Saturday, August 26, 2017

ವೃತ್ತಿಯನ್ನು ಮೀರಿದ ಮೇಳದ ಹಿತಾಸಕ್ತಿ

ಪ್ರಜಾವಾಣಿಯ 'ಧಧಿಗಿಣತೋ' ಅಂಕಣ / 2-6-2017
(ಚಿತ್ರ : ನಟೇಶ್ ವಿಟ್ಲ)

                ಕಟೀಲು ಮೇಳದ ಭಾಗವತ. ಕುಬಣೂರು ಶ್ರೀಧರ ರಾವ್, 'ಯಕ್ಷಪ್ರಭಾ' ಮಾಸಪತ್ರಿಕೆಯ ಸಂಪಾದಕ. ತಾಂತ್ರಿಕ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮ ಓದು. ತೊಡಗಿಸಿಕೊಂಡದ್ದು ಪೂರ್ಣಪ್ರಮಾಣದ ಯಕ್ಷಗಾನ ವೃತ್ತಿ. ಯಕ್ಷಗಾನದ ಅಕಾಡೆಮಿಕ್ ವಿಚಾರಗಳ ಸುತ್ತ ಯೋಚನೆ, ಯೋಜನೆ. ರಂಗಾವಿಷ್ಕಾರಗಳಲ್ಲಿ ಆಸಕ್ತ. ಹೊಸ ಪ್ರಸಂಗಗಳ ರಚನೆ-ಪ್ರದರ್ಶನ, ವಿಶೇಷ ವಿನ್ಯಾಸದ ರಂಗಜೋಡಣೆ, ಸಿದ್ಧ ವ್ಯವಸ್ಥೆಗಿಂತ ಆಚೆ ನೋಡುವ ಮನಃಸ್ಥಿತಿ ಮತ್ತು ಕಲಾವಿದರ ಸಾಮಥ್ರ್ಯಕ್ಕೆ ಹೊಂದಿಕೊಂಡ  ರಂಗ ನಿರ್ದೇಶನಗಳು ಕುಬಣೂರರ ವಿಶೇಷತೆ.
               ಕುಬಣೂರು ಶ್ರೀಧರ ರಾಯರಿಗೆ ಕಳೆದ ವರುಷ ಕಟೀಲಿನಲ್ಲಿ ಅದ್ದೂರಿಯ ಅಭಿನಂದನೆ ನಡೆದಿತ್ತು ಈ ಸಂದರ್ಭದಲ್ಲಿ 'ಯಕ್ಷಭೃಂಗ' ಅಭಿನಂದನ ಕೃತಿಯು ಪ್ರಕಟವಾಗಿತ್ತು. ಕುಬಣೂರು ಅಭಿನಂದನಾ ಸಮಿತಿಯ ಪ್ರಕಾಶನ. ಕೃತಿಯು ಶ್ರೀಧರ ರಾಯರ ಬದುಕಿನ ಪ್ರತಿಫಲನ. ಜೀವನದ ಏಳುಬೀಳುಗಳ ಜತೆ ಸ್ಥಿರತೆ, ಯಕ್ಷಗಾನದ ಏರು-ತಗ್ಗುಗಳಲ್ಲಿ ಮೂಡಿಸಿದ ಎಚ್ಚರಗಳು, ಕಾಲಕಾಲದ ಯಕ್ಷಪಲ್ಲಟಗಳನ್ನು ಸರಳವಾಗಿ ಮತ್ತು ನಿಖರವಾಗಿ ಹೇಳಿದ್ದಾರೆ.  ಯಕ್ಷಗಾನದ ವಿವಿಧ ಆಯಾಮಗಳನ್ನು ವಿವಿಧ ಕೋನಗಳಲ್ಲಿ ವಿದ್ವಾಂಸರು ಕಂಡ ಬರಹಗಳಿವೆ.
