Friday, July 28, 2017

ಇಪ್ಪತ್ತೈದು ದಿವಸವೂ.. ನೂರನಲವತ್ತೇಳು ಪುಟವೂ..

ಪ್ರಜಾವಾಣಿ ಅಂಕಣ-ದಧಿಗಿಣತೋ/16-12-2016

                   ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯ ಥಳಕಿನ ಎಳೆ - 'ಶೇಣಿ ದರ್ಶನ'. ಪುತ್ತೂರಿನ ಕರ್ನಾಟಕ ಸಂಘವು (2000) ಮುದ್ರಿಸಿತ್ತು. ವರುಷದೊಳಗೆ ಪ್ರತಿಗಳು ಖಾಲಿ. ಸಂಘದ ಅಧ್ಯಕ್ಷ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರು ಖುಷ್. ಪುಸ್ತಕವನ್ನು ಕೊಂಡು ಓದಿದವರಲ್ಲಿ ಕಲಾವಿದರ ಸಂಖ್ಯೆ ಸಣ್ಣದಲ್ಲ. ಹಿಮ್ಮಾಹಿತಿ ನೀಡಿ ಮೆಚ್ಚುಗೆ ಸೂಚಿಸಿದವರು ಅಧಿಕ. ಜತೆಗೆ ಈ ಮಾತುಗಳು ಶೇಣಿಯವರದ್ದೇ ಎನ್ನಲು ಏನು ಪುರಾವೆ. ಎಂದು ಕುಟುಕಿದವರೂ ಇದ್ದಾರೆನ್ನಿ. ಇಂತಹ ಮಹನೀಯರ ಅರ್ಥಗಾರಿಕೆಯಲ್ಲಿ ಶೇಣಿಯವರ ಪ್ರತಿಪಾದಿಸುತ್ತಿದ್ದ ಬಹಳಷ್ಟು ವಿಚಾರಗಳು ಹಾದುಹೋಗುವುದನ್ನು ಗಮನಿಸಿದ್ದೇನೆ.
                  ಈಶ್ವರ ಭಟ್ಟರು 'ಶೇಣಿಯವರ ಚಿಂತನೆಗಳನ್ನು ಸಂಗ್ರಹಿಸಿ. ಪ್ರಕಟಿಸೋಣ' ಎಂಬ ಆಶಯ ಮುಂದಿಟ್ಟರು. ಕರ್ನಾಾಟಕ ಸಂಘವು ಪುಸ್ತಕವನ್ನು ಪ್ರಕಟಿಸುತ್ತದೆ ಎನ್ನುವ ಹೆಮ್ಮೆ ಒಂದೆಡೆ, ಸುಮಾರು ನೂರು ಪುಟಕ್ಕಾಗುವಷ್ಟು ಬರೆಹಗಳನ್ನು ಸಂಗ್ರಹಿಸುವುದಾದರೂ ಹೇಗೆ? ಎನ್ನುವ ಆತಂಕ ಮತ್ತೊಂದೆಡೆ.  ಯೋಚನೆಯಲ್ಲೇ ತಿಂಗಳುಗಳು ದಾಟಿದುವು. 'ಶುರು ಮಾಡಿದ್ರಾ, ಬೇಗ ಮಾಡಿ ಕೊಡಿ' ಭಟ್ಟರ ನೆನಪು.
