Friday, July 28, 2017

ಶಾಸ್ತ್ರೀಯ ಆಂತರ್ಯದ ಒಡಲೊಳಗಿನ ಮಾಣಿಕ್ಯ

ಪ್ರಜಾವಾಣಿ ಅಂಕಣ - ದಧಿಗಿಣತೋ/23-12-2016

                ಬೊಟ್ಟಿಕೆರೆ ಪುರುಷೋತ್ತಮ ಪೂಂಜ - ಯಕ್ಷಗಾನ ಭಾಗವತಿಕೆಯ ಐಕಾನ್. ವರ್ತಮಾನದ ರಂಗಾಬ್ಬರದ ಮಧ್ಯೆ ಸ್ಥಿರವಾಗಿ ನಿಂತ ಪೂಂಜರು ಯಾವ ಅಬ್ಬರಕ್ಕೂ ಅಲುಗಾಡಿದವರಲ್ಲ. ಇದು ಅವರು ಯಕ್ಷಗಾನ ರಂಗದಲ್ಲಿ ಊರಿದ ಗಟ್ಟಿ ಹೆಜ್ಜೆ. ಆ ಹೆಜ್ಜೆಯ ಗಟ್ಟಿತನದ ಹಿಂದೆ ಆಳ ಅಧ್ಯಯನ, ಅನುಭವ, ಇದಮಿತ್ಥಂ ಎನ್ನುವ ಬೌದ್ಧಿಕತೆಯಿದೆ. ಹಾಗಾಗಿ ಕೊಚ್ಚಿಹೋಗುವ ಬಿರುಗಾಳಿಯ ಮಧ್ಯೆ 'ತನಗೂ ಅದಕ್ಕೂ ಸಂಬಂಧವಿಲ್ಲ' ಎನ್ನುತ್ತಾ ಅಪ್ಪಟ ರಂಗಕರ್ಮಿಯಾಗಿ ಕಾಣಿಸುತ್ತಾರೆ. ನಿಜಾರ್ಥದ 'ಸಿದ್ಧಿ'ಯ ಆಳೆತ್ತರವನ್ನು ಪೂಂಜರಲ್ಲಿ ಕಾಣಬಹುದು.
                ಪೂಂಜರು ಮೂಲತಃ ವೇಷಧಾರಿ. ಹೊಸಹಿತ್ಲು ಮಹಾಲಿಂಗ ಭಟ್ಟರ ಶಿಷ್ಯ. ಬಳಿಕ ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಸಂಘದಲ್ಲಿ ಗುರು ಆನೆಗುಂಡಿ ಗಣಪತಿ ಭಟ್ಟರಲ್ಲಿ ಹಿಮ್ಮೇಳ ಪಾಠ, ಮಾರ್ಗದರ್ಶನ. ಹೆಜ್ಜೆಗಾರಿಕೆ, ವೇಷಗಾರಿಕೆ, ತಾಳಮದ್ದಳೆ... ಹೀಗೆ ಪರಿಣತಿ.  ಉಪ್ಪಳ ಭಗವತಿ ಮೇಳದಲ್ಲಿ ಚೊಚ್ಚಲ ತಿರುಗಾಟ. ಹವ್ಯಾಸಿ ರಂಗದಲ್ಲಿ ಪ್ರತಿಭಾವಂತ ಕಲಾವಿದರನ್ನು ರೂಪಿಸಿದ ಮೇಳವದು. ಒಂದು ಕಾಲಘಟ್ಟದಲ್ಲಿ ವೃತ್ತಿ ಮೇಳಗಳಿಗೆ ಸರಿಸಾಟಿಯಾಗಿ ಪೈಪೋಟಿ ಕೊಡಬಲ್ಲಷ್ಟು ಸಂಪನ್ಮೂಲಗಳು ಮೇಳದಲ್ಲಿದ್ದುವು. ಮೇಳವನ್ನು ಕೊನೆಗೆ ಮುನ್ನಡೆಸಿದವರು ಕುಂಬಳೆ ಶೇಷಪ್ಪ. ವರುಷವಿಡೀ ತಿರುಗಾಟದಲ್ಲಿದ್ದ ಮೇಳವು ಕಾಲದ ಸ್ಥಿತ್ಯಂತರಕ್ಕೆ ಒಳಗಾಗಿ ಕೊನೆಕೊನೆಗೆ ಹತ್ತೋ ಇಪ್ಪತ್ತೋ ಆಟಕ್ಕೆ ಸೀಮೀತವಾಗಿದ್ದುದು ಕಾಲದ ಪಲ್ಲಟ. ಮುಂಬಯಿಯ ಗೀತಾಂಬಿಕಾ ಮಂಡಳಿಯಲ್ಲಿ ಏಳು ವರುಷ ತಿರುಗಾಟ, ಪುತ್ತೂರು ಮೇಳದಲ್ಲಿ ಎರಡು ವರುಷ, ಕರ್ನಾಟಕದಲ್ಲಿ ಐದು ವರುಷದ ವ್ಯವಸಾಯ.