                 ಯಕ್ಷಗಾನ ಮೇಳಗಳಿಗೆ ವಿಧಿಸುತ್ತಿದ್ದ ತೆರಿಗೆ ರದ್ದಾದ ವಿದ್ಯಮಾನವನ್ನು ಕೃತಿಯಲ್ಲಿ ಹೇಳುತ್ತಾರೆ. "ಕನ್ನಾಡು, ಕೇರಳ ಯಾವುದೇ ಪ್ರದೇಶದಲ್ಲಿ ಮೇಳದ ಟೆಂಟ್ ಊರಬೇಕಾದರೆ ಅಲ್ಲಿನ ಪಂಚಾಯತಿನ  ಒಪ್ಪಿಗೆ  ಬೇಕಿತ್ತು. ನಿಗದಿಪಡಿಸಿದ ಸಾಂಸ್ಕೃತಿಕ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಆಟ ಆಡಿಸುವ ದಿವಸ ಪಂಚಾಯತ್ ಕಚೇರಿಗೆ ಹೋಗಿ, ಮೇಳದ ಟಿಕೇಟ್ ಪುಸ್ತಕಗಳಿಗೆ - ಎಲ್ಲಾ ದರದ ಟಿಕೇಟುಗಳಿಗೆ - ಪಂಚಾಯತಿನ ಸೀಲು ಹಾಕಿಸಬೇಕಾಗಿತ್ತು. ಆ ರಾತ್ರಿ ಮಾರಾಟವಾದ ಟಿಕೇಟಿನ ಲೆಕ್ಕವನ್ನು ಮರುದಿವಸ ಪಂಚಾಯತಿಗೆ ಒಪ್ಪಿಸಬೇಕಿತ್ತು. ಎಷ್ಟು ಟಿಕೇಟು ಮಾರಾಟವಾಗಿತ್ತೋ ಅದಕ್ಕೆ ನಿಗದಿಯಾದ ತೆರಿಗೆಯನ್ನು ಕಟ್ಟುವುದು ಕಡ್ಡಾಯವಾಗಿತ್ತು."
                ಆ ಕಾಲಘಟ್ಟದಲ್ಲಿ ಅರ್ಥಧಾರಿ, ಸಂಘಟಕ ಹಾಗೂ ವಕೀಲರಾದ ಕುಬಣೂರು ಬಾಲಕೃಷ್ಣ ರಾಯರು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಮೇಳವು ಅನುಭವಿಸುವ ತೆರಿಗೆಯ ಭಾರದ ಬವಣೆಯನ್ನು ನಿವೇದಿಸಿದ್ದರು. ಮೇಳಕ್ಕಾಗುವ ನಷ್ಟವನ್ನು ಮನವರಿಕೆ ಮಾಡಿಕೊಟ್ಟಿದ್ದರು. ಉಭಯ ರಾಜ್ಯದ ವರಿಷ್ಠರಲ್ಲೂ ವ್ಯವಹಾರ ಮಾಡಿದ್ದರು. ಫಲವಾಗಿ ಸಾಂಸ್ಕೃತಿಕ ತೆರಿಗೆ ರದ್ದಾಯಿತು. ಯಕ್ಷಗಾನ ಪ್ರದರ್ಶನಗಳಿಗೆ ಮುಕ್ತವಾದ ಅವಕಾಶ ಪ್ರಾಪ್ತವಾಯಿತು. ವರ್ತಮಾನದಲ್ಲಿ ನಿಂತು ಈ ಘಟನೆಯನ್ನು ಅವಲೋಕಿಸಿದಾಗ ಮೇಳದ ಪ್ರದರ್ಶನಕ್ಕಿದ್ದ ಕಷ್ಟ ದಿನಗಳ ಅರಿವಾಗುತ್ತದೆ.
                ಕದ್ರಿ ಮೇಳ, ನಂದಾವರ, ಅರುವ, ಬಪ್ಪನಾಡು, ಕಾಂತಾವರ ಮೇಳಗಳಲ್ಲಿ 1981 ರಿಂದ 1989ರ ತನಕ ತಿರುಗಾಟ. 1990ರಿಂದ ಶ್ರೀ ಕಟೀಲು ಮೇಳದಲ್ಲಿ ವ್ಯವಸಾಯ. ಸ್ವ-ರಚನೆಯ ಪ್ರಸಂಗಗಳು ಮೇಳದಲ್ಲಿ ಪ್ರದರ್ಶಿತವಾದುವು. ಯಶ ಕಂಡುವು. ನೂತನ ವಿನ್ಯಾಸದ ದೃಶ್ಯಗಳು ಪ್ರೇಕ್ಷಕ ಸ್ವೀಕೃತಿ ಪಡೆಯಿತು. ಮೇಳದ ತಿರುಗಾಟವಾಗುತ್ತಿದ್ದಂತೆ ಆದಂತಹ ಕೆಲವೊಂದು ರೂಢನೆಗಳನ್ನು' ಯಕ್ಷಭೃಂಗ'ದಲ್ಲಿ ದಾಖಲಿಸುತ್ತಾರೆ. ಟೆಂಟ್ ಮೇಳಗಳಲ್ಲಿ ಅನುಭವ ಹೊಂದಿದ ಶ್ರೀಧರ ರಾಯರಿಗೆ ಬಯಲಾಟ ಮೇಳವಾದ ಕಟೀಲು ಮೇಳಕ್ಕೆ ಬಂದಾಗ ಎದುರಾದ ಕೆಲವು ಸಹಜ ತೊಡಕುಗಳು ಮತ್ತು ಅದನ್ನು ನಿವಾರಿಸಿದ ಬಗೆಯನ್ನು ರೋಚಕವಾಗಿ ಹೇಳುತ್ತಾರೆ. ತೊಂದರೆ ಅನುಭವಿಸಿದರೂ ಮತ್ತೆ ಅವುಗಳು ಶಾಶ್ವತ ಪರಿಹಾರವಾದ ಒಂದೆರಡು ಘಟನೆಗಳು -
