುಷ್ಯ. ಸಿಟ್ಟು ಬಂದರೆ ಜಮದಗ್ನಿ ಋಷಿಗಳ ಅಪರಾವತಾರ! ಆಗ ನಾಗರಬೆತ್ತಕ್ಕೆ ಜೀವ ಬರುತ್ತದೆ. ಅದಕ್ಕೆ ಯಾರಾದರೊಬ್ಬರು ಬಲಿಯಾಗಲೇಬೇಕಿತ್ತು. ಹಲವು ಬಾರಿ ಅದರ ರುಚಿಯನ್ನು ಉಂಡಿದ್ದೆ. ಪೆಟ್ಟಿನ ಹೆದರಿಕೆ ಗರ್ಭದಲ್ಲಿ ಕುಳಿತಿತ್ತು. ಶಾಲೆಯಿಂದ ದಬ್ಬಲ್ಪಟ್ಟ ವಿಚಾರ ಅಪ್ಪನಿಗೆ ಗೊತ್ತಾದರೆ ನಾಗರಬೆತ್ತ  ಬೆನ್ನಲ್ಲಿ ಕುಣಿಯುವುದು ಖಚಿತ. ಏನು ಮಾಡೋಣ.

ಅಂದು ಕೆರೆಕ್ಕೋಡಿಯಲ್ಲಿ ಶ್ರಾದ್ಧ. ಮಧ್ಯಾಹ್ನದ ಬಸ್ಸಿಗೆ ಅಪ್ಪ ಬರುವ ಹೊತ್ತು ಸವಿೂಪಿಸುತ್ತಿತ್ತು. ಒತ್ತಡಕ್ಕೊಳಗಾಗಿದ್ದೆ. ಎಷ್ಟು ಯೋಚಿಸಿದರೂ ನಾಗರಬೆತ್ತದ ದಿಂಗಿಣವೇ ಕಾಣತೊಡಗಿತು. ಶಾಲೆಗೆ ಹೋಗುವುದಿಲ್ಲ ಎಂದು ಗೊತ್ತಾದರೆ ತಂದೆ ಹೊಡೆಯುವುದಲ್ಲ, ಕೊಂದು ಬಿಟ್ಟಾರು. 

ಅಪ್ಪನಿಂದ ತಪ್ಪಿಸಿಕೊಳ್ಳಬೇಕು, ಪೆಟ್ಟೂ ತಪ್ಪಬೇಕು ಅಷ್ಟೇ. ಮನೆಯೊಳಗೆ ಬಾಳೆಹಣ್ಣಿನ ಗೊನೆ ತೂಗುತ್ತಿತ್ತು. ಹೊಟ್ಟೆತುಂಬಾ ಬಾಳೆಹಣ್ಣು ತಿಂದೆ. ಬೀಡಿಯೊಂದಿಗೆ ಅಟ್ಟ ಸೇರಿದೆ. ಕ್ಷಣಕ್ಷಣಕ್ಕೆ ಒತ್ತಡ ಹೆಚ್ಚಾಗುತ್ತಿತ್ತು. ಒತ್ತಡ ನಿವಾರಣೆಗೆ ಬೀಡಿಗೆ ಬೆಂಕಿಕೊಟ್ಟು ಸೇದುತ್ತಾ ಕುಳಿತೆ. ಏನಾಯಿತೋ ಗೊತ್ತಿಲ್ಲ. ಮನೆಯ ಸೂರಿಗೆ ಬೆಂಕಿ ಹಿಡಿದು ಉರಿಯುತ್ತಿತ್ತು! ಅಟ್ಟದಿಂದ ಹಾರಿಬಿದ್ದು ಗುಡ್ಡಕ್ಕೆ ಹೋದೆ.

No comments:

Post a Comment