Sunday, September 11, 2011

ಎಂ.ಎಲ್.ಸಾಮಗ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ

ಯಕ್ಷಗಾನದ ತೆಂಕು ಮತ್ತು ಬಡಗು ತಿಟ್ಟುಗಳೆರಡರಲ್ಲೂ ಅನುಭವ ಪಕ್ವತೆಯನ್ನು ಹೊಂದಿದ ಪ್ರೊ:ಎಂ.ಲಕ್ಷ್ಮೀನಾರಾಯಣ ಸಾಮಗ (ಪ್ರೊ.ಎಂ.ಎಲ್.ಸಾಮಗ) ಇವರನ್ನು ಕರ್ನಾಟಕ ಸರಕಾರವು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿದೆ.

ನಾಲ್ಕು ದಶಕಗಳ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿ ಸೇವೆ. ಉಡುಪಿ ಎಂ.ಜಿ.ಎಂ.ಕಾಲೇಜಿನಲ್ಲಿ ಮೂರು ವರುಷ ಪ್ರಾಂಶುಪಾಲ. ಪ್ರಸ್ತುತ ತೆಂಕನಿಡಿಯೂರು ಸರಕಾರಿ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕ.

ಎಂ.ಎಲ್.ಸಾಮಗರು ಯಕ್ಷಮೇರು ದಿ. ಮಲ್ಪೆ ಶಂಕರನಾರಾಯಣ ಸಾಮಗರ ಪುತ್ರ. ಕೀರ್ತಿಶೇಷ ಹರಿದಾಸ ಮಲ್ಪೆ ರಾಮದಾಸ ಸಾಮಗರು ಇವರಿಗೆ ಚಿಕ್ಕಪ್ಪ.

ಸಾಮಗರು ಬಯಲಾಟ ಮತ್ತು ತಾಳಮದ್ದಳೆಗಳಲ್ಲೂ ಅನುಭವ ಸಂಪನ್ನರು. ತೆಂಕು ಮತ್ತು ಬಡಗಿನ ಅಗ್ರಮಾನ್ಯ ಕಲಾವಿದರೊಂದಿಗೆ ಸಹಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಲಿಗ್ರಾಮ, ಪೆರ್ಡೂರು, ಶ್ರೀ ಎಡನೀರು ಮೇಳ, ಇಡಗುಂಜಿ..ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗಿ. ಉತ್ತರಕನ್ನಡದಿದ ಕಾಸರಗೋಡು ತನಕ ಸಮಗ್ರ ಯಕ್ಷ ಪರ್ಯಟನೆ ಸಾಮಗರ ಹೆಗ್ಗುರುತು.

ಇಂಗ್ಲೀಷ್ ತಾಳಮದ್ದಳೆ, ಬಯಲಾಟಗಲ್ಲಿ ಉತ್ತಮ ನಿರ್ವಹಣೆ. ಏಸುಕ್ರಿಸ್ತ ಕತೆಯನ್ನು ಇಂಗ್ಲಿಷ್ ಭಾಷೆಗೆ ಅಳವಡಿಸಿ ಯಕ್ಷಗಾನದ ಮೂಲಕ ಪ್ರಸ್ತುತಿ. ಪ್ರಯೋಗಾತ್ಮಕ ನಾಟಕ, ಯಕ್ಷಗಾನ, ನೃತ್ಯ ರೂಪಕಗಳಲ್ಲಿ ಪ್ರಧಾನ ನಟನಾಗಿ ಭಾಗವಹಿಸಿದ ಅನುಭವ.ಡಾ.ಶಿವರಾಮ ಕಾರಂತರ ನಿರ್ದೇಶನದ ಯಕ್ಷಗಾನ ನೃತ್ಯ ರೂಪಕ ತಂಡದಲ್ಲಿ ಇಟಲಿಯಲ್ಲಿ ಮೂರು ವಾರ ತಿರುಗಾಟ ಮಾಡಿದ್ದರು.