               ಒಂದು ಮುಂಜಾನೆ ಕಾಸರಗೋಡಿನ 'ದಾಸ ನಿವಾಸ'ಕ್ಕೆ ಭೇಟಿ. ಉಪಾಹಾರ, ಮಾತಿನ ಆತಿಥ್ಯ. ಹಿಂದಿನ ರಾತ್ರಿಯ ಕೂಟದ 'ಜರಾಸಂಧ'ನ ಯಶದ ಗುಂಗಿನಲ್ಲಿದ್ದರು. ತಾನು ನಿರ್ವಹಿಸಿದ ಪಾತ್ರದ ನಡೆ, ಇದಿರು ಅರ್ಥಧಾರಿಯ ಸ್ಪಂದನಗಳ ವಿವರಗಳನ್ನು ಹೇಳುತ್ತಿದ್ದಂತೆ ಅಡುಗೆ ಮನೆಯಿಂದ ಬಟ್ಟಲು ಸದ್ದು ಮಾಡಿತು. ಭೋಜನದ ಬಳಿಕವೂ ಜರಾಸಂಧ ಪ್ರತ್ಯಕ್ಷ! ಆ ಪಾತ್ರವನ್ನು ಕಡೆದ ಬಗೆ, ಯಾವುದೆಲ್ಲಾ ಹೊಳಹುಗಳನ್ನು ಪಾತ್ರದಲ್ಲಿ ತರಬಹುದೆನ್ನುವ ಯೋಚನೆಗೆ ದಿಗಿಲಾದೆ.
             ಹೊತ್ತು ಇಳಿಯುತ್ತಾ ಬರುತ್ತಿದ್ದಂತೆ ಸಹಜವಾಗಿ ಗಡಿಯಾರದತ್ತ ನಾಲ್ಕಾರು ಬಾರಿ ದೃಷ್ಟಿ ಹೋಯಿತು. ತಕ್ಷಣ ಜಾಗೃತರಾದರು. 'ಹೋ.. ಹೊತ್ತು ಹೋದುದೇ ಗೊತ್ತಾಗಲಿಲ್ಲ... ಸರಿ, ಏನು ವಿಶೇಷ? ಎಂದರು. ಬೋಳಂತಕೋಡಿಯವರ ರಾಯಸವನ್ನು ಒಪ್ಪಿಸಿದೆ. ಹೌದಲ್ಲಾ... ಮಾಡೋಣ. ಈಶ್ವರಣ್ಣ ಹೇಳಿದರೆ ಹಿಂದೆ ಹಾಕುವಂತಿಲ್ಲ, ಎಂದು ಮುಂದಿನ ಭೇಟಿಯ ದಿನವನ್ನೂ ನಿಶ್ಚಯ ಮಾಡಿಬಿಟ್ಟರು.
              ಟೇಪ್ರೆಕಾರ್ಡರ್ನೊಂದಿಗೆ ಬೀಗುತ್ತಾ ಬೇಗನೆ 'ದಾಸನಿವಾಸ' ತಲುಪಿದೆ. ಬೆಳಗ್ಗಿನ ಉಪಾಹಾರವನ್ನು ಮುಗಿಸಿ, ಆಗಷ್ಟೇ ದಿನಪತ್ರಿಕೆಯ ಓದೂ ಕೊನೆಯ ಗೆರೆಯಲ್ಲಿತ್ತು. ಇಂದು ಜೀವನ ಧರ್ಮ ಎನ್ನುವ ವಿಚಾರದಲ್ಲಿ ಮಾತನಾಡ್ತೇನೆ, ಎಂದರು. ಟೇಪ್ ರೆಕಾರ್ಡರ್ ಅಲರ್ಟ್  ಮಾಡಿ ಕುಳಿತು ಇನ್ನೇನು  ಬಟನ್ ಒತ್ತಬೇಕಷ್ಟೇ... ಒಂದಿಬ್ಬರು ಅತಿಥಿಗಳು ಮಾತನಾಡಿಸಲು ಬಂದರು.