                ತೊಂಭತ್ತನೇ ಇಸವಿ. ವಿಪರೀತ ಚಳಿ. ಟೆಂಟಿನ ಮೇಳಗಳಲ್ಲಿ ಮಂಜು ಹನಿಯಿಂದ ಪಾರಾಗಲು ಅಲ್ಪಸ್ವಲ್ಪ ಟರ್ಪಾಲು ವ್ಯವಸ್ಥೆಗಳಿರುತ್ತಿದ್ದುವು. ಬಯಲಾಟಗಳಲ್ಲಿ ಆಗಸವೇ ಬಟ್ಟೆ. ರಂಗಸ್ಥಳದಲ್ಲಿ ವೇಷ ಕುಣಿಯುವ ಸ್ಥಳದಷ್ಟು  ಮೇಲೆ ಹಾಸು ಬಟ್ಟೆಯಿರುತ್ತಿತ್ತು. ಹಿಮ್ಮೇಳದವರು ಒದ್ದೆಯಾಗಿಯೇ ದುಡಿಯಬೇಕಾಗಿತ್ತು. ಆಗ ರಂಗಸ್ಥಳದ ನಿರ್ವಹಣೆ ಮೇಳದ್ದಾಗಿರಲಿಲ್ಲ. ಅದನ್ನು ಗುತ್ತಿಗೆದಾರರು ಮಾಡುತ್ತಿದ್ದರು. ಪ್ಲಾಸ್ಟಿಕ್ ಶೀಟ್ ಹಾಸದದ್ದರೆ ಭಾಗವತರ ಮೇಜನ್ನು ಎಳೆದು ಎದುರು - ಅಂದರೆ ವೇಷ ಕುಣಿಯುವಲ್ಲಿ - ಕುಳಿತುಕೊಳ್ಳುತ್ತೇವೆ ಎಂದು ರಂಗಸ್ಥಳ ನಿರ್ವಾಹಕರಲ್ಲಿ ಹೇಳಿದ್ದರು. ತಲೆಗೆ ಕಟ್ಟಲು ದೇವಸ್ಥಾನದಿಂದ ನೀಡುತಿದ್ದ ಸೀರೆ ಬಹಳಷ್ಟು ಭಾರವಾಗಿದ್ದು ಅದನ್ನು ಮುಂಡಾಸು ಕಟ್ಟಲು ಆಗುತ್ತಿರಲಿಲ್ಲ. ಅಂತೂ ಒಂದು ವಾರದಲ್ಲಿ ಮೇಲೆ ಪ್ಲಾಸ್ಟಿಕ್ ಹಾಸು ಬಂತು, ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಕುಬಣೂರು.
              ಇನ್ನೊಂದು ಸಂದರ್ಭ - ಬಂಟ್ವಾಳ ಸಮೀಪದ ಒಂದು ಆಟದಲ್ಲಿ ಸಂಘಟಕರು ರಂಗಸ್ಥಳದ ಹಿಂದೆ ಪರದೆ ಕಟ್ಟಿದ್ದರು. (ಕಟೀಲು ಮೇಳದಲ್ಲಿ ಆಗ ಪರದೆ ಇದ್ದಿರಲಿಲ್ಲ) ಹೀಗೆ ಮಾಡಿದ್ದದರಿಂದ ಕೆಲವರಿಗೆ ರಂಗದ ಹಿಂದೆ ಕುಳಿತು ಆಟ ನೋಡಲು ಕಷ್ಟವಾಯಿತು! ಆಗ ಆಟ ಆಡಿಸುವ ಆಢ್ಯರು ರಂಗಸ್ಥಳದ ಹಿಂದೆ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಈ ಪರದೆಯು ಹಿಂದಿನಿಂದ ಬೀಸುತ್ತಿದ್ದ ಚಳಿಗಾಳಿಯನ್ನು ತಡೆಯುತ್ತಿತ್ತು. ಬೆಳಿಗ್ಗೆ ರಂಗಸ್ಥಳ ನಿರ್ವಾಹಕರು ಸೇವಾಕರ್ತರಲ್ಲಿ 'ಈ ಪರದೆ ಮೇಳಕ್ಕೆ ಕೊಡಬಹುದೇ' ಎಂದು ಕೇಳಿಸಿದೆ. ಸಂತೋಷದಿಂದ ಒಪ್ಪಿದರು. ಅಂದಿನಿಂದ ನಾನಿದ್ದ ಒಂದನೇ ಮೇಳದಲ್ಲಿ ರಂಗದ ಹಿಂದೆ ಪರದೆ ಕಟ್ಟುವ ಪದ್ಧತಿ ನಿತ್ಯವಾಯಿತು. ಇದನ್ನು ನೋಡಿದ ಯಜಮಾನರು ಖುಷಿಪಟ್ಟರು. ಮುಂದಿನ ವರುಷದಿಂದ ಕಟೀಲು ಮೇಳಗಳ  ಎಲ್ಲಾ ರಂಗಸ್ಥಳಗಳಿಗೂ ಪರದೆ ಬಂತು.