               ಶ್ರೀ ಕಟೀಲು ದಶಾವತಾರ ಮೇಳದಲ್ಲಿ ಕಳೆದ ಇಪ್ಪತ್ತೇಳು ವರುಷಗಳಿಂದ ಭಾಗವತರಾಗಿ ನಿಜ ಯಕ್ಷಾಸಕ್ತಿಯ ಅಭಿಮಾನಿಗಳನ್ನು ಪಡೆದ ಪೂಂಜರು ಯಾವುದೇ ಗಿಮಿಕ್ಗಳಿಗೆ ತನ್ನನ್ನು ಒಡ್ಡಿಸಿಕೊಂಡವರಲ್ಲ, ಅದನ್ನು ಅಂಟಿಸಿಕೊಂಡವರಲ್ಲ. ಪೌರಾಣಿಕ ಪ್ರಸಂಗವೊಂದರ ಪದ್ಯಗಳ ಸೊಬಗು ಮತ್ತು ಸೊಗಸು ಹೇಗಿರಬೇಕು ಎನ್ನುವುದಕ್ಕೆ ಪೂಂಜರ ಭಾಗವತಿಕೆ ಕನ್ನಡಿ. ಪದ್ಯಗಳಿಗೆ ಮೋಹಕತೆಯ ಸ್ಪರ್ಶವನ್ನು ಅಂಟಿಸಿದ ಭಾಗವತಿಕೆ. ಮೇಳದ ಗೌಜಿ ಗದ್ದಲದ ಅದ್ದೂರಿಯ ಮಧ್ಯೆ ದೇವಿ ಮಹಾತ್ಮೆಯ ಪದ್ಯಗಳನ್ನು ಮನಸಾ ಅನುಭವಿಸಿದ್ದೇನೆ. ಪದ್ಯಗಳಿಗೆ ಅಂಟಿಕೊಂಡರುವ ತಾಳ, ಲಯ ಏನೇ ಇರಲಿ ಪದ್ಯದಿಂದ ಪದ್ಯಕ್ಕೆ ಹೊಸ ಭಾವಗಳನ್ನು ಕಟ್ಟಿಕೊಡುವ ಸ್ವ-ಸಾಮಥ್ರ್ಯವನ್ನು ಕಂಡಿದ್ದೇನೆ.
              ಅವರ ಜತೆ ಆಗಾಗ್ಗೆ ಮದ್ದಳೆ ಸಾಥ್ ಆಗುತ್ತಿರುವ ಕೃಷ್ಣಪ್ರಕಾಶ್ ಉಳಿತ್ತಾಯರು ಹೇಳುತ್ತಾರೆ, ಫಕ್ಕನೆ ನೋಡುವಾಗ ಪೂಂಜರ ಗಾನವು ಸರಳವಾಗಿ ಕಂಡರೂ ಅದರ ಆಳ-ಎತ್ತರಗಳು ಅನುಪಮ. ಕಲಾಸೂಕ್ಷ್ಮ ಮನಸ್ಸಿನ ಪೂಂಜರಿಗೆ ಮದ್ದಳೆಯೋ ಚೆಂಡೆಯೋ ಸಾಥ್ ನೀಡುವುದು ಅತ್ಯಂತ ಸವಾಲು ಬೇಡುವ ಕೆಲಸ. ವಾದಕನು ಸಂಯಮಿಯಾಗಿ, ಮೃದುವಾದ ನುಡಿತಗಳಿಂದ ಅವರನ್ನು ಅನುಸರಿಸಬೇಕಾಗುತ್ತದೆ. ಯಕ್ಷಗಾನದಲ್ಲಿ ಬಳಕೆಯಾಗುವ ತಾಳಗಳ ಶಾಸ್ತ್ರೀಯ ಆಂತರ್ಯವನ್ನು ಸರಿಯಾಗಿ ಬಲ್ಲ ಪೂಂಜರು ರಂಗದಲ್ಲೂ ಗಾನ ಪ್ರಸ್ತುತಿಯಲ್ಲೂ ವಿಭಿನ್ನವಾಗಿ ಕಾಣುತ್ತಾರೆ.
