Monday, September 25, 2017

ಅಕ್ಷರಯಾನ ಮುಗಿಸಿದ ಭಾಗವತ

             ಕುಬಣೂರು ಶ್ರೀಧರ ರಾವ್ - ಶ್ರೀ ಕಟೀಲು ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ - ಮೇಳದ - ಮುಖ್ಯ ಭಾಗವತ.
             ಈ ಒಂದು ವಾಕ್ಯ ಅವರ ವ್ಯಕ್ತಿ ಪರಿಚಯಕ್ಕೆ ಸಾಕು. ಅಷ್ಟೇ ಅಲ್ಲವಲ್ಲಾ. ರಂಗದಲ್ಲಿದಷ್ಟು ಹೊತ್ತು ಅವರೊಬ್ಬ ಭಾಗವತ. ಪಡಿಮಂಚದಿಂದ ಇಳಿದು ಚೌಕಿ(ಬಣ್ಣದಮನೆ)ಯಲ್ಲಿ ಮಂಗಳ ಹಾಡಿದರೆ ಬದುಕಿನ ಆರಂಭ. ಕುಬಣೂರರ ಮಹತ್ತಿರುವುದು ತನ್ನ ಬದುಕಿನಲ್ಲಿ ಮಿಳಿತವಾಗಿರುವ 'ಆರಂಭ'ದಿಂದ, 'ಆರಂಭ'ಗಳಿಂದ. ಯಾವಾಗಲೂ ಹೊಸತಿನ ಆರಂಭಕ್ಕೆ ಮುನ್ನುಡಿ ಬರೆಯುವುದು ಬದುಕಿನ ಅಭ್ಯಾಸ, ಹವ್ಯಾಸ.
              ದೇವರನಾಡಿನ ಮಣ್ಣಲ್ಲಿ ಅಕ್ಷರದ ಶ್ರೀಕಾರ ಅರಳಿತು. ಮುಂದೆ ಪ್ರಸಂಗಕರ್ತರಾಗಿ, ಪತ್ರಿಕೆಯ ಸಂಪಾದಕರಾಗಿ, ಅಭಿನಂದನಾ ಗ್ರಂಥದ ಲೇಖಕರಾಗಿ ಅಕ್ಷರಯಾನವು ವಿಸ್ತಾರ ಪಡೆಯಿತು. ಬಹುಶಃ ಶ್ರೀಧರ  ರಾಯರ ಮನೋವೇಗದ ಮುಂದೆ ಅಕ್ಷರಗಳು ಶರಣಾಗಿ ಸೆ.18ರಂದು ಯಾನವನ್ನು ನಿಲ್ಲಿಸಿದುವು! ಹೀಗೆ ಬರೆಯುವಾಗ ಕೈ, ಮನ ನಡುಗುವ ಘಳಿಗೆ.
              ಅಕ್ಷರಗಳು ಪದಗಳಾಗಿ, ಪದಗಳ ಪೋಣಿಕೆಯು ಪ್ರಸಂಗವಾಗಿ, ಅದಕ್ಕೆ ರಾಗ, ತಾಳಗಳ ಸಂಯೋಗದ ಭಾಗ್ಯ ಒದಗಿ 'ಭಾಗವತಿಕೆ'ಯಾದ ಅಕ್ಷರಗಳ ಯಾನ ಇದೆಯಲ್ಲಾ; ಅದು ಸೊಗಸು, ಬೆರಗು. ತನ್ನ ಭಾಗವತಿಕೆಯಲ್ಲಿ ಕವಿಯ, ಆಶಯದ ಕಾವ್ಯಸೊಬಗನ್ನು ಹೊರಹೊಮ್ಮಿಸುತ್ತಿದ್ದ ಕುಬಣೂರರ ಗಾಯನಕ್ಕೆ ಅಕ್ಷರಗಳು ತಲೆದೂಗುತ್ತಿದ್ದುವು. ಗಾಯನದೊಂದಿಗೆ ಅವುಗಳೂ ಕರಗಿಹೋಗುತ್ತಿದ್ದುವು. ಅಕ್ಷರಗಳಿಗಿನ್ನು ಆ ಯೋಗವಿಲ್ಲ!
