Monday, July 28, 2025

ಯಕ್ಷಶಾಂತಲೆಯ ಅಂತರಂಗ (ನಿರೂಪಣೆ : ನಾ. ಕಾರಂತ ಪೆರಾಜೆ)




{ಪಾತಾಳ ವೆಂಕಟ್ರಮಣ ಭಟ್‌ (1933-2025) ಖ್ಯಾತ ಸ್ತ್ರೀಪಾತ್ರಧಾರಿ. ಕಲಾಸಂಶೋಧಕ. 19-7-2025ರಂದು ವಿಧಿವಶರಾದರು. ಅವರ ಕುರಿತಾಗಿ 2008ರಲ್ಲಿ ಉದಯವಾಣಿಯಲ್ಲಿ ಪ್ರಕಟಗೊಂಡ ಈ ಲೇಖನದ ಮರುಓದು ಪಾತಾಳರಿಗೆ ನುಡಿ ನಮನ. ಇಲ್ಲಿರುವುದು ಅವರದೇ ಮಾತುಗಳು.}                 

ಯಕ್ಷಗಾನ ನನಗೆ ಬಾಲ್ಯದ ನಂಟು. ಮುಂದದು ಬದುಕಿಗಂಟಿತು. ಬಿಟ್ಟೆನೆಂದರೂ ಬಿಡದೆ ಹಿಂಬಾಲಿಸಿತು. ಬಣ್ಣದ ಲೋಕದ ಮೋಹಕತೆಗೆ ಮಾರುಹೋಗಿ, ಸೇರಿದ್ದು ಮೇಳದ ಅಡುಗೆ ಮನೆಗೆ! ಹಗಲು ಬಾಣಸಿಗ, ರಾತ್ರಿ ಯಕ್ಷಗಾನ ಪ್ರೇಕ್ಷಕ.

ಮೈಕಟ್ಟು, ಸ್ವರ ಹೆಣ್ಣು ಪಾತ್ರಕ್ಕೆ ಲಾಯಕ್ಕು - ಮೇಳದ ಕಲಾವಿದರ ಛೇಡನೆ(?)ಯಿಂದ ಉಬ್ಬಿ ಉದ್ದಾಗಿದ್ದೆ. ಸೌಟು ತಿರುಗಿಸುವಾಗ, ಒರೆಕಲ್ಲು ತಿರುಗುವಾಗ ಮನದ ಮೂಲೆಯಲ್ಲಿ ನನ್ನ ಕಲ್ಪನೆಯ ಸ್ತ್ರೀ ಪಾತ್ರಗಳೂ ಕುಣಿಯುತ್ತಿದ್ದುವು! ನಿತ್ಯ ಆಟ ನೋಡಿದ್ದರಿಂದ ಸಂಭಾಷಣೆಗಳು ನೆನಪಿನಂಗಳಲ್ಲಿ ಗಿರಕಿ ಹಾಕುತ್ತಿದ್ದುವು.

ಅಂದು 'ವಿಶ್ವಾಮಿತ್ರ ಮೇನಕೆ' ಕಥಾನಕ. ಹಿರಿಯ ಪಾತ್ರಧಾರಿಯೊಬ್ಬರು ಮೇಳಕ್ಕೆ ಕೈಕೊಟ್ಟ ದಿನ. ಅಂದೇ ಕಲಾ ದೇವಿ ನನ್ನ ಕೈಹಿಡಿದಳು. ಮೇನಕೆಯಾಗಿ ರಂಗವೇರಿದೆ. ನೋಡಿ ಕಲಿತಷ್ಟು ಕೈಕಾಲು ಕುಣಿಸಿದೆ, ನೆನಪಿಗೆ ಬಂದಷ್ಟು ಮಾತನಾಡಿದೆ. ಪ್ರೇಕ್ಷಕರ ಪ್ರಶಂಸೆ, ಹಿರಿಯ ಕಲಾವಿದರ ಪ್ರೋತ್ಸಾಹ-ಹಾರೈಕೆಗಳಿಂದ ಕಲಾವಿದನಾದೆ!

