“ಯಕ್ಷಗಾನ ಕಲಾವಿದರ ಸಾಧನೆಗಳು ಅಕಾಡೆಮಿಕ್ ನೆಲೆಯಲ್ಲಿ ದಾಖಲಾದುದು ತೀರಾ ಕಡಿಮೆ. ಒಬ್ಬೊಬ್ಬ ಕಲಾವಿದನಲ್ಲೂ ಅಪ್ರತಿಮವಾದ ಕಲಾ ಸಂಪನ್ಮೂಲಗಳಿವೆ. ಅವೆಲ್ಲಾ ರಂಗ ದುಡಿಮೆಗೆ ಅಥವಾ ಸಂಮಾನದ ಅಭಿನಂದನಾ ಮಾತುಗಳಿಗೆ ಸೀಮಿತವಾಗಿದೆ. ಕಲಾವಿದನ ಕಾಲಾ ನಂತರ ಆತನ ಸಾಧನೆಗಳು ಮರೆವಿಗೆ ಜಾರುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ದಾಖಲಾತಿಗಳು ನಡೆಯಬೇಕು. ಯಕ್ಷಗಾನ ಕೇಂದ್ರಗಳು, ಅಧ್ಯಯನ ಸಂಸ್ಥೆಗಳು, ಯಕ್ಷಗಾನದ ಸಕ್ರಿಯ ಹವ್ಯಾಸಿ ಸಂಘಗಳು ತಮ್ಮ ಮಿತಿಯಲ್ಲಿ ಈ ಕಾರ್ಯವನ್ನು ಮಾಡಿದರೆ ಮುಂದಿನ ತಲೆಮಾರಿಗೆ ಕಲಾವಿದನ ಸಾಧನೆಯನ್ನು ಪರಿಚಯಿಸಿದಂತಾಗುತ್ತದೆ. ಎಂದು ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಹೇಳಿದರು.
ಅವರು ಮಧೂರು ಕ್ಷೇತ್ರದಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಹಿರಿಯ ಕಲಾವಿದ ಕೀರ್ತಿಶೇಷ ಮಧೂರು ಗಣಪತಿ ರಾವ್ ಅವರನ್ನು ಕಲಾ ಯಾನವನ್ನು ನೆನಪಿಸುತ್ತಾ,“ಯಕ್ಷಗಾನ ಸಂಘಗಳ ಪ್ರದರ್ಶನಗಳು ವೃತ್ತಿ ರಂಗಭೂಮಿಯ ನೆರಳಾಗಬಾರದು. ಹಿರಿಯರನ್ನು ನೆನಪಿಸುವ ಕಾರ್ಯ ಸ್ತುತ್ಯ” ಎಂದರು. ಕುತ್ಯಾಳ ಡ್ಲು ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರವು ತನ್ನ 'ರಜತರಂಗ' ಸಂಭ್ರಮದ ಪ್ರಯುಕ್ತ 'ಹಿರಿಯರ ನೆನಪು' ಸರಣಿ ಕಾರ್ಯಕ್ರಮವನ್ನು (16-11-2025) ಆಯೋಜಿಸಿತ್ತು.
ಶ್ರೀ ಎಡನೀರು ಮಠದ ಸತೀಶ್ ಎಡನೀರು ದೀಪಜ್ವಲನದ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಹಿರಿಯ ಜ್ಯೋತಿಷಿ ನಾರಾಯಣ ರಂಗಾಭಟ್ಟ, ಮಧೂರು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಪ್ರಸಾದ್, ತರಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಧೂರು ಗಣಪತಿ ರಾವ್ ಅವರ ಚಿರಂಜೀವಿ ಶ್ರೀ ಕೃಷ್ಣ ರಾವ್ ಮಧೂರು ಇವರನ್ನು ಭಾಗವತ ತಲ್ಪಣಾಜೆ ವೆಂಕಟ್ರಮಣ ಭಟ್ ಅಭಿನಂದಿಸಿದರು. ಕಲಾವಿದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರು ಶುಭ ಹಾರೈಸಿದರು.
ಗೋಪಾಲಕೃಷ್ಣ ಕೆ. ಇವರು ಸ್ವಾಗತಿಸಿ, ನಿರ್ವಹಿಸಿದರು. ಕೃಷ್ಣಮೂರ್ತಿ ಅಡಿಗ ವಂದಿಸಿದರು. ಸುರೇಶ್ ಮಣಿಯಾಣಿ, ವಿಘ್ನೇಶ್ ಕಾರಂತ, ಸುಜನ್, ಆಕಾಶ್, ಅರ್ಜುನ್ ಸಹಕರಿಸಿದರು.
ಕೊನೆಯಲ್ಲಿ 'ಕರ್ಣ ಭೇದನ' ಪ್ರಸಂಗದ ತಾಳಮದ್ದಳೆ ಸಂಪನ್ನಗೊಂಡಿತು. ಕಲಾವಿದರಾಗಿ ತಲ್ಪಣಾಜೆ ವೆಂಕಟ್ರಮಣ ಭಟ್ (ಭಾಗವತರು), ಲಕ್ಷ್ಮೀಶ ಬೆಂಗ್ರೋಡಿ (ಮದ್ದಳೆ), ಪವನ್ ಸ್ವರ್ಗ (ಚೆಂಡೆ), ಅರ್ಪಿತ್ ಶೆಟ್ಟಿ ಕೂಡ್ಲು (ಚಕ್ರತಾಳ); ನಾ. ಕಾರಂತ ಪೆರಾಜೆ, ಸದಾಶಿವ ಆಳ್ವ ತಲಪಾಡಿ, ಚಂದ್ರಮೋಹನ್ ಕೂಡ್ಲು, ಕೃಷ್ಣಮೂರ್ತಿ ಅಡಿಗ (ಅರ್ಥದಾರಿಗಳು) ಸಹಕರಿಸಿದರು. ಕಾರ್ಯಕ್ರಮಕ್ಕೆ ಯಕ್ಷಕಲಾಕೌಸ್ತುಭ ಮಧೂರು ಇವರ ಸಹಕಾರವಿತ್ತು.
