               ಎಲ್ಲರಂತೆ ನನ್ನ ಹುಟ್ಟು ಕೊಡಗಿನ ಭಾಗಮಂಡಲದಲ್ಲಾಯಿತು - ವಿನೋದಕ್ಕಾಡಿದ ಅವರ ಮಾತಿನ ಹಿಂದಿರುವ ನೋವಿಗೆ ಕರುಳು ಹಿಂಡಿ ಬರುತ್ತದೆ. ಕಾಸರಗೋಡು ಜಿಲ್ಲೆಯ ಚಿಕ್ಕ ಹಳ್ಳಿ 'ಕುಬಣೂರು' ಶ್ರೀಧರ ರಾಯರ ಅಜ್ಜಿಮನೆ, ಮಾವನ ಮನೆ. ಅಜ್ಜಿಮನೆಯು ಮೊಮ್ಮಕ್ಕಳ ಪ್ರೀತಿಯ ನಿಲ್ದಾಣ. ಇಲ್ಲಿರುವುದು ಮೊಗೆದು ಕೊಡುವ ಪ್ರೀತಿ. ಇಂತಹ ಪ್ರೀತಿಯ ಸಂಪನ್ಮೂಲದ ಮಧ್ಯೆ ಬೆಳೆದರು.
               ಕಲಿಕೆಯ 'ಅ'ಕಾರದಿಂದ ತೊಡಗಿ 'ತಾಂತ್ರಿಕ ಪದವೀಧರ' ಪದವಿ ಪತ್ರ ಸಿಗುವಲ್ಲಿಯ ತನಕದ ಬದುಕಿನ ಯಾನವು ಹೊಟ್ಟೆ ತಂಪಾಗದ ಕಾಲಘಟ್ಟ. ನಾಟಕ, ಯಕ್ಷಗಾನಗಳು ಹಸಿವನ್ನು ಮತ್ತು ನೋವನ್ನು ಮರೆಸುವ ಉಪಾಧಿಗಳಾಗಿದ್ದುವು. ಅವಮಾನ, ಕಷ್ಟಗಳ ಮಾಲೆಗಳು, ಹೆಜ್ಜೆಹೆಜ್ಜೆಗೂ ತೊಡಕುಗಳನ್ನು ಮೀರಿ ಹೆಜ್ಜೆಯೂರುವ ಧೈರ್ಯವು ಅಜ್ಜಿ ಮನೆಯ ಬಳುವಳಿ. ಜತೆಗೆ ಸ್ವಾಭಿಮಾನದ ಕೆಚ್ಚು. ಹೊಟ್ಟೆಪಾಡಿಗಾಗಿ ಕಂಪೆನಿಯಲ್ಲಿ ದುಡಿದರೂ ಕಲಾ ಕಂಪಿನ ಗುಂಗು ಬೆನ್ನೇರಿತು. 
              ಪರಿಸರ, ವ್ಯಕ್ತಿ, ಒಡನಾಟ, ಸ್ನೇಹ.. ಒಬ್ಬ ವ್ಯಕ್ತಿಯ ಏಳ್ಗೆಗೆ ಕಾರಣವಾಗುವ ಅಂಶಗಳು. ಶ್ರೀಧರ ರಾಯರು ಇಂತಹ ವಾತಾವರಣದಲ್ಲಿ ಬೆಳೆದು ಆರಂಭದಲ್ಲಿ ಮುಗ್ಗರಿಸಿದರೂ, ಬದುಕಿನ ಉತ್ತರಾಪಥದಲ್ಲಿ ತಲೆಎತ್ತಿ ನಡೆದರು. 'ಅದೆಲ್ಲಾ ಗ್ರಹಗತಿಗಳು ಮಾಡುವ ಕಿತಾಪತಿ' ಎಂದೊಮ್ಮೆ ನಕ್ಕಿದ್ದರು. ಸಮಸ್ಯೆಯನ್ನು ಸಮಸ್ಯೆಯನ್ನಾಗಿ ಬಿಂಬಿಸುವ ಜಾಯಮಾನದವರಾಗಿರಲಿಲ್ಲ. ಅದಕ್ಕೊಂದು ಪರಿಹಾರದ ಬೆಳಕನ್ನು ಅರಸುತ್ತಿದ್ದರು.