ಹಗಲು ತರಬೇತಿ, ಅಧ್ಯಯನ. ಕಲಿತ ನಾಟ್ಯ, ಅರ್ಥಗಾರಿಕೆ ರಂಗಸ್ಥಳದಲ್ಲಿ ಪ್ರಯೋಗ. ಮೇನಕೆಯಲ್ಲಿದ್ದ ಆತಂಕ ದಕ್ಷಾಧ್ವರ ಪ್ರಸಂಗದ 'ದಾಕ್ಷಾಯಿಣಿ', ಬ್ರಹ್ಮಕಪಾಲದ 'ಶಾರದೆ' ಪಾತ್ರಗಳಲ್ಲಿ ಉಂಟಾಗಲಿಲ್ಲ.

ಯಾವ ಕ್ಷಣ ನಾನು ರಂಗದಲ್ಲಿ ಹೆಣ್ಣಾದೆನೋ, ಅವಕಾಶಗಳ ಬಾಗಿಲುಗಳು ತೆರೆಯಿತು. ಕಾಂಚನ ಮೇಳದಿಂದ ಸೌಕೂರು ಮೇಳಕ್ಕೆ ಪಯಣ. ಪಾತ್ರ ನಿರ್ವಹಣೆಗೆ ಪೂರಕವಾಗುವಂತಹ ನೃತ್ಯ, ಭರತನಾಟ್ಯಗಳನ್ನು ಕಲಿತೆ. ತೆಂಕು-ಬಡಗಿನುದ್ದಕ್ಕೂ ವ್ಯವಸಾಯ ಮಾಡಿದೆ. ಪರಿಣಾಮ, ನನ್ನ ಸ್ತ್ರೀಪಾತ್ರವನ್ನು ನೋಡಿದ ಹೆಣ್ಮಕ್ಕಳೇ ನಾಚುತ್ತಿದ್ದರು!

ಮೂಲ್ಕಿ ಮೇಳದಿಂದ ವೃತ್ತಿ ಬದುಕಿಗೆ ಹೊಸ ತಿರುವು. ನನಗೆ 'ತಾರಾಮೌಲ್ಯ' ತಂದ ಮೇಳ. ಕಾರಣರಾದ ಪೆರುವಡಿ ನಾರಾಯಣ ಹಾಸ್ಯಗಾರರನ್ನು ಮರೆಯಲುಂಟೇ? ಮುಂದೆ ಸುರತ್ಕಲ್ ಮೇಳ. ದೊಡ್ಡ ಸಾಮಗರೆಂದೇ ಖ್ಯಾತರಾದ ಶಂಕರನಾರಾಯಣ ಸಾಮಗರೊಂದಿಗೆ ವೇಷ ಮಾಡುವ ಆ ಕ್ಷಣ ಇದೆಯಲ್ಲಾ. ಅದು ಬದುಕಿನ ದೊಡ್ಡ ಅವಕಾಶ. ತುಳುಪ್ರಸಂಗಗಳು ನನಗೆ ಸವಾಲಾದರೂ, ಸಾಮಗರ ಜತೆಯಲ್ಲಿದ್ದಾಗ ಕಲಿಕೆ. ಇದರಿಂದಾಗಿ ಶುದ್ಧ ತುಳುವನ್ನು ಕಲಿಯುವಂತಾಯ್ತು. ಧರ್ಮಸ್ಥಳ ಮೇಳದ ಸೇರ್ಪಡೆಯ ನಂತರ ನಿವೃತ್ತಿ ತನಕವೂ ಅದೇ ಮೇಳದಲ್ಲಿ ವ್ಯವಸಾಯ ಮಾಡಿದೆ.

