Tuesday, September 13, 2011

ಯಕ್ಷಗಾನದ ಹಿರಿಯ ಅರ್ಥದಾರಿ ಕೊರ್ಗಿ : ವಿಧಿವಶ

ಹಿರಿಯ ವಿದ್ವಾಂಸ, ದ್ವಿವೇದಿ ಕೊರ್ಗಿ ವೆಂಕಟೇಶ ಉಪಾಧ್ಯಾಯರು ಹೃದಯಾಘಾತದಿಂದ ಸೆಪ್ಟೆಂಬರ್ 12ರಂದು ವಿಧಿವಶರಾದರು. ಮೂಲತಃ ಕುಂದಾಪುರ ತಾಲೂಕಿನ ಕೊರ್ಗಿಯವರು. ಅವರಿಗೆ ಅರುವತ್ತು ವರುಷ ಪ್ರಾಯ. ಪತ್ನಿ, ಇಬ್ಬರು ಪುತ್ರರು.

ಕೊರ್ಗಿಯವರು ಸಂಸ್ಕೃತ ವಿದ್ವತ್ ಪರಂಪರೆಯ ಹಿರಿಯ ವಿದ್ವಾಂಸರು. ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ನ್ಯಾಯಶಾಸ್ತ್ರದ ವಿದ್ವತ್ ಕಲಿಕೆ. ಕಟೀಲಿನ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ. ಸಂಸ್ಕೃತ ಮತ್ತು ಕನ್ನಡ ಭಾಷಾ ಪಾಂಡಿತ್ಯ, ಶಬ್ದ ಮತ್ತು ವ್ಯಾಕರಣಗಳ ಖಚಿತತೆ ಅವರ ಹಿರಿಮೆ. ಕಟೀಲು ಕ್ಷೇತ್ರ ಮಹಾತ್ಮೆ, ಶ್ರಿರಾಮ ಪಟ್ಟಾಭಿಷೇಕ, ವಾತಾಪಿ ಜೀರ್ಣೋಭವ - ಯಕ್ಷಗಾನ ಪ್ರಸಂಗಗಳ ರಚಯಿತರು. 'ಹತ್ತರ ಹಿರಿಮೆ, ಪಂಚಪ್ರಪಂಚ, ಅಕ್ಷರ ಯಕ್ಷಗಾನ.. ಅಚ್ಚಾದ ಮುಖ್ಯ ಕೃತಿಗಳು.

ಲಕ್ಷ್ಮೀನಾರಾಯಣ ಹೃದಯ ಅರ್ಥ ಮತ್ತು ಕಲ್ಪೋಕ್ತ ಪೂಜಾವಿಧಿ, ಬ್ರಹ್ಮಕಲಶ ವಿಧಿ, ಅಷ್ಟೋತ್ತರ ಗಣಪತಿ ಹವನ ವಿಧಿ ಕೃತಿಗಳು ಮಹತ್ತರವಾದವುಗಳು.

ತಾಳಮದ್ದಳೆಯಲ್ಲಿ ಅಪಾರವಾದ ವಿದ್ವತ್ತನ್ನು ಸರಳವಾಗಿ ಪ್ರಸ್ತುತಪಡಿಸುತ್ತಿದ್ದರು. ಪ್ರಖರ ಮಾತುಗಾರಿಕೆ. ವಾದ ವಿವಾದಗಳಲ್ಲಿ ತರ್ಕಗಳಿಗೆ ಪ್ರಾಧಾನ್ಯತೆ. ಶಾಸ್ತ್ರ, ಪುರಾಣ, ವೇದಗಳ ಕುರಿತಾದ ವಿಚಾಗಳಿಂದ ಲೇಪಿತವಾದ ಅರ್ಥಗಾರಿಕೆ.

ಅಗಲಿನ ಕೊರ್ಗಿ ಹಿರಿಯ ಚೇತನಕ್ಕೆ ಕಂಬನಿ.

No comments:

Post a Comment