             ಅಕ್ಷರಗಳನ್ನು ಬಾಚುವುದು ಕುಬಣೂರರ ಸ್ವ-ಭಾವ. ಅವರ ಕಲಾಯಾನಕ್ಕೆ ಅಕ್ಷರಗಳು ಕೈತಾಂಗು ಆದುವು. ಐ.ರಘುಮಾಸ್ತರರಿಂದ ಶಾಸ್ತ್ರೀಯ ಸಂಗೀತ ಪಾಠ. ಸಂಗೀತದ ಪಾಟಾಕ್ಷರಗಳು ನಾದವಾಗಿ ತನ್ನೊಳಗೆ ಲೀನವಾಗುವಷ್ಟು ತಲ್ಲೀನತೆ. ಹಾಗೆಂದು ಅಲ್ಲಿಯೇ ತಟಸ್ಥರಾಗಲಿಲ್ಲ. ಅಡ್ಕಸ್ಥಳ ರಾಮಚಂದ್ರ ಭಟ್ಟರಿಂದ ಯಕ್ಷಗಾನದ ಮದ್ದಳೆವಾದನ ಅಭ್ಯಾಸ ಮಾಡಿದರು. ಉಪ್ಪಳ ಕೃಷ್ಣ ಮಾಸ್ತರ್, ಬೇಕೂರು ಕೇಶವರಂತಹ ಹಿರಿಯರಿಂದ ಯಕ್ಷಗಾನದ ಹೆಜ್ಜೆ ಕಲಿತರು. ಕಲಿಕೆಯ ಒಂದೊಂದು ಅಕ್ಷರಗಳು ಅವರೊಳಗೆ ಇಳಿದು ನೆಲೆಯಾಗಲು ಹವಣಿಸುತ್ತಿದ್ದುವು.
              ಊರಿನ ಹಿರಿಯ ಭಾಗವತ ಗೋಪಾಲಕೃಷ್ಣ ಮಯ್ಯರಿಂದ ಭಾಗವತಿಕೆಯ ಬಾಲಪಾಠ. ಮುಂದೆ ಮಾಂಬಾಡಿ ನಾರಾಯಣ ಭಾಗವತರಲ್ಲಿ ಆಕೃತಿಯು ಕಲಾಕೃತಿಯಾಯಿತು. ಯಕ್ಷಗಾನ ಪಾಠಗಳ ಅಕ್ಷರಗಳು ಮನದೊಳಗೆ ಇಳಿದು ನೆಲೆಯಾದುವು. ಈ ನೆಲೆಗೆ ಮೊದಲೇ ಇಳಿದು ಕಾಯುತ್ತಿದ್ದ ಅಕ್ಷರಗಳು ಸಾಥ್ ಆದುವು. ಪರಿಪುಷ್ಟ 'ಭಾಗವತ'ನಾಗುವುದಕ್ಕೆ ಬೇಕಾದ ಒಳಸುರಿಗಳನ್ನು ನೀಡಿದುವು.

ಮುಗಿದ ಗೊಣಗಾಟ - ಯಶಸ್ವಿ ತಿರುಗಾಟ

             1979ರಿಂದ ಮೇಳಗಳ ನಂಟು. ಕೂಡ್ಲು, ಕದ್ರಿ, ನಂದಾವರ, ಅರುವ, ಬಪ್ಪನಾಡು, ಕದ್ರಿ, ಕಾಂತಾವರ ಮೇಳಗಳಲ್ಲಿ ಭಾಗವತರಾಗಿ ತಿರುಗಾಟ. ಜತೆಜತೆಗೆ ವಿವಿಧ ಜವಾಬ್ದಾರಿಗಳ ಬಾಚುವಿಕೆ. ಇನ್ನೊಬ್ಬನ ನೋವನ್ನು ತನ್ನದೆನ್ನುತ್ತ ಮರುಗುವ ಸ್ವ-ಭಾವ. ಇದರಿಂದ ತೃಪ್ತಿಯ ಬದಲಿಗೆ ಗೊಣಗಾಟ ಮೇಲ್ಮೆ ಸಾಧಿಸಿತು. ಹಿತರು ಅಹಿತರಾದರು. ಇವರಲ್ಲಿದ್ದ ಸೌಜನ್ಯ, ಪ್ರಾಮಾಣಿಕತೆಗಳು ಕೈಕೊಟ್ಟವು. ಅಷ್ಟಿಷ್ಟು ಕೂಡಿಟ್ಟ ಹಣವು 'ಗ್ರಹಚಾರ ದೋಷ'ದಿಂದ ಕರಗಿದುವು. ಮಾನಕ್ಕಿಂತಲೂ ಅಪಮಾನಗಳು ಅಂಟಿದುವು. ಅದರಿಂದ ಪಾರಾಗುವುದೇ ಸವಾಲಾಗಿತ್ತು. ಕೂಡ್ಲು ಮೇಳ ಮತ್ತು ಪೇಜಾವರ ಮೇಳಗಳನ್ನು ಮುನ್ನಡೆಸುವ ಆಶಯವು ಅರ್ಧದಲ್ಲೇ ಮೊಟಕಾಗಿತ್ತು.