ಮೇಳಕ್ಕೆ ಸೇರಿದ ಸಮಯದಲ್ಲಿ ರಂಗದಲ್ಲಿ ಸ್ತ್ರೀ ಪಾತ್ರಗಳು ಸಾಮಾನ್ಯ ಹೆಂಗುಸರಂತೆ ನಿರ್ವಹಿಸಲ್ಪಡುತ್ತಿತ್ತು. ಸೀರೆ, ತಲೆಗೆ ಹೂದಂಡೆ. ಮೇನಕೆ, ಮೋಹಿನಿ ಪಾತ್ರಕ್ಕಾಗುವಾಗ 'ಅರ್ಧಸಾರಿ' (ಹಾಫ್ಸಾರಿ). ಶಿರೋಭೂಷಣ ಎಂಬುದಿಲ್ಲ. ಗರತಿ ಪಾತ್ರಕ್ಕೆ ಸೆರಗನ್ನು ಶರೀರದ ಎಲ್ಲಾ ಅಂಗ ಮುಚ್ಚುವಂತೆ ಸೀರೆ ಉಟ್ಟರಾಯಿತು. ಮುಖ್ಯ ಸ್ತ್ರೀಪಾತ್ರಕ್ಕೆ ಮೇಳದಿಂದ ಬೆಳ್ಳಿಯ ಪಟ್ಟಿ ನೀಡಲಾಗುತ್ತಿತ್ತು. ಕೊರಳಲ್ಲಿ ಮೂರ್ನಾಲ್ಕು ಮಣಿಹಾರ. ಕೈಬಳೆ, ಪುಂಡುವೇಷದ ಕೈಕಟ್ಟು. ರಾಣಿ ಪಾತ್ರಕ್ಕೆ ತುರಾಯಿ. ಸ್ತ್ರೀಪಾತ್ರಕ್ಕೇ ಪ್ರತ್ಯೇಕವಾದ ವೇಷಭೂಷಗಳು ಇರಲಿಲ್ಲ.

ಗೌಡಸಾರಸ್ವತ ಅಭಿಮಾನಿಯೊಬ್ಬರು ಹದಿನೆಂಟು ಮೊಳದ ಸೀರೆಯನ್ನು ಕಚ್ಚೆ ಹಾಕಲು ನನಗೆ ಬಹುಮಾನವಾಗಿ ನೀಡಿದ್ದರು. ಅಂದಿನಿಂದ ನಾನು ಕಚ್ಚೆ ಹಾಕಿಯೇ ಸ್ತ್ರೀವೇಷ ಮಾಡಲು ಆರಂಭಿಸಿದ್ದೆ.

1958, ಶಿವರಾಮ ಕಾರಂತರು ಯಕ್ಷಗಾನದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಕಾಲಘಟ್ಟ. ಅವರ ನೇತೃತ್ವದ ಬ್ಯಾಲೆ ಸುದ್ದಿ ಮಾಡಿತ್ತು. ಕಾರಂತರ 'ಯಕ್ಷಗಾನ' ಕೃತಿ ನನ್ನನ್ನು ಆಕರ್ಶಿಸಿತು. ಯಕ್ಷಗಾನ ಸ್ತ್ರೀ ಪಾತ್ರದ ಕುರಿತು ನಾನ್ಯಾಕೆ ಬದಲಾವಣೆ ತರಬಾರದು?

ಸ್ತ್ರೀವೇಷಕ್ಕೆ ಒಪ್ಪುವ ಆಭರಣಗಳನ್ನು ಹೇಗೆ ತಯಾರಿಸುವುದು? ಹಳೆಯ ಮಾದರಿಗಳು ಎಲ್ಲಿವೆ? ಆಗ 'ಪರಂಪರೆ' - ಯಕ್ಷಗಾನ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿತ್ತು. ಹಾಗಿದ್ದರೆ ಹಿಂದೊಂದು ಪರಂಪರೆ ಉಂಟೆಂದಾಯಿತು. ಅದು ಯಾವುದು? ಯಾವುದೇ ಆಕ್ಷೇಪಗಳು ಬಾರದಂತೆ ಇರುವ ಪರಂಪರೆಯ ವೇಷಭೂಷಗಳನ್ನು ತಯಾರಿಸಿದರೆ ಹೇಗೆ?