               ಮೂಡುಬಿದಿರೆಯಲ್ಲಿ 'ದೇವಿ ಮಹಾತ್ಮೆ' ಆಟ. ಆ ವರುಷ ವಿಶೇಷವಾಗಿ 'ಶ್ರೀದೇವಿ ಉದ್ಭವ' ಆಗುವ ದೃಶ್ಯವನ್ನು ಸಂಯೋಜಿಸಿದ್ದರು. ಎತ್ತರದ ರಂಗವೇದಿಕೆ. ಅದರ ಬುಡದಿಂದ ದೇವಿ ನಿಧಾನವಾಗಿ ಎದ್ದೇಳುತ್ತಾ ಬರುವ ವಿನ್ಯಾಸ. ಕೈಯಲ್ಲಿ ಜಾಕ್ ತಿರುಗಿಸುತ್ತಿದ್ದಂತೆ ಇಡೀ ಪ್ಲಾಟ್ಫಾರಂ ಮೇಲೆದ್ದು ಬಂದು ಶ್ರೀದೇವಿಯ ಪಾತ್ರವು ಕಾಣಿಸಿಕೊಳ್ಳುವ ನೂತನ ಕಲ್ಪನೆ. ಅಲ್ಲಿಯ ತನಕ ಸೆಟ್ಟಿಂಗ್ ಮಾಡಲು ಎದುರಿಗೆ ಪರದೆ ಹಾಕುತ್ತಿದ್ದರು. ಆಟ ಮುಗಿದ ಬಳಿಕ ಈ ಪರದೆಯನ್ನು ನೀಡುವಂತೆ ಶ್ರೀಧರ ರಾಯರು ಆಟ ಆಡಿಸುವವರಲ್ಲಿ ವಿನಂತಿಸಿದರು. ಮುಂದಿನ ವರುಷಕ್ಕೆ ಈ ಕೋರಿಕೆ ಈಡೇರಿತು.
               ಮಂಗಳೂರಿನ ಬೋಂದೆಲಿನಲ್ಲಿ ಮೇಳದ ಯಜಮಾನರಾದ ವಿಠಲ ಶೆಟ್ಟರಿಗ ಸಂಮಾನ. ರಾಮದಾಸ ಸಾಮಗರಿಂದ ಅಭಿನಂದನಾ ಭಾಷಣ. ರಂಗಸ್ಥಳಕ್ಕೆ ಮ್ಯಾಟ್ ಹಾಸಿದ್ದರು. ಆಟವೂ ಕೂಡಾ ಮ್ಯಾಟ್ ಹಾಸಿದ ರಂಗದಲ್ಲೇ ನಡೆಯಿತು. ಬೆಳಿಗ್ಗೆ 'ಈ ಮ್ಯಾಟನ್ನು ಮೇಳಕ್ಕೆ ನೀಡುವಿರಾ' ಎಂದು ವಿನಂತಿಸಿದರು. ಅಂದಿನಿಂದ ಮೇಳದ ರಂಗಸ್ಥಳಕ್ಕೆ ಮ್ಯಾಟ್ ಹಾಸುವ ವ್ಯವಸ್ಥೆ ರೂಢಿಯಾಯಿತು. ನಮ್ಮ ಮೇಳದಲ್ಲಿ ಧೂಳು ಹಾರದಂತೆ ನೆಲಕ್ಕೆ ಚದುರಿಸುವ ಮರದ ಹುಡಿ ಮತ್ತು ಪ್ರಸಂಗದ ಕೆಲವೊಂದು ದುಃಖದ ದೃಶ್ಯಕ್ಕೆ ಪಾತ್ರಧಾರಿ ಕುಳಿತುಕೊಳ್ಳಲು ಚಾಪೆ ಹಾಸುವ ಕ್ರಮ ನಿಂತಿತು. ಮುಂದಿನ ವರುಷದಿಂದ ಎಲ್ಲಾ ಮೇಳಗಳಿಗೂ ಮ್ಯಾಟ್ ವ್ಯವಸ್ಥೆಯಾಯಿತು ಎನ್ನುತ್ತಾರೆ. ನಂತರದ ವರುಷಗಳಲ್ಲಿ ರಂಗಸ್ಥಳಕ್ಕೆ ಪ್ಲಾಟ್ಫಾರಂ ವ್ಯವಸ್ಥೆಯೂ ಆಯಿತು.
