Tuesday, January 5, 2010

'ಹಿರಿಯಣ್ಣ'ನ ಒಡನಾಟದ ನೆನಪು (ಕಂತು 3)

ಪೆರಾಜೆ ಶ್ರೀ ಶಾಸ್ತಾವೇಶ್ವರ ಯಕ್ಷಗಾನ ಕಲಾ ಸಂಘವು 1988ರಲ್ಲಿ ಚನಿಯ ನಾಯ್ಕರಿಗೆ 'ಸಂಮಾನ'ವೊಂದನ್ನು ಆಯೋಜಿಸಿತ್ತು. ಶ್ರೀ ಕೆ.ಡಿ.ಕುಶಾಲಪ್ಪನವರ ಸಾರಥ್ಯದಲ್ಲಿ ಅದ್ದೂರಿಯಾಗಿಯೇ ಸಮಾರಂಭ ನಡೆದಿತ್ತು. ಬಹುಶಃ ಪೆರಾಜೆಯ ಇತಿಹಾಸದಲ್ಲಿಯೇ 'ಸಂಮಾನ' ಎಂಬ ಕಲ್ಪನೆಯೇ ಹೊಸತು.

ಶಾಲು, ಹಣ್ಣುಹಂಪಲು, ಸ್ಮರಣಿಕೆ, ಗುಣಕಥನಫಲಕ, ಹಾರ... ಇತ್ಯಾದಿ ವಸ್ತುಗಳು ಸಂಮಾನಕ್ಕೆ ಬೇಕೆಂಬುದೇ ಅಲ್ಲಿ ಗೊತ್ತಿರಲಿಲ್ಲ. ಇದನ್ನೆಲ್ಲಾ ಬೆರಗು ಕಣ್ಣುಗಳಿಂದ ನೋಡದ ಅನೇಕ ಹಿರಿಯರ ಶ್ಲಾಘನೆ ನೆನಪಾಗುತ್ತದೆ. ಈ ಅದ್ದೂರಿ ವ್ಯವಸ್ಥೆಯ ನೊಣಭಾರವನ್ನು ನಾನೂ ಹೊತ್ತಿದ್ದೆ. ಕೆಲವು ಪಾನಪ್ರಿಯ ಬಂಧುಗಳಿಂದ ಸಂಮಾನದ ಬಳಿಕ ನನಗೂ 'ಅದ್ದೂರಿ ಸಂಮಾನ'ವೂ ಸಿಕ್ಕಿತೆನ್ನಿ. ಇದು ಪೆರಾಜೆ ಕಲಾಬದುಕಿನ ಒಂದಂಗ. ಇದನ್ನು ಹೇಂಗೆ ಮರೆಯಲಿ? 'ಈರೆಗ್ ಬೋಡ್ಚಾಂಡ್' ಚನಿಯರೇ ಹೇಳಿದ್ದರು.

ಹಲವು ದಶಕಗಳಿಂದ ಚನಿಯ ನಾಯ್ಕರಿಗೆ ಪೆರಾಜೆಯ ನಂಟಿತ್ತು. ಸುಳ್ಯ, ಪುತ್ತೂರು, ಕಾಸರಗೋಡು..ಮೊದಲಾದೆಡೆ ಇವರ ಭಾಗವತಿಕೆ ಇಲ್ಲದೆ ಆಟವಿಲ್ಲ! ಹೀಗೆ ಸಿಕ್ಕಾಗಲೆಲ್ಲಾ 'ಆಕಾಶವಾಣಿಗೊಮ್ಮೆ ಹೋಗಬೇಕು' ಎಂಬ ಆಶೆ ತೋಡಿಕೊಳ್ಳುತ್ತಿದ್ದರು. ಅದಕ್ಕಾಗಿಯೇ 'ಯಕ್ಷರಂಜಿನಿ ಸುಳ್ಯ' ಅಂತ ತಂಡವೊಂದನ್ನು ರೂಪಿಸಿದ್ದೆ. ಸಮಾನ ಮನಸ್ಕ ಹವ್ಯಾಸಿ ಕಲಾವಿದರನ್ನು ಸೇರಿಸಿದ್ದೆ. ಪೃಥುರಾಜ ವಿಜಯ, ನರಕಾಸುರ.. ಮೊದಲಾದ ನಾಲ್ಕಾರು ಪ್ರಸಂಗಗಳು ಪ್ರಸಾರವಾಗಿದ್ದುವು. ಶ್ರೋತೃಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಂಭಾವನೆ ವಿಚಾರದಲ್ಲಿ ಒಬ್ಬ ಕಲಾವಿದರ ಅಪಸ್ವರ ಬಂದಾಗ 'ನಮ ಈಡೆಗ್ ಉಂತಾಕೋ' ಎಂದು ಬಿಟ್ಟರು. ಎರಡೇ ವರುಷದಲ್ಲಿ ಯಕ್ಷರಂಜಿನಿಗೆ ವಿದಾಯ!

ಸಲುಗೆಯ ಕವಚದೊಳಗೆ ನಾಯ್ಕರಲ್ಲಿ ಲಘುವಾಗಿ ವ್ಯವಹರಿಸಿ, ಅನಾವಶ್ಯಕವಾಗಿ ವಾಚಾಳಿತನ ತೋರಿ, ತಾನೊಬ್ಬ 'ಯಕ್ಷಬ್ರಹ್ಮ' ನೆಂದೆಣಿಕೊಳ್ಳುವ ಹವ್ಯಾಸಿ ಕಲಾವಿದರನೇಕರು ಅವರ ಬದುಕಿನಲ್ಲಿ ಹಾದು ಹೋಗಿದ್ದಾರೆ. ಈ ಕುರಿತು ಅವರನ್ನೊಮ್ಮೆ ಪ್ರಶ್ನಿಸಿದ್ದಾಗ ಅವರದು ಒಂದೇ ಪದದ ಉತ್ತರ - 'ಸಯ್ಯಡ್'! ಈ ಪದದಲ್ಲಿ ಖಚಿತ ನಿಲುವಿತ್ತು. ಉದಾಸೀನತೆಯಿತ್ತು. ಸ್ವಷ್ಪ ನಿಲುವಿತ್ತು.

(ಮುಂದಿನ ಕಂತಲ್ಲಿ ಮುಂದುವರಿಯುವುದು)

No comments:

Post a Comment