             ಬಂದವರಲ್ಲಿ ನನ್ನ ಪರಿಚಯ, ಉದ್ದೇಶವನ್ನೆಲ್ಲಾ ತಿಳಿಸಿದ ಶೇಣಿಯವರು 'ನಾವಿಂದು ಜೀವನ ಧರ್ಮ ಎನ್ನುವ ವಿಷಯವನ್ನು ಆಯ್ಕೆಮಾಡಿಕೊಂಡಿದ್ದೇವೆ' ಎನ್ನುತ್ತಾ ಅವರಲ್ಲಿ ತಾನು ಮಾತನಾಡಲಿರುವ ವಿಷಯದ ಸಾರವನ್ನೆಲ್ಲಾ ಹೇಳುವಾಗ ಮಧ್ಯಾಹ್ನ ತಿರುಗುತ್ತಿತ್ತು. ಬಂದವರಿಗೂ ತಾವು ಬಂದ ವಿಷಯ ಮರೆತುಹೋಗುವಂತಹ ವಿಚಾರಗಳು! ಸ್ನಾನ, ಭೋಜನ, ವಿಶ್ರಾಂತಿಯ ಬಳಿಕ 'ನನಗಾಗಿ' ಮಾತು ಆರಂಭವಾಯಿತು. ಸುಮಾರು ಎರಡು ಗಂಟೆಯಷ್ಟು ಜೀವನ ಧರ್ಮದ ವ್ಯಾಖ್ಯಾನ. ಬೆಳಿಗ್ಗೆ ಅತಿಥಿಗಳು ಬಂದಿದ್ರಲ್ಲಾ... ಅವರ ಮುಂದೆ ಹೇಳಿದ ಜೀವನಧರ್ಮಕ್ಕೂ, ಟೇಪ್ರೆಕಾಡರ್ಿಗೆ ಉಣಿಸಿದ ಜೀವನಧರ್ಮಕ್ಕೂ ರಾತ್ರಿಹಗಲಿನ ವ್ಯತ್ಯಾಸ. ಬೆಳಿಗ್ಗೆ ಗಟ್ಟಿ ಕಾಳುಗಳು. ಸಂಜೆಯಾಗುವಾಗ ಮೆತ್ತಗಾದ ಅನುಭವ. ಮೆತ್ತಗಿನದರಲ್ಲೂ ರಸ-ಸ್ವಾದ.
             ಸುಮಾರು ಇಪ್ಪತ್ತೈದು ವಾರ ನಿರಂತರವಾಗಿ ಭೇಟಿ ನೀಡಿದ್ದೆ. ಪ್ರತೀ ಸಲವೂ ಅತಿಥಿಗಳು ಖಾಯಂ. ಗಟ್ಟಿಕಾಳುಗಳನ್ನು ಹೆಕ್ಕಲು ಅಸಮರ್ಥನಾಗಿದ್ದೆ. ನನಗೆ ಹೇಳಬೇಕಾದ ವಿಷಯಗಳನ್ನೆಲ್ಲಾ ಅತಿಥಿಗಳ ಕಿವಿಗೆ ಸುರಿದ ಬಳಿಕವೇ ರೆಕಾರ್ಡಿಂಗ್.  ಕೆಲವೊಮ್ಮೆ ಅತಿಥಿಗಳು ಸಂಜೆಯವರೆಗೂ ಶೇಣಿಯವರ ಮಾತಿಗೆ ಕಿವಿಯಾಗುತ್ತಿದ್ದರು. ನನ್ನ ದಾಖಲಾತಿ ಕೆಲಸ ಮುಂದೂಡಲ್ಪಡುತ್ತಿತ್ತು. ಹೀಗೆ ಮುಂದೂಡಲ್ಪಟ್ಟ ದಿವಸಗಳೇ ಅಧಿಕ! ಈಗ ಅನ್ನಿಸುವುದುಂಟು. ಅತಿಥಿಗಳಲ್ಲಿ ಮಾತನಾಡುತ್ತಿದ್ದಾಗಲೇ ರೆಕಾರ್ಡ್ ಮಾಡಬೇಕಿತ್ತು. ಈಗಿನಂತೆ ಹೇಳುವಂತಹ ತಾಂತ್ರಿಕತೆಯಿರಲಿಲ್ಲ. ಟೇಪ್ರೆಕಾರ್ಡರ್ ಒಂದನ್ನೇ ನಂಬಬೇಕಿತ್ತು. ಅದೂ ಕೆಲವೊಮ್ಮೆ ಮುಷ್ಕರ ಹೂಡುತ್ತಲಿತ್ತು.