ಅದೇ ಹೊತ್ತಿಗೆ ಡಿ.ವಿ.ಜಿ.ಯವರ ಅಂತಃಪುರ ಗೀತೆಗೆ ಮಾರುಹೋದೆ. ಒಂದೊಂದು ಪಾತ್ರಗಳನ್ನು ವಿಭಿನ್ನವಾಗಿ ನಿರ್ವಹಿಸಬಹುದಾದ ಹೊಸ ಚಿತ್ರಣಗಳು ಹೊಳೆದುವು. ನನ್ನ ನಿರೀಕ್ಷೆಯ ಶಿಲ್ಪಗಳು ಮನದಲ್ಲಿ ಮೂರ್ತರೂಪ ಪಡೆಯಲಾರಂಭಿಸಿದುವು. ಅಂತಃಪುರ ಗೀತೆಯಲ್ಲಿನ ಶಿಲ್ಪಗಳ ವಿವರಗಳು ಬೇಲೂರಿನ ಶಿಲಾಬಾಲಿಕೆಗಳ ನೆನಪನ್ನು ತಂದಿಟ್ಟಿತು. ಶಿಲಾಬಾಲಿಕೆಯರ ಅಭ್ಯಾಸಕ್ಕಾಗಿ ಬೇಲೂರಿಗೆ ಹೋದೆ.

ಹಿರಿಯ ಕಲಾವಿದ ಲಕ್ಷ್ಮಣ ಆಚಾರ್ರ ಮನೆಯಲ್ಲೇ ವಾಸ್ತವ್ಯ. ಶಿಲ್ಪಗಳ ಅಧ್ಯಯನ. ಕೆಲವು ಶಿಲ್ಪಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಎತ್ತರದ ಕಿರೀಟ, ದೊಡ್ಡ ಡಾಬು, ತೋಳ್ಕಟ್ಟು...ಹೊಂದಿದ್ದುವು. ಎಲ್ಲವೂ ಆಳಂಗದ ಅಳತೆಗಿಂತ ದೊಡ್ಡದಾಗಿದ್ದುವು.

ಹೀಗೆ ಅಧ್ಯಯನ ಮಾಡುತ್ತಿದ್ದಾಗ ಶಿಲ್ಪದ ಅಂಗಭಂಗಿಗಳು, ಬಾಗುಗಳು, ಕಣ್ಣಿನ ನೋಟಗಳನ್ನು ಜೊತೆಜೊತೆಗೆ ಕಲಿತೆ. ರಂಗದಲ್ಲಿ ನಾನೂ ಅವುಗಳಂತೆ ಯಾಕಿರಬಾರದು?

ಡಾಬು, ತೋಳುಕಟ್ಟು, ಕೊರಳ ಆಭರಣಗಳು, ಶಿರೋಭೂಷಣಗಳ ಆಯ ಅಳತೆಯನ್ನು ತಂದು ಬ್ರಹ್ಮಾವರದ ಸುಬ್ಬಣ್ಣ ಭಟ್ಟರ ಮುಂದಿಟ್ಟು, ನನಗೂ ಇಂತಹುದೇ ಮಾಡಿಕೊಡುವಂತೆ ಬಿನ್ನವಿಸಿದೆ. ಅಂದಿನ ಪೂಜ್ಯ ಖಾವಂದರು ವೆಚ್ಚವನ್ನು ಭರಿಸಿದ್ದರು.

ಧರ್ಮಸ್ಥಳ ಮೇಳ ಸೇರುವಾಗ 'ನನ್ನ ವೇಷ ಹೀಗೆಯೇ ಇರಬೇಕು' ಎಂಬ ನಿರ್ಣಯಕ್ಕೆ ಬಂದಿದ್ದೆ. ಇದಕ್ಕೆ ಪೂರಕವಾಗಿ ವೇಷಭೂಷಗಳು ಸೊಗಸನ್ನು ತಂದುವು. ಶಿಲ್ಪಗಳಲ್ಲಿರುವ ಬಾಗು, ಬಳಕುಗಳನ್ನು ಯಥಾಸಾಧ್ಯ ಅನುಸರಿಸಿದೆ. ರಂಗಕ್ಕದು ಹೊಸದಾದುದರಿಂದ ಕಲಾವಿದರ ಗೇಲಿಗೂ ಒಳಗಾದೆ!