               1990ರಿಂದ ಶ್ರೀ ಕಟೀಲು ಮೇಳದ ಭಾಗವತನಾಗಿ ನಿಯುಕ್ತಿ ಆದಲ್ಲಿಂದ ಕುಬಣೂರು ಶ್ರೀಧರ ರಾಯರಿಗೆ ಗುರುದೆಸೆ. ಅಬ್ಬಾ... ಹನ್ನೊಂದು ವರುಷದ ಗೊಣಗಾಟದ ಬದುಕು ವಿರೋಧಿಗಳಿಗೂ ಬೇಡ. ಎಷ್ಟೋ ಬಾರಿ ಬದುಕಬೇಕಾ ಎನ್ನುವ ಯೋಚನೆಯೂ ಬಂದಿತ್ತು. ಹೋದಲ್ಲಿ ಬಂದಲ್ಲಿ ಸೋಲಿನ ಅನುಭವಗಳು. ಹಾಗಾಗಿ ಸೋಲು, ಸಮಸ್ಯೆ ಎನ್ನುವುದಕ್ಕೆ ನಾನೇ ಪರ್ಯಾಯ ಪದ. ಹಿಂದೊಮ್ಮೆ ಬೊಳ್ಳಿಂಬಳ ಪ್ರಶಸ್ತಿಯ ಪ್ರಕ್ರಿಯೆಗಾಗಿ ಅವರನ್ನು ಸಂದರ್ಶಿಸಿದಾಗ ಹೇಳಿದ ಮಾತು. ಅದು ಕಾಡುವ ಮಾತು.
               ಕಟೀಲು ಮೇಳದ ರಂಗವು ಕುಬಣೂರರ ಆವಿಷ್ಕಾರಗಳ ಸಂಶೋಧನಾಲಯ. ಹಳೆ ಪ್ರಸಂಗಗಗಳಿಗೆ ಮರುಜೀವ ಕೊಡುವತ್ತ ಯತ್ನ. ಸ್ಥಾಪಿತ ಪ್ರಸಂಗಗಳಿಗೆ ಚೌಕಟ್ಟಿನೊಳಗೆ ಜನಾಕರ್ಷಣೆಯ ಸ್ಪರ್ಶ. ವಿಶೇಷ ವಿನ್ಯಾಸಗಳ ರಂಗಪೋಣಿಕೆ. ಸಿದ್ಧ ವ್ಯವಸ್ಥೆಗಿಂತ ಆಚೆ ನೋಡುವ ಮನಃಸ್ಥಿತಿ. ಕಲಾವಿದರ ಸಾಮಥ್ರ್ಯಕ್ಕೆ ಹೊಂದಿಕೊಂಡ ರಂಗ ನಿರ್ದೇಶನ. ನಿತ್ಯ ಅಕಾಡೆಮಿಕ್ ವಿಚಾರಗಳ ರಿಂಗಣ.
