Saturday, August 15, 2015

”ಉದ್ದೇಶ ಶುದ್ಧಿಯಿದ್ದಲ್ಲಿ ಭಗವಂತನ ಅನುಗ್ರಹವಿದೆ’ - ಬ್ರಹ್ಮಶ್ರೀ ರವೀಶ ತಂತ್ರಿ

              "ಯಕ್ಷಗಾನಕ್ಕೀಗ ಕಲಾಭಿಮಾನಿಗಳ ಪ್ರೋತ್ಸಾಹ ಯಥೇಷ್ಟವಾಗಿದೆ. ಆರಾಧನಾ ಕಲೆಯಾದ ಯಕ್ಷಗಾನದಲ್ಲಿ ಉದ್ದೇಶ ಶುದ್ಧಿಯಿದ್ದಾಗ ಅಲ್ಲಿ ಭಗವಂತನ ಅನುಗ್ರಹ ಸದಾ ಪ್ರೇರಕಶಕ್ತಿಯಾಗಿ ಮುನ್ನಡೆಸುತ್ತದೆ. ಕಲಾ ವ್ಯವಸಾಯದೊಂದಿಗೆ ಕಲಾವಿದರಿಗೂ ಮನ್ನಣೆ ಕೊಡುವ ಸಂಸ್ಕಾರಗಳಿಂದ ಸ್ವ-ವರ್ಚಸ್ಸು ವೃದ್ಧಿಸುತ್ತದೆ. ಕಲಾ ಕ್ಷೇತ್ರಕ್ಕೂ ನ್ಯಾಯ ಸಲ್ಲಿಸಿದಂತಾಗುತ್ತದೆ," ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹೇಳಿದರು.
             ಕೀರ್ತಿಶೇಷ ಪುತ್ತೂರು ಶೀನಪ್ಪ ಭಂಡಾರಿ ಪ್ರತಿಷ್ಠಾನ ಹಮ್ಮಿಕೊಂಡ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಂತ್ರಿಗಳು, "ಹಿರಿಯರ ಹಾದಿಯಲ್ಲಿ ಕ್ರಮಿಸುವ ಒಂದು ಕಲಾ ಪರಂಪರೆಯನ್ನು ಗುರುತಿಸಿ, ಮಾನಿಸುವುದು ಸಾಮಾಜಿಕ ಹೋಣೆ. ಶೀನಪ್ಪ ಭಂಡಾರಿಯವರು ಬದುಕಿನಲ್ಲಿ ಹಾಕಿಕೊಟ್ಟ ಹಾದಿಯಲ್ಲಿ ಅವರ ಚಿರಂಜೀವಿಗಳು ಮುನ್ನಡೆಯುವುದು ಒಂದು ಮಾದರಿ," ಎಂದರು.
              ಡಾ.ಶ್ರೀಧರ ಭಂಡಾರಿ ನೇತೃತ್ವದ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಬೆಳ್ಳಿಹಬ್ಬ ಸರಣಿ ಕಾರ್ಯಕ್ರಮದ ಉದ್ಘಾಟನೆ ಮತ್ತು ನೂತನ ರಂಗಸ್ಥಳದ ಉದ್ಘಾಟನೆಯನ್ನು ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ದೀಪಜ್ವಲನದ ಮೂಲಕ ಉದ್ಘಾಟಿಸಿದರು. ಇವರು ಶೀನಪ್ಪ ಭಂಡಾರಿಯವರ ಸಂಸ್ಮರಣೆಯನ್ನು ಮಾಡುತ್ತಾ, "ಕಲೆಯನ್ನು ಎತ್ತರಕ್ಕೆ ಏರಿಸಿದ ಕೀರ್ತಿ  ಶೀನಪ್ಪ ಭಂಡಾರಿಗಳದು. ಭಾರತೀಯ ಸಂಸ್ಕೃತಿಗೆ ಇದೊಂದು ದೊಡ್ಡ ಕೊಡುಗೆ," ಎಂದರು.
               ಹಿರಿಯ ಕಲಾವಿದ ಶಿವರಾಮ ಜೋಗಿ, ಬಿ.ಸಿರೋಡು ಇವರಿಗೆ ಈ ಸಾಲಿನ ಪ್ರತಿಷ್ಠಾನದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪತ್ರವನ್ನು ಮಣಿಲ ಮಹಾದೇವ ಶಾಸ್ತ್ರಿ ವಾಚಿಸಿದರು. ವೇದಿಕೆಯಲ್ಲಿ ರಾಜೇಶ್ ಬನ್ನೂರು, ಕಜೆ ಈಶ್ವರ ಭಟ್, ಪೂವಪ್ಪ, ಕೆ.ಎಚ್.ದಾಸಪ್ಪ ರೈ, ಪೆರುವೋಡಿ ನಾರಾಯಣ ಭಟ್, ಕುರಿಯ ವೆಂಕಟ್ರಮಣ ಶಾಸ್ತ್ರಿ, ಶೇಖರ ಭಂಡಾರಿ ಉಪಸ್ಥಿತರಿದ್ದರು.
              ಚಕ್ರಕೋಡಿ ಮಹಾದೇವ ಶಾಸ್ತ್ರಿ ಮಣಿಲ ಸ್ವಾಗತಿಸಿದರು. ಡಾ. ಶ್ರೀಧರ ಭಂಡಾರಿ ಪುತ್ತೂರು ಪ್ರಸ್ತಾವನೆಗೈದರು. ಅಂಕಣಗಾರ ನಾ. ಕಾರಂತ ಪೆರಾಜೆ ನಿರ್ವಹಿಸಿ, ವಂದಿಸಿದರು. ಕೊನೆಯಲ್ಲಿ 'ಸತಿ ಸುಕನ್ಯಾ ಮತ್ತು ಕಂಸ ವಿವಾಹ' ಪ್ರಸಂಗಗಳ ಪ್ರದರ್ಶನ ಜರುಗಿತು.


No comments:

Post a Comment