Monday, July 31, 2017

ಪೆರುವಡಿ ಸಹೋದರರ ಮೂಲ್ಕಿ ಮೇಳದ ಯಶೋಯಾನ

ಪ್ರಜಾವಾಣಿಯ 'ದಧಿಗಿಣತೋ' ಅಂಕಣ  /  10-2-2017

                "ನನ್ನ ಯಜಮಾನರು ಮೂಲ್ಕಿ ಮೇಳ ಮಾಡಿದ್ದರಿಂದಾಗಿ ನಾಲ್ಕು ಜನರಿಗೆ ಪರಿಚಯವಾದರು. ಮೈದುನ ನಾರಾಯಣ ಭಟ್ಟರಿಗೆ ಮೇಳದ ಉಸ್ತುವಾರಿಕೆ. ಇವರಿಗ ಕೃಷ್ಣ ಭಟ್ಟರಿಗೆ ಕ್ಯಾಂಪ್ ಬುಕ್ ಮಾಡುವ ಕೆಲಸ. ಮೇಳದ ಯಜಮಾನರೆಂಬ ನೆಲೆಯಲ್ಲಿ ಸಮಾಜದಲ್ಲಿ ಗೌರವದ ಸ್ಥಾನಮಾನವಿತ್ತು. ಅಣ್ಣ-ತಮ್ಮ ಇಬ್ಬರೂ ಮೇಳ ನಡೆಸಿ ಅದರಿಂದ ಮನೆಗೆ ಒಂದು ಪೈಸೆ ತಂದಿರಲಾರರು," ಕೀರ್ತಿಶೇಷ ಪೆರುವಡಿ ಕೃಷ್ಣ ಭಟ್ಟರ ಪತ್ನಿ ಶಂಕರಿ ಅಮ್ಮ, ಒಂದು ಕಾಲಘಟ್ಟದ ಮೇಳದ ಬದುಕನ್ನು ಜ್ಞಾಪಿಸಿಕೊಂಡರು. ಇವರ ಮಗಳು ಗೌರಿ. ತನ್ನ ಅಮ್ಮನಿಗೆ ಸಾಥ್ ಆಗಿ, ಯಕ್ಷಗಾನ ಭಾಗವತಿಕೆ, ಕಲಾವಿದರ ಒಡನಾಟದಲ್ಲೇ ನಾವು ಬಾಲ್ಯವನ್ನು ಕಳೆದೆವು, ಎಂದರು.
                ಪೆರುವಡಿ ಕೃಷ್ಣ ಭಟ್, ಪೆರುವಡಿ ನಾರಾಯಣ ಭಟ್, ಪೆರುವಡಿ ಈಶ್ವರ ಭಟ್ - ಮೂವರು ಸಹೋದರರು. ಪದ್ಯಾಣ ಮೂಲ. ಪುತ್ತೂರಿನ ತೆಂಕಿಲ-ನೂಜಿಯಲ್ಲಿ ಬದುಕು. ನಾರಾಯಣ ಭಟ್ಟರು ಹಾಸ್ಯಗಾರರಾಗಿ ಯಕ್ಷಗಾನದ ಹಾಸ್ಯಕ್ಕೆ ಮಾನ ತಂದವರು. ಇವರ ಅಜ್ಜ ಪೆರುವಡಿ ಸುಬ್ರಾಯ ಭಟ್ಟರು 'ಮೂಲ್ಕಿ ಶ್ರೀ ವೆಂಕಟ್ರಮಣ ಸ್ವಾಮಿ ಯಕ್ಷಗಾನ ಕಲಾ ಮಂಡಳಿ' ಆರಂಭಿಸಿದ ಸಾಹಸಿ. ಸುಮಾರು 1955-60ರ ಆಜೂಬಾಜು. ಒಂದು ವರುಷ ತಿರುಗಾಟ ಪೂರೈಸಿದ ಮೇಳ ನಿಲುಗಡೆಯ ಹಂತಕ್ಕೆ ಬಂದಾಗ ಪೆರುವಡಿ ಸಹೋದರರು ಹೆಗಲು ಕೊಟ್ಟರು. ಮೇಳದ ಹೊರಗಡೆಯ ಜವಾಬ್ದಾರಿ ಕೃಷ್ಣ ಭಟ್ಟರಿಗೆ, ಒಳಗಿನ ವ್ಯವಹಾರದ ಹೋಣೆ ನಾರಾಯಣ ಭಟ್ಟರಿಗೆ ಮತ್ತು ಈಶ್ವರ ಭಟ್ಟರಿಗೆ ಮನೆವಾರ್ತೆ. 
