Monday, July 7, 2025

ತಾಳಮದ್ದಳೆ ಸಪ್ತಾಹ ಸಮಾರೋಪ - ಕುರಿಯ ಪ್ರಶಸ್ತಿ ಪ್ರದಾನ : 'ಪ್ರಶಸ್ತಿ ಪಡೆವ ಕಲಾವಿದನ ಬದುಕು ಅದರ್ಶವಾಗಿರಬೇಕು' - ಪೂಜ್ಯ ಎಡನೀರು ಶ್ರೀಗಳು

 


  “ಓರ್ವ ಕಲಾವಿದ ಸಮಾಜಮುಖಿಯಾಗಿ, ಕಲಾತ್ಮಕವಾಗಿ ಹೇಗೆ ಬದುಕಬೇಕೆನ್ನುವುದನ್ನು ಹಾಸ್ಯಗಾರ್ ದಿ.ಪೆರುವಡಿ ನಾರಾಯಣ ಭಟ್ಟರು ಬದುಕಿ ತೋರಿಸಿದರು. ಒಂದು ಪ್ರಶಸ್ತಿಯನ್ನು ಸ್ಥಾಪಿಸುವುದು, ಅದಕ್ಕೆ ಕಲಾವಿದನನ್ನು ಆಯ್ಕೆ ಮಾಡುವಲ್ಲಿ ಬದ್ಧತೆ ಮುಖ್ಯ. ಹಾಗೆ ಆಯ್ಕೆ ಮಾಡಿದ ಕಲಾವಿದದ ಬದುಕು ಕೂಡಾ ಆದರ್ಶವಾಗಿರಬೇಕು. ಈ ಎಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ತುಂಬಾ ಎಚ್ಚರದಿಂದ ಪ್ರಶಸ್ತಿಗಳಿಗೆ ಕಲಾವಿದರನ್ನು ಆಯ್ಕೆ ಮಾಡುತ್ತಾರೆ. ಇದೊಂದು ಮಾದರಿ ಉಪಕ್ರಮ. ಎಂದು ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

ಅವರು ಪುತ್ತೂರಿನ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಜರುಗಿದ 'ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ಪ್ರದಾನ ಹಾಗೂ ತಾಳಮದ್ದಳೆ ಸಪ್ತಾಹ ಸಮಾರೋಪದಲ್ಲಿ ಆಶೀರ್ವಚನ ನೀಡುತ್ತಾ, ಇಡಗುಂಜಿ ಮೇಳವು ಪರಂಪರೆಯನ್ನು ಮುರಿಯದ ಸಂಘಟನೆ. ದಿ.ಶಂಭು ಹೆಗಡೆಯವರ ಕನಸನ್ನು ಅವರ ಚಿರಂಜೀವಿಗಳು ನನಸು ಮಾಡುತ್ತಿದ್ದಾರೆ. ಆ ಸಂಘಟನೆಗೆ ನೀಡಿದ ಪ್ರಶಸ್ತಿಗೇ ಗೌರವ ಬಂದಿದೆಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ  ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಮಾತನಾಡುತ್ತಾ, ನಾಟ್ಯಾಚಾರ್ಯ ಕುರಿಯ ವಿಠಲ ಶಾಸ್ತ್ರಿಗಳು ಯಕ್ಷಗಾನದ ಕ್ರಾಂತಿ ಪುರುಷ. ಅವರು ರಂಗದಲ್ಲಿ ತಂದ ಅನೇಕ ಪ್ರಯೋಗಗಳು ಈಗಲೂ ಪ್ರಸ್ತುತ. ತನ್ನ ಮನೆಯನ್ನೇ ಗುರುಕುಲವನ್ನಾಗಿ ಮಾಡಿ ಶಿಷ್ಯರನ್ನು ಬೆಳೆಸಿದ ಮಹಾ ಗುರುಎಂದರು.