               ಮೇಳದಲ್ಲಿರುವ ಕಲಾವಿದರ ಅಭಿವ್ಯಕ್ತಿಯ ಸಾಮಥ್ರ್ಯವನ್ನು ಅರಿತುಕೊಳ್ಳುವುದು ಭಾಗವತನ ಶಕ್ತಿ. ಸೂಕ್ತವಾದ ಪಾತ್ರಗಳನ್ನು ಹಂಚಿ ಅವರೊಳಗಿರುವ 'ಕಲಾವಿದ'ನನ್ನು ಪ್ರೇಕ್ಷಕರಿಗೆ ತೋರಿಸುವುದು ಸಾಮಥ್ರ್ಯ. ಕಲಾವಿದರ ವೈಯಕ್ತಿಕ ಸಮಸ್ಯೆಯತ್ತಲೂ ಕಣ್ಣೋಟ ಹರಿಸುವುದೂ ಅಗತ್ಯ. ಜತೆಜತೆಗೆ ಮೇಳದ ಶಿಸ್ತು ಕಾಪಾಡಲ್ಪಡಬೇಕು. ಇವೆಲ್ಲಾ ಓರ್ವ ಭಾಗವತನಿಗಿರುವ ವೃತ್ತಿ ಸವಾಲುಗಳು. ಕುಬಣೂರು ಭಾಗವತರು ಇವೆಲ್ಲವನ್ನು ಸಮರ್ಥವಾಗಿ ನಿಭಾಯಿಸಿದ್ದರಿಂದ ಅವರಿದ್ದ ಕಟೀಲಿನ ನಾಲ್ಕನೇ ಮೇಳದ (ಕಟೀಲಿನಲ್ಲಿ ಆರು ಯಕ್ಷಗಾನ ಮೇಳಗಳಿವೆ) ಪ್ರದರ್ಶನಗಳು ಜನಸ್ವೀಕೃತಿ ಪಡೆದಿವೆ. ಒಡನಾಡಿ ಕಲಾವಿದ, ಉಪನ್ಯಾಸಕ ಉಜಿರೆಯ ಶ್ರುತಕೀರ್ತಿ ರಾಜ್ ಜ್ಞಾಪಿಸಿಕೊಳ್ಳುತ್ತಾರೆ.
              ಮನುಷ್ಯ ಭಾವಜೀವಿ. ಭಾವನೆಗಳಿಲ್ಲದ ಮನುಷ್ಯ ಕೊರಡಿಗೆ ಸಮಾನ. ಭಾವನೆಗಳು ಬೇಕಾಗಿಲ್ಲ ಎನ್ನುವವರೂ ಇದ್ದಾರೆ! ಬಾಲ್ಯದಲ್ಲಿ ಕುಬಣೂರರ ಬದುಕಿನ ಏಳು ಬೀಳುಗಳು ಅವರ ಭಾವಗಳ ತೇವವನ್ನು ಗಾಢವಾಗಿಸಿದೆ. ಹಾಗಾಗಿಯೇ ಇರಬೇಕು, ಶ್ರೀಧರ ರಾಯರು ಆಡಿಸುವ ಪ್ರಸಂಗಗಳಲ್ಲಿ ಭಾವನಾತ್ಮಕವಾದ ಆಖ್ಯಾನಗಳಿಗೆ ಮಣೆ. ಅಲ್ಲಿ ಬಳಸುವ ಸಾಂದರ್ಭಿಕ ರಾಗಗಳು ಭಾವಗಳ ಮೇಲಾಟದ ಟಾನಿಕ್. 'ಮಾನಿಷಾದ, ಅಕ್ಷಯಾಂಬರ, ಪರೀಕ್ಷಿತ, ಹರಿಶ್ಚಂದ್ರ, ನಳೋಪಖ್ಯಾನ..' ಪ್ರಸಂಗಗಳೇ ಕುಬಣೂರರು ಹಾಡುವುದನ್ನು ಕಾಯುತ್ತಿದ್ದುವು.