               ಈಶ್ವರಪ್ಪಯ್ಯ ಭಾಗವತರು, ಪೆರುವಡಿ ರತ್ನಾಕರ ಭಟ್, ದಿವಾಣ ಭೀಮ ಭಟ್ಟರಂತಹ ಉದ್ಧಾಮರ ಹಿಮ್ಮೇಳ. ಉರ್ವ ಅಂಬು, ಅಪ್ಪಯ್ಯ ಮಣಿಯಾಣಿ, ಉದ್ಯಾವರ ಬಸವ, ರಾಮಕೃಷ್ಣ ಕಮ್ತಿ, ಮಾಧವ ಶೆಟ್ಟಿ... ಹೀಗೆ ಕಲಾವಿದರ ದಂಡು. ಪಾಪ ಭಟ್ರ್ ಬತ್ತೇರ್ ಮಾರಾಯ, ಆಟ ಕೊರ್ಕೊ’  (ಭಟ್ರು ಬಂದ್ರು ಮಾರಾಯ, ಆಟ ಕೊಡುವಾ) ಎಂದು ವೀಳ್ಯ ನೀಡಿದ ಆಢ್ಯರ ನೆನಪು ನಾರಾಯಣ ಭಟ್ಟರಿಗಿದೆ. ಮೊದಲ ತಿರುಗಾಟದಲ್ಲೇ ಮುನ್ನೂರು ರೂಪಾಯಿ ನೀಡಿ ಎತ್ತು ಸಹಿತ ಗಾಡಿಯನ್ನು ಸಾಗಾಟಕ್ಕೆ ಖರೀದಿ.
              ಮೂರನೇ ವರುಷದಿಂದ ಟೆಂಟ್ ಮೇಳವಾಗಿ ಬದಲಾಯಿತು. ಆಗ ಕುಂಡಾವು ಮತ್ತು ಕೂಡ್ಲು ಮೇಳಗಳು ಮಾತ್ರ ತೆಂಕಿನಲ್ಲಿ ಟೆಂಟ್ ಹೊಂದಿದ್ದುವು. ಒಂದೇ ಕಡೆ ಮೂರ್ನಾಲ್ಕು ದಿವಸ ನಿರಂತರ ಆಟ. ಎಲ್ಲಾ ಕಡೆ ಕೃಷ್ಣ ಲೀಲೆ, ಸುದರ್ಶನೋಪಾಖ್ಯಾನ, ಶ್ರೀ ದೇವಿ ಮಹಾತ್ಮೆ' ಪ್ರಸಂಗಗಳು. ಮೊದಲೆರಡು ಪ್ರಸಂಗಗಳಲ್ಲಿ ನಷ್ಟ ಬಂದರೂ ದೇವಿ ಮಹಾತ್ಮೆ ಪ್ರದರ್ಶನವು ನಷ್ಟವನ್ನು ತುಂಬಿ ಕೊಡುತ್ತಿತ್ತು ಎನ್ನುತ್ತಾರೆ. ಮೇಳ ವಿಜೃಂಭಿಸಿತು.
              ಕಡತೋಕ ಮಂಜುನಾಥ ಭಾಗವತರು ತೆಂಕಿನ ಮೇಳದಲ್ಲಿ ಭಾಗವತರಾದ ಘಟನೆಯನ್ನು ಹಾಸ್ಯಗಾರರೇ ಹೇಳಬೇಕು - ಮೂಲ್ಕಿ ಮೇಳವು ಉತ್ತರ ಕನ್ನಡದಲ್ಲಿ ತಿರುಗಾಟ ಮಾಡುತ್ತಿತ್ತು. ಆಗ ಕಡತೋಕ ಮಂಜುನಾಥ ಭಾಗವತರು ಮೂರೂರು ದೇವರು ಹೆಗಡೆ ಮೇಳದಲ್ಲಿದ್ದರು. ಯಾವುದೋ ಮನಸ್ತಾಪದಿಂದ ಮನೆಗೆ ಬಂದಿದ್ದರು. ಹೊನ್ನಾವರದ ಹಳದಿಪುರದಲ್ಲಿ ನಮ್ಮ ಆಟವಿತ್ತು. ತಲೆಂಗಳ ಶಂಭಟ್ಟರು ಮೇಳದ ಮುಖ್ಯ ಭಾಗವತರು. ಕಡತೋಕರು ಆಟ ನೋಡಲು ಆಗಮಿಸಿದ್ದರು. ನನ್ನ ಒತ್ತಾಯಕ್ಕೆ ಅರ್ಧ ಗಂಟೆ ಪದ್ಯ ಹೇಳಿದರು. ಅನಂತರ ಆಗಾಗ್ಗೆ ಬರುತ್ತಿದ್ದರು. ಕೊನೆಗೆ ವರ್ಷಪೂರ್ತಿ ತಿರುಗಾಟ ಮಾಡಿದರು. ಮೇಳದ ಖಾಯಂ ಭಾಗವತರಾದರು.