ವಿಟ್ಲದಲ್ಲಿ ಬಾಬುಮಾಸ್ತರ್ ಎಂಬ ಕಲಾವಿದರಿದ್ದರು. ಅವರು ಪರದೆ ವಿನ್ಯಾಸದಲ್ಲಿ ಖ್ಯಾತರು. ವರ್ಣಸಂಯೋಜನೆಯಲ್ಲಿ ಎತ್ತಿದ ಕೈ. ನನಗೆ ಕಲಿಸುವಂತೆ ದುಂಬಾಲುಬಿದ್ದೆ. ಅವರಿಂದ ಕಲಿತ ವರ್ಣಗಾರಿಕೆ ನನ್ನೆಲ್ಲಾ  ಕಲ್ಪನೆಗಳ ಸಾಕಾರಕ್ಕೆ ಪುಷ್ಟಿನೀಡಿದುವು. ವಿಭಿನ್ನ ಸ್ವಭಾವದ ಪಾತ್ರಗಳಿಗೆ ವಿವಿಧ ವರ್ಣಗಳ 'ಟಚ್ಅಪ್' ಕೊಡುತ್ತಿದ್ದೆ. ರಸ ಶೃಂಗಾರವಾದರೂ ಮೇನಕೆ, ಮಾಯಾ ಶೂರ್ಪನಖಿ, ಮಾಯಾ ಅಜಮುಖಿ, ಮೋಹಿನಿಗಳಲ್ಲಿ ಸ್ವಭಾವಕನ್ನುಗುಣವಾದ ಲಾಸ್ಯವನ್ನು ತರಲು ಸಾಧ್ಯವಾಯಿತು.

ನನಗೆ ವೇಷ ತಯಾರಾಗಲು ಕನಿಷ್ಠ ಮೂರು ಗಂಟೆಗಳಾದರೂ ಬೇಕು. ಅವಸರದಲ್ಲಿ ವೇಷ ಮಾಡಲು ಕಷ್ಟ. ನಾಜೂಕು ಬಾರದಿದ್ದರೆ ವೇಷ ಪೂರ್ಣವಾಗುವುದಿಲ್ಲ. ಗೌರವದ ಪಾತ್ರಗಳಿಗೆ ಹುಬ್ಬಿನ ಮೇಲೆ ಮಕರಿಕಾ ಪತ್ರ ಬಿಡಿಸುತ್ತಿದ್ದೆ. ತಿಲಕವು ಅವರವರ ಮುಖದ ಆಕಾರಕ್ಕೆ ತಕ್ಕುದಾಗಿರಬೇಕು. ಮುಖ ಸಣ್ಣದು, ತಿಲಕ ದೊಡ್ಡದು - ಇದು ವಿಕಾರ, ಆಭಾಸ. ಗರತಿ ಪಾತ್ರಗಳಿಗೆ ಉರುಟು ತಿಲಕ. ಗೌರಿ ಪಾತ್ರಕ್ಕೆ ಸಣ್ಣ ಅರ್ಧಚಂದ್ರ. ದೇವಿ ಪಾತ್ರಕ್ಕೆ ಹಣೆ ತುಂಬ ಬರುವಂತೆ ಅರ್ಧಚಂದ್ರ. ಮಿಕ್ಕುಳಿದ ಪಾತ್ರಗಳಿಗೆಲ್ಲಾ ಶಂಕುವಿನಾಕಾರದ ತಿಲಕ.