                 ಹೀಗೆ ಕೆಲವೊಂದು ವ್ಯವಸ್ಥೆಗಳು ಮೇಳದಲ್ಲಿ ರೂಢನೆಯಾದುದು ಕುಬಣೂರರಲ್ಲಿದ್ದ ಮೇಳದ ಹಿತಾಸಕ್ತಿಗೆ ಸಾಕ್ಷಿ. ಜತೆಗೆ ಮೇಳ ನಿಷ್ಠತೆಯ ಬದ್ಧತೆ. ಮೇಳದ ಬದುಕಿನಿಂದ ಬದುಕಿನ ಸುಖವನ್ನು ಅನುಭವಿಸುವ ಶ್ರೀಧರ ರಾಯರು ಮನಬಿಚ್ಚಿ ಮಾತನಾಡುತ್ತಾರೆ, ಕಟೀಲು ಮೇಳದ ಆಟಗಳು ವೈಭವೋಪೇತವಾಗಿ ಹಿಂದಿನ ಟೆಂಟಿನ ಮೇಳಕ್ಕೆ ಸಂವಾದಿಯಾಗಿ ಪ್ರದರ್ಶಿಸುತ್ತಿದೆ. ಒಂದು ಕಾಲಘಟ್ಟದಲ್ಲಿ 'ಅಲ್ಪ ಸಂಬಳ' ಎಂದು ಕಡೆಗಣಿಸಿದ್ದ ಮೇಳವಿಂದು ಪ್ರಸಿದ್ಧ ಮೇಳವಾಗಿ ಹೊರಹೊಮ್ಮಿದೆ. ಮೇಳಕ್ಕೆ ಸೇರಲು ಕಲಾವಿದರು ಕಾತರಿಸುತ್ತಿದ್ದಾರೆ. ಕಟೀಲು ಮೇಳದೊಂದಿಗೆ ಸಾಗಿದ ನನ್ನ ಜೀವನದಲ್ಲಿ ಮೇಳದ ಮಾರ್ಪಾಟಾದ ಸ್ಥಿತಿಯೊಂದಿಗೆ, ನನ್ನ ಜೀವನವೂ ಸುಭದ್ರವಾದುದನ್ನು ಅನುಭವಿಸಿದ್ದೇನೆ.
                   ಕಾಲದ ಒಂದೊಂದು ಘಟನೆಗೆ ಸಾಕ್ಷಿಯಾಗಿ 'ಯಕ್ಷಭೃಂಗ' ಕೃತಿ ನಮ್ಮೆದುರಿಗಿದೆ. ಕುಬಣೂರರು  ದಾಶರಥಿ ದರ್ಶನ, ಸಾರ್ವಭೌಮ ಸಂಕರ್ಷಣ, ಮನುವಂಶವಾಹಿನಿ, ಮಹಾಸತಿ ಮಂದಾಕಿನಿ, ಕಾಂತಾವರ ಕ್ಷೇತ್ರ ಮಹಾತ್ಮೆ, ಪಟ್ಟದ ಮಣೆ.. ಪ್ರಸಂಗಗಳ ರಚಯಿತರು. ಕೀರ್ತಿಶೇಷ ಕಲ್ಲಾಡಿ ವಿಠಲ ಶೆಟ್ಟರ ಜೀವನ ಗಾಥಾ 'ಯಕ್ಷವಿಜಯ ವಿಠಲ' ಕೃತಿಯ ಸಂಪಾದಕರು. ಕುಬಣೂರು ಶ್ರೀಧರ ರಾಯರು ಸಾತ್ವಿಕ ಹಾಗೂ ಅತಿರೇಕಗಳಿಲ್ಲದ ಭಾಗವತ.

No comments:

Post a Comment