               'ಸತ್ಯಹರಿಶ್ಚಂದ್ರ, ನಳ ದಮಯಂತಿ, ಬ್ರಹ್ಮಕಪಾಲ' ಪ್ರಸಂಗಗಳ ಪ್ರದರ್ಶನಗಳು ಖ್ಯಾತಿ ಪಡೆದುವು. ಕೀರ್ತಿಶೇಷ ಮಲ್ಪೆ ರಾಮದಾಸ ಸಾಮಗರ 'ನಳ, ಹರಿಶ್ಚಂದ್ರ, ಈಶ್ವರ'ನ ಪಾತ್ರಗಳು. ಒಂದು ತಿರುಗಾಟದ ನಂತರ ರಾಮದಾಸ ಸಾಮಗರು 'ಕುಂಡಾವು ಮೇಳ' ಸೇರಿದರು. ಮುಂದಿನ ಎರಡು ತಿರುಗಾಟಗಳಲ್ಲಿ ಮಲ್ಪೆ ಶಂಕರನಾರಾಯಣ ಸಾಮಗರು ನಮ್ಮೊಂದಿಗಿದ್ದರು. ಮೇಳದ ಬವಣೆಯನ್ನು ಹಾಸ್ಯಗಾರರು ಹೇಳುತ್ತಾರೆ, ಮೇಳದೊಳಗೆ ಕಲಾವಿದರ ಗುಂಪುಗಾರಿಕೆ, ಮೇಳದ ಜವಾಬ್ದಾರಿ, ಪಾತ್ರ ಹಂಚುವಿಕೆಯಲ್ಲಿ ಕಲಾವಿದರ ಅಸಹನೆಗಳಿಂದ ಮಾನಸಿಕವಾಗಿ ನೊಂದಿದ್ದೆ. ಹಲವು ಸಮಸ್ಯೆಗಳನ್ನು ತಲೆಯಲ್ಲಿಟ್ಟುಕೊಂಡು ರಾತ್ರಿಯಿಡೀ ವೇಷವನ್ನೂ ಮಾಡಬೇಕು. ಜಲಂಧರ ಕಾಳಗದಂತಹ ಪ್ರಸಂಗ ಬಂದರೆ ಹದಿನಾರು ವೇಷಗಳನ್ನು ನಾನೊಬ್ಬನೇ ಮಾಡಬೇಕು. ಭದ್ರಾಯು ಚರಿತ್ರೆ, ಜಲಂಧರ ಕಾಳಗ, ವಜ್ರಬಾಹು ಕಾಳಗ, ವಿದ್ಯುನ್ಮತಿ ಕಲ್ಯಾಣ, ಕುಮಾರ ವಿಜಯ ಪ್ರಸಂಗಗಳು ಮೂಲ್ಕಿ ಮೇಳದಲ್ಲಿ ಜಯಭೇರಿ. 'ಪಾಪಣ್ಣ ವಿಜಯ' ಪ್ರಸಂಗವೂ ಮನೆಮಾತಾಯಿತು.
                ವರುಷದಿಂದ ವರುಷಕ್ಕೆ ಮೂಲ್ಕಿ ಮೇಳವು ಉಳಿದ ಮೇಳಗಳಿಗೆ ಸರಿಸಮವಾಗುವಂತೆ ಪ್ರದರ್ಶನ ನೀಡುತ್ತಿತ್ತು. ಅನುಭವಿ ಕಲಾವಿದರನ್ನೊಳಗೊಂಡ ಹಿಮ್ಮೇಳ, ಮುಮ್ಮೇಳ. ಅದ್ದೂರಿ ಜೋಡಾಟಗಳು. ಕೂಡ್ಲು-ಮೂಲ್ಕಿ-ಧರ್ಮಸ್ಥಳ ಮೇಳಗಳೊಳಗೆ ನಡೆದ ಮೂರು ದಿವಸಗಳ ಜೋಡಾಟವನ್ನು ಹಿರಿಯರು ಈಗಲೂ ಜ್ಞಾಪಿಸುತ್ತಾರೆ. 'ಅತಿಕಾಯ-ಇಂದ್ರಜಿತು-ಮೈರಾವಣ, ಕುರುಕ್ಷೇತ್ರ, ಶ್ರೀ ದೇವಿ ಮಹಾತ್ಮೆ' ಪ್ರಸಂಗಗಳು ಪ್ರದರ್ಶಿತವಾಗಿದ್ದುವು. ವಿಟ್ಲದಲ್ಲೊಮ್ಮೆ ಕಟೀಲು ಮತ್ತು ಮೂಲ್ಕಿ ಮೇಳಗಳೊಳಗೆ ಜೋಡಾಟ, ಮೂಲ್ಕಿ-ಧರ್ಮಸ್ಥಳ ಮೇಳಗಳೊಳಗೆ ನಡೆದಿತ್ತು. ಇಷ್ಟು ವೈಭವದಿಂದ ತಿರುಗಾಟ ಮಾಡಿದ ಮೂಲ್ಕಿ ಮೇಳದ ಯಶಕ್ಕೆ ಇಳಿಲೆಕ್ಕ ಆರಂಭವಾದ ಘಟನೆಯನ್ನು ಪೆರುವಡಿ ನಾರಾಯಣ ಭಟ್ಟರು ವಿಷಾದದಿಂದಲೇ ಹೇಳುತ್ತಾರೆ -