ಮುಖದ ಬಣ್ಣದಲ್ಲಿ ಎಷ್ಟು ವಿನ್ಯಾಸವಿರುತ್ತಿತ್ತೋ, ಅಷ್ಟೇ ಕುಸುರಿ ಜಡೆಯ ಅಲಂಕಾರದಲ್ಲಿ ಇರುತ್ತಿತ್ತು. ಮೇಳದಲ್ಲಿ ನನಗೆ ನೀಡುತ್ತಿದ್ದ ಸೀರೆ ಎರಡು ಮೂರು ವರುಷ ಬಾಳ್ವಿಕೆ ಬರುತ್ತಿತ್ತು. ಸೆರಗುಜಾರದಂತೆ ಈಗಿನವರು ಪಿನ್ ಹಾಕುತ್ತಾರೆ. ನಾನು ಪಿನ್ ಹಾಕುತ್ತಿರಲಿಲ್ಲ. ಒಮ್ಮೆ ನೆರಿ ಹಿಡಿದರೆ ಆಯಿತು. ಮತ್ತೆ ಅದೇ ಜಾಗದಲ್ಲಿ ನೆರಿ ನಿಲ್ಲುತ್ತಿತ್ತು!

ಹದಿನೇಳು ವರುಷದ ಧರ್ಮಸ್ಥಳ ಮೇಳದ ತಿರುಗಾಟ ಮರೆಯುವಂತಹುದಲ್ಲ. ಶ್ರೀ ಧರ್ಮಸ್ಥಳ ಮೇಳವು ಸ್ತ್ರೀಪಾತ್ರದ ಕುರಿತಾದ ನನ್ನೆಲ್ಲಾ ಆವಿಷ್ಕಾರಗಳಿಗೆ ತೆರೆದ ಬಾಗಿಲಾಗಿತ್ತು. ಪೂಜ್ಯ ಕಾವಂದರು ಪ್ರೋತ್ಸಾಹಿಸಿದ್ದಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಕಥಾನಕದ 'ಅಮ್ಮುದೇವಿ', ವಿಕ್ರಮೋರ್ವಶೀಯದ 'ಊರ್ವಶಿ', ಅಶೋಕಸುಂದರಿ, ರಂಭೆ, ಕೈಕೆ, ಗುಣಸುಂದರಿ ಪಾತ್ರಗಳು ನನ್ನ ನಿರೀಕ್ಷೆಗೂ ಮಿಕ್ಕಿ ಮೆರೆದುವು. ಇದಕ್ಕೆ ಕಾರಣ ನಾನಲ್ಲ, ಕಡತೋಕ ಮಂಜುನಾಥ ಭಾಗವತರು. ಶೇಣಿಯವರು, ಪುತ್ತೂರು ನಾರಾಯಣ ಹೆಗಡೆಯವರು, ಕುಂಬಳೆ ಸುಂದರ ರಾಯರು, ಕೆ.ಗೋವಿಂದ ಭಟ್ಟರು..ಇವರೆಲ್ಲರ ಕೊಡುಗೆ ನನ್ನ ಪಾತ್ರದ ಯಶಸ್ಸಿನಲ್ಲಿತ್ತು.

ಕಡತೋಕರು ನನ್ನ ಅಮ್ಮದೇವಿ ಪಾತ್ರವನ್ನು ಮೆಚ್ಚಿಕೊಂಡು ಆಡಿದ ಮಾತು ಎಂದಿಗೂ ಮರೆಯಲಾರೆ - 'ಶೃಂಗಾರದ ಲವಲೇಶವೂ ಇಲ್ಲದ ಈ ಸಭ್ಯ ಗೃಹಿಣಿಯ ಪಾತ್ರವನ್ನು ಜೈನರೂ ಮೆಚ್ಚುವಂತೆ ನಿರ್ವಹಿಸಿದ್ದಾರೆ'.