              ಅವರ ಮಾತುಗಳನ್ನು ದಾಖಲಿಸಿದ ರಾತ್ರಿ ದೂರವಾಣಿ ಕರೆ ಮಾಮೂಲಿ. ಕೆಲವೊಂದು ಸಾಲುಗಳನ್ನು ಕತ್ತರಿಸುವಂತೆ ಸೂಚನೆ. ವಿಷಯದ ಪ್ರಸ್ತುತತೆಯ ಕುರಿತು ಹಿಮ್ಮಾಹಿತಿ. ಧ್ವನಿಮುದ್ರಿಸಿದ ವಿಚಾರಗಳನ್ನೆಲ್ಲಾ ಯಥಾವತ್ ಕಾಗದಕ್ಕಿಳಿಸಿ, ಟೈಪ್ ಮಾಡಿ ನೀಡುತ್ತಿದ್ದೆ. ತಪ್ಪು-ಒಪ್ಪು, ಪರಿಷ್ಕಾರಗಳನ್ನು  ಶೇಣಿಯವರೇ ಸ್ವತಃ ಮಾಡಿದ್ದರು. ಹೀಗೆ ಸುಮಾರು ನೂರ ನಲವತ್ತೇಳು ಪುಟಗಳಲ್ಲಿ 'ಶೇಣಿ ಚಿಂತನ' ಸಿದ್ಧವಾಯಿತು. ಇದರಲ್ಲಿ ಕಾರ್ಕಳದಲ್ಲಿ ಮಾಡಿದ ಭಾಷಣವೊಂದನ್ನು ಸೇರಿಸಿಕೊಳ್ಳಲಾಗಿದೆ. ಇವಲ್ಲದೆ ಐದಾರು ಚಿಂತನೆಗಳನ್ನು 'ವಿವಾದವಾಗಬಾರದು' ಎನ್ನುವ ಕಾರಣದಿಂದ ಬದಿಗಿಟ್ಟಿದ್ದರು.
              ಪುಸ್ತಕದ ಹೂರಣ ಕೊನೆಯ ಘಟ್ಟ ತಲಪುತ್ತಿದ್ದಂತೆ ಬೋಳಂತಕೋಡಿಯವರು ಪುಸ್ತಕ ಬಿಡುಗಡೆಯ ದಿನಾಂಕದ ಹೊಂದಾಣಿಕೆಯಲ್ಲಿದ್ದರು. ಕರಡು ಪ್ರತಿಯನ್ನು ಮುದ್ರಣಕ್ಕಾಗಿ ರಾಜೇಶ್ ಪವರ್ ಪ್ರೆಸ್ಸಿಗೆ ನೀಡಿದ್ದರು. ಅಕ್ಷರಜೋಡಣೆಯ ಕೆಲಸವೂ ಶುರುವಾಗಿತ್ತು. ಮತ್ತೊಂದೆಡೆ ಭಟ್ಟರ ಆರೋಗ್ಯ ಕೈಕೊಡುತ್ತಲಿತ್ತು.  3 ಅಕ್ಟೋಬರ್ 2003ರಂದು ಬೋಳಂತಕೋಡಿಯವರು ವಿಧಿವಶರಾದರು. ಒಂದೆರಡು ತಿಂಗಳ ಬಳಿಕ ಪುಸ್ತಕವನ್ನು ಮುದ್ರಿಸುವಂತೆ ಸಂಘದ ವರಿಷ್ಠರಲ್ಲಿ ವಿನಂತಿಸಿದರೂ ಜಾಣ ಪ್ರತಿಕ್ರಿಯೆ. ಆಂತರಿಕವಾಗಿ ರೇಗಿದ್ದೆ! ಹುಚ್ಚು ಧೈರ್ಯದಿಂದ ನಾಲ್ಕು ತಿಂಗಳಲ್ಲಿ ಮುದ್ರಣ ವೆಚ್ಚವನ್ನು ಭರಿಸುತ್ತೇನೆ, ಪುಸ್ತಕ ಮುದ್ರಣ ಮಾಡಿ ಕೊಡ್ತೀರಾ, ಪ್ರೆಸ್ಸಿನ ರಘುನಾಥ ರಾವ್ ಅವರಲ್ಲಿ ಬಿನ್ನವಿಸಿದೆ.  