              ಪ್ರಸಂಗಗಳು - ಪೌರಾಣಿಕ : ವಧು ವೈಶಾಲಿನಿ, ಉಭಯಕುಲ ಬಿಲ್ಲೋಜ, ನಳಿನಾಕ್ಷ ನಂದಿನಿ, ಮಾ ನಿಷಾದ, ಕ್ಷಾತ್ರಮೇಧ, ರಾಜಾ ದ್ರುಪದ, ಮಾತಂಗ ಕತ್ಯೆ, ಮನ್ಮಥೋಪಾಖ್ಯಾನ, ಪಾಂಚಜನ್ಯ, ಗಂಡುಗಲಿ ಘಟೋತ್ಕಚ, ಗಾಂಗೇಯ, ಕಾರ್ತಿಕೇಯ ಕಲ್ಯಾಣ, ಕಲಿ ಕೀಚಕ, ರುದ್ರಪಾದ, ಬೋಪ ದೇವೋಪಾಖ್ಯಾನ, ಸತಿ ಉಲೂಪಿ, ದತ್ತ ಸಂಭವ. ಇತ್ಯಾದಿ ಕನ್ನಡ ಯಕ್ಷಗಾನ ಪ್ರಸಂಗಗಳ ರಚಯಿತರು. ಇದರಲ್ಲಿ ಮಾ ನಿಷಾದವು ರಂಗದಲ್ಲಿ ಅತಿ ಹೆಚ್ಚು ಜನಸ್ವೀಕೃತಿ ಪಡೆದ ಪ್ರಸಂಗ. ಈ ಪ್ರಸಂಗದಲ್ಲಿ ಕವಿಯ ಆಶಯವನ್ನು ಮತ್ತು ಅದಕ್ಕೆ ಅಳವಡಿಸಿದ ಸಾಹಿತ್ಯಕ್ಕೆ ಅನುಗಣವಾದ ಭಾವವನ್ನು ಅನುಭವಿಸಿ ಹಾಡುವವರು ದಿನೇಶ ಅಮ್ಮಣ್ಣಾಯರು, ಈಚೆಗೆ ಗೋಷ್ಠಿಯೊಂದರಲ್ಲಿ ಹಾದು ಹೋದ ಈ ಮಾತು ಕೃತಿಯ ಗಟ್ಟಿತನವನ್ನು ಸಾರುತ್ತದೆ. ಗಾನವೈಭವದಂತಹ ಆಧುನಿಕ ವಿನ್ಯಾಸದ ಕಲಾಪದಲ್ಲಿ ಅಮ್ಮಣ್ಣಾಯರು ಭಾಗವತರಾಗಿ ಉಪಸ್ಥಿತರಿದ್ದರೆ ಈ ಪ್ರಸಂಗದ ಕೆಲವು ಪದ್ಯಗಳನ್ನು ಪ್ರೇಕ್ಷಕರು ಚೀಟಿ ಕೊಟ್ಟು ಹಾಡಿಸಲು ವಿನಂತಿ ಮಾಡಿರುವುದನ್ನು ನೋಡಿದ್ದೇನೆ. ಪರೋಕ್ಷವಾಗಿ ಇದು ಕವಿಗೆ ಸಲ್ಲುವ ಗೌರವ.
              ಕಾಲ್ಪನಿಕ :  ಮೇಘ ಮಯೂರಿ, ಸ್ವರ್ಣನೂಪುರ, ಅಮೃತ ವರ್ಶಿಣಿ, ಮೇಘ ಮಾಣಿಕ್ಯ  ಪ್ರಸಂಗಗಳು. ತುಳು ಪೌರಾಣಿಕ ಪ್ರಸಂಗಗಳಾದ ಕುಡಿಯನ ಕೊಂಬಿರೆಲ್, ಕುಡಿಯನ ಕಣ್ಣ್, ಐಗುಳೆ ದಚ್ಚಿಣೆ ಹಾಗೂ ತುಳು ಕಾಲ್ಪನಿಕ ಪ್ರಸಂಗಗಳಾದ ಪಟ್ಟದ ಕತ್ತಿ, ದಳವಾಯಿ ದುಗ್ಗಣ್ಣೆ, ನಲಿಕೆದ ನಾಗಿ, ಬಂಗಾರ್ದ ಗೆಜ್ಜೆ, ಸ್ವರ್ಣ ಕೇದಗೆ, ಗರುಡ ಕೇಂಜವೆ' ನೃತ್ಯ ರೂಪಕಗಳಾದ ಅಂಧಕ ನಿದಾನ, ಭುವನಾಭಿರಾಮ, ಜೇವು ಕೇದಗೆ ಮತ್ತು 'ಹಿತ್ತಾಳೆ ಕಿವಿ' ಮಕ್ಕಳ ನಾಟಕಗಳ ರಚಯಿತರು. ಬಹುತೇಕ ತುಳು ಪ್ರಸಂಗಗಳು ಪ್ರದರ್ಶಿತವಾಗಿವೆ. ಮೇಳಗಳು ವರುಷದ ಪ್ರಸಂಗಗಳಾಗಿ ಅಂಗೀಕರಿಸಿವೆ. ತುಳು ಪೌರಾಣಿಕ ಪ್ರಸಂಗ ಸಾಹಿತ್ಯಗಳು ಯಕ್ಷ ಲೋಕದ ರತ್ನಗಳು. ತುಳು ಸೊಗಸಿನ ಬಂಧಗಳು. ಅಪ್ಪಟ ತುಳುವಿನ ಸೊಬಗು. ಪೂಂಜರು 'ಶಾಸ್ತ್ರೀಯ ಆಂತರ್ಯದ ಒಡಲೊಳಗಿನ ಮಾಣಿಕ್ಯ'.