ವಯಸ್ಸಾದಂತೆ ದೇಹವೂ ಮಾಗಿದೆ. ಒಂದು ಕಾಲಘಟ್ಟದಲ್ಲಿ ನನ್ನ ವೇಷ ರಂಗಸ್ಥಳಕ್ಕೆ ಬರುವುದನ್ನೇ ಕಾಯುತ್ತಿದ್ದ ಪ್ರೇಕ್ಷರಿದ್ದರು. ಸುಮಾರು 1981ರ ಸುಮಾರಿಗೆ ಜನರ ಸ್ಪಂದನ ಮೊದಲಿನಂತಿರಲಿಲ್ಲ! ವೇಷದ ಆಕರ್ಷಣೆ ಕುಂಠಿತವಾಗಿತ್ತು. ಮೇಳದ ವಿದಾಯಕ್ಕೆ ಮನ ಮಾಡಿದೆ. ನನ್ನ ಉತ್ಕರ್ಷಕ್ಕೆ ಕಾರಣರಾದ ಪೂಜ್ಯ ರತ್ನವರ್ಮ ಹೆಗ್ಗಡೆಯವರು, ಪೂಜ್ಯ ವೀರೇಂದ್ರ ಹೆಗ್ಗಡೆಯವರನ್ನು ನೆನೆಯುತ್ತಾ, ಶ್ರೀ ಧರ್ಮಸ್ಥಳ ಮೇಳವೆಂಬ ಕುಟುಂಬದಿಂದ ಭಾರವಾದ ಹೃದಯದೊಂದಿಗೆ ಸಂಸಾರ ಸೇರಿದೆ.

ಯಕ್ಷಗಾನದಲ್ಲಿ ಅನುಕರಣೆ ಸಾಮಾನ್ಯ. ಆದರೆ ದುರಾದೃಷ್ಟ ನೋಡಿ! ನನ್ನ ವೇಷಭೂಷಣ, ರಂಗಕ್ರಮಗಳನ್ನು ಯಾರೂ ಅನುಸರಿಸಲಿಲ್ಲ! ಬಹುಶಃ ಉಳಿದ ವೇಷಗಳಂತೆ ಸರಳವಾಗಿಲ್ಲದಿದ್ದುದೂ ಆಗಿರಬಹುದು.

ಮೇಳದಿಂದ ನಿವೃತ್ತನಾಗಿ ಇಪ್ಪತ್ತೇಳು (2008ರಲ್ಲಿ) ವರುಷಗಳೇ ಸಂದುವಲ್ಲಾ. ಅಬ್ಬಾ..ಕಾಲದ ವೈಚಿತ್ರ ನೋಡಿ. ರೆಪ್ಪೆ ಮಿಟುಕಿಸುವುದರೊಳಗೆ ಆಯಷ್ಯ ಲೆಕ್ಕಣಿಕೆಯಲ್ಲೂ ಇಳಿಲೆಕ್ಕ. ಹಲವು ಪ್ರಶಸ್ತಿಗಳು ಅರಸಿ ಬಂದುವು. ಮೊನ್ನೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ಸ್ವೀಕರಿಸಿದೆ.

ಯಕ್ಷಗಾನ ಪ್ರದರ್ಶನ ನೋಡುವ ಹಂಬಲ ಮೊದಲಿನಂತಿಲ್ಲ. ಅಪರೂಪಕ್ಕೊಮ್ಮೆ ಪ್ರದರ್ಶನಕ್ಕೆ ಹೋದರೆ ಇಡೀರಾತ್ರಿ ಆಟ ನೋಡಿ, ನನ್ನ ಅಭಿಪ್ರಾಯಗಳನ್ನು ಸಂಬಂಧಪಟ್ಟವರಲ್ಲಿ ಹೇಳುವ ಅಭ್ಯಾಸವಿಟ್ಟುಕೊಂಡಿದ್ದೇನೆ. ನಿಷ್ಠುರ ವಿಮರ್ಶೇಗಳು ಕೆಲವು ಕಲಾವಿದರನ್ನು ನೋಯಿಸಿದೆ. ಇನ್ನೂ ಕೆಲವರಿಗೆ ಸಂತೋಷ ತಂದಿದೆ.

ಯಾವುದೇ ವಿಚಾರವನ್ನು ಪರಸ್ಪರ ಹಂಚಿಕೊಳ್ಳುವ ಸ್ವಭಾವ. ಮನಸ್ಸಿನಲ್ಲೊಂದು, ಮಾತನಾಡುವುದೊಂದು - ನನ್ನ ಜಾಯಮಾನವೇ ಅಲ್ಲ. ಹುಟ್ಟು ಅಂಟಿಕೊಂಡ 'ಸಿಟ್ಟು' ಕೆಲವೊಂದು ಸಲ ಎಡವಟ್ಟು ಮಾಡಿದ್ದಿದೆ. ಫಕ್ಕನೆ ಎರಗುವ ಇದನ್ನು ದೂರಮಾಡೋಣ - ಎಷ್ಟೋ ಸಲ ಸಂಕಲ್ಪ ಮಾಡಿದ್ದೆ. ಊಹೂಂ! ಹೇಳಿದಾಕ್ಷಣ ಸಿಟ್ಟುಬಿಡಲು ನಾನೇನು ಜಮದಗ್ನಿಯೇ?

