Saturday, September 3, 2016

ನೃತ್ಯಾರಾಧನೆಗೆ ಎರಕವಾದ ಯಕ್ಷಾರಾಧನೆ


             ವಿದುಷಿ ಸುಮಂಗಲಾ ರತ್ನಾಕರ್ ಯಾಕೋ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೋ ಎನ್ನುವ ಗುಮಾನಿ! ನಿರಂತರ ಓಡಾಟ. ಕಲೆಯ ಹೊರತು ಅನ್ಯ ಮಾತುಕತೆಯಿಲ್ಲ. ಕಾರ್ಯಕ್ರಮಗಳಲ್ಲಿ ತುಂಬ ಓಡಾಡುವವರು. ಹಲವು ಜವಾಬ್ದಾರಿಗಳ ನಿಭಾವಣೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತುಕೊಳ್ಳುವುದೇ ಕಡಿಮೆ!
               ಸುಮಂಗಲಾ ಭರತನಾಟ್ಯ ಕಲಾವಿದೆ. ನಾಟ್ಯ ಕ್ಷೇತ್ರದ ಆಳ-ವಿಸ್ತಾರವನ್ನು ಬಲ್ಲವರು. ಸತತ ಅಧ್ಯಯನ-ವಿಮರ್ಶೆ. ಶಿಷ್ಯರ ರೂಪೀಕರಣ. ವಿಚಾರ ಮಂಥನ, ಪ್ರಾತ್ಯಕ್ಷಿಕೆ, ಪ್ರಬಂಧ.. ಹೀಗೆ ಆ ಕ್ಷೇತ್ರದ ಗರಿಷ್ಠ ಸಾಧ್ಯತೆಯನ್ನು ಆಪೋಶನ ಮಾಡಿಕೊಂಡವರು.
             ನಾನು ಹಲವು ವರುಷದಿಂದ ಭರತನಾಟ್ಯ, ಸಂಗೀತ, ಯಕ್ಷಗಾನ ಕಲಾವಿದರನ್ನು 'ಒಬ್ಬ ಕಲಾವಿದ'ನಾಗಿ ನೋಡುತ್ತಿದ್ದೇನೆ. ಭರತನಾಟ್ಯ ಪ್ರದರ್ಶನಕ್ಕೆ ಯಕ್ಷಗಾನದವರು ಮುಖ ಮಾಡುವುದಿಲ್ಲ. ಯಕ್ಷಗಾನದತ್ತ ಭರತನಾಟ್ಯ ಕಲಾವಿದ/ದೆಯರು ಇಣುಕುವುದಿಲ್ಲ. ಸಂಗೀತ ಕಲಾವಿದರು ಅವರಷ್ಟಕ್ಕೆ. ಹೀಗೆ ಒಂದು ಕಲಾ ಪ್ರಕಾರ ಮತ್ತೊಂದನ್ನು ಸ್ಪರ್ಶಿಸುವುದಿಲ್ಲ. ಹಾಗೆಂತ ಮೂರರಲ್ಲೂ ಆಸಕ್ತಿಯಿರುವವರೂ ಇದ್ದಾರೆ.
              ನನ್ನ ಗೊಣಗಾಟ ಅದಲ್ಲ. ಯಾವುದೇ ಕ್ಷೇತ್ರದ ಕಲಾವಿದರಿಗೆ ಅನ್ಯ ಕಲೆಗಳ ಕನಿಷ್ಠ ಪರಿಚಯವಾದರೂ ಬೇಕು. ಆಸಕ್ತಿ ಹುಟ್ಟಲು ಕಲಿಯಲೇ ಬೇಕು ಎಂದೇನೂ ಇಲ್ಲ. ಎಲ್ಲಾ ಕಲೆಗಳ ಅಂತಿಮ ಗುರಿ - ರಂಗಸುಖ ಅಲ್ವಾ. ಭರತನಾಟ್ಯ ಕಲಾವಿದೆಯಾದ ಸುಮಂಗಲಾ ರತ್ನಾಕರ್ ಅವರ ಸ್ವ-ಕ್ಷೇತ್ರದಲ್ಲಿ ತುಂಬು ಸಕ್ರಿಯ. ಜತೆಗೆ ಯಕ್ಷಗಾನವನ್ನೂ ತಲೆತುಂಬಿಕೊಂಡು ತಂಡ ಕಟ್ಟಿ ಪ್ರದರ್ಶನ ನೀಡುತ್ತಿರುವುದನ್ನು ನೋಡಿದರೆ ಖುಷಿ. ಜತೆಗೆ ಓರ್ವ ಯಕ್ಷಗಾನ ಕಲಾವಿದನಾಗಿ - ಛೇ.. ಅವರಂತೆ ಆಗುವುದಿಲ್ಲವಲ್ಲಾ - ಎನ್ನುವ ನಂಜು ನನಗರಿವಿಲ್ಲದೆ ಹುಟ್ಟಿಕೊಂಡಿದೆ!