            ಬಹುಶಃ ಬಡಗು ತಿಟ್ಟಿನಲ್ಲಿ ಸಮರ್ಥ ಭಾಗವತರಾಗಿ ಪ್ರಸಂಗಕರ್ತರಾಗಿದ್ದ ಕೀರ್ತಿಶೇಷ ಕಾಳಿಂಗ ನಾವಡರರನ್ನು ಹೊರತುಪಡಿಸಿ; ತೆಂಕಿನಲ್ಲಿ ಸ್ವತಃ ಪ್ರಸಂಗ ರಚಿಸಿ ರಂಗದಲ್ಲಿ ಚೆನ್ನಾಗಿ ದುಡಿಸಿ ಯಶಸ್ಸನ್ನು ಹೊಂದಿದ ತರುಣ ಭಾಗವತರಲ್ಲಿ ಪೂಂಜರು ಪ್ರಮುಖರು. ಪುರಾಣದ ಆಶಯಗಳನ್ನು ಹೊಸ ದೃಷ್ಟಿಕೋನದಿಂದ ನೋಡಿ ಆಧುನಿಕತೆಗೆ ಒಗ್ಗುವಂತೆ ಪ್ರಸಂಗಗಳನ್ನು ಹೆಣೆದುದರಲ್ಲಿ ಇವರು ಇತರರನ್ನು ಮೀರಿಸುತ್ತಾರೆ, ಎನ್ನುತ್ತಾರ 'ಒಡ್ಡೋಲಗ' ಕೃತಿಯಲ್ಲಿ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ.
             ಅಂಬುರುಹ : ಪೂಂಜರ ಮನೆಯ ಹೆಸರು 'ಅಂಬುರುಹ'. ಮಂಗಳೂರಿನ ಯಕ್ಷಧ್ರುವ ಪಟ್ಲ ಪೌಂಡೇಶನ್ (ರಿ) ಇವರು ಪೂಂಜರ ಯಕ್ಷಗಾನ ಪ್ರಸಂಗಗಳನ್ನು ಪ್ರಕಾಶಿಸಿದೆ. 'ಅಂಬುರುಹ' ಶೀರ್ಶಿಕೆಯ ಎರಡು ಸಂಪುಟಗಳಲ್ಲಿ ಅಚ್ಚಾದ ಪ್ರಸಂಗಗಳು ಪೂಂಜರ ಸಾಧನೆಗೆ ಸಂದ ಮಾನ. ಭಾಗವತ ಪಟ್ಲ ಸತೀಶ ಶೆಟ್ಟಿ ಇವರ ಸಾರಥ್ಯದ ಫೌಂಡೇಶನ್ ಶ್ಲಾಘನೀಯವಾದ ಕಾರ್ಯ ಮಾಡಿದೆ.
              ಪುರುಷೋತ್ತಮ ಪೂಂಜರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿ, ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಪುಳಿಂಚ ರಾಮಯ್ಯ ಶೆಟ್ಟಿ ಪ್ರಶಸ್ತಿ, ಯಕ್ಷಮಾನಸ, ಯಕ್ಷರಕ್ಷಾ, ಬೊಂಡಾಲ ಪ್ರಶಸ್ತಿಗಳಿಂದ ಪುರಸ್ಕೃತರು. ಪುತ್ತೂರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘವು ತನ್ನ ನಲವತ್ತೆಂಟರ ಸಂಭ್ರಮದಲ್ಲಿ ಪೂಂಜರನ್ನು 'ಶ್ರೀ ಯಕ್ಷಾಂಜನೇಯ ಪ್ರಶಸ್ತಿ' ನೀಡಿ ಗೌರವಿಸಲಿದೆ. ದಶಂಬರ 25ರಂದು ಅಪರಾಹ್ನ ಪುತ್ತೂರಿನ 'ಶ್ರೀ ನಟರಾಜ ವೇದಿಕೆ'ಯಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ.
(ಚಿತ್ರ : ಯಕ್ಷಲೋಕ)


No comments:

Post a Comment