ಅಕ್ಷರಗಳ ಪದ ಯಾನ

           ಕುಬಣೂರು ಶ್ರೀಧರ ರಾಯರು 'ಯಕ್ಷಪ್ರಭಾ' ಸುದ್ದಿ ಮಾಸಿಕದ ಸಂಪಾದಕರು. ಇಪ್ಪತ್ತೆರಡು ಸಂಪುಟಗಳನ್ನು ರಜೆಯಿಲ್ಲದೆ ಪ್ರಕಾಶಿಸಿದ್ದರು. ಸಿಂಗಾಪುರ ಪ್ರವಾಸಕ್ಕಾಗಿ ಆಗಸ್ಟ್ ತಿಂಗಳ ಪತ್ರಿಕೆಯಲ್ಲಿ ರಜೆಯ ಷರಾ ಬರೆದಿದ್ದರು. ಪತ್ರಿಕೆಗಿದು ಪ್ರಥಮ ರಜೆ. ಸಂಪಾದಕರಿಗದು ಕೊನೆಯ ರಜೆ. 'ವಿದ್ಯಾವಂತನಾಗಿ, ತಾನು ದುಡಿದ ಯಕ್ಷಗಾನ ಕ್ಷೇತ್ರಕ್ಕೆ ನನ್ನಿಂದ ಸೇವೆ ಸಲ್ಲಬೇಕು' ಎನ್ನುವ ಆಶಯ ಪತ್ರಿಕೆಯ ಪ್ರಕಾಶನದ ಹಿಂದಿತ್ತು.
              ವಿದ್ವಾಂಸ ಡಾ.ಪ್ರಭಾಕರ ಜೋಶಿಯವರು ಕುಬಣೂರರ ಸಾಧನೆಗೆ ಅಕ್ಷರರೂಪ ನೀಡುತ್ತಾರೆ. "ಯಕ್ಷಗಾನಕ್ಕೊಂದು ಪತ್ರಿಕೆಯು ಬೇಕೆಂಬ ಕನಸು ನನಸಾಗಿಸಿದರು. ಕೀರ್ತಿಶೇಷ ಕಡತೋಕ ಮಂಜುನಾಥ ಭಾಗವತರ ಕಾರ್ಯವನ್ನು ಮುಂದುವರಿಸಿದ ಸಜ್ಜನ, ಸ್ನೇಹಶೀಲ."
            'ನಮ್ಮ ಊರನ್ನು ತೊರೆದು, ಹೊರ ರಾಜ್ಯಗಳಲ್ಲಿ ದುಡಿಯುತ್ತಿರುವ ಅಭಿರುಚಿಯುಳ್ಳವರಿಗೆ ಯಕ್ಷಗಾನದ ಆಗುಹೋಗುಗಳನ್ನು ತಿಳಿಸುವ ಉದ್ದೇಶ' ಎನ್ನುವ ಸ್ಪಷ್ಟ ಕಲ್ಪನೆಯಿತ್ತು. ಪತ್ರಿಕೆಯಿಂದ ಏನೇನೋ ಮಾಡಿಲ್ಲ! ಏನಕ್ಕೇನೂ ಮಾಡಿಲ್ಲ. ಜಾಹೀರಾತಿಗಾಗಿ ಕಸರತ್ತು ಮಾಡಿಲ್ಲ. ಆರಂಭದ ದಿವಸಗಳಲ್ಲಿ ಚಂದಾ, ಜಾಹೀರಾತಿಗಾಗಿ ಓಡಾಡಿ ಚಪ್ಪಲಿ ಸವೆದಿದ್ದುವು. ಪತ್ರಿಕೆಯ ನಿರ್ವಹಣೆ ವಿಚಾರದಲ್ಲಿ ಅವರದು ಏಕವ್ಯಕ್ತಿ ಸೈನ್ಯ. ಜತೆಗೆ ಮಡದಿ, ಮಕ್ಕಳ ಹೆಗಲೆಣೆ.
          ಕಾರ್ಯಕ್ರಮಗಳ ದಾಖಲಾತಿ, ವ್ಯಕ್ತಿ ಪರಿಚಯ, ವಿಚಾರ-ವಿಮರ್ಶೆ, ಕಲಾವಿಮರ್ಶೆ, ಧ್ವನಿಸುರುಳಿ-ಪುಸ್ತಕ ಪರಿಚಯ, ಕಾರ್ಯಕ್ರಮಗಳ ಮುನ್ನೋಟ, ವರದಿ...ಗಳೇ ಹೂರಣಗಳು. ಯಕ್ಷಗಾನದಂತಹ ಸಂಕೀರ್ಣ ಕಲೆಯ ಬಗ್ಗೆ ವಿಚಾರಪೂರ್ಣ ಲೇಖನ, ವಿಮರ್ಶೆಗಳಿಂದ ಪತ್ರಿಕೆಯನ್ನು ಸಮೃದ್ಧಿಗೊಳಿಸಬಹುದಿತ್ತು. ಆರ್ಥಿಕ ಭಾರವನ್ನು ಹಗುರಗೊಳಿಸುವ ಹೆಗಲುಗಳು ಸಿಗುತ್ತಿದ್ದರೆ ಕುಬಣೂರು ಎಂದೋ ಆ ಕೆಲಸ ಮಾಡುತ್ತಿದ್ದರೆನ್ನಿ.