              1964ನೇ ಇಸವಿ. ಮುಂಬಯಿಯಲ್ಲಿ ಅವಕಾಶವಿದೆ ಎಂದು ಮೇಳವನ್ನು ಮುಂಬಯಿಗೆ ಒಯ್ದೆವು. ಕೆಲವು ಆಟಗಳು ನಿಶ್ಚಿತವಾದುವು. ಭರ್ಜರಿ ನಾಲ್ಕೈದು ದಿವಸ ಆಟವಾಗಿತ್ತಷ್ಟೇ. ಆಗ ಜವಾಹರಲಾಲ್ ನೆಹರೂ ನಿಧನರಾದ ಸುದ್ದಿ ಮುಂಬಯಿಯನ್ನು ತಲ್ಲಣಗೊಳಿಸಿತು. ಹನ್ನೆರಡು ದಿವಸ ಮುಂಬಯಿ ಬಂದ್. ಊಟಕ್ಕೂ ಗತಿಯಿಲ್ಲದಂತಾಯಿತು. ಕಾಡಿ ಬೇಡಿ ಕಲಾವಿದರ ಲೆಕ್ಕ ಚುಕ್ತಾ ಮಾಡಿದೆವು. ಊರಿಗೆ ಬಂದೆವು. ಮುಂದೆ ನಾಲ್ಕು ವರುಷ ಮೇಳವು ಏದುಸಿರು ಬಿಡುತ್ತಾ ತಿರುಗಾಟ ಮಾಡಿತು. ಕಷ್ಟ-ನಷ್ಟಗಳು ಬಾಧಿಸಿದುವು. ದಿನೇ ದಿನೇ ಸೋಲು. ಕೆಲವು ಕಲಾವಿದರು ಮೇಳ ಬಿಟ್ಟರು.
            ಕುಂದಾಪುರದ ಸನಿಹದ ಒಂದು ಆಟದಲ್ಲಿ ಮೇಳದ 'ಅನ್ನದ ಚೆರಿಗೆ' ಕಳವಾಯಿತು. ಜತೆಗೆ 'ಮೇಳ ಕಂಗಾಲು' ಎನ್ನುವ ಪ್ರಚಾರ. ಆ ಸಮಯಕ್ಕೆ ಅಮ್ಮ ಹಾಸಿಗೆ ಹಿಡಿದಿದ್ದರು. ಅವರ ಶುಶ್ರೂಷೆಗೆ ಅಣ್ಣ ಮನೆಯಲ್ಲಿರುವುದು ಅನಿವಾರ್ಯವಾಯಿತು. ನನಗೆ ಮೇಳ ನಡೆಸುವುದು ತ್ರಾಸವಾಯಿತು. ನಿಲ್ಲಿಸುವ ನಿಧರ್ಾರಕ್ಕೆ ಬಂದೆವು. ಮೇಳದ ಎಲ್ಲಾ ಪರಿಕರಗಳನ್ನು ಮೂಲ್ಕಿ ಒಳಲಂಕೆ ಶ್ರೀ ವೆಂಕಟ್ರಮಣ ದೇವಸ್ಥಾಕ್ಕೆ ಒಪ್ಪಿಸಿ ಮೇಳಕ್ಕೆ ವಿದಾಯ ಹೇಳಿದೆವು. 'ಕಲಾವಿದನಾಗಿದ್ದು ಮೇಳದ ಯಜಮಾನನಾಗಕೂಡದು' ಎನ್ನುವ ಪಾಠವನ್ನು ಮೇಳದ ತಿರುಗಾಟ ಕಲಿಸಿತು.
              ಪೆರುವಡಿ ಕುಟುಂಬದ ಮೇಳವೊಂದು ದಶಕಕ್ಕೂ ಮಿಕ್ಕಿ ತಿರುಗಾಟ ಮಾಡಿದ ಯಶೋಯಾನಕ್ಕೆ ಸಾಕ್ಷಿಯಾಗಿ ಕಲಾವಿದರು, ಕಲಾಭಿಮಾನಿಗಳು ಮಾತಿಗೆ ಸಿಗುತ್ತಾರೆ.

No comments:

Post a Comment