               ಮಂಗಳೂರಿನ ಉರ್ವ 'ಯಕ್ಷಾರಾಧನಾ ಕಲಾ ಕೇಂದ್ರ'ವು ಸುಮಂಗಲಾರ ಕೂಸು. ಅದಕ್ಕೀಗ ಏಳರ ಹರೆಯ.  ಆರು ವರುಷಗಳಲ್ಲಿ ಕೇಂದ್ರವು ವಾರ್ಶಿಕ ಪ್ರದರ್ಶನಕ್ಕೆ ಮಾತ್ರ ತನ್ನನ್ನು ಒಡ್ಡಿಕೊಳ್ಳಲಿಲ್ಲ. ಒಂದೇ ಸೂರಿನಡಿ ಭರತನಾಟ್ಯದ ಗೆಜ್ಜೆಯ ಸದ್ದು, ಯಕ್ಷಗಾನದ ಜಾಗಟೆ ದನಿ. ಮಕ್ಕಳು, ಮಹಿಳೆಯರಲ್ಲಿ ನಮ್ಮ ಸಂಸ್ಕೃತಿ, ಪುರಾಣ, ಆಚಾರ, ವಿಚಾರಗಳ ಚಿಂತನೆ ಮೂಡಲು ಪೂರಕವಾದ ಮನಸ್ಸನ್ನು ಕಟ್ಟುವುದು ಕೇಂದ್ರದ ಉದ್ದೇಶ,ಎನ್ನುತ್ತಾರೆ. ಮನಸ್ಸಿನ ಅರಳುವಿಕೆಗೆ ಭರತನಾಟ್ಯ, ಬುದ್ಧಿಯ ವಿಕಸನಕ್ಕೆ ಯಕ್ಷಗಾನ.
              ಶಾಸ್ತ್ರೀಯ ಚೌಕಟ್ಟಿನೊಂದಿಗೆ ಯಕ್ಷಗಾನದಲ್ಲಿ ರಸೋತ್ಪತ್ತಿಯ ಸೃಷ್ಟಿ - ಸುಮಂಗಲಾರ ದೂರದೃಷ್ಟಿ. ವರ್ತಮಾನದ ಯಕ್ಷಗಾನದಲ್ಲಿ 'ರಸೋತ್ಪತ್ತಿ' ಹೊರತು ಪಡಿಸಿ ಮಿಕ್ಕೆಲ್ಲವೂ ಯಥೇಷ್ಟವಾಗಿದೆ! ಅತಿ ಕುಣಿತದ ಧಾವಂತದಲ್ಲಿ ಮಾತುಗಾರಿಕೆಗೆ ಏದುಸಿರು! ಹೆಚ್ಚು ಕುಣಿದರೆ 'ರೈಸುತ್ತದೆ' ಎನ್ನುವ ಭಾವ, ಭಾವನೆ. ಪ್ರೇಕ್ಷಕರಿಂದ ಚಪ್ಪಾಳೆ, ಶಿಳ್ಳೆಯೇ ಕುಣಿತಕ್ಕಿರುವ ಅಂತಿಮ ಮಾನದಂಡ ಎಂದು ಕಲಾವಿದರು (ಎಲ್ಲರೂ ಅಲ್ಲ) ತಿಳಿದಂತಿದೆ. ಅರ್ಥಗಾರಿಕೆ, ಭಾವನೆ, ಪಾತ್ರ ಸ್ವಭಾವಗಳನ್ನು ಕುಣಿತಗಳು ನುಂಗುತ್ತಿವೆ. ಈ ಹಿನ್ನೆಲೆಯಲ್ಲಿ ರಸೋತ್ಪತ್ತಿಯನ್ನು ರಂಗದಲ್ಲಿ ಪುನಃ ಸ್ಥಾಪಿಸುವ ಅಗತ್ಯವಿದೆ. ಸುಮಂಗಲಾ ಅವರ ಟೀಮ್ ಈ ದಿಸೆಯಲ್ಲಿ ಯೋಚಿಸುತ್ತಿರುವುದು ಶ್ಲಾಘ್ಯ.