ಪುಸ್ತಕ ಪ್ರಕಟವಾಯಿತು. ಮಿತ್ರ ವಾಸುದೇವ ರಂಗಾಭಟ್ಟರ ಸಹಕಾರದಿಂದ ಉಡುಪಿಯಲ್ಲಿ ಬಿಡುಗಡೆಯೂ ಆಯಿತು. ಶೇಣಿ, ಸಾಮಗರು ವೇದಿಕೆಯಲ್ಲಿದ್ದರು. ಅದೇ ಹೊತ್ತಿಗೆ ನನ್ನ ಕೃಷಿ ಲೇಖನವೊಂದಕ್ಕೆ ಸಂದ ಪ್ರಶಸ್ತಿಯ ಜತೆ ಸಿಕ್ಕ ಮೊತ್ತವು ಆರ್ಥಿಕ ಭಾರವನ್ನು ಹಗುರ ಮಾಡಿತು. ಪ್ರೆಸ್ಸಿನ ಬಿಲ್ ಚುಕ್ತಾ ಆಯಿತು.
                ವಾರದ ಬಳಿಕ ಪುಸ್ತಕದ ಪ್ಯಾಕೆಟ್ಟಿನೊಂದಿಗೆ ದಾಸ ನಿವಾಸಕ್ಕೆ ಹೋದೆ. ಪುಸ್ತಕವನ್ನು ಸಮರ್ಪಿಸಿದೆ. ಅಂದಿನ ಶೇಣಿಯವರ ಖುಷಿಯ ಪ್ರಸನ್ನತೆ ಇದೆಯಲ್ಲ, ಅದನ್ನು ಮೆಲುಕು ಹಾಕಿದಷ್ಟೂ ಪುಳಕಗೊಳ್ಳುತ್ತೇನೆ. ಸಂಜೆ ಹೊರಡುವ ಹೊತ್ತು. 'ಈಗ ಬಂದೆ, ಸ್ವಲ್ಪ ಕುಳ್ಳಿರಿ' ಎಂದು ಜಗಲಿಗೆ ತಾಗಿಕೊಂಡಿದ್ದ ಕೋಣೆಯತ್ತ ನಡೆದರು. ಏನನ್ನೋ ಹುಡುಕುತ್ತಿದ್ದ ಸದ್ದು ಕೇಳುತ್ತಿತ್ತು. ಹತ್ತು ನಿಮಿಷದ ಬಳಿಕ ಮರಳಿದ ಶೇಣಿಯವರ ಮುಖದಲ್ಲಿ ಪ್ರಸನ್ನತೆ ಮಾಯವಾಗಿತ್ತು!
'ಸಾಮಗರದ್ದೂ ಒಂದು ದಾಖಲಾತಿ ಮಾಡಿಬಿಡಿ,' ಎನ್ನುತ್ತಾ ಶೇಣಿಯವರು ಬೀಳ್ಕೊಟ್ಟರು. ಶೇಣಿಯವರ ಆಶಯವು 'ಸಾಮಗ ಪಡಿದನಿ' ಕೃತಿಗೆ ಶ್ರೀಕಾರ ಬರೆಯಿತು.


No comments:

Post a Comment