ವೈಯಕ್ತಿಕವಾಗಿ ನಾವಿಬ್ಬರೂ ರಂಗದಲ್ಲಿ ಸಾಕಷ್ಟು ಬಾರಿ ಗಂಡ-ಹೆಂಡತಿಯರಾಗಿದ್ದೇವೆ. ಅವರೊಂದಿಗೆ ಪಾತ್ರವಹಿಸುವುದು ಖುಷಿ ಕೊಡುವ ವಿಚಾರ. ಸಂಭಾಷಣೆಗೆ ಒಗ್ಗುವ, ಎಳೆಯುವ ವಿರಳ ಕಲಾವಿದರಲ್ಲಿ ಸಾಮಗರೂ ಒಬ್ಬರು. ದಕ್ಷಾಧ್ವರ ಪ್ರಸಂಗದಲ್ಲಿ ಅವರ ಈಶ್ವರ, ನನ್ನ ದಾಕ್ಷಾಯಿಣಿ ಪಾತ್ರಗಳು ಮರೆಯದ ಕ್ಷಣಗಳು. ಮೇರು ಪ್ರತಿಭೆಯ ಎಂ.ಎಲ್.ಸಾಮಗರಲ್ಲಿ ಯಾವುದೇ ಹಮ್ಮುಬಿಮ್ಮುಗಳಿಲ್ಲ. ಅಹಂಕಾರಗಳಿಲ್ಲ. ಸಹಜವಾಗಿ ಕಲಾವಿದರಿಗೆ ಅಂಟುವ 'ವಿಕಾರ' ಇಲ್ಲವೇ ಇಲ್ಲ. ಹಾಗಾಗಿಯೇ ಸಾಮಗರದು ಎಲ್ಲರಿಗೂ ಪ್ರಿಯವಾಗುವ ವ್ಯಕ್ತಿತ್ವ.

ಹವ್ಯಾಸಿ ಮಟ್ಟದಿಂದ ಮೇಳದ ವರೆಗಿನ ಎಲ್ಲಾ ಕಲಾವಿದರಲ್ಲಿ ಒಡನಾಟ. ಚೌಕಿಯಲ್ಲಿ ’ತಾನಾಯಿತು, ತನ್ನ ಕಸುಬಾಯಿತ” ಎಂದು ಇದ್ದು ಬಿಡುವ ಸ್ವಭಾವ. ಬಹುತೇಕ ಕಲಾವಿದರು 'ಅರ್ಹತೆ'ಯೆಂದೇ ಸ್ಥಾಪಿಸುವ 'ಪರದೂಷಣೆ'ಯಿಂದ ಸಾಮಗರು ಯೋಜನ ದೂರ.

'ನನ್ನ ತಂದೆ, ಚಿಕ್ಕಪ್ಪ ಇವರಿಬ್ಬರು ಯಕ್ಷಗಾನದಲ್ಲಿ ಅಸಾಮಾನ್ಯ ಪ್ರತಿಭೆ ತೋರಿದ ಕಲಾವಿದರು. ಇವರ ಸಾಧನೆಯ ಫಲವಾಗಿ ಅಕಾಡೆಮಿ ಆಧ್ಯಕ್ಷ ಸ್ಥಾನ ನನಗೆ ಪ್ರಾಪ್ತವಾಗಿದೆ' ಎಂದು ವಿನೀತರಾಗಿ ಹೇಳುತ್ತಾರೆ.

ಆತ್ಮೀಯ, ಅಜಾತಶತ್ರು ಪ್ರೊ.ಎಂ.ಎಲ್.ಸಾಮಗರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದುದು ಹೆಮ್ಮೆಯ ವಿಚಾರ.
ಅವರಿಗೆ ತುಂಬು ಅಭಿನಂದನೆಗಳು.

No comments:

Post a Comment