                ಕಲಾಶಿಸ್ತಿನೊಂದಿಗೆ ತರಬೇತಿ. ಇಂದು ಯಕ್ಷಗಾನದ ತರಬೇತಿ ಕೇಂದ್ರಗಳು ವಿರಳವಾಗುತ್ತಿವೆ. ಸಂಘಗಳು, ಶಾಲೆಗಳಲ್ಲಿ ಅನುಭವಿ ಕಲಾವಿದರಿಂದ ತರಬೇತಿ ನಡೆಯುತ್ತಿದೆ. ಕಲಿಸುವ ಗುರುಗಳ ಅನುಭವ ಮತ್ತು ಬೌದ್ಧಿಕ ಸಾಮಥ್ರ್ಯದಂತೆ ವಿದ್ಯಾರ್ಥಿಗಳು ರೂಪುಗೊಳ್ಳುತ್ತಾರೆ. ಒಂದೆರಡು ಪ್ರದರ್ಶನದ ಬಳಿಕ ಬಹುತೇಕ ಕೇಂದ್ರಗಳು ಮೌನದತ್ತ ವಾಲುವುದನ್ನು ನೋಡುತ್ತಿದ್ದೇನೆ. ತರಬೇತಿಯಲ್ಲಿ ಕಲಾಶಿಸ್ತು ಎನ್ನುವ ವಿಚಾರ ತುಂಬಾ ವಿಶಾಲವಾದುದು. ನಿಭಾವಣೆ ಕಷ್ಟ. ಗುರುವಿನಲ್ಲಿ ಛಲವಿದ್ದರೆ ಕಷ್ಟವಲ್ಲ. ಸುಮಂಗಲಾ ಅವರಲ್ಲಿ ಇಂತಹ ಕಲಾಸೂಕ್ಷ್ಮ ವಿಚಾರಗಳು ಹುಟ್ಟಿಕೊಂಡಿರುವುದೇ ಗ್ರೇಟ್.
'ಯಕ್ಷೊಪಾಸನಾ ಶಿಬಿರ'ವು ಕೇಂದ್ರದ ಯಶಸ್ವೀ ಕಲಾಪ. ಯಕ್ಷ ವಿದ್ವಾಂಸರ, ಹಿರಿಯ ಕಲಾವಿದರ ಉಪಸ್ಥಿತಿ. ಮಾತುಗಾರಿಕೆ, ಭಾಷೆ, ವೈಚಾರಿಕತೆ, ಪಾತ್ರ ಚಿತ್ರಣ, ಪ್ರಸಂಗ ಪ್ರಸ್ತುತಿ.. ಮುಂತಾದ ಹೂರಣಗಳು. ಯಕ್ಷಗಾನದ ಕೆಲಸವೆಂದರೆ ಕೇವಲ ತರಬೇತಿ ಮತ್ತು ವೇಷ ಮಾಡುವುದು ಅಲ್ಲ. ಒಂದೊಂದು ವಿಭಾಗದ ಬೆಳವಣಿಗೆಗೆ ಆಗುತ್ತಾ ಇರಬೇಕು. ಶಿಬಿರಗಳು ಹೊಸದಾಗಿ ರಂಗ ಪ್ರವೇಶಿಸುವವರಿಗೆ ತುಂಬಾ ಸಹಕಾರಿ, ಎನ್ನುತ್ತಾರೆ. ನಮ್ಮ ನಡುವಿನ ಸಂಘಸಂಸ್ಥೆಗಳು ಆಟ-ಕೂಟದ ಜತೆಗೆ ಇಂತಹ ಹೂರಣವನ್ನು ಪೋಣಿಸಿಕೊಳ್ಳಬಹುದು.  
               ಯಕ್ಷಾರಾಧನಾ ಕಲಾ ಕೇಂದ್ರವು ಎಪ್ಪತ್ತೈದಕ್ಕೂ ಮಿಕ್ಕಿ ಪ್ರದರ್ಶನವನ್ನು ನೀಡಿದೆ. ಮಹಿಳಾ ತಾಳಮದ್ದಳೆ ತಂಡವು ಸುಪುಷ್ಟವಾಗಿದೆ. ಸಂದರ್ಭಾನುಸಾರ ಪ್ರಾತ್ಯಕ್ಷಿಕೆ, ಕಲಾ ಮಾತುಕತೆಯನ್ನು ಏರ್ಪಡಿಸುತ್ತಿದೆ. ಸುಮಂಗಲಾರಿಗೆ ಎಲ್ಲಾ ಕಲಾ ಪ್ರಕಾರಗಳಲ್ಲಿ ಆಸಕ್ತಿಯಿರುವುದರಿಂದ ಸಹಜವಾಗಿಯೇ ಕಲಾ ಮನಸ್ಸು ರೂಪುಗೊಂಡಿದೆ. ಜತೆ ಕಲಾವಿದರೂ ಅದೇ ಜಾಡಿನಲ್ಲಿ ಸಾಗುತ್ತಿದ್ದಾರೆ. ಈಗ ಕಲಾ ಕೇಂದ್ರಕ್ಕೆ ಏಳರ ಸಂಭ್ರಮ. ೨೦೧೬ ಆಗಸ್ಟ್ 21 ರವಿವಾರದಂದು ಸಂಜೆ 4 ಗಂಟೆಯಿಂದ ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಕಲಾ ಸಂಭ್ರಮ.