ಎಡನೀರು ಮಠಾಧೀಶ (ಬ್ರಹ್ಮೈಕ್ಯ) ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಹಿರಿತನದಲ್ಲಿ 'ಪಾತಾಳ ಪ್ರಶಸ್ತಿ'ಯನ್ನು ಸ್ಥಾಪಿಸಿದೆ. ಪ್ರತಿ ವರುಷ ಹಿರಿಯ ಕಲಾವಿದರನ್ನು ಗೌರವಿಸುವುದು ಉದ್ದೇಶ. ಈ ತೃಪ್ತಿಯೊಂದಿಗೆ ಮತ್ತೊಂದು ಉದ್ದೇಶ - ನನ್ನ ಕಲಾ ಸೇವೆ ನನಗೇ ಮರೆತುಹೋಗಬಾರದಲ್ಲಾ..!

ನನ್ನೆಲ್ಲಾ ಯಕ್ಷಬದುಕನ್ನು 'ಯಕ್ಷಶಾಂತಲಾ' ಎಂಬ ಕೃತಿಯಲ್ಲಿ ಅಭಿಮಾನಿಗಳು ಹಿಡಿದಿಟ್ಟಿದ್ದಾರೆ. ನನಗೆ 'ಬದುಕಿನ ಬಣ್ಣ' ಮತ್ತು 'ಬಣ್ಣದ ಬದುಕು' ಬೇರೆ ಬೇರೆಯಾಗಿ ಕಾಣುವುದಿಲ್ಲ. ನನಗೆ ಬದುಕನ್ನು ನೀಡಿದ್ದು ಬಣ್ಣ. ಈ ಬಣ್ಣದ ಬದುಕು ನನ್ನ ವರ್ಚಸ್ಸಿನ ಬಣ್ಣವನ್ನು ಪ್ರಕಾಶಿಸಿದೆ. ನಿಜ ಜೀವನದ ಬಣ್ಣಕ್ಕೆ ಸಂಸ್ಕಾರವನ್ನು ಕಲಿಸಿದೆ. ಅದರಿಂದಾಗಿ ಬಣ್ಣಬಣ್ಣದ ಬದುಕು ನನ್ನದಾಗಲಿಲ್ಲ.

ಪತ್ನಿ ಪರಮೇಶ್ವರಿ. ಸಣ್ಣ ಮಗ ಶ್ರೀರಾಮ. ದೊಡ್ಡವ ಅಂಬಾಪ್ರಸಾದ. ಹೊಸನಗರ ಮೇಳದ ಕಲಾವಿದ. ನಾಲ್ವರು ಹೆಣ್ಣುಮಕ್ಕಳು. ಎಲ್ಲರೂ ವಿವಾಹಿತರು. ಮೊಮ್ಮಕ್ಕಳಿಗೆ ನಾನೀಗ 'ಪಾತಾಳಜ್ಜ'. ರಂಗಕ್ಕೂ ಅಷ್ಟೇ!

(Patala Venkatramana Bhat : 16-11-1933 : 19-7-2025) 

- ನಿರೂಪಣೆ : ನಾ. ಕಾರಂತ ಪೆರಾಜೆ

1 comment:

  1. ಎಡನೀರು ಶ್ರೀಗಳಿಗೆ ಬ್ಲಹ್ಮೖಕ್ಯ ಅಂತ ಯಾಕೆ ಅವರು ಆಮೇಲೆ ಆದುದು
    ಕೆಲವು ಭಾಗ ಮತ್ತೆ ಸೇರಿಸಿದ್ದ

    ReplyDelete