ಈ ಸಂದರ್ಭದಲ್ಲಿ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ಈ ಸಂಸ್ಥೆಯನ್ನು ಪ್ರತಿನಿಧಿಸಿದ ಶಿವಾನಂದ ಹೆಗಡೆ ಕೆರೆಮನೆ ಹಾಗೂ ಹಿರಿಯ ಸ್ತ್ರೀವೇಷಧಾರಿ ಕೊಕ್ಕಡ ಈಶ್ವರ ಭಟ್ಟರಿಗೆ 'ಕುರಿಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಕಲಾಪೋಷಕ, ಉದ್ಯಮಿ ಶ್ರೀ ಆರ್.ಕೆ.ಭಟ್ಟರಿಗೆ 'ಕುರಿಯ ಸ್ಮೃತಿ ಗೌರವ'ವನ್ನು ಪ್ರದಾನಿಸಲಾಯಿತು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ಅಭಿನಂದನಾ ನುಡಿಗಳ ಮೂಲಕ ಸಾಧಕರ ಸಾಧನೆಗೆ ಕನ್ನಡಿ ಹಿಡಿದರು.

ಕೀರ್ತಿಶೇಷ ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರ ಕಲಾಯಾನವನ್ನು ಹಿರಿಯ ಅರ್ಥದಾರಿ ವೆಂಕಟರಾಮ ಭಟ್ಟ ಸುಳ್ಯ ಸ್ಮರಿಸಿದರು. ಪುತ್ತೂರಿನ ದ್ವಾರಕಾ ಕಾರ್ಪೋರೇಶನ್ ಪ್ರೈ ಲಿ., ಇದರ ವ್ಯವಸ್ಥಾಪನಾ ನಿರ್ದೇಶಕ ಗೋಪಾಲಕೃಷ್ಣ ಭಟ್ ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ ಪ್ರಭು ಉಪಸ್ಥಿತರಿದ್ದರು.

ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರ ನೆನಪಿನಲ್ಲಿ ಅವರ ಕುಟುಂಬಸ್ಥರು ತಾಳಮದ್ದಳೆ ಸಪ್ತಾಹಕ್ಕೆ ದೊಡ್ಡ ಮೊತ್ತದ ನಿಧಿಯನ್ನು ಕುರಿಯ ಪ್ರತಿಷ್ಠಾನದ ಉಜಿರೆ ಅಶೋಕ ಭಟ್ಟರಿಗೆ ಹಸ್ತಾಂತರಿಸಿದರು. ಭಾಗವತ ರಮೇಶ ಭಟ್ ಪುತ್ತೂರು ಸ್ವಾಗತಿಸಿದರು. ಸ್ವಸ್ತಿಕ್ ಪದ್ಯಾಣ ವಂದಿಸಿದರು. ಕಲಾವಿದ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಶ್ರಯದಲ್ಲಿ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು 'ತಾಳಮದ್ದಳೆ ಸಪ್ತಾಹ'ವನ್ನು ಆಯೋಜಿಸಿತ್ತು.   

ಪೆರುವಡಿ ಅಶೋಕ ಸುಬ್ರಹ್ಮಣ್ಯ, ಕುಮಾರ ಸ್ವಾಮಿ ಕನ್ಯಾನ, ಪದ್ಯಾಣ ಶಂಕರನಾರಾಯಣ ಭಟ್, ಕಾಡೂರು ಸೀತಾರಾಮ ಶಾಸ್ತ್ರಿ, ರಾಮ ಜೋಯಿಸ್ ಬೆಳ್ಳಾರೆ ಸಹಕರಿಸಿದರು. ಸಮಾರಂಭದ ಬಳಿಕ  ಸಪ್ತಾಹದ ಕೊನೆಯ ತಾಳಮದ್ದಳೆ 'ಗುರುದಕ್ಷಿಣೆ' ಸಂಪನ್ನಗೊಂಡಿತು. ಏಳು ದಿವಸವೂ ರುಚಿ ಶುದ್ಧಿಯ ಪ್ರೇಕ್ಷಕರು ತಾಳಮದ್ದಳೆಗೆ ಉಪಸ್ಥಿತರಿದ್ದರು.


No comments:

Post a Comment