                ಪರಂಪರೆಯ ಹಾದಿಯನ್ನು ಬಿಡದೆ, ಅಪ್ಪಟ ಯಕ್ಷಗಾನವನ್ನು ಮೈತುಂಬಿಕೊಂಡ ಕಟೀಲು ಮೇಳದ ಕಲಾವಿದ ಕೈರಂಗಳ ಕೃಷ್ಣ ಮೂಲ್ಯರಿಗೆ 'ಯಕ್ಷಕಲಾರಾಧಕ' ಪ್ರಶಸ್ತಿ, ಹವ್ಯಾಸಿ ಕಲಾವಿದರಾಗಿದ್ದು ವೃತ್ತಿ ರಂಗದಿಂದ ಮೆಚ್ಚುಗೆ ಪಡೆಯುತ್ತಿರುವ ಕೃಷ್ಣಪ್ರಕಾಶ ಉಳಿತ್ತಾಯರಿಗೆ 'ಯುವ ಯಕ್ಷಕಲಾರಾಧಕ' ಪ್ರಶಸ್ತಿ ಪ್ರದಾನ. ಉಳಿತ್ತಾಯರು ಕನರ್ಾಟಕ ಬ್ಯಾಂಕಿನ ಅಧಿಕಾರಿ. ಹಿಮ್ಮೇಳದ ಸೂಕ್ಷ್ಮ ಸಂಗತಿಗಳನ್ನು ಗೌರವಿಸಿದ ಮದ್ದಳೆಗಾರ, ಲೇಖಕ. ಸುಮಂಗಲಾ ಮತ್ತು ಪೂರ್ಣಿಮಾ ಯತೀಶ ರೈ ನಿರ್ದೇಶನದ 'ಶ್ರೀ ಕೃಷ್ಣ ಲೀಲೆ ಮತ್ತು ಅಂಬಾ ಶಪಥ' ಆಖ್ಯಾನಗಳ ಪ್ರದರ್ಶನ ಜರುಗಲಿದೆ. 
                ನಮ್ಮ ನಡುವೆ ನೂರಾರು ಮಹಿಳಾ ತಾಳಮದ್ದಳೆ, ಆಟಗಳ ತಂಡಗಳಿರುವುದು ಹೆಮ್ಮೆಯ ವಿಚಾರ. ಸ್ವ-ಬೆಳವಣಿಗೆ, ಬೌದ್ಧಿಕ ಗಟ್ಟಿತನ ಮತ್ತು ಯಕ್ಷಗಾನ ರಂಗದ ಸರ್ವತೋಮುಖ ಜ್ಞಾನಾವೃದ್ಧಿಗೆ ಪೂರಕವಾದ ಕನಿಷ್ಠ ಕಾರ್ಯಹೂರಣಗಳ ಸುಪುಷ್ಟ ಮರುಪೋಣಿಕೆ ಆಗಬೇಕಾಗಿದೆ. ದೂರದೂರದ ತಂಡಗಳೊಳಗೆ ಸಂಪರ್ಕ ಸೇತುವಾಗಬೇಕು. ಮಂಗಳೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ಸುಮಂಗಲಾ ರತ್ನಾಕರ್ ಯಕ್ಷಗಾನದ ಸಂಘಟನೆಯಲ್ಲಿ ದೊಡ್ಡ ಹೆಜ್ಜೆ ಊರಿದ್ದಾರೆ. ಅದನ್ನು ನೋಡುವ, ಮನನಿಸುವ, ಖುಷಿಪಡುವ, ಬೆನ್ನುತಟ್ಟುವ, ಪ್ರೋತ್ಸಾಹಿಸುವ, ಹೆಗಲು ಕೊಡುವ ಯಕ್ಷಮನಸ್ಸುಗಳು ತಯಾರಾಗುವುದು ಜತೆಜತೆಗೆ ಆಗಬೇಕಾಗಿದೆ. 
(ಪ್ರಜಾವಾಣಿ | ದಧಿಗಿಣತೋ ಅಂಕಣ)

No comments:

Post a Comment