             "ಕಟೀಲು ಮೇಳದ ಸಂಚಾಲಕರು ತನ್ನ ಮೇಳದ ಪ್ರದರ್ಶನಗಳ ಜಾಹೀರಾತು ನೀಡುವುದರೊಂದಿಗೆ, ಕಟೀಲು ಮೇಳದ ಆಟ ಆಡಿಸುವವರನ್ನು ಚಂದಾದಾರರನ್ನಾಗಿ ಮಾಡಲು ಒಪ್ಪಿಗೆ ನೀಡಿದ್ದರು. ಇದು ನಿಜವಾದ ಪ್ರೋತ್ಸಾಹ" ಎಂದೊಮ್ಮೆ ಹೇಳಿದ್ದರು. ಮೇಳದ ಯಜಮಾನ ಕಲ್ಲಾಡಿ ವಿಠಲ ಶೆಟ್ಟರ 'ಯಕ್ಷ ವಿಠಲ ವಿಜಯ' ಎನ್ನುವ ಕೃತಿಯನ್ನು ಸ್ವತಃ ಕುಬಣೂರರು ಪ್ರಕಾಶಿಸಿದ್ದಾರೆ.  
             ತನ್ನ ಕಲ್ಪನೆಯ ರಂಗತಂತ್ರಗಳಿಗೆ ಸ್ವಯಂ ರಚಿಸಿದ ಪ್ರಸಂಗಗಳನ್ನು ಪ್ರಯೋಗಕ್ಕೆ ಬಳಸುತ್ತಿದ್ದರು. ಕಾಂತಾವರ ಕ್ಷೇತ್ರ ಮಹಾತ್ಮೆ, ಸಾರ್ವಭೌಮ ಸಂಕರ್ಷಣ, ಮನುವಂಶವಾಹಿನಿ, ದಾಶರಥಿ ದರ್ಶನ, ಮಹಾಸತಿ ಮಂದಾಕಿನಿ, ಪಟ್ಟದ ಮಣೆ.. ಅಕ್ಷರಯಾನದ ರಸಘಟ್ಟಿ ಪ್ರಸಂಗಗಳು. 'ವಿದ್ಯಾವಂತರು ಯಕ್ಷಗಾನಕ್ಕೆ ಸಕ್ರಿಯರಾಗಿ ಬರಬೇಕು,' ಎಲ್ಲಾ ಕೃತಿಗಳಲ್ಲಿ, ರಂಗಪ್ರಯೋಗಗಳಲ್ಲಿ ಅವ್ಯಕ್ತವಾಗಿ ಕಾಣುವ ಸಂದೇಶ. ಅವರ ಆಶಯಗಳನ್ನು ಅರ್ಥಮಾಡಿಕೊಂಡ ಮೇಳದ ಕಲಾವಿದರ ಕೊಡುಗೆಯು ರಂಗ ಯಶದ ಹಿಂದಿರುವ ದೊಡ್ಡ ಶಕ್ತಿ.

ಸಾಧನೆಗೆ ಕನ್ನಡಿ

          ಶ್ರೀಧರ ರಾಯರಿಗೆ ಕಳೆದ ವರುಷ ನವಂಬರದಲ್ಲಿ ಕಟೀಲಿನಲ್ಲಿ ಅದ್ದೂರಿಯ ಅಭಿನಂದನೆ. ಈ ಸಂದರ್ಭದಲ್ಲಿ ಪ್ರಕಟವಾಯಿತು, 'ಯಕ್ಷಭೃಂಗ' ಅಭಿನಂದನ ಕೃತಿ. ಇವರ ಬದುಕಿನ ಪ್ರತಿಫಲನ. ಜೀವನದ ಏಳುಬೀಳುಗಳ ಜತೆ ಸ್ಥಿರತೆ, ಯಕ್ಷಗಾನದ ಏರು-ತಗ್ಗುಗಳು ಮೂಡಿಸಿದ ಎಚ್ಚರಗಳು, ಕಾಲಕಾಲದ ಯಕ್ಷಪಲ್ಲಟಗಳನ್ನು ಸರಳವಾಗಿ ಮತ್ತು ನಿಖರವಾಗಿ ಹೇಳಿದ್ದಾರೆ.
           ಮಡದಿ ಶಾರದಾ. ಮಗಳು ಶ್ರೀವಿದ್ಯಾ, ಪ್ರಕೃತ ಸಿಂಗಾಪುರ ನಿವಾಸಿ. ಮಗ ಶ್ರೀಕಾಂತ. ಕರ್ನಾಟಕ ಬ್ಯಾಂಕಿನ ಉದ್ಯೋಗಿ. ಒಮ್ಮೆ ಖಾಸಗಿ ಮಾತುಕತೆಯಲ್ಲಿ ಹೇಳಿದ್ದರು, "ಗಂಡನ ಬದುಕಿನ ಏಳು-ಬೀಳುಗಳಿಗೆ ಅಧೀರರಾಗದ ಪತ್ನಿ, ಅಪ್ಪನನ್ನು ಅರ್ಥಮಾಡಿಕೊಂಡ ಮಕ್ಕಳು - ಇವಿಷ್ಟೇ ನನ್ನ ಶಾಶ್ವತ ಆಸ್ತಿ." ಹತ್ತಾರು ಪ್ರಶಸ್ತಿ, ಪುರಸ್ಕಾರ, ಸಂಮಾನಗಳಿಂದ ಅಲಂಕೃತರು.
             ಕುಬಣೂರರ ಮರಣದ ಸುದ್ದಿಯನ್ನು ನವಮಾಧ್ಯಮಗಳು ಹೊತ್ತು ತಂದಾಗ ಈ ಮಾತುಗಳು ಕಾಡುವುದಕ್ಕೆ ಆರಂಭಿಸಿದುವು. ಹೊಣೆಯರಿತ ಗೃಹಸ್ಥನಾಗಿ ಬಾಳಿದ ಕುಬಣೂರರು ಎಲ್ಲರೆನ್ನುವಂತೆ 'ಆಟದವರಾಗಿರಲಿಲ್ಲ'! ಬದುಕಿನ ಎಷ್ಟೋ ಸಂದರ್ಭಗಳ ನಿರ್ಲಿಪ್ತತೆ ಇದೆಯಲ್ಲಾ ಅದೊಂದು ಧ್ಯಾನ. ಆ ಧ್ಯಾನದೊಳಗಿದ್ದ 'ಸಂಗೀತಗಾರ, ಭಾಗವತ, ಸಂಪಾದಕ, ಪ್ರಸಂಗಕರ್ತ, ಕೃತಿಕರ್ತ, ನಿರ್ದೇಶಕ, ತೀರ್ಪುಗಾರ' ಇವರೆಲ್ಲರೂ ಶಾಶ್ವತ ಧ್ಯಾನಕ್ಕೆ ಇಳಿದರು.
             ಕುಬಣೂರರ ವ್ಯಕ್ತಿತ್ವವನ್ನು ರೂಪಿಸಿದ, ರಂಗಕ್ಕೆ ಮಾನ-ಸಂಮಾನಗಳನ್ನು ನೀಡಿದ ನಾದಯೋಗಿಯ - ಅಕ್ಷರಯೋಗಿಯ ಬೌದ್ಧಿಕ ಸಾಮಥ್ರ್ಯದ ಅನಾವರಣದ ಮಾತಿಗೆ ಸಾರಸ್ವತ ಲೋಕವು 2017 ಸೆಪ್ಟೆಂಬರ್ 18ರ ತನಕ ಕಾಯಬೇಕಾಯಿತು. ಎಲ್ಲರ ಪಾಡು. ಇದು ಜೀವನ.
ಚಿತ್ರ : ನಟೇಶ್ ವಿಟ್ಲ

No comments:

Post a Comment